Wednesday, December 29, 2010

ಸೀರೀಯಸ್‌ನೆಸ್ ....

ತುಂಬಾ ಸೀರೀಯಸ್ ಆಗಿ ಕುಳಿತು ಒಂದು ಹಾಸ್ಯ ಲೇಖನ ಬರೆಯುತ್ತಿದ್ದೆ. ನನ್ನ ಮಡದಿ "ಏನ್ರೀ ನಿಮಗೆ ಸೀರೀಯಸ್‌ನೆಸ್ ಇಲ್ಲವೇ.. ಇಲ್ಲ.." ಮನೆಗೆ ಅತಿಥಿಗಳು ಬಂದಿದ್ದಾರೆ. ನೀವು ನೋಡಿದರೆ ಆ ಪೆನ್ನು,ಪುಸ್ತಕ ಹಿಡಿದು ಕುಳಿತು ಬಿಟ್ಟಿದ್ದೀರಾ? ಎಂದಳು. ಇದನ್ನು ಮೊದಲನೆ ಬಾರಿ ಹೇಳಿದ್ದರೆ ಸ್ವಲ್ಪ ಸೀರೀಯಸ್ ಆಗಿ ತೆಗೆದುಕೊಳ್ಳಬಹುದಿತ್ತು. ಆದರೆ ಇದು ಎಷ್ಟನೆ ಬಾರಿ ಎಂಬುದು ನನಗೆ ತಿಳಿದಿಲ್ಲ...ಅದಕ್ಕೆ ಅಂತ ಒಂದು ಕಂಪ್ಯೂಟರ್ ನೇಮಿಸಿದರು ಲೆಕ್ಕ ಸಿಗುವುದಿಲ್ಲ. ಮೊದ ಮೊದಲು ಅಪ್ಪ ಕೂಡ ಇದನ್ನೇ ಹೇಳುತ್ತಿದ್ದರು. "ಲೇ ಕತ್ತೆ ಅಷ್ಟು ವಯಸ್ಸು ಆಯಿತು, ಯಾವಾಗೆ ಬರುತ್ತೋ ಸೀರೀಯಸ್‌ನೆಸ್" ಅಂತ. ಅದೇನೋ ಗೊತ್ತಿಲ್ಲ ಇಂತಹ ಅಪವಾದಕ್ಕೆ ನಾನು ಗುರಿಯಾಗುತ್ತೇನೋ ಅಥವಾ ಅಪವಾದ ನನ್ನನ್ನು ಗುರಿ ಮಾಡಿ ಕೆಲಸ ಮಾಡುತ್ತೋ ಇದುವರೆಗೂ ಅರಿಯದ ಸಂಗತಿಯಾಗಿದೆ.

ಆದರೂ ಹೆಂಡತಿ ಹೇಳಿದ್ದು ನನಗೆ ಸರಿ ಬರಲಿಲ್ಲ. ಏಕೆ? ಎಂದರೆ ಸೀರೆ + ಎಸ್(Yes) + ನೆಕ್ಸ್ಟ್(Next ಏನು? ಬೇಕು ಹೇಳು) {ಸೀರೀಯಸ್‌ನೆಸ್} ಎಷ್ಟು ಬಾರಿ ತೋರಿಸಿಲ್ಲ. ಇದು ಅನ್ಯಾಯ ಅಲ್ಲವೇ...?. .ಈ ಸೀರೀಯಸ್‌ನೆಸ್ ಎಲ್ಲಿಯಾದರೂ ಕೆ.ಜಿ ಅಥವಾ ಲೀಟರ್ ಲೆಕ್ಕದಲ್ಲಿ ಕೊಳ್ಳಲು ಸಿಗುತ್ತಾ ಎಂದು ಅಂತರ್ಜಾಲ ಪೂರ್ತಿ ತಡಕಾಡಿದೆ. ಅದನ್ನು ಮಾರುವವರಿಗೆ ಸ್ವಲ್ಪ ಕೂಡ ಸೀರೀಯಸ್‌ನೆಸ್ ಬೇಡವೇ, ಅದರ ಜಾಹೀರಾತು ಹಾಕಬೇಕು ಎಂದು. ಕಡೆಗೆ ಸಿಗಲೇ ಇಲ್ಲ...:-(.

ನಾನು ಅರಿತ ಪ್ರಕಾರ ಸೀರೀಯಸ್‌ನೆಸ್ ಕಂಡಿದ್ದು ಬರಿ ಪೇಶೆಂಟ್ ಗಳಲ್ಲಿ ಮಾತ್ರ, ಅದು ಡಾಕ್ಟರ್ ಗೆ ಕೂಡ ಇರುತ್ತೆ, ಏಕೆಂದರೆ? ಅಂತವರನ್ನು ಅವರು ಗುಣ ಪಡಿಸುತ್ತಾರಲ್ಲ ಅದಕ್ಕೆ.

ನನಗೆ ಚಿಕ್ಕಂದಿನಿಂದಲೂ ಎಲ್ಲ ವಿಷಯಗಳನ್ನು ತುಂಬಾ ಹಗುರವಾಗಿ ತೆಗೆದುಕೊಳ್ಳುವ ಸ್ವಭಾವ. ಅದೇ "ಹುಟ್ಟಿದ ಗುಣ, ಸುಟ್ಟರೂ ಹೋಗುವುದಿಲ್ಲ" ಅನ್ನುತ್ತಾರೆ ಹಾಗೆ. ಅದು ಇನ್ನೂ ಹಾಗೆ ಇದೆ. ನನ್ನ ಸದಾ ನಗು ಮುಖ ಇರುವದರಿಂದ, ನನ್ನ ಒಬ್ಬ ಗೆಳೆಯ ಅದಕ್ಕೆ ನನ್ನನ್ನು ಹಸ್ಮುಖ ಎಂದು ಹೇಳುತ್ತಿದ್ದ ( ಗೋಪಾಲ್ ನಾಮಧೇಯಕ್ಕೆ ಅನುಗುಣವಾಗಿ ಹಸುವಿನ ಹಾಗೆ ಇರುವ ಮುಖ ಎಂದು ಭಾವಿಸಿರಲಿಲ್ಲ ಎಂದು ಅಂದುಕೊಂಡಿದ್ದೇನೆ). ನನ್ನ ಮದುವೆ ಸಮಯದಲ್ಲಿ, ಅದೇ ಗೆಳೆಯ ಈಗಾದರೂ ಸಲ್ಪ ಗಂಭೀರವಾಗಿ ಇರುವದನ್ನು ಕಲಿ ಎಂದು ತಿಳುವಳಿಕೆ ಅನುಗ್ರಹಿಸಿದ. ಅದು ಹೇಗೆಂದು ನನಗೆ ಅರ್ಥ ಆಗಲಿಲ್ಲ. ಮುಖ ಗಂಟಿಕ್ಕಿ ಮದುವೆ ಮಾಡಿಕೊಳ್ಳುವುದೇ ಎಂದು ಯೋಚಿಸಿದೆ.

"ಅಳುವ ಗಂಡನ್ನು ನಂಬಬಾರದು ಮತ್ತೆ ನಗುವ ಹೆಣ್ಣನ್ನು " ಎಂಬ ಗಾದೆ ಇದೆ. ನನ್ನ ನಗುವಿಗೆ ಒಬ್ಬ ಹುಡುಗಿ ಸಾತ್ ನೀಡಿದ್ದಳು. ಇವನಿಗೆ ಯಾವ ಸುಂದರಿ ಸಾತ್ ನೀಡಿದಳು,ಎಲ್ಲೋ ಪ್ರಾಣಿಸಂಗ್ರಹಾಲಯದಲ್ಲಿ ಇರಬಹುದು ಎಂದು ಅಂದುಕೊಂಡಿರ...ಸತ್ಯವಾಗಿ ಒಳ್ಳೇ ಸರಳ ಸಹಜ ಸುಂದರಿ.. ನಮ್ಮ ಮಂದಹಾಸ ಮಧುರವಾಗಿ ಬಹಳ ದಿನ ನಡೆದಿತ್ತು. ಅದೇನೋ ದೊಡ್ಡವರು ಅನ್ವೇಷಿಸಿದ ಗಾದೆಗೆ ವಿರುದ್ಧವಾಗಿ ನಡೆದರೆ ದೊಡ್ಡವರು ಬಿಡುತ್ತಾರೆಯೇ...ತಮ್ಮ ಗಾದೆ ಸತ್ಯವಾಗಿರಿಸಿ, ನನ್ನನ್ನು ಆ ಹುಡುಗಿಯ ತ'ಗಾದೆ'ಗೆ ಬರದಂತೆ ನೋಡಿಕೊಂಡರು.

ನನ್ನ ಒಬ್ಬ ಗೆಳೆಯನಿಗೆ ಎಲ್ಲರಿಗಿಂತ ಮೊದಲೇ ಮದುವೆ ಮಾಡಲು ನಿಶ್ಚಯಿಸಿದ್ದರು. ಮದುವೆ ಸಮಯದಲ್ಲಿ, ಅವರ ಅಪ್ಪ ನನಗೆ, ನೋಡು ಈಗ ನನ್ನ ಮಗ ದಾರಿಗೆ ಬರುತ್ತಾನೆ. ಮೊದಲೇ ಉಡಾಳ್.. ಈಗ ಸ್ವಲ್ಪ ಸೀರೀಯಸ್‌ನೆಸ್ ಬರುತ್ತೆ ಎಂದರು. ಮದುವೆ ಆದ ಮೇಲೆ ಸೀರೀಯಸ್‌ನೆಸ್ ಬಂತೋ ಇಲ್ಲವೋ ಗೊತ್ತಿಲ್ಲ, ಆದರೆ ಒಂದೇ ವರ್ಷದಲ್ಲಿ ಅವನಿಗೆ ಅವಳಿ-ಜವಳಿ ಎರಡು ಮಕ್ಕಳು ಮಾತ್ರ ಬಂದವು.

ಒಮ್ಮೆ ಮೈಸೂರಿನಲ್ಲಿ ಇರುವಾಗ, ಅಲ್ಲಿ ಕೆಲಸ ಮಾಡುವ ಒಬ್ಬ ಅಕೌಂಟೆಂಟ್ ಬಂದು ಏನ್ರೀ? ಮಿಲ್ಕ್ ಬಿಲ್ಲು ತಪ್ಪಾಗಿ ಬಂದಿದೆ ಎಂದರು. ನಾನು ನಗುತ್ತಾ ಅಷ್ಟೇನಾ? ಎಂದೆ. ಅಷ್ಟಕ್ಕೇ ಅಪಾರ್ಥ ಮಾಡಿಕೊಂಡು ಹೋಗಿ ಮ್ಯಾನೇಜರ್ ಗೆ ಗೋಪಾಲ್ ಅವರಿಗೆ ಸ್ವಲ್ಪ ಕೂಡ ಸೀರೀಯಸ್‌ನೆಸ್ ಇಲ್ಲ ಎಂದು ಕಂಪ್ಲೇಂಟ್ ಮಾಡಿದ್ದರು. ಆಮೇಲೆ ಮ್ಯಾನೇಜರ್ ನನ್ನ ಮೇಲೆ ತಮ್ಮ ಅಧರದಿಂದ ಮಳೆ ಸುರಿಸಿ ಕಳುಹಿಸಿದ್ದರು.

ನಾನು ಹುಬ್ಬಳ್ಳಿಯಲ್ಲಿ ಕೆಲಸ ಮಾಡುವ ಸಮಯದಲ್ಲಿ ಅಲ್ಲಿಯ ಮ್ಯಾನೇಜರ್ ನನಗೆ ಒಂದು ಕೆಲಸ ಮಾಡಲು ಹೇಳಿದರು ಮತ್ತು ಅದಕ್ಕೆ ಎಷ್ಟು ದಿವಸ ಬೇಕು ಎಂದು ಕೇಳಿದರು. ನಾನು ನಗುತ್ತಾ ಎರಡು ದಿವಸ ಎಂದೆ. ಅದಕ್ಕೆ ಆ ಮನುಷ್ಯ ಅದು ಕಡಿಮೆ ಆಯಿತು ಎಂದು ತಿಳಿದನೋ ಅಥವಾ ಜ್ಯಾಸ್ತಿಯೋ ತಿಳಿಯಲಿಲ್ಲ. ಮತ್ತೆ ಎರಡು ದಿವಸ ಎಂದು ಕೇಳಿದರು. ಅದಕ್ಕೆ ನಾನು ಒಂದು ಎಂದೆ. ಮತ್ತೆ ಅವರು ಒಂದು ದಿವಸ ಎಂದು ಕೇಳಿದರು. ನಾನು ಅರ್ಧ ದಿವಸ ಎಂದೆ. ಏಕೆಂದರೆ ನಾನು ನನ್ನ ಮೇಲಿನ ನಂಬಿಕೆಗಿಂತ ನನ್ನ ಪ್ರೀತಿಯ ಶ್ರೀ ರಾಮನ ಮೇಲೆ ಇರುವ ಅಪಾರ ನಂಬಿಕೆಯಿಂದ(ನೆಡೆಸುವವನು ಅವನು ತಾನೇ).... ಮತ್ತೆ ಅರ್ಧ ದಿವಸ ಎಂದರು. ಈಗಲೇ ಮಾಡಿ ಕೊಡುತ್ತೇನೆ ಎಂದೆ. ಅದೇನೋ ಗೊತ್ತಿಲ್ಲ ನನ್ನ ಜೊತೆ ಜಗಳವಾಡಿ ಹೊರಟು ಹೋದರು. ಮತ್ತೆ ಅದನ್ನು ಎರಡು ದಿನಗಳಲ್ಲಿ ಪೂರ್ತಿ ಗೊಳಿಸಿ ಅವರಿಗೆ ಹೇಳಿದ್ದೆ.

ಹಾಗೆಂದು ನನಗೆ ಸೀರೀಯಸ್‌ನೆಸ್ ಇಲ್ಲವೇ ಇಲ್ಲ ಎಂದು ಅಲ್ಲ...ನನಗೆ ತಿಂದಿದ್ದು ಅಜೀರ್ಣ ಆಗಿ ದಾರಿತಪ್ಪಿದಾಗ ಮಾತ್ರ ಸ್ವಲ್ಪ ಸೀರೀಯಸ್‌ನೆಸ್ ತಾನಾಗೇ ಬರುತ್ತೆ.

Tuesday, December 28, 2010

ಪುಟ್ಟಿ ಗಂಡ ಹೊಟ್ಟೆ ತುಂಬಾ ಉಂಡ....

ನನ್ನ ಪೋಸ್ಟ್ ಪೇಡ್ ಮೊಬೈಲ್ ಬಿಲ್ಲು ನೋಡಿ, ಏನೇ? ಇದು ಎಂದು ಕೇಳಿದೆ. ಅದಕ್ಕೆ.. ನನ್ನ ಮಡದಿ ಅದು ಮೊಬೈಲ್ ಬಿಲ್ಲು ಎಂದಳು. ನಾನೆಲ್ಲಿ ಹೇಳಿದೆ ಕಾಮನಬಿಲ್ಲು ಅಂತ ಎಂದೆ. ಕಾಮನ ಬಿಲ್ಲು ಅಲ್ಲಾರಿ ಅದು ಕಾಮಣ್ಣನ ಬಿಲ್ಲು ಇರಬಹುದು ಎಂದು ಹೀಯಾಳಿಸಿದಳು. ಓ ಅಂದ ಹಾಗೆ ಇವತ್ತು ಆಫೀಸ್ ನಿಂದ ಬರುವ ಸಮಯದಲ್ಲಿ ಕಾಮನಬಿಲ್ಲು ಸಿ ಡಿ ತೆಗೆದುಕೊಂಡು ಬನ್ನಿ, ನನಗೆ ಆ ಸಿನೆಮಾ ಅಂದರೆ ತುಂಬಾ ಇಷ್ಟ ಎಂದು ಮಾತು ಮರೆಸಲು ನೋಡಿದಳು. ನೀನು ಹೀಗೆ ಫೋನ್ ಯೂಸ್ ಮಾಡ್ತಾ ಇದ್ದರೆ, ನಾನು ಬಿಲ್ಲು ಹಿಡ್ಕೊಂಡು ಕಾಡಿಗೆ ಹೋಗಬೇಕಾಗುತ್ತೆ ಎಂದೆ. ನಾನೊಬ್ಬನೇ ಅಲ್ಲ ನಿನ್ನನ್ನು ಕರೆದುಕೊಂಡು ಹೋಗುತ್ತೇನೆ. ಶ್ರೀ ರಾಮನ ಜೊತೆ ಸೀತಾ ಮಾತೆ ಹೋಗಲಿಲ್ಲವೆ ಹಾಗೆ ಎಂದೆ. ಓ.. ನಾನು ಬರಲ್ಲಪ್ಪಾ ಬೇಕಾದರೆ ನೀವು ಹೋಗಿ ಬನ್ನಿ. ಬರುತ್ತಾ ಸ್ವಲ್ಪ ಸೀಬೆ ಹಣ್ಣು, ಕಾಯಿ ಪಲ್ಯ, ಟೊಮೇಟೊ, ಈರುಳ್ಳಿ ಇದ್ದರೆ ತೆಗೆದುಕೊಂಡು ಬನ್ನಿ ಎಂದಳು. ದುಡ್ಡು ಏನು? ಮೇಲಿಂದ ಉದುರುತ್ತಾ ಎಂದು ಕೇಳಿದೆ. ಕಾಡಿನಲ್ಲಿ ಹಾಗೆ ಬೆಳೆದಿರುತ್ತೆ ಕಿತ್ತು ಕೊಂಡು ಬನ್ನಿ ಎಂದಳು. ಲೇ.. ನಾನು ಮೊಬೈಲ್ ಬಿಲ್ಲು ಕಟ್ಟೋಕೆ ಕೇಳಿದ್ದು ದುಡ್ಡು ಎಂದೆ. ಕಾಡಿನಲ್ಲಿ ನೆಟ್‌ವರ್ಕ್ ಇರೋದು, ಅಷ್ಟಕ್ಕೇ.. ಅಷ್ಟೇ...ಮತ್ತೆ ಏಕೆ? ಬೇಕು ನಿಮಗೆ ಮೊಬೈಲ್ ಎಂದು ಹೇಳಿದಳು. ಅಷ್ಟರಲ್ಲಿ ಹಾಲು ಉಕ್ಕುತ್ತಾ ಇದೆ ಎಂದು ಹೇಳಿ, ಗಡಬಡಿಸಿ ಅಡುಗೆ ಮನೆಗೆ ಹೊರಟು ಹೋದಳು.

ಮತ್ತೆ ಕೆಲ ಸಮಯದ ನಂತರ ಕಾಫೀ ಕಪ್ ಜೊತೆ ಹಾಜರ ಆಗಿ, ನೋಡಿ ನಿಮ್ಮಿಂದ ಎಷ್ಟೊಂದು ಹಾಲು ಉಕ್ಕೀತು ಎಂದು ಬೈದಳು. ಹಾಲು ಉಕ್ಕಿದರೆ ಯಾರಾದರೂ ಸಂಭಂಧಿಗಳು ಮನೆಗೆ ಬರುತ್ತಾರೆ ರೀ.. ಎಂದಳು. ನಿನ್ನ ಕಡೆ ದುಡ್ಡು ಇದ್ದರೆ ಕೊಡು, ನನಗೆ ಮೊಬೈಲ್ ಬಿಲ್ಲು ಕಟ್ಟಬೇಕು ಎಂದೆ. ನನ್ನ ಹತ್ತಿರ ದುಡ್ಡು ಇಲ್ಲ, ನೀವೇ ಏನಾದರೂ ಮಾಡಿ ಎಂದಳು. ಮತ್ತೆ ಇನ್ನೊಮ್ಮೆ ನನ್ನ ಕೇಳದೇ, ನನ್ನ ಮೊಬೈಲ್ ಮುಟ್ಟಬೇಡ ಎಂದೆ. ನೀವು ವರ್ಷಕ್ಕೆ ಒಂದೇ ಸಾರಿ ತವರುಮನೆಗೆ ಕಳುಹಿಸಿದರೆ ನಾನೇನು ಮಾಡಬೇಕು. ಅದಕ್ಕೆ ದಿವಸ ಫೋನ್ ಮಾಡಿ ಮಾತಾಡುತ್ತೇನೆ ಎಂದಳು.ಮತ್ತಿನ್ನೇನು ತಿಂಗಳಿಗೆ ಒಂದು ಬಾರಿ ಹೋಗಬೇಕೆಂದಿರುವೆ ಏನು? ಎಂದೆ. ಈ ಬಿಲ್ ದುಡ್ಡಿನಲ್ಲಿ ನಾವು ಮೂರು ಬಾರಿ ನಿಮ್ಮ ಊರಿಗೆ ಹೋಗಿ ಬರಬಹುದಿತ್ತು ಎಂದೆ. ಈ ಬಾರಿ ಹೋಗಬೇಕಾದರೆ ನೀವು ಬನ್ನಿ ಎಂದಳು. ಲೇ..ss ಅದೊಂದು ಬಿಟ್ಟು ಬೇರೆ ಏನು ಬೇಕಾದರೂ ಕೇಳು ಎಂದೆ. ನೀವು ಏಕೆ ಬರಲ್ಲ, ಅದು ಹೇಳಿ ಎಂದಳು. ನಿನ್ನನ್ನ ಎಲ್ಲರೂ ಪುಟ್ಟಿ... ಪುಟ್ಟಿ.. ಎಂದು ಕರೆದರೆ ನನಗೆ ಕೆಟ್ಟ ಕೋಪ ಬರುತ್ತೆ ಎಂದೆ. ಅದಕ್ಕೇನೀಗ, ನನಗೆ ಪ್ರೀತಿಯಿಂದ ಹಾಗೆ ಕರೆಯುತ್ತಾರೆ ಅಷ್ಟೇ ಎಂದಳು. ಲೇ.. ಅದು ಅಲ್ಲ ನಿಮ್ಮ ಕಾಕ ನನಗೆ "ಪುಟ್ಟಿ ಗಂಡ ಹೊಟ್ಟೆ ತುಂಬಾ ಉಂಡ" ಎಂದು, ನನ್ನ ಹೊಟ್ಟೆ ನೋಡಿ ನಗುತ್ತಾ ನಿಂತರೆ ನನಗೆ ಕೋಪ ಬರುವದಿಲ್ಲವೇ ಎಂದೆ. ಓss.. ಅವರಾ.. ಅವರು ತುಂಬಾ ತಮಾಷೆಯ ಮನುಷ್ಯ, ವಾಮನ ಕಾಕ ದೂರದ ಸಂಭಂಧಿ. ಮತ್ತೆ ತಲೆ ನೋಡಿ ಮಕ್ಕಳಿಗೆ, ಇಲ್ಲೊಂದು ಜಾರು ಬಂಡೆ ಇದೆ ನೋಡಿ ಎಂದು ಹೇಳಿದರೆ ಎಂದು ಕೇಳಿದೆ. ನೀವು ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಬೇಡಿ ಎಂದಳು.

ತಮಾಷೆ ಮಾಡೋಕೆ ಒಂದು ಮಿತಿ ಬೇಡ ಏನೇ? ಮತ್ತೆ ನನ್ನ ಲ್ಯಾಪ್‌ಟಾಪ್ ನೋಡಿ, ಎಲ್ಲರ ಮುಂದೆ ಅಳಿಯಂದಿರು ಯಾವತ್ತೂ ಚಿಕ್ಕ ಟಿ ವಿ ಹಿಡಿದುಕೊಂಡು ಎಲ್ಲ ಕಡೆ ಹೋಗುತ್ತಾರೆ ಎಂದು ಎಲ್ಲರಿಗೂ ಹೇಳಿದರೆ. ಮತ್ತೆ ನಾನು ಅಷ್ಟೇ ಮೊದಲು ರೇಡಿಯೋ ತೆಗೆದುಕೊಂಡು ಹೋಗುತ್ತಿದ್ದೆ ಎಂದೆಲ್ಲ ಹೇಳುವರು. ನಾನು ಪಾಪ ಅವರಿಗೆ ಏನೋ ಗೊತ್ತಿಲ್ಲ ಎಂದು ತಿಳಿಸಲು ಹೋದರೆ, ಎಲ್ಲರ ಎದಿರೂ ಇವೆಲ್ಲವೂ ಅಳಿಯಂದಿರ ಪೈಲ್ಸ್ (piles) ಎಂದು ತೋರಿಸಿ ನಕ್ಕರೆ ಕೋಪ ಬರುವದಿಲ್ಲವೇ ಎಂದೆ. ಮತ್ತೆ ನಿಮ್ಮ ಇಯರ್ ಫೋನ್ ಕೊಡಿ ಸ್ವಲ್ಪ ಮಾತಡಬೇಕು ಎಂದರೆ ಏನು ಹೇಳುವುದು ಎಂದೆ.

ಅಷ್ಟರಲ್ಲಿ ನಮ್ಮ ಮನೆಯಲ್ಲಿ ಮಾತ್ರ ಗುಡುಗು ಮಿಂಚಿನ ಮಳೆ ಶುರು ಆಯಿತು. ನನಗೆ ಯಾರಾದರೂ ಚಿರಾಪುಂಜಿ ಎಲ್ಲಿ? ಇದೆ ಎಂದು ಕೇಳಿದರೆ. ನಾನು ಹೇಳುವದು ಬೆಂಗಳೂರಿನ ಶ್ರೀನಿವಾಸನಗರದಲ್ಲಿ ಎಂದು. ಒಂದು ಮಳೆ ಇರುತ್ತೆ ಇಲ್ಲ ಚಿರಾಪುಂಜಿ ...ಚೀರಾಟದ ಪುಂಜಿ ಆಗಿರುತ್ತೆ.

ಅಷ್ಟರಲ್ಲಿ ಕಾಲಿಂಗ್ ಬೆಲ್ ಶಬ್ದ ಬಂತು. ಬಾಗಿಲು ತೆಗೆದೆ ಎದುರಿಗೆ ವಾಮನ ಮೂರ್ತಿ ನನ್ನ ಮಡದಿಯ ಕಾಕ ಎದುರಿಗೆ ಉದ್ಭವವಾಗಿದ್ದರು. ನಾನು ಏನು ಹೇಳಬೇಕೋ ತಿಳಿಯದಾಗಿತ್ತು. ಇಲ್ಲಿ ಬಾರೆ ಯಾರೋ.. ಅನ್ನುವ ಬದಲು ಯಾರು ಬಂದಿದ್ದಾರೆ ಎಂದು ಸುಧಾರಿಸಿ ಹೆಂಡತಿಗೆ ಉಲಿದೆ. ಅಳುವುದನ್ನು ನಿಲ್ಲಿಸಿ, ಓ... ಕಾಕ ಎಂದು ಬಂದು ನಮಸ್ಕರಿಸಿದಳು. ನೀವು ನಮಸ್ಕಾರ ಮಾಡಿ ಎಂದು ನನಗೆ ಹೇಳಿದಳು. ಅಷ್ಟರಲ್ಲಿ ಅವಳ ಕಾಕ ತನ್ನ ಕಾಗೆ ಬಾಯಿಂದ ಹೋಗಲಿ ಬಿಡು ಪುಟ್ಟಿ ಪಾಪ ಅಳಿಯಂದಿರ ಹೊಟ್ಟೆ ಅವರನ್ನು ಬಗ್ಗೋಕೆ ಬಿಡಲ್ಲ ಎಂದರು.

ಇನ್ನೂ ಏನೇನು ಕಾದಿದೆಯೋ ಆ ಭಗವಂತನೇ ಬಲ್ಲ....

***************************************************************************************************************
ಎಲ್ಲರಿಗೂ ಹೊಸ ವರ್ಷದ ಪ್ರತಿ ಕ್ಷಣ ಸುಖ... ಶಾಂತಿ(ಹುಡುಗಿಯ ಹೆಸರು ಅಲ್ಲ...).... ನೆಮ್ಮದಿ ತರಲಿ. ಎಲ್ಲರ ಮುಖದಲ್ಲಿ ಮಂದಹಾಸ ಮೂಡಲಿ ಎಂದು ಆಶಿಸುತ್ತಾ..
ನಿಮ್ಮೆಲ್ಲರ ಪ್ರೀತಿಯ ಗೋಪಾಲ್ . ಮಾ. ಕುಲಕರ್ಣಿ.... ನನ್ನ ಹೆಂಡತಿ (ಹೆಂಡ ಶಬ್ದ ಕೇಳಿದರೆ ಉರಿದು ಬೀಳುತ್ತಾಳೆ) ಕ್ಷಮಿಸಿ ... ಮಡದಿ ತಪ್ಪಾಗಿ ತಿಳಿಯಬಾರದು ಎಂದು,
ಮತ್ತೊಮ್ಮೆ ಪ್ರೀತಿಯ(ಹುಡುಗಿಯ ಹೆಸರು ಅಲ್ಲ...) ಗೋಪಾಲ್ . ಮಾ. ಕುಲಕರ್ಣಿ :-):-)...
****************************************************************************************************************

Saturday, December 25, 2010

ನೋಡಿ ಕಲಿತಿರುವ ನೀತಿ ಪಾಠ....

ನಮ್ಮ ಊರಿಂದ ನನ್ನ ಮಡದಿಯ ದೂರದ ಸಂಭಂಧಿ ಬಂದಿದ್ದ. ಹೆಸರು ಸುರೇಶ. ಅವನು ನಾನು ತುಂಬಾ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಿದ್ದೆವು. ಕಡೆಗೆ ಒಂದು ದಿನ ಅಂಕಲ್ ಮದುವೆ ಮಾಡಿಕೊಳ್ಳಬೇಕೆ ಅಥವ ಬೇಡವೇ. ನಾನು ತುಂಬಾ ಜನರಿಗೆ ಇದರ ಬಗ್ಗೆ ಕೇಳಿದ್ದೇನೆ. ನನಗೆ ಇದುವರೆಗೆ ಕೂಡ ಉತ್ತರ ಸಿಕ್ಕಿಲ್ಲ, ನೀವಾದರೂ ಹೇಳಿ ಎಂದು ಪೀಡಿಸುತ್ತಿದ್ದ. ಅವನಿಗೆ ಏನು ಉತ್ತರ ಹುಡುಕಬೇಕೆಂದು ತಡಕಾಡಿ ಸುಮ್ಮನಾಗಿದ್ದೆ. ಮತ್ತೆ ಮರುದಿನ ನನ್ನ ಆಫೀಸ್ ರಜೆ ಇತ್ತು. ನಾನು ಅವನಿಗೆ ನಿನ್ನೆ ಒಂದು ಪ್ರಶ್ನೆ ಕೇಳಿದ್ದೇಯಲ್ಲಾ?. ಇವತ್ತು ಅದರ ಉತ್ತರ ಹೇಳುತ್ತೇನೆ. ನಮ್ಮಿಬ್ಬರನ್ನೂ ಗಮನಿಸು, ಆಮೇಲೆ ನಿನಗೆ ತಿಳಿಯುತ್ತೆ ಮದುವೆ ಬೇಕಾ ಅಥವಾ ಬೇಡವಾ ಎಂದು ಅವನಿಗೆ ಹೇಳಿದೆ.

ಮಡದಿಗೆ ಕಾಫೀ ಕೊಡು ಎಂದು ಹೇಳಿದೆ. ಪೇಪರ್ ಓದುತ್ತಾ ಕುಳಿತಿದ್ದ ನಾನು ಏನೇ? ಈರುಳ್ಳಿ ಬೆಲೆ ಗಗನಕ್ಕೆ ಏರಿದೆ ಅಲ್ಲೇ... ಎಂದೆ. ಭೂಮಿ ಕೆಳಗಡೆ ಬೆಳೆಯುವ ವಸ್ತುವಿಗೆ ಇಷ್ಟು ದುಬಾರಿ ಆದರೆ... ಇನ್ನೂ ಭೂಮಿ ಮೇಲೆ ಬೆಳೆಯುವ ಪದಾರ್ಥಗಳ ಗತಿ ಏನು ಎಂದೆ. ಖರ್ಚು ನೀಗಿಸುವ ಮೊದಲೇ ನಾನು ಭೂಮಿಯ ಒಳಗಡೆ ಹೋಗಿ ಕುಳಿತುಕೊಳ್ಳಬೇಕಾಗುತ್ತೆ ಎಂದೆ. ಯಾವುದೋ ವಿಷಯಕ್ಕೆ ಕೋಪ ಮಾಡಿಕೊಂಡಿದ್ದ ನನ್ನ ಮಡದಿ. ಹಾಗೆ ಆಗಬೇಕು ನಿಮಗೆ, ಇಷ್ಟು ದಿವಸ ನಮ್ಮನ್ನು ಅಳಿಸುತ್ತಿದ್ದಿರಿ, ಈಗ ನಿಮ್ಮ ಬಾರಿ ಎಂದಳು. ಈ ತಿಂಗಳಿಂದ ನಿನಗೆ ಐದು ನೂರು ಎಕ್ಸ್‌ಟ್ರಾ ಪಾಕೆಟ್ ಮನಿ ಕೊಡಬೇಕು ಎಂದು ಕೊಂಡಿದ್ದೆ. ಆದರೆ ಈಗ ನನ್ನ ಪರ್ಸ್ ಮಾರಿ ಈರುಳ್ಳಿ ತೆಗೆದುಕೊಳ್ಳುವ ಪರಿಸ್ತಿತಿ ಎಂದು ಹೇಳಿದೆ. ಹಾ... ಏನು?.. ಏನಂದ್ರಿ?.. ಎಂದು ಬಾಯಿ ತೆಗೆದು ಹೊರಗಡೆ ಬಂದು, ಹೌದು ನೋಡಿ ತುಂಬಾ ಕಷ್ಟ... ಕಷ್ಟ.. ಎಂದು ನನ್ನ ಕಷ್ಟಕ್ಕೆ ಸಾತ್ ನೀಡಿಡಳು.

ಅದಕ್ಕೆ ಇದನ್ನು ಸ್ವರ್ಣ ಗಡ್ಡೆ ಅನ್ನುವದು ಎಂದು ಹೇಳಿದಳು. ಸ್ವರ್ಣದ ಸ್ಪರ್ಧೆಗೆ ನಿಂತಿದೆ ಎಂದು ಕಾಣುತ್ತೆ ಎಂದಳು. ಇದು ಒಳ್ಳೇ ಕತೆ ಆಯಿತು, ಹುಲಿಗೂ ಬೆಕ್ಕಿಗೂ ಸ್ಪರ್ಧೆ ಹಾಗೆ ಎಂದು ಹಣಿ ... ಹಣಿ.. ಗಟ್ಟಿಸಿದೆ. ಮತ್ತೆ ಇದರ ಹೆಸರೇ ಸೂಚಿಸುವ ಹಾಗೆ ಇದನ್ನು ಕೇವಲ ಉಳ್ಳವರು ಮಾತ್ರ ಕೊಳ್ಳಬಹುದು. ಅದಕ್ಕೆ ಇದನ್ನು ಉತ್ತರ ಕರ್ನಾಟಕದ ಜನ ಉಳ್ಳಗಡ್ಡೆ ಎಂದು ಹೇಳುತ್ತಾರೆ ಎಂಬ ತನ್ನ ಅಪಾರ ಬುದ್ಧಿ ಮತ್ತೆ ಪ್ರದರ್ಶಿಸಿದಳು. ಮತ್ತೆ ಗೊತ್ತಾ? ಇದನ್ನು ಕೆಲ ಜನ ಕೃಷ್ಣ ಗಡ್ಡೆ ಎಂದು ಕೂಡ ಕರೆಯುತ್ತಾರೆ. ನಾನು ಕೃಷ್ಣ ಗಡ್ದೆ ಎಂದೆ. ಹಾ... ಹೌದು.. ರೀ... ಇದರ ಒಳಗಡೆ ಇರುವ ಚಕ್ರ ನೋಡಿದರೆ ಥೇಠ್ ಅಭಿಮನ್ಯು ಚಕ್ರವ್ಯೂಹ ಇದ್ದ ಹಾಗೆ ಇದೆ ಇಲ್ಲವ ಅದಕ್ಕೆ. ಚಕ್ರವ್ಯೂಹ ಭೇಧಿಸುವ ವಿದ್ಯೆ ಶ್ರೀ ಕೃಷ್ಣನಿಗೆ ಚೆನ್ನಾಗಿ ಗೊತ್ತಿತ್ತು ಅದಕ್ಕೆ. ನಾನು ಹಾಗದೆರೆ ನಾವು ಈಗ ಒಳಗೆ ಸಿಕ್ಕಿ ಕೊಂಡು ಒದ್ದಾಡುವ ಸ್ತಿತಿ ಎಂದೆ. ಮತ್ತೆ ಅದನ್ನು ಹೆಚ್ಚಿದ ಮೇಲೆ ನಿಮಗೆ ಅದು ಚಕ್ರ.. ಚಕ್ರ.. ಆಗಿರುವದರಿಂದ ಸುದರ್ಶನ ಚಕ್ರಕ್ಕೆ ಹೋಲಿಸಿ ಕೃಷ್ಣ ಗಡ್ಡೆ ಅನ್ನುವರು ಎಂದು ತನ್ನ ಬುದ್ಧಿ ಮತ್ತೆಗೆ ಸ್ವಲ್ಪ ಒಗರಣೆ ಹಾಕಿದಳು. ಇಷ್ಟೆಲ್ಲಾ ಕತೆ ಹೇಳಿ ಮುಗಿದ ಮೇಲೆ ಮಡದಿ ಅಡುಗೆ ಮನೆಗೆ ಹೊರಟು ಹೋದಳು.

ಆಗ ಸುರೇಶನಿಗೆ ನೋಡಪ್ಪ ಮದುವೆ ಆದರೆ ಇಷ್ಟೆಲ್ಲಾ ಕೇಳಬೇಕುಗುತ್ತೆ. ಇದಕ್ಕೆ ನೀನು ರೆಡೀ ಇದ್ದರೆ ಅದು ನಿನ್ನ ಕರ್ಮ ಎಂದೆ. ಮತ್ತೆ ಕೌನ್ ಬನೇಗ ಕರೋಡ್ ಪತಿಯಲ್ಲಿ ಕೂಡ ನಾಲ್ಕು ಲೈಫ್ ಲೈನ್ ಇರುತ್ತೆ ಆದರೆ ಇಲ್ಲಿ ಇರುವದು ಒಂದೇ ಲೈಫ್... ಅದುವೇ ನಿನ್ನ ವೈಫ್... , ಆಮೇಲೆ ನಿನ್ನ ಲೈನ್ ಚೇಂಜ್ ಆಗಿ ಹೋಗಿರುತ್ತೆ ಎಂದು ಹೇಳಿದೆ. ಮತ್ತೆ ಅವನಿಗೆ ನಾನು ನನ್ನ ಗೆಳೆಯನ ಬಗ್ಗೆ ಬರೆದಿರುವ ಜಡೆ ಇದ್ದ ಹುಡುಗಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು... ಓದು ಎಂದು ಕೊಟ್ಟೆ. ನೋಡಿ ನೀನು ಕಲಿತಿರುವ ನೀತಿ ಪಾಠ ಏನು? ಎಂದು ಕೇಳಿದೆ. ಹುಡುಗ ಅಷ್ಟೇ ತಾನೇ ಅಂಕಲ್, ಚಿಂತೆ ಮಾಡಬೇಡಿ, ನನಗೂ ಅಡುಗೆ ಮಾಡಲು ಬರುತ್ತೆ ಮತ್ತು ಏನೋ ಹುಡುಗಿಯರು ಹೇಳುವ ಪುರಾಣವನ್ನು ಒಂದು ಕೀವಿಲಿ ಕೇಳಿ ಎನ್ನೊಂದರಲ್ಲಿ ಬಿಟ್ಟಾರಾಯಿತು ಎಂದ. .

ಅಷ್ಟರಲ್ಲಿ ಮಡದಿ ಕಾಫೀ ತೆಗೆದುಕೊಂಡು ಬಂದಳು. ಇಬ್ಬರು ಕಾಫೀ ಹಿರಿ ಮುಗಿಸುವಷ್ಟರಲ್ಲೇ, ನನ್ನ ಮಡದಿ ಗೋಪಾಲ್ ರಾಯರೆ ಸ್ವಲ್ಪ ಕೃಷ್ಣ ಗಡ್ಡೆ ಹೆಚ್ಚಿ ಕೊಡಿ ಎಂದು ಹೇಳಿದಳು. ಪಾಪ ಸುರೇಶ ನನ್ನ ಪಿಕಿ ಪಿಕಿ ಕಣ್ಣು ಬಿಟ್ಟು ನೋಡುತ್ತಿದ್ದ.

ಅಂಕಲ್ ನಾನು ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದೇನೆ. ಅವಳನ್ನೇ ಮದುವೆ ಕೂಡ ಆಗಿದ್ದೇನೆ. ಆದರೆ ಜಾತಿ ಮಾತ್ರ ಬೇರೆ..ಬೇರೆ... ಇದನ್ನು ಅಪ್ಪನಿಗೆ ಹೇಳಿದರೆ ಬಾಸುಂಡೆ ಬರುವ ಹಾಗೆ ಹೊಡೆಯುತ್ತಾರೆ. ನೀವೇ ಏನಾದರೂ ಮಾಡಿ ಅಪ್ಪನಿಗೆ ಹೇಳಿ ಒಪ್ಪಿಸಬೇಕು ಎಂದು ಹೇಳಿದ. ನನಗೆ ದಿಕ್ಕೇ ತೋಚದಾಗಿತ್ತು. ನಮ್ಮ ಮನೆಗೆ ಇರಲು ಎಂದು ಬಂದು, ಮದುವೆ ಕೂಡ ಆಗಿದ್ದಾನೆ. ಕಡೆಗೆ ಇವನ ಅಪ್ಪ ಒಪ್ಪದಿದ್ದರೆ ಇಲ್ಲೇ ಠಿಕಾಣಿ ಎಂದು ಯೋಚಿಸಿದೆ. ಕಡೆಗೆ ಅವರ ಅಪ್ಪನಿಗೆ ಕರೆ ಮಾಡಿ ತಿಳಿಸಿದೆ, ಒಪ್ಪಿದ ಆಸಾಮಿ, ಸಧ್ಯ ನಾನು ಬಚಾವ್....

Thursday, December 23, 2010

ಸಮ್ಮಿಶ್ರ ಸಂಸಾರ ....

ನಮ್ಮ ಸಮ್ಮಿಶ್ರ ಸಂಸಾರ(ಸರಕಾರ) ಸುಗಮವಾಗಿ ನಡೆದು ಕೊಂಡು ಹೋಗಬೇಕಾದರೆ ಬೇಕೇ.. ಬೇಕು.. ಸರ (ಅದು ಬಂಗಾರದ್ದು ಮಾತ್ರ) ಮತ್ತು ಕಾರ(ಸಧ್ಯ ಇನ್ನೂ ಕೇಳಿಲ್ಲ.)... ಒಂದು ದಿನ ಏನೋ? ಇರಲಿ ಎಂದು ಪ್ಲ್ಯಾಟಿನಮ್ ಸರ ತೆಗೆದುಕೊಂಡು ಬಂದಿದ್ದೆ. ಅವಳಿಗೆ ಸಕ್ಕತ್ ಕೋಪ ಬಂದು ಬಿಟ್ಟಿತ್ತು. ಏನ್ರೀ..? ನನಗೆ ಅಲ್ಯೂಮಿನಿಯಮ್ ಸರ ತಂದು ಕೊಟ್ಟಿದ್ದೀರ?. ಎಲ್ಲಾ ಗಂಡಸರು ಇಷ್ಟೇ... ಮದುವೆ ಆಗುವ ಮುಂಚೆ ಚಿನ್ನ... ರನ್ನ... ಎಂದೆಲ್ಲ ಹೋಗಳುವದು. ಆಮೇಲೆ ಮಡದಿ ಎಂದರೆ ಅಷ್ಟಕ್ಕೇ ಅಷ್ಟೇ ಎಂದು ಸರ ಬಿಸಾಡಿದಳು. ಸರಸರನೇ ಹೋಗಿ ಅದನ್ನು ಎಕ್ಸ್‌ಚೇಂಜ್ ಮಾಡಿ ಚಿನ್ನದ ಸರ ತಂದೆ.

ನಮ್ಮ ಸಮ್ಮಿಶ್ರ ಸರಕಾರಕ್ಕೆ ನಾಂದಿ ಹಾಡಿದ ಆ ಜೋತಿಷ್ಯ ಪಂಡಿತ ಯಾವ ಕವಡೆ ಕಾಸಿಗೋಸ್ಕರ ಕವಡೆ ಉರಿಳಿಸಿ ನಮ್ಮ ಜನ್ಮ ಕುಂಡಲಿಗಳನ್ನು ಸೇರಿಸಿದನೋ ನಾನು ಕಾಣೆ. ಪ್ರತಿ ವಿಷಯದಲ್ಲೂ ನಮ್ಮಿಬ್ಬರಲ್ಲಿ ಬಿನ್ನ ಅಭಿಪ್ರಾಯ ಖಂಡಿತ ಇರುತ್ತೆ. ಮತ್ತೆ ಇಷ್ಟೆಕ್ಕೆಲ್ಲಾ ಆಗ ತಾನೇ ಜೋತಿಷ್ಯ ಕಲೆಯುತ್ತಿದ್ದ ಮನೋಜ, ಮೂವತ್ತನೆ ವಯಸ್ಸಿನ ಒಳಗೆ ನಿನ್ನ ಮದುವೆ ಆಗದಿದ್ದರೆ, ಈ ಜನ್ಮದಲ್ಲಿ ಮದುವೆ ಆಗಲ್ಲ ಕಣೋ ಎಂದು ತನ್ನ ಕಲಿತ ವಿದ್ಯೆಯ ಪ್ರಯೋಗ ನನ್ನ ಮೇಲೆ ಮಾಡಿದ್ದು ಕೂಡ ಪರಿಣಾಮವಾಗಿ ಈ ಸರಕಾರ ಅಸ್ತಿತ್ವಕ್ಕೆ ಬಂತು.

ಒಂದು ದಿನ ಸೀರೆ ಅಂಗಡಿಗೆ ಹೋಗಿದ್ದೆವು. ರಾತ್ರಿ ಒಂಬತ್ತು ಆದರೂ ನಮ್ಮ ಸೀರೆ ಸೆಲೆಕ್ಶನ್ ಮುಗಿದಿರಲಿಲ್ಲ.ಅವಳಿಗೆ ನೀಲಿ ಬಣ್ಣ ಇಷ್ಟವಾದರೆ ನನಗೆ ಕೆಂಪು... ಕಡೆಗೆ ಸರ್ ಈಗ ಅಂಗಡಿ ಬಂದ್ ಮಾಡುವ ಸಮಯ ನಾಳೆ ಬನ್ನಿ ಎಂದ ಅಂಗಡಿಯವ. ನಾನು ನಾಳೆ ಬಂದರೆ ಆಗುತ್ತೆ ಎಂದು ಹೇಳಿದೆ. ಅದಕ್ಕೆ ಅವಳು ನೀವೇ ಒಂದು ಸೀರೆ ಸೆಲೆಕ್ಟ್ ಮಾಡಿ ಎಂದಳು. ಕಡೆಗೆ ನಾನು ಕೆಂಪು ಬಣ್ಣದ ಸೀರೆ ಸೆಲೆಕ್ಟ್ ಮಾಡಿದೆ. ಅವಳು ಬೇಡ ಅನ್ನುವ ಮೊದಲೇ ಅಂಗಡಿಯವ ಅದನ್ನು ತೆಗೆದು ಕೊಂಡು ಬಿಲ್ ಮಾಡಿಬಿಟ್ಟ. ಹೆಂಡತಿಯ ಮುಖಕ್ಕೂ ಆ ಸೀರೆಯ ಬಣ್ಣಕ್ಕೂ ಏನು ವ್ಯತ್ಯಾಸವೇ ಇರಲಿಲ್ಲ, ಅಷ್ಟು ಕೋಪ ಮಾಡಿಕೊಂಡು ಬಿಟ್ಟಿದ್ದಳು.

ಮನೆ ಬರುವವರೆಗೂ ಮೌನ ಗೌರಿಯ ಹಾಗೆ ಸುಮ್ಮನೇ ಕುಳಿತಿದ್ದು ನೋಡಿ ನನಗೆ ಆಶ್ಚರ್ಯ ಆಗಿತ್ತು. ಮನೆಗೆ ಬಂದವಳೇ ಅಡುಗೆ ಮನೆಗೆ ಹೊರಟು ಹೋದಳು. ಊಟಕ್ಕೆ ಕುಳಿತಾಗ ತಿಳಿಯಿತು ಅವಳು ತನ್ನ ಎಲ್ಲ ಬಿ ಪಿ ಸಾರಿನ ಮೇಲೆ ಪ್ರದರ್ಶನ ಮಾಡಿದ್ದಾಳೆ ಎಂದು. ಸಕ್ಕತ್ ಉಪ್ಪು ಸಾರು. ನಾನು ಲೇ.. ನೀನು ಇಷ್ಟು ಉಪ್ಪು ಹಾಕಿದರೆ ನನಗೆ ಬಿ ಪಿ ಬಂದರೆ ನಿನಗೆ ಕಷ್ಟ ಎಂದು ಹೇಳಿದೆ. ನಾನು ಬಿ ಪಿ ಹೆಚ್ಚಾಗಿ ಮತ್ತೆ ಗಂಡ ಹೊಡೆದರೆ ಪ್ರಸಾದ ಎಂದು ಸುಮ್ಮನೇ ಒಂದು ರೈಲು ಬಿಟ್ಟೆ. ಆದರೂ ಮೌನ ವ್ರತ ಮುರಿಯಲಿಲ್ಲ. "ಮೌನಂ ಸಮ್ಮತಿ ಲಕ್ಷಣಂ" ಎಂದು ಒಂದು ಹಾಗೆ ಸಣ್ಣದಾಗಿ ಹೊಡೆದೆ. ಆದರೂ ಏನು ಪ್ರಯೋಜನ ಆಗಲಿಲ್ಲ. ಮೊನ್ನೆ ಸ್ವೀಟ್ ತಂದಿದ್ದೆಯಲ್ಲ ಅದು ಚೆನ್ನಾಗಿತ್ತು ಕಣೇ ಎಂದೆ. ಆ ಸ್ವೀಟ್ ಅಂಗಡಿ ಎಲ್ಲಿ ಇದೆ ಎಂದು ಕೇಳಿದೆ. ಏನು ಉತ್ತರ ಬರಲಿಲ್ಲ.

ಮೂರು ದಿನ ಮೌನ ವ್ರತ. ನನ್ನ ಹತ್ತಿರ ದುಡ್ಡು ಇರಲಿಲ್ಲ ಹೀಗಾಗಿ ಕಡೆಗೆ ಸೀರೆ ಕೊಡಿಸಬೇಕು ಎಂದು ಯಾರಿಗಾದರೂ ಸಾಲ ಕೇಳಬೇಕು ಎಂದು ಸುಬ್ಬನ ಮನೆಗೆ ಹೋದೆ. ಸುಬ್ಬನಿಗೆ ಐದು ಸಾವಿರ ಸಾಲ ಕೊಡು ಎಂದು ಕೇಳಿದೆ. ಕೇಳಿದ ಕೂಡಲೇ ಪೆನ್ನು ತೆಗೆದುಕೊಂಡ. ನಾನು ಖುಶಿಯಿಂದ ಚೆಕ್ ಕೊಡಬಹುದು ಎಂದು ಅಂದುಕೊಂಡರೆ, ಒಂದು ಪೇಪರ್ ತೆಗೆದುಕೊಂಡು ಅದರಲ್ಲಿ ತನ್ನ ತಿಂಗಳ ಖರ್ಚಿನ ಬಗ್ಗೆ ವಿವರಣೆ ಕೊಟ್ಟು, ಅರ್ಧ್ ಘಂಟೆ ತಲೆ ತಿಂದು, ಕಾಫೀ ಕೂಡಿಸಿ ಕಳುಹಿಸಿದ. ನನಗೆ ಈಗ ೨೦ ಸಾವಿರ ಬೇಕು. ನೀನು ೩೦ ಸಾವಿರ ಕೊಡು ನಾನು ನಿನಗೆ 5 ಸಾವಿರ ಕೊಡುತ್ತೇನೆ ಅಂದ. ನಾನು "ಉದುವದನ್ನು ಕೊಟ್ಟು ಬಾರಿಸುವದು ತೆಗೆದುಕೊಂಡ ಹಾಗಾಯಿತು" ಎಂದು ಏನು ಹಾನಿಯಾಗದ ಹಾಗೆ ಹಣಿ ಹಣಿ ಗಟ್ಟಿಸಿದೆ. ಮಂಜನ ಹತ್ತಿರ ಕೇಳಿದರೆ ಎಂದು ಯೋಚಿಸಿ ಅವನ ಮನೆಗೆ ಹೊರಟೆ. ನನ್ನ ಬೆನ್ನಿಗೆ ಬೇತಾಳದ ಹಾಗೆ ನನ್ನ ಹಿಂದೆ ಬಂದ. ನಾನು ಕೇಳುವ ಮೊದಲೇ ನನಗೆ 20 ಸಾವಿರ ಬೇಕು ಅಂದ. ಸಾರಿ... ಸಾರಿ ....30 ಸಾವಿರ ಎಂದು ನನ್ನ ಮುಖ ನೋಡಿ ನಗುತ್ತಾ ಹೇಳಿದ. ಮಂಜ ನನ್ನ ಹತ್ತಿರ ಇರುವದು ಬರೀ 8 ಸಾವಿರ ಅದರಲ್ಲಿ ಬೇಕಾದರೆ 6 ಸಾವಿರ ಕೊಡಬಲ್ಲೆ ಎಂದ. ಅದಕ್ಕೆ ತಕ್ಷಣ ನಾನು ನನಗೆ ಅವಶ್ಯಕತೆ ಇದೆ ಕೊಡು ಎಂದು ಕೇಳಿದೆ. ಇಲ್ಲದೇ ಹೋಗಿದ್ದರೆ ಅದನ್ನು ಸುಬ್ಬ ಇಸಿದುಕೊಂಡು ಬಿಡುತ್ತಿದ್ದ. ಕಡೆಗೆ ಮಂಜನ ಕಡೆ ಸಾಲ ಇಸಿದುಕೊಂಡು ಬಂದೆ. ಅವಳು ಮಾತು ಕೇಳದೇ 3 ದಿವಸ ಆಗಿದ್ದರಿಂದ, ಪಕ್ಕದ ಮನೆಯವರು ರೇಡಿಯೋ/ ಟಿ ವಿ ಹಚ್ಚಿದರು ಕೂಡ ಹೆಂಡತಿ ಕೂಗಿದ ಹಾಗೆ ಅನ್ನಿಸೋದು. ಕೆಲ ಬಾರಿ ಏನು? ಎಂದು ಕೇಳಿ ಬೆಪ್ಪನ ಹಾಗೆ ನಿರುತ್ತರನಾಗಿ ಕುಳಿತುಬಿಟ್ಟಿದ್ದೆ.

ಮರುದಿನ ನಾನು ಅದೇ ಸೀರೆ ಅಂಗಡಿಗೆ ಹೋಗಿ ಅವಳು ಮೆಚ್ಚಿದ ನೀಲಿ ಬಣ್ಣದ ಸೀರೆ ತೆಗೆದುಕೊಂಡು ಬಂದೆ. ಮತ್ತು ಬರುವ ದಾರಿಯಲ್ಲಿ ನನ್ನ ಮಡದಿಗೆ ಕೇಳಿದ ಸ್ವೀಟ್ ಅಂಗಡಿಯ ಬಾಕ್ಸ್ ಹಿಡಿದು ಕೊಂಡು, ಒಂದು ಹುಡುಗಿ ಹೊರಟಿತ್ತು. ನಾನು ಅವಳನ್ನು ನೋಡಿ ಅವಳ ಹಿಂದೆ ಹೋದೆ. ಅವಳು ಮತ್ತೆ ಇನ್ನಷ್ಟು ಜೋರಾಗಿ ಹೊರಟಳು. ನನಗೆ ಘಾಬರಿ. ಆದರೂ ಸ್ವೀಟ್ ಚೆನ್ನಾಗಿ ಇತ್ತು ಎಂದು ಅವಳ ಮುಂದೆ ಹೋಗಿ ಗಾಡಿ ನಿಲ್ಲಿಸಿದೆ. ಅಷ್ಟರಲ್ಲಿ ಅವಳ ಅಪ್ಪ ಬಂದು ಬಿಟ್ಟ. ನನಗೆ ಇನ್ನೂ ಘಾಬರಿ ಇವಳನ್ನು ಬೆನ್ನು ಹತ್ತಿದ್ದಕ್ಕೆ, ಎಲ್ಲಿ ಎರಡು ಕೊಡುತ್ತಾನೆ ಎಂದು. ರೀ...ನಾವೊಬ್ಬರೇ ಅಷ್ಟೇ ಅಲ್ಲಾರಿ ಅಲ್ಲಿ ಕಸ ಹಾಕೋದು. ಎಲ್ಲರೂ ಹಾಕುತ್ತಾರೆ. ದುಡ್ಡು ನಮ್ಮ ಕಡೆ ಮಾತ್ರ ವಸೂಲಿ ಮಾಡಿದರೆ ಹೇಗೆ ಎಂದರು. ನಾನು ಪೆಕರನ ಹಾಗೆ ತಲೆ ಕೆರೆದು ಕೊಳ್ಳುತ್ತಿದೆ. ಮತ್ತೆ ನನ್ನಷ್ಟಕ್ಕೆ ನಾನೇ ನೋಡಿಕೊಂಡೆ. ಆಗ ಅರ್ಥ ಆಯಿತು. ನಾನು ಚ್ಯಾಕಲೇಟ್ ಕಲರ್ ಜ್ಯಾಕೆಟ್ ಹಾಕಿದ್ದು ನೋಡಿ ಬಿ ಬಿ ಎಂ ಪಿ ನೌಕರ ಎಂದು ಕೊಂಡಿದ್ದರು ಎಂದು. ಆಮೇಲೆ ಸರ್ ಬಿ ಬಿ ಎಂ ಪಿ ನೌಕರ ಅಲ್ಲ. ನೀವು ತೆಗೆದು ಕೊಂಡಿರುವ ಸ್ವೀಟ್ ಅಂಗಡಿ ಎಲ್ಲಿ ಇದೆ ಎಂದು ಆ ಪ್ಯಾಕೆಟ್ ತೋರಿಸಿ ಕೇಳಿದೆ. ಆಗ ಅವರು ಅಂಗಡಿ ತೋರಿಸಿದರು. ಆಮೇಲೆ ಅವರು ಆ ಸ್ವೀಟ್ ಬಾಕ್ಸ್ ಕಸ ಚೆಲ್ಲಿ ಹೊರಟು ಹೋದರು.

ಮನೆಗೆ ಬಂದು ನೀಲಿ ಸೀರೆ ಮತ್ತು ಸ್ವೀಟ್ ಬಾಕ್ಸ್ ಕೈಗೆ ಇಟ್ಟಾಗ ಮೌನ ವೃತ ಮುರಿದಿದ್ದಳು. ನಡೆದ ಸ್ವೀಟ್ ಅಂಗಡಿ ವಿಳಾಸದ ವಿಷಯ ಕೇಳಿ ಸಕ್ಕತ್ ನಕ್ಕೂ ಇವತ್ತು ಉಪ್ಪೆ ಇಲ್ಲದ ಸಾರು ಮಾಡಿ... ಸಾರಿ.. ಎಂದು ಉಲಿದಳು. ಹಾಗೆಂದು ನಮ್ಮಿಬ್ಬರಲ್ಲಿ ಯಾವುದೇ ಸಾಮ್ಯತೆ ಇಲ್ಲ ಎಂದು ತಿಳಿಯಬೇಡಿ, ಇಬ್ಬರಿಗೂ ಮಿಸ್ಸಳ್, ಮಿಸ್ಸಳ್ ಭಾಜಿ ಇಷ್ಟ. ಮತ್ತು ಮಿಶ್ರ ಮಾಧುರ್ಯ ರೇಡಿಯೋ ಕಾರ್ಯಕ್ರಮ ಕೂಡ.

Friday, December 17, 2010

ಕಾಯುವಿಕೆ ಅಂತ್ಯ ....

ಹಾಗೆ ಪೇಪರ್ ಓದುತ್ತಾ ಕುಳಿತಿದ್ದೆ. ಪೇಪರ್ ನಲ್ಲಿ ಅತಿ ಪ್ರಾಮಾಣಿಕತೆಯಿಂದ ನೋಡುವ ಒಂದು ಅಂಕಣ ಎಂದರೆ ನನ್ನ ಭಯದ + ವಿಷಯ (ಭವಿಷ್ಯ). ಈ ವಾರ ನಿಜವಾಗಿಯೂ ಭಯದ ವಿಷಯವೇ ಇತ್ತು ಅನ್ನಿ. ಏಕೆಂದರೆ ಈಗ ಅಪ್ರೈಸಲ್ ಸಮಯ.... ಕಳೆದ ವಾರ ಕೈ ಕೆರೆತ ಬೇರೆ ಆಗಿ ಒಂದು ವಾರ ರಜೆ ತೆಗೆದುಕೊಂಡಿದ್ದಕ್ಕೆ, ನನ್ನ ಬಾಸ್ ಬೇರೆ ಕೋಪ ಮಾಡಿಕೊಂಡಿದ್ದರು. ಹೀಗಾಗಿ ನನ್ನ ಭವಿಷ್ಯ ಭಯದ ವಿಷಯವಾಗಿ ಪರಣಮಿಸಬಹುದು ಎಂದು ನಾನು ಎಣಿಸಿದ್ದೆ. ಹೇಗಿದ್ದರು ಭವಿಷ್ಯ ನಮ್ಮ ಮನೋಜನೆ ಬರೆಯೋದು ಚೆನ್ನಾಗೆ ಬರೆದಿರುತ್ತಾನೆ ಎಂದು ತೆಗೆದು ನೋಡಿದೆ. ನನ್ನ ರಾಶಿ ಮೀನಕ್ಕೆ ಕಣ್ಣು ಆಡಿಸಿದೆ. ಚೆನ್ನಾಗಿ ಬರೆದಿದ್ದ. ಖುಷಿಯಾಗಿ ನೋಡಿ ಪೇಪರ್ ಬಂದು ಮಾಡ ಇಡ ಹತ್ತಿದಾಗ, ಮಡದಿ ಏನ್ರೀ?. ನಿಮ್ಮ ಭವಿಷ್ಯ ಅಷ್ಟು ನೋಡಿದರೆ ಆಯಿತ?, ಥೂss.. ನಿಮ್ಮ ಎಂದು ಉಗಿದಳು. ಅವಳು ಉಗಿದ ಥೂ ಅನ್ನು ಸ್ವಲ್ಪೇ ಕ್ಯಾಚ್ ಮಾಡಿ, ಚಿಕ್ಕದಾದ ಥು ನನ್ನ ರಾಶಿಯ ಮಧ್ಯ ತೂರಿಸಿ, ಅವಳ ಭವಿಷ್ಯ ಓದಿದೆ(ಮಿಥುನ). ಅಷ್ಟಕ್ಕೇ ಬಿಡದೆ ಮಗನ ಭವಿಷ್ಯ ಕೂಡ ಓದಿಸಿದಳು. ಮಗನ ಭವಿಷ್ಯದಲ್ಲಿ ಉನ್ನತ ವ್ಯಾಸಂಗ ಎಂದು ಬರೆದಿತ್ತು. ಮನೋಜ ನಿಜವಾಗಿಯೂ ತ್ರಿಕಾಲ ಜ್ಞಾನಿ ಎಂದು ಅನಿಸಿತು. ಏಕೆಂದರೆ ಮಗನಿಗೆ ಬೇರೆ ಸ್ಚೂಲ್‌ನಲ್ಲಿ ಎಲ್ ಕೇ ಜಿ ಸೇರಿಸಬೇಕಿತ್ತು. ಅವಳು ಅಡಿಗೆ ಮನೆಗೆ ಕಾಫೀ ತರಲು ಹೋದಳು. ನಾನು ಪೇಪರ್ ಎತ್ತಿ ಇಟ್ಟೆ.

ಕಾಫೀ ಕಪ್ ತೆಗೆದುಕೊಂಡು ಬಂದು, ರೀ ಅಂದ ಹಾಗೆ ನಿಮ್ಮ ಭವಿಷ್ಯ ಓದಲೇ ಇಲ್ಲ ಎಂದಳು. ನನಗೆ ಕಾಫೀ ಕೊಟ್ಟು ತಾನೇ ಓದಲು ಶುರು ಮಾಡಿದಳು. ಮದುವೆ ಪ್ರಸ್ತಾಪ ಮತ್ತು ಕಾಯುವಿಕೆ ಅಂತ್ಯ ಎಂದು ಬರೆದಿತ್ತು. ರೀ ಇಲ್ಲಿ ಒಂದು ತಪ್ಪು ಆಗಿದೆ. ಮರು ಮದುವೆ ಎಂದು ಬರಬೇಕಿತ್ತು ಅಲ್ಲವೇ ಎಂದು ಅಪಹಾಸ್ಯ ಮಾಡಿದಳು. ಹೇಗಿದ್ದರು ಕಾಯುವಿಕೆ ಅಂತ್ಯ ಎಂದು ಇನ್ನೊಂದು ಭವಿಷ್ಯ ಸಾಕಾರ ಆಗಬಹುದು ಎಂದು ಎಣಿಸಿ, ನಾನು ಸ್ನಾನ ತಿಂಡಿ ಮುಗಿಸಿ ಆಫೀಸ್ ಹೊರಟೆ.

ಆಫೀಸ್ ತಲುಪಿದ ತಕ್ಷಣ ಬಾಸ್ ಫೋನ್ ಬಂತು. ಇವತ್ತು ನಾನು ಸ್ವಲ್ಪ ಬೇಗನೆ ಹೋಗಿದ್ದರಿಂದ ಬೈಸಿಕೊಳ್ಳುವುದಕ್ಕೆ ಅಲ್ಲ ಎಂದು ಫೋನ್ ಎತ್ತಿದೆ. ರೀ.. ಗೋಪಾಲ್ ಕ್ಯಾಬಿನ್ ಗೆ ಬನ್ನಿ ನಿಮ್ಮ ಜೊತೆ ಮಾತನಾಡುವುದಿದೆ ಎಂದರು. ನಾನು ಸಕ್ಕತ್ ಖುಷಿ. ಅಪ್ರೈಸಲ್ ಎಂದು ಒಳಗಡೆ ಹೆಜ್ಜೆ ಇಟ್ಟೆ. ಒಳಗಡೆ ಬಾಸ್ ಮತ್ತು ಆಡ್‌ಮಿನ್ ಇಬ್ಬರು ಕುಳಿತಿದ್ದರು. ಇಬ್ಬರ ಕೈಯಲ್ಲಿ ಪೇಪರ್ ಬೇರೆ ಇತ್ತು. ನನಗೆ ಸ್ವರ್ಗಕ್ಕೆ ಮೂರೇ ಗೇಣು. ಒಳಗೆ ಹೋದ ಕೂಡಲೇ ಬನ್ನಿ ಕುಳಿತುಕೊಳ್ಳಿ ಎಂದರು. ಕಾಫೀ ಬೇರೆ ತರಿಸಿದರು. ಕಾಫೀ ಕುಡಿದೆ. ಸಾವಕಾಶವಾಗಿ ಪೇಪರ್ ತೆಗೆದು ನೋಡಿ, ಗೋಪಾಲ್... ಈಗ ನಾಲ್ಕನೇ ಫ್ಲೋರ್ ಬೇರೆ ಶುರು ಆಗಿದೆ ಎಂದರು. ನಾನು ಹೌದು ಸರ್ ಎಂದೆ. ಸಧ್ಯ ನನ್ನ ಅಪ್ರೈಸಲ್ ಮಾಡಿ ನಾಲ್ಕನೇ ಫ್ಲೂರ್ಗೆ ಕಳುಹಿಸುತ್ತಾರೆ ಎಂದು ಇನ್ನೂ ಖುಷಿಯಾಗಿದ್ದೆ. ಪೇಪರ್ ನನ್ನ ಮುಂದೆ ಹಿಡಿದು ನಿಮ್ಮ ಕ್ಯೂಬಿಕಲ್ ಶಿಫ್ಟ್ ಮಾಡುತ್ತಾ ಇದ್ದೇವೆ, ನಿಮ್ಮ ಆಸನ ನೀವೇ ಆರಿಸಿಕೊಳ್ಳಿ ಎಂದರು. ನಾನು ದಿಕ್ಕುಗಳನ್ನು ಪರಿಶಿಸಿಲಿಸಿ, ಸರ್.. ನನಗೆ ಇದು ಬೇಕು ಎಂದು ಆರಿಸಿದೆ. ಮತ್ತೆ ಹಾಗೆ ಕುಳಿತಿದ್ದೆ. ಆಯಿತು ಗೋಪಾಲ್ ಎಂದು ಹೇಳಿ ಕೈ ಕುಲುಕಿದರು. ನನಗೆ ದಿಕ್ಕೇ ತೋಚಾದಾಗಿತ್ತು.

ಮತ್ತೆ ಎದ್ದು ಸಾವಕಾಶವಾಗಿ ಎದ್ದು ನನ್ನ ಆಸಾನಕ್ಕೆ ಬಂದು ಒರಗಿದೆ. ಸಂಜೆವರೆಗೂ ಕಾಯುತ್ತಾನೆ ಇದ್ದೆ. ಬಾಸ್ ಎರಡು ಬಾರಿ ಕರೆದು ಹೊಸ ಹೊಸ ಪ್ರಾಜೆಕ್ಟ್ ಗಳ ಬಗ್ಗೆ ವಿವರಣೆ ನೀಡಿದರು ಮಾತ್ರ. ಸಂಜೆ ಮತ್ತೆ ಕರೆದು ಸ್ಟೇಟಸ್ ಬೇರೆ ಕೇಳಿ ಮನೆಗೆ ಕಳುಹಿಸಿದರು. ಎಷ್ಟೇ ಆದರೂ ನಾನು ಬಸವಣ್ಣನವರ "ಕಾಯಕವೇ ಕೈಲಾಸ" ಎಂಬ ಆಜ್ಞೆ ಪಾಲಕನಿಗೆ ಇವತ್ತು ಬರೀ ಕಾಯುವಿಕೆಯ ಕೆಲಸ ಹತ್ತಿತ್ತು. ನಿರಾಸೆಯ ಅಲೆಯಲ್ಲಿ ತೇಲುತ್ತ ಮನೆಗೆ ಬಂದೆ.

ಕಾಫೀ ಕೊಡುತ್ತಾ ನನ್ನ ಕಳೆ ಗುಂದಿದ ಮುಖ ನೋಡಿ ಮಡದಿ ಏಕೆ? ಏನು? ಏನಾಯಿತು... ಎಂದು ಪ್ರಶ್ನಿಸಿದಳು. ನಾನು ನಡೆದ ವಿಚಾರ ಅವಳಿಗೆ ಹೇಳಿದೆ. ಸರಿ ಮತ್ತೆ ನಿಮ್ಮ ಕಾಯುವಿಕೆ ಅಂತ್ಯ ಆಯಿತು ಅಲ್ಲ ಎಂದಳು. ನೀವೇ ಹೇಳಿದ್ದು ತಾನೇ, ನಿಮ್ಮ ಕ್ಯೂಬಿಕಲ್ ಬಾಗಿಲ ಹತ್ತಿರ ಇದೆ, ಯಾರಾದರೂ ಒಳಗೆ ಬಂದರು, ನಿಮಗೆ ಕಾರ್ಡ್ ಸ್ವಾಪ್ ಮಾಡಿದ ಸೌಂಡ್ ಬರುತ್ತೆ ಅಂತ. ಮತ್ತೆ ನಿಮ್ಮನ್ನು ನೀವೇ ಕೆಲ ದಿನ ಸೆಕ್ಯೂರಿಟೀ ಗಾರ್ಡ್ ಎಂದು ಹೋಲಿಸಿಕೊಂಡಿದ್ದೀರಿ ನಿಜ ತಾನೇ? ಎಂದು ಗಹ ಗಹಿಸಿ ನಗುತ್ತಾ ಅಂದಳು. ಹಾ ...ಹೌದಲ್ಲ ಎಂದು ನನ್ನ ತಲೆಗೆ ನಾನೇ ಮೊಟಕಿದೆ. ನಿಜವಾಗಿಯೂ ನನ್ನ ಕಾಯುವಿಕೆ ಅಂತ್ಯವಾಗಿತ್ತು. ಸ್ವಲ್ಪ ನಗು ನನ್ನ ಮುಖದಲ್ಲಿ ಮೂಡಿತ್ತು. ಮನೋಜನ ಭವಿಷ್ಯ ಕೂಡ...

ಅಷ್ಟರಲ್ಲಿ ಮಗ ಏಕೆ? ಇಷ್ಟು ಮಳೆ ಬರುತ್ತಾ ಇದೆ ಅಪ್ಪ ಎಂದು ಕೇಳಿದ. ಅದು ಸೈಕ್ಲೋನ್ ಎಂದು ಹೇಳಿದೆ. ಮಗ ಅದನ್ನು ಸೈಕಲ್ ಎಂದು ಕೊಂಡು, ಅದನ್ನು ಹೇಗೆ ಹೊಡೆಯುವದು ಅಪ್ಪ ಎಂದು ಕೇಳಿದ. ನನಗೆ ನಗು ತಡೆಯಲು ಅಗಲೆ ಇಲ್ಲ... ಜೋರಾಗಿ ನಗಹತ್ತಿದೆ. ಮಗನಿಗೆ ಅಪಮಾನ ಆದ ಹಾಗೆ ಆಗಿತ್ತು. ಅವನು ಜೋರಾಗಿ ಅಳಹತ್ತಿದ. ಮತ್ತೆ ಅವನನ್ನು ಸಮಾಧಾನ ಮಾಡಿ, ಊಟ ಮುಗಿಸಿ, ಎಲ್ಲ ಕಹಿ ಮರೆತು ಸಿಹಿ ನಿದ್ದೆಗೆ ಜಾರಿದೆವು.

ಮರೆತೇನೆಂದರೆ ಮರೆಯಲಿ ಹ್ಯಾಂಗ!? ....

ನಾನು ತುಂಬಾ ಬಾರಿ ಭೂತವನ್ನು ಬೆನ್ನುಹತ್ತಿ ಹೋಗಿದ್ದೇನೆ. ಭೂತ ನನಗೆ ಯಾವತ್ತೂ ಹೆದರಿಸುವ ಕೆಲಸ ಮಾಡಿಲ್ಲ. ಅದರ ಜೊತೆಗಿನ ಅನುಭವ ಸುಮಧುರವಾಗಿದೆ. ಮತ್ತೆ.. ಮತ್ತೆ.. ಭೂತ ನನ್ನ ಮಾತನಾಡಿಸಿದೆ. ತಪ್ಪು ತಿಳಿಯಬೇಡಿ, ನಾನು ಮಾತನಾಡುತ್ತಿರುವದು ನಮ್ಮನ್ನು ಸದಾ ಕಾಡುವ ಭೂತ ಕಾಲದ ಬಗ್ಗೆ. ನನ್ನ ಕಳೆದ ಮಾಸಿದ ಮಧುರ ಅನುಭವಗಳನ್ನು ಮೆಲಕು ಹಾಕಿದ್ದೇನೆ. ನನಗೆ ತುಂಬಾ ಇಷ್ಟವಾಗುವ ಧಾರಾವಾಹಿ ಎಂದರೆ ವಿಕ್ರಮ್ ಬೆತಾಳ್. ಏಕೆಂದರೆ ಪ್ರತಿ ಬಾರಿ ನಾನು ಕಳೆದ ಮಧುರ ಕ್ಷಣಗಳ ಭೂತವನ್ನು ಹೊತ್ತು ತರುತ್ತೇನೆ. ಮತ್ತೆ ಅದರ ಜೊತೆ ಒಂದು ನೀತಿ ಪಾಠವನ್ನು ಕೂಡ ಕಲೆತಿರುತ್ತೇನೆ. ನಾನು ಅದನ್ನು ಬಿಟ್ಟು ಬಿಡುತ್ತೇನೆ. ಮತ್ತೆ ಅದರ ಹಿಂದೆ ಹೋಗಿ ಮತ್ತೊಂದು ಹೊಸ.. ಹೊಸ.. ಕಥೆಗಳನ್ನು ಹೊತ್ತ ಭೂತವನ್ನು ಹೆಗಲ ಮೇಲೆ ಕುಳ್ಳಿರಿಸಿ ಮುಂದೆ ನಡೆಯುತ್ತೇನೆ. ಇದು ನಿರಂತರವಾಗಿ ನಡೆಯುವ ಕ್ರಿಯೆ.

ಹೀಗೆ ಎರಡು ದಿನದಿಂದ ಏನಾದರೂ ಹಳೆಯ ನೆನಪುಗಳನ್ನು ಬರೀಬೇಕು ಎಂದು ಯೋಚಿಸುತ್ತಾ ತಲೆಕೆಡಿಸಿಕೊಂಡಿದ್ದೆ. ನಿನ್ನೆ ರಾತ್ರಿ ಬೇರೆ ಮಡದಿಗೆ ಆರೋಗ್ಯ ಸರಿ ಇರಲಿಲ್ಲ. ಹೀಗಾಗಿ ಎಲ್ಲ ಕೆಲಸ ನನ್ನ ಹೆಗಲ ಮೇಲೆ ಬಿದ್ದಿತ್ತು. ಮೊದಮೊದಲು ಯಾವುದೆ ಸ್ತ್ರೀ... ಕ್ಷಮಿಸಿ... ಇಸ್ತ್ರಿ ಮುಟ್ಟಲು ಹೆದರುತ್ತಿದ್ದೆ. ಮದುವೆ ಆದ ಮೇಲೆ ಈಗ ಸ್ವಲ್ಪ ಧೈರ್ಯ ಬಂದಿದೆ. ಅದಕ್ಕೆ ಅಪ್ಪ ಚಿಕ್ಕವಾನಿದ್ದಾಗ ಲೇ ನೀನು "ಅರಳಿ ಅಂಡಿಗೇ ಮೇಲೆ ಲಗಾಟಿ ಹೊಡೆಯುವ ನೀನು" ಅನ್ನುತ್ತಿದ್ದರು. ರಾತ್ರಿನೆ ಇಸ್ತ್ರಿ ಮಾಡಿ ಬಟ್ಟೆ ಎತ್ತಿ ಇಟ್ಟಿದ್ದೆ.

ಮುಂಜಾನೆ ಬೇಗ ಐದು ಘಂಟೆಗೆ ಎದ್ದು ಕಸ ಗುಡಿಸಿ, ಪಾತ್ರೆ ತೊಳೆದು ಹಾಗೆ ಲೇಖನದ ಯೋಚನೆಯಲ್ಲಿ ಟೀ ಮಾಡಿಕೊಂಡು ಬಂದು ಕುಳಿತೆ. ಲೇಖನದ ಗುಂಗಿನಲ್ಲಿ ಟೀ ಪಾತ್ರೆ ತೊಳೆಯೋಕೆ ಎಂದು ಲೈಟ್ ಆಫ್ ಮಾಡಿ, ಮುಂದಿನ ಬಾಗಿಲ ಮುಚ್ಚಿ ಹೋದೆ. ಟೀ ಪಾತ್ರೆ ತೊಳೆದ, ಕೆಲ ಸಮಯದ ನಂತರ "ಕಟ್.. ಕಟ್.." ಬಾಗಿಲ ಶಬ್ದ. ಇಷ್ಟು ಘಂಟೆಗೆ ಯಾರು? ಬಂದಿರಬಹುದು ಎಂದು ಯೋಚಿಸಿದೆ. ನಿನ್ನೆ ಮನೆ ಓನರ್ ಗೆ ಬಾಡಿಗೆಗೆ ಎರಡು ನೂರು ಚಿಲ್ಲರೆ ಇರದ ಕಾರಣ ನಾಳೆ ಕೊಡುತ್ತೇನೆ ಎಂದು ಹೇಳಿದ್ದೆ. ಪಾಪ ಒಳ್ಳೇ ಮನುಷ್ಯ, ಹಾಗೆಲ್ಲಾ ಬೆಳಿಗ್ಗೇನೇ ತೊಂದ್ರೆ ಕೊಡೋ ಆಸಾಮಿ ಅಲ್ಲ. ಬಹುಶಃ ಹಾಲಿನವನು ಬೇಗ ಬಂದನೆ ಎಂದು ಪಾತ್ರೆ ತೆಗೆದುಕೊಂಡೆ. ಹಾಗೆ ಬೈದುಕೊಳ್ಳುತ್ತ ಬಾಗಿಲು ತೆಗೆದು, ಪಾತ್ರೆ ಮುಂದೆ ಹಿಡಿದೆ. ಪಾತ್ರೆ ಕಸಿದು, ಬಾಗಿಲು ನುಕಿ, ಒಬ್ಬ ಸೀರೆ ಉಟ್ಟ ಮಹಿಳೆ ಒಳಗಡೆ ಬಂದಳು. ರೀss.. ಯಾರು? ಬೇಕು ನಿಮಗೆ ಎಂದು ದಬಾಯಿಸಿದೆ. ಲೈಟ್ ಆನ್ ಮಾಡಿದಳು ನನ್ನ ಮಡದಿ. ಏನೇ? ನೀನು ಇಷ್ಟು ಬೇಗ ಎದ್ದು ವಾಕಿಂಗ್ ಹೋಗಿದ್ಯಾ ಎಂದು ಆಶ್ಚರ್ಯವಾಗಿ ಕೇಳಿದೆ. ಮಾತು.. ಕಥೆ.. ಇಲ್ಲದೇ ಸಕ್ಕತ್ ಕೋಪ ಮಾಡಿಕೊಂಡು ತವರು ಮನೆಗೆ ಹೊರಟು ಹೋದಳು. ತವರು ಮನೆ ಎಂದರೆ ನಾನು ಹೇಳಿದ್ದು ಅಡುಗೆ ಮನೆ... ಏಕೆಂದರೆ ಹೆಣ್ಣು ಮಕ್ಕಳ ಇಷ್ಟವಾದ ಜಾಗ ಅದೇ ಅಲ್ಲವೇ. ಟೀ ತೆಗೆದು ಕೊಂಡು ಬಂದು ಕೋಪದಿಂದ ಹೊರಗಡೆ ಬಂದು ಕುಳಿತಳು.

ಏಕೆ? ಏನು? ಆಯಿತು ನಿನ್ನೆ ತಾನೇ ಆರೋಗ್ಯ ಸರಿ ಇಲ್ಲ ಎಂದು ಹೇಳಿದ್ದೆ ಎಂದು ಕೇಳಿದೆ. ಸಕ್ಕತ್ ಕೋಪದಿಂದ, ನಿಮ್ಮ ಮುಂದೆನೇ ಎದ್ದು ಥಳಿ.. ರಂಗೋಲಿ ಹಾಕೋಕೆ ಹೋದೆ. ಬೇಕು ಅಂತಾನೆ ಹೊರಗೆ ಹಾಕಿದ್ದು ಎಂದಳು. ನಾನು ಲೇಖನದ ಯೋಚನೆಯಲ್ಲಿ ಅವಳು ಎದ್ಡಿದ್ದು ಗಮನಿಸಿರಲಿಲ್ಲ. ಏನೇ?.. ಬೇಕು ಅಂತ ನಿನ್ನ ಹೊರಗೆ ಹಾಕೋಕೆ ಆಗುತ್ತಾ ಎಂದು ಡಬಲ್ ಮೀನಿಂಗ್ ಡೈಲಾಗ್ ಬಿಟ್ಟೆ. ಅರ್ಥ ಆಗಲಿಲ್ಲ, ಮತ್ತೆ ಬಚಾವ್. ನಾನು ಗಮನಿಸಿರಲಿಲ್ಲ ಕಣೇ? ಸಾರೀ ಎಂದು ಹೇಳಿದೆ.

ನಿಮ್ಮ ಲಕ್ಷ್ಯ ಎಲ್ಲಿ ಇತ್ತು ಎಂದು ಕೇಳಿದಳು. ಲೇ ಅದು ಒಂದು ಲೇಖನದ ಬಗ್ಗೆ ತುಂಬಾ ಆಳವಾಗಿ ಯೋಚಿಸುತ್ತಾ ಇದ್ದೆ ಎಂದೆ. ಅಂತಹ ಗಾಡವಾದ ವಿಷಯ ಏನು? ಇತ್ತು ರಾಯರದು ಎಂದಳು. ಅದು ನನ್ನ ಹಳೆಯ ನೆನಪುಗಳ ಬಗ್ಗೆ ಒಂದು ಲೇಖನ ಬರಿಬೇಕು ಎಂದು ಕೊಂಡಿದ್ದೇನೆ ಎಂದೆ. ನಿಮಗೆ ನನ್ನ ಇರುವಿಕೆಯ ಅರಿವಿಲ್ಲ, ಇನ್ನೂ ನೀವು ಅಷ್ಟು ದೂರ ಹೋಗಿ ಬಿಟ್ಟರೆ ಅಷ್ಟೇ ಕಥೆ ಎಂದು ಹೀಯಾಳಿಸಿದಳು.

ನಿಮ್ಮ ಹಳೆಯ ಕಥೆಗಳು ಎಂದರೆ ಅದೇ ತಾನೇ ನೀವು ಹೇಳುತ್ತಿರುತ್ತೀರಲ್ಲ ಚಿಕ್ಕವರಿದ್ದಾಗ 10 ರೂಪಾಯಿಗೆ 1 ಕೆ ಜಿ ಅಕ್ಕಿ ಎಂದೆಲ್ಲ.... ನಿಮ್ಮ ತಂದೆಯ ಪಗಾರ ಆ ಸಮಯದಲ್ಲಿ 2000 ಇತ್ತು. ಅದು ಆ ಕಾಲಕ್ಕೆ ಹೊಂದಾಣಿಕೆ ಆಗುತಿತ್ತು. ಈಗ ನಿಮ್ಮ ಪಾಗಾರ ನೋಡಿ ಎಂದಳು. ಹಾ... ಅವಳು ಹೇಳಿದ್ದು ಸರಿ ಅನ್ನಿಸಿತು. ಮತ್ತೆ ನೀವು ಗೋಲ್ ಗುಂಬಜ್ ನೋಡಿದ್ದೀರಾ? ಎಂದು ಕೇಳಿದಳು. ಹಾ... ನೋಡಿದ್ದೇನೆ ಒಂದು ಸಾರಿ ಒದರಿದರೆ 7 ಸಾರಿ ಕೇಳಿಸುತ್ತೆ ಎಂದೆ. ಅಂತಹ ಒಂದು ಮಶೀನ್ ನಿಮಗೆ ಬೇಕು ಎಂದು ಹೀಯಾಳಿಸಿದಳು . ಮತ್ತೆ ಏನು? ನೋಡಿದಿರಿ ಅಲ್ಲಿ ಎಂದಳು. ನಾನು ಕೆಳಗಡೆ ಇರುವ ಜನ ಚಿಕ್ಕ ಚಿಕ್ಕದಾಗಿ ಸೇವಂತಿ ಹೂವಿನ ಪಕಳೆ ಹಾಗೆ ಕಾಣಿಸುತ್ತಿದ್ದರು ಎಂದೆ. ನೀವು ಕೆಳಗಡೆ ಹೋದರೆ ಅವಿರಿಗಿಂತ ಚಿಕ್ಕದಾಗಿ ಇದ್ದೀರಾ? ಗೊತ್ತಾ... ಕುಳ್ಳ ಮಹಾಶಯರೇ ಎನ್ನಬೇಕೆ. ಅವಳು ಅದೇ ನೀವು ಮಾಡೋ ತಪ್ಪು, ಮೇಲೆ ನೋಡಲಿಲ್ಲವೇ ನಮ್ಮ ಹತ್ತಿರಾನೇ ಬಂದು ಹೋಗೋ ವಿಮಾನ, ಹಕ್ಕಿ ಮತ್ತೆ ಆಕಾಶ ಎಂದೆಲ್ಲ ಕೇಳಿದಳು. ನಿಜ ಅನ್ನಿಸಿತು ನಾವು ಎಲ್ಲರೂ ಮಾಡುವದನ್ನು ಮಾತ್ರ ಗಮನಿಸುತ್ತೇವೆ ಮತ್ತೆ ಹೊಸತಾಗಿ ಯೋಚಿಸುವುದೆ ಇಲ್ಲ ಎಂದು. ಮತ್ತೆ ಗೋಪಿಕಾ ಸ್ತ್ರೀಯರು (ಹಳೆ ಗರ್ಲ್ ಫ್ರೆಂಡ್) ಏನಾದರೂ ನೆನಪಿಗೆ ಬಂದರಾ ಎಂದು ಹೇಳಿ, ಮನಸಿಗೆ ಕಚಗುಳಿ ಇಟ್ಟು, ನೋಡಿ ನೀವು ವರ್ತಮಾನದ ಬಗ್ಗೆ ಮಾತ್ರ ಯೋಚಿಸಿ ಬರೆಯಿರಿ. ನೀವು ಭೂತಕಾಲದ ಬಗ್ಗೆ ಯೋಚನೆ ಮಾಡುತ್ತಾ ಇದ್ದರೆ ಅಷ್ಟೇ ಕತೆ ಎಂದು ಒಂದು ಬಾಂಬ್ ಹಾರಿಸಿ, ಟೀ ಕುಡಿದು ಸ್ನಾನಕ್ಕೆ ಹೊರಟು ಹೋದಳು.

Tuesday, December 14, 2010

ಒಂದು ಮಧ್ಯಂತರ ಕಥೆ ....

ಮಧ್ಯ ನನ್ನ ಜೊತೆ ಜೊತೆಗೆ ಇರುವ ವಸ್ತು. ಘಾಬರಿ ಆಯಿತಾ?. ಕೇಳಿ ನನ್ನ ಜೊತೆ ಇರುವ ಮಧ್ಯ ಮತ್ತು ಅಂತರದ ಕಥೆ (ವ್ಯಥೆ).

ನನ್ನ ಅಕ್ಕ ಮತ್ತು ತಂಗಿಯ ಮಧ್ಯ ನಾನು ಜನಸಿದ್ದು. ಮಧ್ಯ ಹುಟ್ಟಿದ ಮಾತ್ರಕ್ಕೆ ಆ ನಾಮಧೇಯಕ್ಕೆ(ಮಧ್ಯ - ಹೆಂಡಕ್ಕೆ ಅಲ್ಲ ಸ್ವಾಮಿ...ನಡುವೆ) ನೈವೇದ್ಯ ಆಗಿದ್ದು ಮಾತ್ರ ಹಲವು ಬಾರಿ. ಶಾಲೆಗೆ ಸೇರಿದೆ ಅಲ್ಲಿ ಕೂಡ ಈ ಮಧ್ಯ ನನ್ನ ಬಿಡಲಿಲ್ಲ. ನಾನು ಇಬ್ಬರು ಹುಡುಗರ ಮಧ್ಯ ನನ್ನ ಆಸನ. ಅಡ್ಡ ಕತ್ತರಿಯಲ್ಲಿ ಅಡಿಕೆ ಆದ ಹಾಗೆ, ಹಾಗೂ.. ಹೀಗೂ... ಮಿಸುಗುವ ಹಾಗಿಲ್ಲ ಕೂಡ. ಮತ್ತೆ ಪರೀಕ್ಷೆಯಲ್ಲಿ ಕೂಡ ಇದೆ ಕಥೆ... ಯಾವತ್ತೂ ಎರಡನೆ ಶ್ರೇಯಾಂಕದಲ್ಲಿ ಉತ್ತೀರ್ಣ ಆಗುತ್ತಿದ್ದೆ. ಮೊದಲನೇಯವನಾಗುವದು ಕನಸಿನ ಮಾತಾಗಿತ್ತು. ಹೇಗಾದರೂ ಮಾಡಿ ಈ ಬಾರಿ ಕೆಟ್ಟದಾಗಿ ಬರೆದು, ಮೂರನೇ ಶ್ರೇಯಂಕಕ್ಕೆ ಹೋಗಬೇಕು ಎಂದು ಯೋಚಿಸಿ ಪರೀಕ್ಷೆ ಬರೆದೆ. ನನ್ನ ಗೆಳೆಯ ಶ್ರವಣ ತನ್ನ ಮೂರನೇ ಶ್ರೇಯಾಂಕದ ಆಸನ ಭದ್ರವಾಗಿ ಹಿಡಿದು ಕುಳಿತು ಬಿಟ್ಟಿದ್ದ. ಆಗ ಅನ್ನಿಸಿತು ಇವನು ಯಾರೋ ರಾಜಕಾರಣಿ ಮಗನೆ ಇರಬೇಕು ಎಂದು.. ಕಡೆಗೆ ಮತ್ತೆ ಎರಡನೆ ಶ್ರೇಯಾಂಕ ಲಭಿಸಿತು. ಆಗ ಅನ್ನಿಸಿತು ಈ ಮಧ್ಯ ತುರುವ ಕೆಲಸಕ್ಕಿಂತ ಅಂತರದಲ್ಲಿ ಇರುವುದು ಉತ್ತಮ ಎಂದು.

ಒಂದು ದಿನ ನಾನು ಒಬ್ಬರ ಮನೆಗೆ ಊಟಕ್ಕೆ ಆಹ್ವಾನಿಸಲ್ಪಟ್ಟಿದ್ದೆ. ಅಲ್ಲಿ ಕೂಡ ನನಗೆ ಮಧ್ಯದ ಆಸನ ದೊರೆಯಿತು. ಮತ್ತೆ ಊಟ ಹಾಕಿದರು. ನನಗೆ ನನ್ನ ದೇಹದ ಮಧ್ಯ ಭಾಗ(ಹೊಟ್ಟೆ) ಕೆಟ್ಟಿದ್ದರಿಂದ, ನಾನು ಮೊಸರನ್ನ ತಿಂದರೆ ಆಗುತ್ತೆ ಎಂದು, ಸಲ್ಪ ಸಾರು ಅನ್ನ ಊಟ ಮಾಡಿದೆ. ಚಪಾತಿ ಎಲ್ಲ ಆದ ಮೇಲೆ ಮತ್ತೆ ಸಾರು ಅನ್ನ ಬಂತು ನಾನು ಹಾಕಿಸಿ ಕೊಳ್ಳಲಿಲ್ಲ. ನಾನು ಮೊಸರನ್ನಕ್ಕೆ ಕಾಯುತ್ತಿದ್ದೆ. ಕಡೆಗೆ ಮೊಸರನ್ನ ಬರಲೇ ಇಲ್ಲ. ಹೊಟ್ಟೆ ತುಂಬಿದ ಹಾಗೆ ಅನ್ನಿಸಲಿಲ್ಲ ಮತ್ತು ಹೊಟ್ಟೆ ಹಸಿದ ಹಾಗೆ ಕೂಡ ಅನ್ನಿಸಲಿಲ್ಲ. ಹಾಗೆ ಅರ್ಧ ಹೊಟ್ಟೆಯಲ್ಲಿ ಊಟ ಮುಗಿಸಿ ಬಂದು ಬಿಟ್ಟೆ.

ಇನ್ನೂ ಬಸ್ಸಿನಲ್ಲಿ ಪ್ರಯಾಣಿಸುವಾಗ ಕೂಡ ಪ್ರತಿ ಬಾರಿ ಸಿಗುವದು ನಡುವಿನ ಆಸನನೆ. ನಡುವೆ ಮಧ್ಯಂತರ ಕೂಡ ಕಡಿಮೆನೆ ಸಿಗುತಿತ್ತು. ಮೊದಲು ನಾನು ತುಂಬಾ ತೆಳ್ಳಗೆ ಇದ್ದೇ. ಹೀಗಾಗಿ ನಾನು ಎಷ್ಟೇ ತಿಣುಕಿದರು ಅಕ್ಕ ಪಕ್ಕ ಕುಳಿತ ಜನ ಮೀಸುಗುತ್ತಿದ್ದಿಲ್ಲ. ಈಗ ಸ್ವಲ್ಪ.... ಕ್ಷಮಿಸಿ ತುಂಬಾ ಸುಧಾರಿಸಿದ್ದೇನೆ.

ಇದೇಕೋ ತ್ರಿಶಂಕು ಸ್ವರ್ಗ ಸ್ತಿತಿ ನನಗೆ ಹಲವು ಬಾರಿ ಅನುಭವಿಸಿದ್ದೇನೆ. ಇದುವರೆಗೆ ಯಾವುದೆ ನೌಕರಿ ಸೇರಿದರು, ನನ್ನ ಹಿಂದೆ-ಮುಂದೆ ಒಬ್ಬರು ಸೇರುತ್ತಾರೆ. ಮತ್ತೆ ಅದು ನನ್ನ ಮೇಲಿನ ವರ್ಗಕ್ಕೆ ಮತ್ತು ಕೆಳಗಿನ ವರ್ಗಕ್ಕೆ. ಅದು ನನ್ನ ಸಂಬಳಕ್ಕೂ ಅನ್ವಯ ಕೂಡ ಆಗಿರುತ್ತೆ. ಮೊದಲ ಬಾರಿ ನಾನು ಒಂದು ನೌಕರಿ ಸೇರಿದೆ ಅಲ್ಲಿ ಕೂಡ ಎಲ್ಲರೂ ಒಂದೇ ಸಂಸಾರದ ಜನ ಕೆಲಸ ಮಾಡುತ್ತಿದ್ದರು. ಅವರ ನಡುವೆ ನಾನು ಅಂತರ ಪಿಶಾಚಿ. ಅವರು ಎಲ್ಲರೂ ಒಂದೇ ಬಾಷೆ ಮಾತನಾಡುತ್ತಿದ್ದರೆ, ನಾನು ಮಾತ್ರ ತಲೆ ಕೆರೆದುಕೊಳ್ಳುತ್ತ ಕೂಡುತ್ತಿದ್ದೆ. ಕಡೆಗೆ ಅದು ಬೇಡ ಎಂದು ಬಿಟ್ಟು ಬಿಟ್ಟೆ.

ಮುಂದೆ ಬ್ಯಾಂಕ್ ಪರೀಕ್ಷೆಗೆ ಅರ್ಜಿ ಹಾಕಿದೆ. ಅಲ್ಲಿ ನಾನು ತುಂಬಾ ಚೆನ್ನಾಗಿ ಮಾಡುತ್ತಿದ್ದ ಒಂದು ಭಾಗ ಎಂದರೆ "ODD MAN OUT". ಕಡೆಗೆ ಪರೀಕ್ಷೆ ಫಲಿತಾಂಶ ಬಂದಾಗ ಅವರು ನನ್ನನ್ನು "ODD MAN OUT" ಮಾಡಿದ್ದರು.

ಮುಂದೆ ಮತ್ತೊಂದು ನೌಕರಿಗೆ ಸೇರಿದೆ. ಅಲ್ಲಿ ಕೂಡ ಎಲ್ಲಾ ಜನರು ಒಂದೇ ಜಾತಿಯ ಜನ. ನಾನು ಜಾತಿ ಭೇಧದ ಮಧ್ಯ ಬೆಂದು ಬಳಲಿ ಬೆಂಡಾಗಿ ಹೋಗಿದ್ದೆ. ಹಾಗೂ ಹೀಗೂ ಹೆಣಗಿ ಮತ್ತೊಂದು ನೌಕರಿ ಸೇರಿದ್ದೇನೆ. ಇಲ್ಲಿ ಕೂಡ ದಿನವೂ ಸ್ಯಾಂಡ್‌ವಿಚ್ ಆಗಿದ್ದು ಮಾತ್ರ ಸತ್ಯ. ಬಾಸ್ ತಮಿಳಿಗ ಮತ್ತೆ ನನ್ನ ಕೆಳಗೆ ಕೆಲಸ ಮಾಡುವ ಇಬ್ಬರು ತಮಿಳಿಗರು.

ಇನ್ನೂ ಮನೇಲಿ ಹೆಂಡತಿ,ಮಗನ ನಡುವೆ ದಿನವೂ ಸಾಂಡ್‌ವಿಚ್ ಆಗುತ್ತಾ ಇದ್ದೇನೆ. ಇನ್ನೂ ಬೈಕ್ ನಲ್ಲಿ ಹೋಗುವಾಗ ಸಹಿತ ನನ್ನ ಅಕ್ಕ ಮತ್ತು ಪಕ್ಕ ಜನ ಎಲ್ಲಿಂದಲೋ ಬಂದೆ ಬಿಟ್ಟಿರುತ್ತಾರೆ. ಮತ್ತೆ ಕೆಲವೇ ಕ್ಷಣಗಳಲ್ಲಿ ನನಗೆ ಟಾಟಾ ಹೇಳಿ ಅಂತರ ಪಿಶಾಚಿ ಹಾಗೆ ಬಿಟ್ಟು ಹೋಗಿರುತ್ತಾರೆ. ನಡುವೆ ಅಂತರವಿರಲಿ ಎಂದು ಎಲ್ಲಾ ಬಿ ಎಂ ಟಿ ಸಿ ಬಸ್ಸುಗಳ ಮೇಲೆ ಬರೆದಿರುತ್ತಾರೆ. ಹಾಗೆಯೇ ನನ್ನ ಬೈಕ್ ಮೇಲೆ ನಡುವೆ(ಮಧ್ಯ) ಅಂತರವಿದೆ ಎಂದು ಲಗತ್ತಿಸಲೇ ಎಂದು ಯೋಚನೆ ಕೂಡ ಮಾಡುತ್ತೇನೆ.

ಇದು ನನ್ನ ಜನ್ಮದಿಂದ ಆಂಟಿ ... ಕ್ಷಮಿಸಿ ಅಂಟಿಕೊಂಡು ಬಂದದ್ದು. ಅದು ಹೇಗೆ? ಎಂದರೆ ತುಂಬಾ ಅಂತರದಲ್ಲಿ ಇರುವ ನನ್ನ ರಾಶಿ ಮೀನಾ(ಮೀನ)... ಕಡೆಯ ರಾಶಿ...ಮತ್ತೆ ನಕ್ಷತ್ರ ಪೂರ್ವಾ ಬಾ ಹತ್ತಿರ (ಪೂರ್ವಾಭಾದ್ರ) ಮತ್ತು ರೇವತಿ ಮಧ್ಯ ತುರುವ ಉತ್ತರಾ ಬಾ ಹತ್ತಿರ(ಉತ್ತರಾಭಾದ್ರ)... :-):-)

ನನ್ನ ಜೀವನದ ಪ್ರತಿ ಧೈಯದ(ಗೋಲ್) ನಡುವೆ ಕೂಡ ಏನಾದರೂ ಸೇರಿ ಇರುತ್ತದೆ. ಉಧಾಹರಣೆಗೆ ನನ್ನ ಹೆಸರು ಗೋಪಾಲ್(GOPAL) ತಾನೇ, ಅದರಲ್ಲಿನ 'ಪಾ'(P) ತೆಗೆಯದ ಹೊರತು ಗೋಲ್(GOAL) ಆಗೋಲ್ಲ...

ಮತ್ತೆ ಒಂದು ಪ್ರಬಂದ ಸ್ಪರ್ದೆಗೆ ನನ್ನ ಲೇಖನ ಕಳುಹಿಸಿದ್ದೇನೆ. ನಾನು ಎರಡನೆ ಶ್ರಯಾಂಕ (ಮಧ್ಯ) ಅಥವಾ "ODD MAN OUT"(ಅಂತರ) ಮಾತ್ರ ಬರಬಾರದು ಎಂದು ದಿನವೂ ಶ್ರೀ ರಾಮನನ್ನು ಸ್ಮರಿಸುತ್ತಿದ್ದೇನೆ. ಈ ಮಧ್ಯ ಮತ್ತು ಅಂತರದ ಸಜೇ ಇನ್ನೂ ಎಷ್ಟು ದಿವಸ ನಡೆಯುವುದೋ ಆ ಭಗವಂತನೇ ಬಲ್ಲ ....

Friday, December 10, 2010

ಚಪ್ಪಲ್ ಚನ್ನಿಗರಾಯ ....

ನಮ್ಮ ಕಾಲೇಜ್ ನಲ್ಲಿ ಅಂಜನ್ ಎಂಬ ಹುಡುಗ ಇದ್ದ. ಸಕ್ಕತ್ ಜಿಪುಣ. ಒಂದು ಪೈಸೆ ಕೂಡ ಬಿಚ್ಚುತ್ತಿರಲಿಲ್ಲ. ಹುಡುಗಿಯರು ಎಂದರೆ ಅತ್ಯಂತ ಆಪ್ಯತೆ. ಅವರ ಜೊತೆ ಕೂಡ ಒಂದು ಪೈಸೆ ಬಿಚ್ಚುತ್ತಿರಲಿಲ್ಲ. ಹುಡುಗಿಯರ ಹತ್ತಿರಾನೇ ದುಡ್ಡು ವಸೂಲಿ ಮಾಡುತ್ತಿದ್ದ. ಕ್ಯಾಂಟೀನ್ ಗೆ ಬಂದರು ದುಡ್ಡು ಕೊಟ್ಟು ಖರೀದಿಸದೇ, ನಾನು ಸ್ವಲ್ಪ ರುಚಿ ನೋಡುತ್ತೇನೆ ಎಂದು ಹೇಳಿ ಎಲ್ಲರ ಪ್ಲೇಟ್ ಗೆ ಕೈ ಹಾಕಿ ತಿನ್ನುತ್ತಿದ್ದ. ಕೆಲ ಹುಡುಗರು ಅವನು ಬರುತ್ತಾನೆ ಎಂದರೆ ಗಬ.. ಗಬ.. ಎಂದು ಬೇಗನೆ ತಿಂದು ಜಾಗ ಖಾಲಿ ಮಾಡುತ್ತಿದ್ದರು. ಹುಡುಗಿಯರನ್ನು ಪರಿಚಯ ಇಲ್ಲದೇ ಇದ್ದರು ಅವರನ್ನು ಹೋಗಿ ಮಾತನಾಡಿಸುತ್ತಿದ್ದ. ಒಂದು ಹುಡುಗಿ ಅಂಜನಾ ಎಂದು ಇತ್ತು. ಅವಳ ಹೆಸರಿಗೂ ತನ್ನ ಹೆಸರು ತುಂಬಾ ಮ್ಯಾಚ್ ಆಗುತ್ತೆ ಎಂದು ಅವಳ ಹಿಂದೆ ಬಿದ್ದಿದ್ದ. ಆಗ ಮಂಜ ಮುಂದೆ ಮದುವೆ ಆದರೆ, ಲೇ ಇಬ್ಬರ ಹೆಸರು ಒಂದೇ ತರಹ ಇದ್ದರೆ ಮನೆಯಲ್ಲಿ ಕರೆಯುವದು ಕಷ್ಟ ಕಣೋ, ಅದಕ್ಕೆ ಅವಳ ಹೆಸರು ಅಮೃತಾ ಎಂದು ಮದುವೆ ಆದ ಮೇಲೆ ಬದಲಿಸು ಎಂದು ಹೇಳಿದ. ಅವಳು ಅವನಿಗೆ ತುಂಬಾ ಇಷ್ಟ ಪಡುತ್ತಿದ್ದಳು. ನಾವು ಒಳಗೊಳಗೆ ಅಮೃತಾ + ಅಂಜನ್ = ಅಮೃತಾಂಜನ್ ಎಂದು ಅವನನ್ನು ಆಡಿಕೊಂಡು ಅವನ ಹಿಂದೆ ನಗುತ್ತಿದ್ದೆವು.

ಕಡೆಗೆ ಒಂದು ದಿನ ಮಂಜ, ಲೇ ... ಅವಳನ್ನು ಮದುವೆ ಆದರೆ ನಿನಗೆ ಕಷ್ಟ ಕಣೋ ಏಕೆಂದರೆ? ಅವಳು ತುಂಬಾ ದುಡ್ಡು ಖರ್ಚು ಮಾಡುತ್ತಾಳೆ. ಈಗಿನ ಕಾಲದಲ್ಲಿ ಅರೇಂಜ್ ಮ್ಯಾರೇಜ್ ಆದರೆ ಕಷ್ಟ, ಅದು ಬೇರೆ ನೀನು ಲವ್ ಮ್ಯಾರೇಜ್ ಆಗುತ್ತಾ ಇದ್ದೀಯಾ ಮುಂದೆ ತುಂಬಾ ಕಷ್ಟ ಆಗುತ್ತೆ ಎಂದು ಹೇಳಿದಾಗ, ಅವಳು ಮಾತನಾಡಿಸಿದರು ಅವಳಿಗೆ ಯಾವದೆ ಸೊಪ್ಪು ಹಾಕಲಿಲ್ಲ. ಕಡೆಗೆ ಅವಳನ್ನು ಬಿಟ್ಟು ಬಿಟ್ಟ.

ನಾನು,ಮಂಜ ಮತ್ತು ಸುಬ್ಬ ಬೆಂಗಳೂರಿಗೆ ಬಂದು ಠಿಕಾಣಿ ಹೂಡಿದ್ದೆವು. ಆಗ ಒಂದು ದಿವಸ ನನಗೆ ಫೋನ್ ಮಾಡಿದ್ದ. ಏನಪ್ಪಾ? ಏನು ಮಾಡುತ್ತಾ ಇದ್ದೀರ ತ್ರಿಮೂರ್ತಿಗಳು ಎಂದು ಕೇಳಿದ. ನಾನು ಬೆಂಗಳೂರಿಗೆ ಬರುತ್ತಾ ಇದ್ದೇನೆ. ನಿಮ್ಮ ರೂಮಿನಲ್ಲಿ ಇರುವುದಕ್ಕೆ ಅವಕಾಶ ಕೊಡು ಎಂದು ಕೇಳಿದ.ಲೇ.. ನಾನೇ ಮಂಜನ ರೂಮಿಗೆ ಬಂದಿದ್ದೇನೆ. ನೀನು ಮಂಜನಿಗೆ ಕೇಳು ಎಂದು ಹೇಳಿದೆ. ಕಡೆಗೆ ಅವರಿಬ್ಬರ ನಡುವೆ ಏನೋ ಒಪ್ಪಂದ ಆಯಿತು ಎಂದು ಅನಿಸುತ್ತದೆ. ಮರುದಿನ ಅಂಜನ್ ನಮ್ಮ ರೂಮಿನಲ್ಲಿ ಠಿಕಾಣಿ ಹೂಡಿದ್ದ.

ಏನೋ ಸುಧಾರಿಸಿರಬಹುದು ಎಂದು ನಾವೆಲ್ಲರೂ ಎಣಿಸಿದ್ದೆವು. ಆದರೆ ತಿಂಡಿ, ಊಟ ಆದಮೇಲೆ ದುಡ್ಡು ಕೊಡದೇ ಫೋನ್ ಬಂದಿದೆ ಅಥವಾ ಫೋನ್ ಮಾಡುವುದಿದೆ ಎಂದೆಲ್ಲ ನೆಪ ಹೇಳಿ, ನಮ್ಮದೇ ದುಡ್ಡಿನಲ್ಲಿ ತನ್ನ ಬೇಳೆ ಬೇಯಿಸಿಕೊಳ್ಳುತ್ತಿದ್ದ. ತ್ರಿಮೂರ್ತಿಗಳಾದ ನಮಗೆ ಮೂರು ನಾಮ ಇಟ್ಟಿದ್ದ. ಮಂಜ ಮತ್ತು ನಾವೆಲ್ಲರೂ ಎಷ್ಟು ಯೋಚನೆ ಮಾಡಿ, ರೂಮಿನಿಂದ ಹೊರ ಹಾಕ ಬೇಕೆಂದರು ಆಗಲಿಲ್ಲ. ಬಸ್ಸಿನಲ್ಲೂ ಸಹ ಅವನ ಚಪಲತೆ ಪ್ರದರ್ಶಿಸುತ್ತಿದ್ದ. ಅವನು ತುಂಬಿದ ಬಸ್ಸಿಗೆ ಮಾತ್ರ ಹತ್ತುತಿದ್ದ. ಒಂದು ದಿನ ಖಾಲಿ ಬಸ್ ಹತ್ತಿದ್ದ. ಮುಂದೆ ನಿಂತ ಹುಡುಗಿ ಅವನಿಗೆ ತನ್ನ ಚಪ್ಪಲಿಯಿಂದ ಬಾರಿಸುತ್ತಿದ್ದಳು. ಅದನ್ನು ನೋಡಿದ ಮಂಜ, ಅವನಿಗೆ ಹೀಗೆಲ್ಲ ಮಾಡುವ ಹಾಗಿದ್ದರೆ ನೀನು ಬೇರೆ ಕಡೆಗೆ ಹೋಗು ಎಂದು ತಾಕೀತ್ ಮಾಡಿದ್ದ. ತಪ್ಪು ಆಯಿತು.. ಕ್ಷಮಿಸು.. ಎಂದು ಹೇಳಿ ಮುಂದಿನ ಬಾರಿ ಹಾಗೆ ಮಾಡುವುದಿಲ್ಲ ಎಂದು ಹೇಳಿದ. ಕಡೆಗೆ ಒಪ್ಪಿ ಇಟ್ಟು ಕೊಂಡೆವು. ಕೆಲ ದಿನ ಸುಧಾರಿಸಿದ ಹಾಗೆ ನಟಿಸಿ ಮತ್ತೆ ನಾಯಿ ಬಾಲ ಡೊಂಕು ಅನ್ನುವ ಹಾಗೆ ಮತ್ತೆ ತನ್ನ ವರಸೆ ಶುರು ಹಚ್ಚಿಕೊಂಡ.

ಮನೆಯವರಿಗೂ ಇವನ ಬಗ್ಗೆ ಅಸಡ್ಡೆ ಇತ್ತು. ಅವರ ಅಪ್ಪ ಅವನಿಗೆ ಮದುವೆ ಆದರೆ ಸುಧಾರಿಸುತ್ತಾನೆ ಎಂದು. ಹೆಣ್ಣು ನೋಡಲು ಶುರು ಮಾಡಿದರು. ಪ್ರತಿ ವಾರ ಹೆಣ್ಣು ನೋಡಲು ಸ್ವೀಟ್ ಬಾಕ್ಸ್ ತೆಗೆದು ಕೊಂಡು ಹೋಗುತ್ತಿದ್ದ. ಅದು ಬರಿ 200 ಗ್ರ್ಯಾಮ್ಸ್ ಮಾತ್ರ. ಪ್ರತಿ ಬಾರಿ ಸಂಬಂದ ರಿಜೆಕ್ಟ್ ಆಗುತ್ತಿತ್ತು. ಅವನಿಗೂ ತಲೆ ಕೆಟ್ಟು ಹೋಗಿತ್ತು. ಒಂದು ದಿನ ಬೆಂಗಳೂರಿನಲ್ಲೇ, ಒಂದು ಹೆಣ್ಣು ನೋಡಲು ಸ್ವೀಟ್ ಬಾಕ್ಸ್ ತೆಗೆದುಕೊಂಡು ಶಾಸ್ತ್ರಕ್ಕೆ ಹೋಗಿದ್ದ. ಆಗ ಹೆಣ್ಣು ನೋಡಿ ಚೆನ್ನಾಗಿಲ್ಲ ಎಂದು ಸ್ವೀಟ್ ಬಾಕ್ಸ್ ಕೊಡದೇ ವಾಪಸ ತಂದಿದ್ದ. ಅದನ್ನು ರೂಮಿಗೆ ತಂದು ನಮಗೆ ಕೊಡಲು ಓಪನ್ ಮಾಡಿದ. ನೋಡಿದರೆ ಅದರಲ್ಲಿ ಸ್ವೀಟ್ ಇರದೆ ಕೆಟ್ಟ ವಾಸನೆಯ ಹಳಸಿದ ಮ್ಯಾಗಿ ಇತ್ತು. ಅವನಿಗೆ ಸ್ವೀಟ್ ಅಂಗಡಿಯವನ ಮೇಲೆ ತುಂಬಾ ಕೋಪ ಬಂತು. ಲೇsss.. ಅದಕ್ಕೆ ಕಣೋ ಹೆಣ್ಣು ಮೊದಲು ಒಪ್ಪಿಗೆ ಸೂಚಿಸಿ, ಆಮೇಲೆ ರಿಜೆಕ್ಟ್ ಮಾಡುತ್ತಾ ಇರುವದು ಎಂದು ಹೇಳಿ, ಅದನ್ನು ತೆಗೆದು ಕೊಂಡು ಸ್ವೀಟ್ ಅಂಗಡಿಗೆ ಜಗಳಕ್ಕೆ ಹೋದ. ಮಂಜ ಮುಸಿ.. ಮುಸಿ.. ನಗುತ್ತಿದ್ದ. ಅವನೆ ಸ್ವೀಟ್ ತಿಂದು, ಹೀಗೆ ಮಾಡಿದ್ದಾನೆ ಎಂದು ನಮಗೆ ಖಾತ್ರಿ ಆಯಿತು. ಸ್ವೀಟ್ ಅಂಗಡಿ ಹೋಗಿ ಬಾಕ್ಸ್ ತೆಗೆದೊಡನೆ ಕೆಟ್ಟ ವಾಸನೆ ಬರುತಿತ್ತು. ಅದನ್ನು ನೋಡಿ ಕೆಲ ಗಿರಾಕಿಗಳು ಸಹಿತ ಏನು ತೆಗೆದು ಕೊಳ್ಳದೇ ಹೋಗಿ ಬಿಟ್ಟರು. ನೀವು ನನಗೆ ಮೋಸ ಮಾಡಿದ್ದೀರ ಎಂದು ಹೇಳಿ, ಸ್ವೀಟ್ ತರುತ್ತಾನೆ ಎಂದು ನಾವು ಎಣಿಸಿದರೆ, ಅವರ ಕಡೆ 500 ರೂಪಾಯಿಗಳನ್ನು ಕಿತ್ತುಕೊಂಡು ಬಂದಿದ್ದ.

ಮುಂದೆ ಮತ್ತೊಂದು ಹೆಣ್ಣು ನೋಡುವದಕ್ಕೆ ಹೋಗುವುದಿತ್ತು. ಈ ಹುಡುಗಿ ಕೂಡ ಬೆಂಗಳೂರಿನಲ್ಲೇ ಇದ್ದಳು. ಅವಳನ್ನು ನೋಡಲು ನನ್ನನ್ನು ಕರೆದು ಕೊಂಡು ಹೋದ. ನಾನು ಯಾವುದಾದರೂ ಹೋಟೆಲ್ ಹೋಗಿ ಮಾತನಾಡೋಣ ಎಂದು ಹೇಳಿದೆ. ಅಲ್ಲಿ ಯಾವುದೆ ಚಿಕ್ಕ ಹೋಟೆಲ್ ಕಾಣಲಿಲ್ಲ, ಕಡೆಗೆ ದೊಡ್ಡ ಮನಸು ಮಾಡಿ ಬರಿಸ್ಟಾಗೆ ಕರೆದು ಕೊಂಡು ಹೋದ. ನಾನು,ಅವನು ಮತ್ತೆ ಹುಡುಗಿ, ಹುಡುಗಿಯ ಗೆಳತಿ ಎಲ್ಲರೂ ಹೋದೆವು. ಅಲ್ಲಿ ಬರಿ ಕಾಫೀ ಆರ್ಡರ್ ಮಾಡುತ್ತಲಿದ್ದ. ನಾನು ಏನಾದರೂ ತಿನ್ನಲು ಎಂದು ನಾನೇ ಹುಡುಗಿಯರಿಗೆ ಕೇಳಿದೆ. ಅವರು ಏನು ತಿಂದು ಬಂದಿರಲಿಲ್ಲ ಎಂದು ಕಾಣುತ್ತೆ, ಅವರು ತಿಂಡಿ ಆರ್ಡರ್ ಮಾಡಿದರು. ಅವರ ಜೊತೆ ನನಗು ತಿಂಡಿ ಲಭಿಸಿತ್ತು. ಅಷ್ಟರಲ್ಲೇ ನಮ್ಮ ಮಂಜ ಸುಬ್ಬನನ್ನು ಕರೆದುಕೊಂಡು ಬಂದು ಬಿಟ್ಟ. ಬಂದವನೇ ತಾನೇ ಅವರ ಪರಿಚಯ ಮಾಡಿಕೊಂಡು. ಅಂಜನ್ ನಮ್ಮ ತುಂಬಾ ಆಪ್ತ ಗೆಳೆಯ ಎಂದೆಲ್ಲ ಹೇಳಿ ಸಿಕ್ಕಾಪಟ್ಟೆ ತಿಂದು ಎದ್ದು ಹೋಗಿ ಬಿಟ್ಟ. ಅಂಜನ್ ಏನು ಮಾಡಲಾರದೇ 2300 ಬಿಲ್ಲು ಕೊಟ್ಟು ಬಂದಿದ್ದ. ಅವನ ಮುಖ ಇಂಗು ತಿಂದ ಮಂಗನ ಹಾಗೆ ಆಗಿತ್ತು. ಆ ಹುಡುಗಿಯೂ ಅವನಿಗೆ ರಿಜೆಕ್ಟ್ ಮಾಡಿದ್ದಳು. ಕೆಲ ದಿನಗಳ ಬಳಿಕ ಮಂಜನ ತರಲೆಗಳು ಅರ್ಥ ಆಗಿ ತಾನೇ ಜಾಗ ಖಾಲಿ ಮಾಡಿದ.

ಅವನಿಗೆ ನಾವೆಲ್ಲರೂ ಚಪ್ಪಲ್ ಚೆನ್ನಿಗರಾಯ ಎಂದೆ ಸಂಭೋಧಿಸುತ್ತಿದ್ದೆವು. ಈಗ ಅವನಿಗೆ ಚಪ್ಪರ ಹಾಕುವ ಸಂದರ್ಭ ಒದಗಿ ಬಂದಿದೆ. ಏನು? ಮಾಡುತ್ತಾನೋ ನೋಡಬೇಕು.

Friday, December 3, 2010

ನೀನು ಸಾಯಿತಿ ಅಂತೆ .........?

ಮಡದಿ ಊರಿಗೆ ಹೋಗಿದ್ದರಿಂದ ಮನೆಯ ಎಲ್ಲಾ ಕೆಲಸಗಳು ನನ್ನ ಹೆಗಲ ಮೇಲೆ ಬಿದ್ದಿದ್ದವು. ಬಟ್ಟೆ ಒಗೆಯುವದು, ಪಾತ್ರೆ ತಿಕ್ಕುವದು ....ಎಲ್ಲವೂ. ಮನೋಜನ ಮಡದಿನೂ ಊರಿಗೆ ಹೋಗಿದ್ದರಿಂದ, ಇಬ್ಬರು ಇಲ್ಲೇ ಅಡಿಗೆ ಮಾಡಿ ಊಟ ಮಾಡಿದರೆ ಆಗುತ್ತೆ ಬಾ ಎಂದು ಅವನಿಗೆ ಹೇಳಿದೆ. ಆಯಿತು, ಎಂದು ನಮ್ಮ ಮನೆಯಲ್ಲೇ ಠಿಕಾಣಿ ಹೂಡಿದ. ಏನೋ ನನ್ನ ಕೆಲಸಗಳಲ್ಲಿ ಸಹಾಯ ಮಾಡುತ್ತಾನೆ ಎಂದು, ನಾನು ಅಂದುಕೊಂಡರೆ ಮನೋಜ ರಾತ್ರಿ ತೀರ್ಥಯಾತ್ರೆಗೆ ಹೋಗಿ ಬಂದು ಊಟ ಮಾಡಿ ಮಲಗಿ ಬಿಡುತ್ತಿದ್ದ. ಅವನ ಕರೆದ ಕರ್ಮಕ್ಕೆ ನನ್ನ ಕೆಲಸ ಇನ್ನೂ ಜ್ಯಾಸ್ತಿ ಆಗಿತ್ತು.

ಮರು ದಿನ ಏಕೋ ಬಲ ಕೈ ಸ್ವಲ್ಪ ಕೆರೆತ ಶುರು ಆಯಿತು. ನಾನು ಕೈ ಕೆರೆಯುತ್ತಾ ಇದ್ದಾಗ, ನಮ್ಮ ಜ್ಯೋತಿಷ್ಯ ಪ್ರವೀಣ ಮನೋಜ ಏನೋ ಕೈ ಕೆರೆತ ಚಾನ್ಸ್ ಅಂದ. ತುಂಬಾ ಕೆರೆತ ಆಗಿ ನಾನು ಒದ್ದಾಡುತ್ತಾ ಇದ್ದರೆ, ನೀನು ಚಾನ್ಸ್ ಅನ್ನುತ್ತೀಯ ಎಂದೆ. ಲೇ.. ಬಲ ಕೈ ಕೆರೆತ ಆದ್ರೆ ದುಡ್ಡು ಬರುತ್ತೆ ಕಣೋ ಅಂದ. ಒಳಗೊಳಗೆ ಸಂತೋಷದಿಂದ ಕುಣಿದಾಡಿದೆ. ಅವನ ಮುಂದೆ, ಹಾಗೆ ರೈಲು ಬಿಡುತ್ತೀಯಾ ಎಂದು ದಬಾಯಿಸಿದೆ. ಏ ನಿನಗೇನೂ ಗೊತ್ತು ಬಲ ಕೈ ಕೆರೆತ ಆದರೆ ದುಡ್ಡು ಖಂಡಿತ ಬರುತ್ತೆ ಅಂದ. ಮತ್ತೆ ಎಡ ಕೈ ಕೆರೆತ ಆದರೆ ದುಡ್ಡು ಖರ್ಚಾಗುತ್ತೆ ಅಂದ. ಎಡ ಕಣ್ಣು ಅದುರಿದರೆ ಅಶುಭ, ಬಲ ಕಣ್ಣು ಅದುರಿದರೆ ಶುಭ ಎಂದು ಹೇಳಿದ. ಲೇ... ಸುಮ್ಮನೇ ಹೇಳ ಬೇಡ ನಾನು ಕಾಲೇಜ್ ನಲ್ಲಿ ಇದ್ದಾಗ, ಒಂದು ಹುಡುಗಿ ನೋಡಿ ಬಲ ಕಣ್ಣು ಅದುರಿಸಿದ್ದೆ. ಆದರೆ ಅವಳು ನನ್ನ ಹಲ್ಲು ಉದಿರುಸುತ್ತೇನೆ ಎಂದು ಬೆದರಿಕೆ ಹಾಕಿದಳು . ಆಮೇಲಿಂದ ಯಾವತ್ತೂ ಕಣ್ಣು ಅದುರಲೆ ಇಲ್ಲ, ಎರಡು ಹಲ್ಲುಗಳು ತಾನಾಗಿಯೇ ಉದುರಿದವು ಎಂದು ಹೇಳಿದೆ. ಮನೋಜ ತುಂಬಾ ಜೋರಾಗಿ ನಕ್ಕೂ... ಅದು ತಾನಾಗಿಯೇ ಅದುರ ಬೇಕು ಕಣೋ ಎಂದು ಅಪಹಾಸ್ಯ ಮಾಡಿದ.

ಕಡೆಗೆ ನಾನು ಆಫೀಸ್ ಹೋದೆ. ಆದರೂ ಇನ್ನೂ ಕೈ ಕೆರೆತ ಇದ್ದೇ ಇತ್ತು. ಆಫೀಸ್ ಹೋದೊಡನೆ, ಬಾಸ್ ಕರೆದು ರೀ... ನಿಮ್ಮ ಅಪ್ರೇಸಲ್ ಈ ತಿಂಗಳು ಇದೆ ಅಲ್ವೇ ಎಂದರು. ಹೌದು.. ಹೌದು.. ಎಂದು ಖುಶಿಯಿಂದ ಕೈ ಕೆರೆಯುತ್ತಾ ಹೇಳಿದೆ. ಆಯಿತು ಹೋಗಿ ಎಂದು ಹೇಳಿ ಕಳುಹಿಸಿದರು. ನನಗೆ ಸಕತ್ ಖುಷಿ, ಲೇ ಹೊಡೆದೆ ಕಣೋ ಚಾನ್ಸ್ ಎಂದು ಅಂದು ಕೊಂಡು, ಮನೋಜಗೆ ಫೋನ್ ಮಾಡಿ ಹೇಳಿದೆ. ನಾನು ಹೇಳಿರಲಿಲ್ಲವಾ? ಎಂದ. ಆದರೆ ಕೈ ಕೆರೆತ ನಿಲ್ಲಲೇ ಇಲ್ಲ.

ಮರು ದಿನ ಕೈ ತುಂಬಾ ಬಾತು ಕೆಂಪಗೆ ಆಗಿತ್ತು. ಲೇ.. ಏನೋ ಇದು ಇಷ್ಟೊಂದು ಕೆರೆತ ಎಂದು ಮನೋಜಗೆ ಕೇಳಿದೆ. ಇದೇನೋ ಪ್ರಾಬ್ಲಮ್ ಕಣೋ, ಕೂಡಲೇ ಡಾಕ್ಟರ್ ಕಾಣು ಎಂದು ಹೇಳಿದ. ಡಾಕ್ಟರ್ ಬಳಿ ಹೋದೆ. ಡಾಕ್ಟರ್ ಎಲ್ಲ ಪರೀಕ್ಷಿಸಿ. ಏನ್ರೀ ಇದು ಇಷ್ಟೊಂದು ಆಗೋವರೆಗೂ ಸುಮ್ಮನೇ ಕತ್ತೆ ಕಾಯುತ್ತಾ ಇದ್ದೀರಾ? ಎಂದು ಬೈದರು. ಸರ್ ಅದು .. ಅದು ... ಎಂದು ತಡವರಿಸಿದೆ. ಅವರು ನನಗೆ ಒಂದು ಆಯಂಟ್‌ಮೆಂಟ್ ಹಚ್ಚಿ, ಕೆಲ ಮಾತ್ರೆ ಬರೆದು ಕೊಟ್ಟರು. ಅಷ್ಟರಲ್ಲಿ ನನ್ನ ಮೊಬೈಲ್ ಗೆ ಒಂದು ಕರೆ ಬಂತು. ನಾನು ರಾಜೇಶ್ ಕಣೋ... ಎಂದು ಆ ಕಡೆಯಿಂದ ಧ್ವನಿ ಬಂತು. ನಾನು ಯಾರು? .... ರಾಜೇಶ್. ಓಕೆ ಹೇಳಿ ಏನು ಆಗಬೇಕು ಎಂದೆ. ನಾನು ಕಣೋ ನಿನ್ನ ಕ್ಲಾಸ್ ಮೇಟ್ ಅಂದ. ಇನ್ನೂ ಅವನ ಮುಖ ಚಹರೆ ಸ್ಮೃತಿಗೆ ಬರದಿದ್ದರೂ... ಓss.. ರಾಜೇಶ್ ಹೇಳು ಚೆನ್ನಾಗಿದ್ದೀಯ? ಎಂದು ಕೇಳಿದೆ. ಓss.. ನಾನು ಚೆನ್ನಾಗಿ ಇದ್ದೇನೆ ಎಂದ. ನೀನು ಸಾಯಿತಿ ಅಂತೆ ಎಂದು ಕೇಳಿದ. ನನಗೆ ತಡೆಯಲಾರದಷ್ಟು ಕೋಪ ಬಂದಿತು. ನಿನಗೆ ಯಾರು? ಹೇಳಿದರು ಎಂದು ಕೇಳಿದೆ. ನನಗೆ ಗೊತ್ತು, ನೀನು ಪಾರ್ಟೀ ಯಾವಾಗ ಕೊಡಿಸುತ್ತೀಯ ಎಂದು ಕೇಳಿದ. ನನಗೆ ಎಣ್ಣೆ ಪಾರ್ಟೀನೇ ಬೇಕು ಎಂದ. ಏನು ಸಾಯಿತಿ ಎಂದರೆ ಸುಮ್ಮನೇನಾ? ಎಂದ. ನನಗೆ ಸಕ್ಕತ್ ಕೋಪ ಬಂದಿತ್ತು. ಆದರೂ ತಡೆದುಕೊಂಡು ಮನಸಿನಲ್ಲೇ ಸಾಯುವ ಮೊದಲೇ ತಿಥಿ ಊಟ ಕೇಳೋ, ನಿನಗೆ ಹತ್ತಿಗೆ ಹೊಡೆಯುವ ಎಣ್ಣೇನೇ ಕೂಡಿಸುತ್ತೇನೆ ಮಗನೆ ಬಾ ಎಂದು ಬೈದುಕೊಂಡೆ. ನಿಮಗೆ ಯಾರು ಬೇಕಿತ್ತು ಎಂದು ಅನುಮಾನದಿಂದ ಕೇಳಿದೆ. ಲೇ ಗೋಪಾಲ್ ...ನೀನೆ ಕಣೋ ಕತ್ತೆ ಕಾಯುವನೆ ಎಂದ. ಕೋಪ ಇನ್ನಷ್ಟು ಉಕ್ಕಿ ಬಂತು ದನ ಕಾಯುವವನಿಗೆ ಕತ್ತೆ ಕಾಯುವವ ಎಂದರೆ ಬರದೇ ಇರುತ್ತೆ. ಇದೇನಾದರೂ ಮಂಜನ ಕಿತಾಪತಿ ಇರಲು ಬಹುದು ಎಂದು ಅನ್ನಿಸಿದ್ದು ನಿಜ. ಯಾರಾದರೂ ನಾನು ಆಸ್ಪತ್ರೆಗೆ ಬಂದಿದ್ದು ನೋಡಿದರಾ?. ಮಂಜ ಹೊರಗಡೆ ಇರಬಹುದಾ?. ನೋರೆಂಟು ಯೋಚನೆ ತಲೆಯೊಳಗೆ...ಅದು ನಾನು ಸಾಯುವ ವಿಷಯ ಗೊತ್ತಾಗಿದೆ ಎಂದರೆ ಇವನು ಯಮಧರ್ಮರಾಯನೆ? .... ಮತ್ತೆ ರಾಜೇಶ್ ಎಂದ. ಎಲ್ಲರಿಗೂ ಹೇಳಲು ಸುಲಭವಾಗಲಿ ಎಂದು ಹೆಸರು ಬದಲಿಸಿದನೆ? ತಿಳಿಯಲಿಲ್ಲ.

ಕೂಡಲೇ, ಹೊರಗಡೆ ಓಡಿದೆ. ಡಾಕ್ಟರ್ ಓಡುತ್ತಿರುವ ನನ್ನ ನೋಡಿ.. ಏsss.. ಕಲ್ಲಪ್ಪ, ಹಿಡಿ ಅವನನ್ನ ಎಂದು ತಮ್ಮ ಕಾಂಪೌಂಡರ್ ಗೆ ಕೂಗಿದರು. ಆದರೂ ತಪ್ಪಿಸಿಕೊಂಡು ಹೊರಗಡೆ ಹೋಗಿ, ಎಲ್ಲ ಕಡೆ ಕಣ್ಣು ಆಡಿಸಿದೆ. ಯಾರು ಪರಿಚಯದವರು ಕಾಣಲಿಲ್ಲ. ಮತ್ತೆ ಕಾಂಪೌಂಡರ್ ನನ್ನ ಕುತ್ತಿಗೆ ಪಟ್ಟಿ ಹಿಡಿದು ಎಳೆದು ಕೊಂಡು ಡಾಕ್ಟರ್ ಬಳಿ ಬಂದು ನಿಲ್ಲಿಸಿದ. ನಾನು ಮೊಬೈಲ್ ನಲ್ಲಿ ಇದ್ದ ಮನುಷ್ಯನಿಗೆ ನಾನು ಆಮೇಲೆ ಕಾಲ್ ಮಾಡುತ್ತೇನೆ ಎಂದು ಹೇಳಿದೆ. ನನಗೆ ಫೋನ್ ಮಾಡಿದ ವ್ಯಕ್ತಿ ಡಾಕ್ಟರ್ ಪರಿಚಯದವನೆ ಎಂದು ಯೋಚನೆ ಕೂಡ ಬಂತು. ಸರ್, ನಿಮಗೆ ರಾಜೇಶ್ ಗೊತ್ತಾ ಎಂದು ಕೇಳಿದೆ. ರೀ ಯಾರಿದ್ದರೆ ನನಗೆ ಏನ್ರೀ... ಅವನೇನು ನನಗೆ, ಮೊದಲು ಫೀಸ್ ಕೊಟ್ಟು ಮಾತಾಡಿ ಎಂದು ದಬಾಯಿಸಿದರು. ನನಗೆ ಆ ಕರೆಯ ಗದ್ದಲದಲ್ಲಿ ಮರೆತೇ ಹೋಗಿತ್ತು. ಸಾರಿ... ಸರ್ ಎಂದು ಹೇಳಿ ಫೀಸ್ ಕೊಟ್ಟು ಹೊರಗಡೆ ಬಂದೆ.

ಹೊರಗಡೆ ಬಂದೊಡನೆ ಮತ್ತೆ ಅದೇ ಮೊಬೈಲ್ ಗೆ ಫೋನ್ ಮಾಡಿದೆ. ಯಾರು? ನೀವು ಎಂದು ಕೇಳಿದೆ. ನಾನು ರಾಜೇಶ ಎಂದ. ಯಾವ ರಾಜೇಶ್ ಎಂದು ದಬಾಯಿಸಿದೆ. ಲೇss.. ನಾನು ಡಬ್ಬಾ-ಡುಬ್ಬೀ ಆಡುವಾಗ ನಿನಗೆ ಚೆಂಡಿನಿಂದ ಕೆನ್ನೆಗೆ ಬಾರಿಸಿದ್ದೆನಲ್ಲಾ ಎಂದ. ಕಡೆಗೆ ನೆನಪಿಗೆ ಬಂತು. ಅಗಲೆ ಏನೋ ಹೇಳುತ್ತಿದ್ದೆ ಅಲ್ಲ ಎಂದೆ. ಅದೇ ಕಣೋ, ನೀನು ದೊಡ್ಡ ಸಾಯಿತಿ ಅಂತೆ. ಕಥೆ, ಕವನ ಮತ್ತೆ ಆಸ್ಯ ಲೇಖನ ಬರೆಯುತ್ತೀಯಾ ಎಂದು ಕೇಳಿದ. ಆಗ ಅರ್ಥ ಆಗಿತ್ತು ಅವನು ಹೇಳಿದ್ದು ಸಾಹಿತಿ ಎಂದು. ನಾನೇನು ದೊಡ್ಡ ಸಾಹಿತಿ ಅಲ್ಲ ಮಹಾರಾಯ... ಬ್ಲಾಗ್ ಬರಹಗಳನ್ನು ಮಾತ್ರ ಬರೆಯುತ್ತೇನೆ ಎಂದು ಹೇಳಿದೆ. ಪೂರ್ತಿ ನೆನಪಿಗೆ ಬಂತು ಪಾಪ, ಅವನಿಗೆ ಹ ಕಾರ ಮಾತನಾಡಲು ಬರುವದಿಲ್ಲ. ಹ ಅಂದರೆ ಅ ಅನ್ನುತ್ತಾನೆ, ಹಾ ಎಂದರೆ ಆ .... ಹೀಗೆ. ಚಿಕ್ಕ ವಯಸಿನ್ನಲ್ಲಿ ನೋಡಿದ್ದು, ನಾವು ಅವನಿಗೆ ಹಂದಿ ಎಂದು ಕಾಡುತ್ತಿದ್ದೆವು. ಅವನು ಅದಕ್ಕೆ ನೀನೆ ಅಂದಿ ಅನ್ನುತ್ತಿದ್ದ ಪಾಪ. ಹೌದು ನಾನೇ ಅಂದಿದ್ದು, ನೀನೆ ಹಂದಿ ಎಂದೆಲ್ಲ ಕಾಡುತ್ತಿದ್ದೆವು. ಮತ್ತೆ ಎಲ್ಲಾ ಕ್ಷೇಮ ಸಮಾಚಾರ ವಿಚಾರಿಸಿ ಮನೆಗೆ ಬರುವಂತೆ ಹೇಳಿ ಫೋನ್ ಇಟ್ಟೆ.

ಮರುದಿನ ಮುಂಜಾನೆ ಬಾಸ್ ಮತ್ತೆ ಕರೆದು, ರೀ ನಿಮ್ಮದು ಮುಂದಿನ ತಿಂಗಳು ಅಪ್ರೇಸಲ್ ಅಲ್ಲವಾ, ಮತ್ತೆ ನನಗೆ ಹೇಳಿದ್ದು ಇದೆ ತಿಂಗಳು ಎಂದು ಕೇಳಿದರು. ನಾನು ನಿರಾಸೆಯ ಅಲೆಯಲ್ಲಿ ತೇಲುತ್ತ ಬಂದು ಕುಳಿತು, ಮಡದಿ ಫೋನ್ ಮಾಡಿ, ಆದ ವಿಚಾರನೆಲ್ಲ ಹೇಳಿದಾಗ ಅವಳಿಗೂ ಕೂಡ ನಗು ತಡೆಯಲು ಆಗಲಿಲ್ಲ.

Wednesday, December 1, 2010

ಹೋಟೆಲ್ ಊಟ... ಹೊಟ್ಟೆಯಲ್ಲಿ ಆಟ...

ಮೂರು ದಿವಸ ಆಯಿತು ಮುಂಜಾನೆ ಎದ್ದು ೧೦ ರೂಪಾಯಿ ಕೊಟ್ಟು ಬಿಳಿ ಗುಳಿಗೆ ನುಂಗಿ ಆಫೀಸ್ ಹೋಗುತ್ತಾ ಇದ್ದೇನೆ. ನಾನು ಎಷ್ಟೇ ಹೋಟೆಲ್ ಹೊಕ್ಕರು ಸಿಗುವದು ಅದೇ ಬಿಳಿ ಗುಳಿಗೆಗಳು, ಕೆಲವು ಚಿಕ್ಕ , ಮತ್ತೆ ಕೆಲವು ಗಾತ್ರದಲ್ಲಿ ದೊಡ್ಡದಾಗಿರಬಹುದು ಅಷ್ಟೇ. ನಿಮಗೆ ಬಿಳಿ ಗುಳಿಗೆ ಎಂದರೆ ಅರ್ಥ ಆಯಿತು ತಾನೇ?. ಇಡ್ಲಿ.. ಸಾರ್ ಇಡ್ಲಿ... ಯಾವುದೆ ಸಮಯದಲ್ಲಿ ಹೋದರು ಸಿಗುವದು ಇದೊಂದು ಮಾತ್ರೆ ಮಾತ್ರ. ಇಷ್ಟಕ್ಕೂ ಅದು ಇದು ಹಾಳು ಮೂಳೆ... ಕ್ಷಮಿಸಿ ಮುಳ್ಳು... ಆಯಾಯ್ಯೋ ಮತ್ತೊಮ್ಮೆ ಕ್ಷಮಿಸಿ... ಮೂಳು ತಿಂದು ಹೊಟ್ಟೆ ಕೆಡಿಸಿಕೊಳ್ಳಬೇಡಿ, ಇಡ್ಲೀನೇ ತಿನ್ನು ಎಂದು ನನ್ನ ಮಡದಿ ತಾಕೀತ್ ಮಾಡಿ ಊರಿಗೆ ಹೋಗಿದ್ದಾಳೆ. ಇದಕ್ಕೆ ಜೊತೆಯಾಗಿ ಇನ್ನೊಂದು ಮಾತ್ರೆ ಬೇರೆ ಚಾಕ್ಲೇಟ್ ಕಲರ್ ಗುಳಿಗೆ ... ವಡೆ.

ಹೆಂಡತಿ ಮನೆಯಲ್ಲಿ ಇಲ್ಲ ಎಂದರೆ ಆಗುವ ಕಷ್ಟಗಳನ್ನು ಹೇಳುವುದು ನಿಮಗೆ ಬೇಕಿಲ್ಲ ಎಂದುಕೊಂಡಿದ್ದೇನೆ. ಈ ಇಡ್ಲಿ , ವಡೆ ಸಾಂಬಾರ ಮತ್ತು ಚಟ್ನಿ ಒಳಗೆ ಹೋದಂತೆ ತಮಷ್ಟಕ್ಕೆ ತಾವೇ ನಾದಮಯವಾಗಿ ಸಂಗೀತ ಕಛೇರಿ ಶುರು ಮಾಡಿದ್ದವು ಅಥವಾ ಜಗಳ ಮಾಡಲು ಶುರು ಮಾಡಿದ್ದವು ಎಂದೆನಿಸುತ್ತೆ. ಒಟ್ಟಿನಲ್ಲಿ ನನ್ನ ಹೊಟ್ಟೆಯಲ್ಲಿ ಗುದ್ದಾಟ ನಡೆಸಿದ್ದವು. ಏನಾದರೂ? ಮಾಡಲಿ ಆದರೆ ಅವಗಳನ್ನು ವಾಯು ವಿಹಾರಕ್ಕೆ ಮಾತ್ರ ಬಿಡಬಾರದು ಎಂದು ಯೋಚಿಸಿ, ಅರ್ಧ ಬಾಟಲ್ ನೀರು ಕುಡಿದು ಬಹಿರ್ದೆಶೆಗೆ ಹೋಗಿ ಬಂದು ನಿರಾತಂಕವಾಗಿ ಆಫೀಸ್ ಹೊರಡಲು ಅನುವಾದೆ. ಮತ್ತೆ ಗುದ್ದಾಟ ಶುರು ಆಯಿತು. ಮತ್ತೆ ಇನ್ನೊಂದು ಬಾರಿ ಬಹಿರ್ದೆಶೆಗೆ ಹೋಗಿ ಬಂದಾಗ, ಅವುಗಳನ್ನು ತಿಂದು ತೆಗಿದ ಪಾಪಕ್ಕೆ, ಏನೋ ಒಂದು ಆತಂಕ ನೀಗಿದ ಹಾಗೆ ಆಗಿತ್ತು.

ಮತ್ತೆ ಲೇಟ್ ಆಗಿ ಆಫೀಸ್ ಹೋದೆ. ಬಾಸಿನಿಂದ ಹೊಟ್ಟೆ ತುಂಬಿದ ಹಾಗೆ ಆಗಿದ್ದರು, ಬಿಸಿ.. ಬಿಸಿ... ಬೈಗುಳಗಳನ್ನು ತಿಂದು ತೇಗಿ ಸೀಟ್ ಮೇಲೆ ಒರಗಿದೆ.ಅಷ್ಟರಲ್ಲಿ ನನ್ನ ಗೆಳೆಯ ಮಾಧವ ಅಮೇರಿಕಾಕ್ಕೆ ಹೋಗಿದ್ದ ಅವತ್ತೇ ಬಂದ. ಬಂದೊಡನೆ ನನ್ನ ಬಡ ಹೊಟ್ಟೆ ವಿಚಾರಿಸದೇ, ಬಂದವನೇ ಏನೋ? ನಿನ್ನ ಗುರುತೇ ಸಿಗಲಿಲ್ಲ. ಮುಂದೆ ಬಂದ ಕೂಡಲೇ ಅನ್ನಿಸಿದ್ದು, ನೀನೆ... ಅಂತ. ಆದ್ರೆ ಶಿರಸ್ತ್ರಾಣ ಧರಿಸಿ ಏಕೆ? ಕುಳಿತಿದ್ದಾನೆ ಎಂದು ಅನ್ನಿಸಿತು. ನೀನು ನೋಡಿದರೆ ಆರೇ ತಿಂಗಳಲ್ಲಿ ಬೋಡ ಆಗಿದಿಯಲ್ಲೋ ಎಂದ. ಮತ್ತೊಂದು ಮದುವೆ, ಗಿದುವೆ ಆಗಿದ್ದೀಯೇನೋ?.. ಎಂದು ಹೀಯಾಳಿಸಿದ. ಪಕ್ಕದಲ್ಲಿ ಕುಳಿತಿದ್ದ ಪಂಕಜಾ ನನ್ನ ಕತೆ(ವ್ಯಥೆ) ಯನ್ನು ಅನುಭವಿಸಿದ ನನಗಿಂತಲೂ ರಸವತ್ತಾಗಿ ವಿವರಿಸಿದಳು. ಜೋರಾಗಿ ಗಹ ಗಹಿಸಿ ನಗುತ್ತಾ.... ನನಗೆ ಹೇಳಿದ್ದರೆ ಒಂದು ಒಳ್ಳೆಯ ವಿಗ್ ತರುತ್ತಿದ್ದೆ ಅಮೇರಿಕಾದಿಂದ ಎಂದ. ಮಗನೆ ನೀನೆ ಒಪ್ಪತ್ತು ತಿಂದು ದುಡ್ಡು ಉಳಿಸೋ ಮಗ, ಅದರಲ್ಲಿ ನನಗೆ ವಿಗ್ ತರುತ್ತೀಯಾ ಎಂದು ಮನಸಿನಲ್ಲೇ ಬೈದೆ. ನಡಿ ಹೋಗೋಣ ತಿಂಡಿಗೆ ಎಂದ, ಬೇಡ ನನ್ನದು ಆಗಿದೆ ಎಂದು ಹೇಳಿದೆ. ಆಯಿತು ಕಾಫೀ ಆದರೂ ತೆಗೆದು ಕೊಳ್ಳು ಬಾ ಮಹಾರಾಯ ಎಂದು ಕರೆದುಕೊಂಡು ಹೋದ. ನಾನು ಕಾಫೀ ಕುಡಿದೆ, ಅವನು ಅದೇ ಎರಡು ಬಿಳಿ ಗುಳಿಗೆ ತಿಂದ. ಓ ಸಾರೀ... ನಾನು ಪರ್ಸ್ ನೆನಪು ಹಾರಿ ಬಂದಿದ್ದೇನೆ. ಬಿಲ್ ನೀನೆ ಕೊಡು ಎಂದ. ಕಡೆಗೆ ನಾನೇ ಬಿಲ್ ಕೊಟ್ಟು ಬಂದೆ. ಬಿಲ್-ಕೂಲ್ ಮನಸ್ಸಿಲ್ಲದೇ ನಾನು ಬಿಲ್ ಕೊಟ್ಟ ಕೋಪದಲ್ಲಿ ಮದುವೆ ಯಾವಾಗ ಕಣೋ, ಮೂರು ಕತ್ತೆ ವಯಸ್ಸು ಆಯಿತು ಎಂದು ಅಚ್ಚ ಕನ್ನಡದಲ್ಲಿ ಕೇಳೋಣ ಎಂದುಕೊಂಡರೂ, ಏನು ಮೂರನೇ ಇನ್ನಿಂಗ್ಸ್ ಟೆಸ್ಟ್ ಆಡಬೇಕು ಎಂದು ಮಾಡಿದ್ದೀಯಾ ಎಂದು ಕೇಳಿದೆ. ಮಾಡಿಕೊಳ್ಳಬೇಕು ಮಹಾರಾಯ ಒಂದು ಒಳ್ಳೆಯ ಹುಡುಗಿ ಇದ್ದರೆ ನೋಡು ಎಂದು, ನನಗೆ ಫಾರ್ಮಾನು ಹೊರಡಿಸಿದ. ಕೇಳಿದ್ದೆ ತಪ್ಪು ಆಯಿತು ಎಂದು ನಾನು ಮನಸಿನಲ್ಲೇ ಅಂದು ಕೊಂಡೆ.

ಸಂಜೆ ಆರು ಘಂಟೆಗೆ ಬಾಸ್ ಬಂದು, ಇವತ್ತು ಏನು? ಕೆಲಸ ಇಲ್ಲ ಮನೆಗೆ ಹೋಗೋಣ ಎಂದ. ನಾನು ಹಾಗೂ.. ಹೀಗೂ.. ಹೆಂಡತಿ ಬರುವವರೆಗೆ ಒಂದು ವಾರ ಇಲ್ಲೇ ಊಟ ಮಾಡಿದರೆ ಆಯಿತು ಎಂದು ಪ್ಲಾನ್ ಮಾಡಿದ್ದೆ. ಎಲ್ಲವೂ ಹಾಳು ಆಯಿತು ಮನೆಗೆ ಹೋಗುವ ಸಮಯದಲ್ಲಿ, ಊಟದ ಬಗ್ಗೆ ಯೋಚಿಸುತ್ತಾ, ಒಂದು ಲಾರಿಯಿಂದ ಕೂದಲೇಳೆಯಲ್ಲಿ ... ಕ್ಷಮಿಸಿ ಕೂದಲೇ ಇಲ್ಲ ಅಲ್ಲವಾ?, ಸ್ವಲ್ಪದರಲ್ಲೇ ಬಚಾವ್ ಆದೆ. ಹೇಗಿದ್ದರು ಹೊಟೆಲ್ ಅನುಭವ ಆಗಿದ್ದರಿಂದ, ಮನೆ ಮುಟ್ಟಿದ ಮೇಲೆ ಏನು? ಅಡುಗಿ ಮಾಡಬೇಕು ಎಂದು ಯೋಚಿಸುತ್ತಿದ್ದೆ, ಆಗ ಕಾಣಿಸಿದ್ದು ಮ್ಯಾಗಿ ಪ್ಯಾಕೆಟ್ ಇದು ತುಂಬಾ ಸುಲಭ ಎಂದು ಯೋಚಿಸಿ ಅದನ್ನೇ ಮಾಡಿಕೊಂಡು ತಿಂದೆ.

ಮನೆಯಲ್ಲಿ ಅಡುಗಿ ಮಾಡಿದ ಸಂತೋಷಕ್ಕೆ ಮಡದಿಗೆ ಫೋನ್ ಮಾಡಿ, ನಾನೇ ಅಡುಗೆ ಮಾಡಿ ಊಟ ಮಾಡಿದೆ ಎಂದು ಹೇಳಿದೆ. ಹೆಂಡತಿ ಹಿರಿ ಹಿರಿ ಹಿಗ್ಗಿ ಏನು? ಮಾಡಿದಿರಿ ಎಂದು ಕೇಳಿದಳು. ನಾನು ಮ್ಯಾಗಿ ಎಂದಾಗ, ಅಷ್ಟೇನಾ.... ಎಂದು ರಾಗ ಎಳೆದಳು. ಮತ್ತೆ ನಾನು ಮ್ಯಾಗಿ ಪ್ಯಾಕೆಟ್ ಅಷ್ಟು ಖಾಲಿ ಮಾಡಿದ್ದಕ್ಕೆ ಬೈದು ಒಂದಿಷ್ಟು ಮ್ಯಾಗಿ ಪ್ಯಾಕೆಟ್ ತಂದು ಇಡಿ. ನಿಮ್ಮ ಮಗನಿಗೆ ಬೇಕಾಗುತ್ತೆ ಎಂದು ತಾಕೀತ ಮಾಡಿದಳು.

ಅನಂತರ ಪಾತ್ರೆ ತೊಳೆದು ಮುಗಿಸುವಷ್ಟರಲ್ಲೇ ಬೆನ್ನು ಬಿದ್ದು ಹೋಗಿತ್ತು. ಮತ್ತೆ ಅಡುಗಿ ಸಹವಾಸ ಸಾಕು ಎನ್ನುವಷ್ಟು. ಮತ್ತೆ ನಾಳೆಯಿಂದ ಮತ್ತೊಂದು ಹೋಟೆಲ್ ಹುಡುಕಿದರೆ ಆಯಿತು ಎಂದು ಯೋಚಿಸಿ ನಿದ್ದೆಗೆ ಜಾರಿದೆ. ಮತ್ತೆ ನಾಳೆಯಿಂದ ಹೊಟೆಲ್ ಊಟನೆ ಗತಿ.. ಆದರೆ ಹೊಟ್ಟೆಯಲ್ಲಿ ಆಟ ಆಗದಿದ್ದರೆ ಸರಿ.

Tuesday, November 23, 2010

ಡಾಕು ಮಂಗಲ್ ಸಿಂಗ್....

ಮುಂಜಾನೆ ಬೇಗ ಎದ್ದು, ನಾನು ಬರೆದಿರುವ ಲೇಖನದ ಹಿಟ್ಸ್ ನೋಡುತ್ತಾ ಕುಳಿತಿದ್ದೆ. ಇನ್ನೂ ಸವಿ ನಿದ್ದೆಯಲ್ಲೇ ಇದ್ದ, ನನ್ನ ಮಡದಿ ಏನ್ರೀ, ಏನು ಮಾಡುತ್ತಾ ಇದ್ದೀರ ಎಂದಳು. ಹಿಟ್ ನೋಡುತ್ತಾ ಇದ್ದೀನಿ ಕಣೇ ಎಂದೆ. ಏಕೆ? ಎಂದು ಬೆಚ್ಚಿ ಎದ್ದು ಬಿಟ್ಟಳು. ಎಲ್ಲಿದೆ ಜಿರಳೆ? ಎಂದಳು. ಅವಳಿಗಿಂತ ಜ್ಯಾಸ್ತಿ ಘಾಬರಿ ಆಗಿದ್ದು ನಾನು. ನಾನು ಕುರ್ಚಿಯಿಂದ ಟ್ಯಾಂಗ್ ಎಂದು ಜಿಗಿದೆ. ಕುರ್ಚಿ ಲಡಕ್ಕ್ ಎಂದು ಮುರಿದು, ಅದರ ಜೊತೆ ನಾನು ಬಿದ್ದೆ. ನಾನು ಅವಳಿಗೆ ಕೇಳಿದೆ ಎಲ್ಲಿದೆ ಜಿರಳೆ ಎಂದು. ನೀವು ತಾನೇ ಹಿಟ್ ಹುಡುಕುತ್ತಾ ಇರೋದು ಎಂದಳು. ನಾನು ತಲೆ ಜಜ್ಜಿಕೊಂಡು, ನಾನು ನೋಡುತ್ತಾ ಇರೋದು ನನ್ನ ಲೇಖನದ ಹಿಟ್ಸ್ ಗಳನ್ನ ಎಂದಾಗ, ಓ ಕರ್ಮ ನಿಮಗೆ ಒಂದು ಕೆಲಸ ಇಲ್ಲ ಎಂದರೆ, ಎಲ್ಲರೂ ಹಾಗೇನಾ? ಎಂದು ಬೈದು, ಮುಖ ತೊಳೆದುಕೊಂಡು ಬಂದು ಟೀ ಮಾಡಲು ಅನುವಾದಳು.

ನನಗು ಟೀ ಕೊಟ್ಟು, ತಾನು ಟೀ ತೆಗೆದುಕೊಂಡು ಹೊರಗೆ ಬಂದು ಪೇಪರ್ ಓದುತ್ತಾ ಕುಳಿತಳು. ನಾನು ಮತ್ತೆ ಕಂಪ್ಯೂಟರ್ ಪರದೆ ಮುಂದೆ ಟೀ ಹೀರುತ್ತ ಕುಳಿತೆ. ರೀ, ನೀವು ವಕ್ರತು೦ಡೋಕ್ತಿ ಓದಿದಿರಾ? ಎಂದು ಕೇಳಿದಳು. ನಾನು ದಿನಾಲೂ ಓದುತ್ತೇನೆ, ವಕ್ರತುಂಡ ಮತ್ತು ಶುಕ್ಲಾಂಬರ ಎರಡು ಓದುತ್ತೇನೆ. ಗಣೇಶನ ದಯೆ ಇಲ್ಲದೇ ಏನು ಸಾಧ್ಯ ಇಲ್ಲ ಎಂದು ಹೇಳಿದೆ. ರೀ, ನಾನು ಹೇಳಿದ್ದು ವಿಜಯ ಕರ್ನಾಟಕ ಪೇಪರ್ ನಲ್ಲಿ ಬಂದ ವಕ್ರತು೦ಡೋಕ್ತಿ. ಹಾ... ಹೇಳು ಏನು ಬರೆದಿದ್ದಾರೆ ಎಂದು ಕೇಳಿದೆ. "ಮನೆ ಕೆಲಸ ಮಾಡುವ ಗಂಡ ಎಂದಿಗೂ ಹೆಂಡತಿಯ ಅವಕೃಪೆಗೆ ಗುರಿಯಾಗಲಾರ" ನೀವು ನೋಡಿ ಬರೀ ಆ ಕಂಪ್ಯೂಟರ್ ಮುಂದೆ ಕುಳಿತು ಹಿಟ್ಸ್ ನೋಡುತ್ತಾ ಇದ್ದೀರಾ. ಮನೆಯಲ್ಲಿ ಗೋಧಿ ಹಿಟ್ಟು ಖಾಲಿಯಾಗಿ ಎರಡು ದಿನ ಆಯಿತು. ಒಮ್ಮೆಯಾದರು ಕೇಳಿದ್ದೀರಾ? ಎಂದು ಕೇಳಿದಳು. ಮತ್ತೆ ಇನ್ನೂ ಇದರ ಮುಂದೆ ಕುಳಿತರೆ ನನಗೆ ಹಿಟ್ಸ್ ಗ್ಯಾರಂಟೀ ಎಂದು ಯೋಚಿಸಿ ಆಫ್ ಮಾಡಿ ಹೊರಗೆ ಹೋಗಿ ಎರಡು ಕೆ ಜಿ ಗೋಧಿ ಹಿಟ್ಟು ತಂದು ಕೊಟ್ಟೆ.

ಮತ್ತೆ ಸುಮ್ಮನೇ ಇರಲಾರದೇ, ಟಿ ವಿ ಹಚ್ಚಿದೆ. ಟಿ ವಿ ಯಲ್ಲಿ ಬರುವ ಹಾಡಿಗೆ ಡ್ಯಾನ್ಸ್ ಮಾಡುತ್ತಾ ಇದ್ದೆ. ನಾಚಿಕೆ ಆಗುವದಿಲ್ಲವಾ? ಪಕ್ಕದ ಮನೆ ಅಜ್ಜಿ ವಾಕಿಂಗ್ ಮಾಡುತ್ತಾ ಇದ್ದಾರೆ ಕಿಟಕಿ ಇಂದ ಕಾಣುತ್ತೆ ಎಂದಳು. ಅವರಿಗೆ ನಾನೆಲ್ಲಿ ಕರೆದೆ ನನ್ನ ಜೊತೆ ಡ್ಯಾನ್ಸ್ ಮಾಡೋಕೆ ಎಂದು ತಮಾಷೆ ಮಾಡಿದೆ.ತಲೆ ಜಜ್ಜಿಕೊಂಡು ಇದು ಒಂದು ಬಾಕಿ ಇತ್ತು ಎಂದು ಹೇಳಿ ಹೊರಟು ಹೋದಳು.

ನನಗೆ ಮತ್ತೆ ಟೀ ಕುಡಿಯಬೇಕು ಎಂದು ಅನ್ನಿಸಿದಾಗ, ಲೇ ಸ್ವಲ್ಪ ಟೀ ಇದ್ದರೆ ಕೊಡೆ ಅಡಿಗೆ ಮನೆಗೆ ಹೋಗಿ ಕೇಳಿದೆ. ಬರಿ ಕೆಟ್ಟ.. ಕೆಟ್ಟ.. ಚಟಗಳು ನಿಮಗೆ ಎಂದು ಬೈದಳು. ಮನುಷ್ಯನಿಗೆ ಚಟ ಇರಬೇಕು, ಇಲ್ಲ ಹಟ ಇರಬೇಕು. ಏನು ಇಲ್ಲಾ ಅಂದರೆ ಮುಂದೆ ಬರುವದಿಲ್ಲ. ನನ್ನ ಗೆಳೆಯ ಮಾಧವ ಏನು? ಹೇಳುತ್ತಾನೆ ಗೊತ್ತಾ, "ಚಟವೇ ಚಟುವಟಿಕೆಗಳ ಮೂಲ, ಚಟ ಇಲ್ಲದವನು ಚಟ್ಟಕ್ಕೆ ಸಮಾನ" ಎಂದು ಹೇಳಿದೆ. ನಿಮ್ಮ ಚಟ ಗೊತ್ತಿಲ್ಲವಾ?. ಒಂದು ಟೀ, ಮತ್ತೊಂದು ಆ ಕಂಪ್ಯೂಟರ್ ಎಂದಳು. ಆಡಿಕೊ... ಆಡಿಕೊ... ನಾನು ಮಾಡುತ್ತಾ ಇರೋದು ಪುಣ್ಯದ ಕೆಲಸ. ಒಬ್ಬರನ್ನು ಅಳಿಸೋದು ಸುಲಭ, ನಗಿಸುವದು ತುಂಬಾ ಕಷ್ಟ. ಬೇಕಾದರೆ ನಿನ್ನ ಈಗಲೇ ಅಳಿಸುತ್ತೇನೆ ಎಂದು ಒಂದು ತಲೆಗೆ ಹೊಡೆದೆ. ಕಿಟಾರನೇ ಚೀರಿ ... ಎಷ್ಟೇ ಆದರೂ ಡಾಕು, ಕಲ್ಲೂರ ಕಾಳ ಕ್ಷಮಿಸಿ ... ಕಲ್ಲೂರ ಕುಲ್ಕರ್ಣಿ ತಾನೇ? ಎಂದಳು. ಲೇ ನಮ್ಮ ಊರು ದ್ಯಾವನೂರು ಕಣೆ ಎಂದೆ.ತಡಿರಿ ಅತ್ತೆಗೆ ಕೇಳುತ್ತೇನೆ ಎಂದು ಫೋನ್ ಮಾಡಿದಳು. ಫೋನ್ ಇಟ್ಟು ಜೋರಾಗಿ ನಗ ಹತ್ತಿದಳು. ನಿಮ್ಮದು ದೇವನೂರು, ಸಧ್ಯ ದೆವ್ವನೂರು ಮಾಡಲಿಲ್ಲ ಎಂದು ಈ ದೇವನೂರು ಕುಲಕರ್ಣಿನ ಹೀಯಾಳಿಸಿದಳು.

ಕಡೆಗೆ ಟೀ ಕೊಟ್ಟು ಬೇಗ ಸ್ನಾನ ಮಾಡಿ ಆಫೀಸ್ ಲೇಟ್ ಆಗುತ್ತೆ ಎಂದಾಗ, ನಿನ್ನೆ ತಾನೇ ಬಾಸ್ ಹತ್ತಿರ ಸಹಸ್ರ ನಾಮಾವಳಿಗಳ ಸರಣಿ ನೆನಪು ಆಯಿತು. ಬೇಗನೆ ಟೀ ಕುಡಿದು ಸ್ನಾನಕ್ಕೆ ಹೋದೆ. ದಾಡಿ ಮಾಡಿ ಕೊಳ್ಳದಿದ್ದರೆ, ಬಾಸ್ ಬೇರೆ ಮಾಡಿಕೊಳ್ಳಲು ನಿನಗೇನೂ ಧಾಡಿ ಎಂದು ಬೈಯುತ್ತಾನೆ. ಟೈಮ್ ಬೇರೆ ತುಂಬಾ ಆಗಿತ್ತು. ಕಡೆಗೆ ನಿನ್ನೆ ನೋಡಿದ, ರಜನೀಕಾಂತ್ ಶಿವಾಜಿ ಸಿನೆಮಾ ನೆನಪು ಆಗಿ, ಇದ್ದ ಎರಡು ಸಲಿಕೆ ತೆಗೆದುಕೊಂಡು ಬೇಗ.. ಬೇಗ.. ಕೆರೆದು ಕೊಳ್ಳಲು ಅನುವಾದೆ. ಅಷ್ಟರಲ್ಲೇ ಎಡಗಡೆ ಚರ್ಮ ಕಿತ್ತು ರಕ್ತ ಬರಲು ಶುರು ಆಗಿತ್ತು. ಮುಂದೆ ಸಾವಕಾಶವಾಗಿ ಮಾಡುತ್ತಾ ಇದ್ದಾಗ, ಮತ್ತೊಂದು ಅನಾಹುತ ಆಯಿತು. ಮೀಸೆ ಕಟ್ ಆಗಿತ್ತು. ಮೀಸೆ ಪೂರ್ತಿ ತೆಗೆದು ಬಿಟ್ಟೆ. ಮೀಸೆ ಇದ್ದ ಮತ್ತು ಕೆತ್ತಿದ ಜಾಗ ಮುಚ್ಚಿ ಕೊಂಡು ಬಂದೆ. ಏನು? ಆಯಿತು ಕೈ ತೆಗೆಯಿರಿ ಎಂದಳು. ಕೈ ತೆಗೆದ ಮೇಲೆ ಜೋರಾಗಿ ನಗಹತ್ತಿದಳು. ಕಡೆಗೆ ಪೂಜೆ ಮಾಡಿ ಆಫೀಸ್ ಹೋಗಲು ಅನುವಾದಾಗ, ನನ್ನ ಮಡದಿ ನನ್ನ ಮುಖ ನೋಡಿ "ಡಾಕು ಮಂಗಲ್ ಸಿಂಗ್" ಹಾಗೆ ಕಾಣಿಸುತ್ತಾ ಇದ್ದೀರ ಎಂದು ಕುಹಕವಾಡಿದಳು. ಆದರೆ ಮೀಸೆ ಇರಬೇಕಿತ್ತು. ನಾನು ಕನ್ನಡಿ ಮುಂದೆ ಹೋಗಿ ನಿಂತೆ. ಈಗಲೇ ಚೆನ್ನಾಗಿ ಕಾಣಿಸುತ್ತಾ ಇದ್ದೇನೆ. ಸ್ವಲ್ಪ ಯಂಗ್ ಅನ್ನಿಸುತ್ತೇನೆ ಅಲ್ಲವಾ? ಎಂದೆ. ನಾನು ಅದಕ್ಕೆ ಮೀಸೆ ಇರಬೇಕಿತ್ತು ಎಂದಿದ್ದು ಎಂದಳು. ಮಡದಿ ಡಾಕು ಎಂದಿದ್ದು ಪರ್ವಾಗಿಲ್ಲ, ಎಷ್ಟೇ ಆದರೂ ನಾನು ಗೋಪಾಲ್ ಅಲ್ಲವೇ, ಪರಮಾತ್ಮ ಗೋಪಾಲ ಕೃಷ್ಣ ಜೈಲಿನಲ್ಲೇ ಜನ್ಮವೆತ್ತಿರಬಹುದು. ನಾನು ಜೈಲಿಗೆ ಹೋಗಿ ಬಂದಿರುವೆ ಎಂದು ಬಾಸ್ ಗೆ ಹೆದರಿಸಬಹುದು ಎಂದು ಯೋಚಿಸಿ, ಇನ್ನೂ ಸ್ವಲ್ಪ ಲೇಟ್ ಆಗಿ ಆಫೀಸ್ ಹೊರಟು ನಿಂತೆ.

ಆಫೀಸ್ ಹೋಗುತ್ತಾ ಬೈಕ್ ನಲ್ಲಿ ಏನಾದರೂ ಬರಿ ಬೇಕು ಎಂದು ಯೋಚಿಸುತ್ತಾ ಇದ್ದಾಗ, ನಿನ್ನೆ ಮಡದಿ ಹೇಳಿದ ಕಿಕ್ಕಿಂಗ್ ಕಾಲಂ ಎಂದು ಬರೆಯಿರಿ, ಎಂದು ಹೇಳಿದ್ದು ನೆನಪಾಯಿತು. ಸರಿ ಅನ್ನಿಸಿತು ಕಿಕ್ಕಿಂಗ್ ಕಾಲಂ ಎಂದರೆ ಕಿಕ್ಕಿಂಗ್ + ಕಾಲು + ಅಮ್ಮsss...... ಅಲ್ಲವೇ?.

Friday, November 19, 2010

ಜಡೆ ಇದ್ದ ಹುಡುಗಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು....

ನನ್ನ ಒಬ್ಬ ಗೆಳೆಯ ನರೇಂದ್ರ ಶಯನಾವಸ್ಥೆಯಲ್ಲಿ ಇದ್ದ. ಹೋಗಿ ಎಬ್ಬಿಸಿದೆ. ಆಸಾಮಿ ತುಂಬಾ ಕೋಪ ಮಾಡಿಕೊಂಡು ಬಿಟ್ಟಿದ್ದ. ಶಯನಾವಸ್ಥೆಯಿಂದ ಸೀದಾ ಶ್ವಾನಾವಸ್ಥೆಗೆ ತಿರುಗಿದ್ದ. ಸಧ್ಯ ಬೊಗಳಿದ, ಎಬ್ಬಿಸಿದ್ದಕ್ಕೆ ಕಚ್ಚಲಿಲ್ಲ. ಅವನ ಬಾಯಲ್ಲಿ ಬಂದ ಧಾರವಾಡ ಭಾಷೆ ನುಡಿ ಮುತ್ತುಗಳು, ನನ್ನ ಕರ್ಣಕ್ಕೆ ಕುಂಡಲಗಳ ಹಾಗೆ ಅಲಂಕರಿಸಿದ್ದವು. ನಾನು ಅವನನ್ನು ಇದು ಕಂಪ್ಯೂಟರ್ ಪರದೆ, ಸೊಳ್ಳೆ ಪರದೆ ಎಂದು ಕೊಂಡಿರುವೆ ಏನು? ಎಂದು ತಮಾಷೆ ಮಾಡಿದೆ. ವಯಸ್ಸು ಮೀರಿದ ಮೇಲೆ ನಿದ್ದೆ ಕಡಿಮೆ ಆಗುತ್ತೆ ಅಂತ ಹೇಳುತ್ತಾರೆ. ನೀನು ನೋಡಿದರೆ ವಯಸ್ಸು ಮೀರಿದ ಮೇಲೆ ಕೂಡ ಸಕತ್ ನಿದ್ದೆ ಹೊಡಿತ ಇದ್ದೀಯಾ? ಎಂದೆ. ಯಾರು ಹೇಳಿದ್ದು ವಯಸ್ಸು ಮೀರಿದೆ ಎಂದು. ನನ್ನದು ಇನ್ನೂ ಕನಸು ಕಾಣೋ ವಯಸ್ಸು ಕಣೋ ಅಂದ. ಇಷ್ಟೆಲ್ಲಾ ಆಗಿದ್ದು ಸರಕಾರದ ನೀತಿ ನಿಯಮದಿಂದನೆ ಎಂದ. ಏನಪ್ಪಾ ಅದು ಸರಕಾರದ ನೀತಿ ನಿಯಮ ಎಂದೆ. ಗಂಡಿಗೆ 21 ವರ್ಷ , ಹೆಣ್ಣಿಗೆ 18 ವರ್ಷ ಮದುವೆಗೆ ಎಂದು ಫಿಕ್ಸ್ ಮಾಡಿದ್ದು. ನಾವು 21 ವರ್ಷ ಆಗುವವರೆಗೆ ಮದುವೆಗೆ ಕಾಯಬೇಕು, ಆಮೇಲೆ 18 ವರ್ಷ ಆದ ಹುಡುಗೀನೆ ಹುಡುಕಬೇಕು ಮತ್ತು ಮದುವೆ ಆಗಬೇಕು. ಇದು ತಪ್ಪು ಅಲ್ಲವಾ? ಎಂದ. ಮನಸಿನಲ್ಲೇ... ಬಾಲ್ಯವಿವಾಹ ಬೇಕಾ? ಮಗನೆ ಎಂದು ಬೈದು, ನಾನು ಹೌದು.. ಹೌದು.. ಎಂದು ತಲೆ ಆಡಿಸಿದೆ. ಅದು ಬೇರೆ ಅಪ್ಪ, ಅಮ್ಮ ಕುಂಡಲಿ, ಜಾತಿ, ಒಳಜಾತಿ ಮತ್ತು ಮನೆತನ ಎಂದೆಲ್ಲಾ ನೋಡಿ, ಆಮೇಲೆ ಅವರು ಹಸಿರು ನಿಶಾನೆ ತೋರಿಸಿದ ಮೇಲೆ ನಾನು ನೋಡಿ ಒಪ್ಪಿಗೆ ಸೂಚಿಸಬೇಕು ಇದೆಲ್ಲಾ ಆಗುವದರೊಳಗೆ ನನ್ನ ತಲೆ ಕೂದಲು ಬೆಳ್ಳಗೆ ಆಗಿರುತ್ತವೆ. ಸಮ್ಮಿಶ್ರ ಸರಕಾರಕ್ಕೆ ಅವಕಾಶವೇ ಇಲ್ಲ ಎಂದ. ಅದು ಬೇರೆ ಈಗೀಗ ಹುಡುಗಿಯರ ಡಿಮ್ಯಾಂಡ್ ತುಂಬಾ ಜ್ಯಾಸ್ತಿ, ಸಂಬಳ, ಮನೆ, ಹೊಲ, ಮನೆತನ ಎಂದು ತುಂಬಾ ಕೇಳುತ್ತಾರೆ ಗೋಪಿ ಎಂದು ರಾಗವೇಳೆದ. ಈ ತುಳಸಿ ಲಗ್ನಕ್ಕೆ ನನಗೆ 34 ಸಂವತ್ಸರಗಳು ತುಂಬುತ್ತವೆ, ಅದರಲ್ಲಿ ನೀನೆ ಅದೃಷ್ಟವಂತ ಕಣೋ ಎಂದು ಹೇಳಿದ. ಈಗೀಗ ಹುಡುಗಿಯರ ಜನ ಸಂಖ್ಯೆ ಬೇರೆ ಕಡಿಮೆ ಎಂದು ಹೇಳುತ್ತಾರೆ. ಇನ್ನೂ ಸ್ವಲ್ಪ ದಿವಸ ತಡೆದರೆ ವಧು ದಕ್ಷಿಣೆ ಕೊಟ್ಟು ಮದುವೆ ಮಾಡಿಕೊಳ್ಳುವ ಪರಿಸ್ತಿತಿ ಬರುತ್ತೆ ಎಂದು ಗೋಳಾಡಿದ. ಅದಕ್ಕೆ ಇನ್ನೂ ಮದುವೆ ಆಗಿಲ್ಲ. ಮದುವೆ ಮುಂಚೆ ಕಾಣೋ ಕನಸನ್ನೆ ಕಾಣುತ್ತಾ ಇದ್ದೇನೆ ಎಂದ.

ನಾನು ಸ್ವಲ್ಪ ಯೋಚನೆ ಮಾಡುತ್ತಾ ನಿಂತೆ. ನಿಜ ಅನ್ನಿಸಿತು ಮದುವೆ ಎಂದರೆ ಎಷ್ಟು ಕಷ್ಟ ಎಂದು. ಇದೆಲ್ಲಾ ಯೊಚಿಸಿರಲೇ ಇಲ್ಲ. ನೋಡಿದ ಮೊದಲನೆ ಹುಡುಗೀನೆ ಪಾಸ್ ಮಾಡಿದ್ದೆ. ಸಧ್ಯ ಪುಣ್ಯಕ್ಕೆ ಅವಳ ಕುಂಡಲಿ,ನನ್ನ ಕುಂಡಲಿ ಹೊಂದಿತ್ತು. ಇಲ್ಲದೇ ಹೋಗಿದ್ದರೆ?. ಇವನು ಹೇಳಿದ ರಾಮಾಯಣ, ನಾನು ಮಹಾಭಾರತ ಸ್ಟೈಲ್ ನಲ್ಲಿ ಹೇಳಬೇಕಿತ್ತು ಏಕೆಂದ್ರೆ, ನಾನು ಮಂಗ್ಯಾನ ಲಿಂಕ್ ಕ್ಷಮಿಸಿ.... ಅದೇನೋ ಮಂಗಲಿಕ, ಮಂಗಳ ದೋಸೆ... ಅಲ್ಲಲ್ಲ....ಮಂಗಳ ದೋಷದವನು ಎಂದು, ಮನೋಜ ನನ್ನ ಕುಂಡಲಿ ಪರೀಕ್ಷಿಸಿ ಮೊನ್ನೆ ಹೇಳಿದ್ದ. ಹಾಗೆ ಮಂಗಳ ದೋಷ ಇರುವ ಹುಡುಗರು ಮಂಗಳ ದೋಷ ಇರುವ ಹುಡುಗಿಯರನ್ನೇ ಮದುವೆ ಆಗಬೇಕು ಎಂಬ ನಿಯಮ ಇದೆ ಅಂತೆ. ಅವಳಿಗೂ ಮಂಗಳ ದೋಷ ಇತ್ತು. ಹೀಗಾಗಿ ಮದುವೆ ನೆರವೇರಿತು. ಅವಳನ್ನು ಧಿಕ್ಕರಿಸಿದ್ದರೆ, ನನಗೆ ಕೂಡ ಈ ನರೇಂದ್ರನ ಗತಿನೇ ಬರುತಿತ್ತು... ರಾಮ... ರಾಮ.... ಶ್ರೀ ರಾಮನನ್ನು ನೆನಸಿದ್ದು ಏಕೆ? ಎಂದು ತಿಳಿಯಿತು ತಾನೇ... (ನಾನು ಏನಿದ್ದರೂ ನನ್ನ ದೋಷದ ಮೊದಲೆರಡು ಅಕ್ಷರದ ರೂಪ ತಾನೇ?). ಇಷ್ಟೆಲ್ಲಾ ಯೋಚಿಸಿ ಮಡದಿಯ ಕಾಲ್ ನೆನಪು ಆಗಿ ಕ್ಷಮಿಸಿ.... ಮಿಸ್ ಕಾಲ್ ನೆನಪು ಆಗಿ ಹೋಗಿ ಅವಳಿಗೆ ಕರೆ ಮಾಡಿದೆ. ಏನ್ರೀ ಇಷ್ಟೊತ್ತು ಎಂದು ಗದರಿಸಿದಳು. ಏನಿಲ್ಲಾ ಕಣೇ, ನಿನ್ನ ಬಗ್ಗೆನೇ ಡೀಪ್ ಆಗಿ ಯೋಚನೆ ಮಾಡುತ್ತಾ ಇದ್ದೆ ಎಂದು ಹೇಳಿದೆ. ಓ .. ನಿಮ್ಮದು ಗೊತ್ತಿಲ್ಲವಾ?...ಎಂಬ ವ್ಯಂಗ್ಯ ಮಾತಿನೊಂದಿಗೆ, ಸಂಜೆ ಬರುತ್ತಾ ಸೇಬು ಹಣ್ಣು ತೆಗೆದುಕೊಂಡು ಬನ್ನಿ ಇವತ್ತು ಏಕಾದಶಿ ಎಂದು ಹೇಳಿದಳು. ಆಯಿತು ಕಣೇ ಎಂದು ಹೇಳಿ ಫೋನ್ ಕಟ್ ಮಾಡಿ ಮತ್ತೆ ನರೇಂದ್ರನ ಕಡೆಗೆ ಬಂದೆ.

ಮತ್ತು ಬಿಡದೆ ತನ್ನ ವರಸೆ ಶುರು ಹಚ್ಚಿಕೊಂಡ. ಮೊನ್ನೆ ಒಂದು ಹುಡುಗಿ ನೋಡುವುದಕ್ಕೆ ಹೋಗಿದ್ದೆ. ಆ ಹುಡುಗಿ ಕೆಲಸದಲ್ಲಿ ಇತ್ತು. ಮತ್ತೆ ತುಂಬಾ ಚೆನ್ನಾಗಿ ಇದ್ದಳು. ಆದರೆ ನನ್ನ ಕರ್ಮಕ್ಕೆ ಅವಳ ಸಂಬಳ ನನ್ನ ಸಂಬಳಕ್ಕಿಂತ ಸ್ವಲ್ಪ ಜ್ಯಾಸ್ತಿ ಇತ್ತು ಎಂದ. ಅದ್ದಕ್ಕೆ ಏನು? ಈಗ ಸುಮ್ಮನೇ ಒಪ್ಪಿಕೊಳ್ಳಬಾರದ? ಎಂದೆ. ಅವಳು ನನಗಿಂತ ಜ್ಯಾಸ್ತಿ ಬೇರೆ ಕಲೇತಿದ್ದಾಳೆ ಎಂದ.

ಇನ್ನೂ ಕೆಲ ಹುಡುಗಿಯರದು ಮಹಿಳಾ ಮೀಸಲಾತಿ ಎಂದ. ಹಾಗೆಂದರೆ ಎಂದು ಬಾಯೀ ತೆಗೆದೆ. ಲೇ ಅಷ್ಟು ಗೊತ್ತಿಲ್ಲವಾ ಲವ್ ಮ್ಯಾರೇಜ್ ಕಣೋ ಎಂದ. ನೀನು ಲವ್ ಮಾಡೋಕೆ ಪ್ರಯತ್ನ ಪಡಬೇಕಾಗಿತ್ತು ಎಂದೆ. ಅದನ್ನೇನೂ ಕೇಳುತ್ತಿ ಲವ್.. ಲವ್... ಅಂತ ಹೇಳಿ ಪೂರ್ತಿ ಕಾಲೇಜ್ ತುಂಬಾ ಲಬೊ...ಲಬೊ... ಎಂದು ಬಾಯೀ ಬಡಿದುಕೊಂಡಿದ್ದೆ, ನನ್ನ ಕರ್ಮಕ್ಕೆ ಒಂದು ಹುಡುಗೀನು ಮುಸುನೋಡಲಿಲ್ಲ ಎಂದು ಬೇಜಾರಿನಲ್ಲಿ ಹೇಳಿದ. ಗೋಪಿ ಬಾಯೀ ಮುಚ್ಚಿಕೊ ಸೊಳ್ಳೆ ಬಾಯಲ್ಲಿ ಹೋದರೆ ಕಷ್ಟ ಎಂದ.

ನಿನ್ನ ಕತೆ ಕೇಳಿ, ನಮ್ಮ ಫೇಮಸ್ ಡೈರೆಕ್ಟರ್ ಶ್ರೀ ಕಾಶೀನಾಥ ಅವರ ಹಾಡು ನೆನಪಿಗೆ ಬರುತ್ತೆ. ಆದರೆ ಕವಿತೆ ಸಾಲು ಉಲ್ಟಾ ಅಷ್ಟೇ ಎಂದೆ. ಅದು "ಜಡೆ ಇದ್ದ ಹುಡುಗಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು ಮತ್ತು ಮೀಸೆ ಹೊತ್ತ ಗಂಡಸಿಗೆ ರಿಮ್ಯಾಂಡಪ್ಪೋ ರಿಮ್ಯಾಂಡು" ಎಂದೆ. ಹೌದು, ಅನ್ನು.. ಕಣೋ ಅನ್ನು... ಎಲ್ಲರೂ ಆಡಿಕೊಳ್ಳುವವರೇ ನನಗೆ ಎಂದು ಗೋಳಾಡಿದ. ಮತ್ತೆ ಯಾರು? ಆಡಿಕೊಳ್ಳುತ್ತಾರೆ ಎಂದು ಕೇಳಿದೆ. ಮತ್ತೆ ಆ ಪಂಚಾಮೃತ ಮನ್ಯಾ ನರೇಂದ್ರ ಎಂದು ಹೆಸರು ಇಟ್ಟುಕೊಂಡ ಕರ್ಮಕ್ಕೆ.. ನನಗೆ ಶ್ರೀ ವಿವೇಕಾನಂದ ಸ್ವಾಮಿಗಳಿಗೆ ಹೋಲಿಸುತ್ತಾನೆ, ಮಗ ದೇವೇಂದ್ರನಿಗೆ ಹೋಲಿಸೋಕೆ ಏನು? ಕಷ್ಟ ಎಂದ.

ಇಷ್ಟೆಲ್ಲಾ ಕೊರೆದ ಮೇಲೆಯೂ ಕೂಡ ಏನೋ? ಕನಸಿನ ಬಗ್ಗೆ ಹೇಳುತ್ತಾ ಇದ್ದೆ ಎಂದು ಕೇಳಿದೆ. ಕತ್ರಿನ ಕೈಫ್ ಮದುವೆ ಆಗುವ ತರಹ ಕನಸು ಕಾಣುತ್ತಿದ್ದೆ ಎಂದ. ಅವಳ ಮದುವೆಯಲ್ಲಿ ನೀನೇನೋ ಮಾಡುತ್ತಾ ಇದ್ದೆ ಎಂದು ಕೀಟಲೇ ಮಾತು ಆಡಿದೆ. ಊಟ ಬಡಿಸುತ್ತಾ ಇದ್ದೆ ಎಂದು ಕೋಪದಿಂದ ಉಲಿದ. ಕನಸಿನಲ್ಲೇ ನಾನು ಕೂಡ ಇದ್ದೇನಾ ಎಂದು ಕೇಳಿದೆ. ಹಾ ಇದ್ದೆ.... ನೀನೇ ಅಡಿಗೆ ಭಟ್ಟ, ಮತ್ತೆ ....ನನ್ನ ಮಗನೆ ಎಂದು ಉಸುರಿದ. ಆಯಿತು ಹೇಳಪ್ಪ ಎಂದೆ. ಕತ್ರಿನ ಕೈಫ್ ಜೊತೆ ನನ್ನ ಮದುವೆ ಆಗುವ ಹಾಗೇ ಕನಸು ಬಿತ್ತು ಕಣೋ, ಎಂದು ಮುಖ,ಕಣ್ಣು ಎರಡು ಅರಳಿಸಿ ಹೇಳಿದ. ಅದು ಹೇಗೆ? ಆಗುತ್ತೆ ಎಂದು ನಾನು ಕೇಳಿದೆ. ಯಾಕಪ್ಪಾ ಆಗೋಲ್ಲ ಅವಳೇನೂ ನಿನ್ನ ವೈಫಾ? ಎಂದು ದಬಾಯಿಸಿದ. ಹೆಂಡತಿ ಪಕ್ಕದಲ್ಲಿ ಇಲ್ಲದಿದ್ದರೂ.... ಸವಕಾಶ ಕಣೋ ಎಂದು ಹೇಳಿದೆ. ಅಷ್ಟರಲ್ಲೇ ಹೆಂಡತಿಯ ಮಿಸ್ ಕಾಲ್ ಮಿಂಚಿ ಮಾಯೆ ಆಯಿತು. ಈ ಹೆಂಡತಿಯರು ಮಿಸ್ಸಸ್ ಆದರೂ, ಮಿಸ್ ಕಾಲ್ ಕೊಡುವುದನ್ನು ಬಿಡುವುದಿಲ್ಲ ನೋಡು ಎಂದು ಹೇಳಿದೆ. ನಿನಗೂ ಇದೆ ಗತಿ ಕಣೋ, ಕಾಲು ಗ್ಯಾರಂಟೀ ಎಂದೆ. ಲೇ... ಸುಮ್ಮನಿರು ಇದು ಮಧ್ಯಾಹ್ನ ಬಿದ್ದ ಕನಸು ನನಸು ಆಗಬಹುದು ಎಂದ. ಸಧ್ಯ ಇದನ್ನು ಬೇರೆ ಯಾರಿಗೂ ಹೇಳಬೇಡ ಇಲ್ಲಿ ತುಂಬಾ ಜನ ಬ್ರಹ್ಮಚಾರಿಗಳು ಇದ್ದಾರೆ, ಮತ್ತೆ ಸಲ್ಲು ಮಿಯಾಗೆ ಏನಾದರೂ ತಿಳಿದರೆ ಖಲಾಸ್.... ಕತ್ರಿನ ಕೈಫ್ ಬದಲಿ, ಅವನ ಕೈಯಲ್ಲಿ ಕತ್ತರಿ ಮತ್ತು ನೈಫ್ ಇರುತ್ತೆ ಎಂದೆ. ಏ ಸುಮ್ಮನೇ ಇರಪ್ಪ ನಿನ್ನದೊಂದು ಎಂದು ಮುಖ ತಿರುಚಿದ. ಮತ್ತೆ ಐಶ್ವರ್ಯ, ಗಿಶ್ವರ್ಯ ಕನಸಿನಲ್ಲಿ ಬರುವುದಿಲ್ಲವಾ? ಎಂದು ಕೇಳಿದೆ. ಮದುವೆಗೆ ಮುಂಚೆ ಬರುತ್ತಿದ್ದಳು. ನಾನು ಮದುವೆ ಆದವರ ಸುದ್ದಿಗೆ ಹೋಗಲ್ಲ ಎಂದು ಹೇಳಿದ. ಲೇ ಕೆಲಸದ ಸಮಯದಲ್ಲಿ ಕೆಲಸ ಮಾಡುವದು ಬಿಟ್ಟು ಕನಸು ಕಾಣುತ್ತಾ ಇದ್ದೀಯಲ್ಲಲೇ ಎಂದು ದಬಾಯಿಸಿದೆ.

ಲೇ ನಾನು ಮಲಗಿಕೊಳ್ಳಬೇಕು, ಸುಮ್ಮನೇ ಹೋಗು ಎಂದು ಬೈದ. ಬಾಸ್ ಬಂದರೆ ಏನು? ಮಾಡುತ್ತೀ ಎಂದು ಕೇಳಿದೆ. ಎದುರಿಗೆ ಇರುವ ಕೆಲಸದ ಪಪೇರ್ ತೋರಿಸಿ, ಕೆಲಸದ ಬಗ್ಗೆ ತುಂಬಾ ಆಳವಾಗಿ ಯೋಚಿಸುತ್ತಿದ್ದೆ ಎಂದು ಹೇಳುತ್ತೇನೆ ಎಂದು ಹೇಳಿ ಕಳುಹಿಸಿದ.

ಇಷ್ಟೆಲ್ಲಾ ಆದರೂ ನನಗೆ ಒಂದು ಹನಿ ಕಣ್ಣೀರು ಕೂಡ ಬರಲಿಲ್ಲ, ಏಕೆಂದರೆ ಅನಾಮತ್ತಾಗಿ 3 ಘಂಟೆ ನೀರು ಕುಡಿಯಲು ಬಿಡದೆ ನೀರಿಳಿಸಿದ್ದ. ಅವನೇನೋ ನಿದ್ದೆಗೆ ಹೋದ, ಇವತ್ತು ರಾತ್ರಿ ನನಗೆ ನಿದ್ದೆ ಬರೋದು ಡೌಟ್. ನನಗು ಒಬ್ಬ ಗಂಡು ಮಗ ಇದ್ದಾನೆ ಸ್ವಾಮಿ...... ಮನೆಗೆ ಹೋಗುತ್ತಾ ಸೇಬು ಹಣ್ಣು ತೆಗೆದುಕೊಂಡು ಮನೆಗೆ ಹೋದೆ. ಹೆಂಡತಿ ಅಂದರೆ ಸಾಮಾನ್ಯನಾ... ಭಯ, ಭಕ್ತಿ ಇರಬೇಕು ತಾನೇ?.

ನನ್ನ ರುಕ್ಮಿಣಿ( ರೊಕ್ಕಾ + Money) ಮತ್ತು ಸತ್ಯ ಭಾಮೆ ....

ಸದಾ ಟ್ರ್ಯಾಫಿಕ್ ಫುಲ್ಲ್ ಇರೋ ನನ್ನ ಬಾಯಿಗೆ ರೆಡ್ ಸಿಗ್ನಲ್ ಹಾಕಿದ್ದಳು ನನ್ನ ಹೆಂಡತಿ. ಸಿಗ್ನಲ್ ಇಲ್ಲದೇ ಸರಾಸ್‌ಗಾಟವಾಗಿ ತಿಂಡಿ-ತಿನಿಸುಗಳು ಹೋಗುವ ನನ್ನ ಬಾಯಿಗೆ ಬೀಗ ಬಿದ್ದಿತ್ತು. ಏನೇ? ಇವತ್ತು ಉಪವಾಸ ಎಂದೆ. ದೇವರಿಗೆ ಪೂಜೆ ಆದ ಮೇಲೆನೇ ತಿಂಡಿ , ಊಟ ಎಲ್ಲಾ ಎಂದಳು. ಐದು ವರ್ಷದಲ್ಲಿ ಇರಲಾರದ ನೀತಿ ನಿಯಮ ಏನೇ ಇದು ಕರ್ಮ ಎಂದೆ. ನೀವು ಈ ನೀತಿ ನಿಯಮ ಮಾಡಲಾರದಕ್ಕೆ ನಿಮಗೆ ಹೀಗೆ ಆರೋಗ್ಯ ಸರಿ ಇರುವದಿಲ್ಲ ಎಂದಳು. ನಾನು ಏನು ತಿನ್ನದೇ ಇದ್ದರೆ ಆರೋಗ್ಯದ ಗತಿ ಏನು ಎಂದೆ. ಎಲ್ಲಾ ನಿಮ್ಮ ಆರೋಗ್ಯದ ದೃಷ್ಟಿಯಿಂದನೆ ಮಾಡುತ್ತಾ ಇರುವದು ಎಂದು ದಬಾಯಿಸಿದಳು. ಇವತ್ತು ಬೇರೆ ಶನಿವಾರ ಹೇಗಾದರೂ ಮಾಡಿ ಆಫೀಸ್ ಗೆ ಹೋಗಿಬಿಟ್ಟರೆ ಸಾಕು ತಾನೇ ಎಲ್ಲ ಸಿಗುತ್ತೆ ಎಂದು ಯೋಚಿಸಿ, ಇವತ್ತು ಸ್ವಲ್ಪ ಕೆಲಸ ಇದೆ ಆಫೀಸ್ ಹೋಗಬೇಕು ಎಂದೆ. ಸುಮ್ಮನೇ ರೈಲು ಬಿಡಬೇಡಿ ಎಂದಳು. ಹಳೆಯ ಒಂದು ಮಿಂಚಂಚೆ ತಾರೀಖು ಬದಲಿಸಿ ಅವಳಿಗೆ ತೋರಿಸಿದೆ. ಆಯಿತು ಹೋಗಿ ಬನ್ನಿ, ಆದರೆ ಆಫೀಸ್ ನಲ್ಲಿ ಏನು ತಿನ್ನ ಬೇಡಿ ಎಂದಳು. ಆಯಿತು ಎಂದು ಖುಶಿಯಿಂದ ನನ್ನ ಗಾಡಿ ಸ್ಟಾರ್ಟ್ ಮಾಡಿ ಆಫೀಸ್ ಹೋದೆ.

ಆಫೀಸ್ ತಲುಪಿ ನೋಡುತ್ತೇನೆ. ತುಂಬಾ ಜನ ಬಂದಿದ್ದರು. ನಾನು ಮೊದಲ ಬಾರಿ ಶನಿವಾರ ಆಫೀಸ್ ಬಂದಿದ್ದು ನೋಡಿ, ನಟರಾಜ್ ನನ್ನ ಬಳಿ ಬಂದು ಏನ ಸರ್ ಇವತ್ತು ಎಂದ. ಅಜಿತ್ ನಗುತ್ತಾ ಎಲ್ಲಾ ಸಂಸಾರಿಗಳ ಹಣೆ ಬರಹ ಇಷ್ಟೇ ಎಂದ. ಹಾಗೇನೂ ಇಲ್ಲ ಎಂದೆ. ಎಲ್ಲರೂ ತಿಂಡಿಗೆ ಹೊರಟರು. ನಾನು ಹೋಗಬೇಕು ಅನ್ನಿಸಿದರೂ, ಪಾಪ ನನ್ನ ಮಡದಿ, ನನ್ನ ಸಲುವಾಗಿ ಇಷ್ಟು ಕಷ್ಟ ಪಡುತ್ತಿದ್ದಾಳೆ ಎಂದು ಅನ್ನಿಸಿ ನಾನು ಹೋಗಲಿಲ್ಲ. ಎಲ್ಲರೂ ತಿಂಡಿ ಮುಗಿಸಿ ಬಂದರು. ಅಷ್ಟರಲ್ಲಿ ನನ್ನ ಕರ್ಮಕ್ಕೆ ಒಂದು ತುಂಬಾ ಅರ್ಜೆಂಟ್ ಕೆಲಸ ನನ್ನ ಮಿಂಚಂಚೆ ಯಲ್ಲಿ ಬಂದಿತ್ತು.

ಅದನ್ನೇ ಯೋಚನೆ ಮಾಡುತ್ತಾ ಕುಳಿತಿದ್ದೆ. ನಟರಾಜ ಬಂದು ತನ್ನ ಮೊಬೈಲ್ ಚಾರ್ಜರ್ ಮರೆತು ಬಂದಿದ್ದೇನೆ, ನಿಮ್ಮ ಚಾರ್ಜರ್ ಉಪಯೋಗಿಸುತ್ತೇನೆ ಎಂದು ಅವಸರದಲ್ಲಿ ಬಂದು ಅದರಲ್ಲಿ ಸಿಕ್ಕಿಸಿದ. ಅದು ಅದರಲ್ಲಿ ಹೋಗಲಿಲ್ಲ ಎಂದು ಅದನ್ನು ಉಲ್ಟಾ ಮಾಡಿ ಹಾಕಿದ. ಅವನ ಮೊಬೈಲ್ ಚಾರ್ಜ್ ಮಾಡುವ ಸಲುವಾಗಿ ಗುದ್ದಾಡಿದ, ಏನು ಪ್ರಯೋಜನ ಆಗಲಿಲ್ಲ. ನಾನು ಸ್ವಲ್ಪ ಕೆಲಸದ ಒತ್ತಡದಲ್ಲಿ ಇದ್ದಿದ್ದರಿಂದ ಅವನನ್ನು ಗಮನಿಸಲಿಲ್ಲ. ಅಷ್ಟರಲ್ಲಿ ಅಜಿತ ಬಂದು ಏನಪ್ಪಾ? ನಟರಾಜ ನಿಮ್ಮ ಹುಡುಗಿ ಕರೆ ಬರಲಿಲ್ಲವಾ ಎಂದ. ನಟರಾಜ ಗುದ್ದಾಡಿ ಇದು ನನ್ನ ಮೊಬೈಲ್ ಗೆ ಬರಲ್ಲಾ ಎಂದು ನನ್ನ ಚಾರ್ಜ್ ಗೆ ಮೊಬೈಲ್ ಸಿಕ್ಕಿಸಿದ. ಅಜಿತ್ ಹಾಗಲಕಾಯಿ ಚಿಪ್ಸ್ ತೆಗೆದು ಕೊಂಡು ಬಂದಿದ್ದ. ನಮಗೂ ಸ್ವಲ್ಪ ಕೊಟ್ಟ. ಅದು ತುಂಬಾ ಚೆನ್ನಾಗಿ ಇತ್ತು, ಸ್ವಲ್ಪ ಕೂಡ ಕಹಿ ಇರಲಿಲ್ಲ. ಅದನ್ನು ತಿನ್ನುತ್ತಾ ಕೆಲಸ ಮುಗಿದ ಮೇಲೆ ಅಜಿತನಿಗೆ ಅದನ್ನು ಮಾಡುವ ವಿಧಾನ ಕಳುಹಿಸು ಎಂದು ಹೇಳಿದೆ. ಅಷ್ಟರಲ್ಲಿ ನನಗೆ ಆಫೀಸ್ ಫೋನ್ ಗೆ ಒಂದು ಕರೆ ಬಂದಿತ್ತು. "ಎಲ್ರಿ ಹಾಳಾಗಿ ಹೋಗಿದ್ರೀ" ಎಂದು ನನ್ನ ಮಡದಿ ಕಿರುಚಿತ್ತ ಇದ್ದಳು. ಮೊಬೈಲ್ ಯಾಕೆ? ಸ್ವಿಚ್ ಆಫ್ ಮಾಡಿದ್ದೀರ ಎಂದು ಆಫ್ ಮೂಡಿನಲ್ಲಿ ಬೈದಳು. ನಾನು ಇಲ್ವಲ್ಲಾ ಎಂದು ನನ್ನ ಮೊಬೈಲ್ ನೋಡಿದೆ ನಿಜವಾಗಿಯೂ ಆಫ್ ಆಗಿತ್ತು. ಓ ಹೌದು ಕಣೇ ಆಫ್ ಆಗಿದೆ ಸಾರೀ ಎಂದೆ. ಮತ್ತೆ ಯಾರದು ಫೋನ್ ಎತ್ತಿದ ಹುಡುಗಿ ಎಂದು ದಬಾಯಿಸಿದಳು. ಕಡೆಗೆ ಅವಳು ನಮ್ಮ ಆಫೀಸ್ ರಿಸೆಪ್ಶನಿಸ್ಟ್ ಎಂದು ತಿಳಿಹೇಳಿದೆ.ಆದರೂ, ನನಗೇನೋ ಡೌಟು ಎಂದು ಕೋಪಿಸಿಕೊಂಡು ಫೋನ್ ಕಟ್ ಮಾಡಿದಳು.

ಅಷ್ಟರಲ್ಲಿ ಓಡಿ ಬಂದ ನಟರಾಜ, ಏನ್ರೀ ಸರ್ ನನ್ನ ಮೊಬೈಲ್ ಹಾಳು ಮಾಡಿಬಿಟ್ಟಿರಲ್ಲಾ ಸರ್ ಎಂದ. ಎಂತಹ ಚಲೋ ನನ್ನ ಹುಡುಗಿ ಕರೆ ಮಾಡುತ್ತಾ ಇತ್ತು. ಅದು ಐದು ವರ್ಷದ ಫೋನ್ ಎಂದ. ನನಗೆ ಆಶ್ಚರ್ಯ ನಾನೇನು ಮಾಡಿದೆ ಎಂದೆ. ನಿಮ್ಮ ಚಾರ್ಜರ ದೆಸೆಯಿಂದ ಅಂದ. ನಾನು ನನ್ನ ಮೊಬೈಲ್ ಆನ್ ಮಾಡಿದೆ, ಆದರೆ ಚಾರ್ಜಾರ್ ಕೆಟ್ಟು ಹೋಗಿತ್ತು. ಮತ್ತೆ ಅರ್ಧ ಘಂಟೆಯಲ್ಲಿ ಹೋಗಿ ಹೊಸ ಮೊಬೈಲ್ ಕೊಂಡು ಬಂದಿದ್ದ. ನನ್ನ ಮೊಬೈಲ್ ಚಾರ್ಜ್ ಇಟ್ಟರೆ ಸಾಕು ಮೊಬೈಲ್ ಆಫ್ ಆಗುತಿತ್ತು.

ಕಡೆಗೆ ಎಲ್ಲ ಕೆಲಸ ಮುಗಿಸಿ, ಮನೆ ದಾರಿ ಹಿಡಿದೆ. ಬರುವ ದಾರಿಯಲ್ಲಿ ಹಾಗಲಕಾಯಿ ತೆಗೆದು ಕೊಂಡು ಹೋದೆ. ನನ್ನ ಮಡದಿ ತುಂಬಾ ಕೋಪ ಮಾಡಿ ಕೊಂಡಿದ್ದಳು. ನಾನು ಹೋಗುತ್ತಲೇ "ಸತ್ಯ ಭಾಮೆ... ಸತ್ಯ ಭಾಮೆ... ಕೋಪವೆನೇ ನನ್ನಲಿ" ಎಂದು ಹಾಡುತ್ತಾ ಮನೆ ಒಳಗಡೆ ಕಾಲು ಇಟ್ಟೆ. ತುಂಬಾ ಕೋಪಗೊಂಡಿದ್ದಳು. ತುಂಬಾ ಹಸಿವೆ ಕಣೇ ಏನು ತಿಂದಿಲ್ಲಾ ಎಂದು ಹೇಳಿದಾಗ, ಇದ್ದ ಕೋಪವೇಲ್ಲಾ ಮರೆತು ಮತ್ತೆ ಶಾಂತ ರೀತಿಯಲ್ಲಿ ಊಟಕ್ಕೆ ಹಾಕಿದಳು. ಊಟ ಆದ ಮೇಲೆ ಸಾವಕಾಶವಾಗಿ, ನನ್ನ ಹತ್ತಿರ ಬಂದು ನಿಜ ಹೇಳಿ ಮೊಬೈಲ್ ಯಾಕೆ ಆಫ್ ಮಾಡಿದ್ದು. ನಿಜವಾಗಿಯೂ ಆಫೀಸ್ ನಲ್ಲಿ ಕೆಲಸ ಇತ್ತಾ ಅಥವಾ...? ಎಂದಳು. ನಾನು ನಡೆದ ವಿಚಾರನೆಲ್ಲಾ ಹೇಳಿ, ನಾನು ನಾಮ ಮಾತ್ರಕ್ಕೆ ಗೋಪಾಲ ಕಣೇ, ಏನೋ ಬೇಕಾದರೆ ಸ್ವಲ್ಪ ದನ ಕಾಯಬಹುದು ಎಂದೆ. ಅವಳು ಜೋರಾಗಿ ನಕ್ಕೂ ಸುಮ್ಮನಾದಳು.

ಸಂಜೆ, ಲೇ.. ಹಾಗಲಕಾಯಿ ಚಿಪ್ಸ್ ಮಾಡೇ ಎಂದು ಅದರ ಮಾಡುವ ವಿಧಾನದ ಪ್ರಿಂಟ್ ಅವಳಿಗೆ ಕೊಟ್ಟೆ. ಇದನ್ನು ಏಕೆ ತಂದಿರಿ ನಾನು ತಿನ್ನುವದಿಲ್ಲ ಎಂದಳು. ಏಕೆ? ಎಂದು ಕೇಳಿದಾಗ, ಚೊಚ್ಚಲ ಗಂಡು ಮಗ ಇದ್ದರೆ ತಿನ್ನ ಬಾರದು ಎಂದು ಹೇಳಿದಳು. ಆಯಿತು ನಮ್ಮಿಬ್ಬರಿಗೆ ಮಾಡು ಎಂದೆ. ಅದೆಲ್ಲ ಆಗೋಲ್ಲ ನೀವೇ ಮಾಡಿಕೊಳ್ಳಿ. ಅದನ್ನು ಚೊಚ್ಚಲ ಗಂಡು ಮಗನ ತಾಯಿ ಕತ್ತರಿಸಬಾರದು ಕೂಡ ಎಂದಳು. ಕಡೆಗೆ ನಾನೇ ಮಾಡಿದೆ. ಆಗ ಕರೆಂಟ್ ಹೋಯಿತು, ನಾನು ಅವಳ ಹಿಂದೆ ಬಂದು ನಿಂತೆ. ಅವಳು ಹೆದರಿ ಬಿಟ್ಟಳು. ಏನೇ ಏನು? ಆಯಿತು ಎಂದೆ. ನೀವೇ ಹೇಳಿದ್ದೀರಲ್ಲ ಪತಿಯೇ ಪರರ ದೈವ ಎಂದು. ನನಗೆ ದೆವ್ವ ತಾನೇ ಎಂದು ಹಿಯಾಳಿಸಿದಳು.

ಅಷ್ಟರಲ್ಲಿ ಪಕ್ಕದ ಮನೆ ಪ್ರಿಯ ಬಂದ ಸದ್ದು ಕೇಳಿಸಿತು. ನಾನು ಬೇಕು ಅಂತಲೇ " ಸತ್ಯಭಾಮ ಬಾರಮ್ಮ ನೀಡು ಒಂದು ಉಮ್ಮಾ .." ಎಂದು ಹಾಡುತ್ತಾ ಇದ್ದೆ. ಯಾಕೆ ರಾಯರು ಮಧ್ಯಾಹ್ನ ಏನೇನೋ ಹೇಳಿ ಮತ್ತೆ ನಿಮ್ಮ ವರಸೆ ಶುರು ಹಚ್ಚಿಕೊಂಡಿದ್ದೀರಾ ಎಂದಳು. ನಿನಗೆ ಹಾಡಿದ್ದು ಕಣೇ, ನೀನೆ ನನ್ನ ರುಕ್ಮಿಣಿ( ರೊಕ್ಕಾ + Money), ಮತ್ತು ಸತ್ಯ ಭಾಮೆ ಎಂದು ಪುಸಲಾಯಿಸಿದೆ. ಮಗನ ಹೋಮ್ ವರ್ಕ್ ಮಾಡಿಸಿ ಎಂದು ಹೇಳಿದಳು. ಗುಡ್ ಮ್ಯಾನರ್ಸ್ ಚಾರ್ಟ್ ಅಂಟಿಸುವದು ಇತ್ತು. ಅದನ್ನು ನೋಡಿ, ನಿಮ್ಮ ಅಪ್ಪನಿಗೆ ಯಾವಾಗ? ಗುಡ್ ಮ್ಯಾನರ್ಸ್ ಬರುತ್ತೋ ನಾಕಾಣೆ ಎಂದು ಹೇಳಿ ಅಡಿಗೆ ಮನೆಗೆ ಹೊರಟು ಹೋದಳು.

Wednesday, November 17, 2010

ತರ್ಲೆ ಮಂ(ಗ)ಜನ ತಮಾಷೆಗಳು ...

ನಾವೆಲ್ಲರೂ ಮಂಜನ ಮನೆಗೆ ಊಟಕ್ಕೆ ಹೋಗಿದ್ದೆವು. ಮಂಜನ ಮನೆಗೆ ಮಂಜನ ತಂಗಿ ಶಾಂತಲಾ ತನ್ನ ಮಕ್ಕಳು ಸಂಕೇತ ಮತ್ತು ಶರತ ಜೊತೆ ಬಂದಿದ್ದಳು.

ಮಂಜ ನಿನಗೆ ಏನೇನು? ಬರುತ್ತೆ, ಶಾಲೆಯಲ್ಲಿ ನಿಮ್ಮ ಟೀಚರ್ ಏನೇನು ಹೇಳಿದ್ದಾರೆ ಎಂದು ಅಳಿಯ ಸಂಕೇತನಿಗೆ ಕೇಳಿದ.
ಅದಕ್ಕೆ ಸಂಕೇತ ಅವರಿಗೆ ಟೀಚರ್ ಅನ್ನಬಾರದು ಅವರು ಮಿಸ್ ಎಂದ.
ಮಿಸ್ ಅಂದರೆ ಇನ್ನೂ ಮದುವೆ ಆಗಿಲ್ಲವಾ? ಎಂದ.
ಪಾಪ ಆರು ವರ್ಷದ ಸಂಕೇತನಿಗೆ ಏನು? ತಿಳಿಯಬೇಕು. ಅವರ ಅಮ್ಮ ಶಾಂತಾ ಮದುವೆ ಆಗಿದೆ ಕಣೋ ಎಂದಳು. ನಿನಗೆ ಎರಡನೆ ಮದುವೆ ಮಾಡಿಕೊಳ್ಳುವ ಆಸೆ ಏನೋ? ನೋಡಿ ಅತ್ತಿಗೆ ಎಂದು ಅವನ ಹೆಂಡತಿಗೆ ಹೇಳಿದಳು.
ಆಯಿತು ಏನೇನು ಹೇಳಿದ್ದಾರೆ ಸಂಕೇತ ನಿಮ್ಮ ಮದುವೆಯಾದ ಮಿಸ್ ಎಂದು ಮಂಜ ಕೇಳಿದ.
ಬಾ ಬಾ ಬ್ಲ್ಯಾಕ್ ಶೀಪ ಹಾವಿ ಎನಿ ಹುಲ್ಲ ಎಂದ ತೊದಲುತ್ತಾ ಹೇಳಿತು.
ಎಲ್ಲಾ ಅರ್ಥ ಆಯಿತು. ಆದರೆ, ಕೆಲವು ಬಿಟ್ಟು ಎಂದ ಮಂಜ. ಬಾ.. ಬಾ.. ಎಂದು ಏನನ್ನು ಕರೆದೆ . ಹಾವಿಗಾ? ಮತ್ತೆ ಅದಕ್ಕೆನು ಗೊತ್ತು ಹುಲ್ಲ ಇದೆಯೋ ಇಲ್ಲವೋ ಎಂದು ತಮಾಷೆಗೆ ಕೇಳಿದ.
ಈಗ ಮಂಜನ ತಂಗಿ ಶಾಂತಲಾ ಕೋಪ ತಾರಕಕ್ಕೆ ಏರಿತ್ತು. ಸುಮ್ಮನೇ ಯಾಕೆ ಕಾಡುತ್ತೀ ಮಗೂನಾ ಎಂದಳು. ಸಂಕೇತನ ಅಜ್ಜಿ, ಮಂಜನ ಹೆಂಡತಿ ಸೇರಿ ಮಂಗಳಾರತಿ ಮಾಡಿದರು. ಅಮ್ಮ, ನೀನು ಕೋಪ ಮಾಡಿಕೊಳ್ಳ ಬೇಡ ನಿನಗೆ ಮೊದಲೇ ಬ್ರೆಡ್ ಸ್ಪೆಶಲ್ ಎಂದ. ಹಾಗಂದರೆ ಎಂದು ನಾನು ಕೇಳಿದೆ, ಅದಕ್ಕೆ ಮಂಜ ಅಮ್ಮ ಬ್ಲಡ್ ಪ್ರೆಶರ್ ಗೆ ಬ್ರೆಡ್ ಪ್ರೆಶರ್ ಅನ್ನುತ್ತಾರೆ ಎಂದ. ನಾನು ಅದನ್ನು ಬ್ರೆಡ್ ಸ್ಪೆಶಲ್ ಮಾಡಿರುವೆ ಎಂದ. ಆಯಿತು ಬಿಡಪ್ಪ ನೀನು ಜಾಣ ಎಂದು ಮಂಜನ ಅಮ್ಮ ಕೋಪ ಮಾಡಿಕೊಂಡರು. ಅಷ್ಟರಲ್ಲಿ ಮಂಜನ ಮಡದಿ ಕೆಂಗಣ್ಣಿನಿಂದ ಮಂಜನನ್ನು ನೋಡಿದಳು. ಹೆಂಡತಿಗೆ ಹೆದರಿದರು ಕಾಡುವುದನ್ನು ಮಾತ್ರ ಬಿಡಲಿಲ್ಲ. ನಾವು ಹೋಗಲಿ ಬಿಡಪ್ಪ ಸುಮ್ಮನೇ ಎಂದರು ಕೇಳಬೇಕಲ್ಲ ಆಸಾಮಿ.
ಏ ಸುಮ್ಮನಿರು ನೀನು, ನಾನು ಕೇಳುತ್ತಾ ಇರೋದು ನನ್ನ ಅಳಿಯನಿಗೆ ಎಂದ. ಪುಟ್ಟ ನಿನಗೆ ಚ್ಯಾಕ್ಲೇಟ್ ಕೊಡಸುತ್ತೇನೆ ಎಂದ.
ಮತ್ತೆ ಶುರು ಹಚ್ಚಿಕೊಂಡ ಮತ್ತೆ ಏನೇನು ಹೇಳಿದ್ದಾರೆ ಎಂದ.
ಜೋನಿ ಜೋನಿ ಎಸ್ ಪಾಪ.. ಈಟಿಂಗ್ ಶುಗರ್ ನೋ ಪಾಪ.. ಟೆಲ್ಲಿಂಗ್ ಲೈ ನೋ ಪಾಪ.. ಓಪನ್ ಯುವರ್ ಮೌತ್ ಹಾ ಹಾ ಹಾ ಎಂದ.
ಸುಳ್ಳು ಹೇಳುವ ಕಲೆ ಎಷ್ಟು ಚಂದ ಹೇಳಿಕೊಟ್ಟಿದ್ದಾರೆ ಕಣೋ ಎಂದು ತಲೆ ಚಚ್ಚಿಕೊಂಡ.
ಮತ್ತೆ ಸಂಕೇತ ರೇನ್ ರೇನ್ ಗೋ ಅವೇ ಲಿಟ್ಲ್ ಜಾನೀ ವಾಂಟ್ಸ್ ಟು ಪ್ಲೇ ಎಂದು ಹೇಳಿದ.
ಲೇ ಇದನ್ನು ಯಾರಾದರೂ ಬರಗಾಲ ಪ್ರದೇಶದ ರೈತರು ಕೇಳಿದರೆ ನಿನಗೆ ನಿಮ್ಮ ಮಿಸ್ಗೆ ಸೇರಿ ಒದಿತಾರೆ.

ಮತ್ತೆ ಮಂಜ ಒಂದಿಷ್ಟು ಕನ್ನಡದ ರೈಮ್ಸ್ ಆನೆ ಬಂತೊಂದಾನೆ, ನಾಯಿಮರಿ ನಾಯಿಮರಿ, ಒಂದು ಎರಡು ಬಾಳೆಲೆ ಹರಡು, ಇರುವೆ-ಇರುವೆ ಎಲ್ಲಿರುವೆಗಳಾದ ಎಲ್ಲವುಗಳನ್ನೂ ಸಂಕೇತಗೆ ಹೇಳಿದ. ಅದೆಲ್ಲವೂ ಕೇಳಿದ ಮೇಲೆ ಸಂಕೇತ ಮಂಜನಿಗೆ, ಮಾಮಾ ನಿನಗೆ ಯಾರು ಹೇಳಿದರು ಇವನೆಲ್ಲಾ ಎಂದು ಕೇಳಿದ. ಅದಕ್ಕೆ ಮಂಜ ನನ್ನ ಮಿಸ್ ಎಂದು ತನ್ನ ಮಡದಿಯನ್ನು ತೋರಿಸಿದ. ಅವಳು ಎಮ್ಮೆ(M.A) ಗೊತ್ತಾ ಎಂದ. ಯಾರಿಗೂ ತಿಳಿಯಲಿಲ್ಲ ಸಧ್ಯ.

ಮತ್ತೆ ಅವನಿಗೆ ತಪ್ಪು ತಪ್ಪಾಗಿ ಏ ಫಾರ್ ಅವರೆಕಾಯಿ , ಬೀ ಫಾರ್ ಬದಾನೆ ಕಾಯಿ, ಸೀ ಫಾರ್ ಚವಳಿಕಾಯಿ ಎಂದೆಲ್ಲ ಹೇಳುತ್ತಿದ್ದರೆ, ಎಲ್ಲರೂ ನಗುತ್ತಿದ್ದರು. ಅವನ ತಂಗಿ ತುಂಬಾ ಕೋಪ ಮಾಡಿಕೊಂಡಿದ್ದಳು. ನಾಳೆ ಪರೀಕ್ಷೆಯಲ್ಲಿ ಇದನ್ನೇ ಹೇಳುತ್ತಾನೆ ಎಂದು.ಎಲ್ಲರೂ ಊಟ ಮುಗಿಸಿದೆವು. ಊಟ ಮುಗಿದ ಮೇಲೆ ಸೀರಿಯಲ್ ಗಳ ಬಗ್ಗೆ ಚರ್ಚೆ ಶುರು ಆಯಿತು. ನಾನು ಕೌನ್ ಬನೇಗಾ ಕರೋಡ ಪತಿಯಲ್ಲಿ ಕೋಟಿ ಸೋತ ಮನುಷ್ಯನ ಬಗ್ಗೆ ಅನುಕಂಪದ ಮಾತು ಆಡಿದೆ. ಅದಕ್ಕೆ ನಮ್ಮ ಮಂಜ ಸರಿಯಾಗಿ ಮಾಡಿದ್ದಾನೆ ಗಣಪತಿ ಅವನಿಗೆ ಎಂದ. ಪಾಪ ಪ್ರತಿ ವರ್ಷ ಗಣಪತಿ ಇಟ್ಟು, ಕಡೆ ದಿನ ಅವನ ಮುಂದೆ ಡ್ಯಾನ್ಸ್ ಮಾಡುತ್ತಾ ಹೋಗಿ ನೀರಿನಲ್ಲಿ ಮುಳುಗಿಸುತ್ತಾನೆ, ಈಗ ಡ್ಯಾನ್ಸ್ ಮಾಡಿ ಮುಳುಗಿಸುವುದು ಗಣಪತಿಯ ಸರದಿ ಎಂದ. ಎಲ್ಲರೂ ಜೋರಾಗಿ ನಕ್ಕೆವು.

ಮಂಜನ ಹೆಂಡತಿ ನೋಡಿ ನಿಮ್ಮ ಗೆಳೆಯ ಗೋಪಾಲ್ ತಮ್ಮ ಹೆಂಡತಿಯ ಬಗ್ಗೆ ಬ್ಲಾಗ್ ನಲ್ಲಿ ಏನೇನೋ ಪ್ರೀತಿಯಿಂದ ಬರೀತಾ ಇರುತ್ತಾರೆ ಎಂದಳು. ನೀವು ಇದ್ದೀರಾ? ಯಾವುದಕ್ಕೂ ಉಪಯೋಗ ಇಲ್ಲ ಎಂದಳು. ಲೇ ನಾನು ಏನು? ಎಂದು ತಿಳಿದಿದ್ದೀಯಾ ನಾನು ಒಂದು ಸೀರಿಯಲ್ ತೇಗೆಯಬೇಕು ಎಂದು ಇದ್ದೇನೆ. ಸೀರಿಯಲ್ ಪೂರ್ತಿ ನಮ್ಮಿಬ್ಬರ ಬಗ್ಗೆ ಇರುತ್ತೆ ಗೊತ್ತಾ ಎಂದ. ಅದರ ಹೆಸರು ಏನು? ಗೊತ್ತಾ "ಸಂಸಾರಿ ಕ್ರೈಮ್ ಸ್ಟೋರಿ" ಎಂದ. ಅದಕ್ಕೆ ನಾವೆಲ್ಲರೂ ನಕ್ಕೆವು. ಥೇಟ ವಿಲನ್ ತರಹ ನಗುತ್ತೀರಿ ಎಂದಳು ಮಂಜನ ಮಡದಿ ಸಾವಿತ್ರಿ. ಅದಕ್ಕೆ ಮಂಜ ಕೋಪದ ಮುಖದಿಂದ ಇದ್ದ ಅವಳಿಗೆ "ಹಂಗ್ಯಾಕೆ ಮಾಡಿ ಮಾರಿ, ಕಾಮನಕಟ್ಟಿ ದಾರಿ" ಎಂದ. ಮಂಜನ ಮಡದಿ ತುಂಬಾ ಕೋಪ ಮಾಡಿಕೊಂಡು, ನೀವು ಇನ್ನೂ ಸ್ವಲ್ಪ ದಿವಸ ಹೀಗೆ ಆಡುತ್ತಿದ್ದರೆ, ನಾನು ನಿಜವಾಗಿಯೂ ಮನೆ ದಾರಿ ಹಿಡಿಯುತ್ತೇನೆ ಎಂದಾಗ ಮಂಜ ಸುಮ್ಮನಾಗಿದ್ದ. ಸಂಜೆಯವರೆಗೆ ಮಂಜನ ಮನೆಯಲ್ಲಿ ಇದ್ದು ಕಾಫೀ ಮುಗಿಸಿ ಮನೆಗೆ ಬಂದೆವು.

ಕಲ್ಲಪ್ಪನ ಮಗ ಡಾಕುಟರ್ ....

ಕಲ್ಲಪ್ಪ ತನ್ನ ಮಗನನ್ನು ಕಷ್ಟ ಪಟ್ಟು ಓದಿಸಿ, ವಿದ್ಯಾವಂತನನ್ನಾಗಿ ಮಾಡಿದ್ದ. ಮಗ ಎಂ ಬಿ ಬಿ ಎಸ್ ಮಾಡಿ ಬೆಂಗಳೂರು ಸೇರಿದ್ದ. ತನಗೆ ಒಪ್ಪತ್ತು ಗಂಜಿ ಇದ್ದರು ಮಗನಿಗೆ ಸರಿಯಾಗಿ ದುಡ್ಡು ಕಳುಹಿಸುತ್ತಿದ್ದ. ಅವನ ಒಂದೇ ಆಸೆ ತಮ್ಮ ಕಷ್ಟಗಳಿಗೆ ಮಗ ನೆರವಿಗೆ ಬರುತ್ತಾನೆ ಎಂದು. ಅವನಿಗೆ ಡಾಕ್ಟರ್ ಎಂದು ಅನ್ನಲು ಬರದಿದ್ದರೂ ಊರ ತುಂಬಾ ನನ್ನ ಮಗ ಡಾಕುಟರ್ ಎಂದು ಹೇಳೋಕೆ ಎಮ್ಮೆ ಅನ್ನಿಸುತ್ತದೆ ಎಂದು ಎಲ್ಲರಲ್ಲಿಯೂ ಕೊಚ್ಚಿಕೊಳ್ಳುತ್ತಿದ್ದ. ಮೊದಮೊದಲು ಸ್ವಲ್ಪು ದುಡ್ಡು ಕಳುಹಿಸುತ್ತಿದ್ದ ಮಗ, ಅನಂತರ ಕಡಿಮೆ ಮಾಡುತ್ತಾ ಬಂದ. ಮತ್ತೆ ಕೆಲವೊಂದು ತಿಂಗಳು ಕಳಿಸುತ್ತಲೇ ಇರಲಿಲ್ಲ. ಫೋನ್ ಮಾಡಿದರೆ ನಾನು ಆಮೇಲೆ ಮಾಡುತ್ತೇನೆ ಎಂದು ಹೇಳಿ ತಪ್ಪಿಸಿಕೊಳ್ಳುತ್ತಿದ್ದ. ಕಲ್ಲಪ್ಪ ಇನ್ನೂ ಕಲ್ಲಿನ ಹಾಗೆ ಕುಳಿತರೆ ಏನು ನಡೆಯುವದಿಲ್ಲ ಎಂದು ಮಗನನ್ನು ನೋಡಲು ತಾನೇ ಬೆಂಗಳೂರಿಗೆ ಹೊರಟು ನಿಂತ. ಅವನಿಗೆ ಇಷ್ಟ ಎಂದು ಒಂದು ನಾಟಿ ಕೋಳಿ ತೆಗೆದುಕೊಂಡು ಹೊರಟ. ಬಸ್ ನಲ್ಲಿ ಎಲ್ಲರೂ ಅವನಿಗೆ ಛೀಮಾರಿ ಹಾಕಿದರು, ಕೋಳಿ ತೆಗೆದುಕೊಂಡು ಬಂದಿದ್ದಕ್ಕೆ. ಆದರೂ ಅದರ ಬಾಯಿಗೆ ಒಂದು ಅರಿವೆ ಕಟ್ಟಿ ಅದನ್ನು ಇಟ್ಟ.

ಮರುದಿನ ಬೆಂಗಳೂರು ಬಂದು ತಲುಪಿದ್ದ. ಮಗನಿಗೆ ಹೇಳದೇ ಬಂದಿದ್ದ. ಇಳಿದೊಡನೆ ಮಗನಿಗೆ ಫೋನ್ ಮಾಡಿದ, "ನೀವು ಕರೆ ಮಾಡುತ್ತಿದ್ದ ಚಂದಾದರರು ಸ್ವಿಚ್ ಆಫ್ ಮಾಡಿದ್ದಾರೆ" ಎಂಬ ಸಂದೇಶ ಹೊರ ಬರುತಿತ್ತು. ಏ ನನ್ನ ಮಗನಿಗೆ ಫೋನ್ ಕೊಡಮ್ಮಿ ಎಂದು ಕಿರುಚುತ್ತಿದ್ದ ಕಲ್ಲಪ್ಪ. ನೆರೆದವರೆಲ್ಲರೂ ಇವನನ್ನೇ ನೋಡುತ್ತಿದ್ದರು ಅದರ ಅರಿವು ಅವನಿಗೆ ಇರಲಿಲ್ಲ. ಕೊನೆಗೆ ಒಬ್ಬ ಹುಡುಗನಿಗೆ ಅವನ ವಿಳಾಸ ತೋರಿಸಿದ, ಆ ಹುಡುಗನ ಸಹಾಯದಿಂದ ಬಸ್ ಹತ್ತಿ ಹೊರಟ. ಅವನು ಕುಳಿತಿದ್ದು ಮುಂದಿನ ಸೀಟ್ ನಲ್ಲಿ, ಪ್ರತಿ ಸ್ಟಾಪ್ ಗೆ ಬಸ್ ಚಾಲಕನಿಗೆ ಕೇಳುತ್ತಾ ಇದ್ದ. ಅಷ್ಟರಲ್ಲಿ ಒಬ್ಬ ಹುಡುಗಿ ಬಂದು ಏಳಿ... ಎದ್ದೇಳಿ.. .ಎಂದಳು. ಏಕಮ್ಮ ಇದು ನನ್ನ ಸೀಟ್ ಎಂದ. ಏ .. ಏಳಿ ಲೇಡಿಸ್ ಸೀಟ್ ಎಂದಳು. ಏನೂ ಅರಿಯದ ಅವ ಹಾಗೆ ಎಂದರೆ ಅಂದ. ಹೆಂಗಸರ ಸೀಟ್ ಎಂದಳು. ಅವನ ಊರಿನಲ್ಲಿ ಈ ರೀತಿ ಎಂದು ಆಗಿರಲಿಲ್ಲ. ವಯೋ ವೃದ್ಧರ ಸೀಟ್ ಇದ್ದರು, ಅದರ ಬಗ್ಗೆ ಅವನಿಗೆ ಅರಿವು ಇರಲಿಲ್ಲ ಮತ್ತು ಓದಲು ಬರುತ್ತಿರಲಿಲ್ಲ. ಅದರಲ್ಲಿ ಕೆಲ ಹುಡುಗರು ಕುಳಿತಿದ್ದರು. ಕಡೆಗೆ ಬಸ್ ಸ್ಟಾಪ್ ಬಂತು. ಇಳಿದುಕೊಂಡು ಮಗನ ಪತ್ತೆ ಬಗ್ಗೆ ಎಲ್ಲರಲ್ಲಿಯೂ ಕೇಳುತ್ತಾ ಹೊರಟ. ಕೈಯಲ್ಲಿ ಚಿಕ್ಕ ಚೀಲ ಮತ್ತು ಕೋಳಿ ಇವನನ್ನು ನೋಡಿ ಕೆಲವರು ಅವನನ್ನು ಬಿಕ್ಷುಕ ಎಂದು ತಿಳಿದಿದ್ದು ಇದೆ.

ಕಡೆಗೂ ಮನೆ ಸಿಕ್ಕಿ ಬಿಟ್ಟಿತು. ಮನೆ ಒಳಗೆ ಹೆಜ್ಜೆ ಇಟ್ಟ ಕಲ್ಲಪ್ಪ , ಕೂಡಲೇ ಒಂದು ಹುಡುಗಿ ಹೂ ಆರ್ ಯೂ ಎಂದಳು. ಹೌಹಾರಿ ಬಿಟ್ಟ ಕಲ್ಲಪ್ಪ. ಪಿಕಿ ಪಿಕಿ ಎಂದು ಅವಳನ್ನೇ ನೋಡುತ್ತಾ ನಿಂತು ಬಿಟ್ಟ. ಮತ್ತೆ ಕೇಳಿದಳು ಹೂ ಆರ್ ಯೂ ಎಂದು. ನನ್ನ ಮಗ .... ಎಂದ. ವಾಟ್ ಎಂದಳು. ಸುರೇಶ ಎಂದು ಕೇಳಿದ, ಅದನ್ನು ಕೇಳಿದ ಆ ಹುಡುಗಿ ಒಳಗೆ ಹೋಗಿ ಮಲಗಿದ್ದ ಸುರೇಶ್ ನನ್ನು ಕರೆ ತಂದಳು. ಐ ಟೋಲ್ಡ್ ಯೂ ನಾಟ್ ಟೂ ವೇಕ್ ಮಿ ಎನ್ನುತ್ತಾ ಬರ್ಮುಡಾ ಏರಿಸುತ್ತಾ ಹೊರಗಡೆ ಬಂದ. ಅಪ್ಪ ನೀನು ಯಾವಾಗ ಬಂದೆ ಅಂದ. ಆ ಹುಡುಗಿಗೆ ಹಿ ಈಸ್ ಮೈ ಫಾದರ್ ಕಲಪ್ಪ ಎಂದ. ಓ ಯುವರ್ ಫಾದರ್ ಓಕೇ... ಓಕೇ...ಐ ಥಾಟ್ ಸಮ್ ಪೇಶೆಂಟ್ ಎಂದಳು. ಕಳ್ಳ ಅಪ್ಪ ವೇರಿ ಗುಡ್ ನೇಮ್ ಎಂದಳು. ಅವರಿಬ್ಬರು ಹಿಂದಿ, ಇಂಗ್ಲೀಶ್ ನಲ್ಲಿ ಏನೇನೋ ಮಾತನಾಡುತ್ತಾ ಇದ್ದರು. ಕಲ್ಲಪ್ಪನಿಗೆ ಏನು ಅರ್ಥವಾಗದೆ ಸುಮ್ಮನೇ ನಿಂತು ಬಿಟ್ಟ. ಅವನಿಗೆ ಇವನ ಮೇಲೆ ಅನುಮಾನ ಮದುವೆ ಮಾಡಿಕೊಂಡಿದ್ದಾನೆ ಎಂದು. ಮಗಾ.. ಮದುವೆ ಮಾಡಿಕೊಂಡಿದ್ದೀಯಾ? ಎಂದು ಕೇಳಿದ. ಹಾಗೇನೂ ಇಲ್ಲ ಎಂದ. ಮತ್ತೆ ಇವಳು?.... ಅದು... ಅದು.. ಎಂದು ತಡವರಿಸಿದ. ಏಕೆಂದರೆ ಅಪ್ಪನಿಗೆ ಹೇಗೆ ತಿಳಿಯಬೇಕು ಲಿವಿಂಗ್ ಟುಗೆದರ್ ಎಂದರೆ. ಸುಮ್ಮನೇ ಜೊತೆಗೆ ಇದ್ದೇವೆ ಎಂದ. ಅಪ್ಪನಿಗೆ ಕೋಪ ನೆತ್ತಿಗೆ ಏರಿತು, ಮಗ ತಪ್ಪು ದಾರಿ ಹಿಡಿದಿದ್ದಾನೆ ಎಂದು. ನಾಚಿಕೆ ಆಗೋಲ್ಲ ಎಂದೆಲ್ಲ ಬೈಯಲು ಶುರು ಮಾಡಿದ. ನಾಚಿಕೆ ಯಾಕೆ? ಇದೆಲ್ಲ ಕಾಮನ್ ಅಂದ. ಅವನಿಗೆ ತಿಳಿಯಲಿಲ್ಲ. ಅಂದರೆ ಏನೋ ಕಾಮಣ್ಣ ಎಂದು ಬೈದ. ಅಷ್ಟರಲ್ಲಿ ಒಳಗಡೆ ಇಂದ ಬಂದ ಆ ಹುಡುಗಿ ವಾಟ್ ಈಸ್ ದಿಸ್ ಸ್ಮೆಲ್ ಎಂದಳು. ಕಲ್ಲಪ್ಪ ತಂದ ನಾಟಿ ಕೋಳಿ ಅವನು ಕಟ್ಟಿದ್ದ ಬಿಗಿ ಅರಿವೇಗೆ ಸತ್ತು ಹೋಗಿ ನಾರುತಿತ್ತು. ಕಡೆಗೆ ಅದನ್ನು ಎಸೆದು ಸ್ನಾನ ಮಾಡಿ ಬಾ, ಎಲ್ಲ ಹೇಳುತ್ತೇನೆ ಎಂದ.

ಸ್ನಾನ ಮಾಡಿದ ಮೇಲೆ ಕೂಡ ಅದೇ ಪ್ರಶ್ನೆ ಯಾರು ಅವಳು ಎಂದು. ಮದುವೆ ಮಾಡಿಕೊ ಮಗ ಎಂದ. ಸುಮ್ಮನೇ ಜೊತೆಗೆ ಇದ್ದರೆ ಬೇರೆಯರು ತಪ್ಪು ತಿಳಿಯುತ್ತಾರೆ ಮಗ ಎಂದ. ಅದೆಲ್ಲ ಏನು ಇಲ್ಲ ನಮ್ಮಲ್ಲಿ ಹೊಂದಾಣಿಕೆ ಆದರೆ ಮಾತ್ರ ಮದುವೆ ಆಗುತ್ತೇವೆ ಎಂದ. ಇನ್ನೂ ಒಂದು ವರ್ಷ ಕಾಯಿರಿ ಎಂದ. ಆಮೇಲೆ ಬೇಡ ಎಂದರೆ ಅವಳು ಅವಳ ಪಾಡಿಗೆ , ನಾನು ನನ್ನ ಪಾಡಿಗೆ ಎಂದ. ಹಾಗೆಲ್ಲಾ ಮಾಡಬೇಡ ಮಗ ಅದು ಒಂದು ಹೆಣ್ಣು ಮಗಳ ಭವಿಷ್ಯದ ಪ್ರಶ್ನೆ . ಮುಂದೆ ಅವಳನ್ನ ಯಾರು ತಾನೇ ಮದುವೆ ಆಗುತ್ತಾರೆ ಎಂದ. ಹುಡುಗಿ ತುಂಬಾ ಚೆನ್ನಾಗಿ ಇದ್ದಾಳೆ, ಆದರೆ ಮೂಗಿನ ನತ್ತು (ಮೂಗನತ್ತು) ಮಾತ್ರ ಬಾಯಿಗೆ ಹಾಕಿಕೊಂಡಿದ್ದಾಳೆ. ಟ್ಯಾಟ್ಯೂ ನೋಡಿ ಕರಿ ಗೊರಂಟೆ ಚೆನ್ನಾಗಿ ಕಾಣಲ್ಲ ಅವಳಿಗೆ ಎಂದು ಹೇಳು ಮದುವೆ ಮಾಡಿಕೊ ಎಂದು ಹೇಳಿದ. ಅವಳಿಗೆ ಸೀರೆನೇ ಉಟ್ಟು ಕೊಳ್ಳೋಕೆ ಹೇಳು. ಚಡ್ಡಿ ಹಾಕಿಕೊಂಡು ಮನೇಲಿ ಇದ್ರೆ ಏನು ಚೆನ್ನ ನೀನೆ ಹೇಳು ಎಂದ. ಕಲ್ಲಪ್ಪನ ಮಾತಿಗೆ ಸುಮ್ಮನೇ ತಲೆ ಅಲ್ಲಾಡಿಸಿ ಊಟಕ್ಕೆ ಹೊರಗಡೆ ಹೋದರು. ಹೊಟೆಲ್ ಊಟದಿಂದ ಕಲ್ಲಪ್ಪನ ಹೊಟ್ಟೆ ಕೆಟ್ಟು ಹೋಗಿತ್ತು. ಮನೆಗೆ ಬಂದು ಹುಡುಗಿ ಸಿಗರೇಟ್ ಸೇದುತ್ತಾ ಇತ್ತು. ಹನೀ... ವೆನ್ ದಿಸ್ ಫೆಲೊ ಈಸ್ ಗೋಯೀಂಗ್ ಎಂದು ಕೇಳಿತು. ಸುರೇಶ್ ಟೂಮಾರೊ ಎಂದು ಹೇಳಿದ.

ಮರುದಿನ ಬೆಳಿಗ್ಗೆ ಅಪ್ಪನಿಗೆ ಸ್ವಲ್ಪ ದುಡ್ಡು ಕೊಟ್ಟು, ಇನ್ನೂ ಮುಂದೆ ಪ್ರತಿ ತಿಂಗಳು ಸ್ವಲ್ಪ ದುಡ್ಡು ಕಳುಹಿಸುತ್ತೇನೆ ಯೋಚನೆ ಮಾಡಬೇಡ ಎಂದು ಹೇಳಿ ಟ್ರೈನ್ ಹತ್ತಿಸಿದ. ಕಲ್ಲಪ್ಪ ಮಾತ್ರ ಮಗನೆ ಯೋಚನೆಯಲ್ಲೇ ಮುಳುಗಿ ಹೋಗಿದ್ದ. ಅಷ್ಟರಲ್ಲಿ ರಾಮಸಂದ್ರ ಬಂದಿತ್ತು. ನಿಜವಾಗಿಯೂ ಕಲ್ಲಪ್ಪನಿಗೆ ಮಗ ಡಾಕು ತರಹ ಎಂದು ಅನ್ನಿಸಿದ್ದ.

Wednesday, November 10, 2010

ಹೆಂಡತಿ ಹೆಸರು ಬಸವ್ವ ....

ನೋಡುತ್ತಿದ್ದ ಟಿ ವಿ ಬಂದು ಮಾಡಿದ ನನ್ನ ಬಿ ವಿ. ನಾಳೆ ದೀಪಾವಳಿ, ಬೆಳಗ್ಗೆ ಬೇಗ ಏಳಬೇಕು ಎಂದು ಆಜ್ಞೆ ಹೊರಡಿಸಿದಳು. ಬೆಳಗ್ಗೆ ಬೇಗ ಎದ್ದು ನಾನೇ ಟೀ ಮಾಡಲು ಅನುವಾದೆ. ದೇವರ ಮುಂದೆ ಇಟ್ಟ ಸಕ್ಕರೆ ಟೀ ಮಾಡುವ ಪಾತ್ರೆಗೆ ಸುರಿದೆ. ಅಷ್ಟರಲ್ಲಿ ನನ್ನ ಮಡದಿ ರೀ ಅದರಲ್ಲಿ ಇರುವೆ ಇತ್ತು ಹಾಗೆ ಹಾಕಿದಿರಾ? ಎಂದಳು. ಇರಲಿ ಬಿಡೆ ಕಣ್ಣು ಸ್ವಚ್ಛ ಆಗುತ್ತೆ ಎಂದೆ. ಓss.. ಹಾಗಾ, ಟೀ ಕುಡಿದ ಮೇಲೆ, ಇರುವೆ ಕಣ್ಣು ಸ್ವಚ್ಛ ಆಗುತ್ತಾ?. ಅದಕ್ಕೆ ಇರಬೇಕು ನಾನು ಅದನ್ನು ಓಡಿಸಿದರು, ಅಲ್ಲೇ ಸಕ್ಕರೆ ಸವಿಯುತ್ತಾ ಇತ್ತು. ಲೇ ನಾನು ಹೇಳಿದ್ದು ನಮ್ಮ ಕಣ್ಣು ಸ್ವಚ್ಛ ಆಗುತ್ತೆ ಅಂತ ಎಂದೆ. ಅದು ಸರಿ ಅನ್ನಿ, ನಿಮ್ಮ ಕಣ್ಣು ಸ್ವಚ್ಛ ಆಗಬೇಕು. ನೀವು ಇರುವೆ ಹಾಕಿಕೊಂಡು ಟೀ ಮಾಡಿಕೊಳ್ಳಿ. ನಾನು ಬೇರೆ ಟೀ ಮಾಡಿಕೊಳ್ಳುತ್ತೇನೆ ಎಂದಳು. ಲೇ ನಾನು ಕೂಡ ಪ್ಯೂರ್ ವೆಜ್ ಎಂದೆ. ಪ್ಯೂರ್ ಮತ್ತು ಇಮ್‌ಪ್ಯೂರ್ ವೆಜ್ ಕೂಡ ಇರುತ್ತಾ? ಎಂದು ಕಿಚಾಯಿಸಿದಳು. ಕ್ರೀಮಿ ಕಿಟ ತಿನ್ನೋ ಕೋಳಿ ಮತ್ತು ಬರಿ ಸಸ್ಯ ತಿಂದು ಇರುವ ಕೋಳಿ ವ್ಯತ್ಯಾಸ ಇಲ್ಲವಾ? ಎಂದೆ. ರೀ ಏನು? ಇದು ಹಬ್ಬದ ದಿವಸ ಎಂದು ಕೋಪಮಾಡಿಕೊಂಡಳು. ಮತ್ತೆ ಇರುವೆ ಚೆಲ್ಲಿ ಬೇರೆ ಟೀ ಮಾಡಿದೆ.

ಟೀ ಕುಡಿಯುತ್ತಾ ಇದೇನು? ಸಕ್ಕರೆ ಪಾಕದ ಹಾಗೆ ಇದೆ, ಹಬ್ಬದ ಉಂಡೆಗೆ ಬೇಕಾಗುತ್ತೆ ಹಾಗೆ ಇಡಿ ಎಂದು ಕಿಚಾಯಿಸಿದಳು. ಲೇ ಎಷ್ಟು ಚೆನ್ನಾಗಿದೆ ಸುಮ್ಮನೇ ಏನೇನೋ ಹೇಳಬೇಡ, ನನಗೆ ಇನ್ನೂ ಸಕ್ಕರೆ ಕಾಯಿಲೆ ಬಂದಿಲ್ಲ ಎಂದೆ. ಸಮಾಧಾನಿಸಿ, ಇನ್ನೂ ಸ್ವಲ್ಪ ದಿವಸ ಮಾತ್ರ ಎಂಬ ಉತ್ತರ ಬಂತು. ಹಾಗಾದರೆ ಇನ್ನೂ ಮುಂದೆ ನೀವೇ ಟೀ ಮಾಡಿ, ಆದರೆ ಸ್ವಲ್ಪ ಕಡಿಮೆ ಸಕ್ಕರೆ ಹಾಕಿ ಎಂದಳು. ಹಬ್ಬಕ್ಕೆ ಏನು? ಅಡಿಗೆ ಮಾಡಲಿ ಎಂಬ ಅರ್ಜಿ ಗುಜರಾಯಿಸಿದಳು. ಏನಾದರೂ ಮಾಡು ಎಂದೆ. ಅವಳು ಪ್ರತಿ ಬಾರಿ ಕೇಳಿದಾಗಲು ನನ್ನ ಉತ್ತರ ಇದೆ ಇರುತ್ತೆ ಎಂದು ಗೊತ್ತಿದ್ದರು, ಅವಳು ಕೇಳುವುದನ್ನು ಬಿಟ್ಟಿಲ್ಲ. ನಿಮ್ಮದು ಬರೀ ಇದೆ ಆಯಿತು ಎಂದು ಗೋಧಿ ಕುಟ್ಟಿದ ಪಾಯಸ ಮಾಡುತ್ತೇನೆ ಎಂದು ಹೇಳಿ ಅಡಿಗಿಮನೆಗೆ ಹೊರಟು ಹೋದಳು. ಅವಳನ್ನು ಹಿಂಬಾಲಿಸಿ, ಲೇ ಪಾಯಸ ಬೇಡ ಕಣೆ ಎಂದೆ. ಅದು ನಿಮಗೆ ಅಲ್ಲ ಅದು, ದೇವರಿಗೆ ಸುಮ್ಮನಿರಿ ಎಂದಾಗ ಸಮಾಧಾನವಾಯಿತು. ಮತ್ತೆ ವಡೆ ಎಂದೆ. ಒದೆ ಮತ್ತು ಕಡಬು ಎರಡು ಇದೆ.ನಗುತ್ತಾ ಈಗಲೇ ಬೇಕಾ? ಎಂದಳು. ನಿರಾಸೆಯ ಅಲೆಯಲ್ಲಿ ತೇಲುತ್ತ ಹೊರಗಡೆ ಬಂದು ಕುಳಿತೆ.

ಮುಂಜಾನೆಯ ಆರತಿ, ಸ್ನಾನ , ಪೂಜೆ ಮತ್ತು ಮಂಗಳಾರತಿ ಆದ ಮೇಲೆ ಊಟಕ್ಕೆ ಕುಳಿತಾಗಲೇ ನನಗೆ ಗೊತ್ತಾಗಿದ್ದು, ಆ ಪಾಯಸ ನನಗೆ ಮಾಡಿದ್ದಾಳೆ ಎಂದು. ಮತ್ತೆ ಮುಂಜಾನೆ ದೇವರಿಗೆ ಎಂದೆ. ನೀವು ನನಗೆ ಪತಿ ದೇವರು ತಾನೇ ಎಂದು ಗಹ ಗಹಸಿ ನಗಹತ್ತಿದಳು. ನಾನು ರಾತ್ರಿ ಹೊಟೆಲ್ ಗೆ ಊಟಕ್ಕೆ ಹೋಗುವುದಾದರೆ ಮಾತ್ರ ತಿನ್ನುತ್ತೇನೆ ಎಂದೆ. ಆಯಿತು ಎಂದು ಹೇಳಿದ ಮೇಲೆ ಊಟ ಮಾಡಿದೆ.

ರಾತ್ರಿ ಊಟಕ್ಕೆ ಹೊರಗಡೆ ಹೋಗಿದ್ದೆವು. ಆ ಹೊಟೇಲಿನಲ್ಲಿ ಸರ್ವ್ ಮಾಡಲು ಸಹ ಹುಡುಗಿಯರು ಇದ್ದರು ಅದನ್ನು ನೋಡಿ ನನ್ನ ಮಡದಿ ಇದಕ್ಕೆ ನೀವು ಹೊರಗಡೆ ಊಟಕ್ಕೆ ಹೋಗೋಣ ಎಂದಿದ್ದಾ ಎಂದಳು. ನಾನು ಒಂದು ಸರ್ವ್ ಮಾಡುವ ಹುಡುಗಿಯ ಕಡೆ ಹೋಗಿ ವಾಶ್ ರೂಮ್ ಎಲ್ಲಿದೆ ಎಂದು ಕೇಳಲು ಹೋದೆ. ಅಷ್ಟರಲ್ಲಿ ಅವಳು ಒಬ್ಬ ಆಸಾಮಿಗೆ ಕಪಾಳಕ್ಕೆ ಬಿಟ್ಟು, ತಾನೇ ಅಳುತ್ತಾ ನಿಂತಿದ್ದಳು. ಇದೆಲ್ಲವೂ ಅರೆ ಕ್ಷಣದಲ್ಲಿ ನಡೆದು ಹೋಗಿತ್ತು. ನನಗೆ ಏನು ತೋಚದಾಗಿತ್ತು. ನಾನೇ ಅಲ್ಲೇ ಇದ್ದಿದ್ದರಿಂದ ನನ್ನ ಹೆಂಡತಿಗೆ ನನ್ನ ಮೇಲೇನೆ ಅನುಮಾನ. ಎಲ್ಲರೂ ನಮ್ಮ ಮುಂದೆ ಜಮಾಯಿಸಿದ್ದರು. ಆದರೆ ಯಾರು,ಯಾರಿಗೆ ಹೊಡೆದರೂ ಎಂದು ಸಹ ತಿಳಿದಿರಲಿಲ್ಲ. ಕೆಲ ಜನ ನಾನೇ ಹೊಡಿಸಿ ಕೊಂಡವನು ಎಂದು ತಿಳಿದಿದ್ದರು. ಕಡೆಗೆ ನಾನೇ ಆ ಹುಡುಗಿಗೆ ಏನು ಆಯಿತಮ್ಮಾ? ಎಂದು ಕೇಳಿದೆ. ನಾನು ಅವನಿಗೆ ಏನು? ಮಾಡಿದೆ ಎಂದು ಕೇಳಿದೆ. ನಾನು... ನಾನು.... ಏನು?. ಎಂದ. ಕನ್ನಡ ಬರುವುದಿಲ್ಲ ಎಂದು ಸನ್ನೆ ಮಾಡಿ ಹೇಳಿದ. ಆಗ ಆ ಹುಡುಗಿ ಅಳುತ್ತಾ ಇದ್ದವಳು ಜೋರಾಗಿ ನಗುತ್ತಾ ಹೊರಟು ಹೋದಳು. ಆಗ ನಾನು ಅವನಿಗೆ ಹಿಂದಿಯಲ್ಲಿ ಏನು? ಕೇಳಿದೆ ಎಂದು. ಅವನು ಮೈ ಮೈ "ನಮಕ್ ಪೂಚಾ" ಎಂದ. ಕನ್ನಡದಲ್ಲಿ ಹೇಳು ಎಂದಾಗ "ಉಪ್ಪಾ ಬೇಕು" ಎಂದ ನೆರೆದವರೆಲ್ಲ ಜೋರಾಗಿ ನಗಹತ್ತಿದರು.

ನನಗೆ ಅವನ ಮುಖ ಎಲ್ಲಿಯೋ ನೋಡಿದ ಹಾಗೆ ಅನ್ನಿಸಿತು. ಹೀಗಾಗಿ ಅವನ ಹಿಂದೆ ಹೋದೆ. ನಿಮ್ಮನ್ನ ಎಲ್ಲಿಯೋ ನೋಡಿದ್ದೇನೆ ಎಂದು ಇಂಗ್ಲೀಶ್ ನಲ್ಲಿ ಕೇಳಿದೆ. ಮತ್ತೆ ಕೆಲ ಸಮಯ ಯೋಚಿಸಿದ ಮೇಲೆ ತಿಳಿಯಿತು ಅವನು ವಿಲಾಸ್ ಎಂದು. ವಿಲಾಸನಿಗೆ ವಿಳಾಸ ತಿಳಿಸಿದ ಮೇಲೆ ಅವನು ಬೇರೆ ಊರಿಗೆ ಹೊರಟು ಹೋಗಿದ್ದ. ಯಾಕೋ? ಮಗನೆ ನಿನಗೆ ಕನ್ನಡ ಬರಲ್ಲವಾ? ಎಂದೆ. ಬರುತ್ತೆ, ಕಣೋ ಆದರೆ ನಮ್ಮ ಕಡೆ ಉಪ್ಪಿಗೆ ಉಪ್ಪಾ ಎಂದೆ ಹೇಳುತ್ತಾರೆ ಅದಕ್ಕೆ ಎಂದೆ ಅಂದ. ಬೇರೆ ಯಾರು ಅದಕ್ಕೆ ಕ್ಯಾತೆ ತೆಗೆದಿರಲಿಲ್ಲ ಎಂದ. ಈ ಹುಡುಗಿ ಬಹುಶಃ ಧಾರವಾಡದವಳು ಇರಬೇಕು ಎಂದೆ. ಮತ್ತೆ ಅವನನ್ನು ಮನೆಗೆ ಆಹ್ವಾನಿಸಿದೆವು. ಚಿಕ್ಕವಾನಿದ್ದಾಗ ವಿಲಾಸ್ ನಮಗೆ ಹೊಡೆದು ಓಡಿ ಹೋಗಿ ಮಾಳಿಗೆ ಮೇಲೆ ನಿಂತು, "ಎಷ್ಟು ಹೊಡೀತಿ ಹೊಡಿ, ಹೊಲಕ್ಕ ಹೋಗೋಣ ನಡಿ, ಬೆಕ್ಕು ಬಂತು ಉಶ್ಶಾ, ನಿನ್ನ ಹೆಂಡತಿ ಹೆಸರ ಬಸವ್ವ" ಎಂದು ಅಣಕಿಸುತ್ತಿದ್ದ. ನಾವೆಲ್ಲರೂ ಊಟ ಆದ ಮೇಲೆ ಕ್ಷೇಮ ಸಮಾಚಾರ ವಿಚಾರಿಸಿದೆವು. ಮತ್ತೆ ಅವನು ಮದುವೆ ಇನ್ನೂ ಆಗಿಲ್ಲ ಎಂದಾಗ, ನಾನು ಆ ಹೋಟೆಲ್ ಹುಡುಗಿ ಹೆಸರು ಬಸವ್ವ ನಾನು ಮಾತನಾಡಾಲೆ ಎಂದೆ. ಎಲ್ಲರೂ ನಕ್ಕೆವು ಮತ್ತೆ ವಿಲಾಸ್ ತನ್ನ ಮನೆ ವಿಳಾಸ ತಿಳಿಸಿ ಮನೆ ಹಾದಿ ಹಿಡಿದ.

Wednesday, November 3, 2010

ಆಕಾಶ ಬುಟ್ಟಿ...ಜೋಕುಮಾರನ ಹೊಟ್ಟೆ

ಆಕಾಶ ಬುಟ್ಟಿ... ಅಪ್ಪನ ಹೊಟ್ಟೆ ..ಎಂದು ಮಡದಿ,ಮಗ ಆಡಿಕೊಳ್ಳುತ್ತಾ ಇದ್ದರು. ನನಗು ಹಾಗೆ ಅನ್ನಿಸಿತು. ಕೋಪದಿಂದ ಈ ಹೊಟ್ಟೆ ಕತ್ತರಿಸಿ ಒಗೆದು ಬಿಡಬೇಕು ಎಂದು. ಎಷ್ಟೇ ಆದರೂ ನನ್ನ ಹೊಟ್ಟೆ ತಾನೇ?. ದಿನಾಲೂ ಬೇಗ ಎದ್ದು ವಾಕಿಂಗ್ ಹೋಗಬೇಕು ಎಂದು ಯೋಚಿಸುತ್ತಿದ್ದೆ. ಆದರೆ ಸೂರ್ಯನಿಗಿಂತ ಬೇಗ ಎದ್ದರೆ, ಸೂರ್ಯನ ಕರ್ತವ್ಯ ನಿಷ್ಟೆ ನಾನು ಹಾಳು ಮಾಡಿದ ಪಾಪ ನನಗೆ ಯಾಕೆ ಎಂದು ಸುಮ್ಮನಿದ್ದೆ. ದಿನಾಲೂ ಸೂರ್ಯ ಎದ್ದಮೇಲೆಯಾದರೂ ಏಳಬೇಕು ಎಂದು. ಆದರೆ ನನ್ನ ಕರ್ಮಕ್ಕೆ ಆ ಜ್ಯೋತಿಷಿ ಮನೋಜ ಬೆಳಗಿನ ಜಾವದ ಕನಸು ನನಸು ಆಗುತ್ತೆ ಕಣೋ ಎಂದು ಹೇಳಿದ್ದ. ದಿನಾಲೂ ಬೆಳಗಿನ ಜಾವದಲ್ಲಿ ಯಾವುದಾದರೂ ಒಳ್ಳೆಯ ಸುಂದರಿಯ ಕನಸು, ಇಲ್ಲ ಫಾರಿನ್ ನಲ್ಲಿ ಇದ್ದ ಹಾಗೆ ಕನಸು ಹೀಗೆ ಮಜ.. ಮಜ.. ಕನಸುಗಳು. ಎದ್ದರೆ, ಕನಸು ಹಾಳಾಗುತ್ತೆ ಎಂಬ ಭಯ.

ನನ್ನ ಹೆಂಡತಿಗೆ ಹೇಳಿದೆ, ನಾಳೆ ಸಂಡೆ. ನಾನು ವಾಕಿಂಗ್ ಹೋಗಬೇಕು ಬೇಗ ಎಬ್ಬಿಸು ಎಂದು. ಮನೆಯಲ್ಲಿ ಇರುವ ಎಲ್ಲಾ ಘಡಿಯಾರಗಳಿಗೂ ಅಲಾರಾಂ ಇಡಲು ಅನುವಾದೆ. ಮಡದಿ ನನಗೆ ಬೈದು ನಾನು ಎಬ್ಬಿಸುತ್ತೇನೆ, ಆದರೆ ಅಲಾರಾಂ ಇಡಬೇಡಿ ನನಗು ಒಂದು ದಿವಸ ರೆಸ್ಟ್ ಬೇಡವೇ ಎಂದಳು. ತುಂಬಾ ಪ್ರಯತ್ನ ಪಟ್ಟು ಬೇಗ 6.50 ಕ್ಕೆ ಎದ್ದೆ. ಎದ್ದು ವಾಕಿಂಗ್ ಹೊರಡುವಾಗ, ಒಂದು ಕಪ್ಪು ಬೆಕ್ಕು ಅಡ್ಡ ವಾಕಿಂಗ್ ಮಾಡಿ ಹೋಯಿತು. ಬೆಕ್ಕು ಅಡ್ಡ ಬಂದರೆ ಕೆಲಸ ಕೆಡುತ್ತೆ ಎಂದು ಮತ್ತೆ ಹತ್ತು ನಿಮಿಷ ಬಿಟ್ಟು ಹೋದೆ. ಎದುರಿಗೆ ಟೀ ಅಂಗಡಿ ಕಾಣಿಸಿತು. ಟೀ ಕುಡಿದು ಮತ್ತೆ ಒಂದು ಘಂಟೆ ವಾಕಿಂಗ್ ಮಾಡಿದೆ. ನನ್ನಷ್ಟಕ್ಕೆ ನಾನೇ ವಾಹ್ "ಕಿಂಗ್" ಅಂದುಕೊಂಡು ಹೊಟ್ಟೆ ಕಡಿಮೆ ಆಗಿದೆಯಾ ಎಂದು ಹೊಟ್ಟೆ ನೋಡುತ್ತಾ ಬರುವ ಸಮಯದಲ್ಲಿ, ಎದುರಿಗೆ ಒಂದು ಆಕಳು ಕರುಗೆ ಡಿಕ್ಕಿ ಹೊಡೆದಿದ್ದೆ. ಸರ್ ಸಾವಕಾಶ ಎಂಬ ಶಬ್ದ ಕೇಳಿಸಿತು. ಅದೇ ಎದಿರು ಮನೆ ಪ್ರಸನ್ನ. ಕ್ಷೇಮ ಸಮಾಚಾರ ಆದ ಮೇಲೆ ತಾವು ಪ್ರತಿ ಸಂಡೆ ಕ್ರಿಕೆಟ್ ಆಡಲು ಹೋಗುತ್ತೇವೆ ಎಂದು ಹೇಳಿದರು. ಸರ್ ನಾನು ಬರುತ್ತೇನೆ ಎಂದು ಹೇಳಿದೆ. ಅವಶ್ಯವಾಗಿ ಬನ್ನಿ ಎಂಬ ಅಭಯವನ್ನಿತ್ತರು. ನಾನು ತುಂಬಾ ಖುಷಿಯಾದೆ.

ಮುಂದಿನ ಸಂಡೆ ನನ್ನ ಬೆಳಗಿನ ಜಾವದ ಕನಸು ಭಗ್ನ ಆದರೂ ಪರವಾಗಿಲ್ಲ ಎಂದು ಬೇಗನೆ ೬ ಘಂಟೆಗೆ ಎದ್ದೆ. ಬೇಗನೆ ಎದ್ದು ನಾನೇ ಟೀ ಮಾಡಿ ಕುಡಿದು ಎಲ್ಲರಿಗಿಂತ ಬೇಗನೆ ಮೈದಾನದಲ್ಲಿ ಇದ್ದೆ. ತುಂಬಾ ಜನ ಕ್ರಿಕೆಟ್ ಆಡುತ್ತಾ ಇದ್ದರು. ಆದರೆ ಪ್ರಸನ್ನ ಇನ್ನೂ ಪ್ರತ್ಯಕ್ಷವಾಗಿರಲಿಲ್ಲ. ಕೆಲ ಸಮಯ ಕಾದರೆ ಆಗುತ್ತೆ ಎಂದು ಕೆಲ ಸಮಯ ಅಲ್ಲೇ ತಿರುಗಾಡುತ್ತಾ ಇದ್ದೆ. ಒಂದು ಚೆಂಡು ನನ್ನ ಹತ್ತಿರ ಬರುತಿತ್ತು. ಅದನ್ನು ನಾನು ಹಿಡಿದು ಎತ್ತಿ ಕೊಡಬೇಕು ಎನ್ನುವ ಅಷ್ಟರಲ್ಲೇ ಫೀಲ್ಡಿಂಗ್ ನಿಂತ ಒಬ್ಬ ಹುಡುಗ ಅದನ್ನು ಎತ್ತಿ ಎಸೆದ. ಅದು ಬೇರೆಯವರು ಆಡುವ ಮ್ಯಾಚ್ ಚೆಂಡು ಆಗಿತ್ತು. ನನಗೆ ತುಂಬಾ ಕೋಪ ಬಂದಿತ್ತು. ಕೆಲ ಸಮಯದ ನಂತರ ಆ ಹುಡುಗ ತಾನು ಆಡುವ ಮ್ಯಾಚ್ ಚೆಂಡು ಫೀಲ್ಡಿಂಗ್ನಲ್ಲಿ ಬಿಟ್ಟಾಗ ಖುಷಿಯಾಗಿತ್ತು.

7 ಘಂಟೆ ಆದರೂ ಪ್ರಸನ್ನ ಬರಲೇ ಇಲ್ಲ. ನಾನು ಮತ್ತೆ ವಿವೇಕಾನಂದ ಗಾರ್ಡನ್ ಗೆ ವಾಕಿಂಗ್ ಮಾಡಲು ಹೋದೆ.ಎಲ್ಲರೂ ಓಡುತ್ತಾ ಇರುವದನ್ನು ನೋಡಿ ನಾನು ತುಂಬಾ ಜೋಷ್ ನಿಂದ ಓಡಿದೆ. ಎಲ್ಲರನ್ನೂ ಹಿಂದೆ ಹಾಕಿದೆ ಆದರೆ ಇನ್ನೂ ಅರ್ಧ ರೌಂಡ್ ಸುತ್ತಿರಲಿಲ್ಲ, ದಣಿವು ಶುರು ಆಯಿತು. ಎಲ್ಲರೂ ನನ್ನ ಹಿಂದಿಕ್ಕಿ ಹೊರಟು ಹೋಗಿದ್ದರು. ಓಡುತ್ತಿರುವಾಗ ನನ್ನ ಹೊಟ್ಟೆ ತಕ.. ತಕ.. ಎಂದು ಕುಣಿಯುತ್ತಾ ಇತ್ತು. ಮತ್ತೆ ಕೆಲ ಜನರು ವ್ಯಾಯಾಮ ಮಾಡುತ್ತಾ ಇದ್ದರು. ಅದನ್ನು ನೋಡಿ ನಾನು ಒಂದು ಮರದ ಕೆಳಗೆ ನಿಂತು ವ್ಯಾಯಾಮ ಮಾಡಲು ಅನುವಾದೆ. ಅಷ್ಟರಲ್ಲಿ ಪಕ್ಕದಲ್ಲಿ ಮಲಗಿದ್ದೆ ನಾಯಿ ಎದ್ದು, ನನ್ನ ನೋಡುತ್ತಾ ನಿಂತು ಬಿಟ್ಟಿತು. ನಾನು ಬಹುಶಃ ವಿಚಿತ್ರವಾಗಿ ವ್ಯಾಯಾಮ ಮಾಡುತ್ತಾ ಇದ್ದೇನೆ ಎಂದು ತಿಳಿಯಿತೋ ಹೇಗೆ ಎಂದು, ಬೇರೆ ವ್ಯಾಯಾಮ ಮಾಡಲು ಅನುವಾದೆ.ಅಷ್ಟರಲ್ಲಿ ನಾಯಿ ಜೋರಾಗಿ ನನ್ನ ನೋಡಿ ಬೊಗಳಲು ಶುರು ಮಾಡಿತು. ಏಕೆಂದರೆ ನಾನು ಕಾಲಿನಿಂದ ಒದ್ದ ಕಲ್ಲು ಅದಕ್ಕೆ ನಾಟಿತ್ತು. ಕಡೆಗೆ ಈ ಸಹವಾಸ ಸಾಕು ಎಂದು ಕೆಲ ಸಮಯ ವಾಕಿಂಗ್ ಮಾಡಿದೆ. ವಾಕಿಂಗ್ ಮಾಡಿ ಕೆಲ ಸಮಯ ಒಂದು ಬೆಂಚ್ ಮೇಲೆ ಕುಳಿತೆ. ಅಲ್ಲಿ ನಡೆಯುವ ಸಂಭಾಷಣೆ ಕೇಳಿ ಮನೆಗೆ ಬಂದೆ.

ಮನೆಗೆ ಬಂದು ಕೂಡಲೇ ಮಡದಿ ನೀವು ಹೋದ ಮೇಲೆ ಪ್ರಸನ್ನ ಫೋನ್ ಮಾಡಿದ್ದರು ಎಂದಳು. ಅವರು ಇವತ್ತು ಕ್ರಿಕೆಟ್ ಆಡಲು ಬರುವದಿಲ್ಲ ಎಂದು ಹೇಳಿದರು ಎಂದಳು. ಇವತ್ತು ಮನೆ ಸಾಮಾನು ತರಬೇಕು ಎಂದಳು ಮಡದಿ. ನಾನು ಆಯಿತು ಎಂದು ಸ್ನಾನಕ್ಕೆ ಹೋದೆ. ವಾಕಿಂಗ್ ಮಾಡಿ ಕೈ ಕಾಲು ಎಲ್ಲವೂ ಸಡಿಲವಾಗಿದ್ದವು. ಬಚ್ಚಲು ಮನೆಯಿಂದ ದಾಡಿ ಮಾಡಿಕೊಳ್ಳಲೋ ಬೇಡವೋ ಎಂದು ಕೇಳಿದೆ. ಏಕೆಂದರೆ? ನಾನು ಪ್ರತಿ ಹಬ್ಬ ಹರಿದಿನ ದಾಡಿ ಮಾಡಿಕೊಳ್ಳಬೇಡಿ ಎಂಬ ಆಜ್ಞೆ ಹೊರಡಿಸಿದ್ದಾಳೆ ನನ್ನ ಮಡದಿ. ಗಾಡಿ ಮೇಲೆ ಹೋಗೋಣ ಎಂದಳು. ನಾನು ನಕ್ಕೂ ... ಲೇ ದಾಡಿ ಎಂದೆ.ನಾನು ಬೇಡ ಅನ್ನಬಹುದು ಎಂದುಕೊಂಡರೆ, ಮಾಡಿಕೊಳ್ಳಿ ಎಂದಳು. ನಾನು ನಾಳೆ ಮಾಡಿಕೊಳ್ಳುತ್ತೇನೆ ಬಿಡೆ ಎಂದೆ. ನೋಡ್ರೀ ನನ್ನ ಜೊತೆ ಬರಬೇಕಾದರೆ, ಹೀಗೆ ಜೋಕುಮಾರ ತರಹ ಬರಬೇಡಿ ಎಂದಳು. ಕಡೆಗೆ ದಾಡಿ ಮಾಡಿಕೊಂಡು ಸ್ನಾನ ಮಾಡಿ ಬಂದೆ. ಮನೆ ಸಾಮಾನು ತೆಗೆದುಕೊಂಡು ಬರುವಾಗೇ ನೋಡಿ ಈಗ ಚೆನ್ನಾಗಿ ರಾಜ್‍ಕುಮಾರ್ ತರಹ ಕಾಣಿಸುತ್ತೀರಿ ಎಂದಳು.

ಮರುದಿನ ಕೈ,ಕಾಲು ಎಲ್ಲವೂ ಮಾತನಾಡುತ್ತಾ ಇದ್ದವು. ಆಗ ಅನ್ನಿಸಿತು ಆರೋಗ್ಯ ಎಂದರೆ ಆ + ರೋಗ(ನಿದ್ರೆ) + ಯೋಗ್ಯ ಎಂದು. "ಎಲ್ಲರೂ ಮಾಡುವದು ಹೊಟ್ಟೆಗಾಗಿ ಮತ್ತು ಗೇಣು ಬಟ್ಟೆಗಾಗಿ" ನಿಜ. ನಾನು ಮಾಡುತ್ತಾ ಇರುವದು ಹೊಟ್ಟೆಗಾಗಿಯೇ, ಆದರೆ ಗೇಣು ಬಟ್ಟೆ ನನ್ನ ಹಿಮಾಲಯ ಪರ್ವತ (ಹೊಟ್ಟೆ) ಮುಚ್ಛೊಕ್ಕೆ ಸಾಲಲ್ಲ :).

*****************************************************************

ಎಲ್ಲರಿಗೂ ದೀಪಾಳಿ ಹಬ್ಬದ ಶುಭಾಶಯಗಳು.

********************************************************


Saturday, October 30, 2010

ಗುಣವಂತನ ಗರುಡ ರೇಖೆ....

ಕವಿತೆ ಬಗ್ಗೆ ಯೋಚನೆ ಮಾಡುತ್ತಾ ಆಫೀಸ್ ನಿಂದ ಮನೆಗೆ ಹೊರಟಿದ್ದೆ. ಮಗನಿಗೆ ಇಷ್ಟ ಎಂದು ಗೋವಿನ್ ಜೊಳ ಕ್ಷಮಿಸಿ ಅಮೇರಿಕನ್ ಕಾರ್ನ್ ತೆಗೆದುಕೊಂಡು ಹೋದೆ. ಮೊನ್ನೆ ಒಂದು ಮಾಲ್ ನಲ್ಲಿ ಯೂರೋಪಿನ ಸವತೆಕಾಯಿ ಎಂದು ನಮ್ಮ ಧಾರವಾಡದಲ್ಲಿ ಸಿಗುವ ಸವತೆಕಾಯಿ ಇಟ್ಟಿದ್ದರು. 35 ರೂಪಾಯಿ ಒಂದು ಕೆ.ಜಿ ಅದೇ ಧಾರವಾಡದಲ್ಲಿ 8 ರೂಪಾಯಿಗಳು ಮಾತ್ರ.

ಮನೆ ಬಂದರು ಕವಿತೆಯ ಬಗ್ಗೆ ಯೋಚನೆ ಇನ್ನೂ ಮುಗಿದಿರಲಿಲ್ಲ. ರೀ ನಿಮ್ಮ ಗೆಳೆಯ ಮಾರುತಿ ಯಾವಾಗ ಧಾರವಾಡಕ್ಕೆ ಹೋಗುತ್ತಾನೆ ಎಂದು ಕೇಳಿದಳು. ನಾನು ವಿಜಯನಗರ ಇಲ್ಲ ರಾಗಿ ಗುಡ್ಡಕ್ಕೆ ಹೋಗೋಣ ಎಂದೆ. ಅವಳು ಕೇಳಿದ ಪ್ರಶ್ನೆಗೆ ನಾನು ಹೇಳುತ್ತಿರುವುದಕ್ಕೆ ಒಂದು ಸಂಭಂಧವೇ ಇರಲಿಲ್ಲ. ನನ್ನ ಹೆಂಡತಿಗೆ ರೇಗಿ ಹೋಗಿತ್ತು. ನಾನು ಕವಿತಾ ಬಗ್ಗೆ ಯೋಚನೆ ಮಾಡುತ್ತಿದ್ದೆ ಎಂದೆ. ಯಾರು ಆ ಕವಿತಾ ಎಂದು ಮತ್ತಷ್ಟು ರೇಗಿದಳು. ಕವನ ಎಂದರೆ ಮತ್ತೆ ತಪ್ಪು ಆದೀತು ಎಂದು ಕವಿತೆ ಎಂದು ಹೇಳಿದೆ. ನಿಮ್ಮ ಲಕ್ಷ್ಯ ಎಲ್ಲಿ? ಇರಬೇಕು. ರಾಣಿ ಹಾಗೆಲ್ಲಾ ಏನು ಇಲ್ಲ. ನೀನು ಯೋಚನೆ ಮಾಡುತ್ತಿರುವದು ಲಕ್ಷದ ಬಗ್ಗೆ ಆದರೆ, ನೀನು ನನಗೆ ಕೋಟಿಗೆ ಸಮ. ಅದಕ್ಕೆಂದೆ ನಿನ್ನೆ ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರುಪಾಯಿ!! ಎಂಬ ಲೇಖನ ಬರೆದಿದ್ದೇನೆ ಎಂದು ಪುಸಲಾಯಿಸಿದೆ. ಆದರೂ ನಿಮ್ಮದು ಬರೀ ಕವಿತೆ-ಲೇಖನ ಅತಿ ಆಯಿತು ಎಂದು ಹೀಯಾಳಿಸಿದಳು. ಅದು ಬೇರೆ ನಿಮಗೆ ನನ್ನ ಹೀಯಾಳಿಸಿ ಬರೆಯದೇ ಇದ್ದರೆ ತಿಂದ ಅನ್ನ ಹೇಗೆ ಅರಗಬೇಕು (ಕರಗಬೇಕು) ಎಂದಳು.

ಕೆಲ ಸಮಯದ ನಂತರ ಪುಸಲಾಯಿಸಿದ್ದರಿಂದ ಹೇಳಿ ಮತ್ತೆ ಏನೇನು? ಬರೆದಿದ್ದೀರ ಎಂದಳು. ನಳ ಪಾಕ್ .... ಮತ್ತು ಸ್ಪೆಶಲ್ ತಿಂಡಿ.... ಎಂಬ ಲೇಖನ ಕೂಡ ಬರೆದಿದ್ದೇನೆ ಎಂದೆ. ಮತ್ತೇನು? ಬಕಾಸುರನಿಗೆ ಅದೇ ಧ್ಯಾನ ಎಂದು ಮತ್ತೆ ಹೀಯಾಳಿಸಿದಳು. ನಾನು ನನ್ನ ಬಗ್ಗೆ ತುಂಬಾ ಕೊಚ್ಚಿಕೊಂಡು ತುಂಬಾ ಮಾತನಾಡಿಕೊಂಡೆ. ನನ್ನ ಒಂದು ಲೇಖನ ದಟ್ಸ್ ಕನ್ನಡದಲ್ಲಿ ಪಬ್ಲಿಶ್ ಆಗಿದೆ ಎಂದು. "ಓ ಗುಣವಂತ ಓ ಗುಣವಂತ ನಿನ್ನ ಗುಣಗಾನ ಮಾಡಲು ಪದಗಳೇ ಸಿಗುತ್ತಿಲ್ಲ" ಎಂದು ಹಾಡುತ್ತಾ ಅಡುಗೆ ಮನೆಗೆ ಹೋದಳು. ನಾನು ಹಾಡುತ್ತೇನೆ, ಆದರೆ ನನ್ನದು ಕಾಕ ಕಂಠ. ಆದರೆ ನನ್ನ ಮಡದಿಯದು ಕೋಗಿಲೆ ಕಂಠ. ನಾನು ಅವಳನ್ನು ಹಿಂಬಾಲಿಸಿ ಪದಗಳನ್ನು ಬೇಕಾದರೆ ನಾನು ಹೇಳುತ್ತೇನೆ. ನೀನು ಹೋಗಳುವುದನ್ನು ಮಾಡು ಎಂದೆ. ಮೊದಲು ಹೋಗಿ ಕೈ ಕಾಲು ತೊಳೆದು ಆಮೇಲೆ ಒಳಗಡೆ ಬನ್ನಿ ಎಂದು ಹೋಗಳಿ ಕಳುಹಿಸಿದಳು. ಅದೇಕೋ ಗೊತ್ತಿಲ್ಲ ಅರಳಿದ ಹೂವು ಮತ್ತು ಕೆರಳಿದ ಹೆಣ್ಣು ನೋಡೇಕೆ ತುಂಬಾ ಚೆನ್ನ.

ಕೈ ಕಾಲು ತೊಳೆದು ಬಂದು ಟೀ ಶರ್ಟ್ ಹಾಕಿಕೊಳ್ಳುತಿದ್ದೆ. ಕಾಫೀ ತೆಗೆದುಕೊಂಡು ಬಂದ ನನ್ನ ಮಡದಿ ಜೋರಾಗಿ ನಗುತ್ತಾ ಟೀ ಶರ್ಟ್ ಉಲ್ಟಾ ಹಾಕಿ ಕೊಳ್ಲುತ್ತ ಇದ್ದೀರ ಎಂದು ಅಂದಳು. ಕಾಫೀ ಕಪ್ ಕೊಟ್ಟು ಮತ್ತೆ ಏನು ಬರೆದಿದ್ದೀರಾ ರಾಯರು ಎಂದು ಕೇಳಿದಳು. ಸಿಹಿಮೊಗ್ಗೆ ಬಗ್ಗೆ ಬರೆದಿದ್ದೇನೆ ಎಂದೆ. ಹಾಗೆ ಅಂದರೆ ಎಂದು ನನ್ನ ಮುಖ ನೋಡಿದಳು. ಅದು ಸಿಹಿ ಮೊಗದ ಹುಡುಗಿಯ ಬಗ್ಗೆ ಎಂದು ಸುಮ್ಮನೇ ರೀಲು ಬಿಟ್ಟೆ. ಮತ್ತೆ ಕೋಪಿಸಿಕೊಂಡಳು. ಅದು ಶಿವಮೊಗ್ಗ ಬಗ್ಗೆ ಬರೆದ ಅನುಭವ ಕಥನ ಎಂದು ಹೇಳಿದೆ.

ಅಷ್ಟರಲ್ಲಿ ಪಕ್ಕದ ಮನೆ ಶಾಂತಮ್ಮ ಬಂದು ನಿಮ್ಮ ಯಜಮಾನರು ಇದ್ದಾರಾ ಎಂದು ಕೇಳಿಕೊಂಡು ಬಂದರು. ನಾನು ಇವರು ಏಕೆ ನನ್ನ ಕೇಳಿಕೊಂಡು ಬಂದಿದ್ದಾರೆ ಎಂದು ಆಶ್ಚರ್ಯ. ನಮ್ಮ ಮನೆಗೆ ಹಾವು ಬಂದಿದೆ ಪ್ಲೀಸ್ ಹಿಡಿ ಬನ್ನಿ ಎಂದರು. ಕೈ ನಡುಗಿ ಅರ್ಧ ಕಾಫೀ ಕೆಳಕ್ಕೆ ಉರಳಿತ್ತು. ನಿಮಗೆ ಯಾರು ಹೇಳಿದರು ನಾನು ಹಾವು ಹಿಡಿಯುತ್ತೇನೆ ಎಂದು ಕೇಳಿದೆ. ನಾನೇನು ಹಾವಡಿಗನ ಎಂದು ಕೇಳಿದೆ. ನಿಮ್ಮ ಕೈ ಮೇಲೆ ಗರುಡ ರೇಖೆ ಇದೆ ಎಂದು ನಿಮ್ಮ ಮಡದಿ ಹೇಳಿದ್ದಾರೆ ಪ್ಲೀಸ್ ಬನ್ನಿ ನಮ್ಮನ್ನು ಕಾಪಾಡಿ ಎಂದರು.ನನಗೆ ತುಂಬಾ ಕೋಪ ಬಂದಿತ್ತು. ನಾನು ನನ್ನ ಮಡದಿಯ ಮುಖ ನೋಡಿದೆ. ನಡೀರಿ ಹೋಗೋಣ ಪಾಪ ಎಂದಳು. ಏನೇ ಇದು ನೀನು ಎಂದೆ. ಅವಳನ್ನು ಒಳಗಡೆ ಕರೆದು ನಾನು ಯಾವತ್ತಾದರೂ ನಿನಗೆ ನನ್ನ ಕೈ ಮೇಲೆ ಗರುಡ ರೇಖೆ ಇದೆ ಎಂದು ಹೇಳಿದ್ದೇನಾ? ಎಂದು ಕೇಳಿದೆ.ಇಲ್ಲ ಎಂದಳು. ಮತ್ತೆ ಏಕೆ? ಹೇಳಿದೆ ಎಂದೆ. ಮಂಜಣ್ಣ ಮದುವೆಗೆ ಮುಂಚೆ ನನಗೆ ಹೇಳಿದ್ದರು ನಿಮ್ಮ ಕೈ ಮೇಲೆ ಗರುಡ ರೇಖೆ ಇದೆ ಎಂದು ಅಂದಳು. ಮಂಜ ನಿನಗೆ ಸುಳ್ಳು ಹೇಳಿದ್ದಾನೆ. ಹಿರಿಯರೇ ಹೇಳಿಲ್ಲವೇ, ಸಾವಿರ ಸುಳ್ಳು ಹೇಳಿ ಮದುವೆ ಮಾಡಿ ಎಂದು ಅಂದೆ. ಹಾಗಾದರೆ ಮತ್ತೆ ಇನ್ನೂ ಏನು ಸುಳ್ಳು ಹೇಳಿದ್ದೀರಾ? ಎಂದಳು. ಹೊರಗಡೆ ಶಾಂತಮ್ಮ ಒದರುತ್ತ ಇದ್ದರು. ನೋಡಿ ನೀವು ಒಂದು ಕೋಲು ತೆಗೆದುಕೊಂಡು ಹೋಗಿ ಓಡಿಸಲು ಪ್ರಯತ್ನಿಸಿ ಎಂದಳು. ಈಗ ಇಲ್ಲ ಎಂದರೆ ನಮ್ಮ ಮರ್ಯಾದೆನೇ ಹೋಗೋದು ಎಂದಳು. ಹೆಚ್ಚು ಕಡಿಮೆ ಆದರೆ ಜೀವಾ ಹೋಗುತ್ತೆ, ಆಮೇಲೆ ಮರ್ಯಾದೆ ಇಟ್ಟು ಕೊಂಡು ಒಗ್ಗರಣೆ ಹಾಕುತ್ತೀಯಾ? ಎಂದೆ. ನಾನು ನಿಮ್ಮ ಜೊತೆ ಇರುತ್ತೇನೆ ಬನ್ನಿ ಎಂದಳು. ನಡಿ ನೋಡೋಣ ಎಂದು "ಹೆಂಡತಿಯೊಬ್ಬಳು ಹತ್ತಿರವಿದ್ದರೆ ನಾನು ಒಬ್ಬ ಸಿಪಾಯಿ" ಎಂದು ಹರಳೆಣ್ಣೆ ಕುಡಿದ ಹಾಗೆ ಮುಖ ಮಾಡಿ ಹೊರಟು ನಿಂತೆ.

ಶಾಂತಮ್ಮ ಮನೆ ಕಡೆಗೆ ಹೊರಟು ನಿಂತೆವು. ನಾನು ಚಿಕ್ಕದು ಇದೇನಾ ದೊಡ್ಡದು ಇದೇನಾ ಎಂದು ಕೇಳಿದೆ. ದೊಡ್ಡದು ಎಂದರು. ಯಾವ ಕಲರ್ ಇದೆ ಎಂದು ಕೇಳಿದೆ. ಅದು ನಾಗರ ಹಾವು ಎಂದು ಕಾಣುತ್ತೆ ಕಂದು ಎಂದರು. ಈಗ ಮತ್ತಷ್ಟು ನಡುಕ ಶುರು ಆಯಿತು. ಯಾವಾಗ ಬಂತು ಎಂದು ಕೇಳಿದೆ. ಬಂದು ಅರ್ಧ ಘಂಟೆ ಆಗಿದೆ ಎಂದರು. ನೀವು ಓಡಿಸಲು ಪ್ರಯತ್ನಿಸಲಿಲ್ಲವೇ ಎಂದು ಕೇಳಿದೆ. ನಾನು ಪ್ರಯತ್ನ ಪಟ್ಟೇ ಆದರೆ ಏನು ಪ್ರಯೋಜನ ಆಗಲಿಲ್ಲ ಎಂದರು.

ಶಾಂತಮ್ಮನ ಮನೆ ಪ್ರವೇಶಿಸಿ ಆಗಿತ್ತು. ಮನೆಯಲ್ಲಿ ಫ್ಯಾನ್ ಜೋರಾಗಿ ತಿರುಗುತ್ತಾ ಇತ್ತು. ಕಪಾಟಿನಲ್ಲಿ ಇದೆ ಎಂದು ಹೇಳಿದರು. ಕೈಯಲ್ಲಿ ಕೋಲು ಹಿಡಿದು ನಡುಗುತ್ತಾ ಹೊರಟೆ. ತಟ್ ಎಂದು ಹಿಂದಿನಿಂದ ಬೆಕ್ಕು ಮೇಲಿಂದ ಜಿಗಿದು ಕಾಲಿನ ಒಳಗಿಂದ ನುಸುಳಿ ಹೋಯಿತು. ಒಂದು ಕ್ಷಣ ಎದೆ ಬಡಿತ ನಿಂತು ಹೋಗಿತ್ತು. ಮತ್ತೆ ಮುಂದೆ ಹೋದೆ. ಕೋಲಿನಿಂದ ಕಟ್ ಕಟ್ ಶಬ್ದ ಮಾಡಿದೆ. ಹಾವು ಅಲುಗಾಡಲಿಲ್ಲ. ಇನ್ನೂ ಸ್ವಲ್ಪ ಮುಂದೆ ಹೋಗಿ ಎಂದರು ಶಾಂತಮ್ಮ. ನನ್ನ ಕೊಲೆ ಮಾಡೋಕೆ ನೋಡುತ್ತಿದ್ದೀರ ಎಂದು ಮನಸಿನಲ್ಲೇ ಅಂದುಕೊಂಡೆ. ಏನೇ ಮಾಡಿದರು ಮುಂದೆ ಹೋಗಲು ಆಗಲಿಲ್ಲ.

ಅಷ್ಟರಲ್ಲಿ ಶಂತಮ್ಮ ಅವರ ಮೊಮ್ಮಗ ಕ್ರಿಕೆಟ್ ಆಡಿ ಮನೆಗೆ ಬಂದ. ಅಜ್ಜಿ ತಡೆದು ನಿಲ್ಲಿಸಿದರು. ಮನೇಲಿ ಹಾವು ಕಣೋ ನಿಲ್ಲು ಎಂದರು. ನಾನು ಕೋಲು ಹಿಡಿದು ಸಾವಕಾಶವಾಗಿ ಅದರ ಹತ್ತಿರ ಹೋಗಿದ್ದೆ. ಅದನ್ನು ನೋಡಿದ ಆ ಹುಡುಗ ಓಡಿ ಬಂದವನೇ ಆ ಹಾವನ್ನು ತೆಗೆದುಕೊಂಡು ಓಡಿ ಹೋಗಿ ಬಿಟ್ಟ. ನನಗಂತು ಎದೆ ಝಲ್ ಎಂದಿತ್ತು. ಅಜ್ಜಿ ಚಿರುತ್ತ ಇತ್ತು. ಪ್ಲೀಸ್ ನೋಡಿ ನನ್ನ ಮೊಮ್ಮಗನನ್ನು ಕಾಪಾಡಿ ಎಂದು ಗೋಗರೆದರು. ನಾನು ಬಚಾವಾದೆ ಎಂದು ಖುಷಿಪಟ್ಟರು. ಆ ಅಜ್ಜಿಯ ಅಳು ನೋಡಲು ಆಗಲಿಲ್ಲ.

ಕಡೆಗೆ ಆ ಹುಡುಗನನ್ನು ಬೆನ್ನು ಅಟ್ಟಿ ಕೊಂಡು ಹೋದೆ. ತುಂಬಾ ಚೂಟಿ ಹುಡುಗ ನಾನು ಬೆನ್ನು ಹತ್ತಿದಷ್ಟು ಜೋರಾಗಿ ಓಡ ಹತ್ತಿದ. ಕಡೆಗೂ ಸಿಕ್ಕಿ ಬಿಟ್ಟ. ಎಸೆ ಅದನ್ನು ಎಂದು ಹೇಳಿದೆ. ಇಲ್ಲ ನನಗೆ ಬೇಕು ಅಂದ. ಎಸೆ ಇಲ್ಲ ಎಂದರೆ ಹೊಡೆಯುತ್ತೇನೆ ಎಂದೆ. ನಾನು ದುಡ್ಡು ಕೊಟ್ಟು ತಂದಿದ್ದು ನಾನು ಎಸೆಯೋಲ್ಲ ಎಂದ. ನಾನು ಏನು ಮಾಡಬೇಕು ಎಂದು ತೋಚದಾಗದೆ ಜೋರಾಗಿ ನಗಹತ್ತಿದೆ. ಕಡೆಗೆ ಆ ಹುಡುಗನನ್ನು ಕೇಳಿದಾಗ ಅದು ರಬ್ಬರ್ ಹಾವು ಜಾತ್ರೆ ಇಂದ ತಂದಿದ್ದು ಎಂದು ಹೇಳಿದ.

ನಾನು ಮತ್ತು ನನ್ನ ಮಡದಿ ಜೋರಾಗಿ ನಗುತ್ತಾ ಇದ್ದೆವು. ಅಜ್ಜಿ ಮೊಮ್ಮಗನಿಗೆ ಬೈಯುತ್ತಾ ಇದ್ದಳು. ಹೇಳಬಾರದ ಮೊದಲೇ ಇದನ್ನು ಎಂದು. ನಾನು ನನ್ನ ಮಡದಿಗೆ ಇನ್ನೊಮ್ಮೆ ಹೀಗೆಲ್ಲ ನನ್ನ ಬಗ್ಗೆ ಜಂಭ ಕೊಚ್ಚಿ ಯಾರ ಮುಂದೆಯೂ ಹೇಳಬೇಡ ಎಂದು ತಾಕೀತ ಮಾಡಿ ಮನೆಗೆ ಬಂದೆವು. ನನ್ನ ಮಡದಿ ಮಾತ್ರ ನಗುವುದನ್ನು ನಿಲ್ಲಿಸಿರಲೇ ಇಲ್ಲ.

Thursday, October 28, 2010

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರುಪಾಯಿ!!

ನಾನು ಆಫೀಸ್ನಿಂದ ಬರುವ ಸಮಯದಲ್ಲಿ ಚಾಮರಾಜ್ ಪೇಟೇ ಸಮೀಪ ಇರುವ ಹೋಟೆಲ್ ಹೊಕ್ಕೆ. ನಾನು ಇಡ್ಲಿ ತಿನ್ನುತ್ತಾ ಇದ್ದಾಗ ನನ್ನ ಹಿಂದೆ ಇರುವ ವ್ಯಕ್ತಿ ಬಿಸ್ಲೆರಿ ಇದೆಯಾ? ಎಂದು ಕೇಳಿದ. ಅದಕ್ಕೆ ಅಂಗಡಿಯವನು ಇಲ್ಲ ಎಂದ. ಹೋಗಲಿ ಚಟ್ನಿ ಹಾಕಿ ಎಂದು, ಚಟ್ನಿ ಹಾಕಿಸಿಕೊಂಡು ಇಡ್ಲಿ ತಿಂದು ಹೋದ. ನನಗೆ ಆಶ್ಚರ್ಯ ಚಟ್ನಿ ತಿಂದರೆ ಬಾಯಾರಿಕೆ ಹೋಗುತ್ತಾ? ಎಂದು. ಕಡೆಗೆ ಅಲ್ಲೇ ಇದ್ದ ನೀರನ್ನು ಕುಡಿದ. ಮತ್ತೆ ಅವನ ಫೋನ್ ರಿಂಗ್ ಆದ ಹಾಗೆ ಆಯಿತು. "ಹಲ್ಲು" ಎಂದು ಮಾತನಾಡಿದ. ಅಲ್ಲಿಂದ ಉತ್ತರ ಬರಲಿಲ್ಲ. ಅದು ಕರೆ ಆಗಿರದೇ, ಅಲಾರಂ ಆಗಿತ್ತು. ತನ್ನ ಬಳಿ ವಾಚ್ ಇದ್ದರು ನನಗೆ ಟೈಮ್ ಎಷ್ಟು ಎಂದು ಕೇಳಿದ. ಮತ್ತೆ ಅವನಿಗೆ ಒಂದು ಫೋನ್ ಬಂದಿತು. ಅದರಲ್ಲಿ ಯಾವಾಗ ನಾಳೆ ಬರುತ್ತಿಯಾ? ಎಂದು ಕೇಳಿದ. ಬಹುಶಃ ಅವನ ಹೆಂಡತಿಯದು ಎಂದು ಕಾಣುತ್ತೆ. ತಡಬಡಿಸಿ ಹೊರಟು ಹೋದ. ಹೆಂಡತಿ ಅಂದರೆ ಭಯ-ಭಕ್ತಿ ಎಂದು ಕಾಣುತ್ತೆ. ನಾನು ತಿಂಡಿ ತಿಂದು ನನ್ನ ಸ್ಕೂಟರ್ ಏರಿದೆ.

"ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ... ನಗುತ ನೀ ಕರೆದರೆ ಮನದೆ ಸಂತೋಷ ಹಾಡಾದಂತೆ " ಕ್ಷಮಿಸಿ ಹಾಳಾದಂತೆ ಎಂದು ಹಾಡುತ್ತಾ ಮನೆ ಕಡೆಗೆ ಹೊರಟೆ. ನನ್ನ ಮಡದಿ ನಗುತ್ತ ಕರೆದರೆ ಏನೋ ಒಂದು ದೊಡ್ಡ ಬಜೆಟ್ ಮಂಡನೆ ಇರುತ್ತೆ ನಮ್ಮ ಮನೇಲಿ ಎಂದು ಅರ್ಥ. ಮನೆ ತಲುಪಿದ್ದೆ. ಮನೆಗೆ ನಮ್ಮ ಎದಿರು ಮನೆ ಶ್ಯಾಮ್ ರಾಯರ ಅಳಿಯನ ಹೆಂಡತಿ ಬಂದಿದ್ದಳು. ತುಂಬಾ ಒಡವೆಗಳನ್ನು ತಂದು ತೋರಿಸುತ್ತಾ ಇದ್ದಳು. ಇದರ ಗೊಡವೆ ಬೇಡ ಎಂದು ನಾನು ಬೇರೆ ರೂಂಗೆ ಹೋದೆ. ರೀsss ಎಂದು ಕರೆದು. ಈ ನೆಕ್ಕ್ಲೆಸ್ ಎಷ್ಟು ಚೆನ್ನಾಗಿ ಇದೆ ಅಲ್ರೀ ಎಂದಳು ನನ್ನ ಮಡದಿ. ತುಂಬಾ ಚೆನ್ನಾಗಿದೆ ಎಂದೆ. ನನಗು ಒಂದು ಇದೆ ತರಹ ಇರುವ ನೆಕ್ಕ್ಲಸ್ ಕೊಡಿಸಿ ಎಂದು ಅರ್ಜಿ ಗುಜರಾಯಿಸಿದಳು. ನಾನು ನೋಡೋಣ ಎಂದು ಹೇಳಿದೆ. ಚಿನ್ನದ ಬೆಲೆ ಗಗನಕ್ಕೆ ಏರಿದೆ ಎಂದು ಗೊತ್ತಿದ್ದರು, ಈ ಹೆಣ್ಣು ಮಕ್ಕಳು ಆಕಾಶಕ್ಕೆ ಏಣಿ ಹಾಕುವುದನ್ನು ಬಿಡುವುದಿಲ್ಲ ಎಂದು ಮನಸಿನಲ್ಲೇ ಅಂದುಕೊಂಡೆ. ನಮ್ಮ ಯಜಮಾನರು ಒಂದು ಕಾಸಿನ ಸರ ಮಾಡಿಸಿದ್ದರು ೬ ವರ್ಷದ ಹಿಂದೆ, ಅದನ್ನು ಪಾಲಿಷ್ ಮಾಡಲು ಕೊಟ್ಟಿದ್ದೇನೆ ಎಂದಳು ನನ್ನ ಮಡದಿ. ಮದುವೆ ಆಗಿ ಇನ್ನೂ ಐದು ವರ್ಷ ಆಗಿಲ್ಲ ಆರು ವರ್ಷದ ಹಿಂದೆ ನಾನು ಏನು? ಕೊಟ್ಟಿದ್ದೆ ಎಂದು ಪೇಚಿಗೆ ಬಿದ್ದೆ. ಏನ್ರೀ ಎರಡು ತಿಂಗಳು ಆಯಿತು ಅದನ್ನು ಕ್ಲೀನ್ ಮಾಡಲು ಕೊಟ್ಟು ತೆಗೆದುಕೊಂಡು ಬನ್ನಿ ಎಂದಳು ನನ್ನ ಮಡದಿ. ಆಯಿತು ಎಂದು ಮತ್ತೆ ಒಳಗಡೆ ಹೋದೆ.

ಮೊಬೈಲ್ ನಲ್ಲಿ ಹಾಡು ಹಚ್ಚಿದೆ. ಈಗ ಟಿ ವಿ ನನಗೆ ಸಿಗುವದು ಕಷ್ಟ ಏಕೆಂದರೆ ತನ್ನ ಗಂಡನ ಎಲ್ಲಾ ಧಾರಾವಾಹಿಗಳನ್ನು ನನ್ನ ಮಡದಿಗೆ ಶ್ಯಾಮ್ ರಾಯರ ಅಳಿಯನ ಹೆಂಡತಿ ತೋರಿಸುತ್ತಾಳೆ. ಅದೇ ನನಗೆ ತುಂಬಾ ಇಷ್ಟವಾದ ಹಾಡು. ಅದ್ಯಾಕೋ ಗೊತ್ತಿಲ್ಲ "ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರುಪಾಯಿ!" ಹಾಡು ಎಂದರೆ ನನಗೆ ತುಂಬಾ ಇಷ್ಟ. ಅದನ್ನು ನಾನು ಅರ್ಥ ಮಾಡಿಕೊಳ್ಳುವ ರೀತಿ ಮಾತ್ರ ಬೇರೆ.. ಬೇರೆ ..

ಹೆಂಡತಿ ಯಾವತ್ತೂ ಒಬ್ಬಳೇ ಮನೆಯಲ್ಲಿ ಇರಬೇಕು ಇಲ್ಲ ಎಂದರೆ ಅಧೋಗತಿ. ತಪ್ಪು ತಿಳೀಬೇಡಿ ಅಕ್ಕ ಪಕ್ಕದವರ ಜೊತೆ ಇದ್ದರೆ ಎಂಬ ಅರ್ಥದಲ್ಲಿ ಹೇಳಿದ್ದು. ನೀವೇನೂ ಎರಡು ಮೂರು ಎಂಬ ಅರ್ಥದಲ್ಲಿ ಎಂದು ತಿಳೀದಿರೋ... ಅಲ್ಲಿ ನಡೆಯುವ ಚರ್ಚೆ ಸೀರೆ ಮತ್ತು ಒಡವೆಗಳ ಬಗ್ಗೆ ಇರುತ್ತೆ. ಇಲ್ಲದ ಒಡವೆಗಳನ್ನು ಇದೆ ಎಂದು ಸಾಧಿಸುವ ಮತ್ತು ಒಂದಕ್ಕೆ ಎರಡು ಪಟ್ಟು ರೇಟ್ ಏರಿಸುತ್ತಿರುತ್ತಾರೆ. ಅಕ್ಕ ಪಕ್ಕದವರ ಜೊತೆ ಇದ್ದರೆ ಗಂಡನ ಬಗ್ಗೆ ಇಲ್ಲದ ಗೌರವ ಕೂಡ ಸಿಕ್ಕಿರುತ್ತೆ.

ಹೆಂಡತಿಯೊಬ್ಬಳು ಮನೆಯೊಳಗೆ ಇದ್ದರೆ ಸಾಕು ಇಲ್ಲ ಎಂದರೆ, ಹೆಂಡತಿಯೊಬ್ಬಳು ಮನೆ ಹೊರಗೆ ಇದ್ದರೆ ನನಗದೆ ಕೋಟಿ ರುಪಾಯಿ ಖರ್ಚು. ನಿಜ ಅಲ್ವಾ ಹೊರಗಡೆ ಹೋದರೆ ಮಾಲ್, ಶಾಪಿಂಗ್ ಎಂದು ಎಲ್ಲಾ ದುಡ್ಡುನ್ನು ಖರ್ಚು ಮಾಡಿಬಿಡುತ್ತಾರೆ.

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನ್ನ ಗೆಳಯರು ಕೂಡ ಮನೆಗೆ ಬರಲು ಹೆದರುತ್ತಾರೆ. ಬಂದರು ಎಣ್ಣೆ ಪಾರ್ಟೀಗೆ ಮಾತ್ರ ಕರಿಯೋದಿಲ್ಲ. ಮತ್ತು ಸಾಲ ಏನಾದರೂ ಕೊಟ್ಟಿದ್ದರು ಕೇಳುವದಿಲ್ಲ. ಮತ್ತು ನಮ್ಮ ಹತ್ತಿರ ಸಾಲ ಕೇಳುವದಿಲ್ಲ.

ಹಾಡು ಮುಗಿಯುತ್ತಿದ್ದಂತೆ ನನ್ನ ಮೂರು ವರ್ಷದ ಸುಪುತ್ರ ಅಮ್ಮ ಒಂದು ಕ್ಯಾಲ್ಶಿಯಮ್ ಗುಳಿಗೆ ಕೊಡು ಎಂದು ಕೇಳಿದ. ಅಪ್ಪ ರೂಮಿನಲ್ಲಿ ಇದ್ದಾರೆ ಅವರ ಹತ್ತಿರ ಕೇಳು ಎಂದು ಹೇಳಿದಳು. ನನ್ನ ಹತ್ತಿರ ಬಂದು ಕೇಳಿದ ನಾನು ಒಂದು ಗುಳಿಗೆ ಕೊಟ್ಟೆ. ಅಪ್ಪ ಉಲ್ಟಾ ಕೊಡುತ್ತಿದ್ದೀಯಲ್ಲ ಎಂದ. ನಾನು ಇದರಲ್ಲಿ ಉಲ್ಟಾ-ಸೀದಾ ಏನು ಇರುತ್ತೆ ಎಂದು ಕೇಳಿದೆ. ಗುಳಿಗೆಯ ಹೆಸರು ಇದ್ದ ಕಡೆ ಮೇಲೆ ಮಾಡಿ ಕೊಡಬೇಕು ಎಂದು ತಾಕಿತ ಮಾಡಿದ, ಆಯಿತು ಮುಂದಿನ ಬಾರಿ ಸರಿಯಾಗಿ ಕೊಡುತ್ತೇನೆ ಎಂದು ಹೇಳಿದೆ. ಅವನ ತಿಳುವಳಿಕೆಗೆ ನಾನು ಪೇಚು ಬಿದ್ದೆ. ಅಷ್ಟರಲ್ಲಿ ಶ್ಯಾಮ್ ರಾಯರ ಅಳಿಯನ ಹೆಂಡತಿ ಮನೆಗೆ ಹೊರಟು ಹೋದಳು. ರೀss ಎಂದು ನನ್ನ ಹೆಂಡತಿ ಉಲಿದಳು. ನಾನು ನನ್ನ ಜೇಬನ್ನು ಒಮ್ಮೆ ಮುಟ್ಟಿಕೊಂಡೆ. ಅಷ್ಟರಲ್ಲಿ ನನ್ನ ಖಾರದ ಕಾರ್ಡ್ ನನ್ನ ನೋಡಿ ನಗುವ ಹಾಗೆ ಅನ್ನಿಸಿತು

Wednesday, October 27, 2010

ಸಿಹಿ ಮೊಗ್ಗೆ ಅರಳಿದಾಗ ....

ಬಳ್ಳಾರಿ ಸುಮಧುರ ನೆನಪಿನೊಂದಿಗೆ(ಬಳುಕುವ ಬಿಂಕದ ಬಳ್ಳಾರಿ ....) ಶಿವಮೊಗ್ಗ ಬಂದು ತಲುಪಿದ್ದೆ. ನಾನು ಬಳ್ಳಾರಿಯ ಬಸ್ ಹತ್ತುವ ಭರದಲ್ಲಿ ನನ್ನ ರಗ್ ಅಲ್ಲೇ ಬಿಟ್ಟು ಬಂದಿದ್ದೆ. ಏಕೆಂದರೆ ಅದನ್ನು ನಾನು ಉಪಯೋಗಿಸಿ ತುಂಬಾ ದಿನಗಳು ಆಗಿತ್ತು. ಅದನ್ನು ತೆಗೆದು ಕೊಂಡು ಬಂದಿದ್ದರು ಎನೂ ಪ್ರಯೋಜನ ಆಗುತ್ತಿರಲಿಲ್ಲ. ಏಕೆಂದರೆ ಅಷ್ಟು ಸುಮಧುರ ಪರಿಮಳ ಸೂಸುತಿತ್ತು. ಆಗ ತಾನೇ ಬೀಳುತ್ತಿದ್ದ ಮಂಜಿನ ಹನಿಗಳು ಮತ್ತು ಚಿಲಿಪಿಲಿ ಕಲರವ ನನಗೆ ಎಬ್ಬಿಸಿತ್ತು. ಎಚ್ಚರವಾದಾಗ ಶಿವಮೊಗ್ಗ ತಲುಪ್ಪಿದ್ದೆ. ಆ ಮಾಗಿಯ ಚಳಿಗೆ ನಾನು ನಡುಗುತ್ತಾ ಒಂದು ಕಪ್ ಕಾಫಿ ಹಿರಿ ಡೈರಿ ಬಸ್ ಹತ್ತಿದೆ.

ಹರ್ಷ ಅಗಲೆ ನನ್ನನ್ನು ಕಾಯುತ್ತಿದ್ದರು. ಡೈರಿಯವರೇ ನಮಗೆ ಒಂದು ಕ್ವಾರ್ಟರ್ಸ್(ಎಣ್ಣೆ ಅಲ್ಲ) ಕೊಟ್ಟಿದ್ದರು. ತುಂಬಾ ಚೆನ್ನಾಗಿ ಇತ್ತು ನಮ್ಮ ಕ್ವಾರ್ಟರ್ಸ್. ನಾನು ತುಂಬಾ ದಣಿವಾಗಿದ್ದರಿಂದ ಸ್ವಲ್ಪ ವಿಶ್ರಾಂತಿ ತೆಗೆದು ಕೊಂಡೆ. ಆಗ ಮಂಜುನಾಥ್ ಎದ್ದು ರೆಡೀ ಆಗಿ ಆಫೀಸ್ ಹೊರಡಲು ಅನುವಾದರೂ. ನಾನು ಮತ್ತೆ ಹರ್ಷ ಇನ್ನೂ ಮಲಗಿದ್ದೆವು.

ಸುತ್ತಲೂ ತುಂಬಾ ಗಿಡ,ಮರಗಳು ಇದ್ದವು. ಸುಂದರ ಪ್ರಕೃತಿ, ಆದರೆ ಮನೆಯಲ್ಲಿ ಯಾಕೋ ಸ್ವಲ್ಪ ಕೆಟ್ಟ ವಾಸನೆ ಬರುತಿತ್ತು. ಹರ್ಷ ಕ್ಲೀನ್ ಮಾಡಿ ಎಂದು ಹೇಳಿದೆ. ಹರ್ಷ ಎಲ್ಲಿ? ಇದೆ ಸರ್ ವಾಸನೆ ಎಂದರು. ನನಗೆ ಒಬ್ಬನಿಗೆ ವಾಸನೆ ಬರುತಿತ್ತಾ ಅಥವಾ ಅವರು ಆ ವಾಸನೆಗೆ ಹೊಂದಿಕೊಂಡು ಬಿಟ್ಟಿದ್ದರಾ ತಿಳಿಯಲಿಲ್ಲ. ಕೆಲ ಸಮಯದ ನಂತರ ನಾನು ಕೂಡ ಆ ವಾಸನೆ ಹೊಂದಿಕೊಂಡುಬಿಟ್ಟೆ ಎಂದು ಅನ್ನಿಸುತ್ತದೆ.

ಮರುದಿನ ನಮ್ಮ ಡೈರೆಕ್ಟರ್ ಬರುವವರು ಇದ್ದರು. ನಾವು ಅವರು ಬರುವ ಮುಂಚೆ ಎಲ್ಲಾ ಕೆಲಸ ಮುಗಿಸಬೇಕಿತ್ತು. ನಾವು ಮೊದಲು ಮಾರ್ಕೆಟಿಂಗ್ ಡಿಪಾರ್ಟ್‌ಮೆಂಟ್ ಕಂಪ್ಯೂಟರೈಸ್ ಮಾಡುವುದಿತ್ತು, ನಿನ್ನೆ ಅದನ್ನು ಮಾಡಿ ಆಗಿತ್ತು. ಆದರೆ ಸೇಲ್ಸ್ ಸ್ಟೇಟ್ಮೆಂಟ್ ಕರೆಕ್ಟ್ ಇಲ್ಲ ಎಂದು ಮಂಜುನಾಥನಿಗೆ ಬೈಯುತ್ತಾ ಇದ್ದರು. ಅದನ್ನು ನಿಮ್ಮ ಕಂಪನೀಯವರೇ ಕೊಡಬೇಕು ಎಂದು ಹೆದರಿಸುತ್ತಾ ಇದ್ದರು. ನಾನು ಹೋಗಿ ಅದನ್ನು ಸರಿಪಡಿಸಿದೆ. ಮಂಜುನಾಥ ತುಂಬಾ ಹೆದರಿದ್ದರು. ಡೇಲೀ ಅಕೌಂಟ್ ಸರಿಪಡಿಸಿದ ಮೇಲೆ ಅಕೌಂಟ್ ಸ್ಟೇಟ್ಮೆಂಟ್ ನಲ್ಲಿ ದುಡ್ಡು ಹೆಚ್ಚಿಗೆ ಬಂದಿತ್ತು. ಅದನ್ನು ನೀವು ನಮಗೆ ಕೊಡಬೇಕು ಎಂದು ನಾನು ದಬಾಯಿಸಿದಾಗ ಸುಮ್ಮನೇ ದಾರಿಗೆ ಬಂದಿದ್ದರು. ಮಂಜುನಾಥ್ ನೌಕರಿ ಬಿಡುವೆ ನನಗೆ ಈ ಜಂಜಾಟ ಸಾಕು ಎಂದು ಮನೆಗೆ ಹೊರಟು ನಿಂತಿದ್ದ. ನಾನು ಅವನಿಗೆ ಇದು ಎಲ್ಲಾ ಸರ್ವೇ ಸಾಮಾನ್ಯ ಎಂದು ಅವನಿಗೆ ತಿಳಿಹೇಳಿದೆ. ಕಡೆಗೆ ಮಂಜುನಾಥ್ ಒಪ್ಪಿಕೊಂಡರು.

ನಾವೆಲ್ಲರೂ ಸೇರಿ ಸಂಜೆಗೆ ಭದ್ರಾವತಿಯಲ್ಲಿ ಇರುವ ಶ್ರೀ ಲಕ್ಷೀ ನರಸಿಂಹ ದೇವಸ್ಥಾನಕ್ಕೆ ಹೋದೆವು. ಬರುವಾಗ ನೀರದೋಸೆ ತಿಂದು ಬಂದೆವು.

ಮರುದಿನ ಬೆಳಿಗ್ಗೆ ನಮ್ಮ ಡೈರೆಕ್ಟರ್ ಬಂದಿದ್ದರು. ಅವರು ನಮಗೆ ಎಷ್ಟು ಡಿಪಾರ್ಟ್‌ಮೆಂಟ್ ಕಂಪ್ಯೂಟರೈಸ್ ಆಗಿದೆ ಎಂದು ಕೇಳಿದರು. ನಾವು ಬರಿ ಮಾರ್ಕೆಟಿಂಗ್ ಎಂದಾಗ, ಏನು? ಬರೀ ಮಾರ್ಕೆಟಿಂಗ್ ಮತ್ತೆ ಉಳಿದ ಡಿಪಾರ್ಟ್‌ಮೆಂಟ್ ಎಂದಾಗ. ನಾನು ಅವರು ತಮ್ಮ ಹಳೆಯ ಸಿಸ್ಟಮ್ ಬಿಟ್ಟು ನಮ್ಮ ಸಾಫ್ಟ್‌ವೇರ್ಗೆ ಹೊಂದಿಕೊಳ್ಳುತ್ತಿಲ್ಲ ಎಂದಾಗ. ನೀವು ಅವರಿಗೆ ನಮ್ಮ ಸಾಫ್ಟ್‌ವೇರ್ ರುಚಿ ಹಚ್ಚಿಸಬೇಕು(If you want to eat frog, first put it in water and let it swim, afterwards put fire in the down.) ಎಂದು ಹೇಳಿದರು. ನೀವು ಹೀಗೆ ಆದರೆ ಸಂಡೆ ಕೂಡ ಕೆಲಸ ಮಾಡಬೇಕು ಎಂದರು. ಅದಕ್ಕೆ ಹರ್ಷ ಸಂಡೆ ಸರ್ ಎಂದ. ಅದಕ್ಕೆ ನಮ್ಮ ಕಂಪನೀ ಪಾಲಿಸೀ ಏನು ಗೊತ್ತಾ ನಿಮಗೆ Every day is sunday, But sunday is working day ಎಂದು ಹೇಳಿದರು. ನಾವು ತಿಂಡಿಗೆ ಹೊರಡುತ್ತಲಿದ್ದೆವು, ಆಗ ಡೇರೀ ಮ್ಯಾನೇಜರ್ ಭೇಟಿ ಆಯಿತು. ಅವರ ಕ್ಷೇಮ ಸಮಾಚಾರ ಆದ ಮೇಲೆ ಅವರನ್ನು ತಿಂಡಿಗೆ ಆಹ್ವಾನಿಸಿದೇವು. ಅವರು "ನಾನು ರಾಗಾಡ ಅನ್ನ" ತಿಂದು ಬಂದಿದ್ದೇನೆ ಎಂದು ರಾಗದಲ್ಲಿ ಹೇಳಿದರು. ನನಗೆ ಮತ್ತು ನಮ್ಮ ಡೈರೆಕ್ಟರ್ ಗೆ ಅರ್ಥ ಆಗಲಿಲ್ಲ. ಒಬ್ಬರನ್ನೊಬ್ಬರು ಮುಖ ಮುಖ ನೊಡಿಕೊಂಡೆವು. ಅವರು ಹೋದ ನಂತರ ಹರ್ಷನಿಗೆ ಕೇಳಿದಾಗ ನಮಗೆ ತಿಳಿದಿತ್ತು ಅದು ರಾಗಾಡ ಅಲ್ಲ ರಗಡ(ಬೇಜಾನ) ಎಂದು. ಎಲ್ಲರೂಅದು ಕೇಳಿದ ನಂತರ ನಗೆಯಲ್ಲಿ ತೇಲಿದ್ದೆವು.

ಮೀಟಿಂಗ್ ನಲ್ಲಿ ಒಂದು ತಿಂಗಳಲ್ಲಿ ಎರಡು ಡಿಪಾರ್ಟ್‌ಮೆಂಟ್ ಕಂಪ್ಯೂಟರೈಸ್ ಮಾಡಬೇಕು ಎಂದು ಹೇಳಿದರು. ನನ್ನ ಠಿಕಾಣಿ ಇನ್ನೂ ಒಂದು ವಾರ ಹೆಚ್ಚು ಆಯಿತು. ನಮ್ಮ ಡೈರೆಕ್ಟರ್ ಊರಿಗೆ ಹೊರಟು ಹೋದರು. ನಾನು ಹರ್ಷ ಮತ್ತು ಮಂಜನಾಥ ಮಲಗಿ ಕೊಂಡಿದ್ದೆವು. ಏನೋ ಕಟ್ ಕಟ್ ಶಬ್ದ ನಾನು ಸುಮ್ಮನೇ ಹಾಗೆ ಹೆದರಿ ಚಾದರ್ ಹೊದ್ದಿಕೊಂಡು ಮಲಗಿ ಬಿಟ್ಟೆ. ಮುಂಜಾನೆ ಎದ್ದು ಏನು? ಆ ಶಬ್ದ ಎಂದು ಹರ್ಷನಿಗೆ ಕೇಳಿದೆ. ಅದು ಹುಳಗಳು ಸರ್ ಎಂದ.ಮಂಜುನಾಥ ಅಗಲೆ ಎದ್ದು ಆಫೀಸ್ ಹೊರಟು ನಿಂತಿದ್ದರು. ನಾನು ಮತ್ತೆ ಹರ್ಷ ರೆಡೀ ಆಗಿ ಪ್ರೊಡಕ್ಶನ್ ಡಿಪಾರ್ಟ್‌ಮೆಂಟ್ ಗೆ ಹೋದೆವು. ಮಂಜುನಾಥ ಅಲ್ಲೇ ಒಂದು ರಿಪೋರ್ಟ್ ಮಾಡುತ್ತಲಿದ್ದರು. ಇವರು ಪ್ರೊಡಕ್ಶನ್ ಡಿಪಾರ್ಟ್‌ಮೆಂಟ್ ನಲ್ಲಿ ಕೊಡುವ ಮಜ್ಜಿಗೆ, ಪೇಡ ಅಥವಾ ಮೈಸೂರು ಪಾಕ ಸಲುವಾಗಿ ಎಂದು ತಿಳಿದಿದ್ದೆವು. ಆದರೆ ಅವರು ಅಲ್ಲಿ ಹೋಗುತ್ತಾ ಇದ್ದಿದ್ದು ಒಂದು ಸಿಹಿ ಮೊಗವನ್ನು ಸವಿಯಲು ಎಂದು ಆಮೇಲೆ ತಿಳಿಯಿತು. ಎಲ್ಲಕಿಂತ ಮೊದಲು ಪ್ರೊಡಕ್ಶನ್ ಡಿಪಾರ್ಟ್‌ಮೆಂಟ್ ಕಂಪ್ಯೂಟರೈಸ್ ಆಗಿತ್ತು. ಸಿಹಿ ಮೊಗದ ಹಿಂದಿನ ಪವಾಡ ಕೆಲಸ ಮಾಡಿತ್ತು.

ಟೀಮ್ ಲೀಡರ್ ಆದ ನನಗೆ ಇದರಿಂದ ಶಹಭಾಷ್ ಗಿರಿ ಸಿಕ್ಕಿತ್ತು. ಮತ್ತೆ ಪ್ರೊಕ್ಯೂರ್ಮೆಂಟ್ ಡಿಪಾರ್ಟ್‌ಮೆಂಟ್ ಕಂಪ್ಯೂಟರೈಸ್ ಮಾಡಿದೆವು. ನಮ್ಮ ಕೆಲಸ ನೋಡಿ ಖುಷಿಯಾದ ಡೇರೀ ಯಲ್ಲಿರುವ ಅಷ್ಟು ಡಿಪಾರ್ಟ್‌ಮೆಂಟ್ ನವರು ನಮ್ಮದು ಮುಂದೆ ತಮ್ಮದು ಮುಂದೆ ಎಂದು ನಮ್ಮ ಮುಂದೆ ಕ್ಯೂ ನಿಂತಿದ್ದರು.ಎರಡೇ ತಿಂಗಳಲ್ಲಿ ಅಷ್ಟು ಡಿಪಾರ್ಟ್‌ಮೆಂಟ್ ಕಂಪ್ಯೂಟರೈಸ್ ಮಾಡಿ ಆಗಿತ್ತು. ಅಷ್ಟರಲ್ಲಿ ಮಂಜುನಾಥ ಬೆಂಗಳೂರು ಬಂದು ಸೇರಿದ. ಕೆಲ ದಿನಗಳು ಆದ ಮೇಲೆ ಸಿಹಿ ಮೊಗದ ಚೆಲುವೆಯನ್ನು ಸೆಕ್ಯೂರಿಟೀ ಆಫೀಸರ್ ಮದುವೆ ಕೊಂಡಿದ್ದ. ಮಂಜುನಾಥನಿಗೆ ಇದನ್ನು ಹೇಳಿದಾಗ ತುಂಬಾ ನೊಂದುಕೊಂಡಿದ್ದ. ಏಕೆಂದರೆ ಅವಳಿಗೆ ಮೊದಲೇ ಮದುವೆ ಫಿಕ್ಸ್ ಆಗಿದೆ ಎಂದು ಅಲ್ಲಿಯೇ ಕೆಲಸ ಮಾಡುವ ಶ್ರೀನಿವಾಸ್ ಹೇಳಿದ್ದ. ಶ್ರೀನಿವಾಸ್ ಮದುವೆ ಫಿಕ್ಸ್ ಆಗಿದೆ ಎಂದು ಎಲ್ಲರಲ್ಲಿಯೂ ಹೇಳಿದ್ದ. ಏಕೆಂದರೆ ಅವನಿಗೆ ಅವಳ ಮೇಲೆ ಮನಸ್ಸಿತ್ತು. ಇದು ಶ್ರೀನಿವಾಸ್ ಮಾಡಿದ ಪ್ಲಾನ್.

ಕೆಲಸ ಮುಗಿದ ಮೇಲೆ ನಾನು ಧಾರವಾಡಕ್ಕೆ ಹೊರಟಿದ್ದೆ. ಆಗ ನನಗೆ ಬಸ್ ಸ್ಟ್ಯಾಂಡ್ ವರೆಗೂ ಕಳುಹಿಸಲು ಹರ್ಷ ಬಂದಿದ್ದರು. ಹರ್ಷಗೇ ನಾನು ಬಸ್ ಹತ್ತಿದ ಮೇಲೆ ಬೈ.. ಬೈ.. ಎಂದೆ. ನನ್ನ ಪಕ್ಕದಲ್ಲಿ ಇದ್ದ ಮನುಷ್ಯ ಕುಡಿದು ಬಂದಿದ್ದ. ರೀ ಕನ್ನಡದಲ್ಲಿ ಮಾತನಾಡಿ ಎಂದು ಅಂದ. ನಾನು ಬಾಯೀ ತಪ್ಪಿ ಸಾರೀ ಎಂದೆ. ಮತ್ತೆ ಸುಧಾರಿಸಿ ಕ್ಷಮಿಸಿ ಎಂದು ಹೇಳುವಷ್ಟರಲ್ಲೇ, ಆಯಿತು ಬಿಡಿ ಸಾರೀ ಹೇಳಿದಿರಲ್ಲ ಎಂದ.

ಕಡೆಗೆ ಇದಾದ ಮೂರೇ ತಿಂಗಳಲ್ಲಿ ನಾನು ಕೂಡ ಬೆಂಗಳೂರು ಸೇರಿದ್ದೆ. ಆದರೆ ಅಲ್ಲಿ ನಡೆದ ಘಟನೆಗಳು, ತಮಾಷೆಗಳು ಎಲ್ಲವೂ ಮನಸಿಗೆ ಮುದನೀಡುತ್ತವೆ.

Monday, October 11, 2010

ಸೀರೆಯಲ್ಲಿರುವ ನೀರೆ ....

ನನ್ನ ಮಡದಿ ತುಂಬಾ ಸಂತೋಷದಿಂದ ಇದ್ದಳು. ತವರು ಮನೆಗೆ ಹೋಗುವ ಸಂಭ್ರಮ. ಅವಳು ಇಷ್ಟು ಸಂತೋಷದಿಂದ ಇರುವದನ್ನು ನಾನು ನೋಡಿದ್ದು ಎರಡು ವಾರದ ಹಿಂದೆ ಹೊಸ ಸೀರೆ ಕೊಡಿಸಿದ್ದಾಗ.ಕಾಫೀ ಕುಡಿಯುತ್ತಾ ತುಂಬಾ ಸೀರಿಯಸ್ ಆಗಿ ಪೇಪರ್ ನೋಡುತ್ತಿದ್ದಳು. ಎರಡು ದಿನಗಳ ಹಿಂದೆ ಅಷ್ಟೇ ಮಹಾ ಸಂಗ್ರಾಮ ನಡೆದಿತ್ತು. ನೀನು ತವರು ಮನೆಗೆ ಹೋಗಬೇಡ ಎಂದು ಹೇಳಿದರು ಕೇಳಿರಲಿಲ್ಲ. ಸುಮ್ಮನೇ ಅವಳ ಮೇಲೆ ನನಗೆ ಎಷ್ಟು ಪ್ರೀತಿ ಎಂದು ತೋರಿಸಲು ಈ ಪೂರ್ವನಿಯೋಜಿತ ಸಂಗ್ರಾಮಕ್ಕೆ ನಾಂದಿ ಹಾಡಿದ್ದೇ. ನನಗೂ ಒಳಗೊಳಗೆ ಖುಷಿ, ಒಬ್ಬನೇ ಸಕ್ಕತ್ ಮಜಾ ಮಾಡಬಹುದು ಎಂದು. ಹೆಂಡತಿ ತವರು ಮನೆಗೆ ಹೋಗುತ್ತಾಳೆ ಎಂದರೆ ಯಾರಿಗೆ ತಾನೇ ಖುಷಿ ಇಲ್ಲ ನೀವೇ ಹೇಳಿ. ಇದೆಲ್ಲವೂ ನಮ್ಮ ಮಂಜ ಹೇಳಿ ಕೊಟ್ಟ ಟ್ರಿಕ್ಸ್.ಅದನ್ನು ನನ್ಮಗ ಮಂಜ ಟಿಪ್ಸ್(ಎಣ್ಣೆ ಪಾರ್ಟೀ) ಕೊಟ್ಟ ಮೇಲೆ ಟ್ರಿಕ್ಸ್ ಹೇಳಿಕೊಟ್ಟಿದ್ದ. ಮಂಜ ತನ್ನ ಮಡದಿಗೆ, ಗೊತ್ತು ಆಗಬಾರದು ಎಂದು ಕೆಮ್ಮಿನ ಔಷಧ ಬಾಟಲಿಯಲ್ಲಿ ಬ್ಲ್ಯಾಕ್ ಲೇಬಲ್ ಇಟ್ಟು ಕೊಂಡಿದ್ದಾನೆ. ಸುಮ್ಮನೆ ಕೆಮ್ಮಿದ ಹಾಗೆ ಮಾಡಿ ಅದನ್ನು ದಿನ ಸ್ವಾಹಾ ಮಾಡುತ್ತಾನೆ.

ನಾನು ರಾಜ್ಯದ ರಾಜಕೀಯ ವರ್ತಮಾನ ನೋಡುತ್ತಿರಬಹುದು ಎಂದು ಸುಮ್ಮನಿದ್ದೆ. ರೀsss ಬನ್ನಿ ಇಲ್ಲಿ ಎಂದು ಉಲಿದಳು. ನೋಡಿ ಇದು ಏನು ಸಕ್ಕತ್ತಾಗಿದೆ, ಎಂದು ಸೀರೆ ಜಾಹೀರಾತು ತೋರಿಸಿದಳು. ಆಹಾss ಎಂದು ಬಾಯಿ ತೆಗೆದು, ತುಂಬಾ ಸಕ್ಕತ ಆಗಿದ್ದಾಳೆ ಕಣೆ ಎಂದೆ.ರೀ ನಾನು ಹೇಳಿದ್ದು ಸೀರೆ ಬಗ್ಗೆ ಎಂದಳು. ಓsss ನಾನೆಲ್ಲೋ ಸೀರೆಯಲ್ಲಿರುವ ನೀರೆ ಬಗ್ಗೆ ಎಂದುಕೊಂಡೆ ಎಂದೆ. ಸದಾಶಿವನಿಗೆ ಅದೇ ಧ್ಯಾನ ಎಂದು ಅಂದಳು. ನೀವು ನೋಡಿ ತಂದಿದ್ದೀರ ಸೀರೆ, ಈ ತರಹ ಸೀರೆ ಕೊಡಿಸಬೇಕು ಎಂದಳು. ನಾನೇನೋ ತೆಗೆದುಕೊಂಡು ಬರುತ್ತೇನೆ ಕೊಡಲು ಅವಳು ತಯ್ಯಾರ ಇರಬೇಕಲ್ಲ ಎಂದೆ. ಇದೊಂದು ಕಮ್ಮಿ ಆಗಿತ್ತು ನಿಮಗೆ ಎಂದಳು. ರೀ ನಾನೊಂದು ಬ್ಲೌಸ್ ಹೊಲಸಿದ್ದೇನೆ. ಅದಕ್ಕೆ ಮ್ಯಾಚಿಂಗ್ ಒಂದು ಸೀರೆ ಕೊಡಿಸಿ ಎಂದಳು. ಲೇss ನಮ್ಮ ಕಂಪನೀ ಸಂಬಳ ಜೊತೆ ಬೋನಸ್ ಪ್ರತಿ ತಿಂಗಳು ಕೊಟ್ಟರೆ ಗ್ಯಾರಂಟೀ ಕೊಡಿಸುತ್ತೇನೆ ಎಂದೆ. ತುಂಬಾ ಕೋಪ ಮಾಡಿಕೊಂಡು ಬಿಟ್ಟಳು.

ಅದೇನೋ ಗೊತ್ತಿಲ್ಲ, ನನ್ನ ಹೆಂಡತಿ ಮಾತ್ರ ಪ್ರತಿಬಾರಿ ಗಾಂಧಿ ಬಜಾರ್ ಹೋದಾಗ ಸೀರೆ ಅಂಗಡಿಗಳಿಗೆ ಲಗ್ಗೆ ಇಡುತ್ತಾಳೆ. ಆ ಸೀರೆ ಅಂಗಡಿ ಮಾಲೀಕ ಎಷ್ಟು ಪರಿಚಯ ಆಗಿಬಿಟ್ಟಿದ್ದಾನೆ ಎಂದರೆ ದುಡ್ಡು ಇಲ್ಲ ಎಂದರು "ಸರ್ ನಿಮ್ಮ ಉದ್ರೀ ಕಾರ್ಡ್(Credit Card) ಇದೆ ಅಲ್ಲ ಸಾರ್" ಎಂದು ಬಾಯಿತೆಗೆದು ಜೋರಾಗಿ ನಕ್ಕೂ ಸೀರೆ ಕೊಡುತ್ತಾನೆ.

ಮಗ ಟಿವಿ ನೋಡುತ್ತಾ ಕುಳಿತಿದ್ದ. ನನ್ನ ಮಡದಿ ಊರಗೆ ಹೋಗವ ಸಲುವಾಗಿ ಪ್ಯಾಕಿಂಗ್ ನಡೆಸಿದ್ದಳು. ನಾನು ಏನೇ ಇದು ಹೋಗುವದು ನಾಲ್ಕು ದಿವಸಕ್ಕೆ, ಇಷ್ಟೊಂದು ಸೀರೆ ತೆಗೆದುಕೊಂಡು ಹೊರಟಿದ್ದೀಯ? ಎಂದೆ, ರೀ, ಇವು ನಮ್ಮ ಮನೇಲಿ ತೋರಿಸೋಕೆ ಎಂದು ತೆಗೆದುಕೊಂಡು ಹೊರಟಿದ್ದೇನೆ ಎಂದಳು. ನಾನೆಲ್ಲೋ ಒಂದು ಘಂಟೆಗೆ ಒಂದು ಎಂಬ ಲೆಕ್ಕದಲ್ಲಿ ತೆಗೆದುಕೊಂಡು ಹೊರಟಿರುವೆ ಎಂದು ತಿಳಿದುಕೊಂಡಿದ್ದೆ ಎಂದೆ.

ಅಷ್ಟರಲ್ಲಿ ನಮ್ಮ ಮೂರು ವರ್ಷದ ಸುಪುತ್ರ ಎದ್ದು ಬಂದು ಅಪ್ಪ ರಮೇಶ್ - ಸುರೇಶ್ (ಫೈವ್ ಸ್ಟಾರ್) ಜಾಹೀರಾತು ಮಾಡೋಣ ಬಾ ಎಂದ. ನಾನು ರಮೇಶ್ ಎಂದರೆ, ಅವನು ಸುರೇಶ್ ಅನ್ನುತ್ತಾನೆ. ನಾನು ರಮೇಶ್ ಎಂದೆ, ಅವ ತೊದಲಿ ತುರೇಶ್ ಎಂದು ಅಪ್ಪಿಕೊಂಡ. ನನ್ನ ಮಡದಿ ಗಹ ಗಹಿಸಿ ನಗುತ್ತಾ, ತುರೇಶ್ ಅಲ್ಲ ಕಣೋ ಅದು ಸುರೇಶ್ ಎಂದಳು. ಅವಳು ಸುರೇಶ್ ಎಂದರೂ, ನನಗೆ ಅದೇಕೋ "ಸೀರೆ ತಾ" ಅಂದ ಹಾಗೆ ಕೇಳಿಸೋದು.

ಹೋಗುವ ಸಮಯದಲ್ಲಿ "ಬೇರೆ ಬಾಡಿಗೆ ಮನೆ ನೋಡಿ" ಎಂದು ಹೇಳಿದಳು. ಈಗ ಇರುವ ಮನೆಗೆ ಏನು? ಆಗಿದೆಯೇ ಎಂದೆ. ಬಾತ್‌ರೂಮ್ ಮತ್ತು ಟಾಯ್ಲೆಟ್ ಒಂದೇ ಕಡೆ ಇದೆ ಅಲ್ಲ ಎಂದಳು. ಅದಕ್ಕೆನೀಗ ಎಂದೆ. ಎರಡು ಒಂದ ಕಡೆ ಇದ್ದರೆ ತೊಂದರೆ ಆಗುವದಿಲ್ಲವ ಎಂದಳು. ಮತ್ತೆ ವಾಸ್ತು ಚೆನ್ನಾಗಿ ಇದೆಯಲ್ಲ ಎಂದೆ. ವಾಸ್ತು ಇದೆ, ಎಂದು ಮನೆಯಲ್ಲಿ ಇದ್ದರೆ ಮನೆ ಹವಾಮಾನ ಕೆಡುತ್ತೆ ಎಂದಳು. ಇಬ್ಬರು ನಕ್ಕೆವು. ನಮ್ಮಿಬ್ಬರನ್ನೂ ನೋಡಿ ನಮ್ಮ ಮಗ ಕೂಡ ಮುಗುಳ್ನಗೆ ಬೀರಿದ. ಅದೇ ನಮ್ಮ ಊರಲ್ಲಿ ನೋಡಿ ಎಲ್ಲ ಸೆಪರೇಟ್ ..ಸೆಪರೇಟ್.. ಆಗಿ ಇರುತ್ತೆ ಎಂದಳು. ನಿಮ್ಮ ಊರ ಏನು? ದೊಡ್ಡ ಸಿಂಗಪೂರ?, ನಿಮ್ಮ ಊರಲ್ಲಿ ಒಂದು ಹೇರಿಗೆ ಆಸ್ಪತ್ರೆ ಕೂಡ ಇಲ್ಲ ಎಂದೆ. ಯಾಕೆ? ಬೇಕು ಆಸ್ಪತ್ರೆ ನಮ್ಮ ಊರಲ್ಲಿ ರೋಡೇss ಸರಿ ಇಲ್ಲ. ಆಸ್ಪತ್ರೆಗೆ ಹೋಗುತ್ತಾ.. ಹೋಗುತ್ತಾ ..ಎಲ್ಲ ಮುಗಿದೆ ಹೋಗಿರುತ್ತೆ ಎಂದು ಗಹ ಗಹಿಸಿ ನಕ್ಕಳು.

ಅವರನ್ನು ಬಸ್ ಹತ್ತಿಸಿ, ಮನೆಗೆ ಬರುವ ದಾರಿಯಲ್ಲಿ ಬಜ್ಜಿ, ಬೋಂಡ ತಿಂದು, ಚಿಪ್ಸ್ ಪ್ಯಾಕೆಟ್ ತೆಗೆದುಕೊಂಡು ಬಂದೆ. ಅವಳು ಇದ್ದರೆ, ಬರಿ ಎಣ್ಣೆ ಪದಾರ್ಥ ತಿನ್ನುತ್ತೀರ ಎಂದು ಬೈದಿರೋಳು. ಮನೆಗೆ ಬಂದೊಡನೆ ಅದೇಕೋ ಮನಸೆಲ್ಲ ಭಾರವಾದ ಹಾಗೆ ಅನ್ನಿಸಿತು. ಮನೆಯಲ್ಲಿ ಮಗನ ಚೀರಾಟ, ತುಂಟಾಟ, ಅವಳ ನಗು,ಮಾತು, ಜಗಳ, ಬೇಸರ ಮತ್ತು ಅಡುಗೆ ಮನೆಯಲ್ಲಿ ಪಾತ್ರೆಗಳ ಶಬ್ದ, ಘಮ ಘಮಿಸುವ ಅಡುಗೆ ವಾಸನೆ ಎಲ್ಲವೂ ಮಾಯವಾಗಿತ್ತು. ಎಲ್ಲವನ್ನು ಯೋಚಿಸುತ್ತಾ ಒಬ್ಬನೇ ಫ್ರಿಡ್ಜ್ ನಲ್ಲಿ ಇರುವ ಊಟ ಮುಗಿಸಿ ನಿದ್ದೆಗೆ ಜಾರಿದೆ.

ಎದ್ದೊಡನೆ ಲೇ ಕಾಫೀ ಎಂದೆ. ಎಲ್ಲಿ ಬರಬೇಕು ಕಾಫೀ... ಅವಳೇ ಇಲ್ಲ. ಮತ್ತೆ ಫೋನ್ ರಿಂಗ್ ಆಯಿತು. ರೀ ಮನೆಗೆ ಬಂದು ಮುಟ್ಟಿದ್ದೇನೆ ಎಂದಳು. ಮೊನ್ನೆ ಮಾಡಿದ ಕಾಫೀ ಫ್ರಿಡ್ಜ್ ನಲ್ಲಿ ಇಟ್ಟಿದ್ದೇನೆ ಬಿಸಿ ಮಾಡಿ ಕುಡಿಯಿರಿ ಎಂದು ಕುಹಕ ಮಾತಿನೊಂದಿಗೆ ಫೋನ್ ಕಟ್ ಮಾಡಿದಳು. ನಾನೇ ಅಡುಗೆ ಮನೆ ಎಂಬ ಗುಹೆಗೆ ಈ ಬಾರಿ ಬಲಗಾಲಿಟ್ಟು (ಎಡಗಾಲಿಟ್ಟು ಪ್ರವೇಶಿಸಿದಾಗ ಆದ ಪ್ರತಾಪ ನಿಮಗೆ ಗೊತ್ತೇ ಇದೆ.ನಳ ಪಾಕ್ .... :)) ಹೋಗಿ ಕಾಫೀ... ಕ್ಷಮಿಸಿ ಚಹಾ ಮಾಡಿಕೊಂಡು ಬಂದು ಹೀರಿದೆ.

Thursday, October 7, 2010

ತಲೆ ಹರಟೆ ಶ್ಯಾಮ್ ರಾಯರು....

ಏನ್ರೀ ಕಾಣುತ್ತಾ ಇಲ್ಲ ಎಂದರು. ಹೊಸದಾಗಿ ಎದಿರು ಮನೆಗೆ ಬಂದಿರುವ ಶ್ಯಾಮ್ ರಾಯರು. ನಾನು ಘಾಬರಿ!!, ಆನೆ ಹಾಗೆ ಇರುವ ನಾನೇ ಕಾಣುವಾದಿಲ್ಲವಾ? ಎಂದು. ನನಗೆ ಆಶ್ಚರ್ಯ,ಮತ್ತೆ ಹೇಗೆ ಕಂಡು ಹಿಡಿದರು ನಾನೇ ಎಂದು. ನನಗೆ ಹೇಳಿದರಾ, ಅಥವಾ ಬೇರೆ ಮತ್ಯಾರಿಗೋ ಎಂದು ಹಿಂದೆ ನೋಡಿದೆ. ಯಾರು ಇಲ್ಲ. ನಾನೇ ಎಂದು ಖಾತರಿ ಆದ ಮೇಲೆ, ಏನು ಕಾಣಬೇಕಿತ್ತು ರಾಯರೆ ಎಂದೆ. ತುಂಬಾ ತಲೆ ತಿನ್ನೋ ಮನುಷ್ಯ. ಇದೆ ಡೈಲಾಗ್ ಏನಾದರೂ ನನ್ನ ಗೆಳೆಯರ ಸಂಗಡ ಆಗಿದ್ದರೆ, ಸಕ್ಕತ್ ತಮಾಷೆ ಆಗಿರೋದು. ಒಂದು ತರಹ ಕಾಶೀನಾಥ ಫಿಲ್ಮ್ ಡೈಲಾಗ್ ತರಹ. ಬೇಕಾದರೆ ಇನ್ನೊಮ್ಮೆ ಮೊದಲಿನಿಂದ ಓದಿ ನೋಡಿ.

ಮದುವೆ ಆಗಿಲ್ಲ. ಅದಕ್ಕೆ ಇರಬೇಕು ಅಷ್ಟು ಫ್ರೀ ಆಗಿ ಇರುತ್ತಾರೆ. ಯಾರಾದರೂ ಹರಟೆಗೆ ಸಿಕ್ಕರೆ ಸಾಕು ಎನ್ನುವಂತ ಪ್ರಾಣಿ. ಆದರೆ ಹೇಳುವದು ಕೂಡ ಪೂರ್ತಿ ಇರಲ್ಲ. ನಾನು ಸ್ವಲ್ಪ ಫ್ರೀ ಇದ್ದೇ. ಏಕೆಂದರೆ ಮಡದಿ ತವರು ಮನೆಗೆ ಹೋಗಿದ್ದಳು.

ನಿಮಗೆ ನಮ್ಮ ಅಳಿಯ ರೋಹಿತ್ ಗೊತ್ತಾ? ಎಂದರು.
ಇಲ್ಲ ಎಂದೆ.
ಏನು ಡೆಲಿವರೀ ಮಾಡುತ್ತಾನೆ ಗೊತ್ತಾ? ಎಂದರು.
ಓ ಹೇರಿಗೆ ಡಾಕ್ಟರ್ರಾ? ಎಂದೆ.
ಅಲ್ಲ ಕಣ್ರೀ, ಸೀರಿಯಲ್ ಆಕ್ಟರ್. ಏನ್ರೀ ಅವರೇ ಗೊತಿಲ್ಲ ಎಂದರೆ ನಿಮ್ಮ ಜೊತೆ ಮಾತನಾಡುವುದೆ ವೇಸ್ಟ್ ಎಂದರು.
ಸರಿ ಬಿಡಿ ನಾನು ಬರುತ್ತೇನೆ ಎಂದೆ.
ರೀ, ತಡಿರಿ, ಸಕ್ಕತ್ ಡೈಲಾಗ್ ಡೆಲಿವರೀ ಕಣ್ರೀ ಅವನದೂ ಎಂದು ಮಾತಿಗಿಳಿದರು.
ಆಯಿತಾ? ಎಂದು ಕೇಳಿದರು,
ಏನು ಆಯಿತು? ಎಂದು ಹೇಳಬೇಕು ಊಟನ, ತಿಂಡಿನ? ಮತ್ತಿನೇನೋ ತಿಳಿಯಲಿಲ್ಲ.
ಏನಪ್ಪಾ ಆಗಬೇಕು? ಎಂದಾಗ ಮದುವೆ ಎಂದು ಕೇಳಿದರು.

ಆಗಿದೆ ಎಂದು ಹೇಳಿದೆ. ಎಷ್ಟು ಎಂದು ಕೇಳಿಯಾರು? ಎಂದು, ನಾನೇ ಒಂದು ಮದುವೆ, ಒಂದು ಗಂಡು ಮಗು ಇದೆ ಎಂದು ಹೇಳಿದೆ.
ರೀ, ನನ್ನ ಅಳಿಯನಿಗೆ ಒಂದು ನೋಡಬೇಕು ನೀವು ಬರುತ್ತೀರಾ?. ಜೊತೆಯಾಗುತ್ತೆ ಎಂದರು.
ಏನು? ಸರ್ ಎಂದೆ.
ಹೆಣ್ಣು.. ಸರ್ ಹೆಣ್ಣು.. ನೋಡೋಕೆ ಎಂದರು.
ಒಳ್ಳೇ ಬಿಡಲಾರದ ಕರ್ಮ ಆಯಿತಲ್ಲಾ ಎಂದು ಮನಸಿನಲ್ಲೇ ಅಂದುಕೊಂಡೆ.
ನನಗೆ ತುಂಬಾ ಕೆಲಸ ಇದೆ ನನಗೆ ಬರಲು ಆಗುವದಿಲ್ಲ ಎಂದೆ. ನೀವು ಬರಲೇ ಬೇಕು ಎಂದು ಪಟ್ಟು ಹಿಡಿದರು. ಹೇಗೂ ನನ್ನ ಮಡದಿ ಊರಲ್ಲಿ ಇಲ್ಲ, ತಿಂಡಿ ಬೇರೆ ಮಾಡಿರಲಿಲ್ಲ ಹೀಗಾಗಿ ಬರುತ್ತೇನೆ ಎಂದೆ. ಆದರೆ ಅವರು ಅಲ್ಲಿ ಹೋದಾಗ ಏನು ಮಾತನಾಡುತ್ತಾರೆ ಎಂಬ ಕಸಿವಿಸಿ ಮನಸ್ಸಿನಲ್ಲಿ ಇದ್ದೇ ಇತ್ತು. ಅವರ ಮನೆಗೆ ಹೋದೆವು. ಹುಡುಗಿಯ ಅಣ್ಣ ನಮಗೆ ಕುಡಿಯಲು ನೀರು ತೆಗೆದುಕೊಂಡು ಬಂದ.
ಹುಡುಗಿಯ ಅಪ್ಪ, ಇವನು ನನ್ನ ಗಂಡಸ ಮಗ ರಾಜು ವಿಪ್ರೋನಲ್ಲಿ ಕೆಲಸ ಮಾಡುತ್ತಾನೆ ಎಂದರು.
ಅಷ್ಟರಲ್ಲಿ ಶ್ಯಾಮ್ ರಾಯರು, ಇವನು ಗಂಡಸು ಮಗಾನಾ? ಎಂದು ಬಿಡಬೇಕೆ.
ನನಗೆ ಕುಡಿದ ಗುಟುಕು ನೀರು ನೆತ್ತಿಗೆ ಹತ್ತುವ ಹಾಗೆ ಜೋರಾಗಿ ನಗು ಬಂದು ಬಿಟ್ಟಿತು.

ಹುಡುಗಿಯ ಅಮ್ಮ ನಮಗೆ ಉಪ್ಪಿಟ್ಟು ಮತ್ತು ಜಿಲೇಬಿ ತಂದು ಕೊಟ್ಟರು. ಹುಡುಗಿ ಅಪ್ಪ ತನ್ನ ಮಡದಿಗೆ ಇನ್ನೂ ಸ್ವಲ್ಪ ಜಿಲೇಬಿ ಹಾಕು ಎಂದು ಹೇಳಿದರು. ಜಿಲೇಬಿ ತುಂಬಾ.. ತುಂಬಾ.. ಚೆನ್ನಾಗಿತ್ತು. ಹೇಗಾದರೂ ಹಾಕಿ ಎಂದು ಹೇಳಿದ್ದಾರೆ, ಐದು ಜಿಲೇಬಿನಾದರೂ ತಿನ್ನಬೇಕು ಎಂಬ ಲೆಕ್ಕಾಚಾರದಲ್ಲಿ ಇದ್ದೆ. ಜೆಲೇಬಿ ಹಾಕುವಾಗ ನಮ್ಮ ಶ್ಯಾಮ್ ರಾಯರು ನನಗೆ ಬೇಡ... ಬೇಡ... ಎಂದು ಕೈ ಅಡ್ಡ ತಂದರು. ನನಗೆ ಶ್ಯಾಮ್ ರಾಯರ ಮೇಲೆ ಸಕ್ಕತ್ ಕೋಪ ಬಂದಿತ್ತು. ಏಕೆಂದರೆ, ಕೈ ಅಡ್ಡ ತಂದಿದ್ದು ನನ್ನ ಪ್ಲೇಟ್ ಮೇಲೆ. ಶ್ಯಾಮ್ ರಾಯರ ಪ್ಲೇಟ್ ಗೆ ಎರಡು ಜೆಲೇಬಿ ಹಾಕಿ ಹುಡುಗಿ ಅಮ್ಮ ಹೋಗಿಬಿಟ್ಟರು. ಹೇಗಿದ್ದರು ಬೇಡ ಎಂದಿದ್ದಾರೆ. ನನಗೆ ಕೊಡಬಹುದು ಎಂದು ಯೋಚನೆ ಮಾಡುತ್ತಿದ್ದರೆ, ಆಸಾಮಿ ಅದನ್ನು ತಿಂದು, ಜೆಲೇಬಿ ತುಂಬಾ ಚೆನ್ನಾಗಿವೆ ಎಂದು ಹೊಗಳಿ, ಎರಡು ಜೆಲೇಬಿ ಮನೆಗೆ ಕಟ್ಟಿಸಿಕೊಂಡರು.

ಹಾಗೂ ಹೀಗೂ ಎಲ್ಲ ಶಾಸ್ತ್ರ ಮುಗಿಸಿಕೊಂಡು ಮನೆಗೆ ಬಂದೆವು.

ಮತ್ತೆ ಒಂದು ದಿವಸ ಶ್ಯಾಮ್ ರಾಯರು ನಮ್ಮ ಮನೆಗೆ ಬಂದಿದ್ದರು. ನನ್ನ ಮಡದಿ ಊರಿನಿಂದ ಬಂದಿದ್ದಳು. ಪಾಪ ಹಿರಿಯರು ಬಂದಿದ್ದಾರೆ ಎಂದು, ನಾನು ಬಾಳೆ ಹಣ್ಣನ್ನು ಕೊಡಲು ಹೋದೆ. ನಾನು ಯಾವಾಗಲಾದರೂ ಬಾಳೆ ಹಣ್ಣನ್ನು ತಿನ್ನುವದನ್ನು ನೋಡಿದ್ದೀರಾ? ಎಂದರು. ಇದು ಒಳ್ಳೇ ಕರ್ಮ ಆಯಿತಲ್ಲ ನನಗೆ, ಇವರು ಏನು ತಿನ್ನುತ್ತಾರೆ, ಏನು ಇಲ್ಲ ಎಂದು ನೋಡುವುದು ಎಂದು ಮನಸಿನಲ್ಲೇ ಅಂದುಕೊಂಡೆ. ರೀss ನಿಮಗೆ ಬಾಳೆ ಹಣ್ಣು ಇಷ್ಟ ಇಲ್ಲ ಎಂದು ಮೊದಲೇ ಗೊತ್ತಿದ್ದರೆ, ನಾನೇಕೆ ಅದನ್ನು ನಿಮಗೆ ಕೊಡಲು ಬರುತ್ತಿದ್ದೆ ಎಂದು ಹೇಳಬೇಕು ಅಂದು ಕೊಂಡರು ಹೇಳಲಿಲ್ಲ. ಶ್ಯಾಮ್ ರಾಯರು ನನ್ನ ಮಡದಿಗೆ, ನಿಮಗೆ ಗೊತ್ತಾ, ನಿಮ್ಮ ಮನೆಯವರನ್ನೂ ಕರೆದುಕೊಂಡು ಹೆಣ್ಣು ನೋಡಲು ಹೋಗಿದ್ದೆವು ಎಂದರು. ಮುಂದಿನದನ್ನು ಹೇಳುತ್ತಾರೆ ಎಂದು ಕಾಯುತ್ತಿದ್ದೆ. ಅಷ್ಟರಲ್ಲಿ ಅವರ ಫೋನ್ ರಿಂಗ್ ಆಯಿತು. ಮಾತನಾಡುತ್ತಾ ಎದ್ದು ಹೋಗಿಬಿಟ್ಟರು. ಮತ್ತೆ ವಾಪಸ್ ಬರಲೇ ಇಲ್ಲ. ನಾನು ನನ್ನ ಹೆಂಡತಿಗೆ ತಿಳಿ ಹೇಳಿದೆ. ಆದರೆ, ಅದನ್ನು ನಾನು ಅವರ ಬಾಯಿಂದನೆ ಕೇಳಿ, ಆಮೇಲೆ ಖಚಿತ ಪಡಿಸಿಕೊಳ್ಳುತ್ತೇನೆ ಎಂದು ಕೋಪ ಮಾಡಿಕೊಂಡು ಮೌನ ಗೌರಿ ಆಗಿದ್ದಳು. ಹಿರಿಯರು ಹೇಳಿದ್ದಾರೆ "ಮೌನಂ ಸಮ್ಮತಿ ಲಕ್ಷಣಂ" ಅಂತ, ಆದರೆ ನಮ್ಮ ಮನೇಲಿ ಮಾತ್ರ "ಮೌನ ಯುದ್ಧಮ್ ನಿರಂತರಂ". ಅವಳನ್ನು ಒಲಿಸುವ ಸಲುವಾಗಿ "ನಿನ್ನಾ ಸವಿನೆನಪೆ ಮನದಲ್ಲಿ ಆರಾಧನೆ.... ಪ್ರೀತಿಯ ಸವಿಮಾತೆ ಉಪಾಸನೆ" ಎಂದು ಹಾಡಿದೆ. ಅವಳು ಅದೇ ರಾಗದಲ್ಲಿ "ಇಂದು ನಿಮಗೂ ಕೂಡ ಉಪವಾಸನೆ..." ಎಂದು ಹಾಡಿದಳು. ವಾತಾವರಣ ತಿಳಿ ಆಗುವ ಯಾವ ಲಕ್ಷಣ ಕೂಡ ಕಾಣಲಿಲ್ಲ. ಇನ್ನೂ, ನನ್ನನ್ನು ಶ್ಯಾಮ್ ರಾಯರೆ ಕಾಪಾಡಬೇಕು ಎಂದು. "ಕಾಪಾಡು ಶ್ರೀ ಸತ್ಯ ನಾರಾಯಣ..." ಎಂದು ಹಾಡುತ್ತಾ ಶ್ಯಾಮ್ ರಾಯರ ಮನೆ ಕಡೆಗೆ ಹೋದೆ. ಶ್ಯಾಮ್ ರಾಯರ ಮನೆ ಎದುರು ಸಕ್ಕತ್ ಜನ ಜಂಗುಳಿ. ನನಗೆ ಏನಪ್ಪಾ ಬಂತು ಕರ್ಮ. ಶ್ಯಾಮ್ ರಾಯರು .... ಛೇ! ಛೇ! ಹಾಗೆಲ್ಲಾ ಆಗಿರಲಿಕ್ಕಿಲ್ಲ ಎಂದು ಅವರ ಮನೆ ಒಳಗೆ ಹೋದೆ. ಶ್ಯಾಮ್ ರಾಯರ ಅಳಿಯನ ಎಂಗೇಜ್ಮೆಂಟ್ ಇದೆ ಎಂದು ತಿಳಿದ ಮೇಲೆ ನಿಟ್ಟುಸಿರು ಬಿಟ್ಟೆ. ಶ್ಯಾಮ್ ರಾಯರು ಮನೆಯವರನ್ನ ಕರೆದುಕೊಂಡು ಬನ್ನಿ ಎಂದು ಹೇಳಿದರು. ಸಕ್ಕತ್ ಖುಶಿಯಿಂದ ಮನೆಗೆ ಬಂದು ನೋಡೇsss ನನ್ನ ಮೇಲೆ ಅನುಮಾನ ಪಡುತ್ತಿದ್ದೆ. ಇವತ್ತು ಅವರ ಅಳಿಯನ ಎಂಗೇಜ್ಮೆಂಟ್ ಕರೆಯುತ್ತಲಿದ್ದಾರೆ ಬಾ ಎಂದೆ.

ಹೋದ ಮೇಲೆ ನನ್ನ ಮಡದಿ "ಇವನ ಎಂಗೇಜ್ಮೆಂಟ್ ಗೆ ಕರೆದು ಕೊಂಡು ಹೋಗಿದ್ದೀರಾ ನಮ್ಮ ಮನೆಯವರನ್ನ" ಎಂದು ಕೇಳಿ ತಿಳಿದ ಮೇಲೆ ನನ್ನ ಮೇಲಿನ ಕೋಪಕ್ಕೆ ತಿಲಾಂಜಲಿ ಹಾಡಿದ್ದಳು .