Thursday, February 24, 2011

ತರ್ಲೆ ಮಂಜನ ರಥಸಪ್ತಮಿ....

ನಾನು ಮಂಜನ ಮನೆಗೆ ಹೊರಟಿದ್ದೆ. ಮನೆ ಸಮೀಪಿಸುತ್ತಿದ್ದಂತೆ, ನನಗೆ ಅವರ ಮನೆಗೆ ಹೋಗುತ್ತಿದ್ದೇನೆ ಎಂಬ ಭಾವನೆ ಬರಲಿಲ್ಲ. ಏಕೆಂದರೆ, ಯಾವಾಗಲು ಕೇಳಿಸುವ ನಮ್ಮ ವಟ ಸಾವಿತ್ರಿಯ ಅಥವಾ ನಮ್ಮ ಮಂಜನ ಧ್ವನಿ ಕೇಳಿಸಲಿಲ್ಲ. ಸಾವಿತ್ರಿಗೆ ಮೊದಲೇ ಒಂದು ಬಾಯಿ ಇದ್ದರೂ, ಮದುವೆ ಆದಮೇಲೆ ಇನ್ನೊಂದು ಬಾಯಿ ಸೇರಿ ಸಾವಿತ್ರಿಬಾಯಿ ಆದ ಮೇಲೆ ಇನ್ನೂ ಬಾಯಿ ಜೋರಾಗಿತ್ತು. ಮಂಜ ಮನೆಯಲ್ಲಿ ಇಲ್ಲದಿರಬಹುದಾ ಎಂದು ಕೂಡ ಅನ್ನಿಸಿತು. ವಾಪಸ್ ಹೋಗುವ ಸಮಯದಲ್ಲಿ, ಮಂಜನ ಪಕ್ಕದ ಮನೆಯಲ್ಲಿ ಇರುವ ಸಂತೋಷ ಭೇಟಿಯಾದರು. ಮಂಜನ ಬಗ್ಗೆ ಕೇಳಿದಾಗ ಮಂಜ ಮನೆಯಲ್ಲಿ ಇರುವನೆಂದು ತಿಳಿಯಿತು.

ಮಂಜನ ಮನೆಗೆ ಹೋದೆ. ಮಂಜ ಪೇಪರ್ ಓದುತ್ತಾ ಕುಳಿತಿದ್ದ. ಸಾವಿತ್ರಿ ಇಷ್ಟು ಶಾಂತವಾಗಿದ್ದು ತುಂಬಾ ಖುಷಿ ತಂದಿತು. ಆದರೆ ಏನೋ ನಡೆದಿದೆ ಎನ್ನುವುದು ಮಾತ್ರ ಖಾತ್ರಿ ಅನ್ನಿಸಿತು. ಏನು? ತಂಗ್ಯಮ್ಮಾ ಹೇಗಿದ್ದೀಯ ಎಂದು ಕೇಳಿದೆ. ಇವರನ್ನು ಕಟ್ಟಿಕೊಂಡ ಮೇಲೆ ರಾಮ.... ರಾಮ.... ಎಂದು ಆರಾಮ್ ಆಗಿ ಇರಲಾರದೇ ಆಗುತ್ತೆ? ಎಂದು ಉತ್ತರ ಬಂದಿತು. ಮಂಜನಿಗೆ ಕೇಳಿದೆ ಏನು? ಸಮಾಚಾರ ಎಂದು. ಏನೋ ಗೊತ್ತಿಲ್ಲಪ್ಪಾ? ಮುಂಜಾನೆಯಿಂದ ಏಳು ಬಾರಿ ಇವತ್ತು ರಥಸಪ್ತಮಿ ಕಣ್ರೀ ಎಂದು ಹೇಳಿದ್ದಾಳೆ ಎಂದ. ಕೋಪ ಏತಕ್ಕೆ ಎಂದು ಗೊತ್ತಿಲ್ಲ ಎಂದ. ಮತ್ತೆ ಸ್ವೀಟ್ ಏನು? ಮಾಡಬೇಕು ಎಂದು ಕೇಳಿದಳು. ನಾನು ಏನಾದ್ರೂ ಮಾಡು ಎಂದೆ. ಅದಕ್ಕೆ ಕೋಪದಿಂದ ಏನು? ಬೇಕು ಅದನ್ನು ಹೇಳಿ ಅಂದಳು. ಮತ್ತೆ ನಾನು ಏನಾದ್ರೂ ಮಾಡು, ಹೇಗಿದ್ದರು ನೀನು ತಾನೇ ತಿನ್ನುವವಳು ಎಂದೆ. ಅದಕ್ಕೆ ಇರಬೇಕು ಇಷ್ಟು ಕೋಪ ಅಂದ.

ಸಾವಿತ್ರಿ ಕಾಫೀ ತೆಗೆದುಕೊಂಡು ಬಂದು ನನಗೆ ಮಾತ್ರ ಕೊಟ್ಟಳು. ಮಂಜ ಆಗ ಕಾಫೀ ನನಗೆ ಎಂದ. ಅವಳು ನಿಮಗೆ ಇಲ್ಲ ತುಂಬಾ ಕೂಡಿಬೇಡಿ ಆರೋಗ್ಯ ಹಾಳಾಗುತ್ತೆ ಎಂದು ಕೋಪದಿಂದಲೇ ನುಡಿದಳು. ಆಗ ಮಂಜ ಕಾಫೀಗೆ ಹಾರ್ಟ್ ಅಟ್ಯಾಕ್ ಆಗಲ್ಲ ಗೊತ್ತಾ ಎಂದ. ಕಾಫೀಗೆ ಜೀವ ಇದ್ದರೆ ತಾನೇ ಹಾರ್ಟ್ ಅಟ್ಯಾಕ್ ಆಗೋದು ಎಂದಳು. ನಾನು ನನ್ನ ಬಗ್ಗೆ ಹೇಳಿದ್ದು ಎಂದ ಮಂಜ. ಕಡೆಗೆ ಮಂಜನಿಗೂ ಒಂದು ಕಾಫೀ ಲಭಿಸಿತು. ಮಂಜ ಈ ಪೇಪರ್ ನವರು ದುಬಾರಿ ಎನ್ನುವ ಒಂದು ಕಾಲಮ್ ಪರ್ಮನೆಂಟ ಮಾಡಿದ್ದಾರೆ ಅನ್ನಿಸುತ್ತೆ ಎಂದ. ಮೊನ್ನೆ ಈರುಳ್ಳಿ, ನಿನ್ನೆ ಪೆಟ್ರೋಲ್ ಇವತ್ತು ಹಾಲು ನಾಳೆ ಹಾಳು ಮೂಳು ಹೀಗೆ.. ಎಂದ.

ಅಷ್ಟರಲ್ಲಿ ಮಂಜನ ಮಡದಿ ಸಾವಿತ್ರಿ ಒಳಗಡೆಯಿಂದ ಬಂದು, ನಿಮ್ಮ ಗೆಳಯನಿಗೆ ಊರ ವಿಚಾರ ಎಲ್ಲಾ ಗೊತ್ತಾಗುತ್ತೆ. ಆದರೆ ಮನೆಯವರು ಎಂದರೆ ಅಷ್ಟಕ್ಕೇ ಅಷ್ಟೇ ಎಂದಳು. ಮೊನ್ನೆನೇ ಹೇಳಿದ್ದೆ ರಥಸಪ್ತಮಿ ದಿವಸ ಒಂದು ಸೀರೆ ಕೊಡಿಸಿ ಎಂದು ತನ್ನ ಅಳಲನ್ನು ತೋಡಿಕೊಂಡಳು. ನೋಡಿ ಇವತ್ತು ಹೊಸ ಸೀರೆ ಉಟ್ಟುಕೊಂಡರೆ ವರ್ಷದಲ್ಲಿ ಏಳು ಹೊಸ ಸೀರೆ ಬರುತ್ತವೆ ಎಂದಳು. ನೀನು ಕೊಡಿಸಿದ್ದೀಯ ತಾನೇ, ನಿನ್ನ ಮಡದಿಗೆ ಎಂದು ನನಗೆ ಕೇಳಿದಳು. ನಂಗೆ ದಿಕ್ಕೇ ತೋಚದಾಗಿತ್ತು. ಸಧ್ಯ ಪಕ್ಕದಲ್ಲಿ ಹೆಂಡತಿ ಇರಲಿಲ್ಲ. ಅದೇನೋ ಅಂತಾರಲ್ಲ ದಾರಿಯಲ್ಲಿ ಹೋಗುವ ಮಾರಿ ತಂದು ಮನೆಯಲ್ಲಿ ಇಟ್ಟುಕೊಂಡರು ಅನ್ನುವ ಹಾಗೆ ಆಗಿತ್ತು. ಆಗ ಮಂಜ ಹಾಗಾದರೆ ಇವತ್ತು ನಾನು ದುಡ್ಡು ಖರ್ಚು ಮಾಡಿದರೆ ನನ್ನ ಜೇಬು ವರ್ಷದಲ್ಲಿ ಏಳು ಬಾರಿ ಕತ್ತರಿ ಎಂದ. ನೀನು ಹೇಳುವ ಹಾಗೆ ಇದ್ದರೆ ಇವತ್ತು ಮದುವೆ ಅದವರು ಬೇಜಾನ್ ಜನ ಇದ್ದಾರೆ. ಅವರಿಗೆ ವರ್ಷದಲ್ಲಿ ಏಳು ಬಾರಿ ಮತ್ತೆ ಮದುವೆ ಆಗುತ್ತಾ ಸುಮ್ಮನೇ ಏನೇನೋ ಹೇಳಬೇಡ ಎಂದು ದಬಾಯಿಸಿದ. ಆಮೇಲೆ, ಗೊತ್ತಾ ನೀನು ಹೀಗೆ ಜಗಳಮಾಡಿಕೊಂಡು ಮುನಿಸಿಕೊಂಡು ಕುಳಿತಿದ್ದರೆ, ವರ್ಷದಲ್ಲಿ ಇನ್ನೂ ಏಳು ಪಟ್ಟು ಜ್ಯಾಸ್ತಿ ಜಗಳ ಆಗುತ್ತೆ ಎಂದು ತನ್ನ ಅಪಾರ ಜ್ಞಾನ ಪ್ರದರ್ಶಿಸಿದ.

ಅದು ಬೇರೆ ನಮ್ಮ ಎಂಗೇಜ್ಮೆಂಟ್ ಇವತ್ತೇ ಆಗಿತ್ತು ತಾನೇ...ಹಾಗೆ ನೋಡಿದರೆ ಅದೇ ವರ್ಷದಲ್ಲಿ ನನಗೆ ಏಳು ಬಾರಿ ಆಗಬೇಕಿತ್ತು. ಇನ್ನುವರೆಗೆ ಮತ್ತೊಂದು ಕೂಡ ಆಗಿಲ್ಲ ಎಂದು ನಗುತ್ತಾ ಹೇಳಿದ. ಅದಕ್ಕೆ ಸಪ್ತಪದಿ ತುಳಿದಿರಲ್ಲ ನನ್ನ ಜೊತೆ ಅಂದಳು ಸಾವಿತ್ರಿ. ಅವರಿಬ್ಬರ ಜಗಳಕ್ಕೆ ಸಾಕ್ಷಿ ಎನ್ನುವಂತೆ ನಾನು ಕುಳಿತಿದ್ದೆ. ನಿನ್ನನ್ನು ಮದುವೆ ಮಾಡಿಕೊಳ್ಳಬೇಕಾದರೆ ನಾನು ಪಟ್ಟ ಕಷ್ಟ ಎಷ್ಟು ಗೊತ್ತಾ ಎಂದ. ನಾನು ನನ್ನ ಅಪ್ಪನಿಗೆ, ನನ್ನ ಕೆಲಸ ಮಾಡುವ ಟೀಮ್ ನಲ್ಲಿ ಎಲ್ಲರ ಮದುವೆ ಆಗಿದೆ ಎಂದು ಹೇಳಿದೆ. ಹೌದಾ... ಹಾಗಾದರೆ ನೀನು ನಿನ್ನ ಟೀಮ್ ಚೇಂಜ್ ಮಾಡಿ ಬಿಡು. ಅವರ ನಡುವೆ ಇದ್ದು ಕೆಟ್ಟು ಹೋಗಿ ಬಿಡುತ್ತಿಯ, ನನ್ನ ನೋಡಿದ ಮೇಲೆ ನಿನಗೆ ಅರ್ಥ ಆಗಿರಬೇಕಲ್ಲ ಎಂದರು. ನಾನು ಬೆಪ್ಪನ ಹಾಗೆ ಸುಮ್ಮನೇ ಇರದೆ, ನನ್ನ ಅಪ್ಪನ ಒಪ್ಪಿಸಿ, ನಿನ್ನ ಮದುವೆ ಆದೆ ಅಂದ. ಅಷ್ಟರಲ್ಲಿ ನಗುತ್ತಾ, ತನ್ನ ಬ್ಯಾಗ್ ತೆಗೆದು ಒಂದು ಹೊಸ ಸೀರೆ ಸಾವಿತ್ರಿಗೆ ಕೊಟ್ಟ.

ಅವರಿಬ್ಬರ ಮಾತುಗಳು ಜೋರು ಇದ್ದರೂ, ಮನಸು ಮಾತ್ರ ತಿಳಿ ನೀರು....

Thursday, February 10, 2011

ತರಲೆ ಮಂಜನ ತತ್ವಜ್ಞಾನ ....

ಮೊದ ಮೊದಲು ತುಂಬಾ ಓದುತ್ತಿದ್ದೆ. ಆಮೇಲೆ ಏನಾದರೂ ಬರೆಯಬೇಕು ಎಂಬದು ಮನಸ್ಸಿನಲ್ಲಿ ಹೊಯ್ದಾಡಹತ್ತಿತ್ತು. ಆಮೇಲೆ ಏನು? ಬರೆಯಬೇಕು, ಏನು? ಬರೆದರೆ ಎಲ್ಲರೂ ಸ್ವೀಕರಿಸುತ್ತಾರೆ ಎಂದು ಯೋಚಿಸಹತ್ತಿದೆ. ತತ್ವಜ್ಞಾನದ ಬಗ್ಗೆ ಎಂದು ನಿಶ್ಚಯಿಸಿ ಆಗಿತ್ತು. ಮಂಜನಿಗೆ ಒಮ್ಮೆ ಕೇಳಿ ನೋಡಿದರೆ ಹೇಗೆ ಎಂದು ಯೋಚಿಸಿ ಮಂಜನಿಗೆ ಕೇಳಿದೆ. ಮಂಜ ಈ ತತ್ವಜ್ಞಾನ ಎಂಬುದು ಎಲ್ಲರೂ ಕೊಡುವ ಜ್ಞಾನ, ಬೇಕಾದರೆ ಎಲ್ಲರೂ ತಮ್ಮ.. ತಮ್ಮ.. ಶೈಲಿ ಮಾತ್ರ ಬದಲಿಸಿ ಅರುಹುತ್ತಾರೆ ಅಷ್ಟೇ ಎಂದ. ಒಬ್ಬ ಎಳೆನೀರು ಮಾರುವ ಮನುಷ್ಯ ಕೂಡ ಹೇಳುತ್ತಾನೆ ಅದನ್ನ ಎಂದ. ಅದು ಹೇಗೆ? ಎಂದು ಕೇಳಿದೆ. ಬಾ ತೋರಿಸುತ್ತೇನೆ ಎಂದ.

ಒಬ್ಬ ಎಳೆನೀರು ಮಾರುವವನ ಬಳಿ ಹೋದೆವು. ಮಂಜ ಇದನ್ನು ಕೊಡಿ ಎಂದು ಒಂದು ಎಳೆನೀರು ಕಾಯಿ ತೋರಿಸಿದ. ನಿಮಗೆ ನೀರಾ, ಗಂಜಿನಾ ಹೇಳಿ ನಾನು ಕೊಡುತ್ತೇನೆ ಎಂದ. ಗಂಜಿ ಎಂದ ಮಂಜ. ಮತ್ತೆ ಬಿಡಿ ನಾನು ಕೊಡುತ್ತೇನೆ ಎಂದ ನೀರು ಮಾರುವವ. ಬೇಡ ಇದೆ ಕೊಡಿ ಎಂದ ಮಂಜ. ಎಳೆನೀರು ಮಾರುವವ ನೋಡಿ... ಸ್ವಾಮಿ ಮೇಲೆ ಇರುವ ಸೊಬಗು ನೋಡಿ ತೆಗೆದು ಕೊಂಡರೆ ಆಗಲ್ಲ, ಒಳಗೆ ಚೆನ್ನಾಗಿ ಇದ್ದರೆ ಸಾಕು ಎಂದು ತನ್ನ ಎದೆ ಮುಟ್ಟಿಕೊಂಡು ಹೇಳಿದ. ಆಗ ಮಂಜ ಹೇಳಿದ ಮಾತು ನಿಜ ಅನ್ನಿಸಿತು. ಹೀಗೆ ... ಕಣೋ ಎಲ್ಲರೂ ತಮ್ಮ.. ತಮ್ಮ.. ಜ್ಞಾನವನ್ನು ಭೋಧಿಸುತ್ತಾರೆ ಅಷ್ಟೇ... ಪಂಚರ್ ತಿದ್ದುವ ಮನುಷ್ಯನಿಂದ ಹಿಡಿದು ಕಾರ್ ಮಾರುವ ಮನುಷ್ಯನವರೆಗೆ ಎಂದ. ನೀನು ಬರೆಯಬೇಕು ಎಂದರೆ ಹಾಸ್ಯ ಆರಿಸಿಕೋ, ಇದರಿಂದ ಕೆಲ ಜನರಲ್ಲಿ ಮಂದಹಾಸ ಮೂಡಿದರೆ ಸಾಕು. ನಿನ್ನ ಬರಹ ಸಾರ್ಥಕವಾಗುತ್ತೆ. ತತ್ವಜ್ಞಾನ ಕೊಡೋಕೆ ತುಂಬಾ ಜನ ಇದ್ದಾರೆ. ಸ್ವಾರ್ಥವಿಲ್ಲದೇ ಯಾವುದೇ ತತ್ವಜ್ಞಾನ ಕೂಡ ಇರುವುದಕ್ಕೆ ಸಾಧ್ಯವೇ ಇಲ್ಲ. ಮತ್ತೆ ಕೆಲವರು ತಾವು ಒಳ್ಳೆಯವರು ಎಂದು ತೋರಿಸುವುದಕ್ಕೆ ಇಂತಹ ತತ್ವಜ್ಞಾನ ಪ್ರದರ್ಶಿಸುತ್ತಾರೆ. ಈ ಫಿಲಾಸಫೀ ಯಾವತ್ತೂ ಫಿಲ್ ಆಗದ ವಸ್ತು.

ಮತ್ತೆ ನನ್ನ ಪಕ್ಕದ ಮನೆಯಲ್ಲಿ ಇರುವ ಒಬ್ಬ ಹಿರಿಯರು ತತ್ವ ಜ್ಞಾನ ಹೇಳುತ್ತಿದ್ದರು. ಮತ್ತು ಪ್ರತಿ ಬಾರಿ ತಮ್ಮ ಅಕ್ಷರಗಳ ಬಗ್ಗೆ ವರ್ಣನೆ ಕೂಡ ಮಾಡುತ್ತಿದ್ದರು. ನಮಗೂ ಅಕ್ಷರ ಗುಂಡಾಗಿ ಬರೆಯಿರಿ ಎಂದು ಹೇಳಿ ರಾತ್ರಿ ಗುಂಡು ಹಾಕಿ ಕುಳಿತಿರುತ್ತಿದ್ದರು. ಉಪದೇಶ,ವೇದಾಂತ, ತತ್ವಜ್ಞಾನ ಎಲ್ಲರೂ ಪರಿಪಾಲಿಸಿದರೆ ಎಲ್ಲರೂ ದೊಡ್ಡವರಾಗಿಯೇ ಇರುತ್ತಾರೆ ಅಲ್ಲವೇ, ಚಿಕ್ಕ ಮನುಜರು ಕಡಿಮೆ ಆಗಿಬಿಡುತ್ತಾರೆ. ಆಮೇಲೆ ಎಲ್ಲರಿಗೂ ಮ್ಯಾನೇಜರ್ ಲೆವೆಲ್ ನಲ್ಲೇ ಇರುತ್ತಾರೆ. ಆದರೆ ಕೆಳಗೆ ಕೆಲಸ ಮಾಡುವವರು ಯಾರು? ಎಂದು ಪ್ರಶ್ನೆ ಹಾಕಿದ.

ಒಂದು ಕತೆ ಹೇಳುತ್ತೇನೆ ಕೇಳು. ಆಚಾರ್ಯ ಹೇಳುವುದಕ್ಕೆ ಮತ್ತು ಬದ್ನೆಕಾಯಿ ತಿನ್ನುವುದಕ್ಕೆ ಇದು ಸರಿಯಾಗಿ ಹೊಂದುತ್ತದೆ ಎಂದ. ಒಮ್ಮೆ ಒಬ್ಬ ಸಂಪ್ರದಾಯಸ್ತರ ಮನೆಯಲ್ಲಿ ಹಿರಿಯರು ತೀರಿಕೊಂಡಿದ್ದರು. ಅವರ ಪಿಂಡ ಇಟ್ಟು ಕಾಯುತ್ತಾ ನಿಂತಿದ್ದರು. ಯಾವುದೇ ಕಾಗೆ ಬಂದು ಮುಟ್ಟಲಿಲ್ಲ. ತುಂಬಾ ಹೊತ್ತು ಕಾದರೂ ಆಗಲೂ ಯಾವುದೇ ಕಾಗೆ ಮೂಸಲ್ಲಿಲ್ಲ. ಇನ್ನೂ ಕಾದರೆ ಆಗುವುದಿಲ್ಲ, ನನಗೆ ಶುಗರ್ ಬೇರೆ ಇದೆ ಎಂದು, ಅವರ ಮನೆಯಲ್ಲಿ ಇರುವ ಒಬ್ಬ ಹೊಟೇಲಿನಿಂದ ಚಿಕನ್ ತಂದು ಪಿಂಡದ ಪಕ್ಕ ಎಸೆದ. ಅಷ್ಟೇ... ಕಾಗೆಗಳ ದಂಡೆ ಬಂದು, ಎಲ್ಲವನ್ನು ತಿಂದು ಹೋಗಿತ್ತು. ಪಾಪ ತಮ್ಮ ಹೊಟ್ಟೆ ಸಲುವಾಗಿ ಸತ್ತವರ ಆಸೆ ಅವರಿಗೆ ಅಷ್ಟಕ್ಕೇ ಅಷ್ಟೇ ಎಂದ.

ನೋಡು ನಾವೆಲ್ಲರೂ ತೂತು ಮಡಿಕೆ ಇದ್ದ ಹಾಗೆ ಎಂದ. ನನಗೆ ಅರ್ಥವಾಗಲಿಲ್ಲ. ಹಾಗೆ ಅಂದರೆ ಎಂದೆ. ಮತ್ತೆ ಅದರ ಕತೆ ಶುರು ಮಾಡಿದ. ನೋಡು ಒಬ್ಬ ಮನುಷ್ಯನ ಹತ್ತಿರ ಎರಡು ಮಡಿಕೆಗಳು ಇದ್ದವು. ಒಂದು ಮಡಿಕೆ ಚೆನ್ನಾಗಿ ಇತ್ತು. ಇನ್ನೊಂದು ಸ್ವಲ್ಪ ತೂತು ಇತ್ತು. ದಿನಾಲೂ ಎರಡನ್ನೂ ತೆಗೆದುಕೊಂಡು ಹೋಗಿ ನೀರು ತುಂಬುತ್ತಿದ್ದ. ಅದನ್ನು ನೀರು ತುಂಬುವ ಸಮಯದಲ್ಲಿ ತೂತು ಇರುವ ಮಡಿಕೆ ಅರ್ಧ ಅಗಿರುತಿತ್ತು. ಅದನ್ನು ನೋಡಿದ ಅದನ್ನು ನೋಡಿದ ಅವನ ಮಡದಿ ಇದನ್ನು ಒಗೆದು ಬಿಡಬಾರದೇ ಎಂಬ ಸಲಹೆ ಇಟ್ಟಳು. ಅದಕ್ಕೆ ಅವನು ಅವನ ಹೆಂಡತಿಯನ್ನು ಕರೆದುಕೊಂಡು ಹೋಗಿ, ತನ್ನ ಬಾವಿಯಿಂದ ಮನೆಯವರೆಗೂ ಇರುವ ಹೂವಿನ ಕುಂಡಗಳನ್ನು ತೋರಿಸಿ, ಇವೆಲ್ಲವೂ ಈ ತೂತುಮಡಿಕೆಯ ಉಪಕಾರದಿಂದ ಬೆಳೆದ ಹೂವಿನ ಗಿಡಗಳು ಮತ್ತು ದಿನಾಲೂ ಇವುಗಳನ್ನು ಕಿತ್ತು ದೇವರಿಗೆ ಮತ್ತು ನಿನಗೆ ಕೊಡುತ್ತೇನೆ. ಅದರ ಸೋರುವಿಕೆಯ ನೀರು ಈ ಗಿಡಗಳಿಗೆ ಆಹಾರವಾಗುತ್ತೆ. ಮತ್ತು ನನ್ನ ಕೆಲಸ ಕೂಡ ತಪ್ಪುತ್ತೆ. ಈಗ ಹೇಳು ಇದನ್ನು ನಾನು ಬಿಸಾಡಲೆ ಎಂದು ಕೇಳಿದ. ಆಗ ಹೆಂಡತಿ ತನ್ನ ತಪ್ಪು ಅರಿವಾಗಿ ಬೇಡ.. ಬೇಡ... ಎಂದಳು. ಹೀಗೆ, ಎಲ್ಲರಲ್ಲಿಯೂ ಕೆಲ ದೋಷಗಳು ಸಹಜವಾಗಿಯೇ ಇರುತ್ತವೆ. ಅವುಗಳನ್ನು ತಿದ್ದುವುದು ಅಥವಾ ಕಡೆಗಣಿಸುವುದು ಬಿಟ್ಟು, ಅವುಗಳನ್ನು ಹಾಗೆಯೇ ಸ್ವೀಕರಿಸಿ, ಅವುಗಳ ಉಪಯೋಗ ಪಡೆದುಕೊಳ್ಳಬೇಕು....ಇಷ್ಟೆಲ್ಲಾ ಹೇಳಿದ್ದೇನೆ, ನೀನು ಬೇಕಾದರೆ ತತ್ವಜ್ಞಾನಿ ಆಗು ಎಂದು ಹೀಯಾಳಿಸಿದ.

ಮತ್ತೆ ನೀನು ಈಗ ಏನು? ಮಾಡಿದೆ ಎಂದು ಕೇಳಿದೆ. ಲೇ ಗುರುವಿಗೆ ತಿರುಮಂತ್ರನಾ ಎಂದು ದಬಾಯಿಸಿದ. ನಾನು ನೀಡಿದ್ದು ಬರೀ ಸಲಹೆ ಮಾತ್ರ. ಉಪದೇಶ ಅಥವಾ ತತ್ವಜ್ಞಾನ ಅಲ್ಲ ಎಂದ. ನಾನು ಏನು? ಬರೆಯಬೇಕು ಎಂದು ತಲೆಯಲ್ಲಿ ಬರೆ ಎಳೆದ ಹಾಗೆ ಹೇಳಿದ್ದ. ಅದರ ಕಲೆ(ಎರಡು ಅರ್ಥದಲ್ಲಿ ಸ್ವೀಕರಿಸಿ) ಈಗಲೂ ಇದೆ ಎಂದರೆ ಅತಿಶಯೋಕ್ತಿ ಆಗಲಾರದು.

ಅವನು ಹೇಳಿದ ಹಾಗೇನೆ ಮಾಡಿದೆ. ಮೊದಮೊದಲು ಲೇಖನ ಬರೆದ ಮೇಲೆ, ಅವನಿಗೆ ಫೋನ್ ಮಾಡಿ ಹೇಳುತ್ತಿದ್ದೆ. ಈ ಪ್ಯಾರಾದಲ್ಲಿ ಇರುವ ಪಂಚ್ ನೋಡು ಎಂದು ಹೇಳಿ ತಲೆ ತಿನ್ನುತ್ತಿದ್ದೆ. ಈಗ ನನ್ನ ಫೋನ್ ಬಂದರೆ ಎತ್ತುವುದೇ ಇಲ್ಲ ಆಸಾಮಿ. ಕೆಲವೊಮ್ಮೆ ಬ್ಯೂಸಿಯಾಗಿ ಇದ್ದೇನೆ, ಆಮೇಲೆ ಕಾಲ್ ಮಾಡುತ್ತೇನೆ ಎಂದು ಹೇಳಿ ಕಾಲಿಗೆ ಬುದ್ದಿ ಹೇಳುತ್ತಾನೆ.

-----------------
ಮಂಜನ ಹನಿ

ಮಂಜ ಬಾಡಿಗೆಗೆಎಂದು ವಿಜಯನಗರದಲ್ಲಿ ಇದ್ದ. ಒಮ್ಮೆ ಅವರ ಮನೆ ಮಾಲೀಕರು ಬಂದರು.
ಮಾಲೀಕರು - ರೀ ಮಂಜುನಾಥ, ನೀವು ಬಂದು ಒಂದು ವರ್ಷ ಆಯಿತು ಅಲ್ಲವಾ?
ಮಂಜ - ಹೌದು ಸರ್...
ಮಾಲೀಕರು - ನೋಡಿ ಈ ತಿಂಗಳಿಂದ ಎರಡು ನೂರು ಬಾಡಿಗೆ ಎಕ್ಸ್‌ಟ್ರಾ ಕೊಡಿ.
ಮಂಜ - ಸರ್, ನೋಡಿ ನಾನು ಒಬ್ಬನೇ ಇರೋದು ದಯ ತೋರಿ ಎಂದು ಗೋಳಾಡಿದ.
ಮಾಲೀಕರು - ಪಾಪ ಹೌದಲ್ಲವಾ, ನೀನು ಒಬ್ಬನೇ ಇದ್ದೀಯ ಅಂತ ನನಗೆ ಗೊತ್ತು. ಆಯಿತು, ನನ್ನ ಹೆಂಡ್ತೀನ ಕೇಳಿ ನೋಡ್ತೀನಿ, ಅವಳು ಒಪ್ಪಿದರೆ, ವಿಚಾರ ಮಾಡೋಣ.
ಮಂಜ ಸುಸ್ತೋ ಸುಸ್ತು ....

ಗಂಡಾಂತರ....

ತುಂಬಾ ಮನೆಗಳಲ್ಲಿ ನಿಜವಾದ ಗಂಡಾಂತರ ಆಗುವುದು ಗಂಡಾಂತರವಾದ ಮೇಲೇನೆ. ಗಂಡ ಅಂತರ ಧ್ಯಾನ ಅಥವಾ ಅಂತರ ಪಿಶಾಚಿ ಆದ ಮೇಲೆ ಎಂದು ತಪ್ಪು ತಿಳಿಯಬೇಡಿ ಮತ್ತೆ ಗಂಡ ಆಫೀಸ್ ಹೋದ ಮೇಲೆ ಎಂಬ ಅರ್ಥದಲ್ಲಿ ಹೇಳಿದ್ದು. ಗಂಡ ಆಫೀಸ್ ಹೋದ ಮೇಲೆ ನಡುಯುವ ಟಿ ವಿ ಎಂಬ ಮೂರ್ಖರ ಪೆಟ್ಟಿಗೆಯಲ್ಲಿ ಬರುವ ಧಾರಾವಾಹಿ ಎಂಬ ಗಂಡಾಂತರಗಳ ಬಗ್ಗೆ ಹೇಳಿದ್ದು. ಧಾರಾವಾಹಿ ಎನ್ನುವುದಕ್ಕೆ ಬಹುಶಃ ಕಣ್ಣೀರ 'ಧಾರಾ' ಆ'ವಾಹ'ಯಾಮಿ ಇರಬಹುದೇನೋ....ನೀವು ಕೇಳಬಹುದು ಇದು ಲಿಂಗ ಹೇಗೆ ಬದಲಿಸಿತು ಎಂದು, ಈಗಿನ ಕಾಲದಲ್ಲಿ ಎಲ್ಲವೂ ಸಾಧ್ಯ. ಸಾಕಷ್ಟು ನಿದರ್ಶನಗಳು ಕೂಡ ಇವೆ....ದಿನ ಪತ್ರಿಕೆ,ಟಿ ವಿ ಯಲ್ಲಿ ನೋಡಿರಲೂಬಹುದು....ಆದರೂ ಹೆಚ್ಚು ಹೆಣ್ಣು ಮಕ್ಕಳೇ ನೋಡುವುದರಿಂದ ಇದನ್ನು ಧಾರಾವಾಹಿ ಎಂದು, ಅವರ ಸಹಾನುಭೂತಿಗೆ ಹೆಸರು ಬಂದಿರಲಿಕ್ಕೆ ಕೂಡ ಸಾಧ್ಯ ಉಂಟು.

ಬಹುಶಃ ಗಂಡಸರನ್ನು ಕಣ್ಣೀರ ಧಾರೆ ಹರಿಸಲಿಕ್ಕೆ ಬರುವುದಿಲ್ಲ ಎಂದು ಕಾಣುತ್ತೆ ಈ ಧಾರಾವಾಹಿಗಳಿಗೆ, ಅದಕ್ಕೆ ಅದನ್ನು ಹೆಣ್ಣುಮಕ್ಕಳಿಗೆ ಬಿಟ್ಟಿದ್ದು ಇರಲೂಬಹುದು(ಗಂಡಸರ ಕಣ್ಣೀರ ಧಾರೆ ಹರಿಸಲಿಕ್ಕೆ). ಅಲ್ಲಿ ಬರುವ ಧಾರಾವಾಹಿಗಳಲ್ಲಿನ ಸೀರೆ , ಒಡವೆ ನೋಡಿ ಹೆಣ್ಣು ಮಕ್ಕಳು ತುಂಬಾ ಆಕರ್ಷಿತರಾಗಿರುತ್ತಾರೆ. ಆಮೇಲೆ ಅಂತರ ಪಿಶಾಚಿ ಆದ ಗಂಡ ಬಂದ ಮೇಲೆ ಶಿಫಾರಸ್ಸು ಹೋಗಿರುತ್ತೆ. ಸಿಗದೆ ಹೋದರೆ ಇದ್ದೇ ಇದೆ.. 'ಧಾರಾ'ಳವಾಗಿ ಕಣ್ಣೀರ 'ಧಾರಾ' ಹರಿಸಲು ಮತ್ತು ಹೇಗಾದರೂ ಮಾಡಿ ಅದನ್ನು ಪಡೆಯಲು.

ಒಂದು ದಿನ ಊಟಕ್ಕೆ ಕುಳಿತ ಸಮಯದಲ್ಲಿ ನನ್ನ ಮಡದಿ ಧಾರಾವಾಹಿ ನೋಡುತ್ತಾ, ರೀ ಸ್ವಲ್ಪ ಒಳಗಡೆ ಹೋಗಿ ಒಂದು ಸೌಟು ತೆಗೆದುಕೊಂಡು ಬನ್ನಿ ಎಂದಳು. ದಿನವೂ ಆಫೀಸ್ ಹೋಗುವ ಸಮಯದಲ್ಲಿ ನನ್ನ ಸೂಟ್ ನ್ನು ಇಡುವುದನ್ನು ಮರೆತರು ಪರ್ವಾಗಿಲ್ಲ ಕಣೇ, ಈ ಸೌಟು ಮಾತ್ರ ನನಗೆ ತರಲು ಹೇಳಬೇಡ ಅಂದೆ. ಅದಕ್ಕೆ ಒಂದು ಕಾರಣವೂ ಇದೆ. ಒಮ್ಮೆ ಸೌಟು ತರಲು ಹೇಳಿದ್ದಳು, ಅದು ಏತಕ್ಕೆ ಎಂದು ತಿಳಿಯದೇ ನಾನು ಜಾರಲಿ(ಝಾರಿ) ಸೌಟು ತಂದೆ. ಇದರಲ್ಲಿ ಸಾರು ಹೇಗೆ ಬಡಿಸಲಿ ಎಂದು ಉಗಿದಿದ್ದಳು. ಮತ್ತೊಮ್ಮೆ ಹೀಗೆ ಅನ್ನದ ಸೌಟು ಬದಲು ಸಾರಿನ ಸೌಟು ತಂದಾಗ ಕೂಡ.

ಹೀಗೆ ಒಮ್ಮೆ ಧಾರಾವಾಹಿ ನಡುವೆ ಮೊಬೈಲ್ ಜಾಹೀರಾತು ಬರುತಿತ್ತು. ಲೇ ನಾನು ಹೊಸ ವೈಫೈ ಇದ್ದ ಮೊಬೈಲ್ ತೆಗೆದುಕೊಳ್ಳಬೇಕು ಎಂದೆ. ಹಾ... ಏನಂದಿರಿ ಎಂದು ಗದರಿಸಿದಳು. ಏಕೆಂದರೆ ಸ್ವಲ್ಪ ಇಂಗ್ಲೀಶ್ ಅವಳಿಗೂ ಗೊತ್ತು. ಕೆಲವೊಂದು ಸಾರಿ ಸೇಡು ತೀರಿಸಿಕೊಳ್ಳಬೇಕಾದಾಗ ದೊಡ್ಡ ದೊಡ್ಡ ಇಂಗ್ಲೀಷ್ ಪದ ಉಪಯೋಗಿಸಿ ಬೈದಿರುತ್ತೇನೆ. ಆಗ ಅವಳಿಗೆ ಅರ್ಥ ಆಗಿರುವುದಿಲ್ಲ. ಆದರೆ ಈಗ ಸಿಕ್ಕಿ ಹಾಕಿಕೊಂಡಿದ್ದೆ. ನಾನು ವೈಫೈ ಬಗ್ಗೆ ಒಂದು ದೊಡ್ಡ ಪಾಠ ಮಾಡಬೇಕಾಗಿಬಂತು. ಅಷ್ಟರಲ್ಲಿ ಧಾರಾವಾಹಿ ಶುರು ಆಯಿತು, ಇಲ್ಲದೆ ಇದ್ದರೆ ಕಣ್ಣೀರ ಧಾರಾ ನನಗೆ ಬರುತಿತ್ತು.

ಅವಳ ಧಾರಾವಾಹಿ ಮುಗಿದ ಮೇಲೆ ನಾನು ಮ್ಯಾಚ್ ಸ್ಕೋರ್ ನೋಡಬೇಕು ಎಂದು ಕುಳಿತಿದ್ದೆ. ನೀವಿಬ್ಬರೂ ಹೋಗಿ ಮಲಗಿಕೊಳ್ಳಿ ಎಂದು ನನಗೆ ಮತ್ತು ಸುಪುತ್ರನಿಗೆ ಆಜ್ಞೆ ಮಾಡಿದಳು. ಸುಪುತ್ರ ಹೋಗಲು ಒಪ್ಪಲಿಲ್ಲ. ಶಾಲೆ ರಜೆ ಇದ್ದಾಗ ಬೇಗ ಏಳುತ್ತಿ. ಶಾಲೆ ಇದ್ದಾಗೆ ಲೇಟ್ ಆಗಿ ಏಳುತ್ತಿ. ನೀನು ನಿನ್ನ ಅಪ್ಪನ ಹಾಗೆ ಉಲ್ಟಾ. ನಾಳೆ ಶಾಲೆ ಇದೆ ಹೋಗು ಎಂದು ಬೈದಳು. ನಾವಿಬ್ಬರು ಬೆಡ್ ರೂಮಿಗೆ ಹೋಗುವಾಗ ಮಗ ಎಡವಿ ಬಿದ್ದ. ಬಿದ್ದು ಅಮ್ಮ ನೋಡು ಅಪ್ಪ ನನ್ನ ಕೈ ಹಿಡಿದುಕೊಂಡು ಹೋಗುವುದಿಲ್ಲ ಎಂದು ನನ್ನ ಮಡದಿಗೆ ಅರುಹಿದ. ನಿಮ್ಮ ಅಪ್ಪ ಇಷ್ಟು ವರ್ಷ ಆದರೂ ನಾಚಿಕೆ ಇಂದ ನನ್ನ ಕೈನೇ ಹಿಡಿಯಲ್ಲ ಇನ್ನೂ ನಿನ್ನ ಕೈ ಎಂದು ಕುಹಕವಾಡಿದಳು. ಮತ್ತೆ ಮಗನಿಗೆ ನಿನಗೆ ನೋಡಿಕೊಂಡು ಹೋಗಲು ಬರುವುದಿಲ್ಲ ಎಂದು ಮಗನಿಗೆ ಬೈದಳು. ಈಗ ಸುಪುತ್ರ ಅಪ್ಪ ನೋಡು ಅಮ್ಮ ಬೈಯುತ್ತಾಳೆ ಎಂದ. ನನಗೆ ಅಷ್ಟೇ ಸಾಕಾಗಿತ್ತು. ನನಗೆ ಬೈಯುತ್ತಾಳೆ, ಇನ್ನೂ ನೀನು ಎಲ್ಲಿಯ ಲೆಕ್ಕ ಎಂದು ಹೇಳಿ ಮುಯ್ಯಿಗೆ ಮುಯ್ಯಿ ತೀರಿಸಿಕೊಂಡು ಮಂದಹಾಸ ಬೀರಿ ಹೋಗಿ ಮಲಗಿಕೊಂಡಿದ್ದೆ.

ಮತ್ತೆ ಒಂದು ದಿನ ಕ್ಯಾಬೇಜ ಹೆಚ್ಚುತ್ತಾ ಟಿ ವಿ ನೋಡುತ್ತಲಿದ್ದಳು. ಲೇ ನೋಡಿಕೊಂಡು ಹೆಚ್ಚು ಹುಳ ಇರುತ್ತವೆ ಎಂದೆ. ನನಗೇನೂ ಕಣ್ಣು ಕಾಣುವದಿಲ್ಲವಾ, ನಾನೇನು ಮುದುಕಿ ಎಂದು ಕೊಂಡಿರಾ, ತೆಗೆದುಕೊಳ್ಳಿ ನೀವೇ ಹೆಚ್ಚಿ ಕೊಡಿ ಎಂದು ನನಗೆ ಕೊಟ್ಟಳು.

ಮತ್ತೆ ಯಾವತ್ತಾದರೂ ಟಿ ವಿ ನೋಡಲು ಬಿಡದೆ ಇದ್ದರೆ ನನಗೆ ಗಂಡಾಂತರ ತಪ್ಪಿದ್ದಲ್ಲ. ಕಣ್ಣೀರ ಧಾರೆ ಶುರು....ಬೇಕಾದರೆ ಚುಮು ಚುಮು ಚಳಿಯಲ್ಲಿ ಕೂಡ ತಣ್ಣೀರ ಸ್ನಾನ ಮಾಡಬಹುದು. ಆದರೆ ಈ ಕಣ್ಣೀರ ಧಾರೆ ಸಹಿಸಲು ಅಸಾಧ್ಯ. ಮತ್ತೆ ಧಾರಾವಾಹಿ ನೋಡುವ ಸಮಯದಲ್ಲಿ ಕರೆಂಟ್ ಏನಾದರೂ ಹೋದರೆ ಕೆ ಪಿ ಟಿ ಸಿ ಎಲ್ (ಕೆ ಈ ಬಿ) ಅವರಿಗೆ ಗಂಡಾಂತರ ತಪ್ಪಿದ್ದಲ್ಲ. ಸಧ್ಯ ನಾನು ತಂದ ಟಿ ವಿ ಇನ್ನೂ ಸರಿಯಾಗಿ ಕೆಲಸ ಮಾಡುತ್ತಿದೆ. ಇಲ್ಲದೇ ಹೋದರೆ ಎಂತಹ ಟಿ ವಿ ತಂದಿದ್ದೀರಾ ಎಂದು ತಿವಿದಾಳು ನನ್ನ ಬೀವಿ....

Wednesday, February 9, 2011

ಕನ್ನಡ ಸಾಹಿತ್ಯ ಸಮ್ಮೇಳನ ....

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋಗಬೇಕು ಎಂದು ಬೆಳಗ್ಗೆ ಬೇಗನೆ ಎದ್ದೆ. ಬೇಗನೆ ಎದ್ದಿದ್ದು ನೋಡಿ, ಸೂರ್ಯನಿಗೂ ಆಶ್ಚರ್ಯವಾಗಿರಬೇಕು. ತನ್ನ ಹೊಳಪಿನ ಹಲ್ಲುಗಳನ್ನು ತೋರಿಸುತ್ತಾ ನಗುತ್ತಲಿದ್ದ ಎಂದು ಅನ್ನಿಸುತ್ತೆ. ತುಂಬಾ ಬಿಸಿಲು. ಆದರೂ ಗಾಂಧಿಬಜಾರ್ ತಲುಪಿ ನನ್ನ ಗಾಡಿ ಒಂದು ಕಡೆ ನಿಲ್ಲಿಸಿ, ಒಳಗಡೆ ಹೋದೆ. ಹೋದೊಡನೆ ಪ್ರೊ ಕೃಷ್ಣೇಗೌಡರು ಹಾಸ್ಯದ ಹೊನಲನ್ನು ಹರಿಸುತ್ತಿದ್ದರು.

ಕೆಲ ಹೊತ್ತು ಆದ ಮೇಲೆ ಪುಸ್ತಕ ಮಳಿಗೆಗೆ ಹೊರಟೆ, ತುಂಬಾ ಜನಜಂಗುಳಿ. ಜನರ ಪುಸ್ತಕ ಪ್ರೀತಿ ನೋಡಿ ತುಂಬಾ ಆನಂದವಾಯಿತು. ನನ್ನನ್ನು ಹಿಂದಿನವರೇ ದೂಡಿಕೊಂಡು ಹೋಗುತ್ತಿದ್ದರು, ಅಷ್ಟು ಜನ ಸೇರಿದ್ದರು. ಹಿಂದಿನಿಂದ ಒಬ್ಬ ಮನುಷ್ಯ ಹೊಟ್ಟೆ ಇಂದ ನನ್ನನ್ನು ನೂಕುತ್ತಾ ಹೊರಟಿದ್ದ. ಅವನು ನೂಕಿದ್ದು ನೋಡಿ ಕೋಪ ಬಂದರು, ಅವನ ಹೊಟ್ಟೆ ನೋಡಿ ನನಗೆ ಸಂತೋಷವಾಯಿತು, ಏಕೆಂದರೆ ನನ್ನ ಹೊಟ್ಟೆ, ಅವನ ಹೊಟ್ಟೆ ಮುಂದೆ ಏನು? ಅಲ್ಲ ಅಷ್ಟು ದೊಡ್ಡದಾಗಿತ್ತು.

ಮೊದಲು ಸಪ್ನ ಬುಕ್ ಸ್ಟಾಲ್ ಹೊಕ್ಕು, ಅಲ್ಲಿ ಇರುವ ಶ್ರೀನಿವಾಸ ವೈಧ್ಯರ "ತಲೆಗೊಂದು ತರತರ" ಪುಸ್ತಕ ತೆಗೆದುಕೊಂಡೆ. ಅಲ್ಲಿರುವ ಸನ್ನಿವೇಶ ಕೂಡ ಹಾಗೆ ಇತ್ತು, ತಲೆಗೊಂದು ತರತರ ಮಾತನಾಡುತ್ತಾ ಇದ್ದರು. ಮತ್ತೆ ಇನ್ನೊಂದು ಶ್ರೀ ವೈಧ್ಯರ ಪುಸ್ತಕ ಕಾಣಿಸಿತು. "ರುಚಿಗೆ ಹುಳಿಯೊಗರು" ಅದನ್ನು ತೆಗೆದುಕೊಂಡೆ. ಆಮೇಲೆ ಮುಂದಿನ ಮಳಿಗೆಗೆ ಹೋದೆ, ಅಲ್ಲಿ ಕಾಣಿಸಿದ್ದು, "ಅಂಗಿ ಬರಹ" ಲೇಖಕರು ನಮ್ಮೆಲ್ಲರ ಅಚ್ಚುಮೆಚ್ಚಿನ ಹಾಸ್ಯ ಧಾರಾವಾಹಿಗಳಾದ ಸಿಲ್ಲಿ-ಲಲ್ಲಿ ಮತ್ತು ಪಾ.ಪ. ಪಾಂಡು ಬರೆದಂತ ಶ್ರೀ ಎಂ ಎಸ್ ನರಸಿಂಹಮೂರ್ತಿ ಅವರದ್ದು.

ಅಲ್ಲಿಂದ ಮತ್ತೊಂದು ಮಳಿಗೆಯಲ್ಲಿ ಬೀChi ಅವರ ಒಂದು ಪುಸ್ತಕ ತೆಗೆದುಕೊಂಡೆ. ಅವರು ನನಗೆ ಮೂವತ್ತು ರೂಪಾಯಿ ಚಿಲ್ಲರೆ ಕೊಡಬೇಕಾಗಿತ್ತು. ಐದೈದು ರೂಪಾಯಿಗಳನ್ನು ಕೊಟ್ಟರು. ಕೈಯಲ್ಲಿ ಇದ್ದ ಬೀChi ಅವರ ಪುಸ್ತಕ ಪ್ರಭಾವವೋ ತಿಳಿಯದು , ಇಷ್ಟೊಂದು ದುಡ್ಡು ಕೊಟ್ಟರೆ, ನಾನು ಒಂದು ಬ್ಯಾಗ್ ತರುತ್ತಿದ್ದೆ ಎಂದೆ. ಪಕ್ಕದಲ್ಲಿದ್ದ ಹುಡುಗಿ ಕಿಸಕ್ಕನೆ (ಇಂಗ್ಲೀಶ್ ಅಲ್ಲ) ನಕ್ಕಳು.

ಮತ್ತೆ ಮುಂದಿನ ಮಳಿಗೆಯಲ್ಲಿ ದೇವರ ಪುಸ್ತಕ ನೋಡಿ, ಭಕ್ತಿ ಪರವಶನಾಗಿ ಅಲ್ಲಿಗೆ ಕೈ ಮುಗಿಯುತ್ತಾ ಹೋದೆ. ನನ್ನ ಮುಂದೆ ಇರುವ ಮನುಷ್ಯ ಕೂಡ ನನಗೆ ಕೈ ಮುಗಿದ. ಆದರೆ ಅವನು ಯಾರೆಂದು? ನನಗೆ ತಿಳಿಯಲಿಲ್ಲ. ಏನೋ... ತೆಗೆದುಕೊಳ್ಳಬೇಕು ಅನ್ನುವಷ್ಟರಲ್ಲಿ ಒಬ್ಬ ಮನುಷ್ಯ , ಮೈಯಲ್ಲಿ ದೇವರು ಬಂದವನ ಹಾಗೆ ಮಾಡುತ್ತಾ, ಬಂದು ನನ್ನ ನೂಕಿ ಒಂದು ಪುಸ್ತಕ ತೆಗೆದುಕೊಂಡ. ನಾನು ಮತ್ತೆ ಅವನಿಂದ ದೂರ ಸರಿದೆ. ಮತ್ತೆ ಒಬ್ಬ ಹೆಣ್ಣು ಮಗಳು ಕೂಡ ನನ್ನನ್ನು ಸರಿಸಿ, ಎಕ್ಸ್‌ಕ್ಯೂಸ್ ಮೀ ಎಂದು ಒಂದು ಪುಸ್ತಕ ಕೈಗೆತ್ತಿಕೊಂಡಳು. ನಾನು ದೂರದಿಂದ ದೇವರಿಗೆ ನಮಸ್ಕರಿಸಿ, ಮುಂದಿನ ಮಳಿಗೆಗೆ ಹೊರಟೆ.

ಮುಂದಿನ ಮಳಿಗೆಯಲ್ಲಿ ಮತ್ತೊಂದು ವೈ ಎನ್ ಗುಂಡೂರಾವ್ ಅವರ ಪುಸ್ತಕ ತೆಗೆದುಕೊಂಡೆ. ಅವರಿಗೆ ಅದೇ ಮೂವತ್ತು ರೂಪಾಯಿಗಳನ್ನು ಕೊಟ್ಟಿದ್ದು ನೋಡಿ ಚಿಲ್ಲರೆ ಬಂದಿದ್ದು ನೋಡಿ ತುಂಬಾ ಖುಷಿಯಾಗಿ, ದೇವರು ಬಂದ ಹಾಗೆ ಬಂದಿರಿ ಎಂದರು. ದೇವರಿಗೆ ಮಹಾಪ್ರಸಾದವಾಗಿ ಏನಾದರೂ? ಹೆಚ್ಚು-ಕಡಿಮೆ ಮಾಡುವಿರೋ ಎಂದೆ. ಈಗಾಗಲೇ ಕಡಿಮೆ ಮಾಡಿ ಕೊಟ್ಟು ಆಗಿದೆ. ಬೇಕಾದರೆ ಹೆಚ್ಚು ಮಾಡುವೆ ಎಂದರು. ಸುಮ್ಮನೇ ಹೊರಟು ಬಂದೆ.

ಒಬ್ಬ ನಿಮ್ಮ ಹೆಸರು ಹೇಳಿ, ಒಂದು ಉಂಗುರ ಕೊಡುತ್ತೇನೆ ಎಂದ. ನಿಮ್ಮ ಎಲ್ಲ ಕೆಲಸ ನೆರವೇರುತ್ತೆ ಎಂದ. ಕೆಲಸಗಳು ನೆರವೇರೋ ಸಮಯ ಮುಗಿದು ಹೋಗಿದೆ ಮಹಾರಾಯ ಎಂದು ಹೇಳಿದರು ಕೇಳಲಿಲ್ಲ. ಸರಿ, ನಿನ್ನ ಉಂಗುರ ಹಾಕಿಕೊಂಡರೆ ನನ್ನ ತಲೆಯಲ್ಲಿ ಕೂದಲು ಮತ್ತೆ ಹುಟ್ಟೂತ್ತೋ ಎಂದು ಕೇಳಿದೆ. ಪಾಪ ... ಜಾರುಬಂಡೆ ಹಾಗಿರುವ ತನ್ನ ತಲೆ ಕೆರೆದುಕೊಂಡ, ನನಗೆ ಅರ್ಥವಾಗಿ ಹೊರಗಡೆ ನಡೆದೆ.

ಒಂದೇ ಬಿಲ್ಲನ್ನು ಇಟ್ಟುಕೊಂಡು ಉಳಿದ ಬಿಲ್ಲನ್ನು ಹೊರಗಡೆ ಹೋಗಿ ಚೆಲ್ಲಿಬಿಟ್ಟೆ. ಹೆಂಡತಿ ಕೇಳಿದರೆ ಎರಡು ಪುಸ್ತಕ ತೆಗೆದುಕೊಂಡರೆ ಉಳಿದ ನಾಲ್ಕು ಪುಸ್ತಕ ಉಚಿತ ಎಂದು ಹೇಳಲು. ಈ ಧೂಳಿನ ಮುಖದಲ್ಲಿ ಮನೆಗೆ ಹೋದರೆ, ಮಡದಿ ಕಂಡುಹಿಡಿಯುವುದು ಕಷ್ಟ ಎಂದು ಮುಖ ತೊಳೆದು,ಮುಂದಿನ ಬಾರಿ ಸಂಪದದ ಒಂದು ಮಳಿಗೆ ಕೂಡ ಇರಲೆಂದು ಆಶಿಸುತ್ತಾ ಮನೆ ದಾರಿ ಹಿಡಿದೆ.

Saturday, February 5, 2011

ಹೆಚ್ಚು ಪೂರ್ವಕ್ಷರ....

ಪ್ರಸಿದ್ಧ ವ್ಯಕ್ತಿಗಳ ಹೆಸರುಗಳ ಬಗ್ಗೆ ಒಮ್ಮೆ ಯೋಚಿಸುತ್ತಾ ಇದ್ದೆ. ಎಲ್ಲಾ ಪ್ರಸಿದ್ದ ವ್ಯಕ್ತಿಗಳಲ್ಲಿ ಒಂದು ಸಾಮ್ಯತೆ ಕಂಡು ಬಂತು. ಅದು ಏನೆಂದರೆ ಎಚ್ ಎಂಬ ಪೂರ್ವಕ್ಷರ {ಪೂರ್ವ(ಮೊದಲ) ಅಕ್ಷರ}. ಎಚ್ ಪೂರ್ವಕ್ಷರಗಳಲ್ಲಿ ನನ್ನ ಮೆಚ್ಚಿನ ಹಾಸ್ಯ ಲೇಖಕರಾದ ನಮ್ಮ ಶ್ರೀ ಎಚ್ ಡುಂಡಿರಾಜ್ ಕೂಡ. ಕೆಲವರು ಇದನ್ನು ಹೆಚ್ ಎಂದು ಕೂಡ ಬರೆಯುವುದುಂಟು. ಈ ಹೆಚ್(ಎಚ್) ಎನ್ನುವುದು ಕನ್ನಡೀಕರಿಸಿದರೆ ಹೆಚ್ಚು ಎಂದು ಆಗಬಹುದೇನೋ, ಅದಕ್ಕೆ ಅವರು ಅಷ್ಟು ಹೆಚ್ಚು ಹೆಚ್ಚು ನಮ್ಮನ್ನು ನಗಿಸುತ್ತಾ ಹಾಸ್ಯ ಲೇಖನಗಳನ್ನು ಬರೆದಿರೋದು. ಸಂಪದ ಸೃಷ್ಟಿಕರ್ತರಾದ ಶ್ರೀ ಹರಿಪ್ರಸಾದ್ ನಾಡಿಗ್ ಅವರ ಹೆಸರು ಕೂಡ ಹೆಚ್ ನಿಂದ ಶುರು ಆಗುತ್ತೆ. ಮತ್ತೆ ನನ್ನ ಆಪ್ತರಾದ ದುಬೈ ಮಂಜಣ್ಣನ ಹೆಸರು ಕೂಡ ಹೆಚ್ ನಿಂದ ಶುರು ಆಗುತ್ತೆ , ಹೊಳೆನರಸಿಪುರ ಮಂಜುನಾಥ ಎಂದು. ಮತ್ತೆ ನನ್ನ ಸಹೃದಯಿ ಮಿತ್ರ ಹರೀಶ್ ಅತ್ರೇಯ....ಹೀಗೆ ಹಲವಾರು...
ನಾನು ಏಕೆ? ಹೀಗೆ ಹೆಚ್ ಹಚ್ಚಿಕೊಳ್ಳಬಾರದು ಎಂಬ ಆಲೋಚನೆ ಮನದಲ್ಲಿ ಮೂಡಿತು. ಅದನ್ನು ಹಚ್ಚಿಕೊಳ್ಳೋಕೆ ಅದೇನು ಎಣ್ಣೆಯೆ?. ಅದನ್ನು ಹಚ್ಚಿಕೊಳ್ಳೋಕೆ ಪೂರ್ವಾಪರ ಬೇಕೇ ಬೇಕು. ಆದರೆ ಈ ಹೆಚ್ ಹಚ್ಚಿಕೊಂಡಲ್ಲಿ, ಮತ್ತೆ ಯಾರಾದರೂ ಕೇಳಿದರೆ ಹೆಚ್ ಏನು? ಎಂದು ಎಂಬ ವಿಷಯ ಕೂಡ ಮನದಲ್ಲಿ ತೇಲಾಡಿತು. ಹೆಚ್ ಎಂದರೆ ಹೆಸರು ಗೋಪಾಲ್ ಎಂದು ಹೇಳಿದರೆ ಹೇಗೆ ಎಂದು ಕೂಡ ಅನ್ನಿಸಿತು. ಇದನ್ನು ಕೇಳಿಯೇ ನನ್ನನ್ನು ಹುಚ್ಚನೆಂದು ಕೊಂಡುಬಿಟ್ಟಾರು ಎಂದು ಬಿಟ್ಟು ಬಿಟ್ಟೆ.
ಮತ್ತೆ ಇದನ್ನು ನನ್ನ ಗೆಳೆಯ ಸುಬ್ಬನಿಗೆ ಕೇಳಿದೆ. ಸುಬ್ಬ ಸಿಕ್ಕಿದ್ದೇ ಚಾನ್ಸ್ ಎಂದು, ಹುಚ್ಚ ಎಂದು ಬಿಡಬೇಕೆ. ಸಧ್ಯ ಯಾರು ಕೇಳಿಸಿಕೊಳ್ಳಲಿಲ್ಲ. ಮತ್ತೆ ಯಾರಿಗೂ ಕೇಳಬಾರದು ಎಂಬ ನಿರ್ಧಾರಕ್ಕೆ ಬಂದುಬಿಟ್ಟೆ. ನಾನು ಹುಟ್ಟಿದ್ದು ಧಾರವಾಡ, ಅಲ್ಲಿ ಕೂಡ ಡಿ ಬರುತ್ತೆ, ಹರಿಹರ,ಹಾವೇರಿಯಲ್ಲಿ ಹುಟ್ಟಿದ್ದರೆ ಚೆನ್ನಾಗಿರುತಿತ್ತು ಎಂದು ಯೋಚಿಸಿದೆ. ಛೇ ಈಗ ಹುಟ್ಟಿ ಆಗಿದೆಯಲ್ಲಾ, ಎನ್ನೆನೂ ಮಾಡಲಾಗುವುದಿಲ್ಲ. ಮತ್ತೆ ಹುಟ್ಟಿದ್ದು ಹಾಸ್ಪಿಟಲ್ ನಲ್ಲಿ ಅಲ್ಲವಾ.. ಆದರೆ ಈ ಹೆಚ್ ಸೂಕ್ತವಲ್ಲ ಎಂದೆನಿಸಿ ಬಿಟ್ಟಿತು. ಮತ್ತೆ ಧಾರವಾಡದಲ್ಲಿ ಪ್ರಸಿದ್ದಿ ಇದ್ದಿದ್ದು ಎಂಬ ಯೋಚನೆಗೆ ನಗೆ ಬೀರಿ ಹುಚ್ಚರ ಆಸ್ಪತ್ರೆ ಎಂದು ಕೂಡ ಮನದಲ್ಲಿ ಬಂತು. ನನ್ನಷ್ಟಕ್ಕೆ ನಾನೇ ನಕ್ಕೂ ಮತ್ತೆ ಆಲೋಚನೆ ಶುರು ಮಾಡಿದೆ. ತಂದೆ ಹೆಸರು ಹಾಕಿಕೊಂಡರೆ ಎಂ ಮಾಧವ. ಹೆಚ್ಚು.. ಹೆಚ್ಚು.. ಯೋಚಿಸಿದಷ್ಟು ತಲೆ ಬಿಸಿಯಾಗತೊಡಗಿತು.
ಹೆಚ್ ಬಗ್ಗೆ ಯೋಚಿಸುತ್ತಾ "ಹಚ್ಚೇವು ಕನ್ನಡದ ದೀಪ" ಎಂಬ ಹಾಡು ಕೂಡ ನೆನಪು ಆಯಿತು. ಹೀಗೆ ಯೋಚಿಸುತ್ತಾ ಏನೇನೋ ಕೈ ಕಾಲು ಆಡಿಸುತ್ತಾ ಒಬ್ಬನೇ ಮಾತನಾಡುವುದು ಎಲ್ಲವನ್ನು ಮಾಡುತ್ತಾ ಇದ್ದೆ. ರಾತ್ರಿ ನಿದ್ದೆ ಕೂಡ ಬರಲಿಲ್ಲ. ಕಡೆಗೆ ನನ್ನ ವಿಚಿತ್ರ ವರ್ತನೆ ನೋಡಿ ಮಡದಿ ಕೇಳಿಯೇ ಬಿಟ್ಟಳು. ಏನು? ಯಾಕೆ ಹೀಗೆ ಆಗಿದ್ದೀರಿ ಎಂದು. ನಾನು ಪ್ರಸಿದ್ದ ವ್ಯಕ್ತಿ ಆಗಬೇಕೆಂದಿರುವೆ, ಏನಾದರೂ? ಮಾಡಿ ಎಂದು ಹೇಳಿದೆ. ಅದೆಲ್ಲ ದೇವರ ಇಚ್ಛೆ ನೀವೇಕೆ ಅಷ್ಟು ಯೋಚಿಸುತ್ತೀರಿ ಎಂದಳು. ಎಚ್ ಬಗ್ಗೆ ತುಂಬಾ ವಿವರವಾಗಿ ಹೇಳಿದೆ. ನನ್ನನ್ನು ಕುಹಕವಾಡಿ ನಗಲು ಆರಂಭಿಸಿದಳು. ಹೆಚ್ ಹಚ್ಚುವ ಕೆಲಸ ಆಮೇಲೆ ಮುಂದುವರಿಸಿ, ಮೊದಲು ಈ ತರಕಾರಿ ಹೆಚ್ಚಿ ಎಂದು ಹೇಳಿ ನಗುತ್ತಾ ಅಡುಗೆ ಮನೆಗೆ ಹೊರಟು ಹೋದಳು. ತರಕಾರಿ ಅಷ್ಟು ಹೆಚ್ಚಿ ಕೊಟ್ಟರು ಹೆಚ್ ಮಾತ್ರ ಹೊಳಿಲೆ ಇಲ್ಲ. ಮತ್ತೆ ಅಡುಗೆ ಮನೆಯಿಂದ ಬಂದು, ಬರಿ ಹೆಸರು ಬದಲು ಮಾಡಿದರೆ ಆಗುತ್ತಾ, ಮೊದಲು ನಿಮ್ಮನ್ನು ನೀವು ಬದಲಿಸಿ. ಒಳ್ಳೆಯ ಹವ್ಯಾಸ ಬೇಳಿಸಿಕೊಳ್ಳಿ. ದೇವರ ಮೇಲೆ ನಂಬಿಕೆ ಇರಲಿ, ತಾನಾಗಿಯೇ ಪ್ರಸಿದ್ಧಿಗೆ ಬರುತ್ತೀರಿ. ಅದು ಎಲ್ಲಾ ಬಿಟ್ಟು ಹೀಗೆ ಹೆಸರು ಬದಲಿಸುವ ವಿಚಾರಕ್ಕೆ ಏಕೆ? ಬರುತ್ತೀರಿ ಎಂದು ಹೇಳಿದಳು. ಅವಳು ಹೇಳಿದ ಮಾತಿಗೆ ನನ್ನ ಅಹಂ ಸ್ವೀಕರಿಸಲಿಲ್ಲ. ಕಡೆಗೆ ತಿಂಡಿ ತಿಂದು ಆಫೀಸ್ ಕಡೆಗೆ ಹೊರಟೆ.
ದಾರಿಯುದ್ದಕ್ಕೂ ಹಳಿಯೇ ಇಲ್ಲದ ರೈಲಿನ ಹಾಗೆ ನನ್ನ ಮನಸ್ಸು ಎಲ್ಲೆಲೋ ಹೊರಳಾಡುತ್ತಾ ಹೊರಟಿತ್ತು. ಹರಿಯುವ ನೀರಿಗೆ ಕಡಿವಾಣ ಹಾಕಬಹುದು, ಆದರೆ ಈ ಮನಸ್ಸಿಗೆ ಮಾತ್ರ ಕಡಿವಾಣ ಹಾಕಲು ಆಗುವುದಿಲ್ಲ. ಇದಕ್ಕೆ ಪ್ರತಿಯಾಗಿ ಹರಿ-ಹರರನ್ನು ಕೂಡ ನೆನದಿದ್ದು ಆಯಿತು. ಮಗ ಹಾಡುತ್ತಿದ್ದ ಹಮ್ ಹೋಂಗೆ ಕಾಮಿಯಾಬ್ ಎಂಬ ತುಂಬಾ ಸುಂದರವಾದ ಹಾಡು ಕೂಡ ಮನದಲ್ಲಿ ಬಂತು. ಈ ಕಾಮಿಯಾಬಿ ಎಂಬುದು ಮಾತ್ರ ಹತ್ತಿರ ಸುಳಿಯಲಿಲ್ಲ. ಪೂರ್ವಾಪರ ಸಿಗದೆ ಒದ್ದಾಡಿ ಹಣಿ ಹಣಿ ಗಟ್ಟಿಸಿದೆ, ಒಂದು ಹನಿ ಕಣ್ಣೀರು ಕೂಡ, ನನ್ನ ಮಾತು ಕೇಳಲಿಲ್ಲ. ಹನಿ ಹನಿ ಕೂಡಿದರೆ ಹಳ್ಳ ಎಂಬ ಗಾದೆ ಮಾತ್ರ ನೆನಪಿಗೆ ಬಂತು.
ಇದನ್ನು ನನ್ನ ಆಪ್ತ ಗೆಳೆಯನಾದ ಮಂಜನಿಗೆ ಹೇಳಬೇಕು ಎಂದು ಅನ್ನಿಸಿತು. ಕೇಳಿಯೇ ಬಿಟ್ಟೆ. ಅವನು ಸಿಕ್ಕೆದ್ದೆ ಚಾನ್ಸ್ ಎಂದು ಹೆಚ್ಚು.. ಹೆಚ್ಚು.. ನನ್ನನ್ನು ಧಾರವಾಡದ ಭಾಷೆಯಿಂದ ಹೊಗಳಿ ಹಾಡಿದ. ಮತ್ತೆ

ಹೆಸರು ಹೆಸರೆಂದು ನೀಂ ಬಸವಳಿವುದೇಕಯ್ಯ? |
ಕಸದೊಳಗೆ ಕಸವಾಗಿ ಹೋಹನಲೆ ನೀನು? ||
ಮುಸುಕಲೀ ಧರೆಯ ಮರೆವೆನ್ನನ್; ಎನ್ನುತ ಬೇಡು |
ಮಿಸುಕದಿರು ಮಣ್ಣಿನಲಿ - ಮಂಕುತಿಮ್ಮ ||

ಮತ್ತು

ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ
ಚಿನ್ನದಾತುರಕಿಂತ ಹೆಣ್ಣುಗಂಡೊಲವು
ಮನ್ನಣೆಯ ದಾಹವಂ ಎಲ್ಲದಕೂ ತೀಕ್ಷ್ಣತಮ
ತಿನ್ನುವುದದಾತ್ಮವನೆ -ಮಂಕುತಿಮ್ಮ||

ಎಂದು ಮಂಕುತಿಮ್ಮನ ಕಗ್ಗ ಹೇಳಿ ನನ್ನನ್ನು ಹೀಯಾಳಿಸಿದ.

ಇನ್ನೂ ಎಲ್ಲರನ್ನೂ ಕೇಳಿ ಹುಚ್ಚನಾಗುವುದು ಸಾಕೆನಿಸಿತು. ನನ್ನ ಹೆಸರಿಗೆ ಏನು? ಆಗಿದೆ ಎಂದು ಯೋಚಿಸಿದೆ. ಸರಿಯಾಗಿಯೇ ಇದೆಯಲ್ಲ, ಇದೆಲ್ಲವನ್ನೂ ಬಿಟ್ಟು ನನ್ನ ಮಡದಿ ಹೇಳಿದ ಹಾಗೆ ನನ್ನ ಕೆಲಸ,ಕರ್ತವ್ಯಕ್ಕೆ ಮಹತ್ವ ಕೊಟ್ಟು, ಒಳ್ಳೆಯ ಹವ್ಯಾಸ ಬೆಳಿಸಿ ಕೊಳ್ಳಬೇಕು ಎಂದು. ಹಾಡು ಹಳೆಯದಾದರೇನು ಭಾವ ನವ ನವೀನಾ ಎನ್ನುವ ಹಾಗೆ, ನಾವು ಬದುಕಿದರೆ ಸಾಕಲ್ಲವೇ?....

ಮತ್ತೆ ಡಿ.ವಿ.ಜಿ ಅವರು ಹೇಳಿದ ಹಾಗೆ

ಹೆಸರು ಹೆಸರೆಂಬುದೇಂ? ಕಸುರು ಬೀಸುವ ಗಾಳಿ |
ಹಸೆಯೊಂದು ನಿನಗೇಕೆ ಬ್ರಹ್ಮಪುರಿಯೊಳಗೆ? ||
ಶಿಶುವಾಗು ನೀಂ ಮನದಿ; ಹಸುವಾಗು; ಸಸಿಯಾಗು |
ಕಸಬೊರಕೆಯಾಗಿಳೆಗೆ - ಮಂಕುತಿಮ್ಮ || 

(ಸ್ಪೂರ್ತಿ :-ಹಾಸ್ಯ ಲೇಖಕರಾದ ಶ್ರೀ ಡುಂಡಿರಾಜರ ಪೂರ್ವಕ್ಷರ ಪೂರ್ವಾಪರ ಎಂಬ ಲೇಖನ.)

Thursday, February 3, 2011

ಮನ ಮೆಚ್ಚಿದ ಹುಡುಗಿಗೆ ಮೆಚ್ಚಿಸುವ ಪರಿ ....

ಮದುವೆ ಆದ ಹೊಸದರಲ್ಲಿ ಒಬ್ಬರನ್ನೊಬ್ಬರು(ತಮ್ಮ.. ತಮ್ಮ.. ಹೆಂಡತಿ-ಗಂಡನನ್ನು ಮತ್ತೆ ಗಂಡ-ಹೆಂಡತಿಯನ್ನ) ಮೆಚ್ಚಿಸುವ ಕಾರ್ಯಕ್ರಮದಲ್ಲಿ ತೊಡಗಿರುತ್ತಾರೆ, ಆಮೇಲೆ ಹರಿತವಾದ ಮಚ್ಚಿನ ಹಾಗೆ ಇರುವ ಮಾತಿನ ಕಾರ್ಯಕ್ರಮ ತಾನಾಗೇ ಶುರು ಆಗುತ್ತೆ. ನಾನು ಅದು ಮಾಡಿದೆ, ಇದು ಮಾಡಿದೆ ಎಂದು ಹೇಳುವ ಗಂಡನ ಪ್ರತಾಪಗಳು ಮಡದಿಗೆ ಅರಿವಾಗಿರುತ್ತೆ. ಮಡದಿಗೆ ಮೊದಲು ಬಂದ ಮೇಲೆ ಗಂಡನನ್ನು ಅರಿಯುವ ಸಮಯದಲ್ಲಿ ಉದ್ಭವಿಸುವ ಎಲ್ಲಾ ಪ್ರಶ್ನೆಗಳಿಗೆ ಕೆಲವೇ ದಿನಗಳಲ್ಲಿ ಪೂರ್ತಿಯಾಗಿ ಉತ್ತರಗಳನ್ನು ತಮ್ಮ, ತಮ್ಮ ಉತ್ತರ ಕುಮಾರರಿಂದ(ಗಂಡಂದಿರಿಂದ) ಪಡೆದಿರುತ್ತಾರೆ. ಹೀಗೆ ಮೆಚ್ಚಿಸುವ ಮತ್ತು ಹೋಗಳಿಕೆಯ ಕಾರ್ಯಕ್ರಮಕ್ಕೆ ನಾಂದಿ ಹಾಡಿ ಆಗಿರುತ್ತೆ.

ನಾನು ಮದುವೆ ಆದ ಹೊಸದರಲ್ಲಿ ಮಡದಿಯನ್ನು ಮೆಚ್ಚಿಸುವ ಸಂಪ್ರದಾಯಕ್ಕೆ ಬದ್ದನಾಗಿದ್ದೆ, ಅನ್ನುವುದಕ್ಕಿಂತ ಮೆಚ್ಚಿಸುವ ಭರದಲ್ಲಿ ಬುದ್ದನಾಗಿದ್ದೆ ಎಂದರೆ ಸೂಕ್ತ. ಮಡದಿ ಮೊದಮೊದಲು ಏನೇ ಕೆಲಸ ಹೇಳಿದರು ಪ್ರಾಮಾಣಿಕತೆ ಇಂದ ಮಾಡಿ ಮುಗಿಸುತ್ತಿದ್ದೆ. ಆದರೆ ಈಗ 'ಪ್ರಾಮಾಣಿಕ'ವಾಗಿ 'ಕತೆ' ಹೇಳಿ ಕೆಲಸದಿಂದ ಜಾರಿಕೊಳ್ಳುತ್ತೇನೆ. ಅದಕ್ಕೆ ಸಾಕ್ಷಿ ನಾನು ಬರೆದಿರುವ ಇಷ್ಟೊಂದು ಕತೆಗಳೇ...

ಒಮ್ಮೆ ಹೀಗೆ ಮದುವೆ ಆದ ಹೊಸದರಲ್ಲಿ ನಿನ್ನ ಕೈ ಉಪ್ಪಿಟ್ಟು ಸಕ್ಕತ್ ಆಗಿ ಇರುತ್ತೆ ಎಂದು ಹೇಳಿದ್ದೆ. ನಿಮಗೆ ಆಶ್ಚರ್ಯವಾಗಬಹುದು ಉಪ್ಪಿಟ್ಟು ಎಂದರೆ ಹರಿಹಾಯುವ ಸಕ್ಕತ್ ಜನರ ನಡುವೆ, ಇವನು ಯಾರಪ್ಪ? ಪರಲೋಕ ಪ್ರತಾಪಿ ಉಪಿಟ್ಟನ್ನು ಇಷ್ಟ ಪಡುವವನು ಎಂದು ಅಂದುಕೊಳ್ಳಬಹುದು. ಹೊಗಳಿಸಿಕೊಂಡ ಹೆಂಡತಿ ಏನೋ ಹಿರಿ ಹಿರಿ ಹಿಗ್ಗಿದಳು, ಆದರೆ ಅದರ ಫಲವನ್ನು ಈಗಲೂ ಅನುಭವಿಸುತ್ತಿದ್ದೇನೆ. ವಾರದಲ್ಲಿ ಮೂರು ದಿನ ಉಪ್ಪಿಟ್ಟು, ನನ್ನ ಉಪಸಂಹಾರಕ್ಕೆ.. ಕ್ಷಮಿಸಿ ಉಪಹಾರಕ್ಕೆ. ಮೊದಮೊದಲು ನನಗೆ ತಿಂಡಿ ಏನು? ಇವತ್ತು ಎಂದು ಕೇಳುತ್ತಿದ್ದ ನನ್ನ ಗೆಳೆಯರು ನನ್ನ ಕಪ್ಪಿಟ್ಟಿದ್ದ ಮುಖ ನೋಡಿಯೇ ತಿಳಿದುಕೊಂಡು ಬಿಡುತ್ತಾರೆ.

ಮತ್ತೊಮ್ಮೆ ಹೀಗೆ ನಾನು ಹೆಸರು ಹಿಟ್ಟಿನ ಉಂಡೆ ದೇಹಕ್ಕೆ ತುಂಬಾ ಒಳ್ಳೆಯದು ಎಂದು ಪುರಾಣ ಊದಿದೆ. ಮರುದಿನವೇ ನನ್ನನ್ನು ಮೆಚ್ಚಿಸಲು ಮಡದಿ ಮಾಡಿದಳು ಹೆಸರು ಹಿಟ್ಟಿನ ಉಂಡೆ, ಸಧ್ಯ ನಾನು ನನ್ನ ಹೆಸರು ಮರೆಯಲಿಲ್ಲ. ಏನೋ ಲೇಖನದಲ್ಲಿ ಬಂದಿದ್ದ ಒಂದೆರಡು ವಿಷಯ ಹೇಳಿ ನನ್ನ ಬುದ್ದಿವಂತಿಕೆ ಪ್ರದರ್ಶಿಸೋಣ ಎಂದು ಮಾಡಿಕೊಂಡಂತಹ ಅವಾಂತರ(ನನ್ನದೇ, ಕಾಶೀನಾಥನ ಸಿನಿಮಾ ಅಲ್ಲ). ಮುಂದೆ ಅಲ್ಲಿ.. ಇಲ್ಲಿ.. ಓದಿದ ವಿಷಯಗಳನ್ನ ನನ್ನ ಹೆಂಡತಿಯ ಮುಂದೆ ಊದಲಿಲ್ಲ.

ಒಮ್ಮೆ ಹೆಂಡತಿಯನ್ನು ಮೆಚ್ಚಿಸಲು ಎರಡು ಕೆ ಜಿ ಹಸಿ ಮೆಣಿಸಿನಕಾಯಿ ತಂದಿದ್ದೆ. ಏನು? ಹೆಂಡತಿಯನ್ನು ಮೆಚ್ಚಿಸಲು ಹಸಿಮೆಣಿಸಿನಕಾಯಿ ಎಂದು ಅನ್ನಬಹುದು. ಹಾ.. ಸ್ವಾಮಿ ... ಏಕೆಂದರೆ ನನಗೆ ಎರಡೆರಡು ದಿವಸಕ್ಕೆ, ನನ್ನ ಮಡಿದಿ ಒಂದು ರೂಪಾಯಿ ಹಸಿಮೆಣಿಸಿನಕಾಯಿ ತರಲು ಹೇಳುತ್ತಿದ್ದಳು. ಇದನ್ನು ನೋಡಿದ ನನ್ನ ಮಂಜ ಕೊಟ್ಟ ತರಲೆ ಐಡಿಯಾ. ಒಮ್ಮೆಲೇ ಎರಡು ಕೆ ಜಿ ತೆಗೆದುಕೊಡು ತುಂಬಾ ಖುಷಿಯಾಗುತ್ತಾಳೆ ಎಂದು ಹೇಳಿದ. ಹಾಗೆ ಮಾಡಿದೆ, ನಮ್ಮ ಮದುವೆಗೆ ಕೂಡ ಇಷ್ಟು ಮೆಣಸಿನಕಾಯಿ ತಂದಿರಲಿಲ್ಲ ಎಂದು ಹೇಳಿ ಉಗಿದಳು, ಇಷ್ಟು ತಂದರೆ ಒಣಗಿ ಹೋಗುತ್ತವೆ ಎಂದು, ಮರುದಿನ ಅವುಗಳನ್ನು ಉಪ್ಪು ಹಚ್ಚಿದ ಮೆಣಸಿನಕಾಯಿ ಮಾಡಲು ಮತ್ತಷ್ಟು ಸಾಮಾನು ತರಿಸಿ ನನಗೂ ಸಹಾಯ ಮಾಡಲು ಹೇಳಿದಳು .

ಒಮ್ಮೆ ಚಲನ ಚಿತ್ರದಲ್ಲಿ ಹೀರೊ ತನ್ನ ಮಡದಿಯನ್ನು ಮೆಚ್ಚಿಸುವ ಸಲುವಾಗಿ ಮೈಸೂರು ಪಾಕ ಮತ್ತು ಮಲ್ಲಿಗೆ ಹೂವು ತಂದು ಕೊಡುತ್ತಿದ್ದಿದ್ದನ್ನು ನೋಡಿ, ನಾನು ಹಾಗೆ "ನಾ ಮೆಚ್ಚಿದ ಹುಡುಗಿಗೆ ಕಾಣಿಕೆ ತಂದಿರುವೆ" ಎಂದು ಹಾಡುತ್ತಾ, ಮೈಸೂರು ರಾಕ್ ಕ್ಷಮಿಸಿ... ಪಾಕ ಮತ್ತು ಮಲ್ಲಿಗೆ ಹೂವು ತೆಗೆದುಕೊಂಡು ಹೋಗಿದ್ದೆ(ನನ್ನ ಮಡದಿಗೆ). ಅದಕ್ಕೆ ಧಾರವಾಡದಲ್ಲಿ ಇದ್ದು ಕೊಂಡು ಪೇಡಾ ಬಿಟ್ಟು ಈ ಕಲ್ಲಿನ ಹಾಗೆ ಇರುವ ಮೈಸೂರು ರಾಕ್ ತಂದಿದ್ದೀರ ಎಂದು ಉಗಿದಿದ್ದಳು.

ಹೊ'ಗಳಿಕೆ'ಯಲ್ಲಿ ಗಳಿಕೆ ಇದೆ ಎಂದು ಖ್ಯಾತ ಹಾಸ್ಯ ಬರಹಗಾರರಾದ ಶ್ರೀ ಡುಂಡಿರಾಜ ಹೇಳಿದ್ದಾರೆ. ಮತ್ತು ತೆ'ಗಳಿಕೆ'ಯಲ್ಲಿ ಕೂಡ ಎಂದು ಹೇಳಿದ್ದಾರೆ. ನನಗೆ ಮಾತ್ರ ಎರಡು ಸೇರಿ ಹೊತೆ ಗಳಿಕೆ ....

Tuesday, February 1, 2011

ಅವಸರವೇ ಅಪಘಾತ ....

ಗುರು ರಾಘವೆ೦ದ್ರ ವೈಭವದ ಬಾಲ ವೆ೦ಕಟನಾಥನೊ0ದಿಗೆ ನನ್ನ ಸುಪುತ್ರ
ಪ್ರಶಸ್ತಿ ಸ್ವೀಕರಿಸುತ್ತಿರುವ ನನ್ನ ಸುಪುತ್ರ ಮಡದಿಯೊ೦ದಿಗೆ
----------------------------------------------------------------------------------
ಆಫೀಸ್ ಹೋಗುವುದಕ್ಕೆ ಲೇಟ್ ಆಗಿತ್ತು. ಲೇ ನನ್ನ ಬನಿಯನ್ ಯಾವ ಊರಿನಲ್ಲಿ ಇದೆ ಎಂದು ಕೇಳಿದೆ. ಧಾರವಾಡದಲ್ಲಿ ಇದೆ ಹೋಗಿ ತೆಗೆದುಕೊಳ್ಳಿ ಎಂದು ನನ್ನ ಕಪಿ ಚೇಷ್ಟೆಗೆ ಸಾತ್ ನೀಡಿದಳು. ಲೇ ಎಲ್ಲಿ ಇದೆ ಹೇಳೆ ಎಂದು ಮತ್ತೊಮ್ಮೆ ಕೇಳಿದೆ. ಪಕ್ಕದ ಮನೆಯಲ್ಲಿ ಇರುತ್ತಾ ಇಲ್ಲೇ ಯಲ್ಲೋ ಬಿದ್ದಿರಬೇಕು ನೋಡಿ ಎಂದಳು. ರಾತ್ರಿ ಪೂರ್ತಿ ನಿಶಾಚರನ ಹಾಗೆ ಕುಳಿತು ಕಂಪ್ಯೂಟರ್ ಕುಟ್ಟೊದು, ಈಗ ನಮ್ಮನ್ನು ಬೈಯೋದು ಎಂದು. ಅದು ಏನೋ? ಬರೀತಾರೆ ಎಂದು ಕೊಂಡರೆ, ನನ್ನ ಬಗ್ಗೆ ಹೀಯಾಳಿಸೋದು, ಇಲ್ಲ ತಮ್ಮ ಹೊಟ್ಟೆ ಮತ್ತು ತಲೆ ವರ್ಣಿಸೋದು ಬಿಟ್ಟು ಬೇರೆ ಏನು ಬರೆದಿದ್ದೀರ ಎಂದು ಬೈದಳು. ಕಡೆಗೆ ನಾನೇ ಹುಡುಕಿ ಬನಿಯನ್ ಹಾಕಿಕೊಂಡೆ.

ಮಗನಿಗೆ ಬೈಯುತ್ತಾ, ಲೇ ಜೋರಾಗಿ ಹೇಳೋ ಸ್ತೋತ್ರಗಳನ್ನ, ನಾಳೆ ಸ್ಪರ್ಧೆ ಇದೆ ಎಂದು ಹೇಳುತ್ತ ಇದ್ದಳು. ನಾನು ಅವನಿಗೆ ಏನು? ಹೇಳಿಕೊಡುತ್ತಿದ್ದಾಳೆ ಬೈಯುವುದನ್ನೋ ಅಥವಾ ಸ್ತೋತ್ರಗಳನ್ನೋ ಎಂದು ಅಚ್ಚರಿ ಆದರೂ ಕೇಳಲಿಲ್ಲ. ಮತ್ತೆ ಮಗನ ಜೊತೆಯಲ್ಲಿ ಆಟವಾಡುತ್ತಾ ಇದ್ದೆ. ಅದಕ್ಕೆ ಇಷ್ಟು ವಯಸ್ಸಾದರೂ ಚಿಕ್ಕ ಮಕ್ಕಳ ಹಾಗೆ ಮಾಡುತ್ತೀರಿ ತಿಳಿಯೋದಿಲ್ಲವೇ ಎಂದಳು. ಲೇ ಮಕ್ಕಳ ಜೊತೆ ನಾವು ಮಕ್ಕಳ ಹಾಗೆ ಇರಬೇಕು ಗೊತ್ತಾ. ಇಲ್ಲ ಅಂದರೆ ಅವರು ನಾವು ಬೇರೆ ಮತ್ತು ತಾವು ಬೇರೆ ಎಂದು ಅಂದುಕೊಂಡುಬಿಡುತ್ತಾರೆ. ಮಕ್ಕಳ ಮನಸ್ಸು ಆಗ ಮಾತ್ರ ಅರ್ಥವಾಗುವದು, ದೊಡ್ಡತನ ದೇಹಕ್ಕೆ ಮಾತ್ರ ಬರಬೇಕೆ ಹೊರತು ಮನಸಿಗಲ್ಲ ಎಂದು ಹೇಳಿದೆ. ಆಯಿತು ಇಷ್ಟೊತ್ತು ಲೇಟ್ ಆಗಿದೆ ಎಂದು ನನ್ನ ಜೊತೆ ಜಗಳ ಮಾಡಿದಿರಿ ಸುಮ್ಮನೇ ಹೊರಡಿ ಇನ್ನು ಸಾಕು ಎಂದಳು.

ಹೋಗುವ ಸಮಯದಲ್ಲಿ ಸಂಜೆ ಸ್ವಲ್ಪ ದುಡ್ಡು ತೆಗೆದುಕೊಂಡು ಬನ್ನಿ, ದಿನಸಿ ತರಬೇಕು ಎಂದು ಹೇಳಿದಳು. ನಾನು ಲಗುಬಗೆಯಿಂದ ನನ್ನ ಡೆಬಿಟ್ ಕಾರ್ಡ್ ಇಟ್ಟುಕೊಂಡು ಆಫೀಸ್ ಹೊರಟೆ. ಅಷ್ಟರಲ್ಲಿ ಎದುರಿಗೆ ನಮ್ಮ ಹಳೆಯ ಆಫೀಸ್ ನಲ್ಲಿ ಕೆಲಸ ಮಾಡುವ ಗೆಳೆಯ ಶ್ರೀನಿವಾಸ್ ಭೇಟಿ ಆದ. ನಾವಿಬ್ಬರು ಒಂದು ಡಿಪಾರ್ಟ್‌ಮೆಂಟ್ EDP ಎಂದರೆ Electronic Data Processing ಎಂದು ತಪ್ಪಾಗಿ ತಿಳಿಯಬೇಡಿ ಮತ್ತೆ Eat Drink Play , ನಾವು ಆ ಆಫೀಸ್ ನಲ್ಲಿ ಅದನ್ನೇ ಮಾಡುತ್ತಿದ್ದೆವು, ಏಕೆಂದರೆ ಎಲ್ಲಾ ಡಿಪಾರ್ಟ್‌ಮೆಂಟ್ ಗಳು ಕಂಪ್ಯೂಟರೈಸ್ ಆಗಿತ್ತು. ನಮಗೆ ತಿಂಗಳಲ್ಲಿ ಒಮ್ಮೆ ಅಥವಾ ಎರಡು ದಿನ ಮಾತ್ರ ಕೆಲಸ ಇರುತಿತ್ತು. ಹೀಗಾಗಿ ನಮ್ಮ ಡಿಪಾರ್ಟ್‌ಮೆಂಟನ್ನು ಭೋಜನಕ್ಕೆ ಕರೆಯದೇ ಮರು ನಾಮಕರಣ ಮಾಡಿದ್ದರು. ಎಲ್ಲಾ ಕ್ಷೇಮ ಸಮಾಚಾರ ಆದ ಮೇಲೆ ಕಾಫೀ ಕುಡಿದು, ಆಫೀಸ್ ಹೊದೆ.

ಸಧ್ಯ ಹೋದ ಕೂಡಲೇ ನೆನಪಿಗೆ ಬಂತು ಬಾಸ್ ರಜೆ ಎಂದು. ಬೈಗಳು ತಪ್ಪಿದವು ಎಂದು ನಿಟ್ಟುಸಿರು ಬಿಟ್ಟೆ. ನಾನು ಸುಮ್ಮನೇ ಮುಂಜಾನೆ ಹಾರಡಿದೆ ಎಂದು ಅನ್ನಿಸಿತು. ಬುದ್ದಿ ಅವಸರದಲ್ಲಿ ಏನೆಲ್ಲಾ ಮರೆಯುತ್ತೆ. ಮತ್ತೆ ಮಡದಿಗೆ ಕರೆ ಮಾಡಿ ತಿಂಡಿ ಬಗ್ಗೆ ಎಲ್ಲಾ ವಿಚಾರಿಸಿ, ಕೆಲಸ ಶುರು ಮಾಡಬೇಕು ಅನ್ನುವ ಸಮಯಕ್ಕೆ ಗೆಳೆಯ ನರೇಂದ್ರ ತಿಂಡಿಗೆ ಕರೆದ. ಮತ್ತೆ ತಿಂಡಿ ತಿಂದು ಬಂದು ಕೆಲಸ ಶುರು ಮಾಡಿದೆ.

ಅವಸರದಲ್ಲಿ ಸಂಜೆ ಬರುತ್ತ ದುಡ್ಡು ತೆಗೆಯೋಕೆ ಮರೆತುಬಿಟ್ಟೆ, ಮನೆ ಸಮೀಪ ಬಂದವನು ಮತ್ತೆ ಗಾಡಿ ವಾಪಸ್ ಎ ಟಿ ಎಂ ಕಡೆಗೆ ತಿರುಗಿಸಿಕೊಂಡು ಹೋದೆ. ಹೋದವನೆ ಅವಸರದಲ್ಲಿ ಕಾರ್ಡ್ ಹಾಕಿದೆ. ಕಾರ್ಡ್ ಒಳಗಡೆ ಹೋಯಿತು. ಆದರೆ ಇನ್ವಾಲಿಡ್ ಕಾರ್ಡ್ ಎಂದು ತೋರಿಸುತಿತ್ತು. ಮತ್ತೊಮ್ಮೆ ಹಾಕಿ ಪ್ರಯತ್ನಿಸಿದೆ. ಮತ್ತೆ ಅದೇ ಸಂದೇಶ. ಈಗ ಹಾಗೆ ದುಡ್ಡು ತೆಗೆದುಕೊಳ್ಳದೇ ಹೋದರೆ, ಮಡದಿ ನನ್ನ ಕಥೆನೇ ಮುಗಿಸುತ್ತಾಳೆ ಎಂದು. ಹೊರಗಡೆ ಬಂದು ಅವಳಿಗೆ ಕರೆ ಮಾಡಿ ಎಷ್ಟು ಬೇಕು ದುಡ್ಡು ಎಂದು ಫೋನ್ ಮಾಡಿದೆ. ಅವಳು 1000 ಎಂದು ಹೇಳಿದಳು. ನಾನು ಕೆಲ ನಿಮಿಷದ ನಂತರ ಮತ್ತೆ ಕರೆ ಮಾಡಿ ಕಾರ್ಡ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಹೇಳಿದೆ. ಆಯಿತು, ಸುಮ್ಮನೇ ಬನ್ನಿ ಎಂದಳು. ಕಡೆಗೆ ಹಾಗೆ ಮನೆಗೆ ಹೋದೆ.

ಮನೆಗೆ ಹೋದೊಡನೆ ನನ್ನ ಕಾರ್ಡ್ ತೆಗೆದುಕೊಂಡು ಹೋಗಿ ದುಡ್ಡು ತೆಗೆಸಿಕೊಂಡು ಬನ್ನಿ ಎಂದಳು. ಕಾರ್ಡ್ ತೆಗೆದುಕೊಳ್ಳಲು ಹೋದೆ. ನನಗೆ ಆಶ್ಚರ್ಯ ನನ್ನ ಕಾರ್ಡ್ ಅಲ್ಲೇ ಇತ್ತು. ಮತ್ತೆ ನಾನು ಯಾವ ಕಾರ್ಡ್ ತೆಗೆದುಕೊಂಡು ಹೋದೆ ಎಂದು ಪರ್ಸ್ ತೆಗೆದು ನೋಡುತ್ತೇನೆ. ಪರ್ಸ್ ನಲ್ಲಿ ಇದ್ದಿದ್ದು ಪಾನ್ ಕಾರ್ಡ್, ಅದನ್ನೇ ಹಾಕಿ ಎರಡು ಬಾರಿ ನೋಡಿದ್ದೆ. ಜೋರಾಗಿ ನಗು ಬಂತು ನಕ್ಕರೆ ನನ್ನದೇ ಮರ್ಯಾದೆ ಹೋಗುತ್ತೆ ಎಂದು ಸುಮ್ಮನಾದೆ. ಕಡೆಗೆ ಅವಳ ಕಾರ್ಡ್ ಜೊತೆ ನನ್ನ ಕಾರ್ಡ್ ತೆಗೆದುಕೊಂಡು ಹೋದೆ. ದುಡ್ಡು ತೆಗೆಸಿಕೊಂಡು ಬಂದು, ಆ ಎ ಟಿ ಎಂ ಸರಿ ಇಲ್ಲ ಕಣೇ ಎಂದು ನಗುತ್ತಾ ಹೇಳಿ, ನನ್ನ ಕಾರ್ಡ್ ಸರಿಯಾಗಿ ಕೆಲಸ ಮಾಡುತ್ತಾ ಇದೆ ಎಂದು ಹೇಳಿ ದುಡ್ಡು ಕೊಟ್ಟೆ.

ಮರುದಿನ ನನ್ನ ಮಗನಿಗೆ ಸ್ತೋತ್ರ ಪಠಣ ಮತ್ತು ಸ್ವತಂತ್ರ ಹೋರಾಟಗಾರರ ವೇಷ ಭೂಷಣ ಸ್ಫರ್ಧೆಯಲ್ಲಿ ಬಹುಮಾನ ದೊರೆತಿತ್ತು. ನನ್ನ ಮಡದಿಗೆ ಭೇಷ್ ಹೇಳಿದೆ. ನೀವು ಸ್ವಲ್ಪ ಸುಧಾರಿಸಿ ನಿಮ್ಮ ಮಗನ ಹಾಗೆ ಬೇಗನೆ ಏಳುವುದು, ಸ್ತೋತ್ರ, ಮಂತ್ರ ಪಠಣ ಮಾಡಿ, ನಿಮ್ಮ ಅವಸರ ನನಗೆ ತಡೆಯೋಕೆ ಆಗಲ್ಲ, ನಮಗೂ ಹಿಂಸೆ ಕೊಡುತ್ತೀರಿ ಎಂದಳು. ನನಗು ಹಾಗೆ ಅನ್ನಿಸಿತು ಅವಸರವೇ ಅಪಘಾತ ಎಂದು.