Saturday, April 30, 2011

ಹೆಸರಿನ ಹುಚ್ಚು ....

ನಾನು ಮತ್ತು ಮಂಜ ಸೇರಿ ಹೋಟೆಲ್ ಹೋಗಿದ್ದೆವು. ಇನ್ನೂ ಕುಳಿತು ಕೊಂಡಿರಲಿಲ್ಲ ಅಷ್ಟರಲ್ಲೇ "ಏ ಗೋಪಾಲ್ ಆಯಿತ" ಎಂಬ ಕೂಗು. ನಂಗೆ ಆಶ್ಚರ್ಯ ಏನು ಎಂದು. ತಿರುಗಿ ನೋಡಿದೆ ಒಬ್ಬ ಹುಡುಗ ಕಾಫೀ ತೆಗೆದುಕೊಂಡು ಬಂದು ಹೋಟೆಲ್ ಓನರ್ ಗೆ ಕೊಡುತ್ತಿದ್ದ. ಮತ್ತೆ ಕೆಲ ಸಮಯದ ನಂತರ "ಗೋಪಾಲ್ ಟೇಬಲ್ ಕ್ಲೀನ್ ಮಾಡು" ಎಂಬ ಕೂಗು. ಆ ಹುಡುಗ ಬಂದು ಕ್ಲೀನ್ ಮಾಡಿ ಹೋದ. ಮಂಜ ನನ್ನ ಮುಖ ನೋಡಿ ಮುಸಿ ಮುಸಿ ನಗುತ್ತಿದ್ದ. ಅದೇಕೋ ಗೊತ್ತಿಲ್ಲ ನನ್ನ ಹೆಸರಿನಲ್ಲಿರುವ ಜನರು ಬರೀ ಇಂತಹ ಕೆಲಸದಲ್ಲೇ ಇರುವುದೇಕೆ ಎಂದು ಯೋಚಿಸತೊಡಗಿದೆ. ಇನ್ನೂ ತುಂಬಾ ಸಿನೆಮಾಗಳಲ್ಲಿ ನನ್ನ ಹೆಸರಿನ ವಿಲನ್ ಇರುವುದನ್ನು. ಕಡೆಗೆ ನಾನೇ ತಪ್ಪಾಗಿ ಸಾಫ್ಟ್‌ವೇರ್ ಫೀಲ್ಡ್ ಗೆ ಬಂದೆನೇನೋ ಎಂದು ಕೂಡ ಅನ್ನಿಸಿದ್ದು ಉಂಟು. ಹೀಗೆ ಘಾಡವಾಗಿ ಯೋಚನೆಗೆ ಮುಣುಗಿದ ನನ್ನನ್ನು ಮಂಜ ಏನು ಯೋಚನೆ ಮಾಡುತ್ತಾ ಇದ್ದೀಯಾ? ಎಂದು ಕೇಳಿದ. ಅವನಿಗೆ ನನ್ನ ಹೆಸರಿಗೆ ಆಗುತ್ತಿರುವ ಶೋಷಣೆಯ ಬಗ್ಗೆ ಹೇಳಿದೆ.

ಲೇ ಹೆಸರಿಗೆ ಅನ್ವರ್ಥಕವಾಗಿ ನಿನಗೆ ಕೆಲಸ ಅಂತ ಬೇಕಾಗಿದ್ದರೆ ನೀನು ದನ ಕಾಯಲು ಹೋಗಬೇಕಿತ್ತು ಅಥವಾ ದನದ ಡಾಕ್ಟರ್ ಆಗಬೇಕಿತ್ತು ಎಂದು ಗಹ ಗಹಿಸಿ ನಕ್ಕ. ನಿನಗೆ ಹೇಗಿದ್ದರು ಒಂದು ಕೊಂಬು(ಗೋಪಾ"ಲ್") ಬೇರೆ ಇದೆ ಎಂದ. ನಾನು ಒಮ್ಮೆ "ಓಂ" ಸಿನಿಮಾ ನೋಡಿ ಬಂದು ಸಕ್ಕತ್ತಾಗಿದೆ ಎಂದು ಹೇಳಿದೆ. ಅದನ್ನು ಕೇಳಿಸಿಕೊಂಡು ಪಾಪ ಪಕ್ಕದ ಮನೆ ಅಜ್ಜಿ ಒಬ್ಬರು ಅದನ್ನು ದೇವರ ಸಿನಿಮಾ ಎಂದುಕೊಂಡು ಹೋಗಿ ನೋಡಿ ಬಂದಿದ್ದರು. ಹೆಸರಿಗೆ ಅನ್ವರ್ಥಕವಾಗಿ ಎಲ್ಲರೂ ಇರುವುದಿಲ್ಲ ಎಂದ.

ನಿನ್ನ ಹೆಸರು ಅಲ್ಲಿ ಬಳಕೆ ಆಗೋದಕ್ಕೆ ಕಾರಣ ಏನೆಂದರೆ, ಮೊದ ಮೊದಲು ಮಕ್ಕಳಿಗೆ ದೇವರ ಹೆಸರನ್ನು ಇಡುತ್ತಿದ್ದರು. ಹೀಗಾಗಿ ನನ್ನ ಹೆಸರು ಕೂಡ ತುಂಬಾ ಫೇಮಸ್. ನಿನ್ನ ಹೆಸರಿನ ಹಾಗೆ ನನ್ನ ಹೆಸರು ಕೂಡ ಬಳಕೆ ಆಗುತ್ತೆ ಎಂದ. ಗಲ್ಲಿ ಗಲ್ಲಿಗಳಲ್ಲಿ ಮಂಜುನಾಥ ಎಂಬ ಹೆಸರಿನ ಜನರಿದ್ದಾರೆ ಸುಮ್ಮನೇ ಯೋಚಿಸಬೇಡ ಎಂದ. ನಿನಗೆ ಗೊತ್ತಾ ಮಂಡ್ಯದಲ್ಲಿ ನನ್ನ ಗೆಳೆಯ ಮಾಧವನಿಗೆ ಮಹಾದೇವ ಎಂದು ಅನ್ನುತ್ತಿದ್ದರು ಎಂದ.

ಆದರೆ ನನ್ನ ಹೆಸರಿನಿಂದ ತುಂಬಾ ಜನ ವ್ಯಂಗ್ಯ ಕೂಡ ಮಾಡುತ್ತಾರೆ ಎಂದೆ. ಏನು ಅಂತ ಅಂದ. ಕೆಲ ಗೆಳೆಯರು "ಗೋಪಿ ಆಯಿತ ಕಾಫೀ" ಎಂದು ಹೇಳುತ್ತಿದ್ದ. ಅದರಲ್ಲಿ ಒಬ್ಬ ತುಂಬಾ ಅತಿರೇಕವಾಗಿ "ಗೋಪಿ ಉದುತ್ತಾನೆ ಪೀಪೀ" ಎಂದು ಹೇಳುತ್ತಿದ್ದ ಎಂದು ಬೇಜಾರಿನಲ್ಲಿ ಹೇಳಿದೆ. ಕೆಲ ಬಾರಿ ಗೋಪಾಲ್ ಜರ್ದ್, ಗೋಪಾಲ್ ಟೂತ್ ಪೌಡರ್ ಎಂದೆ.

ನೀನು ಸಿನಿಮಾ ಆಕ್ಟರ್ ಗಳು ಹೆಸರು ಬದಲಾಹಿಸಿದ ಹಾಗೆ ಬದಲಾಯಿಸಿಬಿಡು ಎಂದ. ನಾನು ಅದು ಹೇಗೆ ಸಾಧ್ಯ ಎಂದೆ. ಈಗ ಎಲ್ಲವೂ ಸಾಧ್ಯ ಒಂದು ಕೋರ್ಟ್ನಲ್ಲಿ ಅರ್ಜಿ ಗುಜರಾಯಿಸಿದರೆ ಸಾಕು. ಆಮೇಲೆ, ಒಂದು ಪೇಪರ್ ನಲ್ಲಿ ಜಾಹೀರಾತು ಕೊಟ್ಟರೆ ಸಾಕು ಎಂದ. ಮೊದಲನೆ ಬಾರಿ ನಿನ್ನ ಹೆಸರು ಕೂಡ ಲೈಮ್ ಲೈಟ್ ಗೆ ಬಂದ ಹಾಗಾಗುತ್ತೆ ಎಂದ.

ನಿನಗೆ, ಹೆಸರಿಗೆ ಆಗುವ ಶೋಷಣೆಯ ಒಂದು ರಸವತ್ತಾದ ಕತೆ ಹೇಳುತ್ತೇನೆ ಕೇಳು. ನಮ್ಮ ಪಕ್ಕದ ಮನೆಯಲ್ಲಿ ಒಬ್ಬ ಸೋಮಶೇಖರ ಎಂಬ ಗೆಳೆಯ ಇದ್ದ. ಅವನಿಗೆ ನಾವೆಲ್ಲರೂ ಸೋಮ ಎಂದು ಅನ್ನುತ್ತಿದ್ದೆವು. ಅವನು ಅವಳ ಅತ್ತೆ ಮಗಳನ್ನು ಪ್ರೀತಿಸುತ್ತಿದ್ದ. ಅವಳು ಕೂಡ ಅವನನ್ನು ಪ್ರೀತಿಸುತ್ತಿದ್ದಳು. ಅವಳು ಅವನನ್ನು ಸೋಮ ಎಂದೆ ಸಂಭೋದಿಸುತ್ತಿದ್ದಳು. ಅವರಿಬ್ಬರಿಗೆ ಮದುವೆ ಆಯಿತು. ಅವಳು ಮದುವೆ ಆದ ಮೇಲೂ ಹಾಗೆ ಅನ್ನುತ್ತಿದ್ದಾಗ ಒಬ್ಬ ಹಿರಿಯರು ಹಾಗೆಲ್ಲಾ ಅನ್ನಬಾರದು, ರೀ ಹಚ್ಚಿ ಮಾತನಾಡಬೇಕು ಎಂದು ಹೇಳಿದರು. ಆಗಿನಿಂದ ಅವಳು ರೀ ಎಂದು ಸೇರಿಸಿ ಸೋಮನನ್ನು "ಸೋಮಾರಿ" ಮಾಡಿಬಿಟ್ಟಿದ್ದಳು. ಅವನು ಹೇಳುತ್ತಿದ್ದಂತೆ ಬಾಯಲ್ಲಿರುವ ಕಾಫೀ ಅನಯಾಸವಾಗಿ ಹೊರಗಡೆ ಬಂತು.

ಜನರಿಗೆ ವ್ಯಂಗ್ಯ ಮಾಡೋದಕ್ಕೆ ಒಂದು ವಿಷಯವಿದ್ದರೆ ಸಾಕು, ಅದಕ್ಕೆ ಹೆಸರು ತುಂಬಾ ಬಳಕೆ ಆಗುತ್ತೆ ಅಷ್ಟೇ ಎಂದು ಸಮಾಧಾನ ಹೇಳಿದ. ನನಗು ಅವನು ಹೇಳಿದ್ದು ಸರಿ ಅನ್ನಿಸಿತು. ಕಡೆಗೆ ಮಂಜ ಲೇ ಹಾಗೆ ಹೊರಟರೆ ಹೇಗೆ "ಗೋಪಾಲ್ ಟೇಬಲ್ ಕ್ಲೀನ್ ಮಾಡು" ಎಂದು ವ್ಯಂಗ್ಯದ ಮಾತು ಆಡಿದ. ಕಾಫೀ ಮುಗಿಸಿ ಮನೆಗೆ ಬಂದೆವು.

ಒಮ್ಮೆ ನಾನು ಮತ್ತು ನನ್ನ ಮಡದಿ ದಾವಣಗೆರೆಗೆ ನೆಂಟರ ಮನೆಗೆ ಹೋಗಿದ್ದೆವು. ಆಗ ಒಬ್ಬ ಅಜ್ಜಿ ಪುಟ್ಟಿ ಎತ್ತಿ ತಾ ಎಂದರು. ನಾನು ಗಾಬರಿ ನನ್ನ ಹೆಂಡತಿಯನ್ನು ಹೇಗೆ ಎತ್ತಲಿ ಎಂದು. ಮತ್ತೆ ಸೆಗಣಿ ಪುಟ್ಟಿ ತಾ ಎಂದರು. ನನ್ನ ಹೆಂಡತಿಗೆ ಹೇಳುತ್ತಿದ್ದಾರೆ ಎಂದು ಸುಮ್ಮನೇ ಇದ್ದೆ. ನನ್ನ ಹೆಂಡತಿಗೆ ಚಿಕ್ಕಂದಿನಿಂದ ಪುಟ್ಟಿ ಎಂದೆ ಎಲ್ಲರೂ ಅನ್ನುತ್ತಾರೆ. ಕಡೆಗೆ ರೀ ಅದನ್ನು ಎತ್ತಿ ಕೊಡಿ ಎಂದು ಒಂದು ಪುಟ್ಟಿ(ಬುಟ್ಟಿ) ತೋರಿಸಿದಳು ಮಡದಿ, ನಾನು ಎತ್ತಿ ಕೊಟ್ಟೆ. ಆಮೇಲೆ ತಿಳಿಯಿತು ಅವರು ಬುಟ್ಟಿಗೆ ಪುಟ್ಟಿ ಅನ್ನುತ್ತಾರೆ ಎಂದು.

Tuesday, April 26, 2011

ಇರುವುದೆಲ್ಲವ ಬಿಟ್ಟು ಬೇರೆಡೆಗೆ ತುಡಿವುದೆ ಜೀವನ....

ಮುಂಜಾನೆ ಬೇಗನೆ ಎದ್ದು "ಕರಾಗ್ರೆ ವಸತೆ ಲಕ್ಷ್ಮಿ ಕರ ಮಧ್ಯೆ ಸರಸ್ವತಿ ಕರ ಮೂಲೆ ಸ್ಥಿತೇ ಗೌರಿ ಪ್ರಭಾತೆ ಕರದರ್ಶನಂ" ಎಂದು ಹೇಳುತ್ತ ಏಳುತ್ತಿದ್ದಂತೆ. ನನ್ನ ಮಗ ಕೂಗಿ "ಅಪ್ಪ ನಿಮ್ಮ ಚಪ್ಪಲಿ ಕಾಣುತ್ತಾ ಇಲ್ಲ" ಎಂದ. ಹೊರಗೆ ಹೋಗಿ ನೋಡಿದೆ. ಒಂದೇ ಚಪ್ಪಲಿ ಇತ್ತು. ಒಂದೇ ಚಪ್ಪಲಿ ಯಾರು ಕದ್ದರು ಎಂಬ ಯೋಚನೆಗೆ, ಯಾರಾದರೂ ಕು೦ಟ ಕಳ್ಳ ಇರಬಹುದು ಎಂದು, ಬರೀ ಕಾಲಲ್ಲಿ ಹೋಗಿ ನೋಡಿದೆ. ಒಂದು ಚಿಕ್ಕ ನಾಯಿ ಮರಿ ನನ್ನ ಚಪ್ಪಲಿ ತೆಗೆದುಕೊಂಡು ಆಟ ಆಡುತ್ತಾ ಇತ್ತು. ಚಿಕ್ಕದಿರಲಿ ಅಥವಾ ದೊಡ್ಡದಿರಲಿ, ನಾಯಿ... ನಾಯಿನೆ ಅಲ್ಲವೇ. ಮೊದಲಿನಿಂದಲೂ ನಾಯಿ ಎಂದರೆ ಹೆದರಿಕೆ. ಅದನ್ನು ಕಷ್ಟ ಪಟ್ಟು ಓಡಿಸಿ, ಒಂದೇ ಚಪ್ಪಲಿ ಹಾಕಿಕೊಂಡು ಬರುತ್ತಾ ಇದ್ದೆ. ಮಂಜ "ಒಂದೇ ಚಪ್ಪಲಿ ಕೊಂಡು ಕೊಂಡಿದ್ದೀಯಾ ಜುಗ್ಗ" ಎಂದು ಅಪಹಾಸ್ಯ ಮಾಡಿದ. ನಾಯಿ ಮಾಡಿದ ಅವಾಂತರ ಹೇಳಿ, ಚಪ್ಪಲಿ ಕೈಯಲ್ಲಿ ಹಿಡಿದುಕೊಂಡು ಮನೆ ಒಳಗಡೆ ನಡೆದೆ.

ಮಡದಿ ಎರಡು ದಿನಗಳಿಂದ ಕೋಪ ಮಾಡಿಕೊಂಡಿದ್ದಳು. ಮನೆ ಕಸ ಇನ್ನೂ ಗುಡಿಸಿರಲಿಲ್ಲ. ಒಳಗೆ ಬಂದು "ಹೊರಗಡೆ ನನ್ನ ಕಾಲು ತುಂಬಾ ಸ್ವಚ್ಛ ಇದ್ದವು, ಒಳಗಡೆ ಬಂದೊಡನೆ ನನ್ನ ಕಾಲು ಹೊಲಸು ಆಗಿದ್ದಾವೆ" ನೋಡು ಪುಟ್ಟ ಎಂದು ನಗುತ್ತಾ ಮಗನಿಗೆ ಹೇಳಿದೆ. ಅಷ್ಟರಲ್ಲಿ ಮಡದಿ ಕೋಪದಿಂದ, ಪೊರಕೆ ನನ್ನ ಬಳಿ ಇಟ್ಟು ಒಳಗಡೆ ಹೋದಳು. ನಾನೇ ಕಸ ಗುಡಿಸಬೇಕಾಯಿತು.

ಈ ಸಿಟ್ಟು ಎನ್ನುವುದು ನನ್ನ ಮಡದಿಯೊಬ್ಬಳ ಕಾಯಿಲೆ ಅಥವಾ ಎಲ್ಲ ಹುಡುಗಿಯರ ಕಾಯಿಲೆನಾ ಎಂಬ ಯೋಚನೆ ಬಂತು. "ಹುಡುಗಿಯರು ಕೋಪ ಮಾಡಿಕೊಂಡಾಗ ತುಂಬಾ ಮುದ್ದಾಗಿ ಕಾಣುತ್ತಾರೆ" ಎಂದು ಅರ್ಥ ಮಾಡಿಕೊಂಡು ಕಾಯಿಲೆ ಅಲ್ಲದೇ ಖಯಾಲಿ ಕೂಡ ಆಗಿರಲೂಬಹುದು. ಆಗ ಎಲ್ಲ ಸಮಯದಲ್ಲೂ ಮುದ್ದಾಗಿ ಕಾಣಬಹುದು ಎಂದು ಕೂಡ ಹೀಗೆ ಮಾಡಿರಬಹುದು.

ಕೋಪ ಹೋಗಿಸೋಕೆ ಏನೇನು ಯೋಜನೆಗಳು ಎಂದು ಆಲೋಚನೆಗೆ ಬಿದ್ದೆ. ಚಿಕ್ಕ ವಯಸ್ಸಿನಲ್ಲಿ ನನ್ನ ಒಬ್ಬ ಆಪ್ತ ಗೆಳೆಯ ಹೇಳುತ್ತಿದ್ದ "ಸಿಟ್ಟು ಬಂದರೆ ಪಡಿ ಹಿಟ್ಟು ಮುಕ್ಕು" ಎಂದು. ಆದರೆ ಯಾವ ಹಿಟ್ಟು ಎಂದು ಮಾತ್ರ ಹೇಳಿರಲಿಲ್ಲ ಮಹಾರಾಯ. ಯಾವುದಾದರೂ ಮುಕ್ಕಬಹುದು ಆದರೆ ಸಿಟ್ಟು ಜ್ಯಾಸ್ತಿ ಆಯಿತು ಎಂದರೆ ಕಷ್ಟ. ಅಥವಾ ಗಿರಣಿಯಲ್ಲಿರುವ ಹಿಟ್ಟಿನ ಮಿಶ್ರಣವ ಎಂದು ಕೂಡ ಯೋಚಿಸಿದೆ.

ಮತ್ತೆ ಕೆಲವರು ಸಿಟ್ಟು ಬಂದಾಗ ನಮ್ಮ ಇಂಗ್ಲೀಶ್ ಮೇಷ್ಟ್ರು ಹೇಳುವ ಕೌಂಟ್ ವನ್ ಟು ಟೆನ್ ಕೂಡ ನೆನಪು ಆಯಿತು. ಆದರೆ ಕೋಪ ಬಂದರೆ ಇಂಗ್ಲೀಶ್ ಕಡ್ಡಾಯವಾಗಿ ಬರಲೇ ಬೇಕು. ಅಷ್ಟರಲ್ಲಿ ಲಗುಬಗೆಯಿಂದ ಏನೇ? ನಿನಗೆ ಇಂಗ್ಲೀಶ್ ಬರುತ್ತ ಎಂದೆ. ಇಲ್ಲ ಕಣ್ರೀ ನೀವೇ ಜಾಣರು ಎಂದು ಮತ್ತಷ್ಟು ಕೋಪ ಮಾಡಿಕೊಂಡಳು. ಮತ್ತೆ ಕನ್ನಡದಲ್ಲಿ ಒಂದರಿಂದ ಹತ್ತರವರಗೆ ಎಣಿಸು ಎಂದೆ. ಅದು ಬರಲ್ಲ ಕಣ್ರೀ ಏನ್ರೀ? ಈವಾಗ ಎಂದಳು.

ಅವಳ ಕೋಪಕ್ಕೂ ಮತ್ತು ನಮ್ಮ ಜಗಳಕ್ಕು ಒಂದು ಕಾರಣವಿದೆ. ಅವಳು ಊರಿಗೆ ಹೋಗುತ್ತೇನೆ ಎಂದು ಕ್ಯಾತೆ ತೆಗೆದಿದ್ದು. ಹೀಗಾಗಿ ನಾನು ಹೋಗಿ ಟಿಕೆಟ್ ಮಾಡಿಸಿಕೊಂಡು ಬಂದು ಅವಳಿಗೆ ಕೊಟ್ಟೆ. ಅವಳು ಕೋಪಕ್ಕೆ ತಿಲಾಂಜಲಿ ಹಾಕಿದ್ದಳು.

ಮರುದಿನ ಬೆಳಿಗ್ಗೆ ಅವರನ್ನು ಕಳುಹಿಸಲು ಆಟೋ ಹುಡುಕಿದೆ. ಬೆಳಿಗ್ಗೆ ಒಂದೂ ಆಟೋ ಸಿಗಲೇ ಇಲ್ಲ. ಕಡೆಗೆ ಒಂದು ಆಟೋ ಮಾಡಿ ಹೋಗುವಷ್ಟರಲ್ಲಿ ತುಂಬಾ ಲೇಟ್ ಆಗಿತ್ತು. ಮೂರು ಬ್ಯಾಗ್ ನಾನೇ ಹಿಡಿದುಕೊಂಡು ಹೋಗಿ ಲಗುಬಗೆಯಲ್ಲಿ ಬಿಟ್ಟು ಬಂದೆ. ಸ್ಟೇಶನ್ ಹೊರಗೆ ಬಂದೆ. ಅಷ್ಟರಲ್ಲಿ ಒಬ್ಬ ಕರೆದು "ಬರುತ್ತೀಯ..." ಎಂದ ಕೇಳಿದ. ನನಗೆ ದಿಕ್ಕೇ ತೋಚದಾಗಿತ್ತು. ಎಲ್ಲಿ? ಎಂದೆ. ನೀವು ಕೂಲಿ ಅಲ್ಲವ ಎಂದ. ನಾನು ಇಲ್ಲ ಸರ್ ಎಂದು ನನ್ನ ಕೆಂಪು ಅಂಗಿ ನೋಡಿ ನಗುತ್ತಾ ಮನೆಗೆ ಬಂದೆ.

ಅವಳಿಲ್ಲದೇ ತುಂಬಾ ಮಜವಾಗಿ ಇರಬಹುದು ಎಂದು ಯೋಚಿಸುತ್ತಾ ಬಂದ ನನಗೆ ಮನೆಯಲ್ಲಿ ಮಡದಿ, ಮಗ ಇಲ್ಲದೇ ನಿಶಬ್ದವಾಗಿತ್ತು. ಮನೆ, ಮನೆಸೆಲ್ಲ ಖಾಲಿ ಖಾಲಿ. ಯಾರು ಇಲ್ಲದಿದ್ದರೂ ಮನೆಯಲ್ಲಿ ನನ್ನೊಟ್ಟಿಗೆ ಇರುವರೇನೋ ಎಂಬ ಹುಸಿ ಭಾವನೆ. ಆಮೇಲೆ ನೋಡಿ ಯಾರು ಇಲ್ಲ ಎಂದು ಮನವರಿಕೆಯಾಗುತಿತ್ತು. "ಇರುವುದೆಲ್ಲವ ಬಿಟ್ಟು ಬೇರೆಡೆಗೆ ತುಡಿವುದೆ ಜೀವನ" ಎಂಬ ಗೋಪಾಲ್ ಕೃಷ್ಣ ಅಡಿಗರ ಉಕ್ತಿಯಂತೆ, ಅಂತಹ ಖುಷಿಯೇನು ಅನ್ನಿಸಲಿಲ್ಲ.

ಚಹಾ ಮಾಡೋಣ ಎಂದು ಅರ್ಧ ಹಾಲನ್ನು ಇನ್ನೊಂದು ಪಾತ್ರೆಗೆ ಸುರುವಿದೆ. ಮತ್ತು ಚಹಾ ಪುಡಿ ಹಾಕಿದೆ. ಅಷ್ಟರಲ್ಲಿ ದೇವರ ಕಟ್ಟೆ ಮೇಲೆ ಇಟ್ಟಿರುವ ಗುಲಾಬಿ ಹೂ ಕಾಣಿಸಿತು. ಅವಳು ಅದನ್ನು ಆತುರದಲ್ಲಿ ಅಲ್ಲಿಯೇ ಇಟ್ಟು ಹೋಗಿದ್ದಳು. ಅದನ್ನು ದೇವರಿಗೆ ಏರಿಸಿ, ಸಕ್ಕರೆ ಹಾಕಿದೆ. ಚಹಾ ಮಾಡಿ ಹೊರಗಡೆ ಬಂದು ಚಹಾ ಹೀರುತ್ತಾ ಕುಳಿತೆ. ಚಹಾ ಕಹಿಯಾಗಿತ್ತು, ಏಕೆಂದರೆ? ನಾನು ಚಹಾ ಪುಡಿ ಮತ್ತು ಸಕ್ಕರೆ ಹಾಕಿದ್ದು ಬೇರೆ ಬೇರೆ ಪಾತ್ರೆಗೆ. ಕಡೆಗೆ ಸಕ್ಕರೆ ಬೆರೆಸಿ ಚಹಾ ಹೀರುತ್ತಾ ಕುಳಿತಾಗ ನಾವಿಬ್ಬರೇ ನಾನು ಮತ್ತು ಒಂದು ಗುಯ್‌ಗೂಡುವ ನೊಣ.