Wednesday, October 27, 2010

ಸಿಹಿ ಮೊಗ್ಗೆ ಅರಳಿದಾಗ ....

ಬಳ್ಳಾರಿ ಸುಮಧುರ ನೆನಪಿನೊಂದಿಗೆ(ಬಳುಕುವ ಬಿಂಕದ ಬಳ್ಳಾರಿ ....) ಶಿವಮೊಗ್ಗ ಬಂದು ತಲುಪಿದ್ದೆ. ನಾನು ಬಳ್ಳಾರಿಯ ಬಸ್ ಹತ್ತುವ ಭರದಲ್ಲಿ ನನ್ನ ರಗ್ ಅಲ್ಲೇ ಬಿಟ್ಟು ಬಂದಿದ್ದೆ. ಏಕೆಂದರೆ ಅದನ್ನು ನಾನು ಉಪಯೋಗಿಸಿ ತುಂಬಾ ದಿನಗಳು ಆಗಿತ್ತು. ಅದನ್ನು ತೆಗೆದು ಕೊಂಡು ಬಂದಿದ್ದರು ಎನೂ ಪ್ರಯೋಜನ ಆಗುತ್ತಿರಲಿಲ್ಲ. ಏಕೆಂದರೆ ಅಷ್ಟು ಸುಮಧುರ ಪರಿಮಳ ಸೂಸುತಿತ್ತು. ಆಗ ತಾನೇ ಬೀಳುತ್ತಿದ್ದ ಮಂಜಿನ ಹನಿಗಳು ಮತ್ತು ಚಿಲಿಪಿಲಿ ಕಲರವ ನನಗೆ ಎಬ್ಬಿಸಿತ್ತು. ಎಚ್ಚರವಾದಾಗ ಶಿವಮೊಗ್ಗ ತಲುಪ್ಪಿದ್ದೆ. ಆ ಮಾಗಿಯ ಚಳಿಗೆ ನಾನು ನಡುಗುತ್ತಾ ಒಂದು ಕಪ್ ಕಾಫಿ ಹಿರಿ ಡೈರಿ ಬಸ್ ಹತ್ತಿದೆ.

ಹರ್ಷ ಅಗಲೆ ನನ್ನನ್ನು ಕಾಯುತ್ತಿದ್ದರು. ಡೈರಿಯವರೇ ನಮಗೆ ಒಂದು ಕ್ವಾರ್ಟರ್ಸ್(ಎಣ್ಣೆ ಅಲ್ಲ) ಕೊಟ್ಟಿದ್ದರು. ತುಂಬಾ ಚೆನ್ನಾಗಿ ಇತ್ತು ನಮ್ಮ ಕ್ವಾರ್ಟರ್ಸ್. ನಾನು ತುಂಬಾ ದಣಿವಾಗಿದ್ದರಿಂದ ಸ್ವಲ್ಪ ವಿಶ್ರಾಂತಿ ತೆಗೆದು ಕೊಂಡೆ. ಆಗ ಮಂಜುನಾಥ್ ಎದ್ದು ರೆಡೀ ಆಗಿ ಆಫೀಸ್ ಹೊರಡಲು ಅನುವಾದರೂ. ನಾನು ಮತ್ತೆ ಹರ್ಷ ಇನ್ನೂ ಮಲಗಿದ್ದೆವು.

ಸುತ್ತಲೂ ತುಂಬಾ ಗಿಡ,ಮರಗಳು ಇದ್ದವು. ಸುಂದರ ಪ್ರಕೃತಿ, ಆದರೆ ಮನೆಯಲ್ಲಿ ಯಾಕೋ ಸ್ವಲ್ಪ ಕೆಟ್ಟ ವಾಸನೆ ಬರುತಿತ್ತು. ಹರ್ಷ ಕ್ಲೀನ್ ಮಾಡಿ ಎಂದು ಹೇಳಿದೆ. ಹರ್ಷ ಎಲ್ಲಿ? ಇದೆ ಸರ್ ವಾಸನೆ ಎಂದರು. ನನಗೆ ಒಬ್ಬನಿಗೆ ವಾಸನೆ ಬರುತಿತ್ತಾ ಅಥವಾ ಅವರು ಆ ವಾಸನೆಗೆ ಹೊಂದಿಕೊಂಡು ಬಿಟ್ಟಿದ್ದರಾ ತಿಳಿಯಲಿಲ್ಲ. ಕೆಲ ಸಮಯದ ನಂತರ ನಾನು ಕೂಡ ಆ ವಾಸನೆ ಹೊಂದಿಕೊಂಡುಬಿಟ್ಟೆ ಎಂದು ಅನ್ನಿಸುತ್ತದೆ.

ಮರುದಿನ ನಮ್ಮ ಡೈರೆಕ್ಟರ್ ಬರುವವರು ಇದ್ದರು. ನಾವು ಅವರು ಬರುವ ಮುಂಚೆ ಎಲ್ಲಾ ಕೆಲಸ ಮುಗಿಸಬೇಕಿತ್ತು. ನಾವು ಮೊದಲು ಮಾರ್ಕೆಟಿಂಗ್ ಡಿಪಾರ್ಟ್‌ಮೆಂಟ್ ಕಂಪ್ಯೂಟರೈಸ್ ಮಾಡುವುದಿತ್ತು, ನಿನ್ನೆ ಅದನ್ನು ಮಾಡಿ ಆಗಿತ್ತು. ಆದರೆ ಸೇಲ್ಸ್ ಸ್ಟೇಟ್ಮೆಂಟ್ ಕರೆಕ್ಟ್ ಇಲ್ಲ ಎಂದು ಮಂಜುನಾಥನಿಗೆ ಬೈಯುತ್ತಾ ಇದ್ದರು. ಅದನ್ನು ನಿಮ್ಮ ಕಂಪನೀಯವರೇ ಕೊಡಬೇಕು ಎಂದು ಹೆದರಿಸುತ್ತಾ ಇದ್ದರು. ನಾನು ಹೋಗಿ ಅದನ್ನು ಸರಿಪಡಿಸಿದೆ. ಮಂಜುನಾಥ ತುಂಬಾ ಹೆದರಿದ್ದರು. ಡೇಲೀ ಅಕೌಂಟ್ ಸರಿಪಡಿಸಿದ ಮೇಲೆ ಅಕೌಂಟ್ ಸ್ಟೇಟ್ಮೆಂಟ್ ನಲ್ಲಿ ದುಡ್ಡು ಹೆಚ್ಚಿಗೆ ಬಂದಿತ್ತು. ಅದನ್ನು ನೀವು ನಮಗೆ ಕೊಡಬೇಕು ಎಂದು ನಾನು ದಬಾಯಿಸಿದಾಗ ಸುಮ್ಮನೇ ದಾರಿಗೆ ಬಂದಿದ್ದರು. ಮಂಜುನಾಥ್ ನೌಕರಿ ಬಿಡುವೆ ನನಗೆ ಈ ಜಂಜಾಟ ಸಾಕು ಎಂದು ಮನೆಗೆ ಹೊರಟು ನಿಂತಿದ್ದ. ನಾನು ಅವನಿಗೆ ಇದು ಎಲ್ಲಾ ಸರ್ವೇ ಸಾಮಾನ್ಯ ಎಂದು ಅವನಿಗೆ ತಿಳಿಹೇಳಿದೆ. ಕಡೆಗೆ ಮಂಜುನಾಥ್ ಒಪ್ಪಿಕೊಂಡರು.

ನಾವೆಲ್ಲರೂ ಸೇರಿ ಸಂಜೆಗೆ ಭದ್ರಾವತಿಯಲ್ಲಿ ಇರುವ ಶ್ರೀ ಲಕ್ಷೀ ನರಸಿಂಹ ದೇವಸ್ಥಾನಕ್ಕೆ ಹೋದೆವು. ಬರುವಾಗ ನೀರದೋಸೆ ತಿಂದು ಬಂದೆವು.

ಮರುದಿನ ಬೆಳಿಗ್ಗೆ ನಮ್ಮ ಡೈರೆಕ್ಟರ್ ಬಂದಿದ್ದರು. ಅವರು ನಮಗೆ ಎಷ್ಟು ಡಿಪಾರ್ಟ್‌ಮೆಂಟ್ ಕಂಪ್ಯೂಟರೈಸ್ ಆಗಿದೆ ಎಂದು ಕೇಳಿದರು. ನಾವು ಬರಿ ಮಾರ್ಕೆಟಿಂಗ್ ಎಂದಾಗ, ಏನು? ಬರೀ ಮಾರ್ಕೆಟಿಂಗ್ ಮತ್ತೆ ಉಳಿದ ಡಿಪಾರ್ಟ್‌ಮೆಂಟ್ ಎಂದಾಗ. ನಾನು ಅವರು ತಮ್ಮ ಹಳೆಯ ಸಿಸ್ಟಮ್ ಬಿಟ್ಟು ನಮ್ಮ ಸಾಫ್ಟ್‌ವೇರ್ಗೆ ಹೊಂದಿಕೊಳ್ಳುತ್ತಿಲ್ಲ ಎಂದಾಗ. ನೀವು ಅವರಿಗೆ ನಮ್ಮ ಸಾಫ್ಟ್‌ವೇರ್ ರುಚಿ ಹಚ್ಚಿಸಬೇಕು(If you want to eat frog, first put it in water and let it swim, afterwards put fire in the down.) ಎಂದು ಹೇಳಿದರು. ನೀವು ಹೀಗೆ ಆದರೆ ಸಂಡೆ ಕೂಡ ಕೆಲಸ ಮಾಡಬೇಕು ಎಂದರು. ಅದಕ್ಕೆ ಹರ್ಷ ಸಂಡೆ ಸರ್ ಎಂದ. ಅದಕ್ಕೆ ನಮ್ಮ ಕಂಪನೀ ಪಾಲಿಸೀ ಏನು ಗೊತ್ತಾ ನಿಮಗೆ Every day is sunday, But sunday is working day ಎಂದು ಹೇಳಿದರು. ನಾವು ತಿಂಡಿಗೆ ಹೊರಡುತ್ತಲಿದ್ದೆವು, ಆಗ ಡೇರೀ ಮ್ಯಾನೇಜರ್ ಭೇಟಿ ಆಯಿತು. ಅವರ ಕ್ಷೇಮ ಸಮಾಚಾರ ಆದ ಮೇಲೆ ಅವರನ್ನು ತಿಂಡಿಗೆ ಆಹ್ವಾನಿಸಿದೇವು. ಅವರು "ನಾನು ರಾಗಾಡ ಅನ್ನ" ತಿಂದು ಬಂದಿದ್ದೇನೆ ಎಂದು ರಾಗದಲ್ಲಿ ಹೇಳಿದರು. ನನಗೆ ಮತ್ತು ನಮ್ಮ ಡೈರೆಕ್ಟರ್ ಗೆ ಅರ್ಥ ಆಗಲಿಲ್ಲ. ಒಬ್ಬರನ್ನೊಬ್ಬರು ಮುಖ ಮುಖ ನೊಡಿಕೊಂಡೆವು. ಅವರು ಹೋದ ನಂತರ ಹರ್ಷನಿಗೆ ಕೇಳಿದಾಗ ನಮಗೆ ತಿಳಿದಿತ್ತು ಅದು ರಾಗಾಡ ಅಲ್ಲ ರಗಡ(ಬೇಜಾನ) ಎಂದು. ಎಲ್ಲರೂಅದು ಕೇಳಿದ ನಂತರ ನಗೆಯಲ್ಲಿ ತೇಲಿದ್ದೆವು.

ಮೀಟಿಂಗ್ ನಲ್ಲಿ ಒಂದು ತಿಂಗಳಲ್ಲಿ ಎರಡು ಡಿಪಾರ್ಟ್‌ಮೆಂಟ್ ಕಂಪ್ಯೂಟರೈಸ್ ಮಾಡಬೇಕು ಎಂದು ಹೇಳಿದರು. ನನ್ನ ಠಿಕಾಣಿ ಇನ್ನೂ ಒಂದು ವಾರ ಹೆಚ್ಚು ಆಯಿತು. ನಮ್ಮ ಡೈರೆಕ್ಟರ್ ಊರಿಗೆ ಹೊರಟು ಹೋದರು. ನಾನು ಹರ್ಷ ಮತ್ತು ಮಂಜನಾಥ ಮಲಗಿ ಕೊಂಡಿದ್ದೆವು. ಏನೋ ಕಟ್ ಕಟ್ ಶಬ್ದ ನಾನು ಸುಮ್ಮನೇ ಹಾಗೆ ಹೆದರಿ ಚಾದರ್ ಹೊದ್ದಿಕೊಂಡು ಮಲಗಿ ಬಿಟ್ಟೆ. ಮುಂಜಾನೆ ಎದ್ದು ಏನು? ಆ ಶಬ್ದ ಎಂದು ಹರ್ಷನಿಗೆ ಕೇಳಿದೆ. ಅದು ಹುಳಗಳು ಸರ್ ಎಂದ.ಮಂಜುನಾಥ ಅಗಲೆ ಎದ್ದು ಆಫೀಸ್ ಹೊರಟು ನಿಂತಿದ್ದರು. ನಾನು ಮತ್ತೆ ಹರ್ಷ ರೆಡೀ ಆಗಿ ಪ್ರೊಡಕ್ಶನ್ ಡಿಪಾರ್ಟ್‌ಮೆಂಟ್ ಗೆ ಹೋದೆವು. ಮಂಜುನಾಥ ಅಲ್ಲೇ ಒಂದು ರಿಪೋರ್ಟ್ ಮಾಡುತ್ತಲಿದ್ದರು. ಇವರು ಪ್ರೊಡಕ್ಶನ್ ಡಿಪಾರ್ಟ್‌ಮೆಂಟ್ ನಲ್ಲಿ ಕೊಡುವ ಮಜ್ಜಿಗೆ, ಪೇಡ ಅಥವಾ ಮೈಸೂರು ಪಾಕ ಸಲುವಾಗಿ ಎಂದು ತಿಳಿದಿದ್ದೆವು. ಆದರೆ ಅವರು ಅಲ್ಲಿ ಹೋಗುತ್ತಾ ಇದ್ದಿದ್ದು ಒಂದು ಸಿಹಿ ಮೊಗವನ್ನು ಸವಿಯಲು ಎಂದು ಆಮೇಲೆ ತಿಳಿಯಿತು. ಎಲ್ಲಕಿಂತ ಮೊದಲು ಪ್ರೊಡಕ್ಶನ್ ಡಿಪಾರ್ಟ್‌ಮೆಂಟ್ ಕಂಪ್ಯೂಟರೈಸ್ ಆಗಿತ್ತು. ಸಿಹಿ ಮೊಗದ ಹಿಂದಿನ ಪವಾಡ ಕೆಲಸ ಮಾಡಿತ್ತು.

ಟೀಮ್ ಲೀಡರ್ ಆದ ನನಗೆ ಇದರಿಂದ ಶಹಭಾಷ್ ಗಿರಿ ಸಿಕ್ಕಿತ್ತು. ಮತ್ತೆ ಪ್ರೊಕ್ಯೂರ್ಮೆಂಟ್ ಡಿಪಾರ್ಟ್‌ಮೆಂಟ್ ಕಂಪ್ಯೂಟರೈಸ್ ಮಾಡಿದೆವು. ನಮ್ಮ ಕೆಲಸ ನೋಡಿ ಖುಷಿಯಾದ ಡೇರೀ ಯಲ್ಲಿರುವ ಅಷ್ಟು ಡಿಪಾರ್ಟ್‌ಮೆಂಟ್ ನವರು ನಮ್ಮದು ಮುಂದೆ ತಮ್ಮದು ಮುಂದೆ ಎಂದು ನಮ್ಮ ಮುಂದೆ ಕ್ಯೂ ನಿಂತಿದ್ದರು.ಎರಡೇ ತಿಂಗಳಲ್ಲಿ ಅಷ್ಟು ಡಿಪಾರ್ಟ್‌ಮೆಂಟ್ ಕಂಪ್ಯೂಟರೈಸ್ ಮಾಡಿ ಆಗಿತ್ತು. ಅಷ್ಟರಲ್ಲಿ ಮಂಜುನಾಥ ಬೆಂಗಳೂರು ಬಂದು ಸೇರಿದ. ಕೆಲ ದಿನಗಳು ಆದ ಮೇಲೆ ಸಿಹಿ ಮೊಗದ ಚೆಲುವೆಯನ್ನು ಸೆಕ್ಯೂರಿಟೀ ಆಫೀಸರ್ ಮದುವೆ ಕೊಂಡಿದ್ದ. ಮಂಜುನಾಥನಿಗೆ ಇದನ್ನು ಹೇಳಿದಾಗ ತುಂಬಾ ನೊಂದುಕೊಂಡಿದ್ದ. ಏಕೆಂದರೆ ಅವಳಿಗೆ ಮೊದಲೇ ಮದುವೆ ಫಿಕ್ಸ್ ಆಗಿದೆ ಎಂದು ಅಲ್ಲಿಯೇ ಕೆಲಸ ಮಾಡುವ ಶ್ರೀನಿವಾಸ್ ಹೇಳಿದ್ದ. ಶ್ರೀನಿವಾಸ್ ಮದುವೆ ಫಿಕ್ಸ್ ಆಗಿದೆ ಎಂದು ಎಲ್ಲರಲ್ಲಿಯೂ ಹೇಳಿದ್ದ. ಏಕೆಂದರೆ ಅವನಿಗೆ ಅವಳ ಮೇಲೆ ಮನಸ್ಸಿತ್ತು. ಇದು ಶ್ರೀನಿವಾಸ್ ಮಾಡಿದ ಪ್ಲಾನ್.

ಕೆಲಸ ಮುಗಿದ ಮೇಲೆ ನಾನು ಧಾರವಾಡಕ್ಕೆ ಹೊರಟಿದ್ದೆ. ಆಗ ನನಗೆ ಬಸ್ ಸ್ಟ್ಯಾಂಡ್ ವರೆಗೂ ಕಳುಹಿಸಲು ಹರ್ಷ ಬಂದಿದ್ದರು. ಹರ್ಷಗೇ ನಾನು ಬಸ್ ಹತ್ತಿದ ಮೇಲೆ ಬೈ.. ಬೈ.. ಎಂದೆ. ನನ್ನ ಪಕ್ಕದಲ್ಲಿ ಇದ್ದ ಮನುಷ್ಯ ಕುಡಿದು ಬಂದಿದ್ದ. ರೀ ಕನ್ನಡದಲ್ಲಿ ಮಾತನಾಡಿ ಎಂದು ಅಂದ. ನಾನು ಬಾಯೀ ತಪ್ಪಿ ಸಾರೀ ಎಂದೆ. ಮತ್ತೆ ಸುಧಾರಿಸಿ ಕ್ಷಮಿಸಿ ಎಂದು ಹೇಳುವಷ್ಟರಲ್ಲೇ, ಆಯಿತು ಬಿಡಿ ಸಾರೀ ಹೇಳಿದಿರಲ್ಲ ಎಂದ.

ಕಡೆಗೆ ಇದಾದ ಮೂರೇ ತಿಂಗಳಲ್ಲಿ ನಾನು ಕೂಡ ಬೆಂಗಳೂರು ಸೇರಿದ್ದೆ. ಆದರೆ ಅಲ್ಲಿ ನಡೆದ ಘಟನೆಗಳು, ತಮಾಷೆಗಳು ಎಲ್ಲವೂ ಮನಸಿಗೆ ಮುದನೀಡುತ್ತವೆ.

5 comments:

  1. ಧನ್ಯವಾದಗಳು ಮತ್ತು ವಂದನೆಗಳು ದಿನಕರ್ ಸರ್ ಮತ್ತು ಮಹೇಶ್ ಸರ್.
    ನನ್ನ ಲೇಖನ ಸಾರ್ಥಕವಾಯಿತು ದಿನಕರ್ ಸರ್.

    ReplyDelete
  2. ಧನ್ಯವಾದಗಳು ಮತ್ತು ವಂದನೆಗಳು ಸೀತಾರಾಮ. ಸರ್

    ReplyDelete