Sunday, November 4, 2012

ನಗು ಎಂದಿದೆ ಮಂಜನ ಬಂಧು....


ತುಂಬಾ ದಿನಗಳಿಂದ ನಾನು ನನ್ನ ಎಲ್ಲ ಬ್ಲಾಗ್ ಲೇಖನಗಳನ್ನು ಸೇರಿಸಿ ಪುಸ್ತಕ ಮಾಡಬೇಕು ಎಂದು ಮಂಜನಿಗೆ ಹೇಳುತ್ತಾ ಬಂದಿದ್ದೆ. ಮಂಜ ದಿನಾಲೂ ನಾನು ತಲೆ ತಿನ್ನುವುದು ನೋಡಿ, ಒಮ್ಮೆ ನನ್ನ ಮಿತ್ರ ಒಬ್ಬರು ಪ್ರಕಾಶಕರು ಇರುವರು. ಅವರ ಹತ್ತಿರ ನಿನ್ನನ್ನು ಮಾತನಾಡಿಸುತ್ತೇನೆ ಎಂದು ಅಭಯ ನೀಡಿದ. ಅಂದು ರವಿವಾರ ಮುಂಜಾನೆ ಮಂಜ ಫೋನ್ ಮಾಡಿ ನನ್ನ ಮನೆಗೆ ಬೇಗನೆ ಬಾ ಒಬ್ಬರು ಪ್ರಕಾಶಕರು ಬಂದಿದ್ದಾರೆ ಎಂದು ಕರೆದ. ನಾನು ಶರವೇಗದಲ್ಲಿ ಅವನ ಮನೆ ತಲುಪಿದೆ.

ಮಂಜ ಮತ್ತು ಪ್ರಕಾಶಕರು ಕುಳಿತ್ತಿದ್ದರು. ತುಂಬಾ ವಯಸ್ಸಾದ ವ್ಯಕ್ತಿ ಇದ್ದರು. ತುಂಬಾ ಒಳ್ಳೆಯ ರೀತಿ ಮಾತನಾಡಿಸಿದರು. ಇಬ್ಬರದು ಪರಿಚಯ, ಉಭಯ ಕುಶಲಗಳು ಮುಗಿದ ಮೇಲೆ, ನನಗೆ ನೀವು ಯಾವ ರೀತಿಯ ಸಾಹಿತ್ಯ ಬರೆಯುತ್ತೀರಿ ಎಂದರು. ನಾನು ನನ್ನ ಲ್ಯಾಪ್ಟಾಪ್ ಮರೆತು ಹೋಗಿದ್ದರಿಂದ, ಮಂಜನ ಕಂಪ್ಯೂಟರ್ ನಲ್ಲಿ ನನ್ನ ಬ್ಲಾಗ್ ಲೇಖನಗಳನ್ನು ತೋರಿಸ ಹತ್ತಿದೆ. ನಾವೆಲ್ಲ ಓದುವಾಗ ಕಂಪ್ಯೂಟರ್ ಇರಲೇ ಇಲ್ಲ ಎಂದು, ಮತ್ತು ಅವರು ಬೀದಿ ದೀಪದ ಬೆಳಕಿನಲ್ಲಿ ಓದಿ ಜೀವನದಲ್ಲಿ ಪಾಸಾಗಿದ್ದೆ ಎಂದು ಹೇಳಿದರು. ಅದಕ್ಕೆ ಮಂಜ ಸುಮ್ಮನಿರದೆ ಇವನು ಅಗರಬತ್ತಿ ಬೆಳಕಿನಲ್ಲಿ ಓದಿದ್ದಾನೆ ಎಂದು ತಮಾಷೆ ಮಾಡಿದ. ಲೇ.. ನೀನೇನು ಸಿಗರೇಟ್ ಬೆಳಕಿನಲ್ಲಿ ಓದಿ ಪಾಸಗಿದ್ದೀಯಾ? ಎಂದು ಸಿಟ್ಟಿನಿಂದ ಹೇಳಿದೆ.

ಲೇಖನಗಳನ್ನು ನೋಡಿ, ನೀವು ಬರಿ ಹಾಸ್ಯ ಲೇಖನಗಳನ್ನೇ ಬರೆದಿದ್ದೀರ ಎಂದರು. ಇವಗಳನ್ನು ಸೇರಿಸಿ ಒಂದು ಪುಸ್ತಕ ಮಾಡಬಹುದು ಆದರೆ, ಇದಕ್ಕೆ ಹೆಸರು ಏನು ಇಡಬೇಕು ಎಂದು ಯೋಚಿಸಿದ್ದೀರಾ? ಎಂದರು. ಅದಕ್ಕೆ ನಾನು ಮತ್ತೆ ತಲೆ ಕೆರೆದುಕೊಳ್ಳುತ್ತಾ ನಿಂತೆ. ಏಕೆಂದರೆ? ನಾನು ಅದರ ಬಗ್ಗೆ ಯೋಚಿಸಿಯೇ ಇರಲಿಲ್ಲ. ನನಗೆ ಪ್ರಕಾಶಣ್ಣ ನೆನಪಾಗಿ, ಅವರು ಇಟ್ಟ (ಇದೆ ಇದರ ಹೆಸರು, ಇದರ ಹೆಸರು ಇದಲ್ಲಾ) ರೀತಿ, ಹೆಸರು ಬೇಕೇ? ಎಂದು ಇಟ್ಟರೆ ಹೇಗೆ ಸರ್, ಎಂದು ಹೇಳಿದೆ. ರೀ.. ಹಾಗೆ ಇಟ್ಟರೆ, ನಿಮ್ಮ ಪುಸ್ತಕದ ಹೆಸರು ಯಾರಾದರು ಕೇಳಿದರೆ ನೀವು ಮತ್ತೆ ಹೆಸರು ಬೇಕೇ? ಎಂದು ಕೇಳಿದ ಹಾಗೆ ಆಗಿ ತಮಾಷೆ ಆಗುತ್ತೆ. ಅದಲ್ಲ ಬೇಡ ಎಂದರು. ನಾನು ತಮಾಷೆಯಾಗಿ ಬರೆದ ಲೇಖನಗಳಿಗೆ ಒಂದು ಸೀರಿಯಸ್ ಹೆಸರು ಹೇಗೆ ಇಡಲು ಸಾಧ್ಯ ಸರ್...ಎಂದೆ. ಆದರೂ ಅದು ಸಾಧ್ಯ ಇಲ್ಲ ಎಂದು ಕಡ್ಡಿಮುರಿದ ಹಾಗೆ ಹೇಳಿದರು. ಅದಕ್ಕೆ ನಮ್ಮ ತರಲೆ ಮಂಜ "ನಗು ಎಂದಿದೆ ಮಂಜನ ಬಂಧು" ಎಂದು ಇಡು, ನಿನ್ನ ಎಲ್ಲಾ ಲೇಖನಗಳನ್ನು ಮೊದಲು ನಾನು ಪರಿಶೀಲಿಸಿ, ಅನಂತರ ಅವುಗಳಿಗೆ ನಿಜವಾದ ಪಂಚ್ ಕೊಡುವ ಹಾಗೆ ಮಾಡಿದ್ದೆ ನಾನು ಎಂದ. ಆಯಿತು ಹಾಗೆ ಮಾಡುವೆ ಎಂದೆ. ನೀವು ಬರಿ ಹಾಸ್ಯ ಲೇಖನ ಬರೆಯುವುದಕ್ಕೆ ಕಾರಣ ಏನು ಎಂದು ಕೇಳಬಹುದಾ? ಎಂದರು. ಅದಕ್ಕೆ ನಾನು ಜೀವನದಲ್ಲಿ ಪ್ರತಿಯೊಬ್ಬ ಮನುಷ್ಯನು ನಗು ಕಾಣಲು ಬಯುಸುತ್ತಾನೆ. ಜೀವನದಲ್ಲಿ ನಾವು ಕಷ್ಟ ಯಾವತ್ತು ಇದ್ದದ್ದೇ. ಹಾಸ್ಯ ಬರೆಯೋದಕ್ಕೆ ನಮ್ಮ ಮಂಜ ಕೂಡ ಕಾರಣ ಎಂದೆ. ಪ್ರಕಾಶಕರು, ಹಾಸ್ಯ ಲೇಖನ ಬರೆಯುವವರು ಜೀವನವನ್ನು ತುಂಬಾ ಉಡಾಫೆಯಾಗಿ ಸ್ವೀಕರಿಸುವವರು, ಅಥವಾ ಜೀವನವನ್ನು ಅತಿಯಾಗಿ ಪ್ರೀತಿಸುವವರು ಮಾತ್ರ ಬರೆಯುತ್ತಾರೆ. ನೀವು ಯಾವ ವರ್ಗಕ್ಕೆ ಸೇರಿದವರು ಎಂದರು. ನಾನು ಹೇಳುವ ಮೊದಲೇ ಮಂಜ "ಇವನು ಉಡಾಫೆಯಾಗೆ ಸ್ವೀಕರಿಸುತ್ತಾನೆ" ಎಂದು ಹಿಯಾಳಿಸಿದ. ನಾನು ಸುಮ್ಮನೆ ಹಾಗೇನಿಲ್ಲ ಸರ್.. ಎಂದೆ. ಮತ್ತೆ ಪ್ರಕಾಶಕರು ಮುನ್ನಿಡಿ ಮತ್ತು ಹಿನ್ನುಡಿ ಯಾರಿಂದ ಬರೆಸುತ್ತೀರಿ ಎಂದು ಕೇಳಿದರು. ಇವನಿಗೆ ಎಲ್ಲಾ ಮುನ್ನಿಡಿನೇ, ಇವನಿಗೆ ಹಿಂದೆ ನುಡಿಯುವವರು ಕಡಿಮೇನೆ ಎಂದ. ಮತ್ತೆ ನಾನು ಯಾವುದಾದರು ಹಾಸ್ಯ ಸಾಹಿತಿಗಳನ್ನು ಹುಡುಕುತ್ತಿದ್ದೇನೆ ಸರ್ ಎಂದೆ. ನಿಮ್ಮ ಕೆಲವೊಂದು ಲೇಖನಗಳಲ್ಲಿ ನೀವು ಮನಸು ಬಿಚ್ಚಿ ಬರೆದಿಲ್ಲ ಎಂದು ಅನ್ನಿಸುತ್ತೆ ಎಂದರು. ಅದೇ ಬೀChiಯವರು ನೋಡಿ, ಅವರು ತಮಗೆ ಏನು ಹೇಳಬೇಕೋ ಅದನ್ನು ನಿರ್ಭೀತಿಯಿಂದ, ಮನಸ್ಸು ಬಿಚ್ಚಿ ಹೇಳಿದ್ದಾರೆ, ಅದಕ್ಕೆ ಅವರು ಅಷ್ಟು ಹಾಸ್ಯ ಸೃಷ್ಟಿಸಿರೋದು ಎಂದರು. ನಾನು ಮುಂದಿನ ಬಾರಿ ಖಂಡಿತ ಹಾಗೆಯೇ ಬರಿಯುತ್ತೇನೆ ಎಂದು ಅಭಯವನ್ನಿತ್ತೆ. ಮತ್ತೆ ನಿಮಗೆ ಕಾವ್ಯನಾಮ ಏನಾದರು ಉಂಟಾ? ಎಂದರು. ಸರ್.. ಇವನು ಬರೀ ಹಾಸ್ಯ ಲೇಖನ ಮಾತ್ರ ಬರೆದಿರೋದು. ಇವನಿಗೆ ಕಾವ್ಯನಾಮ ಎಲ್ಲಾ ಏಕೆ?. ಇವನಿಗೆ ಬೇಕಾದರೆ "ಗಂಡಬೇರುಂಡ" ಅಥವಾ "ಮಂಜನ ಗೆಳೆಯ" ಎಂದು ಇಟ್ಟರೆ ಆಗುತ್ತೆ ಎಂದ. ಮಂಜನ ಗೆಳೆಯ ಸರಿಯಾದ ಕಾವ್ಯನಾಮ ಎಂದರು. ನನಗೆ ಆಮೇಲೆ ಅನ್ನಿಸಿತು, ಇಲ್ಲಿ ನನ್ನದು ಎನ್ನುವುದು ಏನು ಇಲ್ಲ ಎಂದು. ಪುಸ್ತಕದ ಹೆಸರು "ನಗು ಎಂದಿದೆ ಮಂಜನ ಬಂಧು" ಮತ್ತೆ ಬರೆದವರು "ಮಂಜನ ಗೆಳೆಯ". ಆದರು ಅವರು ಪುಸ್ತಕವನ್ನು ಪ್ರಕಟಿಸಲು ಒಪ್ಪಿದ್ದರಿಂದ ಸುಮ್ಮನಾದೆ.

ನಿಮ್ಮ ಪುಸ್ತಕವನ್ನು ಪ್ರಕಟಿಸಬಹುದು. ಆದರೆ, ನೀವು ಯಾವುದಾದರು ಒಂದು ಒಳ್ಳೆಯ ಪ್ರಸಿದ್ಧಿಯಾಗಿರುವ ಬೇರೆ ಭಾಷೆಯ ಅನುವಾದ ಪುಸ್ತಕ ಮಾಡಿದ್ದೆ ಆದರೆ , ಅದು ಹೇಗಾದರೂ ಮಾರಾಟವಾಗುತ್ತೆ. ನಿಮ್ಮದು ಸ್ವಲ್ಪ ಕಷ್ಟ. ೧೦೦೦ ಕಾಪಿಯಲ್ಲಿ ೫೦೦ ಕಾಪಿ ನೀವೇ ತೆಗೆದುಕೊಳ್ಳುವ ಹಾಗಿದ್ದರೆ ನಿಮ್ಮ ಪುಸ್ತಕ ಪ್ರಕಟಿಸೋಣ ಎಂದರು. ನಾನು ಏನು ಮಾಡಬೇಕೋ ತಿಳಿಯದೆ ಮಂಜನ ಮುಖ ನೋಡಿದೆ. ಮಂಜ ಅದು ಹೇಗೆ ಸಾಧ್ಯ ಎಂದ. ಸರಿ, ನೀವು ನಿಮ್ಮ ಪುಸ್ತಕ ಪ್ರಚಾರಕ್ಕೆ ಏನು ಮಾಡುವಿರಿ? ಎಂದು ಕೇಳಿದರು. ನಾನು pomphlet ಮಾಡಿ ಹಂಚಿ ಬಿಟ್ಟರೆ ಹೇಗೆ ಎಂದೆ. ಅದಕ್ಕೆ ಮಂಜ ಮೊದಲೇ ಈಗಿನ ಜನ pomphlet ಓದಲ್ಲ, ಇನ್ನು ನಿನ್ನ ಪುಸ್ತಕ ಓದುತ್ತಾರ ಎಂದ ಮಂಜ. ನೀನು ಫೇಸ್ಬುಕ್ ನಲ್ಲಿ ಹಾಕು ಎಂದ. ಅಷ್ಟರಲ್ಲಿ ಮಂಜನ ಮಡದಿಯ ಆಗಮನ ಆಯಿತು. ಅವಳು ಬಂದೊಡನೆ "ಪ್ರಕಾಶ್ ಮಾಮ" ನೀವು ಯಾವಾಗ ಬಂದಿರಿ, ಎಂದು ಬಂದು ನಮಸ್ಕರಿಸಿದಳು. ನನಗೆ ಅನುಮಾನ ಶುರು ಆಯಿತು ಇವರು ಪ್ರಕಶಕರೋ ಅಥವಾ ಪ್ರಕಾಶ ಎಂಬ ಹೆಸರಿನವರೋ ಎಂದು. ನಾನು ಮಂಜನಿಗೆ ಇವರು ನಿಮ್ಮ ಮಾಮನಾ? ಎಂದೆ. ಹೌದು ಎಂದ. ಇವರು ಮಿಲಿಟರಿಯಲ್ಲಿ ಇದ್ದರು, ತುಂಬಾ ತಮಾಷೆ ಇವರಿಗೆ, ನಿನ್ನ ಬಗ್ಗೆ ತಿಳಿಸಿದ್ದೆ. ಅವರೇ ಈ ನಾಟಕದ ಸೂತ್ರಧಾರರು ಎಂದು ಗಹ.. ಗಹಿಸಿ.. ನಗಹತ್ತಿದ. ಪಾಪ .. ಗೋಪಾಲಣ್ಣ, ನಿಮಗೆ ಬೇರೆ ಕೆಲಸ ಇಲ್ಲವೇ ನಿಮ್ಮದೊಂದು ಎಂದು ಮಂಜನಿಗೆ ಮಂಜನ ಮಡದಿ ಕೋಪದಿಂದ ಝಾಡಿಸಿದಳು. ಅಷ್ಟಕ್ಕೇ ಮಂಜ ತನ್ನ ಮಡದಿಗೆ "ನೀನಾಡದ ಮಾತು ಮಾತಲ್ಲ..." ಎಂದು ಹಾಡುತ್ತ ಕಾಫಿ ಮಾಡು ಎಂದು ಹೇಳಿದ . ಹೌದು ರೀ ... ನಾನು ಆಡುವ ಮಾತು ಮಾತಲ್ಲ ನಿಮಗೆ ಅವು ಎಲ್ಲವು ಬೈಗುಳಗಳ ಹಾಗೆ ಅನ್ನಿಸುತ್ತವೆ ಎಂದಳು. ನೀವು ನೋಡಿದರೆ, ಚಿಕ್ಕ ಮಕ್ಕಳ ಹಾಗೆ ಎಲ್ಲರನ್ನು ಗೋಳು ಹೊಯುವುದೇ ಆಯಿತು ಎಂದಳು . ನಾನು ಕಾಫಿ ಕುಡಿದು ಮನೆ ದಾರಿ ಹಿಡಿದೆ.

ಮಡದಿ ಮನೆಗೆ ಹೋದೊಡನೆ, ರೀ... ಇಲ್ಲಿ ಇಟ್ಟಿರೋ ದೋಸೆ ನೀವು ತಿಂದಿರಾ ಎಂದಳು. ಹೌದು ..ಎಂದೆ. ಏಕೆ? ತಿಂದಿರಿ.. ಅದು ಹಂಚಿನಿಂದ ತೆಗೆದ ಮೊದಲನೇ ದೋಸೆ ಎಂದಳು. ಅದಕ್ಕೇನೀಗ ಎಂದೆ. ಮೊದಲನೇ ದೋಸೆ ತಿನ್ನಬಾರದು, ಅದು ಹಂಚಿನ ಕಬ್ಬಿಣ ಅಂಶ ಜ್ಯಾಸ್ತಿ ಇರುತ್ತೆ ಅದು ದೇಹಕ್ಕೆ ಒಳ್ಳೆಯದಲ್ಲ ಎಂದು ಕೋಪದಿಂದ ಅಂದಳು. ನಿನ್ನದು ಪುರಾಣ ಆಯಿತು ಕಣೆ, ಮೊದಲೇ ನಾನು ಬೇಜಾರಿನಲ್ಲಿ ಇದ್ದೇನೆ ಎಂದೆ. ಆದ ವಿಷಯವೆಲ್ಲ ಹೇಳಿದೆ. ಆದರೂ ಮನಸಿನಲ್ಲಿ ಒಂದು ತಳಮಳ ಎಲ್ಲಿ ಎಲ್ಲರು ನನ್ನ ಮಡದಿಯ ಹಾಗೆ ಯೋಚಿಸಿ, ನನ್ನ ಮೊದಲನೇ ಪುಸ್ತಕ ಯಾರು ಓದದಿದ್ದರೆ ಎಂದು.

Thursday, September 27, 2012

ತಾಳಿದವನು ಬಾಳಿಯಾನು ....

ಬಾಲ ಸುಟ್ಟ ಬೆಕ್ಕಿನ ಹಾಗೆ ಅತ್ತಿಂದ ಇತ್ತ - ಇತ್ತಿಂದ ಅತ್ತ ಓಡಾಡುತ್ತ ಇದ್ದೆ. ಯಾಕ್ರಿ ಏನಾಯಿತು ಎಂದಳು ಮಡದಿ. ಏನಿಲ್ಲ ಕಣೆ ಚೆಕ್ ಬುಕ್ ಇನ್ನು ಬಂದಿಲ್ಲ ಎಂದೆ. ಗಡ್ಡಕ್ಕೆ ಬೆಂಕಿ ಹತ್ತಿದಾಗ ಭಾವಿ ತೊಡುವುದು, ನಿಮ್ಮದು ಇದೆ ಕತೆ ಆಯಿತು ಎಂದಳು. ಹೌದು ನನಗೆ ಯಾವುದೇ ಕೆಲಸವಾಗಲಿ ಕಡೆವರೆಗೂ ಅದನ್ನು ಮಾಡುವುದಕ್ಕೆ ಮನಸ್ಸೇ ಬರುವುದಿಲ್ಲ. ಅಷ್ಟರಲ್ಲಿ ಮಡದಿ ರೀ.. ಸ್ವಲ್ಪ ಕಣ್ಣು ಮುಚ್ಚಿ ಬಾಯಿ ತೆಗೆಯಿರಿ ಎಂದಳು. ಚೆಕ್ ಬುಕ್ ಏನಾದರು ಬಂತಾ ಎಂದು ಯೋಚಿಸಿದೆ. ಆದರು ಬಾಯಿ ಬೇರೆ ತೆಗೆಯಿರಿ ಎಂದಿದ್ದಾಳೆ, ಸುಮ್ಮನೆ ಕಣ್ಣು ಮುಚ್ಚಿದ ಹಾಗೆ ಮಾಡಿ ಬಾಯಿ ತೆಗೆದೆ. ಬಾಯಿಯಲ್ಲಿ ತಂದು ಸಿಹಿ ತಿಂಡಿ ಹಾಕಿದಳು. ಏನೇ ಇದು ಬೆಲ್ಲದ ಪುಡಿ ಹಾಗೆ ಇದೆ ಎಂದೆ. ಕೋಪದಿಂದ ರೀ.. ಅದು ಮೈಸೂರ್ ಪಾಕ, ಆದರೆ ಪುಡಿಯಾಗಿತ್ತು ಅಷ್ಟೇ ಎಂದಳು. ಅದಕ್ಕೆ ಮೈಸೂರ್ ಪುಡಿ ಎಂದರೆ ಹೇಗೆ ಎಂದೆ. ಮತ್ತಷ್ಟು ತಾರಕಕ್ಕೆ ಏರಿತು ಅವಳ ಕೋಪ. ನಾನು "ತಾಳಿದವನು ಬಾಳಿಯಾನು" ನಾಳೆ ಮಾಡುವೆಯಂತೆ ಬಿಡು ಕೋಪ ಏಕೆ? ಎಂದೆ. ಅದು ನಿಮಗೆ ಅನ್ವಯಿಸುತ್ತೆ ಅಲ್ಲಿ ಸ್ತ್ರೀಲಿಂಗ ಇಲ್ಲ ಎಂದಳು. ಇದನ್ನು ಯಾರೋ ಹೆಂಗಸರು ಸೇರಿ ಮಾಡಿದ ಗಾದೆ ಇರಬೇಕು, ಅದು "ತಾಳಿ ಇದ್ದವಳು ಬಾಳಿಯಾಳು" ಎಂದು ಆಗಬೇಕಿತ್ತು ಅಷ್ಟೇ ಎಂದೆ. ಹಾಗೇನಿಲ್ಲ ಹಾಗಾದರೆ ಮುಂ"ಗೋಪಿ" ಎಂದು ನಿಮ್ಮ ಹೆಸರನ್ನು ಸೇರಿಸಿ ಏಕೆ? ಹೇಳುತ್ತಾರೆ. ಅದಕ್ಕೆ ಅದು ತಾಳಿದವನು ಬಾಳಿಯಾನು ಸರಿ ಎಂದು ಕಿಚಾಯಿಸಿದಳು. ಅಷ್ಟರಲ್ಲಿ ನಮ್ಮ ಐದು ವರ್ಷದ ಸುಪುತ್ರ Tom & Jerry ಅಂದ. ಅನ್ನು,, ಅನ್ನು,, ನೀನೋಬ್ಬನು ಕಡಿಮೆ ಆಗಿದ್ದೆ ಅನ್ನುವವನು ಎಂದು ಅಂದೆ. ಅಪ್ಪ.. Tom & Jerry ಟಿ ವಿ ಯಲ್ಲಿ ಹಚ್ಚು ಎಂದ ಕೋಪದಿಂದ. ಅವನು ನಮ್ಮಿಬ್ಬರನ್ನು ನೋಡಿ ಅನ್ನುತ್ತಿದ್ದಾನೆ ಎಂದು ತಪ್ಪಾಗಿ ಕಲ್ಪಿಸಿಕೊಂಡಿದ್ದೆ. ನಾನೇ ದೊಡ್ದವನಾದ್ದರಿಂದ Tom ನಾನೇ ಅನ್ನಿಸಿತು. Tom & Jerry ಯಲ್ಲಿ Tom ಗೆ Jerry ಏನೇ ಮಾಡಿದರು ಕೂಡ ಅದು ಚಿರಂಜೀವಿನೇ. ಅ೦ತಹ ಚಿರಂಜೀವಿಯನ್ನ ನನ್ನ ಜೀವಮಾನದಲ್ಲಿ ಎಲ್ಲಿಯೂ ಕಂಡಿಲ್ಲ. Jerry Tomನಿಗೆ ಎರಡು ಭಾಗ ಮಾಡಿದರು ಕೂಡ ಮತ್ತೆ ಕೂಡಿ ಕೊಂಡು Jerry ಯನ್ನು ಬೆನ್ನು ಹತ್ತುತ್ತೆ. ಆದರೆ ಇಲ್ಲಿ ಮಡದಿ ಕೋಪ ಮಾಡಿಕೊಂಡರು ಸಾಕು ನಾವು ಅವರ ಹಿಂದೆ ಕೋಪ ಕಡಿಮೆ ಮಾಡಲು ಹೋಗಬೇಕಷ್ಟೆ. ಕೋಪ ಕಡಿಮೆ ಆಗದಿದ್ದರೆ ಕತೆ ಮುಗಿಯಿತು ಅಷ್ಟೇ. ಕಡೆಗೆ ಮಗನಿಗೆ Tom & Jerry ಹಚ್ಚಿಕೊಟ್ಟೆ.


ಮಡದಿ ಕೋಪದಿಂದ, ಆಫೀಸ್ ನಿಂದ ಬರುತ್ತಾ ನಿಮ್ಮ ಅಪ್ಪನಿಗೆ ಇವತ್ತಾದರೂ ನಿನ್ನೆ ಹೇಳಿರುವ ಸಾಮಾನುಗಳನ್ನು ತೆಗೆದುಕೊಂಡು ಬರಲು ಹೇಳು ಎಂದಳು. ಕಡೆಗೆ ತಿಂಡಿ ತಿಂದು ಆಫೀಸ್ ಗೆ ಹೊರಟೆ. ನಾನು ದಿನಾಲೂ ಹೋಗುವ ದಾರಿಯಲ್ಲಿ ವಜ್ರಾಯುಧ ಹಿಡಿದು ಕೊಂಡು ರಸ್ತೆ ಕಡಿಯುವ ಯೋಧರು ನಿಂತಿದ್ದರು. ಮೊದಲು ನಾವು ಈ ಪಾತಾಳ ಲೋಕದಲ್ಲಿ ಸಂಜೀವಿನಿ ಮಣಿ ಇರುತ್ತೆ ಎಂದು ಕೇಳಿದ್ದೇವೆ. ನಾವು ಬಬ್ರುವಾಹನ ಚಲನ ಚಿತ್ರದಲ್ಲಿ, ಬಬ್ರುವಾಹನನಿಂದ ಹತನಾದ ತಂದೆಯಾದ ಅರ್ಜುನನನ್ನು ಬದುಕಿಸಲು ಪಾತಾಳ ಲೋಕಕ್ಕೆ ಹೋಗಿ ಸಂಜೀವಿನಿ ಮಣಿಯನ್ನು ತರುತ್ತಾನೆ. ಆದರೆ ಈಗ ಈ ಪಾತಾಳ ಲೋಕ್ಕಕ್ಕೆ ಹೋದರೆ, ಸಂಜೀವಿನಿ ಮಣಿ ಸಿಗದೇ ಹೋದರು ಸಂಜೆವಾಣಿ ಪತ್ರಿಕೆಯಲ್ಲಿ ನಮ್ಮ ಫೋಟೋ ಖಂಡಿತ ಬಂದಿರುತ್ತೆ. ಸೇರುವುದು ಖಂಡಿತವಾಗಿ ಸ್ವರ್ಗ ಲೋಕಕ್ಕೆ ಮಾತ್ರ. ಸರ್ ..ಹಾಗೆ ಹೋಗಿ ಎಂದು ಯೋಧರು ತಾಕಿತ್ ಮಾಡಿದರು. ಕಡೆಗೆ ಬೇರೆ ದಾರಿಯಿಂದ ಹೊರಟೆ, ಆಫೀಸ್ ಐದು ನಿಮಿಷ ಲೇಟಾಗಿ ತಲುಪಿದೆ, ಹೀಗಾಗಿ ಆಫೀಸ್ ಗೆ ಅರ್ಧ ದಿವಸ ರಜೆ ಹಾಕಿ, ಅವಳು ಹೇಳಿರುವ ಸಾಮಾನು ತೆಗೆದುಕೊಂಡು ಬಂದೆ.

ಮಡದಿಯ ಹತ್ತು missed calls ಇದ್ದವು. ನಾನು ಫೋನ್ ಮಾಡಿದೆ. ಅವಳು ಕೋಪದಿಂದ ಫೋನ್ ತೆಗೆದುಕೊಳ್ಳಲಿಲ್ಲ. ನಾನು ಮತ್ತೆ.. ಮತ್ತೆ.. ಫೋನ್ ಮಾಡಿ ಬೇಜಾರಿನಿಂದ ಕುಳಿತ್ತಿದ್ದೆ. ಅಷ್ಟರಲ್ಲಿ ನಮ್ಮ ಮಂಜ ಬಂದ. ಏನಪ್ಪಾ.. ಸಪ್ಪಗೆ ಇದ್ದೀಯಾ ಎಂದ. ಅದಕ್ಕೆ ನಾನು ಮಡದಿಗೆ ಫೋನ್ ಮಾಡಿದ್ದೆ ಎತ್ತಲಿಲ್ಲ ಎಂದೆ. ಹೌದಾ... ಕಾಲ್ ಎತ್ತಲಿಲ್ಲವೆ ಎಂದ. ನಾನು ಹೌದು ಕಾಲು ಎತ್ತಲಿಲ್ಲ. ಹೌದು ಬಿಡು ನಿನ್ನ ಮೇಲೆ ಕಾಲು ಎತ್ತಬೇಕಾಗಿತ್ತು, ನಾನು ಹೇಳುತ್ತೇನೆ ತಂಗ್ಯಮ್ಮನಿಗೆ ಎಂದು ಜೋರಾಗಿ ನಗ ಹತ್ತಿದ. ನನ್ನ ಅಕ್ಕ-ಪಕ್ಕ ಕುಳಿತವರು ಕೂಡ ಜೋರಾಗಿ ನಗ ಹತ್ತಿದರು. ನನಗೆ ಇನ್ನಷ್ಟು ಕೋಪ ಬಂದಿತ್ತು. ಏನೋ ಬೇಜಾರಿನಿಂದ ಇದ್ದರೆ, ನಿನ್ನೋಬ್ಬನು ಉರಿಯೋ ಬೆಂಕಿಗೆ ತುಪ್ಪ ಸುರಿಯುವವನು. ದೇಶ ಕಟ್ಟುವವರು ಕಡಿಮೆ ಇಲ್ಲಿ ಉಪದೇಶ ಮಾಡುವವರು ಜ್ಯಾಸ್ತಿ ಎಂದೆ. ಅಷ್ಟರಲ್ಲಿ ಒಂದು ಫೋನ್ ಕಾಲ್ ಬಂತು. ಅದಕ್ಕೆ ಮಂಜ ನೋಡಿ ತಂಗ್ಯಮ್ಮನ ಕಾಲು ಇರಬೇಕು, ಬೇಗನೆ ತೆಗೆದುಕೋ ಇಲ್ಲದೆ ಹೋದರೆ ಚಪ್ಪಲಿ ಕೂಡ ಬಂದು ಬಿಟ್ಟರೆ ಕಷ್ಟ ಎಂದು ನಗುತ್ತಾ ಹೊರಟು ಹೋದ.

ಕಡೆಗೆ ನಾನೇ ಮನೆಗೆ ಹೋಗುವ ಸಮಯದಲ್ಲಿ ಮೈಸೂರ್ ಪಾಕ್ ತೆಗೆದುಕೊಂಡು ಮನೆ ಕಡೆಗೆ ಹೊರಟೆ. ಆದರೆ ಅವಳು ಹೇಳಿರುವ ಸಾಮಾನುಗಳನ್ನೂ ಮಾತ್ರ ಆಫೀಸ್ ನಲ್ಲಿಯೇ ಬಿಟ್ಟು ಬಂದಿದ್ದೆ. ಮತ್ತೆ ಅರ್ಧ ದಾರಿಯಲ್ಲಿ ಇರುವಾಗ ಮಗನ ಫೋನ್ ಬಂತು. ಎಲ್ಲಿದ್ದೀರಾ? ಅಪ್ಪ ಎಂದ. ನಾನು ಬಸವನಗುಡಿ ಹತ್ತಿರ ಎಂದೆ. ಸಾಮಾನುಗಳನ್ನು ತೆಗೆದುಕೊಂಡು ಬಂದಿರುವೆಯೋ ಇಲ್ಲವೋ ಎಂದು ಕೇಳಿದ. ತಂದಿದ್ದೇನೆ ಎಂದು ಫೋನ್ ಕಟ್ ಮಾಡಿ,ತಕ್ಷಣ ನೆನಪಾಗಿ ಮತ್ತೆ ಆಫೀಸ್ ಕಡೆ ಗಾಡಿ ತಿರುಗಿಸಿದೆ. one way ಎಂದು ತಿಳಿಯದೆ ಪೋಲಿಸ್ ಮಾಮನಿಗೆ ದಕ್ಷಿಣೆ ಕೊಟ್ಟು ಆಫೀಸ್ ತಲುಪಿದೆ. ಮತ್ತೆ ಸಾಮಾನುಗಳನ್ನು ತೆಗೆದುಕೊಂಡು ಮನೆಗೆ ಹಾಜರ ಆದೆ.

ಏಕೆ? ಇಷ್ಟು ಲೇಟ್ ಅಪ್ಪ ಎಂದ ಮಗ. ಮತ್ತಿನೇನು ಕೋಲೆ ಬಸವನ ಹಾಗೆ, ಬಸವನಗುಡಿ ಸುತ್ತತ್ತ ಇದ್ದರು ಅನ್ನಿಸುತ್ತೆ ಎಂದು ಹುಸಿಕೊಪದಿಂದ ನುಡಿದಳು ಮಡದಿ. ಮಡದಿ ಎಲ್ಲ ಸಾಮಾನುಗಳನ್ನು ನೋಡುತ್ತಾ, ಹಣಿ ಹಣಿ ಗಟ್ಟಿಸಿಕೊಂಡಳು. ಏಕೆ? ಏನಾಯಿತು ಎಂದೆ. ನಿಮಗೆ ಏನೇನು ಹೇಳಿದ್ದೆ ಹೇಳಿ ಎಂದಳು. ನಾನು ಬರೆದುಕೊಂಡಿರುವ ಸಾಮಾನಿನ ಲಿಸ್ಟ್ ತೆಗೆದು, ಒಂದೊಂದಾಗಿ ಹೇಳಲು ಶುರು ಮಾಡಿದೆ. ೪ ಲೈನ್ ಇರುವ ಪುಸ್ತಕ, ಮತ್ತೆ ಬೆಳೆ, ಮತ್ತೆ ಒಂದು ರೂಪಾಯಿಯ ಚಾಕ್ಲೇಟ...ನಿಲ್ಲಿ.. ನಿಲ್ಲಿ.. ಎಂದು ನಿಲ್ಲಿಸಿದಳು ಮಡದಿ. ರೀ. ನಿಮ್ಮ ತಲೆಗಿಷ್ಟು, ಮನೆಯಲ್ಲಿ ಇಷ್ಟೊಂದು ಚಾಕ್ಲೇಟ ಇವೆ ಮತ್ತೆ ಏಕೆ? ತಂದಿರಿ ಎಂದು ಝಾಡಿಸಿದಳು. ಮತ್ತೆ ನೀನೇಕೆ? ಹೇಳಿದೆ ಎಂದು ಕೇಳಿದೆ. ರೀ... ನಾನು ಹೇಳಿದ್ದು ಚಾಕ್ ಪೀಸ್ ಎಂದಳು. ನಾನು ಮತ್ತೆ ಹೋಗಿ ಚಾಕ್ ಪೀಸ್ ತೆಗೆದುಕೊಂಡು ಬಂದು ಕೊಟ್ಟೆ.

ಮಡದಿ ಚೆಕ್ ಬುಕ್ ಬಂದಿದೆ ಎಂದು ಹೇಳಿದಳು. ನಾನು ತುಂಬಾ ಖುಷಿಯಾದೆ. ಮಡದಿ ಪ್ಲೇಟಿನಲ್ಲಿ ಮೈಸೂರ್ ಪಾಕ್ ತೆಗೆದುಕೊಂಡು ಬಂದು ಕೊಟ್ಟಳು. ಲೇ... ಇದೆಂತಹ ಮೈಸೂರ್ ಪಾಕ್ ಕೊಟ್ಟಿದ್ದಾನೆ ಅಂಗಡಿಯನು, ಮೈಸೂರ್ ರಾಕ್ ಆಗಿದೆ ಎಂದು ಜೋರಾಗಿ ಬೈಯುತ್ತ ಇದ್ದೆ. ಆದರೆ ಮಡದಿ ನಾನು ತಂದಿರುವ ಮೈಸೂರ್ ಪಾಕ್ ಪ್ಯಾಕೆಟ್ ತೆಗೆಯದೆ. ತಾನೆ ಮಾಡಿರುವ ಮೈಸೂರ್ ಪಾಕ್ ತಂದು ಕೊಟ್ಟಿದ್ದಳು. ಮತ್ತಷ್ಟು ಕೋಪದಿಂದ ನನಗೆ ಮಾಡಲು ಬರುವುದಿಲ್ಲ ಎಂದು, ಹೀಯಾಳಿಸಲು ಇದನ್ನು ತಂದಿರುವಿರಿ ಏನು? ಎಂದು, ಅನ್ನುತ್ತ ನಾನು ತಂದಿರುವ ಮೈಸೂರ್ ಪಾಕ್ ನ್ನು ನನ್ನ ಮುಂದೆ ಇಟ್ಟು ಹೊರಟು ಹೋದಳು. ನಾನು ಮತ್ತೆ ಅವಳನ್ನು ಸಮಾಧಾನಿಸಲು, ಹಿಂದೆ ಬಾಲದಂತೆ ಹಿಂಬಾಲಿಸಿ, ಮನಸ್ಸಿನಲ್ಲಿ ನಿಜವಾಗಿಯೂ, ತಾಳಿದವನು ಬಾಳಿಯಾನು ಎಂದು ಅಂದುಕೊಂಡೆ.

Wednesday, September 26, 2012

ದುಡ್ಡೇ ದೊಡ್ಡಪ್ಪ....

ಅರುಣ ಯುರೇಕಾ ಎಂದು ಚೀರುತ್ತಲೇ ಹೊರಗಡೆ ಬಂದ. ಆದರೆ ಪಕ್ಕದ ಮನೆ ಸುರೇಖಾ ಇದನ್ನು ಕೇಳಿ, ತನ್ನನ್ನೇ ಕರೆಯುತ್ತಿದ್ದಾನೆ ಎಂದು ಅವರ ಅಪ್ಪನಿಗೆ ಕಂಪ್ಲೈಂಟ್ ಮಾಡಿದಳು. ಅದಕ್ಕೆ ಸರಿಯಾದ ಕಾಂಪ್ಲಿಮೆಂಟ್ ಅರುಣನಿಗೆ ಸಿಕ್ಕಿತ್ತು. ಹರಕೆ ಹೊತ್ತರು ಆರ್ಕಿಮೆಡಿಸ್ ಪ್ರಿನ್ಸಿಪಲ್ ಅನ್ನು ಹೇಳಲು ಬರುತ್ತಿರಲಿಲ್ಲ ಅರುಣನಿಗೆ. ಪ್ರಿನ್ಸಿಪಾಲರು ಅರುಣನಿಗೆ ಹಿರಿಯರನ್ನು ಕರೆದುಕೊಂಡು ಬನ್ನಿ ಎಂದು ತಾಕಿತ್ ಮಾಡಿದ್ದರು. ಅದಕ್ಕೆ ಅರುಣ ಪೂರ್ತಿ ಮಂಕಾಗಿದ್ದ. ಕಡೆಗೆ ಅರುಣ ಯೋಚಿಸಿ ತಲೆ ಕೆರೆದುಕೊಂಡು, ಮಂಜನ ಅಣ್ಣನನ್ನು ಕರೆದುಕೊಂಡು ಹೋಗಬೇಕೆಂದು ಯೋಚಿಸಿ ಹೀಗೆ ಮಾಡಿದ್ದ. ಬಾತ್ ರೂಮಿನಲ್ಲಿಯ ನಲ್ಲಿ ಹಾಗೆ ಬಿಟ್ಟು ಬಂದು, ಮನೆಯಲ್ಲಿರುವ ಪೂರ್ತಿ ನೀರು ಖಾಲಿ ಆಗಿ ಎಲ್ಲರಿಗೂ ಫಜೀತಿ ಬೇರೆ ಮಾಡಿದ್ದ. ಅವರ ಅಪ್ಪನಿಂದ ಏಟುಗಳ ಸುರಿಮಳೆ ಆಗಿತ್ತು. ಮಂಜನ ಅಣ್ಣ ಸುರೇಶನಿಗೆ ಹತ್ತು ರುಪಾಯಿ ಕೊಟ್ಟು ಒಪ್ಪಿಸಿ ಕಡೆಗೆ ಶಾಲೆಗೆ ಕರೆದುಕೊಂಡು ಹೋಗಿದ್ದ.

ಹತ್ತು ರುಪಾಯಿಯ ಆಸೆಯಿಂದ ಸುರೇಶ್ ಲಗುಬಗೆಯಿಂದ ಪ್ರಿನ್ಸಿಪಾಲ್ ರೂಮಿಗೆ ಅರುಣನನ್ನು ಕರೆದುಕೊಂಡು ಹೊಕ್ಕ. ಈಗ ಅರುಣನ ಜೊತೆ ಸುರೇಶನಿಗೆ ಕೂಡ ನಡುಕ ಶುರು ಆಯಿತು. ಏಕೆಂದರೆ ಸುರೇಶನಿಗೆ ಕಲಿಸಿರುವ ಮಾಸ್ತರ್ ಬೇರೆ ಶಾಲೆಯಿಂದ ಇಲ್ಲಿ ಪ್ರಿನ್ಸಿಪಾಲ್ ಆಗಿ ವರ್ಗಾವಣೆಯಾಗಿ ಬಂದಿರುತ್ತಾರೆ ಎಂದು ಕಲ್ಪನೆಯಲ್ಲೂ ಯೋಚಿಸಿರಲಿಲ್ಲ. ಕಡೆಗೆ ಎಲ್ಲಾ ವಿಷಯಗಳು ಪೋಲಾಗಿ ಇಬ್ಬರು ಕ್ಷಮೆ ಕೇಳಿ, ಅರುಣನ ತಂದೆಗೆ ವಿಷಯ ಮುಟ್ಟಿಸಿ, ಕರೆದುಕೊಂಡು ಹೋಗಿ ಪ್ರಿನ್ಸಿಪಾಲ್ ರನ್ನು ಭೇಟಿ ಮಾಡಿಸಿದ್ದರು. ಅವರ ತಂದೆ ವರ್ಗಾವಣೆಯಾಗಿ ಮೈಸೂರಿಗೆ ಹೋದಮೇಲೆ ನನಗೂ ಮತ್ತು ಅರುಣನಿಗೆ ಸಂಪರ್ಕ ಕಡಿದು ಹೋಗಿತ್ತು.

ಮಂಜ ಮನೆಗೆ ಬಂದಿದ್ದ. ಮಂಜನಿಗೆ ಸ್ವೀಟ್ ಕೊಡುವ ಸಲುವಾಗಿ, ನಾನು ಸ್ವೀಟಿನಲ್ಲಿ ಇರುವ ಇರುವೆಗಳನ್ನು ತೆಗೆಯುತ್ತ "ಇರುವೆ ಎಲ್ಲಿರುವೆ ...ಮಾನವನನ್ನು ಕಾಡುವ" ಎಂದು ಹಾಡುತ್ತ ಇದ್ದೆ ಹೆಂಡತಿ ಏನು? ರೀ.... ಎಂದಳು, ಅಷ್ಟರಲ್ಲಿ ಅಚಾನಕ್ಕಾಗಿ ನಮ್ಮ ಅರುಣನ ಆಗಮನವಾಯಿತು. ಅದು ಜೊತೆಯಲ್ಲಿ ಅದೇ ಸುರೇಖಾ ಮತ್ತು ಒಂದು ಮುದ್ದಾದ ಮಗು ಇತ್ತು. ಅವನು ನನ್ನ ಅಡ್ರೆಸ್ ಅಂತರ್ಜಾಲದಲ್ಲಿ ಹುಡುಕಿ ಮನೆಗೆ ಬಂದಿದ್ದ. ಮಂಜ ಏನಪ್ಪಾ? ಮಗನ ಹೆಸರು ಯುರೇಕಾ ಏನು? ಎಂದು ಕಾಡಿಸಿದ. ಅವನ ಕೈಯಲ್ಲಿ ಒಂದು Tablet ಇತ್ತು. ಅದನ್ನು ತೆಗೆದುಕೊಂಡು ಅವನ ಮಗ ಆಟ ಆಡುತ್ತ ಇದ್ದ. ಅವನು ತನ್ನ ವ್ಯವಹಾರ, ದುಡ್ಡು, ಕಾರುಗಳ ಮತ್ತು ಅಸ್ತಿಗಳ ಬಗ್ಗೆ ತುಂಬಾ ಬೀಗುತ್ತಿದ್ದ. ಇದನ್ನು ಕೇಳಿ ಕೇಳಿ ನನಗೆ ಮತ್ತು ಮಂಜನಿಗೆ ಸಾಕಾಗಿ ಹೋಗಿತ್ತು. ಪ್ರತಿ ಎರಡೆರಡು ನಿಮಿಷಕ್ಕೆ ಫೋನ್ ಬರುತ್ತಿತ್ತು. ನಡು ನಡುವೆ ಎದ್ದು ಹೋಗಿ ಮಾತನಾಡುತ್ತಿದ್ದ. ಕಡೆಗೆ, ಮಂಜ ಏನು? ಈ ಕಡೆಗೆ ಪ್ರಯಾಣ, ಕುಚೇಲನ ಮನೆಗೆ ಕೃಷ್ಣ ಆಗಮಿಸಿದ ಹಾಗೆ ಆಯಿತು ಎಂದು ಹಿಯಾಳಿಸಿ ಮಾತನಾಡಿದ. ಅದಕ್ಕೆ, ಇಲ್ಲೇ ಸ್ವಲ್ಪ ಉತಾರ ಬೇಕಾಗಿತ್ತು ಅದಕ್ಕೆ ಬಂದಿದ್ದೆ. ನಿಮ್ಮ ಮನೆ ಇಲ್ಲೇ ಎಂದು ತಿಳಿದು ಭೇಟಿಗೆಂದು ಬಂದಿದ್ದೆ ಎಂದ. ಮಂಜ ನಿನ್ನ ಉಡದಾರ ಗಟ್ಟಿ ಇದೆ ತಾನೇ ಎಂದು ಕೇಳಿದ. ಲೇ... ನೀನು ಎಂದು ಸುಧಾರಿಸಲ್ಲ ಕಣೋ ಎಂದು ಹೇಳಿದ. ಮಂಜ ತಮ್ಮ ಮನೆಗೆ ಅವನನ್ನು ಆಹ್ವಾನಿಸಿದ. ಆದರೆ, ಅರುಣ ಮತ್ತೊಮ್ಮೆ ಬರುತ್ತೇನೆ ಎಂದು ಹೇಳಿ, ಕಾಫಿ ಕುಡಿದು ಹೊರಟು ಹೋದರು.

ನನ್ನ ಮಗ ಅವರು ಹೋದ ಮೇಲೆ Tablet ನನಗೂ ಬೇಕು ಎಂದು ಹಠ ಹಿಡಿದ. ಮಂಜನಿಗೆ ತುಂಬಾ ಕೋಪ ಬಂದಿತ್ತು. ಮಂಜ ದುಡ್ಡಿದ್ದರೆ ಅವನ ಕಡೆ ಇರಲಿ, ನಮಗೇನು ಅವನು ಕೊಡುತ್ತಾನೆ. ದುಡ್ಡು ಅಂದರೆ ಕೈಯೊಳಗಿನ ಧೂಳು ಇದ್ದ ಹಾಗೆ, ಯಾವತ್ತು ಹೋಗುತ್ತೆ ಎಂದು ಹೇಳುವುದಕ್ಕೆ ಆಗಲ್ಲ. ಮತ್ತೆ ಇದು ನೆರಳು ಇದ್ದ ಹಾಗೆ ಬಿಸಿಲು ಇದ್ದಾಗ ಮಾತ್ರ ಅದನ್ನು ಕಾಣಬಹುದು. ಇವನೇನು ಸತ್ತಾಗ ಎಲ್ಲವನ್ನು ಹೊತ್ತು ಕೊಂಡು ಹೋಗುತ್ತಾನೆ. ಎಲ್ಲೋ ಇವನ ಮಾವನಿಂದ ವರದಕ್ಷಿಣೆ ತೆಗೆದುಕೊಂಡಿರಬೇಕು. ನಡುವೆ ಬಂದಿದ್ದು, ನಡುವೆ ಹೋಗುತ್ತೆ. ನದಿ ನೀರು ಮತ್ತು ಭಾವಿ ನೀರಿಗೂ ತುಂಬಾ ವ್ಯತ್ಯಾಸ. ನದಿ ನೀರು ಎಲ್ಲಿಂದಲೋ ಬಂದಿರುತ್ತೆ. ಭಾವಿ ನೀರು ಯಾವತ್ತಿದ್ದರೂ ಹೊಸದಾಗಿ ಬರುತ್ತಾ ಇರುತ್ತೆ. ನದಿ ನೀರು ಬತ್ತಬಹುದು. ಭಾವಿ ನೀರು ಬತ್ತಲು ಖಂಡಿತ ಸಾಧ್ಯ ಇಲ್ಲ ಎಂದ. ಇಂತವರು ಮೂರೂ ಬಿಟ್ಟವರು. ಮರ್ಯಾದೆ ಬಿಟ್ಟವರು ಎರಡು ತರಹ ಇರುತ್ತಾರೆ. ಒಬ್ಬರು ಮರ್ಯಾದೆ ಹೋದರೆ ಸಾಯುತ್ತಾರೆ. ಮತ್ತೆ ಕೆಲವರು ಮರ್ಯಾದೆ ಮಾರಿ ಮಲಗಿಕೊಳ್ಳುತ್ತಾರೆ ಎಂದ. ದುಡ್ಡೇ ದೊಡ್ಡಪ್ಪ ಅಲ್ಲ ಮನುಷ್ಯತ್ವ ಅವರಪ್ಪ ಎಂದ. ಲೇ.. ಅದು ಮನುಷ್ಯತ್ವ ಅಲ್ಲ ಕಣೋ ವಿದ್ಯೆ ಎಂದೆ. ಆಯಿತು ಬಿಡೋ ಎಂದು ಮನೆಗೆ ಹೊರಟು ಹೋದ. ನನಗು ಕೂಡ ಹಾಗೆ ಅನ್ನಿಸಿತು. ಅರುಣನ ಮಾತಿನ ಹಮ್ಮು ತುಂಬಾ ಇತ್ತು. ಮಗ ಮತ್ತೆ ಮತ್ತೆ Tablet ಬೇಕು ಎಂದು ಕೇಳುತ್ತಿದ್ದ. ನಾನು ನಾಳೆ ತೆಗೆದುಕೊಳ್ಳೋಣ ಎಂದು ಹೇಳಿ ಸುಮ್ಮನಾಗಿಸಿದ್ದೆ. ನನಗು ದುಡ್ಡಿನ ಮಹಿಮೆಯ ಬಗ್ಗೆ ಒಂದು ಕವಿತೆ ಬರೆಯಬೇಕು ಎಂದು ಅನ್ನಿಸಿತು ರಾತ್ರಿ ಕುಳಿತು ಬರೆದೆ.

ದುಡ್ಡಿನ ಮಹಿಮೆ
----------------
ಇದು ಥಳಕು ಬಳಕು ದುನಿಯಾ
ಇಲ್ಲಿ ಒಲವಿಗೆಲ್ಲಿ ನೆಲೆಯಾ

ಇದು ನಂದೇ ಜಗತ್ತು ಎಂದ ಪುಂಡ
ಇವನ ಮುಂದೆ ಪ್ರಾಮಾಣಿಕತೆ ಒಂದು ದಂಡ
ಖಾಲಿ ಡಬ್ಬದ ನಾದವೇ ಸುರ ಸಂಗೀತವು
ಜಾಲಿ ಗಿಡದ ಪುಷ್ಪವೇ ಮಂದಾರ ಪುಷ್ಪವು ||೧||

ದಡ್ಡನಾದರೇನು ದುಡ್ಡು ಒಂದು ಸಾಕು
ಮಧ್ಯ ಒಂದೇ ಬೇಕು, ವಿದ್ಯೆ ಯಾಕೆ ಬೇಕು
ಮುಂದೆ ಹೊಗಳಿ ಏರಿಸುವ ಜನ ಸಮೂಹವು
ಹಿಂದೆ ತೆಗಳಿ ಬೀಳಿಸುವ ಶ್ವಾನ ಸಮಾನವೂ ||೨||

ಇದು ಥಳಕು ಬಳಕು ದುನಿಯಾ
ಇಲ್ಲಿ ಒಲವಿಗೆಲ್ಲಿ ನೆಲೆಯಾ

ಮರುದಿನ ಸಂಜೆ ಆಫೀಸ್ ನಿಂದ ಬರುವ ವೇಳೆಗೆ ನನ್ನ ಅಪ್ಪ, ಅಮ್ಮ ಊರಿನಿಂದ ಬಂದಿದ್ದರು. ಮಗ Tablet ತೆಗೆದುಕೊಂಡು ಬಂದ್ಯಾ ಎಂದು ಕೇಳಿದ. ನನ್ನ ಅಮ್ಮ ಗಾಬರಿಯಿಂದ ಏನಾಯಿತು? ನಿನಗೆ ಎಂದು ಕೇಳಿದರು. ನಾನು ಏನು ಇಲ್ಲ ಮಗನಿಗೆ Tablet ಬೇಕಂತೆ ಅಂದೆ. ಅವನಿಗೆ ಏನಾಗಿದೆ? ಎಂದು ಅಜ್ಜ-ಅಜ್ಜಿ ಇಬ್ಬರು ಮತ್ತಷ್ಟು ಗಾಬರಿಯಾದರು. ಕಡೆಗೆ ಅವರಿಗೆ ಅದು ಒಂದು ಮೊಬೈಲ್ ಇದ್ದ ಹಾಗೆ ಇರುವ ಒಂದು ಇಲೆಕ್ಟ್ರಾನಿಕ್ ಉಪಕರಣ ಎಂದು ಹೇಳಿದ ಮೇಲೆ ಸಮಾಧಾನವಾಗಿ, ಇದೆಂತಹ ಹೆಸರು ಇಡುತ್ತಾರೆ ಇವರು ಎಂದು ಬೈದರು.

ಮತ್ತೆ ಸಂಜೆಗೆ ಊಟಕ್ಕೆ ಕುಳಿತಾಗ ಮಡದಿ ನಾಳೆಗೆ ನಿಮಗೇನು ವೋಟ್ಸ್ ಎಂದು ಕೇಳಿದಳು. ಅದಕ್ಕೆ ನಾಳೆ ಏನು ಎಲೆಕ್ಷನ್ ಇದೇನಾ ಎಂದು ನನ್ನ ಅಮ್ಮ ಮುಗ್ದತೆಯಿಂದ ಕೇಳಿದಳು. ಅದು ವೋಟ್ಸ್ ಎಂದರೆ ಅದು ತಿನ್ನುವ ವಸ್ತು ಎಂದು ಅದರ ಪಾಕೆಟ್ ತಂದು ತೋರಿಸಿದ ಮೇಲೆ ಅಮ್ಮ, ಇದೇನೋ ವಿಚಿತ್ರವಾಗಿ ಹೆಸರು ಇಡುತ್ತರೋ ಈ ಆಂಗ್ಲರು ಅವರನ್ನು ನಮ್ಮ ಅಂಗಳಕ್ಕೆ ಬಿಟ್ಟಿದ್ದೆ ನಮ್ಮ ತಪ್ಪು ಎಂದು ಆಡುತ್ತಿದ್ದಳು. ಅದಕ್ಕೆ ಅಪ್ಪ ಅಮ್ಮನಿಗೆ ಅವರನ್ನು ನಮ್ಮ ಅಂಗಳಕ್ಕೆ ಬಿಟ್ಟಿದ್ದರಿಂದ ಮೊಬೈಲ್, ಟಿ ವಿ, ಕಂಪ್ಯೂಟರ್ ಎಂದು ಎಷ್ಟೊಂದು ಉನ್ನತಿಯನ್ನು ನಾವು ಕಾಣುತ್ತಿದ್ದೇವೆ. ಸುಮ್ಮನೆ ಏನೇನೋ ಮಾತನಾಡಬೇಡ ಎಂದು ಬೈದರು. ಮತ್ತೆ ಮೊನ್ನೆ ನಿಮ್ಮ ಅಮ್ಮ "ಅಳಗುಳಿಮನೆ" ಎಂಬ ಹೆಸರನ್ನು ಕೇಳಿ, ಇದೇನು ಇವರ ತಲೆ ಅಳುಬುರುಕ ಮನೆ ಎಂದು ಧಾರಾವಾಹಿಯ ಹೆಸರು ಇಟ್ಟಿದ್ದಾರೆ ಎಂದು ಬೈಯುತ್ತಿದ್ದಳು ಎಂದರು. ಕಡೆಗೆ ನಾನು ಅದು ಒಂದು ಆಟದ ಸಾಮಾನಿನ ಹೆಸರು ಎಂದು ಹೇಳಿದೆ ಎಂದು ನಗಹತ್ತಿದರು. ಅದಕ್ಕೆ ಅಮ್ಮ ನಿಮಗೆ ನಾನೆಂದರೆ ತಮಾಷೆ ಎಂದು ಕೋಪ ಮಾಡಿಕೊಂಡು ಬಿಟ್ಟಳು. ಇವರಿಬ್ಬರ ಜಗಳ ನೋಡಿ ನನ್ನ ಮಗ ನಗುತ್ತಲಿದ್ದ. ಊಟ ಮುಗಿಸಿ ಎಲ್ಲರೂ ನಿದ್ದೆಗೆ ಜಾರಿದೆವು.

Monday, September 17, 2012

ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ....

ಖ್ಯಾತ ಹಾಸ್ಯ ಸಾಹಿತಿಗಳ ಫೋಟೋ ಇರುವ ಪುಸ್ತಕಗಳನ್ನು ಮುಚ್ಚಿಕೊಂಡು ಬರುತ್ತೇನೆ. ಖಂಡಿತವಾಗಿಯೂ, ಅವರ ಭಾವ-ಚಿತ್ರ ನೋಡಿಯೇ ನಗು ಬರುತ್ತೆ, ಆದರೆ, ಇದರಿಂದ ನನ್ನ ಮಡದಿಯ ಭಾವ ಬದಲಾಗುತ್ತೆ. ಅದನ್ನು ನೋಡಿ, ಏನ್ರೀ, ಮತ್ತೊಂದು ಪುಸ್ತಕನಾ?, ಇರುವ ಪುಸ್ತಕ ಮೊದಲು ಓದಿ ಮುಗಿಸಿ ಎಂದು ಬೈಯುತ್ತಾಳೆ. ಆಗ ಹಾಸ್ಯ ಸಾಹಿತಿಗಳ ಭಾವ ಚಿತ್ರ, ನನ್ನ ನೋಡಿ ನಕ್ಕ ಹಾಗೆ ಅನ್ನಿಸುತ್ತೆ. ಆದರೂ ಹೊಸ ಹೊಸ ಪುಸ್ತಕಗಳನ್ನು ಕೊಳ್ಳುವುದನ್ನು ಬಿಟ್ಟಿಲ್ಲ. ಮೊನ್ನೆ ಮುಂಜಾನೆ ಪೇಪರ್ ನಲ್ಲಿ ಕಾರ್ಯಕ್ರಮ ಪಟ್ಟಿ ಓದುತ್ತಾ ಕುಳಿತ್ತಿದ್ದೆ. ಅಲ್ಲಿ ಶ್ರೀ ಜೋಗಿ ಅವರ "ಗುರುವಾಯನಕೆರೆ" ಮತ್ತು "ಹಲಗೆ ಬಳಪ" (ಹೊಸ ಬರಹಗಾರರಿಗೆ ಉಪಯೋಗವಾಗುವ) ಪುಸ್ತಕಗಳ ಬಿಡುಗಡೆ ಇತ್ತು. ಪುಸ್ತಕ ಬಿಡುಗಡೆಗೆ ಹೋದರೆ ತುಂಬಾ ಫಾಯಿದೆ ಇರುತ್ತವೆ. ರುಚಿಯಾದ ತಿಂಡಿ, ಕಾಫಿ ಅಲ್ಲದೆ ಪುಸ್ತಕಗಳು ರಿಯಾಯತಿ ದರದಲ್ಲಿ ಸಿಗುತ್ತವೆ. ಮತ್ತು ತುಂಬಾ ಗೆಳೆಯರ ಪರಿಚಯ ಮತ್ತು ಒಳ್ಳೊಳ್ಳೆ ಪ್ರಖ್ಯಾತರ ಭಾಷಣ ಕೇಳಲು ಸಿಗುತ್ತೆ. ಅದನ್ನು ನೋಡಿ ತುಂಬಾ ಖುಷಿಯಿಂದ "ಅರೆ ಜೋಗಿ..." ಎಂದು ಹಾಡಲು ಶುರು ಮಾಡಿದೆ. ಅದನ್ನು ನೋಡಿ ಏನು ರಾಯರು ತುಂಬಾ ಖುಷಿಯಿಂದ ಇದ್ದೀರಿ ಎಂದಳು. ನಾನು ಬೇಗನೆ ಪೇಪರ್ ಮಡಚಿ ಇಟ್ಟೆ. ಏಕೆಂದರೆ, ಅವಳಿಗೂ ಪೇಪರ್ ನಲ್ಲಿ ಇರುವ ಎಲ್ಲ ಮಾಹಿತಿಗಳು ಚಿರ ಪರಿಚಿತವಾಗಿತ್ತು. ಮಗ ಬೇಗ ಎದ್ದು ಅಮ್ಮ ಅಮ್ಮ .. ಎಂದು ರಾಗ ಎಳೆಯುತ್ತಿದ್ದ. ನಾನು ಹೋಗಿ ಬಾ ಕಂದ ಎಂದು ಕರೆದುಕೊಳ್ಳಲು ಹೋದೆ. ಮತ್ತಷ್ಟು ಜೋರಾಗಿ ಅಮ್ಮ ಅಮ್ಮ ಎಂದು ಅಳುತ್ತ ಕುಳಿತ. ಒಂದೆರಡು ದಿವಸದಿಂದ ಅಪ್ಪ ಅಪ್ಪ ಎಂದು ಏಳುತ್ತಿದ್ದವನು, ಇವತ್ತು ಎದ್ದು ಅಮ್ಮ ಎಂದಿದ್ದು ನೋಡಿ, ಮಡದಿಗೆ ಲೇ ಇವತ್ತು ಮಗ ಪಕ್ಷ ಬದಲಿಸಿದ್ದಾನೆ ಎಂದೆ. ಮೊದಲೇ ಸಿಲಿ೦ಡರ್ ರೇಟ್ ಜಾಸ್ತಿ ಮಾಡಿದ್ದಕ್ಕೆ ಕೋಪದಿಂದ ಇದ್ದ ಮಡದಿ ಏನ್ರೀ, ನನ್ನನ್ನು ಯಾವ ಪಕ್ಷಕ್ಕೂ ಸೇರಿಸಬೇಡ ಎಂದು ಸಿಡಿದೆದ್ದಳು. ಲೇ ನೀನೆ ತಾನೇ ಆಡಳಿತ ಪಕ್ಷದ ಹೈ ಕಮಾಂಡ್ ಎಂದೆ. ನನ್ನದೇನಿದ್ದರು ನಿನ್ನ ಮಾತು ಕೇಳುವುದು ಅಷ್ಟೇ ಎಂದೆ. ಕಡೆಗೆ ಮಡದಿಗೆ ನನ್ನ ಗೆಳೆಯ ಸಂತೋಷ ಫೋನ್ ಮಾಡಿದ್ದಾನೆ ಅವನ ಮನೆಗೆ ಹೋಗಬೇಕು ಎಂದು ಸುಳ್ಳು ಹೇಳಿ, ಬೇಗನೆ ರೆಡಿ ಆಗಿ ಮನೆಯಿಂದ ಹೊರಬಿದ್ದೆ. ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ತುಂಬಾ ಪ್ರಸಿದ್ದ ವ್ಯಕ್ತಿಗಳು ಬಂದಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ಪುಸ್ತಕ ಖರೀದಿಸಿ ಮನೆಗೆ ಹೋಗುವ ಬದಲು, ನನ್ನ ಮನೆಯ ಪಕ್ಕದಲ್ಲೇ ಇರುವ ಮನೋಜನ ಮನೆಗೆ ಹೋಗಿ, ಆ ಪುಸ್ತಕ ಕೊಟ್ಟು, ಮರುದಿನ ಮಡದಿಗೆ ತಿಳಿಯದ ಹಾಗೆ ತಂದು ಇಟ್ಟರೆ ಆಗುತ್ತೆ ಎಂದು ಮನೋಜನ ಮನೆಗೆ ಹೋದೆ.


ಅಷ್ಟರಲ್ಲಿ ನಮ್ಮ ಮಂಜ ಕೂಡ ಹಾಜರ ಆದ. ಮನೋಜ ಮಗನಿಗೆ "ಲೋ.. ಲೋಹಿತಾ ಬೇಗ ಎದ್ದು, ಮುಖ ತೊಳೆದುಕೊಂಡು, ದೇವರಿಗೆ ನಮಸ್ಕಾರ ಮಾಡೋ" ಎಂದು ಕೂಗುತ್ತಿದ್ದ. ಲೋಹಿತ ಮುಖ ತೊಳೆದುಕೊಂಡು ಬಂದು, ನನ್ನ ಪಕ್ಕ ಕುಳಿತುಕೊಂಡ. ಮನೋಜ ಮತ್ತೆ ಜೋರಾಗಿ ಲೇ.. ದೇವರಿಗೆ ನಮಸ್ಕಾರ ಮಾಡೋ ಎಂದು ಕಿರುಚಿದ. ಆಗ ಮಂಜ ಲೇ ನಿನ್ನ ಕಿರುಚಾಟಕ್ಕೆ ದೇವರು ಹೆದರಿ ದೇವರ ಮನೆಯಿಂದ ಓಡಿ ಹೋಗಿದ್ದಾರೆ, ನಮಸ್ಕಾರ ಯಾರಿಗೆ ಮಾಡಬೇಕು ಎಂದು ಮಂಜ ಛೇಡಿಸಿದ. ಲೇ.. ನೀನೊಂದು ಸುಮ್ಮನೆ ಕುಳಿತುಕೋ ಎಂದು ಹೇಳಿದ. ಕಡೆಗೆ ಮನೋಜನ ಮಗ ನಮಸ್ಕಾರ ಮಾಡಿ ಅಳುತ್ತ ಬಂದ. ಮಂಜ ಟಿ ವಿ ಚಾನೆಲ್ ಚೇಂಜ್ ಮಾಡಿದ. ಅದರಲ್ಲಿ "ದೊಡ್ಡವರೆಲ್ಲ ಜಾಣರಲ್ಲ..." ಎಂಬ ಗುರು-ಶಿಷ್ಯ ಚಲನಚಿತ್ರದ ಹಾಡು ಹತ್ತಿತು. ಮಂಜ ಲೋಹಿತನಿಗೆ ನೋಡು ಸರಿಯಾಗಿದೆ ಹಾಡು ದೊಡ್ಡವರೆಲ್ಲ ದಡ್ಡರು, ಸಣ್ಣವರು ಶ್ಯಾಣ್ಯ ಎಂದು ಮತ್ತು ನಿಮ್ಮ ಅಪ್ಪನಿಗೆ ಬಾಲ್ಯ ಎಂದರೆ ಗೊತ್ತೇ ಇಲ್ಲ ಕಣೋ, ಅವಿನಿಗೆ ಎರಡು ಬಾಲ(ಬಾಲ ಮತ್ತು ಅದರ ಕೆಳಗೆ ಮತ್ತೊಂದು ಮಂಗ್ಯಾನ್ ಬಾಲ) ಇದೆ ಎನ್ನುವುದು ಮಾತ್ರ ಗೊತ್ತು ಎಂದ.

ಅಷ್ಟರಲ್ಲಿ, ಒಬ್ಬರು ಮನೋಜನ ಹತ್ತಿರ ಭವಿಷ್ಯ ಕೇಳುವುದಕ್ಕೆ ಬಂದರು. ಅವರು ತಮ್ಮ ಮನೆಯಲ್ಲಿ ದಿನವು ಜಗಳ ಎಂದು ಹೇಳಿದರು. ಮನೋಜ ಅವರ ಕುಂಡಲಿ ಪರೀಕ್ಷಿಸಿ ಲೆಕ್ಕ ಹಾಕಿ, ಅವರಿಗೆ ಒಂದಿಷ್ಟು ಪೂಜೆಗಳನ್ನೂ ಮಾಡಿಸಲು ಹೇಳಿದ. ಮತ್ತೆ, ನಿಮ್ಮ ಮನೆಯಲ್ಲಿ ಶಿವ-ಪಾರ್ವತೀ, ಗಣೇಶ, ಸುಬ್ರಮಣ್ಯ ಇರುವ ಫೋಟೋ ಇದ್ದರೆ, ತೆಗೆದು ಬಿಡಿ ಎಂದ. ಬಂದವರು, ಏನಾಗುತ್ತೆ ಇದ್ದರೆ ಎಂದು ಕೇಳಿದರು. ಶಿವನ ವಾಹನ ನಂದಿ, ಪಾರ್ವತೀ ವಾಹನ ಸಿಂಹ, ಗಣೇಶನ ವಾಹನ ಇಲಿ, ಸುಬ್ರಮಣ್ಯ ವಾಹನ ನವಿಲು. ಶಿವನ ಕೊರಳಲ್ಲಿ ಇರುವುದು ಹಾವು. ಅದಕ್ಕೆ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುವುದಿಲ್ಲ. ಅದಕ್ಕೆ ನಿಮ್ಮ ಮನೆಯಲ್ಲಿ ಪ್ರತಿ ದಿವಸ ಜಗಳ ಆಗುತ್ತಿದೆ ಎಂದ. ಮಂಜನಿಗೆ ಸಕ್ಕತ ಕೋಪ ಬಂತು. ಲೇ... ಅದು ಪ್ರೀತಿ - ಸೌಹಾರ್ಧತೆಯ ಸಂಕೇತ. ತಿಳುವಳಿಕೆ ಇರುವ ಮನುಷ್ಯರಾದ ನಮಗೆ ಆ ಬುದ್ದಿ ಇಲ್ಲ. ಏನೇನೋ ಹೇಳಿ ತಲೆ ಕೆಡಿಸ ಬೇಡ. ಇದು ಯಾವ ಪುಸ್ತಕದಲ್ಲಿ ಬರೆದಿದೆ ಹೇಳು ನೋಡೋಣ ಎಂದು ಸವಾಲೆಸೆದ. ಮತ್ತೆ ಮೊನ್ನೆ ಬಂದಾಗ, ಒಬ್ಬರಿಗೆ ನಿಂತಿರುವ ಶ್ರೀ ಸೀತ-ರಾಮರ ಫೋಟೋ ಮನೆಯಲ್ಲಿ ಇಟ್ಟುಕೊಳ್ಳಬೇಡಿ ಎಂದು ಹೇಳುತ್ತಿದ್ದ. ಅದು ವನವಾಸಕ್ಕೆ ಹೋಗುವ ಲಕ್ಷಣವಂತೆ, ನಿನ್ನ ತಲೆ ಕೆಟ್ಟಿರಬೇಕು ಎಂದು ಝಾಡಿಸಿದ. ಒಬ್ಬರು ನಿನ್ನ ಹಾಗೆ ಮನೆಯಲ್ಲಿರುವ ಶ್ರೀ ವೆಂಕಟೇಶ ದೇವರ ಫೋಟೋ ಎಲ್ಲವನ್ನು ತೆಗೆದು ಹಾಕಿದ್ದರು. ಏಕೆ? ಎಂದು ಕೇಳಿದರೆ ನಿನ್ನ ಹಾಗೆ ಯಾರೋ ಒಬ್ಬರು ಅವರಿಗೆ ಹೇಳಿದ್ದರಂತೆ ಅದನ್ನು ಹಾಕಿಕೊಂಡರೆ ಮನೆ ತುಂಬಾ ಸಾಲ ಆಗುತ್ತಂತೆ ಎಂದು. ಕಡೆಗೆ ನಾನು ಬುದ್ಧಿ ಹೇಳಿದೆ, ಒಂದೇ ತಿಂಗಳಲ್ಲಿ ಅವರಿಗೆ ಸಾಲಾ ಬಂದ(ಹೆಂಡತಿ ಅಪ್ಪನಿಗೆ ಮಗ ಹುಟ್ಟಿದ, ಅದು ಅವರ ಮಾವ ತಿರುಪತಿ ವೆ೦ಕಪ್ಪನಿಗೆ ಹರಕೆ ಹೊತ್ತಮೇಲೆ ಹತ್ತನೇ ಮಗು ಗಂಡು ಆಗಿತ್ತು). ಮತ್ತೆ ನಾವು ದಕ್ಷಿಣಕ್ಕೆ ಮುಖ ಇರುವ ಮನೆಯನ್ನು ತೆಗೆದುಕೊಳ್ಳುವುದಿಲ್ಲ. ವರದಕ್ಷಿಣೆ ಬಂದರೆ ಬಿಡುವುದಿಲ್ಲ. ದೇವರ ಸನ್ನಿಧಾನಕ್ಕೆ ಹೋದಾಗ ಪ್ರದಕ್ಷಿಣೆ ಹಾಕುತ್ತೇವೆ. ಯಾರಾದರು ದಕ್ಷಿಣೆ ಕೊಟ್ಟರೆ ಬಿಡದೆ ತೆಗೆದುಕೊಳ್ಳುತ್ತವೆ ಎಂದು ಬೈದ. ಮೊನ್ನೆ ಇವನ ಕಡೆ ನನ್ನ ಅಳಿಯನ ಒಂದು ಕುಂಡಲಿ ತೆಗಿಸಿಕೊಂಡು ಹೋಗಿದ್ದೆ. ಅವನು ಹುಟ್ಟಿದ ವಾರ ಬುಧವಾರ ಎಂದು ಬರೆದಿದ್ದ. ಕಂಪ್ಯೂಟರ್ ನಲ್ಲಿ ನೋಡಿದರೆ ಮಂಗಳವಾರ ಎಂದು ಬರುತಿತ್ತು. ಬಂದು ಕೇಳಿದರೆ, ನನ್ನ ಪಂಚಾಗದಲ್ಲಿ ಎಂದು ತಪ್ಪು ಆಗುವುದಿಲ್ಲ ಎಂದು ನನಗೆ ಹೇಳಿದ್ದ. ಅದಕ್ಕೆ ನಾನು ಹಾಗಾದರೆ ಎಷ್ಟೋ ಬ್ಯಾಂಕ್ ಗಳು ಕಂಪ್ಯೂಟರ್ ಉಪಯೋಗಿಸುತ್ತಾರೆ. ವಾರ ತಪ್ಪು ಆಗಿದ್ದರೆ ಎಷ್ಟೋ ಲೆಕ್ಕ ತಪ್ಪುತ್ತಿತ್ತು ಎಂದೆ. ಅದಕ್ಕೆ ನಾನು ದುಡ್ಡನ್ನು ಬ್ಯಾಂಕ್ನಲ್ಲಿ ಇಟ್ಟೆ ಇಲ್ಲ, ನನ್ನದೇನಿದ್ದರು ಬರಿ ರೋಕ್ ಮಾತ್ರ ಎಂದ. ಈಗ ನೋಡಿದರೆ ದೇವರ ಸುತ್ತ ಏನೇನೋ ಹೇಳುತ್ತಾನೆ ಎಂದು ಬೈದ. ಅಷ್ಟರಲ್ಲಿ ಭವಿಷ್ಯ ಕೇಳಲು ಬಂದ ಆಸಾಮಿ ಮನೋಜನಿಗೆ ದಕ್ಷಿಣೆ ಕೊಡದೆ, ನಾನು ಹೊರಡುತ್ತೇನೆ ಎಂದು ಹೊರಟು ಹೋದರು.

ಇಲ್ಲೇ ಕುಳಿತರೆ ಮಂಜ ಮತ್ತೆ ನನ್ನ ಬಗ್ಗೆ ಏನಾದರು ಶುರು ಮಾಡಿದರೆ ಕಷ್ಟ ಎಂದು, ಪುಸ್ತಕವನ್ನು ಮನೋಜನಿಗೆ ಕೊಟ್ಟು ನಾಳೆ ಬಂದು ತೆಗೆದು ಕೊಳ್ಳುತ್ತೇನೆ ಎಂದು ಹೇಳಿ ಮನಗೆ ಹೋದೆ. ಮನೆಯಲ್ಲಿ ಸಂತೋಷ ತನ್ನ ಮಡದಿ ಮಗಳ ಸಮೇತ ಹಾಜರ ಆಗಿದ್ದ. ನನ್ನ ಮುಖದಲ್ಲಿ ಇದ್ದ ಸಂತೋಷ ಮಾತ್ರ ಮಾಯವಾಗಿತ್ತು. ಅಷ್ಟರಲ್ಲಿ ಮನೋಜನ ಮಗ ಲೋಹಿತ್ "ಅಂಕಲ್ ನಿಮ್ಮ ಪುಸ್ತಕ ಅಲ್ಲೇ ಮರೆತು ಬಂದಿದ್ದೀರಾ" ತೆಗೆದುಕೊಳ್ಳಿ ಎಂದು ಕೊಟ್ಟು ಹೋದ. ಮಡದಿ ಸಂತೋಷನ ಪರಿವಾರ ಹೋದ ಮೇಲೆ ಕೋಪದಿಂದ ಮಾತು ಬಿಟ್ಟಿದ್ದಳು. "ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ" ಎಂದು ಡಿ ವಿ ಜಿ ಅವರು ಹೇಳಿದ್ದಾರೆ ಎಂದೆ. ನೀವು ಮಸ್ತಕ ಬೆಳೆಯುತ್ತೆ ಎಂದು ಕಷ್ಟಕ್ಕೆ ಆಗುವ ದುಡ್ಡು ಪೋಲು ಮಾಡುತ್ತ ಇದ್ದೀರಾ? ಎಂದಳು. ಇನ್ನು ಮೇಲಿಂದ ಇರುವ ಎಲ್ಲ ಪುಸ್ತಕ ಓದುವವರೆಗೂ, ಯಾವುದೇ ಪುಸ್ತಕ ಖರಿದಿಸುವುದಿಲ್ಲ ಎಂದು ಹೇಳಿದ ಮೇಲೆ ಸ್ವಲ್ಪ ಕೋಪ ಕಡಿಮೆ ಮಾಡಿಕೊಂಡಿದ್ದಳು. ಹಾಗೇನಾದರು ತಂದರೆ ರಸ್ತೆಗೆ ಒಗೆಯುತ್ತೇನೆ ಎಂದಳು. ಲೇ ಅದು ಸರಸ್ವತಿ ಕಣೇ... ಎಂದೆ. ನಗುತ್ತ ಅದನ್ನಲ್ಲಾ ನಿಮ್ಮನ್ನು ಎಂದಳು...

Monday, September 3, 2012

ಸುಖ ಸಂಸಾರಕ್ಕೆ ಐದೇ ಸೂತ್ರಗಳು....

ಮಡದಿ ಅಧಿಕ ಮಾಸದ ಬಾಗೀನ ಕೊಡುವ ಸಲುವಾಗಿ, ತವರು ಮನೆಗೆ ಹೋಗುವ ಅರ್ಜಿ ಗುಜರಾಯಿಸಿದ್ದಳು. ಲೇ ನೀನೇ ಒಂದು ತಿಂಗಳ ಮೊದಲಿನಿಂದ ಹೇಳುತ್ತಾ ಬ೦ದಿದ್ದೀಯಾ ಅಲ್ಲವೇನೆ, ಅಧಿಕ ಮಾಸದಲ್ಲಿ ಒಳ್ಳೆಯ ಕೆಲಸ ಮಾಡಬಾರದು ಎಂದು ಅಂದೆ. ಕೋಪ ಮಾಡಿಕೊಂಡು ಬಿಟ್ಟಳು.  ಮತ್ತೆ, ನಾನು ಬಂಗಾರದಂತಹ ಗಂಡನ ಮನೆ ಬಿಟ್ಟು, 'ತವರ' ಮನೆಗೆ ಏಕೆ? ಹೋಗುತ್ತಿ ಎಂದು ಅವಳಿಗೆ ಕಾಡಿದ್ದೆ.  ಇದಕ್ಕಾಗಿ ನನ್ನ ಮತ್ತು ಮಡದಿಯ ನಡುವೆ ವಾರದಿಂದ ಸಮರ ನಡೆದಿತ್ತು. ನನ್ನ ಆರು ವರ್ಷದ ಮಗ ಕೂಡ, ನಾನು ಅವನಿಗಿಂತ ಮೊದಲೇ ಸ್ನಾನ ಮಾಡಿದ್ದೇನೆ ಎಂದು, ನನ್ನ ಜೊತೆ ಜಗಳ ಶುರು ಮಾಡಿದ. ಅಷ್ಟರಲ್ಲಿ ಮಂಜ ಮನೆಗೆ ಬಂದ. ಮಂಜ ನನ್ನ ಮಗನಿಗೆ ಸಮಾಧಾನಿಸಲು, ನಿಮ್ಮ ಅಪ್ಪ ನಾಳೆಯ ಬುಷ(ಸ್ನಾನ) ಇನ್ನೂ ಮಾಡಿಲ್ಲ, ಹೀಗಾಗಿ ನೀನೇ ಫಸ್ಟ್ ಸ್ನಾನ ಮಾಡಿದ್ದೂ ಎಂದರು ಕೇಳಲಿಲ್ಲ. ಅದಕ್ಕೆ ಮಂಜ ನಿಮ್ಮ ಅಪ್ಪ ಸೊನ್ನೆ, ನೀನೆ ಮೊದಲು ಎಂದು ಸಮಾಧಾನಿಸಿ, ಅವನನ್ನು ಸ್ನಾನಕ್ಕೆ ಕಳುಹಿಸಿದ.

ಮಡದಿಯ ಕೋಪ ಇಳಿದಿರಲಿಲ್ಲ, ಕೋಪದಿಂದಲೇ ನಮ್ಮಿಬ್ಬರಿಗೆ ತಿಂಡಿ ತಂದು ಟೇಬಲ್ ಮೇಲೆ ಕುಕ್ಕಿ ಹೋದಳು. ತಿಂಡಿ ಮುಗಿಸಿದ ಮೇಲೆ ಕಾಫಿ ತಂದು ಕೊಟ್ಟಳು. ನಾನು ಮತ್ತೊಮ್ಮೆ ನೀರು ಕೇಳಿದೆ. ನಿಮ್ಮ ಗೆಳೆಯ ತಮ್ಮ ರಾಶಿಯ(ಮೀನ) ಹಾಗೆ ನೀರಿನಲ್ಲೇ ಇರಬೇಕಿತ್ತು ಎಂದು ಹಾಗೆ ಕಾಫಿ ಕುಡಿಯಿರಿ ಎಂದಳು. ನಿಜ, ಅನ್ನಿಸಿತು ನಾನು ನೀರು ಸ್ವಲ್ಪ ಜ್ಯಾಸ್ತಿನೇ ಕುಡಿಯುತ್ತೇನೆ. ನನಗೆ ಸಮಾಧಾನ ಆಗಲಿಲ್ಲ, ನೀರು ಕೊಡಲಿಲ್ಲ ಎಂದರೆ, ಮುಂದಿನ ಜನ್ಮದಲ್ಲಿ ಹಲ್ಲಿ ಆಗಿ ಹುಟ್ಟುತ್ತಾರೆ ಎಂದು ಮತ್ತೊಮ್ಮೆ ನೀರು ಕೇಳಿದೆ. ಅವಳು ಲೋಚ್ಚ.. ಲೋಚ್.. ಎಂದು ಲೋಚಗುಡಿದಳು. ಅದಕ್ಕೆ , ಮಂಜ ಮುಂದಿನ ಜನ್ಮದವರೆಗೂ ಕಾಯಬಾರದೇ ತಂಗ್ಯಮ್ಮ ಎಂದ. ಎಲ್ಲರು ನಕ್ಕೆವು, ಮಡದಿ ನೀರು ತಂದು ಟೇಬಲ್ ಮೇಲೆ ಕುಕ್ಕಿದಳು. ಸ್ನಾನ ಮಾಡಿದ್ದರೂ ಇನ್ನೊಮ್ಮೆ ಸ್ನಾನ ಮಾಡಿದ ಹಾಗೆ ಆಗಿತ್ತು. ನಾನು ಕೋಪದಿಂದ, ಏನಿದು ಹೀಗೆ ಎಂದು ಒದರಿದೆ. ನಿಮ್ಮ ಗೆಳೆಯನಿಗೆ ಮೂಗಿನ ಮೇಲೆ ಕೋಪ ಎಂದು ಹೇಳಿದಳು. ಅದು ಇವನ ತಪ್ಪಲ್ಲ ಬಿಡಿ ತಂಗ್ಯಮ್ಮ...ಇದು ಇವನ ಅಪ್ಪ ಅಮ್ಮ ಉಪ್ಪು... ಉಪ್ಪು .. ಮಾಡಿ ಬೆಳಸಿದ್ದಾರೆ, ಅದಕ್ಕೆ, ಇವನಿಗೆ ಬಿ.ಪಿ ಜ್ಯಾಸ್ತಿ. ಅವರ ಮಮಕಾರ ಜ್ಯಾಸ್ತಿ ಆಗಿ, ಮಗ ಬದಲು ಮಂಗ ಆಗಿದ್ದಾನೆ ಅಷ್ಟೇ... ಎಂದ. ಮಡದಿ ಮತ್ತು ಮಂಜ ಜೋರಾಗಿ ನಗಹತ್ತಿದರು. ನೀನೇನು ಕಡಿಮೇನಾ?, ನೀನು ಮನೇಲಿ ಪೂಜಾರಿ, ಬೀದಿಲಿ ಪುಡಾರಿ ಎಂದು ನಾನೊಬ್ಬನೇ ನಕ್ಕೆ.

ಮಗ ಸ್ನಾನ ಮುಗಿಸಿ ಬಂದ. ಮಂಜ ಅವನಿಗೆ "ಗೌಡ್ರು ಬಾಯಿ" ಎಂದ. ಮಗನಿಗೆ ತಿಳಿಯಲಿಲ್ಲ. ಹಾಗೆ ಅಂದರೆ ಅಂಕಲ್ ಎಂದ. good boy ಅಂತ ಅಂದ. ನನ್ನ ಮಗ ತಿಂಡಿ ತಿನ್ನುವಾಗ ಹಠ ಮಾಡುತ್ತ ಇದ್ದ. ನಾನು, ತಿಂಡಿ ಹೀಗೆ ಒಣ.. ಒಣ.. ಮಾಡಿದರೆ ಹೇಗೆ ತಿನ್ನಬೇಕು ಎಂದು ಮಡದಿಗೆ ಬೈದೆ. ಏನು? ಮುದುಕರ ಹಾಗೆ ಆಡುತ್ತೀರಿ, ನಿಮಗೆ ಏನು ಹಲ್ಲು ಇಲ್ಲವಾ ಎಂದು ಹಲ್ಲು ಕಡಿದು ಮಾತನಾಡಿದಳು. ಏನು ಮಾಡಿದರು ಒಂದು ಹೆಸರು ಇಡುವುದೇ ಆಯಿತು ನಿಮ್ಮದು ಎಂದಳು. "ನಿಂದಕರಿರಬೇಕು ಇರಬೇಕು...ಹಂದಿ ಇದ್ದರೆ ಕೇರಿ...ಹ್ಯಾಂಗೆ ಶುದ್ಧಿಯೊ ಹಾಂಗೆ" ಎಂದು ಪುರುಂದರ ದಾಸರ ಪದ ಕೇಳಿಲ್ಲವೇ ಎಂದೆ. ಮಗ ಅಪ್ಪ ಏನು? ಎಂದರು ಎಂದು ಅವರ ಅಮ್ಮನಿಗೆ ಕೇಳಿದ. ನಿಮ್ಮ ಅಪ್ಪನಿಗೆ ಹಂದಿ ಅನ್ನಬೇಕಂತೆ ಎಂದಳು. ನಿನಗೆ ಗೊತ್ತ? ಎಲ್ಲರೂ ಒಳ್ಳೆಯ ಊಟಕ್ಕೆ ರಸಗವಳ ಎನ್ನುತ್ತಾರೆ. ಯಾರು ಒಣಗವಳ ಅನ್ನುವುದಿಲ್ಲ, ಹಾಗೆ ಮಾಡಿದರೆ ಬಾಯಿಯೊಳಗೆ ಲಾವಾರಸ ಬರುತ್ತೆ ಎಂದು ಬಾಯಿ ತಪ್ಪಿ, ಲಾಲಾರಸದ ಬದಲು ಅಂದೆ. ಹೌದು ನಿಮ್ಮ ಬಾಯಲ್ಲಿ ಯಾವತ್ತು ಅದೇ ಇರುತ್ತೆ, ಯಾವತ್ತು ಕೆಂಡ ಕಾರುತ್ತಾ ಇರುತ್ತೀರಿ ಎಂದಳು. ನಿಮ್ಮ ಪ್ರತಾಪವೆಲ್ಲ ನನ್ನ ಮುಂದೆ ತೋರಿಸಬೇಡಿ, ಎಲ್ಲಾ ಅಳ್ಕ ತಿಂದು.. ತಿಂದು.. ಅಳು ಪುಂಜಿ ಆಗಿದ್ದೀರಾ ಎಂದಳು.

ಮಗ ತಿಂಡಿ ಮುಗಿಸಿ ನೀರಿನಿಂದ ಬರೆಯುತ್ತ ಇದ್ದ. ಮಡದಿ ಅವನಿಗೆ ಕೋಪದಿಂದ "ನೀರಿನಿಂದ ಎಷ್ಟು ಸಾರಿ ಹೇಳುವುದು ಬರಿಬೇಡ" ಎಂದು ಚೀರಿದಳು. ನಾನು ಏನು ಆಗುತ್ತೆ, ಏನೋ ಅಪ್ಪನ ದುಡ್ಡು ಉಳಿಸುತ್ತಾ ಇದ್ದಾನೆ. ಬುಕ್, ಪೆನ್ಸಿಲ್ ನಲ್ಲಿ ಬರೆದು ಖಾಲಿ ಮಾಡುವ ಬದಲು ಒಳ್ಳೆಯದೇ ಅಲ್ಲವೇ ಎಂದೆ. ನಿಮ್ಮ ಇಷ್ಟ ನೀರಿನಿಂದ ಬರೆದರೆ ಸಾಲ ಆಗುತ್ತೆ ಎಂದು ಹೇಳಿದಳು. ಕಡೆಗೆ ನಾನೇ ಹೋಗಿ ಅವನನ್ನು ಬಿಡಿಸಿ, ಪೆನ್ನು ಬುಕ್ ಕೊಡಬೇಕಾಗಿ ಬಂತು. ಅದಕ್ಕೆ ಮಂಜ "ಲೇ ನೀನು ತುಂಬಾ ದಿನದಿಂದ ಹೋಂ ಲೋನ್ ಸಿಕ್ಕಿಲ್ಲ" ಎಂದು ಒದ್ದಾಡುತ್ತಾ ಇದ್ದೆ. ಈಗ ನಿನ್ನ ಮಡದಿನೇ ಐಡಿಯಾ ಕೊಟ್ಟಿದ್ದಾಳೆ, ನೀನು ಬರಿ ನೀರಿನಿಂದ ಎಂದು ನಗುತ್ತ ನನಗೆ ಹೇಳಿದ.

ಮಡದಿ ಕಸ ಗೂಡಿಸಲು ಶುರು ಮಾಡಿದಳು, ನನ್ನ ಕಾಲನ್ನು ಮೇಲೆ ಎತ್ತು ಎಂದಳು. ನಾನು ಎತ್ತುವುದಿಲ್ಲ ಎಂದು, ಸುಮ್ಮನೆ ಹಾಗೆ ಕುಳಿತೆ. ಕಸಬರಿಗೆ ನಿಮಗೆ ತಗುಲಿದರೆ ನೀವೇ ಸೊರಗುತ್ತೀರಾ ಎಂದಳು. ಕಡೆಗೆ ವಿಧಿ ಇಲ್ಲದೆ ಕಾಲು ಮೇಲೆ ಎತ್ತಿದೆ. ಕಸ ಗೂಡಿಸಿ ಬಂದಳು.

ಇನ್ನು ಕಾಯಲು ಆಗುವುದಿಲ್ಲ ಎಂದು ಮಂಜ ನಗುತ್ತಾ... ಕಡೆಗೆ, ತನ್ನ ಜೇಬಿನಿಂದ ಕವರ್ ತೆಗೆದು ಕೊಟ್ಟ. ಏನೋ ಇದು ಎಂದೆ. ನೀನೆ ಹೇಳಿದ್ದೆ ಅಲ್ಲವಾ ಟಿಕೆಟ್ ಎಂದ. ನಿನ್ನೆ ಅವನಿಗೆ ಫೋನ್ ಮಾಡಿ, ಮಡದಿಯ ಊರಿಗೆ ಹೋಗಲು ಟಿಕೆಟ್ ಬುಕ್ ಮಾಡಲು ಹೇಳಿದ್ದೆ. ಬೇಗ ಕೊಡಲು ನಿನಗೇನೋ ಧಾಡಿ ಎಂದು ಬೈದೆ. ಬೇಗನೆ ಕೊಟ್ಟಿದ್ದರೆ ನನಗೆ ಸಿಕ್ಕ ಪುಕ್ಕಟೆ ಮನರಂಜನೆ ಮಿಸ್ ಆಗುತ್ತಿತ್ತು ಎಂದು ನಕ್ಕ. ಇದನ್ನು ಅಡುಗೆ ಮನೆಯಿಂದ ಕೇಳಿಸಿಕೊಂಡ ಮಡದಿ, ಎರಡೇ ಸೆಕೆಂಡಿನಲ್ಲಿ ಪಕ್ಕಕ್ಕೆ ಬಂದು ನಿಂತಿದ್ದಳು. ನನಗೆ ಗೊತ್ತಿತ್ತು ನೀವು ತುಂಬಾ ಒಳ್ಳೆಯವರು ಎಂದು ಉಲಿದಳು. ಇದೆ ಸರಿಯಾದ ಸಮಯ ಎಂದು, ಲೇ ಸ್ವಲ್ಪ ಅಡಿಕೆ ಕೊಡೆ ಎಂದೆ. ಹೋಗಿ ಅಡಿಕೆ ಡಬ್ಬದ ಸಹಿತ ಎರಡೇ ಸೆಕೆಂಡಿನಲ್ಲಿ ಹಾಜರ್ ಆಗಿದ್ದಳು. ಮಂಜನಿಗೆ ಕೊಟ್ಟಳು. ನಾನು ಎಡ ಕೈ ಮುಂದೆ ಚಾಚಿದೆ. ರೀ ನಿಮಗೆ ಬುದ್ಧಿ ಇಲ್ಲವಾ ಎಷ್ಟು ಬಾರಿ ಹೇಳುವುದು ಎಡ ಕೈಯಲ್ಲಿ ಅಡಿಕೆ ತೆಗೆದುಕೊಂಡರೆ ಜಗಳ ಆಗುವದೆಂದು ಎಂದು, ಜಗಳ ಶುರು ಮಾಡಿದಳು. ಮತ್ತೆ ಬಲ ಕೈಯಲ್ಲಿ ಅಡಿಕೆ ತೆಗೆದುಕೊಂಡೆ. ಅಡುಗೆ ಮನೆಗೆ ಹೊರಟು ಹೋದಳು. ನಮ್ಮಿಬ್ಬರನ್ನು ನೋಡಿ ಮಂಜ ಮತ್ತೆ ನಗಲು ಶುರು ಮಾಡಿದ. ಅಷ್ಟರಲ್ಲಿ ಉದಯ ಟಿ.ವಿಯಲ್ಲಿ "ಸುಖ ಸಂಸಾರಕ್ಕೆ ಏಳು ಸೂತ್ರಗಳು" ಎಂಬ ಚಲನಚಿತ್ರ ಶುರು ಆಯಿತು. ಅದಕ್ಕೆ ಮಂಜ ನಿನ್ನ ಸುಖ ಸಂಸಾರಕ್ಕೆ ಏಳು ಸೂತ್ರಗಳು ಏನು? ಗೊತ್ತೇ...ತವರು ಮನೆಗೆ ಆಗಾಗ ಕರೆದುಕೊಂಡು ಹೋಗಬೇಕು... ತುಂಬಾ ಸಾರಿ, ನೀರು ಕೇಳಬಾರದು... ಕಸ ಹೊಡೆಯುವಾಗ, ಕಾಲು ಮೇಲೆತ್ತ ಬೇಕು...ನೀರಿನಿಂದ ಬರೆಯಬಾರದು,ಲೇಖನ ಬರೆದು ಬಿಟ್ಟೀಯಾ ನೀರಿನಿಂದ ಹುಷಾರ್ ಎಂದ...ಎಡ ಕೈಯಿಂದ ಅಡಿಕೆ ತೆಗೆದುಕೊಳ್ಳಬಾರದು... ಅಯ್ಯೋ ಐದೇ ಅಯಿತಲ್ಲೋ? ಎಂದು ಜೋರಾಗಿ ನಗಹತ್ತಿದ.

Thursday, August 23, 2012

ತರ್ಲೆ ಮಂಜನ ಗೇಲಿ ಸ್ವಭಾವ ....


ಮಂಜನ ಮಡದಿಯಿಂದ ನನಗೆ ಮತ್ತು ಮನೋಜನಿಗೆ ರಾಖಿ ಕಟ್ಟಿಸಿಕೊಳ್ಳಲು ಆಹ್ವಾನ ಬಂದಿತ್ತು. ಮನೋಜ ಮೊದಲೇ ಹಾಜರ್ ಆಗಿ, ಪೇಪರ್ ಓದುತ್ತ ಕುಳಿತಿದ್ದ. ಕೆಳಗೆ ಇರುವ ಸುಖಮಯ ದಾಂಪತ್ಯಕ್ಕೆ ಉಪಯೋಗಿಸಿ ಎಂದು ಸುಂದರ ತರುಣಿಯ ಜಾಹಿರಾತು ರಾರಾಜಿಸುತ್ತಿತ್ತು. ಮಂಜ ಏನಪ್ಪಾ? ನಿನಗೂ ಔಷಧಿ ಬೇಕಾ? ಎಂದು ಗೇಲಿ ಮಾಡಿದ.  ಮನೋಜ ಲೇ.. ನಾನು ಮೇಲಿನ ಸುದ್ದಿ ಓದುತ್ತಿರುವೆ ಎಂದ. ಈ ಸುಂದರ ತರುಣಿಯನ್ನು ನೋಡಿದರೆ ಸಾಕು ಸುಖಮಯ ಆಗಬೇಕು. ಆದರೂ ಆಗಿಲ್ಲಾ ಎಂದರೆ, ಅದನ್ನು ಉಪಯೋಗಿಸಿದ ಮೇಲೆ ಆಗುತ್ತಾ? ಗೊತ್ತಿಲ್ಲ. ನನಗಂತೂ ಅದರ ಅಗತ್ಯ ಬಿದ್ದಿಲ್ಲಾ, ನಿನಗೆ ಏನೋ ಬೇಕಾಗಿರಬೇಕು ಎಂದು ಮಂಜನಿಗೆ ಡೈಲಾಗ್ ಹೊಡೆದ. ಅಷ್ಟರಲ್ಲಿ ಮಂಜನ ಮಡದಿ ಅಡುಗೆ ಮನೆಯಿಂದ ಬಂದಿದ್ದರಿಂದ ಎಲ್ಲರು ಸುಮ್ಮನಾದೆವು.
ಮಂಜನ ಮಡದಿ ಇಬ್ಬರಿಗೂ ರಾಖಿ ಕಟ್ಟಿದಳು. ನಾನು ಮನೋಜನಿಗೆ ಏನಪ್ಪಾ? ಒಂದೇ ಒಂದು ರಾಖಿ ಎಂದೆ. ಅದಕ್ಕೆ ಕಾರಣ ಇತ್ತು.  ಶಾಲೆಗೆ ಹೋಗುವ ಸಮಯದಲ್ಲಿ ಮನೋಜನ ಕೈ ತುಂಬಾ ರಾಖಿಗಳು ಇರುತ್ತಿದ್ದವು. ಆದರೆ, ಈಗ ಒಂದೇ ಒಂದು. ಅದಕ್ಕೆ ರಾಖಿ ಹಬ್ಬ ಬಂತು ಎಂದು ದುಡ್ಡನ್ನು ಖರ್ಚು ಮಾಡದೇ ಕೂಡಿಸಿ ಇಡುತ್ತಿದ್ದ. ಅದಕ್ಕೆ ಮನೋಜ ಮಾತನಾಡದೆ, ಮಂಜನ ಮುಖ ನೋಡಿದ. ಮಂಜ ಇವನಿಗೆ ಅಷ್ಟೊಂದು ಅಕ್ಕ-ತಂಗಿಯರು ಇದ್ದರು ಎಂದು  ಗೇಲಿ ಮಾಡಿ ನಗಹತ್ತಿದ. ಅವನಿಗೆ ಯಾರಾದರು ಶಾಲೆಯಲ್ಲಿ, ಹುಡುಗಿಯರು ಕಟ್ಟುತ್ತಾರೆ ಎಂಬ ಭಯದಿಂದ, ಅವನೇ ಅಷ್ಟು ರಾಖಿ ಖರೀದಿಸಿ ನನ್ನ ಕೈಯಲ್ಲೇ ಕಟ್ಟಿಸಿಕೊಳ್ಳುತ್ತಿದ್ದ ಎಂದ. ನನಗೆ ೫೦ ರುಪಾಯಿ ಫಾಯಿದೆ ಆಗುತಿತ್ತು, ಅದಕ್ಕೆ ಯಾರಿಗೂ ಹೇಳಿರಲಿಲ್ಲ ಎಂದ. ನನಗೂ ಮನೋಜನ ಚಿದಂಬರ ರಹಸ್ಯ ಕೇಳಿ ನಗು ಬಂತು. ಕಡೆಗೆ ಮಂಜನ ಮಡದಿಗೆ ದುಡ್ಡು ಕೊಟ್ಟು, ತಿಂಡಿ ಮುಗಿಸಿ ಸುಬ್ಬನ ಮನೆಗೆ ಹೊರಟೆವು.
ಸುಬ್ಬನಿಗೆ ಯಾರು ರಾಖಿ ಕಟ್ಟಿರಲಿಲ್ಲ. ಅದಕ್ಕೆ, ಮಂಜ ಎಲ್ಲಿ ನಿನ್ನ ರಾಖಿ ಎಂದ. ಏಕೆಂದರೆ ಕಳೆದ ಬಾರಿ ಅವನಿಗೆ ಅವನ ತಂಗಿ ರಾಖಿ ಕಟ್ಟಿದ್ದಳು. ಆದರೆ ಈ ಬಾರಿ ಅವಳು ಅಮೇರಿಕಾಕ್ಕೆ ಹೋಗಿದ್ದರಿಂದ ಕಟ್ಟಿರಲಿಲ್ಲ. ನನಗೆ ಯಾರು ಕಟ್ಟುತ್ತಾರೆ ರಾಖಿ ಎಂದ. ಅದಕ್ಕೆ ಮಂಜ ನಿನ್ನ ಮಡದಿ ಎಂದು ಗೇಲಿ ಮಾಡಿದ, ಏಕೆಂದರೆ ಕಳೆದ ಬಾರಿ ರಾಖಿ ಧಾರ ಸಡಿಲು ಆಗಿತ್ತೆಂದು, ಮಡದಿ ಕೈಯಲ್ಲಿ ಬಿಗಿ ಮಾಡುವ ಸಮಯದಲ್ಲಿ ನಾವು ಹಾಜರ್ ಆಗಿದ್ದೆವು. ಮಂಜ ತನ್ನ ಗೇಲಿ ಮಾಡುವ ಬುದ್ಧಿ ಮಾತ್ರ ಯಾವತ್ತು ಬಿಟ್ಟಿಲ್ಲ, ಒಮ್ಮೆ ನಾನು ನನ್ನ ಲೇಖನ ಓದುತ್ತ ನಾನೇ ನಗುತ್ತಾ ಇದ್ದೆ. ಮಂಜ ಬಂದು ಅದನ್ನು ನೋಡಿ, ಬೇರೆ ಯಾರು ಓದಿ ನಗುವುದಿಲ್ಲಾ, ನೀನಾದರು ನಗಲೇ ಬೇಕು ಎಂದು ಗೇಲಿ ಮಾಡಿದ್ದ.
ಒಮ್ಮೆ ಒಬ್ಬ ಸಂಬಂದಿಕರ ಹೊಸ ಮನೆ ಗೃಹ ಪ್ರವೇಶಕ್ಕೆ ಹೋಗಿದ್ದೆವು. ಅವರ ಮನೆ ಹೆಸರು ಮಾತಾಶ್ರೀ ಎಂದು ಇತ್ತು. ಎಲ್ಲಿ? ನಿಮ್ಮ ಪಿತಾಶ್ರೀ ಎನುತ್ತ ಒಳಗಡೆ ಹೋದ. ಅವರು ಪಾಪ ಅವರ ತಂದೆಯ ಕಡೆಗೆ ಕರೆದುಕೊಂಡು ಹೋದರು. ಅವರನ್ನು ಮಾತನಾಡಿಸಿ, ಆನಂತರ ಊಟ ಮುಗಿಸಿ ಬಂದೆವು. ಮಂಜ ಮನೆಯಿಂದ ಹೊರಗಡೆ ಬಂದ ಮೇಲೆ, ನಮಗೆ ಅವರ ಮನೆ ಹೆಸರು ಮಾತಾಶ್ರೀ ಎಂದು ಏಕೆ? ಇದೆ ಹೇಳು ಎಂದ. ನಾನು ತಾಯಿ ಮೇಲೆ ಪ್ರೀತಿಯಿಂದ ಇಟ್ಟಿದ್ದಾರೆ ಎಂದೆ. ಅದು ನಿಜ ಆದರೆ ಪಿತಾಶ್ರೀ ಎಂದು ಏಕೆ? ಇಡಲಿಲ್ಲ ಗೊತ್ತ, ಅವರು ಪಿತಾಶ್ರೀ ಆಗಿರದೆ ಪೀತಾಶ್ರೀ(ಕುಡಿಯುತ್ತಿದ್ದರು) ಆಗಿದ್ದರು. ಹೀಗಾಗಿ ಶ್ರೀ ಅವರ ಬಳಿ ಇರಲಿಲ್ಲ ಎಂದ.
ಒಮ್ಮೆ ಮಂಜನ ಮನೆಗೆ ಹೋಗಿದ್ದಾಗ, ಬರಿ ಚಡ್ಡಿ ಮೇಲೆ "ಚೆಲುವೆ ಎಲ್ಲಿರುವೆ...." ಎಂದು ಹಾಡುತ್ತಿದ್ದ. ನಾನು ಹೋಗಿರುವ ಸಮಯ ಸರಿಯಿಲ್ಲ ಎಂದು ಹೋಗುತ್ತಿದ್ದೆ. ಅಷ್ಟರಲ್ಲಿ, "ಮಾನ ಕಾಪಾಡುವ ರೂಪಸಿಯೇ..." ಎನ್ನುತ್ತಾ ತನ್ನ ಪ್ಯಾಂಟ್ ಹಾಕಿಕೊಂಡು ಬಂದು ನನ್ನನ್ನು ತಡೆದ. ಅವನು ಅವನ ಹೆಂಡತಿಗೆ ಗೇಲಿ ಮಾಡುತ್ತ, ಈ ಹಾಡು ತಿರುಚಿ ಕಾಡಿಸುತ್ತಿದ್ದ, ಅವರಿಬ್ಬರ ನಡುವೆ ಸ್ವಲ್ಪ ಜಗಳ ಬಂದಿತ್ತು. ಮತ್ತೆ ಮಾತನಾಡುತ್ತ, ನನ್ನ ಹೆಂಡತಿ ಎರಡು ಗಂಡನನ್ನು ಕಟ್ಟಿಕೊಂಡಿದ್ದಾಳೆ ಎಂದ. ನಾನು ಅವನು ಹೇಳುವ ಮಾತು ಕೇಳಿ ದಂಗಾಗಿದ್ದೆ. ಒಂದು ಗಳಗಂಡ - ಇನ್ನೊಂದು ಭೋಳೆ ಗಂಡ ನಾನು ಎಂದು ನಗಿಸಿದ್ದ. ಆದರೂ, ಅವನ ಹೆಂಡತಿ ಮಾತ್ರ ಕೋಪ ಇಳಿದಿರಲಿಲ್ಲ. ಕಾಫಿ ಲೋಟ ಟೇಬಲ್ ಮೇಲೆ ಕುಕ್ಕಿ, ಸಿಟ್ಟಿನಿಂದ ಒಳಗಡೆ ಹೋದಳು. ಮತ್ತೆ ಕಾಫಿ ಮುಗಿಸಿದ ಮೇಲೆ, ಹೆಂಡತಿ ಹಳೆ ಆದ ಮೇಲೆ ಇಷ್ಟ ನೋಡಪ್ಪ, ಗೇಲಿ ಮಾಡೋ ವಸ್ತು ಆಗುತ್ತಾಳೆ. ನೀನು ನಿನ್ನ ಹೆಂಡತಿಗೆ ಹೀಗೆ ಮಾತನಾಡುತ್ತೀಯಾ? ಎಂದು ಪ್ರಶ್ನೆ ಹಾಕಿದಳು. ನಾನು ಏನು? ಹೇಳಬೇಕೋ ತಿಳಿಯದೆ ಒದ್ದಾಡಿದೆ. ಅಷ್ಟರಲ್ಲಿ ಮಂಜ ಹಳೆ ಹೆಂಡತಿ ಮತ್ತು ಹಳೆ ಹೆಂಡ ಎರಡು ಮಸ್ತ ಇರುತ್ತವೆ. ಏಕೆಂದರೆ ಎರಡು ಕಿಕ್ಕ್ ಕೊಡುತ್ತವೆ ಎಂದ. ಮಂಜನ ಮಡದಿಯ ಮುಖದಲ್ಲೂ ಮಂದಹಾಸ ಬಿರಿತು. ನಿಮ್ಮ ಗೆಳೆಯ ಎಂದು ಸುಧಾರಿಸುವುದಿಲ್ಲ ಎನ್ನುತ್ತಾ ಅಡುಗೆ ಮನೆಗೆ ಹೊರಟು ಹೋದಳು.
ಮದುವೆ ಆದ ಹೊಸತರಲ್ಲಿ, ಒಮ್ಮೆ ಮಂಜನ ಮನೆಗೆ ಅತಿಥಿಗಳು ಬಂದಿದ್ದರು. ಅವರು ತುಂಬಾ ದಿನಗಳು ಆದರೂ, ಹೋಗುವ ಮಾತೆ ಎತ್ತಲಿಲ್ಲ. ಅವನಿಗೆ ನುಂಗಲಾರದ ತುತ್ತಾಗಿತ್ತು. ಮೊದಲೇ ಮಡದಿಯ ಸಂಬಂದಿ. ಕಡೆಗೆ ತಲೆ ಕೆಟ್ಟ ಹೋಗಿತ್ತು. ಒಮ್ಮೆ ಮಂಜನ ಮನೆಗೆ ಪೊಲೀಸರು ಬಂದು, ಅದೇ ಅತಿಥಿಯ ಫೋಟೋ ತೋರಿಸಿ, ಇವರನ್ನು ಕಿಡ್ನಾಪ್ ಮಾಡಿದ್ದೀರಾ? ಎಂದು ಮನೆಗೆ ಬಂದ ಅತಿಥಿಯನ್ನು ತೋರಿಸಿದರು. ರೀ ... ನಾವೇನು ಮಾಡಿಲ್ಲ, ಬೇಕಾದರೆ ನೀವೇ ಕೇಳಿ ಎಂದು ಅತಿಥಿಗಳನ್ನು ಕೇಳಿದರು. ಅವರು ಇವರ ಉಪಚಾರ ಎಲ್ಲವನ್ನು ವಿವರಿಸಿದರು. ಅವರು ಬಂದಿದ್ದು ಪಕ್ಕದ ಬೀದಿಯಲ್ಲಿ ಇರುವ ಇನ್ನೊಬ್ಬ ಸಾವಿತ್ರಿಯನ್ನು ಹುಡುಕಿಕೊಂಡು, ಆದರೆ ಅಲ್ಲೇ ಎರಡು ತಿಂಗಳು ಝಾ೦ಡ ಹೂಡಿದ್ದರು. ಅವರ ಮನೆಯವರು ನೆಂಟರ ಮನೆಗೆ ತಲುಪಿಲ್ಲ ಎಂದು ಪೋಲಿಸ ಕಂಪ್ಲೈಂಟ್ ಕೊಟ್ಟಿದ್ದರು. ಹೀಗಾಗಿ ಮಂಜ "ಅ-ತಿಥಿ ದೇವೋ ಭಯ" ಎಂದು ಹೆಂಡತಿಯ ಯಾರೇ ಅತಿಥಿಗಳು ಬಂದರು ಗೇಲಿ ಮಾಡುತ್ತಿರುತ್ತಾನೆ.
ಒಮ್ಮೆ ಮನೋಜನ ಮನೆಗೆ ನಾನು ಮತ್ತು ಮಂಜ ಹೋಗಿದ್ದೆವು. ಅಲ್ಲಿ ಒಬ್ಬರು ತಮ್ಮ ಮಗನ ಮದುವೆಗೆ ಜಾತಕ ಹೊಂದಾಣಿಕೆ ಮಾಡಿಸಲು ಬಂದಿದ್ದರು. ನಮ್ಮ ಜೊತೆ ಹಾಗೆ ಮಾತನಾಡುತ್ತ, ಏನು? ಮಾಡೋದು ಸರ್, ತುಂಬಾ ದಿನದಿಂದ ನನ್ನ ಮಗನ ಮದುವೆ ಆಗವಲ್ಲದು, ಮೊನ್ನೆ ನೋಡಿದರೆ ಗೋತ್ರ ಹೊಂದಾಣಿಕೆ ಆಗಲಿಲ್ಲ ಎಂದರು. ಅದಕ್ಕೆ ಸುಮ್ಮನೆ ಇರದೇ, ನಮ್ಮ ಮಂಜ ಗೋತ್ರ ಹೊಂದಾಣಿಕೆ ಆಗದಿದ್ದರೆ ಏನಂತೆ? ಗಾತ್ರ ಹೊಂದಾಣಿಕೆ ಆದರೆ ಸಾಕು ಎಂದರು. ಎಲ್ಲರು ನಗೆ ಗಡಲಿನಲ್ಲಿ ತೇಲಿದ್ದೆವು. ಹಾಗೆ ಮಾತನಾಡಿಸುತ್ತ, ಕುಂಡಲಿ ಮತ್ತೆ ಹೊಂದಾಣಿಕೆ ಆಗಲಿಲ್ಲ ಎಂದು ಬೇಜಾರಿನಲ್ಲಿ, ಮನೋಜನ ಫೀಸ್ ಕೊಡದೆ ಹಾಗೆ ಹೋಗಿದ್ದರು. ಮನೋಜ ಮಾತ್ರ ಮಂಜನ ಮೇಲೆ ತುಂಬಾ ಕೋಪ ಮಾಡಿಕೊಂಡು ಬಿಟ್ಟಿದ್ದ.

Tuesday, July 31, 2012

ಭಾಷಣ ಕಾರ್ಯಕ್ರಮ....

ಮೊನ್ನೆ ನಾನು ಮಂಜ ಸಂಜೆ ಪಾರ್ಕಿನಲ್ಲಿ ವಾಕಿಂಗ್ ಹೊರಟಿದ್ದೆವು. ಯಾರೋ ಒಬ್ಬರು ಹಿಂದಿನಿಂದ ಕರೆದ ಹಾಗೆ ಅನ್ನಿಸಿತು. ತಿರುಗಿ ನೋಡಿದೆವು, ನಮ್ಮ ಹಳೆ ಸ್ನೇಹಿತ ವಿಶಾಲ. ಹೆಸರು ವಿಶಾಲ ಮಾತ್ರ, ಅವನು ಹೇಗೆ ಇದ್ದ ಎಂದರೆ, ಅವನು ನಮಗೆ "ನಮ್ಮ ಮನೆಗೆ  ಬಂದ್ರೆ,  ಏನು ತರುತ್ತೀರಾ?, ನಿಮ್ಮ  ಮನೆಗೆ ಬಂದ್ರೆ,  ಏನು ಕೊಡುತ್ತೀರ?" ಎಂದು ಕೇಳುತ್ತಿದ್ದ. ಒಂದು ನಯಾ ಪೈಸೇನು ಬಿಚ್ಚುತ್ತಿರಲಿಲ್ಲ. ಬಂದವನೇ ಕಾಫಿಗೆ ಆಹ್ವಾನಿಸಿದ. ನಾವು ಬೇಡ ಎಂದರು ಕೇಳದೆ ಕರೆದುಕೊಂಡು ಹೋದ. ತಾನೇ ದುಡ್ಡು ಕೊಟ್ಟು ಕಾಫಿ ಕುಡಿಸಿದ.  ಜ್ಯಾಸ್ತಿ ಮಾತನ್ನು ಆಡದ ಮನುಷ್ಯ, ಒಂದೇ ಸಮನೇ ಅರಳು ಹುರಿದ ಹಾಗೆ ಮಾತನಾಡುತ್ತಿದ್ದ. ನನ್ನನ್ನು ಮತ್ತು ಮಂಜನನ್ನು ಭಾನುವಾರ ಭಾಷಣ ಕಾರ್ಯಕ್ರಮಕ್ಕೆ ಆಹ್ವಾನಿಸಿದ.

ನಾವಿಬ್ಬರು ಭಾನುವಾರ ಭಾಷಣ ಕಾರ್ಯಕ್ರಮಕ್ಕೆ ಹೋದೆವು, ಕಾರ್ಯಕ್ರಮ ತುಂಬಾ ಚೆನ್ನಾಗಿತ್ತು.  ಕಡೆಗೆ ವಿಶಾಲ ತನ್ನ ವಿಶಾಲವಾದ ಹೃದಯವಂತಿಕೆ ಪ್ರದರ್ಶಿಸಿ, ನನ್ನನ್ನು ದಂಗುಗೊಳಿಸಿದ್ದ.  ಅದೇನೆಂದರೆ ಮುಂದಿನ ವಾರದ ಭಾಷಣ ಗೋಪಾಲ್ ಅವರದ್ದು, ವಿಷಯ ಅವರೇ ಹೇಳುತ್ತಾರೆ ಎಂದ. ನಾನು ವಿಧಿ ಇಲ್ಲದೆ ಸ್ಟೇಜ್ಗೆ ಹೋಗಿ ಹಾಸ್ಯದ ಬಗ್ಗೆ ಭಾಷಣ ಎಂದು ಹೇಳಿ ಬಂದೆ. ಮಂಜ ಸಧ್ಯ ಬಚಾವ್ ಆಗಿದ್ದ. ನಾನು ಎಂದಿಗೂ ಭಾಷಣವನ್ನು ಮಾಡಿದವನಲ್ಲ, ಮನೆಯಲ್ಲಿ ಮಾಡಿದರೂ ಮಡದಿ, ಮಗ ಕಿವಿಯಲ್ಲಿ ಹಾಕಿಕೊಳ್ಳುತ್ತಿರಲಿಲ್ಲ.  ಕಡೆಗೆ ಅಂತರ್ಜಾಲ ಮತ್ತು ಮಂಜನ ಸಹಾಯದಿಂದ ಒಂದಿಷ್ಟು ಜೋಕ್ ಮತ್ತು ಬ್ಲಾಗ್ ನಿಂದ ವಿಷಯಗಳನ್ನು, ಮತ್ತೆ ನಮ್ಮ ಗಂಗಾವತಿ ಬೀಚಿ ಎಂದೆ ಖ್ಯಾತ ರಾದ ಶ್ರೀ ಪ್ರಾಣೇಶ ಅವರ ಸಿ.ಡಿ ಖರೀದಿಸಿ, ಅದರಲ್ಲಿನ ವಿಷಯಗಳನ್ನು ಸೇರಿಸಿ ಭಾಷಣವನ್ನು ತಯಾರಿ ಮಾಡಿದೆ. ಅದನ್ನು ಮಡದಿಯ ಮುಂದೆ ಹೇಳಿದೆ. ಮಡದಿ ಎಲ್ಲಾ ಚೆನ್ನಾಗಿದೆ. ಆದರೆ, ಮೊದಲು ನೀವು ನಗುವುದನ್ನು ನಿಲ್ಲಿಸಿ, ಆಮೇಲೆ ಹೇಳಿ ಎಂದಳು. ಮಾಡುತ್ತಿರುವುದು ಹಾಸ್ಯದ ಬಗ್ಗೆ ಭಾಷಣ ಕಣೇ ಎಂದೆ. ಆದರೂ  ನೀವು ನಗುವುದನ್ನು ನಿಲ್ಲಿಸಿ ಹೇಳಿ ಎಂದಳು. ಅವಳ ಆಜ್ಞೆಯಂತೆ ಮತ್ತೊಮ್ಮೆ, ಅವಳ ಮುಂದೆ ಹೇಳಿದೆ. ಮಗ ಮಾತ್ರ ನನ್ನನ್ನು ಪಿಕಿ-ಪಿಕಿ ಎಂದು ಕಣ್ಣು ಬಿಟ್ಟು ನೋಡುತ್ತಿದ್ದ. ಮೊದ-ಮೊದಲು ನಗುತ್ತಿದ್ದ ನನ್ನ ಮಡದಿ, ಆಮೇಲೆ ನಗುವುದನ್ನೇ ನಿಲ್ಲಿಸಿ ಬಿಟ್ಟಳು. ಏಕೆ? ನಗು ಬರುತ್ತಿಲ್ಲವಾ? ಎಂದೆ. ಹಾಗೇನಿಲ್ಲ, ನೀವು ನನಗೆ ತುಂಬಾ ಸರತಿ ಹೇಳಿದ್ದರಿಂದ ನಗು ಬರುತ್ತಿಲ್ಲ. ಚೆನ್ನಾಗಿದೆ ನೀವು ಚೆನ್ನಾಗಿ ತಯಾರಿ ಮಾಡಿದ್ದೀರಾ ಹೇಳಿ ಎಂದಳು.

ಮರು ದಿನ ಭಾಷಣ ಇದ್ದರಿಂದ ನಿದ್ದೆ ಚೆನ್ನಾಗಿ ಬರಲಿಲ್ಲ. ಹಾಗು-ಹೀಗು ನಿದ್ದೆ ಮುಗಿಸಿ ಬೇಗನೆ ಎದ್ದು ಮತ್ತೊಮ್ಮೆ ಎಲ್ಲವನ್ನು ಕಂಠ ಪಾಠ ಮಾಡಿ ಮುಗಿಸಿದೆ. ನನ್ನ ಮಗನಿಗೆ ಆಶ್ಚರ್ಯ ನಾನು ಎಂದು ಓದಿದವನಲ್ಲ. ಆದರೂ, ಇಷ್ಟೊಂದು ಓದುತ್ತಿರುವುದು ಸೋಜಿಗವೇ ಅನ್ನಿಸಿತು. ನನ್ನ ಮಡದಿ ತನಗೆ ಅಷ್ಟೇ ಅಲ್ಲದೆ, ನನಗು ಕೂಡ ಪಾಠ ಹೇಳಿ ಕೊಡುತ್ತಾಳೆ ಎಂದು ಅರ್ಥೈಸಿ ಕೊಂಡು ಬಿಟ್ಟಿದ್ದ. ಅಮ್ಮ-ಮಗ ಇಬ್ಬರು ನನಗೆ ಆಲ್ ದಿ ಬೆಸ್ಟ್ ಎಂದು ಹೇಳಿ ಕಳುಹಿಸಿದರು. ನಾನು ಮಂಜನ ಮನೆಗೆ ಹೋದೆ. ಮಂಜ ತನ್ನ ತರ್ಲೆ ಬುದ್ಧಿ ತೋರಿಸಿ ಪರಾರಿ ಆಗಿದ್ದ. ಕಡೆಗೆ ವಿಧಿ ಇಲ್ಲದೆ ಒಬ್ಬನೇ ಹೋದೆ.

ನಮ್ಮ ವಿಶಾಲ ಪ್ರತಿ ಬಾರಿ ನಿಮಗೆ ಕ್ರಾಂತಿಕಾರಿಗಳ ಭಾಷಣ ಇರುತಿತ್ತು. ಆದರೆ ಈ ಸಾರಿ ನಿಮಗೆ ಒಂದು ವಿಭಿನ್ನವಾದ ಹಾಸ್ಯ ಭಾಷಣ ಇದೆ ಎಂದು ಹೇಳಿ, ನನ್ನನ್ನು ಸ್ಟೇಜ್ ಗೆ ಆಹ್ವಾನಿಸಿದ. ನಾನು ನಡುಗುತ್ತ ಮೈಕ್ ಹಿಡಿದು ನನ್ನ ಭಾಷಣವನ್ನು ಧಾರವಾಡ ಭಾಷೆಯಲ್ಲಿ ಶುರು ಮಾಡಿದೆ. ವಿಶಾಲ ಹಿಂದೆ ಹೋಗಿ ಕುಳಿತುಕೊಂಡ. ತುಂಬಾ ಹೊತ್ತು ಭಾಷಣ ಮಾಡಿದರೂ, ಯಾರೊಬ್ಬರ ಮುಖದಲ್ಲೂ ಮಂದಹಾಸ ಬಿರಲಿಲ್ಲ.  ಆದರೂ ಧಾರವಾಡದಿಂದ ಬಂದ ಇಬ್ಬರು ಮಾತ್ರ ನನ್ನ ಭಾಷಣ ಕೇಳಿ ನಗುತ್ತಿದ್ದಿದ್ದು, ನನಗೆ ಮಾತ್ರ ತುಂಬಾ ಖುಷಿ ಅನ್ನಿಸಿತು. ನಮ್ಮ ವಿಶಾಲ ಮಾತ್ರ ತನ್ನ ವಿಶಾಲ ಹೃದಯ ಪ್ರದರ್ಶಿಸಿದ್ದ, ಹಿಂದೆ ಕುಳಿತು ನಿದ್ದೆ ಹೋಗಿದ್ದ. ನಾನೇನು ಜೋಗುಳ ಹಾಡುತ್ತ ಇದ್ದೇನಾ?, ಎಂದು ಅನ್ನಿಸಿತು. ನನಗೆ ಕೋಪ ಬಂದರು ತೋರಿಸಿದೆ ಸುಮ್ಮನೆ ಭಾಷಣ ಮಾಡಿ ಮುಗಿಸಿದೆ. ಯಾರೋ ಒಬ್ಬರು ಭಾಷಣ ಮುಗಿದ ಮೇಲೆ ವಿಶಾಲನನ್ನು ಎಬ್ಬಿಸಿದರು. ಕಡೆಗೆ ಎದ್ದು ನಮ್ಮ ವಿಶಾಲ ನನಗೆ ಒಂದು ಪ್ರಮಾಣ ಪತ್ರ ಕೊಟ್ಟ. ಅದನ್ನು ತೆಗೆದುಕೊಂಡು ಮನೆ ಹಾದಿ ಹಿಡಿದೆ.

ಮನೆಯಲ್ಲಿ ನಮ್ಮ ಮಂಜ ಹಾಜರ ಆಗಿದ್ದ. ಅವನಿಗೆ ಕೋಪದಿಂದ ಎಲ್ಲಿ ಹಾಳಾಗಿ ಹೋಗಿದ್ಯೋ ಎಂದು ಬೈದೆ. ನಾನು ಬಂದಿದ್ದರೇ ಮುಂದಿನ ಭಾಷಣ ಮಂಜನದು ಎಂದು ವಿಶ್ಯ ಹೇಳಿ ಬಿಡುತ್ತಿದ್ದ ಎಂದ. ನನಗೆ ಹಾಗೆ ಕರೆದರೆ ಆಗುವುದಿಲ್ಲ ಅರಿಶಿಣ-ಕುಂಕುಮ ಕೊಟ್ಟು ಕರಿಬೇಕು ಗೊತ್ತ ಎಂದ. ಎಷ್ಟೊಂದು ಬುರುಡೆ ಬಿಚ್ಚುತ್ತಿ, ನೀನು ಭಾಷಣ ಮಾಡಬೇಕಪ್ಪ ಎಂದೆ. ನೋಡು ಅವು ಮನದಾಳದ ಮಾತುಗಳು ತನ್ನ ತಾನೇ ಬರಬೇಕು, ಕಂಠ ಪಾಠ ಮಾಡಿ ಒಪ್ಪಿಸಲು ನನಗೆ ಬರುವುದಿಲ್ಲ ಎಂದ. ಹೇಗಿತ್ತು ಭಾಷಣ ಎಂದ, ನಾನು ತುಂಬಾ ಚನ್ನಾಗಿತ್ತು ಎಂದೆ. ಸುಮ್ಮನೆ ಹೇಳಬೇಡ ನಿನ್ನ ಮುಖ ನೋಡಿದರೆ ಗೊತ್ತಾಗುತ್ತೆ ಎಂದು ಗೇಲಿ ಮಾಡಿದ.

ಮರುದಿನ ಪಾರ್ಕಿನಲ್ಲಿ ನಾನು ಮಂಜ ಹೋಗುತ್ತಿದ್ದಾಗ, ವಿಶಾಲ ತನ್ನ ಅದೇ ಗುಂಪಿನ ಜೊತೆ ಜೋರಾಗಿ "ಹಾ.. ಹಾ... " ಎಂದು ನಗುತ್ತಿದ್ದರು . ನೋಡು ನೀನು ಭಾಷಣ ಮಾಡಿದರೂ ನಗದ ಜನ  ಹೇಗೆ ನಗುತ್ತಿದ್ದಾರೆ ಎಂದು ಗೇಲಿ ಮಾಡಿದ. ಒಮ್ಮೆ ಗಾಂಧಿ ಬಜಾರಿನಲ್ಲಿ ನಾನು ಮತ್ತು ಮಂಜ ಹೋದಾಗ ಮತ್ತೆ ವಿಶಾಲ ಭೇಟಿಯಾದ, ಕೈಯಲ್ಲಿ  ಸಿ.ಡಿ ಗಳು ಇದ್ದವು, ಯಾವ ಸಿ.ಡಿ ಎಂದು ಕೇಳಿದೆ. ನೋಡು ತುಂಬಾ ಚೆನ್ನಾಗಿವೆ. ಶ್ರೀ ಪ್ರಾಣೇಶ ಅವರ ಹಾಸ್ಯ ಸಿ.ಡಿ ಗಳು ಎಂದು ತೋರಿಸಿದ. ಧಾರವಾಡ ಭಾಷೆಯಲ್ಲಿ ತುಂಬಾ ಚೆನ್ನಾಗಿ ಹಾಸ್ಯ ಸಿಂಚನ ಹರಿಸುತ್ತಾರೆ ಎಂದು ನನಗೆ ಒಂದು ದೊಡ್ಡ ಭಾಷಣ ಬಿಗಿದ. ಮಂಜ ಮಾತ್ರ ನನ್ನ ಮುಖ ನೋಡಿ ನಕ್ಕಿದ್ದೆ ನಕ್ಕಿದ್ದು.

Monday, July 23, 2012

ಕಮಲೇ ಕಮಲೋತ್ಪತ್ತಿಃ....

ಮೊನ್ನೆ ನನ್ನ ಹಳೆಯ ಮಿತ್ರ ಪ್ರಶಾಂತ ಗಾಂಧೀ-ಬಜಾರಿನಲ್ಲಿ ಭೇಟಿಯಾದ, ಅವನನ್ನು ನಾವೆಲ್ಲರೂ ಪ್ರಳಯಾಂತಕ ಅಥವಾ ಪ್ರಣಯಾoತಕ ಎಂದು ಸಂಭೋದಿಸುತ್ತಿದ್ದೆವು. ನಮ್ಮ ಮಂಜ ಕೂಡ ಅವನಿಗೆ ಹೆದರುತ್ತಿದ್ದ.ಎಲ್ಲ ಕ್ಷೇಮ ಸಮಾಚಾರ ಅದ ಮೇಲೆ, ನಾನು ಬ್ಲಾಗ್,ಕಥೆ ಕವನ ಬರೆಯುತ್ತ ಇರುತ್ತೇನೆ ಎಂದಾಗ, ನನ್ನ ಗೆಳೆಯ ಪ್ರಶಾಂತ ಅಪಾದಮಸ್ತಕ ವಿಚಿತ್ರವಾಗಿ ನೋಡಿ, ನಗಲಾರಂಬಿಸಿದ. ಏಕೆ? ಎಂದು ಕೇಳಿದೆ. ನಿನಗೆ ಬರಹಗಾರರಿಗೆ ಇರಬೇಕಾದ ಆಭೂಷಣವೆ ಇಲ್ಲ ಎಂದ. ಏನಪ್ಪಾ? ಇರಬೇಕು ಎಂದು ಕೇಳಿದಾಗ, ನಿನಗೆ ಮೊದಲು ಒಂದು ಕನ್ನಡಕ ಇರಬೇಕು. ಅದು ಇಲ್ಲದಿದ್ದರೆ ಯಾರು ನೀನು ಒಬ್ಬ ಬರಹಗಾರ ಎಂದು ನಂಬುವುದಿಲ್ಲ ಎಂದ. ಕನ್ನಡಕದಲ್ಲಿ ಕನ್ನಡ ಅಡಕವಾಗಿದೆ ಗೊತ್ತ? ಎಂದು ಹಿಯಾಳಿಸಿದ. ಕಣ್ಣ ಸನ್ನೆಗಳನ್ನೇ ಅರ್ಥ ಮಾಡಿಕೊಳ್ಳೋ ಈ ಕಣ್ಣಿಗೆ, ಇಷ್ಟೊಂದು ಜೋರಾಗಿ ಹೇಳಿದರೆ ತಿಳಿಯದೆ ಇದ್ದೀತೆ?. ಒಂದೇ ಸಮನೆ ನಖರಾ ಮಾಡಹತ್ತಿದವು.

ಸಂಜೆ ಮನೆಗೆ ಹೋಗಿ, ಮಡದಿಗೆ ವಿಷಯ ತಿಳಿಸಿದೆ. ನೋಡೇ ನಾನು ಗಣೇಶನ ಮಂತ್ರ "ವಂದೇ ದೃಷ್ಟಿ ಗಣೇಶಂ ದೃಷ್ಟಿ ದೋಷಕಂ ನಾಶಕಂ ಸಮಸ್ತ ಸಿದ್ಧಿ ನಾಯಕಂ ನಮೋ ನಮೋ ವಿನಾಯಕ" ಎಂದು ಗಣೇಶನಿಗೆ ದಿನವು ಪ್ರಾರ್ಥನೆ ಮಾಡುತ್ತೇನೆ ಆದರೂ ಈ ದೃಷ್ಟಿ ದೋಷ ಏಕೆ? ಬಂತು ಎಂದೆ. ರೀ ನಿಮ್ಮದೊಂದು ಕಥೆ ಆಯಿತು. ಇನ್ನೊಬ್ಬರ ದೃಷ್ಟಿ ನಿಮ್ಮ ಮೇಲೆ ಬೀಳದಿರಲಿ ಎಂಬುದಕ್ಕಾಗಿ ಇರುವ ಮಂತ್ರ ಅದು. ನಿಮಗೆ ದೃಷ್ಟಿ ದೋಷ ಬರದಿರಲಿ ಎಂದು ಅಲ್ಲ ಎಂದಳು. ನೀವು ಹೇಳುವುದಾದರೆ ಸಂಸ್ಕಾರ ಇರುವವರು ಎಂದರೆ Some ಕಾರಗಳು ಇರುವವರು ಅಥವಾ ಸಾವುಕಾರರು ಎನ್ನುವ ಹಾಗಿತ್ತು ನಿಮ್ಮ ಧಾಟಿ ಎಂದಳು. ಲೇ ನಾನು ಅದನ್ನೇ ಹೇಳಿದ್ದು, ನನಗೆ ಸಂಸ್ಕೃತ ಅರ್ಥ ಆಗುತ್ತೆ,ಅವನ ದೃಷ್ಟಿ ನನ್ನ ಕಣ್ಣು ಮೇಲೆ ಬಿದ್ದು ನನಗೆ ಕಣ್ಣು ನೋವು ಶುರು ಆಗಿದ್ದು ತಾನೇ? ಎಂದೆ. ಅದು ಸರಿ ಎನ್ನಿ ಎಂದಳು. ಬನ್ನಿ ಡಾಕ್ಟರ ಬಳಿ ಹೋಗೋಣ ಎಂದು ಹೇಳಿದಳು.

ತುಂಬಾ ಸುತ್ತಾಡಿದರು ಒಂದು ಕಣ್ಣಿನ ವೈಧ್ಯರು ಸಿಗಲಿಲ್ಲ, ಎಲ್ಲಿ ನೋಡಿದರು ಬರಿ ದಂತ ವೈಧ್ಯರು. ೩೨ ಇರುವ ದಂತಗಳಿಗೆ ಸಿಗುವ ಆಧ್ಯತೆ ಬರಿ ಎರಡು ಇರುವ ನಮ್ಮ ಕಣ್ಣುಗಳಿಗೆ ಹೇಗೆ ತಾನೇ ಸಿಕ್ಕಿತು?. ಕಡೆಗೆ ಒಂದು ಮೆಡಿಕಲ್ ಅಂಗಡಿಯವರಿಗೆ ಒಬ್ಬ ಡಾಕ್ಟರ ವಿಳಾಸ ಕೇಳಿ ವೈಧ್ಯರ ಬಳಿ ಹೋದೆವು.

ಡಾಕ್ಟರರು ಒಬ್ಬ ಮನುಷ್ಯನ ಜೊತೆ ಜಗಳ ಮಾಡುತ್ತಿದ್ದರು. ನಾನು ಬೇಡ ಎಂದು ಹೊರಗೆ ಹೋಗುತ್ತಿದ್ದಾಗ, ಅಲ್ಲೇ ಇದ್ದ ರಿಸೆಪ್ಶನಿಷ್ಟ್ ತನ್ನ ನಿಷ್ಠೆ ಮೆರೆದು ಕರೆದು ಕೂಡಿಸಿದಳು. ವಿಧಿ ಇಲ್ಲದೆ ಕುಳಿತೆ. ನನ್ನ ಸರದಿ ಬಂದಾಗ ಒಳಗಡೆ ಹೋದೆ. ಡಾಕ್ಟರ ಜಗಳ ಮುಗಿಸಿ ಶಾಂತವಾಗಿದ್ದರು. ಆದರೂ ನಾನೇ ಕೆಣಕಿ ಕೇಳಿದೆ ಏನು? ಆಯಿತು ಎಂದು. ಡಾಕ್ಟರ ನಿಮ್ಮ ಕಣ್ಣಲ್ಲಿ ಹೊಳಪು ಇದೆ ಎಂದೆ. ಅದಕ್ಕೆ ನನ್ನ ಜೊತೆ ಜಗಳ ಮಾಡುತ್ತಿದ್ದರು ಎಂದರು. ನಾನು ಅದಕ್ಕೆ ಏನು? ತಪ್ಪು ಎಂದೆ. ಅವರು ತಪ್ಪು ತಿಳಿದು ನನ್ನನ್ನು ಏನು? ನಾಯಿ, ಬೆಕ್ಕಿಗೆ ಹೊಲಿಸುತ್ತಿ ಎಂದು ತಿಳಿದು ಜಗಳ ಮಾಡಲು ಶುರು ಮಾಡಿದ್ದರು. ನಾನು ಮತ್ತೆ ಸುಧಾರಿಸಿ ನಿಮ್ಮ ಕಣ್ಣಲ್ಲಿ ಕಾಂತಿ ಇದೆ ಎಂದೆ. ಇನ್ನಷ್ಟು ಕೋಪ ಮಾಡಿಕೊಂಡು ಬಿಟ್ಟರು. ಎಲ್ಲರು ಹೀಗೆ ಹೇಳಿ.. ಹೇಳಿ.. ಅವರಿಗೆ ಯಾವ ಹುಡುಗಿಯ ಕಾಂತನಾಗಿ (ಮದುವೆನೇ) ಮಾಡಲಿಲ್ಲವಂತೆ. ಅದಕ್ಕೆ ಇನ್ನು ಸ್ವಲ್ಪ ಕಂಠ ಬಿರುಯುವ ಹಾಗೆ ಒದರಿದರು ಎಂದು ತಮ್ಮ ಅಳಲನ್ನು ತೋಡಿಕೊಂಡರು. ಪಾಪ ಡಾಕ್ಟರರನ್ನು ನೋಡಿ ಪ್ರಶಂಸೆ ಮಾಡಿ ಬೈಸಿಕೊಂಡದ್ದು ನೋಡಿ ನಗು ಬಂತು ಆದರೂ, ನಾನೇ ಸಮಾಧಾನಿಸಿದೆ.

ಡಾಕ್ಟರ ಎಲ್ಲ ಪರೀಕ್ಷಿಸಿ ನಿಮಗೆ ಕನ್ನಡಕ ಬಂದಿದೆ ಎಂದು ಹೇಳಿದರು. ವಿಧಿ ಇಲ್ಲದೆ ಕನ್ನಡಕ ಆರ್ಡರ್ ಮಾಡಿ ಬಂದೆ. ಮರುದಿನ ಕನ್ನಡಕ ತೆಗೆದುಕೊಳ್ಳಲು ಹೋದಾಗ, ಅಲ್ಲೇ ಗೋಡೆ ಮೇಲೆ ಹಾಕಿರುವ ಐಶ್ವರ್ಯ ರೈ ಫೋಟೋ ನೋಡುತ್ತಾ ಕುಳಿತಾಗ, ನನ್ನ ಮಡದಿ ಏನ್ರೀ ಏನು ನೋಡುತ್ತ ಇದ್ದೀರಾ? ಎಂದಳು, ನಾನು ನೇತ್ರ ದಾನದ ಜಾಹಿರಾತು ನೋಡುತ್ತಾ ಇದ್ದೇನೆ ಎಂದೆ. ನಿಮ್ಮದು ಗೊತ್ತಿಲ್ಲವಾ ಸುಮ್ಮನೆ ಬನ್ನಿ ಎಂದಳು. ನೀವು ನೇತ್ರ ದಾನ ಮಾಡಿದರೆ, ಅದರ ಜೊತೆ ಕನ್ನಡಕ ಕೂಡ ಕೊಡಬೇಕು ಗೊತ್ತ ಎಂದಳು.ಆಮೇಲೆ ಬಿಲ್ಲು ನೋಡಿ, ಬರೀ ಎರಡುನುರಾ ಎಪ್ಪತ್ತು ಎಂದು ಖುಷಿಯಾಗಿ ಕೊಡಲು ಹೋದಾಗ, ನೀವು ಕನ್ನಡಕ ಧರಿಸಿ ನೋಡಿ, ಆಮೇಲೆ ಬಿಲ್ಲು ಕೊಡಿ ಎಂದು ಡಾಕ್ಟರ ಹೇಳಿದರು. ಕನ್ನಡಕ ಧರಿಸಿ ಬಿಲ್ಲು 2700 ನೋಡಿ ದಿಕ್ಕೇ ತೋಚದಾಗಿತ್ತು. ಗಾಂಧೀಜಿಯ ಚಿತ್ರವಿರುವ ನೋಟುಗಳು ನನ್ನ ನೋಡಿ ನಕ್ಕ ಹಾಗೆ ಅನ್ನಿಸಿತು, ವಿಧಿ ಇಲ್ಲದೆ ದುಡ್ಡು ಕೊಟ್ಟು ಕನ್ನಡಕ ತೆಗೆದುಕೊಂಡು ಬಂದೆ.

ಮರುದಿನ ತಿಂಡಿ ತಿನ್ನುವಾಗ, ಊಟ ಮಾಡುವಾಗ ಮತ್ತು ಕಾಫಿ ಕುಡಿಯುವಾಗ ನನಗೆ ಕನ್ನಡಕ ಅಡ್ಡ ಬಂದ ಹಾಗೆ ಅನ್ನಿಸುತಿತ್ತು.

ನಾನು ಕನ್ನಡಕ ಹಾಕಿ ಕೊಂಡು ಮಂಜನ ಮನೆಗೆ ಹೋದಾಗ ಮಂಜ ಏನಪ್ಪಾ? ಚಾಳೀಸು, ಹಾಗಾದರೆ ಚಾಲೀಸ್ ವರ್ಷ ಆಯ್ತಾ ಎಂದು ಹಿಯಾಳಿಸಿದ. ಹಾಗಾದರೆ ನಿನ್ನ ವಯಸ್ಸು ಐವತ್ತು ತುಂಬಾ ಬೇಗನೆ ಆಗಿ ಬಿಟ್ಟಿತ್ತು ಎಂದೆ. ಏಕೆಂದರೆ? ಮಂಜ ತನ್ನ ಕನ್ನಡಕ ಹಾಕಿಕೊಳ್ಳಲು ಶುರು ಮಾಡಿದ್ದು ಹತ್ತು ವರ್ಷದ ಹಿಂದೆ. ಮಂಜ ತನ್ನ ಮಡದಿಗೆ ಐದು ನೂರರ ನೋಟು ಖೋಟ ಹೌದೋ ಅಲ್ಲವೋ ಎಂದು ಹೇಗೆ ತಿಳಿಯುವುದು ಗೊತ್ತ? ಎಂದು ಕೇಳಿದ. ಅದಕ್ಕೆ ಅವನ ಮಡದಿ ಹೇಗೆ? ಎಂದು ಕೇಳಿದಳು. ಅದಕ್ಕೆ ಅವಳ ಬಳಿ ಇದ್ದ ಒಂದೇ ನೋಟನ್ನು ತೆಗೆದುಕೊಂಡು ಅದನ್ನು ಜೋರಾಗಿ ಝಾಡಿಸಿ, ನೋಡು ಕೆಳಗಡೆ ಏನಾದರು ಬಿತ್ತಾ? ಎಂದ. ಅವಳು ಮತ್ತು ನಾನು ಕೆಳಗಡೆ ನೋಡುತ್ತಿದ್ದರೆ, ನಗುತ್ತ ನೋಡು ಗಾಂಧೀಜಿ ಕನ್ನಡಕ ಕೆಳಗೆ ಬಿಳಲಿಲ್ಲ, ಇದು ನಿಜವಾದ ನೋಟು ಎನ್ನುತ್ತಾ, ಸುಮ್ಮನೆ ಅದನ್ನು ತನ್ನ ಜೋಬಿನೊಳಗೆ ಇಳಿಸಿದ. ಮಂಜನ ಮಡದಿ ನಗುತ್ತ ಒಳಗಡೆ ಕಾಫಿ ಮಾಡಿಕೊಂಡು ಬರಲು ಹೋದಳು. ಆಮೇಲೆ ಮಂಜ ಒಂದು ಗುಟ್ಟು, ನನ್ನ ಕನ್ನಡಕಕ್ಕೆ ನಂಬರ್ ಇಲ್ಲ, ಹಾಗೆ ಸುಮ್ಮನೆ ಹಾಕಿ ಕೊಳ್ಳುತ್ತೇನೆ. ಇದರಿಂದ ಒಂದು ಫಾಯಿದೆ ಇದೆ ಗೊತ್ತ?. ಇದನ್ನು ಹಾಕಿಕೊಂಡಾಗ ನೀನು ಏನು? ಬೇಕಾದರೂ ನೋಡಿದರು ನೋಡುವವರಿಗೆ ತಿಳಿಯುವುದಿಲ್ಲ.ಮತ್ತೆ ಕೆಲವರು ಸುಳ್ಳು ಹೇಳುತ್ತಿದ್ದಾರೆ ಎಂದು ಅರಿಯಲು ಅವರ ಕಣ್ಣುಗಳೇ ಸಾಕ್ಷಿ. ಅದ್ದರಿಂದ ಕಣ್ಣುಗಳು ನಮ್ಮ ಎಷ್ಟೋ ಭಾವನೆಯನ್ನು ಮುಚ್ಚಿಡಲು ತುಂಬಾ ಸಹಾಯಕಾರಿ. "ಕಮಲೇ ಕಮಲೋತ್ಪತ್ತಿಃ" ಎಂದು ನೀನು ಕೇಳಿಲ್ಲವೇ ಹೆಚ್ಚು ಜನ ತಮ್ಮ ಭಾವನೆಗಳನ್ನು ಹಿಡಿದಿರಲು ಸಾಧ್ಯವಾಗದೆ "ಕಮಲೇ ಕಲಹೋತ್ಪತ್ತಿಃ " ಆಗಿ ಕಲಹಕ್ಕೆ ನಾಂದಿ ಹಾಡುತ್ತಾರೆ. ಅದರ ಬದಲು ಕನ್ನಡಕ ಧರಿಸುವುದರಿಂದ ಇದನ್ನು ತಡೆಯಬಹುದು. ಈ ಕನ್ನಡಕದಿಂದ ಕಲಹ ಹೇಗೆ ಆಗುತ್ತೆ ಎಂದು ಹೇಳುತ್ತೇನೆ ಕೇಳು, ಒಮ್ಮೆ ನನ್ನ ಅತ್ತೆ ಕನ್ನಡಕದ ನಂಬರ್ ಬದಲಾಗಿದ್ದರೂ, ಅದನ್ನು ಬದಲಿಸಿರಲಿಲ್ಲ. ಏಕೆಂದರೆ ಅವರ ಕನ್ನಡಕ ಅವರ ಪ್ರೀತಿಯ ಅಪ್ಪ ಕೊಡಿಸಿದ್ದು ಎಂದು. ಒಮ್ಮೆ ಹೀಗೆ ಸಂಪಿಗೆ ಹೂವು ಏನು? ರೇಟ್ ಎಂದು ಒಬ್ಬರನ್ನು ಕೇಳಿದರು, ಪಾಪ ಅವರು ಅದನ್ನು ತಮ್ಮ ಮನೆಗೆಂದು ತೆಗೆದುಕೊಂಡು ಹೊರಟಿದ್ದರು. ಇದು ಕೊಡುವುದಕ್ಕೆ ಅಲ್ಲ ಎಂದರು ಕೇಳದೆ, ಎಷ್ಟು ಸೊಕ್ಕು ನಿನಗೆ ಎಂದು ಜಗಳ ಶುರು ಮಾಡಿದ್ದರು. ಪಾಪ ಅವರು ಸ್ವಲ್ಪ ಹೂವು ಕೊಟ್ಟು ಕಳುಹಿಸಿದರು, ನಮ್ಮ ಅತ್ತೆಗೆ ಎಂದು ನಗಹತ್ತಿದ. ಕಾಮಾಲೆ ಕಣ್ಣಿಗೆ ಜಗತ್ತೇ ಹಳದಿ ಅಂತೆ.ಇದೆಲ್ಲವೂ ಮಾಡಿದ್ದೂ ಇವರ ಅಮ್ಮನೇ ಎಂದಾಗ ನನಗೂ ನಗು ತಡಿಯಲು ಆಗಲಿಲ್ಲ. ನಿಮ್ಮ ಗೆಳೆಯನ ಮನುಸ್ಸು ಹೀಗೆ, ಎಲ್ಲರನ್ನು ತಮ್ಮಂತೆ ಅಳೆಯುತ್ತಾರೆ ಎಂದು ಎನ್ನುತ್ತಾ ಮಂಜನ ಮಡದಿ ಬಂದು ಕಾಫಿ ಕೊಟ್ಟರು. ಕಡೆಗೆ ಕಾಫಿ ಕುಡಿದು ಮುಗಿಸಿ ಮನೆ ದಾರಿ ಹಿಡಿದೆ.

Wednesday, July 4, 2012

ದಂತದ ಗೊಂಬೆ....

ಮಂಜ ಮತ್ತು ಸುಧೀರ್ ಇಬ್ಬರ ಮನೆ ಅಕ್ಕ-ಪಕ್ಕ ಇತ್ತು. ಇಬ್ಬರು ಒಂದೇ ಸಮಯದಲ್ಲಿ ಮದುವೆಗೆಂದು ಹೆಣ್ಣು ಹುಡುಕುತ್ತಿದ್ದರು. ಒಂದು ದಿವಸ ಮಂಜ ಒಂದು ಹೆಣ್ಣು ನೋಡುವ ಶಾಸ್ತ್ರ ಇತ್ತು.ಸಂಜೆ ಸುಧೀರ್ ನ ಅಮ್ಮ ಹೆಣ್ಣು ಹೆಂಗಿತ್ತು ಎಂದು ಮಂಜನನ್ನು ವಿಚಾರಿಸಿದರು. ಅದಕ್ಕೆ ಮಂಜ ಹುಡುಗಿ ದಂತದ ಗೊಂಬೆ ಹಾಗೆ ಇದ್ದಳು, ಸೌಂದರ್ಯ ದೇವತೆ ಆದರೆ, ನನಗೆ ಅವಳ ಖರ್ಚನ್ನು ತೂಗಿಸಲು ಆಗುವುದಿಲ್ಲ ಎಂದ. ಹಾಗೇನಾದರು ಮದುವೆ ಆದರೆ, ಒಂದು ಬ್ಯಾಂಕ್ ಲೂಟಿ ಮಾಡಬೇಕು ಅಷ್ಟೇ ಅಂದ. ಅಲ್ಲೇ ಇದ್ದ ಸುಧೀರ್ ಸುಮ್ಮನಿರದೆ ಹಾಗಾದರೆ, ನನಗೆ ಅವಳನ್ನು ತೋರಿಸು ಎಂದ. ಏಕೆಂದರೆ, ಸುಧೀರ್ ನಿಗೆ ತಲೆ ಇಲ್ಲದಿದ್ದರೂ ತಲೆತಲಾಂತರದಿಂದ ಬಂದ ಅಸ್ತಿಗೇನು ಕಡಿಮೆ ಇರಲಿಲ್ಲ. ಅದನ್ನು ಕೇಳಿದ ಅವರ ಅಮ್ಮ ಇದೇನೋ? ಕಪಿ ಚೇಷ್ಟೆ ಎಂದು ಬೈದರು. ಬೈದರೂ ಬೆಂಬಿಡದ ಬೇತಾಳದಂತೆ ಕಾಡಿ ಅವರ ಮನೆ ವಿಳಾಸ ಮತ್ತು ಕುಂಡಲಿ ಕೇಳಿ ಪಡೆದ. ಹೆಣ್ಣು ಗಂಡಿನ ಮನೆಯಲ್ಲೇ ನೋಡುವ ಶಾಸ್ತ್ರ ಇದ್ದರು, ಅವರಿಗೆ ಕರೆ ಮಾಡಿ ನಾವೇ ಹೆಣ್ಣು ನೋಡಲು ಬರುತ್ತೇವೆ ಎಂದು ಶಾಸ್ತ್ರಕ್ಕೆ ಶಸ್ತ್ರ ಚಿಕಿತ್ಸೆ ಮಾಡಿ, ಅವರ ಅಮ್ಮ ಬೇಡವೆಂದರೂ ಕೇಳದೆ ಹೇಳಿದ. ಅವರ ಮನೆಯವರು ಬರುವವರನ್ನು ಬೇಡವೆನ್ನಲು ಆಗದೆ ಬನ್ನಿ ಎಂದರು. ಸುಧೀರ್ ನ ಖುಷಿಗೆ ಪಾರವೇ ಇರಲಿಲ್ಲ. ಎಲ್ಲರಿಗೂ ಬೇಡ ಬೇಡ ಎಂದರು ಕೇಳದೆ ಪಾರ್ಟಿ ಕೊಡಿಸಿದ್ದ. ಎಲ್ಲರು ನನ್ನ ಸುಲವಾಗಿ ದೇವರಲ್ಲಿ ಪ್ರಾರ್ಥಿಸಿ ಎಂದು ಕುಡಿದ ಅಮಲಿನಲ್ಲಿ ವಿನಂತಿಸಿದ್ದ. ಮಂಜ ಸುಧೀರನಿಗೆ ಹಣ್ಣು ತೆಗೆದು ಕೊಂಡು ಹೋಗು ಎಂದು ಹೇಳಿದ್ದ.

 ಮರುದಿನ ಎಲ್ಲರೂ ಮಂಜನ ಸಮೇತವಾಗಿ ಹೆಣ್ಣಿನ ಮನೆಗೆ ಹೆಣ್ಣು ನೋಡಲು ಹೋಗಿದ್ದಾಗಿತ್ತು. ನಾವು ಹೋಗಿರುವಷ್ಟು ಜನರನ್ನು ನೋಡಿ ಹೆಣ್ಣಿನ ಮನೆಯವರು ಗಾಬರಿ ಆಗಿದ್ದರು. ನಾವು ನಿಶ್ಚಿತಾರ್ಥ ಮುಗಿಸಿಕೊಂಡೆ ಹೋಗುತ್ತೇವೆ ಎಂದು ತಿಳಿದುಕೊಂಡಿದ್ದರು. ಸುಧೀರ ಹೆಣ್ಣು ನೋಡಿ ನಾಚಿ ನೀರಾಗಿದ್ದ. ಹೆಣ್ಣು ನಿಜವಾಗಿಯು ದಂತದ ಗೊಂಬೆ ಹಾಗೆಯೇ ಇದ್ದಳು. ಅವಳ ಸಿಂಗಾರ ಕೂಡ ಅಷ್ಟೇ ಭರ್ಜರಿ ಆಗಿತ್ತು. ಸುಧೀರ ಮರು ಮಾತಿಲ್ಲದೆ ಒಪ್ಪಿ ಬಿಟ್ಟ. ಮದುವೆ ನಿಶ್ಚಿತಾರ್ಥ ಕೂಡ ನಿರ್ಧರಿಸಿದರು. ಆದರೆ ಹೆಣ್ಣಿನ ತಂದೆ ನಿಮ್ಮ ಬಳಗ ತುಂಬಾ ದೊಡ್ಡದು ಎಂದು ಕಾಣುತ್ತೆ ಎಂದರು. ಹಾಗೇನಿಲ್ಲ ಮಾವಾ ಇವರೆಲ್ಲಾ ನನ್ನ ಗೆಳೆಯರು ಎಂದು ಹೇಳಿ ಸುಮ್ಮನಾಗಿಸಿದ್ದ.

 ಒಂದು ದಿನ ಸುಧೀರ ಅವಳನ್ನು ಭೇಟಿಯಾಗಲು ಹೋಗುತ್ತಿದ್ದೇನೆ. ಏನು? ಮಾತನಾಡಬೇಕು ಹೇಳು ಎಂದು ಮಂಜನ ತಲೆ ತಿಂದಿದ್ದ. ಹೋಗಿ ಅವಳ ಹೆಸರು ಕೇಳಬೇಡ ಎಂದ. ಅದಕ್ಕೆ ಸುಧೀರ ನನಗೇನು ಅಷ್ಟು ತಲೆ ಇಲ್ಲವೇ ಅವಳ ಹೆಸರು ಪ್ರತಿಮಾ ಅದು ನನಗೆ ಗೊತ್ತು. ಮತ್ತೆ ಏನಾದರು ಹೇಳು ಎಂದು ಕೇಳಿದ್ದ. ಮಂಜ ಅವನಿಗೆ ಭೀತಿಯಿಂದ ವರ್ತಿಸಬೇಡ, ನಿನ್ನ ಹೆಸರು ಸುಧೀರ ನೆನಪಿರಲಿ ಎಂದು ತಾಕೀತ್ ಮಾಡಿದ್ದ. ಮತ್ತು ಒಂದು ಚಾಕಲೇಟ್ ತೆಗೆದುಕೊಂಡು ಹೋಗು ಎಂದು ಹೇಳಿದ್ದ. ಮರುದಿನ ಸುಧೀರನ ತುಟಿಗೆ ದೊಡ್ಡದಾದ ಗಾಯ ಆಗಿತ್ತು. ಏನೋ? ಇದು ಎಂದು ಕೇಳಿದರೂ ಯಾರಿಗೂ ಹೇಳಲಿಲ್ಲ.

ಮದುವೆ ನಿಶ್ಚಿತಾರ್ಥ ದಿವಸ ಮಂಜ ಸುಧೀರನಿಗೆ ಟೀ-ಶರ್ಟ್ ಹಾಕಿಕೋ ಎಂದು ಹೇಳಿದ್ದ. ಸುಧೀರ ಮಂಜನ ಮಾತಿನಂತೆ ಟೀ-ಶರ್ಟ್ ಹಾಕಿಕೊಂಡು ಮಣೆ ಮೇಲೆ ಕೂಡುತ್ತಿದ್ದಾಗ, ಎಲ್ಲರೂ ಸುಧೀರನನ್ನು ನೋಡಿ ನಗಲು ಶುರು ಮಾಡಿದರು. ಏಕೆಂದರೆ? ಸುಧೀರ್ ಬನಿಯನ್ನು ತೋಳು ಅವನ ಟೀ-ಶರ್ಟ್ ಕಿಂತ ದೊಡ್ಡದು ಇತ್ತು. ಅದನ್ನು ನೋಡಿ ಕೆಳ ಮಾರಿ ಮಾಡಿ ಕುಳಿತಿದ್ದ ಹೆಣ್ಣು ಕೂಡ ನೋಡಿ ನಕ್ಕಾಗ, ನಮಗೆ ಅವಳ ನಿಜವಾದ ದಂತ ದರ್ಶನ ಆದ ಮೇಲೆ, ದೂರ ದೂರ ಇರುವ ದೊಡ್ಡ ಚೂಪಾದ ದಂತಿ ಪಂಕ್ತಿಗಳು. ಸುಧೀರನಿಗೆ ಏನಾಗಿತ್ತು? ಎಂದು ಗೊತ್ತಾಗಿತ್ತು. ಆದರೆ ಇದರಲ್ಲಿ ಪಾಪ ಮಂಜನದು ಏನು? ತಪ್ಪು ಇರಲಿಲ್ಲ, ಏಕೆಂದರೆ ಅವನಿಗೆ ಆ ವಿಷಯ ತಿಳಿದಿದ್ದೆ ಅವಾಗ. ಸುಧೀರ್ ತಲೆ ಎತ್ತುವ ಧೈರ್ಯ ಮಾಡಲಿಲ್ಲ. ಕಡೆಗೆ ಮಂಜ ಅವನಿಗೆ ಟೀ-ಶರ್ಟ್ ಹೇಳಿದ್ದೆ ತಪ್ಪಾಯಿತು ಎಂದೆನಿಸಿ, ಅವನಿಗೆ ಶರ್ಟ್ ಹಾಕಿಕೊಂಡು ಬರಲು ಹೇಳಿದ. ಮತ್ತೆ ನಿಶ್ಚಿತಾರ್ಥ ಮುಗಿಸಿದರು. ಆಗ ಮದುಮಗಳ ತಂದೆ ನಾವು ನಮ್ಮ ಪುಟ್ಟಿಯನ್ನು ತುಂಬಾ ಪ್ರೀತಿಯಿಂದ ಬೆಳೆಸಿದ್ದೇವೆ. ಏನೂ ಕಡಿಮೆ ಮಾಡಿಲ್ಲ. ಚೆನ್ನಾಗಿ ನೋಡಿಕೋ ಎಂದು ಹೇಳಿದರು.

 ಮದುವೆ ಆಗುವವರೆಗೂ ನಾವು ಸುಧೀರನಿಗೆ "ಪ್ರತಿಮಾ ಚುಂಬನಂ ದಂತ ಭಗ್ನಂ" ಮತ್ತು ಅವನೇ ಅವಸರ ಮಾಡಿಕೊಂಡು ಅಪಘಾತ ಮಾಡಿಕೊಂಡ ಎಂದು ತುಂಬಾ ದಿವಸ ಅವನ ತುಟಿ ನೋಡಿ ಕಾಡಿದ್ದೆವು. ಆದರೂ ಏನು ಮಾಡಲು ಸಾಧ್ಯವಿರಲಿಲ್ಲ ಪಾಲಿಗೆ ಬಂದಿದ್ದು ಪಂಚಾಮೃತ ಎಂದು ಸುಮ್ಮನೆ ಇದ್ದ. ಮದುವೆ ವಿಚಾರವಾಗಿ ಅವನ ಮಾವ ಬಂದಾಗ, ನನ್ನ ಹಲಕಟ ಮಾವ ಬಂದಿದ್ದ ಎಂದು ಹಲ್ಲು ಕಡಿಯುತ್ತಿದ್ದ.ಅದನ್ನು ತಿಳಿದು ಅವನ ಮಾವ ಅವಳ ಹಲ್ಲುಗಳನ್ನ ಸರಿ ಮಾಡಿಸಿದ್ದರು.

ಮದುವೆಯಲ್ಲಿ ಅವಳು ಪ್ರತಿ ಮಾತಿಗೂ ನಗುತ್ತಿದ್ದಳು. ಮದುವೆ ಆದ ಮೇಲೆ ತಿಳಿಯಿತು ಅವರ ಅಪ್ಪ ಅವಳಿಗೆ ಚಿಕ್ಕವಳಿದ್ದಾಗ ತುಂಬಾ ಚಾಕ್ಲೇಟ್ ತಂದು ಕೊಡುತ್ತಿದ್ದರು. ಅದಕ್ಕೆ ಹಲ್ಲುಗಳು ಬೇಗನೆ ಹುಳುಕು ಆಗಿ ಬಿದ್ದು, ದೊಡ್ಡವಾಗಿ ಬಂದಿದ್ದವು ಎಂದು.ಈಗ ಮಂಜನನ್ನು ದಿನವು ಹೊಗಳುತ್ತಾ ಇರುತ್ತಾನೆ. ಮತ್ತು "ಹೇ...ಚಿನ್ನದ ಬೊಂಬೆಯಲ್ಲಾ, ದಂತದ ಬೊಂಬೆಯಲ್ಲಾ...ಬುದ್ಧಿ ಇರುವ ಬೊಂಬೆಯೂ...ಕಾಲವು ಕುಣಿಸಿದಂತೆ.., ಅ ವಿಧಿ ಏಣಿಸಿದಂತೆ.., ಅಡುವ ಸಮಯದಗೊಂಬೆ ಮಾನವ.."ಅನ್ನುವ ಬದಲು ಅಡುವ ಸಮಯದ ಗೊಂಬೆ ಮಾವನ ಎಂದು ಹಾಡುತ್ತ ಅವಳ ಕೈಯಲ್ಲಿ ಆಡುವ ಸಮಯದ ಗೊಂಬೆ ಆಗಿದ್ದಾನೆ.

Thursday, June 21, 2012

ಕೋಟಿ ಕೊಟ್ಟರು ಸಿಗದ ಲಕ್ಷ್ಯ ....

ಏನು? ಎಂದು ಮಡದಿಗೆ ಕೇಳಿದೆ. ಅವಳು ಮತ್ತೆ ನನಗೆ ಏನು? ಎಂದು ಕೇಳಿದಳು. ಏನೋ ಅಂದ ಹಾಗೆ ಇತ್ತು ಎಂದೆ. ನಿಮ್ಮ ಪೂರ್ವಜರು ವಿಜಾಪುರದವರ ಎಂದು ಕೇಳಿದೆ ಎಂದಳು. ಏಕೆ? ಎಂದು ಕೇಳಿದೆ. ನಿಮಗೆ ಪ್ರತಿಧ್ವನಿ ಕೇಳುವವರೆಗೂ ಉತ್ತರಿಸುವುದಲ್ಲ ಎಂದು ಕುಹಕವಾಡಿದಳು. ನಿನ್ನೆ ಆಡಿದ ಮಾತು ಇವತ್ತು ಕೇಳಿಸಿದೆ ನಾನು ಸುಮ್ಮನೆ ಇದ್ದರು, ಕರೆದ ಹಾಗೆ ಆಯಿತು ಎಂದರೆ ಏನು ಹೇಳುವುದು ಎಂದಳು. ನಿನ್ನೆ ಅವಳು ಏನೋ ಹೇಳಲು ಬಂದಾಗ ನನ್ನ ಲಕ್ಷ್ಯ ಬೇರೆಲ್ಲೋ ಇತ್ತು. ಹೀಗಾಗಿ ಅವಳಿಗೆ ಉತ್ತರಸಲಿಲ್ಲ. ಹೀಗಾಗಿ ಮತ್ತೊಮ್ಮೆ ಏನು? ಎಂದು ಕೇಳಿದಾಗ ಏನು ಇಲ್ಲ ಎಂದು ಮುನಿಸಿಕೊಂಡಿದ್ದಳು.

ಒಮ್ಮೆ ಮೈಸೂರಿಗೆ ನಮ್ಮ ನಿರ್ದೇಶಕರು ಬ೦ದಿದ್ದರು. ಅವರು ಸ್ನಾನ ಮಾಡುತ್ತೇನೆ ಎ೦ದು ನನಗೆ ಹೇಳಿ ಹೋಗುತ್ತಿದ್ದಾಗ, ನಾನು ಏನೋ? ಯೋಚನೆ ಮಾಡುತ್ತ ಸ್ನಾನಕ್ಕೆ ಹೋಗು ಎಂದು ಹಾಗೆ ಅನ್ನಿಸಿ, ನಾನು ಸ್ನಾನಕ್ಕೆ ಹೊರಟುಹೋದೆ. ಪಾಪ ನಮ್ಮ ನಿರ್ದೇಶಕರು ನನ್ನ ಸ್ನಾನ ಮುಗಿಯುವರಗೆ ಟಾವೆಲ್ ಮೇಲೆ ಹಾಗೆ ನಿಂತಿದ್ದರು. ನಮ್ಮ ಆಫೀಸ್ ಡ್ರೈವರ್ ನಮ್ಮ ನಿರ್ದೇಶಕರ ಪರಿಸ್ತಿತಿ ನೋಡಿ ಒಳಗೊಳಗೇ ನಗುತ್ತಿದ್ದ.

ಒಮ್ಮೆ ಹಾಗೆ ನಾನು ನನ್ನ ಮಗನಿಗೆ ನಿದ್ದೆಯಿಂದ ಎದ್ದು ಬಂದ ಮೇಲೆ, ಏ ಪುಟ್ಟ ಬಾತ್ ರೂಂ ನಲ್ಲಿಯ ಫ್ಯಾನ್ ಬಂದ್ ಮಾಡು ಎಂದೆ. ನನ್ನ ಹೆಂಡತಿ ಮತ್ತು ಮಗ ಇಬ್ಬರು ನಗಲು ಶುರು ಮಾಡಿದರು. ನಿಮ್ಮಪ್ಪ ಲಕ್ಷ್ಯ ಅಷ್ಟೇ ಎಂದಳು. ಕೆಲವೊಮ್ಮೆ ಬೈಕ್ ಹೊಡೆಯುತ್ತ ಪ್ಯಾಂಟಿನಲ್ಲಿ ಬೈಕ್ ಕೀ ಎಲ್ಲಿ ಎಂದು ತಡಕಾಡಿದ್ದು ಇದೆ.

ಒಮ್ಮೆ ನಾನು ಚಿಕ್ಕವನಾಗಿದ್ದಾಗ ನನ್ನ ಅಮ್ಮ ಲಕ್ಷ್ಯ ಬೇರೆ ಎಲ್ಲೋ ಇಟ್ಟು, ನನಗೆ "ಊಟ ಆದಮೇಲೆ ಊಟ ಮಾಡು" ಎಂದು ಹೇಳಿದ್ದಾಗ ನಮ್ಮ ಮನೆಯಲ್ಲಿಯ ಎಲ್ಲರು ನಗೆ ಗಡಲಿನಲ್ಲಿ ತೇಲಿ ಹೋಗಿದ್ದೆವು. ನಾನು ಇಷ್ಟು ಲೇಖನ ಬೇರೆಯುವುದಕ್ಕೆ ಅವಳೇ ಕಾರಣ. ಅವಳು ಅವತ್ತು ನನ್ನನ್ನು ನಿರ್ಲಕ್ಷ್ಯ ಮಾಡಿದ್ದರೆ ನನಗೆ ಏನು? ಬರೆಯಲು ಸಾಧ್ಯವಾಗುತ್ತಿರಲಿಲ್ಲ.

ನಾನು ಒಮ್ಮೆ ಸುಬ್ಬನ ಮನೆಗೆ ಹೋಗಿದ್ದೆ. ಅಲ್ಲೇ ಕುಳಿತಿದ್ದ ಸುಬ್ಬನ ಅಮ್ಮ ನನ್ನನ್ನು ಎಲ್ಲಿ ನಿಮ್ಮ ಸಾಥಿ ಎಂದು ಮಂಜನನ್ನು ವಿಚಾರಿಸಿದರು. ನಾನು ಮಂಜ ಮೋರಿಗೆ ಹೋಗಿದ್ದಾನೆ ಎಂದೆ. ಇಲ್ಲಿ ಯಾವ ಮೋರಿ ಯಾವಾಗ ತೆರೆದಿರುತ್ತೆ ತಿಳಿಯೋಲ್ಲ.. ಪಾಪ ಮಂಜ ಏನಾಯಿತೋ ಏನು? ಎಂದು ಬೈಯಲು ಶುರು ಮಾಡಿದರು. ನಾನು ಅದು ಒಂದು ಅಂಗಡಿಯ ಹೆಸರು ಎಂದು ಹೇಳಿದ ಮೇಲೆ, ನಿಟ್ಟುಸಿರು ಬಿಟ್ಟು ,ಅದೇನು ಅಂತ ಹೆಸರು ಇಡುತ್ತರೋ ಏನೋ? ಎಂದು ಅಂದರು. ನಮ್ಮ ಸುಬ್ಬ ನಮ್ಮ ಅಮ್ಮನ ಲಕ್ಷ್ಯ ಅಷ್ಟೇ... ಅವಳು ಏನೋ ಯೋಚನೆ ಮಾಡುತ್ತಿರುತ್ತಾರೆ. ನಮ್ಮ ಮಾತಿನ ಬಗ್ಗೆ ಲಕ್ಷ್ಯ ಇರುವುದಿಲ್ಲ ಎಂದ. ಅದಕ್ಕೆ ಅವರ ಅಮ್ಮ ಮತ್ತ್ಯಾರ ಬಗ್ಗೆ ಯೋಚಿಸಲಿ ನಿನ್ನ ಬಗ್ಗೆನೇ ಎಂದರು. ನಮ್ಮ ಬಗ್ಗೆ ಯೋಚನೆ ಮಾಡುತ್ತ , ನಮ್ಮ ಮಾತಿಗೆ ಅಲಕ್ಷ್ಯ ಮಾಡುತ್ತಿ ಎಂದು ಸುಬ್ಬ ನಕ್ಕ.

ಒಮ್ಮೆ ಹಾಗೆ ಹೋಗುತ್ತಿದ್ದಾಗ ಮಂಜನನ್ನು ನೋಡಲಿಲ್ಲ. ನಮ್ಮ ಮಂಜ ನನ್ನನ್ನು ಲಕ್ಷ್ಯಾದಿಪತಿಗಳೇ ಎಂದು ತಡೆದು, ಲಕ್ಷ್ಯದ ಬಗ್ಗೆ ಭಾಷಣ ಶುರು ಮಾಡಿದ. ಮಂಜ ನನಗೆ ಈ ಲಕ್ಷ್ಯ ಎನ್ನುವುದು ತುಂಬಾ ಮುಖ್ಯವಾದುದು. ನಾನು ತುಂಬಾ ಸಾರಿ ನೋಡಿದ್ದೇನೆ ನಿನ್ನ ಲಕ್ಷ್ಯ ನಿನ್ನ ಬಳಿ ಇರುವುದಿಲ್ಲ ಎಂದು ಹೇಳಿದ. ನಾವು ಅರೋಗ್ಯವನ್ನು ಅಲಕ್ಷ್ಯ ಮಾಡಿದರೆ ಅಷ್ಟೇ. ಮಾತುಗಳು ಅಷ್ಟೇ ಲಕ್ಷ್ಯವಿಟ್ಟು ಮಾತನಾಡಬೇಕು. ನಿನ್ನ ಲೇಖನಗಳಿಗೆ ಎಂದು ಲಲಿತ ಪ್ರಬಂದ ಎಂದು ಹಾಕಬೇಡ. ಏಕೆಂದರೆ ಲಲಿತ ಎಂಬ ಹೆಸರಿನ ವ್ಯಕ್ತಿ ಬಂದು ಅದು ನನ್ನ ಪ್ರಬಂದ ಎಂದರೆ ಕಷ್ಟ. ಆಮೇಲೆ ನೀನು ಕೋರ್ಟಿಗೆ ಹೋದರು ಪ್ರಯೋಜನ ಇಲ್ಲ. ಏಕೆಂದರೆ ಮೊದಲೇ ಕೋಟಿ-ಕೋಟಿ ಕೇಸ್ ಗಳ ನಡುವೆ ನಿನ್ನ ಕೇಸ್ ನಿರ್ಲಕ್ಷ್ಯ ಆಗುತ್ತೆ ಎಂದು ವ್ಯಂಗ್ಯವಾಡಿದ. ಮತ್ತೆ ನಿನಗೆ ಗೊತ್ತ ಮಹಾಲಕ್ಷ್ಮಿ ಬಳಿ ಹೋಗಿ ಕೋತಿ ಹಾಗೆ ಕೋಟಿ ಕೇಳುವ ನಾವು ಲಕ್ ಮತ್ತು ಲಕ್ಷ್ಯ ಕೇಳುವುದು ಸೂಕ್ತ. ಯಾವತ್ತು ಚೆನ್ನಾಗಿರುವವರನ್ನು ಎಷ್ಟು ಲಕ್ಷಣವಾಗಿದ್ದಾರೆ ಎಂದು ಹೇಳುತ್ತಾರೆ. ಆದರೆ ಅದೇ ಚೆನ್ನಾಗಿ ಇರದವರನ್ನು ಕೋಟಿಯ ಉಪಮೆಯವಾದ ಕೋತಿ ಹಾಗೆ ಇದ್ದಾನೆ ಎಂದು ಹೇಳುವುದ ಉಂಟು. ಈ ಲಕ್ಷ್ಯ ಎನ್ನುವುದು ಕೋಟಿ ಕೊಟ್ಟರು ಸಿಗುವುದಿಲ್ಲ ತಿಳಿಯಿತಾ? ಎಂದು ಭಾಷಣ ಬಿಗಿದ.ಯಾವತ್ತು ಮನುಷ್ಯನ ಮನಸು ಮಗುವಾಗಿ ಇರಬೇಕು. ನಾವು ದೊಡ್ಡವರಾದಂತೆ ದಡ್ದರಾಗುತ್ತೇವೆ. ನಮ್ಮ ಲಕ್ಷ್ಯ ಲಕ್ಷ-ಕೋಟಿ ಕಡೆ ಹೊರಳಿ ನೆಮ್ಮದಿ ಹಾಳು ಮಾಡಿಕೊಳ್ಳುತ್ತೇವೆ. ಮತ್ತೆ ನಾವು ಎಂತಹ ಜನ ಎಂದರೆ ನಿದ್ದೆ ನಿದ್ದೆ ಎಂದು ಸಾಯುತ್ತೇವೆ, ಸಾವು ಬಂದರೆ ಓಡುತ್ತೇವೆ ಎಂದ.

ಅಷ್ಟರಲ್ಲಿ ಮಂಜನ ಮಡದಿ ಕೋಪದಿಂದ ಬಂದು ಮಂಜನ ಬಳಿ ಇದ್ದ ಚೀಲವನ್ನು ಕಸಿದುಕೊಂಡು ಹೊರಟು ಹೋದಳು. ಮಂಜ "ನಿನ್ನ ಜೊತೆ ಮಾತನಾಡುತ್ತ ನಾನು ಹಾಲು ತರುವುದನ್ನೇ ಮರೆತಿದ್ದೆ. ಮಗನಿಗೆ ಸ್ಕೂಲ್ ಗೆ ಲೇಟ್ ಆಗುತ್ತೆ " ಎಂದು ಹೇಳಿ ಮಡದಿಯನ್ನು ಹಿಂಬಾಲಿಸುತ್ತಾ ಹೊರಟು ಹೋದ.