Friday, June 25, 2010

ವಟ ..ವಟ... ಸಾವಿತ್ರಿ

ಮಂಜ ತುಂಬಾ ವಧುಗಳನ್ನು ನೋಡಿದ್ದ. ಕೆಲವು ವಧುಗಳು ಇವನ ತರ್ಲೆ ಪ್ರಶ್ನೆಗಳಿಂದ ಇವನನ್ನು ವರಿಸಲಿಲ್ಲ. ಮತ್ತೆ ಕೆಲವನ್ನು ಇವನೇ ಬೇಡವೆಂದ. ಆದರೆ ಇವನು ಮಾತ್ರ ಹೆಣ್ಣು ನೋಡುವ ಶಾಸ್ತ್ರ ಮಾತ್ರ ಬಿಟ್ಟಿರಲಿಲ್ಲ. ಮತ್ತೊಂದು ದಿನ ಹೆಣ್ಣು ನೋಡಲು ಹೋಗಿದ್ದ. ಆ ದಿನ ಅವನಿಗೆ ಹೆಣ್ಣಿಗೆ ಏನು ಪ್ರಶ್ನೆ ಕೇಳಬೇಡ ಎಂದು ಅವರಪ್ಪ ತಕೀತ ಮಾಡಿದ್ದರು. ಎಲ್ಲರೂ ಹೆಣ್ಣಿನ ಮನೆಗೆ ಹೋದೆವು. ಮಂಜ ಮನೆ ಮುಂದೆ ನಿಂತ ಒಂದು ಕಾರ್ ಮೇಲೆ ಬರೆದ ಎನ್ನುವ ಸಂತೂವನ್ನು ಜಂತು ಎಂದು ಓದಿದ.ಆಗ ಅವರಪ್ಪ ಮತ್ತೆ ಅವನಿಗೆ ಎಚ್ಚರಿಸಿದರು.

ಮನೆ ಒಳಗೆ ಹೋದೆವು. ಮತ್ತೆ ವಧು ಪರೀಕ್ಷೆ ಶುರು ಆಯಿತು. ಮಂಜ ನಿನ್ನ ಹೆಸರು ಎಂದು ಕೇಳಿದ. ಆಗ ವಧು ಸಾವಿತ್ರಿ ಎಂದಳು. ನೀನು ಕಲೆತಿದ್ದು ಎಂದಾಗ, ನಾನು ಮೊದಲು ೭ ಪಬ್ಲಿಕ್ , ೧೦ ಪಬ್ಲಿಕ್ , ಪೀಯೂಸಿ , ಬೀ ಕಾಮ್ , ಎಮ್ ಕಾಮ್, ಕಂಪ್ಯೂಟರ್ ಕೋರ್ಸ್, ಅಡುಗೆ ಕ್ಲಾಸ್ , ಮೇಹಂದಿ ಕ್ಲಾಸ್ ... ಹೀಗೆ ಶುರು ಹಚ್ಚಿದಳು. ನಾನು ಮತ್ತೆ ಮಂಜ ಮುಖ ಮುಖ ನೋಡುತ್ತಾ ಕುಳಿತು ಬಿಟ್ಟೆವು. ನ‌ನ‌ಗೆ ನಗು ಬಂದರು ಸುಮ್ಮನೇ ಕುಳಿತಿದ್ದೆ. ಹಾಡು ಎನ್ನುತ್ತಿದ್ದಂತೆ ಬರೋಬ್ಬರಿ ೨ ಸುಗಮ ಸಂಗೀತ, ೨ ದಾಸರ ಪದಗಳು, ೨ ಸಿನಿಮಾ ಹಾಡು, ಇನ್ನೂ ತಡೆಯದೇ ಇದ್ದರೆ, ೨ ರಾಕ್ ಸಾಂಗ್ ಕೂಡ ಹೇಳುತಿದ್ದಳು. ಸಧ್ಯ ಎಲ್ಲಿ ಮಂಜ ಡ್ಯಾನ್ಸ್ ಎಂದು ಹೇಳುತ್ತಾನೆ ಎಂದು ಹೆದರಿಕೆ ಬರುತಿತ್ತು. ಮತ್ತೆ ಓದಲು ಪೇಪರ್ ಕೊಟ್ಟು ಓದಲು ಹೇಳಿದರೆ ಅನಾಮತ್ತಾಗಿ ೨ ಪೇಜ್ ಓದಿ ಮುಗಿಸಿದಳು. ಆಗ ಅವರಪ್ಪ ಹುಡುಗಿ ತುಂಬಾ ಚೆನ್ನಾಗಿ ಇದ್ದಾಳೆ ಎಂದರು. ಮಂಜ ಅವರಪ್ಪನ ಮುಖ ನೋಡಿ ಸನ್ನೆ ಮಾಡಿದ ಅವರಪ್ಪ ಅವನಿಗೆ ಕೆಂಗಣ್ಣಿನಿಂದ ನೋಡಿದರು. ಕಡೆಗೂ ಪಾಲಿಗೆ ಬಂದಿದ್ದೆ ಪಂಚಾಮೃತ ಎಂದು ಮಂಜ ಒಪ್ಪಿಬಿಟ್ಟ. ಕಡೆಗೂ ಮಂಜನ ಮದುವೆ ನೆರವೇರಿತು.

ನನ್ನ ಮಡದಿ ತನ್ನ ಗೆಳತಿಯ ಮನೆಗೆ ಎರಡು ದಿವಸ ಹೋಗಿದ್ದರಿಂದ. ನನಗೆ ಮಂಜನ ಮನೆಯ ಆಹ್ವಾನ ಬಂದಿತ್ತು. ಬೇಡ ಎಂದರು ಮಂಜನ ಮಡದಿ ಸಾವಿತ್ರಿ ಕೇಳಬೇಕಲ್ಲ...

ಮಂಜಾನೆ ಎದ್ದ ಕೂಡಲೇ ಸಾವಿತ್ರಿ "ರೀ ನಾಳೆ ಹಬ್ಬ ನೇರಳೆ ಹಣ್ಣು ತೆಗೆದುಕೊಂಡು ಬನ್ನಿ" ಎಂದಳು ಮಂಜನಿಗೆ. ಮಂಜನಿಗೆ ಘಾಬರಿ ಆಯಿತು. ಏನೇ ಇದು ತಿಂಗಳಲ್ಲಿ ಎರಡು-ಮೂರು ಹಬ್ಬ ಎಂದ. ನೀವು ತರುತ್ತೀರೋ ಇಲ್ಲವೋ ಅದು ಹೇಳಿ ಎಂದಳು. ಹಾಗೆ ಜೇಬು ಮುಟ್ಟಿ ನೋಡಿ ಕೊಂಡ. ನಿನ್ನೆ ಬ್ರಿಗೇಡ್ ರೋಡ್ ನಲ್ಲಿ ಏನೋ ಬೇಕೋ ಎಲ್ಲವೂ ಸಿಗುತ್ತೆ ಎಂದು ಭಾಷಣ ಬಿಗಿದಿದ್ದ. ಹಾಗೆ ಹೇಳಿದ್ದೆ ಮಹಾ ಅಪರಾಧ ಆಯಿತು ಎಂದು ಸುಮ್ಮನೇ, ಆಯಿತು ಎಂದು ಮರು ಮಾತನಾಡದೇ ಮಗನಿಗೆ ಶಾಲೆ ಕಳುಹಿಸುವ ಜವಾಬ್ದಾರಿ ಕೂಡ ಅವನದೇ ಇದ್ದಿದ್ದರಿಂದ ಅವನನ್ನು ಶಾಲೆಗೆ ಬಿಟ್ಟು, ಆಫೀಸ್ ಹೊರಟ.

ನೇರಳೆ ಹಣ್ಣು ಎಲ್ಲಿ ಹುಡುಕುವದು ಎಂದು ಯೋಚಿಸುತ್ತಾ, ಬೈಕ್ ಓಡಿಸುತ್ತಿದ್ದ. ಮುಂದೆ ಬಂದ ನೇರಳೆ ಕಲರ್ ಒಮ್ನಿ ಕಾರ್ ಗೆ ಗುದ್ದಿ ಬಿಟ್ಟಿದ್ದ. ಮಂಜನಿಗೆ ಏನು ಆಗಿರಲಿಲ್ಲ. ಸಾರಿ ಹೇಳಿ ಹಾಗೆ ಸಾವಕಾಶವಾಗಿ ಆಫೀಸ್ ತಲುಪಿದ. ಆಫೀಸ್ ನಲ್ಲಿ ಕಾರ್ ಗೆ ಗುದಿದ್ದ ಸಮಾಚಾರ ನಟರಾಜನಿಗೆ ಹೇಳಿದ. "ರೀ ನನಗೆ ಒಂದು ಉಪಾಯ ಗೊತ್ತು. ನೀವು ಯಾರಿಗೂ ಗುದ್ದುವದಿಲ್ಲ, ನಿಮಗೆ ಯಾರು ಗುದ್ದುವದಿಲ್ಲ ಅಂತಹ ಉಪಾಯ ಎಂದರು. ಮಂಜನಿಗೆ ಅದನ್ನು ಕೇಳಿ ತುಂಬಾ ಸಂತೋಷದಿಂದ ಏನು? ಎಂದು ಕೇಳಿದಾಗ . ನೀವು ಸರಿಯಾದ ರೋಡು ಬಿಟ್ಟು ತೆಗ್ಗುಗಳಲ್ಲಿ ಮಾತ್ರ ಗಾಡಿ ಓಡಿಸಿ ಎಂದರು. ನಿಮ್ಮ ಹಿಂದೆ ಯಾರು ಬರುವದಿಲ್ಲ ಮತ್ತೆ ನಿಮ್ಮ ಮುಂದೆ ಯಾರು ಇರುವದಿಲ್ಲ ಎಂದರು. ಹಾಗೆ ಓಡಿಸುತ್ತಾ ದೊಡ್ಡ ಒಂದು ಖೆಡ್ಡದಲ್ಲಿ ಓಡಿಸಿದರೆ ನಾನು ಆಫೀಸ್ ಗೆ ಬರುವದಿಲ್ಲ ಎಂದು ಕೋಪದಿಂದ ಹೇಳಿ ಕಾಫೀ ಕುಡಿದು ಸುಧಾರಿಸಿಕೊಂಡು. ಆಫೀಸ್ ಕೆಲಸ ಶುರು ಮಾಡಿದ.

ಸಂಜೆ ಹುಡುಕಾಡಿ ನೇರಳೆ ಹಣ್ಣು ರೇಟ್ ಕೇಳಿದಾಗ ೧೦೦ ಗ್ರಾಂ ಗೆ ೨೦ ರೂಪಾಯಿ ಎಂದಾಗ, ಹೆಂಡತಿಯನ್ನು ಮತ್ತೆ ಫೋನ್ ಮಾಡಿ ಕೇಳಿ ಬೇಡವೆಂದಾಗ ಹಾಗೆ ಮನೆಗೆ ಬಂದ. ಊಟವಾದ ಮೇಲೆ ಯಾವದು ನಾಳೆಯ ಹಬ್ಬ ಎಂದು ಕೇಳಿದ. ಅದಕ್ಕೆ ಮಂಜನ ಹೆಂಡತಿ ನಿಮಗೆ ಸತ್ಯವಾನ ಸಾವಿತ್ರಿ ಗೊತ್ತು ತಾನೇ ಎಂದಾಗ, ನಾನು ಮೊನ್ನೆ ಟೀವೀಯಲ್ಲಿ ನೋಡಿದ್ದೆ ಸಿನಿಮಾ. ರಮೇಶ್ ನಟಸಿದ್ದು ತಾನೇ, ತುಂಬಾ ಚೆನ್ನಾಗಿದೆ ಎಂದ, ಸೀಡೀ ಕೂಡ ಸಿಗುತ್ತೆ ತೆಗೆದು ಕೊಂಡು ಬರೆಲೇನು ಎಂದಾಗ, ಅದಕ್ಕೆ ಮಂಜನ ಮಡದಿ ರೀ ಅದು ಅಲ್ಲ ಎಂದು ಸತ್ಯವಾನ್ ಸಾವಿತ್ರಿ ಕಥೆ ಹೇಳಿ, ಇದಕ್ಕೆ ವಟ ಸಾವಿತ್ರಿ ವೃತ ಅನ್ನುತ್ತಾರೆ ಎಂದಳು. ಸಾವಿತ್ರಿ ಸತ್ಯವಾನ ಬದುಕಿಸುವ ರೀತಿ ಕೇಳಿ, ಮಂಜ ಆ ರೀತಿ ಹೆಂಡತಿಯರು ಈಗಲೂ ಇರುತ್ತಾರೇನೇ? ಎಂದು ಪ್ರಶ್ನಿಸಿದಾಗ. ಮರುಮತನಾಡದೇ ಸುಮ್ಮನೇ ಮಲಗಿಕೊಳ್ಳಿ ಎಂದು ಹೇಳಿದಳು. ನಾನು ಸುಮ್ಮನೇ ನಗುತ್ತಿದ್ದೆ.

ನಾಳೆ ಬೇಗ ಎದ್ದೇಳಿ ಎಣ್ಣೆ ಸ್ನಾನ ಮಾಡಬೇಕು ಎಂದಳು. ಸಂಜೆಗೆ ಗೆಳೆಯನ ಜನ್ಮದಿನದ ಪಾರ್ಟೀ ಅಲ್ಲೇ ಮಾಡುತ್ತೇನೆ ಎಂದ ಮಂಜ, ಮಂಜನ ಮಡದಿಯ ಮುಖ ಕೆಂಪಾಗಿತ್ತು. ಸುಮ್ಮನೇ ಮಲಗಿಕೊಂಡೆವು.

ಮರುದಿನ ಮಂಜನಿಗೆ ೨೦೦ ಮಿಲಿ ಎಣ್ಣೆಯಿಂದ ಅಭಿಷೇಕ ಆಗಿತ್ತು. ನಾನು ಮುಸಿ ಮುಸಿ ನಗುತ್ತಿದ್ದೆ. ಕಡೆಗೆ ನನಗೂ ಎಣ್ಣೆ ಹಚ್ಚಿ ಸ್ನಾನ ಮಾಡಿ ಎಂದು ಹೇಳಿದಳು. ರೀ ಇವತ್ತು ವಟ ಸಾವಿತ್ರಿ ವೃತ "ನಾನು ತಂಗಳು ತಿನ್ನುವದಿಲ್ಲ" ನಿನ್ನೆ ಮಿಕ್ಕ ಅನ್ನ ನೀವೇ ತಿಂದು ಹೋಗಿ ಎಂದಳು ಮಂಜನಿಗೆ. ದಿನಾಲೂ ನಾನೇ ತಿನ್ನಬೇಕು ಎಂದು ಕೋಪದಿಂದ ಹೇಳಿ ಪ್ಲೇಟ್ ಕೈಗೆ ಕೊಟ್ಟಳು. ಲೇ ನಿನ್ನೆ ಅದೇನೋ ಕಥೆ ಹೇಳಿದ್ಯಲ್ಲೇ?. ಎಂದ ಮಂಜ ಕೋಪದಿಂದ ಇದೊಂದು ಗೊತ್ತು ನಿಮಗೆ ಎಂದು ಹೇಳಿ ನಮ್ಮಿಬ್ಬರನ್ನೂ ಆಫೀಸ್ ಗೆ ಹೋಗಿ ಎಂದು ಬೀಳ್ಕೊಟ್ಟಳು. ಆದರೂ ನಿನ್ನೆ ಮಾಡಿದ ಚಿತ್ರಾನ್ನ ಚೆನ್ನಾಗೆ ಇತ್ತು ಎಂದ ಮಂಜ. ನನಗೆ ಮಾತ್ರ ದೋಸೆ ಸಿಕ್ಕಿತ್ತು.

ಅವನ ಮಡದಿ ವಟ ..ವಟ... ಅನ್ನುವದನ್ನು ಬಿಟ್ಟರೆ, ತುಂಬಾ ಒಳ್ಳೆಯವಳು. ನಿಜವಾಗಿಯೂ ಸತ್ಯವಾನ್ ಸಾವಿತ್ರಿನೇ.

Saturday, June 19, 2010

"ಯೇ ಕಹಾ ಆಗಯೇ ಹಮ ಯುಹಿ ಸಾತ್ ಸಾತ್ ಚಲತೆ..".

ನಮ್ಮ ಮನೆ ಎದುರು ಒಂದು ಅಜ್ಜಿ ಇದ್ದಾರೆ. ಅವರ ಹೆಸರು ಶಾಂತಮ್ಮ ಕೇವಲ ನಾಮ ಮಾತ್ರಕ್ಕೆ ಶಾಂತಮ್ಮ. ಮೊನ್ನೆ ನಮ್ಮ ಮನೆಗೆ ಬಂದಿದ್ದರು. ಅವರು ನನ್ನ ಹೆಂಡತಿ ಜೊತೆ ಹರಟುತ್ತ ಇರುತ್ತಾರೆ. ಅದೇನೆಂದು ನಾನು ತಲೆ ಕೆಡಿಸಿಕೊಂಡಿಲ್ಲ. ತಪ್ಪು ತಿಳೀಬೇಡಿ ತಲೆ ಕೆಡಿಸಿಕೊಂಡಿಲ್ಲ ಅಂದರೆ ಮನಸ್ಸಿಗೆ ಹಚ್ಚಿಕೊಂಡಿಲ್ಲ. ಅವತ್ತು ಇವರು ಏನು ಮಾತಾಡುತ್ತಾರೆ ಎಂದು ಹಾಗೆ ಅವರ ಮಾತಿಗೆ ಕಿವಿಗೊಟ್ಟೆ. ಅವರ ಒಂದು ಮಾತು ಕೂಡ ಅರ್ಥವಾಗಲಿಲ್ಲ. ಅಷ್ಟರಲ್ಲಿ ಶಾಂತಮ್ಮ ಯಾರದೋ ಹೆಸರು ಹೇಳಿ ಅವನಿಗೆ ಬೈಯಲು ಶುರು ಮಾಡಿಕೊಂಡಳು. ಅವನಿಗೆ ಎಲ್ಲ ಅಷ್ಟೋತ್ತರ, ಸಹಸ್ರನಾಮ ಎಲ್ಲವು ಮುಗಿದಿದ್ದವು. ಬರಿ ಬ್ಲಾಕ್ ಪೇಯಿಂಟ್ ಮಾಡುತ್ತಾನೆ ಎಂದು ಬೈಯುತ್ತ ಕುಳಿತಿದ್ದಳು. ಅವನು ಯಾರಪ್ಪ ಬ್ಲ್ಯಾಕ್ ಪೈಂಟ್ ಮಾಡುವವನು ಎಂದು ಯೋಚಿಸಿದೆ. ಮನೆಗೆ ಬ್ಲ್ಯಾಕ್ ಪೈಂಟ್ ಮಾಡಿದರೆ ಹೇಗೆ ಕಾಣುತ್ತೆ ಎಂದು ಯೋಚಿಸುತ್ತಾ ಕುಳಿತೆ. ಹಾಗೇನಾದರೂ ಆದರೆ ನನ್ನನ್ನು ನನ್ನ ಹೆಂಡತಿ ಕಂಡು ಹಿಡಿಯುವದು ಕಷ್ಟ ಎಂದು ಆ ಯೋಚನೆಗೆ ಇತಿಶ್ರೀ ಹಾಡಿ ವಾಸ್ತವಕ್ಕೆ ಬಂದೆ.ಅವರಿಬ್ಬರ ಅಬ್ಬರದ ಮಾತಿನಿಂದ, ನನ್ನ ಹೊಟ್ಟೆ ಅಬ್ಬರಿಸಿದ್ದು ಕೇಳದೆ ನನ್ನ ಮಡದಿ ಹರಟುತ್ತಿದ್ದಳು.

ಆಗ ನಾನೆ ಅವಲಕ್ಕಿ ತೆಗೆದು ಅವರಿಬ್ಬರಿಗೂ ಮಾಡಿ ಕೊಟ್ಟು ನಾನು ತಿನ್ನುತ್ತ ಟಿ.ವಿ ಮುಂದೆ ಬಂದು ಕುಳಿತೆ. ನಾನು ಮ್ಯಾಚ್ ನೋಡಲು ಚಾನೆಲ್ ಚೇಂಜ್ ಮಾಡಿದೆ. ಆಗ ಅಜ್ಜಿ ಚಾನೆಲ್ ಚೇಂಜ್ ಮಾಡಬೇಡಪ್ಪ ಈಗ ರಂಗೋಲಿ ಬರುತ್ತೆ ಎಂದರು. ಆಗ ನಾನು ರಂಗೋಲಿ ರವಿವಾರ ಮುಂಜಾನೆ ಮಾತ್ರ ಬರುತ್ತೆ ಅಜ್ಜಿ ಎಂದೆ. ಆಗ ಅಜ್ಜಿ ಇಲ್ಲಪ್ಪ ಪ್ರತಿದಿನ ೮ ಘಂಟೆಗೆ ಬರುತ್ತೆ ಎಂದರು. ನನಗೆ ಆಶ್ಚರ್ಯ ಇದು ಯಾವಾಗ ಚೇಂಜ್ ಆಯಿತು ಎಂದು. ನಾನು ಏನೋ ಟೈಮ್ ಚೇಂಜ್ ಆಗಿರಬೇಕು ಎಂದುಕೊಂಡು, ದೂರದರ್ಶನ ಚಾನೆಲ್ ಹಚ್ಚಿದೆ. ಆಗ ಅಜ್ಜಿ ಇದಲ್ಲ... ಉದಯ ಹಚ್ಚಿ ಎಂದರು. ಮತ್ತೆ ಮ್ಯಾಚ್ ನೋಡದೆ ಉದಯ ಹಚ್ಚಿದೆ. ಆ ಧಾರವಾಹಿ ಶುರು ಆದ ಮೇಲು ಅವರ ಮಾತಿನ ವರಸೆ ಮುಗಿದಿರಲಿಲ್ಲ. ಬಂದ ನೋಡು ..... ಮಗ ಎಂದು ಬಿಡಬೇಕೇ?. ನನಗೆ ಆಶ್ಚರ್ಯ. ಇವರ ಮಾತು ಕೇಳಿ ನನಗೆ ಕಸಿವಿಸಿಯಾದರು ಅವರು ಮಾತ್ರ ತಮ್ಮ ಬೈಗುಳಗಳ ಸುರಿಮಳೆ ನಡೆಸಿದ್ದರು. ಮತ್ತೆ ನೋಡು ಹೇಗೆ ಬ್ಲಾಕ್ ಪೇಯಿಂಟ್ ಮಾಡುತ್ತಾನೆ ಎಂದಾಗ ತಿಳಿಯಿತು ಅದು ಬ್ಲಾಕ್ ಮೇಲ್ ಎಂದು. ನಾನು ನೋಡಿ ಹುಸಿ ನಕ್ಕು ಮತ್ತೆ ಧಾರವಾಹಿ ಮುಗಿಯುವದನ್ನೇ ಕಾಯುತ್ತ ಕುಳಿತೆ. ಧಾರವಾಹಿ ಮುಗಿದಾಗ ನಾನು ಚಾನೆಲ್ ಚೇಂಜ್ ಮಾಡಬೇಕೆಂದಾಗ, ಮತ್ತೆ ಅಜ್ಜಿ ಜೋಗುಳ ಹಚ್ಚಪಾ ಎಂದು ವರಸೆ ಹಿಡಿದರು. ಅಲ್ಲೂ ಮಾತಿನ ಸುರಿ ಮಳೇನೆ. ಅವರು ಹೀಗೆ ಮಾಡಿದರು ಇವರು ಹೀಗೆ ಮಾಡಿದರು ಎಂದು. ಹಾಗೆ ಇಷ್ಟಕ್ಕೆ ಮುಗಿಯಲಿಲ್ಲ. ಮತ್ತೆ ಈ ಟಿವಿ ಯಲ್ಲಿ ಬರುವ ಮುತ್ತಿನ ತೋರಣ, ಮತ್ತೆ ಮುಕ್ತ ಮುಕ್ತ ಎಲ್ಲ ಧಾರವಾಹಿ ನೋಡಿದರು.

ಮತ್ತೆ ಮನೆಗೆ ಹೊರಟು ಹೋದರು. ಅಷ್ಟರಲ್ಲಿ ನಾನು ಕೂಡ ಅರ್ಧ ಘಂಟೆ ಜೋಗಳ ಹಾಡಿದ್ದೇ. ಎದ್ದು ತಡಬಡಿಸಿ ನಾನು ಮ್ಯಾಚ್ ಹಚ್ಚಿದೆ. ಆದರೆ ಮ್ಯಾಚ್ ಮುಗಿದಿತ್ತು. ಬರಿ ಜಾಹಿರಾತುಗಳು ಬರುತ್ತಿದ್ದವು. ಕಡೆಗೆ ಬೇಸರವಾಗಿ ಟಿ.ವಿ ಬಂದ್ ಮಾಡಿ ಊಟ ಮುಗಿಸಿ ಹಾಸಿಗೆ ಮೇಲೆ ಒರಗಿದೆ. ಆಗ ನಾನು ನೋಡುತ್ತಿದ್ದ ದೂರದರ್ಶನ ಧಾರವಾಹಿಗಳ ನೆನಪು ಬಂತು . ಅದರಲ್ಲೂ ಮಹಾಭಾರತ್ , ರಾಮಾಯಣ, ಗುಲ್ದಸ್ತ, ಮುಂಗೇರಿ ಲಾಲ ಕೆ ಹಸಿನ ಸಪ್ನೆ, ನುಕ್ಕಡ, ಹಮ್ ಪಂಚಿ ಏಕ್ ಚಾಲ್ ಕೆ, ಮತ್ತೆ ಸುಮಧುರ ಗೀತೆಗಳ ರಂಗೋಲಿ ಹೀಗೆ ತುಂಬಾ ಹಲವು. ಈಗ ಅವುಗಳ ಕಾಲ ಮುಗಿದಿದೆ ಈಗ ನೂರಾರು ಚಾನೆಲ್‍ಗಳು. ನೂರಾರು ಧಾರಾವಾಹಿಗಳು.

ನಮ್ಮ ಮನೆಯಲ್ಲಿ ಟಿ.ವಿ ಇರಲಿಲ್ಲ. ನನ್ನ ಗೆಳಯ ಆನಂದನ ಮನೆಗೆ ಹೋಗಿ ನೋಡುತ್ತಿದ್ದೆ. ಆನಂದನ ಮನೆ ಓನರ್ ಒಂದು ನಾಯಿ ಸಾಕಿದ್ದರು. ನನಗೆ ಮೊದಲಿಂದು ನಾಯಿ ಕಂಡರೆ ತುಂಬಾ ಭಯ. ಅದನ್ನು ಲೆಕ್ಕಿಸದೆ ಓಡಿ ಆನಂದನ ಅಡುಗಿ ಮನೆಗೆ ಹೊಕ್ಕು ಬಿಡುತ್ತಿದ್ದೆ. ನಾಯಿ ನನ್ನ ಬೆನ್ನು ಹತ್ತಿ ಬಂದು ಮತ್ತೆ ವಾಪಸ್ ಹೋಗಿ ಮಲಗಿ ಬಿಡುತ್ತಿತ್ತು. ಆ ಕ್ಷಣಗಳು ತುಂಬಾ ಸುಮಧುರವಾಗಿದ್ದವು. ಹಾಗೆ FM ಹಚ್ಚಿದೆ ಸುಮಧುರವಾದ ಗೀತೆ "ಯೇ ಕಹಾ ಆಗಯೇ ಹಮ ಯುಹಿ ಸಾತ್ ಸಾತ್ ಚಲತೆ..". ಹಳೆಯ ಮಾಸೀದ ನೆನಪುಗಳೇ ಹಾಗೆ ತುಂಬಾ ಮನಸ್ಸಿಗೆ ಅಹ್ಲಾದವನ್ನು ಉಂಟು ಮಾಡುತ್ತಿರುತ್ತವೆ. ಮತ್ತೆ ಮಾತ್ತೊಂದು ಸುಮಧುರ ಗೀತೆ ಬಂತು " ದೋ ಲಫ್ಜೋ ಕೀ ಹೈ ದಿಲ್ ಕೀ ಕಹಾನಿ...". ಮತ್ತೆ ಮನಸು ಕುದುರೆಯ ಹಾಗೆ ಮೈಸೂರಿಗೆ ನೆಗೆಯಿತು ಮತ್ತೆ ಕಣ್ಣ ಮುಂದೆ ನನ್ನ ಹಳೆಯ ಸ್ನೇಹಿತರಾದ ಮಾಧವ, ವಿಠ್ಠಲ್ , ಪುರುಷೋತ್ತಮ ಎಲ್ಲರೂ ಬಂದು ಹೋದರು. ಹಾಗೆ ಹಳೆಯ ನೆನಪುಗಳನ್ನು ಮೇಲಕು ಹಾಕುತ್ತಿದ್ದಾಗ ನಾನು ನಿದ್ದೆಗೆ ಜಾರಿದ್ದೆ...ಆದರೆ ಆ ಹಾಡು ಯೇ ಕಹಾ ಆಗಯೇ ಹಮ ಯುಹಿ ಸಾತ್ ಸಾತ್ ಚಲತೆ.." ಮಾತ್ರ ನಿತ್ಯ ಸತ್ಯ ಎಂದೆನಿಸಿತು. ನಮ್ಮ ಹಳೆಯ ಹೆಜ್ಜೆಗುರುತನ್ನು ನೆನಪಿಸುತ್ತಾ...