Tuesday, July 31, 2012

ಭಾಷಣ ಕಾರ್ಯಕ್ರಮ....

ಮೊನ್ನೆ ನಾನು ಮಂಜ ಸಂಜೆ ಪಾರ್ಕಿನಲ್ಲಿ ವಾಕಿಂಗ್ ಹೊರಟಿದ್ದೆವು. ಯಾರೋ ಒಬ್ಬರು ಹಿಂದಿನಿಂದ ಕರೆದ ಹಾಗೆ ಅನ್ನಿಸಿತು. ತಿರುಗಿ ನೋಡಿದೆವು, ನಮ್ಮ ಹಳೆ ಸ್ನೇಹಿತ ವಿಶಾಲ. ಹೆಸರು ವಿಶಾಲ ಮಾತ್ರ, ಅವನು ಹೇಗೆ ಇದ್ದ ಎಂದರೆ, ಅವನು ನಮಗೆ "ನಮ್ಮ ಮನೆಗೆ  ಬಂದ್ರೆ,  ಏನು ತರುತ್ತೀರಾ?, ನಿಮ್ಮ  ಮನೆಗೆ ಬಂದ್ರೆ,  ಏನು ಕೊಡುತ್ತೀರ?" ಎಂದು ಕೇಳುತ್ತಿದ್ದ. ಒಂದು ನಯಾ ಪೈಸೇನು ಬಿಚ್ಚುತ್ತಿರಲಿಲ್ಲ. ಬಂದವನೇ ಕಾಫಿಗೆ ಆಹ್ವಾನಿಸಿದ. ನಾವು ಬೇಡ ಎಂದರು ಕೇಳದೆ ಕರೆದುಕೊಂಡು ಹೋದ. ತಾನೇ ದುಡ್ಡು ಕೊಟ್ಟು ಕಾಫಿ ಕುಡಿಸಿದ.  ಜ್ಯಾಸ್ತಿ ಮಾತನ್ನು ಆಡದ ಮನುಷ್ಯ, ಒಂದೇ ಸಮನೇ ಅರಳು ಹುರಿದ ಹಾಗೆ ಮಾತನಾಡುತ್ತಿದ್ದ. ನನ್ನನ್ನು ಮತ್ತು ಮಂಜನನ್ನು ಭಾನುವಾರ ಭಾಷಣ ಕಾರ್ಯಕ್ರಮಕ್ಕೆ ಆಹ್ವಾನಿಸಿದ.

ನಾವಿಬ್ಬರು ಭಾನುವಾರ ಭಾಷಣ ಕಾರ್ಯಕ್ರಮಕ್ಕೆ ಹೋದೆವು, ಕಾರ್ಯಕ್ರಮ ತುಂಬಾ ಚೆನ್ನಾಗಿತ್ತು.  ಕಡೆಗೆ ವಿಶಾಲ ತನ್ನ ವಿಶಾಲವಾದ ಹೃದಯವಂತಿಕೆ ಪ್ರದರ್ಶಿಸಿ, ನನ್ನನ್ನು ದಂಗುಗೊಳಿಸಿದ್ದ.  ಅದೇನೆಂದರೆ ಮುಂದಿನ ವಾರದ ಭಾಷಣ ಗೋಪಾಲ್ ಅವರದ್ದು, ವಿಷಯ ಅವರೇ ಹೇಳುತ್ತಾರೆ ಎಂದ. ನಾನು ವಿಧಿ ಇಲ್ಲದೆ ಸ್ಟೇಜ್ಗೆ ಹೋಗಿ ಹಾಸ್ಯದ ಬಗ್ಗೆ ಭಾಷಣ ಎಂದು ಹೇಳಿ ಬಂದೆ. ಮಂಜ ಸಧ್ಯ ಬಚಾವ್ ಆಗಿದ್ದ. ನಾನು ಎಂದಿಗೂ ಭಾಷಣವನ್ನು ಮಾಡಿದವನಲ್ಲ, ಮನೆಯಲ್ಲಿ ಮಾಡಿದರೂ ಮಡದಿ, ಮಗ ಕಿವಿಯಲ್ಲಿ ಹಾಕಿಕೊಳ್ಳುತ್ತಿರಲಿಲ್ಲ.  ಕಡೆಗೆ ಅಂತರ್ಜಾಲ ಮತ್ತು ಮಂಜನ ಸಹಾಯದಿಂದ ಒಂದಿಷ್ಟು ಜೋಕ್ ಮತ್ತು ಬ್ಲಾಗ್ ನಿಂದ ವಿಷಯಗಳನ್ನು, ಮತ್ತೆ ನಮ್ಮ ಗಂಗಾವತಿ ಬೀಚಿ ಎಂದೆ ಖ್ಯಾತ ರಾದ ಶ್ರೀ ಪ್ರಾಣೇಶ ಅವರ ಸಿ.ಡಿ ಖರೀದಿಸಿ, ಅದರಲ್ಲಿನ ವಿಷಯಗಳನ್ನು ಸೇರಿಸಿ ಭಾಷಣವನ್ನು ತಯಾರಿ ಮಾಡಿದೆ. ಅದನ್ನು ಮಡದಿಯ ಮುಂದೆ ಹೇಳಿದೆ. ಮಡದಿ ಎಲ್ಲಾ ಚೆನ್ನಾಗಿದೆ. ಆದರೆ, ಮೊದಲು ನೀವು ನಗುವುದನ್ನು ನಿಲ್ಲಿಸಿ, ಆಮೇಲೆ ಹೇಳಿ ಎಂದಳು. ಮಾಡುತ್ತಿರುವುದು ಹಾಸ್ಯದ ಬಗ್ಗೆ ಭಾಷಣ ಕಣೇ ಎಂದೆ. ಆದರೂ  ನೀವು ನಗುವುದನ್ನು ನಿಲ್ಲಿಸಿ ಹೇಳಿ ಎಂದಳು. ಅವಳ ಆಜ್ಞೆಯಂತೆ ಮತ್ತೊಮ್ಮೆ, ಅವಳ ಮುಂದೆ ಹೇಳಿದೆ. ಮಗ ಮಾತ್ರ ನನ್ನನ್ನು ಪಿಕಿ-ಪಿಕಿ ಎಂದು ಕಣ್ಣು ಬಿಟ್ಟು ನೋಡುತ್ತಿದ್ದ. ಮೊದ-ಮೊದಲು ನಗುತ್ತಿದ್ದ ನನ್ನ ಮಡದಿ, ಆಮೇಲೆ ನಗುವುದನ್ನೇ ನಿಲ್ಲಿಸಿ ಬಿಟ್ಟಳು. ಏಕೆ? ನಗು ಬರುತ್ತಿಲ್ಲವಾ? ಎಂದೆ. ಹಾಗೇನಿಲ್ಲ, ನೀವು ನನಗೆ ತುಂಬಾ ಸರತಿ ಹೇಳಿದ್ದರಿಂದ ನಗು ಬರುತ್ತಿಲ್ಲ. ಚೆನ್ನಾಗಿದೆ ನೀವು ಚೆನ್ನಾಗಿ ತಯಾರಿ ಮಾಡಿದ್ದೀರಾ ಹೇಳಿ ಎಂದಳು.

ಮರು ದಿನ ಭಾಷಣ ಇದ್ದರಿಂದ ನಿದ್ದೆ ಚೆನ್ನಾಗಿ ಬರಲಿಲ್ಲ. ಹಾಗು-ಹೀಗು ನಿದ್ದೆ ಮುಗಿಸಿ ಬೇಗನೆ ಎದ್ದು ಮತ್ತೊಮ್ಮೆ ಎಲ್ಲವನ್ನು ಕಂಠ ಪಾಠ ಮಾಡಿ ಮುಗಿಸಿದೆ. ನನ್ನ ಮಗನಿಗೆ ಆಶ್ಚರ್ಯ ನಾನು ಎಂದು ಓದಿದವನಲ್ಲ. ಆದರೂ, ಇಷ್ಟೊಂದು ಓದುತ್ತಿರುವುದು ಸೋಜಿಗವೇ ಅನ್ನಿಸಿತು. ನನ್ನ ಮಡದಿ ತನಗೆ ಅಷ್ಟೇ ಅಲ್ಲದೆ, ನನಗು ಕೂಡ ಪಾಠ ಹೇಳಿ ಕೊಡುತ್ತಾಳೆ ಎಂದು ಅರ್ಥೈಸಿ ಕೊಂಡು ಬಿಟ್ಟಿದ್ದ. ಅಮ್ಮ-ಮಗ ಇಬ್ಬರು ನನಗೆ ಆಲ್ ದಿ ಬೆಸ್ಟ್ ಎಂದು ಹೇಳಿ ಕಳುಹಿಸಿದರು. ನಾನು ಮಂಜನ ಮನೆಗೆ ಹೋದೆ. ಮಂಜ ತನ್ನ ತರ್ಲೆ ಬುದ್ಧಿ ತೋರಿಸಿ ಪರಾರಿ ಆಗಿದ್ದ. ಕಡೆಗೆ ವಿಧಿ ಇಲ್ಲದೆ ಒಬ್ಬನೇ ಹೋದೆ.

ನಮ್ಮ ವಿಶಾಲ ಪ್ರತಿ ಬಾರಿ ನಿಮಗೆ ಕ್ರಾಂತಿಕಾರಿಗಳ ಭಾಷಣ ಇರುತಿತ್ತು. ಆದರೆ ಈ ಸಾರಿ ನಿಮಗೆ ಒಂದು ವಿಭಿನ್ನವಾದ ಹಾಸ್ಯ ಭಾಷಣ ಇದೆ ಎಂದು ಹೇಳಿ, ನನ್ನನ್ನು ಸ್ಟೇಜ್ ಗೆ ಆಹ್ವಾನಿಸಿದ. ನಾನು ನಡುಗುತ್ತ ಮೈಕ್ ಹಿಡಿದು ನನ್ನ ಭಾಷಣವನ್ನು ಧಾರವಾಡ ಭಾಷೆಯಲ್ಲಿ ಶುರು ಮಾಡಿದೆ. ವಿಶಾಲ ಹಿಂದೆ ಹೋಗಿ ಕುಳಿತುಕೊಂಡ. ತುಂಬಾ ಹೊತ್ತು ಭಾಷಣ ಮಾಡಿದರೂ, ಯಾರೊಬ್ಬರ ಮುಖದಲ್ಲೂ ಮಂದಹಾಸ ಬಿರಲಿಲ್ಲ.  ಆದರೂ ಧಾರವಾಡದಿಂದ ಬಂದ ಇಬ್ಬರು ಮಾತ್ರ ನನ್ನ ಭಾಷಣ ಕೇಳಿ ನಗುತ್ತಿದ್ದಿದ್ದು, ನನಗೆ ಮಾತ್ರ ತುಂಬಾ ಖುಷಿ ಅನ್ನಿಸಿತು. ನಮ್ಮ ವಿಶಾಲ ಮಾತ್ರ ತನ್ನ ವಿಶಾಲ ಹೃದಯ ಪ್ರದರ್ಶಿಸಿದ್ದ, ಹಿಂದೆ ಕುಳಿತು ನಿದ್ದೆ ಹೋಗಿದ್ದ. ನಾನೇನು ಜೋಗುಳ ಹಾಡುತ್ತ ಇದ್ದೇನಾ?, ಎಂದು ಅನ್ನಿಸಿತು. ನನಗೆ ಕೋಪ ಬಂದರು ತೋರಿಸಿದೆ ಸುಮ್ಮನೆ ಭಾಷಣ ಮಾಡಿ ಮುಗಿಸಿದೆ. ಯಾರೋ ಒಬ್ಬರು ಭಾಷಣ ಮುಗಿದ ಮೇಲೆ ವಿಶಾಲನನ್ನು ಎಬ್ಬಿಸಿದರು. ಕಡೆಗೆ ಎದ್ದು ನಮ್ಮ ವಿಶಾಲ ನನಗೆ ಒಂದು ಪ್ರಮಾಣ ಪತ್ರ ಕೊಟ್ಟ. ಅದನ್ನು ತೆಗೆದುಕೊಂಡು ಮನೆ ಹಾದಿ ಹಿಡಿದೆ.

ಮನೆಯಲ್ಲಿ ನಮ್ಮ ಮಂಜ ಹಾಜರ ಆಗಿದ್ದ. ಅವನಿಗೆ ಕೋಪದಿಂದ ಎಲ್ಲಿ ಹಾಳಾಗಿ ಹೋಗಿದ್ಯೋ ಎಂದು ಬೈದೆ. ನಾನು ಬಂದಿದ್ದರೇ ಮುಂದಿನ ಭಾಷಣ ಮಂಜನದು ಎಂದು ವಿಶ್ಯ ಹೇಳಿ ಬಿಡುತ್ತಿದ್ದ ಎಂದ. ನನಗೆ ಹಾಗೆ ಕರೆದರೆ ಆಗುವುದಿಲ್ಲ ಅರಿಶಿಣ-ಕುಂಕುಮ ಕೊಟ್ಟು ಕರಿಬೇಕು ಗೊತ್ತ ಎಂದ. ಎಷ್ಟೊಂದು ಬುರುಡೆ ಬಿಚ್ಚುತ್ತಿ, ನೀನು ಭಾಷಣ ಮಾಡಬೇಕಪ್ಪ ಎಂದೆ. ನೋಡು ಅವು ಮನದಾಳದ ಮಾತುಗಳು ತನ್ನ ತಾನೇ ಬರಬೇಕು, ಕಂಠ ಪಾಠ ಮಾಡಿ ಒಪ್ಪಿಸಲು ನನಗೆ ಬರುವುದಿಲ್ಲ ಎಂದ. ಹೇಗಿತ್ತು ಭಾಷಣ ಎಂದ, ನಾನು ತುಂಬಾ ಚನ್ನಾಗಿತ್ತು ಎಂದೆ. ಸುಮ್ಮನೆ ಹೇಳಬೇಡ ನಿನ್ನ ಮುಖ ನೋಡಿದರೆ ಗೊತ್ತಾಗುತ್ತೆ ಎಂದು ಗೇಲಿ ಮಾಡಿದ.

ಮರುದಿನ ಪಾರ್ಕಿನಲ್ಲಿ ನಾನು ಮಂಜ ಹೋಗುತ್ತಿದ್ದಾಗ, ವಿಶಾಲ ತನ್ನ ಅದೇ ಗುಂಪಿನ ಜೊತೆ ಜೋರಾಗಿ "ಹಾ.. ಹಾ... " ಎಂದು ನಗುತ್ತಿದ್ದರು . ನೋಡು ನೀನು ಭಾಷಣ ಮಾಡಿದರೂ ನಗದ ಜನ  ಹೇಗೆ ನಗುತ್ತಿದ್ದಾರೆ ಎಂದು ಗೇಲಿ ಮಾಡಿದ. ಒಮ್ಮೆ ಗಾಂಧಿ ಬಜಾರಿನಲ್ಲಿ ನಾನು ಮತ್ತು ಮಂಜ ಹೋದಾಗ ಮತ್ತೆ ವಿಶಾಲ ಭೇಟಿಯಾದ, ಕೈಯಲ್ಲಿ  ಸಿ.ಡಿ ಗಳು ಇದ್ದವು, ಯಾವ ಸಿ.ಡಿ ಎಂದು ಕೇಳಿದೆ. ನೋಡು ತುಂಬಾ ಚೆನ್ನಾಗಿವೆ. ಶ್ರೀ ಪ್ರಾಣೇಶ ಅವರ ಹಾಸ್ಯ ಸಿ.ಡಿ ಗಳು ಎಂದು ತೋರಿಸಿದ. ಧಾರವಾಡ ಭಾಷೆಯಲ್ಲಿ ತುಂಬಾ ಚೆನ್ನಾಗಿ ಹಾಸ್ಯ ಸಿಂಚನ ಹರಿಸುತ್ತಾರೆ ಎಂದು ನನಗೆ ಒಂದು ದೊಡ್ಡ ಭಾಷಣ ಬಿಗಿದ. ಮಂಜ ಮಾತ್ರ ನನ್ನ ಮುಖ ನೋಡಿ ನಕ್ಕಿದ್ದೆ ನಕ್ಕಿದ್ದು.

Monday, July 23, 2012

ಕಮಲೇ ಕಮಲೋತ್ಪತ್ತಿಃ....

ಮೊನ್ನೆ ನನ್ನ ಹಳೆಯ ಮಿತ್ರ ಪ್ರಶಾಂತ ಗಾಂಧೀ-ಬಜಾರಿನಲ್ಲಿ ಭೇಟಿಯಾದ, ಅವನನ್ನು ನಾವೆಲ್ಲರೂ ಪ್ರಳಯಾಂತಕ ಅಥವಾ ಪ್ರಣಯಾoತಕ ಎಂದು ಸಂಭೋದಿಸುತ್ತಿದ್ದೆವು. ನಮ್ಮ ಮಂಜ ಕೂಡ ಅವನಿಗೆ ಹೆದರುತ್ತಿದ್ದ.ಎಲ್ಲ ಕ್ಷೇಮ ಸಮಾಚಾರ ಅದ ಮೇಲೆ, ನಾನು ಬ್ಲಾಗ್,ಕಥೆ ಕವನ ಬರೆಯುತ್ತ ಇರುತ್ತೇನೆ ಎಂದಾಗ, ನನ್ನ ಗೆಳೆಯ ಪ್ರಶಾಂತ ಅಪಾದಮಸ್ತಕ ವಿಚಿತ್ರವಾಗಿ ನೋಡಿ, ನಗಲಾರಂಬಿಸಿದ. ಏಕೆ? ಎಂದು ಕೇಳಿದೆ. ನಿನಗೆ ಬರಹಗಾರರಿಗೆ ಇರಬೇಕಾದ ಆಭೂಷಣವೆ ಇಲ್ಲ ಎಂದ. ಏನಪ್ಪಾ? ಇರಬೇಕು ಎಂದು ಕೇಳಿದಾಗ, ನಿನಗೆ ಮೊದಲು ಒಂದು ಕನ್ನಡಕ ಇರಬೇಕು. ಅದು ಇಲ್ಲದಿದ್ದರೆ ಯಾರು ನೀನು ಒಬ್ಬ ಬರಹಗಾರ ಎಂದು ನಂಬುವುದಿಲ್ಲ ಎಂದ. ಕನ್ನಡಕದಲ್ಲಿ ಕನ್ನಡ ಅಡಕವಾಗಿದೆ ಗೊತ್ತ? ಎಂದು ಹಿಯಾಳಿಸಿದ. ಕಣ್ಣ ಸನ್ನೆಗಳನ್ನೇ ಅರ್ಥ ಮಾಡಿಕೊಳ್ಳೋ ಈ ಕಣ್ಣಿಗೆ, ಇಷ್ಟೊಂದು ಜೋರಾಗಿ ಹೇಳಿದರೆ ತಿಳಿಯದೆ ಇದ್ದೀತೆ?. ಒಂದೇ ಸಮನೆ ನಖರಾ ಮಾಡಹತ್ತಿದವು.

ಸಂಜೆ ಮನೆಗೆ ಹೋಗಿ, ಮಡದಿಗೆ ವಿಷಯ ತಿಳಿಸಿದೆ. ನೋಡೇ ನಾನು ಗಣೇಶನ ಮಂತ್ರ "ವಂದೇ ದೃಷ್ಟಿ ಗಣೇಶಂ ದೃಷ್ಟಿ ದೋಷಕಂ ನಾಶಕಂ ಸಮಸ್ತ ಸಿದ್ಧಿ ನಾಯಕಂ ನಮೋ ನಮೋ ವಿನಾಯಕ" ಎಂದು ಗಣೇಶನಿಗೆ ದಿನವು ಪ್ರಾರ್ಥನೆ ಮಾಡುತ್ತೇನೆ ಆದರೂ ಈ ದೃಷ್ಟಿ ದೋಷ ಏಕೆ? ಬಂತು ಎಂದೆ. ರೀ ನಿಮ್ಮದೊಂದು ಕಥೆ ಆಯಿತು. ಇನ್ನೊಬ್ಬರ ದೃಷ್ಟಿ ನಿಮ್ಮ ಮೇಲೆ ಬೀಳದಿರಲಿ ಎಂಬುದಕ್ಕಾಗಿ ಇರುವ ಮಂತ್ರ ಅದು. ನಿಮಗೆ ದೃಷ್ಟಿ ದೋಷ ಬರದಿರಲಿ ಎಂದು ಅಲ್ಲ ಎಂದಳು. ನೀವು ಹೇಳುವುದಾದರೆ ಸಂಸ್ಕಾರ ಇರುವವರು ಎಂದರೆ Some ಕಾರಗಳು ಇರುವವರು ಅಥವಾ ಸಾವುಕಾರರು ಎನ್ನುವ ಹಾಗಿತ್ತು ನಿಮ್ಮ ಧಾಟಿ ಎಂದಳು. ಲೇ ನಾನು ಅದನ್ನೇ ಹೇಳಿದ್ದು, ನನಗೆ ಸಂಸ್ಕೃತ ಅರ್ಥ ಆಗುತ್ತೆ,ಅವನ ದೃಷ್ಟಿ ನನ್ನ ಕಣ್ಣು ಮೇಲೆ ಬಿದ್ದು ನನಗೆ ಕಣ್ಣು ನೋವು ಶುರು ಆಗಿದ್ದು ತಾನೇ? ಎಂದೆ. ಅದು ಸರಿ ಎನ್ನಿ ಎಂದಳು. ಬನ್ನಿ ಡಾಕ್ಟರ ಬಳಿ ಹೋಗೋಣ ಎಂದು ಹೇಳಿದಳು.

ತುಂಬಾ ಸುತ್ತಾಡಿದರು ಒಂದು ಕಣ್ಣಿನ ವೈಧ್ಯರು ಸಿಗಲಿಲ್ಲ, ಎಲ್ಲಿ ನೋಡಿದರು ಬರಿ ದಂತ ವೈಧ್ಯರು. ೩೨ ಇರುವ ದಂತಗಳಿಗೆ ಸಿಗುವ ಆಧ್ಯತೆ ಬರಿ ಎರಡು ಇರುವ ನಮ್ಮ ಕಣ್ಣುಗಳಿಗೆ ಹೇಗೆ ತಾನೇ ಸಿಕ್ಕಿತು?. ಕಡೆಗೆ ಒಂದು ಮೆಡಿಕಲ್ ಅಂಗಡಿಯವರಿಗೆ ಒಬ್ಬ ಡಾಕ್ಟರ ವಿಳಾಸ ಕೇಳಿ ವೈಧ್ಯರ ಬಳಿ ಹೋದೆವು.

ಡಾಕ್ಟರರು ಒಬ್ಬ ಮನುಷ್ಯನ ಜೊತೆ ಜಗಳ ಮಾಡುತ್ತಿದ್ದರು. ನಾನು ಬೇಡ ಎಂದು ಹೊರಗೆ ಹೋಗುತ್ತಿದ್ದಾಗ, ಅಲ್ಲೇ ಇದ್ದ ರಿಸೆಪ್ಶನಿಷ್ಟ್ ತನ್ನ ನಿಷ್ಠೆ ಮೆರೆದು ಕರೆದು ಕೂಡಿಸಿದಳು. ವಿಧಿ ಇಲ್ಲದೆ ಕುಳಿತೆ. ನನ್ನ ಸರದಿ ಬಂದಾಗ ಒಳಗಡೆ ಹೋದೆ. ಡಾಕ್ಟರ ಜಗಳ ಮುಗಿಸಿ ಶಾಂತವಾಗಿದ್ದರು. ಆದರೂ ನಾನೇ ಕೆಣಕಿ ಕೇಳಿದೆ ಏನು? ಆಯಿತು ಎಂದು. ಡಾಕ್ಟರ ನಿಮ್ಮ ಕಣ್ಣಲ್ಲಿ ಹೊಳಪು ಇದೆ ಎಂದೆ. ಅದಕ್ಕೆ ನನ್ನ ಜೊತೆ ಜಗಳ ಮಾಡುತ್ತಿದ್ದರು ಎಂದರು. ನಾನು ಅದಕ್ಕೆ ಏನು? ತಪ್ಪು ಎಂದೆ. ಅವರು ತಪ್ಪು ತಿಳಿದು ನನ್ನನ್ನು ಏನು? ನಾಯಿ, ಬೆಕ್ಕಿಗೆ ಹೊಲಿಸುತ್ತಿ ಎಂದು ತಿಳಿದು ಜಗಳ ಮಾಡಲು ಶುರು ಮಾಡಿದ್ದರು. ನಾನು ಮತ್ತೆ ಸುಧಾರಿಸಿ ನಿಮ್ಮ ಕಣ್ಣಲ್ಲಿ ಕಾಂತಿ ಇದೆ ಎಂದೆ. ಇನ್ನಷ್ಟು ಕೋಪ ಮಾಡಿಕೊಂಡು ಬಿಟ್ಟರು. ಎಲ್ಲರು ಹೀಗೆ ಹೇಳಿ.. ಹೇಳಿ.. ಅವರಿಗೆ ಯಾವ ಹುಡುಗಿಯ ಕಾಂತನಾಗಿ (ಮದುವೆನೇ) ಮಾಡಲಿಲ್ಲವಂತೆ. ಅದಕ್ಕೆ ಇನ್ನು ಸ್ವಲ್ಪ ಕಂಠ ಬಿರುಯುವ ಹಾಗೆ ಒದರಿದರು ಎಂದು ತಮ್ಮ ಅಳಲನ್ನು ತೋಡಿಕೊಂಡರು. ಪಾಪ ಡಾಕ್ಟರರನ್ನು ನೋಡಿ ಪ್ರಶಂಸೆ ಮಾಡಿ ಬೈಸಿಕೊಂಡದ್ದು ನೋಡಿ ನಗು ಬಂತು ಆದರೂ, ನಾನೇ ಸಮಾಧಾನಿಸಿದೆ.

ಡಾಕ್ಟರ ಎಲ್ಲ ಪರೀಕ್ಷಿಸಿ ನಿಮಗೆ ಕನ್ನಡಕ ಬಂದಿದೆ ಎಂದು ಹೇಳಿದರು. ವಿಧಿ ಇಲ್ಲದೆ ಕನ್ನಡಕ ಆರ್ಡರ್ ಮಾಡಿ ಬಂದೆ. ಮರುದಿನ ಕನ್ನಡಕ ತೆಗೆದುಕೊಳ್ಳಲು ಹೋದಾಗ, ಅಲ್ಲೇ ಗೋಡೆ ಮೇಲೆ ಹಾಕಿರುವ ಐಶ್ವರ್ಯ ರೈ ಫೋಟೋ ನೋಡುತ್ತಾ ಕುಳಿತಾಗ, ನನ್ನ ಮಡದಿ ಏನ್ರೀ ಏನು ನೋಡುತ್ತ ಇದ್ದೀರಾ? ಎಂದಳು, ನಾನು ನೇತ್ರ ದಾನದ ಜಾಹಿರಾತು ನೋಡುತ್ತಾ ಇದ್ದೇನೆ ಎಂದೆ. ನಿಮ್ಮದು ಗೊತ್ತಿಲ್ಲವಾ ಸುಮ್ಮನೆ ಬನ್ನಿ ಎಂದಳು. ನೀವು ನೇತ್ರ ದಾನ ಮಾಡಿದರೆ, ಅದರ ಜೊತೆ ಕನ್ನಡಕ ಕೂಡ ಕೊಡಬೇಕು ಗೊತ್ತ ಎಂದಳು.ಆಮೇಲೆ ಬಿಲ್ಲು ನೋಡಿ, ಬರೀ ಎರಡುನುರಾ ಎಪ್ಪತ್ತು ಎಂದು ಖುಷಿಯಾಗಿ ಕೊಡಲು ಹೋದಾಗ, ನೀವು ಕನ್ನಡಕ ಧರಿಸಿ ನೋಡಿ, ಆಮೇಲೆ ಬಿಲ್ಲು ಕೊಡಿ ಎಂದು ಡಾಕ್ಟರ ಹೇಳಿದರು. ಕನ್ನಡಕ ಧರಿಸಿ ಬಿಲ್ಲು 2700 ನೋಡಿ ದಿಕ್ಕೇ ತೋಚದಾಗಿತ್ತು. ಗಾಂಧೀಜಿಯ ಚಿತ್ರವಿರುವ ನೋಟುಗಳು ನನ್ನ ನೋಡಿ ನಕ್ಕ ಹಾಗೆ ಅನ್ನಿಸಿತು, ವಿಧಿ ಇಲ್ಲದೆ ದುಡ್ಡು ಕೊಟ್ಟು ಕನ್ನಡಕ ತೆಗೆದುಕೊಂಡು ಬಂದೆ.

ಮರುದಿನ ತಿಂಡಿ ತಿನ್ನುವಾಗ, ಊಟ ಮಾಡುವಾಗ ಮತ್ತು ಕಾಫಿ ಕುಡಿಯುವಾಗ ನನಗೆ ಕನ್ನಡಕ ಅಡ್ಡ ಬಂದ ಹಾಗೆ ಅನ್ನಿಸುತಿತ್ತು.

ನಾನು ಕನ್ನಡಕ ಹಾಕಿ ಕೊಂಡು ಮಂಜನ ಮನೆಗೆ ಹೋದಾಗ ಮಂಜ ಏನಪ್ಪಾ? ಚಾಳೀಸು, ಹಾಗಾದರೆ ಚಾಲೀಸ್ ವರ್ಷ ಆಯ್ತಾ ಎಂದು ಹಿಯಾಳಿಸಿದ. ಹಾಗಾದರೆ ನಿನ್ನ ವಯಸ್ಸು ಐವತ್ತು ತುಂಬಾ ಬೇಗನೆ ಆಗಿ ಬಿಟ್ಟಿತ್ತು ಎಂದೆ. ಏಕೆಂದರೆ? ಮಂಜ ತನ್ನ ಕನ್ನಡಕ ಹಾಕಿಕೊಳ್ಳಲು ಶುರು ಮಾಡಿದ್ದು ಹತ್ತು ವರ್ಷದ ಹಿಂದೆ. ಮಂಜ ತನ್ನ ಮಡದಿಗೆ ಐದು ನೂರರ ನೋಟು ಖೋಟ ಹೌದೋ ಅಲ್ಲವೋ ಎಂದು ಹೇಗೆ ತಿಳಿಯುವುದು ಗೊತ್ತ? ಎಂದು ಕೇಳಿದ. ಅದಕ್ಕೆ ಅವನ ಮಡದಿ ಹೇಗೆ? ಎಂದು ಕೇಳಿದಳು. ಅದಕ್ಕೆ ಅವಳ ಬಳಿ ಇದ್ದ ಒಂದೇ ನೋಟನ್ನು ತೆಗೆದುಕೊಂಡು ಅದನ್ನು ಜೋರಾಗಿ ಝಾಡಿಸಿ, ನೋಡು ಕೆಳಗಡೆ ಏನಾದರು ಬಿತ್ತಾ? ಎಂದ. ಅವಳು ಮತ್ತು ನಾನು ಕೆಳಗಡೆ ನೋಡುತ್ತಿದ್ದರೆ, ನಗುತ್ತ ನೋಡು ಗಾಂಧೀಜಿ ಕನ್ನಡಕ ಕೆಳಗೆ ಬಿಳಲಿಲ್ಲ, ಇದು ನಿಜವಾದ ನೋಟು ಎನ್ನುತ್ತಾ, ಸುಮ್ಮನೆ ಅದನ್ನು ತನ್ನ ಜೋಬಿನೊಳಗೆ ಇಳಿಸಿದ. ಮಂಜನ ಮಡದಿ ನಗುತ್ತ ಒಳಗಡೆ ಕಾಫಿ ಮಾಡಿಕೊಂಡು ಬರಲು ಹೋದಳು. ಆಮೇಲೆ ಮಂಜ ಒಂದು ಗುಟ್ಟು, ನನ್ನ ಕನ್ನಡಕಕ್ಕೆ ನಂಬರ್ ಇಲ್ಲ, ಹಾಗೆ ಸುಮ್ಮನೆ ಹಾಕಿ ಕೊಳ್ಳುತ್ತೇನೆ. ಇದರಿಂದ ಒಂದು ಫಾಯಿದೆ ಇದೆ ಗೊತ್ತ?. ಇದನ್ನು ಹಾಕಿಕೊಂಡಾಗ ನೀನು ಏನು? ಬೇಕಾದರೂ ನೋಡಿದರು ನೋಡುವವರಿಗೆ ತಿಳಿಯುವುದಿಲ್ಲ.ಮತ್ತೆ ಕೆಲವರು ಸುಳ್ಳು ಹೇಳುತ್ತಿದ್ದಾರೆ ಎಂದು ಅರಿಯಲು ಅವರ ಕಣ್ಣುಗಳೇ ಸಾಕ್ಷಿ. ಅದ್ದರಿಂದ ಕಣ್ಣುಗಳು ನಮ್ಮ ಎಷ್ಟೋ ಭಾವನೆಯನ್ನು ಮುಚ್ಚಿಡಲು ತುಂಬಾ ಸಹಾಯಕಾರಿ. "ಕಮಲೇ ಕಮಲೋತ್ಪತ್ತಿಃ" ಎಂದು ನೀನು ಕೇಳಿಲ್ಲವೇ ಹೆಚ್ಚು ಜನ ತಮ್ಮ ಭಾವನೆಗಳನ್ನು ಹಿಡಿದಿರಲು ಸಾಧ್ಯವಾಗದೆ "ಕಮಲೇ ಕಲಹೋತ್ಪತ್ತಿಃ " ಆಗಿ ಕಲಹಕ್ಕೆ ನಾಂದಿ ಹಾಡುತ್ತಾರೆ. ಅದರ ಬದಲು ಕನ್ನಡಕ ಧರಿಸುವುದರಿಂದ ಇದನ್ನು ತಡೆಯಬಹುದು. ಈ ಕನ್ನಡಕದಿಂದ ಕಲಹ ಹೇಗೆ ಆಗುತ್ತೆ ಎಂದು ಹೇಳುತ್ತೇನೆ ಕೇಳು, ಒಮ್ಮೆ ನನ್ನ ಅತ್ತೆ ಕನ್ನಡಕದ ನಂಬರ್ ಬದಲಾಗಿದ್ದರೂ, ಅದನ್ನು ಬದಲಿಸಿರಲಿಲ್ಲ. ಏಕೆಂದರೆ ಅವರ ಕನ್ನಡಕ ಅವರ ಪ್ರೀತಿಯ ಅಪ್ಪ ಕೊಡಿಸಿದ್ದು ಎಂದು. ಒಮ್ಮೆ ಹೀಗೆ ಸಂಪಿಗೆ ಹೂವು ಏನು? ರೇಟ್ ಎಂದು ಒಬ್ಬರನ್ನು ಕೇಳಿದರು, ಪಾಪ ಅವರು ಅದನ್ನು ತಮ್ಮ ಮನೆಗೆಂದು ತೆಗೆದುಕೊಂಡು ಹೊರಟಿದ್ದರು. ಇದು ಕೊಡುವುದಕ್ಕೆ ಅಲ್ಲ ಎಂದರು ಕೇಳದೆ, ಎಷ್ಟು ಸೊಕ್ಕು ನಿನಗೆ ಎಂದು ಜಗಳ ಶುರು ಮಾಡಿದ್ದರು. ಪಾಪ ಅವರು ಸ್ವಲ್ಪ ಹೂವು ಕೊಟ್ಟು ಕಳುಹಿಸಿದರು, ನಮ್ಮ ಅತ್ತೆಗೆ ಎಂದು ನಗಹತ್ತಿದ. ಕಾಮಾಲೆ ಕಣ್ಣಿಗೆ ಜಗತ್ತೇ ಹಳದಿ ಅಂತೆ.ಇದೆಲ್ಲವೂ ಮಾಡಿದ್ದೂ ಇವರ ಅಮ್ಮನೇ ಎಂದಾಗ ನನಗೂ ನಗು ತಡಿಯಲು ಆಗಲಿಲ್ಲ. ನಿಮ್ಮ ಗೆಳೆಯನ ಮನುಸ್ಸು ಹೀಗೆ, ಎಲ್ಲರನ್ನು ತಮ್ಮಂತೆ ಅಳೆಯುತ್ತಾರೆ ಎಂದು ಎನ್ನುತ್ತಾ ಮಂಜನ ಮಡದಿ ಬಂದು ಕಾಫಿ ಕೊಟ್ಟರು. ಕಡೆಗೆ ಕಾಫಿ ಕುಡಿದು ಮುಗಿಸಿ ಮನೆ ದಾರಿ ಹಿಡಿದೆ.

Wednesday, July 4, 2012

ದಂತದ ಗೊಂಬೆ....

ಮಂಜ ಮತ್ತು ಸುಧೀರ್ ಇಬ್ಬರ ಮನೆ ಅಕ್ಕ-ಪಕ್ಕ ಇತ್ತು. ಇಬ್ಬರು ಒಂದೇ ಸಮಯದಲ್ಲಿ ಮದುವೆಗೆಂದು ಹೆಣ್ಣು ಹುಡುಕುತ್ತಿದ್ದರು. ಒಂದು ದಿವಸ ಮಂಜ ಒಂದು ಹೆಣ್ಣು ನೋಡುವ ಶಾಸ್ತ್ರ ಇತ್ತು.ಸಂಜೆ ಸುಧೀರ್ ನ ಅಮ್ಮ ಹೆಣ್ಣು ಹೆಂಗಿತ್ತು ಎಂದು ಮಂಜನನ್ನು ವಿಚಾರಿಸಿದರು. ಅದಕ್ಕೆ ಮಂಜ ಹುಡುಗಿ ದಂತದ ಗೊಂಬೆ ಹಾಗೆ ಇದ್ದಳು, ಸೌಂದರ್ಯ ದೇವತೆ ಆದರೆ, ನನಗೆ ಅವಳ ಖರ್ಚನ್ನು ತೂಗಿಸಲು ಆಗುವುದಿಲ್ಲ ಎಂದ. ಹಾಗೇನಾದರು ಮದುವೆ ಆದರೆ, ಒಂದು ಬ್ಯಾಂಕ್ ಲೂಟಿ ಮಾಡಬೇಕು ಅಷ್ಟೇ ಅಂದ. ಅಲ್ಲೇ ಇದ್ದ ಸುಧೀರ್ ಸುಮ್ಮನಿರದೆ ಹಾಗಾದರೆ, ನನಗೆ ಅವಳನ್ನು ತೋರಿಸು ಎಂದ. ಏಕೆಂದರೆ, ಸುಧೀರ್ ನಿಗೆ ತಲೆ ಇಲ್ಲದಿದ್ದರೂ ತಲೆತಲಾಂತರದಿಂದ ಬಂದ ಅಸ್ತಿಗೇನು ಕಡಿಮೆ ಇರಲಿಲ್ಲ. ಅದನ್ನು ಕೇಳಿದ ಅವರ ಅಮ್ಮ ಇದೇನೋ? ಕಪಿ ಚೇಷ್ಟೆ ಎಂದು ಬೈದರು. ಬೈದರೂ ಬೆಂಬಿಡದ ಬೇತಾಳದಂತೆ ಕಾಡಿ ಅವರ ಮನೆ ವಿಳಾಸ ಮತ್ತು ಕುಂಡಲಿ ಕೇಳಿ ಪಡೆದ. ಹೆಣ್ಣು ಗಂಡಿನ ಮನೆಯಲ್ಲೇ ನೋಡುವ ಶಾಸ್ತ್ರ ಇದ್ದರು, ಅವರಿಗೆ ಕರೆ ಮಾಡಿ ನಾವೇ ಹೆಣ್ಣು ನೋಡಲು ಬರುತ್ತೇವೆ ಎಂದು ಶಾಸ್ತ್ರಕ್ಕೆ ಶಸ್ತ್ರ ಚಿಕಿತ್ಸೆ ಮಾಡಿ, ಅವರ ಅಮ್ಮ ಬೇಡವೆಂದರೂ ಕೇಳದೆ ಹೇಳಿದ. ಅವರ ಮನೆಯವರು ಬರುವವರನ್ನು ಬೇಡವೆನ್ನಲು ಆಗದೆ ಬನ್ನಿ ಎಂದರು. ಸುಧೀರ್ ನ ಖುಷಿಗೆ ಪಾರವೇ ಇರಲಿಲ್ಲ. ಎಲ್ಲರಿಗೂ ಬೇಡ ಬೇಡ ಎಂದರು ಕೇಳದೆ ಪಾರ್ಟಿ ಕೊಡಿಸಿದ್ದ. ಎಲ್ಲರು ನನ್ನ ಸುಲವಾಗಿ ದೇವರಲ್ಲಿ ಪ್ರಾರ್ಥಿಸಿ ಎಂದು ಕುಡಿದ ಅಮಲಿನಲ್ಲಿ ವಿನಂತಿಸಿದ್ದ. ಮಂಜ ಸುಧೀರನಿಗೆ ಹಣ್ಣು ತೆಗೆದು ಕೊಂಡು ಹೋಗು ಎಂದು ಹೇಳಿದ್ದ.

 ಮರುದಿನ ಎಲ್ಲರೂ ಮಂಜನ ಸಮೇತವಾಗಿ ಹೆಣ್ಣಿನ ಮನೆಗೆ ಹೆಣ್ಣು ನೋಡಲು ಹೋಗಿದ್ದಾಗಿತ್ತು. ನಾವು ಹೋಗಿರುವಷ್ಟು ಜನರನ್ನು ನೋಡಿ ಹೆಣ್ಣಿನ ಮನೆಯವರು ಗಾಬರಿ ಆಗಿದ್ದರು. ನಾವು ನಿಶ್ಚಿತಾರ್ಥ ಮುಗಿಸಿಕೊಂಡೆ ಹೋಗುತ್ತೇವೆ ಎಂದು ತಿಳಿದುಕೊಂಡಿದ್ದರು. ಸುಧೀರ ಹೆಣ್ಣು ನೋಡಿ ನಾಚಿ ನೀರಾಗಿದ್ದ. ಹೆಣ್ಣು ನಿಜವಾಗಿಯು ದಂತದ ಗೊಂಬೆ ಹಾಗೆಯೇ ಇದ್ದಳು. ಅವಳ ಸಿಂಗಾರ ಕೂಡ ಅಷ್ಟೇ ಭರ್ಜರಿ ಆಗಿತ್ತು. ಸುಧೀರ ಮರು ಮಾತಿಲ್ಲದೆ ಒಪ್ಪಿ ಬಿಟ್ಟ. ಮದುವೆ ನಿಶ್ಚಿತಾರ್ಥ ಕೂಡ ನಿರ್ಧರಿಸಿದರು. ಆದರೆ ಹೆಣ್ಣಿನ ತಂದೆ ನಿಮ್ಮ ಬಳಗ ತುಂಬಾ ದೊಡ್ಡದು ಎಂದು ಕಾಣುತ್ತೆ ಎಂದರು. ಹಾಗೇನಿಲ್ಲ ಮಾವಾ ಇವರೆಲ್ಲಾ ನನ್ನ ಗೆಳೆಯರು ಎಂದು ಹೇಳಿ ಸುಮ್ಮನಾಗಿಸಿದ್ದ.

 ಒಂದು ದಿನ ಸುಧೀರ ಅವಳನ್ನು ಭೇಟಿಯಾಗಲು ಹೋಗುತ್ತಿದ್ದೇನೆ. ಏನು? ಮಾತನಾಡಬೇಕು ಹೇಳು ಎಂದು ಮಂಜನ ತಲೆ ತಿಂದಿದ್ದ. ಹೋಗಿ ಅವಳ ಹೆಸರು ಕೇಳಬೇಡ ಎಂದ. ಅದಕ್ಕೆ ಸುಧೀರ ನನಗೇನು ಅಷ್ಟು ತಲೆ ಇಲ್ಲವೇ ಅವಳ ಹೆಸರು ಪ್ರತಿಮಾ ಅದು ನನಗೆ ಗೊತ್ತು. ಮತ್ತೆ ಏನಾದರು ಹೇಳು ಎಂದು ಕೇಳಿದ್ದ. ಮಂಜ ಅವನಿಗೆ ಭೀತಿಯಿಂದ ವರ್ತಿಸಬೇಡ, ನಿನ್ನ ಹೆಸರು ಸುಧೀರ ನೆನಪಿರಲಿ ಎಂದು ತಾಕೀತ್ ಮಾಡಿದ್ದ. ಮತ್ತು ಒಂದು ಚಾಕಲೇಟ್ ತೆಗೆದುಕೊಂಡು ಹೋಗು ಎಂದು ಹೇಳಿದ್ದ. ಮರುದಿನ ಸುಧೀರನ ತುಟಿಗೆ ದೊಡ್ಡದಾದ ಗಾಯ ಆಗಿತ್ತು. ಏನೋ? ಇದು ಎಂದು ಕೇಳಿದರೂ ಯಾರಿಗೂ ಹೇಳಲಿಲ್ಲ.

ಮದುವೆ ನಿಶ್ಚಿತಾರ್ಥ ದಿವಸ ಮಂಜ ಸುಧೀರನಿಗೆ ಟೀ-ಶರ್ಟ್ ಹಾಕಿಕೋ ಎಂದು ಹೇಳಿದ್ದ. ಸುಧೀರ ಮಂಜನ ಮಾತಿನಂತೆ ಟೀ-ಶರ್ಟ್ ಹಾಕಿಕೊಂಡು ಮಣೆ ಮೇಲೆ ಕೂಡುತ್ತಿದ್ದಾಗ, ಎಲ್ಲರೂ ಸುಧೀರನನ್ನು ನೋಡಿ ನಗಲು ಶುರು ಮಾಡಿದರು. ಏಕೆಂದರೆ? ಸುಧೀರ್ ಬನಿಯನ್ನು ತೋಳು ಅವನ ಟೀ-ಶರ್ಟ್ ಕಿಂತ ದೊಡ್ಡದು ಇತ್ತು. ಅದನ್ನು ನೋಡಿ ಕೆಳ ಮಾರಿ ಮಾಡಿ ಕುಳಿತಿದ್ದ ಹೆಣ್ಣು ಕೂಡ ನೋಡಿ ನಕ್ಕಾಗ, ನಮಗೆ ಅವಳ ನಿಜವಾದ ದಂತ ದರ್ಶನ ಆದ ಮೇಲೆ, ದೂರ ದೂರ ಇರುವ ದೊಡ್ಡ ಚೂಪಾದ ದಂತಿ ಪಂಕ್ತಿಗಳು. ಸುಧೀರನಿಗೆ ಏನಾಗಿತ್ತು? ಎಂದು ಗೊತ್ತಾಗಿತ್ತು. ಆದರೆ ಇದರಲ್ಲಿ ಪಾಪ ಮಂಜನದು ಏನು? ತಪ್ಪು ಇರಲಿಲ್ಲ, ಏಕೆಂದರೆ ಅವನಿಗೆ ಆ ವಿಷಯ ತಿಳಿದಿದ್ದೆ ಅವಾಗ. ಸುಧೀರ್ ತಲೆ ಎತ್ತುವ ಧೈರ್ಯ ಮಾಡಲಿಲ್ಲ. ಕಡೆಗೆ ಮಂಜ ಅವನಿಗೆ ಟೀ-ಶರ್ಟ್ ಹೇಳಿದ್ದೆ ತಪ್ಪಾಯಿತು ಎಂದೆನಿಸಿ, ಅವನಿಗೆ ಶರ್ಟ್ ಹಾಕಿಕೊಂಡು ಬರಲು ಹೇಳಿದ. ಮತ್ತೆ ನಿಶ್ಚಿತಾರ್ಥ ಮುಗಿಸಿದರು. ಆಗ ಮದುಮಗಳ ತಂದೆ ನಾವು ನಮ್ಮ ಪುಟ್ಟಿಯನ್ನು ತುಂಬಾ ಪ್ರೀತಿಯಿಂದ ಬೆಳೆಸಿದ್ದೇವೆ. ಏನೂ ಕಡಿಮೆ ಮಾಡಿಲ್ಲ. ಚೆನ್ನಾಗಿ ನೋಡಿಕೋ ಎಂದು ಹೇಳಿದರು.

 ಮದುವೆ ಆಗುವವರೆಗೂ ನಾವು ಸುಧೀರನಿಗೆ "ಪ್ರತಿಮಾ ಚುಂಬನಂ ದಂತ ಭಗ್ನಂ" ಮತ್ತು ಅವನೇ ಅವಸರ ಮಾಡಿಕೊಂಡು ಅಪಘಾತ ಮಾಡಿಕೊಂಡ ಎಂದು ತುಂಬಾ ದಿವಸ ಅವನ ತುಟಿ ನೋಡಿ ಕಾಡಿದ್ದೆವು. ಆದರೂ ಏನು ಮಾಡಲು ಸಾಧ್ಯವಿರಲಿಲ್ಲ ಪಾಲಿಗೆ ಬಂದಿದ್ದು ಪಂಚಾಮೃತ ಎಂದು ಸುಮ್ಮನೆ ಇದ್ದ. ಮದುವೆ ವಿಚಾರವಾಗಿ ಅವನ ಮಾವ ಬಂದಾಗ, ನನ್ನ ಹಲಕಟ ಮಾವ ಬಂದಿದ್ದ ಎಂದು ಹಲ್ಲು ಕಡಿಯುತ್ತಿದ್ದ.ಅದನ್ನು ತಿಳಿದು ಅವನ ಮಾವ ಅವಳ ಹಲ್ಲುಗಳನ್ನ ಸರಿ ಮಾಡಿಸಿದ್ದರು.

ಮದುವೆಯಲ್ಲಿ ಅವಳು ಪ್ರತಿ ಮಾತಿಗೂ ನಗುತ್ತಿದ್ದಳು. ಮದುವೆ ಆದ ಮೇಲೆ ತಿಳಿಯಿತು ಅವರ ಅಪ್ಪ ಅವಳಿಗೆ ಚಿಕ್ಕವಳಿದ್ದಾಗ ತುಂಬಾ ಚಾಕ್ಲೇಟ್ ತಂದು ಕೊಡುತ್ತಿದ್ದರು. ಅದಕ್ಕೆ ಹಲ್ಲುಗಳು ಬೇಗನೆ ಹುಳುಕು ಆಗಿ ಬಿದ್ದು, ದೊಡ್ಡವಾಗಿ ಬಂದಿದ್ದವು ಎಂದು.ಈಗ ಮಂಜನನ್ನು ದಿನವು ಹೊಗಳುತ್ತಾ ಇರುತ್ತಾನೆ. ಮತ್ತು "ಹೇ...ಚಿನ್ನದ ಬೊಂಬೆಯಲ್ಲಾ, ದಂತದ ಬೊಂಬೆಯಲ್ಲಾ...ಬುದ್ಧಿ ಇರುವ ಬೊಂಬೆಯೂ...ಕಾಲವು ಕುಣಿಸಿದಂತೆ.., ಅ ವಿಧಿ ಏಣಿಸಿದಂತೆ.., ಅಡುವ ಸಮಯದಗೊಂಬೆ ಮಾನವ.."ಅನ್ನುವ ಬದಲು ಅಡುವ ಸಮಯದ ಗೊಂಬೆ ಮಾವನ ಎಂದು ಹಾಡುತ್ತ ಅವಳ ಕೈಯಲ್ಲಿ ಆಡುವ ಸಮಯದ ಗೊಂಬೆ ಆಗಿದ್ದಾನೆ.