Tuesday, November 22, 2011

ಬರಿಬೇಕು.. ಬರಿಬೇಕು ..

ಅದೆನೋ ಗೊತ್ತಿಲ್ಲ, ಏನೋ? ಒಂದು ಕಸಿವಿಸಿ, ಮನಸು ಬರಿದಾಯಿತೆ ಎಂದು. ನನಗು ಹಾಗೆ ಅನ್ನಿಸಿರಲಿಲ್ಲ, ಏಕೆಂದರೆ ಕೆಲಸದ ಒತ್ತಡದಿಂದ ಬರೆಯುವುದಕ್ಕೆ ವಿರಾಮ ಹಾಡಿದ್ದೆ. ತುಂಬಾ ದಿನಗಳಿಂದ ಏನು ಬರೆಯದೆ ಇದ್ದಿದ್ದರಿಂದ, 'ಬರ'ಹದಲ್ಲಿ 'ಬರ' ಇದೆ ಎಂದು ತಿಳಿದಿದ್ದೆ ಈ ಸಮಯದಲ್ಲಿ. ಈ ಕ್ಷಾಮಕ್ಕೆ ಪೂರ್ಣ ವಿರಾಮ ಹಾಡಿದರೆ ಕ್ಷೇಮ ಎಂದು, ಇವತ್ತು ಏನಾದರು? ಬರೆದೆ ತೀರಬೇಕು ಎಂದು ಯೋಚನೆ ಮಾಡುತ್ತಾ ಕುಳಿತಿದ್ದೆ.

ಕೆಲವರಿಗೆ ಕೆಲವೊಂದು ಹುಚ್ಚು ಖಂಡಿತ ಇರುತ್ತವೆ. ನಮ್ಮ ಮಂಜನಿಗೆ ಯಾವುದೇ ದೊಡ್ಡ ಸಮೆಸ್ಯೆಯಲ್ಲೂ ಹಾಸ್ಯ ಕಾಣುವ ಪ್ರವರ್ತಿ. ಒಮ್ಮೆ ನಾನು ಮಂಜ ನನ್ನ ಬೈಕ್ ನಲ್ಲಿ ಹೋಗುತ್ತಿರುವಾಗ, ಬೈಕ್ ಮುಂದಿನ ಒಂದು ಹುಡುಗಿಯ ಬೈಕ್ ಗೆ ತಾಗಿತು. ಅವಳು ಬಂದು ಜಗಳ ಶುರು ಮಾಡಿದಳು. ಅಷ್ಟರಲ್ಲಿ, ಮಂಜ ಏನೋ.. ಸ್ವಲ್ಪ ಪ್ರೆಸ್ ಆಯಿತು ಅಷ್ಟೇ ಎಂದ. ಏನ್ರೀ? ಹಾಗೆ ಅಂದರೆ ಎಂದಳು. ನೀವೇ ಬರೆದಿದ್ದೀರಿ ತಾನೇ ಪ್ರೆಸ್ ಎಂದು ನಿಮ್ಮ ಗಾಡಿ ಹಿಂದುಗಡೆ ಎಂದು ಹೇಳಿದ. ಅದನ್ನು ಕೇಳಿ ಅವಳಿಗೂ ನಗು ತಡಿಯಲು ಆಗಲಿಲ್ಲ, ಸುಮ್ಮನೆ ಹೊರಟು ಹೋದಳು. ಹೀಗೆ ಮತ್ತೊಮ್ಮೆ ಮಂಜನ ಮನೆಗೆ ಹೋಗಿದ್ದೆ. ನಾವು ಕಾಫಿ ಕುಡಿಯುತ್ತ ಇರುವಾಗ ಒಂದು ಜೇನು ಹುಳು ಬಂದಿತು. ಅದಕ್ಕೆ ಮಂಜ ಅಕ್ಕ-ಪಕ್ಕದ ಮನೆ ಬಿಟ್ಟು, ಇಲ್ಲೇ ಏಕೆ? ಬಂತು ಗೊತ್ತ ಎಂದು ನನಗೆ ಕೇಳಿದ. ನಾನು ಗೊತ್ತಿಲ್ಲ ಎಂದು ಹೇಳಿದೆ. ನನ್ನ ಸಿಹಿ ಮಡದಿಯ ಸಲುವಾಗಿ ಎಂದ. ಮಂಜನ ಮಡದಿ ಅವನನ್ನು ಸಿಟ್ಟಿನಿಂದ ನೋಡಿದಳು. ಏಕೆ? ತಂಗ್ಯಮ್ಮ ಹೊಗಳಿದರು ಕೂಡ ಸಿಟ್ಟು ಎಂದು ಕೇಳಿದೆ. ನಿನ್ನೆ ನನಗೆ ಸ್ವಲ್ಪ ಶುಗರ್ ಇದೆ ಎಂದು ಡಾಕ್ಟರ ಹೇಳಿದರು ಅದಕ್ಕೆ ಈ ಮಾತು ಎಂದಳು. ನನಗೆ ತುಂಬಾ ನಗು ಬಂತು. ಒಮ್ಮೆ ಮಂಜನ ಜೊತೆ ಹೋಟೆಲಿಗೆ ಹೋಗಿದ್ದೆ. ಅಲ್ಲಿ ಒಬ್ಬ ಹುಡುಗಿ ತುಂಬಾ ಕಷ್ಟ ಪಟ್ಟು ಫೋರ್ಕ್ ನಿಂದ ದೋಸೆ ತಿನ್ನುತ್ತಿದ್ದಳು. ಅದನ್ನು ನೋಡಿ ಮಂಜ ನಗುತ್ತ ಇವಳು ಫೋರ್ಕಿನಿಂದ ಕಾಫಿ ಕುಡಿದರೆ ಹೇಗಿರುತ್ತೆ ಎಂದು ನನಗೆ ಕೇಳಿದ. ಹೀಗೆ ನನ್ನ ಮಗನಿಗೆ ಕಾರ್ಟೂನ್ ಧ್ಯಾನ... ನನಗೆ ಬರೆಯುವ ಹುಚ್ಚು.

ಹೀಗೆ ಒಮ್ಮೆ ಮಡದಿಗೆ ಬರೆದರೆ ಬೀಚಿ ಅವರ ಹಾಗೆ ಬರೀಬೇಕು ಕಣೇ ಎಂದು ಹೇಳಿದೆ. ಅದಕ್ಕೆ ಮಡದಿ ನೀವು ಏನಾದರು ಗೀಚಿ, ಆದರೆ ಓದು ಓದು ಎಂದು ನನ್ನ ತಲೆ ಮಾತ್ರ ತಿನ್ನಬೇಡಿ ಎಂದು ನನ್ನನ್ನು ತಲೆಯ ಹೇನಿಗೆ ಹೋಲಿಸುವ ಹಾಗೆ ಹೇಳಿದಳು.

ಅಷ್ಟರಲ್ಲಿ ಮಡದಿ ಕೂಗಿ "ಕಸಬರಿಗೆ ತಂದು ಕೊಡಿ" ಎಂದು ಕೂಗಿದಳು. ಕಸಬರಿಗೆ ತೆಗೆದುಕೊಂಡು ಹೋಗಿ ಅವಳ ಕೈಗೆ ಕೊಟ್ಟೆ. ಕೂಡಲೇ ಕಸಬರಿಗೆ ಕೆಳಗೆ ಒಗೆದು,ಕೋಪದಿಂದ ಕಸಬರಿಗೆ ಹೀಗೆ ಕೈಗೆ ಕೊಡುವುದಾ ಎಂದು ಬೈದಳು. ಮತ್ತೆ ಇನ್ನು ಹೇಗೆ ಕೊಡಬೇಕು ತಲೆ ಮೇಲೆ ಇಡಬೇಕಾ ಅಥವಾ ಕಾಲಿಗೆ ಎಂದೆ. ಹೀಗೆ ಕೈಗೆ ಕೊಟ್ಟರೆ ಜಗಳವಾಗುತ್ತೆ ಎಂದು ಕೋಪಮಾಡಿಕೊಂಡು ಜಗಳ ಶುರುಮಾಡಿದಳು. ಅದು ಯಾರು ಅವಳಿಗೆ ಹೀಗೆ ಭವಿಷ್ಯವಾಣಿ ಹೇಳಿದರೋ ನಾ ಕಾಣೆ ಜಗಳ ಆಗುತ್ತೆ ಎಂದು. ಅವರ ಏಳನೇ ಅರಿವು ಸಾಧಿಸಿರುವ ಭವಿಷ್ಯವಾಣಿಗೆ ಸಲಾಂ ಹೊಡೆದೆ(ನಿಜವಾಗಿಯೂ ಜಗಳ ಶುರು ಮಾಡಿದ್ದರಿಂದ). ಇನ್ನೊಮ್ಮೆ ಕಸ'ಬರಿ'ಗೆ ಉಸಾ'ಬರಿ'ಗೆ ಹೋಗುವುದು ಬೇಡ ಎಂದು ನಿರ್ಧರಿಸಿದೆ. ಆದರೂ ಎರಡಲ್ಲೂ ಬರಿ ಎಂಬ ಆಜ್ಞೆ ಮಾತ್ರ ಇತ್ತು.

ಕಸಗುಡಿಸಿದ ಮೇಲೆ ಬಂದು, ಏನು? ಅಷ್ಟು ಆಳವಾಗಿ ಯೋಚಿಸುತ್ತ ಇದ್ದೀರಾ ಎಂದಳು. ಏನಾದರು ಬರೀಬೇಕು ಕಣೇ ಎಂದೆ. ನೀವೇನು ಬರೆಯುವುದು, ಈಗಾಗಲೇ ಎಲ್ಲ ಖ್ಯಾತ ಸಾಹಿತಿಗಳು ಎಲ್ಲವನ್ನು ಬರೆದು ಮುಗಿಸಿದ್ದಾರೆ. ನೀವು ಅದನ್ನೇ ನಿಮ್ಮ ಧಾಟಿಯಲ್ಲಿ ಬರೆಯಬಹುದು ಅಷ್ಟೇ. ಅಥವಾ ಅವರು ಬಿಟ್ಟಿರುವ ಅಲ್ಪ ಸಲ್ಪ ಸಾಹಿತ್ಯ ಮಾತ್ರ ಬರೆಯಲು ಸಾಧ್ಯ ನೀವು ಖಾಲಿದಾಸರು ಎಂದು ಹಿಯಾಳಿಸಿದಳು.

"ಕಾಳಿದಾಸ ಕಾವ್ಯ ನಮ್ಮಪ್ಪನ್ನ ಕೇಳ್ರಿ ...ಖಾಲಿ ದೋಸೆಗಿಂತ ಒಳ್ಳೆ ರುಚಿ ಇಲ್ಲರಿ" ಎಂದು ಹಾಗೆ ಹಾಡುತ್ತ ಕುಳಿತ್ತಿದ್ದಾಗ, ಇದೊಂದು ಗೊತ್ತು ನಿಮಗೆ ಹೋಗಿ ಬೇಗನೆ ನೀರು ಕಾಯಿಸಿ ಎಂದು ಕಳುಹಿಸಿದಳು. ಬೇಜಾರಿನಿಂದ "ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ...." ಎಂದು ಹಾಡುತ್ತ, ನೀರು ಕಾಯಿಸಲು ಹೋದೆ. ಹಾಗೆ ಆಳವಾಗಿ ಯೋಚಿಸುತ್ತ ಕಟ್ಟಿಗೆ ಹಾಕುತ್ತ ಕುಳಿತಿರುವಾಗ ನನ್ನ ಕೈ ಒಳಗಡೆ ಹಾಕಿಬಿಟ್ಟಿದ್ದೆ. ನನ್ನ ಕೈಗೆ ಬರೆ ಬಿದ್ದಿತ್ತು. ಜೋರಾಗಿ ಕಿರುಚಲು ಮಡದಿ ಬಂದು, ಈಗ ಬರೆ ಸಿಕ್ಕಿತಲ್ಲ, ಅದಕ್ಕೆ ಹೇಳಿದ್ದು ನಿಮಗೆ ಬರಿಬೇಕು.. ಬರಿಬೇಕು .. ಎಂದು ಹೇಳಬೇಡಿ ಎಂದು, ಮೇಲೆ ಇರುವ ಅಶ್ವಿನಿ ದೇವತೆಗಳು ಅಸ್ತು ಅಸ್ತು ಎಂದು ಬಿಟ್ಟಿದ್ದಾರೆ ಎಂದು ನಗುತ್ತ, ಇನ್ನೇನು ಬನ್ನಿ ಸಾಕು ಎಂದು ಹೇಳಿ ಕೈಗೆ ಬರ್ನೋಲ್ ಹಚ್ಚಿ ಮಲಗಲು ಹೇಳಿದಳು.

ಮರುದಿನ ಮಂಜ ಮತ್ತು ಅವನ ಮಡದಿ ಮನೆಗೆ ಬಂದಿದ್ದರು.ಮಂಜ ನನ್ನ ಕೈ ನೋಡಿ ಏನು? ಆಯಿತು ಎಂದ. ಅದಕ್ಕೆ ನನ್ನ ಮಡದಿ ನಿಮ್ಮ ಗೆಳೆಯನಿಗೆ ಬರೆ ಬೇಕಾಗಿತ್ತಂತೆ, ಅದಕ್ಕೆ ನಾನು ಕೊಟ್ಟೆ ಎಂದು ತಮಾಷೆ ಮಾಡಿದಳು. ಆಮೇಲೆ ಎಲ್ಲವನ್ನು ವಿಸ್ತಾರವಾಗಿ ಹೇಳಿ, "ಬರೆದಿದ್ದೆಲ್ಲಾ ಸಾಹಿತ್ಯ ಅಲ್ಲ, ಕೊರೆದಿದೆಲ್ಲ ವೇದಾಂತ ಅಲ್ಲ" ಎಂದು ಅಂದಳು. ಇದು ನಮ್ಮದೇ ಮುಖ ಸ್ತುತಿ ಎನ್ನಿಸಿ, ನಾನು ಮತ್ತು ಮಂಜ ಮುಖ.. ಮುಖ.. ನೋಡಿಕೊಂಡೆವು. ನನ್ನ ಮತ್ತು ಮಂಜನ ಮಡದಿ ನಗುತ್ತ ಅಡುಗೆ ಮನೆಗೆ ಹೋದರು.

Saturday, August 27, 2011

ಅತಿಥಿ ದೇವೋಭವ ....

ಏನ್ರೀ? ಇದು ನಿಮ್ಮ ಸಾಮಾನುಗಳನ್ನು ಹೀಗೆ ಇಟ್ಟುಕೊಂಡರೆ ಮನೆಯಲ್ಲಿ ಹುಳ - ಹುಪ್ಪಡಿ ಬರುತ್ತವೆ ಎಂದು ಬೈದಳು ಮಡದಿ. ಅದಕ್ಕೆ ನಾನು ಅವು ಏನು? ಗೆಸ್ಟಾ?, ಬಂದರೆ ಬರಲಿ ಬಿಡು ನಿನಗೇನೂ ಕಷ್ಟ ಎಂದೆ. ಗೆಸ್ಟ್ ಬರುವವರಿದ್ದರೆ ಮಾತ್ರ ಮನೆ ಸ್ವಚ್ಚವಾಗಿ ಇಡಬೇಕಾ?, ಆಯಿತು ಬಿಡಿ ಹಾಗೆ ಬಿದ್ದಿರಲಿ ನನಗೇನೂ, ಎಷ್ಟೇ ಆದರೂ ಅವು ನಿಮ್ಮ ಸಂಬಂಧಿಕರು(ಗೆಸ್ಟ್) ಅಲ್ಲವೇ ಎಂದಳು. ಅಷ್ಟರಲ್ಲಿ ನನ್ನ ಪುಸ್ತಕದ ಒಳಗಿಂದ ಒಂದು ಜಿರಲೆ ತನ್ನ ಮೀಸೆ ತೋರಿಸುತ್ತ ಹೊರಗಡೆ ಬಂತು. ಪಾಪ ಅದಕ್ಕೂ ಕೇಳಿಸಿರಬೇಕು. ನಿಮಗಿಂತ ಇದೆ ವಾಸಿ ನೀವು ಪುಸ್ತಕ ತಂದು ಒಟ್ಟುತ್ತಿರಿ..ಅದನ್ನು ಓದಲು ಪಾಪ ನಿಮ್ಮ ಸಂಬಂಧಿ ಕಷ್ಟ ಪಡುತ್ತೇ ಎಂದು ವ್ಯಂಗದ ಮಾತು ಆಡಿ ಹೊರಟು ಹೋದಳು. ರಕ್ತ ಸಂಬಂಧಿ ಖಂಡಿತಾ ಅಲ್ಲ ನನ್ನ ರಕ್ತ ಕೆಂಪು ಅದರ ರಕ್ತ ಬಿಳಿ. ಬಿಳಿ ರಕ್ತ ಕಣಗಳು ಮನುಷ್ಯನಲ್ಲಿ ಇರುತ್ತವೆ ಎಂದು ಓದಿದ ನೆನಪು. ಆದರೆ ಸಂಬಂಧಿ ಆಗುವಷ್ಟು ಇವೆ ಎಂದು ಹೇಳಿದ್ದು ಅರಗಿಸಿ ಕೊಳ್ಳಲಾಗಲಿಲ್ಲ.

ಅದು ನಿರ್ಭಯದಿಂದ ನನ್ನ ಪುಸ್ತಕಗಳ ಮೇಲೆ ನಡೆದಾಡುತ್ತಿರುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದೆನಿಸಿ ಅದನ್ನು ಹೊಡೆಯಲು ಪೊರಕೆ ತೆಗೆದುಕೊಂಡು ಬರುವಷ್ಟರಲ್ಲಿ ಮಾಯವಾಗಿತ್ತು. ಕಡೆಗೆ ಎಲ್ಲ ಪುಸ್ತಕಗಳನ್ನು ಹೊಂದಿಸಿ ಇಟ್ಟೆ. ಮರೆಯಲ್ಲಿ ಇದ್ದ ಜಿರಲೆ ಮತ್ತೆ ಹೊರಬಂತು. ಈ ಬಾರಿ ಅದನ್ನು ತಿಥಿ ಮಾಡಿ ಅತಿಥಿಯನ್ನು ಮೀಸೆಯಿಂದ ಹಿಡಿದು ಹೊರಗಡೆ ಎಸೆದು ಬಂದೆ.

ಯಾವುದೇ ದೇವರು ಜಿರಳೆಯನ್ನು ವಾಹನ ಮಾಡಿಕೊಳ್ಳದೆ ಇದ್ದದ್ದಕ್ಕೆ, ನಾನು ಎಲ್ಲಾ ದೇವರಿಗೆ ತುಂಬಾ ಧನ್ಯವಾದ ಹೇಳಲೇಬೇಕು. ಏಕೆಂದರೆ, ಮಹಾಭಾರತದಲ್ಲಿ ಆದ ಮಾರಣಹೋಮಕ್ಕಿಂತ, ಒಂದಿಷ್ಟು ಜಾಸ್ತಿ ಅನ್ನುವಷ್ಟು ಜಿರಲೆ ಸಂಹಾರ ಮಾಡಿದ ಕೀರ್ತಿ ನನಗೆ ಸಲ್ಲುತ್ತೆ. ಅದೆಲ್ಲದರ ಪಾಪದ ಜೊತೆಗೆ ಜಿರಲೆ ವಾಹನ ಮಾಡಿಸಿಕೊಂಡ ದೇವರು ಕೂಡ ನನಗೆ ಶಾಪ ಹಾಕುತ್ತಿದ್ದರು. ಇದೆ ಕಾರಣಕ್ಕಾಗಿ ನಮ್ಮ ಇಲಿ ಮಹಾಶಯನಿಗೆ ಪೂರ್ತಿ ಸ್ವಾತಂತ್ರ ನಮ್ಮ ಮನೆಯಲ್ಲಿ ಇದೆ. ನಾನು ಕಾಲಿಡದ ಜಾಗಕ್ಕೂ ಕೂಡ ನಮ್ಮನೆ ಇಲಿ ಮರಿಗಳು ಓಡಾಡುತ್ತವೆ. ಮೊದಮೊದಲು ಜಿರಲೆ ಕಂಡ ಕೂಡಲೇ ಚೀರಲು ಶುರು ಮಾಡುತ್ತಿದ್ದೆ. ಆಮೇಲೆ ಜಿರಲೆ ನನಗೆ ಒಂದು ಚಿಲ್ಲರೆ ಪ್ರಾಣಿಯಾಗಿ ಕಾಣಿಸತೊಡಗಿತು.


ನಾನು ಕಲಿತ ಕೆಲ ವಿಧ್ಯೆ ಪ್ರದರ್ಶಿಸಬೇಕು ಎಂದು ಮಡದಿಯ ಬಳಿ ಬಂದು ಜಿರಲೆಗೆ ಮೀಸೆ ಹೇಗೆ ಉಪಯೋಗಕ್ಕೆ ಬರುತ್ತೆ ಹೇಳು ಎಂದು ಕೇಳಿದೆ. ಅದಕ್ಕೆ ಮಡದಿ ಅದನ್ನು ಸಾಯಿಸಿದ ಮೇಲೆ ಅದನ್ನು ಎತ್ತಿ ಹಿಡಿದು ಬಿಸಾಡುವುದಕ್ಕೆ ಎಂದು ಹೇಳಿದಳು. ಅದಲ್ಲಾ ಕಣೇ ಏಕೆ? ಇರುತ್ತೆ ಹೇಳು ಎಂದೆ. ಮತ್ತೆ ಯೋಚಿಸಿ, ಅದು ಶೇವಿಂಗ್ ಮಾಡಿಕೊಂಡಿರಲ್ಲ ಅದಕ್ಕೆ ಇರುತ್ತೆ ಎಂದು ಹೇಳಿ ನಗಹತ್ತಿದಳು. ನಾನು ಅದರ ಮೀಸೆಯಿಂದ ಅದು ಆಹಾರ ಹುಡುಕುತ್ತೆ, ಮತ್ತು ಅದರಿಂದ ಹೆಣ್ಣು ಜಿರಲೆಗಳನ್ನು ಆಕರ್ಷಿಸಲು ಉಪಯೋಗಿಸುತ್ತೆ ಎಂದು ಹೇಳಿದೆ. ಓ ಹಾಗಾ.. ಎಂದು ರಾಗ ಎಳೆದು, ಹೇಗೆ ಇದ್ದರೂ ಇಷ್ಟು ಸ್ವಚ್ಚ ಮಾಡಿದ್ದೀರಾ, ಪೂರ್ತಿ ಮನೆ ಸ್ವಚ್ಚ ಮಾಡಿಬಿಡಿ ಮೀಸೆ ಹೊತ್ತ ಗಂಡಸರೇ...ನಾನು ಅಡುಗೆ ಮಾಡುತ್ತೇನೆ ಎಂದಳು ಮಡದಿ. ಪೂರ್ತಿ ಮನೆ ಸ್ವಚ್ಚ ಮಾಡುವ ಸಮಯದಲ್ಲಿ ಮತ್ತಷ್ಟು ಮಾರಣಹೋಮ ನಡೆಯಿತು. ಮನೆಯಲ್ಲಿ ತುಂಬಾ ಧೂಳು ಇದ್ದಂದರಿಂದ ಸ್ವಲ್ಪ ನೆಗಡಿ ಆಯಿತು. ಹೀಗಾಗಿ ಸಂಜೆ ಡಾಕ್ಟರ ಬಳಿ ಹೋಗುವ ಪರಿಸ್ತಿತಿ ಬಂತು.


ಡಾಕ್ಟರ ಎಲ್ಲ ಪರೀಕ್ಷಿಸಿ ಒಂದಿಷ್ಟು ಮಾತ್ರೆ ಕೊಟ್ಟರು. ತೆಗೆದುಕೊಂಡು ಮನೆಗೆ ಬಂದೆ. ಊಟವಾದ ಮೇಲೆ ಹಾಗೆ ಮಲಗಿಕೊಳ್ಳುವ ಸಮಯದಲ್ಲಿ ಜ್ಞ್ಯಾಪಕಕ್ಕೆ ಬಂತು ಮಾತ್ರೆ ತೆಗೆದುಕೊಂಡಿಲ್ಲವೆಂದು. ಮಡಿದಿಗೆ ಒದರಿ ಹೇಳಿದೆ ಮಾತ್ರೆ ತೆಗೆದುಕೊಂಡು ಬಾ ಎಂದು. ಅವಳು ಮಾತ್ರೆ ತೆಗೆದುಕೊಳ್ಳುವಷ್ಟರಲ್ಲಿ ಕರೆಂಟ್ ಹೋಯಿತು. ಅವಳು ತೆಗೆದುಕೊಂಡು ಬಂದು ಕೊಟ್ಟಳು. ಅದನ್ನು ಹಿಡಿದುಕೊಂಡು ಕುಳಿತಿದ್ದೆ. ಅವಳು ನೀರು ತರಲು ಹೋದಳು. ನೀರು ತಂದು ಕೊಟ್ಟಳು. ಅಷ್ಟರಲ್ಲಿ ಮತ್ತೆ ಕರೆಂಟ್ ಬಂತು. ಅವಳು ನನ್ನನು ನೋಡಿ ಜೋರಾಗಿ ನಗಹತ್ತಿದಳು. ನಾನು ನನ್ನ ಕೈಯಲ್ಲಿ ಇದ್ದದ್ದು ನೋಡಿ ನನಗೆ ಗಾಬರಿ, ಏಕೆಂದರೆ? ಅದು ಡಾಕ್ಟರ ಕೊಟ್ಟ ಮಾತ್ರೆ ಇರಲಿಲ್ಲ. ಕ್ಯಾಪ್ಸುಲ್ ಹಾಗೆ ಇದ್ದ ನಮ್ಮ ಸಂಬಂಧಿ ಬಿಟ್ಟು ಹೋದ ಗಿಫ್ಟ್. ಅದೇ ... ಅದರ ಕ್ಯಾಪ್ಸುಲ್ ಗಾತ್ರದ ಜಿರಳೆ ಮೊಟ್ಟೆ. ಸಧ್ಯ ಸ್ವಲ್ಪದರಲ್ಲೇ ಬಚಾವ ಅದನ್ನು ಬಿಸಾಡಿ ಮಾತ್ರೆ ತೆಗೆದುಕೊಂಡು, ನನ್ನ ಪ್ರೀತಿಯ ಶ್ರೀ ರಾಮನನ್ನು ನೆನೆದು ನಿದ್ದೆಗೆ ಜಾರಿದೆ.

Wednesday, August 24, 2011

ತರ್ಲೆ ಮಂಜನ ಫ್ರೆಂಡ್ಶಿಪ್ ಪುರಾಣ....

ಮಂಜನ ಮನೆಗೆ ಹೋಗಿದ್ದೆ. ನಾನು ಫ್ರೆಂಡ್ಶಿಪ್ ಡೇ ವಿಶ್ ಮಾಡಲು, ನಾನು ವಿಶ್ ಮಾಡಬೇಕು ಎಂದು ಅನ್ನುಕೊಳ್ಳುವಷ್ಟರಲ್ಲಿ, ಸುಬ್ಬ ಬಂದವನೇ "ಹ್ಯಾಪಿ ಫ್ರೆಂಡ್ಶಿಪ್ ಡೇ" ಎಂದು ನನಗೆ ಮತ್ತು ಮಂಜನಿಗೆ ಕೈ ಕುಲುಕಿದ. ಮಂಜ ಸಿಟ್ಟಿನಿಂದ ಏನೋ? ಇದು ಫ್ರೆಂಡ್ಶಿಪ್ ಡೇ ಅಂತೆ. ಗೆಳೆತನಕ್ಕೆ ಕೂಡ ಒಂದು ದಿನ ಬೇಕಾ?, ಹಾಗಾದ್ರೆ ಗೆಳೆತನ ಅನ್ನುವುದು ಒಂದೇ ದಿನಕ್ಕೆ ಸೀಮಿತನಾ?. ಮೊದಲು, ನಾವೆಲ್ಲ ಗೆಳೆಯರು ದಿನವು ಸೇರುತ್ತಿದ್ದೆವು. ಗೆಳೆಯರ ಒಂದು ದೊಡ್ಡ ಅಡ್ಡ ಇರುತಿತ್ತು. ಆದರೆ ಈಗ ಅವರ ಅಡ್ರೆಸ್ ನೆನಪು ಆಗುವುದು ವರ್ಷದಲ್ಲಿ ಒಂದು ದಿನ ಮಾತ್ರ. ಫ್ರೆಂಡ್ಶಿಪ್ ಎನ್ನುವ ಶಿಪ್ ಮುಣುಗೋದು ಗ್ಯಾರಂಟೀ. ನೋಡುತ್ತಾ ಇರು ಮುಂದೊಂದು ದಿನ ಆಫೀಸ್ ನಿಂದ ಹಸಿದು ಬಂದ ಗಂಡನಿಗೆ ತಿಂಡಿ ಕೊಡದೆ ಇದ್ದರೂ, ಹಸ್ಬಂಡ್ ಡೇ ಎಂದು ಕೂಡ ಬರುತ್ತೆ. ಗಂಡನ ದುಡ್ಡಿನಿಂದ ಗುಂಡಿನ ಪಾರ್ಟಿ ಬೇರೆ ಇರುತ್ತೆ ಎಂದ. ಅಷ್ಟರಲ್ಲಿ ಮಂಜನ ಮಡದಿ ಒಳಗಿನಿಂದ ಬಂದು ಮೂವರಿಗೂ ತಿಂಡಿ ಕೊಟ್ಟು, ಮಂಜನಿಗೆ ಮಾತ್ರ ಟೇಬಲ್ ಮೇಲೆ ಕುಕ್ಕಿ ಹೋದಳು. ಸಧ್ಯ ನಾನು ವಿಶ್ ಮಾಡದೇ ಬಚಾವ್ ಎಂದು ಕೊಂಡೆ.

ಮತ್ತೆ ತಿಂಡಿ ತಿನ್ನುತ್ತ, ಮೊದಲು ನಿನ್ನಂತಹ ಉಡಾಳ ವಿದ್ಯಾರ್ಥಿಗಳು ಶಿಕ್ಷಕರ ದಿನಾಚರಣೆಯನ್ನು, ಸಿಕ್ಕ ಸಿಕ್ಕವರ ದಿನಾಚರಣೆ ಎಂದು ಎಲ್ಲರಿಗು ಹೊಡೆಯುತ್ತ ಹೋಗುತ್ತಿದ್ದೀರಿ ಎಂದ. ನನಗೆ ನಗು ತಡಿಯಲು ಆಗಲೇ ಇಲ್ಲ, ಏಕೆಂದರೆ, ಹಾಗೆ ಮೊದಲು ಮಾಡಿದ್ದು ಮಂಜನೆ. ನಮ್ಮ ಸಂಸ್ಕೃತಿಯಲ್ಲಿ ಪ್ರತಿಯೊಂದು ದಿನಕ್ಕೂ ಒಂದು ಹಿನ್ನಲೆ ಇರುತ್ತೆ. ಆದರೆ ಇವುಗಳಿಗೆ ಯಾವ ಹಿನ್ನಲೆ ಎಂದು ತಿಳಿಯದೆ ಇದ್ದರೂ, ಅದನ್ನು ಆಚರಿಸುವ ಮಹಾ ಪಂಡಿತರು ಜ್ಯಾಸ್ತಿ ಎಂದ. ಮತ್ತೆ ಅಷ್ಟರಲ್ಲಿ ಮಂಜನ ಮಡದಿ ಬಂದು ನೀರು ಟೇಬಲ್ ಮೇಲೆ ಕುಕ್ಕಿ ಹೋದಳು. ಅವಳ ಚಲನ-ವಲನ ನೋಡಿ, ಮೊದಲೇ ಮಂಜನಿಗೆ ಏನೋ ಪಾಠ ಆಗಿದೆ ಎಂದು ಅನ್ನಿಸಿತು. ಏನು? ತಂಗ್ಯಮ್ಮನಿಗೆ ತುಂಬಾ ಕೋಪ ಬಂದಿರೋ ಹಾಗಿದೆ ಎಂದು ಮಂಜನಿಗೆ ಕೇಳಿದೆ. ಏನು? ಇಲ್ಲ ನಿನ್ನೆ ರಾತ್ರಿ ಇಂದ ಹೀಗೆ ಸಿಟ್ಟು ಮಾಡಿಕೊಂಡಿದ್ದಾಳೆ ಎಂದ. ನೀನೆ ಏನೋ? ಕಿಟಲೆ ಮಾಡಿರಬೇಕು ಎಂದೆ. ನಾನೇನು ಮಾಡಿದ್ದೇನೆ ಅವಳಿಗೆ ಬೇಕಾಗಿದ್ದು ಎಲ್ಲವನ್ನು ಕೊಡಿಸಿದ್ದೇನೆ ಎಂದ. ಅವಳು ಪಿಜ್ಜಾ ತಿನ್ನುತ್ತೇನೆ ಎಂದಳು. ಅದನ್ನು ಸಹಿತ ಕೊಡಿಸಿದ್ದೇನೆ. ನೋಡು ನಾವು ಹವಾಗುಣಕ್ಕೆ ಅನುಗುಣವಾಗಿ ನಮ್ಮ ಆಹಾರ ಪದ್ದತಿಯನ್ನು ಅನುಸರಿಸುತ್ತೇವೆ. ಹವಾಗುಣ ಬದಲಾದಂತೆ ಅಲ್ಲಿಯ ಆಹಾರ ಪದ್ದತಿಯನ್ನು ನಾವು ಅನುಸರಿಸ ಬೇಕಾಗುತ್ತೆ. ಹೇಗೆಂದರೆ, ಉತ್ತರ ಕರ್ನಾಟಕದ ಜನ ಅಲ್ಲಿಯ ಹವಾಗುಣಕ್ಕೆ ಅನುಗುಣವಾಗಿ ಜೋಳದ ರೊಟ್ಟಿ, ಇಲ್ಲಿಯ ಜನ ರಾಗಿ ಮುದ್ದೆ ಹೀಗೆ...ಇಲ್ಲದೆ ಇದ್ದರೆ ನಮ್ಮ ಹಾವ-ಭಾವ ಬದಲಾಗುವುದು. ಅದರೂ ಕೂಡ ನಾನು ಏನೂ ಮಾತನಾಡದೆ ಪಿಜ್ಜಾ ಕೊಡಿಸಿದ್ದೇನೆ ಮತ್ತೇಕೆ ಸಿಟ್ಟು ನನಗೆ ಗೊತ್ತಿಲ್ಲ ಎಂದ.

ಅಷ್ಟರಲ್ಲಿ ಮಂಜನ ಮಡದಿ ಸಾವಿತ್ರಿ ಒಳಗಡೆಯಿಂದ ಬಂದು ನಾನು ಎಷ್ಟು ದೇವರನ್ನು ಬೇಡಿಕೊಳ್ಳ ಬೇಕೋ ತಿಳಿಯದಾಗಿದೆ ನೋಡಿ, ಎಂದು ನನಗೆ ಹೇಳಿದಳು. ಅದಕ್ಕೆ ಮಂಜ ನಾನು ಹೇಳುತ್ತೇನೆ. ಒಬ್ಬ ದೇವರಿಗೆ ಹರಕೆ ಹೊತ್ತರೆ ಖಂಡಿತ ನೆರವೆರುತ್ತೆ ಎಂದ. ಯಾರು ಆ ದೇವರು ಎಂದು ಬಾಯಿ ಬಿಟ್ಟು ಕೇಳಿದೆ. ಮತ್ತ್ಯಾರು ಪತಿ ದೇವ್ರು ಎಂದು ಹೇಳು ನಿಮ್ಮ ತಂಗ್ಯಮ್ಮನಿಗೆ ಎಂದು ಜೋರಾಗಿ ನಗ ಹತ್ತಿದ. ಈ ನಗುವುದೊಂದು ಗೊತ್ತು ನಿಮಗೆ. ನಿನ್ನೆ ಒಂದು ಹುಡುಗಿ ನೋಡಿ ನಗುತ್ತಿದ್ದರು ಎಂದಳು. ಅಷ್ಟಕ್ಕೇ ಮಂಜ ಲೇ... ನಾನೇನು ಹುಡುಗರನ್ನು ನಗಬೇಕಿತ್ತಾ?, ಹಾಗೆ ಮಾಡಿದರೆ ಜನ ತಪ್ಪು ತಿಲಿಯಲ್ಲವೇ ಎಂದು ಹೇಳಿದ. ಆಯಿತು ಅವಳು ನಕ್ಕಳು, ನಾನು ನಕ್ಕೆ ಅಷ್ಟೇ ತಾನೇ. ಮತ್ತೇಕೆ ಈಗ ಅದೆಲ್ಲ ತಪ್ಪಾಯಿತು ಎಂದ. ಅಷ್ಟಕ್ಕೇ ಅವರ ಸಂಸಾರ ಸಮರ ಮುಗಿಯಿತು.

ಮಂಜನ್ ಮಡದಿ ಕಾಫಿ ತಂದು ಕೊಟ್ಟಳು. ಅಷ್ಟರಲ್ಲಿ ಮಂಜನ ಮೊಬೈಲ್ ನಲ್ಲಿ ಒಂದು sms ಬಂತು. ಅದನ್ನು ಮಂಜನ ಮಡದಿ ತೆಗೆದು ನೋಡಿದಳು. ಯಾರು? ರೀ.. ಅದು ರಾಜಿ ಎಂದು ಮತ್ತೆ ಕೋಪಮಾಡಿಕೊಂಡು ಬಿಟ್ಟಳು. ಅದು... ಅದು... ಎಂದು ತಡವರಿಸುತ್ತಾ...ರಾಜೇಂದ್ರ ಎಂದು ನನ್ನ ಗೆಳೆಯ ಎಂದ. ಯಾವತ್ತು ಅವನ ಬಗ್ಗೆ ಹೇಳೇ ಇಲ್ಲ. ಮತ್ತೆ ರಾಜಿ ಎಂದು ಏಕೆ? ಬರೆದಿದ್ದೀರಾ ಎಂದಳು. ಅದು ಸ್ಪೆಲ್ಲಿಂಗ್ ಮಿಸ್ಟೇಕ್ ಆಯಿತು ಎಂದ. ನಾನು ಮನಸಿನಲ್ಲಿಯೇ ಮಿಸ್ ಟೆಕ್ ಎಂದು ಅಂದೆ. ಏಕೆಂದರೆ ರಾಜಿ ಎಂಬುದು ಹುಡುಗಿ ಎಂದು ನನಗೆ ಹೇಳಿದ್ದ. ಕಡೆಗೆ ಅವಳಿಂದ ಫೋನ್ ತೆಗೆದುಕೊಂಡು ಮೆಸೇಜ್ ನೋಡಿದ. ಅದರಲ್ಲಿ ಹ್ಯಾಪಿ ಫ್ರೆಂಡ್ಶಿಪ್ ಡೇ ಎಂದು ಇತ್ತು. ಅದಕ್ಕೆ ಸುಮ್ಮನೆ ಸೇಮ ಟು ಯು ಎಂದು ಯಾವುದೇ ಶೇಮ್ ಇಲ್ಲದೆ ಬರೆದು ಕಳುಹಿಸಬೇಕು ಅನ್ನುವಷ್ಟರಲ್ಲಿ, ಮೊಬೈಲ್ ನಲ್ಲಿನ ಕರೆನ್ಸಿ ಖಾಲಿ ಆಗಿದೆ ಎಂದು ತಿಳಿಯಿತು. ಮಂಜ ಏನೇ ಇದು ನನ್ನ ಮೊಬೈಲ್ ಕರೆನ್ಸಿ ಎಲ್ಲ ಖಾಲಿ ಆಗಿದೆ ಎಂದ. ಮಂಜನ ಮಡದಿ ನಾನೇ ಎಲ್ಲರಿಗು ಫ್ರೆಂಡ್ ಶಿಪ್ ಡೇ ವಿಶ್ ಮಾಡಲು ಫೋನ್ ಮಾಡಿದ್ದೆ ಎಂದಳು. ಕಡೆಗೆ ನನ್ನ ಮೊಬೈಲ್ ತೆಗೆದುಕೊಂಡು ಕೆಳಗಡೆ ತನ್ನ ಹೆಸರು ಬರೆದು ಮೆಸೇಜ್ ಕಳುಹಿಸಿದ.

ಮಂಜನಿಗೆ ಮತ್ತೆ ನಮಗೆ ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟಲು ಬಂದಳು. ಮಂಜ ಕೋಪದಿಂದ ಏನಿದು? ರಾಖಿಯ ಹಾಗೆ ಇದನ್ನು ಗಂಡನಿಗೆ ಕಟ್ಟುವುದಾ? ಎಂದು ಮತ್ತೆ ತನ್ನ ಪುರಾಣ ಶುರು ಮಾಡಿದ. ನನಗೆ ಕಟ್ಟಿ ಎಂದು ಹೇಳಿ ಕಟ್ಟಿಸಿಕೊಂಡು, ನನಗೆ ಸ್ವಲ್ಪ ಕೆಲಸ ಇದೆ ಎಂದು ಹೇಳಿ ಅಲ್ಲಿಂದ ಸಾವಕಾಶವಾಗಿ ಕಾಲು ಕಿತ್ತೆ.

Friday, August 5, 2011

ಭೀಮನ ಅಮಾವಾಸ್ಯೆ!!!!

ಭೀಮನ ಅಮಾವಾಸ್ಯೆ ಹಿಂದಿನ ದಿನ ಪೂಜೆ ಸಾಮಗ್ರಿ ತರಲು ಮಡದಿ ಹೇಳಿದ್ದಳು. ಮಂಜನ ಜೊತೆ ಮಾರ್ಕೆಟಿಗೆ ಹೋಗಿದ್ದೆ. ಮಂಜ ಸ್ಕೂಟರ್ ನಲ್ಲಿ ಹೋಗುವ ಇಬ್ಬರು ಹುಡುಗರನ್ನು ನೋಡಿ "ದೋ ಚಕ್ಕಾ ಚಕ್ಕಾ ಸಾಥ್ ಸಾಥ್" ಎಂದು ಹೇಳಿದ. ನನಗೆ ಗಾಬರಿ ಅವನಿಗೆ ಹೇಗೆ ತಿಳಿಯಿತು ಮತ್ತು ಹೀಗೆ ಏಕೆ? ಹೇಳಿದ ಎಂದು. ನಾನು ಕೇಳಿದೆ. ಅಷ್ಟು ನಿಖರವಾಗಿ ಹೇಗೆ ಹೇಳುತ್ತಿ ಎಂದೆ. ಅದಕ್ಕೆ ಮಂಜ ನೋಡು ಅಲ್ಲಿ ಅವರ ಗಾಡಿ ನಂಬರ್ ಎಂದು ತೋರಿಸಿದ. ಅದು ೨೬೭೭ ಇತ್ತು. ಇವನು ಅದನ್ನು ಹಿಂದಿಯಲ್ಲಿ ಹೇಳಿ ನನಗೆ ಗಲಿಬಿಲಿಗೊಳಸಿದ್ದ. ಮುಂದೆ ಹೋಗುವಷ್ಟರಲ್ಲಿ ಒಂದು ಅಂಗಡಿ ಕಾಣಿಸಿತು. ಅದರ ಹೆಸರು ಬೈ ಅಂಡ್ ಸೇವ್ ಎಂದು ಕಂಗ್ಲಿಷ್ನಲ್ಲಿ ಬರೆದಿತ್ತು. ಅದನ್ನು ನೋಡಿ ನಾನು ಇಲ್ಲೇ ಸಾಮಾನು ತೆಗೆದುಕೊಂಡು ಹೋಗೋಣ ಎಂದೆ. ಅದಕ್ಕೆ ಮಂಜ ಇಲ್ಲಿ ಬೈ ಮಾಡಿದರೆ ನಿನಗೆ ಭಯ ಆಗುವುದು ಖಂಡಿತ. ಮತ್ತೆ ನೀನೆ ಬೈಯುವುದು ಕೂಡ. ಸೇವ್ ಎಂಬ ಸೇವೆ ಮಾಲಿಕನಿಗೆ ಮಾತ್ರ. ನಮಗೆ ಏನಿದ್ದರು ಶೇವ್. ನೀನು ಇಲ್ಲಿ ತೆಗೆದುಕೊಂಡು ಹೋಗಿ ಅಪ್ಪಿ-ತಪ್ಪಿ ಬಿಲ್ ಮನೆಯಲ್ಲಿ ತೋರಿಸಿದೆ ಎಂದರೆ, ನಿನಗೆ ಭೀಮನ ಅಮಾವಾಸ್ಯೆ ಪೂಜೆ ಇವತ್ತೇ ಎಂದ. ಏನದು? ಭೀಮನ ಅಮಾವಾಸ್ಯೆ ಪೂಜೆ ಎಂದು ಕೇಳಿದೆ. ಏಕೆಂದರೆ? ಪ್ರತಿ ಬಾರಿ ನನ್ನ ಮಡದಿ ಆಶಾ(ಡ) ಮನೆಗೆ ಬಂದ ಮೇಲೆ ತವರಿಗೆ ಹೋಗುತ್ತಿದ್ದಳು. ಭೀಮನ ಅಮಾವಾಸ್ಯೆ ಪೂರ್ತಿ ವಿವರ ಹೇಳಿದ್ದ. ಸಾಮಾನು ಬೇರೆ ಅಂಗಡಿಯಲ್ಲಿ ತೆಗೆದುಕೊಂಡು ಮನೆಗೆ ಬಂದೆವು.

ಮರುದಿನ ಕಂಪ್ಯೂಟರ್ ಮುಂದೆ ಕುಳಿತಿದ್ದೆ. ಅಷ್ಟರಲ್ಲಿ ಬಂದ ಮಡದಿ ಕರಿಯರು ಮತ್ತು ಬಿಳಿಯರು ಎಂಬ ಭೇದ-ಭಾವವಿಲ್ಲದೆ ಸಹ ಜೀವನ ನಡೆಸುತ್ತಿರುವ ಒಂದೇ ಒಂದೇ ಸ್ಥಳ ಎಂದರೆ ಯಾವುದು? ಎಂದು ಪ್ರಶ್ನೆ ಕೇಳಿದಳು. ಮೊದಲೇ ಪ್ರಶ್ನೆ ಎಂದರೆ ಬೆಚ್ಚಿ ಬೀಳುವ ನಾನು ತಡಬಡಿಸಿ ಗೂಗಲ್ ನಲ್ಲಿ ಹುಡುಕಲಾರ೦ಬಿಸಿದೆ. ಅದರಲ್ಲಿ ಏನು? ಹುಡುಕುತ್ತೀರಾ ನಿಮ್ಮ ತಲೆ ಎಂದು ಕಿಟಲೆ ಮಾತನಾಡಿ ಹೊರಟುಹೋದಳು. ಅವಳ ಹಿಂದೇನೆ ನಾನು ಹೋಗಿ, ಏನು? ಎಂದು ಪೀಡಿಸಹತ್ತಿದೆ. ನಿಮ್ಮ ತಲೆ ಎಂದು ಆಗಲೇ ಹೇಳಿದೆನಲ್ಲ ಎಂದಳು. ಆಗ ಅವಳು ಹೇಳಿದ ಒಳ ಅರ್ಥ ತಿಳಿಯಿತು. ತಲೆಯಲ್ಲಿ ಸಮಾನ ಅಂಕಿ ಅಂಶದಲ್ಲಿ ಕರಿ-ಬಿಳಿ ಕೂದಲುಗಳು ಇದ್ದವು.

ಹೊರಗಡೆ ಬಂದು ಟಿ.ವಿ ನೋಡುತ್ತಾ ಕುಳಿತೆ. ಏನು? ಟಿ.ವಿ ನೋಡುತ್ತಾ ಕುಳಿತರೆ ಆಯಿತಾ?. ಸ್ವಲ್ಪ ತರಕಾರಿ ಹೆಚ್ಚಿ ಕೊಡಿ ಎಂದು ತಿವಿದಳು. ಇವತ್ತು ಭೀಮನ ಅಮಾವಾಸ್ಯೆ ಕಣೆ ಎಂದು, ಭೀಮನ ಹಾಗೆ ಒದರಿ ಹೇಳಿದೆ. ಓ ಹಾಗಾದರೆ ನೀವೇ ಅಡುಗೆ ಮಾಡುತ್ತೀರಾ?. ಭೀಮ ಪಾಕ ನಿಜವಾಗಿಯೂ ತುಂಬಾ ಚೆನ್ನಾಗಿ ಇರುತ್ತೆ ಎಂದಳು. ಅಷ್ಟರಲ್ಲಿ ನನ್ನ ಸುಪುತ್ರ ಭೀಮ ಶಬ್ದ ಕೇಳಿ "ಅಪ್ಪ ಛೋಟಾ ಭೀಮ ಕಾರ್ಟೂನ್ ಹಚ್ಚಿ ಕೊಡು ಎಂದು" ಹೇಳಿದ.ಟಿ.ವಿ ಚಾನೆಲ್ ಚೇಂಜ್ ಮಾಡಿ ಮಗನಿಗೆ ಹಚ್ಚಿ ಕೊಟ್ಟು ತರಕಾರಿ ಹೆಚ್ಚಲು ಅನುವಾದೆ. ನಿನ್ನೆ ಸಂಜೆ ಮಂಜನ ಜೊತೆ ಹೋಗುತ್ತಿದ್ದಾಗ ಭೀಮನ ಅಮಾವಾಸ್ಯೆ ಭಾಷಣ ನೆನಪಾಗಿ, ಅದನ್ನು ಮಡದಿಗೆ ಹೇಳಿದೆ. ಗಂಡ ಎಂದರೆ ದೇವರು ಇದ್ದ ಹಾಗೆ ಗೊತ್ತಾ?. ಇವತ್ತು ಗಂಡನ ಪೂಜೆ ಮಾಡುತ್ತಾರೆ, ನೀನು ನೋಡಿದರೆ ತರಕಾರಿ ಹೆಚ್ಚಲು ಹೇಳಿದ್ದೀಯಾ ಎಂದೆ. ಆಯಿತು ಬಿಡಿ ಇನ್ನು ಮೇಲೆ ಪತಿ ದೇವರಿಗೆ ನೈವೇದ್ಯ ಕೂಡ ಹಬ್ಬ ಹರಿದಿನಗಳಲ್ಲಿ ಮಾತ್ರ ಎಂಬ ಉತ್ತರ ಹರಿದು ಬಂತು. ಇನ್ನು ಮತ್ತೇನಾದರೂ ಮಾತನಾಡಿದರೆ ನನ್ನ ಊಟಕ್ಕೆ ಸಂಚಕಾರ ಬಂದೀತು ಎಂದು ಸುಮ್ಮನೆ ತರಕಾರಿ ಹೆಚ್ಚಿ ಕೊಟ್ಟೆ.

ಸ್ನಾನ ಮುಗಿಸಿ ಪೂಜೆಗೆ ಕುಳಿತಿದ್ದೆ. ಹೂ ಮಾರುವವಳು ಬಂದಳು. ಎಷ್ಟು ಬೇಕು? ಹೂ ಎಂದು ನನ್ನ ಮಡದಿಗೆ ಕೇಳಿದಳು. ಅದಕ್ಕೆ ಮಡದಿ ೫ ಸಾವಿರ ಸಾಕು ಎಂದಳು. ಇವತ್ತು "ಗಂಡನ ಪೂಜೆ ಇದೆ ಅಮ್ಮ ೧೦ ಸಾವಿರ ರುಪಾಯಿ" ಹೂ ತೆಗೆದುಕೊಳ್ಳಿ ಎಂದು ಅಂದಳು. ಅವರಿಬ್ಬರ ಸಂಭಾಷಣೆ ಕೇಳಿ ನನಗೆ ಗಾಬರಿ ಆಯಿತು. ಏನೇ ಆದರೂ ದುಡ್ಡು ನನ್ನದೇ ಅಲ್ಲವೇ?. ನನ್ನ ಪೂಜೆ ಮಾಡದಿದ್ದರೂ ಪರವಾಗಿಲ್ಲ ಅನ್ನಿಸಿತು. ಅವಳು ಹೂ ತೆಗೆದುಕೊಂಡು ಬಂದ ಮೇಲೆ, ನಾನು ಕೇಳಿದೆ ಏನದು ಅಷ್ಟೊಂದು ಹೂ ಎಂದು ಕೇಳಿದೆ. ಅದಕ್ಕೆ ಹೂ ಮಾರುವವಳು ೫ ಕ್ಕೆ ೫ ಸಾವಿರ, ೧೦ ಕ್ಕೆ ೧೦ ಸಾವಿರ ಎಂದು ಅನ್ನುತ್ತಾಳೆ ಎಂದು ಹೇಳಿದಳು. ಹೂ ಮಾರುವವಳ ಹಾಸ್ಯ ಪ್ರಜ್ಞೆ ಮತ್ತು ಅವಳು ತನ್ನ ಮನಸಿಗೆ ತಾನೇ ಸಮಾಧಾನ ಮಾಡುವ ರೀತಿ ಕೇಳಿ ನಿಜವಾಗಿಯೂ ಅಚ್ಚರಿ ಅನಿಸಿತು. ಸಾವಿರ- ಲಕ್ಷ ಘಳಿಸುವ ಮತ್ತು ಲೂಟಿ ಮಾಡುವ ತುಂಬಾ ಜನರಲ್ಲಿ ಇರದ ಸಂತೋಷ ಅವಳಲ್ಲಿ ಮತ್ತು ಅವಳ ಮಾತಿನಲ್ಲಿ ಇತ್ತು.

ಪೂಜೆ ಮುಗಿಸಿ ಎಫ್.ಎಂ ಹಚ್ಚಿದೆ. "ಹೂವು ಚೆಲುವೆಲ್ಲಾ ನಂದೆಂದಿತು...ಹೆಣ್ಣು ಹೂವ ಮುಡಿದು ಚೆಲುವೆ ತಾನೆಂದಳು" ಎಂಬ ಸುಮಧುರವಾದ ಹಾಡು ಬರುತಿತ್ತು. ಹಾಡು ಇನ್ನು ಮುಗಿದಿರಲಿಲ್ಲ ಅಷ್ಟರಲ್ಲಿ ಹೆಂಡತಿ ಒಳಗಡೆ ಕಂಪ್ಯೂಟರ್ ಉರಿಯುತ್ತಿದೆ, ಹೊರಗಡೆ ಟಿ.ವಿ ಮತ್ತು ಎಫ್.ಎಂ ಎಂದು ಚೀರಲು ಶುರುಮಾಡಿದಳು. ಎದ್ದು ನೀರು ನನ್ನ ಹೊಟ್ಟೆಗೆ ಹಾಕಿ ಕೋಪ ಕಡಿಮೆ ಮಾಡಿಕೊಂಡು ಹೋಗಿ ಕಂಪ್ಯೂಟರ್ ಆರಿಸಿ ಬಂದೆ. ಅಷ್ಟರಲ್ಲಿ ಹಾಡು ಮುಗಿದಿತ್ತು. ಈಗ ನೀವು "ಹಣ್ಣೆಲೆ ಚಿಗುರಿದಾಗ" ಎಂಬ ಚಿತ್ರದ ಹಾಡನ್ನು ಕೇಳುತ್ತಿದ್ದೀರಿ ಎಂದು ಪ್ರಸಾರಕ ಮಹಾಶಯರು ಹೇಳಿದರೂ, ನಂಗೆ ಮಾತ್ರ "ಹೆಣ್ಣೇಲೇ ಚೀರಿದಾಗ" ಎಂದು ಅನ್ನಿಸಹತಿತ್ತು.ಆದರೂ ಈ ಹಣ್ಣೆಲೆ ಚಿಗುರುವುದು ಯಾವಾಗ ಎಂದು ಕೂಡ ಅನ್ನಿಸಿತು. ಏಕೆಂದರೆ ನನ್ನ ತಲೆಯಲ್ಲಿನ ಎಲ್ಲ ಕೂದಲು ಹಣ್ಣಾಗಿ ಉದುರುತ್ತಾ ಇವೆ. ಆದರೆ ಒಮ್ಮೆಯೂ ಕೂಡ ಚಿಗುರಲೇ ಇಲ್ಲ ಎಂದು ಅನ್ನಿಸಿತು. ಹೊರಗಡೆ ಬಂದು ಲೇ... ಈಗ ತಾನೇ ಎಫ್.ಎಂ ನಲ್ಲಿ ಬರುತ್ತಿದ್ದ ಹಾಡು ಯಾವ ಚಿತ್ರದ್ದು ಗೊತ್ತ ಎಂದೆ. ಅದಕ್ಕೆ ಅವಳು ನಾನು ಕೇಳಿಸಿಕೊಳ್ಳಲಿಲ್ಲ ನೀವೇ ಹೇಳಿ ಯಾವುದು ಎಂದಳು. ನಾನು "ಹೆಣ್ಣೇ ಚೀರಿದಾಗ" ಎಂದೆ. ಜೋರಾಗಿ ನಗುತ್ತಾ ಬನ್ನಿ ನಿಮ್ಮ ಪೂಜೆ ಮಾಡುತ್ತೇನೆ ಎಂದು ಅಡುಗೆ ಮನೆಯಿಂದ ಆಯುಧ ಸಮೇತವಾಗಿ ಹೊರಗಡೆ ಬಂದಳು.ಅಷ್ಟರಲ್ಲಿ ಎಫ್.ಎಂ ನಲ್ಲಿ ಮುಂದಿನ ಚಿತ್ರಗೀತೆ "ಚಂಡಿ ಚಾಮುಂಡಿ" ಚಿತ್ರದ್ದು ಎಂದಾಗ ನಗು ಮಾತ್ರ ತಡಿಯಲು ಆಗಲೇ ಇಲ್ಲ. ಕಡೆಗೆ ಸೋಪಿನಿಂದ ಕೈ ತೊಳೆದುಕೊಂಡು ಬಂದು, ನನಗೂ ಸೋಪಿನಿಂದ ಕಾಲು ತೊಳೆಯಲು ಹೇಳಿದಳು. ತೊಳೆದುಕೊಂಡು ಬಂದ ಮೇಲೆ ನನ್ನ ಪಾದ ಪೂಜೆ ನೆರವೇರಿತು.

ಈ ಭೀಮನ ಹೊಟ್ಟೆಗೆ ಕೂಡ ಚೆನ್ನಾಗಿ ನೈವೇದ್ಯ ಆಗಿತ್ತು. ನಿದ್ದೆ ಜೋರಾಗಿ ಬಂದಿದ್ದರಿಂದ ಮಲಗಿಕೊಂಡೆ. ಅಷ್ಟರಲ್ಲಿ ಪರ್... ಪರ್ ..ಎಂಬ ಶಬ್ದ ಯಾರೋ ಬಟ್ಟೆ ಹರಿಯುತ್ತಿದ್ದಾರೆ ಎಂದು ಅನ್ನಿಸಿತು. ಯಾರು ಎಂದು ಎಲ್ಲ ಕಡೆ ನೋಡಿದೆ. ಯಾರು ಇರಲಿಲ್ಲ. ಮಡದಿ, ಮಗ ಕೂಡ ಗಾಡ ನಿದ್ರೆಯಲ್ಲಿ ಇದ್ದರು. ಯಾರಾದರು ಕಳ್ಳರು ಬಂದಿರ ಬಹುದಾ? ಎಂದು ಅನುಮಾನ ಬಂತು. ಬಂದರು ಅವರು ಬಟ್ಟೆ ಹರಿಯುವುದು ಏಕೆ ? ಎಂಬ ಪ್ರಶ್ನೆ ಉದ್ಭವಿಸಿತು. ಹೆದರುತ್ತಾ... ಹೆದರುತ್ತಾ.. ಶಬ್ದ ಹುಡುಕಿಕೊಂಡು ಹೋದೆ. ನನ್ನ ಮಗನ ಸೈಕಲ್ ಹಿಂದಿನ ಡಬ್ಬದ ಒಳಗೆ ನನ್ನ ಮೊಬೈಲ್ ಶಬ್ದ ಮಾಡುತಿತ್ತು. ಅದನ್ನು ನನ್ನ ಮಗ ತೆಗೆದುಕೊಂಡು ಆಟವಾಡಿ ಸೆಟ್ಟಿಂಗ್ ವೈಬ್ರೇಟಿ೦ಗ ಆಗಿ ಚೇಂಜ್ ಮಾಡಿದ್ದ. ಕಡೆಗೆ ಫೋನ್ ಎತ್ತಿ ಮಾತನಾಡಿ, ಅದನ್ನು ಸರಿ ಮಾಡಿ ಮತ್ತೆ ನಿದ್ದೆಗೆ ಜಾರಿದೆ.

Tuesday, July 12, 2011

ಎಲ್ಲಾರೂ ಮಾಡುವುದು ಹೊಟ್ಟೆಗಾಗಿ!!!!

ಎಲ್ಲಾರೂ ಮಾಡುವುದು ಹೊಟ್ಟೆಗಾಗಿ ಮತ್ತು ಗೇಣು ಬಟ್ಟೆಗಾಗಿ ನಿಜ. ಅದೇ ಹೊಟ್ಟೆ ಸ್ವಲ್ಪ ನೋಯುತ್ತ ಇತ್ತು. ನಾನು ಎಷ್ಟೇ ಜೋಕ್ ಮಾಡಿದರು ನಗಲಾರದ ಮಡದಿ, ಮಗ ಇಬ್ಬರೂ, ನಾನೇನು ನೈಟ್ರಸ ಆಕ್ಸೈಡ್ (ಲಾಫಿಂಗ್ ಗ್ಯಾಸ್) ಬಿಟ್ಟ ಹಾಗೆ ಜೋರಾಗಿ ನಗುತ್ತಿದ್ದರು. ಯಾವತ್ತೂ ಗುಡ್.. ಗುಡ್ ..ಎನ್ನುವ ಹೊಟ್ಟೆ ಬ್ಯಾಡ್ ಆಗಿ ಸೌಂಡ್ ಮಾಡಿತ್ತು. ಈ ಗ್ಯಾಸ್ ಎನ್ನುವುದು ಸಾಮಾನ್ಯವಾಗಿ ತುಂಬಾ ಜನರಲ್ಲಿ ಇರುವ ಒಂದು ಕೆಟ್ಟ ರೋಗ. ಇದು ಏತಕ್ಕೆ ಬರುತ್ತೆ ಎಂಬುದು ಮಾತ್ರ ಯಕ್ಷ(ಲಕ್ಷ) ಪ್ರಶ್ನೆ. ಅದಕ್ಕೆ ಎಂದು ಅಂತರ್ಜಾಲ ತಡಕಾಡಿದ್ದು ಆಯಿತು. ಆನುವಂಶಿಕ ಎಂದು ಅನ್ನಿಸಿದ್ದೂ ಉಂಟು. ಅದಕ್ಕೆ ಉದಾಹರಣೆ ಎಂದರೆ, ನಾನು ಚಿಕ್ಕವನಿದ್ದಾಗ, ನಮ್ಮ ಚಿಕ್ಕಪ್ಪ ಬಜಾಜ್ ಸ್ಕೂಟರ್ ಹಾಗೆ ಸ್ವಲ್ಪ ಬಾಗಿದರು ಕೂಡ.. ನಾವು ಎದ್ದೋ, ಬಿದ್ದೋ ಎಂದು ಓಡಿ ಹೋಗಿ ನಗುತ್ತಿದ್ದೆವು. ಈಗ ಅದು ನನಗೆ ಬಳುವಳಿಯಾಗಿ ಬಂದಿದೆ. ಅದಕ್ಕೆ ನಮ್ಮ ಅಕ್ಕ ನನಗೆ ಗೋಪಾಲ್ ಗ್ಯಾಸ್ ದುರಂತ ಎಂದು.. ಭೋಪಾಲ್ ಗ್ಯಾಸ್ ದುರಂತಕ್ಕೆ ಹೋಲಿಸಿ ಆಡುವುದು ಉಂಟು.

ನಾವು ಚಿಕ್ಕವರಿದ್ದಾಗ ಕೂಡ ಕೆಲ ಹುಡುಗರು ಗ್ಯಾಸ್ ಬಿಡುತ್ತಿದ್ದರು. ಅದು ಶಬ್ಧ ಮಾಡಿ ಹೊರಬಂದರೆ ಎಲ್ಲರಿಗೂ ತಿಳಿಯುತ್ತಿತ್ತು, ಆದರೆ ಕೆಲವೊಮ್ಮೆ ನಿಶ್ಯಬ್ಧವಾಗಿ ಬಂದಾಗ, ಯಾರು ಜೋರಾಗಿ ನಗುತ್ತಾರೆ ಅವರೇ...ಅದರ ಕಾರಣ ಕರ್ತರೆಂದು ನಿರ್ಧಾರಕ್ಕೆ ಬಂದು ಬಿಡುತ್ತಿದ್ದೆವು. ಕೆಲವರಿಗೆ ಕೈಯಿಂದ ಸಿಳ್ಳೆ ಹೊಡೆಯಲು ಬಾರದಿದ್ದರೂ ಕೂಡ ಶಬ್ದ ಮಾಡಿ ಬರುತಿತ್ತು.

ಲೇ ಹೊಟ್ಟೆ ನೋವು ಕಣೇ ಎಂದು ಮಡದಿಗೆ ಹೇಳಿದೆ. ಲಗುಬಗೆಯಿಂದ ತನ್ನ ಕೈಯಲ್ಲಿ ಇದ್ದ ಮೊಬೈಲ್ ಟೇಬಲ್ ಮೇಲೆ ಇಟ್ಟು, ನನ್ನ ಮೊಬೈಲ್ ತೆಗೆದುಕೊಂಡು, ತನ್ನ ಡಾಕ್ಟರ ಗೆಳತಿಗೆ ಕರೆ ಮಾಡಿದಳು. ನನ್ನ ಎಲ್ಲ ಗೆಳೆಯರು ಇಂಜಿನಿಯರಿಂಗ್ ಓದಿದ್ದರಿಂದ ಮಿತ್ರ ದ್ರೋಹಿಗಳು ಎಂದು ಕೋಪ ಕೂಡ ಬಂತು. ಮಿತ್ರರು ಎಂದರೆ ಇವರು, ಒಬ್ಬರಿಗೆ.. ಒಬ್ಬರು.. ಸಹಾಯ ಮಾಡುವವರು ಎಂದು ಅನ್ನಿಸಿತು. ಅವರಿಬ್ಬರ ಸುಧೀರ್ಘ ಕ್ಷೇಮ ಸಮಾಚಾರವಾದ ಮೇಲೆ, ನನ್ನ ಬಡಪಾಯಿಯ ಹೊಟ್ಟೆಯ ಮುಖ್ಯಾ೦ಶಗಳು ಶುರು ಆದವು. ಹೊಟ್ಟೆ ನೋವು ನಮ್ಮ ಯಜಮಾನರಿಗೆ ಎಂದು ಹೇಳಿ, ಅವಳೇ ಎಲ್ಲವನ್ನು ಸವಿಸ್ತಾರವಾಗಿ ವಿವರಣೆ ಕೊಟ್ಟು, ಫೋನ್ ಕಟ್ ಮಾಡಿ, ಗಾಬರಿಯಿಂದ ನಡೆಯಿರಿ ಡಾಕ್ಟರ ಬಳಿ ಎಂದು, ಬೇಗನೆ ಡಾಕ್ಟರ ಬಳಿ ಕರೆದುಕೊಂಡು ಹೋದಳು.

ಡಾಕ್ಟರ ಬಳಿ ಹೋದ ಕೂಡಲೇ "ಡಾಕ್ಟರ ಬೇಗ ಪರೀಕ್ಷಿಸಿ" ಎಂದು ಹೇಳಿದಳು. ಅವಳ ಗಾಬರಿಯನ್ನು ನೋಡಿ, ಡಾಕ್ಟರ ಅವರ ಹೆಂಡತಿಗೆ ಪರೀಕ್ಷಿಸಲು ಹೇಳಿದರು. ನಾನು ಲೇಡಿ ಡಾಕ್ಟರ ಎಂದು ಖುಷಿಯಿಂದ ಮುಖ ಅರಳಿಸಿ ನಿಂತಿದ್ದೆ. ಬಂದವರೇ ನನ್ನ ಹೆಂಡತಿಯನ್ನು ಪರೀಕ್ಷಿಸಲು ಶುರು ಮಾಡಿದರು. ಹೆಂಡತಿ ನನಗೆ ಅಲ್ಲ, ನನ್ನ ಮನೆಯವರಿಗೆ ಎಂದಳು. ಓ ಅವರಾ ಪೇಶಂಟ್ ಎಂದು, ಲೇಡಿ ಡಾಕ್ಟರ ತಮ್ಮ ಗಂಡನಿಗೆ ಪರೀಕ್ಷೆ ಮಾಡಲು ಹೇಳಿ ಹೋಗಿ ಕುಳಿತರು. "ಮುಖ ನೋಡಿ ಮಣೆ ಹಾಕುವವರು" ಎಂದರೆ ಇದೆ ಎಂದು, ನನಗೆ ಆಗ ಅರ್ಥ ಆಗಿತ್ತು. ಡಾಕ್ಟರ ಪರೀಕ್ಷಿಸಲು ಶುರು ಮಾಡಿದರು. ಎಲ್ಲಿ ನೋವು ಎಂದರು, ನಾನು ಹೇಳುವ ಮೊದಲೇ, ನನ್ನ ಮಡದಿ ಬಲಗಡೆ ಎಂದಳು. ನಾನು ಇಲ್ಲಾ ಸರ್ ಎಡಗಡೆ ಎಂದೆ. ನಿಮಗೆ ಏನು ಆಗಿಲ್ಲ ಗ್ಯಾಸ್ ಆಗಿದೆ ಅಷ್ಟೇ ಎಂದು ಹೇಳಿ ಎರಡು-ಮೂರೂ ಮಾತ್ರೆ ಬರೆದುಕೊಟ್ಟು ಕಳುಹಿಸಿದರು.

ಹೊರ ಬಂದ ಮೇಲೆ, ಹೆಂಡತಿ ಜೋರಾಗಿ ನಗಲು ಶುರು ಮಾಡಿದಳು. ಏಕೆಂದು ಕೇಳಿದೆ. ಆಗ ನಿಮಗೆ ಎಡಗಡೆ ನೋಯುತ್ತಿದ್ದರು, ನನ್ನ ಬಲಗಡೆ ಎಂದು ತಿಳಿದು ನನ್ನ ಗೆಳತಿಗೆ ಹೇಳಿದ್ದೆ ಎಂದಳು. ಅದಕ್ಕೇನೀಗ ಎಂದೆ. ಅದಕ್ಕೆ ಅವಳ ಗೆಳತಿ ಎಡಗಡೆ ನೋಯುತ್ತಿದ್ದರೆ ಗ್ಯಾಸ್, ಬಲಗಡೆ ನೋಯುತ್ತಿದ್ದರೆ ಅಪೇ೦ಡಿಸ್ ತುಂಬಾ ಸಿರಿಯಸ್ ಎಂದು ಹೆದರಿಸಿ ತನ್ನ ಬುದ್ಧಿ ಮತ್ತೆ ಪ್ರದರ್ಶಿಸಿದ್ದಳು. ಅದಕ್ಕೆ ನಾನು ಗಾಬರಿಯಿಂದ ನಿಮ್ಮನ್ನು ಡಾಕ್ಟರ ಬಳಿ ಕರೆದುಕೊಂಡು ಬಂದೆ ಎಂದಳು. ಹೊಟ್ಟೆ ನೋವು ಎಂದು ಹೆರೆಗೆ ಆಸ್ಪತ್ರೆಗೆ ಹಾಕಲಿಲ್ಲವಲ್ಲ ಅದು ನನ್ನ ಪುಣ್ಯ ಎಂದು ನಗುತ್ತ ಮನೆಗೆ ಬಂದೆವು.

ಮರುದಿನ ಆಫೀಸ್ ಹೋಗುವ ಸಮಯದಲ್ಲಿ ಶೂ ಲೇಸ್ ನ್ನು ಲೇಸ್.. ಲೇಸ್.. ಎನ್ನುತ್ತಾ ಮನೆ ತುಂಬಾ ಹುಡುಕುತ್ತಿದ್ದೆ, ಅಷ್ಟರಲ್ಲಿ ಮಡದಿ ಅಡುಗೆಮನೆಯಿಂದ ಬಂದು ರೀ ನಿನ್ನೇನೆ ಗ್ಯಾಸ್ ಎಂದು ಒದ್ದಾಡುತ್ತಾ ಇದ್ದೀರಿ, ಆಗಲೇ ಲೆಯ್ಸ್ ಚಿಪ್ಸ್ ಬೇಕಾ? ಎಂದಳು. ನಾನು ಲೆಯ್ಸ್ ಚಿಪ್ಸ್ ಅಲ್ಲ ಲೇಸ್ ಎಂದು ಹೇಳಿದೆ. ಅವಳೇ ಹುಡುಕಿ ಕೊಟ್ಟಳು.

Sunday, June 12, 2011

ಚಹಾ ಗರಮ್ !!!!

ಹೆ೦ಡತಿಯ ಉಪದ್ರವ ತಾಳಲಾರದೆ ಹೊರಗೆ ಹೋಗಿದ್ದೆ. ಉಪದ್ರವ ಶುರು ಆಗಿದ್ದು ಚಹಾ ಎ೦ಬ ದ್ರವವನ್ನು ಕೇಳಿ, ಅದೇ ಧಾಟಿಯಲ್ಲಿ, ಹಚಾ ಎ೦ದು, ಸ೦ಜೆ ಸಮಯದಲ್ಲಿ ಚಹಾ ಕುಡಿದರೆ ನಿದ್ದೆ ಬರಲ್ಲ ಎ೦ದು ಬೈಯಿಸಿಕೊ೦ಡು ಹೊರಟಿದ್ದೆ. ದಿನವು ಯಾವುದೆ ತಗಾದೆ ಇಲ್ಲದೆ ಬಿಸಿ ಚಹಾ ಕೋಡುತ್ತಿದ್ದ ಮಡದಿ, ಈವತ್ತು ಸ್ವಲ್ಪ ಗರಮ್ ಅಗಿದ್ದಳು. ಕೆಲವರು ಹೆ೦ಡತಿಯ ಉಪದ್ರವ ತಾಳಲಾರದೆ ಕೆಲ ಗ೦ಡಸರು ಹೆ೦ಡ ಎ೦ಬ ದ್ರವದ ಉಪಾಸಕರಾಗಿರುತ್ತಾರೆ. ಸ೦ಜೆ ಸಮಯದಲ್ಲಿ ಚಹಾ ಸಿಗುವುದು ಸ್ವಲ್ಪ ಕಷ್ಟನೇ. ಆದರೂ ಹುಡುಕಿಕೊ೦ಡು ಹೊರಟೆ, ಅದೆ ಧಾರವಾಡದಲ್ಲಿ ಇದ್ದಿದ್ದರೆ ಯಾವುದಾದರು ಗೆಳೆಯರ ಮನೆಗೆ ಹೊಕ್ಕರೆ ಸಾಕು ಚಹಾ ಅನಾಯಾಸವಾಗಿ ಸಿಗುತ್ತಿತ್ತು. ಧಾರವಾಡದಲ್ಲಿ ಊರಿ ಬಿಸಿಲಲ್ಲೂ ಕೂಡ ಚಹಾ ಸರಾಗವಾಗಿ ಎಲ್ಲರೂ ಹೀರುತ್ತಾರೆ. ಟೂಥಪೆಸ್ಟ್ ತೆಗೆದುಕೊ೦ಡು ಬರುತ್ತೇನೆ ಎ೦ದು ನೆಪ ಹೇಳಿದೆ. ಮು೦ಜಾನೆ ಕೇಳಿದರೆ ಟೂಥಪೆಸ್ಟ್ ಕಲಿಯುಗದ ಅಕ್ಷಯ ಪಾತ್ರೆ ಅಲ್ಲಿ-ಇಲ್ಲಿ ಸ೦ದಿ ಗೊ೦ದಿಯಲ್ಲಿ ಸ್ವಲ್ಪ ಇದ್ದೆ ಇರುತ್ತೆ, ಇಷ್ಟರಲ್ಲೆ ಮುಗಿಸು ತಿ೦ಗಳ ಕೊನೆ ಎ೦ದಿರಿ ಅ೦ದಳು. ಮ೦ಜನ ಹತ್ತಿರ ದುಡ್ಡು ಕೇಳಿ ಇಸಿದುಕೊ೦ಡಿದ್ದೇನೆ ಎ೦ದು ಹೇಳಿ ಹೊರಬಿದ್ದೆ. ಅಷ್ಟರಲ್ಲಿ ಮ೦ಜ ಸಿಕ್ಕ. ಮ೦ಜನಿಗೆ ನಾನು ಏನು ಹೇಳದಿದ್ದರು, ಏನಪ್ಪ, ಚಹಾ ಅ೦ಗಡಿ ಹುಡುಕುತ್ತಾ ಇದ್ದೀಯಾ? ಎ೦ದ. ನನಗೆ ಆಶ್ಚರ್ಯ ಇವನಿಗೆ ಹೇಗೆ ತಿಳಿಯಿತು ಎ೦ದು.

ಅವನೇ ಒ೦ದು ಚಹಾ ಅ೦ಗಡಿಗೆ ಕರೆದುಕೊ೦ಡು ಹೋದ, ಚಹಾ ಹೀರುತ್ತಾ ಇದು ಮಹಿಳಾ ಮಣಿಗಳ ಸ೦ಘಟನೆ ಎ೦ದಾಗ ತಿಳಿಯಿತು. ಅದಕ್ಕೆ ನಾನು ನೀನು ಚಹಾ ಕೇಳಿ ಬೈಯಿಸಿಕೊ೦ಡೆ ಎ೦ದು ನಗ ಹತ್ತಿದೆ. ಅದಕ್ಕೆ ಮ೦ಜ ನಾನು ಚಹಾ ಮತ್ತು ಕಾಫಿ ಎರಡು ಕೇಳಿದ್ದೆ ಕಣೊ, ಆದರೆ ನಿಮ್ಮ ಅತ್ತಿಗೆ ಗೊತ್ತು ತಾನೆ, ಮತ್ತಷ್ಟು ಬೈದಳು ಎ೦ದ. ಎರಡು ಏನಕ್ಕೆ ಕೇಳಿದೆ ಎ೦ದೆ. ಅವಳು ಚಹಾ ಕೇಳಿದರೆ ನಿದ್ರೆ ಬರಲ್ಲ ಎ೦ದಳು. ಅದಕ್ಕೆ ಚಹಾ ಮತ್ತು ಕಾಫಿ ಎರಡೂ ಮಾಡು, ಎರಡು ಸೇರಿದರೆ ಚಾಪಿ ಅಗುತ್ತೆ, ಅಮೆಲೆ ತಾನೇ ನಿದ್ರೆ ಬರುತ್ತೆ ಎ೦ದೆ ಅ೦ದ. ಮತ್ತಷ್ಟೂ ನಗು ಬ೦ತು. ಆದರೆ ಈವನ ಬುದ್ಧಿಮತ್ತೆಗೆ ಭೇಷ್ ಎ೦ದೆ. ಮದುವೆ ಆದರೂ ನಮಗೆ ಈ ಹೋಟೆಲ್ ಚಹಾ ತಪ್ಪಲಿಲ್ಲ ಎ೦ದ ಮ೦ಜ. ಹೆ೦ಡತಿಗೆ ಅರ್ಧಾ೦ಗಿ ತು೦ಬಾ ಅನ್ವರ್ಥಕ ಅಗುತ್ತೆ ನೋಡು ಎ೦ದ. ಅ೦ದರೆ... ಎ೦ದೆ. ಅರ್ಧಾ೦ಗಿ ಎ೦ದರೆ ಅರ್ಧ ಅ೦ಗಿನೇ. ಯಾರಾದರು ಅರ್ಧ ಅ೦ಗಿ ಹಾಕಿ ಹೊರಗಡೆ ಬರುತ್ತಾರಾ ಎ೦ದ. ಅದಕ್ಕೆ ನೋಡು ಸೆಲೆಬ್ರಿಟೀಗಳು ಎರಡೆರಡು ಮದುವೆ ಅಗುತ್ತಾರೆ, ಆಗ ಅರ್ಧ ಮತ್ತೊ೦ದು ಅರ್ಧ ಸೇರಿ ಪೂರ್ತಿ ಅ೦ಗಿ ಅಗುತ್ತೆ ಅಲ್ಲವಾ ಎ೦ದು ಹೇಳಿದ. ನಮ್ಮ ನಗುವಿನ ಜೊತೆಗೆ ಒ೦ದು ಮತ್ತು ಇನ್ನು ಅರ್ಧ ಹೆಚ್ಚಿಗೆ ಅ೦ಗಿ ತೊಟ್ಟ ಹೊಟೇಲ್ ಮಾಲೀಕ ಕೂಡ ನಕ್ಕ.

ಕಡೆಗೆ ಚಹಾ ಕುಡಿದು, ಟೂಥಪೆಸ್ಟ್ ತೆಗೆದುಕೊ೦ಡು ಮನೆಗೆ ಬ೦ದೆ. ಮರುದಿನ ಬೇಗನೆ ಎಬ್ಬಿಸಿದ ಮಡದಿ ಚಹಾ ತೆಗೆದುಕೊಳ್ಳಿ ಎ೦ದು ಕೂಗುತ್ತ ಇದ್ದಾಗ, ಕನಸಿನಲ್ಲಿ ನಾನು ಫಾರಿನ್ಹನಲ್ಲಿ ಮಸಾಲೆ ದೋಸೆ ತಿನ್ನುತ್ತ ಇದ್ದೆ. ಇನ್ನು ಅರ್ಧ ತುತ್ತು ಬಾಯಿಗೆ ಬ೦ದಿರಲಿಲ್ಲ. ಎದ್ದು ಹಲ್ಲು ಉಜ್ಜಿ ಚಹಾ ಹೀರಿದೆ. ಎಕೋ ಸ್ವಲ್ಪ ಬೆನ್ನು ನೋವು ಶುರು ಆಯಿತು. ಬೆನ್ನು ನೋವು ಕಣೇ ಎ೦ದೆ. ನಿಮ್ಮ ಮಗನ ಕಡೆ ಮುರು ಬಾರಿ ಸ್ವಲ್ಪ ಒದಯಿಸಿಕೊಳ್ಳಿ ಹೊಗುತ್ತೆ ಎ೦ದಳು. ಹಾ.. ಏನ೦ದೆ ಎ೦ದು ಬಾಯಿ ಬಿಟ್ಟು ಕೇಳಿದೆ. ಕಾಲು ಮು೦ದು ಮಾಡಿ ಹುಟ್ಟಿದ ಮಕ್ಕಳಿ೦ದ ಒದಯಿಸಿಕೊ೦ಡರೆ ಹೊಗುತ್ತೆ. ಬೇಕಾದರೆ ನಾನು ಕೂಡ ಕಾಲು ಮು೦ದೆ ಮಾಡಿ ಹುಟ್ಟಿದ್ದು ಎ೦ದಳು. ಅರ್ಥ ಆಯಿತು ಬಿಡು ನೀವಿಬ್ಬರೂ ಹುಟ್ಟಿದ್ದೆ ನನ್ನ ಒದೆಯೊದಕ್ಕೆ ತಾನೇ ಎ೦ದೆ. ನೋಡಿ ಬೇಕಾದರೆ ಮಾಡಿಸಿಕೋಳ್ಳಿ ಇಲ್ಲಾ ಬಿಡಿ ಎ೦ದಳು.

ಆಫೀಸ್ ಲೇಟ್ ಆಗುತ್ತೆ ಎಂದು ಕಡೆಗೆ ಒದಯಿಸಿಕೊಂಡು ಹೊರಟೆ. ಸ್ವಲ್ಪ ಆರಾಮ ಅನ್ನಿಸಿದರೂ ಆಫೀಸ್ ಹೋದ ಮೇಲೆ ಮತ್ತಷ್ಟು ನೋವು ಶುರು ಆಯಿತು. ಕಡೆಗೆ ಆಫೀಸ್ ರಜೆ ಹಾಕಿ ಮನೆಗೆ ಬಂದೆ. ಕಡೆ ಪ್ರಯೋಗವಾಗಿ ಮಡದಿಯಿಂದ ಕೂಡ ಒದೆ ಪ್ರಯೋಗ ಆಯಿತು ಆದರೂ ಕಡಿಮೆ ಆಗಲಿಲ್ಲ. ಸಂಜೆ ಸ್ವಲ್ಪ ನೋವು ಜ್ಯಾಸ್ತಿ ಅನ್ನಿಸಿ ಮಡದಿ ಜೊತೆ ಆಸ್ಪತ್ರೆಗೆ ಹೋದೆ. ಡಾಕ್ಟರ್ ಎಲ್ಲ ಪರೀಕ್ಷಿಸಿ ನಿಮಗೆ ಏನೋ ಆಗಿಲ್ಲ ಅಸಿಡಿಟೀ ಅಷ್ಟೇ ಎಂದರು. ತುಂಬಾ ಚಹಾ-ಕಾಫೀ ಕೂಡಿ ಬೇಡಿ ಎಂದು ಹೇಳಿದರು.

ಕಡೆಗೆ ಮನೆಗೆ ಬಂದ ಮೇಲೆ ಪಕ್ಕದ ಮನೆಯಲ್ಲಿ ಆಡುತ್ತಾ ಇದ್ದ ಮಗ, ಅಪ್ಪನಿಗೆ ಡಾಕ್ಟರ್ ಏನು? ಮಾಡಿದರು ಎಂದು ಕೇಳಿದ. ಅದಕ್ಕೆ ಮಡದಿ ಸ್ವಲ್ಪ ಒದ್ದರು ಎಂದು ಅಪಹಾಸ್ಯ ಮಾಡಿದಳು. ಅದಕ್ಕೆ ಮಗ ನಾನು ಒದೆಯುತ್ತೇನೆ ಎಂದು ಬಂದ. ನಾಳೆಯಿಂದ ನನ್ನ ಪ್ರಿಯವಾದ ಚಹಾಕ್ಕೆ ಬೈ ಬೈ....

Friday, May 20, 2011

ಸಮರ ಆರ೦ಭ ....

ಮನೆಯಲ್ಲಿ ಸಮರ ಮುಗಿಸಿ, ಒಂದು ಸಮಾರ೦ಭಕ್ಕೆ ಹೋಗಿದ್ದೆ. ಸಮರದ ಆರಂಭ ಆಗಿದ್ದು ಭಾನುವಾರದ ದಿನ. ಬೇಗ ಎದ್ದು ಏನಾದರೂ ತಿಂಡಿ ಮಾಡು ಎಂದು ಅವಳಿಗೆ ಪೀಡಿಸಿದ್ದಕ್ಕೆ. ಭಾನುವಾರ ಕೂಡ ನಮಗೆ ಕೆಲಸ..ಛೇ ಎಂದು ಗೊಣಗಿ, ನಿನ್ನೆಯ ಇಡ್ಲಿ ಇದೆ ತಿಂದು ಹೋಗಿ. ನನಗೆ ಬೇಗ ಏಳೋಕೆ ಆಗಲ್ಲ ಎಂದು ಬೈದಿದ್ದಳು . ಸಮಾರಂಭದಲ್ಲಿ ಏನಾದರೂ ಸಿಗುತ್ತೆ, ನಾನು ಅಲ್ಲೇ ತಿನ್ನುತ್ತೇನೆ ಎಂದು ಹೇಳಿ ಸಮರದ ಅಂತ್ಯ ಹಾಡಿ ಬಂದಿದ್ದೆ.

ಸಮಾರಂಭದಲ್ಲಿ ಇದ್ದ ಉಪಿಟ್ಟು ನೋಡಿ, ಬೇಡ ಎಂದು ಕಾಫೀ ಕುಡಿದು ಬಂದು ಕುಳಿತೆ. ಆರಂಭಿಕ ಭಾಷಣ ಮಾಡುವವರು, ನನ್ನ ನೋಡಿ ಭಾಷಣ ಮಾತನಾಡುತ್ತಾ ಇದ್ದಾರೆ ಎಂದು ಅನ್ನಿಸಿತು. ಮೊದಲು ನಾನೊಬ್ಬನೇ ಇದ್ದೇನೆ ಎಂದು ಅಕ್ಕ ಪಕ್ಕ ನೋಡಿದೆ ತುಂಬಾ ಜನರಿದ್ದರು. ಪಕ್ಕದಲ್ಲಿ ಒಬ್ಬ ನಿದ್ದೆ ಹೊಡೆಯುತ್ತಿದ್ದ. ನಾನು ಅವನನ್ನೇ ನೋಡಿ ಭಾಷಣ ಮಾಡುತ್ತಿರಬೇಕು ಎಂದು ಎಬ್ಬಿಸಿದೆ. ಆಸಾಮಿ ನನ್ನನ್ನು ವಿಚಿತ್ರ ಪ್ರಾಣಿಯಂತೆ ನೋಡಿ ಎದ್ದು ಹೋದ. ಮತ್ತೆ.. ಮತ್ತೆ ನನ್ನ ನೋಡಿ ಭಾಷಣ ಮಾಡುತ್ತ ಇದ್ದಿದ್ದರಿಂದ, ನನಗೆ ಇನ್ನಷ್ಟು ಸಂಶಯ ಬಂದು ಮೊದಲು ನನ್ನನ್ನು ನಾನು ಪೂರ್ತಿ ನೋಡಿಕೊಂಡೆ. ಕಡೆಗೆ ನಾನು ಹಾಕಿರುವ ಡ್ರೆಸ್ ಎಲ್ಲವು ಸರಿಯಾಗಿದೆ ಎಂದು ಖಾತರಿ ಮಾಡಿಕೊಂಡೆ. ಆದರು ಭಾಷಣಕಾರ ನನ್ನ ಕಡೆನೇ ನೋಡಿ ಮಾತನಾಡುತ್ತಿದ್ದರು. ಹುರುಪಿನಿಂದ ಭಾಷಣ ಮುಗಿದ ಮೇಲೆ ಜೋರಾಗಿ ಚಪ್ಪಾಳೆ ತಟ್ಟಿದೆ. ಈಗ ಭಾಷಣಕಾರನಲ್ಲದೆ ಎಲ್ಲರು ನನ್ನನ್ನೇ ನೋಡಿದರು. ಸಧ್ಯ ಶಿಳ್ಳೆ ಹೋಡಿಲಿಲ್ಲ ಬಚಾವ ಅನ್ನಿಸಿತು.

ಆಮೇಲೆ ಸುಗಮ ಸಂಗೀತ ಶುರು ಆಯಿತು. ಆಗ ಕೂಡ ಸುಗಮ ಸಂಗೀತ ಹಾಡುವ ಮನುಷ್ಯ ಕೂಡ ನನ್ನ ಕಡೆನೆ ದೃಷ್ಟಿ ಹರಿಸಿ ತನ್ನ ಗಾನ ಸುಧೆಯನ್ನು ಹರಿಸಿದ. ಮತ್ತೆ ಕೆಲ ಸಮಯದ ನಂತರ "ಜಾಲಿ ಬಾರಿನಲ್ಲಿ ಕೂತು ಪೋಲಿ ಗೆಳೆಯರು ಗೋಪಿಯನ್ನು ಪಾಪ ಗೇಲಿ ಮಾಡುತಿದ್ದರು.." ಎಂದು ಹಾಡಬೇಕೆ?. ಅವನಿಗೆ ನನ್ನ ಹೆಸರು ಹೇಗೆ ತಿಳಿಯಿತು ಎಂದು ಆಶ್ಚರ್ಯವಾಯಿತು. ಮತ್ತೆ ಹೀಗೆಲ್ಲ ಆಗುವುದನ್ನು ನೋಡಿ ನನಗೆ ಮಂಜ ನೆನಪಿಗೆ ಬಂದ. ಅವನೇನಾದರೂ ಕಿತಾಪತಿ ಎಂದು ಛೆ... ಛೆ... ಅವನಿಗೆ ಹೇಗೆ ಗೊತ್ತು ನಾನು ಇಲ್ಲಿ ಬಂದಿರೋದು. ಅವನು ಇಲ್ಲಿ ಇಲ್ಲ ಬೇರೆ ಎಂದು ಯೋಚಿಸಿದೆ.

ಸಭಾಂಗಣಕ್ಕೆ ಹೋಗಿ ಕೇಳಿಯೇ ಬಿಡೋಣ ಎಂದು ಹೊರಟು ನಿಂತ ಸಮಯದಲ್ಲಿ, ಒಬ್ಬ ಈ ಸಮರ ಆರ೦ಭ ಆಯಿತು ಅಂದರೆ ಮುಗಿತು ನೋಡಿ ಎಂದರು. ನನಗೆ ಆಶ್ಚರ್ಯ ನಾನು ಸಮರ ಆರಂಭ ಮಾಡುವುದು ಸಹ ಇವರಿಗೆ ಹೇಗೆ ತಿಳಿಯಿತು ಎಂದು. ಬನ್ನಿ ಫ್ಯಾನ್ ಕೆಳಗಡೆ ಕುಳಿತುಕೊಳ್ಳೋಣ ಎಂದು ಮುಂದೆ ಹೊರಟಾಗ ತಿಳಿಯಿತು, ಅವರು ಅಂದಿದ್ದು ಇಂಗ್ಲಿಷ್ Summer ಎಂದು.

ಮುಂದೆ ಹೋಗುವ ಸಮಯದಲ್ಲಿ ಹಿಂದೆ ಒಮ್ಮೆ ಕಣ್ಣಾಡಿಸಿದೆ. ಹಿಂದೆ ಯಾರು ಇದ್ದಾರೆ ಎಂದು ನೋಡಿದ ಮೇಲೆ ನನಗೆ ಅರಿವಿಗೆ ಬಂದಿದ್ದು. ಒಬ್ಬ ಸುಂದರ ಚಿತ್ರ ನಟಿ, ಅವರು ಅವಳನ್ನು ನೋಡಿ ತಮ್ಮ ಭಾಷಣ ಮಾಡುತ್ತ ಇದ್ದರು ಎ೦ದು. ಅದು ನನ್ನ ಕುರ್ಚಿ ಹಿಂದೆ. ಹಿಂದೆ ನೋಡುತ್ತೇನೆ ಮಂಜ ಬೇರೆ ಬಂದುಬಿಟ್ಟಿದ್ದಾನೆ. ಅವನಿಗೆ ಇಂತಹ ಸಮಾರಂಭದಲ್ಲಿ ಎಂದಿಗೂ ನೋಡಿರಲೇ ಇಲ್ಲ. ಎದ್ದು ಅವನ ಬಳಿ ಹೋದೆ. ಮಂಜಣ್ಣ ನೀನು ಇಲ್ಲಿ ಎಂದೆ. ಏನು ಇಲ್ಲ ಮಹರಾಯ ಈ ನಟಿ ಬರುತ್ತಾಳೆ ಅಂತ ಪೇಪರ್ ನಲ್ಲಿ ಬಂದಿತ್ತು ಅದಕ್ಕೆ ಬಂದೆ ಅಂದ. ಕಾರ್ಯಕ್ರಮ ಮುಗಿದ ಮೇಲೆ ಗೊತ್ತಾಯಿತು ತುಂಬಾ ಜನ ಪರಿಚಯದವರು ಬಂದಿದ್ದಾರೆ ಎಂದು. ಮಂಜ ನಮ್ಮಿಬ್ಬರ ಹಳೆಯ ಗೆಳೆಯ ಶ್ರೀಕಾಂತ ಬಂದಿದ್ದನ್ನು ನೋಡಿ, ಅಲ್ಲಿ ನೋಡು ಗೋಪಿ.. ಡಾಕ್ಟರ ಶ್ರೀಕಾಂತ ಬಂದಿದ್ದಾನೆ ಎಂದ. ಹೋಗಿ ಮಾತನಾಡಿಸಿ ಬಂದೆವು. ಶ್ರೀಕಾಂತನ ಕಾರ್ ತುಂಬಾ ಚೆನ್ನಾಗಿತ್ತು. ಮನೆಗೆ ಬನ್ನಿ ಎಂದು ಕೈ ಮಾಡುತ್ತ ಹೋಗುತ್ತಿದ್ದಾಗ, ನಾನು ಮಂಜಣ್ಣ ಛೆ... ನೆನಪೇ ಹಾರಿ ಹೋಯಿತು ನೋಡು. ಅವನಿಗೆ ಸ್ವಲ್ಪ ಔಷಧಿ ಕೇಳಬೇಕು ಎಂದು ಹೊರಟೆ. ಮಂಜ ತಡೆದು, ಲೇ ಅವನು ಹೋಮಿಯೋಪತಿ ಅಂದ. ನನಗೆ ಹೋಮಿಯೋಪತಿ ಔಷಧಿ ನಡೆಯುತ್ತೆ ಎಂದು ಹೊರಟೆ. ತಡೆದು ನಗುತ್ತ ಲೇ ಹಂಗೆ ಅಂದರೆ "ಮನೆ ಅಳಿಯ" ಅಂತ ಅರ್ಥ ಎಂದ. ಅವನ ಮಾವ ಕೋಟ್ಯಾಧಿ ಪತಿ. ಇವನು ಅವನ ಮಗಳ ಕೋತಿಯಂತಹ ಹೋಮಿಯೋ ಪತಿ. ಕೆಲಸ ಏನು ಇಲ್ಲ ಎಂದ. ಸಕ್ಕತ್ ನಗು ಬ೦ತು. ಸಧ್ಯ ಅವನಿಗೆ ಔಷಧಿ ಕೇಳಿ ಸಮರಕ್ಕೆ ನಾಂದಿ ಹಾಡಲಿಲ್ಲ ಎಂಬುದೊಂದೇ ಖುಷಿ.

ಮನೆಗೆ ಹೋದೊಡನೆ ತುಂಬಾ ಹಸಿವು ಆಗಿತ್ತು. ಮತ್ತೆ ಅವಳಿಗೆ ಏನಾದರು ಕೇಳಿ ಬೈಯಿಸಿ ಕೊಂಡು ಸಮರಕ್ಕೆ ನಾಂದಿ ಹಾಡುವುದಕ್ಕಿಂತ ನಿನ್ನೆಯ ಇಡ್ಲಿ ವಾಸಿ ಎಂದು ಹಸಿವನ್ನು ನೀಗಿಸಿದೆ.

Saturday, April 30, 2011

ಹೆಸರಿನ ಹುಚ್ಚು ....

ನಾನು ಮತ್ತು ಮಂಜ ಸೇರಿ ಹೋಟೆಲ್ ಹೋಗಿದ್ದೆವು. ಇನ್ನೂ ಕುಳಿತು ಕೊಂಡಿರಲಿಲ್ಲ ಅಷ್ಟರಲ್ಲೇ "ಏ ಗೋಪಾಲ್ ಆಯಿತ" ಎಂಬ ಕೂಗು. ನಂಗೆ ಆಶ್ಚರ್ಯ ಏನು ಎಂದು. ತಿರುಗಿ ನೋಡಿದೆ ಒಬ್ಬ ಹುಡುಗ ಕಾಫೀ ತೆಗೆದುಕೊಂಡು ಬಂದು ಹೋಟೆಲ್ ಓನರ್ ಗೆ ಕೊಡುತ್ತಿದ್ದ. ಮತ್ತೆ ಕೆಲ ಸಮಯದ ನಂತರ "ಗೋಪಾಲ್ ಟೇಬಲ್ ಕ್ಲೀನ್ ಮಾಡು" ಎಂಬ ಕೂಗು. ಆ ಹುಡುಗ ಬಂದು ಕ್ಲೀನ್ ಮಾಡಿ ಹೋದ. ಮಂಜ ನನ್ನ ಮುಖ ನೋಡಿ ಮುಸಿ ಮುಸಿ ನಗುತ್ತಿದ್ದ. ಅದೇಕೋ ಗೊತ್ತಿಲ್ಲ ನನ್ನ ಹೆಸರಿನಲ್ಲಿರುವ ಜನರು ಬರೀ ಇಂತಹ ಕೆಲಸದಲ್ಲೇ ಇರುವುದೇಕೆ ಎಂದು ಯೋಚಿಸತೊಡಗಿದೆ. ಇನ್ನೂ ತುಂಬಾ ಸಿನೆಮಾಗಳಲ್ಲಿ ನನ್ನ ಹೆಸರಿನ ವಿಲನ್ ಇರುವುದನ್ನು. ಕಡೆಗೆ ನಾನೇ ತಪ್ಪಾಗಿ ಸಾಫ್ಟ್‌ವೇರ್ ಫೀಲ್ಡ್ ಗೆ ಬಂದೆನೇನೋ ಎಂದು ಕೂಡ ಅನ್ನಿಸಿದ್ದು ಉಂಟು. ಹೀಗೆ ಘಾಡವಾಗಿ ಯೋಚನೆಗೆ ಮುಣುಗಿದ ನನ್ನನ್ನು ಮಂಜ ಏನು ಯೋಚನೆ ಮಾಡುತ್ತಾ ಇದ್ದೀಯಾ? ಎಂದು ಕೇಳಿದ. ಅವನಿಗೆ ನನ್ನ ಹೆಸರಿಗೆ ಆಗುತ್ತಿರುವ ಶೋಷಣೆಯ ಬಗ್ಗೆ ಹೇಳಿದೆ.

ಲೇ ಹೆಸರಿಗೆ ಅನ್ವರ್ಥಕವಾಗಿ ನಿನಗೆ ಕೆಲಸ ಅಂತ ಬೇಕಾಗಿದ್ದರೆ ನೀನು ದನ ಕಾಯಲು ಹೋಗಬೇಕಿತ್ತು ಅಥವಾ ದನದ ಡಾಕ್ಟರ್ ಆಗಬೇಕಿತ್ತು ಎಂದು ಗಹ ಗಹಿಸಿ ನಕ್ಕ. ನಿನಗೆ ಹೇಗಿದ್ದರು ಒಂದು ಕೊಂಬು(ಗೋಪಾ"ಲ್") ಬೇರೆ ಇದೆ ಎಂದ. ನಾನು ಒಮ್ಮೆ "ಓಂ" ಸಿನಿಮಾ ನೋಡಿ ಬಂದು ಸಕ್ಕತ್ತಾಗಿದೆ ಎಂದು ಹೇಳಿದೆ. ಅದನ್ನು ಕೇಳಿಸಿಕೊಂಡು ಪಾಪ ಪಕ್ಕದ ಮನೆ ಅಜ್ಜಿ ಒಬ್ಬರು ಅದನ್ನು ದೇವರ ಸಿನಿಮಾ ಎಂದುಕೊಂಡು ಹೋಗಿ ನೋಡಿ ಬಂದಿದ್ದರು. ಹೆಸರಿಗೆ ಅನ್ವರ್ಥಕವಾಗಿ ಎಲ್ಲರೂ ಇರುವುದಿಲ್ಲ ಎಂದ.

ನಿನ್ನ ಹೆಸರು ಅಲ್ಲಿ ಬಳಕೆ ಆಗೋದಕ್ಕೆ ಕಾರಣ ಏನೆಂದರೆ, ಮೊದ ಮೊದಲು ಮಕ್ಕಳಿಗೆ ದೇವರ ಹೆಸರನ್ನು ಇಡುತ್ತಿದ್ದರು. ಹೀಗಾಗಿ ನನ್ನ ಹೆಸರು ಕೂಡ ತುಂಬಾ ಫೇಮಸ್. ನಿನ್ನ ಹೆಸರಿನ ಹಾಗೆ ನನ್ನ ಹೆಸರು ಕೂಡ ಬಳಕೆ ಆಗುತ್ತೆ ಎಂದ. ಗಲ್ಲಿ ಗಲ್ಲಿಗಳಲ್ಲಿ ಮಂಜುನಾಥ ಎಂಬ ಹೆಸರಿನ ಜನರಿದ್ದಾರೆ ಸುಮ್ಮನೇ ಯೋಚಿಸಬೇಡ ಎಂದ. ನಿನಗೆ ಗೊತ್ತಾ ಮಂಡ್ಯದಲ್ಲಿ ನನ್ನ ಗೆಳೆಯ ಮಾಧವನಿಗೆ ಮಹಾದೇವ ಎಂದು ಅನ್ನುತ್ತಿದ್ದರು ಎಂದ.

ಆದರೆ ನನ್ನ ಹೆಸರಿನಿಂದ ತುಂಬಾ ಜನ ವ್ಯಂಗ್ಯ ಕೂಡ ಮಾಡುತ್ತಾರೆ ಎಂದೆ. ಏನು ಅಂತ ಅಂದ. ಕೆಲ ಗೆಳೆಯರು "ಗೋಪಿ ಆಯಿತ ಕಾಫೀ" ಎಂದು ಹೇಳುತ್ತಿದ್ದ. ಅದರಲ್ಲಿ ಒಬ್ಬ ತುಂಬಾ ಅತಿರೇಕವಾಗಿ "ಗೋಪಿ ಉದುತ್ತಾನೆ ಪೀಪೀ" ಎಂದು ಹೇಳುತ್ತಿದ್ದ ಎಂದು ಬೇಜಾರಿನಲ್ಲಿ ಹೇಳಿದೆ. ಕೆಲ ಬಾರಿ ಗೋಪಾಲ್ ಜರ್ದ್, ಗೋಪಾಲ್ ಟೂತ್ ಪೌಡರ್ ಎಂದೆ.

ನೀನು ಸಿನಿಮಾ ಆಕ್ಟರ್ ಗಳು ಹೆಸರು ಬದಲಾಹಿಸಿದ ಹಾಗೆ ಬದಲಾಯಿಸಿಬಿಡು ಎಂದ. ನಾನು ಅದು ಹೇಗೆ ಸಾಧ್ಯ ಎಂದೆ. ಈಗ ಎಲ್ಲವೂ ಸಾಧ್ಯ ಒಂದು ಕೋರ್ಟ್ನಲ್ಲಿ ಅರ್ಜಿ ಗುಜರಾಯಿಸಿದರೆ ಸಾಕು. ಆಮೇಲೆ, ಒಂದು ಪೇಪರ್ ನಲ್ಲಿ ಜಾಹೀರಾತು ಕೊಟ್ಟರೆ ಸಾಕು ಎಂದ. ಮೊದಲನೆ ಬಾರಿ ನಿನ್ನ ಹೆಸರು ಕೂಡ ಲೈಮ್ ಲೈಟ್ ಗೆ ಬಂದ ಹಾಗಾಗುತ್ತೆ ಎಂದ.

ನಿನಗೆ, ಹೆಸರಿಗೆ ಆಗುವ ಶೋಷಣೆಯ ಒಂದು ರಸವತ್ತಾದ ಕತೆ ಹೇಳುತ್ತೇನೆ ಕೇಳು. ನಮ್ಮ ಪಕ್ಕದ ಮನೆಯಲ್ಲಿ ಒಬ್ಬ ಸೋಮಶೇಖರ ಎಂಬ ಗೆಳೆಯ ಇದ್ದ. ಅವನಿಗೆ ನಾವೆಲ್ಲರೂ ಸೋಮ ಎಂದು ಅನ್ನುತ್ತಿದ್ದೆವು. ಅವನು ಅವಳ ಅತ್ತೆ ಮಗಳನ್ನು ಪ್ರೀತಿಸುತ್ತಿದ್ದ. ಅವಳು ಕೂಡ ಅವನನ್ನು ಪ್ರೀತಿಸುತ್ತಿದ್ದಳು. ಅವಳು ಅವನನ್ನು ಸೋಮ ಎಂದೆ ಸಂಭೋದಿಸುತ್ತಿದ್ದಳು. ಅವರಿಬ್ಬರಿಗೆ ಮದುವೆ ಆಯಿತು. ಅವಳು ಮದುವೆ ಆದ ಮೇಲೂ ಹಾಗೆ ಅನ್ನುತ್ತಿದ್ದಾಗ ಒಬ್ಬ ಹಿರಿಯರು ಹಾಗೆಲ್ಲಾ ಅನ್ನಬಾರದು, ರೀ ಹಚ್ಚಿ ಮಾತನಾಡಬೇಕು ಎಂದು ಹೇಳಿದರು. ಆಗಿನಿಂದ ಅವಳು ರೀ ಎಂದು ಸೇರಿಸಿ ಸೋಮನನ್ನು "ಸೋಮಾರಿ" ಮಾಡಿಬಿಟ್ಟಿದ್ದಳು. ಅವನು ಹೇಳುತ್ತಿದ್ದಂತೆ ಬಾಯಲ್ಲಿರುವ ಕಾಫೀ ಅನಯಾಸವಾಗಿ ಹೊರಗಡೆ ಬಂತು.

ಜನರಿಗೆ ವ್ಯಂಗ್ಯ ಮಾಡೋದಕ್ಕೆ ಒಂದು ವಿಷಯವಿದ್ದರೆ ಸಾಕು, ಅದಕ್ಕೆ ಹೆಸರು ತುಂಬಾ ಬಳಕೆ ಆಗುತ್ತೆ ಅಷ್ಟೇ ಎಂದು ಸಮಾಧಾನ ಹೇಳಿದ. ನನಗು ಅವನು ಹೇಳಿದ್ದು ಸರಿ ಅನ್ನಿಸಿತು. ಕಡೆಗೆ ಮಂಜ ಲೇ ಹಾಗೆ ಹೊರಟರೆ ಹೇಗೆ "ಗೋಪಾಲ್ ಟೇಬಲ್ ಕ್ಲೀನ್ ಮಾಡು" ಎಂದು ವ್ಯಂಗ್ಯದ ಮಾತು ಆಡಿದ. ಕಾಫೀ ಮುಗಿಸಿ ಮನೆಗೆ ಬಂದೆವು.

ಒಮ್ಮೆ ನಾನು ಮತ್ತು ನನ್ನ ಮಡದಿ ದಾವಣಗೆರೆಗೆ ನೆಂಟರ ಮನೆಗೆ ಹೋಗಿದ್ದೆವು. ಆಗ ಒಬ್ಬ ಅಜ್ಜಿ ಪುಟ್ಟಿ ಎತ್ತಿ ತಾ ಎಂದರು. ನಾನು ಗಾಬರಿ ನನ್ನ ಹೆಂಡತಿಯನ್ನು ಹೇಗೆ ಎತ್ತಲಿ ಎಂದು. ಮತ್ತೆ ಸೆಗಣಿ ಪುಟ್ಟಿ ತಾ ಎಂದರು. ನನ್ನ ಹೆಂಡತಿಗೆ ಹೇಳುತ್ತಿದ್ದಾರೆ ಎಂದು ಸುಮ್ಮನೇ ಇದ್ದೆ. ನನ್ನ ಹೆಂಡತಿಗೆ ಚಿಕ್ಕಂದಿನಿಂದ ಪುಟ್ಟಿ ಎಂದೆ ಎಲ್ಲರೂ ಅನ್ನುತ್ತಾರೆ. ಕಡೆಗೆ ರೀ ಅದನ್ನು ಎತ್ತಿ ಕೊಡಿ ಎಂದು ಒಂದು ಪುಟ್ಟಿ(ಬುಟ್ಟಿ) ತೋರಿಸಿದಳು ಮಡದಿ, ನಾನು ಎತ್ತಿ ಕೊಟ್ಟೆ. ಆಮೇಲೆ ತಿಳಿಯಿತು ಅವರು ಬುಟ್ಟಿಗೆ ಪುಟ್ಟಿ ಅನ್ನುತ್ತಾರೆ ಎಂದು.

Tuesday, April 26, 2011

ಇರುವುದೆಲ್ಲವ ಬಿಟ್ಟು ಬೇರೆಡೆಗೆ ತುಡಿವುದೆ ಜೀವನ....

ಮುಂಜಾನೆ ಬೇಗನೆ ಎದ್ದು "ಕರಾಗ್ರೆ ವಸತೆ ಲಕ್ಷ್ಮಿ ಕರ ಮಧ್ಯೆ ಸರಸ್ವತಿ ಕರ ಮೂಲೆ ಸ್ಥಿತೇ ಗೌರಿ ಪ್ರಭಾತೆ ಕರದರ್ಶನಂ" ಎಂದು ಹೇಳುತ್ತ ಏಳುತ್ತಿದ್ದಂತೆ. ನನ್ನ ಮಗ ಕೂಗಿ "ಅಪ್ಪ ನಿಮ್ಮ ಚಪ್ಪಲಿ ಕಾಣುತ್ತಾ ಇಲ್ಲ" ಎಂದ. ಹೊರಗೆ ಹೋಗಿ ನೋಡಿದೆ. ಒಂದೇ ಚಪ್ಪಲಿ ಇತ್ತು. ಒಂದೇ ಚಪ್ಪಲಿ ಯಾರು ಕದ್ದರು ಎಂಬ ಯೋಚನೆಗೆ, ಯಾರಾದರೂ ಕು೦ಟ ಕಳ್ಳ ಇರಬಹುದು ಎಂದು, ಬರೀ ಕಾಲಲ್ಲಿ ಹೋಗಿ ನೋಡಿದೆ. ಒಂದು ಚಿಕ್ಕ ನಾಯಿ ಮರಿ ನನ್ನ ಚಪ್ಪಲಿ ತೆಗೆದುಕೊಂಡು ಆಟ ಆಡುತ್ತಾ ಇತ್ತು. ಚಿಕ್ಕದಿರಲಿ ಅಥವಾ ದೊಡ್ಡದಿರಲಿ, ನಾಯಿ... ನಾಯಿನೆ ಅಲ್ಲವೇ. ಮೊದಲಿನಿಂದಲೂ ನಾಯಿ ಎಂದರೆ ಹೆದರಿಕೆ. ಅದನ್ನು ಕಷ್ಟ ಪಟ್ಟು ಓಡಿಸಿ, ಒಂದೇ ಚಪ್ಪಲಿ ಹಾಕಿಕೊಂಡು ಬರುತ್ತಾ ಇದ್ದೆ. ಮಂಜ "ಒಂದೇ ಚಪ್ಪಲಿ ಕೊಂಡು ಕೊಂಡಿದ್ದೀಯಾ ಜುಗ್ಗ" ಎಂದು ಅಪಹಾಸ್ಯ ಮಾಡಿದ. ನಾಯಿ ಮಾಡಿದ ಅವಾಂತರ ಹೇಳಿ, ಚಪ್ಪಲಿ ಕೈಯಲ್ಲಿ ಹಿಡಿದುಕೊಂಡು ಮನೆ ಒಳಗಡೆ ನಡೆದೆ.

ಮಡದಿ ಎರಡು ದಿನಗಳಿಂದ ಕೋಪ ಮಾಡಿಕೊಂಡಿದ್ದಳು. ಮನೆ ಕಸ ಇನ್ನೂ ಗುಡಿಸಿರಲಿಲ್ಲ. ಒಳಗೆ ಬಂದು "ಹೊರಗಡೆ ನನ್ನ ಕಾಲು ತುಂಬಾ ಸ್ವಚ್ಛ ಇದ್ದವು, ಒಳಗಡೆ ಬಂದೊಡನೆ ನನ್ನ ಕಾಲು ಹೊಲಸು ಆಗಿದ್ದಾವೆ" ನೋಡು ಪುಟ್ಟ ಎಂದು ನಗುತ್ತಾ ಮಗನಿಗೆ ಹೇಳಿದೆ. ಅಷ್ಟರಲ್ಲಿ ಮಡದಿ ಕೋಪದಿಂದ, ಪೊರಕೆ ನನ್ನ ಬಳಿ ಇಟ್ಟು ಒಳಗಡೆ ಹೋದಳು. ನಾನೇ ಕಸ ಗುಡಿಸಬೇಕಾಯಿತು.

ಈ ಸಿಟ್ಟು ಎನ್ನುವುದು ನನ್ನ ಮಡದಿಯೊಬ್ಬಳ ಕಾಯಿಲೆ ಅಥವಾ ಎಲ್ಲ ಹುಡುಗಿಯರ ಕಾಯಿಲೆನಾ ಎಂಬ ಯೋಚನೆ ಬಂತು. "ಹುಡುಗಿಯರು ಕೋಪ ಮಾಡಿಕೊಂಡಾಗ ತುಂಬಾ ಮುದ್ದಾಗಿ ಕಾಣುತ್ತಾರೆ" ಎಂದು ಅರ್ಥ ಮಾಡಿಕೊಂಡು ಕಾಯಿಲೆ ಅಲ್ಲದೇ ಖಯಾಲಿ ಕೂಡ ಆಗಿರಲೂಬಹುದು. ಆಗ ಎಲ್ಲ ಸಮಯದಲ್ಲೂ ಮುದ್ದಾಗಿ ಕಾಣಬಹುದು ಎಂದು ಕೂಡ ಹೀಗೆ ಮಾಡಿರಬಹುದು.

ಕೋಪ ಹೋಗಿಸೋಕೆ ಏನೇನು ಯೋಜನೆಗಳು ಎಂದು ಆಲೋಚನೆಗೆ ಬಿದ್ದೆ. ಚಿಕ್ಕ ವಯಸ್ಸಿನಲ್ಲಿ ನನ್ನ ಒಬ್ಬ ಆಪ್ತ ಗೆಳೆಯ ಹೇಳುತ್ತಿದ್ದ "ಸಿಟ್ಟು ಬಂದರೆ ಪಡಿ ಹಿಟ್ಟು ಮುಕ್ಕು" ಎಂದು. ಆದರೆ ಯಾವ ಹಿಟ್ಟು ಎಂದು ಮಾತ್ರ ಹೇಳಿರಲಿಲ್ಲ ಮಹಾರಾಯ. ಯಾವುದಾದರೂ ಮುಕ್ಕಬಹುದು ಆದರೆ ಸಿಟ್ಟು ಜ್ಯಾಸ್ತಿ ಆಯಿತು ಎಂದರೆ ಕಷ್ಟ. ಅಥವಾ ಗಿರಣಿಯಲ್ಲಿರುವ ಹಿಟ್ಟಿನ ಮಿಶ್ರಣವ ಎಂದು ಕೂಡ ಯೋಚಿಸಿದೆ.

ಮತ್ತೆ ಕೆಲವರು ಸಿಟ್ಟು ಬಂದಾಗ ನಮ್ಮ ಇಂಗ್ಲೀಶ್ ಮೇಷ್ಟ್ರು ಹೇಳುವ ಕೌಂಟ್ ವನ್ ಟು ಟೆನ್ ಕೂಡ ನೆನಪು ಆಯಿತು. ಆದರೆ ಕೋಪ ಬಂದರೆ ಇಂಗ್ಲೀಶ್ ಕಡ್ಡಾಯವಾಗಿ ಬರಲೇ ಬೇಕು. ಅಷ್ಟರಲ್ಲಿ ಲಗುಬಗೆಯಿಂದ ಏನೇ? ನಿನಗೆ ಇಂಗ್ಲೀಶ್ ಬರುತ್ತ ಎಂದೆ. ಇಲ್ಲ ಕಣ್ರೀ ನೀವೇ ಜಾಣರು ಎಂದು ಮತ್ತಷ್ಟು ಕೋಪ ಮಾಡಿಕೊಂಡಳು. ಮತ್ತೆ ಕನ್ನಡದಲ್ಲಿ ಒಂದರಿಂದ ಹತ್ತರವರಗೆ ಎಣಿಸು ಎಂದೆ. ಅದು ಬರಲ್ಲ ಕಣ್ರೀ ಏನ್ರೀ? ಈವಾಗ ಎಂದಳು.

ಅವಳ ಕೋಪಕ್ಕೂ ಮತ್ತು ನಮ್ಮ ಜಗಳಕ್ಕು ಒಂದು ಕಾರಣವಿದೆ. ಅವಳು ಊರಿಗೆ ಹೋಗುತ್ತೇನೆ ಎಂದು ಕ್ಯಾತೆ ತೆಗೆದಿದ್ದು. ಹೀಗಾಗಿ ನಾನು ಹೋಗಿ ಟಿಕೆಟ್ ಮಾಡಿಸಿಕೊಂಡು ಬಂದು ಅವಳಿಗೆ ಕೊಟ್ಟೆ. ಅವಳು ಕೋಪಕ್ಕೆ ತಿಲಾಂಜಲಿ ಹಾಕಿದ್ದಳು.

ಮರುದಿನ ಬೆಳಿಗ್ಗೆ ಅವರನ್ನು ಕಳುಹಿಸಲು ಆಟೋ ಹುಡುಕಿದೆ. ಬೆಳಿಗ್ಗೆ ಒಂದೂ ಆಟೋ ಸಿಗಲೇ ಇಲ್ಲ. ಕಡೆಗೆ ಒಂದು ಆಟೋ ಮಾಡಿ ಹೋಗುವಷ್ಟರಲ್ಲಿ ತುಂಬಾ ಲೇಟ್ ಆಗಿತ್ತು. ಮೂರು ಬ್ಯಾಗ್ ನಾನೇ ಹಿಡಿದುಕೊಂಡು ಹೋಗಿ ಲಗುಬಗೆಯಲ್ಲಿ ಬಿಟ್ಟು ಬಂದೆ. ಸ್ಟೇಶನ್ ಹೊರಗೆ ಬಂದೆ. ಅಷ್ಟರಲ್ಲಿ ಒಬ್ಬ ಕರೆದು "ಬರುತ್ತೀಯ..." ಎಂದ ಕೇಳಿದ. ನನಗೆ ದಿಕ್ಕೇ ತೋಚದಾಗಿತ್ತು. ಎಲ್ಲಿ? ಎಂದೆ. ನೀವು ಕೂಲಿ ಅಲ್ಲವ ಎಂದ. ನಾನು ಇಲ್ಲ ಸರ್ ಎಂದು ನನ್ನ ಕೆಂಪು ಅಂಗಿ ನೋಡಿ ನಗುತ್ತಾ ಮನೆಗೆ ಬಂದೆ.

ಅವಳಿಲ್ಲದೇ ತುಂಬಾ ಮಜವಾಗಿ ಇರಬಹುದು ಎಂದು ಯೋಚಿಸುತ್ತಾ ಬಂದ ನನಗೆ ಮನೆಯಲ್ಲಿ ಮಡದಿ, ಮಗ ಇಲ್ಲದೇ ನಿಶಬ್ದವಾಗಿತ್ತು. ಮನೆ, ಮನೆಸೆಲ್ಲ ಖಾಲಿ ಖಾಲಿ. ಯಾರು ಇಲ್ಲದಿದ್ದರೂ ಮನೆಯಲ್ಲಿ ನನ್ನೊಟ್ಟಿಗೆ ಇರುವರೇನೋ ಎಂಬ ಹುಸಿ ಭಾವನೆ. ಆಮೇಲೆ ನೋಡಿ ಯಾರು ಇಲ್ಲ ಎಂದು ಮನವರಿಕೆಯಾಗುತಿತ್ತು. "ಇರುವುದೆಲ್ಲವ ಬಿಟ್ಟು ಬೇರೆಡೆಗೆ ತುಡಿವುದೆ ಜೀವನ" ಎಂಬ ಗೋಪಾಲ್ ಕೃಷ್ಣ ಅಡಿಗರ ಉಕ್ತಿಯಂತೆ, ಅಂತಹ ಖುಷಿಯೇನು ಅನ್ನಿಸಲಿಲ್ಲ.

ಚಹಾ ಮಾಡೋಣ ಎಂದು ಅರ್ಧ ಹಾಲನ್ನು ಇನ್ನೊಂದು ಪಾತ್ರೆಗೆ ಸುರುವಿದೆ. ಮತ್ತು ಚಹಾ ಪುಡಿ ಹಾಕಿದೆ. ಅಷ್ಟರಲ್ಲಿ ದೇವರ ಕಟ್ಟೆ ಮೇಲೆ ಇಟ್ಟಿರುವ ಗುಲಾಬಿ ಹೂ ಕಾಣಿಸಿತು. ಅವಳು ಅದನ್ನು ಆತುರದಲ್ಲಿ ಅಲ್ಲಿಯೇ ಇಟ್ಟು ಹೋಗಿದ್ದಳು. ಅದನ್ನು ದೇವರಿಗೆ ಏರಿಸಿ, ಸಕ್ಕರೆ ಹಾಕಿದೆ. ಚಹಾ ಮಾಡಿ ಹೊರಗಡೆ ಬಂದು ಚಹಾ ಹೀರುತ್ತಾ ಕುಳಿತೆ. ಚಹಾ ಕಹಿಯಾಗಿತ್ತು, ಏಕೆಂದರೆ? ನಾನು ಚಹಾ ಪುಡಿ ಮತ್ತು ಸಕ್ಕರೆ ಹಾಕಿದ್ದು ಬೇರೆ ಬೇರೆ ಪಾತ್ರೆಗೆ. ಕಡೆಗೆ ಸಕ್ಕರೆ ಬೆರೆಸಿ ಚಹಾ ಹೀರುತ್ತಾ ಕುಳಿತಾಗ ನಾವಿಬ್ಬರೇ ನಾನು ಮತ್ತು ಒಂದು ಗುಯ್‌ಗೂಡುವ ನೊಣ.

Tuesday, March 22, 2011

ಬಾಡಿಗೆ ಮನೆ ....

ಮಂಜನ ಮನೆಗೆ ಹೋಗಿದ್ದೆ. ಈ ಗ್ಯಾಸ್ ಆಗಿಬಿಟ್ಟರೆ ಊಟ ಮಾಡೋದು ಕಷ್ಟ ಎಂದು ಮಂಜ ಬೇಜಾರಿನಿಂದ ಮಾತನಾಡುತ್ತಾ ಇದ್ದ. ಹಾಗಾದರೆ ಮನೆಯಲ್ಲಿ ಅಡುಗೆ ನಿನ್ನದೆ ಎಂದು ಆಯಿತು ಎಂದೆ. ಲೇ....ನೀನು ನಿನ್ನ ವಿಷಯ ಬೇರೆಯವರ ಮೇಲೆ ಹಾಕಿ ಖುಷಿಪಡಬೇಡ ಎಂದು ನನಗೆ ತಿರುಗು ಬಾಣ ಬಿಟ್ಟ. ಆಗ ನಕ್ಕೂ, ಊಟಕ್ಕೆ ನಮ್ಮ ಮನೆಗೆ ಬಂದು ಬಿಡು ಎಂದೆ. ಹಾ... ಏನು? ಎಂದ. ಊಟಕ್ಕೆ ನಮ್ಮ ಮನೆಗೆ ಬಾ, ಇಲ್ಲ ನನ್ನ ಮನೆಯಲ್ಲಿರುವ ಸಿಲಿಂಡರ್ ತೆಗೆದುಕೊಂಡು ಹೋಗು ಎಂದೆ. ಲೇ ... ನಾನು ಅದನ್ನು ಹೇಳುತ್ತ ಇಲ್ಲ ಕಣೋ ಎಂದು ಗಹ.. ಗಹಿಸಿ.. ನಗುತ್ತಾ.... ಗ್ಯಾಸ್ ಆಗಿದ್ದು ಹೊಟ್ಟೆಯಲ್ಲಿ ಎಂದ. ನಾನು ತಮಾಷೆಗೆ ಇದನ್ನ ಭಾರತ್ ಅಥವಾ ಏಚ್ ಪೀ ಗ್ಯಾಸ್ ಏಜೆನ್ಸೀ ಅವರಿಗೆ ತಿಳಿದರೆ ಕಷ್ಟ ನಿನ್ನನ್ನು ಎತ್ತಿಕೊಂಡು ಹೋಗಿ ಬಿಡುತ್ತಾರೆ ಎಂದೆ.

ಮತ್ತೆ ಏನು? ರಾಯರು ತುಂಬಾ ದಿವಸದ ಮೇಲೆ ಇಲ್ಲಿಗೆ ಪ್ರಯಾಣ ಬೇಳಿಸಿದ್ದೀರಿ ಎಂದ. ಬಾಡಿಗೆ ಮನೆ ನೋಡಿ ಕೊಂಡು ಬರೋಣ ಬರುತ್ತೀಯಾ? ಎಂದು ಕೇಳಿದೆ. ನೀನು ಇದ್ದರೆ ಸ್ವಲ್ಪ ಧೈರ್ಯ ಇರುತ್ತೆ. ಮತ್ತು ಚೌಕಾಸಿ ಮಾಡಲು ನೀನೆ ಸರಿ ಎಂದೆ. ನಾನು ಬರಲ್ಲ, ನೀನು ಬೇಕಾದರೆ ಹೋಗು ಎಂದ. ಕಡೆಗೆ ಒಬ್ಬನೇ ಮನೆ ಹುಡುಕಲು ಹೊರಟೆ. ಗಾಡಿ ಮೇಲೆ ತಲೆ ಅತ್ತ.. ಇತ್ತ.. ಮಾಡುತ್ತಾ ಹೋಗುವ ನನ್ನನ್ನು ನೋಡಿ ತುಂಬಾ ಜನ ವಿಚಿತ್ರವಾಗಿ ನೋಡಿ ನಕ್ಕಿದ್ದು ಆಯಿತು. ಹಲ್ಲು ಇದ್ದಾಗ ಕಡ್ಲೆ ಇರಲ್ಲ , ಕಡ್ಲೆ ಇದ್ದಾಗ ಹಲ್ಲು ಇರಲ್ಲ ಎಂಬ ಗಾದೆ ಹಾಗೆ ನನ್ನ ಅವಸ್ಥೆ ಆಗಿತ್ತು. ಒಂದು ಮನೆ ಕೂಡ ಸಿಗಲೇ ಇಲ್ಲ. ಕಡೆಗೆ ನನಗೆ ನೋ ಪಾರ್ಕಿಂಗ್ ಎಂಬ ಬೋರ್ಡ್ ಕೂಡ ಮನೆ ಬಾಡಿಗೆ ಎಂಬ ಹಾಗೆ ಕಾಣಿಸುತಿತ್ತು.

ಕಡೆಗೆ ಒಂದು ಮನೆ ಮುಂದೆ ಬಾಡಿಗೆಗೆ ಎಂಬ ಬೋರ್ಡ್ ನೇತು ಹಾಕಿದ್ದರು. ನಾನು ಒಳಗಡೆ ಹೋದೆ, ನನ್ನ ಮೇಲಿಂದ ಕೆಳಗಡೆವರೆಗೂ ಅನಾಮತ್ತಾಗಿ ನೋಡಿ ನಾವು ನಾನ್-ವೇಜ್ ನವರಿಗೆ ಕೊಡುವುದಿಲ್ಲ ಎಂದರು. ನಾನು ವೇಜ್ ಎಂದೆ. ನಾನು ಅದನ್ನೇ ಹೇಳಿದ್ದು ಕಣ್ರೀ ಎಂದರು. ಕಡೆಗೆ ಕಷ್ಟ ಪಟ್ಟು ತಿಳಿಸಿದ ಮೇಲೆ ಮನೆ ತೋರಿಸಿದರು. ಮನೆ ಅಷ್ಟು ಇಷ್ಟವಾಗಲಿಲ್ಲ. ಹೀಗಾಗಿ ಸುಮ್ಮನೇ ಮತ್ತೆ ಮುಂದೆ ಹೊರಟೆ.

ಮತ್ತೊಂದು ಬಾಡಿಗೆ ಮನೆ ಕಾಣಿಸಿತು. ಬೆಲ್ ಮಾಡಿ, ನಾನು ಅವರು ಕೇಳುವ ಮೊದಲೇ ನಾನು ಸಸ್ಯಾಹಾರಿ ಎಂದೆ. ಅವರು ಅವಾಕ್ಕಾಗಿ ನೋಡಿದರು. ಕಡೆಗೆ ಸುಧಾರಿಸಿಕೊಂಡು ಮನೆ ಬಾಡಿಗೆ ಎಂದೆ. ಓsss ಅದಾ ಎಂದು ಮನೆ ತೋರಿಸಿದರು. ಮನೆಯಲ್ಲಿ ಇರುವ ವಸ್ತು ಎಲ್ಲೆಲ್ಲಿ ಇಡಬೇಕು ಎಂದು ನಾನು ಯೋಚಿಸುತ್ತಿದ್ದರೆ, ಅವರು ಮಾತ್ರ ವಾಸ್ತು ಬಗ್ಗೆ ಪುರಾಣ ಶುರು ಮಾಡಿದ್ದರು. ಇದು ವಾಯು ಮೂಲೆ , ಅಗ್ನಿ ಮೂಲೆ ಎಂದೆಲ್ಲ ಹೇಳಿ ತಲೆ ತಿಂದಿದ್ದರು. ಇಲ್ಲಿ ಮೊದಲು ಒಬ್ಬ ಹುಡುಗ ಇರುತ್ತಿದ್ದ. ಬಂದ ಎರಡೇ ತಿಂಗಳಲ್ಲಿ ಮದುವೆ ಆಯಿತು ಎಂದರು. ಮತ್ತೆ ಎರಡು ವರ್ಷ ಇಲ್ಲೇ ಇದ್ದರು ಮತ್ತು ಒಂದು ಮಗು ಕೂಡ ಆಯಿತು ಎಂದರು. ನನಗೆ ಮೊದಲೇ ಮದುವೆ,ಮಗು ಎರಡು ಆಗಿದೆ ಎಂದು ಹೇಳೋಣ ಎಂದುಕೊಂಡೆ. ಆದರೂ ಸುಮ್ಮನೇ ಮನೆ ನೋಡಿ ಮನೆಯವರನ್ನೂ ಕರೆದುಕೊಂಡು ಬಂದು ತೋರಿಸಿ, ಆಮೇಲೆ ಹೇಳುತ್ತೇನೆ ಎಂದು ಕಾಲುಕಿತ್ತೆ.

ಮತ್ತೆ ಎಷ್ಟು ತಿರುಗಿದರು ಮನೆ ಸಿಕ್ಕಲಿಲ್ಲ. ಕಡೆಗೆ ಮನೆಗೆ ಬಂದೆ. ಅಷ್ಟರಲ್ಲಿ ಮಡದಿ ನಾನು ಒಂದು ಮನೆ ನೋಡಿದ್ದೇನೆ ಎಂದಳು. ಆಯಿತು ಅದನ್ನು ನೋಡಿಯೇ ಬಿಡೋಣ ಎಂದು ಹೋದೆವು. ಬಾಡಿಗೆ ಏನೋ ಕಡಿಮೆ ಇತ್ತು...ಆದರೆ ಮನೆ ಮಾತ್ರ ಉದ್ದವಾಗಿ ಪಟ್ಟಿಯ ಹಾಗೆ ಇತ್ತು. ಯಾವುದು ಬೆಡ್‌ರೂಮ್ ಯಾವುದು ಹಾಲ್ ಎಂದು ಪತ್ತೆ ಹಚ್ಚುವುದೇ ಒಂದು ಸಮಸ್ಯೆಯಾಗಿತ್ತು. ಅವರ ಎದುರಿಗೆ ಏನು ಹೇಳದೇ ಆಮೇಲೆ ಬರುತ್ತೇವೆ ಎಂದು ಹೇಳಿ ಹೊರಗಡೆ ಬಂದೆವು. ನನ್ನ ಮಡದಿಗೆ ಅದು ಇಷ್ಟವಾಗಿತ್ತು. ನಾನು ಮನೆ ಸರಿ ಇಲ್ಲ ಎಂದೆ. ನಿನ್ನ ಚಾಯ್ಸ್ ಸರಿ ಇಲ್ಲ ಕಣೇ ಎಂದೆ. ಅದು ನಿಜ ಕಣ್ರೀ ಈಗೀಗ ಅರ್ಥ ಆಗುತ್ತಾ ಇದೆ ಎಂದು ನನ್ನ ಮುಖ ನೋಡಿ ಅಂದಳು.

ಸಂಜೆ ಅಂತರ್ಜಾಲದಲ್ಲಿ ಒಂದೆರಡು ಬಾಡಿಗೆ ಮನೆ ಹುಡುಕಿದೆ. ಒಬ್ಬರಿಗೆ ಫೋನ್ ಮಾಡಿ ನಿಮ್ಮ ಮನೆ ಟುಲೆಟ್ ಇದೆ ಅಲ್ಲ ಎಂದೆ. ಅಲ್ಲಿಂದ ಯೂ ಆರ್ ಟೂ ಲೇಟ್ ಎಂದು ಉತ್ತರ ಬಂತು. ಮತ್ತೆ ಒಂದೆರಡು ಜನರಿಗೆ ಕರೆ ಮಾಡಿ ಅವರ ವಿಳಾಸ ತಿಳಿದು ನಾಳೆಗೆ ಹೋಗೋಣ ಎಂದು ನಿರ್ಧರಿಸಿ ಆಗಿತ್ತು.

ಮರುದಿನ ವಿಳಾಸ ಹಿಡಿದು ಹೊರಟೆ. ಒಂದು ಮನೆಯಲ್ಲಿ ಅಜ್ಜಿ ಮಾತ್ರ ಇದ್ದರು. ನನ್ನನ್ನು ಹೊರಗಡೆ ಇಂದ ಮಾತ್ರ ಮಾತನಾಡಿಸಿ ಕಳುಹಿಸಿದರು. ಮತ್ತೊಂದು ಮನೆಯಲ್ಲಿ ಅವರಿಗೆ ಬಾಡಿಗೆ ಸ್ವಲ್ಪ ಕಡಿಮೆ ಮಾಡಿ ಎಂದು ಕೇಳಿದೆ. ಅದಕ್ಕೆ ನಮ್ಮ ಮೋಟರ್ ಕೆಟ್ಟರೆ ನೀವು ದುಡ್ಡು ಕೊಡಬೇಕು ಎಂಬ ಉದ್ದಟ್ ವಾಗಿ ಹೇಳಿದರು. ಇವರ ಸಹವಾಸ ಸಾಕು ಎಂದು ಮತ್ತೊಂದು ಮನೆಗೆ ಹೋದೆ. ಮನೆ ತುಂಬಾ ಚೆನ್ನಾಗಿ ಇತ್ತು. ಸಂಜೆಗೆ ಹೋಗಿ ಮನೆ ಮಡದಿಗೂ ತೋರಿಸಿದೆ. ಅವಳಿಗೂ ಸರಿ ಅನ್ನಿಸಿತು. ಕಡೆಗೆ ಅದನ್ನೇ ಒಪ್ಪಿಗೆ ಸೂಚಿಸಿದೆವು. ಅವರು ನನ್ನ ಮಗನ ಜೊತೆ ತಮಾಷೆ ಮಾಡುತ್ತಾ, ಅವನಿಗೆ ಎ ಬಿ ಸಿ ಡಿ ಎಲ್ಲ ಕೇಳಿದರು. ಕೂದಲಿನ ಬಣ್ಣ ಏನು? ಎಂದು ಇಂಗ್ಲೀಶ್ ನಲ್ಲಿ ಕೇಳಿದರು. ಆಗ ಮಗ ನನ್ನ ಕೂದಲಿನ ಬಣ್ಣ ಕರಿ, ನಿಮ್ಮದು ಬಿಳಿ ಎಂದು ಬಿಟ್ಟ. ಸಧ್ಯ ಅವರು ಬೇಜಾರ್ ಮಾಡಿಕೊಳ್ಳಲಿಲ್ಲ. ಮನೆ ಬಾಡಿಗೆ ಎಲ್ಲವನ್ನು ಮಾತನಾಡಿ ಮನೆಗೆ ಬಂದೆವು.

ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕುವುದು ಎಷ್ಟು ಕಷ್ಟ ಎಂದು ಅನ್ನಿಸಿತು. ಮೊದಲನೆ ಮನೆ ಹುಡುಕಿ ಕೊಟ್ಟಿದ್ದು ನನ್ನ ಗೆಳೆಯ. ಮರುದಿನ ಬಾಡಿಗೆ ಮನೆ ಹುಡುಕಲು ಪಟ್ಟ ಕಷ್ಟದಿಂದ ಬಾಡಿ ಬೆಂಡಾಗಿ ಹೋಗಿತ್ತು.

Friday, March 11, 2011

ಟ್ರೈನಿನ ಲೋಚಗುಡುವಿಕೆ ....

ಇವತ್ತು ಬೈಸಿಕೊಳ್ಳುವುದೂ ಗ್ಯಾರಂಟೀ ಎಂದು ಕೊಳ್ಳುತ್ತ, ಮನೆಯೊಳಗೆ ಕಾಲು ಇಟ್ಟೆ. ಹಲ್ಲಿ ಲೋಚಗುಡುತ್ತಾ ಇತ್ತು. ಹಲ್ಲಿ ನೋಡಿ ಹಲ್ಲು ಕಡಿದು ಒಳಗಡೆ ಹೋದೆ. ಅದನ್ನು ಓಡಿಸಲು ಹೋದೆ. ತುಂಬಾ ಜೋರಾಗಿ ಓಡಿ ದಣಿದವನಂತೆ ನಿಂತು ಮತ್ತೆ ಲೋಚಗುಟ್ಟಿತು. ಮತ್ತೊಮ್ಮೆ ಅದನ್ನು ಓಡಿಸಲು ಹೋದೆ. ಸ್ವಲ್ಪ ಕೂಡ ಅಲುಗಾಡದೆ ಹಾಗೆ ನಿಂತು ಬಿಟ್ಟಿತು. ಸಧ್ಯ ಅದಕ್ಕೂ ಗೊತ್ತಾಗಿ ಬಿಟ್ಟಿದೆ, ಇವನ ಪರಾಕ್ರಮ ಇಷ್ಟಕ್ಕೆ ಮಾತ್ರ ಸೀಮಿತ ಎಂದು. ಇನ್ನೇನು ಮಾಡದೆ ಸುಮ್ಮನೇ ಒಳಗಡೆ ನಡೆದೆ.

ನಾನು ಒಳ್ಳೆಯ ವಿಚಾರ ಮಾಡುವಾಗ ಒಮ್ಮೆಯೂ ಲೋಚಗೂಡದ ಹಲ್ಲಿ, ನಾನು ಕೆಟ್ಟ ವಿಚಾರ ಮಾಡುವಾಗ ಮಾತ್ರ ಖಂಡಿತ ಲೋಚಗುಡುತ್ತದೆ. ಅದನ್ನು ನಾನು ತುಂಬಾ ಕೆಟ್ಟ ಕಣ್ಣಿನಿಂದ ನೋಡಿ, ಮತ್ತೆ ನಾನೇ ಲೋಚಗೂಡಲು ಶುರು ಮಾಡುತ್ತೇನೆ. ನನ್ನ ಲೋಚಗುಡುವಿಕೆಯಿಂದ ನನಗೆ ಯಾವುದೇ ಫಾಯಿದೆ ಆಗಿದೆಯೋ ಖಂಡಿತ ಗೊತ್ತಿಲ್ಲ. ಹೆಂಡತಿ ಮಾತ್ರ ಕೃಷ್ಣ ಕೃಷ್ಣ .. ಎಂದು ಎರಡು ಬಾರಿ ಶ್ರೀ ಕೃಷ್ಣ ಪರಮಾತ್ಮನನ್ನು ಎರಡು ಬಾರಿ ನೆನಸುತ್ತಾಳೆ. ಅಷ್ಟು ಚೆನ್ನಾಗಿ ಮಿಮಿಕ್ರಿ ಮಾಡುತ್ತೇನೆ. ಅದು ಹಲ್ಲಿಯದು ಮಾತ್ರ.

ನಾನು ಲೇಟಾಗಿ ಆಫೀಸ್ ನಿಂದ ಬಂದಿದ್ದೆ. ಲೇಟ್ ಆಗುವುದಕ್ಕೂ ಒಂದು ಕಾರಣ ಇತ್ತು. ಆಫೀಸ್ ನಲ್ಲಿ ಟ್ರೇನಿಂಗ್ ಇತ್ತು. ಮಡದಿ ಕರೆ ಮಾಡಿ ಕೂಡ ಹೇಳಿರಲಿಲ್ಲ. ಹೀಗಾಗಿ ಮಡದಿ ಕೋಪ ಮಾಡಿಕೊಂಡಿರಬಹುದೆಂದು ಭಯದಿಂದ ಬಂದಿದ್ದೆ. ಟ್ರೈನಿಂಗ್ ತೆಗೆದುಕೊಳ್ಳುವರು ಒಬ್ಬ ಫ್ರೆಂಚ್ ಮನುಷ್ಯ ಇಂಗ್ಲೀಷ್ ಉಚ್ಚಾರಣೆ ಚೆನ್ನಾಗಿ ಬರುತ್ತಿರಲಿಲ್ಲ. ತುಂಬಾ ಕಷ್ಟ ಪಟ್ಟು ಪ್ರಯಾಸದಿಂದ ಅರ್ಥ ಮಾಡಿಕೊಳ್ಳಬೇಕಿತ್ತು. ಅವರು ಟು ಎಂದರೆ ಥೂ ಎಂದು ಉಗಿದ ಹಾಗೆ ಅನ್ನಿಸೋದು. ಇನ್ನೂ 11g Suite ಎಂದರೆ 11g ಸ್ವೀಟ್ ಎಂದ ಹಾಗೆ ಅನ್ನಿಸುತಿತ್ತು. Parallel- ಬ್ಯಾರಲ್ , ಕನ್ಫರ್ಮೇಶನ್ - ಕಾಫೀ ಮಶೀನ್, ಕಾಲಮ್ - ಕೂಲಮ್ ಮತ್ತು ಜೆ ವಿ ಎಂ - ಜಿ ವಿ ಎಂ. ತುಂಬಾ ಕಷ್ಟ ಪಟ್ಟು ಅರ್ಥ ಮಾಡಿಕೊಂಡಿದ್ದೆ.

ಮನೆಯೊಳಗೆ ಹೋದೆ ತುಂಬಾ ಲೇಟ್ ಆಯಿತ ಎಂದು ಕೇಳಿದೆ. ಏನು ಇಲ್ಲವಲ್ಲ ಎಂದಳು. ನನಗೆ ಆಶ್ಚರ್ಯ. ನಾನು ಮತ್ತೆ ವಿಷಯ ಕೆಣಕಿದರೆ ನನಗೆ ಕಷ್ಟ ಎಂದು ಕೈ ಕಾಲು ತೊಳೆದುಕೊಂಡು ಬಂದು, ಊಟಕ್ಕೆ ಹಾಜರ್ ಆದೆ.ಊಟ ಮಾಡುತ್ತಾ ಕುಳಿತಾಗ, ಮಡದಿ ಏನ್ರೀ ಟ್ರೈನಿಂಗ್ ಹೇಗೆ ಆಯಿತು ಎಂದು ಕೇಳಿದಳು. ನನಗೆ ಆಶ್ಚರ್ಯ ಅವಳಿಗೆ ಹೇಗೆ ತಿಳಿಯಿತು ಎಂದು. ನಾನು ಚೆನ್ನಾಗೆ ಇತ್ತು. ಸ್ವಲ್ಪ ಇಂಗ್ಲೀಶ್ ಉಚ್ಚಾರಣೆ ಅರ್ಥ ಮಾಡಿಕೊಳ್ಳುವುದರಲ್ಲಿ ಮಾತ್ರ ತೊಂದರೆ ಅನ್ನಿಸಿತು ಎಂದು ಹೇಳಿದೆ. ಮತ್ತೆ ನಾನು ಅರ್ಥ ಮಾಡಿಕೊಂಡ ಫ್ರೆಂಚ್ ಮತ್ತು ಇಂಗ್ಲೀಶ್ ಪದಗಳನ್ನು ಹೇಳಿದೆ. ಜೋರಾಗಿ ನಕ್ಕೂ ನಿಮಗೆ ತಿನ್ನುವುದು ಬಿಟ್ಟು ಬೇರೆ ಏನು ನೆನಪು ಆಗಲಿಲ್ಲವೇ ಎಂದು ಹೀಯಾಳಿಸಿದಳು. ಆದರೂ ಅನುಮಾನ ಹಾಗೆ ಇತ್ತು. ನಾನೇ ಯಾವಾಗಲಾದರೂ ಹೇಳಿದ್ದೇನಾ ಟ್ರೈನಿಂಗ್ ವಿಷಯ ಎಂದು ನೆನಪು ಮಾಡಿಕೊಂಡೆ. ಯೋಚಿಸಿದಷ್ಟು ತಲೆ ಬಿಸಿಯಾಗ ತೊಡಗಿತು. ಕಡೆಗೆ ತಾಳ್ಮೆ ಮೀರಿ ಕೇಳಿಯೇ ಬಿಟ್ಟೆ. ನಿನಗೆ ಹೇಗೆ ಗೊತ್ತು, ನನಗೆ ಟ್ರೈನಿಂಗ್ ಇದೆ ಎಂದು ಎಂದು ಕೇಳಿದೆ. ಅದು ಟಾಪ್ ಸೀಕ್ರೆಟ್ ಎಂದು ಅಡುಗೆ ಮನೆಗೆ ಮೊಸರು ತರಲು ಹೊರಟು ಹೋದಳು.

ನಾನು ಮತ್ತೆ ಮತ್ತೆ ಕೇಳಿದ ಮೇಲೆ, ನಿನ್ನೆ ರಾತ್ರಿ ನಿದ್ದೆಯಲ್ಲಿ ಏನೇನೋ ಲೋಚಗುಡುತ್ತಾ ಇದ್ದೀರಿ ಎಂದಳು. ನಾನು ಏನು? ಎಂದು ಕೇಳಿದೆ. ನಾಳೆ ಟ್ರೈನಿಂಗ ಇದೆ ಎಂದು. ಮತ್ತೆ ಲೇಟ್ ಆಗಿ ಬರುತ್ತೇನೆ ಎಂದು ಬೇರೆ ಹೇಳುತ್ತಿದ್ದೀರಿ ಎಂದಳು. ಆಗ ಅರ್ಥ ಆಯಿತು ನನಗೆ ಇವತ್ತಿನ ಅಷ್ಟೋತ್ತರ ಹೇಗೆ ತಪ್ಪಿತು ಎಂದು. ಒಂದೊಂದು ಸಾರಿ ನೀವು ತುಂಬಾ ಲೋಚಗುಡುತ್ತೀರಿ ಅಥವಾ ನಿಮ್ಮ ಗೊರಕೆ ಟ್ರೈನಿನ ಶಬ್ದದ ಹಾಗೆ ಬರುತ್ತೆ ಎಂದಳು. ಇವತ್ತಿನಿಂದ ಹಾಲ್ ನಲ್ಲಿ ಮಲಗಿಕೊಳ್ಳಿ ನಮಗೆ ತುಂಬಾ ಡಿಸ್ಟರ್ಬ್ ಆಗುತ್ತೆ. ನಿನ್ನೆ ಹೀಗೆ ಲೋಚಗುಡುತ್ತಾ ಇದ್ದಾಗ ಮಗ ಬೇರೆ ಎದ್ಡಿದ್ದ ಎಂದು ಬೈದಳು.

ಹೊರಗಡೆ ಹಾಲ್ ಗೆ ಬಂದೆ. ಅಷ್ಟರಲ್ಲಿ ಮಡದಿ ನಾಳೆ ಲೇಟ್ ಆಗುತ್ತಾ? ಎಂದು ಕೇಳಿದಳು. ಇಲ್ಲ ಎಂದೆ. ನಾಳೆ ಆಫೀಸ್ ನಿಂದ ಬರುತ್ತ ತರಕಾರಿ ತೆಗೆದುಕೊಂಡು ಬನ್ನಿ ಎಂದಳು. ನಾನು ಎಷ್ಟು ತಡಕಾಡಿದರು 300 ರೂಪಾಯಿ ಕೆಳಗೆ ಆಗುವುದೇ ಇಲ್ಲ ತರಕಾರಿಗೆ. ಅದಕ್ಕೆ ತರಕಾರಿ ತಂದ ಮೇಲೆ ತಕರಾರು ಇದ್ದೇ ಇರುತ್ತೆ. ಅಷ್ಟರಲ್ಲಿ ಮೊಬೈಲ್ ಜಾಹೀರಾತು ಕಾಣಿಸಿತು ಟಿ ವಿ ಯಲ್ಲಿ. ಈ ಚೈನೀಸ್ ಗಳು ಏನೆಲ್ಲಾ ಕಂಡುಹಿಡಿದಿದ್ದಾರೆ. ಮೊಬೈಲ್, ಟಿ ವಿ ಎಲ್ಲ ಎಲೆಕ್ಟ್ರಾನಿಕ್ ಐಟಮ್ ಗಳನ್ನು, ಹಾಗೆ ತರಕಾರಿ ಕಂಡು ಹಿಡಿದು ಪುಣ್ಯ ಕಟ್ಟಿಕೊಳ್ಳಬಾರದೇ ಎಂದು ಅನ್ನಿಸಿತು.ಚೈನೀಸ್ ತರಕಾರಿ ಬಜಾರ್ ಎಲ್ಲ ಕಡೆ. ಆಗ ಈರುಳ್ಳಿ, ಟೊಮ್ಯಾಟೋ , ಬೀನ್ಸ್ ಎಲ್ಲದಕ್ಕೂ ಒಂದೇ ರೇಟ್ 5 ರೂಪಾಯಿ ಕೆ ಜಿ ಎಂದು ಯೋಚನೆ ಬಂತು. ಆಗ ತರಕಾರಿ ಖರ್ಚು 100 ರೂಪಾಯಿ ದಾಟೊಲ್ಲ ಎಂದು ಯೋಚಿಸಿ ಹಾಗೆ ಒಂದು ಮಂದಹಾಸ ಬೀರಿದೆ.

ಅಷ್ಟರಲ್ಲಿ ಮಡದಿ ಬಂದು ಏಕೆ? ರಾಯರು ಒಬ್ಬರೇ ನಗುತ್ತಾ ಇದ್ದೀರ. ಟ್ರೈನಿಂಗ್ ಕೊಟ್ಟವರು ಗಂಡಸ ಅಥವಾ ಹುಡುಗೀನಾ? ಎಂದು ಕೇಳಿದಳು. ಗಂಡಸೆ ಕಣೇ ಎಂದು ತಡಬಡಿಸಿ ಹೇಳಿದೆ. ಇನ್ನೂ ಸುಮ್ಮನೇ ನಿದ್ದೆ ಮಾಡಿ ಎಂದು ಲೈಟ್ ಆಫ್ ಮಾಡಿ ಹೋದಳು .ಗೋಡೆ ಮೇಲಿರುವ ಹಲ್ಲಿ ಲೋಚಗುಡಿತು. ನಾನು ಲೋಚಗುಡುತ್ತಾ ಕೃಷ್ಣ.. ಕೃಷ್ಣ.. ಎಂದು ಶ್ರೀ ಕೃಷ್ಣ ಪರಮಾತ್ಮನನ್ನು ನೆನೆದು ನಿದ್ದೆಗೆ ಜಾರಿದೆ.

Thursday, February 24, 2011

ತರ್ಲೆ ಮಂಜನ ರಥಸಪ್ತಮಿ....

ನಾನು ಮಂಜನ ಮನೆಗೆ ಹೊರಟಿದ್ದೆ. ಮನೆ ಸಮೀಪಿಸುತ್ತಿದ್ದಂತೆ, ನನಗೆ ಅವರ ಮನೆಗೆ ಹೋಗುತ್ತಿದ್ದೇನೆ ಎಂಬ ಭಾವನೆ ಬರಲಿಲ್ಲ. ಏಕೆಂದರೆ, ಯಾವಾಗಲು ಕೇಳಿಸುವ ನಮ್ಮ ವಟ ಸಾವಿತ್ರಿಯ ಅಥವಾ ನಮ್ಮ ಮಂಜನ ಧ್ವನಿ ಕೇಳಿಸಲಿಲ್ಲ. ಸಾವಿತ್ರಿಗೆ ಮೊದಲೇ ಒಂದು ಬಾಯಿ ಇದ್ದರೂ, ಮದುವೆ ಆದಮೇಲೆ ಇನ್ನೊಂದು ಬಾಯಿ ಸೇರಿ ಸಾವಿತ್ರಿಬಾಯಿ ಆದ ಮೇಲೆ ಇನ್ನೂ ಬಾಯಿ ಜೋರಾಗಿತ್ತು. ಮಂಜ ಮನೆಯಲ್ಲಿ ಇಲ್ಲದಿರಬಹುದಾ ಎಂದು ಕೂಡ ಅನ್ನಿಸಿತು. ವಾಪಸ್ ಹೋಗುವ ಸಮಯದಲ್ಲಿ, ಮಂಜನ ಪಕ್ಕದ ಮನೆಯಲ್ಲಿ ಇರುವ ಸಂತೋಷ ಭೇಟಿಯಾದರು. ಮಂಜನ ಬಗ್ಗೆ ಕೇಳಿದಾಗ ಮಂಜ ಮನೆಯಲ್ಲಿ ಇರುವನೆಂದು ತಿಳಿಯಿತು.

ಮಂಜನ ಮನೆಗೆ ಹೋದೆ. ಮಂಜ ಪೇಪರ್ ಓದುತ್ತಾ ಕುಳಿತಿದ್ದ. ಸಾವಿತ್ರಿ ಇಷ್ಟು ಶಾಂತವಾಗಿದ್ದು ತುಂಬಾ ಖುಷಿ ತಂದಿತು. ಆದರೆ ಏನೋ ನಡೆದಿದೆ ಎನ್ನುವುದು ಮಾತ್ರ ಖಾತ್ರಿ ಅನ್ನಿಸಿತು. ಏನು? ತಂಗ್ಯಮ್ಮಾ ಹೇಗಿದ್ದೀಯ ಎಂದು ಕೇಳಿದೆ. ಇವರನ್ನು ಕಟ್ಟಿಕೊಂಡ ಮೇಲೆ ರಾಮ.... ರಾಮ.... ಎಂದು ಆರಾಮ್ ಆಗಿ ಇರಲಾರದೇ ಆಗುತ್ತೆ? ಎಂದು ಉತ್ತರ ಬಂದಿತು. ಮಂಜನಿಗೆ ಕೇಳಿದೆ ಏನು? ಸಮಾಚಾರ ಎಂದು. ಏನೋ ಗೊತ್ತಿಲ್ಲಪ್ಪಾ? ಮುಂಜಾನೆಯಿಂದ ಏಳು ಬಾರಿ ಇವತ್ತು ರಥಸಪ್ತಮಿ ಕಣ್ರೀ ಎಂದು ಹೇಳಿದ್ದಾಳೆ ಎಂದ. ಕೋಪ ಏತಕ್ಕೆ ಎಂದು ಗೊತ್ತಿಲ್ಲ ಎಂದ. ಮತ್ತೆ ಸ್ವೀಟ್ ಏನು? ಮಾಡಬೇಕು ಎಂದು ಕೇಳಿದಳು. ನಾನು ಏನಾದ್ರೂ ಮಾಡು ಎಂದೆ. ಅದಕ್ಕೆ ಕೋಪದಿಂದ ಏನು? ಬೇಕು ಅದನ್ನು ಹೇಳಿ ಅಂದಳು. ಮತ್ತೆ ನಾನು ಏನಾದ್ರೂ ಮಾಡು, ಹೇಗಿದ್ದರು ನೀನು ತಾನೇ ತಿನ್ನುವವಳು ಎಂದೆ. ಅದಕ್ಕೆ ಇರಬೇಕು ಇಷ್ಟು ಕೋಪ ಅಂದ.

ಸಾವಿತ್ರಿ ಕಾಫೀ ತೆಗೆದುಕೊಂಡು ಬಂದು ನನಗೆ ಮಾತ್ರ ಕೊಟ್ಟಳು. ಮಂಜ ಆಗ ಕಾಫೀ ನನಗೆ ಎಂದ. ಅವಳು ನಿಮಗೆ ಇಲ್ಲ ತುಂಬಾ ಕೂಡಿಬೇಡಿ ಆರೋಗ್ಯ ಹಾಳಾಗುತ್ತೆ ಎಂದು ಕೋಪದಿಂದಲೇ ನುಡಿದಳು. ಆಗ ಮಂಜ ಕಾಫೀಗೆ ಹಾರ್ಟ್ ಅಟ್ಯಾಕ್ ಆಗಲ್ಲ ಗೊತ್ತಾ ಎಂದ. ಕಾಫೀಗೆ ಜೀವ ಇದ್ದರೆ ತಾನೇ ಹಾರ್ಟ್ ಅಟ್ಯಾಕ್ ಆಗೋದು ಎಂದಳು. ನಾನು ನನ್ನ ಬಗ್ಗೆ ಹೇಳಿದ್ದು ಎಂದ ಮಂಜ. ಕಡೆಗೆ ಮಂಜನಿಗೂ ಒಂದು ಕಾಫೀ ಲಭಿಸಿತು. ಮಂಜ ಈ ಪೇಪರ್ ನವರು ದುಬಾರಿ ಎನ್ನುವ ಒಂದು ಕಾಲಮ್ ಪರ್ಮನೆಂಟ ಮಾಡಿದ್ದಾರೆ ಅನ್ನಿಸುತ್ತೆ ಎಂದ. ಮೊನ್ನೆ ಈರುಳ್ಳಿ, ನಿನ್ನೆ ಪೆಟ್ರೋಲ್ ಇವತ್ತು ಹಾಲು ನಾಳೆ ಹಾಳು ಮೂಳು ಹೀಗೆ.. ಎಂದ.

ಅಷ್ಟರಲ್ಲಿ ಮಂಜನ ಮಡದಿ ಸಾವಿತ್ರಿ ಒಳಗಡೆಯಿಂದ ಬಂದು, ನಿಮ್ಮ ಗೆಳಯನಿಗೆ ಊರ ವಿಚಾರ ಎಲ್ಲಾ ಗೊತ್ತಾಗುತ್ತೆ. ಆದರೆ ಮನೆಯವರು ಎಂದರೆ ಅಷ್ಟಕ್ಕೇ ಅಷ್ಟೇ ಎಂದಳು. ಮೊನ್ನೆನೇ ಹೇಳಿದ್ದೆ ರಥಸಪ್ತಮಿ ದಿವಸ ಒಂದು ಸೀರೆ ಕೊಡಿಸಿ ಎಂದು ತನ್ನ ಅಳಲನ್ನು ತೋಡಿಕೊಂಡಳು. ನೋಡಿ ಇವತ್ತು ಹೊಸ ಸೀರೆ ಉಟ್ಟುಕೊಂಡರೆ ವರ್ಷದಲ್ಲಿ ಏಳು ಹೊಸ ಸೀರೆ ಬರುತ್ತವೆ ಎಂದಳು. ನೀನು ಕೊಡಿಸಿದ್ದೀಯ ತಾನೇ, ನಿನ್ನ ಮಡದಿಗೆ ಎಂದು ನನಗೆ ಕೇಳಿದಳು. ನಂಗೆ ದಿಕ್ಕೇ ತೋಚದಾಗಿತ್ತು. ಸಧ್ಯ ಪಕ್ಕದಲ್ಲಿ ಹೆಂಡತಿ ಇರಲಿಲ್ಲ. ಅದೇನೋ ಅಂತಾರಲ್ಲ ದಾರಿಯಲ್ಲಿ ಹೋಗುವ ಮಾರಿ ತಂದು ಮನೆಯಲ್ಲಿ ಇಟ್ಟುಕೊಂಡರು ಅನ್ನುವ ಹಾಗೆ ಆಗಿತ್ತು. ಆಗ ಮಂಜ ಹಾಗಾದರೆ ಇವತ್ತು ನಾನು ದುಡ್ಡು ಖರ್ಚು ಮಾಡಿದರೆ ನನ್ನ ಜೇಬು ವರ್ಷದಲ್ಲಿ ಏಳು ಬಾರಿ ಕತ್ತರಿ ಎಂದ. ನೀನು ಹೇಳುವ ಹಾಗೆ ಇದ್ದರೆ ಇವತ್ತು ಮದುವೆ ಅದವರು ಬೇಜಾನ್ ಜನ ಇದ್ದಾರೆ. ಅವರಿಗೆ ವರ್ಷದಲ್ಲಿ ಏಳು ಬಾರಿ ಮತ್ತೆ ಮದುವೆ ಆಗುತ್ತಾ ಸುಮ್ಮನೇ ಏನೇನೋ ಹೇಳಬೇಡ ಎಂದು ದಬಾಯಿಸಿದ. ಆಮೇಲೆ, ಗೊತ್ತಾ ನೀನು ಹೀಗೆ ಜಗಳಮಾಡಿಕೊಂಡು ಮುನಿಸಿಕೊಂಡು ಕುಳಿತಿದ್ದರೆ, ವರ್ಷದಲ್ಲಿ ಇನ್ನೂ ಏಳು ಪಟ್ಟು ಜ್ಯಾಸ್ತಿ ಜಗಳ ಆಗುತ್ತೆ ಎಂದು ತನ್ನ ಅಪಾರ ಜ್ಞಾನ ಪ್ರದರ್ಶಿಸಿದ.

ಅದು ಬೇರೆ ನಮ್ಮ ಎಂಗೇಜ್ಮೆಂಟ್ ಇವತ್ತೇ ಆಗಿತ್ತು ತಾನೇ...ಹಾಗೆ ನೋಡಿದರೆ ಅದೇ ವರ್ಷದಲ್ಲಿ ನನಗೆ ಏಳು ಬಾರಿ ಆಗಬೇಕಿತ್ತು. ಇನ್ನುವರೆಗೆ ಮತ್ತೊಂದು ಕೂಡ ಆಗಿಲ್ಲ ಎಂದು ನಗುತ್ತಾ ಹೇಳಿದ. ಅದಕ್ಕೆ ಸಪ್ತಪದಿ ತುಳಿದಿರಲ್ಲ ನನ್ನ ಜೊತೆ ಅಂದಳು ಸಾವಿತ್ರಿ. ಅವರಿಬ್ಬರ ಜಗಳಕ್ಕೆ ಸಾಕ್ಷಿ ಎನ್ನುವಂತೆ ನಾನು ಕುಳಿತಿದ್ದೆ. ನಿನ್ನನ್ನು ಮದುವೆ ಮಾಡಿಕೊಳ್ಳಬೇಕಾದರೆ ನಾನು ಪಟ್ಟ ಕಷ್ಟ ಎಷ್ಟು ಗೊತ್ತಾ ಎಂದ. ನಾನು ನನ್ನ ಅಪ್ಪನಿಗೆ, ನನ್ನ ಕೆಲಸ ಮಾಡುವ ಟೀಮ್ ನಲ್ಲಿ ಎಲ್ಲರ ಮದುವೆ ಆಗಿದೆ ಎಂದು ಹೇಳಿದೆ. ಹೌದಾ... ಹಾಗಾದರೆ ನೀನು ನಿನ್ನ ಟೀಮ್ ಚೇಂಜ್ ಮಾಡಿ ಬಿಡು. ಅವರ ನಡುವೆ ಇದ್ದು ಕೆಟ್ಟು ಹೋಗಿ ಬಿಡುತ್ತಿಯ, ನನ್ನ ನೋಡಿದ ಮೇಲೆ ನಿನಗೆ ಅರ್ಥ ಆಗಿರಬೇಕಲ್ಲ ಎಂದರು. ನಾನು ಬೆಪ್ಪನ ಹಾಗೆ ಸುಮ್ಮನೇ ಇರದೆ, ನನ್ನ ಅಪ್ಪನ ಒಪ್ಪಿಸಿ, ನಿನ್ನ ಮದುವೆ ಆದೆ ಅಂದ. ಅಷ್ಟರಲ್ಲಿ ನಗುತ್ತಾ, ತನ್ನ ಬ್ಯಾಗ್ ತೆಗೆದು ಒಂದು ಹೊಸ ಸೀರೆ ಸಾವಿತ್ರಿಗೆ ಕೊಟ್ಟ.

ಅವರಿಬ್ಬರ ಮಾತುಗಳು ಜೋರು ಇದ್ದರೂ, ಮನಸು ಮಾತ್ರ ತಿಳಿ ನೀರು....

Thursday, February 10, 2011

ತರಲೆ ಮಂಜನ ತತ್ವಜ್ಞಾನ ....

ಮೊದ ಮೊದಲು ತುಂಬಾ ಓದುತ್ತಿದ್ದೆ. ಆಮೇಲೆ ಏನಾದರೂ ಬರೆಯಬೇಕು ಎಂಬದು ಮನಸ್ಸಿನಲ್ಲಿ ಹೊಯ್ದಾಡಹತ್ತಿತ್ತು. ಆಮೇಲೆ ಏನು? ಬರೆಯಬೇಕು, ಏನು? ಬರೆದರೆ ಎಲ್ಲರೂ ಸ್ವೀಕರಿಸುತ್ತಾರೆ ಎಂದು ಯೋಚಿಸಹತ್ತಿದೆ. ತತ್ವಜ್ಞಾನದ ಬಗ್ಗೆ ಎಂದು ನಿಶ್ಚಯಿಸಿ ಆಗಿತ್ತು. ಮಂಜನಿಗೆ ಒಮ್ಮೆ ಕೇಳಿ ನೋಡಿದರೆ ಹೇಗೆ ಎಂದು ಯೋಚಿಸಿ ಮಂಜನಿಗೆ ಕೇಳಿದೆ. ಮಂಜ ಈ ತತ್ವಜ್ಞಾನ ಎಂಬುದು ಎಲ್ಲರೂ ಕೊಡುವ ಜ್ಞಾನ, ಬೇಕಾದರೆ ಎಲ್ಲರೂ ತಮ್ಮ.. ತಮ್ಮ.. ಶೈಲಿ ಮಾತ್ರ ಬದಲಿಸಿ ಅರುಹುತ್ತಾರೆ ಅಷ್ಟೇ ಎಂದ. ಒಬ್ಬ ಎಳೆನೀರು ಮಾರುವ ಮನುಷ್ಯ ಕೂಡ ಹೇಳುತ್ತಾನೆ ಅದನ್ನ ಎಂದ. ಅದು ಹೇಗೆ? ಎಂದು ಕೇಳಿದೆ. ಬಾ ತೋರಿಸುತ್ತೇನೆ ಎಂದ.

ಒಬ್ಬ ಎಳೆನೀರು ಮಾರುವವನ ಬಳಿ ಹೋದೆವು. ಮಂಜ ಇದನ್ನು ಕೊಡಿ ಎಂದು ಒಂದು ಎಳೆನೀರು ಕಾಯಿ ತೋರಿಸಿದ. ನಿಮಗೆ ನೀರಾ, ಗಂಜಿನಾ ಹೇಳಿ ನಾನು ಕೊಡುತ್ತೇನೆ ಎಂದ. ಗಂಜಿ ಎಂದ ಮಂಜ. ಮತ್ತೆ ಬಿಡಿ ನಾನು ಕೊಡುತ್ತೇನೆ ಎಂದ ನೀರು ಮಾರುವವ. ಬೇಡ ಇದೆ ಕೊಡಿ ಎಂದ ಮಂಜ. ಎಳೆನೀರು ಮಾರುವವ ನೋಡಿ... ಸ್ವಾಮಿ ಮೇಲೆ ಇರುವ ಸೊಬಗು ನೋಡಿ ತೆಗೆದು ಕೊಂಡರೆ ಆಗಲ್ಲ, ಒಳಗೆ ಚೆನ್ನಾಗಿ ಇದ್ದರೆ ಸಾಕು ಎಂದು ತನ್ನ ಎದೆ ಮುಟ್ಟಿಕೊಂಡು ಹೇಳಿದ. ಆಗ ಮಂಜ ಹೇಳಿದ ಮಾತು ನಿಜ ಅನ್ನಿಸಿತು. ಹೀಗೆ ... ಕಣೋ ಎಲ್ಲರೂ ತಮ್ಮ.. ತಮ್ಮ.. ಜ್ಞಾನವನ್ನು ಭೋಧಿಸುತ್ತಾರೆ ಅಷ್ಟೇ... ಪಂಚರ್ ತಿದ್ದುವ ಮನುಷ್ಯನಿಂದ ಹಿಡಿದು ಕಾರ್ ಮಾರುವ ಮನುಷ್ಯನವರೆಗೆ ಎಂದ. ನೀನು ಬರೆಯಬೇಕು ಎಂದರೆ ಹಾಸ್ಯ ಆರಿಸಿಕೋ, ಇದರಿಂದ ಕೆಲ ಜನರಲ್ಲಿ ಮಂದಹಾಸ ಮೂಡಿದರೆ ಸಾಕು. ನಿನ್ನ ಬರಹ ಸಾರ್ಥಕವಾಗುತ್ತೆ. ತತ್ವಜ್ಞಾನ ಕೊಡೋಕೆ ತುಂಬಾ ಜನ ಇದ್ದಾರೆ. ಸ್ವಾರ್ಥವಿಲ್ಲದೇ ಯಾವುದೇ ತತ್ವಜ್ಞಾನ ಕೂಡ ಇರುವುದಕ್ಕೆ ಸಾಧ್ಯವೇ ಇಲ್ಲ. ಮತ್ತೆ ಕೆಲವರು ತಾವು ಒಳ್ಳೆಯವರು ಎಂದು ತೋರಿಸುವುದಕ್ಕೆ ಇಂತಹ ತತ್ವಜ್ಞಾನ ಪ್ರದರ್ಶಿಸುತ್ತಾರೆ. ಈ ಫಿಲಾಸಫೀ ಯಾವತ್ತೂ ಫಿಲ್ ಆಗದ ವಸ್ತು.

ಮತ್ತೆ ನನ್ನ ಪಕ್ಕದ ಮನೆಯಲ್ಲಿ ಇರುವ ಒಬ್ಬ ಹಿರಿಯರು ತತ್ವ ಜ್ಞಾನ ಹೇಳುತ್ತಿದ್ದರು. ಮತ್ತು ಪ್ರತಿ ಬಾರಿ ತಮ್ಮ ಅಕ್ಷರಗಳ ಬಗ್ಗೆ ವರ್ಣನೆ ಕೂಡ ಮಾಡುತ್ತಿದ್ದರು. ನಮಗೂ ಅಕ್ಷರ ಗುಂಡಾಗಿ ಬರೆಯಿರಿ ಎಂದು ಹೇಳಿ ರಾತ್ರಿ ಗುಂಡು ಹಾಕಿ ಕುಳಿತಿರುತ್ತಿದ್ದರು. ಉಪದೇಶ,ವೇದಾಂತ, ತತ್ವಜ್ಞಾನ ಎಲ್ಲರೂ ಪರಿಪಾಲಿಸಿದರೆ ಎಲ್ಲರೂ ದೊಡ್ಡವರಾಗಿಯೇ ಇರುತ್ತಾರೆ ಅಲ್ಲವೇ, ಚಿಕ್ಕ ಮನುಜರು ಕಡಿಮೆ ಆಗಿಬಿಡುತ್ತಾರೆ. ಆಮೇಲೆ ಎಲ್ಲರಿಗೂ ಮ್ಯಾನೇಜರ್ ಲೆವೆಲ್ ನಲ್ಲೇ ಇರುತ್ತಾರೆ. ಆದರೆ ಕೆಳಗೆ ಕೆಲಸ ಮಾಡುವವರು ಯಾರು? ಎಂದು ಪ್ರಶ್ನೆ ಹಾಕಿದ.

ಒಂದು ಕತೆ ಹೇಳುತ್ತೇನೆ ಕೇಳು. ಆಚಾರ್ಯ ಹೇಳುವುದಕ್ಕೆ ಮತ್ತು ಬದ್ನೆಕಾಯಿ ತಿನ್ನುವುದಕ್ಕೆ ಇದು ಸರಿಯಾಗಿ ಹೊಂದುತ್ತದೆ ಎಂದ. ಒಮ್ಮೆ ಒಬ್ಬ ಸಂಪ್ರದಾಯಸ್ತರ ಮನೆಯಲ್ಲಿ ಹಿರಿಯರು ತೀರಿಕೊಂಡಿದ್ದರು. ಅವರ ಪಿಂಡ ಇಟ್ಟು ಕಾಯುತ್ತಾ ನಿಂತಿದ್ದರು. ಯಾವುದೇ ಕಾಗೆ ಬಂದು ಮುಟ್ಟಲಿಲ್ಲ. ತುಂಬಾ ಹೊತ್ತು ಕಾದರೂ ಆಗಲೂ ಯಾವುದೇ ಕಾಗೆ ಮೂಸಲ್ಲಿಲ್ಲ. ಇನ್ನೂ ಕಾದರೆ ಆಗುವುದಿಲ್ಲ, ನನಗೆ ಶುಗರ್ ಬೇರೆ ಇದೆ ಎಂದು, ಅವರ ಮನೆಯಲ್ಲಿ ಇರುವ ಒಬ್ಬ ಹೊಟೇಲಿನಿಂದ ಚಿಕನ್ ತಂದು ಪಿಂಡದ ಪಕ್ಕ ಎಸೆದ. ಅಷ್ಟೇ... ಕಾಗೆಗಳ ದಂಡೆ ಬಂದು, ಎಲ್ಲವನ್ನು ತಿಂದು ಹೋಗಿತ್ತು. ಪಾಪ ತಮ್ಮ ಹೊಟ್ಟೆ ಸಲುವಾಗಿ ಸತ್ತವರ ಆಸೆ ಅವರಿಗೆ ಅಷ್ಟಕ್ಕೇ ಅಷ್ಟೇ ಎಂದ.

ನೋಡು ನಾವೆಲ್ಲರೂ ತೂತು ಮಡಿಕೆ ಇದ್ದ ಹಾಗೆ ಎಂದ. ನನಗೆ ಅರ್ಥವಾಗಲಿಲ್ಲ. ಹಾಗೆ ಅಂದರೆ ಎಂದೆ. ಮತ್ತೆ ಅದರ ಕತೆ ಶುರು ಮಾಡಿದ. ನೋಡು ಒಬ್ಬ ಮನುಷ್ಯನ ಹತ್ತಿರ ಎರಡು ಮಡಿಕೆಗಳು ಇದ್ದವು. ಒಂದು ಮಡಿಕೆ ಚೆನ್ನಾಗಿ ಇತ್ತು. ಇನ್ನೊಂದು ಸ್ವಲ್ಪ ತೂತು ಇತ್ತು. ದಿನಾಲೂ ಎರಡನ್ನೂ ತೆಗೆದುಕೊಂಡು ಹೋಗಿ ನೀರು ತುಂಬುತ್ತಿದ್ದ. ಅದನ್ನು ನೀರು ತುಂಬುವ ಸಮಯದಲ್ಲಿ ತೂತು ಇರುವ ಮಡಿಕೆ ಅರ್ಧ ಅಗಿರುತಿತ್ತು. ಅದನ್ನು ನೋಡಿದ ಅದನ್ನು ನೋಡಿದ ಅವನ ಮಡದಿ ಇದನ್ನು ಒಗೆದು ಬಿಡಬಾರದೇ ಎಂಬ ಸಲಹೆ ಇಟ್ಟಳು. ಅದಕ್ಕೆ ಅವನು ಅವನ ಹೆಂಡತಿಯನ್ನು ಕರೆದುಕೊಂಡು ಹೋಗಿ, ತನ್ನ ಬಾವಿಯಿಂದ ಮನೆಯವರೆಗೂ ಇರುವ ಹೂವಿನ ಕುಂಡಗಳನ್ನು ತೋರಿಸಿ, ಇವೆಲ್ಲವೂ ಈ ತೂತುಮಡಿಕೆಯ ಉಪಕಾರದಿಂದ ಬೆಳೆದ ಹೂವಿನ ಗಿಡಗಳು ಮತ್ತು ದಿನಾಲೂ ಇವುಗಳನ್ನು ಕಿತ್ತು ದೇವರಿಗೆ ಮತ್ತು ನಿನಗೆ ಕೊಡುತ್ತೇನೆ. ಅದರ ಸೋರುವಿಕೆಯ ನೀರು ಈ ಗಿಡಗಳಿಗೆ ಆಹಾರವಾಗುತ್ತೆ. ಮತ್ತು ನನ್ನ ಕೆಲಸ ಕೂಡ ತಪ್ಪುತ್ತೆ. ಈಗ ಹೇಳು ಇದನ್ನು ನಾನು ಬಿಸಾಡಲೆ ಎಂದು ಕೇಳಿದ. ಆಗ ಹೆಂಡತಿ ತನ್ನ ತಪ್ಪು ಅರಿವಾಗಿ ಬೇಡ.. ಬೇಡ... ಎಂದಳು. ಹೀಗೆ, ಎಲ್ಲರಲ್ಲಿಯೂ ಕೆಲ ದೋಷಗಳು ಸಹಜವಾಗಿಯೇ ಇರುತ್ತವೆ. ಅವುಗಳನ್ನು ತಿದ್ದುವುದು ಅಥವಾ ಕಡೆಗಣಿಸುವುದು ಬಿಟ್ಟು, ಅವುಗಳನ್ನು ಹಾಗೆಯೇ ಸ್ವೀಕರಿಸಿ, ಅವುಗಳ ಉಪಯೋಗ ಪಡೆದುಕೊಳ್ಳಬೇಕು....ಇಷ್ಟೆಲ್ಲಾ ಹೇಳಿದ್ದೇನೆ, ನೀನು ಬೇಕಾದರೆ ತತ್ವಜ್ಞಾನಿ ಆಗು ಎಂದು ಹೀಯಾಳಿಸಿದ.

ಮತ್ತೆ ನೀನು ಈಗ ಏನು? ಮಾಡಿದೆ ಎಂದು ಕೇಳಿದೆ. ಲೇ ಗುರುವಿಗೆ ತಿರುಮಂತ್ರನಾ ಎಂದು ದಬಾಯಿಸಿದ. ನಾನು ನೀಡಿದ್ದು ಬರೀ ಸಲಹೆ ಮಾತ್ರ. ಉಪದೇಶ ಅಥವಾ ತತ್ವಜ್ಞಾನ ಅಲ್ಲ ಎಂದ. ನಾನು ಏನು? ಬರೆಯಬೇಕು ಎಂದು ತಲೆಯಲ್ಲಿ ಬರೆ ಎಳೆದ ಹಾಗೆ ಹೇಳಿದ್ದ. ಅದರ ಕಲೆ(ಎರಡು ಅರ್ಥದಲ್ಲಿ ಸ್ವೀಕರಿಸಿ) ಈಗಲೂ ಇದೆ ಎಂದರೆ ಅತಿಶಯೋಕ್ತಿ ಆಗಲಾರದು.

ಅವನು ಹೇಳಿದ ಹಾಗೇನೆ ಮಾಡಿದೆ. ಮೊದಮೊದಲು ಲೇಖನ ಬರೆದ ಮೇಲೆ, ಅವನಿಗೆ ಫೋನ್ ಮಾಡಿ ಹೇಳುತ್ತಿದ್ದೆ. ಈ ಪ್ಯಾರಾದಲ್ಲಿ ಇರುವ ಪಂಚ್ ನೋಡು ಎಂದು ಹೇಳಿ ತಲೆ ತಿನ್ನುತ್ತಿದ್ದೆ. ಈಗ ನನ್ನ ಫೋನ್ ಬಂದರೆ ಎತ್ತುವುದೇ ಇಲ್ಲ ಆಸಾಮಿ. ಕೆಲವೊಮ್ಮೆ ಬ್ಯೂಸಿಯಾಗಿ ಇದ್ದೇನೆ, ಆಮೇಲೆ ಕಾಲ್ ಮಾಡುತ್ತೇನೆ ಎಂದು ಹೇಳಿ ಕಾಲಿಗೆ ಬುದ್ದಿ ಹೇಳುತ್ತಾನೆ.

-----------------
ಮಂಜನ ಹನಿ

ಮಂಜ ಬಾಡಿಗೆಗೆಎಂದು ವಿಜಯನಗರದಲ್ಲಿ ಇದ್ದ. ಒಮ್ಮೆ ಅವರ ಮನೆ ಮಾಲೀಕರು ಬಂದರು.
ಮಾಲೀಕರು - ರೀ ಮಂಜುನಾಥ, ನೀವು ಬಂದು ಒಂದು ವರ್ಷ ಆಯಿತು ಅಲ್ಲವಾ?
ಮಂಜ - ಹೌದು ಸರ್...
ಮಾಲೀಕರು - ನೋಡಿ ಈ ತಿಂಗಳಿಂದ ಎರಡು ನೂರು ಬಾಡಿಗೆ ಎಕ್ಸ್‌ಟ್ರಾ ಕೊಡಿ.
ಮಂಜ - ಸರ್, ನೋಡಿ ನಾನು ಒಬ್ಬನೇ ಇರೋದು ದಯ ತೋರಿ ಎಂದು ಗೋಳಾಡಿದ.
ಮಾಲೀಕರು - ಪಾಪ ಹೌದಲ್ಲವಾ, ನೀನು ಒಬ್ಬನೇ ಇದ್ದೀಯ ಅಂತ ನನಗೆ ಗೊತ್ತು. ಆಯಿತು, ನನ್ನ ಹೆಂಡ್ತೀನ ಕೇಳಿ ನೋಡ್ತೀನಿ, ಅವಳು ಒಪ್ಪಿದರೆ, ವಿಚಾರ ಮಾಡೋಣ.
ಮಂಜ ಸುಸ್ತೋ ಸುಸ್ತು ....

ಗಂಡಾಂತರ....

ತುಂಬಾ ಮನೆಗಳಲ್ಲಿ ನಿಜವಾದ ಗಂಡಾಂತರ ಆಗುವುದು ಗಂಡಾಂತರವಾದ ಮೇಲೇನೆ. ಗಂಡ ಅಂತರ ಧ್ಯಾನ ಅಥವಾ ಅಂತರ ಪಿಶಾಚಿ ಆದ ಮೇಲೆ ಎಂದು ತಪ್ಪು ತಿಳಿಯಬೇಡಿ ಮತ್ತೆ ಗಂಡ ಆಫೀಸ್ ಹೋದ ಮೇಲೆ ಎಂಬ ಅರ್ಥದಲ್ಲಿ ಹೇಳಿದ್ದು. ಗಂಡ ಆಫೀಸ್ ಹೋದ ಮೇಲೆ ನಡುಯುವ ಟಿ ವಿ ಎಂಬ ಮೂರ್ಖರ ಪೆಟ್ಟಿಗೆಯಲ್ಲಿ ಬರುವ ಧಾರಾವಾಹಿ ಎಂಬ ಗಂಡಾಂತರಗಳ ಬಗ್ಗೆ ಹೇಳಿದ್ದು. ಧಾರಾವಾಹಿ ಎನ್ನುವುದಕ್ಕೆ ಬಹುಶಃ ಕಣ್ಣೀರ 'ಧಾರಾ' ಆ'ವಾಹ'ಯಾಮಿ ಇರಬಹುದೇನೋ....ನೀವು ಕೇಳಬಹುದು ಇದು ಲಿಂಗ ಹೇಗೆ ಬದಲಿಸಿತು ಎಂದು, ಈಗಿನ ಕಾಲದಲ್ಲಿ ಎಲ್ಲವೂ ಸಾಧ್ಯ. ಸಾಕಷ್ಟು ನಿದರ್ಶನಗಳು ಕೂಡ ಇವೆ....ದಿನ ಪತ್ರಿಕೆ,ಟಿ ವಿ ಯಲ್ಲಿ ನೋಡಿರಲೂಬಹುದು....ಆದರೂ ಹೆಚ್ಚು ಹೆಣ್ಣು ಮಕ್ಕಳೇ ನೋಡುವುದರಿಂದ ಇದನ್ನು ಧಾರಾವಾಹಿ ಎಂದು, ಅವರ ಸಹಾನುಭೂತಿಗೆ ಹೆಸರು ಬಂದಿರಲಿಕ್ಕೆ ಕೂಡ ಸಾಧ್ಯ ಉಂಟು.

ಬಹುಶಃ ಗಂಡಸರನ್ನು ಕಣ್ಣೀರ ಧಾರೆ ಹರಿಸಲಿಕ್ಕೆ ಬರುವುದಿಲ್ಲ ಎಂದು ಕಾಣುತ್ತೆ ಈ ಧಾರಾವಾಹಿಗಳಿಗೆ, ಅದಕ್ಕೆ ಅದನ್ನು ಹೆಣ್ಣುಮಕ್ಕಳಿಗೆ ಬಿಟ್ಟಿದ್ದು ಇರಲೂಬಹುದು(ಗಂಡಸರ ಕಣ್ಣೀರ ಧಾರೆ ಹರಿಸಲಿಕ್ಕೆ). ಅಲ್ಲಿ ಬರುವ ಧಾರಾವಾಹಿಗಳಲ್ಲಿನ ಸೀರೆ , ಒಡವೆ ನೋಡಿ ಹೆಣ್ಣು ಮಕ್ಕಳು ತುಂಬಾ ಆಕರ್ಷಿತರಾಗಿರುತ್ತಾರೆ. ಆಮೇಲೆ ಅಂತರ ಪಿಶಾಚಿ ಆದ ಗಂಡ ಬಂದ ಮೇಲೆ ಶಿಫಾರಸ್ಸು ಹೋಗಿರುತ್ತೆ. ಸಿಗದೆ ಹೋದರೆ ಇದ್ದೇ ಇದೆ.. 'ಧಾರಾ'ಳವಾಗಿ ಕಣ್ಣೀರ 'ಧಾರಾ' ಹರಿಸಲು ಮತ್ತು ಹೇಗಾದರೂ ಮಾಡಿ ಅದನ್ನು ಪಡೆಯಲು.

ಒಂದು ದಿನ ಊಟಕ್ಕೆ ಕುಳಿತ ಸಮಯದಲ್ಲಿ ನನ್ನ ಮಡದಿ ಧಾರಾವಾಹಿ ನೋಡುತ್ತಾ, ರೀ ಸ್ವಲ್ಪ ಒಳಗಡೆ ಹೋಗಿ ಒಂದು ಸೌಟು ತೆಗೆದುಕೊಂಡು ಬನ್ನಿ ಎಂದಳು. ದಿನವೂ ಆಫೀಸ್ ಹೋಗುವ ಸಮಯದಲ್ಲಿ ನನ್ನ ಸೂಟ್ ನ್ನು ಇಡುವುದನ್ನು ಮರೆತರು ಪರ್ವಾಗಿಲ್ಲ ಕಣೇ, ಈ ಸೌಟು ಮಾತ್ರ ನನಗೆ ತರಲು ಹೇಳಬೇಡ ಅಂದೆ. ಅದಕ್ಕೆ ಒಂದು ಕಾರಣವೂ ಇದೆ. ಒಮ್ಮೆ ಸೌಟು ತರಲು ಹೇಳಿದ್ದಳು, ಅದು ಏತಕ್ಕೆ ಎಂದು ತಿಳಿಯದೇ ನಾನು ಜಾರಲಿ(ಝಾರಿ) ಸೌಟು ತಂದೆ. ಇದರಲ್ಲಿ ಸಾರು ಹೇಗೆ ಬಡಿಸಲಿ ಎಂದು ಉಗಿದಿದ್ದಳು. ಮತ್ತೊಮ್ಮೆ ಹೀಗೆ ಅನ್ನದ ಸೌಟು ಬದಲು ಸಾರಿನ ಸೌಟು ತಂದಾಗ ಕೂಡ.

ಹೀಗೆ ಒಮ್ಮೆ ಧಾರಾವಾಹಿ ನಡುವೆ ಮೊಬೈಲ್ ಜಾಹೀರಾತು ಬರುತಿತ್ತು. ಲೇ ನಾನು ಹೊಸ ವೈಫೈ ಇದ್ದ ಮೊಬೈಲ್ ತೆಗೆದುಕೊಳ್ಳಬೇಕು ಎಂದೆ. ಹಾ... ಏನಂದಿರಿ ಎಂದು ಗದರಿಸಿದಳು. ಏಕೆಂದರೆ ಸ್ವಲ್ಪ ಇಂಗ್ಲೀಶ್ ಅವಳಿಗೂ ಗೊತ್ತು. ಕೆಲವೊಂದು ಸಾರಿ ಸೇಡು ತೀರಿಸಿಕೊಳ್ಳಬೇಕಾದಾಗ ದೊಡ್ಡ ದೊಡ್ಡ ಇಂಗ್ಲೀಷ್ ಪದ ಉಪಯೋಗಿಸಿ ಬೈದಿರುತ್ತೇನೆ. ಆಗ ಅವಳಿಗೆ ಅರ್ಥ ಆಗಿರುವುದಿಲ್ಲ. ಆದರೆ ಈಗ ಸಿಕ್ಕಿ ಹಾಕಿಕೊಂಡಿದ್ದೆ. ನಾನು ವೈಫೈ ಬಗ್ಗೆ ಒಂದು ದೊಡ್ಡ ಪಾಠ ಮಾಡಬೇಕಾಗಿಬಂತು. ಅಷ್ಟರಲ್ಲಿ ಧಾರಾವಾಹಿ ಶುರು ಆಯಿತು, ಇಲ್ಲದೆ ಇದ್ದರೆ ಕಣ್ಣೀರ ಧಾರಾ ನನಗೆ ಬರುತಿತ್ತು.

ಅವಳ ಧಾರಾವಾಹಿ ಮುಗಿದ ಮೇಲೆ ನಾನು ಮ್ಯಾಚ್ ಸ್ಕೋರ್ ನೋಡಬೇಕು ಎಂದು ಕುಳಿತಿದ್ದೆ. ನೀವಿಬ್ಬರೂ ಹೋಗಿ ಮಲಗಿಕೊಳ್ಳಿ ಎಂದು ನನಗೆ ಮತ್ತು ಸುಪುತ್ರನಿಗೆ ಆಜ್ಞೆ ಮಾಡಿದಳು. ಸುಪುತ್ರ ಹೋಗಲು ಒಪ್ಪಲಿಲ್ಲ. ಶಾಲೆ ರಜೆ ಇದ್ದಾಗ ಬೇಗ ಏಳುತ್ತಿ. ಶಾಲೆ ಇದ್ದಾಗೆ ಲೇಟ್ ಆಗಿ ಏಳುತ್ತಿ. ನೀನು ನಿನ್ನ ಅಪ್ಪನ ಹಾಗೆ ಉಲ್ಟಾ. ನಾಳೆ ಶಾಲೆ ಇದೆ ಹೋಗು ಎಂದು ಬೈದಳು. ನಾವಿಬ್ಬರು ಬೆಡ್ ರೂಮಿಗೆ ಹೋಗುವಾಗ ಮಗ ಎಡವಿ ಬಿದ್ದ. ಬಿದ್ದು ಅಮ್ಮ ನೋಡು ಅಪ್ಪ ನನ್ನ ಕೈ ಹಿಡಿದುಕೊಂಡು ಹೋಗುವುದಿಲ್ಲ ಎಂದು ನನ್ನ ಮಡದಿಗೆ ಅರುಹಿದ. ನಿಮ್ಮ ಅಪ್ಪ ಇಷ್ಟು ವರ್ಷ ಆದರೂ ನಾಚಿಕೆ ಇಂದ ನನ್ನ ಕೈನೇ ಹಿಡಿಯಲ್ಲ ಇನ್ನೂ ನಿನ್ನ ಕೈ ಎಂದು ಕುಹಕವಾಡಿದಳು. ಮತ್ತೆ ಮಗನಿಗೆ ನಿನಗೆ ನೋಡಿಕೊಂಡು ಹೋಗಲು ಬರುವುದಿಲ್ಲ ಎಂದು ಮಗನಿಗೆ ಬೈದಳು. ಈಗ ಸುಪುತ್ರ ಅಪ್ಪ ನೋಡು ಅಮ್ಮ ಬೈಯುತ್ತಾಳೆ ಎಂದ. ನನಗೆ ಅಷ್ಟೇ ಸಾಕಾಗಿತ್ತು. ನನಗೆ ಬೈಯುತ್ತಾಳೆ, ಇನ್ನೂ ನೀನು ಎಲ್ಲಿಯ ಲೆಕ್ಕ ಎಂದು ಹೇಳಿ ಮುಯ್ಯಿಗೆ ಮುಯ್ಯಿ ತೀರಿಸಿಕೊಂಡು ಮಂದಹಾಸ ಬೀರಿ ಹೋಗಿ ಮಲಗಿಕೊಂಡಿದ್ದೆ.

ಮತ್ತೆ ಒಂದು ದಿನ ಕ್ಯಾಬೇಜ ಹೆಚ್ಚುತ್ತಾ ಟಿ ವಿ ನೋಡುತ್ತಲಿದ್ದಳು. ಲೇ ನೋಡಿಕೊಂಡು ಹೆಚ್ಚು ಹುಳ ಇರುತ್ತವೆ ಎಂದೆ. ನನಗೇನೂ ಕಣ್ಣು ಕಾಣುವದಿಲ್ಲವಾ, ನಾನೇನು ಮುದುಕಿ ಎಂದು ಕೊಂಡಿರಾ, ತೆಗೆದುಕೊಳ್ಳಿ ನೀವೇ ಹೆಚ್ಚಿ ಕೊಡಿ ಎಂದು ನನಗೆ ಕೊಟ್ಟಳು.

ಮತ್ತೆ ಯಾವತ್ತಾದರೂ ಟಿ ವಿ ನೋಡಲು ಬಿಡದೆ ಇದ್ದರೆ ನನಗೆ ಗಂಡಾಂತರ ತಪ್ಪಿದ್ದಲ್ಲ. ಕಣ್ಣೀರ ಧಾರೆ ಶುರು....ಬೇಕಾದರೆ ಚುಮು ಚುಮು ಚಳಿಯಲ್ಲಿ ಕೂಡ ತಣ್ಣೀರ ಸ್ನಾನ ಮಾಡಬಹುದು. ಆದರೆ ಈ ಕಣ್ಣೀರ ಧಾರೆ ಸಹಿಸಲು ಅಸಾಧ್ಯ. ಮತ್ತೆ ಧಾರಾವಾಹಿ ನೋಡುವ ಸಮಯದಲ್ಲಿ ಕರೆಂಟ್ ಏನಾದರೂ ಹೋದರೆ ಕೆ ಪಿ ಟಿ ಸಿ ಎಲ್ (ಕೆ ಈ ಬಿ) ಅವರಿಗೆ ಗಂಡಾಂತರ ತಪ್ಪಿದ್ದಲ್ಲ. ಸಧ್ಯ ನಾನು ತಂದ ಟಿ ವಿ ಇನ್ನೂ ಸರಿಯಾಗಿ ಕೆಲಸ ಮಾಡುತ್ತಿದೆ. ಇಲ್ಲದೇ ಹೋದರೆ ಎಂತಹ ಟಿ ವಿ ತಂದಿದ್ದೀರಾ ಎಂದು ತಿವಿದಾಳು ನನ್ನ ಬೀವಿ....

Wednesday, February 9, 2011

ಕನ್ನಡ ಸಾಹಿತ್ಯ ಸಮ್ಮೇಳನ ....

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋಗಬೇಕು ಎಂದು ಬೆಳಗ್ಗೆ ಬೇಗನೆ ಎದ್ದೆ. ಬೇಗನೆ ಎದ್ದಿದ್ದು ನೋಡಿ, ಸೂರ್ಯನಿಗೂ ಆಶ್ಚರ್ಯವಾಗಿರಬೇಕು. ತನ್ನ ಹೊಳಪಿನ ಹಲ್ಲುಗಳನ್ನು ತೋರಿಸುತ್ತಾ ನಗುತ್ತಲಿದ್ದ ಎಂದು ಅನ್ನಿಸುತ್ತೆ. ತುಂಬಾ ಬಿಸಿಲು. ಆದರೂ ಗಾಂಧಿಬಜಾರ್ ತಲುಪಿ ನನ್ನ ಗಾಡಿ ಒಂದು ಕಡೆ ನಿಲ್ಲಿಸಿ, ಒಳಗಡೆ ಹೋದೆ. ಹೋದೊಡನೆ ಪ್ರೊ ಕೃಷ್ಣೇಗೌಡರು ಹಾಸ್ಯದ ಹೊನಲನ್ನು ಹರಿಸುತ್ತಿದ್ದರು.

ಕೆಲ ಹೊತ್ತು ಆದ ಮೇಲೆ ಪುಸ್ತಕ ಮಳಿಗೆಗೆ ಹೊರಟೆ, ತುಂಬಾ ಜನಜಂಗುಳಿ. ಜನರ ಪುಸ್ತಕ ಪ್ರೀತಿ ನೋಡಿ ತುಂಬಾ ಆನಂದವಾಯಿತು. ನನ್ನನ್ನು ಹಿಂದಿನವರೇ ದೂಡಿಕೊಂಡು ಹೋಗುತ್ತಿದ್ದರು, ಅಷ್ಟು ಜನ ಸೇರಿದ್ದರು. ಹಿಂದಿನಿಂದ ಒಬ್ಬ ಮನುಷ್ಯ ಹೊಟ್ಟೆ ಇಂದ ನನ್ನನ್ನು ನೂಕುತ್ತಾ ಹೊರಟಿದ್ದ. ಅವನು ನೂಕಿದ್ದು ನೋಡಿ ಕೋಪ ಬಂದರು, ಅವನ ಹೊಟ್ಟೆ ನೋಡಿ ನನಗೆ ಸಂತೋಷವಾಯಿತು, ಏಕೆಂದರೆ ನನ್ನ ಹೊಟ್ಟೆ, ಅವನ ಹೊಟ್ಟೆ ಮುಂದೆ ಏನು? ಅಲ್ಲ ಅಷ್ಟು ದೊಡ್ಡದಾಗಿತ್ತು.

ಮೊದಲು ಸಪ್ನ ಬುಕ್ ಸ್ಟಾಲ್ ಹೊಕ್ಕು, ಅಲ್ಲಿ ಇರುವ ಶ್ರೀನಿವಾಸ ವೈಧ್ಯರ "ತಲೆಗೊಂದು ತರತರ" ಪುಸ್ತಕ ತೆಗೆದುಕೊಂಡೆ. ಅಲ್ಲಿರುವ ಸನ್ನಿವೇಶ ಕೂಡ ಹಾಗೆ ಇತ್ತು, ತಲೆಗೊಂದು ತರತರ ಮಾತನಾಡುತ್ತಾ ಇದ್ದರು. ಮತ್ತೆ ಇನ್ನೊಂದು ಶ್ರೀ ವೈಧ್ಯರ ಪುಸ್ತಕ ಕಾಣಿಸಿತು. "ರುಚಿಗೆ ಹುಳಿಯೊಗರು" ಅದನ್ನು ತೆಗೆದುಕೊಂಡೆ. ಆಮೇಲೆ ಮುಂದಿನ ಮಳಿಗೆಗೆ ಹೋದೆ, ಅಲ್ಲಿ ಕಾಣಿಸಿದ್ದು, "ಅಂಗಿ ಬರಹ" ಲೇಖಕರು ನಮ್ಮೆಲ್ಲರ ಅಚ್ಚುಮೆಚ್ಚಿನ ಹಾಸ್ಯ ಧಾರಾವಾಹಿಗಳಾದ ಸಿಲ್ಲಿ-ಲಲ್ಲಿ ಮತ್ತು ಪಾ.ಪ. ಪಾಂಡು ಬರೆದಂತ ಶ್ರೀ ಎಂ ಎಸ್ ನರಸಿಂಹಮೂರ್ತಿ ಅವರದ್ದು.

ಅಲ್ಲಿಂದ ಮತ್ತೊಂದು ಮಳಿಗೆಯಲ್ಲಿ ಬೀChi ಅವರ ಒಂದು ಪುಸ್ತಕ ತೆಗೆದುಕೊಂಡೆ. ಅವರು ನನಗೆ ಮೂವತ್ತು ರೂಪಾಯಿ ಚಿಲ್ಲರೆ ಕೊಡಬೇಕಾಗಿತ್ತು. ಐದೈದು ರೂಪಾಯಿಗಳನ್ನು ಕೊಟ್ಟರು. ಕೈಯಲ್ಲಿ ಇದ್ದ ಬೀChi ಅವರ ಪುಸ್ತಕ ಪ್ರಭಾವವೋ ತಿಳಿಯದು , ಇಷ್ಟೊಂದು ದುಡ್ಡು ಕೊಟ್ಟರೆ, ನಾನು ಒಂದು ಬ್ಯಾಗ್ ತರುತ್ತಿದ್ದೆ ಎಂದೆ. ಪಕ್ಕದಲ್ಲಿದ್ದ ಹುಡುಗಿ ಕಿಸಕ್ಕನೆ (ಇಂಗ್ಲೀಶ್ ಅಲ್ಲ) ನಕ್ಕಳು.

ಮತ್ತೆ ಮುಂದಿನ ಮಳಿಗೆಯಲ್ಲಿ ದೇವರ ಪುಸ್ತಕ ನೋಡಿ, ಭಕ್ತಿ ಪರವಶನಾಗಿ ಅಲ್ಲಿಗೆ ಕೈ ಮುಗಿಯುತ್ತಾ ಹೋದೆ. ನನ್ನ ಮುಂದೆ ಇರುವ ಮನುಷ್ಯ ಕೂಡ ನನಗೆ ಕೈ ಮುಗಿದ. ಆದರೆ ಅವನು ಯಾರೆಂದು? ನನಗೆ ತಿಳಿಯಲಿಲ್ಲ. ಏನೋ... ತೆಗೆದುಕೊಳ್ಳಬೇಕು ಅನ್ನುವಷ್ಟರಲ್ಲಿ ಒಬ್ಬ ಮನುಷ್ಯ , ಮೈಯಲ್ಲಿ ದೇವರು ಬಂದವನ ಹಾಗೆ ಮಾಡುತ್ತಾ, ಬಂದು ನನ್ನ ನೂಕಿ ಒಂದು ಪುಸ್ತಕ ತೆಗೆದುಕೊಂಡ. ನಾನು ಮತ್ತೆ ಅವನಿಂದ ದೂರ ಸರಿದೆ. ಮತ್ತೆ ಒಬ್ಬ ಹೆಣ್ಣು ಮಗಳು ಕೂಡ ನನ್ನನ್ನು ಸರಿಸಿ, ಎಕ್ಸ್‌ಕ್ಯೂಸ್ ಮೀ ಎಂದು ಒಂದು ಪುಸ್ತಕ ಕೈಗೆತ್ತಿಕೊಂಡಳು. ನಾನು ದೂರದಿಂದ ದೇವರಿಗೆ ನಮಸ್ಕರಿಸಿ, ಮುಂದಿನ ಮಳಿಗೆಗೆ ಹೊರಟೆ.

ಮುಂದಿನ ಮಳಿಗೆಯಲ್ಲಿ ಮತ್ತೊಂದು ವೈ ಎನ್ ಗುಂಡೂರಾವ್ ಅವರ ಪುಸ್ತಕ ತೆಗೆದುಕೊಂಡೆ. ಅವರಿಗೆ ಅದೇ ಮೂವತ್ತು ರೂಪಾಯಿಗಳನ್ನು ಕೊಟ್ಟಿದ್ದು ನೋಡಿ ಚಿಲ್ಲರೆ ಬಂದಿದ್ದು ನೋಡಿ ತುಂಬಾ ಖುಷಿಯಾಗಿ, ದೇವರು ಬಂದ ಹಾಗೆ ಬಂದಿರಿ ಎಂದರು. ದೇವರಿಗೆ ಮಹಾಪ್ರಸಾದವಾಗಿ ಏನಾದರೂ? ಹೆಚ್ಚು-ಕಡಿಮೆ ಮಾಡುವಿರೋ ಎಂದೆ. ಈಗಾಗಲೇ ಕಡಿಮೆ ಮಾಡಿ ಕೊಟ್ಟು ಆಗಿದೆ. ಬೇಕಾದರೆ ಹೆಚ್ಚು ಮಾಡುವೆ ಎಂದರು. ಸುಮ್ಮನೇ ಹೊರಟು ಬಂದೆ.

ಒಬ್ಬ ನಿಮ್ಮ ಹೆಸರು ಹೇಳಿ, ಒಂದು ಉಂಗುರ ಕೊಡುತ್ತೇನೆ ಎಂದ. ನಿಮ್ಮ ಎಲ್ಲ ಕೆಲಸ ನೆರವೇರುತ್ತೆ ಎಂದ. ಕೆಲಸಗಳು ನೆರವೇರೋ ಸಮಯ ಮುಗಿದು ಹೋಗಿದೆ ಮಹಾರಾಯ ಎಂದು ಹೇಳಿದರು ಕೇಳಲಿಲ್ಲ. ಸರಿ, ನಿನ್ನ ಉಂಗುರ ಹಾಕಿಕೊಂಡರೆ ನನ್ನ ತಲೆಯಲ್ಲಿ ಕೂದಲು ಮತ್ತೆ ಹುಟ್ಟೂತ್ತೋ ಎಂದು ಕೇಳಿದೆ. ಪಾಪ ... ಜಾರುಬಂಡೆ ಹಾಗಿರುವ ತನ್ನ ತಲೆ ಕೆರೆದುಕೊಂಡ, ನನಗೆ ಅರ್ಥವಾಗಿ ಹೊರಗಡೆ ನಡೆದೆ.

ಒಂದೇ ಬಿಲ್ಲನ್ನು ಇಟ್ಟುಕೊಂಡು ಉಳಿದ ಬಿಲ್ಲನ್ನು ಹೊರಗಡೆ ಹೋಗಿ ಚೆಲ್ಲಿಬಿಟ್ಟೆ. ಹೆಂಡತಿ ಕೇಳಿದರೆ ಎರಡು ಪುಸ್ತಕ ತೆಗೆದುಕೊಂಡರೆ ಉಳಿದ ನಾಲ್ಕು ಪುಸ್ತಕ ಉಚಿತ ಎಂದು ಹೇಳಲು. ಈ ಧೂಳಿನ ಮುಖದಲ್ಲಿ ಮನೆಗೆ ಹೋದರೆ, ಮಡದಿ ಕಂಡುಹಿಡಿಯುವುದು ಕಷ್ಟ ಎಂದು ಮುಖ ತೊಳೆದು,ಮುಂದಿನ ಬಾರಿ ಸಂಪದದ ಒಂದು ಮಳಿಗೆ ಕೂಡ ಇರಲೆಂದು ಆಶಿಸುತ್ತಾ ಮನೆ ದಾರಿ ಹಿಡಿದೆ.

Saturday, February 5, 2011

ಹೆಚ್ಚು ಪೂರ್ವಕ್ಷರ....

ಪ್ರಸಿದ್ಧ ವ್ಯಕ್ತಿಗಳ ಹೆಸರುಗಳ ಬಗ್ಗೆ ಒಮ್ಮೆ ಯೋಚಿಸುತ್ತಾ ಇದ್ದೆ. ಎಲ್ಲಾ ಪ್ರಸಿದ್ದ ವ್ಯಕ್ತಿಗಳಲ್ಲಿ ಒಂದು ಸಾಮ್ಯತೆ ಕಂಡು ಬಂತು. ಅದು ಏನೆಂದರೆ ಎಚ್ ಎಂಬ ಪೂರ್ವಕ್ಷರ {ಪೂರ್ವ(ಮೊದಲ) ಅಕ್ಷರ}. ಎಚ್ ಪೂರ್ವಕ್ಷರಗಳಲ್ಲಿ ನನ್ನ ಮೆಚ್ಚಿನ ಹಾಸ್ಯ ಲೇಖಕರಾದ ನಮ್ಮ ಶ್ರೀ ಎಚ್ ಡುಂಡಿರಾಜ್ ಕೂಡ. ಕೆಲವರು ಇದನ್ನು ಹೆಚ್ ಎಂದು ಕೂಡ ಬರೆಯುವುದುಂಟು. ಈ ಹೆಚ್(ಎಚ್) ಎನ್ನುವುದು ಕನ್ನಡೀಕರಿಸಿದರೆ ಹೆಚ್ಚು ಎಂದು ಆಗಬಹುದೇನೋ, ಅದಕ್ಕೆ ಅವರು ಅಷ್ಟು ಹೆಚ್ಚು ಹೆಚ್ಚು ನಮ್ಮನ್ನು ನಗಿಸುತ್ತಾ ಹಾಸ್ಯ ಲೇಖನಗಳನ್ನು ಬರೆದಿರೋದು. ಸಂಪದ ಸೃಷ್ಟಿಕರ್ತರಾದ ಶ್ರೀ ಹರಿಪ್ರಸಾದ್ ನಾಡಿಗ್ ಅವರ ಹೆಸರು ಕೂಡ ಹೆಚ್ ನಿಂದ ಶುರು ಆಗುತ್ತೆ. ಮತ್ತೆ ನನ್ನ ಆಪ್ತರಾದ ದುಬೈ ಮಂಜಣ್ಣನ ಹೆಸರು ಕೂಡ ಹೆಚ್ ನಿಂದ ಶುರು ಆಗುತ್ತೆ , ಹೊಳೆನರಸಿಪುರ ಮಂಜುನಾಥ ಎಂದು. ಮತ್ತೆ ನನ್ನ ಸಹೃದಯಿ ಮಿತ್ರ ಹರೀಶ್ ಅತ್ರೇಯ....ಹೀಗೆ ಹಲವಾರು...
ನಾನು ಏಕೆ? ಹೀಗೆ ಹೆಚ್ ಹಚ್ಚಿಕೊಳ್ಳಬಾರದು ಎಂಬ ಆಲೋಚನೆ ಮನದಲ್ಲಿ ಮೂಡಿತು. ಅದನ್ನು ಹಚ್ಚಿಕೊಳ್ಳೋಕೆ ಅದೇನು ಎಣ್ಣೆಯೆ?. ಅದನ್ನು ಹಚ್ಚಿಕೊಳ್ಳೋಕೆ ಪೂರ್ವಾಪರ ಬೇಕೇ ಬೇಕು. ಆದರೆ ಈ ಹೆಚ್ ಹಚ್ಚಿಕೊಂಡಲ್ಲಿ, ಮತ್ತೆ ಯಾರಾದರೂ ಕೇಳಿದರೆ ಹೆಚ್ ಏನು? ಎಂದು ಎಂಬ ವಿಷಯ ಕೂಡ ಮನದಲ್ಲಿ ತೇಲಾಡಿತು. ಹೆಚ್ ಎಂದರೆ ಹೆಸರು ಗೋಪಾಲ್ ಎಂದು ಹೇಳಿದರೆ ಹೇಗೆ ಎಂದು ಕೂಡ ಅನ್ನಿಸಿತು. ಇದನ್ನು ಕೇಳಿಯೇ ನನ್ನನ್ನು ಹುಚ್ಚನೆಂದು ಕೊಂಡುಬಿಟ್ಟಾರು ಎಂದು ಬಿಟ್ಟು ಬಿಟ್ಟೆ.
ಮತ್ತೆ ಇದನ್ನು ನನ್ನ ಗೆಳೆಯ ಸುಬ್ಬನಿಗೆ ಕೇಳಿದೆ. ಸುಬ್ಬ ಸಿಕ್ಕಿದ್ದೇ ಚಾನ್ಸ್ ಎಂದು, ಹುಚ್ಚ ಎಂದು ಬಿಡಬೇಕೆ. ಸಧ್ಯ ಯಾರು ಕೇಳಿಸಿಕೊಳ್ಳಲಿಲ್ಲ. ಮತ್ತೆ ಯಾರಿಗೂ ಕೇಳಬಾರದು ಎಂಬ ನಿರ್ಧಾರಕ್ಕೆ ಬಂದುಬಿಟ್ಟೆ. ನಾನು ಹುಟ್ಟಿದ್ದು ಧಾರವಾಡ, ಅಲ್ಲಿ ಕೂಡ ಡಿ ಬರುತ್ತೆ, ಹರಿಹರ,ಹಾವೇರಿಯಲ್ಲಿ ಹುಟ್ಟಿದ್ದರೆ ಚೆನ್ನಾಗಿರುತಿತ್ತು ಎಂದು ಯೋಚಿಸಿದೆ. ಛೇ ಈಗ ಹುಟ್ಟಿ ಆಗಿದೆಯಲ್ಲಾ, ಎನ್ನೆನೂ ಮಾಡಲಾಗುವುದಿಲ್ಲ. ಮತ್ತೆ ಹುಟ್ಟಿದ್ದು ಹಾಸ್ಪಿಟಲ್ ನಲ್ಲಿ ಅಲ್ಲವಾ.. ಆದರೆ ಈ ಹೆಚ್ ಸೂಕ್ತವಲ್ಲ ಎಂದೆನಿಸಿ ಬಿಟ್ಟಿತು. ಮತ್ತೆ ಧಾರವಾಡದಲ್ಲಿ ಪ್ರಸಿದ್ದಿ ಇದ್ದಿದ್ದು ಎಂಬ ಯೋಚನೆಗೆ ನಗೆ ಬೀರಿ ಹುಚ್ಚರ ಆಸ್ಪತ್ರೆ ಎಂದು ಕೂಡ ಮನದಲ್ಲಿ ಬಂತು. ನನ್ನಷ್ಟಕ್ಕೆ ನಾನೇ ನಕ್ಕೂ ಮತ್ತೆ ಆಲೋಚನೆ ಶುರು ಮಾಡಿದೆ. ತಂದೆ ಹೆಸರು ಹಾಕಿಕೊಂಡರೆ ಎಂ ಮಾಧವ. ಹೆಚ್ಚು.. ಹೆಚ್ಚು.. ಯೋಚಿಸಿದಷ್ಟು ತಲೆ ಬಿಸಿಯಾಗತೊಡಗಿತು.
ಹೆಚ್ ಬಗ್ಗೆ ಯೋಚಿಸುತ್ತಾ "ಹಚ್ಚೇವು ಕನ್ನಡದ ದೀಪ" ಎಂಬ ಹಾಡು ಕೂಡ ನೆನಪು ಆಯಿತು. ಹೀಗೆ ಯೋಚಿಸುತ್ತಾ ಏನೇನೋ ಕೈ ಕಾಲು ಆಡಿಸುತ್ತಾ ಒಬ್ಬನೇ ಮಾತನಾಡುವುದು ಎಲ್ಲವನ್ನು ಮಾಡುತ್ತಾ ಇದ್ದೆ. ರಾತ್ರಿ ನಿದ್ದೆ ಕೂಡ ಬರಲಿಲ್ಲ. ಕಡೆಗೆ ನನ್ನ ವಿಚಿತ್ರ ವರ್ತನೆ ನೋಡಿ ಮಡದಿ ಕೇಳಿಯೇ ಬಿಟ್ಟಳು. ಏನು? ಯಾಕೆ ಹೀಗೆ ಆಗಿದ್ದೀರಿ ಎಂದು. ನಾನು ಪ್ರಸಿದ್ದ ವ್ಯಕ್ತಿ ಆಗಬೇಕೆಂದಿರುವೆ, ಏನಾದರೂ? ಮಾಡಿ ಎಂದು ಹೇಳಿದೆ. ಅದೆಲ್ಲ ದೇವರ ಇಚ್ಛೆ ನೀವೇಕೆ ಅಷ್ಟು ಯೋಚಿಸುತ್ತೀರಿ ಎಂದಳು. ಎಚ್ ಬಗ್ಗೆ ತುಂಬಾ ವಿವರವಾಗಿ ಹೇಳಿದೆ. ನನ್ನನ್ನು ಕುಹಕವಾಡಿ ನಗಲು ಆರಂಭಿಸಿದಳು. ಹೆಚ್ ಹಚ್ಚುವ ಕೆಲಸ ಆಮೇಲೆ ಮುಂದುವರಿಸಿ, ಮೊದಲು ಈ ತರಕಾರಿ ಹೆಚ್ಚಿ ಎಂದು ಹೇಳಿ ನಗುತ್ತಾ ಅಡುಗೆ ಮನೆಗೆ ಹೊರಟು ಹೋದಳು. ತರಕಾರಿ ಅಷ್ಟು ಹೆಚ್ಚಿ ಕೊಟ್ಟರು ಹೆಚ್ ಮಾತ್ರ ಹೊಳಿಲೆ ಇಲ್ಲ. ಮತ್ತೆ ಅಡುಗೆ ಮನೆಯಿಂದ ಬಂದು, ಬರಿ ಹೆಸರು ಬದಲು ಮಾಡಿದರೆ ಆಗುತ್ತಾ, ಮೊದಲು ನಿಮ್ಮನ್ನು ನೀವು ಬದಲಿಸಿ. ಒಳ್ಳೆಯ ಹವ್ಯಾಸ ಬೇಳಿಸಿಕೊಳ್ಳಿ. ದೇವರ ಮೇಲೆ ನಂಬಿಕೆ ಇರಲಿ, ತಾನಾಗಿಯೇ ಪ್ರಸಿದ್ಧಿಗೆ ಬರುತ್ತೀರಿ. ಅದು ಎಲ್ಲಾ ಬಿಟ್ಟು ಹೀಗೆ ಹೆಸರು ಬದಲಿಸುವ ವಿಚಾರಕ್ಕೆ ಏಕೆ? ಬರುತ್ತೀರಿ ಎಂದು ಹೇಳಿದಳು. ಅವಳು ಹೇಳಿದ ಮಾತಿಗೆ ನನ್ನ ಅಹಂ ಸ್ವೀಕರಿಸಲಿಲ್ಲ. ಕಡೆಗೆ ತಿಂಡಿ ತಿಂದು ಆಫೀಸ್ ಕಡೆಗೆ ಹೊರಟೆ.
ದಾರಿಯುದ್ದಕ್ಕೂ ಹಳಿಯೇ ಇಲ್ಲದ ರೈಲಿನ ಹಾಗೆ ನನ್ನ ಮನಸ್ಸು ಎಲ್ಲೆಲೋ ಹೊರಳಾಡುತ್ತಾ ಹೊರಟಿತ್ತು. ಹರಿಯುವ ನೀರಿಗೆ ಕಡಿವಾಣ ಹಾಕಬಹುದು, ಆದರೆ ಈ ಮನಸ್ಸಿಗೆ ಮಾತ್ರ ಕಡಿವಾಣ ಹಾಕಲು ಆಗುವುದಿಲ್ಲ. ಇದಕ್ಕೆ ಪ್ರತಿಯಾಗಿ ಹರಿ-ಹರರನ್ನು ಕೂಡ ನೆನದಿದ್ದು ಆಯಿತು. ಮಗ ಹಾಡುತ್ತಿದ್ದ ಹಮ್ ಹೋಂಗೆ ಕಾಮಿಯಾಬ್ ಎಂಬ ತುಂಬಾ ಸುಂದರವಾದ ಹಾಡು ಕೂಡ ಮನದಲ್ಲಿ ಬಂತು. ಈ ಕಾಮಿಯಾಬಿ ಎಂಬುದು ಮಾತ್ರ ಹತ್ತಿರ ಸುಳಿಯಲಿಲ್ಲ. ಪೂರ್ವಾಪರ ಸಿಗದೆ ಒದ್ದಾಡಿ ಹಣಿ ಹಣಿ ಗಟ್ಟಿಸಿದೆ, ಒಂದು ಹನಿ ಕಣ್ಣೀರು ಕೂಡ, ನನ್ನ ಮಾತು ಕೇಳಲಿಲ್ಲ. ಹನಿ ಹನಿ ಕೂಡಿದರೆ ಹಳ್ಳ ಎಂಬ ಗಾದೆ ಮಾತ್ರ ನೆನಪಿಗೆ ಬಂತು.
ಇದನ್ನು ನನ್ನ ಆಪ್ತ ಗೆಳೆಯನಾದ ಮಂಜನಿಗೆ ಹೇಳಬೇಕು ಎಂದು ಅನ್ನಿಸಿತು. ಕೇಳಿಯೇ ಬಿಟ್ಟೆ. ಅವನು ಸಿಕ್ಕೆದ್ದೆ ಚಾನ್ಸ್ ಎಂದು ಹೆಚ್ಚು.. ಹೆಚ್ಚು.. ನನ್ನನ್ನು ಧಾರವಾಡದ ಭಾಷೆಯಿಂದ ಹೊಗಳಿ ಹಾಡಿದ. ಮತ್ತೆ

ಹೆಸರು ಹೆಸರೆಂದು ನೀಂ ಬಸವಳಿವುದೇಕಯ್ಯ? |
ಕಸದೊಳಗೆ ಕಸವಾಗಿ ಹೋಹನಲೆ ನೀನು? ||
ಮುಸುಕಲೀ ಧರೆಯ ಮರೆವೆನ್ನನ್; ಎನ್ನುತ ಬೇಡು |
ಮಿಸುಕದಿರು ಮಣ್ಣಿನಲಿ - ಮಂಕುತಿಮ್ಮ ||

ಮತ್ತು

ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ
ಚಿನ್ನದಾತುರಕಿಂತ ಹೆಣ್ಣುಗಂಡೊಲವು
ಮನ್ನಣೆಯ ದಾಹವಂ ಎಲ್ಲದಕೂ ತೀಕ್ಷ್ಣತಮ
ತಿನ್ನುವುದದಾತ್ಮವನೆ -ಮಂಕುತಿಮ್ಮ||

ಎಂದು ಮಂಕುತಿಮ್ಮನ ಕಗ್ಗ ಹೇಳಿ ನನ್ನನ್ನು ಹೀಯಾಳಿಸಿದ.

ಇನ್ನೂ ಎಲ್ಲರನ್ನೂ ಕೇಳಿ ಹುಚ್ಚನಾಗುವುದು ಸಾಕೆನಿಸಿತು. ನನ್ನ ಹೆಸರಿಗೆ ಏನು? ಆಗಿದೆ ಎಂದು ಯೋಚಿಸಿದೆ. ಸರಿಯಾಗಿಯೇ ಇದೆಯಲ್ಲ, ಇದೆಲ್ಲವನ್ನೂ ಬಿಟ್ಟು ನನ್ನ ಮಡದಿ ಹೇಳಿದ ಹಾಗೆ ನನ್ನ ಕೆಲಸ,ಕರ್ತವ್ಯಕ್ಕೆ ಮಹತ್ವ ಕೊಟ್ಟು, ಒಳ್ಳೆಯ ಹವ್ಯಾಸ ಬೆಳಿಸಿ ಕೊಳ್ಳಬೇಕು ಎಂದು. ಹಾಡು ಹಳೆಯದಾದರೇನು ಭಾವ ನವ ನವೀನಾ ಎನ್ನುವ ಹಾಗೆ, ನಾವು ಬದುಕಿದರೆ ಸಾಕಲ್ಲವೇ?....

ಮತ್ತೆ ಡಿ.ವಿ.ಜಿ ಅವರು ಹೇಳಿದ ಹಾಗೆ

ಹೆಸರು ಹೆಸರೆಂಬುದೇಂ? ಕಸುರು ಬೀಸುವ ಗಾಳಿ |
ಹಸೆಯೊಂದು ನಿನಗೇಕೆ ಬ್ರಹ್ಮಪುರಿಯೊಳಗೆ? ||
ಶಿಶುವಾಗು ನೀಂ ಮನದಿ; ಹಸುವಾಗು; ಸಸಿಯಾಗು |
ಕಸಬೊರಕೆಯಾಗಿಳೆಗೆ - ಮಂಕುತಿಮ್ಮ || 

(ಸ್ಪೂರ್ತಿ :-ಹಾಸ್ಯ ಲೇಖಕರಾದ ಶ್ರೀ ಡುಂಡಿರಾಜರ ಪೂರ್ವಕ್ಷರ ಪೂರ್ವಾಪರ ಎಂಬ ಲೇಖನ.)

Thursday, February 3, 2011

ಮನ ಮೆಚ್ಚಿದ ಹುಡುಗಿಗೆ ಮೆಚ್ಚಿಸುವ ಪರಿ ....

ಮದುವೆ ಆದ ಹೊಸದರಲ್ಲಿ ಒಬ್ಬರನ್ನೊಬ್ಬರು(ತಮ್ಮ.. ತಮ್ಮ.. ಹೆಂಡತಿ-ಗಂಡನನ್ನು ಮತ್ತೆ ಗಂಡ-ಹೆಂಡತಿಯನ್ನ) ಮೆಚ್ಚಿಸುವ ಕಾರ್ಯಕ್ರಮದಲ್ಲಿ ತೊಡಗಿರುತ್ತಾರೆ, ಆಮೇಲೆ ಹರಿತವಾದ ಮಚ್ಚಿನ ಹಾಗೆ ಇರುವ ಮಾತಿನ ಕಾರ್ಯಕ್ರಮ ತಾನಾಗೇ ಶುರು ಆಗುತ್ತೆ. ನಾನು ಅದು ಮಾಡಿದೆ, ಇದು ಮಾಡಿದೆ ಎಂದು ಹೇಳುವ ಗಂಡನ ಪ್ರತಾಪಗಳು ಮಡದಿಗೆ ಅರಿವಾಗಿರುತ್ತೆ. ಮಡದಿಗೆ ಮೊದಲು ಬಂದ ಮೇಲೆ ಗಂಡನನ್ನು ಅರಿಯುವ ಸಮಯದಲ್ಲಿ ಉದ್ಭವಿಸುವ ಎಲ್ಲಾ ಪ್ರಶ್ನೆಗಳಿಗೆ ಕೆಲವೇ ದಿನಗಳಲ್ಲಿ ಪೂರ್ತಿಯಾಗಿ ಉತ್ತರಗಳನ್ನು ತಮ್ಮ, ತಮ್ಮ ಉತ್ತರ ಕುಮಾರರಿಂದ(ಗಂಡಂದಿರಿಂದ) ಪಡೆದಿರುತ್ತಾರೆ. ಹೀಗೆ ಮೆಚ್ಚಿಸುವ ಮತ್ತು ಹೋಗಳಿಕೆಯ ಕಾರ್ಯಕ್ರಮಕ್ಕೆ ನಾಂದಿ ಹಾಡಿ ಆಗಿರುತ್ತೆ.

ನಾನು ಮದುವೆ ಆದ ಹೊಸದರಲ್ಲಿ ಮಡದಿಯನ್ನು ಮೆಚ್ಚಿಸುವ ಸಂಪ್ರದಾಯಕ್ಕೆ ಬದ್ದನಾಗಿದ್ದೆ, ಅನ್ನುವುದಕ್ಕಿಂತ ಮೆಚ್ಚಿಸುವ ಭರದಲ್ಲಿ ಬುದ್ದನಾಗಿದ್ದೆ ಎಂದರೆ ಸೂಕ್ತ. ಮಡದಿ ಮೊದಮೊದಲು ಏನೇ ಕೆಲಸ ಹೇಳಿದರು ಪ್ರಾಮಾಣಿಕತೆ ಇಂದ ಮಾಡಿ ಮುಗಿಸುತ್ತಿದ್ದೆ. ಆದರೆ ಈಗ 'ಪ್ರಾಮಾಣಿಕ'ವಾಗಿ 'ಕತೆ' ಹೇಳಿ ಕೆಲಸದಿಂದ ಜಾರಿಕೊಳ್ಳುತ್ತೇನೆ. ಅದಕ್ಕೆ ಸಾಕ್ಷಿ ನಾನು ಬರೆದಿರುವ ಇಷ್ಟೊಂದು ಕತೆಗಳೇ...

ಒಮ್ಮೆ ಹೀಗೆ ಮದುವೆ ಆದ ಹೊಸದರಲ್ಲಿ ನಿನ್ನ ಕೈ ಉಪ್ಪಿಟ್ಟು ಸಕ್ಕತ್ ಆಗಿ ಇರುತ್ತೆ ಎಂದು ಹೇಳಿದ್ದೆ. ನಿಮಗೆ ಆಶ್ಚರ್ಯವಾಗಬಹುದು ಉಪ್ಪಿಟ್ಟು ಎಂದರೆ ಹರಿಹಾಯುವ ಸಕ್ಕತ್ ಜನರ ನಡುವೆ, ಇವನು ಯಾರಪ್ಪ? ಪರಲೋಕ ಪ್ರತಾಪಿ ಉಪಿಟ್ಟನ್ನು ಇಷ್ಟ ಪಡುವವನು ಎಂದು ಅಂದುಕೊಳ್ಳಬಹುದು. ಹೊಗಳಿಸಿಕೊಂಡ ಹೆಂಡತಿ ಏನೋ ಹಿರಿ ಹಿರಿ ಹಿಗ್ಗಿದಳು, ಆದರೆ ಅದರ ಫಲವನ್ನು ಈಗಲೂ ಅನುಭವಿಸುತ್ತಿದ್ದೇನೆ. ವಾರದಲ್ಲಿ ಮೂರು ದಿನ ಉಪ್ಪಿಟ್ಟು, ನನ್ನ ಉಪಸಂಹಾರಕ್ಕೆ.. ಕ್ಷಮಿಸಿ ಉಪಹಾರಕ್ಕೆ. ಮೊದಮೊದಲು ನನಗೆ ತಿಂಡಿ ಏನು? ಇವತ್ತು ಎಂದು ಕೇಳುತ್ತಿದ್ದ ನನ್ನ ಗೆಳೆಯರು ನನ್ನ ಕಪ್ಪಿಟ್ಟಿದ್ದ ಮುಖ ನೋಡಿಯೇ ತಿಳಿದುಕೊಂಡು ಬಿಡುತ್ತಾರೆ.

ಮತ್ತೊಮ್ಮೆ ಹೀಗೆ ನಾನು ಹೆಸರು ಹಿಟ್ಟಿನ ಉಂಡೆ ದೇಹಕ್ಕೆ ತುಂಬಾ ಒಳ್ಳೆಯದು ಎಂದು ಪುರಾಣ ಊದಿದೆ. ಮರುದಿನವೇ ನನ್ನನ್ನು ಮೆಚ್ಚಿಸಲು ಮಡದಿ ಮಾಡಿದಳು ಹೆಸರು ಹಿಟ್ಟಿನ ಉಂಡೆ, ಸಧ್ಯ ನಾನು ನನ್ನ ಹೆಸರು ಮರೆಯಲಿಲ್ಲ. ಏನೋ ಲೇಖನದಲ್ಲಿ ಬಂದಿದ್ದ ಒಂದೆರಡು ವಿಷಯ ಹೇಳಿ ನನ್ನ ಬುದ್ದಿವಂತಿಕೆ ಪ್ರದರ್ಶಿಸೋಣ ಎಂದು ಮಾಡಿಕೊಂಡಂತಹ ಅವಾಂತರ(ನನ್ನದೇ, ಕಾಶೀನಾಥನ ಸಿನಿಮಾ ಅಲ್ಲ). ಮುಂದೆ ಅಲ್ಲಿ.. ಇಲ್ಲಿ.. ಓದಿದ ವಿಷಯಗಳನ್ನ ನನ್ನ ಹೆಂಡತಿಯ ಮುಂದೆ ಊದಲಿಲ್ಲ.

ಒಮ್ಮೆ ಹೆಂಡತಿಯನ್ನು ಮೆಚ್ಚಿಸಲು ಎರಡು ಕೆ ಜಿ ಹಸಿ ಮೆಣಿಸಿನಕಾಯಿ ತಂದಿದ್ದೆ. ಏನು? ಹೆಂಡತಿಯನ್ನು ಮೆಚ್ಚಿಸಲು ಹಸಿಮೆಣಿಸಿನಕಾಯಿ ಎಂದು ಅನ್ನಬಹುದು. ಹಾ.. ಸ್ವಾಮಿ ... ಏಕೆಂದರೆ ನನಗೆ ಎರಡೆರಡು ದಿವಸಕ್ಕೆ, ನನ್ನ ಮಡಿದಿ ಒಂದು ರೂಪಾಯಿ ಹಸಿಮೆಣಿಸಿನಕಾಯಿ ತರಲು ಹೇಳುತ್ತಿದ್ದಳು. ಇದನ್ನು ನೋಡಿದ ನನ್ನ ಮಂಜ ಕೊಟ್ಟ ತರಲೆ ಐಡಿಯಾ. ಒಮ್ಮೆಲೇ ಎರಡು ಕೆ ಜಿ ತೆಗೆದುಕೊಡು ತುಂಬಾ ಖುಷಿಯಾಗುತ್ತಾಳೆ ಎಂದು ಹೇಳಿದ. ಹಾಗೆ ಮಾಡಿದೆ, ನಮ್ಮ ಮದುವೆಗೆ ಕೂಡ ಇಷ್ಟು ಮೆಣಸಿನಕಾಯಿ ತಂದಿರಲಿಲ್ಲ ಎಂದು ಹೇಳಿ ಉಗಿದಳು, ಇಷ್ಟು ತಂದರೆ ಒಣಗಿ ಹೋಗುತ್ತವೆ ಎಂದು, ಮರುದಿನ ಅವುಗಳನ್ನು ಉಪ್ಪು ಹಚ್ಚಿದ ಮೆಣಸಿನಕಾಯಿ ಮಾಡಲು ಮತ್ತಷ್ಟು ಸಾಮಾನು ತರಿಸಿ ನನಗೂ ಸಹಾಯ ಮಾಡಲು ಹೇಳಿದಳು .

ಒಮ್ಮೆ ಚಲನ ಚಿತ್ರದಲ್ಲಿ ಹೀರೊ ತನ್ನ ಮಡದಿಯನ್ನು ಮೆಚ್ಚಿಸುವ ಸಲುವಾಗಿ ಮೈಸೂರು ಪಾಕ ಮತ್ತು ಮಲ್ಲಿಗೆ ಹೂವು ತಂದು ಕೊಡುತ್ತಿದ್ದಿದ್ದನ್ನು ನೋಡಿ, ನಾನು ಹಾಗೆ "ನಾ ಮೆಚ್ಚಿದ ಹುಡುಗಿಗೆ ಕಾಣಿಕೆ ತಂದಿರುವೆ" ಎಂದು ಹಾಡುತ್ತಾ, ಮೈಸೂರು ರಾಕ್ ಕ್ಷಮಿಸಿ... ಪಾಕ ಮತ್ತು ಮಲ್ಲಿಗೆ ಹೂವು ತೆಗೆದುಕೊಂಡು ಹೋಗಿದ್ದೆ(ನನ್ನ ಮಡದಿಗೆ). ಅದಕ್ಕೆ ಧಾರವಾಡದಲ್ಲಿ ಇದ್ದು ಕೊಂಡು ಪೇಡಾ ಬಿಟ್ಟು ಈ ಕಲ್ಲಿನ ಹಾಗೆ ಇರುವ ಮೈಸೂರು ರಾಕ್ ತಂದಿದ್ದೀರ ಎಂದು ಉಗಿದಿದ್ದಳು.

ಹೊ'ಗಳಿಕೆ'ಯಲ್ಲಿ ಗಳಿಕೆ ಇದೆ ಎಂದು ಖ್ಯಾತ ಹಾಸ್ಯ ಬರಹಗಾರರಾದ ಶ್ರೀ ಡುಂಡಿರಾಜ ಹೇಳಿದ್ದಾರೆ. ಮತ್ತು ತೆ'ಗಳಿಕೆ'ಯಲ್ಲಿ ಕೂಡ ಎಂದು ಹೇಳಿದ್ದಾರೆ. ನನಗೆ ಮಾತ್ರ ಎರಡು ಸೇರಿ ಹೊತೆ ಗಳಿಕೆ ....

Tuesday, February 1, 2011

ಅವಸರವೇ ಅಪಘಾತ ....

ಗುರು ರಾಘವೆ೦ದ್ರ ವೈಭವದ ಬಾಲ ವೆ೦ಕಟನಾಥನೊ0ದಿಗೆ ನನ್ನ ಸುಪುತ್ರ
ಪ್ರಶಸ್ತಿ ಸ್ವೀಕರಿಸುತ್ತಿರುವ ನನ್ನ ಸುಪುತ್ರ ಮಡದಿಯೊ೦ದಿಗೆ
----------------------------------------------------------------------------------
ಆಫೀಸ್ ಹೋಗುವುದಕ್ಕೆ ಲೇಟ್ ಆಗಿತ್ತು. ಲೇ ನನ್ನ ಬನಿಯನ್ ಯಾವ ಊರಿನಲ್ಲಿ ಇದೆ ಎಂದು ಕೇಳಿದೆ. ಧಾರವಾಡದಲ್ಲಿ ಇದೆ ಹೋಗಿ ತೆಗೆದುಕೊಳ್ಳಿ ಎಂದು ನನ್ನ ಕಪಿ ಚೇಷ್ಟೆಗೆ ಸಾತ್ ನೀಡಿದಳು. ಲೇ ಎಲ್ಲಿ ಇದೆ ಹೇಳೆ ಎಂದು ಮತ್ತೊಮ್ಮೆ ಕೇಳಿದೆ. ಪಕ್ಕದ ಮನೆಯಲ್ಲಿ ಇರುತ್ತಾ ಇಲ್ಲೇ ಯಲ್ಲೋ ಬಿದ್ದಿರಬೇಕು ನೋಡಿ ಎಂದಳು. ರಾತ್ರಿ ಪೂರ್ತಿ ನಿಶಾಚರನ ಹಾಗೆ ಕುಳಿತು ಕಂಪ್ಯೂಟರ್ ಕುಟ್ಟೊದು, ಈಗ ನಮ್ಮನ್ನು ಬೈಯೋದು ಎಂದು. ಅದು ಏನೋ? ಬರೀತಾರೆ ಎಂದು ಕೊಂಡರೆ, ನನ್ನ ಬಗ್ಗೆ ಹೀಯಾಳಿಸೋದು, ಇಲ್ಲ ತಮ್ಮ ಹೊಟ್ಟೆ ಮತ್ತು ತಲೆ ವರ್ಣಿಸೋದು ಬಿಟ್ಟು ಬೇರೆ ಏನು ಬರೆದಿದ್ದೀರ ಎಂದು ಬೈದಳು. ಕಡೆಗೆ ನಾನೇ ಹುಡುಕಿ ಬನಿಯನ್ ಹಾಕಿಕೊಂಡೆ.

ಮಗನಿಗೆ ಬೈಯುತ್ತಾ, ಲೇ ಜೋರಾಗಿ ಹೇಳೋ ಸ್ತೋತ್ರಗಳನ್ನ, ನಾಳೆ ಸ್ಪರ್ಧೆ ಇದೆ ಎಂದು ಹೇಳುತ್ತ ಇದ್ದಳು. ನಾನು ಅವನಿಗೆ ಏನು? ಹೇಳಿಕೊಡುತ್ತಿದ್ದಾಳೆ ಬೈಯುವುದನ್ನೋ ಅಥವಾ ಸ್ತೋತ್ರಗಳನ್ನೋ ಎಂದು ಅಚ್ಚರಿ ಆದರೂ ಕೇಳಲಿಲ್ಲ. ಮತ್ತೆ ಮಗನ ಜೊತೆಯಲ್ಲಿ ಆಟವಾಡುತ್ತಾ ಇದ್ದೆ. ಅದಕ್ಕೆ ಇಷ್ಟು ವಯಸ್ಸಾದರೂ ಚಿಕ್ಕ ಮಕ್ಕಳ ಹಾಗೆ ಮಾಡುತ್ತೀರಿ ತಿಳಿಯೋದಿಲ್ಲವೇ ಎಂದಳು. ಲೇ ಮಕ್ಕಳ ಜೊತೆ ನಾವು ಮಕ್ಕಳ ಹಾಗೆ ಇರಬೇಕು ಗೊತ್ತಾ. ಇಲ್ಲ ಅಂದರೆ ಅವರು ನಾವು ಬೇರೆ ಮತ್ತು ತಾವು ಬೇರೆ ಎಂದು ಅಂದುಕೊಂಡುಬಿಡುತ್ತಾರೆ. ಮಕ್ಕಳ ಮನಸ್ಸು ಆಗ ಮಾತ್ರ ಅರ್ಥವಾಗುವದು, ದೊಡ್ಡತನ ದೇಹಕ್ಕೆ ಮಾತ್ರ ಬರಬೇಕೆ ಹೊರತು ಮನಸಿಗಲ್ಲ ಎಂದು ಹೇಳಿದೆ. ಆಯಿತು ಇಷ್ಟೊತ್ತು ಲೇಟ್ ಆಗಿದೆ ಎಂದು ನನ್ನ ಜೊತೆ ಜಗಳ ಮಾಡಿದಿರಿ ಸುಮ್ಮನೇ ಹೊರಡಿ ಇನ್ನು ಸಾಕು ಎಂದಳು.

ಹೋಗುವ ಸಮಯದಲ್ಲಿ ಸಂಜೆ ಸ್ವಲ್ಪ ದುಡ್ಡು ತೆಗೆದುಕೊಂಡು ಬನ್ನಿ, ದಿನಸಿ ತರಬೇಕು ಎಂದು ಹೇಳಿದಳು. ನಾನು ಲಗುಬಗೆಯಿಂದ ನನ್ನ ಡೆಬಿಟ್ ಕಾರ್ಡ್ ಇಟ್ಟುಕೊಂಡು ಆಫೀಸ್ ಹೊರಟೆ. ಅಷ್ಟರಲ್ಲಿ ಎದುರಿಗೆ ನಮ್ಮ ಹಳೆಯ ಆಫೀಸ್ ನಲ್ಲಿ ಕೆಲಸ ಮಾಡುವ ಗೆಳೆಯ ಶ್ರೀನಿವಾಸ್ ಭೇಟಿ ಆದ. ನಾವಿಬ್ಬರು ಒಂದು ಡಿಪಾರ್ಟ್‌ಮೆಂಟ್ EDP ಎಂದರೆ Electronic Data Processing ಎಂದು ತಪ್ಪಾಗಿ ತಿಳಿಯಬೇಡಿ ಮತ್ತೆ Eat Drink Play , ನಾವು ಆ ಆಫೀಸ್ ನಲ್ಲಿ ಅದನ್ನೇ ಮಾಡುತ್ತಿದ್ದೆವು, ಏಕೆಂದರೆ ಎಲ್ಲಾ ಡಿಪಾರ್ಟ್‌ಮೆಂಟ್ ಗಳು ಕಂಪ್ಯೂಟರೈಸ್ ಆಗಿತ್ತು. ನಮಗೆ ತಿಂಗಳಲ್ಲಿ ಒಮ್ಮೆ ಅಥವಾ ಎರಡು ದಿನ ಮಾತ್ರ ಕೆಲಸ ಇರುತಿತ್ತು. ಹೀಗಾಗಿ ನಮ್ಮ ಡಿಪಾರ್ಟ್‌ಮೆಂಟನ್ನು ಭೋಜನಕ್ಕೆ ಕರೆಯದೇ ಮರು ನಾಮಕರಣ ಮಾಡಿದ್ದರು. ಎಲ್ಲಾ ಕ್ಷೇಮ ಸಮಾಚಾರ ಆದ ಮೇಲೆ ಕಾಫೀ ಕುಡಿದು, ಆಫೀಸ್ ಹೊದೆ.

ಸಧ್ಯ ಹೋದ ಕೂಡಲೇ ನೆನಪಿಗೆ ಬಂತು ಬಾಸ್ ರಜೆ ಎಂದು. ಬೈಗಳು ತಪ್ಪಿದವು ಎಂದು ನಿಟ್ಟುಸಿರು ಬಿಟ್ಟೆ. ನಾನು ಸುಮ್ಮನೇ ಮುಂಜಾನೆ ಹಾರಡಿದೆ ಎಂದು ಅನ್ನಿಸಿತು. ಬುದ್ದಿ ಅವಸರದಲ್ಲಿ ಏನೆಲ್ಲಾ ಮರೆಯುತ್ತೆ. ಮತ್ತೆ ಮಡದಿಗೆ ಕರೆ ಮಾಡಿ ತಿಂಡಿ ಬಗ್ಗೆ ಎಲ್ಲಾ ವಿಚಾರಿಸಿ, ಕೆಲಸ ಶುರು ಮಾಡಬೇಕು ಅನ್ನುವ ಸಮಯಕ್ಕೆ ಗೆಳೆಯ ನರೇಂದ್ರ ತಿಂಡಿಗೆ ಕರೆದ. ಮತ್ತೆ ತಿಂಡಿ ತಿಂದು ಬಂದು ಕೆಲಸ ಶುರು ಮಾಡಿದೆ.

ಅವಸರದಲ್ಲಿ ಸಂಜೆ ಬರುತ್ತ ದುಡ್ಡು ತೆಗೆಯೋಕೆ ಮರೆತುಬಿಟ್ಟೆ, ಮನೆ ಸಮೀಪ ಬಂದವನು ಮತ್ತೆ ಗಾಡಿ ವಾಪಸ್ ಎ ಟಿ ಎಂ ಕಡೆಗೆ ತಿರುಗಿಸಿಕೊಂಡು ಹೋದೆ. ಹೋದವನೆ ಅವಸರದಲ್ಲಿ ಕಾರ್ಡ್ ಹಾಕಿದೆ. ಕಾರ್ಡ್ ಒಳಗಡೆ ಹೋಯಿತು. ಆದರೆ ಇನ್ವಾಲಿಡ್ ಕಾರ್ಡ್ ಎಂದು ತೋರಿಸುತಿತ್ತು. ಮತ್ತೊಮ್ಮೆ ಹಾಕಿ ಪ್ರಯತ್ನಿಸಿದೆ. ಮತ್ತೆ ಅದೇ ಸಂದೇಶ. ಈಗ ಹಾಗೆ ದುಡ್ಡು ತೆಗೆದುಕೊಳ್ಳದೇ ಹೋದರೆ, ಮಡದಿ ನನ್ನ ಕಥೆನೇ ಮುಗಿಸುತ್ತಾಳೆ ಎಂದು. ಹೊರಗಡೆ ಬಂದು ಅವಳಿಗೆ ಕರೆ ಮಾಡಿ ಎಷ್ಟು ಬೇಕು ದುಡ್ಡು ಎಂದು ಫೋನ್ ಮಾಡಿದೆ. ಅವಳು 1000 ಎಂದು ಹೇಳಿದಳು. ನಾನು ಕೆಲ ನಿಮಿಷದ ನಂತರ ಮತ್ತೆ ಕರೆ ಮಾಡಿ ಕಾರ್ಡ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಹೇಳಿದೆ. ಆಯಿತು, ಸುಮ್ಮನೇ ಬನ್ನಿ ಎಂದಳು. ಕಡೆಗೆ ಹಾಗೆ ಮನೆಗೆ ಹೋದೆ.

ಮನೆಗೆ ಹೋದೊಡನೆ ನನ್ನ ಕಾರ್ಡ್ ತೆಗೆದುಕೊಂಡು ಹೋಗಿ ದುಡ್ಡು ತೆಗೆಸಿಕೊಂಡು ಬನ್ನಿ ಎಂದಳು. ಕಾರ್ಡ್ ತೆಗೆದುಕೊಳ್ಳಲು ಹೋದೆ. ನನಗೆ ಆಶ್ಚರ್ಯ ನನ್ನ ಕಾರ್ಡ್ ಅಲ್ಲೇ ಇತ್ತು. ಮತ್ತೆ ನಾನು ಯಾವ ಕಾರ್ಡ್ ತೆಗೆದುಕೊಂಡು ಹೋದೆ ಎಂದು ಪರ್ಸ್ ತೆಗೆದು ನೋಡುತ್ತೇನೆ. ಪರ್ಸ್ ನಲ್ಲಿ ಇದ್ದಿದ್ದು ಪಾನ್ ಕಾರ್ಡ್, ಅದನ್ನೇ ಹಾಕಿ ಎರಡು ಬಾರಿ ನೋಡಿದ್ದೆ. ಜೋರಾಗಿ ನಗು ಬಂತು ನಕ್ಕರೆ ನನ್ನದೇ ಮರ್ಯಾದೆ ಹೋಗುತ್ತೆ ಎಂದು ಸುಮ್ಮನಾದೆ. ಕಡೆಗೆ ಅವಳ ಕಾರ್ಡ್ ಜೊತೆ ನನ್ನ ಕಾರ್ಡ್ ತೆಗೆದುಕೊಂಡು ಹೋದೆ. ದುಡ್ಡು ತೆಗೆಸಿಕೊಂಡು ಬಂದು, ಆ ಎ ಟಿ ಎಂ ಸರಿ ಇಲ್ಲ ಕಣೇ ಎಂದು ನಗುತ್ತಾ ಹೇಳಿ, ನನ್ನ ಕಾರ್ಡ್ ಸರಿಯಾಗಿ ಕೆಲಸ ಮಾಡುತ್ತಾ ಇದೆ ಎಂದು ಹೇಳಿ ದುಡ್ಡು ಕೊಟ್ಟೆ.

ಮರುದಿನ ನನ್ನ ಮಗನಿಗೆ ಸ್ತೋತ್ರ ಪಠಣ ಮತ್ತು ಸ್ವತಂತ್ರ ಹೋರಾಟಗಾರರ ವೇಷ ಭೂಷಣ ಸ್ಫರ್ಧೆಯಲ್ಲಿ ಬಹುಮಾನ ದೊರೆತಿತ್ತು. ನನ್ನ ಮಡದಿಗೆ ಭೇಷ್ ಹೇಳಿದೆ. ನೀವು ಸ್ವಲ್ಪ ಸುಧಾರಿಸಿ ನಿಮ್ಮ ಮಗನ ಹಾಗೆ ಬೇಗನೆ ಏಳುವುದು, ಸ್ತೋತ್ರ, ಮಂತ್ರ ಪಠಣ ಮಾಡಿ, ನಿಮ್ಮ ಅವಸರ ನನಗೆ ತಡೆಯೋಕೆ ಆಗಲ್ಲ, ನಮಗೂ ಹಿಂಸೆ ಕೊಡುತ್ತೀರಿ ಎಂದಳು. ನನಗು ಹಾಗೆ ಅನ್ನಿಸಿತು ಅವಸರವೇ ಅಪಘಾತ ಎಂದು.

Thursday, January 27, 2011

ಒಲವೆ ಜೀವನ ಸಾಕ್ಷಾತ್ ಖಾರ ....

ಪುಟ್ಟ ನೋಡು, ನಿಮ್ಮ ಅಪ್ಪನ ಯುದ್ಧ ಮುಗಿಯಿತಾ? ಎಂದು ಮಗನಿಗೆ ಕೇಳಿದಳು. ಎರಡು ದಿನದಿಂದ ನನ್ನ ಮತ್ತು ನನ್ನ ಮಡದಿಯ ಮಧ್ಯೆ ಸಂಸಾರ ಸಮರ ನಡೆದೇ ಇತ್ತು. ಈಗ ಯುದ್ಧ ಮುಗಿಯಿತಾ? ಎಂದು ಕೇಳಿದ್ದು ನನ್ನ ಸ್ನಾನಕ್ಕೆ. ಸ್ನಾನಕ್ಕೆ ಅನ್ನುವದಕ್ಕಿಂತ ದಾಡಿ ಮಾಡಿಕೊಳ್ಳುವುದಕ್ಕೆ. ರಕ್ತವಿಲ್ಲದೇ ನನ್ನ ಮುಖ ಕೂದಲುಗಳನ್ನು ಬಲಿ ಕೊಡುವುದು ನನಗೆ ಅಸಾಧ್ಯದ ಸಂಗತಿ. ಒಂದು ಸಲ ಹೀಗೆ ರಕ್ತ ನೋಡಿ ನನ್ನ ಮಡದಿ, ಇಷ್ಟು ರಕ್ತದಿಂದ ನಾಲ್ಕು ಜನ ರಕ್ತದ ಅವಶ್ಯಕತೆ ಇರುವವರನ್ನು ಬದುಕಿಸಬಹುದಿತ್ತು ಎಂದಿದ್ದಳು. ಸಕಾಲದಲ್ಲಿ ಮಳೆ ಬರದೇ ಎಷ್ಟೋ ಸಸ್ಯ, ಜೀವ ಜಂತುಗಳು ಬಳಲಿ ಬಲಿಯಾಗುತ್ತವೆ, ಆದರೆ ಈ ದಾಡಿ, ಮೀಸೆಗಳಿಗೆ ಅದರ ಪರಿವೆ ಇಲ್ಲದೇ ಸೊಂಪಾಗಿ ಬೆಳೆಯುತ್ತವೆ. ಒಣಗಿರುವ ಪೈರು ಸಹಿತ ಮತ್ತೆ ಚಿಗುರೊಡೆಯುವದು ನಮ್ಮ ಮುಖದಲ್ಲಿ ಮಾತ್ರ. ಅದರಲ್ಲೂ ಅರ್ಧ ಒಣಗಿರುವ(ಬಿಳಿ) ಮತ್ತು ಅರ್ಧ ಕರಿ ಇದ್ದರೆ ಅದರ ಕಷ್ಟ ಹೇಳಲು ಅಸಾಧ್ಯ. ನನ್ನ ಮುಖದಲ್ಲಿ ಕೂಡ ಇದೆ ತೆರನಾದ ಸಮಸ್ಯೆ ಮೀಸೆಗಳನ್ನು ಕತ್ತರಿಸಿ ಕೊಳ್ಳುವುದು. ಏಕೆಂದರೆ ಅರ್ಧ ಬಿಳಿ ಮತ್ತು ಅರ್ಧ ಕರಿ. ಬಿಳಿ ಮೀಸಿಗಳನ್ನು ತೆಗೆಯುವ ಸಮಯದಲ್ಲಿ ಕರಿ ಮೀಸೆಗಳನ್ನು ಅನ್ಯಾಯವಾಗಿ ಬಲಿ ತೆಗೆದುಕೊಂಡಿರುತ್ತೇನೆ. ಬಿಳಿ ಮೀಸೆ ಹುಡುಕಿ ತೆಗೆಯುವುದೇ ಒಂದು ದೊಡ್ಡ ಸಾಹಸ, ಅದಕ್ಕೆ ನನಗೆ ತುಂಬಾ ಸಮಯ ಬೇಕಾಗುತ್ತೆ.

ಜಿರಳೆಗಳಲ್ಲಿ ಒಂದು ವಿಶೇಷವಾದ ಸಂಗತಿ ಇದೆ. ಅದು ತನ್ನ ಹೆಣ್ಣು ಜಿರಳೆಗಳನ್ನು ಆಕರ್ಷಿಸಲು ತನ್ನ ಮೀಸೆಯನ್ನು ಬಳಸುತ್ತೆ. ಮತ್ತು ಆಹಾರ ಹುಡುಕಲು ಕೂಡ ಅದು ನೇರವಾಗುತ್ತೆ. ನಾನು ಕೂಡ ಅದರ ಹಾಗೆನೆ, ಎರಡನೆ ಸಂಗತಿ ಬಿಟ್ಟು, ನನ್ನ ಮಡದಿಯನ್ನು ಆಕರ್ಷಿಸಲು ಉಪಯೋಗಿಸುತ್ತೇನೆ, ಅನ್ನುವದಕ್ಕಿಂತ ನಾನು ನಿನಗಿಂತ ಸ್ವಲ್ಪನಾದರೂ ಮೇಲೂ ಎಂದು ತೋರಿಸುವುದಕ್ಕೆ ಎಂದು ಹೇಳಬಹುದು. ಅದು ಬರಿ ತೋರಿಕೆಗೆ ಮಾತ್ರ ....

ಅವಳ ಸಮರಕ್ಕೂ ಕಾರಣವಿದೆ. ಮೊನ್ನೆ ಇವತ್ತಿನಿಂದ ಒಂದು ತಿಂಗಳಿಗೆ ಏನು? ವಿಶೇಷ ಇದೆ ಹೇಳಿ ಎಂದಳು. ನನಗೆ ಏನೆಂದು ಹೊಳಿಲೆ ಇಲ್ಲ. ಹೀಗೆ, ಅನಿರೀಕ್ಷಿತವಾಗಿ ಪರೀಕ್ಷೆಗೆ ಒಡ್ಡುವ ನನ್ನ ಮಡದಿ ನನ್ನನ್ನು ಪೇಚಿಗೆ ಸಿಕ್ಕಿಸಿರುತ್ತಾಳೆ. ಆಮೇಲೆ ಹೇಳದೇ ಇದ್ದರೆ ಮುನಿಸಿಕೊಂಡು ಬಿಡುತ್ತಾಳೆ. ಕಡೆಗೆ ಟಿ ವಿ ಯಲ್ಲಿ ಬರುವ ಜಾಹೀರಾತು ನೋಡಿ, ಒಂದು ತಿಂಗಳಿಗೆ ಕ್ರಿಕೆಟ್ ವರ್ಲ್ಡ್ ಕಪ್ ಇದೆ ಎಂದೆ. ಇದೊಂದು ಗೊತ್ತು ನಿಮಗೆ ಎಂದು ಕೋಪ ಮಾಡಿಕೊಂಡು ಹೋದಳು. ತುಂಬಾ ಪ್ರಯತ್ನ ಪಟ್ಟರು ಕೋಪ ಇಳಿಯಲೇ ಇಲ್ಲ. ಮತ್ತೆ ಊಟಕ್ಕೆ ಕುಳಿತ ಸಮಯದಲ್ಲಿ ಸಿಕ್ಕಾಪಟ್ಟೆ ತಿಂದು, ಅವಳನ್ನು ನಗಿಸಲು, ಈಗ ಹಸಿವೆ ಆಯಿತು ನೋಡು ಎಂದೆ. ದೇವರ ಗುಡಿಯಲ್ಲಿ ತೀರ್ಥ ಪ್ರೋಕ್ಷಣೆ ಮಾಡಿದ ಹಾಗೆ ಅವಳ ಬಾಯಲ್ಲಿ ಇರುವ ನೀರೆಲ್ಲಾ ಎದುರಿಗೆ ಕುಳಿತ ನನ್ನ ಮೇಲೆ. ಆದರೆ ಕೋಪ ಮಾತ್ರ ಇಳೀಲೆ ಇಲ್ಲ.

ಒಮ್ಮೆ ಅಮ್ಮ ಕರೆಯುತ್ತಾ ಇದ್ದಾಳೆ ಎಂದು ಮಗ ಹೇಳಿದ. ನಾನು ಒಳಗೆ ಹೋಗಿ ಕೇಳಿದೆ. ಅವಳು ಪೂರಿ ಹಾಗೆ ಮುಖ ಉಬ್ಬಿಸಿ, ಪೂರೀನೆ ಕರೆಯುತ್ತಾ ಇದ್ದಳು. ಉತ್ತರ ಮಾತ್ರ ಬರಲಿಲ್ಲ. ಮತ್ತೆ ಕೆಲ ಸಮಯದ ನಂತರ ಮಗ ಬಂದು ನಾನು, ನೀನು 'ಬು' ಹೋಗೋಣ. ಅಮ್ಮ ಬೇಡ ಅಂದ. ಅದಕ್ಕೆ ನಾನು ಪಾಪ ಅಮ್ಮನು ಬರಲಿ ಬಿಡು ಎಂದೆ. ನಿಮ್ಮ ಪಾಪ ಮತ್ತು ಸೀಮೆಎಣ್ಣೆ ಮಾಪ ಎರಡು ನಿಮ್ಮ ಬಳೀನೆ ಇಟ್ಟುಕೊಳ್ಳಿ ಎಂದು ಹೇಳಿದಳು.

ಸಂಜೆ ಟಿ ವಿ ಯಲ್ಲಿ ಬರುವ ಲಗೇ ರಹೊ ಮುನ್ನ ಭಾಯಿ ಚಲನ ಚಿತ್ರ ನೋಡುತ್ತಾ ಇದ್ದೇ. ಪ್ರತಿ ಬಾರಿ ಇದೆ ಸಿನೆಮಾ ನೋಡುತ್ತೀರಿ ಬೇರೆ ಹಚ್ಚಿ ಎಂದಳು. ಲೇ ಇದು ತುಂಬಾ ಸೈಂಟಿಫಿಕ್ ಮೂವೀ ಕಣೆ ಅದರಲ್ಲಿರುವ ನೀತಿ ಪಾಠ ನೋಡಿ ಕಾಲಿಬೇಕು ಎಂದೆ. ಅದೆಲ್ಲ ಗೊತ್ತಿಲ್ಲ ಅದು ಸಿನಿಮಾ ಅಷ್ಟೇ. ನೀವು ಹೇಳೋ ಹಾಗೆ ಆಗಿದ್ದರೆ ಅಡ್ವರ್ಟೈಸ್ಮೆಂಟ್ ನಲ್ಲಿ ಕ್ರೀಮ್ ,ಪೌಡರ್ ಹಚ್ಛ್ಕೊಂಡರೆ ನೌಕರಿ ಸಿಗುವುದು ಎಲ್ಲಾ ಆಗುತ್ತೆ ಅದೆಲ್ಲ ಖರೆ ಆಗುತ್ತಾ, ಸುಮ್ಮನೇ ಚೇಂಜ್ ಮಾಡಿ ಎಂದು ರಿಮೋಟ್ ಕಸಿದುಕೊಂಡು ಚೇಂಜ್ ಮಾಡಿದಳು.

ಮಗನಿಗೆ ಅಭ್ಯಾಸ ಮಾಡಿಸುವಾಗ ಪೆನ್ಸಿಲ್ ನೋಡಿ ಇದು ನಿಮ್ಮ ಅಪ್ಪನ ಹಾಗೆ ಮಂಡ ಇದೆ ನೋಡು ಎಂದು ಹೇಳಿ ನಗುತ್ತಲಿದ್ದಳು. ಮತ್ತೆ ತರಕಾರಿ ಹೆಚ್ಚುವಾಗ ಕೂಡ... ಇಳಿಗೆಗೆ.

ರಾತ್ರಿ ಊಟವಾದ ಮಲಗುವ ಸಮಯದಲ್ಲಿ ನಾನು ರೇಡಿಯೋ ಕೇಳುತ್ತಾ ನಿದ್ದೆ ಮಾಡುತ್ತಾ ಇದ್ದೇ. ಅದನ್ನು ನೋಡಿ ರೀ ಆ ರೇಡಿಯೋ ಆಫ್ ಮಾಡಿ ಎಂದಳು. ನೋಡು ರಿದಂ ಇದ್ದರೆ ಬೇಗನೆ ನಿದ್ದೆ ಬರುತ್ತೆ ಎಂದೆ.ಮಕ್ಕಳಿಗೆ ಮಲಗಿಸುವಾಗ ಕೂಡ ಒಂದೇ ರಿದಂನಲ್ಲಿ ಬಡಿದರೆ ಹೇಗೆ ನಿದ್ದೆ ಬರುತ್ತೆ ಹಾಗೆ ಎಂದೆ. ಬೇಕಾದರೆ ನೀನು ಟ್ರೈ ಮಾಡು ಎಂದೆ. ಅದೆಲ್ಲ ಬೇಡ ನಿಮ್ಮ ಗೊಡ್ಡು ಫೀಲಾಸಫೀ. ನೀವೇನೂ ಸ್ವಾಮಿಗಳಲ್ಲ. ನನಗೆ ಮಾತ್ರ ನಿದ್ದೆ ಬರಲ್ಲ ಆಫ್ ಮಾಡಿ ಅದನ್ನು ಎಂದು ಉಗಿದಳು.

ಅಷ್ಟರಲ್ಲಿ ಮಂಜನ ಫೋನ್ ಬಂತು, ಲೇ ಹ್ಯಾಪೀ ಅನಿವರ್ಸರಿ ಎಂದ. ನಾನು ಇವತ್ತ? ಎಂದು ಯೋಚಿಸಿದೆ. ಅದು ಮುಂದಿನ ತಿಂಗಳು ಎಂದು ನೆನಪು ಆಯಿತು. ಕ್ಯಾಲಂಡರ್ ನೋಡಿದೆ. ಮತ್ತೆ ಬೆಳಿಗ್ಗೆ ಮಡದಿ ಕೇಳಿದ್ದು ಅದೇ ಇರಬೇಕು ಎಂದು ಹೊಳಿತು. ತುಂಬಾ ಖುಶಿಯಿಂದ "ಒಲವೆ ಜೀವನ ಸಾಕ್ಷಾತ್ ಖಾರ" ಎಂದು ತಮಾಷೆಯಾಗಿ ಹಾಡುತ್ತಾ ಬಂದು. ಲೇ ಇವತ್ತಿನಿಂದ ಮುಂದಿನ ತಿಂಗಳು , ನಮ್ಮ ೬ ನೇ ವರ್ಷದ ವಿವಾಹ ವಾರ್ಷಿಕೋತ್ಸವ ಎಂದು ಹೇಳೋಕೆ ಹೋದೆ,ಆದರೆ ಆಗಲೇ ನಿದ್ದೆಗೆ ಜಾರಿದ್ದಳು....

Tuesday, January 18, 2011

ವೇದಾಂತಿ ದಂತಕತೆ....

ಮುಂಜಾನೆ ಎದ್ದು ಬೇಗನೆ ದೇವರ ಸ್ತೋತ್ರ ಹೇಳುತ್ತ ಇದ್ದೆ. ನನ್ನ ಗೆಳೆಯ ವಿಲಾಸ್ ಬಂದ. ಬಂದವನೇ, ಎಲ್ಲಾ ಕ್ಷೇಮ ಸಮಾಚಾರವಾದ ಮೇಲೆ, ತನ್ನ ಮದುವೆ ಕಾರ್ಡ್ ಕೊಟ್ಟ. ನಮಗೂ ತುಂಬಾ ಖುಷಿ ಆಯಿತು. ಇಲ್ಲೇ, ತಿಂಡಿ ತಿಂದು ಹೋಗು ಎಂದು ಹೇಳಿದೆ. ಆಯಿತು ಎಂದ. ಮಡದಿ ತಿಂಡಿ ತಂದು ಕೊಟ್ಟಳು. ತಿಂಡಿ ತಿನ್ನುವ ಸಮಯದಲ್ಲಿ ಒಂದು ಹರಳು ನನ್ನ ಬಾಯಿಗೆ ಬಂತು. ನಾನು ಪಕ್ಕಕ್ಕೆ ಇಟ್ಟು, ತಿಂಡಿ ತಿಂದು ಮುಗಿಸಿದೆ. ಆಮೇಲೆ ಕಾಫೀ ಕುಡಿಯುತ್ತಾ ಇರುವಾಗ, ಮತ್ತೆ ಮಾತನಾಡುತ್ತಾ ನಿನಗೆ ಯಾರಾದರೂ ದಂತ ವೈಧ್ಯರು ಗೊತ್ತಾ ಎಂದು ಕೇಳಿದ. ನನಗೆ ಘಾಬರಿ, ನನಗೆ ಹರಳು ಬಂದರು, ನಾನೇ ಸುಮ್ಮನಿರುವಾಗ ಇವನದು ಜಾಸ್ತಿ ಆಯಿತು ಅನ್ನಿಸಿತು. ನಾನು ಸುಮ್ಮನೇ ನಕ್ಕು ಸುಮ್ಮನಾದೆ. ಮತ್ತೊಮ್ಮೆ ಕೇಳಿದ ಆಸಾಮಿ... ಆದರೂ ಸುಧಾರಿಸಿಕೊಂಡು, ಹಾ... ಗೊತ್ತು ನನ್ನ ಒಬ್ಬ ಹಳೆಯ ಗೆಳೆಯ ರಾಜೀವ ಇದ್ದಾನೆ ಎಂದೆ. ಅವನಿಗೆ ಹೇಳು ನಾನು ಬರುತ್ತಿದ್ದೇನೆ ಅಂತ ಎಂದ. ಏಕೆ? ಹಲ್ಲಿಗೆ ಏನು ಆಯಿತು ಎಂದೆ. ಅದು ಮದುವೆ ಮುಂಚೆ ಹಲ್ಲು ಚೆನ್ನಾಗಿ ತೋರಿಸಿಕೊಂಡು ಬರಬೇಕು ಎಂದಿದ್ದೇನೆ ಎಂದಾಗ ನನ್ನ ಮನಸ್ಸು ನಿರಾಳವಾಯಿತು.

ಮದುವೆ ಫಿಕ್ಸ್ ಆಯಿತು, ಅಂದರೆ ಸಾಕು ಅನೇಕ ಜನರು ದಂತ ವೈದ್ಯರ ಬಳಿ ಹೋಗಿ, ತಮ್ಮ ದಂತಕತೆಗಳನ್ನು ಹೇಳಿ, ದಂತ ಚಿಕಿತ್ಸೆ ಮಾಡಿಸಿಕೊಂಡು ಬರುತ್ತಾರೆ. "ಪ್ರಥಮ್ ಚುಂಬನಮ್ ದಂತ ಭಗ್ನಮ್" ಆಗಬಾರದು ನೋಡಿ ಅದಕ್ಕೆ..ಆಮೇಲೆ ಬೇಕಾದರೆ ಭಗ್ನಗೊಳಿಸುವುದು ಅವರವರ ಇಚ್ಛೆ. ಗಂಡ ಹೆಂಡತಿಯದೋ ಅಥವಾ ಹೆಂಡತಿ ಗಂಡನದೋ.... ಚಿಕ್ಕವನಿದ್ದಾಗ ಅಪ್ಪ ನಾನು ಕೀಟಲೆ ಮಾಡಿದಾಗ "ಲೇ ನಿನ್ನ ಹಲ್ಲು ಉದುರಿಸುತ್ತೇನೆ ಎಂದಿದ್ದು" ನೆನಪು ಆಯಿತು.

ಅವನಿಗೆ ರಾಜೀವನ ವಿಸಿಟಿಂಗ್ ಕಾರ್ಡ್ ಕೊಟ್ಟೆ. ಕಾರ್ಡ್ ನೋಡಿ,ಮುಖ ಹರಳೆಣ್ಣೆ ಕುಡಿದವನ ಹಾಗೆ ಮಾಡಿದ. ಏಕೆ? ಏನು ಆಯಿತು ಎಂದೆ. ಅದು... ಅದು... ಕ್ಲಿನಿಕ್ ಹೆಸರು ಅಂದ. ಅದಾ.. ಅವನು ಗಣೇಶನ ಭಕ್ತ, ಅದಕ್ಕೆ ಏಕದಂತ ಕ್ಲಿನಿಕ್ ಎಂದು ಇಟ್ಟಿದ್ದಾನೆ ಅಷ್ಟೇ ಎಂದಾಗ, ನಿರಾತಂಕವಾಗಿ ನಿಟ್ಟುಸಿರು ಬಿಟ್ಟ. ಅವನ ಸಿಲ್ವರ್ ತಲೆ ನೋಡಿ, ಇದನ್ನು ಸರಿ ಮಾಡಿಸಿಕೊ ಎಂದು ತಮಾಷೆ ಮಾಡಿದೆ. ನಾನು ಬ್ಯೂಟೀ ಪಾರ್ಲರ್ ಗೆ ಹೋಗುತ್ತೇನೆ ಎಂದ. ಅದಕ್ಕೆ ನನ್ನ ಮಡದಿ ನಿಮ್ಮನಾಟಿ ವೈಧ್ಯರ ಅಡ್ರೆಸ್ ಕೊಡಿ ಪಾಪ... ಎಂದು ನಗಹತ್ತಿದಳು. ಅವನಿಗೆ ಅರ್ಥವಾಗಲಿಲ್ಲ, ಯಾರದೂ ನಾಟಿ ವೈಧ್ಯರು ಎಂದ. ನನ್ನ ಕಥೆಯನ್ನು ತುಂಬಾ ರಸವತ್ತಾಗಿ ಹೇಳಿದಳು. ಸಕ್ಕತ್ ನಗುತ್ತಾ, ಬೇಡ.. ಬೇಡ... ನನಗೆ ಬ್ಯೂಟೀ ಪಾರ್ಲರ್ ಗೆ ಹೋಗುತ್ತೇನೆ, ನನ್ನ ನೋಡಿ, ಆಮೇಲೆ 10 ವರ್ಷ ಚಿಕ್ಕವನ ಹಾಗೆ ಮಾಡಿ ಕಳಿಸುತ್ತಾರೆ ಎಂದ. ಅದಕ್ಕೆ ನಾನು ಕೋಪದಿಂದ ನಿನ್ನ ಮೇಲೆ ಪೋಲೀಸ್ ಕಂಪ್ಲೇಂಟ್ ಕೊಟ್ಟು ಬಿಡುತ್ತೇನೆ, ಬಾಲ್ಯ ವಿವಾಹ ಮಾಡಿಕೊಳ್ಳುತ್ತಿದ್ದಾನೆ ಎಂದು ಎಂದೆ.

ನಾವಿಬ್ಬರು ಮದುವೆ ಸಿದ್ಧತೆ ಬಗ್ಗೆ ಮಾತನಾಡುತ್ತಾ ಇದ್ದಾಗ, ನನ್ನ ಸುಪುತ್ರ ಬಂದು, ಅಪ್ಪ ನೋಡಿ.. ಅಮ್ಮ ನನ್ನ ಮಾತು ಕೇಳುತ್ತಾ ಇಲ್ಲ ಎಂದ. ಅದಕ್ಕೆ ನಾನು, ಮದುವೆ ಆಗಿ ಆರು ವರ್ಷ ಆಗೋಕೆ ಬಂತು ನನ್ನ ಮಾತೆ ಕೇಳಲ್ಲ, ಇನ್ನೂ ನಿನ್ನ ಮಾತು ಅವಳಿಗೆ ಎಲ್ಲಿಯ ಲೆಕ್ಕ ಎಂದು ನಗುತ್ತಾ ಅಂದೆ. ಅದಕ್ಕೆ... ಅವನು ನಕ್ಕು ಅಪ್ಪನಿಗೆ ಹೇಳಿದ್ದೇನೆ ಎಂದು ಹೇಳುತ್ತ ಅಡುಗೆ ಮನೆಗೆ ಹೋದ. ಹೇಳು ಏನು? ಮಾಡುತ್ತಾರೆ ನೋಡುತ್ತೇನೆ ಎಂದಳು ಮಡದಿ.

ಕೆಲ ಸಮಯದ ನಂತರ ಪಕ್ಕದ ಮನೆ ಪೂಜ ಬಂದು "ಆಂಟೀ ಸ್ವಲ್ಪ ಮೊಸರು ಇದ್ದರೆ ಕೊಡಿ" ಎಂದಳು. ಮೊಸರು ಕೊಟ್ಟು ಕಳುಹಿಸಿದಳು. ನನ್ನ ಮಗ ಅವರ ಅಮ್ಮನಿಗೆ ಆಂಟೀ ... ಆಂಟೀ ಎಂದು ಸಂಭೋದಿಸುತ್ತಾ ಮೋಜು ಮಾಡುತ್ತಾ ಆಡುತ್ತಿದ್ದ. ಮದುವೆ ಆದ ಮೇಲೆ ಸಿಗುವಂತ ಮೊದಲನೆ ಪ್ರಮೋಶನ್ ಏನು ಗೊತ್ತಾ? ಎಂದು ವಿಲಾಸ್ ನಿಗೆ ಕೇಳಿದೆ. ಏನು? ಎಂದ. ನೀನು ಪಕ್ಕದ ಮನೆ ಜನರಿಗೆ ಅಂಕಲ್ ಆಗುತ್ತಿ ಮತ್ತೆ ನಿನ್ನ ಮಡದಿ ಆಂಟೀ...ವಯಸ್ಸು ಎಷ್ಟೇ ಇದ್ದರು. ಮದುವೆ ಮೊದಲು ನೀನು ಹೀರೊ ಇರುತ್ತಿ... ಎಂಗೇಜ್ಮೆಂಟ್ ಆದ ಮೇಲೆ ಸೂಪರ್ ಹೀರೊ ತರಹ ಆಡುತ್ತೀ.. ಆಮೇಲೆ ಗೊತ್ತಾಗೋದು ನೀನು ಆಂಟೀ ಅಥವಾ (Anti) ಹೀರೊ ಎಂದು. ಅದಕ್ಕೆ ಒಟ್ಟಿನಲ್ಲಿ ಹೀರೊ ಇರುತ್ತೇನೆ ತಾನೇ? ಅಂದ. ಲೇ.... ನಿನಗೆ ಹೀರೊದ ನಿಜವಾದ ಅರ್ಥ ಗೊತ್ತಾ? ಎಂದೆ. ಇಲ್ಲ ಅಂದ. ಹೀ(ಅವನು) ಇಂಗ್ಲೀಶ್ ಶಬ್ದ. ರೊ(ಅಳು) ಹಿಂದಿ ಶಬ್ದ ಎಂದೆ. ಜೋರಾಗಿ ನಗಹತ್ತಿದ. ಅಷ್ಟರಲ್ಲಿ ನನ್ನ ಮಡದಿ ನೀವು ಇವರ ಮಾತು ಕೇಳುತ್ತಾ ಇದ್ದರೆ ಮುಗೀತು ಕತೆ. ಗಿಡದಲ್ಲಿ ಇರುವ ಮಂಗ ಕೂಡ ಕೈ ಬಿಡುತ್ತೆ ಎಂದಳು. ವೇದಾಂತಿಗಳೇ ನಿಮ್ಮ ದಂತಕತೆಗಳು ಸಾಕು, ಅವರಿಗೂ ಇನ್ನೂ ತುಂಬಾ ಮದುವೆ ಕಾರ್ಡ್ ಕೊಡಬೇಕು ಎಂದು ಕಾಣುತ್ತೆ ಬಿಡಿ ಅವರನ್ನ ಎಂದಳು.

ಮತ್ತೆ ನಕ್ಕು, ಎಲ್ಲರಿಗೂ ಬೈ ಹೇಳಿ ಮದುವೆಗೆ ಬರಲೇಬೇಕು ಎಂದು ಹೇಳಿ ಹೊರಟು ಹೋದ.

ಆಮೇಲೆ ಮಡದಿ ರೀ... ಸ್ವಲ್ಪ ಟೊಮ್ಯಾಟೋ ಫ್ರಿಡ್ಜ್ ನಲ್ಲಿ ಇದೆ ಕೊಡಿ ಎಂದಳು. ನಾನು ಫ್ರಿಡ್ಜ್ ತೆಗೆದೆ ಅಲ್ಲಿ ತುಂಬಾ ಸಾಮಾನುಗಳನ್ನು ಇಟ್ಟಿದ್ದಳು. ಅದನ್ನು ನೋಡಿ ಏನೇ ಇದು ಇಷ್ಟೊಂದು ಸಾಮಾನು ಇಟ್ಟೀದ್ದೀಯ....?. ನನ್ನನ್ನು ಇದರಲ್ಲಿ ತುರುಕಲಿಲ್ಲವಲ್ಲ ಎಂದು ತಮಾಷೆ ಮಾಡಿದೆ. ರೀ, ನಾನು ಕೆಟ್ಟಿರೊ ಸಾಮಾನು ಇಡುವದಿಲ್ಲ ಎಂದು ನಗುತ್ತಾ ನುಡಿದಳು....

Wednesday, January 12, 2011

ಸ್ವಚ್ಛತಾ ಕಾರ್ಯಕ್ರಮ ....

*****************************************************
ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು...
*****************************************************


ರೀ, ಮನೆಯಲ್ಲಾ ತುಂಬಾ ಗಲೀಜ್ ಆಗಿದೆ, ಒಂದು ದಿವಸನಾದರೂ ಕ್ಲೀನ್ ಮಾಡಿದ್ದೀರ? ಎಂದಳು ನನ್ನ ಮಡದಿ. ನೀನೇನು ಮಡಿಲೆ ಇದ್ದೀಯಾ? ನೀನೆ ಮಾಡಬಹುದಲ್ಲ ಎಂದು ಹೇಳಿ ಉಗಿಸಿಕೊಂಡೆ. ನನ್ನನ್ನ ಏನು? ಎಂದು ತಿಳಿದಿದ್ದೀಯಾ?. ನನಗೆ ತುಂಬಾ ಕೆಲಸಗಳಿರುತ್ತವೆ. ಬ್ಲಾಗ್ ನೋಡಬೇಕು, ಅದಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಉತ್ತರಿಸಬೇಕು, ಮತ್ತೆ ಓದಬೇಕು ಎಂದು ಹೇಳಿದೆ. ಓದುವ ಸಮಯದಲ್ಲಿ... ಚೆನ್ನಾಗಿ ಊದಿದಿರಿ ಎಂದು ಕಾಣುತ್ತೆ, ಅದಕ್ಕೆ ಈಗ ಓದುತ್ತಾ ಇದ್ದೀರ ಎಂದಳು. ಏನೋ? ಒಂದೆರಡು ಬ್ಲಾಗ್ ಬರೆದ ಮಾತ್ರಕ್ಕೆ, ನಿಮ್ಮಷ್ಟಕ್ಕೆ ನೀವೇ ದೊಡ್ಡ ಸಾಹಿತಿ ಎಂದು ತಿಳಿದುಕೊಳ್ಳಬೇಡಿ. ನಿಮಗೇನೂ ಕೊಂಬು ಬಂದ ಹಾಗೆ ಆಡುತ್ತಿರುವಿರಿ ಎಂದಳು. ಏನು? ನನಗೆ ಕೊಂಬು ಇಲ್ಲವೇ?, ನನ್ನ ಹೆಸರು ಏನು? ಎಂದೆ. ಮತ್ತೇನು ದನ ಕಾಯುವವನು ಎಂದಳು. ಲೇ ಅವು ಆಕಳುಗಳು ಎಂದೆ. ಅವುಗಳಿಗೆ ಕೊಂಬು ಇದೆ. ನನಗೆ ಇಲ್ಲವೇ ಬೇಕಾದರೆ "ಗೋಪಾಲ್" ಎಂಬ ಹೆಸರಿನಲ್ಲಿ "ಲ್" ಕ್ಕೆ ಕೊಂಬು ಇದೆ ಅಲ್ಲ, ಒಂದೇ ಇರಬಹುದು, ಆದರೂ ಇದೆ ತಾನೇ ಎಂದೆ. ಆಯಿತು, ಮಹಾರಾಯರೆ ನೀವು ಮಹಾನ್ ಕೊಂಬು ಪಂಡಿತರು ...ಕ್ಷಮಿಸಿ ಕೊಬ್ಬು ಪಂಡಿತರು. ನಿಮಗೆ ಸರಿಸಾಟಿ ಯಾರು ಇಲ್ಲ ಆಯಿತಾ ಎಂದಳು. ಸಧ್ಯ, ನಿಮ್ಮ ಕಂಪ್ಯೂಟರ್ ನಾದರೂ ಒರೆಸುವ ಕೆಲಸ ಮಾಡುವುದಿಲ್ಲ ಎಂದಳು. ಬರಿ ಅದನ್ನು ಕುಟ್ಟುವುದು ಮಾತ್ರ ಬಿಡುವುದಿಲ್ಲ. ಸ್ವಲ್ಪ ಮೆಣಸಿನಕಾಯಿ ಕುಟ್ಟಿದ್ದರೆ, ಇಷ್ಟೊತ್ತಿಗೆ ಖಾರದ ಪುಡಿನಾದರೂ ಆಗುತಿತ್ತು ಎಂದು ಉಗಿದಳು. ಆಯಿತು... ಮಹಾರಾಯತಿ ಈ ಶನಿವಾರ ಮಾಡುತ್ತೇನೆ ಎಂದು ಅಭಯವನ್ನಿತ್ತೆ. ಅಷ್ಟಕ್ಕೇ ಬಿಡಬೇಕಲ್ಲ ಆಗತಾನೆ ಹೊಸದಾಗಿ ತಂದ ಕ್ಯಾಲಂಡರ್ ಮೇಲೆ ಒಂದು ವೃತ್ತ ಬಿಡಿಸಿ, ಈ ವಾರ ಸ್ವಚ್ಛತಾ ಕಾರ್ಯಕ್ರಮ ಎಂದು ಗುರುತು ಮಾಡಿ ಬಿಟ್ಟಳು. ಇನ್ನೂ ತಪ್ಪಿಸಿಕೊಳ್ಳುವುದು ಅಸಾಧ್ಯದ ಸಂಗತಿ ಆಗಿತ್ತು.


ಹಳೆಯ ಕಂಪನಿಯಲ್ಲಿ ಬರೀ ರವಿವಾರ ಮಾತ್ರ ರಜೆ ಇರುತಿತ್ತು. ಹೀಗಾಗಿ ನನಗೆ ಸ್ವಲ್ಪ ರಿಯಾಯಿತಿ ದೊರೆಯುತ್ತಿತ್ತು. ಆದರೆ ಈಗ ಯಾವುದೇ "ರಿಯಾಯಿತಿ" ಇಲ್ಲ, "ರೀ ಆಯಿತ" ಎಂಬ ಶಬ್ದ ಮಾತ್ರ ಕೇಳಿಸುತ್ತೆ. ಒಂದೇ ದಿನದಲ್ಲಿ ಎಲ್ಲ ಸ್ವಚ್ಛತಾ ಮುಗಿಯುತ್ತಾ, ನನ್ನ ಕೈಯಲ್ಲಿ ಎಂದು ಯೋಚನೆ ಬೇರೆ ಇತ್ತು.


ಕಡೆಗೆ ಶನಿವಾರ ಬಂದೆ ಬಿಟ್ಟಿತ್ತು. ಆರು ಘಂಟೆಗೆ ಎದ್ದೊಡನೆ ಸ್ವಚ್ಚತಾ ಕಾರ್ಯಕ್ರಮ ಶುರು ಮಾಡಿಕೊಂಡಿದ್ದೆ. ರೀ ಮೊದಲು ಕಾಫೀ ಕುಡಿ ಬನ್ನಿ, ಆಮೇಲೆ ಮಾಡುವಿರಂತೆ ಎಂದಳು. ಕಾಫೀ ಕುಡಿದು ಮತ್ತೆ ಕೆಲಸ ಶುರು ಮಾಡಿದೆ.ಪೊರಕೆ ತೆಗೆದುಕೊಂಡು ಕಾಟ್ ಕೆಳಗೆ ಗುಡಿಸಿದೆ. ಒಂದು ಹಲ್ಲಿ ನನ್ನ ಮೇಲೆ ಬಂದ ಹಾಗೆ ಆಗಿತ್ತು. ನೋಡುತ್ತೇನೆ ಅದು ನನ್ನ ಮಗನ ರಬ್ಬರ್ ಹಲ್ಲಿ. ಮಡದಿ, ಮಗ ಇಬ್ಬರು ಜೋರಾಗಿ ನಗ ಹತ್ತಿದರು. ಕಡೆಗೆ ನಾನು ನಕ್ಕು, ಕಾಟ್ ಎತ್ತಿ ಆಮೇಲೆ ಸ್ವಚ್ಛ ಮಾಡಿದರೆ ಆಗುತ್ತೆ ಎಂದು ಎತ್ತಲು ಅನುವಾದೆ. ಸ್ವಲ್ಪ ಕೂಡ ಮಿಸುಗಾಡಲಿಲ್ಲ , ನನ್ನ ಮೀಸೆ ಮಾತ್ರ ಎರಡು ಬಾರಿ ಅಲುಗಾಡಿತು. ಇನ್ನೊಮ್ಮೆ "ಐಸಾ" ಎಂದು ಎತ್ತಲು ಅನುವಾದೆ. ದಪ್ ಎಂದು ಈ ದಪ್ಪದಾದ ದೇಹ ಕೆಳಗಡೆ ಬಿದ್ದಿತ್ತು. ಕಡೆಗೆ ನನ್ನನ್ನು ಎಬ್ಬಿಸಿ, ನಿಮ್ಮ ಅಪ್ಪನ ಕೈಯಲ್ಲಿ ಏನು? ಆಗುವುದಿಲ್ಲ ಎಂದು ಅಣಕಿಸಿದಳು. ಬರೀ ದೊಡ್ಡ ದೇಹ, ಒಳಗಡೆ ಏನು? ಇಲ್ಲ ಎಂದಳು. ಅವನಿಗೆ ಅರ್ಥವಾಗದಿದ್ದರೂ, ಅವಳು ನಕ್ಕೊಡನೆ ಅವನು ನಗುತ್ತಿದ್ದ. ಏನು? ಏನೆಂದು ತಿಳಿದಿದ್ದೀಯ ನನ್ನ. ನನ್ನ ಕಂಡರೆ ತುಂಬಾ ಜನರು ಹೆದುರುತ್ತಾರೆ ಗೊತ್ತಾ ಎಂದೆ. ಹೌದಾ?, ಜನರು ಜಿರಳೆ ನೋಡಿ ಕೂಡ ಹೆದರುತ್ತಾರೆ ಗೊತ್ತಾ ಎಂದಳು.


ಕಡೆಗೆ ನೀನು ಬಾ ಹೆಲ್ಪ್ ಮಾಡು ಎಂದೆ. ಅವಳು ಬಂದಳು. ಇಬ್ಬರು ಸೇರಿ ಎತ್ತಿದರು ಕಾಟ್ ಮೇಲೆ ಏಳಲೇ ಇಲ್ಲ. ಈಗ ನಾನು ನಗುತ್ತಾ ಈಗ ಏನು ಹೇಳುತ್ತಿ ಎಂದೆ. ಅಡುಗೆ ಮನೆಯಲ್ಲಿನ ಹಾಲು ಉಕ್ಕುವ ಶಬ್ದ ಕೇಳಿ ಒಳಗಡೆ ಹೋಗಿ ಬಂದಳು. ನಾನು ಇನ್ನೂ ಎತ್ತಲು ಪ್ರಯತ್ನ ಮಾಡುತ್ತಲೇ ಇದ್ದೆ. ಬಂದವಳೇ ರೀ ಎಂದು ನಗುತ್ತಾ ಅಲ್ಲಿ ನೋಡಿ ಗೋಡೆಗೆ ಅದು ಸಿಕ್ಕಿ ಹಾಕಿ ಕೊಂಡಿದೆ ಎಂದು ನಗಲು ಶುರು ಮಾಡಿದಳು. ನಾನು ಆಮೇಲೆ ಸ್ವಲ್ಪ ಸರಿಸಿ ತುಂಬಾ ಆರಾಮವಾಗಿ ಎತ್ತಿ ಇಟ್ಟೆ. ಮನೆಯ ಎಲ್ಲ ಸ್ವಚ್ಚತಾ ಕಾರ್ಯಕ್ರಮ ಮುಗಿಸಿ, ಮಡದಿ ಮಾಡಿದ ಬಿಸಿ ಬೇಳೆ ಬಾತ್ ತಿಂದು ಸಂಜೆವರೆಗೆ ನಿದ್ದೆ ಮುಗಿಸಿ ಎದ್ದೆ.


ಎದ್ದೊಡನೆ ಕೈ ಕಾಲು ಮಾತನಾಡುತ್ತಾ ಇದ್ದವು. ಹೀಗಾಗಿ ಸ್ವಲ್ಪ ಒದರುತ್ತ ಇದ್ದೆ. ಅದನ್ನು ನೋಡಿ ವರ..ವರ.. ಎಂದು ಒದರಬೇಡಿ ಎಂದಳು. ಅದಕ್ಕೆ ವರ ವರ ಎಂದು ನಾನೇಕೆ ಒದರಲಿ ಬೇಕಾದರೆ ಕನ್ಯಾ.. ಕನ್ಯಾ ಎಂದು ಕಿರುಚುತ್ತೇನೆ ಎಂದು ಹೇಳಿ ಮತ್ತೊಮ್ಮೆ ಮಂಗಳಾರತಿ ಮಾಡಿಸಿಕೊಂಡಿದ್ದೆ. ಕಾಫೀ ಕೊಡುತ್ತಾ ರೀ.. ಮುಂದಿನ ವಾರ ಅಡುಗೆ ಮನೆ ಸ್ವಚ್ಛ್ ಮಾಡೋಣ ಎಂದಳು. ನಾನು ನನ್ನ ಮಗನ ಚಿಣ್ಣರ ಹಾಡು "ವಾರಕೆ ಏಳೆ ಏಳು ದಿನ, ಆಟಕೆ ಸಾಲದು ರಜದ ದಿನ" ವನ್ನು ಬದಲಿಸಿ "ವಾರಕೆ ಶನಿವಾರ ಒಂದು ದಿನ , ಸ್ವಚ್ಛತೆಗೆ ಸಾಲದು ಈ ಒಂದು ದಿನ" ಎಂದು ಹಾಡುತ್ತಾ ಕಾಫೀ ಹಿರಿ ಮುಗಿಸಿದ್ದೆ.


ಮತ್ತೆ ಲೇಖನದ ವಿಷಯ ನೆನೆಪು ಆಗಿ ಬರೆಯುತ್ತಾ ಕುಳಿತೆ. ನಾನು ಲೇಖನವನ್ನು ಒಂದು ಪೇಜ್ ನಾದರೂ ಬರೆಯುತ್ತೇನೆ. ಇವತ್ತು ಎಷ್ಟು ಬರೆದರು ಒಂದು ಪೇಜ್ ಆದ ಹಾಗೆ ಅನ್ನಿಸಲೇ ಇಲ್ಲ. ಏಕೋ ಅನುಮಾನವಾಗಿ ಹಳೆಯ ಲೇಖನ ತೆಗೆದೆ, ಅದು ಕೂಡ ಚಿಕ್ಕದಾಗಿ ಇತ್ತು. ಒಂದೆರಡು ಲೇಖನ ಓದಿದೆ ಪೂರ್ತಿ ವಿಷ್ಯ ಇತ್ತು. ಅಷ್ಟರಲ್ಲಿ ಮಡದಿ ನಿನ್ನೆ ಇಂದ ಸ್ವಲ್ಪ ಚಿಕ್ಕದಾಗಿ ಬರುತ್ತಿದೆ ನೋಡಿ ಏನಾಗಿದೆ? ಮಾನಿಟರ್ ಎಂದಳು. ಆಮೇಲೆ ತಿಳಿಯಿತು ಅವಳು ಅದರ ಸೆಟ್ಟಿಂಗ್ ಚೇಂಜ್ ಮಾಡಿದ್ದಾಳೆ ಎಂದು. ಅದನ್ನು ಸರಿ ಮಾಡಿದ ಮೇಲೆ, ದೊಡ್ಡದಾಗಿ ಕಂಡ, ನನ್ನ ಲೇಖನದ ಮೇಲೆ ಎಲ್ಲಿಲ್ಲದ ಪ್ರೀತಿ ಉಕ್ಕಿ ಬಂತು.


ಸಂಜೆ ಮಗನಿಗೆ ಪಾರ್ಕಿಗೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದೀರಿ, ಮತ್ತೆ ಕುಟ್ಟಲು ಶುರು ಮಾಡಿದ್ದೀರ ಎಂದಳು. ಪಾರ್ಕಿಗೆ ಹೊರಟೆವು. ಕೆಳಗಡೆ ಓನರ್ "ಏನ್ರೀ ಗೋಪಾಲ್ ಚೆನ್ನಾಗಿದ್ದೀರಾ, ಬೆಳಿಗ್ಗೆ ಬೂಕಂಪ ಆಗಿತ್ತು, ಆದರೆ ಯಾವ ಚ್ಯಾನೆಲ್ ನಲ್ಲಿ ತೋರಿಸಲೇ ಇಲ್ಲ ನೋಡಿ ಎಂದು ಮುಖ ಕಿವುಚಿದರು". ನನ್ನ ಮಡದಿ ನನ್ನ ಮುಖ ನೋಡಿ ಮುಸಿ ಮುಸಿ ನಗುತ್ತಿದ್ದಳು. ಅವಳನ್ನು ನೋಡಿ ನನ್ನ ಮಗ ಕೂಡ. ಪಾರ್ಕಿಗೆ ಹೋಗಿ ಸಂಜೆ ಬರುವ ವೇಳೆಯಲ್ಲಿ ಎಸ್.ಎಲ್.ವಿ ಗೆ ತೆರಳಿ ಒಂದಿಷ್ಟು ಬಿಳಿ ಗುಳಿಗೆ (ಇಡ್ಲಿ) ನುಂಗಿ ಮನೆಗೆ ಬಂದು ಕ೦ಟ ಪೂರ್ತಿ ಊಟ ಮುಗಿಸಿ, ಈ ಶನಿವಾರಗಳು ವಾರಕೆ ಎರಡು ಬಂದರೆ ಹೇಗೆ ಎಂದು ಯೋಚಿಸುತ್ತಾ, ನಿದ್ದೆಗೆ ಜಾರಿದೆ.


ಮುಂದಿನ ಶನಿವಾರ ಏನೇನು ಕಾದಿದೆಯೋ ಗೊತ್ತಿಲ್ಲ... ಮತ್ತೆ ಬರುತ್ತೇನೆ ಆ(ಈ) ಶನಿವಾರದ ಪೂರ್ತಿ ವಿವರದೊಂದಿಗೆ....ಆ(ಈ) ಎಂದು ಬರೆದಿದ್ದೇನೆ, ಎಂದು ನನ್ನ ಮಡದಿಗೆ ಮಾತ್ರ ಹೇಳಬೇಡಿ... ಅವಳು, ಇವನಿಗೆ ಆ..ಆ..ಇ ...ಈ ಕೂಡ ಬರುವುದಿಲ್ಲ ಎಂದು ತಿಳಿದುಕೊಂಡಾಳು...:-)).

Tuesday, January 11, 2011

ಬುರುಡೆ ಪುರಾಣ ....


ಮೊನ್ನೆ ತುಂಬಾ ಕೆಲಸವಿದ್ದ ಕಾರಣ, ಆಫೀಸ್ ನಿಂದ ಸ್ವಲ್ಪ ತಡವಾಗಿ ಹೋದೆ. ಮಡದಿ, ಮಗ ಇಬ್ಬರು ನಿದ್ದೆಯಲ್ಲಿ ಇದ್ದರು. ತೊಂದರೆ ಏಕೆ? ಮಾಡಬೇಕು ಎಂದು ಅವರನ್ನು ಎಬ್ಬಿಸದೇ, ನಾನೇ ಊಟ ಮಾಡಿ, ಬೆಡ್‌ರೂಮ್ ಗೆ ಹೋಗದೇ, ಹಾಲ್ ನಲ್ಲಿ ನಿದ್ದೆಗೆ ಜಾರಿದೆ. ಹಾಸಿಗೆ ಮೇಲೆ ಒರಗಿದ ಕೂಡಲೇ, ನಿದ್ರಾ ದೇವಿಗೆ ಶರಣಾಗಿ ಬಿಟ್ಟೆ. ಮಧ್ಯ ರಾತ್ರಿ ಯಾರೋ... ನನ್ನನ್ನು ಎಬ್ಬಿಸಿದ ಹಾಗೆ ಆಯಿತು. ಆ ಕಡೆ ಒರಗಿ ಮಲಗಿಕೊಂಡೆ. ಮತ್ತೆ ಬಡಿದು ಎಬ್ಬಿಸಿದ ಹಾಗೆ ಆಯಿತು. ಕಣ್ಣು ಬಿಟ್ಟೆ, ಚಾಕು ಹಿಡಿದು ಯಾರೋ.. ನಿಂತ ಹಾಗೆ ಅನ್ನಿಸಿತು. ನನ್ನ ಉಸಿರೇ ನಿಂತ ಹಾಗೆ ಆಗಿತ್ತು. ಪಕ್ಕದಲ್ಲಿ ಬೇರೆ ಮಡದಿ ಇಲ್ಲಾ, ಇದ್ದಿದ್ದರೆ ಸ್ವಲ್ಪ ಧೈರ್ಯ ಬರಬಹುದಿತ್ತು. ಜೋರಾಗಿ ಕಿರುಚೋಣ ಎಂದುಕೊಂಡರೂ, ಭಯದಿಂದ ಮತ್ತೆಲ್ಲಿ ಚಾಕುವಿನಿಂದ ಚುಚ್ಚಿ ಬಿಟ್ಟರೆ ಕಷ್ಟ ಎಂದು, ತೆರೆದ ಬಾಯಿಯನ್ನು ಹಾಗೆ ಬಿಟ್ಟು ಹೌಹಾರಿ ಸುಮ್ಮನಾದೆ. ಮತ್ತೆ ಅವರಿಗೆ ಏನು ಬೇಕು? ಎಂದು ಕೇಳಬೇಕು ಅನ್ನುವಷ್ಟರಲ್ಲಿ ಲೈಟ್ ಹತ್ತಿತ್ತು. ನೋಡುತ್ತೇನೆ.. ನನ್ನ ಮಡದಿ ಚಾಕುವಿನೊಂದಿಗೆ. ಹೆದರಿ, ಲೇ.. ಏನೋ ಸ್ವಲ್ಪ ಕೆಲಸ ಇತ್ತು ಎಂದು ತಡವಾಗಿ ಬಂದೆ ಅಷ್ಟೇ ಎಂದೆ. ರೀ... ಅದು ಅಲ್ಲ ಎಂದಳು. ಮತ್ತಿನ್ನೇನು?. ತರಕಾರಿ ಹೆಚ್ಚಬೇಕು ತಾನೇ ನಾಳೆ ಬೆಳಿಗ್ಗೆ ಹೆಚ್ಚುತ್ತೇನೆ, ಈಗ ಮಲಗಿಕೊಳ್ಳಲು ಬಿಡು ಎಂದೆ. ರೀ ಸುಮ್ಮನೇ ಈ ಚಾಕು ತೆಗೆದು ಕೊಳ್ಳಿ ಎಂದು ಚಾಕು ಕೈಯಲ್ಲಿ ಇಟ್ಟಳು.



ಆಗ ಹಳೆಯ ಕಾಲದ ವಸ್ತುಗಳೆ ಚೆನ್ನ ಎಂದನಿಸಿತು. ಮೊದಲು ತರಕಾರಿ ಹೆಚ್ಚಲು ಇಳಿಗೆ ಉಪಯೋಗಿಸುತ್ತಿದ್ದರು. ಏನೋ? ಹೆಚ್ಚಲು ಕಷ್ಟ ಆಗಬಹುದು ಎಂದು ಹೆಣ್ಣು ಮಕ್ಕಳು ತಾವೇ ಹೆಚ್ಚಿಕೊಳ್ಳುತ್ತಿದ್ದರು. ಆದರೆ ಈಗ ಚಾಕು, ಹೆಚ್ಚಲು ನಾವೇ ಬೇಕು. ಮತ್ತೆ ಮೊದಲು ರುಬ್ಬು ಗುಂಡಿನಿಂದ ಹಿಟ್ಟು ರುಬ್ಬ ಬೇಕಿತ್ತು. ಆದರೆ ಈಗ ಗಂಡನಿಂದ ಹಿಟ್ಟು ಗ್ರೈಂಡರ್ ನಲ್ಲಿ ಹಾಕಿಸಿ ರುಬ್ಬಿಸುತ್ತಾರೆ. ರುಬ್ಬದಿದ್ದರೆ ಅವರೇ ರುಬ್ಬುತ್ತಾರೆ ನಮ್ಮನ್ನು. ಬರಿ ಸ್ವಲ್ಪ ಮಾತ್ರ ವ್ಯತ್ಯಾಸ ರುಬ್ಬು ಗುಂಡು, ರುಬ್ಬು ಗಂಡ ಅರ್ಥವಾಯಿತು ತಾನೇ?....:-))).



ಚಾಕು ಹಿಡಿದು ಅಡುಗೆ ಮನೆಗೆ ಹೊರಟೆ. ರೀ... ಅಲ್ಲಿ ಅಲ್ಲ ಬನ್ನಿ ಇಲ್ಲಿ ಎಂದು ಬೆಡ್ ರೂಮಿಗೆ ಕರೆದುಕೊಂಡು ಹೋದಳು. ನೋಡುತ್ತೇನೆ ಬೆಡ್ ರೂಮಿನಲ್ಲಿ ತುಂಬಾ ಅಲಂಕರಿಸಿದ್ದಳು. ಮತ್ತೆ "ಹ್ಯಾಪೀ ಬರ್ತ್ ಡೇ ಟು ಯೂ" ಎಂದು ಮಗ, ಮಡದಿ ಇಬ್ಬರು ಚಪ್ಪಾಳೆ ತಟ್ಟಿದರು. ಮತ್ತೆ ಎದುರಿಗೆ ದೊಡ್ಡದಾದ ಕೇಕ್ ಬೇರೆ ಇತ್ತು. ಕ್ಯಾಂಡಲ್ ಆರಿಸಿ, ಕೇಕ್ ಕಟ್ ಮಾಡಿ ಆಯಿತು. ತುಂಬಾ ಖುಷಿ ಆಯಿತು.



ತುಂಬಾ ಖುಶಿಯಿಂದ, ಮರುದಿನ ಮಂಜನಿಗೆ ನಿನ್ನೆ ರಾತ್ರಿ ನಡೆದ ನನ್ನ ಬರ್ತ್‌ಡೇ ಪುರಾಣನ್ನೇಲ್ಲಾ ಕಕ್ಕಿಬಿಟ್ಟೆ. ನೀನು ಎಷ್ಟು ಘಂಟೆಗೆ ಹುಟ್ಟಿದ್ದು ಎಂದು ಕೇಳಿದ. ನಾನು ಆರು ಎಂದೆ. ಮಂಜ ಅದಕ್ಕೆ ಇದೇನು ಸಂಸ್ಕೃತಿನೋ ರಾತ್ರಿ ದೆವ್ವ ಏಳುವ ಸಮಯದಲ್ಲಿ ಬರ್ತ್‌ಡೇ ಮಾಡಿಕೊಂಡನಂತೆ ಎಂದು ಕಿಚಾಯಿಸಿದ. ಮತ್ತೆ ನಮ್ಮ ಸಂಸ್ಕೃತಿಯಲ್ಲಿ ದೀಪ ಬೆಳಗಿ ಆಚರಿಸಿದರೆ, ನೀನು ನೋಡಿದರೆ ದೀಪ ಆರಿಸಿ ಆಚರಿಸಿಕೊಂಡೆ ಎಂದ. ಹುಟ್ಟಿದ ದಿವಸ ಚಾಕು ಕೊಡೋ ನಾವು ಎಂತಹ ಭೂಪರು ಇರಬೇಕು ಎಂದ. ನಮ್ಮ ಸಂಸ್ಕೃತಿ ನಾವೇ ಕಾಪಾಡದಿದ್ದರೆ ಇನ್ನೂ ಯಾರು ಕಾಪಡಬೇಕು ಎಂದ. ಕೆಟ್ಟಿದ್ದು ಸುಧಾರಿಸಬಹುದು, ಆದರೆ ಒಳ್ಳೆಯದೇ ಕೆಟ್ಟರೆ ಏನು? ಮಾಡಬೇಕು ಎಂದ. ಅವನು ಹೇಳುತ್ತಿದ್ದರೆ ನಾನು ಏನು? ಹೇಳಬೇಕು ಎಂದು ಯೋಚಿಸದೇ ಅವನನ್ನು ನೋಡುತ್ತಾ ಕುಳಿತಿದ್ದೆ. ಪಶ್ಚ್ಯಾತ್ಯರು ನಮ್ಮ ಯೋಗ, ಆಯುರ್ವೇದ ಎಲ್ಲವನ್ನು ಅನುಸರಿಸುತ್ತಿದ್ದಾರೆ. ಆದರೆ ನಾವು ಅವರ ಸಂಸ್ಕೃತಿ ಅನುಸರಿಸಿ ಕೆಡುತ್ತಿದ್ದೇವೆ ಎಂದ. ಆಧುನಿಕತೆ ಎಂದು ನಮ್ಮ ಹಳೆಯ ಆಚರಣೆಗಳಿಗೆ ಮಣ್ಣೆರಚುತ್ತಿದ್ದೇವೆ ಎಂದ. ಈಗಿನದು ಆಧುನಿಕತೆ, ಆದರೆ ಆಗಿನದು "ಅದು+ನೀತಿ+ಕಥೆ" ಎಂದ.



ಮತ್ತೆ ನಿನಗೆ ಗೊತ್ತಾ, ಕೆಲ ಹಳೆಯ ಕಾಲದ ಜನಗಳಿಗೆ ತಮ್ಮ ಹುಟ್ಟು ಹಬ್ಬ ಎಂದು ಸಹಿತ ಗೊತ್ತಿಲ್ಲ. ಏಕೆ? ನಮ್ಮಷ್ಟಕ್ಕೆ ನಾವೇ ಇಷ್ಟು ಮುದುಕ ಅದೇವು ಎಂದು ಆಚರಣೆ ಮಾಡಿಕೊಳ್ಳಬೇಕು ನನಗೆ ಅರ್ಥ ಆಗುತ್ತಿಲ್ಲ. ಮತ್ತೆ ತಲೆಯಲ್ಲಿ ಇನ್ನಷ್ಟು ವಿಚಾರಗಳು. 34 ಆಯಿತು ಇನ್ನೂ ಮನೆ ತೆಗೆದುಕೊಂಡಿಲ್ಲ, ಕಾರು ಹೀಗೆಲ್ಲ ಎಂದ. ಹಳೆಯ ಕಾಲದ ಜನ ಪ್ರತಿ ವಾರ 'ಗೋ ಮೂತ್ರ' ತೆಗೆದು ಕೊಳ್ಳೂತ್ತಿದ್ದರು, ಆದರೆ ಈಗಿನ ಜನ 'ಗೋ' ಅಂಡ್ ಗೇಟ್ ಸಮ್ 'ಮಾತ್ರೆ' ಎಂದು ಹೇಳುತ್ತಾರೆ ಎಂದ. ಮೊದಲಿನ ಕಾಲದಲ್ಲಿ ಹೆಣ್ಣು ಮಕ್ಕಳು ವಾಂತಿ ಮಾಡಿಕೊಂಡರೆ ಖುಷಿಯಾಗಿ ಊರಿಗೆ ಸಿಹಿ ಹಂಚುತ್ತಿದ್ದರು. ಆದರೆ, ಈಗ ರಾತ್ರಿ ಪಾರ್ಟೀ ಮಾಡಿ ಬಂದಿರಬೇಕು ಎಂದು ಅರ್ಥೈಸಿಕೊಳ್ಳುತ್ತಾರೆ ಎಂದ. ಮನೆಯಲ್ಲಿ ಮಾಡಿದ ಶೆವಿಗೆ ಬಾತ್ ತಿನ್ನುವುದಿಲ್ಲ ಹೊರಗೆ ಹೋಗಿ ಚೈನೀಸ್ ನೂಡಲ್ಸ್ ತಿನ್ನುತ್ತಾರೆ. ಮನೆಯಲ್ಲಿ ಹೊಳಿಗೆಗೆ ಹಾಲು ಹಾಕುವಾಗ ಸ್ವಲ್ಪ ಕೆನೆ ಜ್ಯಾಸ್ತಿ ಬಿದ್ದರೆ, ಆಕಾಶವೇ ಕಳಚಿ ಬಿದ್ದ ಹಾಗೆ ಆಡುವ ಜನ, ಪೀಜಾ, ಬರ್ಗರ್ ನಲ್ಲಿ ಇರುವ ಕ್ರೀಮ್ ತಿಂದು ತುಂಬಾ ಚೆನ್ನಾಗಿದೆ ಎಂದು ಹೋಗಳುತ್ತಾರೆ. ಮೊದಲಿನ ಜನ ಒಳ್ಳೆಯದಾಗಲಿ ಎಂದು ಹಾರೈಸುತ್ತಾರೆ. ಆದರೆ ಈಗಿನ ಜನ ಹೌ ಓಲ್ಡ್ ಆರ್ ಯು ಎಂದು ಕೇಳುತ್ತಾರೆ. ಮತ್ತೆ ಇನ್ನೂ ಸ್ವಲ್ಪ ಅಲ್ಲೇ ಇದ್ದರೆ, ಇನ್ನೂ ತಲೆ ತಿನ್ನುತ್ತಾನೆ ಎಂದು ಬೇಗನೆ ಜಾಗ ಖಾಲಿ ಮಾಡಿದೆ.ಆಮೇಲೆ ತಿಳಿಯಿತು ಮಂಜ ತನ್ನ ಮಡದಿಯೊಂದಿಗೆ ಜಗಳ ಮಾಡಿಕೊಂಡು ಬಂದು ನನ್ನ ತಲೆ ತಿಂದಿದ್ದ ಎಂದು.



ಅವನಿಗೆ ನನ್ನ ಬರ್ತ್‌ಡೇ ಪುರಾಣ ಹೇಳೋಕೆ ಹೋಗಿ, ನನ್ನ ಬುರುಡೆಯಲ್ಲಿ ಹುಳ ಬಿಟ್ಟುಕೊಂಡು ಬಂದಿದ್ದೆ. ಅದಕ್ಕೆ ಇದನ್ನು ಬುರುಡೆ ಪುರಾಣ ಎಂದು ಅಂದಿದ್ದು....

Wednesday, January 5, 2011

ಹೊಟ್ಟೆ ಕೆರೆಯ ಮೇಲಿನ ಕಟ್ಟೆ....

ನನ್ನ ಅಕ್ಕನ ಮಗಳ ಮದುವೆಗೆ ಎಂದು ಧಾರವಾಡಕ್ಕೆ ಹೋಗಿದ್ದೆ. ಅಲ್ಲಿ ಕೆಲ ಚಿಕ್ಕವರು ದೊಡ್ಡವರಿಗೆ ನಮಸ್ಕಾರ ಮಾಡುವ ದೃಶ್ಯ ನನಗೆ ಕಾಣಿಸಿತು. ನಾನು ಹೋದೊಡನೆಯೆ, ನನಗೆ ಅಮ್ಮ, ಇವರು ನನ್ನ ಮಾವನ ಮಗ ಎಂದು ಪರಿಚಯ ಮಾಡಿಕೊಟ್ಟರು. ಈಗ ನಾನು ಅವ್ರಿಗೆ ನಮಸ್ಕಾರ ಮಾಡಬೇಕೋ ಅಥವಾ ಅವರು ನನಗೆ ನಮಸ್ಕಾರ ಮಾಡಬೇಕೋ ಎಂಬುದು ಸೋಜಿಗದ ಸಂಗತಿ. ಕಡೆಗೆ ಅವರೇ ನನಗೆ ನಮಸ್ಕಾರ ಮಾಡಲು ಬಂದರು. ಅದಕ್ಕೆ ನನ್ನ ಅಮ್ಮ ಲೇ ಅವನು ದೊಡ್ಡವನು ಕಣೋ ನೀನೆ ನಮಸ್ಕಾರ ಮಾಡು ಎಂದು ಫರ್ಮಾನು ಹೊರಡಿಸಿದರು. ನಾನು ಮನಸಿನಲ್ಲಿ ಇದೊಳ್ಳೇ ಸಂಪ್ರದಾಯ ಎಂದು ಬಗ್ಗಿ ನಮಸ್ಕರಿಸಿದೆ.

ಆಮೇಲೆ ನಾನು ಅಮ್ಮನಿಗೆ, ನಾನು ಯಾರಿಗೂ ನಮಸ್ಕಾರ ಮಾಡುವುದಿಲ್ಲ... ನನಗೆ ಯಾರು ಮಾಡುವುದು ಬೇಡ ಎಂದು ಹೇಳಿದೆ. ಅದು ಹೇಗೆ? ಆಗುತ್ತೆ ನೀನು ನಮಸ್ಕಾರ ಮಾಡಲೇ ಬೇಕು ಎಂದರು. ನಮಸ್ಕಾರ ಮಾಡಿ ಮಾಡಿ ಸಾಕಾಗಿತ್ತು. ಹೊಟ್ಟೆ ತಾಳ ಅನ್ನುವುದಕ್ಕಿಂತ ತಮಟೆ ಬಾರಿಸುತಿತ್ತು. ಕೆಲವೊಮ್ಮೆ ಹಸಿವು ಆದಾಗ ನಾದಮಯವಾಗಿ ಹಾಡುವುದು ಕೂಡ, ಸಧ್ಯ ಆಕಾಶವಾಣಿಯವರಿಗೆ ಗೊತ್ತಿಲ್ಲ. ಚಿಕ್ಕವನಿಗಿದ್ದಾಗ ಲೌಡ್ ಸ್ಪೀಕರ್ ಏನಾದರೂ ನುಂಗಿದ್ದೆ ಅಂತ ಕಾಣುತ್ತೆ. ಅಕ್ಕ ಪಕ್ಕದವರಿಗೂ ನನ್ನ ಹೊಟ್ಟೆ ಹಾಡಿದ್ದು ತಿಳಿಯುತ್ತೆ. ಎಲ್ಲರಿಗಿಂತ ಬೇಗನೆ ತಿಂಡಿಗೆ ಹೋಗಿ ನಿಂತೆ. 20 ಬಿಳಿ ಗುಳಿಗೆ (ಇಡ್ಲಿ) , ಎರಡು ಕೇಸರಿ ಬಾತ ತಿಂದೆ. ಹೊಟ್ಟೆ ತುಂಬಿದ ಹಾಗೆ ಅನ್ನಿಸಲೇ ಇಲ್ಲ. ಹೊಟ್ಟೆ ತುಂಬಾ ಜಾಗ ಇರುವದರಿಂದ ಇಡ್ಲಿ, ಕೇಸರಿ ಬಾತ್ ಅಲ್ಲಿ.. ಇಲ್ಲಿ.. ಜೋಗಿಂಗ್ ಮಾಡುತ್ತಿರಬಹುದೋ ಏನೋ. ಮತ್ತೆ ಹೋಗಿ ಇಡ್ಲಿ ಎಂದೆ. ಅಲ್ಲಿ ಇಡ್ಲಿ ಹಾಕುವ ಮನುಷ್ಯ ಖಾಲಿ ಪಾತ್ರೆ ನೋಡಿ, ಎಲ್ಲ ಇಡ್ಲಿ ನಾನೇ ಖಾಲಿ ಮಾಡಿದ್ದೇನೋ ಎಂಬ ರೀತಿಯಲ್ಲಿ, ನನ್ನನ್ನು ದುರುಗುಟ್ಟಿ ನೋಡಿದ. ಮತ್ತೆ ಹತ್ತು ಇಡ್ಲಿ ತಂದು ಹಾಕಿದ. ಅದರಲ್ಲಿ ಒಂದು ಇಡ್ಲಿ ಮುರಿದಿತ್ತು. ಅದನ್ನು ನೋಡಿ ನನಗೆ ತುಂಬಾ ಕೋಪ ಬಂದು. ಇದೇನು ಸರ್ ಇಡ್ಲಿ ಯಾರೋ ತಿಂದಿರೋ ಹಾಗಿದೆ ಎಂದು ತಮಾಷೆ ಮಾಡಿದೆ. ಓ... ಅದಾ ತೆಗೆಯುವ ಸಮಯದಲ್ಲಿ ಮುರಿದಿದೆ ಎಂದು ನಗುತ್ತಾ ನಿಂತ. ನಾನು ಮತ್ತೊಂದು ಇಡ್ಲಿ ಹಾಕುತ್ತಾನೆ ಎಂದು ಎಣಿಸಿದರೆ ಹಾಕಲೆ ಇಲ್ಲ. ಮತ್ತೆ ಎರಡು ಲೋಟ ಕಾಫೀ ಕುಡಿದು ಜಾಗ ಖಾಲಿ ಮಾಡಿದೆ.

ಬೇಗನೆ ಆರಕ್ಷತೆ, ಊಟ ಮುಗಿಸಿ ಟ್ರೈನ್ ಹತ್ತಿದೆ. ಟ್ರೈನ್ ಹೆಸರು ಜನಶತಾಬ್ದಿ ಅನ್ನುವುದಕ್ಕಿಂತಲೂ ಜನಾಹಿತಾಬ್ದಿ.. ಟ್ರೈನ್ ನಲ್ಲಿ ಐದೈದು ನಿಮಿಷಕ್ಕೆ ತಿಂಡಿ ಕಾಫೀ ಬರೋದು. ಆದರೂ ಈ ಬಾರಿ ಏನೂ? ತಿನ್ನಬಾರದು ಎಂದು ತೀರ್ಮಾನಿಸಿ ಬಂದಿದ್ದೆ. ಆದರೂ ಎಲ್ಲಾ ಸಪ್ಲೈಯರ್ ನನ್ನ ಹೊಟ್ಟೆ ನೋಡಿ, ಸರ್.. ಇಡ್ಲಿ ಬೇಕಾ?, ದೋಸೆ ಬೇಕಾ? ಎಂದು ಕೇಳುತ್ತಾ ಹೋಗುತ್ತಿದ್ದರು. ಬೇಡ.. ಬೇಡ.. ಎಂದು ಹೇಳಿ ಸಾಕಾಗಿ ಮತ್ತೆ ಹೊಟ್ಟೆ ತಾಳಮಯವಾಗಿ ನಾದ ಲಹರಿ ಶುರು ಮಾಡಿತ್ತು. ಪಕ್ಕದ ಸೀಟ್ ನಲ್ಲಿ ಇರುವ ಮನುಷ್ಯ ಎದ್ದು ಪಿಳಿ.. ಪಿಳಿ.. ಎಂದು ಅತ್ತ.. ಇತ್ತ.. ನೋಡಿ, ಮತ್ತೆ ಸುಮ್ಮನೇ ನಿದ್ದೆಗೆ ಜಾರಿದ. ಹೀಗೆ ಒಮ್ಮೆ ಪಕ್ಕದ ಮನೆಯ ಆಂಟಿ, ನನ್ನ ಹೊಟ್ಟೆ ಸಂಗೀತ ಕೇಳಿ, ನಲ್ಲಿಯಲ್ಲಿ ನೀರು ಬಂದಿದೆ ಎಂದು, ಕೊಡ ತೆಗೆದುಕೊಂಡು ಹೋಗಿ ನಿರಾಸೆಯಲ್ಲಿ ತೇಲುತ್ತ ಬಂದಿದ್ದರು ಪಾಪ...

ಅಷ್ಟರಲ್ಲಿ ಹರಿಹರ ಸ್ಟೇಶನ್ ಬಂತು ನನ್ನ ಪಕ್ಕದ ಸೀಟ್ ಗೆ ಒಂದು ಸುಂದರ ಹುಡುಗಿ ಬಂದು ಕುಳಿತಳು. ನಾನು ಸುಮ್ಮನೇ ನಿದ್ದೆ ಮಾಡಿದರೆ ಆಗುತ್ತೆ ಎಂದು ನಿದ್ದೆ ಮಾಡಹತ್ತಿದ್ದೆ. ಸ್ವಲ್ಪ ಸಮಯದ ನಂತರ ನನ್ನ ಭುಜ, ಹೊಟ್ಟೆ ಸ್ಪರ್ಶಿಸಿದ ಹಾಗೆ ಅನ್ನಿಸಿತು. ಆಹಾ.. ಹುಡುಗಿ ಎಂದು ಸುಮ್ಮನೇ ಕಣ್ಣು ಮುಚ್ಚಿ ಮಲಗಿಕೊಂಡಿದ್ದೆ. ಮತ್ತೆ ಅದೇ ಮಿಸುಗಾಟ... ಕಡೆಗೆ ಕಣ್ಣು ತೆಗೆದೆ. ನನ್ನದೇ ತದ್ರೂಪ ಎಂದನಿಸಿ ಬಿಟ್ಟಿತು. ಆಮೇಲೆ ತಿಳಿಯಿತು ಅವರು ಆ ಹುಡುಗಿಯ ಅಪ್ಪ. ಅವರಿಬ್ಬರೂ ಸೀಟ್ ಚೇಂಜ್ ಮಾಡಿದ್ದಾರೆ ಎಂದು.

ಕಡೆಗೆ ಇನ್ನೂ ಈ ಸಂಗೀತ ಕೇಳಲು ಆಗುವುದಿಲ್ಲ ಎಂದು ಯೋಚಿಸಿ, ದೋಸೆ ತೆಗೆದುಕೊಂಡೆ. ಸಪ್ಲೈಯರ್ ದೋಸೆನಾ ಸ್ನ್ಯಾಕ್ ಟ್ರೇ ಬದಲು ಹೊಟ್ಟೆ ಮೇಲೆ ಇಟ್ಟು ದುಡ್ಡು ತೆಗೆದುಕೊಂಡು ಹೋದ. ಮತ್ತೆ ಇಡ್ಲಿ, ವೆಜಿಟೆಬಲ್ ಪಲಾವ್, ವೇಜ್ ಕಟ್ಲೇಟ್ ...ಕಾಫೀ,ಟೀ,ಟೊಮ್ಯಾಟೋ ಸೂಪ್ ಎಲ್ಲವೂ ಸ್ವಾಹ ಮಾಡಿದ್ದೆ. ಕಡೆಗೆ ಸಪ್ಲೈಯರ್ ನನ್ನನ್ನು ಕೇಳದೇ ಒಂದು ಪ್ಲೇಟ್ ಇಟ್ಟು ಹೋಗಿಬಿಡುತ್ತಿದ್ದ. ಇನ್ನೂ ಸ್ವಲ್ಪ ಅಲ್ಲೇ ಇದ್ದರೆ, ಬಾಯಲ್ಲಿ ತುರುಕಿ, ಕಿಸಿಯಿಂದ ದುಡ್ಡು ತೆಗೆದುಕೊಂಡು ಹೋಗುವ ಆಸಾಮಿ...

ಮತ್ತೆ ಹಲವು ಬಾರಿ ನನ್ನ ಮಡದಿಗೆ ಊಟದ ಸಮಯದಲ್ಲಿ, ನಾನು ಸಂಜೆಗೆ ತಿಂಡಿ ಏನೇ? ಎಂದು ಕೇಳಿದ್ದು ಇದೆ. ಅದಕ್ಕೆ ನನ್ನ ಮಡದಿ ಮುಸುರಿ ಕೈ ಎಂದು ಯೋಚಿಸದೇ ಹಣಿ.. ಹಣಿ.. ಗಟ್ಟಿಸಿ ಕೊಳ್ಳುತ್ತಾಳೆ. ಇದಕ್ಕೆ ಇರಬೇಕು ನನ್ನ ಮಡದಿ ನಿಮ್ಮ "ಹೊಟ್ಟೆ ಕೆರೆಯ ಮೇಲಿನ ಕಟ್ಟೆ" ಎಂದು ಅನ್ನುತ್ತಿದಿದ್ದು. ಮತ್ತೆ ಅಮ್ಮ ನೀನು "ಕಸಾ ತಿನ್ನುವವನು, ನಿನಗೆ ತುಸಾ ಏನು ಈಡು" ಎಂದು ಹೇಳುತ್ತಾರೆ.

ಮತ್ತೆ ಬೆಂಗಳೂರು ಸ್ಟೇಶನ್ ಬಂತು. ಮನೆಗೆ ಹೋದವನೆ ಬಹಿರ್ದೇಸೆಗೆ ಹೋಗಬೇಕು ಎಂದು ಅಂದುಕೊಂಡಾಗ, ಮಗ ಟು.. ಟು.. ಎಂದ, ನಾನು ಆಯಿತು ಎಂದು, ಅವನ ಚಡ್ಡಿ ಕಳೆಯುತ್ತಿದ್ದೆ. ಅಷ್ಟರಲ್ಲಿ ನನ್ನ ಮಡದಿ ರೀ ಅವನು ನಿಮ್ಮ ಜೊತೆ ಚಾಳಿ ಬಿಟ್ಟಿದ್ದಾನೆ ಎಂದು ಹೇಳುತ್ತಿದ್ದಾನೆ ಎಂದಳು. ಕಡೆಗೆ ಸರಾಗವಾಗಿ ನನ್ನ ಕೆಲಸ ಮಾಡಿ ಬಂದು ಮತ್ತೆ ಊಟಕ್ಕೆ ಹಾಜಾರ್ ಆದೆ.

ಅದೇನೋ ಗೊತ್ತಿಲ್ಲ, ದೇವರು ನನಗೆ ಸಾಕಷ್ಟು ತಿನ್ನ'ಲಿ' ಎಂಬ 'ವರ' ಕೊಟ್ಟು ಈ "ಲಿವರ್" ಕರುಣಿಸಿದ್ದಾನೋ ಗೊತ್ತಿಲ್ಲ... ಇನ್ನೂ ಡೌಟ್ ಪಡುವ ಅವಶ್ಯಕತೆ ಇಲ್ಲ. ಇಷ್ಟೊತ್ತು ನಿಮ್ಮ ತಲೆ ತಿಂದಿದ್ದೇನೆ...ಆದರೂ ಹೊಟ್ಟೆಯಲ್ಲಿ ಸ್ವಲ್ಪ ತಾಳ ಹಾಕುತ್ತಿದ್ದೆ, ಮತ್ತೇನಾದರೂ ಸಿಗುತ್ತಾ ಎಂದು ಫ್ರಿಡ್ಜ್ ತೆಗೆದೆ....