Saturday, August 27, 2011

ಅತಿಥಿ ದೇವೋಭವ ....

ಏನ್ರೀ? ಇದು ನಿಮ್ಮ ಸಾಮಾನುಗಳನ್ನು ಹೀಗೆ ಇಟ್ಟುಕೊಂಡರೆ ಮನೆಯಲ್ಲಿ ಹುಳ - ಹುಪ್ಪಡಿ ಬರುತ್ತವೆ ಎಂದು ಬೈದಳು ಮಡದಿ. ಅದಕ್ಕೆ ನಾನು ಅವು ಏನು? ಗೆಸ್ಟಾ?, ಬಂದರೆ ಬರಲಿ ಬಿಡು ನಿನಗೇನೂ ಕಷ್ಟ ಎಂದೆ. ಗೆಸ್ಟ್ ಬರುವವರಿದ್ದರೆ ಮಾತ್ರ ಮನೆ ಸ್ವಚ್ಚವಾಗಿ ಇಡಬೇಕಾ?, ಆಯಿತು ಬಿಡಿ ಹಾಗೆ ಬಿದ್ದಿರಲಿ ನನಗೇನೂ, ಎಷ್ಟೇ ಆದರೂ ಅವು ನಿಮ್ಮ ಸಂಬಂಧಿಕರು(ಗೆಸ್ಟ್) ಅಲ್ಲವೇ ಎಂದಳು. ಅಷ್ಟರಲ್ಲಿ ನನ್ನ ಪುಸ್ತಕದ ಒಳಗಿಂದ ಒಂದು ಜಿರಲೆ ತನ್ನ ಮೀಸೆ ತೋರಿಸುತ್ತ ಹೊರಗಡೆ ಬಂತು. ಪಾಪ ಅದಕ್ಕೂ ಕೇಳಿಸಿರಬೇಕು. ನಿಮಗಿಂತ ಇದೆ ವಾಸಿ ನೀವು ಪುಸ್ತಕ ತಂದು ಒಟ್ಟುತ್ತಿರಿ..ಅದನ್ನು ಓದಲು ಪಾಪ ನಿಮ್ಮ ಸಂಬಂಧಿ ಕಷ್ಟ ಪಡುತ್ತೇ ಎಂದು ವ್ಯಂಗದ ಮಾತು ಆಡಿ ಹೊರಟು ಹೋದಳು. ರಕ್ತ ಸಂಬಂಧಿ ಖಂಡಿತಾ ಅಲ್ಲ ನನ್ನ ರಕ್ತ ಕೆಂಪು ಅದರ ರಕ್ತ ಬಿಳಿ. ಬಿಳಿ ರಕ್ತ ಕಣಗಳು ಮನುಷ್ಯನಲ್ಲಿ ಇರುತ್ತವೆ ಎಂದು ಓದಿದ ನೆನಪು. ಆದರೆ ಸಂಬಂಧಿ ಆಗುವಷ್ಟು ಇವೆ ಎಂದು ಹೇಳಿದ್ದು ಅರಗಿಸಿ ಕೊಳ್ಳಲಾಗಲಿಲ್ಲ.

ಅದು ನಿರ್ಭಯದಿಂದ ನನ್ನ ಪುಸ್ತಕಗಳ ಮೇಲೆ ನಡೆದಾಡುತ್ತಿರುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದೆನಿಸಿ ಅದನ್ನು ಹೊಡೆಯಲು ಪೊರಕೆ ತೆಗೆದುಕೊಂಡು ಬರುವಷ್ಟರಲ್ಲಿ ಮಾಯವಾಗಿತ್ತು. ಕಡೆಗೆ ಎಲ್ಲ ಪುಸ್ತಕಗಳನ್ನು ಹೊಂದಿಸಿ ಇಟ್ಟೆ. ಮರೆಯಲ್ಲಿ ಇದ್ದ ಜಿರಲೆ ಮತ್ತೆ ಹೊರಬಂತು. ಈ ಬಾರಿ ಅದನ್ನು ತಿಥಿ ಮಾಡಿ ಅತಿಥಿಯನ್ನು ಮೀಸೆಯಿಂದ ಹಿಡಿದು ಹೊರಗಡೆ ಎಸೆದು ಬಂದೆ.

ಯಾವುದೇ ದೇವರು ಜಿರಳೆಯನ್ನು ವಾಹನ ಮಾಡಿಕೊಳ್ಳದೆ ಇದ್ದದ್ದಕ್ಕೆ, ನಾನು ಎಲ್ಲಾ ದೇವರಿಗೆ ತುಂಬಾ ಧನ್ಯವಾದ ಹೇಳಲೇಬೇಕು. ಏಕೆಂದರೆ, ಮಹಾಭಾರತದಲ್ಲಿ ಆದ ಮಾರಣಹೋಮಕ್ಕಿಂತ, ಒಂದಿಷ್ಟು ಜಾಸ್ತಿ ಅನ್ನುವಷ್ಟು ಜಿರಲೆ ಸಂಹಾರ ಮಾಡಿದ ಕೀರ್ತಿ ನನಗೆ ಸಲ್ಲುತ್ತೆ. ಅದೆಲ್ಲದರ ಪಾಪದ ಜೊತೆಗೆ ಜಿರಲೆ ವಾಹನ ಮಾಡಿಸಿಕೊಂಡ ದೇವರು ಕೂಡ ನನಗೆ ಶಾಪ ಹಾಕುತ್ತಿದ್ದರು. ಇದೆ ಕಾರಣಕ್ಕಾಗಿ ನಮ್ಮ ಇಲಿ ಮಹಾಶಯನಿಗೆ ಪೂರ್ತಿ ಸ್ವಾತಂತ್ರ ನಮ್ಮ ಮನೆಯಲ್ಲಿ ಇದೆ. ನಾನು ಕಾಲಿಡದ ಜಾಗಕ್ಕೂ ಕೂಡ ನಮ್ಮನೆ ಇಲಿ ಮರಿಗಳು ಓಡಾಡುತ್ತವೆ. ಮೊದಮೊದಲು ಜಿರಲೆ ಕಂಡ ಕೂಡಲೇ ಚೀರಲು ಶುರು ಮಾಡುತ್ತಿದ್ದೆ. ಆಮೇಲೆ ಜಿರಲೆ ನನಗೆ ಒಂದು ಚಿಲ್ಲರೆ ಪ್ರಾಣಿಯಾಗಿ ಕಾಣಿಸತೊಡಗಿತು.


ನಾನು ಕಲಿತ ಕೆಲ ವಿಧ್ಯೆ ಪ್ರದರ್ಶಿಸಬೇಕು ಎಂದು ಮಡದಿಯ ಬಳಿ ಬಂದು ಜಿರಲೆಗೆ ಮೀಸೆ ಹೇಗೆ ಉಪಯೋಗಕ್ಕೆ ಬರುತ್ತೆ ಹೇಳು ಎಂದು ಕೇಳಿದೆ. ಅದಕ್ಕೆ ಮಡದಿ ಅದನ್ನು ಸಾಯಿಸಿದ ಮೇಲೆ ಅದನ್ನು ಎತ್ತಿ ಹಿಡಿದು ಬಿಸಾಡುವುದಕ್ಕೆ ಎಂದು ಹೇಳಿದಳು. ಅದಲ್ಲಾ ಕಣೇ ಏಕೆ? ಇರುತ್ತೆ ಹೇಳು ಎಂದೆ. ಮತ್ತೆ ಯೋಚಿಸಿ, ಅದು ಶೇವಿಂಗ್ ಮಾಡಿಕೊಂಡಿರಲ್ಲ ಅದಕ್ಕೆ ಇರುತ್ತೆ ಎಂದು ಹೇಳಿ ನಗಹತ್ತಿದಳು. ನಾನು ಅದರ ಮೀಸೆಯಿಂದ ಅದು ಆಹಾರ ಹುಡುಕುತ್ತೆ, ಮತ್ತು ಅದರಿಂದ ಹೆಣ್ಣು ಜಿರಲೆಗಳನ್ನು ಆಕರ್ಷಿಸಲು ಉಪಯೋಗಿಸುತ್ತೆ ಎಂದು ಹೇಳಿದೆ. ಓ ಹಾಗಾ.. ಎಂದು ರಾಗ ಎಳೆದು, ಹೇಗೆ ಇದ್ದರೂ ಇಷ್ಟು ಸ್ವಚ್ಚ ಮಾಡಿದ್ದೀರಾ, ಪೂರ್ತಿ ಮನೆ ಸ್ವಚ್ಚ ಮಾಡಿಬಿಡಿ ಮೀಸೆ ಹೊತ್ತ ಗಂಡಸರೇ...ನಾನು ಅಡುಗೆ ಮಾಡುತ್ತೇನೆ ಎಂದಳು ಮಡದಿ. ಪೂರ್ತಿ ಮನೆ ಸ್ವಚ್ಚ ಮಾಡುವ ಸಮಯದಲ್ಲಿ ಮತ್ತಷ್ಟು ಮಾರಣಹೋಮ ನಡೆಯಿತು. ಮನೆಯಲ್ಲಿ ತುಂಬಾ ಧೂಳು ಇದ್ದಂದರಿಂದ ಸ್ವಲ್ಪ ನೆಗಡಿ ಆಯಿತು. ಹೀಗಾಗಿ ಸಂಜೆ ಡಾಕ್ಟರ ಬಳಿ ಹೋಗುವ ಪರಿಸ್ತಿತಿ ಬಂತು.


ಡಾಕ್ಟರ ಎಲ್ಲ ಪರೀಕ್ಷಿಸಿ ಒಂದಿಷ್ಟು ಮಾತ್ರೆ ಕೊಟ್ಟರು. ತೆಗೆದುಕೊಂಡು ಮನೆಗೆ ಬಂದೆ. ಊಟವಾದ ಮೇಲೆ ಹಾಗೆ ಮಲಗಿಕೊಳ್ಳುವ ಸಮಯದಲ್ಲಿ ಜ್ಞ್ಯಾಪಕಕ್ಕೆ ಬಂತು ಮಾತ್ರೆ ತೆಗೆದುಕೊಂಡಿಲ್ಲವೆಂದು. ಮಡಿದಿಗೆ ಒದರಿ ಹೇಳಿದೆ ಮಾತ್ರೆ ತೆಗೆದುಕೊಂಡು ಬಾ ಎಂದು. ಅವಳು ಮಾತ್ರೆ ತೆಗೆದುಕೊಳ್ಳುವಷ್ಟರಲ್ಲಿ ಕರೆಂಟ್ ಹೋಯಿತು. ಅವಳು ತೆಗೆದುಕೊಂಡು ಬಂದು ಕೊಟ್ಟಳು. ಅದನ್ನು ಹಿಡಿದುಕೊಂಡು ಕುಳಿತಿದ್ದೆ. ಅವಳು ನೀರು ತರಲು ಹೋದಳು. ನೀರು ತಂದು ಕೊಟ್ಟಳು. ಅಷ್ಟರಲ್ಲಿ ಮತ್ತೆ ಕರೆಂಟ್ ಬಂತು. ಅವಳು ನನ್ನನು ನೋಡಿ ಜೋರಾಗಿ ನಗಹತ್ತಿದಳು. ನಾನು ನನ್ನ ಕೈಯಲ್ಲಿ ಇದ್ದದ್ದು ನೋಡಿ ನನಗೆ ಗಾಬರಿ, ಏಕೆಂದರೆ? ಅದು ಡಾಕ್ಟರ ಕೊಟ್ಟ ಮಾತ್ರೆ ಇರಲಿಲ್ಲ. ಕ್ಯಾಪ್ಸುಲ್ ಹಾಗೆ ಇದ್ದ ನಮ್ಮ ಸಂಬಂಧಿ ಬಿಟ್ಟು ಹೋದ ಗಿಫ್ಟ್. ಅದೇ ... ಅದರ ಕ್ಯಾಪ್ಸುಲ್ ಗಾತ್ರದ ಜಿರಳೆ ಮೊಟ್ಟೆ. ಸಧ್ಯ ಸ್ವಲ್ಪದರಲ್ಲೇ ಬಚಾವ ಅದನ್ನು ಬಿಸಾಡಿ ಮಾತ್ರೆ ತೆಗೆದುಕೊಂಡು, ನನ್ನ ಪ್ರೀತಿಯ ಶ್ರೀ ರಾಮನನ್ನು ನೆನೆದು ನಿದ್ದೆಗೆ ಜಾರಿದೆ.

Wednesday, August 24, 2011

ತರ್ಲೆ ಮಂಜನ ಫ್ರೆಂಡ್ಶಿಪ್ ಪುರಾಣ....

ಮಂಜನ ಮನೆಗೆ ಹೋಗಿದ್ದೆ. ನಾನು ಫ್ರೆಂಡ್ಶಿಪ್ ಡೇ ವಿಶ್ ಮಾಡಲು, ನಾನು ವಿಶ್ ಮಾಡಬೇಕು ಎಂದು ಅನ್ನುಕೊಳ್ಳುವಷ್ಟರಲ್ಲಿ, ಸುಬ್ಬ ಬಂದವನೇ "ಹ್ಯಾಪಿ ಫ್ರೆಂಡ್ಶಿಪ್ ಡೇ" ಎಂದು ನನಗೆ ಮತ್ತು ಮಂಜನಿಗೆ ಕೈ ಕುಲುಕಿದ. ಮಂಜ ಸಿಟ್ಟಿನಿಂದ ಏನೋ? ಇದು ಫ್ರೆಂಡ್ಶಿಪ್ ಡೇ ಅಂತೆ. ಗೆಳೆತನಕ್ಕೆ ಕೂಡ ಒಂದು ದಿನ ಬೇಕಾ?, ಹಾಗಾದ್ರೆ ಗೆಳೆತನ ಅನ್ನುವುದು ಒಂದೇ ದಿನಕ್ಕೆ ಸೀಮಿತನಾ?. ಮೊದಲು, ನಾವೆಲ್ಲ ಗೆಳೆಯರು ದಿನವು ಸೇರುತ್ತಿದ್ದೆವು. ಗೆಳೆಯರ ಒಂದು ದೊಡ್ಡ ಅಡ್ಡ ಇರುತಿತ್ತು. ಆದರೆ ಈಗ ಅವರ ಅಡ್ರೆಸ್ ನೆನಪು ಆಗುವುದು ವರ್ಷದಲ್ಲಿ ಒಂದು ದಿನ ಮಾತ್ರ. ಫ್ರೆಂಡ್ಶಿಪ್ ಎನ್ನುವ ಶಿಪ್ ಮುಣುಗೋದು ಗ್ಯಾರಂಟೀ. ನೋಡುತ್ತಾ ಇರು ಮುಂದೊಂದು ದಿನ ಆಫೀಸ್ ನಿಂದ ಹಸಿದು ಬಂದ ಗಂಡನಿಗೆ ತಿಂಡಿ ಕೊಡದೆ ಇದ್ದರೂ, ಹಸ್ಬಂಡ್ ಡೇ ಎಂದು ಕೂಡ ಬರುತ್ತೆ. ಗಂಡನ ದುಡ್ಡಿನಿಂದ ಗುಂಡಿನ ಪಾರ್ಟಿ ಬೇರೆ ಇರುತ್ತೆ ಎಂದ. ಅಷ್ಟರಲ್ಲಿ ಮಂಜನ ಮಡದಿ ಒಳಗಿನಿಂದ ಬಂದು ಮೂವರಿಗೂ ತಿಂಡಿ ಕೊಟ್ಟು, ಮಂಜನಿಗೆ ಮಾತ್ರ ಟೇಬಲ್ ಮೇಲೆ ಕುಕ್ಕಿ ಹೋದಳು. ಸಧ್ಯ ನಾನು ವಿಶ್ ಮಾಡದೇ ಬಚಾವ್ ಎಂದು ಕೊಂಡೆ.

ಮತ್ತೆ ತಿಂಡಿ ತಿನ್ನುತ್ತ, ಮೊದಲು ನಿನ್ನಂತಹ ಉಡಾಳ ವಿದ್ಯಾರ್ಥಿಗಳು ಶಿಕ್ಷಕರ ದಿನಾಚರಣೆಯನ್ನು, ಸಿಕ್ಕ ಸಿಕ್ಕವರ ದಿನಾಚರಣೆ ಎಂದು ಎಲ್ಲರಿಗು ಹೊಡೆಯುತ್ತ ಹೋಗುತ್ತಿದ್ದೀರಿ ಎಂದ. ನನಗೆ ನಗು ತಡಿಯಲು ಆಗಲೇ ಇಲ್ಲ, ಏಕೆಂದರೆ, ಹಾಗೆ ಮೊದಲು ಮಾಡಿದ್ದು ಮಂಜನೆ. ನಮ್ಮ ಸಂಸ್ಕೃತಿಯಲ್ಲಿ ಪ್ರತಿಯೊಂದು ದಿನಕ್ಕೂ ಒಂದು ಹಿನ್ನಲೆ ಇರುತ್ತೆ. ಆದರೆ ಇವುಗಳಿಗೆ ಯಾವ ಹಿನ್ನಲೆ ಎಂದು ತಿಳಿಯದೆ ಇದ್ದರೂ, ಅದನ್ನು ಆಚರಿಸುವ ಮಹಾ ಪಂಡಿತರು ಜ್ಯಾಸ್ತಿ ಎಂದ. ಮತ್ತೆ ಅಷ್ಟರಲ್ಲಿ ಮಂಜನ ಮಡದಿ ಬಂದು ನೀರು ಟೇಬಲ್ ಮೇಲೆ ಕುಕ್ಕಿ ಹೋದಳು. ಅವಳ ಚಲನ-ವಲನ ನೋಡಿ, ಮೊದಲೇ ಮಂಜನಿಗೆ ಏನೋ ಪಾಠ ಆಗಿದೆ ಎಂದು ಅನ್ನಿಸಿತು. ಏನು? ತಂಗ್ಯಮ್ಮನಿಗೆ ತುಂಬಾ ಕೋಪ ಬಂದಿರೋ ಹಾಗಿದೆ ಎಂದು ಮಂಜನಿಗೆ ಕೇಳಿದೆ. ಏನು? ಇಲ್ಲ ನಿನ್ನೆ ರಾತ್ರಿ ಇಂದ ಹೀಗೆ ಸಿಟ್ಟು ಮಾಡಿಕೊಂಡಿದ್ದಾಳೆ ಎಂದ. ನೀನೆ ಏನೋ? ಕಿಟಲೆ ಮಾಡಿರಬೇಕು ಎಂದೆ. ನಾನೇನು ಮಾಡಿದ್ದೇನೆ ಅವಳಿಗೆ ಬೇಕಾಗಿದ್ದು ಎಲ್ಲವನ್ನು ಕೊಡಿಸಿದ್ದೇನೆ ಎಂದ. ಅವಳು ಪಿಜ್ಜಾ ತಿನ್ನುತ್ತೇನೆ ಎಂದಳು. ಅದನ್ನು ಸಹಿತ ಕೊಡಿಸಿದ್ದೇನೆ. ನೋಡು ನಾವು ಹವಾಗುಣಕ್ಕೆ ಅನುಗುಣವಾಗಿ ನಮ್ಮ ಆಹಾರ ಪದ್ದತಿಯನ್ನು ಅನುಸರಿಸುತ್ತೇವೆ. ಹವಾಗುಣ ಬದಲಾದಂತೆ ಅಲ್ಲಿಯ ಆಹಾರ ಪದ್ದತಿಯನ್ನು ನಾವು ಅನುಸರಿಸ ಬೇಕಾಗುತ್ತೆ. ಹೇಗೆಂದರೆ, ಉತ್ತರ ಕರ್ನಾಟಕದ ಜನ ಅಲ್ಲಿಯ ಹವಾಗುಣಕ್ಕೆ ಅನುಗುಣವಾಗಿ ಜೋಳದ ರೊಟ್ಟಿ, ಇಲ್ಲಿಯ ಜನ ರಾಗಿ ಮುದ್ದೆ ಹೀಗೆ...ಇಲ್ಲದೆ ಇದ್ದರೆ ನಮ್ಮ ಹಾವ-ಭಾವ ಬದಲಾಗುವುದು. ಅದರೂ ಕೂಡ ನಾನು ಏನೂ ಮಾತನಾಡದೆ ಪಿಜ್ಜಾ ಕೊಡಿಸಿದ್ದೇನೆ ಮತ್ತೇಕೆ ಸಿಟ್ಟು ನನಗೆ ಗೊತ್ತಿಲ್ಲ ಎಂದ.

ಅಷ್ಟರಲ್ಲಿ ಮಂಜನ ಮಡದಿ ಸಾವಿತ್ರಿ ಒಳಗಡೆಯಿಂದ ಬಂದು ನಾನು ಎಷ್ಟು ದೇವರನ್ನು ಬೇಡಿಕೊಳ್ಳ ಬೇಕೋ ತಿಳಿಯದಾಗಿದೆ ನೋಡಿ, ಎಂದು ನನಗೆ ಹೇಳಿದಳು. ಅದಕ್ಕೆ ಮಂಜ ನಾನು ಹೇಳುತ್ತೇನೆ. ಒಬ್ಬ ದೇವರಿಗೆ ಹರಕೆ ಹೊತ್ತರೆ ಖಂಡಿತ ನೆರವೆರುತ್ತೆ ಎಂದ. ಯಾರು ಆ ದೇವರು ಎಂದು ಬಾಯಿ ಬಿಟ್ಟು ಕೇಳಿದೆ. ಮತ್ತ್ಯಾರು ಪತಿ ದೇವ್ರು ಎಂದು ಹೇಳು ನಿಮ್ಮ ತಂಗ್ಯಮ್ಮನಿಗೆ ಎಂದು ಜೋರಾಗಿ ನಗ ಹತ್ತಿದ. ಈ ನಗುವುದೊಂದು ಗೊತ್ತು ನಿಮಗೆ. ನಿನ್ನೆ ಒಂದು ಹುಡುಗಿ ನೋಡಿ ನಗುತ್ತಿದ್ದರು ಎಂದಳು. ಅಷ್ಟಕ್ಕೇ ಮಂಜ ಲೇ... ನಾನೇನು ಹುಡುಗರನ್ನು ನಗಬೇಕಿತ್ತಾ?, ಹಾಗೆ ಮಾಡಿದರೆ ಜನ ತಪ್ಪು ತಿಲಿಯಲ್ಲವೇ ಎಂದು ಹೇಳಿದ. ಆಯಿತು ಅವಳು ನಕ್ಕಳು, ನಾನು ನಕ್ಕೆ ಅಷ್ಟೇ ತಾನೇ. ಮತ್ತೇಕೆ ಈಗ ಅದೆಲ್ಲ ತಪ್ಪಾಯಿತು ಎಂದ. ಅಷ್ಟಕ್ಕೇ ಅವರ ಸಂಸಾರ ಸಮರ ಮುಗಿಯಿತು.

ಮಂಜನ್ ಮಡದಿ ಕಾಫಿ ತಂದು ಕೊಟ್ಟಳು. ಅಷ್ಟರಲ್ಲಿ ಮಂಜನ ಮೊಬೈಲ್ ನಲ್ಲಿ ಒಂದು sms ಬಂತು. ಅದನ್ನು ಮಂಜನ ಮಡದಿ ತೆಗೆದು ನೋಡಿದಳು. ಯಾರು? ರೀ.. ಅದು ರಾಜಿ ಎಂದು ಮತ್ತೆ ಕೋಪಮಾಡಿಕೊಂಡು ಬಿಟ್ಟಳು. ಅದು... ಅದು... ಎಂದು ತಡವರಿಸುತ್ತಾ...ರಾಜೇಂದ್ರ ಎಂದು ನನ್ನ ಗೆಳೆಯ ಎಂದ. ಯಾವತ್ತು ಅವನ ಬಗ್ಗೆ ಹೇಳೇ ಇಲ್ಲ. ಮತ್ತೆ ರಾಜಿ ಎಂದು ಏಕೆ? ಬರೆದಿದ್ದೀರಾ ಎಂದಳು. ಅದು ಸ್ಪೆಲ್ಲಿಂಗ್ ಮಿಸ್ಟೇಕ್ ಆಯಿತು ಎಂದ. ನಾನು ಮನಸಿನಲ್ಲಿಯೇ ಮಿಸ್ ಟೆಕ್ ಎಂದು ಅಂದೆ. ಏಕೆಂದರೆ ರಾಜಿ ಎಂಬುದು ಹುಡುಗಿ ಎಂದು ನನಗೆ ಹೇಳಿದ್ದ. ಕಡೆಗೆ ಅವಳಿಂದ ಫೋನ್ ತೆಗೆದುಕೊಂಡು ಮೆಸೇಜ್ ನೋಡಿದ. ಅದರಲ್ಲಿ ಹ್ಯಾಪಿ ಫ್ರೆಂಡ್ಶಿಪ್ ಡೇ ಎಂದು ಇತ್ತು. ಅದಕ್ಕೆ ಸುಮ್ಮನೆ ಸೇಮ ಟು ಯು ಎಂದು ಯಾವುದೇ ಶೇಮ್ ಇಲ್ಲದೆ ಬರೆದು ಕಳುಹಿಸಬೇಕು ಅನ್ನುವಷ್ಟರಲ್ಲಿ, ಮೊಬೈಲ್ ನಲ್ಲಿನ ಕರೆನ್ಸಿ ಖಾಲಿ ಆಗಿದೆ ಎಂದು ತಿಳಿಯಿತು. ಮಂಜ ಏನೇ ಇದು ನನ್ನ ಮೊಬೈಲ್ ಕರೆನ್ಸಿ ಎಲ್ಲ ಖಾಲಿ ಆಗಿದೆ ಎಂದ. ಮಂಜನ ಮಡದಿ ನಾನೇ ಎಲ್ಲರಿಗು ಫ್ರೆಂಡ್ ಶಿಪ್ ಡೇ ವಿಶ್ ಮಾಡಲು ಫೋನ್ ಮಾಡಿದ್ದೆ ಎಂದಳು. ಕಡೆಗೆ ನನ್ನ ಮೊಬೈಲ್ ತೆಗೆದುಕೊಂಡು ಕೆಳಗಡೆ ತನ್ನ ಹೆಸರು ಬರೆದು ಮೆಸೇಜ್ ಕಳುಹಿಸಿದ.

ಮಂಜನಿಗೆ ಮತ್ತೆ ನಮಗೆ ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟಲು ಬಂದಳು. ಮಂಜ ಕೋಪದಿಂದ ಏನಿದು? ರಾಖಿಯ ಹಾಗೆ ಇದನ್ನು ಗಂಡನಿಗೆ ಕಟ್ಟುವುದಾ? ಎಂದು ಮತ್ತೆ ತನ್ನ ಪುರಾಣ ಶುರು ಮಾಡಿದ. ನನಗೆ ಕಟ್ಟಿ ಎಂದು ಹೇಳಿ ಕಟ್ಟಿಸಿಕೊಂಡು, ನನಗೆ ಸ್ವಲ್ಪ ಕೆಲಸ ಇದೆ ಎಂದು ಹೇಳಿ ಅಲ್ಲಿಂದ ಸಾವಕಾಶವಾಗಿ ಕಾಲು ಕಿತ್ತೆ.

Friday, August 5, 2011

ಭೀಮನ ಅಮಾವಾಸ್ಯೆ!!!!

ಭೀಮನ ಅಮಾವಾಸ್ಯೆ ಹಿಂದಿನ ದಿನ ಪೂಜೆ ಸಾಮಗ್ರಿ ತರಲು ಮಡದಿ ಹೇಳಿದ್ದಳು. ಮಂಜನ ಜೊತೆ ಮಾರ್ಕೆಟಿಗೆ ಹೋಗಿದ್ದೆ. ಮಂಜ ಸ್ಕೂಟರ್ ನಲ್ಲಿ ಹೋಗುವ ಇಬ್ಬರು ಹುಡುಗರನ್ನು ನೋಡಿ "ದೋ ಚಕ್ಕಾ ಚಕ್ಕಾ ಸಾಥ್ ಸಾಥ್" ಎಂದು ಹೇಳಿದ. ನನಗೆ ಗಾಬರಿ ಅವನಿಗೆ ಹೇಗೆ ತಿಳಿಯಿತು ಮತ್ತು ಹೀಗೆ ಏಕೆ? ಹೇಳಿದ ಎಂದು. ನಾನು ಕೇಳಿದೆ. ಅಷ್ಟು ನಿಖರವಾಗಿ ಹೇಗೆ ಹೇಳುತ್ತಿ ಎಂದೆ. ಅದಕ್ಕೆ ಮಂಜ ನೋಡು ಅಲ್ಲಿ ಅವರ ಗಾಡಿ ನಂಬರ್ ಎಂದು ತೋರಿಸಿದ. ಅದು ೨೬೭೭ ಇತ್ತು. ಇವನು ಅದನ್ನು ಹಿಂದಿಯಲ್ಲಿ ಹೇಳಿ ನನಗೆ ಗಲಿಬಿಲಿಗೊಳಸಿದ್ದ. ಮುಂದೆ ಹೋಗುವಷ್ಟರಲ್ಲಿ ಒಂದು ಅಂಗಡಿ ಕಾಣಿಸಿತು. ಅದರ ಹೆಸರು ಬೈ ಅಂಡ್ ಸೇವ್ ಎಂದು ಕಂಗ್ಲಿಷ್ನಲ್ಲಿ ಬರೆದಿತ್ತು. ಅದನ್ನು ನೋಡಿ ನಾನು ಇಲ್ಲೇ ಸಾಮಾನು ತೆಗೆದುಕೊಂಡು ಹೋಗೋಣ ಎಂದೆ. ಅದಕ್ಕೆ ಮಂಜ ಇಲ್ಲಿ ಬೈ ಮಾಡಿದರೆ ನಿನಗೆ ಭಯ ಆಗುವುದು ಖಂಡಿತ. ಮತ್ತೆ ನೀನೆ ಬೈಯುವುದು ಕೂಡ. ಸೇವ್ ಎಂಬ ಸೇವೆ ಮಾಲಿಕನಿಗೆ ಮಾತ್ರ. ನಮಗೆ ಏನಿದ್ದರು ಶೇವ್. ನೀನು ಇಲ್ಲಿ ತೆಗೆದುಕೊಂಡು ಹೋಗಿ ಅಪ್ಪಿ-ತಪ್ಪಿ ಬಿಲ್ ಮನೆಯಲ್ಲಿ ತೋರಿಸಿದೆ ಎಂದರೆ, ನಿನಗೆ ಭೀಮನ ಅಮಾವಾಸ್ಯೆ ಪೂಜೆ ಇವತ್ತೇ ಎಂದ. ಏನದು? ಭೀಮನ ಅಮಾವಾಸ್ಯೆ ಪೂಜೆ ಎಂದು ಕೇಳಿದೆ. ಏಕೆಂದರೆ? ಪ್ರತಿ ಬಾರಿ ನನ್ನ ಮಡದಿ ಆಶಾ(ಡ) ಮನೆಗೆ ಬಂದ ಮೇಲೆ ತವರಿಗೆ ಹೋಗುತ್ತಿದ್ದಳು. ಭೀಮನ ಅಮಾವಾಸ್ಯೆ ಪೂರ್ತಿ ವಿವರ ಹೇಳಿದ್ದ. ಸಾಮಾನು ಬೇರೆ ಅಂಗಡಿಯಲ್ಲಿ ತೆಗೆದುಕೊಂಡು ಮನೆಗೆ ಬಂದೆವು.

ಮರುದಿನ ಕಂಪ್ಯೂಟರ್ ಮುಂದೆ ಕುಳಿತಿದ್ದೆ. ಅಷ್ಟರಲ್ಲಿ ಬಂದ ಮಡದಿ ಕರಿಯರು ಮತ್ತು ಬಿಳಿಯರು ಎಂಬ ಭೇದ-ಭಾವವಿಲ್ಲದೆ ಸಹ ಜೀವನ ನಡೆಸುತ್ತಿರುವ ಒಂದೇ ಒಂದೇ ಸ್ಥಳ ಎಂದರೆ ಯಾವುದು? ಎಂದು ಪ್ರಶ್ನೆ ಕೇಳಿದಳು. ಮೊದಲೇ ಪ್ರಶ್ನೆ ಎಂದರೆ ಬೆಚ್ಚಿ ಬೀಳುವ ನಾನು ತಡಬಡಿಸಿ ಗೂಗಲ್ ನಲ್ಲಿ ಹುಡುಕಲಾರ೦ಬಿಸಿದೆ. ಅದರಲ್ಲಿ ಏನು? ಹುಡುಕುತ್ತೀರಾ ನಿಮ್ಮ ತಲೆ ಎಂದು ಕಿಟಲೆ ಮಾತನಾಡಿ ಹೊರಟುಹೋದಳು. ಅವಳ ಹಿಂದೇನೆ ನಾನು ಹೋಗಿ, ಏನು? ಎಂದು ಪೀಡಿಸಹತ್ತಿದೆ. ನಿಮ್ಮ ತಲೆ ಎಂದು ಆಗಲೇ ಹೇಳಿದೆನಲ್ಲ ಎಂದಳು. ಆಗ ಅವಳು ಹೇಳಿದ ಒಳ ಅರ್ಥ ತಿಳಿಯಿತು. ತಲೆಯಲ್ಲಿ ಸಮಾನ ಅಂಕಿ ಅಂಶದಲ್ಲಿ ಕರಿ-ಬಿಳಿ ಕೂದಲುಗಳು ಇದ್ದವು.

ಹೊರಗಡೆ ಬಂದು ಟಿ.ವಿ ನೋಡುತ್ತಾ ಕುಳಿತೆ. ಏನು? ಟಿ.ವಿ ನೋಡುತ್ತಾ ಕುಳಿತರೆ ಆಯಿತಾ?. ಸ್ವಲ್ಪ ತರಕಾರಿ ಹೆಚ್ಚಿ ಕೊಡಿ ಎಂದು ತಿವಿದಳು. ಇವತ್ತು ಭೀಮನ ಅಮಾವಾಸ್ಯೆ ಕಣೆ ಎಂದು, ಭೀಮನ ಹಾಗೆ ಒದರಿ ಹೇಳಿದೆ. ಓ ಹಾಗಾದರೆ ನೀವೇ ಅಡುಗೆ ಮಾಡುತ್ತೀರಾ?. ಭೀಮ ಪಾಕ ನಿಜವಾಗಿಯೂ ತುಂಬಾ ಚೆನ್ನಾಗಿ ಇರುತ್ತೆ ಎಂದಳು. ಅಷ್ಟರಲ್ಲಿ ನನ್ನ ಸುಪುತ್ರ ಭೀಮ ಶಬ್ದ ಕೇಳಿ "ಅಪ್ಪ ಛೋಟಾ ಭೀಮ ಕಾರ್ಟೂನ್ ಹಚ್ಚಿ ಕೊಡು ಎಂದು" ಹೇಳಿದ.ಟಿ.ವಿ ಚಾನೆಲ್ ಚೇಂಜ್ ಮಾಡಿ ಮಗನಿಗೆ ಹಚ್ಚಿ ಕೊಟ್ಟು ತರಕಾರಿ ಹೆಚ್ಚಲು ಅನುವಾದೆ. ನಿನ್ನೆ ಸಂಜೆ ಮಂಜನ ಜೊತೆ ಹೋಗುತ್ತಿದ್ದಾಗ ಭೀಮನ ಅಮಾವಾಸ್ಯೆ ಭಾಷಣ ನೆನಪಾಗಿ, ಅದನ್ನು ಮಡದಿಗೆ ಹೇಳಿದೆ. ಗಂಡ ಎಂದರೆ ದೇವರು ಇದ್ದ ಹಾಗೆ ಗೊತ್ತಾ?. ಇವತ್ತು ಗಂಡನ ಪೂಜೆ ಮಾಡುತ್ತಾರೆ, ನೀನು ನೋಡಿದರೆ ತರಕಾರಿ ಹೆಚ್ಚಲು ಹೇಳಿದ್ದೀಯಾ ಎಂದೆ. ಆಯಿತು ಬಿಡಿ ಇನ್ನು ಮೇಲೆ ಪತಿ ದೇವರಿಗೆ ನೈವೇದ್ಯ ಕೂಡ ಹಬ್ಬ ಹರಿದಿನಗಳಲ್ಲಿ ಮಾತ್ರ ಎಂಬ ಉತ್ತರ ಹರಿದು ಬಂತು. ಇನ್ನು ಮತ್ತೇನಾದರೂ ಮಾತನಾಡಿದರೆ ನನ್ನ ಊಟಕ್ಕೆ ಸಂಚಕಾರ ಬಂದೀತು ಎಂದು ಸುಮ್ಮನೆ ತರಕಾರಿ ಹೆಚ್ಚಿ ಕೊಟ್ಟೆ.

ಸ್ನಾನ ಮುಗಿಸಿ ಪೂಜೆಗೆ ಕುಳಿತಿದ್ದೆ. ಹೂ ಮಾರುವವಳು ಬಂದಳು. ಎಷ್ಟು ಬೇಕು? ಹೂ ಎಂದು ನನ್ನ ಮಡದಿಗೆ ಕೇಳಿದಳು. ಅದಕ್ಕೆ ಮಡದಿ ೫ ಸಾವಿರ ಸಾಕು ಎಂದಳು. ಇವತ್ತು "ಗಂಡನ ಪೂಜೆ ಇದೆ ಅಮ್ಮ ೧೦ ಸಾವಿರ ರುಪಾಯಿ" ಹೂ ತೆಗೆದುಕೊಳ್ಳಿ ಎಂದು ಅಂದಳು. ಅವರಿಬ್ಬರ ಸಂಭಾಷಣೆ ಕೇಳಿ ನನಗೆ ಗಾಬರಿ ಆಯಿತು. ಏನೇ ಆದರೂ ದುಡ್ಡು ನನ್ನದೇ ಅಲ್ಲವೇ?. ನನ್ನ ಪೂಜೆ ಮಾಡದಿದ್ದರೂ ಪರವಾಗಿಲ್ಲ ಅನ್ನಿಸಿತು. ಅವಳು ಹೂ ತೆಗೆದುಕೊಂಡು ಬಂದ ಮೇಲೆ, ನಾನು ಕೇಳಿದೆ ಏನದು ಅಷ್ಟೊಂದು ಹೂ ಎಂದು ಕೇಳಿದೆ. ಅದಕ್ಕೆ ಹೂ ಮಾರುವವಳು ೫ ಕ್ಕೆ ೫ ಸಾವಿರ, ೧೦ ಕ್ಕೆ ೧೦ ಸಾವಿರ ಎಂದು ಅನ್ನುತ್ತಾಳೆ ಎಂದು ಹೇಳಿದಳು. ಹೂ ಮಾರುವವಳ ಹಾಸ್ಯ ಪ್ರಜ್ಞೆ ಮತ್ತು ಅವಳು ತನ್ನ ಮನಸಿಗೆ ತಾನೇ ಸಮಾಧಾನ ಮಾಡುವ ರೀತಿ ಕೇಳಿ ನಿಜವಾಗಿಯೂ ಅಚ್ಚರಿ ಅನಿಸಿತು. ಸಾವಿರ- ಲಕ್ಷ ಘಳಿಸುವ ಮತ್ತು ಲೂಟಿ ಮಾಡುವ ತುಂಬಾ ಜನರಲ್ಲಿ ಇರದ ಸಂತೋಷ ಅವಳಲ್ಲಿ ಮತ್ತು ಅವಳ ಮಾತಿನಲ್ಲಿ ಇತ್ತು.

ಪೂಜೆ ಮುಗಿಸಿ ಎಫ್.ಎಂ ಹಚ್ಚಿದೆ. "ಹೂವು ಚೆಲುವೆಲ್ಲಾ ನಂದೆಂದಿತು...ಹೆಣ್ಣು ಹೂವ ಮುಡಿದು ಚೆಲುವೆ ತಾನೆಂದಳು" ಎಂಬ ಸುಮಧುರವಾದ ಹಾಡು ಬರುತಿತ್ತು. ಹಾಡು ಇನ್ನು ಮುಗಿದಿರಲಿಲ್ಲ ಅಷ್ಟರಲ್ಲಿ ಹೆಂಡತಿ ಒಳಗಡೆ ಕಂಪ್ಯೂಟರ್ ಉರಿಯುತ್ತಿದೆ, ಹೊರಗಡೆ ಟಿ.ವಿ ಮತ್ತು ಎಫ್.ಎಂ ಎಂದು ಚೀರಲು ಶುರುಮಾಡಿದಳು. ಎದ್ದು ನೀರು ನನ್ನ ಹೊಟ್ಟೆಗೆ ಹಾಕಿ ಕೋಪ ಕಡಿಮೆ ಮಾಡಿಕೊಂಡು ಹೋಗಿ ಕಂಪ್ಯೂಟರ್ ಆರಿಸಿ ಬಂದೆ. ಅಷ್ಟರಲ್ಲಿ ಹಾಡು ಮುಗಿದಿತ್ತು. ಈಗ ನೀವು "ಹಣ್ಣೆಲೆ ಚಿಗುರಿದಾಗ" ಎಂಬ ಚಿತ್ರದ ಹಾಡನ್ನು ಕೇಳುತ್ತಿದ್ದೀರಿ ಎಂದು ಪ್ರಸಾರಕ ಮಹಾಶಯರು ಹೇಳಿದರೂ, ನಂಗೆ ಮಾತ್ರ "ಹೆಣ್ಣೇಲೇ ಚೀರಿದಾಗ" ಎಂದು ಅನ್ನಿಸಹತಿತ್ತು.ಆದರೂ ಈ ಹಣ್ಣೆಲೆ ಚಿಗುರುವುದು ಯಾವಾಗ ಎಂದು ಕೂಡ ಅನ್ನಿಸಿತು. ಏಕೆಂದರೆ ನನ್ನ ತಲೆಯಲ್ಲಿನ ಎಲ್ಲ ಕೂದಲು ಹಣ್ಣಾಗಿ ಉದುರುತ್ತಾ ಇವೆ. ಆದರೆ ಒಮ್ಮೆಯೂ ಕೂಡ ಚಿಗುರಲೇ ಇಲ್ಲ ಎಂದು ಅನ್ನಿಸಿತು. ಹೊರಗಡೆ ಬಂದು ಲೇ... ಈಗ ತಾನೇ ಎಫ್.ಎಂ ನಲ್ಲಿ ಬರುತ್ತಿದ್ದ ಹಾಡು ಯಾವ ಚಿತ್ರದ್ದು ಗೊತ್ತ ಎಂದೆ. ಅದಕ್ಕೆ ಅವಳು ನಾನು ಕೇಳಿಸಿಕೊಳ್ಳಲಿಲ್ಲ ನೀವೇ ಹೇಳಿ ಯಾವುದು ಎಂದಳು. ನಾನು "ಹೆಣ್ಣೇ ಚೀರಿದಾಗ" ಎಂದೆ. ಜೋರಾಗಿ ನಗುತ್ತಾ ಬನ್ನಿ ನಿಮ್ಮ ಪೂಜೆ ಮಾಡುತ್ತೇನೆ ಎಂದು ಅಡುಗೆ ಮನೆಯಿಂದ ಆಯುಧ ಸಮೇತವಾಗಿ ಹೊರಗಡೆ ಬಂದಳು.ಅಷ್ಟರಲ್ಲಿ ಎಫ್.ಎಂ ನಲ್ಲಿ ಮುಂದಿನ ಚಿತ್ರಗೀತೆ "ಚಂಡಿ ಚಾಮುಂಡಿ" ಚಿತ್ರದ್ದು ಎಂದಾಗ ನಗು ಮಾತ್ರ ತಡಿಯಲು ಆಗಲೇ ಇಲ್ಲ. ಕಡೆಗೆ ಸೋಪಿನಿಂದ ಕೈ ತೊಳೆದುಕೊಂಡು ಬಂದು, ನನಗೂ ಸೋಪಿನಿಂದ ಕಾಲು ತೊಳೆಯಲು ಹೇಳಿದಳು. ತೊಳೆದುಕೊಂಡು ಬಂದ ಮೇಲೆ ನನ್ನ ಪಾದ ಪೂಜೆ ನೆರವೇರಿತು.

ಈ ಭೀಮನ ಹೊಟ್ಟೆಗೆ ಕೂಡ ಚೆನ್ನಾಗಿ ನೈವೇದ್ಯ ಆಗಿತ್ತು. ನಿದ್ದೆ ಜೋರಾಗಿ ಬಂದಿದ್ದರಿಂದ ಮಲಗಿಕೊಂಡೆ. ಅಷ್ಟರಲ್ಲಿ ಪರ್... ಪರ್ ..ಎಂಬ ಶಬ್ದ ಯಾರೋ ಬಟ್ಟೆ ಹರಿಯುತ್ತಿದ್ದಾರೆ ಎಂದು ಅನ್ನಿಸಿತು. ಯಾರು ಎಂದು ಎಲ್ಲ ಕಡೆ ನೋಡಿದೆ. ಯಾರು ಇರಲಿಲ್ಲ. ಮಡದಿ, ಮಗ ಕೂಡ ಗಾಡ ನಿದ್ರೆಯಲ್ಲಿ ಇದ್ದರು. ಯಾರಾದರು ಕಳ್ಳರು ಬಂದಿರ ಬಹುದಾ? ಎಂದು ಅನುಮಾನ ಬಂತು. ಬಂದರು ಅವರು ಬಟ್ಟೆ ಹರಿಯುವುದು ಏಕೆ ? ಎಂಬ ಪ್ರಶ್ನೆ ಉದ್ಭವಿಸಿತು. ಹೆದರುತ್ತಾ... ಹೆದರುತ್ತಾ.. ಶಬ್ದ ಹುಡುಕಿಕೊಂಡು ಹೋದೆ. ನನ್ನ ಮಗನ ಸೈಕಲ್ ಹಿಂದಿನ ಡಬ್ಬದ ಒಳಗೆ ನನ್ನ ಮೊಬೈಲ್ ಶಬ್ದ ಮಾಡುತಿತ್ತು. ಅದನ್ನು ನನ್ನ ಮಗ ತೆಗೆದುಕೊಂಡು ಆಟವಾಡಿ ಸೆಟ್ಟಿಂಗ್ ವೈಬ್ರೇಟಿ೦ಗ ಆಗಿ ಚೇಂಜ್ ಮಾಡಿದ್ದ. ಕಡೆಗೆ ಫೋನ್ ಎತ್ತಿ ಮಾತನಾಡಿ, ಅದನ್ನು ಸರಿ ಮಾಡಿ ಮತ್ತೆ ನಿದ್ದೆಗೆ ಜಾರಿದೆ.