Monday, October 12, 2009

ನಾ ಕಷ್ಟ ಪಟ್ಟೆ....

ಮೊನ್ನೆ ಮನೋಜ್ (ಪಂಚಾಮೃತ ಮನ್ಯ) ಭೇಟಿಯಾಗಿದ್ದ. ಅವನನ್ನು ನೋಡಿ ನನಗೆ ಗುರುತು ಹಿಡಿಯಲಾಗಲಿಲ್ಲ. ಏಕೆಂದರೆ, ಮೊದಲು ಅವನು ಹರಕು ಬಟ್ಟೆ ಮತ್ತೆ ಹವಾಯಿ ಚಪ್ಪಲ ಮೇಲೆ ಇರುತ್ತಿದ್ದ. ಈವಾಗ ಅವನ ರೂಪು ರೇಷೆ ಎಲ್ಲವು ಬದಲಾಗಿತ್ತು. ಅವನು ಸೂಟ್ ಮೇಲೆ ಮತ್ತೆ ಒಂದು ಹೊಸ ಕಾರ್ ನೊಳಗಿಂದ ಇಳಿದು ಬಂದು ನನ್ನನ್ನು ಮಾತನಾಡಿಸಿದ. ಹಾಗೆ ಕಾಫಿ ಕುಡಿದ ನಮ್ಮ ಕ್ಷೇಮ ಸಂಚಾರಗಳನ್ನು ಮಾತನಾಡುತ್ತ ಇದ್ದೆವು.

ನಾನು: ಏನು ಸಮಾಚಾರ?

ಮನೋಜ್: ಏನು ಅಂತಹ ವಿಶೇಷ ಇಲ್ಲ ಎಂದ.


ಸ್ವಲ್ಪ ಸಮಯದ ನಂತರ ಮನೋಜ ಶುರು ಹಚ್ಚಿಕೊಂಡ ನಾನು ತುಂಬಾ ಕಷ್ಟ ಪಟ್ಟೆ. ಮನೆಯಲ್ಲಿ ಬೇಗನೆ ಮದುವೆ ಬೇರೆ ಮಾಡಿಬಿಟ್ಟರು ಅವಳ ಜವಾಬ್ದಾರಿ. ಮತ್ತು ತಂಗಿಯ ಮದುವೆ ಜವಾಬ್ದಾರಿ ಕೂಡ ನಿಭಾಯಿಸಿದೆ . ಎಂದೆಲ್ಲ ಹೇಳುತ್ತಿದ್ದ. ಅಷ್ಟರಲ್ಲೇ ನಮ್ಮ ಮಂಜ ಬಂದ.

ನಾನು ತುಂಬಾ ಕಷ್ಟ ಪಟ್ಟೆ ಎಂಬ ಮನ್ಯಾನ ಉದ್ಗಾರ ಮಾತ್ರ ನಿಲ್ಲಲಿಲ್ಲ.

ಮದುವೆ ಆದ ಮೇಲು ತುಂಬಾ ಕಷ್ಟ ಎಂದ. ಅಮ್ಮ ಮೊಮ್ಮಕ್ಕಳು ಬೇಕು ಎಂದು ಹಠ ಹಿಡಿದಳು. ನಾನು ಏನು ಮಾಡಲಿ ತುಂಬಾ ಕಷ್ಟ. ಯಾರು ಸಹಾಯಕ್ಕೆ ಬರಲಿಲ್ಲ ಎಂದ.

ಮಂಜನಿಗೆ ಮತ್ತು ನನಗೆ ತುಂಬಾ ಗಾಬರಿ ಆಯಿತು..

ಯಾರ ಬರಬೇಕಿತ್ತು ಸಹಾಯಕ್ಕೆ.... ಎಂದು ಕೇಳಿದ ಮಂಜ.

ನನ್ನ ಹೆಂಡತಿ ಕಡೆ ಯಾರು ಹೆರಿಗೆ ಸಮಯದಲ್ಲಿ ಸಹಾಯಕ್ಕೆ ಬರಿಲಿಲ್ಲ ಎಂದಾಗ. ನಾನು ಮತ್ತು ಮಂಜ ನಿಟ್ಟುಸಿರು ಬಿಟ್ಟೆವು.

ಮತ್ತೆ ಮನೋಜ ಗುಡಿಗೆ ಹೋಗೋಣವೆ ಎಂದು ಕರೆದ...

ದಾರಿಯುದ್ದಕ್ಕೂ ಇವನ ಕಷ್ಟ ಕೇಳಿ ಕೇಳಿ ನಮ್ಮ ಕಿವಿ Burst ಆಗುವದೊಂದೇ ಬಾಕಿ ಉಳಿದಿತ್ತು.

ಮಂದಿರ ಪ್ರವೇಶಿಸಿದೆವು... ಮಂಗಳಾರತಿ ಮುಗಿದ ಮೇಲೆ ಗರಿ ಗರಿ ಯಾದ 500 ರೂಪಾಯಿಗಳ ನೋಟನ್ನು ಸ್ವಾಮೀಜಿಗೆ ಕೊಟ್ಟ.ಮಂದಿರದಿಂದ ಹೊರಗೆ ಬಂದೆವು.

ಮತ್ತೆ ನಮ್ಮ ಸಂಭಾಷಣೆ ಉತ್ತರ ಕರ್ನಾಟಕದಲ್ಲಿ ನಡೆದ ಭೀಕರ ಜಲ ಪ್ರಳಯದ ಬಗ್ಗೆ ಶುರು ಆಯಿತು.ಮನೋಜ ಮತ್ತೆ ಕಷ್ಟ ಕಷ್ಟ ....ಎಂದು ಎಷ್ಟು ಜನ ನಿರಾಶ್ರಿತರಾಗಿದ್ದಾರೆ. ಅವರಿಗೆ ಊಟ ವಸತಿ ಕಲ್ಪಿಸುವ ಕೆಲಸ ನಾವು ಮಾಡಬೇಕು ಎಂದಲ್ಲ ಬೊಗಳೆ ಬಿಟ್ಟ...

ನಮ್ಮ ಆಫೀಸ್ನಲ್ಲಿ ನಾವು ಫಂಡ್ collect ಮಾಡ್ತಾ ಇದ್ದೇವಿ. ನೀನು ಕೊಡು ಎಂದು ಮನೋಜನಿಗೆ ಕೇಳಿದ ಮಂಜ.


ಅದಕ್ಕೆ ಮನೋಜ ಕಷ್ಟ ಕಷ್ಟ ಕೊಟ್ಟಿದ್ದೆಲ್ಲ, ಏನು ಅವರಿಗೆ ಸೇರುತ್ತೇನೋ...ಅದೆಲ್ಲ ಬೇರೆ ಬೇರೆಯವರು ತಿಂದು ಬಿಡುತ್ತಾರೆ ಎಂದ.


ಅದಕ್ಕೆ ಮಂಜನಿಗೆ ಕೆಟ್ಟ ಕೋಪ ಬಂದಿತ್ತು. ಸ್ವಾಮಿಜಿಗೆ ಕೊಡೋಕೆ 500 ರೂಪಾಯಿ. ಆದರೆ ಇಂತಹ ಸಹಾಯ ಕಾರ್ಯಗಳಿಗೆ ಸುಮ್ಮನೆ ಬೊಗಳೆ ಎಂದು. ಏನ ಲೇ "ಮನ್ಯಾ ನೀನು ಏನಾದರು ತಿಂದೆ ಅಂದರೆ ಅದೆಲ್ಲ ಏನು ಜೀರ್ಣವಾಗುತ್ತ. ಸ್ವಲ್ಪ ...ಏನು... 70% ಹೊರಗೆ ಬರುತ್ತೆ ತಾನೆ ಎಂದ ಮಂಜ.

ಆಯಿತು ಬನ್ನಿ ಕೊಡೋಣ ಎಂದ. ಪಂಚಾಮೃತ ಏನರ ಕುಡಿಯೋಣವೇ ಎಂದು ಕೇಳಿದ ನಮ್ಮ ಮನೋಜ. ಆಯಿತು ಎಂದು ನಾವೆಲ್ಲರೂ ಬಾರ್ ಪ್ರವೇಶಿಸಿದೆವು. ಮತ್ತೆ ನಾವೆಲ್ಲರೂ ಆರ್ಡರ್ ಮಾಡಿದೆವು. ವೈಟರ್ ಬರುವದು ಲೇಟ್ ಆದರು ಕಷ್ಟ ಕಷ್ಟ ಎಂಬ ಉದ್ಗಾರ..ನಾನು ಮಾತ್ರ ನನಗೆ ಪಂಚಾಮೃತ ಬೇಡ ಎಂದು ನನಗೆ ಕೋಕ್ ಹೇಳಿದೆ.


ಮತ್ತೆ ಮಾತನಾಡುತ್ತ ಏನಪ್ಪಾ ಏನು ಕೆಲಸ ಮಾಡುತ್ತ ಇದ್ದೀಯ ಎಂದ ನಮ್ಮ ಮಂಜ ಮನೋಜನಿಗೆ.

ಅಯ್ಯೋ ಅದು ಏನು ಕೇಳುತ್ತೀಯ ಎಂದ ಮನೋಜ.

ಹಾಗಾದರೆ ಬಿಡು ಹೇಳಬೇಡ ಎಂದು ನಾನು ಹೇಳಿದೆ.

ಅಷ್ಟಕ್ಕೆ ಬಿಟ್ಟಾನೆ ಇವನು "ಕಷ್ಟ ಕಷ್ಟ ಕಣೋ" ಮೊದಲು ನಾನು ಒಂದು ಇಲೆಕ್ಟ್ರಾನಿಕ್ ಶಾಪ್ ನಲ್ಲಿ ಸಲೆಸ್ಮನ್ ಆಗಿ ಇದ್ದೆ. ಆಗ ಅಲ್ಲಿಂದ ಅನ್ಯಾಯವಾಗಿ ಹೊರ ಬರಬೇಕಾಯಿತು ಎಂದ. ಅಂತ ಕೆಲಸ ಏನು ಮಾಡಿದಿಯೋ ಮಹಾರಾಯ ಎಂದಾಗ.


ಒಮ್ಮೆ ಒಬ್ಬ ಕಸ್ಟಮರ್ ಬಂದಿದ್ದರು..

ಅವರು ನನಗೆ ಯಾವುದಾದರು ಒಳ್ಳೆಯ ಟಿವಿ ತೋರಿಸಿ ಎಂದರು. ನಾನು ಆಗ ಒಂದು ಚೆನ್ನಾಗಿರೋ ಟಿವಿ ಎಂದು ಹಚ್ಚಿ ತೋರಿಸಿದೆ. ಅನಂತರ ಬೇರೆ ಬೇರೆ ಚಾನೆಲ್ ಹಚ್ಚಿ ತೋರಿಸಿದೆ ಅಷ್ಟಕ್ಕೆ ಅವರು ಕೋಪ ಮಾಡಿಕೊಂಡು ಹೋಗಿಬಿಟ್ಟರು ಎಂದ.


ಅಷ್ಟಕ್ಕೆ ಕೋಪ ಹೇಗಪ್ಪ ಮಾಡ್ಕೊತಾರೆ ನೀನೆ ಏನೋ ಮಾಡಿರಬೇಕು ಎಂದ ಮಂಜ. ಅವರ ಜೊತಿ ಹುಡುಗಿ-ಗಿಡುಗಿ ಬಂದಿದ್ಲೇನು.

"ಲೇ ಛೆ ಛೆ ಹಾಗಲ್ಲ" ಅದು ನನ್ನ ದುರದೃಷ್ಟ ಕಣೋ ಎಂದು ತಲೆ ತಿನ್ನ ಹತ್ತಿದ ಮನೋಜ.

ಮಂಜನಿಗೆ ಕೆಟ್ಟ ಸಿಟ್ಟು ಬಂದಿತ್ತು "ಲೇ ಕುಡುಕ ನನ್ನ ಮಗನೆ" ಏನಾಯಿತು ಹೇಳಲೇ.

ಮತ್ತೆ "ಕಷ್ಟ.. ಕಷ್ಟ.." ಅವತ್ತು ನನ್ನ ಗ್ರಹಚಾರಕ್ಕೆ ಅದೇ ಬ್ರಾಂಡ್ ಟಿವಿ Advirtisement ತೋರಿಸುತ್ತಾ ಇದ್ದರು ಎಂದ.


ಮಂಜನಿಗೆ ಮತ್ತೆ ಪಿತ್ತ ನೆತ್ತಿಗೇರಿತ್ತು. ಇನ್ನೇನು ಚೆನ್ನಾಗೆ ಆಯಿತಲ್ಲ ಮತ್ತೆ ಏಕೆ? ಕೋಪ ಮಾಡಿಕೊಂಡರು ಎಂದ ಮಂಜ ಕೋಪದಿಂದ.

ಅದು ನಾನು ತೋರಿಸಿದ ಟಿವಿಯಲ್ಲಿ ಅದೇ ಟಿವಿ Advirtisement ಚೆನ್ನಾಗಿ ಬರುತ್ತಾ ಇರಲಿಲ್ಲ. ಆದರೆ ಅದು ಬೇರೆ ಬ್ರಾಂಡ್ ಟಿವಿ ಯಲ್ಲಿ ಚೆನ್ನಾಗಿ ಕಾಣಿಸುತ್ತ ಇತ್ತು ಎಂದಾಗ. ನನ್ನ ಬಾಯಿಯಲ್ಲಿ ಇದ್ದ ಕೋಕ್ ಪೂರ್ತಿ ಮೊನೋಜನ ಮುಖದ ಮೇಲೆ..... ಏಕೆಂದರೆ ಅಷ್ಟು ಜೋರಾಗಿ ನಗು ಬರುತ್ತಾ ಇತ್ತು.

ಮತ್ತೆ ಮನೋಜ ಇನ್ನೊಂದು ಪೆಗ್ ಅಂದ. ಮಂಜ ಬೇಡ.. ಬೇಡ.. ಅಂದರು ಕೇಳಲಿಲ್ಲ. ಈ ನನ್ನ ಮಗ ನನಗೆ ಕೋಕ್ ಸ್ನಾನ ಮಾಡಿಸಿ ನಶೆ ಇಳಿಸಿಬಿಟ್ಟ ಎಂದ.

ಮತ್ತೆ ಶುರು ಹಚ್ಚಿ ಕೊಂಡ, ತುಂಬ ಕಷ್ಟ ಕಣೋ... ಹೇಳಿ ಇದರಲ್ಲಿ ನನ್ನದೇನೂ ತಪ್ಪು... ಆ ಮ್ಯಾನೇಜೆರ ಗೂಬೆ ನನಗೆ ಚೆನ್ನಾಗಿ ಬೈದಿದ್ದ ಎಂದ...

ಮತ್ತೆ ಒಂದು ದಿವಸ ಇನ್ನೊಬ್ಬ ಕಸ್ಟಮರ್ ಬಂದಿದ್ದರು. ಅವರಿಗೆ ನಾನು ಚೆನ್ನಾಗಿ ಡೆಮೋ ಕೊಟ್ಟೆ ... ಎಂದ.

ಆಗ ನಮ್ಮ ಮ್ಯಾನೇಜರ್ ನನ್ನ ಕರೆದು ಕಸ್ಟಮರ್ ಉದ್ದೇಶಿಸಿ "ಸರ್ ಗೆ ಒಂದು ಕೋಲ್ಡ್ ಡ್ರಿಂಕ್ಸ್ ಕೊಡು" ಎಂದ.

ಆಗ ಕಸ್ಟಮರ್ ನನಗೆ ಮೇಲೆ ಇಡಪ್ಪ ಕೋಲ್ಡ್ ಇರಬೇಕು ಎಂದರು......ಕಸ್ಟಮರ್ ಇಸ್ ಗಾಡ್ ಎಂಬ ಮ್ಯಾನೇಜರ್ ಹೇಳಿಕೆಯನ್ನು ಶಿರಸಾ ಪಾಲಿಸುವಂತವನು ನಾನು.

ನಾನು ಗೊತ್ತಾಗದೆ ಕೋಕ್ ಅನ್ನು ಫ್ರಿಜ್ ಮೇಲೆ ಇರುವ ಮೈಕ್ರೋ-ಓವನ್ ಒಳಗೆ ಇಟ್ಟು ಬಿಟ್ಟೆ... ಅಷ್ಟೆ......ಕೆಲವೇ ಕ್ಷಣ ಗಳಲ್ಲಿ "ಡುಂ ಡುಂ" ಶಬ್ದ... ಕಸ್ಟಮರ್ ಮತ್ತು ಎಲ್ಲ ಆಫೀಸ್ ಸಿಬ್ಬಂದಿ ಸಹಿತವಾಗಿ ಎಲ್ಲರು ಮಾಯವಾಗಿದ್ದರು... ಅದಕ್ಕೂ ನನ್ನ ಗೂಬೆ ಮ್ಯಾನೇಜರ್ ನನಗೆ ಬೈದ.

ಇದರಲ್ಲಿ ನನ್ನದೇನು ತಪ್ಪು ನೀನೆ ಹೇಳು ಆ ಕಸ್ಟಮರ್ ತಾನೆ ಹೇಳಿದ್ದು ಮೇಲೆ ಇಡು ಅಂತ. ತುಂಬ ಕಷ್ಟ ಕಣೋ ಈ ಕಸ್ಟಮರ್ ಗಳ ಜೊತೆ ಹೆಣಗಾಡೋದು ....

ಮತ್ತೆ ಇನ್ನೊಂದು ದಿವಸ ವಾಶಿಂಗ್ ಮೆಶಿನ್ ನೋಡಲು ಬಂದಿದ್ದರು ಅದಕ್ಕೆ ಒಂದು ವಾಶಿಂಗ್ ಮೆಶಿನ್ ತೊಗೊಂಡರೆ ಇನ್ನೊಂದು ಫ್ರೀ ಇತ್ತು. ನಾನು ಈ ಸಾರಿ ತುಂಬ ಜಾಗ್ರತೆವಹಿಸಿದ್ದೆ. ಆದರು ಅನಾಹುತ ನಡೆದೇ ಹೋಯಿತು ಎಂದ.

ಏನಪ್ಪಾ ಅನಾಹುತ ಎಂದಾಗ ಮನೋಜ ಕಸ್ಟಮರ್ ಡೆಮೋ ತೋರಿಸಬೇಕಾದರೆ ಅವರ ಕರ ವಸ್ತ್ರ ತೊಗೊಂಡು ಅದರೊಳಗೆ ಹಾಕಿದೆ ಆಗ ಅದು ಕ್ಲೀನ್ ಆಗಿ ಎರಡು ಪೀಸ್ ಆಗಿ ಹೊರಬಂದಿತ್ತು. ಅದಕ್ಕೆ ಆ ಕಸ್ಟಮರ್ ನನಗೆ ಈದೇನಾ.... ಒಂದು ತೊಗೊಂಡರೆ ಮತ್ತೊಂದು ಫ್ರೀ ಎಂದು ಹಿಯಾಳಿಸುವದೆ.

ಆಗಲಾದರೂ ನಿನ್ನನ್ನ ಕೆಲಸದಿಂದ ಹೊರಗೆ ಹಾಕಿರಬೇಕು ಎಂದು ಕೇಳಿದ ಮಂಜ.

"ಲೇ ಈ ಗೂಬೆ ಮ್ಯಾನೇಜರ್ ಜೊತೆ ಹೆಣಗುವದು ಬೇಡವಾಗಿ" ನಾನೆ ಕಷ್ಟ ಅಂತ ನೌಕರಿ ಬಿಟ್ಟು ಬಂದೆ ಎಂದ.
ಈಗ ಏನೋ ಮಾಡುತ್ತ ಇದ್ದಿ ಎಂದು ಕೇಳಿದಾಗ ನಾನು ಈಗ ಜ್ಯೋತಿಷ್ಯ ಶಾಸ್ತ್ರ ಪಾರಾಯಣ ಮಾಡಿ ಜ್ಯೋತಿಷ್ಯ ಹೇಳುತ್ತಿದ್ದೇನೆ ಎಂದ.

ಹಾಗಾದರೆ ಈ ಗೋಪಾಲ್ ನ ಬಗ್ಗೆ ಹೇಳು ನೋಡೋಣ ಎಂದ ಮಂಜ. ಹೇಳುವದಕ್ಕೆ ಬಾಯಿ ತೆಗೆದ ಆ ಕೆಟ್ಟ ಬೀರ್ ವಾಸನೆ ಹೊಡೆಯುತ್ತಿತ್ತು. ಹೇಳುವದಕ್ಕೆ ಎಲ್ಲಿಂದ ಬರಬೇಕು ಬಂತು ನೋಡಿ "ಒಅಕ್ ಒಅಕ್" ಎಂದು ತಿನ್ದಿದೆಲ್ಲ ನನ್ನ ಮೈಮೇಲೆ ಹಾಕಿಬಿಟ್ಟ.

ಆಗ ಮಂಜ ಸುಮ್ಮನಿರಲಾರದೆ ಇದೆ ನೋಡು ನಿನ್ನ ಭವಿಷ್ಯ ಎಂದು ಗಹ ಗಹಿಸಿ ನಕ್ಕ . ಅವನು ನಗುತ್ತಿದ್ದಾಗ ನಾನು ಸ್ವಲ್ಪ ದೂರ ನಿಂತೆ. ಎಲ್ಲಿ ಇವನೂ ವಾಂತಿ ಮಾಡಿಕೊಂಡರೆ ಕಷ್ಟ ಅಂತ. ಮತ್ತೆ ಬಿಲ್ಲು ಸಹ ನಾನೆ ಕೊಟ್ಟು ಬರಬೇಕಾಯಿತು.

ಮತ್ತೆ ಅವನನ್ನು ಕರೆದು ಕೊಂಡು ಹೋಗಿ ಮನೆ ಮುಟ್ಟಿಸಿದೇವು... ಅಷ್ಟಾದರೂ ಬಿಟ್ಟಿತೆ...? ನಮ್ಮ ಕಷ್ಟ. ಅವನ ಹೆಂಡತಿ ಮತ್ತೆ ನಮಗೆ ಉಗಿಯುವದೆ, ನೀವೇ ಕುಡಿಸಿ ಕರೆದು ಕೊಂಡು ಬಂದಿದ್ದೀರಾ ಅಂತ.

ಅಯ್ಯೋ ಕಷ್ಟ ಕಷ್ಟ ಅವನಿಗೆ ಪರಿಹಾರದ ದುಡ್ಡು ಕೇಳುವದೆ ಮರೆತು ಹೋಗಿತ್ತು....

Tuesday, October 6, 2009

ತರ್ಲೆ ಮಂಜ(ಗ)ನಿಗೆ ದೇವರನಾಮ ....

ನಮ್ಮ ಶಾಲೆಗೆ ಶಂಭು ಎಂಬ ವಿದ್ಯಾರ್ಥಿ ಸೇರಿ ಕೊಂಡಿದ್ದ. ಶಂಭು ತನ್ನ ಬಗ್ಗೆ ಕೊಚ್ಚಿ ಕೊಳ್ಳುತ್ತಾ ತಿರುಗುತ್ತಿದ್ದ. ಅವನು ಬಾಯಿ ಎತ್ತಿದರೆ ಸಾಕು ಬರಿ ಬೈಗುಳಗಳು. ಒಂದು ದಿವಸ ನನಗೆ , ನಿಮ್ಮ ತಂದೆಗೂ ನನ್ನ ತಂದೇನೆ ಸಂಬಳ ಕೊಡುವುದು ಎಂದು ಬೂಸಿ ಬಿಟ್ಟಿದ್ದ. ನಾನು ಇದನ್ನೇ ಹೋಗಿ ನನ್ನ ತಂದೆಗೆ ಕೇಳಿದಾಗ, ನನ್ನ ತಂದೆ ಜೋರಾಗಿ ಬಿದ್ದು ಬಿದ್ದು ನಕ್ಕು ಬಿಟ್ಟಿದ್ದರು.

ಶಂಭು ಒಂದು ದಿವಸ ಆಟದ ಸಮಯದಲ್ಲಿ ಮಂಜನ ಜೊತೆ ಜಗಳ ಆಡಿ, ಅವನಿಗೆ ಕೆಟ್ಟ ಅವಾಚ್ಯ ಶಬ್ದಗಳಿಂದ ಚೆನ್ನಾಗಿ ಬೈದಿದ್ದ. ಅಷ್ಟರಲ್ಲಿ ಅವರ ಜಗಳ ನೋಡಿ ಮಾಸ್ತರ್ ಅವರಿಬ್ಬರನ್ನು ಕೇಳಿದಾಗ. ಮಂಜ ಸುಮ್ಮನೆ ತಲೆ ತಗ್ಗಿಸಿ ನಿಂತಿದ್ದ. ಆದರೆ ಶಂಭು ಏನು ಇಲ್ಲ? ಸರ್ ದೇವರನಾಮ ಹೇಳುತ್ತಿದ್ದೇನೆ ಎಂದು ಬಿಟ್ಟ. ಮಂಜನಿಗೆ ಎಲ್ಲಿಲ್ಲದ ಕೋಪ ಬಂದಿತ್ತು.

ಒಂದು ದಿವಸ ಶಾಲೆಯಲ್ಲಿ ವಿವಿಧ ಮನೋರಂಜನ ಕಾರ್ಯಕ್ರಮ ಇತ್ತು. ಅದರ ನಿರ್ವಹಣೆಯ ಕಾರ್ಯ ನಮ್ಮ ಮಂಜನದು. ಮಂಜನಿಗೆ ಮೊದಲೇ ಶಂಭು ಮೇಲೆ ಸಿಟ್ಟು ಇತ್ತು. ಕಾರ್ಯಕ್ರಮದಲ್ಲಿ ಅವನಿಗೆ ತಕ್ಕ ಶಾಸ್ತಿ ಮಾಡಬೇಕೆಂದು ನಮ್ಮೆಲ್ಲರಿಗೂ ಒಂದು ಐಡಿಯಾ ಹೇಳಿದ.

ಮತ್ತೆ ಕಾರ್ಯಕ್ರಮ ಶುರು ಆಯಿತು. ಮಂಜ ಆರಂಭಿಕ ಭಾಷಣ ಮುಗಿದ ಮೇಲೆ. "ಈಗ ಶಂಭು ಅವರಿಂದ ದೇವರನಾಮ" ಎಂದು ಬಿಟ್ಟ. ಶಂಭು ಮಾತ್ರ ತನ್ನ ಸೀಟ್ ಮೇಲಿಂದ ಏಳಲಿಲ್ಲ. ಮತ್ತೆ ಇನ್ನೊಂದು ಸಾರಿ ಮೈಕ್ ಮೇಲೆ ಕೂಗಿದ "ಶ್ರೀ ಶಂಭು ಅವರಿಂದ ದೇವರನಾಮ" ಎಂದು. ಶ್ರೀ ಶಂಬು ಎಂದಾಗ ನಾವೆಲ್ಲರೂ ಗೊಳ್ ಎಂದು ನಕ್ಕುಬಿಟ್ಟೆವು. ನಮ್ಮ ಪ್ಲಾನ್ ಪ್ರಕಾರ ನಾವೆಲ್ಲರೂ ಶಂಭುನ ತಲೆಯ ಮೇಲೆ ಹೊತ್ತುಕೊಂಡು. ಶಂಭು ಅವರಿಗೆ ಜಯವಾಗಲಿ ಎಂದು ಜೈಕಾರ ಹಾಕುತ್ತ ಬಂದು ಸಭಾಂಗಣದ ಮೈಕ್ ಮುಂದೆ ಬಿಟ್ಟು ಹೋದೆವು. ಶಂಭು ನಡುಗುತ್ತ ನಿಂತಿದ್ದ ಪೂರ್ತಿ ಮೈಯಲ್ಲ ಸ್ನಾನ ಮಾಡಿದ ಹಾಗೆ ಬೆವತು ಬಿಟ್ಟಿತ್ತು. ಏನು ತಿಳಿಯದೆ ಮಂಜನನ್ನು ಒಮ್ಮೆ ನೋಡಿದ. ಮಂಜ ಹಾಗೆ ಸುಮ್ಮನೆ ಬಿಟ್ಟಾನೆ ಬೈದು ದೇವರನಾಮ ಅನ್ನುವಷ್ಟು ಸೋಕ್ಕಲ್ಲ ನಿನಗೆ ಈಗ ಹೇಳು ದೇವರನಾಮ ಎಂದು ಹೇಳಿದ. ಕಡೆಗೆ ಶಂಭು ಕಾಪಾಡು ಎಂದು ಮಂಜನಿಗೆ ಬೇಡಿಕೊಂಡ. ಆಗ ಮಂಜ ಶಂಭುನಿಗೆ ಒಂದು ಸಿನಿಮ ಹಾಡು ಹಾಡು ಎಂದು ಸೂಚಿಸಿದ. ಮತ್ತೆ ಅದರ ಸಾಹಿತ್ಯ ಬರೆದು ಕೊಂಡು ಬಂದಿರುವೆ ತೆಗೆದುಕೋ ಎಂದು ಪೇಪರ್ ಅವನ ಕೈಯಲ್ಲಿ ಇಟ್ಟ. ಆನಂತರ ಮೈಕ್ ನಲ್ಲಿ ಹೇಳಿದ ಶಂಭು ಅವ್ರಿಗೆ ದೇವರನಾಮ ಹೇಳಲು ಮೂಡಿಲ್ಲ ಆದ್ದರಿಂದ ಅವರು ಸಿನಿಮ ಹಾಡು ಹಾಡಲಿದ್ದಾರೆ ಎಂದು. ಶಂಭು ಸಾವಕಾಶವಾಗಿ ನಡುಗುತ್ತ ಪೇಪರ್ ತೆಗೆದು ಹಾಡಲು ಶುರು ಹಚ್ಚಿಕೊಂಡ. "ದೊಡ್ಡವರೆಲ್ಲ ಜಾಣರಲ್ಲ ಚಿಕ್ಕವರೆಲ್ಲ ಕೋಣರಲ್ಲ.. ಗುರುಗಳು ಹೇಳಿದ ಮಾತುಗಳೆಲ್ಲ ಎಂದು ನಿಜವಲ್ಲ" ಎಂದು. ಅಲ್ಲಿ ಸಭೆಯಲ್ಲಿ ಕುಳಿತಿದ್ದ ಗುರುಗಳಿಗೆಲ್ಲ ಪಿತ್ತ ನೆತ್ತಿಗೇರಿತ್ತು. ನಾವೆಲ್ಲರೂ ಹಿಂದೆ ಕುಳಿತು ಶಿಳ್ಳೆ ಹೊಡಿದಿದ್ದೆ ಹೊಡದಿದ್ದು. ಪೂರ್ತಿ ಸಭಾಂಗಣ ಕೇಕೆ ಹಾಕುತಿತ್ತು. ಮತ್ತೆ ಕೆಲವರು ಡಾನ್ಸ್ ಸಹ ಮಾಡಲು ಶುರು ಮಾಡಿದ್ದರು. ಶಂಭು ತುಂಬ ಹುರುಪಿನಿಂದ ತಾನು ಡಾನ್ಸ್ ಮಾಡುತ್ತ ಹಾಡಿದ. ಮತ್ತೆ ಕಾರ್ಯಕ್ರಮ ಮುಗಿದ ಮೇಲೆ ಎಲ್ಲರು ಶಂಭುನ ಹೊಗಳಿದ್ದ ಹೊಗಳಿದ್ದು... ಶಂಭು ಹಿರಿ ಹಿರಿ ಹಿಗ್ಗಿದ್ದ.

ಮರು ದಿನ ಶಂಭುನಿಗೆ ಅಟೆಂಡರ ಕರೆದು, ಮಾಸ್ತರ ಕರೆಯುತ್ತಿದ್ದಾರೆ ಎಂದು ಹೇಳಿದ. ಮಂಜ ಶಂಭುವಿಗೆ ಹುರುದುಂಬಿಸಿ ನಿನಗೆ ಬಹುಮಾನ ಕೊಡಬಹುದು ನೀನು ತುಂಬ ಚೆನ್ನಾಗಿ ಹಾಡಿದೆ. ಬೇಗ ಹೋಗು ಎಂದು ಹೇಳಿದ . ಶಂಭು ತುಂಬಾ ಖುಷಿಯಾಗಿ ಸ್ಟಾಫ್ ರೂಮಿಗೆ ಹೋದ. ತಕ್ಷಣ ಎಲ್ಲಾ ಮಾಸ್ತರರು ಸೇರಿ ಶಂಭುನಿಗೆ ಸಹಸ್ರನಾಮ, ಅಷ್ಟೋತ್ತರ ಹೀಗೆ. ಎಲ್ಲ ದೇವರನಾಮವನ್ನು ಕೇಳಿಸಿ ಬಿಟ್ಟಿದ್ದರು. ಮತ್ತೆ ಅವನಿಗೆ ನಿನ್ನ ತಂದೆಯನ್ನು ಕರೆದುಕೊಂಡು ಶಾಲೆಗೆ ಬಾ ಎಂದು ತಾಕಿತ್ ಮಾಡಿದ್ದರು. ಶಂಭುನಿಗೆ ಎಲ್ಲಿಲ್ಲದ ಕೋಪ ಬಂದಿತ್ತು. ಆದರು ಏನು ಮಾಡುವ ಸ್ಥಿತಿಯಲ್ಲಿ ಇರಲಿಲ್ಲ ....ಅಳುತ್ತ ಬಂದು ಕುಳಿತ.

ಶಂಭು ತನ್ನ ತಂದೆಗೆ ಹೇಗೆ ಹೇಳುವದೆಂದು ಯೋಚಿಸಿ. ಅವರ ತಂದೆ ತುಂಬಾ ಕೋಪಿಷ್ಠ ಹೀಗಾಗಿ ಕಡೆಗೆ ಮಂಜನ ಸಹಾಯ ಕೇಳಿದ. ಮಂಜ ತನ್ನ ಅತ್ತೆಯ ಮಗನನ್ನು ಕರೆದು ತಂದು ಇವ ನಿನ್ನ ಅಣ್ಣ ಎಂದು ಹೇಳು ಎಂದು ಹೇಳಿದ. ಶಂಭು ಅವನನ್ನು ಕರೆದು ಕೊಂಡು ಹೋದ. ಮಾಸ್ತರ ಮುಂದೆ ಕೆನ್ನೆ ಕೆಂಪಾಗುವ ಹಾಗೆ ಸಿಕ್ಕಿದ್ದೇ ಚಾನ್ಸ್ ಎಂದು ಮಂಜನ ಅತ್ತೆ ಮಗ ಬಾರಿಸಿದ್ದ. ಮತ್ತೆ ಶಂಭು ಅವರಿಬ್ಬರಿಗೂ ಹೋಟೆಲ್ ನಲ್ಲಿ ಪಾರ್ಟಿ ಕೊಡಿಸಿದ.

ನಾವೆಲ್ಲರೂ ಅವನಿಗೆ ಶಿಕಾರಿ ಶಂಭು, ಶಂಭು ಮಹಾರಾಜ ಮತ್ತು ತೊಗರಿ ತಿಪ್ಪ ಎಂದೆಲ್ಲ ನಾಮಾಂಕಿತ ಮಾಡಿದ್ದೆವು. ಅವನು ಮತ್ತೆ ಯಾವತ್ತು ಬೂಸಿ ಬಿಡುವ ಗೋಜಿಗೆ ಹೋಗಲಿಲ್ಲ....ಮತ್ತೆ ತನ್ನ ಭಾಷಾ ಪ್ರಯೋಗ ಕೂಡ ಸುಧಾರಿಸಿ ಕೊಂಡಿದ್ದ.