Wednesday, December 29, 2010

ಸೀರೀಯಸ್‌ನೆಸ್ ....

ತುಂಬಾ ಸೀರೀಯಸ್ ಆಗಿ ಕುಳಿತು ಒಂದು ಹಾಸ್ಯ ಲೇಖನ ಬರೆಯುತ್ತಿದ್ದೆ. ನನ್ನ ಮಡದಿ "ಏನ್ರೀ ನಿಮಗೆ ಸೀರೀಯಸ್‌ನೆಸ್ ಇಲ್ಲವೇ.. ಇಲ್ಲ.." ಮನೆಗೆ ಅತಿಥಿಗಳು ಬಂದಿದ್ದಾರೆ. ನೀವು ನೋಡಿದರೆ ಆ ಪೆನ್ನು,ಪುಸ್ತಕ ಹಿಡಿದು ಕುಳಿತು ಬಿಟ್ಟಿದ್ದೀರಾ? ಎಂದಳು. ಇದನ್ನು ಮೊದಲನೆ ಬಾರಿ ಹೇಳಿದ್ದರೆ ಸ್ವಲ್ಪ ಸೀರೀಯಸ್ ಆಗಿ ತೆಗೆದುಕೊಳ್ಳಬಹುದಿತ್ತು. ಆದರೆ ಇದು ಎಷ್ಟನೆ ಬಾರಿ ಎಂಬುದು ನನಗೆ ತಿಳಿದಿಲ್ಲ...ಅದಕ್ಕೆ ಅಂತ ಒಂದು ಕಂಪ್ಯೂಟರ್ ನೇಮಿಸಿದರು ಲೆಕ್ಕ ಸಿಗುವುದಿಲ್ಲ. ಮೊದ ಮೊದಲು ಅಪ್ಪ ಕೂಡ ಇದನ್ನೇ ಹೇಳುತ್ತಿದ್ದರು. "ಲೇ ಕತ್ತೆ ಅಷ್ಟು ವಯಸ್ಸು ಆಯಿತು, ಯಾವಾಗೆ ಬರುತ್ತೋ ಸೀರೀಯಸ್‌ನೆಸ್" ಅಂತ. ಅದೇನೋ ಗೊತ್ತಿಲ್ಲ ಇಂತಹ ಅಪವಾದಕ್ಕೆ ನಾನು ಗುರಿಯಾಗುತ್ತೇನೋ ಅಥವಾ ಅಪವಾದ ನನ್ನನ್ನು ಗುರಿ ಮಾಡಿ ಕೆಲಸ ಮಾಡುತ್ತೋ ಇದುವರೆಗೂ ಅರಿಯದ ಸಂಗತಿಯಾಗಿದೆ.

ಆದರೂ ಹೆಂಡತಿ ಹೇಳಿದ್ದು ನನಗೆ ಸರಿ ಬರಲಿಲ್ಲ. ಏಕೆ? ಎಂದರೆ ಸೀರೆ + ಎಸ್(Yes) + ನೆಕ್ಸ್ಟ್(Next ಏನು? ಬೇಕು ಹೇಳು) {ಸೀರೀಯಸ್‌ನೆಸ್} ಎಷ್ಟು ಬಾರಿ ತೋರಿಸಿಲ್ಲ. ಇದು ಅನ್ಯಾಯ ಅಲ್ಲವೇ...?. .ಈ ಸೀರೀಯಸ್‌ನೆಸ್ ಎಲ್ಲಿಯಾದರೂ ಕೆ.ಜಿ ಅಥವಾ ಲೀಟರ್ ಲೆಕ್ಕದಲ್ಲಿ ಕೊಳ್ಳಲು ಸಿಗುತ್ತಾ ಎಂದು ಅಂತರ್ಜಾಲ ಪೂರ್ತಿ ತಡಕಾಡಿದೆ. ಅದನ್ನು ಮಾರುವವರಿಗೆ ಸ್ವಲ್ಪ ಕೂಡ ಸೀರೀಯಸ್‌ನೆಸ್ ಬೇಡವೇ, ಅದರ ಜಾಹೀರಾತು ಹಾಕಬೇಕು ಎಂದು. ಕಡೆಗೆ ಸಿಗಲೇ ಇಲ್ಲ...:-(.

ನಾನು ಅರಿತ ಪ್ರಕಾರ ಸೀರೀಯಸ್‌ನೆಸ್ ಕಂಡಿದ್ದು ಬರಿ ಪೇಶೆಂಟ್ ಗಳಲ್ಲಿ ಮಾತ್ರ, ಅದು ಡಾಕ್ಟರ್ ಗೆ ಕೂಡ ಇರುತ್ತೆ, ಏಕೆಂದರೆ? ಅಂತವರನ್ನು ಅವರು ಗುಣ ಪಡಿಸುತ್ತಾರಲ್ಲ ಅದಕ್ಕೆ.

ನನಗೆ ಚಿಕ್ಕಂದಿನಿಂದಲೂ ಎಲ್ಲ ವಿಷಯಗಳನ್ನು ತುಂಬಾ ಹಗುರವಾಗಿ ತೆಗೆದುಕೊಳ್ಳುವ ಸ್ವಭಾವ. ಅದೇ "ಹುಟ್ಟಿದ ಗುಣ, ಸುಟ್ಟರೂ ಹೋಗುವುದಿಲ್ಲ" ಅನ್ನುತ್ತಾರೆ ಹಾಗೆ. ಅದು ಇನ್ನೂ ಹಾಗೆ ಇದೆ. ನನ್ನ ಸದಾ ನಗು ಮುಖ ಇರುವದರಿಂದ, ನನ್ನ ಒಬ್ಬ ಗೆಳೆಯ ಅದಕ್ಕೆ ನನ್ನನ್ನು ಹಸ್ಮುಖ ಎಂದು ಹೇಳುತ್ತಿದ್ದ ( ಗೋಪಾಲ್ ನಾಮಧೇಯಕ್ಕೆ ಅನುಗುಣವಾಗಿ ಹಸುವಿನ ಹಾಗೆ ಇರುವ ಮುಖ ಎಂದು ಭಾವಿಸಿರಲಿಲ್ಲ ಎಂದು ಅಂದುಕೊಂಡಿದ್ದೇನೆ). ನನ್ನ ಮದುವೆ ಸಮಯದಲ್ಲಿ, ಅದೇ ಗೆಳೆಯ ಈಗಾದರೂ ಸಲ್ಪ ಗಂಭೀರವಾಗಿ ಇರುವದನ್ನು ಕಲಿ ಎಂದು ತಿಳುವಳಿಕೆ ಅನುಗ್ರಹಿಸಿದ. ಅದು ಹೇಗೆಂದು ನನಗೆ ಅರ್ಥ ಆಗಲಿಲ್ಲ. ಮುಖ ಗಂಟಿಕ್ಕಿ ಮದುವೆ ಮಾಡಿಕೊಳ್ಳುವುದೇ ಎಂದು ಯೋಚಿಸಿದೆ.

"ಅಳುವ ಗಂಡನ್ನು ನಂಬಬಾರದು ಮತ್ತೆ ನಗುವ ಹೆಣ್ಣನ್ನು " ಎಂಬ ಗಾದೆ ಇದೆ. ನನ್ನ ನಗುವಿಗೆ ಒಬ್ಬ ಹುಡುಗಿ ಸಾತ್ ನೀಡಿದ್ದಳು. ಇವನಿಗೆ ಯಾವ ಸುಂದರಿ ಸಾತ್ ನೀಡಿದಳು,ಎಲ್ಲೋ ಪ್ರಾಣಿಸಂಗ್ರಹಾಲಯದಲ್ಲಿ ಇರಬಹುದು ಎಂದು ಅಂದುಕೊಂಡಿರ...ಸತ್ಯವಾಗಿ ಒಳ್ಳೇ ಸರಳ ಸಹಜ ಸುಂದರಿ.. ನಮ್ಮ ಮಂದಹಾಸ ಮಧುರವಾಗಿ ಬಹಳ ದಿನ ನಡೆದಿತ್ತು. ಅದೇನೋ ದೊಡ್ಡವರು ಅನ್ವೇಷಿಸಿದ ಗಾದೆಗೆ ವಿರುದ್ಧವಾಗಿ ನಡೆದರೆ ದೊಡ್ಡವರು ಬಿಡುತ್ತಾರೆಯೇ...ತಮ್ಮ ಗಾದೆ ಸತ್ಯವಾಗಿರಿಸಿ, ನನ್ನನ್ನು ಆ ಹುಡುಗಿಯ ತ'ಗಾದೆ'ಗೆ ಬರದಂತೆ ನೋಡಿಕೊಂಡರು.

ನನ್ನ ಒಬ್ಬ ಗೆಳೆಯನಿಗೆ ಎಲ್ಲರಿಗಿಂತ ಮೊದಲೇ ಮದುವೆ ಮಾಡಲು ನಿಶ್ಚಯಿಸಿದ್ದರು. ಮದುವೆ ಸಮಯದಲ್ಲಿ, ಅವರ ಅಪ್ಪ ನನಗೆ, ನೋಡು ಈಗ ನನ್ನ ಮಗ ದಾರಿಗೆ ಬರುತ್ತಾನೆ. ಮೊದಲೇ ಉಡಾಳ್.. ಈಗ ಸ್ವಲ್ಪ ಸೀರೀಯಸ್‌ನೆಸ್ ಬರುತ್ತೆ ಎಂದರು. ಮದುವೆ ಆದ ಮೇಲೆ ಸೀರೀಯಸ್‌ನೆಸ್ ಬಂತೋ ಇಲ್ಲವೋ ಗೊತ್ತಿಲ್ಲ, ಆದರೆ ಒಂದೇ ವರ್ಷದಲ್ಲಿ ಅವನಿಗೆ ಅವಳಿ-ಜವಳಿ ಎರಡು ಮಕ್ಕಳು ಮಾತ್ರ ಬಂದವು.

ಒಮ್ಮೆ ಮೈಸೂರಿನಲ್ಲಿ ಇರುವಾಗ, ಅಲ್ಲಿ ಕೆಲಸ ಮಾಡುವ ಒಬ್ಬ ಅಕೌಂಟೆಂಟ್ ಬಂದು ಏನ್ರೀ? ಮಿಲ್ಕ್ ಬಿಲ್ಲು ತಪ್ಪಾಗಿ ಬಂದಿದೆ ಎಂದರು. ನಾನು ನಗುತ್ತಾ ಅಷ್ಟೇನಾ? ಎಂದೆ. ಅಷ್ಟಕ್ಕೇ ಅಪಾರ್ಥ ಮಾಡಿಕೊಂಡು ಹೋಗಿ ಮ್ಯಾನೇಜರ್ ಗೆ ಗೋಪಾಲ್ ಅವರಿಗೆ ಸ್ವಲ್ಪ ಕೂಡ ಸೀರೀಯಸ್‌ನೆಸ್ ಇಲ್ಲ ಎಂದು ಕಂಪ್ಲೇಂಟ್ ಮಾಡಿದ್ದರು. ಆಮೇಲೆ ಮ್ಯಾನೇಜರ್ ನನ್ನ ಮೇಲೆ ತಮ್ಮ ಅಧರದಿಂದ ಮಳೆ ಸುರಿಸಿ ಕಳುಹಿಸಿದ್ದರು.

ನಾನು ಹುಬ್ಬಳ್ಳಿಯಲ್ಲಿ ಕೆಲಸ ಮಾಡುವ ಸಮಯದಲ್ಲಿ ಅಲ್ಲಿಯ ಮ್ಯಾನೇಜರ್ ನನಗೆ ಒಂದು ಕೆಲಸ ಮಾಡಲು ಹೇಳಿದರು ಮತ್ತು ಅದಕ್ಕೆ ಎಷ್ಟು ದಿವಸ ಬೇಕು ಎಂದು ಕೇಳಿದರು. ನಾನು ನಗುತ್ತಾ ಎರಡು ದಿವಸ ಎಂದೆ. ಅದಕ್ಕೆ ಆ ಮನುಷ್ಯ ಅದು ಕಡಿಮೆ ಆಯಿತು ಎಂದು ತಿಳಿದನೋ ಅಥವಾ ಜ್ಯಾಸ್ತಿಯೋ ತಿಳಿಯಲಿಲ್ಲ. ಮತ್ತೆ ಎರಡು ದಿವಸ ಎಂದು ಕೇಳಿದರು. ಅದಕ್ಕೆ ನಾನು ಒಂದು ಎಂದೆ. ಮತ್ತೆ ಅವರು ಒಂದು ದಿವಸ ಎಂದು ಕೇಳಿದರು. ನಾನು ಅರ್ಧ ದಿವಸ ಎಂದೆ. ಏಕೆಂದರೆ ನಾನು ನನ್ನ ಮೇಲಿನ ನಂಬಿಕೆಗಿಂತ ನನ್ನ ಪ್ರೀತಿಯ ಶ್ರೀ ರಾಮನ ಮೇಲೆ ಇರುವ ಅಪಾರ ನಂಬಿಕೆಯಿಂದ(ನೆಡೆಸುವವನು ಅವನು ತಾನೇ).... ಮತ್ತೆ ಅರ್ಧ ದಿವಸ ಎಂದರು. ಈಗಲೇ ಮಾಡಿ ಕೊಡುತ್ತೇನೆ ಎಂದೆ. ಅದೇನೋ ಗೊತ್ತಿಲ್ಲ ನನ್ನ ಜೊತೆ ಜಗಳವಾಡಿ ಹೊರಟು ಹೋದರು. ಮತ್ತೆ ಅದನ್ನು ಎರಡು ದಿನಗಳಲ್ಲಿ ಪೂರ್ತಿ ಗೊಳಿಸಿ ಅವರಿಗೆ ಹೇಳಿದ್ದೆ.

ಹಾಗೆಂದು ನನಗೆ ಸೀರೀಯಸ್‌ನೆಸ್ ಇಲ್ಲವೇ ಇಲ್ಲ ಎಂದು ಅಲ್ಲ...ನನಗೆ ತಿಂದಿದ್ದು ಅಜೀರ್ಣ ಆಗಿ ದಾರಿತಪ್ಪಿದಾಗ ಮಾತ್ರ ಸ್ವಲ್ಪ ಸೀರೀಯಸ್‌ನೆಸ್ ತಾನಾಗೇ ಬರುತ್ತೆ.

Tuesday, December 28, 2010

ಪುಟ್ಟಿ ಗಂಡ ಹೊಟ್ಟೆ ತುಂಬಾ ಉಂಡ....

ನನ್ನ ಪೋಸ್ಟ್ ಪೇಡ್ ಮೊಬೈಲ್ ಬಿಲ್ಲು ನೋಡಿ, ಏನೇ? ಇದು ಎಂದು ಕೇಳಿದೆ. ಅದಕ್ಕೆ.. ನನ್ನ ಮಡದಿ ಅದು ಮೊಬೈಲ್ ಬಿಲ್ಲು ಎಂದಳು. ನಾನೆಲ್ಲಿ ಹೇಳಿದೆ ಕಾಮನಬಿಲ್ಲು ಅಂತ ಎಂದೆ. ಕಾಮನ ಬಿಲ್ಲು ಅಲ್ಲಾರಿ ಅದು ಕಾಮಣ್ಣನ ಬಿಲ್ಲು ಇರಬಹುದು ಎಂದು ಹೀಯಾಳಿಸಿದಳು. ಓ ಅಂದ ಹಾಗೆ ಇವತ್ತು ಆಫೀಸ್ ನಿಂದ ಬರುವ ಸಮಯದಲ್ಲಿ ಕಾಮನಬಿಲ್ಲು ಸಿ ಡಿ ತೆಗೆದುಕೊಂಡು ಬನ್ನಿ, ನನಗೆ ಆ ಸಿನೆಮಾ ಅಂದರೆ ತುಂಬಾ ಇಷ್ಟ ಎಂದು ಮಾತು ಮರೆಸಲು ನೋಡಿದಳು. ನೀನು ಹೀಗೆ ಫೋನ್ ಯೂಸ್ ಮಾಡ್ತಾ ಇದ್ದರೆ, ನಾನು ಬಿಲ್ಲು ಹಿಡ್ಕೊಂಡು ಕಾಡಿಗೆ ಹೋಗಬೇಕಾಗುತ್ತೆ ಎಂದೆ. ನಾನೊಬ್ಬನೇ ಅಲ್ಲ ನಿನ್ನನ್ನು ಕರೆದುಕೊಂಡು ಹೋಗುತ್ತೇನೆ. ಶ್ರೀ ರಾಮನ ಜೊತೆ ಸೀತಾ ಮಾತೆ ಹೋಗಲಿಲ್ಲವೆ ಹಾಗೆ ಎಂದೆ. ಓ.. ನಾನು ಬರಲ್ಲಪ್ಪಾ ಬೇಕಾದರೆ ನೀವು ಹೋಗಿ ಬನ್ನಿ. ಬರುತ್ತಾ ಸ್ವಲ್ಪ ಸೀಬೆ ಹಣ್ಣು, ಕಾಯಿ ಪಲ್ಯ, ಟೊಮೇಟೊ, ಈರುಳ್ಳಿ ಇದ್ದರೆ ತೆಗೆದುಕೊಂಡು ಬನ್ನಿ ಎಂದಳು. ದುಡ್ಡು ಏನು? ಮೇಲಿಂದ ಉದುರುತ್ತಾ ಎಂದು ಕೇಳಿದೆ. ಕಾಡಿನಲ್ಲಿ ಹಾಗೆ ಬೆಳೆದಿರುತ್ತೆ ಕಿತ್ತು ಕೊಂಡು ಬನ್ನಿ ಎಂದಳು. ಲೇ.. ನಾನು ಮೊಬೈಲ್ ಬಿಲ್ಲು ಕಟ್ಟೋಕೆ ಕೇಳಿದ್ದು ದುಡ್ಡು ಎಂದೆ. ಕಾಡಿನಲ್ಲಿ ನೆಟ್‌ವರ್ಕ್ ಇರೋದು, ಅಷ್ಟಕ್ಕೇ.. ಅಷ್ಟೇ...ಮತ್ತೆ ಏಕೆ? ಬೇಕು ನಿಮಗೆ ಮೊಬೈಲ್ ಎಂದು ಹೇಳಿದಳು. ಅಷ್ಟರಲ್ಲಿ ಹಾಲು ಉಕ್ಕುತ್ತಾ ಇದೆ ಎಂದು ಹೇಳಿ, ಗಡಬಡಿಸಿ ಅಡುಗೆ ಮನೆಗೆ ಹೊರಟು ಹೋದಳು.

ಮತ್ತೆ ಕೆಲ ಸಮಯದ ನಂತರ ಕಾಫೀ ಕಪ್ ಜೊತೆ ಹಾಜರ ಆಗಿ, ನೋಡಿ ನಿಮ್ಮಿಂದ ಎಷ್ಟೊಂದು ಹಾಲು ಉಕ್ಕೀತು ಎಂದು ಬೈದಳು. ಹಾಲು ಉಕ್ಕಿದರೆ ಯಾರಾದರೂ ಸಂಭಂಧಿಗಳು ಮನೆಗೆ ಬರುತ್ತಾರೆ ರೀ.. ಎಂದಳು. ನಿನ್ನ ಕಡೆ ದುಡ್ಡು ಇದ್ದರೆ ಕೊಡು, ನನಗೆ ಮೊಬೈಲ್ ಬಿಲ್ಲು ಕಟ್ಟಬೇಕು ಎಂದೆ. ನನ್ನ ಹತ್ತಿರ ದುಡ್ಡು ಇಲ್ಲ, ನೀವೇ ಏನಾದರೂ ಮಾಡಿ ಎಂದಳು. ಮತ್ತೆ ಇನ್ನೊಮ್ಮೆ ನನ್ನ ಕೇಳದೇ, ನನ್ನ ಮೊಬೈಲ್ ಮುಟ್ಟಬೇಡ ಎಂದೆ. ನೀವು ವರ್ಷಕ್ಕೆ ಒಂದೇ ಸಾರಿ ತವರುಮನೆಗೆ ಕಳುಹಿಸಿದರೆ ನಾನೇನು ಮಾಡಬೇಕು. ಅದಕ್ಕೆ ದಿವಸ ಫೋನ್ ಮಾಡಿ ಮಾತಾಡುತ್ತೇನೆ ಎಂದಳು.ಮತ್ತಿನ್ನೇನು ತಿಂಗಳಿಗೆ ಒಂದು ಬಾರಿ ಹೋಗಬೇಕೆಂದಿರುವೆ ಏನು? ಎಂದೆ. ಈ ಬಿಲ್ ದುಡ್ಡಿನಲ್ಲಿ ನಾವು ಮೂರು ಬಾರಿ ನಿಮ್ಮ ಊರಿಗೆ ಹೋಗಿ ಬರಬಹುದಿತ್ತು ಎಂದೆ. ಈ ಬಾರಿ ಹೋಗಬೇಕಾದರೆ ನೀವು ಬನ್ನಿ ಎಂದಳು. ಲೇ..ss ಅದೊಂದು ಬಿಟ್ಟು ಬೇರೆ ಏನು ಬೇಕಾದರೂ ಕೇಳು ಎಂದೆ. ನೀವು ಏಕೆ ಬರಲ್ಲ, ಅದು ಹೇಳಿ ಎಂದಳು. ನಿನ್ನನ್ನ ಎಲ್ಲರೂ ಪುಟ್ಟಿ... ಪುಟ್ಟಿ.. ಎಂದು ಕರೆದರೆ ನನಗೆ ಕೆಟ್ಟ ಕೋಪ ಬರುತ್ತೆ ಎಂದೆ. ಅದಕ್ಕೇನೀಗ, ನನಗೆ ಪ್ರೀತಿಯಿಂದ ಹಾಗೆ ಕರೆಯುತ್ತಾರೆ ಅಷ್ಟೇ ಎಂದಳು. ಲೇ.. ಅದು ಅಲ್ಲ ನಿಮ್ಮ ಕಾಕ ನನಗೆ "ಪುಟ್ಟಿ ಗಂಡ ಹೊಟ್ಟೆ ತುಂಬಾ ಉಂಡ" ಎಂದು, ನನ್ನ ಹೊಟ್ಟೆ ನೋಡಿ ನಗುತ್ತಾ ನಿಂತರೆ ನನಗೆ ಕೋಪ ಬರುವದಿಲ್ಲವೇ ಎಂದೆ. ಓss.. ಅವರಾ.. ಅವರು ತುಂಬಾ ತಮಾಷೆಯ ಮನುಷ್ಯ, ವಾಮನ ಕಾಕ ದೂರದ ಸಂಭಂಧಿ. ಮತ್ತೆ ತಲೆ ನೋಡಿ ಮಕ್ಕಳಿಗೆ, ಇಲ್ಲೊಂದು ಜಾರು ಬಂಡೆ ಇದೆ ನೋಡಿ ಎಂದು ಹೇಳಿದರೆ ಎಂದು ಕೇಳಿದೆ. ನೀವು ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಬೇಡಿ ಎಂದಳು.

ತಮಾಷೆ ಮಾಡೋಕೆ ಒಂದು ಮಿತಿ ಬೇಡ ಏನೇ? ಮತ್ತೆ ನನ್ನ ಲ್ಯಾಪ್‌ಟಾಪ್ ನೋಡಿ, ಎಲ್ಲರ ಮುಂದೆ ಅಳಿಯಂದಿರು ಯಾವತ್ತೂ ಚಿಕ್ಕ ಟಿ ವಿ ಹಿಡಿದುಕೊಂಡು ಎಲ್ಲ ಕಡೆ ಹೋಗುತ್ತಾರೆ ಎಂದು ಎಲ್ಲರಿಗೂ ಹೇಳಿದರೆ. ಮತ್ತೆ ನಾನು ಅಷ್ಟೇ ಮೊದಲು ರೇಡಿಯೋ ತೆಗೆದುಕೊಂಡು ಹೋಗುತ್ತಿದ್ದೆ ಎಂದೆಲ್ಲ ಹೇಳುವರು. ನಾನು ಪಾಪ ಅವರಿಗೆ ಏನೋ ಗೊತ್ತಿಲ್ಲ ಎಂದು ತಿಳಿಸಲು ಹೋದರೆ, ಎಲ್ಲರ ಎದಿರೂ ಇವೆಲ್ಲವೂ ಅಳಿಯಂದಿರ ಪೈಲ್ಸ್ (piles) ಎಂದು ತೋರಿಸಿ ನಕ್ಕರೆ ಕೋಪ ಬರುವದಿಲ್ಲವೇ ಎಂದೆ. ಮತ್ತೆ ನಿಮ್ಮ ಇಯರ್ ಫೋನ್ ಕೊಡಿ ಸ್ವಲ್ಪ ಮಾತಡಬೇಕು ಎಂದರೆ ಏನು ಹೇಳುವುದು ಎಂದೆ.

ಅಷ್ಟರಲ್ಲಿ ನಮ್ಮ ಮನೆಯಲ್ಲಿ ಮಾತ್ರ ಗುಡುಗು ಮಿಂಚಿನ ಮಳೆ ಶುರು ಆಯಿತು. ನನಗೆ ಯಾರಾದರೂ ಚಿರಾಪುಂಜಿ ಎಲ್ಲಿ? ಇದೆ ಎಂದು ಕೇಳಿದರೆ. ನಾನು ಹೇಳುವದು ಬೆಂಗಳೂರಿನ ಶ್ರೀನಿವಾಸನಗರದಲ್ಲಿ ಎಂದು. ಒಂದು ಮಳೆ ಇರುತ್ತೆ ಇಲ್ಲ ಚಿರಾಪುಂಜಿ ...ಚೀರಾಟದ ಪುಂಜಿ ಆಗಿರುತ್ತೆ.

ಅಷ್ಟರಲ್ಲಿ ಕಾಲಿಂಗ್ ಬೆಲ್ ಶಬ್ದ ಬಂತು. ಬಾಗಿಲು ತೆಗೆದೆ ಎದುರಿಗೆ ವಾಮನ ಮೂರ್ತಿ ನನ್ನ ಮಡದಿಯ ಕಾಕ ಎದುರಿಗೆ ಉದ್ಭವವಾಗಿದ್ದರು. ನಾನು ಏನು ಹೇಳಬೇಕೋ ತಿಳಿಯದಾಗಿತ್ತು. ಇಲ್ಲಿ ಬಾರೆ ಯಾರೋ.. ಅನ್ನುವ ಬದಲು ಯಾರು ಬಂದಿದ್ದಾರೆ ಎಂದು ಸುಧಾರಿಸಿ ಹೆಂಡತಿಗೆ ಉಲಿದೆ. ಅಳುವುದನ್ನು ನಿಲ್ಲಿಸಿ, ಓ... ಕಾಕ ಎಂದು ಬಂದು ನಮಸ್ಕರಿಸಿದಳು. ನೀವು ನಮಸ್ಕಾರ ಮಾಡಿ ಎಂದು ನನಗೆ ಹೇಳಿದಳು. ಅಷ್ಟರಲ್ಲಿ ಅವಳ ಕಾಕ ತನ್ನ ಕಾಗೆ ಬಾಯಿಂದ ಹೋಗಲಿ ಬಿಡು ಪುಟ್ಟಿ ಪಾಪ ಅಳಿಯಂದಿರ ಹೊಟ್ಟೆ ಅವರನ್ನು ಬಗ್ಗೋಕೆ ಬಿಡಲ್ಲ ಎಂದರು.

ಇನ್ನೂ ಏನೇನು ಕಾದಿದೆಯೋ ಆ ಭಗವಂತನೇ ಬಲ್ಲ....

***************************************************************************************************************
ಎಲ್ಲರಿಗೂ ಹೊಸ ವರ್ಷದ ಪ್ರತಿ ಕ್ಷಣ ಸುಖ... ಶಾಂತಿ(ಹುಡುಗಿಯ ಹೆಸರು ಅಲ್ಲ...).... ನೆಮ್ಮದಿ ತರಲಿ. ಎಲ್ಲರ ಮುಖದಲ್ಲಿ ಮಂದಹಾಸ ಮೂಡಲಿ ಎಂದು ಆಶಿಸುತ್ತಾ..
ನಿಮ್ಮೆಲ್ಲರ ಪ್ರೀತಿಯ ಗೋಪಾಲ್ . ಮಾ. ಕುಲಕರ್ಣಿ.... ನನ್ನ ಹೆಂಡತಿ (ಹೆಂಡ ಶಬ್ದ ಕೇಳಿದರೆ ಉರಿದು ಬೀಳುತ್ತಾಳೆ) ಕ್ಷಮಿಸಿ ... ಮಡದಿ ತಪ್ಪಾಗಿ ತಿಳಿಯಬಾರದು ಎಂದು,
ಮತ್ತೊಮ್ಮೆ ಪ್ರೀತಿಯ(ಹುಡುಗಿಯ ಹೆಸರು ಅಲ್ಲ...) ಗೋಪಾಲ್ . ಮಾ. ಕುಲಕರ್ಣಿ :-):-)...
****************************************************************************************************************

Saturday, December 25, 2010

ನೋಡಿ ಕಲಿತಿರುವ ನೀತಿ ಪಾಠ....

ನಮ್ಮ ಊರಿಂದ ನನ್ನ ಮಡದಿಯ ದೂರದ ಸಂಭಂಧಿ ಬಂದಿದ್ದ. ಹೆಸರು ಸುರೇಶ. ಅವನು ನಾನು ತುಂಬಾ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಿದ್ದೆವು. ಕಡೆಗೆ ಒಂದು ದಿನ ಅಂಕಲ್ ಮದುವೆ ಮಾಡಿಕೊಳ್ಳಬೇಕೆ ಅಥವ ಬೇಡವೇ. ನಾನು ತುಂಬಾ ಜನರಿಗೆ ಇದರ ಬಗ್ಗೆ ಕೇಳಿದ್ದೇನೆ. ನನಗೆ ಇದುವರೆಗೆ ಕೂಡ ಉತ್ತರ ಸಿಕ್ಕಿಲ್ಲ, ನೀವಾದರೂ ಹೇಳಿ ಎಂದು ಪೀಡಿಸುತ್ತಿದ್ದ. ಅವನಿಗೆ ಏನು ಉತ್ತರ ಹುಡುಕಬೇಕೆಂದು ತಡಕಾಡಿ ಸುಮ್ಮನಾಗಿದ್ದೆ. ಮತ್ತೆ ಮರುದಿನ ನನ್ನ ಆಫೀಸ್ ರಜೆ ಇತ್ತು. ನಾನು ಅವನಿಗೆ ನಿನ್ನೆ ಒಂದು ಪ್ರಶ್ನೆ ಕೇಳಿದ್ದೇಯಲ್ಲಾ?. ಇವತ್ತು ಅದರ ಉತ್ತರ ಹೇಳುತ್ತೇನೆ. ನಮ್ಮಿಬ್ಬರನ್ನೂ ಗಮನಿಸು, ಆಮೇಲೆ ನಿನಗೆ ತಿಳಿಯುತ್ತೆ ಮದುವೆ ಬೇಕಾ ಅಥವಾ ಬೇಡವಾ ಎಂದು ಅವನಿಗೆ ಹೇಳಿದೆ.

ಮಡದಿಗೆ ಕಾಫೀ ಕೊಡು ಎಂದು ಹೇಳಿದೆ. ಪೇಪರ್ ಓದುತ್ತಾ ಕುಳಿತಿದ್ದ ನಾನು ಏನೇ? ಈರುಳ್ಳಿ ಬೆಲೆ ಗಗನಕ್ಕೆ ಏರಿದೆ ಅಲ್ಲೇ... ಎಂದೆ. ಭೂಮಿ ಕೆಳಗಡೆ ಬೆಳೆಯುವ ವಸ್ತುವಿಗೆ ಇಷ್ಟು ದುಬಾರಿ ಆದರೆ... ಇನ್ನೂ ಭೂಮಿ ಮೇಲೆ ಬೆಳೆಯುವ ಪದಾರ್ಥಗಳ ಗತಿ ಏನು ಎಂದೆ. ಖರ್ಚು ನೀಗಿಸುವ ಮೊದಲೇ ನಾನು ಭೂಮಿಯ ಒಳಗಡೆ ಹೋಗಿ ಕುಳಿತುಕೊಳ್ಳಬೇಕಾಗುತ್ತೆ ಎಂದೆ. ಯಾವುದೋ ವಿಷಯಕ್ಕೆ ಕೋಪ ಮಾಡಿಕೊಂಡಿದ್ದ ನನ್ನ ಮಡದಿ. ಹಾಗೆ ಆಗಬೇಕು ನಿಮಗೆ, ಇಷ್ಟು ದಿವಸ ನಮ್ಮನ್ನು ಅಳಿಸುತ್ತಿದ್ದಿರಿ, ಈಗ ನಿಮ್ಮ ಬಾರಿ ಎಂದಳು. ಈ ತಿಂಗಳಿಂದ ನಿನಗೆ ಐದು ನೂರು ಎಕ್ಸ್‌ಟ್ರಾ ಪಾಕೆಟ್ ಮನಿ ಕೊಡಬೇಕು ಎಂದು ಕೊಂಡಿದ್ದೆ. ಆದರೆ ಈಗ ನನ್ನ ಪರ್ಸ್ ಮಾರಿ ಈರುಳ್ಳಿ ತೆಗೆದುಕೊಳ್ಳುವ ಪರಿಸ್ತಿತಿ ಎಂದು ಹೇಳಿದೆ. ಹಾ... ಏನು?.. ಏನಂದ್ರಿ?.. ಎಂದು ಬಾಯಿ ತೆಗೆದು ಹೊರಗಡೆ ಬಂದು, ಹೌದು ನೋಡಿ ತುಂಬಾ ಕಷ್ಟ... ಕಷ್ಟ.. ಎಂದು ನನ್ನ ಕಷ್ಟಕ್ಕೆ ಸಾತ್ ನೀಡಿಡಳು.

ಅದಕ್ಕೆ ಇದನ್ನು ಸ್ವರ್ಣ ಗಡ್ಡೆ ಅನ್ನುವದು ಎಂದು ಹೇಳಿದಳು. ಸ್ವರ್ಣದ ಸ್ಪರ್ಧೆಗೆ ನಿಂತಿದೆ ಎಂದು ಕಾಣುತ್ತೆ ಎಂದಳು. ಇದು ಒಳ್ಳೇ ಕತೆ ಆಯಿತು, ಹುಲಿಗೂ ಬೆಕ್ಕಿಗೂ ಸ್ಪರ್ಧೆ ಹಾಗೆ ಎಂದು ಹಣಿ ... ಹಣಿ.. ಗಟ್ಟಿಸಿದೆ. ಮತ್ತೆ ಇದರ ಹೆಸರೇ ಸೂಚಿಸುವ ಹಾಗೆ ಇದನ್ನು ಕೇವಲ ಉಳ್ಳವರು ಮಾತ್ರ ಕೊಳ್ಳಬಹುದು. ಅದಕ್ಕೆ ಇದನ್ನು ಉತ್ತರ ಕರ್ನಾಟಕದ ಜನ ಉಳ್ಳಗಡ್ಡೆ ಎಂದು ಹೇಳುತ್ತಾರೆ ಎಂಬ ತನ್ನ ಅಪಾರ ಬುದ್ಧಿ ಮತ್ತೆ ಪ್ರದರ್ಶಿಸಿದಳು. ಮತ್ತೆ ಗೊತ್ತಾ? ಇದನ್ನು ಕೆಲ ಜನ ಕೃಷ್ಣ ಗಡ್ಡೆ ಎಂದು ಕೂಡ ಕರೆಯುತ್ತಾರೆ. ನಾನು ಕೃಷ್ಣ ಗಡ್ದೆ ಎಂದೆ. ಹಾ... ಹೌದು.. ರೀ... ಇದರ ಒಳಗಡೆ ಇರುವ ಚಕ್ರ ನೋಡಿದರೆ ಥೇಠ್ ಅಭಿಮನ್ಯು ಚಕ್ರವ್ಯೂಹ ಇದ್ದ ಹಾಗೆ ಇದೆ ಇಲ್ಲವ ಅದಕ್ಕೆ. ಚಕ್ರವ್ಯೂಹ ಭೇಧಿಸುವ ವಿದ್ಯೆ ಶ್ರೀ ಕೃಷ್ಣನಿಗೆ ಚೆನ್ನಾಗಿ ಗೊತ್ತಿತ್ತು ಅದಕ್ಕೆ. ನಾನು ಹಾಗದೆರೆ ನಾವು ಈಗ ಒಳಗೆ ಸಿಕ್ಕಿ ಕೊಂಡು ಒದ್ದಾಡುವ ಸ್ತಿತಿ ಎಂದೆ. ಮತ್ತೆ ಅದನ್ನು ಹೆಚ್ಚಿದ ಮೇಲೆ ನಿಮಗೆ ಅದು ಚಕ್ರ.. ಚಕ್ರ.. ಆಗಿರುವದರಿಂದ ಸುದರ್ಶನ ಚಕ್ರಕ್ಕೆ ಹೋಲಿಸಿ ಕೃಷ್ಣ ಗಡ್ಡೆ ಅನ್ನುವರು ಎಂದು ತನ್ನ ಬುದ್ಧಿ ಮತ್ತೆಗೆ ಸ್ವಲ್ಪ ಒಗರಣೆ ಹಾಕಿದಳು. ಇಷ್ಟೆಲ್ಲಾ ಕತೆ ಹೇಳಿ ಮುಗಿದ ಮೇಲೆ ಮಡದಿ ಅಡುಗೆ ಮನೆಗೆ ಹೊರಟು ಹೋದಳು.

ಆಗ ಸುರೇಶನಿಗೆ ನೋಡಪ್ಪ ಮದುವೆ ಆದರೆ ಇಷ್ಟೆಲ್ಲಾ ಕೇಳಬೇಕುಗುತ್ತೆ. ಇದಕ್ಕೆ ನೀನು ರೆಡೀ ಇದ್ದರೆ ಅದು ನಿನ್ನ ಕರ್ಮ ಎಂದೆ. ಮತ್ತೆ ಕೌನ್ ಬನೇಗ ಕರೋಡ್ ಪತಿಯಲ್ಲಿ ಕೂಡ ನಾಲ್ಕು ಲೈಫ್ ಲೈನ್ ಇರುತ್ತೆ ಆದರೆ ಇಲ್ಲಿ ಇರುವದು ಒಂದೇ ಲೈಫ್... ಅದುವೇ ನಿನ್ನ ವೈಫ್... , ಆಮೇಲೆ ನಿನ್ನ ಲೈನ್ ಚೇಂಜ್ ಆಗಿ ಹೋಗಿರುತ್ತೆ ಎಂದು ಹೇಳಿದೆ. ಮತ್ತೆ ಅವನಿಗೆ ನಾನು ನನ್ನ ಗೆಳೆಯನ ಬಗ್ಗೆ ಬರೆದಿರುವ ಜಡೆ ಇದ್ದ ಹುಡುಗಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು... ಓದು ಎಂದು ಕೊಟ್ಟೆ. ನೋಡಿ ನೀನು ಕಲಿತಿರುವ ನೀತಿ ಪಾಠ ಏನು? ಎಂದು ಕೇಳಿದೆ. ಹುಡುಗ ಅಷ್ಟೇ ತಾನೇ ಅಂಕಲ್, ಚಿಂತೆ ಮಾಡಬೇಡಿ, ನನಗೂ ಅಡುಗೆ ಮಾಡಲು ಬರುತ್ತೆ ಮತ್ತು ಏನೋ ಹುಡುಗಿಯರು ಹೇಳುವ ಪುರಾಣವನ್ನು ಒಂದು ಕೀವಿಲಿ ಕೇಳಿ ಎನ್ನೊಂದರಲ್ಲಿ ಬಿಟ್ಟಾರಾಯಿತು ಎಂದ. .

ಅಷ್ಟರಲ್ಲಿ ಮಡದಿ ಕಾಫೀ ತೆಗೆದುಕೊಂಡು ಬಂದಳು. ಇಬ್ಬರು ಕಾಫೀ ಹಿರಿ ಮುಗಿಸುವಷ್ಟರಲ್ಲೇ, ನನ್ನ ಮಡದಿ ಗೋಪಾಲ್ ರಾಯರೆ ಸ್ವಲ್ಪ ಕೃಷ್ಣ ಗಡ್ಡೆ ಹೆಚ್ಚಿ ಕೊಡಿ ಎಂದು ಹೇಳಿದಳು. ಪಾಪ ಸುರೇಶ ನನ್ನ ಪಿಕಿ ಪಿಕಿ ಕಣ್ಣು ಬಿಟ್ಟು ನೋಡುತ್ತಿದ್ದ.

ಅಂಕಲ್ ನಾನು ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದೇನೆ. ಅವಳನ್ನೇ ಮದುವೆ ಕೂಡ ಆಗಿದ್ದೇನೆ. ಆದರೆ ಜಾತಿ ಮಾತ್ರ ಬೇರೆ..ಬೇರೆ... ಇದನ್ನು ಅಪ್ಪನಿಗೆ ಹೇಳಿದರೆ ಬಾಸುಂಡೆ ಬರುವ ಹಾಗೆ ಹೊಡೆಯುತ್ತಾರೆ. ನೀವೇ ಏನಾದರೂ ಮಾಡಿ ಅಪ್ಪನಿಗೆ ಹೇಳಿ ಒಪ್ಪಿಸಬೇಕು ಎಂದು ಹೇಳಿದ. ನನಗೆ ದಿಕ್ಕೇ ತೋಚದಾಗಿತ್ತು. ನಮ್ಮ ಮನೆಗೆ ಇರಲು ಎಂದು ಬಂದು, ಮದುವೆ ಕೂಡ ಆಗಿದ್ದಾನೆ. ಕಡೆಗೆ ಇವನ ಅಪ್ಪ ಒಪ್ಪದಿದ್ದರೆ ಇಲ್ಲೇ ಠಿಕಾಣಿ ಎಂದು ಯೋಚಿಸಿದೆ. ಕಡೆಗೆ ಅವರ ಅಪ್ಪನಿಗೆ ಕರೆ ಮಾಡಿ ತಿಳಿಸಿದೆ, ಒಪ್ಪಿದ ಆಸಾಮಿ, ಸಧ್ಯ ನಾನು ಬಚಾವ್....

Thursday, December 23, 2010

ಸಮ್ಮಿಶ್ರ ಸಂಸಾರ ....

ನಮ್ಮ ಸಮ್ಮಿಶ್ರ ಸಂಸಾರ(ಸರಕಾರ) ಸುಗಮವಾಗಿ ನಡೆದು ಕೊಂಡು ಹೋಗಬೇಕಾದರೆ ಬೇಕೇ.. ಬೇಕು.. ಸರ (ಅದು ಬಂಗಾರದ್ದು ಮಾತ್ರ) ಮತ್ತು ಕಾರ(ಸಧ್ಯ ಇನ್ನೂ ಕೇಳಿಲ್ಲ.)... ಒಂದು ದಿನ ಏನೋ? ಇರಲಿ ಎಂದು ಪ್ಲ್ಯಾಟಿನಮ್ ಸರ ತೆಗೆದುಕೊಂಡು ಬಂದಿದ್ದೆ. ಅವಳಿಗೆ ಸಕ್ಕತ್ ಕೋಪ ಬಂದು ಬಿಟ್ಟಿತ್ತು. ಏನ್ರೀ..? ನನಗೆ ಅಲ್ಯೂಮಿನಿಯಮ್ ಸರ ತಂದು ಕೊಟ್ಟಿದ್ದೀರ?. ಎಲ್ಲಾ ಗಂಡಸರು ಇಷ್ಟೇ... ಮದುವೆ ಆಗುವ ಮುಂಚೆ ಚಿನ್ನ... ರನ್ನ... ಎಂದೆಲ್ಲ ಹೋಗಳುವದು. ಆಮೇಲೆ ಮಡದಿ ಎಂದರೆ ಅಷ್ಟಕ್ಕೇ ಅಷ್ಟೇ ಎಂದು ಸರ ಬಿಸಾಡಿದಳು. ಸರಸರನೇ ಹೋಗಿ ಅದನ್ನು ಎಕ್ಸ್‌ಚೇಂಜ್ ಮಾಡಿ ಚಿನ್ನದ ಸರ ತಂದೆ.

ನಮ್ಮ ಸಮ್ಮಿಶ್ರ ಸರಕಾರಕ್ಕೆ ನಾಂದಿ ಹಾಡಿದ ಆ ಜೋತಿಷ್ಯ ಪಂಡಿತ ಯಾವ ಕವಡೆ ಕಾಸಿಗೋಸ್ಕರ ಕವಡೆ ಉರಿಳಿಸಿ ನಮ್ಮ ಜನ್ಮ ಕುಂಡಲಿಗಳನ್ನು ಸೇರಿಸಿದನೋ ನಾನು ಕಾಣೆ. ಪ್ರತಿ ವಿಷಯದಲ್ಲೂ ನಮ್ಮಿಬ್ಬರಲ್ಲಿ ಬಿನ್ನ ಅಭಿಪ್ರಾಯ ಖಂಡಿತ ಇರುತ್ತೆ. ಮತ್ತೆ ಇಷ್ಟೆಕ್ಕೆಲ್ಲಾ ಆಗ ತಾನೇ ಜೋತಿಷ್ಯ ಕಲೆಯುತ್ತಿದ್ದ ಮನೋಜ, ಮೂವತ್ತನೆ ವಯಸ್ಸಿನ ಒಳಗೆ ನಿನ್ನ ಮದುವೆ ಆಗದಿದ್ದರೆ, ಈ ಜನ್ಮದಲ್ಲಿ ಮದುವೆ ಆಗಲ್ಲ ಕಣೋ ಎಂದು ತನ್ನ ಕಲಿತ ವಿದ್ಯೆಯ ಪ್ರಯೋಗ ನನ್ನ ಮೇಲೆ ಮಾಡಿದ್ದು ಕೂಡ ಪರಿಣಾಮವಾಗಿ ಈ ಸರಕಾರ ಅಸ್ತಿತ್ವಕ್ಕೆ ಬಂತು.

ಒಂದು ದಿನ ಸೀರೆ ಅಂಗಡಿಗೆ ಹೋಗಿದ್ದೆವು. ರಾತ್ರಿ ಒಂಬತ್ತು ಆದರೂ ನಮ್ಮ ಸೀರೆ ಸೆಲೆಕ್ಶನ್ ಮುಗಿದಿರಲಿಲ್ಲ.ಅವಳಿಗೆ ನೀಲಿ ಬಣ್ಣ ಇಷ್ಟವಾದರೆ ನನಗೆ ಕೆಂಪು... ಕಡೆಗೆ ಸರ್ ಈಗ ಅಂಗಡಿ ಬಂದ್ ಮಾಡುವ ಸಮಯ ನಾಳೆ ಬನ್ನಿ ಎಂದ ಅಂಗಡಿಯವ. ನಾನು ನಾಳೆ ಬಂದರೆ ಆಗುತ್ತೆ ಎಂದು ಹೇಳಿದೆ. ಅದಕ್ಕೆ ಅವಳು ನೀವೇ ಒಂದು ಸೀರೆ ಸೆಲೆಕ್ಟ್ ಮಾಡಿ ಎಂದಳು. ಕಡೆಗೆ ನಾನು ಕೆಂಪು ಬಣ್ಣದ ಸೀರೆ ಸೆಲೆಕ್ಟ್ ಮಾಡಿದೆ. ಅವಳು ಬೇಡ ಅನ್ನುವ ಮೊದಲೇ ಅಂಗಡಿಯವ ಅದನ್ನು ತೆಗೆದು ಕೊಂಡು ಬಿಲ್ ಮಾಡಿಬಿಟ್ಟ. ಹೆಂಡತಿಯ ಮುಖಕ್ಕೂ ಆ ಸೀರೆಯ ಬಣ್ಣಕ್ಕೂ ಏನು ವ್ಯತ್ಯಾಸವೇ ಇರಲಿಲ್ಲ, ಅಷ್ಟು ಕೋಪ ಮಾಡಿಕೊಂಡು ಬಿಟ್ಟಿದ್ದಳು.

ಮನೆ ಬರುವವರೆಗೂ ಮೌನ ಗೌರಿಯ ಹಾಗೆ ಸುಮ್ಮನೇ ಕುಳಿತಿದ್ದು ನೋಡಿ ನನಗೆ ಆಶ್ಚರ್ಯ ಆಗಿತ್ತು. ಮನೆಗೆ ಬಂದವಳೇ ಅಡುಗೆ ಮನೆಗೆ ಹೊರಟು ಹೋದಳು. ಊಟಕ್ಕೆ ಕುಳಿತಾಗ ತಿಳಿಯಿತು ಅವಳು ತನ್ನ ಎಲ್ಲ ಬಿ ಪಿ ಸಾರಿನ ಮೇಲೆ ಪ್ರದರ್ಶನ ಮಾಡಿದ್ದಾಳೆ ಎಂದು. ಸಕ್ಕತ್ ಉಪ್ಪು ಸಾರು. ನಾನು ಲೇ.. ನೀನು ಇಷ್ಟು ಉಪ್ಪು ಹಾಕಿದರೆ ನನಗೆ ಬಿ ಪಿ ಬಂದರೆ ನಿನಗೆ ಕಷ್ಟ ಎಂದು ಹೇಳಿದೆ. ನಾನು ಬಿ ಪಿ ಹೆಚ್ಚಾಗಿ ಮತ್ತೆ ಗಂಡ ಹೊಡೆದರೆ ಪ್ರಸಾದ ಎಂದು ಸುಮ್ಮನೇ ಒಂದು ರೈಲು ಬಿಟ್ಟೆ. ಆದರೂ ಮೌನ ವ್ರತ ಮುರಿಯಲಿಲ್ಲ. "ಮೌನಂ ಸಮ್ಮತಿ ಲಕ್ಷಣಂ" ಎಂದು ಒಂದು ಹಾಗೆ ಸಣ್ಣದಾಗಿ ಹೊಡೆದೆ. ಆದರೂ ಏನು ಪ್ರಯೋಜನ ಆಗಲಿಲ್ಲ. ಮೊನ್ನೆ ಸ್ವೀಟ್ ತಂದಿದ್ದೆಯಲ್ಲ ಅದು ಚೆನ್ನಾಗಿತ್ತು ಕಣೇ ಎಂದೆ. ಆ ಸ್ವೀಟ್ ಅಂಗಡಿ ಎಲ್ಲಿ ಇದೆ ಎಂದು ಕೇಳಿದೆ. ಏನು ಉತ್ತರ ಬರಲಿಲ್ಲ.

ಮೂರು ದಿನ ಮೌನ ವ್ರತ. ನನ್ನ ಹತ್ತಿರ ದುಡ್ಡು ಇರಲಿಲ್ಲ ಹೀಗಾಗಿ ಕಡೆಗೆ ಸೀರೆ ಕೊಡಿಸಬೇಕು ಎಂದು ಯಾರಿಗಾದರೂ ಸಾಲ ಕೇಳಬೇಕು ಎಂದು ಸುಬ್ಬನ ಮನೆಗೆ ಹೋದೆ. ಸುಬ್ಬನಿಗೆ ಐದು ಸಾವಿರ ಸಾಲ ಕೊಡು ಎಂದು ಕೇಳಿದೆ. ಕೇಳಿದ ಕೂಡಲೇ ಪೆನ್ನು ತೆಗೆದುಕೊಂಡ. ನಾನು ಖುಶಿಯಿಂದ ಚೆಕ್ ಕೊಡಬಹುದು ಎಂದು ಅಂದುಕೊಂಡರೆ, ಒಂದು ಪೇಪರ್ ತೆಗೆದುಕೊಂಡು ಅದರಲ್ಲಿ ತನ್ನ ತಿಂಗಳ ಖರ್ಚಿನ ಬಗ್ಗೆ ವಿವರಣೆ ಕೊಟ್ಟು, ಅರ್ಧ್ ಘಂಟೆ ತಲೆ ತಿಂದು, ಕಾಫೀ ಕೂಡಿಸಿ ಕಳುಹಿಸಿದ. ನನಗೆ ಈಗ ೨೦ ಸಾವಿರ ಬೇಕು. ನೀನು ೩೦ ಸಾವಿರ ಕೊಡು ನಾನು ನಿನಗೆ 5 ಸಾವಿರ ಕೊಡುತ್ತೇನೆ ಅಂದ. ನಾನು "ಉದುವದನ್ನು ಕೊಟ್ಟು ಬಾರಿಸುವದು ತೆಗೆದುಕೊಂಡ ಹಾಗಾಯಿತು" ಎಂದು ಏನು ಹಾನಿಯಾಗದ ಹಾಗೆ ಹಣಿ ಹಣಿ ಗಟ್ಟಿಸಿದೆ. ಮಂಜನ ಹತ್ತಿರ ಕೇಳಿದರೆ ಎಂದು ಯೋಚಿಸಿ ಅವನ ಮನೆಗೆ ಹೊರಟೆ. ನನ್ನ ಬೆನ್ನಿಗೆ ಬೇತಾಳದ ಹಾಗೆ ನನ್ನ ಹಿಂದೆ ಬಂದ. ನಾನು ಕೇಳುವ ಮೊದಲೇ ನನಗೆ 20 ಸಾವಿರ ಬೇಕು ಅಂದ. ಸಾರಿ... ಸಾರಿ ....30 ಸಾವಿರ ಎಂದು ನನ್ನ ಮುಖ ನೋಡಿ ನಗುತ್ತಾ ಹೇಳಿದ. ಮಂಜ ನನ್ನ ಹತ್ತಿರ ಇರುವದು ಬರೀ 8 ಸಾವಿರ ಅದರಲ್ಲಿ ಬೇಕಾದರೆ 6 ಸಾವಿರ ಕೊಡಬಲ್ಲೆ ಎಂದ. ಅದಕ್ಕೆ ತಕ್ಷಣ ನಾನು ನನಗೆ ಅವಶ್ಯಕತೆ ಇದೆ ಕೊಡು ಎಂದು ಕೇಳಿದೆ. ಇಲ್ಲದೇ ಹೋಗಿದ್ದರೆ ಅದನ್ನು ಸುಬ್ಬ ಇಸಿದುಕೊಂಡು ಬಿಡುತ್ತಿದ್ದ. ಕಡೆಗೆ ಮಂಜನ ಕಡೆ ಸಾಲ ಇಸಿದುಕೊಂಡು ಬಂದೆ. ಅವಳು ಮಾತು ಕೇಳದೇ 3 ದಿವಸ ಆಗಿದ್ದರಿಂದ, ಪಕ್ಕದ ಮನೆಯವರು ರೇಡಿಯೋ/ ಟಿ ವಿ ಹಚ್ಚಿದರು ಕೂಡ ಹೆಂಡತಿ ಕೂಗಿದ ಹಾಗೆ ಅನ್ನಿಸೋದು. ಕೆಲ ಬಾರಿ ಏನು? ಎಂದು ಕೇಳಿ ಬೆಪ್ಪನ ಹಾಗೆ ನಿರುತ್ತರನಾಗಿ ಕುಳಿತುಬಿಟ್ಟಿದ್ದೆ.

ಮರುದಿನ ನಾನು ಅದೇ ಸೀರೆ ಅಂಗಡಿಗೆ ಹೋಗಿ ಅವಳು ಮೆಚ್ಚಿದ ನೀಲಿ ಬಣ್ಣದ ಸೀರೆ ತೆಗೆದುಕೊಂಡು ಬಂದೆ. ಮತ್ತು ಬರುವ ದಾರಿಯಲ್ಲಿ ನನ್ನ ಮಡದಿಗೆ ಕೇಳಿದ ಸ್ವೀಟ್ ಅಂಗಡಿಯ ಬಾಕ್ಸ್ ಹಿಡಿದು ಕೊಂಡು, ಒಂದು ಹುಡುಗಿ ಹೊರಟಿತ್ತು. ನಾನು ಅವಳನ್ನು ನೋಡಿ ಅವಳ ಹಿಂದೆ ಹೋದೆ. ಅವಳು ಮತ್ತೆ ಇನ್ನಷ್ಟು ಜೋರಾಗಿ ಹೊರಟಳು. ನನಗೆ ಘಾಬರಿ. ಆದರೂ ಸ್ವೀಟ್ ಚೆನ್ನಾಗಿ ಇತ್ತು ಎಂದು ಅವಳ ಮುಂದೆ ಹೋಗಿ ಗಾಡಿ ನಿಲ್ಲಿಸಿದೆ. ಅಷ್ಟರಲ್ಲಿ ಅವಳ ಅಪ್ಪ ಬಂದು ಬಿಟ್ಟ. ನನಗೆ ಇನ್ನೂ ಘಾಬರಿ ಇವಳನ್ನು ಬೆನ್ನು ಹತ್ತಿದ್ದಕ್ಕೆ, ಎಲ್ಲಿ ಎರಡು ಕೊಡುತ್ತಾನೆ ಎಂದು. ರೀ...ನಾವೊಬ್ಬರೇ ಅಷ್ಟೇ ಅಲ್ಲಾರಿ ಅಲ್ಲಿ ಕಸ ಹಾಕೋದು. ಎಲ್ಲರೂ ಹಾಕುತ್ತಾರೆ. ದುಡ್ಡು ನಮ್ಮ ಕಡೆ ಮಾತ್ರ ವಸೂಲಿ ಮಾಡಿದರೆ ಹೇಗೆ ಎಂದರು. ನಾನು ಪೆಕರನ ಹಾಗೆ ತಲೆ ಕೆರೆದು ಕೊಳ್ಳುತ್ತಿದೆ. ಮತ್ತೆ ನನ್ನಷ್ಟಕ್ಕೆ ನಾನೇ ನೋಡಿಕೊಂಡೆ. ಆಗ ಅರ್ಥ ಆಯಿತು. ನಾನು ಚ್ಯಾಕಲೇಟ್ ಕಲರ್ ಜ್ಯಾಕೆಟ್ ಹಾಕಿದ್ದು ನೋಡಿ ಬಿ ಬಿ ಎಂ ಪಿ ನೌಕರ ಎಂದು ಕೊಂಡಿದ್ದರು ಎಂದು. ಆಮೇಲೆ ಸರ್ ಬಿ ಬಿ ಎಂ ಪಿ ನೌಕರ ಅಲ್ಲ. ನೀವು ತೆಗೆದು ಕೊಂಡಿರುವ ಸ್ವೀಟ್ ಅಂಗಡಿ ಎಲ್ಲಿ ಇದೆ ಎಂದು ಆ ಪ್ಯಾಕೆಟ್ ತೋರಿಸಿ ಕೇಳಿದೆ. ಆಗ ಅವರು ಅಂಗಡಿ ತೋರಿಸಿದರು. ಆಮೇಲೆ ಅವರು ಆ ಸ್ವೀಟ್ ಬಾಕ್ಸ್ ಕಸ ಚೆಲ್ಲಿ ಹೊರಟು ಹೋದರು.

ಮನೆಗೆ ಬಂದು ನೀಲಿ ಸೀರೆ ಮತ್ತು ಸ್ವೀಟ್ ಬಾಕ್ಸ್ ಕೈಗೆ ಇಟ್ಟಾಗ ಮೌನ ವೃತ ಮುರಿದಿದ್ದಳು. ನಡೆದ ಸ್ವೀಟ್ ಅಂಗಡಿ ವಿಳಾಸದ ವಿಷಯ ಕೇಳಿ ಸಕ್ಕತ್ ನಕ್ಕೂ ಇವತ್ತು ಉಪ್ಪೆ ಇಲ್ಲದ ಸಾರು ಮಾಡಿ... ಸಾರಿ.. ಎಂದು ಉಲಿದಳು. ಹಾಗೆಂದು ನಮ್ಮಿಬ್ಬರಲ್ಲಿ ಯಾವುದೇ ಸಾಮ್ಯತೆ ಇಲ್ಲ ಎಂದು ತಿಳಿಯಬೇಡಿ, ಇಬ್ಬರಿಗೂ ಮಿಸ್ಸಳ್, ಮಿಸ್ಸಳ್ ಭಾಜಿ ಇಷ್ಟ. ಮತ್ತು ಮಿಶ್ರ ಮಾಧುರ್ಯ ರೇಡಿಯೋ ಕಾರ್ಯಕ್ರಮ ಕೂಡ.

Friday, December 17, 2010

ಕಾಯುವಿಕೆ ಅಂತ್ಯ ....

ಹಾಗೆ ಪೇಪರ್ ಓದುತ್ತಾ ಕುಳಿತಿದ್ದೆ. ಪೇಪರ್ ನಲ್ಲಿ ಅತಿ ಪ್ರಾಮಾಣಿಕತೆಯಿಂದ ನೋಡುವ ಒಂದು ಅಂಕಣ ಎಂದರೆ ನನ್ನ ಭಯದ + ವಿಷಯ (ಭವಿಷ್ಯ). ಈ ವಾರ ನಿಜವಾಗಿಯೂ ಭಯದ ವಿಷಯವೇ ಇತ್ತು ಅನ್ನಿ. ಏಕೆಂದರೆ ಈಗ ಅಪ್ರೈಸಲ್ ಸಮಯ.... ಕಳೆದ ವಾರ ಕೈ ಕೆರೆತ ಬೇರೆ ಆಗಿ ಒಂದು ವಾರ ರಜೆ ತೆಗೆದುಕೊಂಡಿದ್ದಕ್ಕೆ, ನನ್ನ ಬಾಸ್ ಬೇರೆ ಕೋಪ ಮಾಡಿಕೊಂಡಿದ್ದರು. ಹೀಗಾಗಿ ನನ್ನ ಭವಿಷ್ಯ ಭಯದ ವಿಷಯವಾಗಿ ಪರಣಮಿಸಬಹುದು ಎಂದು ನಾನು ಎಣಿಸಿದ್ದೆ. ಹೇಗಿದ್ದರು ಭವಿಷ್ಯ ನಮ್ಮ ಮನೋಜನೆ ಬರೆಯೋದು ಚೆನ್ನಾಗೆ ಬರೆದಿರುತ್ತಾನೆ ಎಂದು ತೆಗೆದು ನೋಡಿದೆ. ನನ್ನ ರಾಶಿ ಮೀನಕ್ಕೆ ಕಣ್ಣು ಆಡಿಸಿದೆ. ಚೆನ್ನಾಗಿ ಬರೆದಿದ್ದ. ಖುಷಿಯಾಗಿ ನೋಡಿ ಪೇಪರ್ ಬಂದು ಮಾಡ ಇಡ ಹತ್ತಿದಾಗ, ಮಡದಿ ಏನ್ರೀ?. ನಿಮ್ಮ ಭವಿಷ್ಯ ಅಷ್ಟು ನೋಡಿದರೆ ಆಯಿತ?, ಥೂss.. ನಿಮ್ಮ ಎಂದು ಉಗಿದಳು. ಅವಳು ಉಗಿದ ಥೂ ಅನ್ನು ಸ್ವಲ್ಪೇ ಕ್ಯಾಚ್ ಮಾಡಿ, ಚಿಕ್ಕದಾದ ಥು ನನ್ನ ರಾಶಿಯ ಮಧ್ಯ ತೂರಿಸಿ, ಅವಳ ಭವಿಷ್ಯ ಓದಿದೆ(ಮಿಥುನ). ಅಷ್ಟಕ್ಕೇ ಬಿಡದೆ ಮಗನ ಭವಿಷ್ಯ ಕೂಡ ಓದಿಸಿದಳು. ಮಗನ ಭವಿಷ್ಯದಲ್ಲಿ ಉನ್ನತ ವ್ಯಾಸಂಗ ಎಂದು ಬರೆದಿತ್ತು. ಮನೋಜ ನಿಜವಾಗಿಯೂ ತ್ರಿಕಾಲ ಜ್ಞಾನಿ ಎಂದು ಅನಿಸಿತು. ಏಕೆಂದರೆ ಮಗನಿಗೆ ಬೇರೆ ಸ್ಚೂಲ್‌ನಲ್ಲಿ ಎಲ್ ಕೇ ಜಿ ಸೇರಿಸಬೇಕಿತ್ತು. ಅವಳು ಅಡಿಗೆ ಮನೆಗೆ ಕಾಫೀ ತರಲು ಹೋದಳು. ನಾನು ಪೇಪರ್ ಎತ್ತಿ ಇಟ್ಟೆ.

ಕಾಫೀ ಕಪ್ ತೆಗೆದುಕೊಂಡು ಬಂದು, ರೀ ಅಂದ ಹಾಗೆ ನಿಮ್ಮ ಭವಿಷ್ಯ ಓದಲೇ ಇಲ್ಲ ಎಂದಳು. ನನಗೆ ಕಾಫೀ ಕೊಟ್ಟು ತಾನೇ ಓದಲು ಶುರು ಮಾಡಿದಳು. ಮದುವೆ ಪ್ರಸ್ತಾಪ ಮತ್ತು ಕಾಯುವಿಕೆ ಅಂತ್ಯ ಎಂದು ಬರೆದಿತ್ತು. ರೀ ಇಲ್ಲಿ ಒಂದು ತಪ್ಪು ಆಗಿದೆ. ಮರು ಮದುವೆ ಎಂದು ಬರಬೇಕಿತ್ತು ಅಲ್ಲವೇ ಎಂದು ಅಪಹಾಸ್ಯ ಮಾಡಿದಳು. ಹೇಗಿದ್ದರು ಕಾಯುವಿಕೆ ಅಂತ್ಯ ಎಂದು ಇನ್ನೊಂದು ಭವಿಷ್ಯ ಸಾಕಾರ ಆಗಬಹುದು ಎಂದು ಎಣಿಸಿ, ನಾನು ಸ್ನಾನ ತಿಂಡಿ ಮುಗಿಸಿ ಆಫೀಸ್ ಹೊರಟೆ.

ಆಫೀಸ್ ತಲುಪಿದ ತಕ್ಷಣ ಬಾಸ್ ಫೋನ್ ಬಂತು. ಇವತ್ತು ನಾನು ಸ್ವಲ್ಪ ಬೇಗನೆ ಹೋಗಿದ್ದರಿಂದ ಬೈಸಿಕೊಳ್ಳುವುದಕ್ಕೆ ಅಲ್ಲ ಎಂದು ಫೋನ್ ಎತ್ತಿದೆ. ರೀ.. ಗೋಪಾಲ್ ಕ್ಯಾಬಿನ್ ಗೆ ಬನ್ನಿ ನಿಮ್ಮ ಜೊತೆ ಮಾತನಾಡುವುದಿದೆ ಎಂದರು. ನಾನು ಸಕ್ಕತ್ ಖುಷಿ. ಅಪ್ರೈಸಲ್ ಎಂದು ಒಳಗಡೆ ಹೆಜ್ಜೆ ಇಟ್ಟೆ. ಒಳಗಡೆ ಬಾಸ್ ಮತ್ತು ಆಡ್‌ಮಿನ್ ಇಬ್ಬರು ಕುಳಿತಿದ್ದರು. ಇಬ್ಬರ ಕೈಯಲ್ಲಿ ಪೇಪರ್ ಬೇರೆ ಇತ್ತು. ನನಗೆ ಸ್ವರ್ಗಕ್ಕೆ ಮೂರೇ ಗೇಣು. ಒಳಗೆ ಹೋದ ಕೂಡಲೇ ಬನ್ನಿ ಕುಳಿತುಕೊಳ್ಳಿ ಎಂದರು. ಕಾಫೀ ಬೇರೆ ತರಿಸಿದರು. ಕಾಫೀ ಕುಡಿದೆ. ಸಾವಕಾಶವಾಗಿ ಪೇಪರ್ ತೆಗೆದು ನೋಡಿ, ಗೋಪಾಲ್... ಈಗ ನಾಲ್ಕನೇ ಫ್ಲೋರ್ ಬೇರೆ ಶುರು ಆಗಿದೆ ಎಂದರು. ನಾನು ಹೌದು ಸರ್ ಎಂದೆ. ಸಧ್ಯ ನನ್ನ ಅಪ್ರೈಸಲ್ ಮಾಡಿ ನಾಲ್ಕನೇ ಫ್ಲೂರ್ಗೆ ಕಳುಹಿಸುತ್ತಾರೆ ಎಂದು ಇನ್ನೂ ಖುಷಿಯಾಗಿದ್ದೆ. ಪೇಪರ್ ನನ್ನ ಮುಂದೆ ಹಿಡಿದು ನಿಮ್ಮ ಕ್ಯೂಬಿಕಲ್ ಶಿಫ್ಟ್ ಮಾಡುತ್ತಾ ಇದ್ದೇವೆ, ನಿಮ್ಮ ಆಸನ ನೀವೇ ಆರಿಸಿಕೊಳ್ಳಿ ಎಂದರು. ನಾನು ದಿಕ್ಕುಗಳನ್ನು ಪರಿಶಿಸಿಲಿಸಿ, ಸರ್.. ನನಗೆ ಇದು ಬೇಕು ಎಂದು ಆರಿಸಿದೆ. ಮತ್ತೆ ಹಾಗೆ ಕುಳಿತಿದ್ದೆ. ಆಯಿತು ಗೋಪಾಲ್ ಎಂದು ಹೇಳಿ ಕೈ ಕುಲುಕಿದರು. ನನಗೆ ದಿಕ್ಕೇ ತೋಚಾದಾಗಿತ್ತು.

ಮತ್ತೆ ಎದ್ದು ಸಾವಕಾಶವಾಗಿ ಎದ್ದು ನನ್ನ ಆಸಾನಕ್ಕೆ ಬಂದು ಒರಗಿದೆ. ಸಂಜೆವರೆಗೂ ಕಾಯುತ್ತಾನೆ ಇದ್ದೆ. ಬಾಸ್ ಎರಡು ಬಾರಿ ಕರೆದು ಹೊಸ ಹೊಸ ಪ್ರಾಜೆಕ್ಟ್ ಗಳ ಬಗ್ಗೆ ವಿವರಣೆ ನೀಡಿದರು ಮಾತ್ರ. ಸಂಜೆ ಮತ್ತೆ ಕರೆದು ಸ್ಟೇಟಸ್ ಬೇರೆ ಕೇಳಿ ಮನೆಗೆ ಕಳುಹಿಸಿದರು. ಎಷ್ಟೇ ಆದರೂ ನಾನು ಬಸವಣ್ಣನವರ "ಕಾಯಕವೇ ಕೈಲಾಸ" ಎಂಬ ಆಜ್ಞೆ ಪಾಲಕನಿಗೆ ಇವತ್ತು ಬರೀ ಕಾಯುವಿಕೆಯ ಕೆಲಸ ಹತ್ತಿತ್ತು. ನಿರಾಸೆಯ ಅಲೆಯಲ್ಲಿ ತೇಲುತ್ತ ಮನೆಗೆ ಬಂದೆ.

ಕಾಫೀ ಕೊಡುತ್ತಾ ನನ್ನ ಕಳೆ ಗುಂದಿದ ಮುಖ ನೋಡಿ ಮಡದಿ ಏಕೆ? ಏನು? ಏನಾಯಿತು... ಎಂದು ಪ್ರಶ್ನಿಸಿದಳು. ನಾನು ನಡೆದ ವಿಚಾರ ಅವಳಿಗೆ ಹೇಳಿದೆ. ಸರಿ ಮತ್ತೆ ನಿಮ್ಮ ಕಾಯುವಿಕೆ ಅಂತ್ಯ ಆಯಿತು ಅಲ್ಲ ಎಂದಳು. ನೀವೇ ಹೇಳಿದ್ದು ತಾನೇ, ನಿಮ್ಮ ಕ್ಯೂಬಿಕಲ್ ಬಾಗಿಲ ಹತ್ತಿರ ಇದೆ, ಯಾರಾದರೂ ಒಳಗೆ ಬಂದರು, ನಿಮಗೆ ಕಾರ್ಡ್ ಸ್ವಾಪ್ ಮಾಡಿದ ಸೌಂಡ್ ಬರುತ್ತೆ ಅಂತ. ಮತ್ತೆ ನಿಮ್ಮನ್ನು ನೀವೇ ಕೆಲ ದಿನ ಸೆಕ್ಯೂರಿಟೀ ಗಾರ್ಡ್ ಎಂದು ಹೋಲಿಸಿಕೊಂಡಿದ್ದೀರಿ ನಿಜ ತಾನೇ? ಎಂದು ಗಹ ಗಹಿಸಿ ನಗುತ್ತಾ ಅಂದಳು. ಹಾ ...ಹೌದಲ್ಲ ಎಂದು ನನ್ನ ತಲೆಗೆ ನಾನೇ ಮೊಟಕಿದೆ. ನಿಜವಾಗಿಯೂ ನನ್ನ ಕಾಯುವಿಕೆ ಅಂತ್ಯವಾಗಿತ್ತು. ಸ್ವಲ್ಪ ನಗು ನನ್ನ ಮುಖದಲ್ಲಿ ಮೂಡಿತ್ತು. ಮನೋಜನ ಭವಿಷ್ಯ ಕೂಡ...

ಅಷ್ಟರಲ್ಲಿ ಮಗ ಏಕೆ? ಇಷ್ಟು ಮಳೆ ಬರುತ್ತಾ ಇದೆ ಅಪ್ಪ ಎಂದು ಕೇಳಿದ. ಅದು ಸೈಕ್ಲೋನ್ ಎಂದು ಹೇಳಿದೆ. ಮಗ ಅದನ್ನು ಸೈಕಲ್ ಎಂದು ಕೊಂಡು, ಅದನ್ನು ಹೇಗೆ ಹೊಡೆಯುವದು ಅಪ್ಪ ಎಂದು ಕೇಳಿದ. ನನಗೆ ನಗು ತಡೆಯಲು ಅಗಲೆ ಇಲ್ಲ... ಜೋರಾಗಿ ನಗಹತ್ತಿದೆ. ಮಗನಿಗೆ ಅಪಮಾನ ಆದ ಹಾಗೆ ಆಗಿತ್ತು. ಅವನು ಜೋರಾಗಿ ಅಳಹತ್ತಿದ. ಮತ್ತೆ ಅವನನ್ನು ಸಮಾಧಾನ ಮಾಡಿ, ಊಟ ಮುಗಿಸಿ, ಎಲ್ಲ ಕಹಿ ಮರೆತು ಸಿಹಿ ನಿದ್ದೆಗೆ ಜಾರಿದೆವು.

ಮರೆತೇನೆಂದರೆ ಮರೆಯಲಿ ಹ್ಯಾಂಗ!? ....

ನಾನು ತುಂಬಾ ಬಾರಿ ಭೂತವನ್ನು ಬೆನ್ನುಹತ್ತಿ ಹೋಗಿದ್ದೇನೆ. ಭೂತ ನನಗೆ ಯಾವತ್ತೂ ಹೆದರಿಸುವ ಕೆಲಸ ಮಾಡಿಲ್ಲ. ಅದರ ಜೊತೆಗಿನ ಅನುಭವ ಸುಮಧುರವಾಗಿದೆ. ಮತ್ತೆ.. ಮತ್ತೆ.. ಭೂತ ನನ್ನ ಮಾತನಾಡಿಸಿದೆ. ತಪ್ಪು ತಿಳಿಯಬೇಡಿ, ನಾನು ಮಾತನಾಡುತ್ತಿರುವದು ನಮ್ಮನ್ನು ಸದಾ ಕಾಡುವ ಭೂತ ಕಾಲದ ಬಗ್ಗೆ. ನನ್ನ ಕಳೆದ ಮಾಸಿದ ಮಧುರ ಅನುಭವಗಳನ್ನು ಮೆಲಕು ಹಾಕಿದ್ದೇನೆ. ನನಗೆ ತುಂಬಾ ಇಷ್ಟವಾಗುವ ಧಾರಾವಾಹಿ ಎಂದರೆ ವಿಕ್ರಮ್ ಬೆತಾಳ್. ಏಕೆಂದರೆ ಪ್ರತಿ ಬಾರಿ ನಾನು ಕಳೆದ ಮಧುರ ಕ್ಷಣಗಳ ಭೂತವನ್ನು ಹೊತ್ತು ತರುತ್ತೇನೆ. ಮತ್ತೆ ಅದರ ಜೊತೆ ಒಂದು ನೀತಿ ಪಾಠವನ್ನು ಕೂಡ ಕಲೆತಿರುತ್ತೇನೆ. ನಾನು ಅದನ್ನು ಬಿಟ್ಟು ಬಿಡುತ್ತೇನೆ. ಮತ್ತೆ ಅದರ ಹಿಂದೆ ಹೋಗಿ ಮತ್ತೊಂದು ಹೊಸ.. ಹೊಸ.. ಕಥೆಗಳನ್ನು ಹೊತ್ತ ಭೂತವನ್ನು ಹೆಗಲ ಮೇಲೆ ಕುಳ್ಳಿರಿಸಿ ಮುಂದೆ ನಡೆಯುತ್ತೇನೆ. ಇದು ನಿರಂತರವಾಗಿ ನಡೆಯುವ ಕ್ರಿಯೆ.

ಹೀಗೆ ಎರಡು ದಿನದಿಂದ ಏನಾದರೂ ಹಳೆಯ ನೆನಪುಗಳನ್ನು ಬರೀಬೇಕು ಎಂದು ಯೋಚಿಸುತ್ತಾ ತಲೆಕೆಡಿಸಿಕೊಂಡಿದ್ದೆ. ನಿನ್ನೆ ರಾತ್ರಿ ಬೇರೆ ಮಡದಿಗೆ ಆರೋಗ್ಯ ಸರಿ ಇರಲಿಲ್ಲ. ಹೀಗಾಗಿ ಎಲ್ಲ ಕೆಲಸ ನನ್ನ ಹೆಗಲ ಮೇಲೆ ಬಿದ್ದಿತ್ತು. ಮೊದಮೊದಲು ಯಾವುದೆ ಸ್ತ್ರೀ... ಕ್ಷಮಿಸಿ... ಇಸ್ತ್ರಿ ಮುಟ್ಟಲು ಹೆದರುತ್ತಿದ್ದೆ. ಮದುವೆ ಆದ ಮೇಲೆ ಈಗ ಸ್ವಲ್ಪ ಧೈರ್ಯ ಬಂದಿದೆ. ಅದಕ್ಕೆ ಅಪ್ಪ ಚಿಕ್ಕವಾನಿದ್ದಾಗ ಲೇ ನೀನು "ಅರಳಿ ಅಂಡಿಗೇ ಮೇಲೆ ಲಗಾಟಿ ಹೊಡೆಯುವ ನೀನು" ಅನ್ನುತ್ತಿದ್ದರು. ರಾತ್ರಿನೆ ಇಸ್ತ್ರಿ ಮಾಡಿ ಬಟ್ಟೆ ಎತ್ತಿ ಇಟ್ಟಿದ್ದೆ.

ಮುಂಜಾನೆ ಬೇಗ ಐದು ಘಂಟೆಗೆ ಎದ್ದು ಕಸ ಗುಡಿಸಿ, ಪಾತ್ರೆ ತೊಳೆದು ಹಾಗೆ ಲೇಖನದ ಯೋಚನೆಯಲ್ಲಿ ಟೀ ಮಾಡಿಕೊಂಡು ಬಂದು ಕುಳಿತೆ. ಲೇಖನದ ಗುಂಗಿನಲ್ಲಿ ಟೀ ಪಾತ್ರೆ ತೊಳೆಯೋಕೆ ಎಂದು ಲೈಟ್ ಆಫ್ ಮಾಡಿ, ಮುಂದಿನ ಬಾಗಿಲ ಮುಚ್ಚಿ ಹೋದೆ. ಟೀ ಪಾತ್ರೆ ತೊಳೆದ, ಕೆಲ ಸಮಯದ ನಂತರ "ಕಟ್.. ಕಟ್.." ಬಾಗಿಲ ಶಬ್ದ. ಇಷ್ಟು ಘಂಟೆಗೆ ಯಾರು? ಬಂದಿರಬಹುದು ಎಂದು ಯೋಚಿಸಿದೆ. ನಿನ್ನೆ ಮನೆ ಓನರ್ ಗೆ ಬಾಡಿಗೆಗೆ ಎರಡು ನೂರು ಚಿಲ್ಲರೆ ಇರದ ಕಾರಣ ನಾಳೆ ಕೊಡುತ್ತೇನೆ ಎಂದು ಹೇಳಿದ್ದೆ. ಪಾಪ ಒಳ್ಳೇ ಮನುಷ್ಯ, ಹಾಗೆಲ್ಲಾ ಬೆಳಿಗ್ಗೇನೇ ತೊಂದ್ರೆ ಕೊಡೋ ಆಸಾಮಿ ಅಲ್ಲ. ಬಹುಶಃ ಹಾಲಿನವನು ಬೇಗ ಬಂದನೆ ಎಂದು ಪಾತ್ರೆ ತೆಗೆದುಕೊಂಡೆ. ಹಾಗೆ ಬೈದುಕೊಳ್ಳುತ್ತ ಬಾಗಿಲು ತೆಗೆದು, ಪಾತ್ರೆ ಮುಂದೆ ಹಿಡಿದೆ. ಪಾತ್ರೆ ಕಸಿದು, ಬಾಗಿಲು ನುಕಿ, ಒಬ್ಬ ಸೀರೆ ಉಟ್ಟ ಮಹಿಳೆ ಒಳಗಡೆ ಬಂದಳು. ರೀss.. ಯಾರು? ಬೇಕು ನಿಮಗೆ ಎಂದು ದಬಾಯಿಸಿದೆ. ಲೈಟ್ ಆನ್ ಮಾಡಿದಳು ನನ್ನ ಮಡದಿ. ಏನೇ? ನೀನು ಇಷ್ಟು ಬೇಗ ಎದ್ದು ವಾಕಿಂಗ್ ಹೋಗಿದ್ಯಾ ಎಂದು ಆಶ್ಚರ್ಯವಾಗಿ ಕೇಳಿದೆ. ಮಾತು.. ಕಥೆ.. ಇಲ್ಲದೇ ಸಕ್ಕತ್ ಕೋಪ ಮಾಡಿಕೊಂಡು ತವರು ಮನೆಗೆ ಹೊರಟು ಹೋದಳು. ತವರು ಮನೆ ಎಂದರೆ ನಾನು ಹೇಳಿದ್ದು ಅಡುಗೆ ಮನೆ... ಏಕೆಂದರೆ ಹೆಣ್ಣು ಮಕ್ಕಳ ಇಷ್ಟವಾದ ಜಾಗ ಅದೇ ಅಲ್ಲವೇ. ಟೀ ತೆಗೆದು ಕೊಂಡು ಬಂದು ಕೋಪದಿಂದ ಹೊರಗಡೆ ಬಂದು ಕುಳಿತಳು.

ಏಕೆ? ಏನು? ಆಯಿತು ನಿನ್ನೆ ತಾನೇ ಆರೋಗ್ಯ ಸರಿ ಇಲ್ಲ ಎಂದು ಹೇಳಿದ್ದೆ ಎಂದು ಕೇಳಿದೆ. ಸಕ್ಕತ್ ಕೋಪದಿಂದ, ನಿಮ್ಮ ಮುಂದೆನೇ ಎದ್ದು ಥಳಿ.. ರಂಗೋಲಿ ಹಾಕೋಕೆ ಹೋದೆ. ಬೇಕು ಅಂತಾನೆ ಹೊರಗೆ ಹಾಕಿದ್ದು ಎಂದಳು. ನಾನು ಲೇಖನದ ಯೋಚನೆಯಲ್ಲಿ ಅವಳು ಎದ್ಡಿದ್ದು ಗಮನಿಸಿರಲಿಲ್ಲ. ಏನೇ?.. ಬೇಕು ಅಂತ ನಿನ್ನ ಹೊರಗೆ ಹಾಕೋಕೆ ಆಗುತ್ತಾ ಎಂದು ಡಬಲ್ ಮೀನಿಂಗ್ ಡೈಲಾಗ್ ಬಿಟ್ಟೆ. ಅರ್ಥ ಆಗಲಿಲ್ಲ, ಮತ್ತೆ ಬಚಾವ್. ನಾನು ಗಮನಿಸಿರಲಿಲ್ಲ ಕಣೇ? ಸಾರೀ ಎಂದು ಹೇಳಿದೆ.

ನಿಮ್ಮ ಲಕ್ಷ್ಯ ಎಲ್ಲಿ ಇತ್ತು ಎಂದು ಕೇಳಿದಳು. ಲೇ ಅದು ಒಂದು ಲೇಖನದ ಬಗ್ಗೆ ತುಂಬಾ ಆಳವಾಗಿ ಯೋಚಿಸುತ್ತಾ ಇದ್ದೆ ಎಂದೆ. ಅಂತಹ ಗಾಡವಾದ ವಿಷಯ ಏನು? ಇತ್ತು ರಾಯರದು ಎಂದಳು. ಅದು ನನ್ನ ಹಳೆಯ ನೆನಪುಗಳ ಬಗ್ಗೆ ಒಂದು ಲೇಖನ ಬರಿಬೇಕು ಎಂದು ಕೊಂಡಿದ್ದೇನೆ ಎಂದೆ. ನಿಮಗೆ ನನ್ನ ಇರುವಿಕೆಯ ಅರಿವಿಲ್ಲ, ಇನ್ನೂ ನೀವು ಅಷ್ಟು ದೂರ ಹೋಗಿ ಬಿಟ್ಟರೆ ಅಷ್ಟೇ ಕಥೆ ಎಂದು ಹೀಯಾಳಿಸಿದಳು.

ನಿಮ್ಮ ಹಳೆಯ ಕಥೆಗಳು ಎಂದರೆ ಅದೇ ತಾನೇ ನೀವು ಹೇಳುತ್ತಿರುತ್ತೀರಲ್ಲ ಚಿಕ್ಕವರಿದ್ದಾಗ 10 ರೂಪಾಯಿಗೆ 1 ಕೆ ಜಿ ಅಕ್ಕಿ ಎಂದೆಲ್ಲ.... ನಿಮ್ಮ ತಂದೆಯ ಪಗಾರ ಆ ಸಮಯದಲ್ಲಿ 2000 ಇತ್ತು. ಅದು ಆ ಕಾಲಕ್ಕೆ ಹೊಂದಾಣಿಕೆ ಆಗುತಿತ್ತು. ಈಗ ನಿಮ್ಮ ಪಾಗಾರ ನೋಡಿ ಎಂದಳು. ಹಾ... ಅವಳು ಹೇಳಿದ್ದು ಸರಿ ಅನ್ನಿಸಿತು. ಮತ್ತೆ ನೀವು ಗೋಲ್ ಗುಂಬಜ್ ನೋಡಿದ್ದೀರಾ? ಎಂದು ಕೇಳಿದಳು. ಹಾ... ನೋಡಿದ್ದೇನೆ ಒಂದು ಸಾರಿ ಒದರಿದರೆ 7 ಸಾರಿ ಕೇಳಿಸುತ್ತೆ ಎಂದೆ. ಅಂತಹ ಒಂದು ಮಶೀನ್ ನಿಮಗೆ ಬೇಕು ಎಂದು ಹೀಯಾಳಿಸಿದಳು . ಮತ್ತೆ ಏನು? ನೋಡಿದಿರಿ ಅಲ್ಲಿ ಎಂದಳು. ನಾನು ಕೆಳಗಡೆ ಇರುವ ಜನ ಚಿಕ್ಕ ಚಿಕ್ಕದಾಗಿ ಸೇವಂತಿ ಹೂವಿನ ಪಕಳೆ ಹಾಗೆ ಕಾಣಿಸುತ್ತಿದ್ದರು ಎಂದೆ. ನೀವು ಕೆಳಗಡೆ ಹೋದರೆ ಅವಿರಿಗಿಂತ ಚಿಕ್ಕದಾಗಿ ಇದ್ದೀರಾ? ಗೊತ್ತಾ... ಕುಳ್ಳ ಮಹಾಶಯರೇ ಎನ್ನಬೇಕೆ. ಅವಳು ಅದೇ ನೀವು ಮಾಡೋ ತಪ್ಪು, ಮೇಲೆ ನೋಡಲಿಲ್ಲವೇ ನಮ್ಮ ಹತ್ತಿರಾನೇ ಬಂದು ಹೋಗೋ ವಿಮಾನ, ಹಕ್ಕಿ ಮತ್ತೆ ಆಕಾಶ ಎಂದೆಲ್ಲ ಕೇಳಿದಳು. ನಿಜ ಅನ್ನಿಸಿತು ನಾವು ಎಲ್ಲರೂ ಮಾಡುವದನ್ನು ಮಾತ್ರ ಗಮನಿಸುತ್ತೇವೆ ಮತ್ತೆ ಹೊಸತಾಗಿ ಯೋಚಿಸುವುದೆ ಇಲ್ಲ ಎಂದು. ಮತ್ತೆ ಗೋಪಿಕಾ ಸ್ತ್ರೀಯರು (ಹಳೆ ಗರ್ಲ್ ಫ್ರೆಂಡ್) ಏನಾದರೂ ನೆನಪಿಗೆ ಬಂದರಾ ಎಂದು ಹೇಳಿ, ಮನಸಿಗೆ ಕಚಗುಳಿ ಇಟ್ಟು, ನೋಡಿ ನೀವು ವರ್ತಮಾನದ ಬಗ್ಗೆ ಮಾತ್ರ ಯೋಚಿಸಿ ಬರೆಯಿರಿ. ನೀವು ಭೂತಕಾಲದ ಬಗ್ಗೆ ಯೋಚನೆ ಮಾಡುತ್ತಾ ಇದ್ದರೆ ಅಷ್ಟೇ ಕತೆ ಎಂದು ಒಂದು ಬಾಂಬ್ ಹಾರಿಸಿ, ಟೀ ಕುಡಿದು ಸ್ನಾನಕ್ಕೆ ಹೊರಟು ಹೋದಳು.

Tuesday, December 14, 2010

ಒಂದು ಮಧ್ಯಂತರ ಕಥೆ ....

ಮಧ್ಯ ನನ್ನ ಜೊತೆ ಜೊತೆಗೆ ಇರುವ ವಸ್ತು. ಘಾಬರಿ ಆಯಿತಾ?. ಕೇಳಿ ನನ್ನ ಜೊತೆ ಇರುವ ಮಧ್ಯ ಮತ್ತು ಅಂತರದ ಕಥೆ (ವ್ಯಥೆ).

ನನ್ನ ಅಕ್ಕ ಮತ್ತು ತಂಗಿಯ ಮಧ್ಯ ನಾನು ಜನಸಿದ್ದು. ಮಧ್ಯ ಹುಟ್ಟಿದ ಮಾತ್ರಕ್ಕೆ ಆ ನಾಮಧೇಯಕ್ಕೆ(ಮಧ್ಯ - ಹೆಂಡಕ್ಕೆ ಅಲ್ಲ ಸ್ವಾಮಿ...ನಡುವೆ) ನೈವೇದ್ಯ ಆಗಿದ್ದು ಮಾತ್ರ ಹಲವು ಬಾರಿ. ಶಾಲೆಗೆ ಸೇರಿದೆ ಅಲ್ಲಿ ಕೂಡ ಈ ಮಧ್ಯ ನನ್ನ ಬಿಡಲಿಲ್ಲ. ನಾನು ಇಬ್ಬರು ಹುಡುಗರ ಮಧ್ಯ ನನ್ನ ಆಸನ. ಅಡ್ಡ ಕತ್ತರಿಯಲ್ಲಿ ಅಡಿಕೆ ಆದ ಹಾಗೆ, ಹಾಗೂ.. ಹೀಗೂ... ಮಿಸುಗುವ ಹಾಗಿಲ್ಲ ಕೂಡ. ಮತ್ತೆ ಪರೀಕ್ಷೆಯಲ್ಲಿ ಕೂಡ ಇದೆ ಕಥೆ... ಯಾವತ್ತೂ ಎರಡನೆ ಶ್ರೇಯಾಂಕದಲ್ಲಿ ಉತ್ತೀರ್ಣ ಆಗುತ್ತಿದ್ದೆ. ಮೊದಲನೇಯವನಾಗುವದು ಕನಸಿನ ಮಾತಾಗಿತ್ತು. ಹೇಗಾದರೂ ಮಾಡಿ ಈ ಬಾರಿ ಕೆಟ್ಟದಾಗಿ ಬರೆದು, ಮೂರನೇ ಶ್ರೇಯಂಕಕ್ಕೆ ಹೋಗಬೇಕು ಎಂದು ಯೋಚಿಸಿ ಪರೀಕ್ಷೆ ಬರೆದೆ. ನನ್ನ ಗೆಳೆಯ ಶ್ರವಣ ತನ್ನ ಮೂರನೇ ಶ್ರೇಯಾಂಕದ ಆಸನ ಭದ್ರವಾಗಿ ಹಿಡಿದು ಕುಳಿತು ಬಿಟ್ಟಿದ್ದ. ಆಗ ಅನ್ನಿಸಿತು ಇವನು ಯಾರೋ ರಾಜಕಾರಣಿ ಮಗನೆ ಇರಬೇಕು ಎಂದು.. ಕಡೆಗೆ ಮತ್ತೆ ಎರಡನೆ ಶ್ರೇಯಾಂಕ ಲಭಿಸಿತು. ಆಗ ಅನ್ನಿಸಿತು ಈ ಮಧ್ಯ ತುರುವ ಕೆಲಸಕ್ಕಿಂತ ಅಂತರದಲ್ಲಿ ಇರುವುದು ಉತ್ತಮ ಎಂದು.

ಒಂದು ದಿನ ನಾನು ಒಬ್ಬರ ಮನೆಗೆ ಊಟಕ್ಕೆ ಆಹ್ವಾನಿಸಲ್ಪಟ್ಟಿದ್ದೆ. ಅಲ್ಲಿ ಕೂಡ ನನಗೆ ಮಧ್ಯದ ಆಸನ ದೊರೆಯಿತು. ಮತ್ತೆ ಊಟ ಹಾಕಿದರು. ನನಗೆ ನನ್ನ ದೇಹದ ಮಧ್ಯ ಭಾಗ(ಹೊಟ್ಟೆ) ಕೆಟ್ಟಿದ್ದರಿಂದ, ನಾನು ಮೊಸರನ್ನ ತಿಂದರೆ ಆಗುತ್ತೆ ಎಂದು, ಸಲ್ಪ ಸಾರು ಅನ್ನ ಊಟ ಮಾಡಿದೆ. ಚಪಾತಿ ಎಲ್ಲ ಆದ ಮೇಲೆ ಮತ್ತೆ ಸಾರು ಅನ್ನ ಬಂತು ನಾನು ಹಾಕಿಸಿ ಕೊಳ್ಳಲಿಲ್ಲ. ನಾನು ಮೊಸರನ್ನಕ್ಕೆ ಕಾಯುತ್ತಿದ್ದೆ. ಕಡೆಗೆ ಮೊಸರನ್ನ ಬರಲೇ ಇಲ್ಲ. ಹೊಟ್ಟೆ ತುಂಬಿದ ಹಾಗೆ ಅನ್ನಿಸಲಿಲ್ಲ ಮತ್ತು ಹೊಟ್ಟೆ ಹಸಿದ ಹಾಗೆ ಕೂಡ ಅನ್ನಿಸಲಿಲ್ಲ. ಹಾಗೆ ಅರ್ಧ ಹೊಟ್ಟೆಯಲ್ಲಿ ಊಟ ಮುಗಿಸಿ ಬಂದು ಬಿಟ್ಟೆ.

ಇನ್ನೂ ಬಸ್ಸಿನಲ್ಲಿ ಪ್ರಯಾಣಿಸುವಾಗ ಕೂಡ ಪ್ರತಿ ಬಾರಿ ಸಿಗುವದು ನಡುವಿನ ಆಸನನೆ. ನಡುವೆ ಮಧ್ಯಂತರ ಕೂಡ ಕಡಿಮೆನೆ ಸಿಗುತಿತ್ತು. ಮೊದಲು ನಾನು ತುಂಬಾ ತೆಳ್ಳಗೆ ಇದ್ದೇ. ಹೀಗಾಗಿ ನಾನು ಎಷ್ಟೇ ತಿಣುಕಿದರು ಅಕ್ಕ ಪಕ್ಕ ಕುಳಿತ ಜನ ಮೀಸುಗುತ್ತಿದ್ದಿಲ್ಲ. ಈಗ ಸ್ವಲ್ಪ.... ಕ್ಷಮಿಸಿ ತುಂಬಾ ಸುಧಾರಿಸಿದ್ದೇನೆ.

ಇದೇಕೋ ತ್ರಿಶಂಕು ಸ್ವರ್ಗ ಸ್ತಿತಿ ನನಗೆ ಹಲವು ಬಾರಿ ಅನುಭವಿಸಿದ್ದೇನೆ. ಇದುವರೆಗೆ ಯಾವುದೆ ನೌಕರಿ ಸೇರಿದರು, ನನ್ನ ಹಿಂದೆ-ಮುಂದೆ ಒಬ್ಬರು ಸೇರುತ್ತಾರೆ. ಮತ್ತೆ ಅದು ನನ್ನ ಮೇಲಿನ ವರ್ಗಕ್ಕೆ ಮತ್ತು ಕೆಳಗಿನ ವರ್ಗಕ್ಕೆ. ಅದು ನನ್ನ ಸಂಬಳಕ್ಕೂ ಅನ್ವಯ ಕೂಡ ಆಗಿರುತ್ತೆ. ಮೊದಲ ಬಾರಿ ನಾನು ಒಂದು ನೌಕರಿ ಸೇರಿದೆ ಅಲ್ಲಿ ಕೂಡ ಎಲ್ಲರೂ ಒಂದೇ ಸಂಸಾರದ ಜನ ಕೆಲಸ ಮಾಡುತ್ತಿದ್ದರು. ಅವರ ನಡುವೆ ನಾನು ಅಂತರ ಪಿಶಾಚಿ. ಅವರು ಎಲ್ಲರೂ ಒಂದೇ ಬಾಷೆ ಮಾತನಾಡುತ್ತಿದ್ದರೆ, ನಾನು ಮಾತ್ರ ತಲೆ ಕೆರೆದುಕೊಳ್ಳುತ್ತ ಕೂಡುತ್ತಿದ್ದೆ. ಕಡೆಗೆ ಅದು ಬೇಡ ಎಂದು ಬಿಟ್ಟು ಬಿಟ್ಟೆ.

ಮುಂದೆ ಬ್ಯಾಂಕ್ ಪರೀಕ್ಷೆಗೆ ಅರ್ಜಿ ಹಾಕಿದೆ. ಅಲ್ಲಿ ನಾನು ತುಂಬಾ ಚೆನ್ನಾಗಿ ಮಾಡುತ್ತಿದ್ದ ಒಂದು ಭಾಗ ಎಂದರೆ "ODD MAN OUT". ಕಡೆಗೆ ಪರೀಕ್ಷೆ ಫಲಿತಾಂಶ ಬಂದಾಗ ಅವರು ನನ್ನನ್ನು "ODD MAN OUT" ಮಾಡಿದ್ದರು.

ಮುಂದೆ ಮತ್ತೊಂದು ನೌಕರಿಗೆ ಸೇರಿದೆ. ಅಲ್ಲಿ ಕೂಡ ಎಲ್ಲಾ ಜನರು ಒಂದೇ ಜಾತಿಯ ಜನ. ನಾನು ಜಾತಿ ಭೇಧದ ಮಧ್ಯ ಬೆಂದು ಬಳಲಿ ಬೆಂಡಾಗಿ ಹೋಗಿದ್ದೆ. ಹಾಗೂ ಹೀಗೂ ಹೆಣಗಿ ಮತ್ತೊಂದು ನೌಕರಿ ಸೇರಿದ್ದೇನೆ. ಇಲ್ಲಿ ಕೂಡ ದಿನವೂ ಸ್ಯಾಂಡ್‌ವಿಚ್ ಆಗಿದ್ದು ಮಾತ್ರ ಸತ್ಯ. ಬಾಸ್ ತಮಿಳಿಗ ಮತ್ತೆ ನನ್ನ ಕೆಳಗೆ ಕೆಲಸ ಮಾಡುವ ಇಬ್ಬರು ತಮಿಳಿಗರು.

ಇನ್ನೂ ಮನೇಲಿ ಹೆಂಡತಿ,ಮಗನ ನಡುವೆ ದಿನವೂ ಸಾಂಡ್‌ವಿಚ್ ಆಗುತ್ತಾ ಇದ್ದೇನೆ. ಇನ್ನೂ ಬೈಕ್ ನಲ್ಲಿ ಹೋಗುವಾಗ ಸಹಿತ ನನ್ನ ಅಕ್ಕ ಮತ್ತು ಪಕ್ಕ ಜನ ಎಲ್ಲಿಂದಲೋ ಬಂದೆ ಬಿಟ್ಟಿರುತ್ತಾರೆ. ಮತ್ತೆ ಕೆಲವೇ ಕ್ಷಣಗಳಲ್ಲಿ ನನಗೆ ಟಾಟಾ ಹೇಳಿ ಅಂತರ ಪಿಶಾಚಿ ಹಾಗೆ ಬಿಟ್ಟು ಹೋಗಿರುತ್ತಾರೆ. ನಡುವೆ ಅಂತರವಿರಲಿ ಎಂದು ಎಲ್ಲಾ ಬಿ ಎಂ ಟಿ ಸಿ ಬಸ್ಸುಗಳ ಮೇಲೆ ಬರೆದಿರುತ್ತಾರೆ. ಹಾಗೆಯೇ ನನ್ನ ಬೈಕ್ ಮೇಲೆ ನಡುವೆ(ಮಧ್ಯ) ಅಂತರವಿದೆ ಎಂದು ಲಗತ್ತಿಸಲೇ ಎಂದು ಯೋಚನೆ ಕೂಡ ಮಾಡುತ್ತೇನೆ.

ಇದು ನನ್ನ ಜನ್ಮದಿಂದ ಆಂಟಿ ... ಕ್ಷಮಿಸಿ ಅಂಟಿಕೊಂಡು ಬಂದದ್ದು. ಅದು ಹೇಗೆ? ಎಂದರೆ ತುಂಬಾ ಅಂತರದಲ್ಲಿ ಇರುವ ನನ್ನ ರಾಶಿ ಮೀನಾ(ಮೀನ)... ಕಡೆಯ ರಾಶಿ...ಮತ್ತೆ ನಕ್ಷತ್ರ ಪೂರ್ವಾ ಬಾ ಹತ್ತಿರ (ಪೂರ್ವಾಭಾದ್ರ) ಮತ್ತು ರೇವತಿ ಮಧ್ಯ ತುರುವ ಉತ್ತರಾ ಬಾ ಹತ್ತಿರ(ಉತ್ತರಾಭಾದ್ರ)... :-):-)

ನನ್ನ ಜೀವನದ ಪ್ರತಿ ಧೈಯದ(ಗೋಲ್) ನಡುವೆ ಕೂಡ ಏನಾದರೂ ಸೇರಿ ಇರುತ್ತದೆ. ಉಧಾಹರಣೆಗೆ ನನ್ನ ಹೆಸರು ಗೋಪಾಲ್(GOPAL) ತಾನೇ, ಅದರಲ್ಲಿನ 'ಪಾ'(P) ತೆಗೆಯದ ಹೊರತು ಗೋಲ್(GOAL) ಆಗೋಲ್ಲ...

ಮತ್ತೆ ಒಂದು ಪ್ರಬಂದ ಸ್ಪರ್ದೆಗೆ ನನ್ನ ಲೇಖನ ಕಳುಹಿಸಿದ್ದೇನೆ. ನಾನು ಎರಡನೆ ಶ್ರಯಾಂಕ (ಮಧ್ಯ) ಅಥವಾ "ODD MAN OUT"(ಅಂತರ) ಮಾತ್ರ ಬರಬಾರದು ಎಂದು ದಿನವೂ ಶ್ರೀ ರಾಮನನ್ನು ಸ್ಮರಿಸುತ್ತಿದ್ದೇನೆ. ಈ ಮಧ್ಯ ಮತ್ತು ಅಂತರದ ಸಜೇ ಇನ್ನೂ ಎಷ್ಟು ದಿವಸ ನಡೆಯುವುದೋ ಆ ಭಗವಂತನೇ ಬಲ್ಲ ....

Friday, December 10, 2010

ಚಪ್ಪಲ್ ಚನ್ನಿಗರಾಯ ....

ನಮ್ಮ ಕಾಲೇಜ್ ನಲ್ಲಿ ಅಂಜನ್ ಎಂಬ ಹುಡುಗ ಇದ್ದ. ಸಕ್ಕತ್ ಜಿಪುಣ. ಒಂದು ಪೈಸೆ ಕೂಡ ಬಿಚ್ಚುತ್ತಿರಲಿಲ್ಲ. ಹುಡುಗಿಯರು ಎಂದರೆ ಅತ್ಯಂತ ಆಪ್ಯತೆ. ಅವರ ಜೊತೆ ಕೂಡ ಒಂದು ಪೈಸೆ ಬಿಚ್ಚುತ್ತಿರಲಿಲ್ಲ. ಹುಡುಗಿಯರ ಹತ್ತಿರಾನೇ ದುಡ್ಡು ವಸೂಲಿ ಮಾಡುತ್ತಿದ್ದ. ಕ್ಯಾಂಟೀನ್ ಗೆ ಬಂದರು ದುಡ್ಡು ಕೊಟ್ಟು ಖರೀದಿಸದೇ, ನಾನು ಸ್ವಲ್ಪ ರುಚಿ ನೋಡುತ್ತೇನೆ ಎಂದು ಹೇಳಿ ಎಲ್ಲರ ಪ್ಲೇಟ್ ಗೆ ಕೈ ಹಾಕಿ ತಿನ್ನುತ್ತಿದ್ದ. ಕೆಲ ಹುಡುಗರು ಅವನು ಬರುತ್ತಾನೆ ಎಂದರೆ ಗಬ.. ಗಬ.. ಎಂದು ಬೇಗನೆ ತಿಂದು ಜಾಗ ಖಾಲಿ ಮಾಡುತ್ತಿದ್ದರು. ಹುಡುಗಿಯರನ್ನು ಪರಿಚಯ ಇಲ್ಲದೇ ಇದ್ದರು ಅವರನ್ನು ಹೋಗಿ ಮಾತನಾಡಿಸುತ್ತಿದ್ದ. ಒಂದು ಹುಡುಗಿ ಅಂಜನಾ ಎಂದು ಇತ್ತು. ಅವಳ ಹೆಸರಿಗೂ ತನ್ನ ಹೆಸರು ತುಂಬಾ ಮ್ಯಾಚ್ ಆಗುತ್ತೆ ಎಂದು ಅವಳ ಹಿಂದೆ ಬಿದ್ದಿದ್ದ. ಆಗ ಮಂಜ ಮುಂದೆ ಮದುವೆ ಆದರೆ, ಲೇ ಇಬ್ಬರ ಹೆಸರು ಒಂದೇ ತರಹ ಇದ್ದರೆ ಮನೆಯಲ್ಲಿ ಕರೆಯುವದು ಕಷ್ಟ ಕಣೋ, ಅದಕ್ಕೆ ಅವಳ ಹೆಸರು ಅಮೃತಾ ಎಂದು ಮದುವೆ ಆದ ಮೇಲೆ ಬದಲಿಸು ಎಂದು ಹೇಳಿದ. ಅವಳು ಅವನಿಗೆ ತುಂಬಾ ಇಷ್ಟ ಪಡುತ್ತಿದ್ದಳು. ನಾವು ಒಳಗೊಳಗೆ ಅಮೃತಾ + ಅಂಜನ್ = ಅಮೃತಾಂಜನ್ ಎಂದು ಅವನನ್ನು ಆಡಿಕೊಂಡು ಅವನ ಹಿಂದೆ ನಗುತ್ತಿದ್ದೆವು.

ಕಡೆಗೆ ಒಂದು ದಿನ ಮಂಜ, ಲೇ ... ಅವಳನ್ನು ಮದುವೆ ಆದರೆ ನಿನಗೆ ಕಷ್ಟ ಕಣೋ ಏಕೆಂದರೆ? ಅವಳು ತುಂಬಾ ದುಡ್ಡು ಖರ್ಚು ಮಾಡುತ್ತಾಳೆ. ಈಗಿನ ಕಾಲದಲ್ಲಿ ಅರೇಂಜ್ ಮ್ಯಾರೇಜ್ ಆದರೆ ಕಷ್ಟ, ಅದು ಬೇರೆ ನೀನು ಲವ್ ಮ್ಯಾರೇಜ್ ಆಗುತ್ತಾ ಇದ್ದೀಯಾ ಮುಂದೆ ತುಂಬಾ ಕಷ್ಟ ಆಗುತ್ತೆ ಎಂದು ಹೇಳಿದಾಗ, ಅವಳು ಮಾತನಾಡಿಸಿದರು ಅವಳಿಗೆ ಯಾವದೆ ಸೊಪ್ಪು ಹಾಕಲಿಲ್ಲ. ಕಡೆಗೆ ಅವಳನ್ನು ಬಿಟ್ಟು ಬಿಟ್ಟ.

ನಾನು,ಮಂಜ ಮತ್ತು ಸುಬ್ಬ ಬೆಂಗಳೂರಿಗೆ ಬಂದು ಠಿಕಾಣಿ ಹೂಡಿದ್ದೆವು. ಆಗ ಒಂದು ದಿವಸ ನನಗೆ ಫೋನ್ ಮಾಡಿದ್ದ. ಏನಪ್ಪಾ? ಏನು ಮಾಡುತ್ತಾ ಇದ್ದೀರ ತ್ರಿಮೂರ್ತಿಗಳು ಎಂದು ಕೇಳಿದ. ನಾನು ಬೆಂಗಳೂರಿಗೆ ಬರುತ್ತಾ ಇದ್ದೇನೆ. ನಿಮ್ಮ ರೂಮಿನಲ್ಲಿ ಇರುವುದಕ್ಕೆ ಅವಕಾಶ ಕೊಡು ಎಂದು ಕೇಳಿದ.ಲೇ.. ನಾನೇ ಮಂಜನ ರೂಮಿಗೆ ಬಂದಿದ್ದೇನೆ. ನೀನು ಮಂಜನಿಗೆ ಕೇಳು ಎಂದು ಹೇಳಿದೆ. ಕಡೆಗೆ ಅವರಿಬ್ಬರ ನಡುವೆ ಏನೋ ಒಪ್ಪಂದ ಆಯಿತು ಎಂದು ಅನಿಸುತ್ತದೆ. ಮರುದಿನ ಅಂಜನ್ ನಮ್ಮ ರೂಮಿನಲ್ಲಿ ಠಿಕಾಣಿ ಹೂಡಿದ್ದ.

ಏನೋ ಸುಧಾರಿಸಿರಬಹುದು ಎಂದು ನಾವೆಲ್ಲರೂ ಎಣಿಸಿದ್ದೆವು. ಆದರೆ ತಿಂಡಿ, ಊಟ ಆದಮೇಲೆ ದುಡ್ಡು ಕೊಡದೇ ಫೋನ್ ಬಂದಿದೆ ಅಥವಾ ಫೋನ್ ಮಾಡುವುದಿದೆ ಎಂದೆಲ್ಲ ನೆಪ ಹೇಳಿ, ನಮ್ಮದೇ ದುಡ್ಡಿನಲ್ಲಿ ತನ್ನ ಬೇಳೆ ಬೇಯಿಸಿಕೊಳ್ಳುತ್ತಿದ್ದ. ತ್ರಿಮೂರ್ತಿಗಳಾದ ನಮಗೆ ಮೂರು ನಾಮ ಇಟ್ಟಿದ್ದ. ಮಂಜ ಮತ್ತು ನಾವೆಲ್ಲರೂ ಎಷ್ಟು ಯೋಚನೆ ಮಾಡಿ, ರೂಮಿನಿಂದ ಹೊರ ಹಾಕ ಬೇಕೆಂದರು ಆಗಲಿಲ್ಲ. ಬಸ್ಸಿನಲ್ಲೂ ಸಹ ಅವನ ಚಪಲತೆ ಪ್ರದರ್ಶಿಸುತ್ತಿದ್ದ. ಅವನು ತುಂಬಿದ ಬಸ್ಸಿಗೆ ಮಾತ್ರ ಹತ್ತುತಿದ್ದ. ಒಂದು ದಿನ ಖಾಲಿ ಬಸ್ ಹತ್ತಿದ್ದ. ಮುಂದೆ ನಿಂತ ಹುಡುಗಿ ಅವನಿಗೆ ತನ್ನ ಚಪ್ಪಲಿಯಿಂದ ಬಾರಿಸುತ್ತಿದ್ದಳು. ಅದನ್ನು ನೋಡಿದ ಮಂಜ, ಅವನಿಗೆ ಹೀಗೆಲ್ಲ ಮಾಡುವ ಹಾಗಿದ್ದರೆ ನೀನು ಬೇರೆ ಕಡೆಗೆ ಹೋಗು ಎಂದು ತಾಕೀತ್ ಮಾಡಿದ್ದ. ತಪ್ಪು ಆಯಿತು.. ಕ್ಷಮಿಸು.. ಎಂದು ಹೇಳಿ ಮುಂದಿನ ಬಾರಿ ಹಾಗೆ ಮಾಡುವುದಿಲ್ಲ ಎಂದು ಹೇಳಿದ. ಕಡೆಗೆ ಒಪ್ಪಿ ಇಟ್ಟು ಕೊಂಡೆವು. ಕೆಲ ದಿನ ಸುಧಾರಿಸಿದ ಹಾಗೆ ನಟಿಸಿ ಮತ್ತೆ ನಾಯಿ ಬಾಲ ಡೊಂಕು ಅನ್ನುವ ಹಾಗೆ ಮತ್ತೆ ತನ್ನ ವರಸೆ ಶುರು ಹಚ್ಚಿಕೊಂಡ.

ಮನೆಯವರಿಗೂ ಇವನ ಬಗ್ಗೆ ಅಸಡ್ಡೆ ಇತ್ತು. ಅವರ ಅಪ್ಪ ಅವನಿಗೆ ಮದುವೆ ಆದರೆ ಸುಧಾರಿಸುತ್ತಾನೆ ಎಂದು. ಹೆಣ್ಣು ನೋಡಲು ಶುರು ಮಾಡಿದರು. ಪ್ರತಿ ವಾರ ಹೆಣ್ಣು ನೋಡಲು ಸ್ವೀಟ್ ಬಾಕ್ಸ್ ತೆಗೆದು ಕೊಂಡು ಹೋಗುತ್ತಿದ್ದ. ಅದು ಬರಿ 200 ಗ್ರ್ಯಾಮ್ಸ್ ಮಾತ್ರ. ಪ್ರತಿ ಬಾರಿ ಸಂಬಂದ ರಿಜೆಕ್ಟ್ ಆಗುತ್ತಿತ್ತು. ಅವನಿಗೂ ತಲೆ ಕೆಟ್ಟು ಹೋಗಿತ್ತು. ಒಂದು ದಿನ ಬೆಂಗಳೂರಿನಲ್ಲೇ, ಒಂದು ಹೆಣ್ಣು ನೋಡಲು ಸ್ವೀಟ್ ಬಾಕ್ಸ್ ತೆಗೆದುಕೊಂಡು ಶಾಸ್ತ್ರಕ್ಕೆ ಹೋಗಿದ್ದ. ಆಗ ಹೆಣ್ಣು ನೋಡಿ ಚೆನ್ನಾಗಿಲ್ಲ ಎಂದು ಸ್ವೀಟ್ ಬಾಕ್ಸ್ ಕೊಡದೇ ವಾಪಸ ತಂದಿದ್ದ. ಅದನ್ನು ರೂಮಿಗೆ ತಂದು ನಮಗೆ ಕೊಡಲು ಓಪನ್ ಮಾಡಿದ. ನೋಡಿದರೆ ಅದರಲ್ಲಿ ಸ್ವೀಟ್ ಇರದೆ ಕೆಟ್ಟ ವಾಸನೆಯ ಹಳಸಿದ ಮ್ಯಾಗಿ ಇತ್ತು. ಅವನಿಗೆ ಸ್ವೀಟ್ ಅಂಗಡಿಯವನ ಮೇಲೆ ತುಂಬಾ ಕೋಪ ಬಂತು. ಲೇsss.. ಅದಕ್ಕೆ ಕಣೋ ಹೆಣ್ಣು ಮೊದಲು ಒಪ್ಪಿಗೆ ಸೂಚಿಸಿ, ಆಮೇಲೆ ರಿಜೆಕ್ಟ್ ಮಾಡುತ್ತಾ ಇರುವದು ಎಂದು ಹೇಳಿ, ಅದನ್ನು ತೆಗೆದು ಕೊಂಡು ಸ್ವೀಟ್ ಅಂಗಡಿಗೆ ಜಗಳಕ್ಕೆ ಹೋದ. ಮಂಜ ಮುಸಿ.. ಮುಸಿ.. ನಗುತ್ತಿದ್ದ. ಅವನೆ ಸ್ವೀಟ್ ತಿಂದು, ಹೀಗೆ ಮಾಡಿದ್ದಾನೆ ಎಂದು ನಮಗೆ ಖಾತ್ರಿ ಆಯಿತು. ಸ್ವೀಟ್ ಅಂಗಡಿ ಹೋಗಿ ಬಾಕ್ಸ್ ತೆಗೆದೊಡನೆ ಕೆಟ್ಟ ವಾಸನೆ ಬರುತಿತ್ತು. ಅದನ್ನು ನೋಡಿ ಕೆಲ ಗಿರಾಕಿಗಳು ಸಹಿತ ಏನು ತೆಗೆದು ಕೊಳ್ಳದೇ ಹೋಗಿ ಬಿಟ್ಟರು. ನೀವು ನನಗೆ ಮೋಸ ಮಾಡಿದ್ದೀರ ಎಂದು ಹೇಳಿ, ಸ್ವೀಟ್ ತರುತ್ತಾನೆ ಎಂದು ನಾವು ಎಣಿಸಿದರೆ, ಅವರ ಕಡೆ 500 ರೂಪಾಯಿಗಳನ್ನು ಕಿತ್ತುಕೊಂಡು ಬಂದಿದ್ದ.

ಮುಂದೆ ಮತ್ತೊಂದು ಹೆಣ್ಣು ನೋಡುವದಕ್ಕೆ ಹೋಗುವುದಿತ್ತು. ಈ ಹುಡುಗಿ ಕೂಡ ಬೆಂಗಳೂರಿನಲ್ಲೇ ಇದ್ದಳು. ಅವಳನ್ನು ನೋಡಲು ನನ್ನನ್ನು ಕರೆದು ಕೊಂಡು ಹೋದ. ನಾನು ಯಾವುದಾದರೂ ಹೋಟೆಲ್ ಹೋಗಿ ಮಾತನಾಡೋಣ ಎಂದು ಹೇಳಿದೆ. ಅಲ್ಲಿ ಯಾವುದೆ ಚಿಕ್ಕ ಹೋಟೆಲ್ ಕಾಣಲಿಲ್ಲ, ಕಡೆಗೆ ದೊಡ್ಡ ಮನಸು ಮಾಡಿ ಬರಿಸ್ಟಾಗೆ ಕರೆದು ಕೊಂಡು ಹೋದ. ನಾನು,ಅವನು ಮತ್ತೆ ಹುಡುಗಿ, ಹುಡುಗಿಯ ಗೆಳತಿ ಎಲ್ಲರೂ ಹೋದೆವು. ಅಲ್ಲಿ ಬರಿ ಕಾಫೀ ಆರ್ಡರ್ ಮಾಡುತ್ತಲಿದ್ದ. ನಾನು ಏನಾದರೂ ತಿನ್ನಲು ಎಂದು ನಾನೇ ಹುಡುಗಿಯರಿಗೆ ಕೇಳಿದೆ. ಅವರು ಏನು ತಿಂದು ಬಂದಿರಲಿಲ್ಲ ಎಂದು ಕಾಣುತ್ತೆ, ಅವರು ತಿಂಡಿ ಆರ್ಡರ್ ಮಾಡಿದರು. ಅವರ ಜೊತೆ ನನಗು ತಿಂಡಿ ಲಭಿಸಿತ್ತು. ಅಷ್ಟರಲ್ಲೇ ನಮ್ಮ ಮಂಜ ಸುಬ್ಬನನ್ನು ಕರೆದುಕೊಂಡು ಬಂದು ಬಿಟ್ಟ. ಬಂದವನೇ ತಾನೇ ಅವರ ಪರಿಚಯ ಮಾಡಿಕೊಂಡು. ಅಂಜನ್ ನಮ್ಮ ತುಂಬಾ ಆಪ್ತ ಗೆಳೆಯ ಎಂದೆಲ್ಲ ಹೇಳಿ ಸಿಕ್ಕಾಪಟ್ಟೆ ತಿಂದು ಎದ್ದು ಹೋಗಿ ಬಿಟ್ಟ. ಅಂಜನ್ ಏನು ಮಾಡಲಾರದೇ 2300 ಬಿಲ್ಲು ಕೊಟ್ಟು ಬಂದಿದ್ದ. ಅವನ ಮುಖ ಇಂಗು ತಿಂದ ಮಂಗನ ಹಾಗೆ ಆಗಿತ್ತು. ಆ ಹುಡುಗಿಯೂ ಅವನಿಗೆ ರಿಜೆಕ್ಟ್ ಮಾಡಿದ್ದಳು. ಕೆಲ ದಿನಗಳ ಬಳಿಕ ಮಂಜನ ತರಲೆಗಳು ಅರ್ಥ ಆಗಿ ತಾನೇ ಜಾಗ ಖಾಲಿ ಮಾಡಿದ.

ಅವನಿಗೆ ನಾವೆಲ್ಲರೂ ಚಪ್ಪಲ್ ಚೆನ್ನಿಗರಾಯ ಎಂದೆ ಸಂಭೋಧಿಸುತ್ತಿದ್ದೆವು. ಈಗ ಅವನಿಗೆ ಚಪ್ಪರ ಹಾಕುವ ಸಂದರ್ಭ ಒದಗಿ ಬಂದಿದೆ. ಏನು? ಮಾಡುತ್ತಾನೋ ನೋಡಬೇಕು.

Friday, December 3, 2010

ನೀನು ಸಾಯಿತಿ ಅಂತೆ .........?

ಮಡದಿ ಊರಿಗೆ ಹೋಗಿದ್ದರಿಂದ ಮನೆಯ ಎಲ್ಲಾ ಕೆಲಸಗಳು ನನ್ನ ಹೆಗಲ ಮೇಲೆ ಬಿದ್ದಿದ್ದವು. ಬಟ್ಟೆ ಒಗೆಯುವದು, ಪಾತ್ರೆ ತಿಕ್ಕುವದು ....ಎಲ್ಲವೂ. ಮನೋಜನ ಮಡದಿನೂ ಊರಿಗೆ ಹೋಗಿದ್ದರಿಂದ, ಇಬ್ಬರು ಇಲ್ಲೇ ಅಡಿಗೆ ಮಾಡಿ ಊಟ ಮಾಡಿದರೆ ಆಗುತ್ತೆ ಬಾ ಎಂದು ಅವನಿಗೆ ಹೇಳಿದೆ. ಆಯಿತು, ಎಂದು ನಮ್ಮ ಮನೆಯಲ್ಲೇ ಠಿಕಾಣಿ ಹೂಡಿದ. ಏನೋ ನನ್ನ ಕೆಲಸಗಳಲ್ಲಿ ಸಹಾಯ ಮಾಡುತ್ತಾನೆ ಎಂದು, ನಾನು ಅಂದುಕೊಂಡರೆ ಮನೋಜ ರಾತ್ರಿ ತೀರ್ಥಯಾತ್ರೆಗೆ ಹೋಗಿ ಬಂದು ಊಟ ಮಾಡಿ ಮಲಗಿ ಬಿಡುತ್ತಿದ್ದ. ಅವನ ಕರೆದ ಕರ್ಮಕ್ಕೆ ನನ್ನ ಕೆಲಸ ಇನ್ನೂ ಜ್ಯಾಸ್ತಿ ಆಗಿತ್ತು.

ಮರು ದಿನ ಏಕೋ ಬಲ ಕೈ ಸ್ವಲ್ಪ ಕೆರೆತ ಶುರು ಆಯಿತು. ನಾನು ಕೈ ಕೆರೆಯುತ್ತಾ ಇದ್ದಾಗ, ನಮ್ಮ ಜ್ಯೋತಿಷ್ಯ ಪ್ರವೀಣ ಮನೋಜ ಏನೋ ಕೈ ಕೆರೆತ ಚಾನ್ಸ್ ಅಂದ. ತುಂಬಾ ಕೆರೆತ ಆಗಿ ನಾನು ಒದ್ದಾಡುತ್ತಾ ಇದ್ದರೆ, ನೀನು ಚಾನ್ಸ್ ಅನ್ನುತ್ತೀಯ ಎಂದೆ. ಲೇ.. ಬಲ ಕೈ ಕೆರೆತ ಆದ್ರೆ ದುಡ್ಡು ಬರುತ್ತೆ ಕಣೋ ಅಂದ. ಒಳಗೊಳಗೆ ಸಂತೋಷದಿಂದ ಕುಣಿದಾಡಿದೆ. ಅವನ ಮುಂದೆ, ಹಾಗೆ ರೈಲು ಬಿಡುತ್ತೀಯಾ ಎಂದು ದಬಾಯಿಸಿದೆ. ಏ ನಿನಗೇನೂ ಗೊತ್ತು ಬಲ ಕೈ ಕೆರೆತ ಆದರೆ ದುಡ್ಡು ಖಂಡಿತ ಬರುತ್ತೆ ಅಂದ. ಮತ್ತೆ ಎಡ ಕೈ ಕೆರೆತ ಆದರೆ ದುಡ್ಡು ಖರ್ಚಾಗುತ್ತೆ ಅಂದ. ಎಡ ಕಣ್ಣು ಅದುರಿದರೆ ಅಶುಭ, ಬಲ ಕಣ್ಣು ಅದುರಿದರೆ ಶುಭ ಎಂದು ಹೇಳಿದ. ಲೇ... ಸುಮ್ಮನೇ ಹೇಳ ಬೇಡ ನಾನು ಕಾಲೇಜ್ ನಲ್ಲಿ ಇದ್ದಾಗ, ಒಂದು ಹುಡುಗಿ ನೋಡಿ ಬಲ ಕಣ್ಣು ಅದುರಿಸಿದ್ದೆ. ಆದರೆ ಅವಳು ನನ್ನ ಹಲ್ಲು ಉದಿರುಸುತ್ತೇನೆ ಎಂದು ಬೆದರಿಕೆ ಹಾಕಿದಳು . ಆಮೇಲಿಂದ ಯಾವತ್ತೂ ಕಣ್ಣು ಅದುರಲೆ ಇಲ್ಲ, ಎರಡು ಹಲ್ಲುಗಳು ತಾನಾಗಿಯೇ ಉದುರಿದವು ಎಂದು ಹೇಳಿದೆ. ಮನೋಜ ತುಂಬಾ ಜೋರಾಗಿ ನಕ್ಕೂ... ಅದು ತಾನಾಗಿಯೇ ಅದುರ ಬೇಕು ಕಣೋ ಎಂದು ಅಪಹಾಸ್ಯ ಮಾಡಿದ.

ಕಡೆಗೆ ನಾನು ಆಫೀಸ್ ಹೋದೆ. ಆದರೂ ಇನ್ನೂ ಕೈ ಕೆರೆತ ಇದ್ದೇ ಇತ್ತು. ಆಫೀಸ್ ಹೋದೊಡನೆ, ಬಾಸ್ ಕರೆದು ರೀ... ನಿಮ್ಮ ಅಪ್ರೇಸಲ್ ಈ ತಿಂಗಳು ಇದೆ ಅಲ್ವೇ ಎಂದರು. ಹೌದು.. ಹೌದು.. ಎಂದು ಖುಶಿಯಿಂದ ಕೈ ಕೆರೆಯುತ್ತಾ ಹೇಳಿದೆ. ಆಯಿತು ಹೋಗಿ ಎಂದು ಹೇಳಿ ಕಳುಹಿಸಿದರು. ನನಗೆ ಸಕತ್ ಖುಷಿ, ಲೇ ಹೊಡೆದೆ ಕಣೋ ಚಾನ್ಸ್ ಎಂದು ಅಂದು ಕೊಂಡು, ಮನೋಜಗೆ ಫೋನ್ ಮಾಡಿ ಹೇಳಿದೆ. ನಾನು ಹೇಳಿರಲಿಲ್ಲವಾ? ಎಂದ. ಆದರೆ ಕೈ ಕೆರೆತ ನಿಲ್ಲಲೇ ಇಲ್ಲ.

ಮರು ದಿನ ಕೈ ತುಂಬಾ ಬಾತು ಕೆಂಪಗೆ ಆಗಿತ್ತು. ಲೇ.. ಏನೋ ಇದು ಇಷ್ಟೊಂದು ಕೆರೆತ ಎಂದು ಮನೋಜಗೆ ಕೇಳಿದೆ. ಇದೇನೋ ಪ್ರಾಬ್ಲಮ್ ಕಣೋ, ಕೂಡಲೇ ಡಾಕ್ಟರ್ ಕಾಣು ಎಂದು ಹೇಳಿದ. ಡಾಕ್ಟರ್ ಬಳಿ ಹೋದೆ. ಡಾಕ್ಟರ್ ಎಲ್ಲ ಪರೀಕ್ಷಿಸಿ. ಏನ್ರೀ ಇದು ಇಷ್ಟೊಂದು ಆಗೋವರೆಗೂ ಸುಮ್ಮನೇ ಕತ್ತೆ ಕಾಯುತ್ತಾ ಇದ್ದೀರಾ? ಎಂದು ಬೈದರು. ಸರ್ ಅದು .. ಅದು ... ಎಂದು ತಡವರಿಸಿದೆ. ಅವರು ನನಗೆ ಒಂದು ಆಯಂಟ್‌ಮೆಂಟ್ ಹಚ್ಚಿ, ಕೆಲ ಮಾತ್ರೆ ಬರೆದು ಕೊಟ್ಟರು. ಅಷ್ಟರಲ್ಲಿ ನನ್ನ ಮೊಬೈಲ್ ಗೆ ಒಂದು ಕರೆ ಬಂತು. ನಾನು ರಾಜೇಶ್ ಕಣೋ... ಎಂದು ಆ ಕಡೆಯಿಂದ ಧ್ವನಿ ಬಂತು. ನಾನು ಯಾರು? .... ರಾಜೇಶ್. ಓಕೆ ಹೇಳಿ ಏನು ಆಗಬೇಕು ಎಂದೆ. ನಾನು ಕಣೋ ನಿನ್ನ ಕ್ಲಾಸ್ ಮೇಟ್ ಅಂದ. ಇನ್ನೂ ಅವನ ಮುಖ ಚಹರೆ ಸ್ಮೃತಿಗೆ ಬರದಿದ್ದರೂ... ಓss.. ರಾಜೇಶ್ ಹೇಳು ಚೆನ್ನಾಗಿದ್ದೀಯ? ಎಂದು ಕೇಳಿದೆ. ಓss.. ನಾನು ಚೆನ್ನಾಗಿ ಇದ್ದೇನೆ ಎಂದ. ನೀನು ಸಾಯಿತಿ ಅಂತೆ ಎಂದು ಕೇಳಿದ. ನನಗೆ ತಡೆಯಲಾರದಷ್ಟು ಕೋಪ ಬಂದಿತು. ನಿನಗೆ ಯಾರು? ಹೇಳಿದರು ಎಂದು ಕೇಳಿದೆ. ನನಗೆ ಗೊತ್ತು, ನೀನು ಪಾರ್ಟೀ ಯಾವಾಗ ಕೊಡಿಸುತ್ತೀಯ ಎಂದು ಕೇಳಿದ. ನನಗೆ ಎಣ್ಣೆ ಪಾರ್ಟೀನೇ ಬೇಕು ಎಂದ. ಏನು ಸಾಯಿತಿ ಎಂದರೆ ಸುಮ್ಮನೇನಾ? ಎಂದ. ನನಗೆ ಸಕ್ಕತ್ ಕೋಪ ಬಂದಿತ್ತು. ಆದರೂ ತಡೆದುಕೊಂಡು ಮನಸಿನಲ್ಲೇ ಸಾಯುವ ಮೊದಲೇ ತಿಥಿ ಊಟ ಕೇಳೋ, ನಿನಗೆ ಹತ್ತಿಗೆ ಹೊಡೆಯುವ ಎಣ್ಣೇನೇ ಕೂಡಿಸುತ್ತೇನೆ ಮಗನೆ ಬಾ ಎಂದು ಬೈದುಕೊಂಡೆ. ನಿಮಗೆ ಯಾರು ಬೇಕಿತ್ತು ಎಂದು ಅನುಮಾನದಿಂದ ಕೇಳಿದೆ. ಲೇ ಗೋಪಾಲ್ ...ನೀನೆ ಕಣೋ ಕತ್ತೆ ಕಾಯುವನೆ ಎಂದ. ಕೋಪ ಇನ್ನಷ್ಟು ಉಕ್ಕಿ ಬಂತು ದನ ಕಾಯುವವನಿಗೆ ಕತ್ತೆ ಕಾಯುವವ ಎಂದರೆ ಬರದೇ ಇರುತ್ತೆ. ಇದೇನಾದರೂ ಮಂಜನ ಕಿತಾಪತಿ ಇರಲು ಬಹುದು ಎಂದು ಅನ್ನಿಸಿದ್ದು ನಿಜ. ಯಾರಾದರೂ ನಾನು ಆಸ್ಪತ್ರೆಗೆ ಬಂದಿದ್ದು ನೋಡಿದರಾ?. ಮಂಜ ಹೊರಗಡೆ ಇರಬಹುದಾ?. ನೋರೆಂಟು ಯೋಚನೆ ತಲೆಯೊಳಗೆ...ಅದು ನಾನು ಸಾಯುವ ವಿಷಯ ಗೊತ್ತಾಗಿದೆ ಎಂದರೆ ಇವನು ಯಮಧರ್ಮರಾಯನೆ? .... ಮತ್ತೆ ರಾಜೇಶ್ ಎಂದ. ಎಲ್ಲರಿಗೂ ಹೇಳಲು ಸುಲಭವಾಗಲಿ ಎಂದು ಹೆಸರು ಬದಲಿಸಿದನೆ? ತಿಳಿಯಲಿಲ್ಲ.

ಕೂಡಲೇ, ಹೊರಗಡೆ ಓಡಿದೆ. ಡಾಕ್ಟರ್ ಓಡುತ್ತಿರುವ ನನ್ನ ನೋಡಿ.. ಏsss.. ಕಲ್ಲಪ್ಪ, ಹಿಡಿ ಅವನನ್ನ ಎಂದು ತಮ್ಮ ಕಾಂಪೌಂಡರ್ ಗೆ ಕೂಗಿದರು. ಆದರೂ ತಪ್ಪಿಸಿಕೊಂಡು ಹೊರಗಡೆ ಹೋಗಿ, ಎಲ್ಲ ಕಡೆ ಕಣ್ಣು ಆಡಿಸಿದೆ. ಯಾರು ಪರಿಚಯದವರು ಕಾಣಲಿಲ್ಲ. ಮತ್ತೆ ಕಾಂಪೌಂಡರ್ ನನ್ನ ಕುತ್ತಿಗೆ ಪಟ್ಟಿ ಹಿಡಿದು ಎಳೆದು ಕೊಂಡು ಡಾಕ್ಟರ್ ಬಳಿ ಬಂದು ನಿಲ್ಲಿಸಿದ. ನಾನು ಮೊಬೈಲ್ ನಲ್ಲಿ ಇದ್ದ ಮನುಷ್ಯನಿಗೆ ನಾನು ಆಮೇಲೆ ಕಾಲ್ ಮಾಡುತ್ತೇನೆ ಎಂದು ಹೇಳಿದೆ. ನನಗೆ ಫೋನ್ ಮಾಡಿದ ವ್ಯಕ್ತಿ ಡಾಕ್ಟರ್ ಪರಿಚಯದವನೆ ಎಂದು ಯೋಚನೆ ಕೂಡ ಬಂತು. ಸರ್, ನಿಮಗೆ ರಾಜೇಶ್ ಗೊತ್ತಾ ಎಂದು ಕೇಳಿದೆ. ರೀ ಯಾರಿದ್ದರೆ ನನಗೆ ಏನ್ರೀ... ಅವನೇನು ನನಗೆ, ಮೊದಲು ಫೀಸ್ ಕೊಟ್ಟು ಮಾತಾಡಿ ಎಂದು ದಬಾಯಿಸಿದರು. ನನಗೆ ಆ ಕರೆಯ ಗದ್ದಲದಲ್ಲಿ ಮರೆತೇ ಹೋಗಿತ್ತು. ಸಾರಿ... ಸರ್ ಎಂದು ಹೇಳಿ ಫೀಸ್ ಕೊಟ್ಟು ಹೊರಗಡೆ ಬಂದೆ.

ಹೊರಗಡೆ ಬಂದೊಡನೆ ಮತ್ತೆ ಅದೇ ಮೊಬೈಲ್ ಗೆ ಫೋನ್ ಮಾಡಿದೆ. ಯಾರು? ನೀವು ಎಂದು ಕೇಳಿದೆ. ನಾನು ರಾಜೇಶ ಎಂದ. ಯಾವ ರಾಜೇಶ್ ಎಂದು ದಬಾಯಿಸಿದೆ. ಲೇss.. ನಾನು ಡಬ್ಬಾ-ಡುಬ್ಬೀ ಆಡುವಾಗ ನಿನಗೆ ಚೆಂಡಿನಿಂದ ಕೆನ್ನೆಗೆ ಬಾರಿಸಿದ್ದೆನಲ್ಲಾ ಎಂದ. ಕಡೆಗೆ ನೆನಪಿಗೆ ಬಂತು. ಅಗಲೆ ಏನೋ ಹೇಳುತ್ತಿದ್ದೆ ಅಲ್ಲ ಎಂದೆ. ಅದೇ ಕಣೋ, ನೀನು ದೊಡ್ಡ ಸಾಯಿತಿ ಅಂತೆ. ಕಥೆ, ಕವನ ಮತ್ತೆ ಆಸ್ಯ ಲೇಖನ ಬರೆಯುತ್ತೀಯಾ ಎಂದು ಕೇಳಿದ. ಆಗ ಅರ್ಥ ಆಗಿತ್ತು ಅವನು ಹೇಳಿದ್ದು ಸಾಹಿತಿ ಎಂದು. ನಾನೇನು ದೊಡ್ಡ ಸಾಹಿತಿ ಅಲ್ಲ ಮಹಾರಾಯ... ಬ್ಲಾಗ್ ಬರಹಗಳನ್ನು ಮಾತ್ರ ಬರೆಯುತ್ತೇನೆ ಎಂದು ಹೇಳಿದೆ. ಪೂರ್ತಿ ನೆನಪಿಗೆ ಬಂತು ಪಾಪ, ಅವನಿಗೆ ಹ ಕಾರ ಮಾತನಾಡಲು ಬರುವದಿಲ್ಲ. ಹ ಅಂದರೆ ಅ ಅನ್ನುತ್ತಾನೆ, ಹಾ ಎಂದರೆ ಆ .... ಹೀಗೆ. ಚಿಕ್ಕ ವಯಸಿನ್ನಲ್ಲಿ ನೋಡಿದ್ದು, ನಾವು ಅವನಿಗೆ ಹಂದಿ ಎಂದು ಕಾಡುತ್ತಿದ್ದೆವು. ಅವನು ಅದಕ್ಕೆ ನೀನೆ ಅಂದಿ ಅನ್ನುತ್ತಿದ್ದ ಪಾಪ. ಹೌದು ನಾನೇ ಅಂದಿದ್ದು, ನೀನೆ ಹಂದಿ ಎಂದೆಲ್ಲ ಕಾಡುತ್ತಿದ್ದೆವು. ಮತ್ತೆ ಎಲ್ಲಾ ಕ್ಷೇಮ ಸಮಾಚಾರ ವಿಚಾರಿಸಿ ಮನೆಗೆ ಬರುವಂತೆ ಹೇಳಿ ಫೋನ್ ಇಟ್ಟೆ.

ಮರುದಿನ ಮುಂಜಾನೆ ಬಾಸ್ ಮತ್ತೆ ಕರೆದು, ರೀ ನಿಮ್ಮದು ಮುಂದಿನ ತಿಂಗಳು ಅಪ್ರೇಸಲ್ ಅಲ್ಲವಾ, ಮತ್ತೆ ನನಗೆ ಹೇಳಿದ್ದು ಇದೆ ತಿಂಗಳು ಎಂದು ಕೇಳಿದರು. ನಾನು ನಿರಾಸೆಯ ಅಲೆಯಲ್ಲಿ ತೇಲುತ್ತ ಬಂದು ಕುಳಿತು, ಮಡದಿ ಫೋನ್ ಮಾಡಿ, ಆದ ವಿಚಾರನೆಲ್ಲ ಹೇಳಿದಾಗ ಅವಳಿಗೂ ಕೂಡ ನಗು ತಡೆಯಲು ಆಗಲಿಲ್ಲ.

Wednesday, December 1, 2010

ಹೋಟೆಲ್ ಊಟ... ಹೊಟ್ಟೆಯಲ್ಲಿ ಆಟ...

ಮೂರು ದಿವಸ ಆಯಿತು ಮುಂಜಾನೆ ಎದ್ದು ೧೦ ರೂಪಾಯಿ ಕೊಟ್ಟು ಬಿಳಿ ಗುಳಿಗೆ ನುಂಗಿ ಆಫೀಸ್ ಹೋಗುತ್ತಾ ಇದ್ದೇನೆ. ನಾನು ಎಷ್ಟೇ ಹೋಟೆಲ್ ಹೊಕ್ಕರು ಸಿಗುವದು ಅದೇ ಬಿಳಿ ಗುಳಿಗೆಗಳು, ಕೆಲವು ಚಿಕ್ಕ , ಮತ್ತೆ ಕೆಲವು ಗಾತ್ರದಲ್ಲಿ ದೊಡ್ಡದಾಗಿರಬಹುದು ಅಷ್ಟೇ. ನಿಮಗೆ ಬಿಳಿ ಗುಳಿಗೆ ಎಂದರೆ ಅರ್ಥ ಆಯಿತು ತಾನೇ?. ಇಡ್ಲಿ.. ಸಾರ್ ಇಡ್ಲಿ... ಯಾವುದೆ ಸಮಯದಲ್ಲಿ ಹೋದರು ಸಿಗುವದು ಇದೊಂದು ಮಾತ್ರೆ ಮಾತ್ರ. ಇಷ್ಟಕ್ಕೂ ಅದು ಇದು ಹಾಳು ಮೂಳೆ... ಕ್ಷಮಿಸಿ ಮುಳ್ಳು... ಆಯಾಯ್ಯೋ ಮತ್ತೊಮ್ಮೆ ಕ್ಷಮಿಸಿ... ಮೂಳು ತಿಂದು ಹೊಟ್ಟೆ ಕೆಡಿಸಿಕೊಳ್ಳಬೇಡಿ, ಇಡ್ಲೀನೇ ತಿನ್ನು ಎಂದು ನನ್ನ ಮಡದಿ ತಾಕೀತ್ ಮಾಡಿ ಊರಿಗೆ ಹೋಗಿದ್ದಾಳೆ. ಇದಕ್ಕೆ ಜೊತೆಯಾಗಿ ಇನ್ನೊಂದು ಮಾತ್ರೆ ಬೇರೆ ಚಾಕ್ಲೇಟ್ ಕಲರ್ ಗುಳಿಗೆ ... ವಡೆ.

ಹೆಂಡತಿ ಮನೆಯಲ್ಲಿ ಇಲ್ಲ ಎಂದರೆ ಆಗುವ ಕಷ್ಟಗಳನ್ನು ಹೇಳುವುದು ನಿಮಗೆ ಬೇಕಿಲ್ಲ ಎಂದುಕೊಂಡಿದ್ದೇನೆ. ಈ ಇಡ್ಲಿ , ವಡೆ ಸಾಂಬಾರ ಮತ್ತು ಚಟ್ನಿ ಒಳಗೆ ಹೋದಂತೆ ತಮಷ್ಟಕ್ಕೆ ತಾವೇ ನಾದಮಯವಾಗಿ ಸಂಗೀತ ಕಛೇರಿ ಶುರು ಮಾಡಿದ್ದವು ಅಥವಾ ಜಗಳ ಮಾಡಲು ಶುರು ಮಾಡಿದ್ದವು ಎಂದೆನಿಸುತ್ತೆ. ಒಟ್ಟಿನಲ್ಲಿ ನನ್ನ ಹೊಟ್ಟೆಯಲ್ಲಿ ಗುದ್ದಾಟ ನಡೆಸಿದ್ದವು. ಏನಾದರೂ? ಮಾಡಲಿ ಆದರೆ ಅವಗಳನ್ನು ವಾಯು ವಿಹಾರಕ್ಕೆ ಮಾತ್ರ ಬಿಡಬಾರದು ಎಂದು ಯೋಚಿಸಿ, ಅರ್ಧ ಬಾಟಲ್ ನೀರು ಕುಡಿದು ಬಹಿರ್ದೆಶೆಗೆ ಹೋಗಿ ಬಂದು ನಿರಾತಂಕವಾಗಿ ಆಫೀಸ್ ಹೊರಡಲು ಅನುವಾದೆ. ಮತ್ತೆ ಗುದ್ದಾಟ ಶುರು ಆಯಿತು. ಮತ್ತೆ ಇನ್ನೊಂದು ಬಾರಿ ಬಹಿರ್ದೆಶೆಗೆ ಹೋಗಿ ಬಂದಾಗ, ಅವುಗಳನ್ನು ತಿಂದು ತೆಗಿದ ಪಾಪಕ್ಕೆ, ಏನೋ ಒಂದು ಆತಂಕ ನೀಗಿದ ಹಾಗೆ ಆಗಿತ್ತು.

ಮತ್ತೆ ಲೇಟ್ ಆಗಿ ಆಫೀಸ್ ಹೋದೆ. ಬಾಸಿನಿಂದ ಹೊಟ್ಟೆ ತುಂಬಿದ ಹಾಗೆ ಆಗಿದ್ದರು, ಬಿಸಿ.. ಬಿಸಿ... ಬೈಗುಳಗಳನ್ನು ತಿಂದು ತೇಗಿ ಸೀಟ್ ಮೇಲೆ ಒರಗಿದೆ.ಅಷ್ಟರಲ್ಲಿ ನನ್ನ ಗೆಳೆಯ ಮಾಧವ ಅಮೇರಿಕಾಕ್ಕೆ ಹೋಗಿದ್ದ ಅವತ್ತೇ ಬಂದ. ಬಂದೊಡನೆ ನನ್ನ ಬಡ ಹೊಟ್ಟೆ ವಿಚಾರಿಸದೇ, ಬಂದವನೇ ಏನೋ? ನಿನ್ನ ಗುರುತೇ ಸಿಗಲಿಲ್ಲ. ಮುಂದೆ ಬಂದ ಕೂಡಲೇ ಅನ್ನಿಸಿದ್ದು, ನೀನೆ... ಅಂತ. ಆದ್ರೆ ಶಿರಸ್ತ್ರಾಣ ಧರಿಸಿ ಏಕೆ? ಕುಳಿತಿದ್ದಾನೆ ಎಂದು ಅನ್ನಿಸಿತು. ನೀನು ನೋಡಿದರೆ ಆರೇ ತಿಂಗಳಲ್ಲಿ ಬೋಡ ಆಗಿದಿಯಲ್ಲೋ ಎಂದ. ಮತ್ತೊಂದು ಮದುವೆ, ಗಿದುವೆ ಆಗಿದ್ದೀಯೇನೋ?.. ಎಂದು ಹೀಯಾಳಿಸಿದ. ಪಕ್ಕದಲ್ಲಿ ಕುಳಿತಿದ್ದ ಪಂಕಜಾ ನನ್ನ ಕತೆ(ವ್ಯಥೆ) ಯನ್ನು ಅನುಭವಿಸಿದ ನನಗಿಂತಲೂ ರಸವತ್ತಾಗಿ ವಿವರಿಸಿದಳು. ಜೋರಾಗಿ ಗಹ ಗಹಿಸಿ ನಗುತ್ತಾ.... ನನಗೆ ಹೇಳಿದ್ದರೆ ಒಂದು ಒಳ್ಳೆಯ ವಿಗ್ ತರುತ್ತಿದ್ದೆ ಅಮೇರಿಕಾದಿಂದ ಎಂದ. ಮಗನೆ ನೀನೆ ಒಪ್ಪತ್ತು ತಿಂದು ದುಡ್ಡು ಉಳಿಸೋ ಮಗ, ಅದರಲ್ಲಿ ನನಗೆ ವಿಗ್ ತರುತ್ತೀಯಾ ಎಂದು ಮನಸಿನಲ್ಲೇ ಬೈದೆ. ನಡಿ ಹೋಗೋಣ ತಿಂಡಿಗೆ ಎಂದ, ಬೇಡ ನನ್ನದು ಆಗಿದೆ ಎಂದು ಹೇಳಿದೆ. ಆಯಿತು ಕಾಫೀ ಆದರೂ ತೆಗೆದು ಕೊಳ್ಳು ಬಾ ಮಹಾರಾಯ ಎಂದು ಕರೆದುಕೊಂಡು ಹೋದ. ನಾನು ಕಾಫೀ ಕುಡಿದೆ, ಅವನು ಅದೇ ಎರಡು ಬಿಳಿ ಗುಳಿಗೆ ತಿಂದ. ಓ ಸಾರೀ... ನಾನು ಪರ್ಸ್ ನೆನಪು ಹಾರಿ ಬಂದಿದ್ದೇನೆ. ಬಿಲ್ ನೀನೆ ಕೊಡು ಎಂದ. ಕಡೆಗೆ ನಾನೇ ಬಿಲ್ ಕೊಟ್ಟು ಬಂದೆ. ಬಿಲ್-ಕೂಲ್ ಮನಸ್ಸಿಲ್ಲದೇ ನಾನು ಬಿಲ್ ಕೊಟ್ಟ ಕೋಪದಲ್ಲಿ ಮದುವೆ ಯಾವಾಗ ಕಣೋ, ಮೂರು ಕತ್ತೆ ವಯಸ್ಸು ಆಯಿತು ಎಂದು ಅಚ್ಚ ಕನ್ನಡದಲ್ಲಿ ಕೇಳೋಣ ಎಂದುಕೊಂಡರೂ, ಏನು ಮೂರನೇ ಇನ್ನಿಂಗ್ಸ್ ಟೆಸ್ಟ್ ಆಡಬೇಕು ಎಂದು ಮಾಡಿದ್ದೀಯಾ ಎಂದು ಕೇಳಿದೆ. ಮಾಡಿಕೊಳ್ಳಬೇಕು ಮಹಾರಾಯ ಒಂದು ಒಳ್ಳೆಯ ಹುಡುಗಿ ಇದ್ದರೆ ನೋಡು ಎಂದು, ನನಗೆ ಫಾರ್ಮಾನು ಹೊರಡಿಸಿದ. ಕೇಳಿದ್ದೆ ತಪ್ಪು ಆಯಿತು ಎಂದು ನಾನು ಮನಸಿನಲ್ಲೇ ಅಂದು ಕೊಂಡೆ.

ಸಂಜೆ ಆರು ಘಂಟೆಗೆ ಬಾಸ್ ಬಂದು, ಇವತ್ತು ಏನು? ಕೆಲಸ ಇಲ್ಲ ಮನೆಗೆ ಹೋಗೋಣ ಎಂದ. ನಾನು ಹಾಗೂ.. ಹೀಗೂ.. ಹೆಂಡತಿ ಬರುವವರೆಗೆ ಒಂದು ವಾರ ಇಲ್ಲೇ ಊಟ ಮಾಡಿದರೆ ಆಯಿತು ಎಂದು ಪ್ಲಾನ್ ಮಾಡಿದ್ದೆ. ಎಲ್ಲವೂ ಹಾಳು ಆಯಿತು ಮನೆಗೆ ಹೋಗುವ ಸಮಯದಲ್ಲಿ, ಊಟದ ಬಗ್ಗೆ ಯೋಚಿಸುತ್ತಾ, ಒಂದು ಲಾರಿಯಿಂದ ಕೂದಲೇಳೆಯಲ್ಲಿ ... ಕ್ಷಮಿಸಿ ಕೂದಲೇ ಇಲ್ಲ ಅಲ್ಲವಾ?, ಸ್ವಲ್ಪದರಲ್ಲೇ ಬಚಾವ್ ಆದೆ. ಹೇಗಿದ್ದರು ಹೊಟೆಲ್ ಅನುಭವ ಆಗಿದ್ದರಿಂದ, ಮನೆ ಮುಟ್ಟಿದ ಮೇಲೆ ಏನು? ಅಡುಗಿ ಮಾಡಬೇಕು ಎಂದು ಯೋಚಿಸುತ್ತಿದ್ದೆ, ಆಗ ಕಾಣಿಸಿದ್ದು ಮ್ಯಾಗಿ ಪ್ಯಾಕೆಟ್ ಇದು ತುಂಬಾ ಸುಲಭ ಎಂದು ಯೋಚಿಸಿ ಅದನ್ನೇ ಮಾಡಿಕೊಂಡು ತಿಂದೆ.

ಮನೆಯಲ್ಲಿ ಅಡುಗಿ ಮಾಡಿದ ಸಂತೋಷಕ್ಕೆ ಮಡದಿಗೆ ಫೋನ್ ಮಾಡಿ, ನಾನೇ ಅಡುಗೆ ಮಾಡಿ ಊಟ ಮಾಡಿದೆ ಎಂದು ಹೇಳಿದೆ. ಹೆಂಡತಿ ಹಿರಿ ಹಿರಿ ಹಿಗ್ಗಿ ಏನು? ಮಾಡಿದಿರಿ ಎಂದು ಕೇಳಿದಳು. ನಾನು ಮ್ಯಾಗಿ ಎಂದಾಗ, ಅಷ್ಟೇನಾ.... ಎಂದು ರಾಗ ಎಳೆದಳು. ಮತ್ತೆ ನಾನು ಮ್ಯಾಗಿ ಪ್ಯಾಕೆಟ್ ಅಷ್ಟು ಖಾಲಿ ಮಾಡಿದ್ದಕ್ಕೆ ಬೈದು ಒಂದಿಷ್ಟು ಮ್ಯಾಗಿ ಪ್ಯಾಕೆಟ್ ತಂದು ಇಡಿ. ನಿಮ್ಮ ಮಗನಿಗೆ ಬೇಕಾಗುತ್ತೆ ಎಂದು ತಾಕೀತ ಮಾಡಿದಳು.

ಅನಂತರ ಪಾತ್ರೆ ತೊಳೆದು ಮುಗಿಸುವಷ್ಟರಲ್ಲೇ ಬೆನ್ನು ಬಿದ್ದು ಹೋಗಿತ್ತು. ಮತ್ತೆ ಅಡುಗಿ ಸಹವಾಸ ಸಾಕು ಎನ್ನುವಷ್ಟು. ಮತ್ತೆ ನಾಳೆಯಿಂದ ಮತ್ತೊಂದು ಹೋಟೆಲ್ ಹುಡುಕಿದರೆ ಆಯಿತು ಎಂದು ಯೋಚಿಸಿ ನಿದ್ದೆಗೆ ಜಾರಿದೆ. ಮತ್ತೆ ನಾಳೆಯಿಂದ ಹೊಟೆಲ್ ಊಟನೆ ಗತಿ.. ಆದರೆ ಹೊಟ್ಟೆಯಲ್ಲಿ ಆಟ ಆಗದಿದ್ದರೆ ಸರಿ.