Friday, August 28, 2009

ಬಳುಕುವ ಬಿಂಕದ ಬಳ್ಳಾರಿ ....

ನನ್ನ ಟೀಂ ಲೀಡರ್ ಪಾಂಡುರಂಗನ ಆಜ್ಞೆಯಂತೆ ನಿದ್ದೆ ಇಲ್ಲದೆ (ಏಕೆ ಎಂದು ತಿಳಿಯಬೇಕಾದರೆ ಓದಿ ಮನಸೂರೆಗೊಳ್ಳುವ ಮೈಸೂರು.... ) ಬಳ್ಳಾರಿ ತಲುಪಿಯಾಗಿತ್ತು. ಬರಿ ಸಿನಿಮಾದಲ್ಲಿ ಬಳ್ಳಾರಿಯ ಹೆಸರು ಕೇಳಿದ್ದೆ. ಯಾವುದಾದರು ದಕ್ಷ ಅಧಿಕಾರಿ ನ್ಯಾಯಕ್ಕಾಗಿ ಹೋರಾಡುವಾಗ. ಅವನನ್ನು ನೀರಿಲ್ಲದ ಊರಿಗೆ Transfer ಮಾಡಿ ಬಿಡುತ್ತೇನೆ ಎಂಬ ವಿಲನ್ ಉದ್ಗಾರ. ಇಲ್ಲವೊ ಬಳ್ಳಾರಿ ಜೈಲಿಗೆ ಕಳುಹಿಸಿಬಿಡುತ್ತೇನೆ ಎಂದು ವಿಲನ್ ಪೋಲಿಸ್ ಹೇಳುವ ಪರಿ ಸಿನಿಮಾದಲ್ಲಿ ನೋಡಿದ್ದೇ. ಇಲ್ಲಿ ನನ್ನ ತಪ್ಪು ಮಾತ್ರ ನನಗೆ ಅರಿವಾಗಿರಲಿಲ್ಲ. ಆದರು ಬಳ್ಳಾರಿಯಲ್ಲಿ ಇದ್ದೆ. ಗುಡ್ಡದ ಕೆಳಗೆ ಬಸ್ ಸ್ಟ್ಯಾಂಡ್. ಆಗಿನ್ನೂ 8.00 ಘಂಟೆ ಉರಿಬಿಸಿಲಿನಿಂದ ಮಧ್ಯಾಹ್ನ 11.00 ಘಂಟೆ ಆದ ಹಾಗೆ ಅನ್ನಿಸಿತು. ಇಳಿದ ಮೇಲೆ ಅಲ್ಲೇ ಇದ್ದ ಬೇಕರಿಗೆ ಹೋಗಿ "ಟೀ ಕೊಡಿ ಸ್ವಾಮಿ" ಎಂಬ ಸವಿನಯದಿಂದ ಕೇಳಿದೆ. ಟೀ ಅದ ಮೇಲೆ "ಎ ಟೀ ತಗೋ" ಎಂದು ಒರಟು ಭಾಷೆಯಿಂದ ಹೇಳಿದ. ಆದು ತುಂಬಾ ಚೆನ್ನಾಗಿರುವ "ಇರಾನಿ ಟೀ" ಅಂತಹ ಟೀ ನಾನು ಜೀವನದಲ್ಲೇ ಸವಿದಿರಲಿಲ್ಲ. ಅನಂತರನೇ ಗೊತ್ತಾಗಿದ್ದು ಇದು ಧಾರವಾಡದ ಭಾಷೆ ಹಾಗೇನೇ ಎಂದು ಆದರೆ ಅದಕ್ಕಿಂತಲೂ ತುಂಬ ಒರಟು ಭಾಷೆ.

ಆಟೋ ಹಿಡಿದು ಅಡ್ರೆಸ್ ದಾರಿಹೋಕರನ್ನು ಕೇಳಿ ತಿಳಿದು ಮನೆ ತಲುಪಿದೆ. ಅದು ಮನೆ ಹಾಗಿರದೆ ಒಂದು ಚಿಕ್ಕದಾದ ಕೋಣೆ. ಒಬ್ಬರು ಮಾತ್ರ ಇರಬಹುದಾಗಿತ್ತು. ಅರ್ಧ ಘಂಟೆ ಹಾಗೆ ವಿಶ್ರಾಂತಿ ತೆಗೆದುಕೊಂಡು ನಿತ್ಯಕರ್ಮಗಳನ್ನು ಮುಗಿಸಿ ಆಫೀಸ್ ತಲುಪಿದೆ. ಗೇಟಿನಲ್ಲಿ ಸೆಕ್ಯೂರಿಟಿ ಕೇಳಿದ ಯಾರು ಬೇಕು ಎಂದು "ನಾನು ನಿದ್ದೆಗಣ್ಣಲ್ಲಿ" ಡೈರಿ ಎಂದೆ. ಹೌದು ಡೈರಿನೆ ಹಾಲು ಬೇಕಾದರೆ ಆ ಕೌಂಟರ್ ಗೆ ಹೋಗಿ ಕೈ ಮಾಡಿ ಕೌಂಟರ್ ತೋರಿಸಿದ. ನಾನು ಅನಂತರ ಸಾಫ್ಟವೇರ್ Implementation ಗೆ ಬಂದಿದ್ದೇನೆ ಎಂದು ಹೇಳಿದಾಗ ಒಳಗಡೆ ಬಿಟ್ಟ.

ನಾನು ಮೈಸೂರಿನಲ್ಲಿ ಪ್ರತಿದಿನವು ಶ್ರೀರಾಮ ಮಂದಿರಕ್ಕೆ ಹೋಗುತ್ತಿದ್ದೆ. ಇಲ್ಲಿ ಏನು ಗೊತ್ತಿಲ್ಲವಾದ್ದರಿಂದ. ಹಾಗೆ ಬಂದಿದ್ದೆ. ಏನು ಆಘಾತ ಕಾದಿದೆ ಎಂದು ಮನದಲ್ಲೇ ಶ್ರೀರಾಮನನ್ನು ನೆನೆದು ಒಳಗಡೆ ಕಾಲಿಟ್ಟೆ. ಒಳಗಡೆ ಒಂದು ಆಕಳು ನಿಂತಿತ್ತು. ತುಂಬಾ ಖುಷಿ ಆಯಿತು. "ಗೋ ಮಾತೆ ತಾಯಿ" ಎಂದು ಹೋಗಿ ಅದನ್ನು ಹಿಂದಿನಿಂದ ನಮಸ್ಕರಿಸಿದೆ. ಆಗಲೇ ಹಿಂದಿನಿಂದ ಒಬ್ಬ ವ್ಯಕ್ತಿ ಬಂದು "ಸರ್, ಏನಾದ್ರು ಮಾಡಿ ನನ್ನ ಆಕಳಿಗೆ ಹಾಲು ಬರುವ ಹಾಗೆ ಮಾಡಿ" ಎಂದು ಕಾಲಿಗೆ ಬಿದ್ದ. ನೋಡುವಷ್ಟರಲ್ಲೇ ಗೊಳೋ ಎಂದು ಅಳಲಾರಂಬಿಸಿದ. ನನಗೆ ದಿಕ್ಕೇ ತೋಚದಾಗಿತ್ತು. ನಾನು ಏನು ಇದೆಲ್ಲ? ನನ್ನ ಕಾಲುಬಿಡು ಎಂದೆ. ಇಲ್ಲ ನಾನು ಕಾಲು ಬಿಡುವದಿಲ್ಲ. ನೀವು ಸಹಾಯ ಮಾಡುತ್ತೇನೆ ಎಂದರೆ ಮಾತ್ರ ಬಿಡುತ್ತೇನೆ ಎಂದ. ನಾನು ....ನಾನು ಎಂದು ತಡವರಿಸಿದೆ. ಡಾಕ್ಟರೆ ಏನಾದರು ಮಾಡಿ ಹಾಲು ಬರಿಸಿ ಎಂದು ಹೇಳಿದ. ಆಗ ನನಗೆ ತಿಳಿಯಿತು. ನಾನು ಡಾಕ್ಟರ ಅಲ್ಲ ಎಂದೆ. ಮತ್ತೆ ನೀವು ಡಾಕ್ಟರ ಅಲ್ಲವಾ? ಎಂದ. ಇಲ್ಲ ನಾನು ಕಂಪ್ಯೂಟರ್ ನವನು ಎಂದು ಹೇಳಿದೆ. ಓ ಕಂಪ್ಯೂಟರಾ... ಎಂದು ರಾಗವೆಳೆದು. ನನ್ನನ್ನು ಓರೆಗಣ್ಣಿಂದ ನೋಡಿ. ಮೊದಲೇ ಹೇಳಬಾರದ ಎಂದು ನನ್ನನ್ನು ಜಬರಿಸಿ. ಮತ್ತೆ ಹೋಗಿ ಮರದ ಕೆಳೆಗೆ ಕುಳಿತ. ಹೇಳಿಕೊಳ್ಳಲು ಬಿಟ್ಟಿದ್ದೆಲ್ಲಿ ಎಂದು ನಾನು ಮನದಲ್ಲೇ ಅಂದುಕೊಂಡೆ. ಆಗ ಅನ್ನಿಸಿತು ಬಿಳಿ ಅಂಗಿ ಹಾಕಿಕೊಂಡು ಬರಬಾರದಿತ್ತೆಂದು.
ಮತ್ತೆ ಹೆದರಿಕೆಯಿಂದಲೇ ಒಳಗಡೆ ಕಾಲಿಟ್ಟ ಕೂಡಲೇ ಒಬ್ಬ ಮನುಷ್ಯ ಫೈಲಿನಿಂದ ತಲೆ ಚಚ್ಚಿ ಕೊಳ್ಳುತ್ತಿದ್ದ. ನನಗೆ ಈಗ ಪೂರ್ತಿ ಭಯ ಶುರು ಆಗಿತ್ತು. ನನಗೆ ಆ ಸೆಕ್ಯೂರಿಟಿ ಗಾರ್ಡ್ ಮೇಲೆ ಡೌಟ್ ಬಂತು. ಎಲ್ಲಿ ಡೈರಿ ಅಂತ ಹೇಳಿ ಹುಚ್ಚರ ಆಸ್ಪತ್ರೆ ಒಳಗಡೆ ಬಿಟ್ಟಿದ್ದಾನೋ ಎಂದು. ಸ್ವಲ್ಪ ಹೊತ್ತು ಕಾದ ಮೇಲೆ ಕಂಪ್ಯೂಟರ್ ಡಿಪಾರ್ಟ್ಮೆಂಟ್ ಹೆಡ್ ಆದ ಹೆಗಡೆ ಬಂದರು ತಾವಯಿಗೆಯೇ ನನ್ನನ್ನು ಪರಿಚಯ ಮಾಡಿಕೊಂಡರು. ತುಂಬ ಒಳ್ಳೆಯ ಮನುಷ್ಯ. ಅನಂತರ ಎಲ್ಲ ಡಿಪಾರ್ಟ್ಮೆಂಟ್ ಪರಿಚಯಿಸಲು ಕರೆದು ಕೊಂಡು ಹೋದರು.ಮ್ಯಾನೇಜರ್ ರೂಂ ಪ್ರವೇಶಿಸಿದೊಡನೆ ಮತ್ತೊಂದು ಆಘಾತ ಕಾದಿತ್ತು. ಮ್ಯಾನೇಜರ್ ತನ್ನ ತಲೆಯ ಕೂದಲನ್ನು ಕಿತ್ತಿ ಕೊಳ್ಳುತ್ತಿದ್ದರು. ಪರಿಚಯ ವಾದ ಮೇಲೆ ಹೊರಗೆ ಬಂದೊಡನೆ ಹೆಗಡೆ ನನಗೆ ಹೇಳಿದರು ಇವರೆಲ್ಲ ಹೀಗೆ ನೀವೇನು ತಲೆ ಕೆಡಿಸಿಕೊಳ್ಳಬೇಡಿ ಎಂದು. ತಲೆ ಕೆಡಿಸಿ ಕೊಳ್ಳಲು ತಲೆಯಲ್ಲಿ ಏನು ಉಳಿದಿದೆ ಎಂದು ಕೇಳಬೇಕೆಂದೆ ಆದರೆ ಕೇಳಲಿಲ್ಲ... ಅನಂತರ ಭೇಟಿಯಾಗಿದ್ದು ಆ ಫೈಲಿನಿಂದ ತಲೆ ಚಚ್ಚಿ ಕೊಳ್ಳುತ್ತಿದ್ದ ವ್ಯಕ್ತಿ ಅವರು ಮಿಲ್ಕ್ ಬಿಲ್ ಆಫೀಸರ್ ಎಂದು ಆಗಲೇ ತಿಳಿದಿದ್ದು. ಅವರಿಗೆ ಬಿಲ್ ಬೇಕು ಎಂದು ಮ್ಯಾನೇಜರ್ ಪೀಡಿಸಿದ್ದರು ಕಾರಣ ಆ ಆಸಾಮಿ ತಲೆ ಚಚ್ಚಿ ಕೊಳ್ಳುತಿದ್ದ. ಹಾಗು ಹೀಗು ಎಲ್ಲರ ಪರಿಚಯವಾದ ಮೇಲೆ ಕ್ಯಾಬಿನ್ನಿನಲ್ಲಿ ಬಂದು ಕುಳಿತೆ. ಅಷ್ಟರಲ್ಲೇ ಫೈನಾನ್ಸ್ ಆಫೀಸರ್ ಗಳು ನನಗೆ ಕಾಯುತ್ತಿದ್ದರು ಅವರಿಗೆ ಮಿಲ್ಕ್ ಬಿಲ್ ಬ್ಯಾಲೆನ್ಸ್ ಶೀಟ್ ಬೇಕಾಗಿತ್ತು. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ತಯಾರಾಗಿತ್ತು. ಹಾಗು ಹೀಗು ಅವರಿಗೆ ಓಪನಿಂಗ್ ಬ್ಯಾಲೆನ್ಸ್ ಎಂಟ್ರಿ ಮಾಡಲು ಹೇಳಿ. ಮರುದಿವಸ ಬ್ಯಾಲೆನ್ಸ್ ಶೀಟ್ ರೆಡಿ ಮಾಡಿ ಕೊಟ್ಟಿದ್ದೆ.

ಗುಡ್ಡದ ಕೆಳಗೆ ಚಿಕ್ಕ ಕೋಣೆ. ತುಂಬ ಉರಿಬಿಸಿಲು ಒಬ್ಬನೇ ಹೇಗೆ ಕಾಲ ಕಳೆಯುವದು ಒಂದು ದೊಡ್ಡ ಪ್ರಶ್ನೆ ಯಾಗಿತ್ತು. ಆಗ ನನಗೆ ಪುಸ್ತಕ ಓದುವ ಹವ್ಯಾಸ ಹತ್ತಿಕೊಂಡಿತ್ತು. ಮತ್ತೆ ಸಮಯ ಸಿಕ್ಕಾಗ ಶ್ರೀ ರಾಮ ನಾಮವನ್ನು ಬರೆಯುವದು. ತುಂಬಾ ಒಳ್ಳೊಳ್ಳೆ ವಿಷಯಗಳನ್ನು ಅರಿತಿದ್ದೆ. ಅದಕ್ಕೆ ಹೇಳಿರಬೇಕು ಹಿರಿಯರು "ದೇಶ ಸುತ್ತು ಇಲ್ಲ ಕೋಶ ಓದು" ಎಂದು. ನನಗೆ ಅಕಸ್ಮಾತ್ತಾಗಿ ಎರಡು ಸದಾವಕಾಶಗಳು ದೊರೆತಿದ್ದವು. ನನಗೆ ನಿಜವಾಗಿಯು ಬಳ್ಳಾರಿ ಸಿನಿಮಾದಲ್ಲಿ ತೋರಿಸುವ ಹಾಗೆ ಅನ್ನಿಸಲೇ ಇಲ್ಲ. ಅಲ್ಲಿಯ ಖಾರವಾಗಿರುವ ರೋಟಿ ಊಟ. ಈಗಲೂ ಬಾಯಿಗೆ ಚಪಲತೆ ನೆನಪಿಸುತ್ತದೆ. ಮತ್ತೆ "ತುಂಗಾ ಪಾನ ಗಂಗಾ ಸ್ನಾನ" ಎಂದು ಹಿರಿಯರು ಹೇಳಿದ ಹಾಗೆ ತುಂಗೆಯ ನೀರನ್ನು ಸವಿಯುವ ಅವಕಾಶ ದೊರೆತಿತ್ತು. ತುಂಬಾ ಒಳ್ಳೆಯ ಸಿಹಿ ನೀರು.
ಬಳ್ಳಾರಿಯನ್ನು ಬಿಡುವ ಮನಸಿರಲಿಲ್ಲ ಆದರೆ 4 ತಿಂಗಳಿಗೆ ಪಾಂಡುರಂಗನಿಗೆ ಬೇರೆ ನೌಕರಿ ಸಿಕ್ಕಿತ್ತು. ಎಲ್ಲ ಜವಾಬ್ದಾರಿ ನನ್ನ ತಲೆಯ ಮೇಲೆ ಹೇರಿ ಹೋಗಿದ್ದರು ಇದು ರಾಮ ನಾಮದ ಫಲವೋ ಗೊತ್ತಿಲ್ಲ. ನಾನು ಮೊದಲ ಬಾರಿ ಟೀಂ ಲೀಡರ್ ಆಗಿದ್ದೆ. ಅದನ್ನು ನಿಭಾಯಿಸುವ ಪರಿಪಕ್ವತೆ ನನಗೆ ಬಂದಿತ್ತು. ಹೀಗೆ ಬಳ್ಳಾರಿ ನನಗೆ ತುಂಬ ಪಾಠ ಕಲಿಸಿತ್ತು. ಅಲ್ಲಿಯ ಫೈನಾನ್ಸ್ ಆಫೀಸರ್ ಗಳಾದ ಹಯವದನ ಆಚರ್ಯರಿಂದ ತುಂಬಾ ಕಲಿತ್ತಿದ್ದೆ. ಮತ್ತೆ ನನಗೆ ಹೆಗಡೆಯವರ ಸಹಾಯದಿಂದ 4 department computerise ಮಾಡಿದ್ದೆ.

ಬಳ್ಳಾರಿಯನ್ನು ಬಿಡುವ ಮನಸಿರಲಿಲ್ಲ. ನಮ್ಮ MD ನನಗೆ ಫೋನ್ ಮಾಡಿ ನೀನು ನಾಳೆ ಶಿವಮೊಗ್ಗಕ್ಕೆ ಬರಬೇಕು ಮೀಟಿಂಗ್ ಇದೆ ಎಂದಾಗ ಯಾಕಾದರೂ ಟೀಂ ಲೀಡರ್ ಆದೆ ಎಂದು ಮನಸಿನಲ್ಲಿ ಅನ್ನಿಸಿತ್ತು. ಆದರೂ ಬೇಡದ ಮನಸಿನಿಂದ ಶಿವಮೊಗ್ಗ ಬಸ್ ಹತ್ತಿದ್ದೆ.

ಬಳ್ಳಾರಿಯಲ್ಲೇ ಇದ್ದಾಗ ಒಮ್ಮೆ ಮಂತ್ರಾಲಯಕ್ಕೆ ಹೋಗಿ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಮಾಡಿ ಬಂದಿದ್ದೆ. ಮತ್ತೆ ಒಂದು ದಿನ ಕರ್ನಾಟಕ ಇತಿಹಾಸದಲ್ಲೇ ಅತ್ಯುನ್ನತವಾದ ವಿಜಯನಗರ ಸಮ್ರಾಜ್ಯವಾದ ಹಂಪಿಯನ್ನು. ಆದರೆ ಅದನ್ನು ಹಾಳು ಮಾಡಿದ್ದೂ ನೋಡಿದರೆ ಮನ ಕಲುಕುತಿತ್ತು.

ಬಳ್ಳಾರಿ ನನಗೆ ನಿಜವಾಗಿಯು ಬಳುಕುವ ಬಿಂಕದ ಸಿಂಗಾರಿ ಇದ್ದ ಹಾಗೆ. ಅಲ್ಲಿ ಕಳೆದ 4 ತಿಂಗಳು ನನಗೆ ಜೀವನದ ಪ್ರತಿ ಕ್ಷಣವನ್ನು ಹೇಗೆ ಸವಿಯಬೇಕು ಎಂದು ಕಲಿಸಿದ ಊರು. ಅದಕ್ಕೆ ನಾನು ಹೇಳುವದು ಅದು ಬಳುಕುವ ಬಿಂಕದ ಸಿಂಗಾರಿ ನನ್ನ ಪ್ರೀತಿಯ ಬಳ್ಳಾರಿ ಎಂದು ......

2 comments:

  1. ಬಳ್ಳಾರಿ ಸುಡುವ ಬಿಸಿಲಿಗೆ ಎಷ್ಟು ಕುಪ್ರಸಿದ್ಧವೋ, ಅಲ್ಲಿಯ ಹಂಪೆ, ತುಂಗಭದ್ರ ನದಿ, ಅಣೆಕಟ್ಟು ಮುಂತಾದ ಪ್ರೇಕ್ಷಣೀಯ ಸ್ಥಳಗಳಿಗೆ ಅಷ್ಟೇ ಪ್ರಸಿದ್ಧ. ನಿಮ್ಮ ಅನುಭವಗಳು ಸಂದರವಾಗಿ ಮೂಡಿದೆ. ಇನ್ನು ಶಿವಮೊಗ್ಗದಲ್ಲೂ ಒಳೆಯ, ಮಧುರ ನೆನಪುಗಳು ಇರುವಂತಹ ಅನುಭವವಾಗಲಿ

    ReplyDelete
  2. ಧನ್ಯವಾದಗಳು. ನೀವು ಹೇಳಿದ್ದು ನಿಜ, ಹಂಪೆ, ತುಂಗಭದ್ರ ನದಿ, ಅಣೆಕಟ್ಟು ತುಂಬಾ ಚೆನ್ನಾಗಿವೆ.

    ReplyDelete