Friday, August 28, 2009

ಕಾಲ್ ಸೆಂಟರ್ ....

ನಿನ್ನ ಜನ್ಮದಲ್ಲಿ ನೀನು PUC ಪಾಸಾಗಲ್ಲ ಕಣೋ " ಎಂದು ಶ್ರೀಧರರಾಯರು ಮಗ ಸುಬ್ಬನಿಗೆ ಉಗಿದಿದ್ದರು. ತ್ರಿವಿಕ್ರಮನಂತೆ ಸತತವಾಗಿ 6 ನೆ ಬಾರಿ ಸುಬ್ಬ PUC ಪರೀಕ್ಷೆ ಕಟ್ಟಿ ಫೇಲ್ ಆಗಿದ್ದ. ಮಾಡು ಇಲ್ಲವೇ ಮಡಿ ಎಂದು ಅಪ್ಪ ಕೊಟ್ಟ ಕಡೆಯ ಚಾನ್ಸ್ ಅದು ಕೂಡ ಕೈ ಕೊಟ್ಟಿತ್ತು. ಇಲ್ಲಿಯೇ ಏನಾದರು ನೌಕರಿ ಮಾಡು ಎಂದು ಅವನ ಅಪ್ಪ ತಾಕಿತ ಮಾಡಿದ್ದರು. ಸುಬ್ಬನಿಗೆ ಊರಲ್ಲಿ ಯಾರಿಗೂ ಮುಖ ತೋರಿಸುವ ಮನಸಿರಲಿಲ್ಲ. ತಂದೆಯ ಮಾತನ್ನು ಮೀರುವಂತಿಲ್ಲ.

ಹೀಗಿರುವಾಗ ಬೆಂಗಳೂರಿಂದ ಪಕ್ಕದ ಮನೆ ಪಚ್ಚು(ಪ್ರಶಾಂತ) ಬಂದಿದ್ದ. ತನ್ನ ಗೋಳನ್ನು ಪಚ್ಚು ಮುಂದೆ ಗೊಗರಿದ. ಆಯಿತು ನಾನು ಬೆಂಗಳೂರಿಗೆ ಹೋದ ಮೇಲೆ ನಿನಗೆ ಒಂದು ಕೆಲಸ ಹುಡುಕಿ ನಿನಗೆ ತಿಳಿಸುವೆ ಎಂದು ಹೇಳಿ ಬೆಂಗಳೂರು ಬಸ್ ಹತ್ತಿದ್ದ ಪಚ್ಚು.

ಕೆಲ ದಿನಗಳ ನಂತರ ಪಚ್ಚು ಫೋನ್ ಮಾಡಿ, ನಿನಗೆ ಒಂದು ಒಳ್ಳೆಯ ಕೆಲಸ ಹುಡುಕಿದ್ದೇನೆ. ತಿಂಗಳಿಗೆ 15000 ಸಂಬಳ. "ಕಾಲ್ ಸೆಂಟರ್" ನಲ್ಲಿ ಕೆಲಸ ಎಂದು ಹೇಳಿ. ಬೆಂಗಳೂರಿಗೆ ಬರುವ ವ್ಯವಸ್ಥೆ ಮಾಡಿಕೋ ಎಂದು ಹೇಳಿದ್ದ. ಪಚ್ಚು ಸಂಬಳದ ವಿಷಯ ಕೇಳಿದ ಮೇಲೆ ಬೇರೆ ಏನನ್ನು ಅಷ್ಟು ಸರಿಯಾಗಿ ಕೇಳಿಸಿಕೊಂಡಿರಲಿಲ್ಲ. ಆದರೆ ನನ್ನ ರೂಮಿನಲ್ಲಿ ಮಾತ್ರ ಜಾಗ ಇಲ್ಲ. ಮಂಜು ಮತ್ತು ಗೋಪಾಲ್ ರೂಂ ಗೆ ಹೋಗು ಎಂದು ಹೇಳಿದ್ದ.

ನನಗೆ ಕೆಲಸ ಸಿಕ್ಕಿದೆ ನಾನು ಬೆಂಗಳೂರಿಗೆ ಬರುತ್ತೇನೆ ಎಂದು ಹೇಳಿ ನನಗೆ ಮತ್ತೆ ಮಂಜುಗೆ ಫೋನ್ ಮಾಡಿ ಹೇಳಿ ಬೆಂಗಳೂರು ಬಸ್ ಹತ್ತಿದ್ದ ಸುಬ್ಬ.

ಬೆಂಗಳೂರು ಬಂದೊಡನೆಯೇ ಖುಷಿಯ ಭರದಲ್ಲಿ ಬಸವನಗುಡಿ ಬಸ್ ಹತ್ತುವ ಬದಲು ಬಾನಸ್ವಾಡಿ ಬಸ್ ಹತ್ತಿ, ಬಾನಸ್ವಾಡಿ ಬಸ್ ಸ್ಟಾಪ್ ನಿಂದ ನನಗೆ ಫೋನ್ ಮಾಡಿ ಎಲ್ಲಿ ಬರಬೇಕು? ಎಂದು ಕೇಳಿದ. ಪೂರ್ತಿ ವಿಷಯ ತಿಳಿದ ಮೇಲೆ ಉಗಿದು ಆಟೋ ಮಾಡಿ ಕೊಂಡು ಬಾ ಎಂದು ಹೇಳಿ, ಅಡ್ರೆಸ್ ಆಟೋ ಡ್ರೈವರ್ ಗೆ ಹೇಳಿದ್ದೆ.

ಹಾಗು ಹೀಗು ಮನೆ ತಲುಪಿದ ನಮ್ಮ ಸುಬ್ಬ. ಮತ್ತೆ ಏನೋ ವಿಷಯ ಮನೆಯವರ ಯೋಗಕ್ಷೇಮ ವಿಚಾರಿಸಿ, ಟೀ ಕುಡಿದು ಮುಂದಿನ ಸಮಾಚಾರವೇನು ಸುಬ್ಬ ಎಂದು ಕೇಳಿದೆವು. ಪಚ್ಚು ನೌಕರಿ ಕೊಡಿಸ್ತಾನಂತೆ ಕಣೋ ಎಂದ. ತಿಂಗಳಿಗೆ 15000 ಸಾವಿರ ಸಂಬಳ ಎಂದ. ಮಂಜು ಎಲ್ಲಿಯಪ್ಪ ನೌಕರಿ ಎಂದು ಕೇಳಿದ. ಅದು.. ಅದು ..ಎಂದು ಸ್ವಲ್ಪ ನೆನಪು ಮಾಡಿ ಕೊಂಡು "ಕಾರ್ ಸೆಂಟರ್" ಎಂದ. ಯಾವದೋ ಅದು ಕಾರ್ ಸೆಂಟರ್ ಗ್ಯಾರೆಜ ಏನೋ?. ಗೊತ್ತಿಲ್ಲಪ ನೀನೆ ಪಚ್ಚು ಗೆ ಫೋನ್ ಮಾಡು ಎಂದ.

ಪಚ್ಚುಗೆ ಫೋನ್ ಮಾಡಿದಮೇಲೆ ತಿಳಿಯಿತು ಅದು "ಕಾಲ್ ಸೆಂಟರ್" ಎಂದು. ಇವತ್ತೇ ಇಂಟರ್ವ್ಯೂ ನಾನು ಹೋಗಬೇಕು ಎಂದು ತಡಬಡಿಸಿ ಸ್ನಾನ ಮುಗಿಸಿ ಇಂಟರ್ವ್ಯೂ ಗೆ ಹೋದ.

ಮಂಜು ಯಾವತ್ತು ತಮಾಷೆಯ ಹುಡುಗ. ಅವನು ಎಲ್ಲರೊಂದಿಗೆ ತಮಾಷೆ ಮಾಡುತ್ತ ಇರುವದು ಅವನ ಚಟ. ಸಂಜೆ ಇಂಟರ್ವ್ಯೂ ಮುಗಿಸಿ ಬಂದ ಮೇಲೆ ಸುಬ್ಬನಿಗೆ ಮಂಜು ಏನಪ್ಪಾ ಏನಾಯಿತು ನಿನ್ನ ಗ್ಯಾರೆಜ ಇಂಟರ್ವ್ಯೂ? ಎಂದ. ನನಗೆ ನೌಕರಿ ಸಿಕ್ಕಿದೆ ಕಣ್ರೋ 15000 ನೆ ಸಂಬಳ ಎಂದ. ಅವನ ಖುಷಿಗೆ ಪಾರವೇ ಇರಲಿಲ್ಲ. ಮಂಜು ನಿನಗೆ ಕಾಲ್ ಸೆಂಟರ್ ಬಗ್ಗೆ ಪೂರ್ತಿ ಮಾಹಿತಿ ಕೊಡುತ್ತೇನೆ ಎಂದು ಸುಬ್ಬನಿಗೆ ಹೇಳಿದ. ನನಗೆ ಗೊತ್ತು ಈ ಮಂಜ ಏನೋ ಮಸಲತ್ತು ನಡಿಸಿದ್ದಾನೆ ಎಂದು. ಮಂಜ ಶುರು ಹಚ್ಚಿ ಕೊಂಡ "ಕಾಲ್ ಸೆಂಟರ್" ಎಂದರೆ ಕಾಲಗಳನ್ನೂ X-Ray ಮಾಡುವ ಸೆಂಟರ್ ಎಂದ. ನಾನು ಒಳಗೊಳಗೇ ನಗುತ್ತಿದೆ. ಅಂದರೆ X-Ray Technician ತರಹ ಎಂದ. ಆದರೆ ...ಆದರೆ ... ನನಗೆ ಎಲ್ಲಿ ಬರುತ್ತೆ X-Ray ಮಾಡಲು ನಾನು ಬೇರೆ PUC ಫೇಲ್ ಎಂದ ಸುಬ್ಬ. ಅದಕ್ಕೆ ನಿನ್ನ ದಡ್ಡ(ಗುಬಾಲ್) ಅನ್ನೋದು ಎಂದ ಮಂಜು. ಯಾರು ಕಾಲಿನ ಮತ್ತು ಬೆವರಿನ ಕೆಟ್ಟ ವಾಸನೆ ತಡೆದುಕೊಳ್ಳುತ್ತಾರೋ ಅಂತವರನ್ನೇ ಸೆಲೆಕ್ಟ್ ಮಾಡುತ್ತಾರೆ ಎಂದ. ಹೌದಾ ಅದಕ್ಕೆ ಇರಬೇಕೆ ನನ್ನ ಇಂಟರ್ವ್ಯೂ ಮಾಡುತಿದ್ದವ ತನ್ನ ಶೂ ತೆಗೆದಾಗ ಕೆಟ್ಟ ವಾಸನೆ ಬರುತಿತ್ತು. ಆದರು ತಡೆದು ಕೊಂಡೆ ಎಂದ. ಅದಕ್ಕೆ ಕಣೋ ನಿನ್ನನ್ನು ಸೆಲೆಕ್ಟ್ ಮಾಡಿದ್ದೂ ದಡ್ಡ. ಹುಡಿಗಿಯರ ಕಾಲ ಬಗ್ಗೆ ಹುಶಾರಪ್ಪ ಅವರು ಸ್ಯಾಂಡಲ್ ನಂಬರ್ ಕೆನ್ನೆ ಮೇಲೆ ಮುಡಿದರೆ ಕಷ್ಟ ಎಂಬ ವೇದಾಂತ ಬೇರೆ ಹೇಳಿಕೊಟ್ಟ.

ಮೊದಲನೇ ದಿನದ ಕೆಲಸ ಮುಗಿಸಿಕೊಂಡು ಬಂದಾಗ ಸುಬ್ಬ ತುಂಬಾ ಸಂತೋಷದಿಂದ ಇದ್ದ. ಮತ್ತೆ ನಮ್ಮಿಬ್ಬರಿಗೂ ಎಂಥ ಚೆನ್ನಾಗಿದೆ ಕಣೋ ಆಫೀಸು ಕಾಫಿ,ಟೀ ಎಲ್ಲದಕ್ಕೂ ಮೆಶಿನ್. ಅಮ್ಮನಿಗೆ ಎರಡು ಸರಿ ಕೇಳಿದರೆ ಕಾಫಿ ಕೊಡುವದಿಲ್ಲ. ಆದರೆ ಆಫೀಸಿನಲ್ಲಿ ಎಷ್ಟು ಸರಿ ಬೇಕಾದರು ಕುಡಿಯಬಹುದು ಎಂದ. ಮಂಜ ಸುಮ್ಮನಿರದೆ ಮತ್ತೆ ಊಟಕ್ಕು ಮೆಶಿನ್ ಇದೆನಾ?. ಇಲ್ಲ ಮಾಡಿಸೋದಕ್ಕು ಮೆಶಿನ್ ಇದೆ ಎಂದು ಹೇಳಿ ಸಿಟ್ಟಿನಿಂದ ಸುಬ್ಬ ಮಂಜನನ್ನು ನೋಡಿದ್ದ.

ಎರಡನೇ ದಿನ ಸುಬ್ಬ ಬಂದವನೇ ಎಲ್ಲಿ ಆ "ಕಳ್ಳ ಮಂಜ" ಎಂದು ಕೂಗಲಾರಂಬಿಸಿದ. ಏಕೆ? ಏನಾಯಿತೋ? ಎಂದು ನಾನು ಕೇಳಿದಾಗ ಆ ನನ್ನ ಮಗ ಮಾಡಿದ್ದ ಅವಾಂತರದಿಂದ ನನ್ನ ಮಾನ ಮರ್ಯಾದೆ ಎಲ್ಲ ಹೋಯಿತು ಎಂದು ಗೊಳಡಿದ ಅದು ಹುಡುಗಿಯರ ಮುಂದೆ ಕೂಡ ಎಂದ. ಅಷ್ಟರಲ್ಲೇ bathroom ನಿಂದ ಬಂದ ಮಂಜ ನೀನು ಮೊದಲೇ ಹೇಳಬಾರದೆ ಹುಡುಗಿಯರು ಇದ್ದಾರೆ ಅಂತ ಮತ್ತೆ ಬೇರೆಯಾವುದಾದರು ಐಡಿಯಾ ಕೊಡುತ್ತಿದ್ದೆ ಎಂದ. ಜಗಳ ಮಾಡಬೇಡಿ ಏನು ಆಯಿತು ಹೇಳೋ ಸುಬ್ಬ ಎನ್ದೆ. ಇವತ್ತು ಟ್ರೇನಿಂಗನಲ್ಲಿ ನಮ್ಮ ಪ್ರಾಜೆಕ್ಟ್ ಲೀಡರ್ ಕಾಲ್ ಸೆಂಟರ್ ಅಂದರೆ ಏನು? ಎಂದು ಕೇಳಿದ. ಅದಕ್ಕೆ ಈ ಕಳ್ಳ ಮಂಜ ಕೊಟ್ಟಿದ್ದ ಭಾಷಣ ಬಿಗಿದು ಉಗಿಸಿಕೊಂಡು ಬಂದೆ ಎಂದ. ಮತ್ತೆ ಮಂಜ ಕೈ ಸೆಂಟರ್ ಬಗ್ಗೆ ನು ಹೇಳಬೇಕಿತ್ತು ಅದನ್ನು ಹೇಳಿಲ್ಲ ಅದಕ್ಕೆ ಉಗಿದಿರಬೇಕು ಎಂದ.

ಹಾಗು ಹೀಗು ಇಬ್ಬರಿಗೂ ಒಪ್ಪಂದ ಮಾಡಿಸಿದೆ. ಈ ಮಂಜನನ್ನ ಹೀಗೆ ಮಾಡುವಾಗ ಯಾರಾದರು ತಡೆದರೆ ಅವರಿಗೂ ಏನಾದರು ತಂದು ಇಟ್ಟು ಬಿಡುತ್ತಾನೆ. ಹೀಗೆ ಒಂದು ದಿವಸ ನನ್ನ ಸ್ಕೂಲ್ ಬಾಗ್ನಲ್ಲಿ ಗಣೇಶ್ ಬಿಡಿ ಇಟ್ಟು ನನ್ನ ಮನೆಯಲ್ಲಿ ಬೈಯುವ ಹಾಗೆ ಮಾಡಿದ್ದ.

ಮತ್ತೆ ಒಂದು ದಿವಸ ಸುಬ್ಬ ತುಂಬಾ ಬೇಜಾರಾಗಿ ಮನೆಗೆ ಬಂದಿದ್ದ. ಏನಾಯಿತು ಎಂದು ಕೇಳಿದಾಗ ನಾನು ನೌಕರಿ ಬಿಡುತ್ತೇನೆ ಎಂದು ಹೇಳಿದ. ಏನಾಯಿತು ಪೂರ್ತಿ ವಿವರಿಸು ಎಂದಾಗ. ಈ ನೌಕರಿಯಲ್ಲಿ ಕಿಮ್ಮತ್ತೆ ಇಲ್ಲ ಕಣೋ ಫೋನ್ ಮಾಡಿದ ವ್ಯಕ್ತಿಗಳೆಲ್ಲರು ಹೊರ ದೇಶದವರು ನನ್ನ ಹೆಸರನ್ನು ಹೇಗೆ ಹೇಗೋ ಉಚ್ಚರಿಸುತ್ತಾರೆ. ಒಬ್ಬ ನನ್ನನ್ನ ಡಬ್ಬ, ಇನ್ನೊಬ್ಬ ಮಬ್ಬ, ಇವತ್ತು ಒಬ್ಬ ಫೋನ್ ಮಾಡಿ ನನ್ನ ಗಬ್ಬ ಎಂದು ಬಿಟ್ಟ ಎಂದು ಗೊಳೋ ಅಂತ ಅತ್ತು ಬಿಟ್ಟ. ಮತ್ತೆ ತಿಂದು ..ತಿಂದು.. ಗಬ್ಬ ಆದವರೇ ತರಹನೆ ಆನೆ ಮರಿ ಆಗಿ ಅದಕ್ಕೆ ಅಂದಿರಬೇಕು ಎಂದ ಮಂಜ. ಮಂಜ ಸುಮ್ಮನಿರದೆ ಚಂಬು ಅಂತ ಯಾರು ಅನ್ನಲಿಲ್ಲ ವೇನೋ ಎಂದು ಕೇಳಿದ. ಮತ್ತೆ ಶುರು ಆಯಿತು ಇವರಿಬ್ಬರ ಮಹಾಭಾರತ.

ಎಲ್ಲ ತಣ್ಣಗಾದ ಮೇಲೆ ಇದಕ್ಕೆ ಒಂದು ಪರಿಹಾರ ನಾನು ಕೊಡುತ್ತೇನೆ ಎಂದು ಮಂಜ ಹೇಳಿದ. ನೀನು ನಿನ್ನ ಹೆಸರನ್ನ ಶಾರ್ಟ್ ಆಗಿ ಬೇರೆ ಹೆಸರು ಇಟ್ಟುಕೋ ಎಂದು ಹೇಳಿದ. ಅದಕ್ಕೆ ನೀನೆ ಏನಾದರು ಹೇಳೋ ? ಎಂದ. ಮತ್ತೆ ತಮಾಷೆಗೆ ಪಬ್ ಸುಬ್ಬ ಅದನ್ನೇ ....ಮತ್ತೆ ಸುದಾರಿಸಿ ಸಾರೀ... ಸಾರೀ ...ಅಂತ ಹೇಳಿ ಸ್ಯಾಮ ಅಂತ ಇಟ್ಟುಕೋ ಎಂದು ಹೇಳಿದ. ರಾಮಕೃಷ್ಣನಿಗು ನಾನೆ ಹೆಸರು ಇಟ್ಟಿದ್ದು ರಾಕಿ ಅಂತ ನೋಡು ಎಷ್ಟು ಫೇಮಸ್ ಆಗಿದ್ದಾನೆ ಎಂದ. ಕಡೆಗೆ ಹಾಗು ಹೀಗು 5 ವರ್ಷ ಅದೇ ನೌಕರಿಯಲ್ಲಿ ಹೆಣಗಾಡಿ.

ಈಗ ಸಾಫ್ಟವೇರ್ ಫೀಲ್ಡ್ ಗೆ ಬಂದಿದ್ದಾನೆ. ಈಗಲೂ ಮಂಜನ ಪಾಠ ಪ್ರವಚನಗಳು ಮುಗಿದಿಲ್ಲ ......

No comments:

Post a Comment