Thursday, February 10, 2011

ತರಲೆ ಮಂಜನ ತತ್ವಜ್ಞಾನ ....

ಮೊದ ಮೊದಲು ತುಂಬಾ ಓದುತ್ತಿದ್ದೆ. ಆಮೇಲೆ ಏನಾದರೂ ಬರೆಯಬೇಕು ಎಂಬದು ಮನಸ್ಸಿನಲ್ಲಿ ಹೊಯ್ದಾಡಹತ್ತಿತ್ತು. ಆಮೇಲೆ ಏನು? ಬರೆಯಬೇಕು, ಏನು? ಬರೆದರೆ ಎಲ್ಲರೂ ಸ್ವೀಕರಿಸುತ್ತಾರೆ ಎಂದು ಯೋಚಿಸಹತ್ತಿದೆ. ತತ್ವಜ್ಞಾನದ ಬಗ್ಗೆ ಎಂದು ನಿಶ್ಚಯಿಸಿ ಆಗಿತ್ತು. ಮಂಜನಿಗೆ ಒಮ್ಮೆ ಕೇಳಿ ನೋಡಿದರೆ ಹೇಗೆ ಎಂದು ಯೋಚಿಸಿ ಮಂಜನಿಗೆ ಕೇಳಿದೆ. ಮಂಜ ಈ ತತ್ವಜ್ಞಾನ ಎಂಬುದು ಎಲ್ಲರೂ ಕೊಡುವ ಜ್ಞಾನ, ಬೇಕಾದರೆ ಎಲ್ಲರೂ ತಮ್ಮ.. ತಮ್ಮ.. ಶೈಲಿ ಮಾತ್ರ ಬದಲಿಸಿ ಅರುಹುತ್ತಾರೆ ಅಷ್ಟೇ ಎಂದ. ಒಬ್ಬ ಎಳೆನೀರು ಮಾರುವ ಮನುಷ್ಯ ಕೂಡ ಹೇಳುತ್ತಾನೆ ಅದನ್ನ ಎಂದ. ಅದು ಹೇಗೆ? ಎಂದು ಕೇಳಿದೆ. ಬಾ ತೋರಿಸುತ್ತೇನೆ ಎಂದ.

ಒಬ್ಬ ಎಳೆನೀರು ಮಾರುವವನ ಬಳಿ ಹೋದೆವು. ಮಂಜ ಇದನ್ನು ಕೊಡಿ ಎಂದು ಒಂದು ಎಳೆನೀರು ಕಾಯಿ ತೋರಿಸಿದ. ನಿಮಗೆ ನೀರಾ, ಗಂಜಿನಾ ಹೇಳಿ ನಾನು ಕೊಡುತ್ತೇನೆ ಎಂದ. ಗಂಜಿ ಎಂದ ಮಂಜ. ಮತ್ತೆ ಬಿಡಿ ನಾನು ಕೊಡುತ್ತೇನೆ ಎಂದ ನೀರು ಮಾರುವವ. ಬೇಡ ಇದೆ ಕೊಡಿ ಎಂದ ಮಂಜ. ಎಳೆನೀರು ಮಾರುವವ ನೋಡಿ... ಸ್ವಾಮಿ ಮೇಲೆ ಇರುವ ಸೊಬಗು ನೋಡಿ ತೆಗೆದು ಕೊಂಡರೆ ಆಗಲ್ಲ, ಒಳಗೆ ಚೆನ್ನಾಗಿ ಇದ್ದರೆ ಸಾಕು ಎಂದು ತನ್ನ ಎದೆ ಮುಟ್ಟಿಕೊಂಡು ಹೇಳಿದ. ಆಗ ಮಂಜ ಹೇಳಿದ ಮಾತು ನಿಜ ಅನ್ನಿಸಿತು. ಹೀಗೆ ... ಕಣೋ ಎಲ್ಲರೂ ತಮ್ಮ.. ತಮ್ಮ.. ಜ್ಞಾನವನ್ನು ಭೋಧಿಸುತ್ತಾರೆ ಅಷ್ಟೇ... ಪಂಚರ್ ತಿದ್ದುವ ಮನುಷ್ಯನಿಂದ ಹಿಡಿದು ಕಾರ್ ಮಾರುವ ಮನುಷ್ಯನವರೆಗೆ ಎಂದ. ನೀನು ಬರೆಯಬೇಕು ಎಂದರೆ ಹಾಸ್ಯ ಆರಿಸಿಕೋ, ಇದರಿಂದ ಕೆಲ ಜನರಲ್ಲಿ ಮಂದಹಾಸ ಮೂಡಿದರೆ ಸಾಕು. ನಿನ್ನ ಬರಹ ಸಾರ್ಥಕವಾಗುತ್ತೆ. ತತ್ವಜ್ಞಾನ ಕೊಡೋಕೆ ತುಂಬಾ ಜನ ಇದ್ದಾರೆ. ಸ್ವಾರ್ಥವಿಲ್ಲದೇ ಯಾವುದೇ ತತ್ವಜ್ಞಾನ ಕೂಡ ಇರುವುದಕ್ಕೆ ಸಾಧ್ಯವೇ ಇಲ್ಲ. ಮತ್ತೆ ಕೆಲವರು ತಾವು ಒಳ್ಳೆಯವರು ಎಂದು ತೋರಿಸುವುದಕ್ಕೆ ಇಂತಹ ತತ್ವಜ್ಞಾನ ಪ್ರದರ್ಶಿಸುತ್ತಾರೆ. ಈ ಫಿಲಾಸಫೀ ಯಾವತ್ತೂ ಫಿಲ್ ಆಗದ ವಸ್ತು.

ಮತ್ತೆ ನನ್ನ ಪಕ್ಕದ ಮನೆಯಲ್ಲಿ ಇರುವ ಒಬ್ಬ ಹಿರಿಯರು ತತ್ವ ಜ್ಞಾನ ಹೇಳುತ್ತಿದ್ದರು. ಮತ್ತು ಪ್ರತಿ ಬಾರಿ ತಮ್ಮ ಅಕ್ಷರಗಳ ಬಗ್ಗೆ ವರ್ಣನೆ ಕೂಡ ಮಾಡುತ್ತಿದ್ದರು. ನಮಗೂ ಅಕ್ಷರ ಗುಂಡಾಗಿ ಬರೆಯಿರಿ ಎಂದು ಹೇಳಿ ರಾತ್ರಿ ಗುಂಡು ಹಾಕಿ ಕುಳಿತಿರುತ್ತಿದ್ದರು. ಉಪದೇಶ,ವೇದಾಂತ, ತತ್ವಜ್ಞಾನ ಎಲ್ಲರೂ ಪರಿಪಾಲಿಸಿದರೆ ಎಲ್ಲರೂ ದೊಡ್ಡವರಾಗಿಯೇ ಇರುತ್ತಾರೆ ಅಲ್ಲವೇ, ಚಿಕ್ಕ ಮನುಜರು ಕಡಿಮೆ ಆಗಿಬಿಡುತ್ತಾರೆ. ಆಮೇಲೆ ಎಲ್ಲರಿಗೂ ಮ್ಯಾನೇಜರ್ ಲೆವೆಲ್ ನಲ್ಲೇ ಇರುತ್ತಾರೆ. ಆದರೆ ಕೆಳಗೆ ಕೆಲಸ ಮಾಡುವವರು ಯಾರು? ಎಂದು ಪ್ರಶ್ನೆ ಹಾಕಿದ.

ಒಂದು ಕತೆ ಹೇಳುತ್ತೇನೆ ಕೇಳು. ಆಚಾರ್ಯ ಹೇಳುವುದಕ್ಕೆ ಮತ್ತು ಬದ್ನೆಕಾಯಿ ತಿನ್ನುವುದಕ್ಕೆ ಇದು ಸರಿಯಾಗಿ ಹೊಂದುತ್ತದೆ ಎಂದ. ಒಮ್ಮೆ ಒಬ್ಬ ಸಂಪ್ರದಾಯಸ್ತರ ಮನೆಯಲ್ಲಿ ಹಿರಿಯರು ತೀರಿಕೊಂಡಿದ್ದರು. ಅವರ ಪಿಂಡ ಇಟ್ಟು ಕಾಯುತ್ತಾ ನಿಂತಿದ್ದರು. ಯಾವುದೇ ಕಾಗೆ ಬಂದು ಮುಟ್ಟಲಿಲ್ಲ. ತುಂಬಾ ಹೊತ್ತು ಕಾದರೂ ಆಗಲೂ ಯಾವುದೇ ಕಾಗೆ ಮೂಸಲ್ಲಿಲ್ಲ. ಇನ್ನೂ ಕಾದರೆ ಆಗುವುದಿಲ್ಲ, ನನಗೆ ಶುಗರ್ ಬೇರೆ ಇದೆ ಎಂದು, ಅವರ ಮನೆಯಲ್ಲಿ ಇರುವ ಒಬ್ಬ ಹೊಟೇಲಿನಿಂದ ಚಿಕನ್ ತಂದು ಪಿಂಡದ ಪಕ್ಕ ಎಸೆದ. ಅಷ್ಟೇ... ಕಾಗೆಗಳ ದಂಡೆ ಬಂದು, ಎಲ್ಲವನ್ನು ತಿಂದು ಹೋಗಿತ್ತು. ಪಾಪ ತಮ್ಮ ಹೊಟ್ಟೆ ಸಲುವಾಗಿ ಸತ್ತವರ ಆಸೆ ಅವರಿಗೆ ಅಷ್ಟಕ್ಕೇ ಅಷ್ಟೇ ಎಂದ.

ನೋಡು ನಾವೆಲ್ಲರೂ ತೂತು ಮಡಿಕೆ ಇದ್ದ ಹಾಗೆ ಎಂದ. ನನಗೆ ಅರ್ಥವಾಗಲಿಲ್ಲ. ಹಾಗೆ ಅಂದರೆ ಎಂದೆ. ಮತ್ತೆ ಅದರ ಕತೆ ಶುರು ಮಾಡಿದ. ನೋಡು ಒಬ್ಬ ಮನುಷ್ಯನ ಹತ್ತಿರ ಎರಡು ಮಡಿಕೆಗಳು ಇದ್ದವು. ಒಂದು ಮಡಿಕೆ ಚೆನ್ನಾಗಿ ಇತ್ತು. ಇನ್ನೊಂದು ಸ್ವಲ್ಪ ತೂತು ಇತ್ತು. ದಿನಾಲೂ ಎರಡನ್ನೂ ತೆಗೆದುಕೊಂಡು ಹೋಗಿ ನೀರು ತುಂಬುತ್ತಿದ್ದ. ಅದನ್ನು ನೀರು ತುಂಬುವ ಸಮಯದಲ್ಲಿ ತೂತು ಇರುವ ಮಡಿಕೆ ಅರ್ಧ ಅಗಿರುತಿತ್ತು. ಅದನ್ನು ನೋಡಿದ ಅದನ್ನು ನೋಡಿದ ಅವನ ಮಡದಿ ಇದನ್ನು ಒಗೆದು ಬಿಡಬಾರದೇ ಎಂಬ ಸಲಹೆ ಇಟ್ಟಳು. ಅದಕ್ಕೆ ಅವನು ಅವನ ಹೆಂಡತಿಯನ್ನು ಕರೆದುಕೊಂಡು ಹೋಗಿ, ತನ್ನ ಬಾವಿಯಿಂದ ಮನೆಯವರೆಗೂ ಇರುವ ಹೂವಿನ ಕುಂಡಗಳನ್ನು ತೋರಿಸಿ, ಇವೆಲ್ಲವೂ ಈ ತೂತುಮಡಿಕೆಯ ಉಪಕಾರದಿಂದ ಬೆಳೆದ ಹೂವಿನ ಗಿಡಗಳು ಮತ್ತು ದಿನಾಲೂ ಇವುಗಳನ್ನು ಕಿತ್ತು ದೇವರಿಗೆ ಮತ್ತು ನಿನಗೆ ಕೊಡುತ್ತೇನೆ. ಅದರ ಸೋರುವಿಕೆಯ ನೀರು ಈ ಗಿಡಗಳಿಗೆ ಆಹಾರವಾಗುತ್ತೆ. ಮತ್ತು ನನ್ನ ಕೆಲಸ ಕೂಡ ತಪ್ಪುತ್ತೆ. ಈಗ ಹೇಳು ಇದನ್ನು ನಾನು ಬಿಸಾಡಲೆ ಎಂದು ಕೇಳಿದ. ಆಗ ಹೆಂಡತಿ ತನ್ನ ತಪ್ಪು ಅರಿವಾಗಿ ಬೇಡ.. ಬೇಡ... ಎಂದಳು. ಹೀಗೆ, ಎಲ್ಲರಲ್ಲಿಯೂ ಕೆಲ ದೋಷಗಳು ಸಹಜವಾಗಿಯೇ ಇರುತ್ತವೆ. ಅವುಗಳನ್ನು ತಿದ್ದುವುದು ಅಥವಾ ಕಡೆಗಣಿಸುವುದು ಬಿಟ್ಟು, ಅವುಗಳನ್ನು ಹಾಗೆಯೇ ಸ್ವೀಕರಿಸಿ, ಅವುಗಳ ಉಪಯೋಗ ಪಡೆದುಕೊಳ್ಳಬೇಕು....ಇಷ್ಟೆಲ್ಲಾ ಹೇಳಿದ್ದೇನೆ, ನೀನು ಬೇಕಾದರೆ ತತ್ವಜ್ಞಾನಿ ಆಗು ಎಂದು ಹೀಯಾಳಿಸಿದ.

ಮತ್ತೆ ನೀನು ಈಗ ಏನು? ಮಾಡಿದೆ ಎಂದು ಕೇಳಿದೆ. ಲೇ ಗುರುವಿಗೆ ತಿರುಮಂತ್ರನಾ ಎಂದು ದಬಾಯಿಸಿದ. ನಾನು ನೀಡಿದ್ದು ಬರೀ ಸಲಹೆ ಮಾತ್ರ. ಉಪದೇಶ ಅಥವಾ ತತ್ವಜ್ಞಾನ ಅಲ್ಲ ಎಂದ. ನಾನು ಏನು? ಬರೆಯಬೇಕು ಎಂದು ತಲೆಯಲ್ಲಿ ಬರೆ ಎಳೆದ ಹಾಗೆ ಹೇಳಿದ್ದ. ಅದರ ಕಲೆ(ಎರಡು ಅರ್ಥದಲ್ಲಿ ಸ್ವೀಕರಿಸಿ) ಈಗಲೂ ಇದೆ ಎಂದರೆ ಅತಿಶಯೋಕ್ತಿ ಆಗಲಾರದು.

ಅವನು ಹೇಳಿದ ಹಾಗೇನೆ ಮಾಡಿದೆ. ಮೊದಮೊದಲು ಲೇಖನ ಬರೆದ ಮೇಲೆ, ಅವನಿಗೆ ಫೋನ್ ಮಾಡಿ ಹೇಳುತ್ತಿದ್ದೆ. ಈ ಪ್ಯಾರಾದಲ್ಲಿ ಇರುವ ಪಂಚ್ ನೋಡು ಎಂದು ಹೇಳಿ ತಲೆ ತಿನ್ನುತ್ತಿದ್ದೆ. ಈಗ ನನ್ನ ಫೋನ್ ಬಂದರೆ ಎತ್ತುವುದೇ ಇಲ್ಲ ಆಸಾಮಿ. ಕೆಲವೊಮ್ಮೆ ಬ್ಯೂಸಿಯಾಗಿ ಇದ್ದೇನೆ, ಆಮೇಲೆ ಕಾಲ್ ಮಾಡುತ್ತೇನೆ ಎಂದು ಹೇಳಿ ಕಾಲಿಗೆ ಬುದ್ದಿ ಹೇಳುತ್ತಾನೆ.

-----------------
ಮಂಜನ ಹನಿ

ಮಂಜ ಬಾಡಿಗೆಗೆಎಂದು ವಿಜಯನಗರದಲ್ಲಿ ಇದ್ದ. ಒಮ್ಮೆ ಅವರ ಮನೆ ಮಾಲೀಕರು ಬಂದರು.
ಮಾಲೀಕರು - ರೀ ಮಂಜುನಾಥ, ನೀವು ಬಂದು ಒಂದು ವರ್ಷ ಆಯಿತು ಅಲ್ಲವಾ?
ಮಂಜ - ಹೌದು ಸರ್...
ಮಾಲೀಕರು - ನೋಡಿ ಈ ತಿಂಗಳಿಂದ ಎರಡು ನೂರು ಬಾಡಿಗೆ ಎಕ್ಸ್‌ಟ್ರಾ ಕೊಡಿ.
ಮಂಜ - ಸರ್, ನೋಡಿ ನಾನು ಒಬ್ಬನೇ ಇರೋದು ದಯ ತೋರಿ ಎಂದು ಗೋಳಾಡಿದ.
ಮಾಲೀಕರು - ಪಾಪ ಹೌದಲ್ಲವಾ, ನೀನು ಒಬ್ಬನೇ ಇದ್ದೀಯ ಅಂತ ನನಗೆ ಗೊತ್ತು. ಆಯಿತು, ನನ್ನ ಹೆಂಡ್ತೀನ ಕೇಳಿ ನೋಡ್ತೀನಿ, ಅವಳು ಒಪ್ಪಿದರೆ, ವಿಚಾರ ಮಾಡೋಣ.
ಮಂಜ ಸುಸ್ತೋ ಸುಸ್ತು ....

4 comments:

  1. chennagide nimma tatavajyananada baraha :)

    ReplyDelete
  2. ತುಂಬಾ ಧನ್ಯವಾದಗಳು ಮತ್ತು ವಂದನೆಗಳು.
    ----
    ಪ್ರೀತಿಯಿಂದ ಗೋಪಾಲ್ ಮಾ ಕುಲಕರ್ಣಿ

    ReplyDelete
  3. ಸೀತಾರಾಮ. ಕೆ. sir ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಧನ್ಯವಾದಗಳು ಮತ್ತು ವಂದನೆಗಳು...
    ಪ್ರೀತಿಯಿಂದ ಗೋಪಾಲ್

    ReplyDelete