Monday, March 22, 2010

ಕುಂಟ ಕಾಲಿನ ಕಾಮಣ್ಣ

ಹೋಳಿ ಹುಣ್ಣಿಮೆ ಬಂತು ಎಂದರೆ ನಮ್ಮೆಲ್ಲರಿಗೂ ಖುಷಿಯೋ ಖುಷಿ. ಹಲಿಗೆ ಬಾರಿಸುವದು, ರಂಗು ರಂಗಿನ ಬಣ್ಣಗಳನ್ನೂ ಒಂದು ತಿಂಗಳ ಮುಂಚೆಯಿಂದಲೇ ಕೂಡಿ ಹಾಕುವದು. ಮತ್ತೆ ಕಾಮಣ್ಣನ ಸುಡಲು ಬೇಕಾಗುವ ಕಟ್ಟಿಗೆಗಳನ್ನೂ ಕೂಡಿ ಹಾಕುವದು ಇಲ್ಲವೇ ಕದಿಯುವದು. ಹೀಗೆ "ಕಾಮಣ್ಣನ ಮಕ್ಕಳು ಕಳ್ಳ ..... ಮಕ್ಕಳು" ಎಂದು ಒದರುತ್ತ ಬೀದಿ ಬೀದಿ ಬಾಯಿ ಬಡೆದು ಕೊಳ್ಳುತ್ತಾ ತಿರುಗುವದು. ಒಂದೊಂದು ಸಲ ನಮ್ಮ ಗೆಳೆಯರ ಮನೆಯಲ್ಲಿನ ಕಟ್ಟಿಗೆಗಳನ್ನು ಕದ್ದು ತರುತ್ತಿದ್ದೆವು.

ಹೋಳಿ ದಿವಸ ಕುಡಿದು ಜನಪದ ಹಾಡು ಹಾಡುತ್ತ ತಿರುಗವ ಜನರನ್ನು ನೋಡುವದೆ ನಮಗೆ ತುಂಬಾ ತಮಾಷೆ. ಅವರು ನೇತಾಡುತ್ತಾ ಬಂದು ಗಟಾರಿನಲ್ಲಿ ಬಂದು ಹೋಳಿ ಆಡುತ್ತಿದ್ದರು. ಕೆಲ ಹಾಡುಗಳು ತುಂಬಾ ಅರ್ಥಪೂರ್ಣ ಆಗಿರುತ್ತಿದ್ದವು. ಕೆಲವು ತುಂಬಾ ಕೆಟ್ಟ ಭಾಷೆಯಿಂದ ಕೂಡಿರುತ್ತಿದ್ದವು.

ಹೋಳಿ ಹುಣ್ಣಿಮೆ ಸಮಯದಲ್ಲಿ ಗೆಳೆಯರು ಏನಾದರು ಜಗಳ ಮಾಡಿಕೊಂಡಿದ್ದರೆ ಮತ್ತೆ ಗೆಳೆತನ ಬೆಳೆಸಲು ಒಳ್ಳೆಯ ಸದಾವಕಾಶ. ಸುಬ್ಬ ಮಂಜನೊಡನೆ ಜಗಳ ಮಾಡಿಕೊಂಡಿದ್ದ. ಹೀಗಾಗಿ ಅವನು ಮಂಜನ ಗೆಳೆತನಕ್ಕೆ ಹಾತೊರೆಯುತ್ತಿದ್ದ, ಏಕೆಂದರೆ ಮಂಜ ಯಾವತ್ತು ತಮಾಷೆಯಾಗಿ ನಮ್ಮನ್ನು ನಗಿಸುತ್ತಾ, ಮಾತು ಮಾತಿಗೆ ಜೋಕ ಹೇಳುತ್ತಾ ಇರುತ್ತಿದ್ದ. ಪ್ರತಿ ಸಲದಂತೆ ಈ ಬಾರಿ ಕೂಡ ಕಟ್ಟಿಗೆಗಳನ್ನೂ ಕದ್ದು ತರುವ ಯೋಜನೆ ಹಮ್ಮಿಕೊಂಡಿದ್ದೆವು. ಇದಕ್ಕೆ ಸುತ್ರಧಾರನೆ ನಮ್ಮ ಮಂಜ. ಮಂಜ ಸುಬ್ಬನ ಮನೆ ಕದಿಯುವ ಪ್ಲಾನ್ ಮಾಡಿದ. ಮತ್ತೆ ನಾವೆಲ್ಲರೂ ಅವರ ಮನೆ ಹಿಂದೆ ನೀರು ಕಾಯಿಸಲು ಇಟ್ಟಿರುವ ಕಟ್ಟಿಗೆಗಳನ್ನು ಕದಿಯಲು ಹೋದೆವು. ಆದರೆ ಮಂಜ ಕಟ್ಟಿಗೆ ಅಲ್ಲದೆ, ಅವರ ಮನೆ ಹಿತ್ತಲಲ್ಲಿ ಇರುವ ಪೇರಳ ಗಿಡದ ಹಣ್ಣುಗಳನ್ನು ಮತ್ತು ಅಷ್ಟು ಹೂವುಗಳನ್ನು ಖಾಲಿ ಮಾಡಿ ಬಿಟ್ಟಿದ್ದ.

ಮರುದಿನ ಬೆಳಿಗ್ಗೆ ಎದ್ದೊಡನೆ ಹಿತ್ತಲಲ್ಲಿ ಆದ ಅವಾಂತರ ನೋಡಿ ಸುಬ್ಬ ತುಂಬಾ ಕೋಪಗೊಂಡಿದ್ದ. ತಾನು ಒಂದಿಷ್ಟು ಹುಡುಗರನ್ನು ಕೂಡಿಸಿ ಮಂಜನ ಮನೆಗೆ ಕದಿಯಲು ಯೋಜನೆ ಹಾಕಿಕೊಂಡ. ಅವರ ಮನೆ ಹಿತ್ತಲಲ್ಲಿ ಇದ್ದ ಕಟ್ಟಿಗೆಗಳನ್ನೂ ಕದ್ದು ಸುಮ್ಮನೆ ಹೋಗುವದು ಬಿಟ್ಟು, ತೆಂಗಿನ ಮರ ಏರಿ ತೆಂಗಿನ ಕಾಯಿ ಕೀಳಹತ್ತಿದ. ಅಷ್ಟರಲ್ಲೇ ಒಂದು ತೆಂಗಿನ ಕಾಯಿ ಕೆಳಗೆ ಬಿದ್ದು ಬಿಟ್ಟಿತು. ಆಗ ಮಂಜನಿಗೆ ಎಚ್ಚರ ಆಗಿದೆ ಮಂಜ ಎದ್ದವನೇ, ಸೀದ ಅವರ ನಾಯಿಯನ್ನು ಬಿಟ್ಟ. ಮತ್ತೆ "ಕೋಲು ತೊಗೋರಿ ಕಳ್ಳ ಬಂದಿದ್ದಾನೆ" ಎಂದು ಕೂಗಲಾರಮ್ಬಿಸಿದ. ನಾಯಿ ಹೋಗಿ ತೆಂಗಿನ ಮರದ ಕೆಳಗೆ ನಿಂತು ಕೂಗಲಾರಮ್ಬಿಸಿತು. ಮತ್ತೆ ಉಳಿದ ಹುಡುಗರೆಲ್ಲರೂ ಓಡಿ ಹೋದರು.

ಸುಬ್ಬ ಒಬ್ಬನೇ ಮರದ ಮೇಲೆ ನೇತಾಡುತ್ತಾ ಇದ್ದ. ಅವನಿಗೆ ನಾಯಿ ಕಂಡರೆ ತುಂಬಾ ಭಯ. ಕಡೆಗೆ ಮಂಜನಿಗೆ ನಾನು ಕಣೋ ಸುಬ್ಬ ಎಂದು ಹೇಳಿದ. ನಾಯಿ ತುಂಬಾ ಜೋರಾಗಿ ಓದುರುತ್ತ ಇದ್ದಿದ್ದರಿಂದ ಮಂಜನಿಗೆ ಸರಿಯಾಗಿ ಕೇಳಲಿಲ್ಲ. ಪ್ಲೀಸ್ ಆ ನಾಯಿ ಸ್ವಲ್ಪ ಕಟ್ಟು ನನ್ನನ್ನು ಕ್ಷಮಿಸು ಎಂದು ಜೋರಾಗಿ ಹೇಳಿದ. ಕಡೆಗೆ ಮಂಜ ಒಪ್ಪಿ ನಾಯಿಯನ್ನು ಕಟ್ಟಿ ಹಾಕಿದ. ಆದರೆ ನಾಯಿ ಮಾತ್ರ ಸುಬ್ಬನನ್ನು ನೋಡಿ ಒದರುತ್ತಾನೆ ಇತ್ತು.

ಅಷ್ಟರಲ್ಲೇ ಸುಬ್ಬ ನೇತಾಡುತ್ತಾ ಇದ್ದ ರೆಂಬೆ ಮುರಿದು ಸುಬ್ಬ ಕೆಳಗಡೆ ಬಿದ್ದು ಬಿಟ್ಟ. ಮಂಜನ ನಾಯಿ ಹೆದರಿ ಕೊಯ್ಗುಡುತ್ತ ಇತ್ತು. ಸುಬ್ಬ ಕಾಲಿಗೆ ಪೆಟ್ಟು ಆಗಿತ್ತು. ಮರುದಿನ ಸುಬ್ಬ ಕುಂಟುತ್ತ ಇದ್ದ. ಅದನ್ನು ನೋಡಿದ ಅವರಪ್ಪ ಅವನನ್ನು ಆಸ್ಪತ್ರೆಗೆ ಕರೆದು ಕೊಂಡು ಹೋದರು. ಅವನ ಕಾಲಿಗೆ fracture ಆಗಿತ್ತು. ಅವರಪ್ಪ ಅವನಿಗೆ ತುಂಬಾ ಬೈದಿದ್ದರು. ಮರುದಿನ ಸುಬ್ಬ ನಮ್ಮ ಮುಂದೆ ಬಂದು ಈ ದೊಡ್ಡವರೆಲ್ಲ ಹೀಗೆನಾ? ... ದೊಡ್ಡವರೆಲ್ಲ ಜಾಣರಲ್ಲ ಎಂಬ ಹಾಡು ಇವರಿಗೆ ತುಂಬಾ ಹೋಲಿಕೆ ಆಗುತ್ತೆ ಅನ್ನಿಸಿತು ಎಂದ. ನನಗೆ ಸಿಗುವ ಎಲ್ಲ ದೊಡ್ಡ ಮನುಷ್ಯರು ನಮಗೆ ಉಪದೇಶ ಮಾಡಲು ಬರುವರು. ಅದೇ ಹಳೆ ರಾಗ ಹಳೆ ತಾಳ ಎಂಬಂತೆ. ನಾನು ಚಿಕ್ಕ ಹುಡುಗ ಇದ್ದ ಸಮಯದಲ್ಲಿ 1 ರುಪಾಯಿಗೆ KG ಅಕ್ಕಿ ಸಿಗುತಿತ್ತು. ನಾನು ತುಂಬಾ ಕಷ್ಟ ಪಟ್ಟು ಓದಿದೆ ಎಂದೆಲ್ಲ. ಎಂದು ಕೋಪದಿಂದ ಓಟಗುಡುತ್ತಲೇ ಇದ್ದ. ನಾವೆಲ್ಲರೂ ಸುಮ್ಮನೆ ನಿಂತಿದ್ದೆವು. ಹಿಂದೆ ಸುಬ್ಬನನ್ನು ಹುಡುಕಿಕೊಂಡು ಬಂದಿದ್ದ ಅವರಪ್ಪ ಇದೆನ್ನಲ್ಲಾ ಕೇಳಿ ಕೋಪಗೊಂಡು ಮತ್ತೆ ನಾಲ್ಕು ಒದೆಗಳನ್ನು ಕೊಟ್ಟು ಸುಬ್ಬನನ್ನು ಲೇ ಕಾಮಣ್ಣ ಮನೆಗೆ ಬಾರೋ ಎಂದು ಕರೆದುಕೊಂಡು ಹೋಗಿ ಬಿಟ್ಟರು.

ಸುಬ್ಬ ಪ್ರತಿ ಬಾರಿ ದುಂಡಿ ಓಣಿ ಒಳಗೆ ಹೋಗಿ ಹೋಳಿ ಆಡುತ್ತಿದ್ದ. ಏಕೆಂದರೆ ಅಲ್ಲಿ ಇದ್ದದ್ದು ಶೋಭಾ ಮನೆ. ಬಣ್ಣ ಹಚ್ಚಿಕೊಂಡಾಗ ಯಾರೆಂದು ತಿಳಿಯುವದಿಲ್ಲ ಎಂಬ ಕಾರಣಕ್ಕಾಗಿ. ಆದರೆ ಈ ಬಾರಿ ಅದು ಸಹ ಕೈ ಕೊಟ್ಟಿತ್ತು ಏಕೆಂದರೆ, ಶೋಭಾ ಇವನ ಕಾಲಿನ ಬ್ಯಾನ್ದೆಜ ನೋಡಿದ್ದಳು. ನಾವೆಲ್ಲರೂ ಬಣ್ಣ ಆಡುತ್ತಿದ್ದರು ಸುಬ್ಬ ಮಾತ್ರ ಮನೆ ಮಳಿಗೆ ಮೇಲೆ ನಿಂತು ಸಪ್ಪೆ ಮುಖದಿಂದ ನೋಡುತ್ತಿದ್ದ.

ತುಂಬಾ ದಿನಗಳ ವರೆಗೆ ನಾವು ಸುಬ್ಬನನ್ನು ಕುಂಟ ಕಾಲಿನ ಕಾಮಣ್ಣ ಎಂದು ಸಂಭೋದಿಸುತ್ತಿದ್ದೆವು.

2 comments:

  1. ಸುಬ್ಬ , ಮಂಜ ಎಲ್ಲಾ ನಿಮ್ಮ ಕಾಲ್ಪನಿಕ ಪಾತ್ರಗಳಾ?
    ತುಂಬಾ ರೋಚಕವಾಗಿ ಹೆಣೆದು ಹೇಳುತ್ತಿರಾ...
    ತಮ್ಮ ಹಾಸ್ಯ ಅಭಿರುಚಿಗೆ ವಂದನೆಗಳು.

    ReplyDelete
  2. ಎಲ್ಲವೂ ಕಾಲ್ಪನಿಕ ಪಾತ್ರಗಳು.
    ನಿಮ್ಮ ಅಭಿಮಾನದ ಮಾತುಗಳಿಗೆ ನಾನು ಚಿರ ಋಣಿ :)
    ಧನ್ಯವಾದಗಳು ಮತ್ತು ವಂದನೆಗಳು.

    ReplyDelete