Tuesday, January 11, 2011

ಬುರುಡೆ ಪುರಾಣ ....


ಮೊನ್ನೆ ತುಂಬಾ ಕೆಲಸವಿದ್ದ ಕಾರಣ, ಆಫೀಸ್ ನಿಂದ ಸ್ವಲ್ಪ ತಡವಾಗಿ ಹೋದೆ. ಮಡದಿ, ಮಗ ಇಬ್ಬರು ನಿದ್ದೆಯಲ್ಲಿ ಇದ್ದರು. ತೊಂದರೆ ಏಕೆ? ಮಾಡಬೇಕು ಎಂದು ಅವರನ್ನು ಎಬ್ಬಿಸದೇ, ನಾನೇ ಊಟ ಮಾಡಿ, ಬೆಡ್‌ರೂಮ್ ಗೆ ಹೋಗದೇ, ಹಾಲ್ ನಲ್ಲಿ ನಿದ್ದೆಗೆ ಜಾರಿದೆ. ಹಾಸಿಗೆ ಮೇಲೆ ಒರಗಿದ ಕೂಡಲೇ, ನಿದ್ರಾ ದೇವಿಗೆ ಶರಣಾಗಿ ಬಿಟ್ಟೆ. ಮಧ್ಯ ರಾತ್ರಿ ಯಾರೋ... ನನ್ನನ್ನು ಎಬ್ಬಿಸಿದ ಹಾಗೆ ಆಯಿತು. ಆ ಕಡೆ ಒರಗಿ ಮಲಗಿಕೊಂಡೆ. ಮತ್ತೆ ಬಡಿದು ಎಬ್ಬಿಸಿದ ಹಾಗೆ ಆಯಿತು. ಕಣ್ಣು ಬಿಟ್ಟೆ, ಚಾಕು ಹಿಡಿದು ಯಾರೋ.. ನಿಂತ ಹಾಗೆ ಅನ್ನಿಸಿತು. ನನ್ನ ಉಸಿರೇ ನಿಂತ ಹಾಗೆ ಆಗಿತ್ತು. ಪಕ್ಕದಲ್ಲಿ ಬೇರೆ ಮಡದಿ ಇಲ್ಲಾ, ಇದ್ದಿದ್ದರೆ ಸ್ವಲ್ಪ ಧೈರ್ಯ ಬರಬಹುದಿತ್ತು. ಜೋರಾಗಿ ಕಿರುಚೋಣ ಎಂದುಕೊಂಡರೂ, ಭಯದಿಂದ ಮತ್ತೆಲ್ಲಿ ಚಾಕುವಿನಿಂದ ಚುಚ್ಚಿ ಬಿಟ್ಟರೆ ಕಷ್ಟ ಎಂದು, ತೆರೆದ ಬಾಯಿಯನ್ನು ಹಾಗೆ ಬಿಟ್ಟು ಹೌಹಾರಿ ಸುಮ್ಮನಾದೆ. ಮತ್ತೆ ಅವರಿಗೆ ಏನು ಬೇಕು? ಎಂದು ಕೇಳಬೇಕು ಅನ್ನುವಷ್ಟರಲ್ಲಿ ಲೈಟ್ ಹತ್ತಿತ್ತು. ನೋಡುತ್ತೇನೆ.. ನನ್ನ ಮಡದಿ ಚಾಕುವಿನೊಂದಿಗೆ. ಹೆದರಿ, ಲೇ.. ಏನೋ ಸ್ವಲ್ಪ ಕೆಲಸ ಇತ್ತು ಎಂದು ತಡವಾಗಿ ಬಂದೆ ಅಷ್ಟೇ ಎಂದೆ. ರೀ... ಅದು ಅಲ್ಲ ಎಂದಳು. ಮತ್ತಿನ್ನೇನು?. ತರಕಾರಿ ಹೆಚ್ಚಬೇಕು ತಾನೇ ನಾಳೆ ಬೆಳಿಗ್ಗೆ ಹೆಚ್ಚುತ್ತೇನೆ, ಈಗ ಮಲಗಿಕೊಳ್ಳಲು ಬಿಡು ಎಂದೆ. ರೀ ಸುಮ್ಮನೇ ಈ ಚಾಕು ತೆಗೆದು ಕೊಳ್ಳಿ ಎಂದು ಚಾಕು ಕೈಯಲ್ಲಿ ಇಟ್ಟಳು.



ಆಗ ಹಳೆಯ ಕಾಲದ ವಸ್ತುಗಳೆ ಚೆನ್ನ ಎಂದನಿಸಿತು. ಮೊದಲು ತರಕಾರಿ ಹೆಚ್ಚಲು ಇಳಿಗೆ ಉಪಯೋಗಿಸುತ್ತಿದ್ದರು. ಏನೋ? ಹೆಚ್ಚಲು ಕಷ್ಟ ಆಗಬಹುದು ಎಂದು ಹೆಣ್ಣು ಮಕ್ಕಳು ತಾವೇ ಹೆಚ್ಚಿಕೊಳ್ಳುತ್ತಿದ್ದರು. ಆದರೆ ಈಗ ಚಾಕು, ಹೆಚ್ಚಲು ನಾವೇ ಬೇಕು. ಮತ್ತೆ ಮೊದಲು ರುಬ್ಬು ಗುಂಡಿನಿಂದ ಹಿಟ್ಟು ರುಬ್ಬ ಬೇಕಿತ್ತು. ಆದರೆ ಈಗ ಗಂಡನಿಂದ ಹಿಟ್ಟು ಗ್ರೈಂಡರ್ ನಲ್ಲಿ ಹಾಕಿಸಿ ರುಬ್ಬಿಸುತ್ತಾರೆ. ರುಬ್ಬದಿದ್ದರೆ ಅವರೇ ರುಬ್ಬುತ್ತಾರೆ ನಮ್ಮನ್ನು. ಬರಿ ಸ್ವಲ್ಪ ಮಾತ್ರ ವ್ಯತ್ಯಾಸ ರುಬ್ಬು ಗುಂಡು, ರುಬ್ಬು ಗಂಡ ಅರ್ಥವಾಯಿತು ತಾನೇ?....:-))).



ಚಾಕು ಹಿಡಿದು ಅಡುಗೆ ಮನೆಗೆ ಹೊರಟೆ. ರೀ... ಅಲ್ಲಿ ಅಲ್ಲ ಬನ್ನಿ ಇಲ್ಲಿ ಎಂದು ಬೆಡ್ ರೂಮಿಗೆ ಕರೆದುಕೊಂಡು ಹೋದಳು. ನೋಡುತ್ತೇನೆ ಬೆಡ್ ರೂಮಿನಲ್ಲಿ ತುಂಬಾ ಅಲಂಕರಿಸಿದ್ದಳು. ಮತ್ತೆ "ಹ್ಯಾಪೀ ಬರ್ತ್ ಡೇ ಟು ಯೂ" ಎಂದು ಮಗ, ಮಡದಿ ಇಬ್ಬರು ಚಪ್ಪಾಳೆ ತಟ್ಟಿದರು. ಮತ್ತೆ ಎದುರಿಗೆ ದೊಡ್ಡದಾದ ಕೇಕ್ ಬೇರೆ ಇತ್ತು. ಕ್ಯಾಂಡಲ್ ಆರಿಸಿ, ಕೇಕ್ ಕಟ್ ಮಾಡಿ ಆಯಿತು. ತುಂಬಾ ಖುಷಿ ಆಯಿತು.



ತುಂಬಾ ಖುಶಿಯಿಂದ, ಮರುದಿನ ಮಂಜನಿಗೆ ನಿನ್ನೆ ರಾತ್ರಿ ನಡೆದ ನನ್ನ ಬರ್ತ್‌ಡೇ ಪುರಾಣನ್ನೇಲ್ಲಾ ಕಕ್ಕಿಬಿಟ್ಟೆ. ನೀನು ಎಷ್ಟು ಘಂಟೆಗೆ ಹುಟ್ಟಿದ್ದು ಎಂದು ಕೇಳಿದ. ನಾನು ಆರು ಎಂದೆ. ಮಂಜ ಅದಕ್ಕೆ ಇದೇನು ಸಂಸ್ಕೃತಿನೋ ರಾತ್ರಿ ದೆವ್ವ ಏಳುವ ಸಮಯದಲ್ಲಿ ಬರ್ತ್‌ಡೇ ಮಾಡಿಕೊಂಡನಂತೆ ಎಂದು ಕಿಚಾಯಿಸಿದ. ಮತ್ತೆ ನಮ್ಮ ಸಂಸ್ಕೃತಿಯಲ್ಲಿ ದೀಪ ಬೆಳಗಿ ಆಚರಿಸಿದರೆ, ನೀನು ನೋಡಿದರೆ ದೀಪ ಆರಿಸಿ ಆಚರಿಸಿಕೊಂಡೆ ಎಂದ. ಹುಟ್ಟಿದ ದಿವಸ ಚಾಕು ಕೊಡೋ ನಾವು ಎಂತಹ ಭೂಪರು ಇರಬೇಕು ಎಂದ. ನಮ್ಮ ಸಂಸ್ಕೃತಿ ನಾವೇ ಕಾಪಾಡದಿದ್ದರೆ ಇನ್ನೂ ಯಾರು ಕಾಪಡಬೇಕು ಎಂದ. ಕೆಟ್ಟಿದ್ದು ಸುಧಾರಿಸಬಹುದು, ಆದರೆ ಒಳ್ಳೆಯದೇ ಕೆಟ್ಟರೆ ಏನು? ಮಾಡಬೇಕು ಎಂದ. ಅವನು ಹೇಳುತ್ತಿದ್ದರೆ ನಾನು ಏನು? ಹೇಳಬೇಕು ಎಂದು ಯೋಚಿಸದೇ ಅವನನ್ನು ನೋಡುತ್ತಾ ಕುಳಿತಿದ್ದೆ. ಪಶ್ಚ್ಯಾತ್ಯರು ನಮ್ಮ ಯೋಗ, ಆಯುರ್ವೇದ ಎಲ್ಲವನ್ನು ಅನುಸರಿಸುತ್ತಿದ್ದಾರೆ. ಆದರೆ ನಾವು ಅವರ ಸಂಸ್ಕೃತಿ ಅನುಸರಿಸಿ ಕೆಡುತ್ತಿದ್ದೇವೆ ಎಂದ. ಆಧುನಿಕತೆ ಎಂದು ನಮ್ಮ ಹಳೆಯ ಆಚರಣೆಗಳಿಗೆ ಮಣ್ಣೆರಚುತ್ತಿದ್ದೇವೆ ಎಂದ. ಈಗಿನದು ಆಧುನಿಕತೆ, ಆದರೆ ಆಗಿನದು "ಅದು+ನೀತಿ+ಕಥೆ" ಎಂದ.



ಮತ್ತೆ ನಿನಗೆ ಗೊತ್ತಾ, ಕೆಲ ಹಳೆಯ ಕಾಲದ ಜನಗಳಿಗೆ ತಮ್ಮ ಹುಟ್ಟು ಹಬ್ಬ ಎಂದು ಸಹಿತ ಗೊತ್ತಿಲ್ಲ. ಏಕೆ? ನಮ್ಮಷ್ಟಕ್ಕೆ ನಾವೇ ಇಷ್ಟು ಮುದುಕ ಅದೇವು ಎಂದು ಆಚರಣೆ ಮಾಡಿಕೊಳ್ಳಬೇಕು ನನಗೆ ಅರ್ಥ ಆಗುತ್ತಿಲ್ಲ. ಮತ್ತೆ ತಲೆಯಲ್ಲಿ ಇನ್ನಷ್ಟು ವಿಚಾರಗಳು. 34 ಆಯಿತು ಇನ್ನೂ ಮನೆ ತೆಗೆದುಕೊಂಡಿಲ್ಲ, ಕಾರು ಹೀಗೆಲ್ಲ ಎಂದ. ಹಳೆಯ ಕಾಲದ ಜನ ಪ್ರತಿ ವಾರ 'ಗೋ ಮೂತ್ರ' ತೆಗೆದು ಕೊಳ್ಳೂತ್ತಿದ್ದರು, ಆದರೆ ಈಗಿನ ಜನ 'ಗೋ' ಅಂಡ್ ಗೇಟ್ ಸಮ್ 'ಮಾತ್ರೆ' ಎಂದು ಹೇಳುತ್ತಾರೆ ಎಂದ. ಮೊದಲಿನ ಕಾಲದಲ್ಲಿ ಹೆಣ್ಣು ಮಕ್ಕಳು ವಾಂತಿ ಮಾಡಿಕೊಂಡರೆ ಖುಷಿಯಾಗಿ ಊರಿಗೆ ಸಿಹಿ ಹಂಚುತ್ತಿದ್ದರು. ಆದರೆ, ಈಗ ರಾತ್ರಿ ಪಾರ್ಟೀ ಮಾಡಿ ಬಂದಿರಬೇಕು ಎಂದು ಅರ್ಥೈಸಿಕೊಳ್ಳುತ್ತಾರೆ ಎಂದ. ಮನೆಯಲ್ಲಿ ಮಾಡಿದ ಶೆವಿಗೆ ಬಾತ್ ತಿನ್ನುವುದಿಲ್ಲ ಹೊರಗೆ ಹೋಗಿ ಚೈನೀಸ್ ನೂಡಲ್ಸ್ ತಿನ್ನುತ್ತಾರೆ. ಮನೆಯಲ್ಲಿ ಹೊಳಿಗೆಗೆ ಹಾಲು ಹಾಕುವಾಗ ಸ್ವಲ್ಪ ಕೆನೆ ಜ್ಯಾಸ್ತಿ ಬಿದ್ದರೆ, ಆಕಾಶವೇ ಕಳಚಿ ಬಿದ್ದ ಹಾಗೆ ಆಡುವ ಜನ, ಪೀಜಾ, ಬರ್ಗರ್ ನಲ್ಲಿ ಇರುವ ಕ್ರೀಮ್ ತಿಂದು ತುಂಬಾ ಚೆನ್ನಾಗಿದೆ ಎಂದು ಹೋಗಳುತ್ತಾರೆ. ಮೊದಲಿನ ಜನ ಒಳ್ಳೆಯದಾಗಲಿ ಎಂದು ಹಾರೈಸುತ್ತಾರೆ. ಆದರೆ ಈಗಿನ ಜನ ಹೌ ಓಲ್ಡ್ ಆರ್ ಯು ಎಂದು ಕೇಳುತ್ತಾರೆ. ಮತ್ತೆ ಇನ್ನೂ ಸ್ವಲ್ಪ ಅಲ್ಲೇ ಇದ್ದರೆ, ಇನ್ನೂ ತಲೆ ತಿನ್ನುತ್ತಾನೆ ಎಂದು ಬೇಗನೆ ಜಾಗ ಖಾಲಿ ಮಾಡಿದೆ.ಆಮೇಲೆ ತಿಳಿಯಿತು ಮಂಜ ತನ್ನ ಮಡದಿಯೊಂದಿಗೆ ಜಗಳ ಮಾಡಿಕೊಂಡು ಬಂದು ನನ್ನ ತಲೆ ತಿಂದಿದ್ದ ಎಂದು.



ಅವನಿಗೆ ನನ್ನ ಬರ್ತ್‌ಡೇ ಪುರಾಣ ಹೇಳೋಕೆ ಹೋಗಿ, ನನ್ನ ಬುರುಡೆಯಲ್ಲಿ ಹುಳ ಬಿಟ್ಟುಕೊಂಡು ಬಂದಿದ್ದೆ. ಅದಕ್ಕೆ ಇದನ್ನು ಬುರುಡೆ ಪುರಾಣ ಎಂದು ಅಂದಿದ್ದು....

4 comments:

  1. hhahaha chennagide sir

    rubbu gundu and rubba ganda ishta ayitu :)

    ReplyDelete
  2. ಸೀತಾರಾಮ ಸರ್ ನಮಸ್ಕಾರ .....ಧನ್ಯವಾದಗಳು ಮತ್ತು ವಂದನೆಗಳು :-)).

    ReplyDelete
  3. ಹೆಗ್ಡೆ ಸರ್ ನಮಸ್ಕಾರ .....ಧನ್ಯವಾದಗಳು ಮತ್ತು ವಂದನೆಗಳು :-)).

    ReplyDelete