Friday, May 20, 2011

ಸಮರ ಆರ೦ಭ ....

ಮನೆಯಲ್ಲಿ ಸಮರ ಮುಗಿಸಿ, ಒಂದು ಸಮಾರ೦ಭಕ್ಕೆ ಹೋಗಿದ್ದೆ. ಸಮರದ ಆರಂಭ ಆಗಿದ್ದು ಭಾನುವಾರದ ದಿನ. ಬೇಗ ಎದ್ದು ಏನಾದರೂ ತಿಂಡಿ ಮಾಡು ಎಂದು ಅವಳಿಗೆ ಪೀಡಿಸಿದ್ದಕ್ಕೆ. ಭಾನುವಾರ ಕೂಡ ನಮಗೆ ಕೆಲಸ..ಛೇ ಎಂದು ಗೊಣಗಿ, ನಿನ್ನೆಯ ಇಡ್ಲಿ ಇದೆ ತಿಂದು ಹೋಗಿ. ನನಗೆ ಬೇಗ ಏಳೋಕೆ ಆಗಲ್ಲ ಎಂದು ಬೈದಿದ್ದಳು . ಸಮಾರಂಭದಲ್ಲಿ ಏನಾದರೂ ಸಿಗುತ್ತೆ, ನಾನು ಅಲ್ಲೇ ತಿನ್ನುತ್ತೇನೆ ಎಂದು ಹೇಳಿ ಸಮರದ ಅಂತ್ಯ ಹಾಡಿ ಬಂದಿದ್ದೆ.

ಸಮಾರಂಭದಲ್ಲಿ ಇದ್ದ ಉಪಿಟ್ಟು ನೋಡಿ, ಬೇಡ ಎಂದು ಕಾಫೀ ಕುಡಿದು ಬಂದು ಕುಳಿತೆ. ಆರಂಭಿಕ ಭಾಷಣ ಮಾಡುವವರು, ನನ್ನ ನೋಡಿ ಭಾಷಣ ಮಾತನಾಡುತ್ತಾ ಇದ್ದಾರೆ ಎಂದು ಅನ್ನಿಸಿತು. ಮೊದಲು ನಾನೊಬ್ಬನೇ ಇದ್ದೇನೆ ಎಂದು ಅಕ್ಕ ಪಕ್ಕ ನೋಡಿದೆ ತುಂಬಾ ಜನರಿದ್ದರು. ಪಕ್ಕದಲ್ಲಿ ಒಬ್ಬ ನಿದ್ದೆ ಹೊಡೆಯುತ್ತಿದ್ದ. ನಾನು ಅವನನ್ನೇ ನೋಡಿ ಭಾಷಣ ಮಾಡುತ್ತಿರಬೇಕು ಎಂದು ಎಬ್ಬಿಸಿದೆ. ಆಸಾಮಿ ನನ್ನನ್ನು ವಿಚಿತ್ರ ಪ್ರಾಣಿಯಂತೆ ನೋಡಿ ಎದ್ದು ಹೋದ. ಮತ್ತೆ.. ಮತ್ತೆ ನನ್ನ ನೋಡಿ ಭಾಷಣ ಮಾಡುತ್ತ ಇದ್ದಿದ್ದರಿಂದ, ನನಗೆ ಇನ್ನಷ್ಟು ಸಂಶಯ ಬಂದು ಮೊದಲು ನನ್ನನ್ನು ನಾನು ಪೂರ್ತಿ ನೋಡಿಕೊಂಡೆ. ಕಡೆಗೆ ನಾನು ಹಾಕಿರುವ ಡ್ರೆಸ್ ಎಲ್ಲವು ಸರಿಯಾಗಿದೆ ಎಂದು ಖಾತರಿ ಮಾಡಿಕೊಂಡೆ. ಆದರು ಭಾಷಣಕಾರ ನನ್ನ ಕಡೆನೇ ನೋಡಿ ಮಾತನಾಡುತ್ತಿದ್ದರು. ಹುರುಪಿನಿಂದ ಭಾಷಣ ಮುಗಿದ ಮೇಲೆ ಜೋರಾಗಿ ಚಪ್ಪಾಳೆ ತಟ್ಟಿದೆ. ಈಗ ಭಾಷಣಕಾರನಲ್ಲದೆ ಎಲ್ಲರು ನನ್ನನ್ನೇ ನೋಡಿದರು. ಸಧ್ಯ ಶಿಳ್ಳೆ ಹೋಡಿಲಿಲ್ಲ ಬಚಾವ ಅನ್ನಿಸಿತು.

ಆಮೇಲೆ ಸುಗಮ ಸಂಗೀತ ಶುರು ಆಯಿತು. ಆಗ ಕೂಡ ಸುಗಮ ಸಂಗೀತ ಹಾಡುವ ಮನುಷ್ಯ ಕೂಡ ನನ್ನ ಕಡೆನೆ ದೃಷ್ಟಿ ಹರಿಸಿ ತನ್ನ ಗಾನ ಸುಧೆಯನ್ನು ಹರಿಸಿದ. ಮತ್ತೆ ಕೆಲ ಸಮಯದ ನಂತರ "ಜಾಲಿ ಬಾರಿನಲ್ಲಿ ಕೂತು ಪೋಲಿ ಗೆಳೆಯರು ಗೋಪಿಯನ್ನು ಪಾಪ ಗೇಲಿ ಮಾಡುತಿದ್ದರು.." ಎಂದು ಹಾಡಬೇಕೆ?. ಅವನಿಗೆ ನನ್ನ ಹೆಸರು ಹೇಗೆ ತಿಳಿಯಿತು ಎಂದು ಆಶ್ಚರ್ಯವಾಯಿತು. ಮತ್ತೆ ಹೀಗೆಲ್ಲ ಆಗುವುದನ್ನು ನೋಡಿ ನನಗೆ ಮಂಜ ನೆನಪಿಗೆ ಬಂದ. ಅವನೇನಾದರೂ ಕಿತಾಪತಿ ಎಂದು ಛೆ... ಛೆ... ಅವನಿಗೆ ಹೇಗೆ ಗೊತ್ತು ನಾನು ಇಲ್ಲಿ ಬಂದಿರೋದು. ಅವನು ಇಲ್ಲಿ ಇಲ್ಲ ಬೇರೆ ಎಂದು ಯೋಚಿಸಿದೆ.

ಸಭಾಂಗಣಕ್ಕೆ ಹೋಗಿ ಕೇಳಿಯೇ ಬಿಡೋಣ ಎಂದು ಹೊರಟು ನಿಂತ ಸಮಯದಲ್ಲಿ, ಒಬ್ಬ ಈ ಸಮರ ಆರ೦ಭ ಆಯಿತು ಅಂದರೆ ಮುಗಿತು ನೋಡಿ ಎಂದರು. ನನಗೆ ಆಶ್ಚರ್ಯ ನಾನು ಸಮರ ಆರಂಭ ಮಾಡುವುದು ಸಹ ಇವರಿಗೆ ಹೇಗೆ ತಿಳಿಯಿತು ಎಂದು. ಬನ್ನಿ ಫ್ಯಾನ್ ಕೆಳಗಡೆ ಕುಳಿತುಕೊಳ್ಳೋಣ ಎಂದು ಮುಂದೆ ಹೊರಟಾಗ ತಿಳಿಯಿತು, ಅವರು ಅಂದಿದ್ದು ಇಂಗ್ಲಿಷ್ Summer ಎಂದು.

ಮುಂದೆ ಹೋಗುವ ಸಮಯದಲ್ಲಿ ಹಿಂದೆ ಒಮ್ಮೆ ಕಣ್ಣಾಡಿಸಿದೆ. ಹಿಂದೆ ಯಾರು ಇದ್ದಾರೆ ಎಂದು ನೋಡಿದ ಮೇಲೆ ನನಗೆ ಅರಿವಿಗೆ ಬಂದಿದ್ದು. ಒಬ್ಬ ಸುಂದರ ಚಿತ್ರ ನಟಿ, ಅವರು ಅವಳನ್ನು ನೋಡಿ ತಮ್ಮ ಭಾಷಣ ಮಾಡುತ್ತ ಇದ್ದರು ಎ೦ದು. ಅದು ನನ್ನ ಕುರ್ಚಿ ಹಿಂದೆ. ಹಿಂದೆ ನೋಡುತ್ತೇನೆ ಮಂಜ ಬೇರೆ ಬಂದುಬಿಟ್ಟಿದ್ದಾನೆ. ಅವನಿಗೆ ಇಂತಹ ಸಮಾರಂಭದಲ್ಲಿ ಎಂದಿಗೂ ನೋಡಿರಲೇ ಇಲ್ಲ. ಎದ್ದು ಅವನ ಬಳಿ ಹೋದೆ. ಮಂಜಣ್ಣ ನೀನು ಇಲ್ಲಿ ಎಂದೆ. ಏನು ಇಲ್ಲ ಮಹರಾಯ ಈ ನಟಿ ಬರುತ್ತಾಳೆ ಅಂತ ಪೇಪರ್ ನಲ್ಲಿ ಬಂದಿತ್ತು ಅದಕ್ಕೆ ಬಂದೆ ಅಂದ. ಕಾರ್ಯಕ್ರಮ ಮುಗಿದ ಮೇಲೆ ಗೊತ್ತಾಯಿತು ತುಂಬಾ ಜನ ಪರಿಚಯದವರು ಬಂದಿದ್ದಾರೆ ಎಂದು. ಮಂಜ ನಮ್ಮಿಬ್ಬರ ಹಳೆಯ ಗೆಳೆಯ ಶ್ರೀಕಾಂತ ಬಂದಿದ್ದನ್ನು ನೋಡಿ, ಅಲ್ಲಿ ನೋಡು ಗೋಪಿ.. ಡಾಕ್ಟರ ಶ್ರೀಕಾಂತ ಬಂದಿದ್ದಾನೆ ಎಂದ. ಹೋಗಿ ಮಾತನಾಡಿಸಿ ಬಂದೆವು. ಶ್ರೀಕಾಂತನ ಕಾರ್ ತುಂಬಾ ಚೆನ್ನಾಗಿತ್ತು. ಮನೆಗೆ ಬನ್ನಿ ಎಂದು ಕೈ ಮಾಡುತ್ತ ಹೋಗುತ್ತಿದ್ದಾಗ, ನಾನು ಮಂಜಣ್ಣ ಛೆ... ನೆನಪೇ ಹಾರಿ ಹೋಯಿತು ನೋಡು. ಅವನಿಗೆ ಸ್ವಲ್ಪ ಔಷಧಿ ಕೇಳಬೇಕು ಎಂದು ಹೊರಟೆ. ಮಂಜ ತಡೆದು, ಲೇ ಅವನು ಹೋಮಿಯೋಪತಿ ಅಂದ. ನನಗೆ ಹೋಮಿಯೋಪತಿ ಔಷಧಿ ನಡೆಯುತ್ತೆ ಎಂದು ಹೊರಟೆ. ತಡೆದು ನಗುತ್ತ ಲೇ ಹಂಗೆ ಅಂದರೆ "ಮನೆ ಅಳಿಯ" ಅಂತ ಅರ್ಥ ಎಂದ. ಅವನ ಮಾವ ಕೋಟ್ಯಾಧಿ ಪತಿ. ಇವನು ಅವನ ಮಗಳ ಕೋತಿಯಂತಹ ಹೋಮಿಯೋ ಪತಿ. ಕೆಲಸ ಏನು ಇಲ್ಲ ಎಂದ. ಸಕ್ಕತ್ ನಗು ಬ೦ತು. ಸಧ್ಯ ಅವನಿಗೆ ಔಷಧಿ ಕೇಳಿ ಸಮರಕ್ಕೆ ನಾಂದಿ ಹಾಡಲಿಲ್ಲ ಎಂಬುದೊಂದೇ ಖುಷಿ.

ಮನೆಗೆ ಹೋದೊಡನೆ ತುಂಬಾ ಹಸಿವು ಆಗಿತ್ತು. ಮತ್ತೆ ಅವಳಿಗೆ ಏನಾದರು ಕೇಳಿ ಬೈಯಿಸಿ ಕೊಂಡು ಸಮರಕ್ಕೆ ನಾಂದಿ ಹಾಡುವುದಕ್ಕಿಂತ ನಿನ್ನೆಯ ಇಡ್ಲಿ ವಾಸಿ ಎಂದು ಹಸಿವನ್ನು ನೀಗಿಸಿದೆ.