Showing posts with label ತರ್ಲೆ ಮಂಜ. Show all posts
Showing posts with label ತರ್ಲೆ ಮಂಜ. Show all posts

Thursday, September 27, 2012

ತಾಳಿದವನು ಬಾಳಿಯಾನು ....

ಬಾಲ ಸುಟ್ಟ ಬೆಕ್ಕಿನ ಹಾಗೆ ಅತ್ತಿಂದ ಇತ್ತ - ಇತ್ತಿಂದ ಅತ್ತ ಓಡಾಡುತ್ತ ಇದ್ದೆ. ಯಾಕ್ರಿ ಏನಾಯಿತು ಎಂದಳು ಮಡದಿ. ಏನಿಲ್ಲ ಕಣೆ ಚೆಕ್ ಬುಕ್ ಇನ್ನು ಬಂದಿಲ್ಲ ಎಂದೆ. ಗಡ್ಡಕ್ಕೆ ಬೆಂಕಿ ಹತ್ತಿದಾಗ ಭಾವಿ ತೊಡುವುದು, ನಿಮ್ಮದು ಇದೆ ಕತೆ ಆಯಿತು ಎಂದಳು. ಹೌದು ನನಗೆ ಯಾವುದೇ ಕೆಲಸವಾಗಲಿ ಕಡೆವರೆಗೂ ಅದನ್ನು ಮಾಡುವುದಕ್ಕೆ ಮನಸ್ಸೇ ಬರುವುದಿಲ್ಲ. ಅಷ್ಟರಲ್ಲಿ ಮಡದಿ ರೀ.. ಸ್ವಲ್ಪ ಕಣ್ಣು ಮುಚ್ಚಿ ಬಾಯಿ ತೆಗೆಯಿರಿ ಎಂದಳು. ಚೆಕ್ ಬುಕ್ ಏನಾದರು ಬಂತಾ ಎಂದು ಯೋಚಿಸಿದೆ. ಆದರು ಬಾಯಿ ಬೇರೆ ತೆಗೆಯಿರಿ ಎಂದಿದ್ದಾಳೆ, ಸುಮ್ಮನೆ ಕಣ್ಣು ಮುಚ್ಚಿದ ಹಾಗೆ ಮಾಡಿ ಬಾಯಿ ತೆಗೆದೆ. ಬಾಯಿಯಲ್ಲಿ ತಂದು ಸಿಹಿ ತಿಂಡಿ ಹಾಕಿದಳು. ಏನೇ ಇದು ಬೆಲ್ಲದ ಪುಡಿ ಹಾಗೆ ಇದೆ ಎಂದೆ. ಕೋಪದಿಂದ ರೀ.. ಅದು ಮೈಸೂರ್ ಪಾಕ, ಆದರೆ ಪುಡಿಯಾಗಿತ್ತು ಅಷ್ಟೇ ಎಂದಳು. ಅದಕ್ಕೆ ಮೈಸೂರ್ ಪುಡಿ ಎಂದರೆ ಹೇಗೆ ಎಂದೆ. ಮತ್ತಷ್ಟು ತಾರಕಕ್ಕೆ ಏರಿತು ಅವಳ ಕೋಪ. ನಾನು "ತಾಳಿದವನು ಬಾಳಿಯಾನು" ನಾಳೆ ಮಾಡುವೆಯಂತೆ ಬಿಡು ಕೋಪ ಏಕೆ? ಎಂದೆ. ಅದು ನಿಮಗೆ ಅನ್ವಯಿಸುತ್ತೆ ಅಲ್ಲಿ ಸ್ತ್ರೀಲಿಂಗ ಇಲ್ಲ ಎಂದಳು. ಇದನ್ನು ಯಾರೋ ಹೆಂಗಸರು ಸೇರಿ ಮಾಡಿದ ಗಾದೆ ಇರಬೇಕು, ಅದು "ತಾಳಿ ಇದ್ದವಳು ಬಾಳಿಯಾಳು" ಎಂದು ಆಗಬೇಕಿತ್ತು ಅಷ್ಟೇ ಎಂದೆ. ಹಾಗೇನಿಲ್ಲ ಹಾಗಾದರೆ ಮುಂ"ಗೋಪಿ" ಎಂದು ನಿಮ್ಮ ಹೆಸರನ್ನು ಸೇರಿಸಿ ಏಕೆ? ಹೇಳುತ್ತಾರೆ. ಅದಕ್ಕೆ ಅದು ತಾಳಿದವನು ಬಾಳಿಯಾನು ಸರಿ ಎಂದು ಕಿಚಾಯಿಸಿದಳು. ಅಷ್ಟರಲ್ಲಿ ನಮ್ಮ ಐದು ವರ್ಷದ ಸುಪುತ್ರ Tom & Jerry ಅಂದ. ಅನ್ನು,, ಅನ್ನು,, ನೀನೋಬ್ಬನು ಕಡಿಮೆ ಆಗಿದ್ದೆ ಅನ್ನುವವನು ಎಂದು ಅಂದೆ. ಅಪ್ಪ.. Tom & Jerry ಟಿ ವಿ ಯಲ್ಲಿ ಹಚ್ಚು ಎಂದ ಕೋಪದಿಂದ. ಅವನು ನಮ್ಮಿಬ್ಬರನ್ನು ನೋಡಿ ಅನ್ನುತ್ತಿದ್ದಾನೆ ಎಂದು ತಪ್ಪಾಗಿ ಕಲ್ಪಿಸಿಕೊಂಡಿದ್ದೆ. ನಾನೇ ದೊಡ್ದವನಾದ್ದರಿಂದ Tom ನಾನೇ ಅನ್ನಿಸಿತು. Tom & Jerry ಯಲ್ಲಿ Tom ಗೆ Jerry ಏನೇ ಮಾಡಿದರು ಕೂಡ ಅದು ಚಿರಂಜೀವಿನೇ. ಅ೦ತಹ ಚಿರಂಜೀವಿಯನ್ನ ನನ್ನ ಜೀವಮಾನದಲ್ಲಿ ಎಲ್ಲಿಯೂ ಕಂಡಿಲ್ಲ. Jerry Tomನಿಗೆ ಎರಡು ಭಾಗ ಮಾಡಿದರು ಕೂಡ ಮತ್ತೆ ಕೂಡಿ ಕೊಂಡು Jerry ಯನ್ನು ಬೆನ್ನು ಹತ್ತುತ್ತೆ. ಆದರೆ ಇಲ್ಲಿ ಮಡದಿ ಕೋಪ ಮಾಡಿಕೊಂಡರು ಸಾಕು ನಾವು ಅವರ ಹಿಂದೆ ಕೋಪ ಕಡಿಮೆ ಮಾಡಲು ಹೋಗಬೇಕಷ್ಟೆ. ಕೋಪ ಕಡಿಮೆ ಆಗದಿದ್ದರೆ ಕತೆ ಮುಗಿಯಿತು ಅಷ್ಟೇ. ಕಡೆಗೆ ಮಗನಿಗೆ Tom & Jerry ಹಚ್ಚಿಕೊಟ್ಟೆ.


ಮಡದಿ ಕೋಪದಿಂದ, ಆಫೀಸ್ ನಿಂದ ಬರುತ್ತಾ ನಿಮ್ಮ ಅಪ್ಪನಿಗೆ ಇವತ್ತಾದರೂ ನಿನ್ನೆ ಹೇಳಿರುವ ಸಾಮಾನುಗಳನ್ನು ತೆಗೆದುಕೊಂಡು ಬರಲು ಹೇಳು ಎಂದಳು. ಕಡೆಗೆ ತಿಂಡಿ ತಿಂದು ಆಫೀಸ್ ಗೆ ಹೊರಟೆ. ನಾನು ದಿನಾಲೂ ಹೋಗುವ ದಾರಿಯಲ್ಲಿ ವಜ್ರಾಯುಧ ಹಿಡಿದು ಕೊಂಡು ರಸ್ತೆ ಕಡಿಯುವ ಯೋಧರು ನಿಂತಿದ್ದರು. ಮೊದಲು ನಾವು ಈ ಪಾತಾಳ ಲೋಕದಲ್ಲಿ ಸಂಜೀವಿನಿ ಮಣಿ ಇರುತ್ತೆ ಎಂದು ಕೇಳಿದ್ದೇವೆ. ನಾವು ಬಬ್ರುವಾಹನ ಚಲನ ಚಿತ್ರದಲ್ಲಿ, ಬಬ್ರುವಾಹನನಿಂದ ಹತನಾದ ತಂದೆಯಾದ ಅರ್ಜುನನನ್ನು ಬದುಕಿಸಲು ಪಾತಾಳ ಲೋಕಕ್ಕೆ ಹೋಗಿ ಸಂಜೀವಿನಿ ಮಣಿಯನ್ನು ತರುತ್ತಾನೆ. ಆದರೆ ಈಗ ಈ ಪಾತಾಳ ಲೋಕ್ಕಕ್ಕೆ ಹೋದರೆ, ಸಂಜೀವಿನಿ ಮಣಿ ಸಿಗದೇ ಹೋದರು ಸಂಜೆವಾಣಿ ಪತ್ರಿಕೆಯಲ್ಲಿ ನಮ್ಮ ಫೋಟೋ ಖಂಡಿತ ಬಂದಿರುತ್ತೆ. ಸೇರುವುದು ಖಂಡಿತವಾಗಿ ಸ್ವರ್ಗ ಲೋಕಕ್ಕೆ ಮಾತ್ರ. ಸರ್ ..ಹಾಗೆ ಹೋಗಿ ಎಂದು ಯೋಧರು ತಾಕಿತ್ ಮಾಡಿದರು. ಕಡೆಗೆ ಬೇರೆ ದಾರಿಯಿಂದ ಹೊರಟೆ, ಆಫೀಸ್ ಐದು ನಿಮಿಷ ಲೇಟಾಗಿ ತಲುಪಿದೆ, ಹೀಗಾಗಿ ಆಫೀಸ್ ಗೆ ಅರ್ಧ ದಿವಸ ರಜೆ ಹಾಕಿ, ಅವಳು ಹೇಳಿರುವ ಸಾಮಾನು ತೆಗೆದುಕೊಂಡು ಬಂದೆ.

ಮಡದಿಯ ಹತ್ತು missed calls ಇದ್ದವು. ನಾನು ಫೋನ್ ಮಾಡಿದೆ. ಅವಳು ಕೋಪದಿಂದ ಫೋನ್ ತೆಗೆದುಕೊಳ್ಳಲಿಲ್ಲ. ನಾನು ಮತ್ತೆ.. ಮತ್ತೆ.. ಫೋನ್ ಮಾಡಿ ಬೇಜಾರಿನಿಂದ ಕುಳಿತ್ತಿದ್ದೆ. ಅಷ್ಟರಲ್ಲಿ ನಮ್ಮ ಮಂಜ ಬಂದ. ಏನಪ್ಪಾ.. ಸಪ್ಪಗೆ ಇದ್ದೀಯಾ ಎಂದ. ಅದಕ್ಕೆ ನಾನು ಮಡದಿಗೆ ಫೋನ್ ಮಾಡಿದ್ದೆ ಎತ್ತಲಿಲ್ಲ ಎಂದೆ. ಹೌದಾ... ಕಾಲ್ ಎತ್ತಲಿಲ್ಲವೆ ಎಂದ. ನಾನು ಹೌದು ಕಾಲು ಎತ್ತಲಿಲ್ಲ. ಹೌದು ಬಿಡು ನಿನ್ನ ಮೇಲೆ ಕಾಲು ಎತ್ತಬೇಕಾಗಿತ್ತು, ನಾನು ಹೇಳುತ್ತೇನೆ ತಂಗ್ಯಮ್ಮನಿಗೆ ಎಂದು ಜೋರಾಗಿ ನಗ ಹತ್ತಿದ. ನನ್ನ ಅಕ್ಕ-ಪಕ್ಕ ಕುಳಿತವರು ಕೂಡ ಜೋರಾಗಿ ನಗ ಹತ್ತಿದರು. ನನಗೆ ಇನ್ನಷ್ಟು ಕೋಪ ಬಂದಿತ್ತು. ಏನೋ ಬೇಜಾರಿನಿಂದ ಇದ್ದರೆ, ನಿನ್ನೋಬ್ಬನು ಉರಿಯೋ ಬೆಂಕಿಗೆ ತುಪ್ಪ ಸುರಿಯುವವನು. ದೇಶ ಕಟ್ಟುವವರು ಕಡಿಮೆ ಇಲ್ಲಿ ಉಪದೇಶ ಮಾಡುವವರು ಜ್ಯಾಸ್ತಿ ಎಂದೆ. ಅಷ್ಟರಲ್ಲಿ ಒಂದು ಫೋನ್ ಕಾಲ್ ಬಂತು. ಅದಕ್ಕೆ ಮಂಜ ನೋಡಿ ತಂಗ್ಯಮ್ಮನ ಕಾಲು ಇರಬೇಕು, ಬೇಗನೆ ತೆಗೆದುಕೋ ಇಲ್ಲದೆ ಹೋದರೆ ಚಪ್ಪಲಿ ಕೂಡ ಬಂದು ಬಿಟ್ಟರೆ ಕಷ್ಟ ಎಂದು ನಗುತ್ತಾ ಹೊರಟು ಹೋದ.

ಕಡೆಗೆ ನಾನೇ ಮನೆಗೆ ಹೋಗುವ ಸಮಯದಲ್ಲಿ ಮೈಸೂರ್ ಪಾಕ್ ತೆಗೆದುಕೊಂಡು ಮನೆ ಕಡೆಗೆ ಹೊರಟೆ. ಆದರೆ ಅವಳು ಹೇಳಿರುವ ಸಾಮಾನುಗಳನ್ನೂ ಮಾತ್ರ ಆಫೀಸ್ ನಲ್ಲಿಯೇ ಬಿಟ್ಟು ಬಂದಿದ್ದೆ. ಮತ್ತೆ ಅರ್ಧ ದಾರಿಯಲ್ಲಿ ಇರುವಾಗ ಮಗನ ಫೋನ್ ಬಂತು. ಎಲ್ಲಿದ್ದೀರಾ? ಅಪ್ಪ ಎಂದ. ನಾನು ಬಸವನಗುಡಿ ಹತ್ತಿರ ಎಂದೆ. ಸಾಮಾನುಗಳನ್ನು ತೆಗೆದುಕೊಂಡು ಬಂದಿರುವೆಯೋ ಇಲ್ಲವೋ ಎಂದು ಕೇಳಿದ. ತಂದಿದ್ದೇನೆ ಎಂದು ಫೋನ್ ಕಟ್ ಮಾಡಿ,ತಕ್ಷಣ ನೆನಪಾಗಿ ಮತ್ತೆ ಆಫೀಸ್ ಕಡೆ ಗಾಡಿ ತಿರುಗಿಸಿದೆ. one way ಎಂದು ತಿಳಿಯದೆ ಪೋಲಿಸ್ ಮಾಮನಿಗೆ ದಕ್ಷಿಣೆ ಕೊಟ್ಟು ಆಫೀಸ್ ತಲುಪಿದೆ. ಮತ್ತೆ ಸಾಮಾನುಗಳನ್ನು ತೆಗೆದುಕೊಂಡು ಮನೆಗೆ ಹಾಜರ ಆದೆ.

ಏಕೆ? ಇಷ್ಟು ಲೇಟ್ ಅಪ್ಪ ಎಂದ ಮಗ. ಮತ್ತಿನೇನು ಕೋಲೆ ಬಸವನ ಹಾಗೆ, ಬಸವನಗುಡಿ ಸುತ್ತತ್ತ ಇದ್ದರು ಅನ್ನಿಸುತ್ತೆ ಎಂದು ಹುಸಿಕೊಪದಿಂದ ನುಡಿದಳು ಮಡದಿ. ಮಡದಿ ಎಲ್ಲ ಸಾಮಾನುಗಳನ್ನು ನೋಡುತ್ತಾ, ಹಣಿ ಹಣಿ ಗಟ್ಟಿಸಿಕೊಂಡಳು. ಏಕೆ? ಏನಾಯಿತು ಎಂದೆ. ನಿಮಗೆ ಏನೇನು ಹೇಳಿದ್ದೆ ಹೇಳಿ ಎಂದಳು. ನಾನು ಬರೆದುಕೊಂಡಿರುವ ಸಾಮಾನಿನ ಲಿಸ್ಟ್ ತೆಗೆದು, ಒಂದೊಂದಾಗಿ ಹೇಳಲು ಶುರು ಮಾಡಿದೆ. ೪ ಲೈನ್ ಇರುವ ಪುಸ್ತಕ, ಮತ್ತೆ ಬೆಳೆ, ಮತ್ತೆ ಒಂದು ರೂಪಾಯಿಯ ಚಾಕ್ಲೇಟ...ನಿಲ್ಲಿ.. ನಿಲ್ಲಿ.. ಎಂದು ನಿಲ್ಲಿಸಿದಳು ಮಡದಿ. ರೀ. ನಿಮ್ಮ ತಲೆಗಿಷ್ಟು, ಮನೆಯಲ್ಲಿ ಇಷ್ಟೊಂದು ಚಾಕ್ಲೇಟ ಇವೆ ಮತ್ತೆ ಏಕೆ? ತಂದಿರಿ ಎಂದು ಝಾಡಿಸಿದಳು. ಮತ್ತೆ ನೀನೇಕೆ? ಹೇಳಿದೆ ಎಂದು ಕೇಳಿದೆ. ರೀ... ನಾನು ಹೇಳಿದ್ದು ಚಾಕ್ ಪೀಸ್ ಎಂದಳು. ನಾನು ಮತ್ತೆ ಹೋಗಿ ಚಾಕ್ ಪೀಸ್ ತೆಗೆದುಕೊಂಡು ಬಂದು ಕೊಟ್ಟೆ.

ಮಡದಿ ಚೆಕ್ ಬುಕ್ ಬಂದಿದೆ ಎಂದು ಹೇಳಿದಳು. ನಾನು ತುಂಬಾ ಖುಷಿಯಾದೆ. ಮಡದಿ ಪ್ಲೇಟಿನಲ್ಲಿ ಮೈಸೂರ್ ಪಾಕ್ ತೆಗೆದುಕೊಂಡು ಬಂದು ಕೊಟ್ಟಳು. ಲೇ... ಇದೆಂತಹ ಮೈಸೂರ್ ಪಾಕ್ ಕೊಟ್ಟಿದ್ದಾನೆ ಅಂಗಡಿಯನು, ಮೈಸೂರ್ ರಾಕ್ ಆಗಿದೆ ಎಂದು ಜೋರಾಗಿ ಬೈಯುತ್ತ ಇದ್ದೆ. ಆದರೆ ಮಡದಿ ನಾನು ತಂದಿರುವ ಮೈಸೂರ್ ಪಾಕ್ ಪ್ಯಾಕೆಟ್ ತೆಗೆಯದೆ. ತಾನೆ ಮಾಡಿರುವ ಮೈಸೂರ್ ಪಾಕ್ ತಂದು ಕೊಟ್ಟಿದ್ದಳು. ಮತ್ತಷ್ಟು ಕೋಪದಿಂದ ನನಗೆ ಮಾಡಲು ಬರುವುದಿಲ್ಲ ಎಂದು, ಹೀಯಾಳಿಸಲು ಇದನ್ನು ತಂದಿರುವಿರಿ ಏನು? ಎಂದು, ಅನ್ನುತ್ತ ನಾನು ತಂದಿರುವ ಮೈಸೂರ್ ಪಾಕ್ ನ್ನು ನನ್ನ ಮುಂದೆ ಇಟ್ಟು ಹೊರಟು ಹೋದಳು. ನಾನು ಮತ್ತೆ ಅವಳನ್ನು ಸಮಾಧಾನಿಸಲು, ಹಿಂದೆ ಬಾಲದಂತೆ ಹಿಂಬಾಲಿಸಿ, ಮನಸ್ಸಿನಲ್ಲಿ ನಿಜವಾಗಿಯೂ, ತಾಳಿದವನು ಬಾಳಿಯಾನು ಎಂದು ಅಂದುಕೊಂಡೆ.

Wednesday, September 26, 2012

ದುಡ್ಡೇ ದೊಡ್ಡಪ್ಪ....

ಅರುಣ ಯುರೇಕಾ ಎಂದು ಚೀರುತ್ತಲೇ ಹೊರಗಡೆ ಬಂದ. ಆದರೆ ಪಕ್ಕದ ಮನೆ ಸುರೇಖಾ ಇದನ್ನು ಕೇಳಿ, ತನ್ನನ್ನೇ ಕರೆಯುತ್ತಿದ್ದಾನೆ ಎಂದು ಅವರ ಅಪ್ಪನಿಗೆ ಕಂಪ್ಲೈಂಟ್ ಮಾಡಿದಳು. ಅದಕ್ಕೆ ಸರಿಯಾದ ಕಾಂಪ್ಲಿಮೆಂಟ್ ಅರುಣನಿಗೆ ಸಿಕ್ಕಿತ್ತು. ಹರಕೆ ಹೊತ್ತರು ಆರ್ಕಿಮೆಡಿಸ್ ಪ್ರಿನ್ಸಿಪಲ್ ಅನ್ನು ಹೇಳಲು ಬರುತ್ತಿರಲಿಲ್ಲ ಅರುಣನಿಗೆ. ಪ್ರಿನ್ಸಿಪಾಲರು ಅರುಣನಿಗೆ ಹಿರಿಯರನ್ನು ಕರೆದುಕೊಂಡು ಬನ್ನಿ ಎಂದು ತಾಕಿತ್ ಮಾಡಿದ್ದರು. ಅದಕ್ಕೆ ಅರುಣ ಪೂರ್ತಿ ಮಂಕಾಗಿದ್ದ. ಕಡೆಗೆ ಅರುಣ ಯೋಚಿಸಿ ತಲೆ ಕೆರೆದುಕೊಂಡು, ಮಂಜನ ಅಣ್ಣನನ್ನು ಕರೆದುಕೊಂಡು ಹೋಗಬೇಕೆಂದು ಯೋಚಿಸಿ ಹೀಗೆ ಮಾಡಿದ್ದ. ಬಾತ್ ರೂಮಿನಲ್ಲಿಯ ನಲ್ಲಿ ಹಾಗೆ ಬಿಟ್ಟು ಬಂದು, ಮನೆಯಲ್ಲಿರುವ ಪೂರ್ತಿ ನೀರು ಖಾಲಿ ಆಗಿ ಎಲ್ಲರಿಗೂ ಫಜೀತಿ ಬೇರೆ ಮಾಡಿದ್ದ. ಅವರ ಅಪ್ಪನಿಂದ ಏಟುಗಳ ಸುರಿಮಳೆ ಆಗಿತ್ತು. ಮಂಜನ ಅಣ್ಣ ಸುರೇಶನಿಗೆ ಹತ್ತು ರುಪಾಯಿ ಕೊಟ್ಟು ಒಪ್ಪಿಸಿ ಕಡೆಗೆ ಶಾಲೆಗೆ ಕರೆದುಕೊಂಡು ಹೋಗಿದ್ದ.

ಹತ್ತು ರುಪಾಯಿಯ ಆಸೆಯಿಂದ ಸುರೇಶ್ ಲಗುಬಗೆಯಿಂದ ಪ್ರಿನ್ಸಿಪಾಲ್ ರೂಮಿಗೆ ಅರುಣನನ್ನು ಕರೆದುಕೊಂಡು ಹೊಕ್ಕ. ಈಗ ಅರುಣನ ಜೊತೆ ಸುರೇಶನಿಗೆ ಕೂಡ ನಡುಕ ಶುರು ಆಯಿತು. ಏಕೆಂದರೆ ಸುರೇಶನಿಗೆ ಕಲಿಸಿರುವ ಮಾಸ್ತರ್ ಬೇರೆ ಶಾಲೆಯಿಂದ ಇಲ್ಲಿ ಪ್ರಿನ್ಸಿಪಾಲ್ ಆಗಿ ವರ್ಗಾವಣೆಯಾಗಿ ಬಂದಿರುತ್ತಾರೆ ಎಂದು ಕಲ್ಪನೆಯಲ್ಲೂ ಯೋಚಿಸಿರಲಿಲ್ಲ. ಕಡೆಗೆ ಎಲ್ಲಾ ವಿಷಯಗಳು ಪೋಲಾಗಿ ಇಬ್ಬರು ಕ್ಷಮೆ ಕೇಳಿ, ಅರುಣನ ತಂದೆಗೆ ವಿಷಯ ಮುಟ್ಟಿಸಿ, ಕರೆದುಕೊಂಡು ಹೋಗಿ ಪ್ರಿನ್ಸಿಪಾಲ್ ರನ್ನು ಭೇಟಿ ಮಾಡಿಸಿದ್ದರು. ಅವರ ತಂದೆ ವರ್ಗಾವಣೆಯಾಗಿ ಮೈಸೂರಿಗೆ ಹೋದಮೇಲೆ ನನಗೂ ಮತ್ತು ಅರುಣನಿಗೆ ಸಂಪರ್ಕ ಕಡಿದು ಹೋಗಿತ್ತು.

ಮಂಜ ಮನೆಗೆ ಬಂದಿದ್ದ. ಮಂಜನಿಗೆ ಸ್ವೀಟ್ ಕೊಡುವ ಸಲುವಾಗಿ, ನಾನು ಸ್ವೀಟಿನಲ್ಲಿ ಇರುವ ಇರುವೆಗಳನ್ನು ತೆಗೆಯುತ್ತ "ಇರುವೆ ಎಲ್ಲಿರುವೆ ...ಮಾನವನನ್ನು ಕಾಡುವ" ಎಂದು ಹಾಡುತ್ತ ಇದ್ದೆ ಹೆಂಡತಿ ಏನು? ರೀ.... ಎಂದಳು, ಅಷ್ಟರಲ್ಲಿ ಅಚಾನಕ್ಕಾಗಿ ನಮ್ಮ ಅರುಣನ ಆಗಮನವಾಯಿತು. ಅದು ಜೊತೆಯಲ್ಲಿ ಅದೇ ಸುರೇಖಾ ಮತ್ತು ಒಂದು ಮುದ್ದಾದ ಮಗು ಇತ್ತು. ಅವನು ನನ್ನ ಅಡ್ರೆಸ್ ಅಂತರ್ಜಾಲದಲ್ಲಿ ಹುಡುಕಿ ಮನೆಗೆ ಬಂದಿದ್ದ. ಮಂಜ ಏನಪ್ಪಾ? ಮಗನ ಹೆಸರು ಯುರೇಕಾ ಏನು? ಎಂದು ಕಾಡಿಸಿದ. ಅವನ ಕೈಯಲ್ಲಿ ಒಂದು Tablet ಇತ್ತು. ಅದನ್ನು ತೆಗೆದುಕೊಂಡು ಅವನ ಮಗ ಆಟ ಆಡುತ್ತ ಇದ್ದ. ಅವನು ತನ್ನ ವ್ಯವಹಾರ, ದುಡ್ಡು, ಕಾರುಗಳ ಮತ್ತು ಅಸ್ತಿಗಳ ಬಗ್ಗೆ ತುಂಬಾ ಬೀಗುತ್ತಿದ್ದ. ಇದನ್ನು ಕೇಳಿ ಕೇಳಿ ನನಗೆ ಮತ್ತು ಮಂಜನಿಗೆ ಸಾಕಾಗಿ ಹೋಗಿತ್ತು. ಪ್ರತಿ ಎರಡೆರಡು ನಿಮಿಷಕ್ಕೆ ಫೋನ್ ಬರುತ್ತಿತ್ತು. ನಡು ನಡುವೆ ಎದ್ದು ಹೋಗಿ ಮಾತನಾಡುತ್ತಿದ್ದ. ಕಡೆಗೆ, ಮಂಜ ಏನು? ಈ ಕಡೆಗೆ ಪ್ರಯಾಣ, ಕುಚೇಲನ ಮನೆಗೆ ಕೃಷ್ಣ ಆಗಮಿಸಿದ ಹಾಗೆ ಆಯಿತು ಎಂದು ಹಿಯಾಳಿಸಿ ಮಾತನಾಡಿದ. ಅದಕ್ಕೆ, ಇಲ್ಲೇ ಸ್ವಲ್ಪ ಉತಾರ ಬೇಕಾಗಿತ್ತು ಅದಕ್ಕೆ ಬಂದಿದ್ದೆ. ನಿಮ್ಮ ಮನೆ ಇಲ್ಲೇ ಎಂದು ತಿಳಿದು ಭೇಟಿಗೆಂದು ಬಂದಿದ್ದೆ ಎಂದ. ಮಂಜ ನಿನ್ನ ಉಡದಾರ ಗಟ್ಟಿ ಇದೆ ತಾನೇ ಎಂದು ಕೇಳಿದ. ಲೇ... ನೀನು ಎಂದು ಸುಧಾರಿಸಲ್ಲ ಕಣೋ ಎಂದು ಹೇಳಿದ. ಮಂಜ ತಮ್ಮ ಮನೆಗೆ ಅವನನ್ನು ಆಹ್ವಾನಿಸಿದ. ಆದರೆ, ಅರುಣ ಮತ್ತೊಮ್ಮೆ ಬರುತ್ತೇನೆ ಎಂದು ಹೇಳಿ, ಕಾಫಿ ಕುಡಿದು ಹೊರಟು ಹೋದರು.

ನನ್ನ ಮಗ ಅವರು ಹೋದ ಮೇಲೆ Tablet ನನಗೂ ಬೇಕು ಎಂದು ಹಠ ಹಿಡಿದ. ಮಂಜನಿಗೆ ತುಂಬಾ ಕೋಪ ಬಂದಿತ್ತು. ಮಂಜ ದುಡ್ಡಿದ್ದರೆ ಅವನ ಕಡೆ ಇರಲಿ, ನಮಗೇನು ಅವನು ಕೊಡುತ್ತಾನೆ. ದುಡ್ಡು ಅಂದರೆ ಕೈಯೊಳಗಿನ ಧೂಳು ಇದ್ದ ಹಾಗೆ, ಯಾವತ್ತು ಹೋಗುತ್ತೆ ಎಂದು ಹೇಳುವುದಕ್ಕೆ ಆಗಲ್ಲ. ಮತ್ತೆ ಇದು ನೆರಳು ಇದ್ದ ಹಾಗೆ ಬಿಸಿಲು ಇದ್ದಾಗ ಮಾತ್ರ ಅದನ್ನು ಕಾಣಬಹುದು. ಇವನೇನು ಸತ್ತಾಗ ಎಲ್ಲವನ್ನು ಹೊತ್ತು ಕೊಂಡು ಹೋಗುತ್ತಾನೆ. ಎಲ್ಲೋ ಇವನ ಮಾವನಿಂದ ವರದಕ್ಷಿಣೆ ತೆಗೆದುಕೊಂಡಿರಬೇಕು. ನಡುವೆ ಬಂದಿದ್ದು, ನಡುವೆ ಹೋಗುತ್ತೆ. ನದಿ ನೀರು ಮತ್ತು ಭಾವಿ ನೀರಿಗೂ ತುಂಬಾ ವ್ಯತ್ಯಾಸ. ನದಿ ನೀರು ಎಲ್ಲಿಂದಲೋ ಬಂದಿರುತ್ತೆ. ಭಾವಿ ನೀರು ಯಾವತ್ತಿದ್ದರೂ ಹೊಸದಾಗಿ ಬರುತ್ತಾ ಇರುತ್ತೆ. ನದಿ ನೀರು ಬತ್ತಬಹುದು. ಭಾವಿ ನೀರು ಬತ್ತಲು ಖಂಡಿತ ಸಾಧ್ಯ ಇಲ್ಲ ಎಂದ. ಇಂತವರು ಮೂರೂ ಬಿಟ್ಟವರು. ಮರ್ಯಾದೆ ಬಿಟ್ಟವರು ಎರಡು ತರಹ ಇರುತ್ತಾರೆ. ಒಬ್ಬರು ಮರ್ಯಾದೆ ಹೋದರೆ ಸಾಯುತ್ತಾರೆ. ಮತ್ತೆ ಕೆಲವರು ಮರ್ಯಾದೆ ಮಾರಿ ಮಲಗಿಕೊಳ್ಳುತ್ತಾರೆ ಎಂದ. ದುಡ್ಡೇ ದೊಡ್ಡಪ್ಪ ಅಲ್ಲ ಮನುಷ್ಯತ್ವ ಅವರಪ್ಪ ಎಂದ. ಲೇ.. ಅದು ಮನುಷ್ಯತ್ವ ಅಲ್ಲ ಕಣೋ ವಿದ್ಯೆ ಎಂದೆ. ಆಯಿತು ಬಿಡೋ ಎಂದು ಮನೆಗೆ ಹೊರಟು ಹೋದ. ನನಗು ಕೂಡ ಹಾಗೆ ಅನ್ನಿಸಿತು. ಅರುಣನ ಮಾತಿನ ಹಮ್ಮು ತುಂಬಾ ಇತ್ತು. ಮಗ ಮತ್ತೆ ಮತ್ತೆ Tablet ಬೇಕು ಎಂದು ಕೇಳುತ್ತಿದ್ದ. ನಾನು ನಾಳೆ ತೆಗೆದುಕೊಳ್ಳೋಣ ಎಂದು ಹೇಳಿ ಸುಮ್ಮನಾಗಿಸಿದ್ದೆ. ನನಗು ದುಡ್ಡಿನ ಮಹಿಮೆಯ ಬಗ್ಗೆ ಒಂದು ಕವಿತೆ ಬರೆಯಬೇಕು ಎಂದು ಅನ್ನಿಸಿತು ರಾತ್ರಿ ಕುಳಿತು ಬರೆದೆ.

ದುಡ್ಡಿನ ಮಹಿಮೆ
----------------
ಇದು ಥಳಕು ಬಳಕು ದುನಿಯಾ
ಇಲ್ಲಿ ಒಲವಿಗೆಲ್ಲಿ ನೆಲೆಯಾ

ಇದು ನಂದೇ ಜಗತ್ತು ಎಂದ ಪುಂಡ
ಇವನ ಮುಂದೆ ಪ್ರಾಮಾಣಿಕತೆ ಒಂದು ದಂಡ
ಖಾಲಿ ಡಬ್ಬದ ನಾದವೇ ಸುರ ಸಂಗೀತವು
ಜಾಲಿ ಗಿಡದ ಪುಷ್ಪವೇ ಮಂದಾರ ಪುಷ್ಪವು ||೧||

ದಡ್ಡನಾದರೇನು ದುಡ್ಡು ಒಂದು ಸಾಕು
ಮಧ್ಯ ಒಂದೇ ಬೇಕು, ವಿದ್ಯೆ ಯಾಕೆ ಬೇಕು
ಮುಂದೆ ಹೊಗಳಿ ಏರಿಸುವ ಜನ ಸಮೂಹವು
ಹಿಂದೆ ತೆಗಳಿ ಬೀಳಿಸುವ ಶ್ವಾನ ಸಮಾನವೂ ||೨||

ಇದು ಥಳಕು ಬಳಕು ದುನಿಯಾ
ಇಲ್ಲಿ ಒಲವಿಗೆಲ್ಲಿ ನೆಲೆಯಾ

ಮರುದಿನ ಸಂಜೆ ಆಫೀಸ್ ನಿಂದ ಬರುವ ವೇಳೆಗೆ ನನ್ನ ಅಪ್ಪ, ಅಮ್ಮ ಊರಿನಿಂದ ಬಂದಿದ್ದರು. ಮಗ Tablet ತೆಗೆದುಕೊಂಡು ಬಂದ್ಯಾ ಎಂದು ಕೇಳಿದ. ನನ್ನ ಅಮ್ಮ ಗಾಬರಿಯಿಂದ ಏನಾಯಿತು? ನಿನಗೆ ಎಂದು ಕೇಳಿದರು. ನಾನು ಏನು ಇಲ್ಲ ಮಗನಿಗೆ Tablet ಬೇಕಂತೆ ಅಂದೆ. ಅವನಿಗೆ ಏನಾಗಿದೆ? ಎಂದು ಅಜ್ಜ-ಅಜ್ಜಿ ಇಬ್ಬರು ಮತ್ತಷ್ಟು ಗಾಬರಿಯಾದರು. ಕಡೆಗೆ ಅವರಿಗೆ ಅದು ಒಂದು ಮೊಬೈಲ್ ಇದ್ದ ಹಾಗೆ ಇರುವ ಒಂದು ಇಲೆಕ್ಟ್ರಾನಿಕ್ ಉಪಕರಣ ಎಂದು ಹೇಳಿದ ಮೇಲೆ ಸಮಾಧಾನವಾಗಿ, ಇದೆಂತಹ ಹೆಸರು ಇಡುತ್ತಾರೆ ಇವರು ಎಂದು ಬೈದರು.

ಮತ್ತೆ ಸಂಜೆಗೆ ಊಟಕ್ಕೆ ಕುಳಿತಾಗ ಮಡದಿ ನಾಳೆಗೆ ನಿಮಗೇನು ವೋಟ್ಸ್ ಎಂದು ಕೇಳಿದಳು. ಅದಕ್ಕೆ ನಾಳೆ ಏನು ಎಲೆಕ್ಷನ್ ಇದೇನಾ ಎಂದು ನನ್ನ ಅಮ್ಮ ಮುಗ್ದತೆಯಿಂದ ಕೇಳಿದಳು. ಅದು ವೋಟ್ಸ್ ಎಂದರೆ ಅದು ತಿನ್ನುವ ವಸ್ತು ಎಂದು ಅದರ ಪಾಕೆಟ್ ತಂದು ತೋರಿಸಿದ ಮೇಲೆ ಅಮ್ಮ, ಇದೇನೋ ವಿಚಿತ್ರವಾಗಿ ಹೆಸರು ಇಡುತ್ತರೋ ಈ ಆಂಗ್ಲರು ಅವರನ್ನು ನಮ್ಮ ಅಂಗಳಕ್ಕೆ ಬಿಟ್ಟಿದ್ದೆ ನಮ್ಮ ತಪ್ಪು ಎಂದು ಆಡುತ್ತಿದ್ದಳು. ಅದಕ್ಕೆ ಅಪ್ಪ ಅಮ್ಮನಿಗೆ ಅವರನ್ನು ನಮ್ಮ ಅಂಗಳಕ್ಕೆ ಬಿಟ್ಟಿದ್ದರಿಂದ ಮೊಬೈಲ್, ಟಿ ವಿ, ಕಂಪ್ಯೂಟರ್ ಎಂದು ಎಷ್ಟೊಂದು ಉನ್ನತಿಯನ್ನು ನಾವು ಕಾಣುತ್ತಿದ್ದೇವೆ. ಸುಮ್ಮನೆ ಏನೇನೋ ಮಾತನಾಡಬೇಡ ಎಂದು ಬೈದರು. ಮತ್ತೆ ಮೊನ್ನೆ ನಿಮ್ಮ ಅಮ್ಮ "ಅಳಗುಳಿಮನೆ" ಎಂಬ ಹೆಸರನ್ನು ಕೇಳಿ, ಇದೇನು ಇವರ ತಲೆ ಅಳುಬುರುಕ ಮನೆ ಎಂದು ಧಾರಾವಾಹಿಯ ಹೆಸರು ಇಟ್ಟಿದ್ದಾರೆ ಎಂದು ಬೈಯುತ್ತಿದ್ದಳು ಎಂದರು. ಕಡೆಗೆ ನಾನು ಅದು ಒಂದು ಆಟದ ಸಾಮಾನಿನ ಹೆಸರು ಎಂದು ಹೇಳಿದೆ ಎಂದು ನಗಹತ್ತಿದರು. ಅದಕ್ಕೆ ಅಮ್ಮ ನಿಮಗೆ ನಾನೆಂದರೆ ತಮಾಷೆ ಎಂದು ಕೋಪ ಮಾಡಿಕೊಂಡು ಬಿಟ್ಟಳು. ಇವರಿಬ್ಬರ ಜಗಳ ನೋಡಿ ನನ್ನ ಮಗ ನಗುತ್ತಲಿದ್ದ. ಊಟ ಮುಗಿಸಿ ಎಲ್ಲರೂ ನಿದ್ದೆಗೆ ಜಾರಿದೆವು.

Monday, September 17, 2012

ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ....

ಖ್ಯಾತ ಹಾಸ್ಯ ಸಾಹಿತಿಗಳ ಫೋಟೋ ಇರುವ ಪುಸ್ತಕಗಳನ್ನು ಮುಚ್ಚಿಕೊಂಡು ಬರುತ್ತೇನೆ. ಖಂಡಿತವಾಗಿಯೂ, ಅವರ ಭಾವ-ಚಿತ್ರ ನೋಡಿಯೇ ನಗು ಬರುತ್ತೆ, ಆದರೆ, ಇದರಿಂದ ನನ್ನ ಮಡದಿಯ ಭಾವ ಬದಲಾಗುತ್ತೆ. ಅದನ್ನು ನೋಡಿ, ಏನ್ರೀ, ಮತ್ತೊಂದು ಪುಸ್ತಕನಾ?, ಇರುವ ಪುಸ್ತಕ ಮೊದಲು ಓದಿ ಮುಗಿಸಿ ಎಂದು ಬೈಯುತ್ತಾಳೆ. ಆಗ ಹಾಸ್ಯ ಸಾಹಿತಿಗಳ ಭಾವ ಚಿತ್ರ, ನನ್ನ ನೋಡಿ ನಕ್ಕ ಹಾಗೆ ಅನ್ನಿಸುತ್ತೆ. ಆದರೂ ಹೊಸ ಹೊಸ ಪುಸ್ತಕಗಳನ್ನು ಕೊಳ್ಳುವುದನ್ನು ಬಿಟ್ಟಿಲ್ಲ. ಮೊನ್ನೆ ಮುಂಜಾನೆ ಪೇಪರ್ ನಲ್ಲಿ ಕಾರ್ಯಕ್ರಮ ಪಟ್ಟಿ ಓದುತ್ತಾ ಕುಳಿತ್ತಿದ್ದೆ. ಅಲ್ಲಿ ಶ್ರೀ ಜೋಗಿ ಅವರ "ಗುರುವಾಯನಕೆರೆ" ಮತ್ತು "ಹಲಗೆ ಬಳಪ" (ಹೊಸ ಬರಹಗಾರರಿಗೆ ಉಪಯೋಗವಾಗುವ) ಪುಸ್ತಕಗಳ ಬಿಡುಗಡೆ ಇತ್ತು. ಪುಸ್ತಕ ಬಿಡುಗಡೆಗೆ ಹೋದರೆ ತುಂಬಾ ಫಾಯಿದೆ ಇರುತ್ತವೆ. ರುಚಿಯಾದ ತಿಂಡಿ, ಕಾಫಿ ಅಲ್ಲದೆ ಪುಸ್ತಕಗಳು ರಿಯಾಯತಿ ದರದಲ್ಲಿ ಸಿಗುತ್ತವೆ. ಮತ್ತು ತುಂಬಾ ಗೆಳೆಯರ ಪರಿಚಯ ಮತ್ತು ಒಳ್ಳೊಳ್ಳೆ ಪ್ರಖ್ಯಾತರ ಭಾಷಣ ಕೇಳಲು ಸಿಗುತ್ತೆ. ಅದನ್ನು ನೋಡಿ ತುಂಬಾ ಖುಷಿಯಿಂದ "ಅರೆ ಜೋಗಿ..." ಎಂದು ಹಾಡಲು ಶುರು ಮಾಡಿದೆ. ಅದನ್ನು ನೋಡಿ ಏನು ರಾಯರು ತುಂಬಾ ಖುಷಿಯಿಂದ ಇದ್ದೀರಿ ಎಂದಳು. ನಾನು ಬೇಗನೆ ಪೇಪರ್ ಮಡಚಿ ಇಟ್ಟೆ. ಏಕೆಂದರೆ, ಅವಳಿಗೂ ಪೇಪರ್ ನಲ್ಲಿ ಇರುವ ಎಲ್ಲ ಮಾಹಿತಿಗಳು ಚಿರ ಪರಿಚಿತವಾಗಿತ್ತು. ಮಗ ಬೇಗ ಎದ್ದು ಅಮ್ಮ ಅಮ್ಮ .. ಎಂದು ರಾಗ ಎಳೆಯುತ್ತಿದ್ದ. ನಾನು ಹೋಗಿ ಬಾ ಕಂದ ಎಂದು ಕರೆದುಕೊಳ್ಳಲು ಹೋದೆ. ಮತ್ತಷ್ಟು ಜೋರಾಗಿ ಅಮ್ಮ ಅಮ್ಮ ಎಂದು ಅಳುತ್ತ ಕುಳಿತ. ಒಂದೆರಡು ದಿವಸದಿಂದ ಅಪ್ಪ ಅಪ್ಪ ಎಂದು ಏಳುತ್ತಿದ್ದವನು, ಇವತ್ತು ಎದ್ದು ಅಮ್ಮ ಎಂದಿದ್ದು ನೋಡಿ, ಮಡದಿಗೆ ಲೇ ಇವತ್ತು ಮಗ ಪಕ್ಷ ಬದಲಿಸಿದ್ದಾನೆ ಎಂದೆ. ಮೊದಲೇ ಸಿಲಿ೦ಡರ್ ರೇಟ್ ಜಾಸ್ತಿ ಮಾಡಿದ್ದಕ್ಕೆ ಕೋಪದಿಂದ ಇದ್ದ ಮಡದಿ ಏನ್ರೀ, ನನ್ನನ್ನು ಯಾವ ಪಕ್ಷಕ್ಕೂ ಸೇರಿಸಬೇಡ ಎಂದು ಸಿಡಿದೆದ್ದಳು. ಲೇ ನೀನೆ ತಾನೇ ಆಡಳಿತ ಪಕ್ಷದ ಹೈ ಕಮಾಂಡ್ ಎಂದೆ. ನನ್ನದೇನಿದ್ದರು ನಿನ್ನ ಮಾತು ಕೇಳುವುದು ಅಷ್ಟೇ ಎಂದೆ. ಕಡೆಗೆ ಮಡದಿಗೆ ನನ್ನ ಗೆಳೆಯ ಸಂತೋಷ ಫೋನ್ ಮಾಡಿದ್ದಾನೆ ಅವನ ಮನೆಗೆ ಹೋಗಬೇಕು ಎಂದು ಸುಳ್ಳು ಹೇಳಿ, ಬೇಗನೆ ರೆಡಿ ಆಗಿ ಮನೆಯಿಂದ ಹೊರಬಿದ್ದೆ. ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ತುಂಬಾ ಪ್ರಸಿದ್ದ ವ್ಯಕ್ತಿಗಳು ಬಂದಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ಪುಸ್ತಕ ಖರೀದಿಸಿ ಮನೆಗೆ ಹೋಗುವ ಬದಲು, ನನ್ನ ಮನೆಯ ಪಕ್ಕದಲ್ಲೇ ಇರುವ ಮನೋಜನ ಮನೆಗೆ ಹೋಗಿ, ಆ ಪುಸ್ತಕ ಕೊಟ್ಟು, ಮರುದಿನ ಮಡದಿಗೆ ತಿಳಿಯದ ಹಾಗೆ ತಂದು ಇಟ್ಟರೆ ಆಗುತ್ತೆ ಎಂದು ಮನೋಜನ ಮನೆಗೆ ಹೋದೆ.


ಅಷ್ಟರಲ್ಲಿ ನಮ್ಮ ಮಂಜ ಕೂಡ ಹಾಜರ ಆದ. ಮನೋಜ ಮಗನಿಗೆ "ಲೋ.. ಲೋಹಿತಾ ಬೇಗ ಎದ್ದು, ಮುಖ ತೊಳೆದುಕೊಂಡು, ದೇವರಿಗೆ ನಮಸ್ಕಾರ ಮಾಡೋ" ಎಂದು ಕೂಗುತ್ತಿದ್ದ. ಲೋಹಿತ ಮುಖ ತೊಳೆದುಕೊಂಡು ಬಂದು, ನನ್ನ ಪಕ್ಕ ಕುಳಿತುಕೊಂಡ. ಮನೋಜ ಮತ್ತೆ ಜೋರಾಗಿ ಲೇ.. ದೇವರಿಗೆ ನಮಸ್ಕಾರ ಮಾಡೋ ಎಂದು ಕಿರುಚಿದ. ಆಗ ಮಂಜ ಲೇ ನಿನ್ನ ಕಿರುಚಾಟಕ್ಕೆ ದೇವರು ಹೆದರಿ ದೇವರ ಮನೆಯಿಂದ ಓಡಿ ಹೋಗಿದ್ದಾರೆ, ನಮಸ್ಕಾರ ಯಾರಿಗೆ ಮಾಡಬೇಕು ಎಂದು ಮಂಜ ಛೇಡಿಸಿದ. ಲೇ.. ನೀನೊಂದು ಸುಮ್ಮನೆ ಕುಳಿತುಕೋ ಎಂದು ಹೇಳಿದ. ಕಡೆಗೆ ಮನೋಜನ ಮಗ ನಮಸ್ಕಾರ ಮಾಡಿ ಅಳುತ್ತ ಬಂದ. ಮಂಜ ಟಿ ವಿ ಚಾನೆಲ್ ಚೇಂಜ್ ಮಾಡಿದ. ಅದರಲ್ಲಿ "ದೊಡ್ಡವರೆಲ್ಲ ಜಾಣರಲ್ಲ..." ಎಂಬ ಗುರು-ಶಿಷ್ಯ ಚಲನಚಿತ್ರದ ಹಾಡು ಹತ್ತಿತು. ಮಂಜ ಲೋಹಿತನಿಗೆ ನೋಡು ಸರಿಯಾಗಿದೆ ಹಾಡು ದೊಡ್ಡವರೆಲ್ಲ ದಡ್ಡರು, ಸಣ್ಣವರು ಶ್ಯಾಣ್ಯ ಎಂದು ಮತ್ತು ನಿಮ್ಮ ಅಪ್ಪನಿಗೆ ಬಾಲ್ಯ ಎಂದರೆ ಗೊತ್ತೇ ಇಲ್ಲ ಕಣೋ, ಅವಿನಿಗೆ ಎರಡು ಬಾಲ(ಬಾಲ ಮತ್ತು ಅದರ ಕೆಳಗೆ ಮತ್ತೊಂದು ಮಂಗ್ಯಾನ್ ಬಾಲ) ಇದೆ ಎನ್ನುವುದು ಮಾತ್ರ ಗೊತ್ತು ಎಂದ.

ಅಷ್ಟರಲ್ಲಿ, ಒಬ್ಬರು ಮನೋಜನ ಹತ್ತಿರ ಭವಿಷ್ಯ ಕೇಳುವುದಕ್ಕೆ ಬಂದರು. ಅವರು ತಮ್ಮ ಮನೆಯಲ್ಲಿ ದಿನವು ಜಗಳ ಎಂದು ಹೇಳಿದರು. ಮನೋಜ ಅವರ ಕುಂಡಲಿ ಪರೀಕ್ಷಿಸಿ ಲೆಕ್ಕ ಹಾಕಿ, ಅವರಿಗೆ ಒಂದಿಷ್ಟು ಪೂಜೆಗಳನ್ನೂ ಮಾಡಿಸಲು ಹೇಳಿದ. ಮತ್ತೆ, ನಿಮ್ಮ ಮನೆಯಲ್ಲಿ ಶಿವ-ಪಾರ್ವತೀ, ಗಣೇಶ, ಸುಬ್ರಮಣ್ಯ ಇರುವ ಫೋಟೋ ಇದ್ದರೆ, ತೆಗೆದು ಬಿಡಿ ಎಂದ. ಬಂದವರು, ಏನಾಗುತ್ತೆ ಇದ್ದರೆ ಎಂದು ಕೇಳಿದರು. ಶಿವನ ವಾಹನ ನಂದಿ, ಪಾರ್ವತೀ ವಾಹನ ಸಿಂಹ, ಗಣೇಶನ ವಾಹನ ಇಲಿ, ಸುಬ್ರಮಣ್ಯ ವಾಹನ ನವಿಲು. ಶಿವನ ಕೊರಳಲ್ಲಿ ಇರುವುದು ಹಾವು. ಅದಕ್ಕೆ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುವುದಿಲ್ಲ. ಅದಕ್ಕೆ ನಿಮ್ಮ ಮನೆಯಲ್ಲಿ ಪ್ರತಿ ದಿವಸ ಜಗಳ ಆಗುತ್ತಿದೆ ಎಂದ. ಮಂಜನಿಗೆ ಸಕ್ಕತ ಕೋಪ ಬಂತು. ಲೇ... ಅದು ಪ್ರೀತಿ - ಸೌಹಾರ್ಧತೆಯ ಸಂಕೇತ. ತಿಳುವಳಿಕೆ ಇರುವ ಮನುಷ್ಯರಾದ ನಮಗೆ ಆ ಬುದ್ದಿ ಇಲ್ಲ. ಏನೇನೋ ಹೇಳಿ ತಲೆ ಕೆಡಿಸ ಬೇಡ. ಇದು ಯಾವ ಪುಸ್ತಕದಲ್ಲಿ ಬರೆದಿದೆ ಹೇಳು ನೋಡೋಣ ಎಂದು ಸವಾಲೆಸೆದ. ಮತ್ತೆ ಮೊನ್ನೆ ಬಂದಾಗ, ಒಬ್ಬರಿಗೆ ನಿಂತಿರುವ ಶ್ರೀ ಸೀತ-ರಾಮರ ಫೋಟೋ ಮನೆಯಲ್ಲಿ ಇಟ್ಟುಕೊಳ್ಳಬೇಡಿ ಎಂದು ಹೇಳುತ್ತಿದ್ದ. ಅದು ವನವಾಸಕ್ಕೆ ಹೋಗುವ ಲಕ್ಷಣವಂತೆ, ನಿನ್ನ ತಲೆ ಕೆಟ್ಟಿರಬೇಕು ಎಂದು ಝಾಡಿಸಿದ. ಒಬ್ಬರು ನಿನ್ನ ಹಾಗೆ ಮನೆಯಲ್ಲಿರುವ ಶ್ರೀ ವೆಂಕಟೇಶ ದೇವರ ಫೋಟೋ ಎಲ್ಲವನ್ನು ತೆಗೆದು ಹಾಕಿದ್ದರು. ಏಕೆ? ಎಂದು ಕೇಳಿದರೆ ನಿನ್ನ ಹಾಗೆ ಯಾರೋ ಒಬ್ಬರು ಅವರಿಗೆ ಹೇಳಿದ್ದರಂತೆ ಅದನ್ನು ಹಾಕಿಕೊಂಡರೆ ಮನೆ ತುಂಬಾ ಸಾಲ ಆಗುತ್ತಂತೆ ಎಂದು. ಕಡೆಗೆ ನಾನು ಬುದ್ಧಿ ಹೇಳಿದೆ, ಒಂದೇ ತಿಂಗಳಲ್ಲಿ ಅವರಿಗೆ ಸಾಲಾ ಬಂದ(ಹೆಂಡತಿ ಅಪ್ಪನಿಗೆ ಮಗ ಹುಟ್ಟಿದ, ಅದು ಅವರ ಮಾವ ತಿರುಪತಿ ವೆ೦ಕಪ್ಪನಿಗೆ ಹರಕೆ ಹೊತ್ತಮೇಲೆ ಹತ್ತನೇ ಮಗು ಗಂಡು ಆಗಿತ್ತು). ಮತ್ತೆ ನಾವು ದಕ್ಷಿಣಕ್ಕೆ ಮುಖ ಇರುವ ಮನೆಯನ್ನು ತೆಗೆದುಕೊಳ್ಳುವುದಿಲ್ಲ. ವರದಕ್ಷಿಣೆ ಬಂದರೆ ಬಿಡುವುದಿಲ್ಲ. ದೇವರ ಸನ್ನಿಧಾನಕ್ಕೆ ಹೋದಾಗ ಪ್ರದಕ್ಷಿಣೆ ಹಾಕುತ್ತೇವೆ. ಯಾರಾದರು ದಕ್ಷಿಣೆ ಕೊಟ್ಟರೆ ಬಿಡದೆ ತೆಗೆದುಕೊಳ್ಳುತ್ತವೆ ಎಂದು ಬೈದ. ಮೊನ್ನೆ ಇವನ ಕಡೆ ನನ್ನ ಅಳಿಯನ ಒಂದು ಕುಂಡಲಿ ತೆಗಿಸಿಕೊಂಡು ಹೋಗಿದ್ದೆ. ಅವನು ಹುಟ್ಟಿದ ವಾರ ಬುಧವಾರ ಎಂದು ಬರೆದಿದ್ದ. ಕಂಪ್ಯೂಟರ್ ನಲ್ಲಿ ನೋಡಿದರೆ ಮಂಗಳವಾರ ಎಂದು ಬರುತಿತ್ತು. ಬಂದು ಕೇಳಿದರೆ, ನನ್ನ ಪಂಚಾಗದಲ್ಲಿ ಎಂದು ತಪ್ಪು ಆಗುವುದಿಲ್ಲ ಎಂದು ನನಗೆ ಹೇಳಿದ್ದ. ಅದಕ್ಕೆ ನಾನು ಹಾಗಾದರೆ ಎಷ್ಟೋ ಬ್ಯಾಂಕ್ ಗಳು ಕಂಪ್ಯೂಟರ್ ಉಪಯೋಗಿಸುತ್ತಾರೆ. ವಾರ ತಪ್ಪು ಆಗಿದ್ದರೆ ಎಷ್ಟೋ ಲೆಕ್ಕ ತಪ್ಪುತ್ತಿತ್ತು ಎಂದೆ. ಅದಕ್ಕೆ ನಾನು ದುಡ್ಡನ್ನು ಬ್ಯಾಂಕ್ನಲ್ಲಿ ಇಟ್ಟೆ ಇಲ್ಲ, ನನ್ನದೇನಿದ್ದರು ಬರಿ ರೋಕ್ ಮಾತ್ರ ಎಂದ. ಈಗ ನೋಡಿದರೆ ದೇವರ ಸುತ್ತ ಏನೇನೋ ಹೇಳುತ್ತಾನೆ ಎಂದು ಬೈದ. ಅಷ್ಟರಲ್ಲಿ ಭವಿಷ್ಯ ಕೇಳಲು ಬಂದ ಆಸಾಮಿ ಮನೋಜನಿಗೆ ದಕ್ಷಿಣೆ ಕೊಡದೆ, ನಾನು ಹೊರಡುತ್ತೇನೆ ಎಂದು ಹೊರಟು ಹೋದರು.

ಇಲ್ಲೇ ಕುಳಿತರೆ ಮಂಜ ಮತ್ತೆ ನನ್ನ ಬಗ್ಗೆ ಏನಾದರು ಶುರು ಮಾಡಿದರೆ ಕಷ್ಟ ಎಂದು, ಪುಸ್ತಕವನ್ನು ಮನೋಜನಿಗೆ ಕೊಟ್ಟು ನಾಳೆ ಬಂದು ತೆಗೆದು ಕೊಳ್ಳುತ್ತೇನೆ ಎಂದು ಹೇಳಿ ಮನಗೆ ಹೋದೆ. ಮನೆಯಲ್ಲಿ ಸಂತೋಷ ತನ್ನ ಮಡದಿ ಮಗಳ ಸಮೇತ ಹಾಜರ ಆಗಿದ್ದ. ನನ್ನ ಮುಖದಲ್ಲಿ ಇದ್ದ ಸಂತೋಷ ಮಾತ್ರ ಮಾಯವಾಗಿತ್ತು. ಅಷ್ಟರಲ್ಲಿ ಮನೋಜನ ಮಗ ಲೋಹಿತ್ "ಅಂಕಲ್ ನಿಮ್ಮ ಪುಸ್ತಕ ಅಲ್ಲೇ ಮರೆತು ಬಂದಿದ್ದೀರಾ" ತೆಗೆದುಕೊಳ್ಳಿ ಎಂದು ಕೊಟ್ಟು ಹೋದ. ಮಡದಿ ಸಂತೋಷನ ಪರಿವಾರ ಹೋದ ಮೇಲೆ ಕೋಪದಿಂದ ಮಾತು ಬಿಟ್ಟಿದ್ದಳು. "ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ" ಎಂದು ಡಿ ವಿ ಜಿ ಅವರು ಹೇಳಿದ್ದಾರೆ ಎಂದೆ. ನೀವು ಮಸ್ತಕ ಬೆಳೆಯುತ್ತೆ ಎಂದು ಕಷ್ಟಕ್ಕೆ ಆಗುವ ದುಡ್ಡು ಪೋಲು ಮಾಡುತ್ತ ಇದ್ದೀರಾ? ಎಂದಳು. ಇನ್ನು ಮೇಲಿಂದ ಇರುವ ಎಲ್ಲ ಪುಸ್ತಕ ಓದುವವರೆಗೂ, ಯಾವುದೇ ಪುಸ್ತಕ ಖರಿದಿಸುವುದಿಲ್ಲ ಎಂದು ಹೇಳಿದ ಮೇಲೆ ಸ್ವಲ್ಪ ಕೋಪ ಕಡಿಮೆ ಮಾಡಿಕೊಂಡಿದ್ದಳು. ಹಾಗೇನಾದರು ತಂದರೆ ರಸ್ತೆಗೆ ಒಗೆಯುತ್ತೇನೆ ಎಂದಳು. ಲೇ ಅದು ಸರಸ್ವತಿ ಕಣೇ... ಎಂದೆ. ನಗುತ್ತ ಅದನ್ನಲ್ಲಾ ನಿಮ್ಮನ್ನು ಎಂದಳು...

Thursday, August 23, 2012

ತರ್ಲೆ ಮಂಜನ ಗೇಲಿ ಸ್ವಭಾವ ....


ಮಂಜನ ಮಡದಿಯಿಂದ ನನಗೆ ಮತ್ತು ಮನೋಜನಿಗೆ ರಾಖಿ ಕಟ್ಟಿಸಿಕೊಳ್ಳಲು ಆಹ್ವಾನ ಬಂದಿತ್ತು. ಮನೋಜ ಮೊದಲೇ ಹಾಜರ್ ಆಗಿ, ಪೇಪರ್ ಓದುತ್ತ ಕುಳಿತಿದ್ದ. ಕೆಳಗೆ ಇರುವ ಸುಖಮಯ ದಾಂಪತ್ಯಕ್ಕೆ ಉಪಯೋಗಿಸಿ ಎಂದು ಸುಂದರ ತರುಣಿಯ ಜಾಹಿರಾತು ರಾರಾಜಿಸುತ್ತಿತ್ತು. ಮಂಜ ಏನಪ್ಪಾ? ನಿನಗೂ ಔಷಧಿ ಬೇಕಾ? ಎಂದು ಗೇಲಿ ಮಾಡಿದ.  ಮನೋಜ ಲೇ.. ನಾನು ಮೇಲಿನ ಸುದ್ದಿ ಓದುತ್ತಿರುವೆ ಎಂದ. ಈ ಸುಂದರ ತರುಣಿಯನ್ನು ನೋಡಿದರೆ ಸಾಕು ಸುಖಮಯ ಆಗಬೇಕು. ಆದರೂ ಆಗಿಲ್ಲಾ ಎಂದರೆ, ಅದನ್ನು ಉಪಯೋಗಿಸಿದ ಮೇಲೆ ಆಗುತ್ತಾ? ಗೊತ್ತಿಲ್ಲ. ನನಗಂತೂ ಅದರ ಅಗತ್ಯ ಬಿದ್ದಿಲ್ಲಾ, ನಿನಗೆ ಏನೋ ಬೇಕಾಗಿರಬೇಕು ಎಂದು ಮಂಜನಿಗೆ ಡೈಲಾಗ್ ಹೊಡೆದ. ಅಷ್ಟರಲ್ಲಿ ಮಂಜನ ಮಡದಿ ಅಡುಗೆ ಮನೆಯಿಂದ ಬಂದಿದ್ದರಿಂದ ಎಲ್ಲರು ಸುಮ್ಮನಾದೆವು.
ಮಂಜನ ಮಡದಿ ಇಬ್ಬರಿಗೂ ರಾಖಿ ಕಟ್ಟಿದಳು. ನಾನು ಮನೋಜನಿಗೆ ಏನಪ್ಪಾ? ಒಂದೇ ಒಂದು ರಾಖಿ ಎಂದೆ. ಅದಕ್ಕೆ ಕಾರಣ ಇತ್ತು.  ಶಾಲೆಗೆ ಹೋಗುವ ಸಮಯದಲ್ಲಿ ಮನೋಜನ ಕೈ ತುಂಬಾ ರಾಖಿಗಳು ಇರುತ್ತಿದ್ದವು. ಆದರೆ, ಈಗ ಒಂದೇ ಒಂದು. ಅದಕ್ಕೆ ರಾಖಿ ಹಬ್ಬ ಬಂತು ಎಂದು ದುಡ್ಡನ್ನು ಖರ್ಚು ಮಾಡದೇ ಕೂಡಿಸಿ ಇಡುತ್ತಿದ್ದ. ಅದಕ್ಕೆ ಮನೋಜ ಮಾತನಾಡದೆ, ಮಂಜನ ಮುಖ ನೋಡಿದ. ಮಂಜ ಇವನಿಗೆ ಅಷ್ಟೊಂದು ಅಕ್ಕ-ತಂಗಿಯರು ಇದ್ದರು ಎಂದು  ಗೇಲಿ ಮಾಡಿ ನಗಹತ್ತಿದ. ಅವನಿಗೆ ಯಾರಾದರು ಶಾಲೆಯಲ್ಲಿ, ಹುಡುಗಿಯರು ಕಟ್ಟುತ್ತಾರೆ ಎಂಬ ಭಯದಿಂದ, ಅವನೇ ಅಷ್ಟು ರಾಖಿ ಖರೀದಿಸಿ ನನ್ನ ಕೈಯಲ್ಲೇ ಕಟ್ಟಿಸಿಕೊಳ್ಳುತ್ತಿದ್ದ ಎಂದ. ನನಗೆ ೫೦ ರುಪಾಯಿ ಫಾಯಿದೆ ಆಗುತಿತ್ತು, ಅದಕ್ಕೆ ಯಾರಿಗೂ ಹೇಳಿರಲಿಲ್ಲ ಎಂದ. ನನಗೂ ಮನೋಜನ ಚಿದಂಬರ ರಹಸ್ಯ ಕೇಳಿ ನಗು ಬಂತು. ಕಡೆಗೆ ಮಂಜನ ಮಡದಿಗೆ ದುಡ್ಡು ಕೊಟ್ಟು, ತಿಂಡಿ ಮುಗಿಸಿ ಸುಬ್ಬನ ಮನೆಗೆ ಹೊರಟೆವು.
ಸುಬ್ಬನಿಗೆ ಯಾರು ರಾಖಿ ಕಟ್ಟಿರಲಿಲ್ಲ. ಅದಕ್ಕೆ, ಮಂಜ ಎಲ್ಲಿ ನಿನ್ನ ರಾಖಿ ಎಂದ. ಏಕೆಂದರೆ ಕಳೆದ ಬಾರಿ ಅವನಿಗೆ ಅವನ ತಂಗಿ ರಾಖಿ ಕಟ್ಟಿದ್ದಳು. ಆದರೆ ಈ ಬಾರಿ ಅವಳು ಅಮೇರಿಕಾಕ್ಕೆ ಹೋಗಿದ್ದರಿಂದ ಕಟ್ಟಿರಲಿಲ್ಲ. ನನಗೆ ಯಾರು ಕಟ್ಟುತ್ತಾರೆ ರಾಖಿ ಎಂದ. ಅದಕ್ಕೆ ಮಂಜ ನಿನ್ನ ಮಡದಿ ಎಂದು ಗೇಲಿ ಮಾಡಿದ, ಏಕೆಂದರೆ ಕಳೆದ ಬಾರಿ ರಾಖಿ ಧಾರ ಸಡಿಲು ಆಗಿತ್ತೆಂದು, ಮಡದಿ ಕೈಯಲ್ಲಿ ಬಿಗಿ ಮಾಡುವ ಸಮಯದಲ್ಲಿ ನಾವು ಹಾಜರ್ ಆಗಿದ್ದೆವು. ಮಂಜ ತನ್ನ ಗೇಲಿ ಮಾಡುವ ಬುದ್ಧಿ ಮಾತ್ರ ಯಾವತ್ತು ಬಿಟ್ಟಿಲ್ಲ, ಒಮ್ಮೆ ನಾನು ನನ್ನ ಲೇಖನ ಓದುತ್ತ ನಾನೇ ನಗುತ್ತಾ ಇದ್ದೆ. ಮಂಜ ಬಂದು ಅದನ್ನು ನೋಡಿ, ಬೇರೆ ಯಾರು ಓದಿ ನಗುವುದಿಲ್ಲಾ, ನೀನಾದರು ನಗಲೇ ಬೇಕು ಎಂದು ಗೇಲಿ ಮಾಡಿದ್ದ.
ಒಮ್ಮೆ ಒಬ್ಬ ಸಂಬಂದಿಕರ ಹೊಸ ಮನೆ ಗೃಹ ಪ್ರವೇಶಕ್ಕೆ ಹೋಗಿದ್ದೆವು. ಅವರ ಮನೆ ಹೆಸರು ಮಾತಾಶ್ರೀ ಎಂದು ಇತ್ತು. ಎಲ್ಲಿ? ನಿಮ್ಮ ಪಿತಾಶ್ರೀ ಎನುತ್ತ ಒಳಗಡೆ ಹೋದ. ಅವರು ಪಾಪ ಅವರ ತಂದೆಯ ಕಡೆಗೆ ಕರೆದುಕೊಂಡು ಹೋದರು. ಅವರನ್ನು ಮಾತನಾಡಿಸಿ, ಆನಂತರ ಊಟ ಮುಗಿಸಿ ಬಂದೆವು. ಮಂಜ ಮನೆಯಿಂದ ಹೊರಗಡೆ ಬಂದ ಮೇಲೆ, ನಮಗೆ ಅವರ ಮನೆ ಹೆಸರು ಮಾತಾಶ್ರೀ ಎಂದು ಏಕೆ? ಇದೆ ಹೇಳು ಎಂದ. ನಾನು ತಾಯಿ ಮೇಲೆ ಪ್ರೀತಿಯಿಂದ ಇಟ್ಟಿದ್ದಾರೆ ಎಂದೆ. ಅದು ನಿಜ ಆದರೆ ಪಿತಾಶ್ರೀ ಎಂದು ಏಕೆ? ಇಡಲಿಲ್ಲ ಗೊತ್ತ, ಅವರು ಪಿತಾಶ್ರೀ ಆಗಿರದೆ ಪೀತಾಶ್ರೀ(ಕುಡಿಯುತ್ತಿದ್ದರು) ಆಗಿದ್ದರು. ಹೀಗಾಗಿ ಶ್ರೀ ಅವರ ಬಳಿ ಇರಲಿಲ್ಲ ಎಂದ.
ಒಮ್ಮೆ ಮಂಜನ ಮನೆಗೆ ಹೋಗಿದ್ದಾಗ, ಬರಿ ಚಡ್ಡಿ ಮೇಲೆ "ಚೆಲುವೆ ಎಲ್ಲಿರುವೆ...." ಎಂದು ಹಾಡುತ್ತಿದ್ದ. ನಾನು ಹೋಗಿರುವ ಸಮಯ ಸರಿಯಿಲ್ಲ ಎಂದು ಹೋಗುತ್ತಿದ್ದೆ. ಅಷ್ಟರಲ್ಲಿ, "ಮಾನ ಕಾಪಾಡುವ ರೂಪಸಿಯೇ..." ಎನ್ನುತ್ತಾ ತನ್ನ ಪ್ಯಾಂಟ್ ಹಾಕಿಕೊಂಡು ಬಂದು ನನ್ನನ್ನು ತಡೆದ. ಅವನು ಅವನ ಹೆಂಡತಿಗೆ ಗೇಲಿ ಮಾಡುತ್ತ, ಈ ಹಾಡು ತಿರುಚಿ ಕಾಡಿಸುತ್ತಿದ್ದ, ಅವರಿಬ್ಬರ ನಡುವೆ ಸ್ವಲ್ಪ ಜಗಳ ಬಂದಿತ್ತು. ಮತ್ತೆ ಮಾತನಾಡುತ್ತ, ನನ್ನ ಹೆಂಡತಿ ಎರಡು ಗಂಡನನ್ನು ಕಟ್ಟಿಕೊಂಡಿದ್ದಾಳೆ ಎಂದ. ನಾನು ಅವನು ಹೇಳುವ ಮಾತು ಕೇಳಿ ದಂಗಾಗಿದ್ದೆ. ಒಂದು ಗಳಗಂಡ - ಇನ್ನೊಂದು ಭೋಳೆ ಗಂಡ ನಾನು ಎಂದು ನಗಿಸಿದ್ದ. ಆದರೂ, ಅವನ ಹೆಂಡತಿ ಮಾತ್ರ ಕೋಪ ಇಳಿದಿರಲಿಲ್ಲ. ಕಾಫಿ ಲೋಟ ಟೇಬಲ್ ಮೇಲೆ ಕುಕ್ಕಿ, ಸಿಟ್ಟಿನಿಂದ ಒಳಗಡೆ ಹೋದಳು. ಮತ್ತೆ ಕಾಫಿ ಮುಗಿಸಿದ ಮೇಲೆ, ಹೆಂಡತಿ ಹಳೆ ಆದ ಮೇಲೆ ಇಷ್ಟ ನೋಡಪ್ಪ, ಗೇಲಿ ಮಾಡೋ ವಸ್ತು ಆಗುತ್ತಾಳೆ. ನೀನು ನಿನ್ನ ಹೆಂಡತಿಗೆ ಹೀಗೆ ಮಾತನಾಡುತ್ತೀಯಾ? ಎಂದು ಪ್ರಶ್ನೆ ಹಾಕಿದಳು. ನಾನು ಏನು? ಹೇಳಬೇಕೋ ತಿಳಿಯದೆ ಒದ್ದಾಡಿದೆ. ಅಷ್ಟರಲ್ಲಿ ಮಂಜ ಹಳೆ ಹೆಂಡತಿ ಮತ್ತು ಹಳೆ ಹೆಂಡ ಎರಡು ಮಸ್ತ ಇರುತ್ತವೆ. ಏಕೆಂದರೆ ಎರಡು ಕಿಕ್ಕ್ ಕೊಡುತ್ತವೆ ಎಂದ. ಮಂಜನ ಮಡದಿಯ ಮುಖದಲ್ಲೂ ಮಂದಹಾಸ ಬಿರಿತು. ನಿಮ್ಮ ಗೆಳೆಯ ಎಂದು ಸುಧಾರಿಸುವುದಿಲ್ಲ ಎನ್ನುತ್ತಾ ಅಡುಗೆ ಮನೆಗೆ ಹೊರಟು ಹೋದಳು.
ಮದುವೆ ಆದ ಹೊಸತರಲ್ಲಿ, ಒಮ್ಮೆ ಮಂಜನ ಮನೆಗೆ ಅತಿಥಿಗಳು ಬಂದಿದ್ದರು. ಅವರು ತುಂಬಾ ದಿನಗಳು ಆದರೂ, ಹೋಗುವ ಮಾತೆ ಎತ್ತಲಿಲ್ಲ. ಅವನಿಗೆ ನುಂಗಲಾರದ ತುತ್ತಾಗಿತ್ತು. ಮೊದಲೇ ಮಡದಿಯ ಸಂಬಂದಿ. ಕಡೆಗೆ ತಲೆ ಕೆಟ್ಟ ಹೋಗಿತ್ತು. ಒಮ್ಮೆ ಮಂಜನ ಮನೆಗೆ ಪೊಲೀಸರು ಬಂದು, ಅದೇ ಅತಿಥಿಯ ಫೋಟೋ ತೋರಿಸಿ, ಇವರನ್ನು ಕಿಡ್ನಾಪ್ ಮಾಡಿದ್ದೀರಾ? ಎಂದು ಮನೆಗೆ ಬಂದ ಅತಿಥಿಯನ್ನು ತೋರಿಸಿದರು. ರೀ ... ನಾವೇನು ಮಾಡಿಲ್ಲ, ಬೇಕಾದರೆ ನೀವೇ ಕೇಳಿ ಎಂದು ಅತಿಥಿಗಳನ್ನು ಕೇಳಿದರು. ಅವರು ಇವರ ಉಪಚಾರ ಎಲ್ಲವನ್ನು ವಿವರಿಸಿದರು. ಅವರು ಬಂದಿದ್ದು ಪಕ್ಕದ ಬೀದಿಯಲ್ಲಿ ಇರುವ ಇನ್ನೊಬ್ಬ ಸಾವಿತ್ರಿಯನ್ನು ಹುಡುಕಿಕೊಂಡು, ಆದರೆ ಅಲ್ಲೇ ಎರಡು ತಿಂಗಳು ಝಾ೦ಡ ಹೂಡಿದ್ದರು. ಅವರ ಮನೆಯವರು ನೆಂಟರ ಮನೆಗೆ ತಲುಪಿಲ್ಲ ಎಂದು ಪೋಲಿಸ ಕಂಪ್ಲೈಂಟ್ ಕೊಟ್ಟಿದ್ದರು. ಹೀಗಾಗಿ ಮಂಜ "ಅ-ತಿಥಿ ದೇವೋ ಭಯ" ಎಂದು ಹೆಂಡತಿಯ ಯಾರೇ ಅತಿಥಿಗಳು ಬಂದರು ಗೇಲಿ ಮಾಡುತ್ತಿರುತ್ತಾನೆ.
ಒಮ್ಮೆ ಮನೋಜನ ಮನೆಗೆ ನಾನು ಮತ್ತು ಮಂಜ ಹೋಗಿದ್ದೆವು. ಅಲ್ಲಿ ಒಬ್ಬರು ತಮ್ಮ ಮಗನ ಮದುವೆಗೆ ಜಾತಕ ಹೊಂದಾಣಿಕೆ ಮಾಡಿಸಲು ಬಂದಿದ್ದರು. ನಮ್ಮ ಜೊತೆ ಹಾಗೆ ಮಾತನಾಡುತ್ತ, ಏನು? ಮಾಡೋದು ಸರ್, ತುಂಬಾ ದಿನದಿಂದ ನನ್ನ ಮಗನ ಮದುವೆ ಆಗವಲ್ಲದು, ಮೊನ್ನೆ ನೋಡಿದರೆ ಗೋತ್ರ ಹೊಂದಾಣಿಕೆ ಆಗಲಿಲ್ಲ ಎಂದರು. ಅದಕ್ಕೆ ಸುಮ್ಮನೆ ಇರದೇ, ನಮ್ಮ ಮಂಜ ಗೋತ್ರ ಹೊಂದಾಣಿಕೆ ಆಗದಿದ್ದರೆ ಏನಂತೆ? ಗಾತ್ರ ಹೊಂದಾಣಿಕೆ ಆದರೆ ಸಾಕು ಎಂದರು. ಎಲ್ಲರು ನಗೆ ಗಡಲಿನಲ್ಲಿ ತೇಲಿದ್ದೆವು. ಹಾಗೆ ಮಾತನಾಡಿಸುತ್ತ, ಕುಂಡಲಿ ಮತ್ತೆ ಹೊಂದಾಣಿಕೆ ಆಗಲಿಲ್ಲ ಎಂದು ಬೇಜಾರಿನಲ್ಲಿ, ಮನೋಜನ ಫೀಸ್ ಕೊಡದೆ ಹಾಗೆ ಹೋಗಿದ್ದರು. ಮನೋಜ ಮಾತ್ರ ಮಂಜನ ಮೇಲೆ ತುಂಬಾ ಕೋಪ ಮಾಡಿಕೊಂಡು ಬಿಟ್ಟಿದ್ದ.

Tuesday, July 31, 2012

ಭಾಷಣ ಕಾರ್ಯಕ್ರಮ....

ಮೊನ್ನೆ ನಾನು ಮಂಜ ಸಂಜೆ ಪಾರ್ಕಿನಲ್ಲಿ ವಾಕಿಂಗ್ ಹೊರಟಿದ್ದೆವು. ಯಾರೋ ಒಬ್ಬರು ಹಿಂದಿನಿಂದ ಕರೆದ ಹಾಗೆ ಅನ್ನಿಸಿತು. ತಿರುಗಿ ನೋಡಿದೆವು, ನಮ್ಮ ಹಳೆ ಸ್ನೇಹಿತ ವಿಶಾಲ. ಹೆಸರು ವಿಶಾಲ ಮಾತ್ರ, ಅವನು ಹೇಗೆ ಇದ್ದ ಎಂದರೆ, ಅವನು ನಮಗೆ "ನಮ್ಮ ಮನೆಗೆ  ಬಂದ್ರೆ,  ಏನು ತರುತ್ತೀರಾ?, ನಿಮ್ಮ  ಮನೆಗೆ ಬಂದ್ರೆ,  ಏನು ಕೊಡುತ್ತೀರ?" ಎಂದು ಕೇಳುತ್ತಿದ್ದ. ಒಂದು ನಯಾ ಪೈಸೇನು ಬಿಚ್ಚುತ್ತಿರಲಿಲ್ಲ. ಬಂದವನೇ ಕಾಫಿಗೆ ಆಹ್ವಾನಿಸಿದ. ನಾವು ಬೇಡ ಎಂದರು ಕೇಳದೆ ಕರೆದುಕೊಂಡು ಹೋದ. ತಾನೇ ದುಡ್ಡು ಕೊಟ್ಟು ಕಾಫಿ ಕುಡಿಸಿದ.  ಜ್ಯಾಸ್ತಿ ಮಾತನ್ನು ಆಡದ ಮನುಷ್ಯ, ಒಂದೇ ಸಮನೇ ಅರಳು ಹುರಿದ ಹಾಗೆ ಮಾತನಾಡುತ್ತಿದ್ದ. ನನ್ನನ್ನು ಮತ್ತು ಮಂಜನನ್ನು ಭಾನುವಾರ ಭಾಷಣ ಕಾರ್ಯಕ್ರಮಕ್ಕೆ ಆಹ್ವಾನಿಸಿದ.

ನಾವಿಬ್ಬರು ಭಾನುವಾರ ಭಾಷಣ ಕಾರ್ಯಕ್ರಮಕ್ಕೆ ಹೋದೆವು, ಕಾರ್ಯಕ್ರಮ ತುಂಬಾ ಚೆನ್ನಾಗಿತ್ತು.  ಕಡೆಗೆ ವಿಶಾಲ ತನ್ನ ವಿಶಾಲವಾದ ಹೃದಯವಂತಿಕೆ ಪ್ರದರ್ಶಿಸಿ, ನನ್ನನ್ನು ದಂಗುಗೊಳಿಸಿದ್ದ.  ಅದೇನೆಂದರೆ ಮುಂದಿನ ವಾರದ ಭಾಷಣ ಗೋಪಾಲ್ ಅವರದ್ದು, ವಿಷಯ ಅವರೇ ಹೇಳುತ್ತಾರೆ ಎಂದ. ನಾನು ವಿಧಿ ಇಲ್ಲದೆ ಸ್ಟೇಜ್ಗೆ ಹೋಗಿ ಹಾಸ್ಯದ ಬಗ್ಗೆ ಭಾಷಣ ಎಂದು ಹೇಳಿ ಬಂದೆ. ಮಂಜ ಸಧ್ಯ ಬಚಾವ್ ಆಗಿದ್ದ. ನಾನು ಎಂದಿಗೂ ಭಾಷಣವನ್ನು ಮಾಡಿದವನಲ್ಲ, ಮನೆಯಲ್ಲಿ ಮಾಡಿದರೂ ಮಡದಿ, ಮಗ ಕಿವಿಯಲ್ಲಿ ಹಾಕಿಕೊಳ್ಳುತ್ತಿರಲಿಲ್ಲ.  ಕಡೆಗೆ ಅಂತರ್ಜಾಲ ಮತ್ತು ಮಂಜನ ಸಹಾಯದಿಂದ ಒಂದಿಷ್ಟು ಜೋಕ್ ಮತ್ತು ಬ್ಲಾಗ್ ನಿಂದ ವಿಷಯಗಳನ್ನು, ಮತ್ತೆ ನಮ್ಮ ಗಂಗಾವತಿ ಬೀಚಿ ಎಂದೆ ಖ್ಯಾತ ರಾದ ಶ್ರೀ ಪ್ರಾಣೇಶ ಅವರ ಸಿ.ಡಿ ಖರೀದಿಸಿ, ಅದರಲ್ಲಿನ ವಿಷಯಗಳನ್ನು ಸೇರಿಸಿ ಭಾಷಣವನ್ನು ತಯಾರಿ ಮಾಡಿದೆ. ಅದನ್ನು ಮಡದಿಯ ಮುಂದೆ ಹೇಳಿದೆ. ಮಡದಿ ಎಲ್ಲಾ ಚೆನ್ನಾಗಿದೆ. ಆದರೆ, ಮೊದಲು ನೀವು ನಗುವುದನ್ನು ನಿಲ್ಲಿಸಿ, ಆಮೇಲೆ ಹೇಳಿ ಎಂದಳು. ಮಾಡುತ್ತಿರುವುದು ಹಾಸ್ಯದ ಬಗ್ಗೆ ಭಾಷಣ ಕಣೇ ಎಂದೆ. ಆದರೂ  ನೀವು ನಗುವುದನ್ನು ನಿಲ್ಲಿಸಿ ಹೇಳಿ ಎಂದಳು. ಅವಳ ಆಜ್ಞೆಯಂತೆ ಮತ್ತೊಮ್ಮೆ, ಅವಳ ಮುಂದೆ ಹೇಳಿದೆ. ಮಗ ಮಾತ್ರ ನನ್ನನ್ನು ಪಿಕಿ-ಪಿಕಿ ಎಂದು ಕಣ್ಣು ಬಿಟ್ಟು ನೋಡುತ್ತಿದ್ದ. ಮೊದ-ಮೊದಲು ನಗುತ್ತಿದ್ದ ನನ್ನ ಮಡದಿ, ಆಮೇಲೆ ನಗುವುದನ್ನೇ ನಿಲ್ಲಿಸಿ ಬಿಟ್ಟಳು. ಏಕೆ? ನಗು ಬರುತ್ತಿಲ್ಲವಾ? ಎಂದೆ. ಹಾಗೇನಿಲ್ಲ, ನೀವು ನನಗೆ ತುಂಬಾ ಸರತಿ ಹೇಳಿದ್ದರಿಂದ ನಗು ಬರುತ್ತಿಲ್ಲ. ಚೆನ್ನಾಗಿದೆ ನೀವು ಚೆನ್ನಾಗಿ ತಯಾರಿ ಮಾಡಿದ್ದೀರಾ ಹೇಳಿ ಎಂದಳು.

ಮರು ದಿನ ಭಾಷಣ ಇದ್ದರಿಂದ ನಿದ್ದೆ ಚೆನ್ನಾಗಿ ಬರಲಿಲ್ಲ. ಹಾಗು-ಹೀಗು ನಿದ್ದೆ ಮುಗಿಸಿ ಬೇಗನೆ ಎದ್ದು ಮತ್ತೊಮ್ಮೆ ಎಲ್ಲವನ್ನು ಕಂಠ ಪಾಠ ಮಾಡಿ ಮುಗಿಸಿದೆ. ನನ್ನ ಮಗನಿಗೆ ಆಶ್ಚರ್ಯ ನಾನು ಎಂದು ಓದಿದವನಲ್ಲ. ಆದರೂ, ಇಷ್ಟೊಂದು ಓದುತ್ತಿರುವುದು ಸೋಜಿಗವೇ ಅನ್ನಿಸಿತು. ನನ್ನ ಮಡದಿ ತನಗೆ ಅಷ್ಟೇ ಅಲ್ಲದೆ, ನನಗು ಕೂಡ ಪಾಠ ಹೇಳಿ ಕೊಡುತ್ತಾಳೆ ಎಂದು ಅರ್ಥೈಸಿ ಕೊಂಡು ಬಿಟ್ಟಿದ್ದ. ಅಮ್ಮ-ಮಗ ಇಬ್ಬರು ನನಗೆ ಆಲ್ ದಿ ಬೆಸ್ಟ್ ಎಂದು ಹೇಳಿ ಕಳುಹಿಸಿದರು. ನಾನು ಮಂಜನ ಮನೆಗೆ ಹೋದೆ. ಮಂಜ ತನ್ನ ತರ್ಲೆ ಬುದ್ಧಿ ತೋರಿಸಿ ಪರಾರಿ ಆಗಿದ್ದ. ಕಡೆಗೆ ವಿಧಿ ಇಲ್ಲದೆ ಒಬ್ಬನೇ ಹೋದೆ.

ನಮ್ಮ ವಿಶಾಲ ಪ್ರತಿ ಬಾರಿ ನಿಮಗೆ ಕ್ರಾಂತಿಕಾರಿಗಳ ಭಾಷಣ ಇರುತಿತ್ತು. ಆದರೆ ಈ ಸಾರಿ ನಿಮಗೆ ಒಂದು ವಿಭಿನ್ನವಾದ ಹಾಸ್ಯ ಭಾಷಣ ಇದೆ ಎಂದು ಹೇಳಿ, ನನ್ನನ್ನು ಸ್ಟೇಜ್ ಗೆ ಆಹ್ವಾನಿಸಿದ. ನಾನು ನಡುಗುತ್ತ ಮೈಕ್ ಹಿಡಿದು ನನ್ನ ಭಾಷಣವನ್ನು ಧಾರವಾಡ ಭಾಷೆಯಲ್ಲಿ ಶುರು ಮಾಡಿದೆ. ವಿಶಾಲ ಹಿಂದೆ ಹೋಗಿ ಕುಳಿತುಕೊಂಡ. ತುಂಬಾ ಹೊತ್ತು ಭಾಷಣ ಮಾಡಿದರೂ, ಯಾರೊಬ್ಬರ ಮುಖದಲ್ಲೂ ಮಂದಹಾಸ ಬಿರಲಿಲ್ಲ.  ಆದರೂ ಧಾರವಾಡದಿಂದ ಬಂದ ಇಬ್ಬರು ಮಾತ್ರ ನನ್ನ ಭಾಷಣ ಕೇಳಿ ನಗುತ್ತಿದ್ದಿದ್ದು, ನನಗೆ ಮಾತ್ರ ತುಂಬಾ ಖುಷಿ ಅನ್ನಿಸಿತು. ನಮ್ಮ ವಿಶಾಲ ಮಾತ್ರ ತನ್ನ ವಿಶಾಲ ಹೃದಯ ಪ್ರದರ್ಶಿಸಿದ್ದ, ಹಿಂದೆ ಕುಳಿತು ನಿದ್ದೆ ಹೋಗಿದ್ದ. ನಾನೇನು ಜೋಗುಳ ಹಾಡುತ್ತ ಇದ್ದೇನಾ?, ಎಂದು ಅನ್ನಿಸಿತು. ನನಗೆ ಕೋಪ ಬಂದರು ತೋರಿಸಿದೆ ಸುಮ್ಮನೆ ಭಾಷಣ ಮಾಡಿ ಮುಗಿಸಿದೆ. ಯಾರೋ ಒಬ್ಬರು ಭಾಷಣ ಮುಗಿದ ಮೇಲೆ ವಿಶಾಲನನ್ನು ಎಬ್ಬಿಸಿದರು. ಕಡೆಗೆ ಎದ್ದು ನಮ್ಮ ವಿಶಾಲ ನನಗೆ ಒಂದು ಪ್ರಮಾಣ ಪತ್ರ ಕೊಟ್ಟ. ಅದನ್ನು ತೆಗೆದುಕೊಂಡು ಮನೆ ಹಾದಿ ಹಿಡಿದೆ.

ಮನೆಯಲ್ಲಿ ನಮ್ಮ ಮಂಜ ಹಾಜರ ಆಗಿದ್ದ. ಅವನಿಗೆ ಕೋಪದಿಂದ ಎಲ್ಲಿ ಹಾಳಾಗಿ ಹೋಗಿದ್ಯೋ ಎಂದು ಬೈದೆ. ನಾನು ಬಂದಿದ್ದರೇ ಮುಂದಿನ ಭಾಷಣ ಮಂಜನದು ಎಂದು ವಿಶ್ಯ ಹೇಳಿ ಬಿಡುತ್ತಿದ್ದ ಎಂದ. ನನಗೆ ಹಾಗೆ ಕರೆದರೆ ಆಗುವುದಿಲ್ಲ ಅರಿಶಿಣ-ಕುಂಕುಮ ಕೊಟ್ಟು ಕರಿಬೇಕು ಗೊತ್ತ ಎಂದ. ಎಷ್ಟೊಂದು ಬುರುಡೆ ಬಿಚ್ಚುತ್ತಿ, ನೀನು ಭಾಷಣ ಮಾಡಬೇಕಪ್ಪ ಎಂದೆ. ನೋಡು ಅವು ಮನದಾಳದ ಮಾತುಗಳು ತನ್ನ ತಾನೇ ಬರಬೇಕು, ಕಂಠ ಪಾಠ ಮಾಡಿ ಒಪ್ಪಿಸಲು ನನಗೆ ಬರುವುದಿಲ್ಲ ಎಂದ. ಹೇಗಿತ್ತು ಭಾಷಣ ಎಂದ, ನಾನು ತುಂಬಾ ಚನ್ನಾಗಿತ್ತು ಎಂದೆ. ಸುಮ್ಮನೆ ಹೇಳಬೇಡ ನಿನ್ನ ಮುಖ ನೋಡಿದರೆ ಗೊತ್ತಾಗುತ್ತೆ ಎಂದು ಗೇಲಿ ಮಾಡಿದ.

ಮರುದಿನ ಪಾರ್ಕಿನಲ್ಲಿ ನಾನು ಮಂಜ ಹೋಗುತ್ತಿದ್ದಾಗ, ವಿಶಾಲ ತನ್ನ ಅದೇ ಗುಂಪಿನ ಜೊತೆ ಜೋರಾಗಿ "ಹಾ.. ಹಾ... " ಎಂದು ನಗುತ್ತಿದ್ದರು . ನೋಡು ನೀನು ಭಾಷಣ ಮಾಡಿದರೂ ನಗದ ಜನ  ಹೇಗೆ ನಗುತ್ತಿದ್ದಾರೆ ಎಂದು ಗೇಲಿ ಮಾಡಿದ. ಒಮ್ಮೆ ಗಾಂಧಿ ಬಜಾರಿನಲ್ಲಿ ನಾನು ಮತ್ತು ಮಂಜ ಹೋದಾಗ ಮತ್ತೆ ವಿಶಾಲ ಭೇಟಿಯಾದ, ಕೈಯಲ್ಲಿ  ಸಿ.ಡಿ ಗಳು ಇದ್ದವು, ಯಾವ ಸಿ.ಡಿ ಎಂದು ಕೇಳಿದೆ. ನೋಡು ತುಂಬಾ ಚೆನ್ನಾಗಿವೆ. ಶ್ರೀ ಪ್ರಾಣೇಶ ಅವರ ಹಾಸ್ಯ ಸಿ.ಡಿ ಗಳು ಎಂದು ತೋರಿಸಿದ. ಧಾರವಾಡ ಭಾಷೆಯಲ್ಲಿ ತುಂಬಾ ಚೆನ್ನಾಗಿ ಹಾಸ್ಯ ಸಿಂಚನ ಹರಿಸುತ್ತಾರೆ ಎಂದು ನನಗೆ ಒಂದು ದೊಡ್ಡ ಭಾಷಣ ಬಿಗಿದ. ಮಂಜ ಮಾತ್ರ ನನ್ನ ಮುಖ ನೋಡಿ ನಕ್ಕಿದ್ದೆ ನಕ್ಕಿದ್ದು.

Monday, July 23, 2012

ಕಮಲೇ ಕಮಲೋತ್ಪತ್ತಿಃ....

ಮೊನ್ನೆ ನನ್ನ ಹಳೆಯ ಮಿತ್ರ ಪ್ರಶಾಂತ ಗಾಂಧೀ-ಬಜಾರಿನಲ್ಲಿ ಭೇಟಿಯಾದ, ಅವನನ್ನು ನಾವೆಲ್ಲರೂ ಪ್ರಳಯಾಂತಕ ಅಥವಾ ಪ್ರಣಯಾoತಕ ಎಂದು ಸಂಭೋದಿಸುತ್ತಿದ್ದೆವು. ನಮ್ಮ ಮಂಜ ಕೂಡ ಅವನಿಗೆ ಹೆದರುತ್ತಿದ್ದ.ಎಲ್ಲ ಕ್ಷೇಮ ಸಮಾಚಾರ ಅದ ಮೇಲೆ, ನಾನು ಬ್ಲಾಗ್,ಕಥೆ ಕವನ ಬರೆಯುತ್ತ ಇರುತ್ತೇನೆ ಎಂದಾಗ, ನನ್ನ ಗೆಳೆಯ ಪ್ರಶಾಂತ ಅಪಾದಮಸ್ತಕ ವಿಚಿತ್ರವಾಗಿ ನೋಡಿ, ನಗಲಾರಂಬಿಸಿದ. ಏಕೆ? ಎಂದು ಕೇಳಿದೆ. ನಿನಗೆ ಬರಹಗಾರರಿಗೆ ಇರಬೇಕಾದ ಆಭೂಷಣವೆ ಇಲ್ಲ ಎಂದ. ಏನಪ್ಪಾ? ಇರಬೇಕು ಎಂದು ಕೇಳಿದಾಗ, ನಿನಗೆ ಮೊದಲು ಒಂದು ಕನ್ನಡಕ ಇರಬೇಕು. ಅದು ಇಲ್ಲದಿದ್ದರೆ ಯಾರು ನೀನು ಒಬ್ಬ ಬರಹಗಾರ ಎಂದು ನಂಬುವುದಿಲ್ಲ ಎಂದ. ಕನ್ನಡಕದಲ್ಲಿ ಕನ್ನಡ ಅಡಕವಾಗಿದೆ ಗೊತ್ತ? ಎಂದು ಹಿಯಾಳಿಸಿದ. ಕಣ್ಣ ಸನ್ನೆಗಳನ್ನೇ ಅರ್ಥ ಮಾಡಿಕೊಳ್ಳೋ ಈ ಕಣ್ಣಿಗೆ, ಇಷ್ಟೊಂದು ಜೋರಾಗಿ ಹೇಳಿದರೆ ತಿಳಿಯದೆ ಇದ್ದೀತೆ?. ಒಂದೇ ಸಮನೆ ನಖರಾ ಮಾಡಹತ್ತಿದವು.

ಸಂಜೆ ಮನೆಗೆ ಹೋಗಿ, ಮಡದಿಗೆ ವಿಷಯ ತಿಳಿಸಿದೆ. ನೋಡೇ ನಾನು ಗಣೇಶನ ಮಂತ್ರ "ವಂದೇ ದೃಷ್ಟಿ ಗಣೇಶಂ ದೃಷ್ಟಿ ದೋಷಕಂ ನಾಶಕಂ ಸಮಸ್ತ ಸಿದ್ಧಿ ನಾಯಕಂ ನಮೋ ನಮೋ ವಿನಾಯಕ" ಎಂದು ಗಣೇಶನಿಗೆ ದಿನವು ಪ್ರಾರ್ಥನೆ ಮಾಡುತ್ತೇನೆ ಆದರೂ ಈ ದೃಷ್ಟಿ ದೋಷ ಏಕೆ? ಬಂತು ಎಂದೆ. ರೀ ನಿಮ್ಮದೊಂದು ಕಥೆ ಆಯಿತು. ಇನ್ನೊಬ್ಬರ ದೃಷ್ಟಿ ನಿಮ್ಮ ಮೇಲೆ ಬೀಳದಿರಲಿ ಎಂಬುದಕ್ಕಾಗಿ ಇರುವ ಮಂತ್ರ ಅದು. ನಿಮಗೆ ದೃಷ್ಟಿ ದೋಷ ಬರದಿರಲಿ ಎಂದು ಅಲ್ಲ ಎಂದಳು. ನೀವು ಹೇಳುವುದಾದರೆ ಸಂಸ್ಕಾರ ಇರುವವರು ಎಂದರೆ Some ಕಾರಗಳು ಇರುವವರು ಅಥವಾ ಸಾವುಕಾರರು ಎನ್ನುವ ಹಾಗಿತ್ತು ನಿಮ್ಮ ಧಾಟಿ ಎಂದಳು. ಲೇ ನಾನು ಅದನ್ನೇ ಹೇಳಿದ್ದು, ನನಗೆ ಸಂಸ್ಕೃತ ಅರ್ಥ ಆಗುತ್ತೆ,ಅವನ ದೃಷ್ಟಿ ನನ್ನ ಕಣ್ಣು ಮೇಲೆ ಬಿದ್ದು ನನಗೆ ಕಣ್ಣು ನೋವು ಶುರು ಆಗಿದ್ದು ತಾನೇ? ಎಂದೆ. ಅದು ಸರಿ ಎನ್ನಿ ಎಂದಳು. ಬನ್ನಿ ಡಾಕ್ಟರ ಬಳಿ ಹೋಗೋಣ ಎಂದು ಹೇಳಿದಳು.

ತುಂಬಾ ಸುತ್ತಾಡಿದರು ಒಂದು ಕಣ್ಣಿನ ವೈಧ್ಯರು ಸಿಗಲಿಲ್ಲ, ಎಲ್ಲಿ ನೋಡಿದರು ಬರಿ ದಂತ ವೈಧ್ಯರು. ೩೨ ಇರುವ ದಂತಗಳಿಗೆ ಸಿಗುವ ಆಧ್ಯತೆ ಬರಿ ಎರಡು ಇರುವ ನಮ್ಮ ಕಣ್ಣುಗಳಿಗೆ ಹೇಗೆ ತಾನೇ ಸಿಕ್ಕಿತು?. ಕಡೆಗೆ ಒಂದು ಮೆಡಿಕಲ್ ಅಂಗಡಿಯವರಿಗೆ ಒಬ್ಬ ಡಾಕ್ಟರ ವಿಳಾಸ ಕೇಳಿ ವೈಧ್ಯರ ಬಳಿ ಹೋದೆವು.

ಡಾಕ್ಟರರು ಒಬ್ಬ ಮನುಷ್ಯನ ಜೊತೆ ಜಗಳ ಮಾಡುತ್ತಿದ್ದರು. ನಾನು ಬೇಡ ಎಂದು ಹೊರಗೆ ಹೋಗುತ್ತಿದ್ದಾಗ, ಅಲ್ಲೇ ಇದ್ದ ರಿಸೆಪ್ಶನಿಷ್ಟ್ ತನ್ನ ನಿಷ್ಠೆ ಮೆರೆದು ಕರೆದು ಕೂಡಿಸಿದಳು. ವಿಧಿ ಇಲ್ಲದೆ ಕುಳಿತೆ. ನನ್ನ ಸರದಿ ಬಂದಾಗ ಒಳಗಡೆ ಹೋದೆ. ಡಾಕ್ಟರ ಜಗಳ ಮುಗಿಸಿ ಶಾಂತವಾಗಿದ್ದರು. ಆದರೂ ನಾನೇ ಕೆಣಕಿ ಕೇಳಿದೆ ಏನು? ಆಯಿತು ಎಂದು. ಡಾಕ್ಟರ ನಿಮ್ಮ ಕಣ್ಣಲ್ಲಿ ಹೊಳಪು ಇದೆ ಎಂದೆ. ಅದಕ್ಕೆ ನನ್ನ ಜೊತೆ ಜಗಳ ಮಾಡುತ್ತಿದ್ದರು ಎಂದರು. ನಾನು ಅದಕ್ಕೆ ಏನು? ತಪ್ಪು ಎಂದೆ. ಅವರು ತಪ್ಪು ತಿಳಿದು ನನ್ನನ್ನು ಏನು? ನಾಯಿ, ಬೆಕ್ಕಿಗೆ ಹೊಲಿಸುತ್ತಿ ಎಂದು ತಿಳಿದು ಜಗಳ ಮಾಡಲು ಶುರು ಮಾಡಿದ್ದರು. ನಾನು ಮತ್ತೆ ಸುಧಾರಿಸಿ ನಿಮ್ಮ ಕಣ್ಣಲ್ಲಿ ಕಾಂತಿ ಇದೆ ಎಂದೆ. ಇನ್ನಷ್ಟು ಕೋಪ ಮಾಡಿಕೊಂಡು ಬಿಟ್ಟರು. ಎಲ್ಲರು ಹೀಗೆ ಹೇಳಿ.. ಹೇಳಿ.. ಅವರಿಗೆ ಯಾವ ಹುಡುಗಿಯ ಕಾಂತನಾಗಿ (ಮದುವೆನೇ) ಮಾಡಲಿಲ್ಲವಂತೆ. ಅದಕ್ಕೆ ಇನ್ನು ಸ್ವಲ್ಪ ಕಂಠ ಬಿರುಯುವ ಹಾಗೆ ಒದರಿದರು ಎಂದು ತಮ್ಮ ಅಳಲನ್ನು ತೋಡಿಕೊಂಡರು. ಪಾಪ ಡಾಕ್ಟರರನ್ನು ನೋಡಿ ಪ್ರಶಂಸೆ ಮಾಡಿ ಬೈಸಿಕೊಂಡದ್ದು ನೋಡಿ ನಗು ಬಂತು ಆದರೂ, ನಾನೇ ಸಮಾಧಾನಿಸಿದೆ.

ಡಾಕ್ಟರ ಎಲ್ಲ ಪರೀಕ್ಷಿಸಿ ನಿಮಗೆ ಕನ್ನಡಕ ಬಂದಿದೆ ಎಂದು ಹೇಳಿದರು. ವಿಧಿ ಇಲ್ಲದೆ ಕನ್ನಡಕ ಆರ್ಡರ್ ಮಾಡಿ ಬಂದೆ. ಮರುದಿನ ಕನ್ನಡಕ ತೆಗೆದುಕೊಳ್ಳಲು ಹೋದಾಗ, ಅಲ್ಲೇ ಗೋಡೆ ಮೇಲೆ ಹಾಕಿರುವ ಐಶ್ವರ್ಯ ರೈ ಫೋಟೋ ನೋಡುತ್ತಾ ಕುಳಿತಾಗ, ನನ್ನ ಮಡದಿ ಏನ್ರೀ ಏನು ನೋಡುತ್ತ ಇದ್ದೀರಾ? ಎಂದಳು, ನಾನು ನೇತ್ರ ದಾನದ ಜಾಹಿರಾತು ನೋಡುತ್ತಾ ಇದ್ದೇನೆ ಎಂದೆ. ನಿಮ್ಮದು ಗೊತ್ತಿಲ್ಲವಾ ಸುಮ್ಮನೆ ಬನ್ನಿ ಎಂದಳು. ನೀವು ನೇತ್ರ ದಾನ ಮಾಡಿದರೆ, ಅದರ ಜೊತೆ ಕನ್ನಡಕ ಕೂಡ ಕೊಡಬೇಕು ಗೊತ್ತ ಎಂದಳು.ಆಮೇಲೆ ಬಿಲ್ಲು ನೋಡಿ, ಬರೀ ಎರಡುನುರಾ ಎಪ್ಪತ್ತು ಎಂದು ಖುಷಿಯಾಗಿ ಕೊಡಲು ಹೋದಾಗ, ನೀವು ಕನ್ನಡಕ ಧರಿಸಿ ನೋಡಿ, ಆಮೇಲೆ ಬಿಲ್ಲು ಕೊಡಿ ಎಂದು ಡಾಕ್ಟರ ಹೇಳಿದರು. ಕನ್ನಡಕ ಧರಿಸಿ ಬಿಲ್ಲು 2700 ನೋಡಿ ದಿಕ್ಕೇ ತೋಚದಾಗಿತ್ತು. ಗಾಂಧೀಜಿಯ ಚಿತ್ರವಿರುವ ನೋಟುಗಳು ನನ್ನ ನೋಡಿ ನಕ್ಕ ಹಾಗೆ ಅನ್ನಿಸಿತು, ವಿಧಿ ಇಲ್ಲದೆ ದುಡ್ಡು ಕೊಟ್ಟು ಕನ್ನಡಕ ತೆಗೆದುಕೊಂಡು ಬಂದೆ.

ಮರುದಿನ ತಿಂಡಿ ತಿನ್ನುವಾಗ, ಊಟ ಮಾಡುವಾಗ ಮತ್ತು ಕಾಫಿ ಕುಡಿಯುವಾಗ ನನಗೆ ಕನ್ನಡಕ ಅಡ್ಡ ಬಂದ ಹಾಗೆ ಅನ್ನಿಸುತಿತ್ತು.

ನಾನು ಕನ್ನಡಕ ಹಾಕಿ ಕೊಂಡು ಮಂಜನ ಮನೆಗೆ ಹೋದಾಗ ಮಂಜ ಏನಪ್ಪಾ? ಚಾಳೀಸು, ಹಾಗಾದರೆ ಚಾಲೀಸ್ ವರ್ಷ ಆಯ್ತಾ ಎಂದು ಹಿಯಾಳಿಸಿದ. ಹಾಗಾದರೆ ನಿನ್ನ ವಯಸ್ಸು ಐವತ್ತು ತುಂಬಾ ಬೇಗನೆ ಆಗಿ ಬಿಟ್ಟಿತ್ತು ಎಂದೆ. ಏಕೆಂದರೆ? ಮಂಜ ತನ್ನ ಕನ್ನಡಕ ಹಾಕಿಕೊಳ್ಳಲು ಶುರು ಮಾಡಿದ್ದು ಹತ್ತು ವರ್ಷದ ಹಿಂದೆ. ಮಂಜ ತನ್ನ ಮಡದಿಗೆ ಐದು ನೂರರ ನೋಟು ಖೋಟ ಹೌದೋ ಅಲ್ಲವೋ ಎಂದು ಹೇಗೆ ತಿಳಿಯುವುದು ಗೊತ್ತ? ಎಂದು ಕೇಳಿದ. ಅದಕ್ಕೆ ಅವನ ಮಡದಿ ಹೇಗೆ? ಎಂದು ಕೇಳಿದಳು. ಅದಕ್ಕೆ ಅವಳ ಬಳಿ ಇದ್ದ ಒಂದೇ ನೋಟನ್ನು ತೆಗೆದುಕೊಂಡು ಅದನ್ನು ಜೋರಾಗಿ ಝಾಡಿಸಿ, ನೋಡು ಕೆಳಗಡೆ ಏನಾದರು ಬಿತ್ತಾ? ಎಂದ. ಅವಳು ಮತ್ತು ನಾನು ಕೆಳಗಡೆ ನೋಡುತ್ತಿದ್ದರೆ, ನಗುತ್ತ ನೋಡು ಗಾಂಧೀಜಿ ಕನ್ನಡಕ ಕೆಳಗೆ ಬಿಳಲಿಲ್ಲ, ಇದು ನಿಜವಾದ ನೋಟು ಎನ್ನುತ್ತಾ, ಸುಮ್ಮನೆ ಅದನ್ನು ತನ್ನ ಜೋಬಿನೊಳಗೆ ಇಳಿಸಿದ. ಮಂಜನ ಮಡದಿ ನಗುತ್ತ ಒಳಗಡೆ ಕಾಫಿ ಮಾಡಿಕೊಂಡು ಬರಲು ಹೋದಳು. ಆಮೇಲೆ ಮಂಜ ಒಂದು ಗುಟ್ಟು, ನನ್ನ ಕನ್ನಡಕಕ್ಕೆ ನಂಬರ್ ಇಲ್ಲ, ಹಾಗೆ ಸುಮ್ಮನೆ ಹಾಕಿ ಕೊಳ್ಳುತ್ತೇನೆ. ಇದರಿಂದ ಒಂದು ಫಾಯಿದೆ ಇದೆ ಗೊತ್ತ?. ಇದನ್ನು ಹಾಕಿಕೊಂಡಾಗ ನೀನು ಏನು? ಬೇಕಾದರೂ ನೋಡಿದರು ನೋಡುವವರಿಗೆ ತಿಳಿಯುವುದಿಲ್ಲ.ಮತ್ತೆ ಕೆಲವರು ಸುಳ್ಳು ಹೇಳುತ್ತಿದ್ದಾರೆ ಎಂದು ಅರಿಯಲು ಅವರ ಕಣ್ಣುಗಳೇ ಸಾಕ್ಷಿ. ಅದ್ದರಿಂದ ಕಣ್ಣುಗಳು ನಮ್ಮ ಎಷ್ಟೋ ಭಾವನೆಯನ್ನು ಮುಚ್ಚಿಡಲು ತುಂಬಾ ಸಹಾಯಕಾರಿ. "ಕಮಲೇ ಕಮಲೋತ್ಪತ್ತಿಃ" ಎಂದು ನೀನು ಕೇಳಿಲ್ಲವೇ ಹೆಚ್ಚು ಜನ ತಮ್ಮ ಭಾವನೆಗಳನ್ನು ಹಿಡಿದಿರಲು ಸಾಧ್ಯವಾಗದೆ "ಕಮಲೇ ಕಲಹೋತ್ಪತ್ತಿಃ " ಆಗಿ ಕಲಹಕ್ಕೆ ನಾಂದಿ ಹಾಡುತ್ತಾರೆ. ಅದರ ಬದಲು ಕನ್ನಡಕ ಧರಿಸುವುದರಿಂದ ಇದನ್ನು ತಡೆಯಬಹುದು. ಈ ಕನ್ನಡಕದಿಂದ ಕಲಹ ಹೇಗೆ ಆಗುತ್ತೆ ಎಂದು ಹೇಳುತ್ತೇನೆ ಕೇಳು, ಒಮ್ಮೆ ನನ್ನ ಅತ್ತೆ ಕನ್ನಡಕದ ನಂಬರ್ ಬದಲಾಗಿದ್ದರೂ, ಅದನ್ನು ಬದಲಿಸಿರಲಿಲ್ಲ. ಏಕೆಂದರೆ ಅವರ ಕನ್ನಡಕ ಅವರ ಪ್ರೀತಿಯ ಅಪ್ಪ ಕೊಡಿಸಿದ್ದು ಎಂದು. ಒಮ್ಮೆ ಹೀಗೆ ಸಂಪಿಗೆ ಹೂವು ಏನು? ರೇಟ್ ಎಂದು ಒಬ್ಬರನ್ನು ಕೇಳಿದರು, ಪಾಪ ಅವರು ಅದನ್ನು ತಮ್ಮ ಮನೆಗೆಂದು ತೆಗೆದುಕೊಂಡು ಹೊರಟಿದ್ದರು. ಇದು ಕೊಡುವುದಕ್ಕೆ ಅಲ್ಲ ಎಂದರು ಕೇಳದೆ, ಎಷ್ಟು ಸೊಕ್ಕು ನಿನಗೆ ಎಂದು ಜಗಳ ಶುರು ಮಾಡಿದ್ದರು. ಪಾಪ ಅವರು ಸ್ವಲ್ಪ ಹೂವು ಕೊಟ್ಟು ಕಳುಹಿಸಿದರು, ನಮ್ಮ ಅತ್ತೆಗೆ ಎಂದು ನಗಹತ್ತಿದ. ಕಾಮಾಲೆ ಕಣ್ಣಿಗೆ ಜಗತ್ತೇ ಹಳದಿ ಅಂತೆ.ಇದೆಲ್ಲವೂ ಮಾಡಿದ್ದೂ ಇವರ ಅಮ್ಮನೇ ಎಂದಾಗ ನನಗೂ ನಗು ತಡಿಯಲು ಆಗಲಿಲ್ಲ. ನಿಮ್ಮ ಗೆಳೆಯನ ಮನುಸ್ಸು ಹೀಗೆ, ಎಲ್ಲರನ್ನು ತಮ್ಮಂತೆ ಅಳೆಯುತ್ತಾರೆ ಎಂದು ಎನ್ನುತ್ತಾ ಮಂಜನ ಮಡದಿ ಬಂದು ಕಾಫಿ ಕೊಟ್ಟರು. ಕಡೆಗೆ ಕಾಫಿ ಕುಡಿದು ಮುಗಿಸಿ ಮನೆ ದಾರಿ ಹಿಡಿದೆ.

Wednesday, July 4, 2012

ದಂತದ ಗೊಂಬೆ....

ಮಂಜ ಮತ್ತು ಸುಧೀರ್ ಇಬ್ಬರ ಮನೆ ಅಕ್ಕ-ಪಕ್ಕ ಇತ್ತು. ಇಬ್ಬರು ಒಂದೇ ಸಮಯದಲ್ಲಿ ಮದುವೆಗೆಂದು ಹೆಣ್ಣು ಹುಡುಕುತ್ತಿದ್ದರು. ಒಂದು ದಿವಸ ಮಂಜ ಒಂದು ಹೆಣ್ಣು ನೋಡುವ ಶಾಸ್ತ್ರ ಇತ್ತು.ಸಂಜೆ ಸುಧೀರ್ ನ ಅಮ್ಮ ಹೆಣ್ಣು ಹೆಂಗಿತ್ತು ಎಂದು ಮಂಜನನ್ನು ವಿಚಾರಿಸಿದರು. ಅದಕ್ಕೆ ಮಂಜ ಹುಡುಗಿ ದಂತದ ಗೊಂಬೆ ಹಾಗೆ ಇದ್ದಳು, ಸೌಂದರ್ಯ ದೇವತೆ ಆದರೆ, ನನಗೆ ಅವಳ ಖರ್ಚನ್ನು ತೂಗಿಸಲು ಆಗುವುದಿಲ್ಲ ಎಂದ. ಹಾಗೇನಾದರು ಮದುವೆ ಆದರೆ, ಒಂದು ಬ್ಯಾಂಕ್ ಲೂಟಿ ಮಾಡಬೇಕು ಅಷ್ಟೇ ಅಂದ. ಅಲ್ಲೇ ಇದ್ದ ಸುಧೀರ್ ಸುಮ್ಮನಿರದೆ ಹಾಗಾದರೆ, ನನಗೆ ಅವಳನ್ನು ತೋರಿಸು ಎಂದ. ಏಕೆಂದರೆ, ಸುಧೀರ್ ನಿಗೆ ತಲೆ ಇಲ್ಲದಿದ್ದರೂ ತಲೆತಲಾಂತರದಿಂದ ಬಂದ ಅಸ್ತಿಗೇನು ಕಡಿಮೆ ಇರಲಿಲ್ಲ. ಅದನ್ನು ಕೇಳಿದ ಅವರ ಅಮ್ಮ ಇದೇನೋ? ಕಪಿ ಚೇಷ್ಟೆ ಎಂದು ಬೈದರು. ಬೈದರೂ ಬೆಂಬಿಡದ ಬೇತಾಳದಂತೆ ಕಾಡಿ ಅವರ ಮನೆ ವಿಳಾಸ ಮತ್ತು ಕುಂಡಲಿ ಕೇಳಿ ಪಡೆದ. ಹೆಣ್ಣು ಗಂಡಿನ ಮನೆಯಲ್ಲೇ ನೋಡುವ ಶಾಸ್ತ್ರ ಇದ್ದರು, ಅವರಿಗೆ ಕರೆ ಮಾಡಿ ನಾವೇ ಹೆಣ್ಣು ನೋಡಲು ಬರುತ್ತೇವೆ ಎಂದು ಶಾಸ್ತ್ರಕ್ಕೆ ಶಸ್ತ್ರ ಚಿಕಿತ್ಸೆ ಮಾಡಿ, ಅವರ ಅಮ್ಮ ಬೇಡವೆಂದರೂ ಕೇಳದೆ ಹೇಳಿದ. ಅವರ ಮನೆಯವರು ಬರುವವರನ್ನು ಬೇಡವೆನ್ನಲು ಆಗದೆ ಬನ್ನಿ ಎಂದರು. ಸುಧೀರ್ ನ ಖುಷಿಗೆ ಪಾರವೇ ಇರಲಿಲ್ಲ. ಎಲ್ಲರಿಗೂ ಬೇಡ ಬೇಡ ಎಂದರು ಕೇಳದೆ ಪಾರ್ಟಿ ಕೊಡಿಸಿದ್ದ. ಎಲ್ಲರು ನನ್ನ ಸುಲವಾಗಿ ದೇವರಲ್ಲಿ ಪ್ರಾರ್ಥಿಸಿ ಎಂದು ಕುಡಿದ ಅಮಲಿನಲ್ಲಿ ವಿನಂತಿಸಿದ್ದ. ಮಂಜ ಸುಧೀರನಿಗೆ ಹಣ್ಣು ತೆಗೆದು ಕೊಂಡು ಹೋಗು ಎಂದು ಹೇಳಿದ್ದ.

 ಮರುದಿನ ಎಲ್ಲರೂ ಮಂಜನ ಸಮೇತವಾಗಿ ಹೆಣ್ಣಿನ ಮನೆಗೆ ಹೆಣ್ಣು ನೋಡಲು ಹೋಗಿದ್ದಾಗಿತ್ತು. ನಾವು ಹೋಗಿರುವಷ್ಟು ಜನರನ್ನು ನೋಡಿ ಹೆಣ್ಣಿನ ಮನೆಯವರು ಗಾಬರಿ ಆಗಿದ್ದರು. ನಾವು ನಿಶ್ಚಿತಾರ್ಥ ಮುಗಿಸಿಕೊಂಡೆ ಹೋಗುತ್ತೇವೆ ಎಂದು ತಿಳಿದುಕೊಂಡಿದ್ದರು. ಸುಧೀರ ಹೆಣ್ಣು ನೋಡಿ ನಾಚಿ ನೀರಾಗಿದ್ದ. ಹೆಣ್ಣು ನಿಜವಾಗಿಯು ದಂತದ ಗೊಂಬೆ ಹಾಗೆಯೇ ಇದ್ದಳು. ಅವಳ ಸಿಂಗಾರ ಕೂಡ ಅಷ್ಟೇ ಭರ್ಜರಿ ಆಗಿತ್ತು. ಸುಧೀರ ಮರು ಮಾತಿಲ್ಲದೆ ಒಪ್ಪಿ ಬಿಟ್ಟ. ಮದುವೆ ನಿಶ್ಚಿತಾರ್ಥ ಕೂಡ ನಿರ್ಧರಿಸಿದರು. ಆದರೆ ಹೆಣ್ಣಿನ ತಂದೆ ನಿಮ್ಮ ಬಳಗ ತುಂಬಾ ದೊಡ್ಡದು ಎಂದು ಕಾಣುತ್ತೆ ಎಂದರು. ಹಾಗೇನಿಲ್ಲ ಮಾವಾ ಇವರೆಲ್ಲಾ ನನ್ನ ಗೆಳೆಯರು ಎಂದು ಹೇಳಿ ಸುಮ್ಮನಾಗಿಸಿದ್ದ.

 ಒಂದು ದಿನ ಸುಧೀರ ಅವಳನ್ನು ಭೇಟಿಯಾಗಲು ಹೋಗುತ್ತಿದ್ದೇನೆ. ಏನು? ಮಾತನಾಡಬೇಕು ಹೇಳು ಎಂದು ಮಂಜನ ತಲೆ ತಿಂದಿದ್ದ. ಹೋಗಿ ಅವಳ ಹೆಸರು ಕೇಳಬೇಡ ಎಂದ. ಅದಕ್ಕೆ ಸುಧೀರ ನನಗೇನು ಅಷ್ಟು ತಲೆ ಇಲ್ಲವೇ ಅವಳ ಹೆಸರು ಪ್ರತಿಮಾ ಅದು ನನಗೆ ಗೊತ್ತು. ಮತ್ತೆ ಏನಾದರು ಹೇಳು ಎಂದು ಕೇಳಿದ್ದ. ಮಂಜ ಅವನಿಗೆ ಭೀತಿಯಿಂದ ವರ್ತಿಸಬೇಡ, ನಿನ್ನ ಹೆಸರು ಸುಧೀರ ನೆನಪಿರಲಿ ಎಂದು ತಾಕೀತ್ ಮಾಡಿದ್ದ. ಮತ್ತು ಒಂದು ಚಾಕಲೇಟ್ ತೆಗೆದುಕೊಂಡು ಹೋಗು ಎಂದು ಹೇಳಿದ್ದ. ಮರುದಿನ ಸುಧೀರನ ತುಟಿಗೆ ದೊಡ್ಡದಾದ ಗಾಯ ಆಗಿತ್ತು. ಏನೋ? ಇದು ಎಂದು ಕೇಳಿದರೂ ಯಾರಿಗೂ ಹೇಳಲಿಲ್ಲ.

ಮದುವೆ ನಿಶ್ಚಿತಾರ್ಥ ದಿವಸ ಮಂಜ ಸುಧೀರನಿಗೆ ಟೀ-ಶರ್ಟ್ ಹಾಕಿಕೋ ಎಂದು ಹೇಳಿದ್ದ. ಸುಧೀರ ಮಂಜನ ಮಾತಿನಂತೆ ಟೀ-ಶರ್ಟ್ ಹಾಕಿಕೊಂಡು ಮಣೆ ಮೇಲೆ ಕೂಡುತ್ತಿದ್ದಾಗ, ಎಲ್ಲರೂ ಸುಧೀರನನ್ನು ನೋಡಿ ನಗಲು ಶುರು ಮಾಡಿದರು. ಏಕೆಂದರೆ? ಸುಧೀರ್ ಬನಿಯನ್ನು ತೋಳು ಅವನ ಟೀ-ಶರ್ಟ್ ಕಿಂತ ದೊಡ್ಡದು ಇತ್ತು. ಅದನ್ನು ನೋಡಿ ಕೆಳ ಮಾರಿ ಮಾಡಿ ಕುಳಿತಿದ್ದ ಹೆಣ್ಣು ಕೂಡ ನೋಡಿ ನಕ್ಕಾಗ, ನಮಗೆ ಅವಳ ನಿಜವಾದ ದಂತ ದರ್ಶನ ಆದ ಮೇಲೆ, ದೂರ ದೂರ ಇರುವ ದೊಡ್ಡ ಚೂಪಾದ ದಂತಿ ಪಂಕ್ತಿಗಳು. ಸುಧೀರನಿಗೆ ಏನಾಗಿತ್ತು? ಎಂದು ಗೊತ್ತಾಗಿತ್ತು. ಆದರೆ ಇದರಲ್ಲಿ ಪಾಪ ಮಂಜನದು ಏನು? ತಪ್ಪು ಇರಲಿಲ್ಲ, ಏಕೆಂದರೆ ಅವನಿಗೆ ಆ ವಿಷಯ ತಿಳಿದಿದ್ದೆ ಅವಾಗ. ಸುಧೀರ್ ತಲೆ ಎತ್ತುವ ಧೈರ್ಯ ಮಾಡಲಿಲ್ಲ. ಕಡೆಗೆ ಮಂಜ ಅವನಿಗೆ ಟೀ-ಶರ್ಟ್ ಹೇಳಿದ್ದೆ ತಪ್ಪಾಯಿತು ಎಂದೆನಿಸಿ, ಅವನಿಗೆ ಶರ್ಟ್ ಹಾಕಿಕೊಂಡು ಬರಲು ಹೇಳಿದ. ಮತ್ತೆ ನಿಶ್ಚಿತಾರ್ಥ ಮುಗಿಸಿದರು. ಆಗ ಮದುಮಗಳ ತಂದೆ ನಾವು ನಮ್ಮ ಪುಟ್ಟಿಯನ್ನು ತುಂಬಾ ಪ್ರೀತಿಯಿಂದ ಬೆಳೆಸಿದ್ದೇವೆ. ಏನೂ ಕಡಿಮೆ ಮಾಡಿಲ್ಲ. ಚೆನ್ನಾಗಿ ನೋಡಿಕೋ ಎಂದು ಹೇಳಿದರು.

 ಮದುವೆ ಆಗುವವರೆಗೂ ನಾವು ಸುಧೀರನಿಗೆ "ಪ್ರತಿಮಾ ಚುಂಬನಂ ದಂತ ಭಗ್ನಂ" ಮತ್ತು ಅವನೇ ಅವಸರ ಮಾಡಿಕೊಂಡು ಅಪಘಾತ ಮಾಡಿಕೊಂಡ ಎಂದು ತುಂಬಾ ದಿವಸ ಅವನ ತುಟಿ ನೋಡಿ ಕಾಡಿದ್ದೆವು. ಆದರೂ ಏನು ಮಾಡಲು ಸಾಧ್ಯವಿರಲಿಲ್ಲ ಪಾಲಿಗೆ ಬಂದಿದ್ದು ಪಂಚಾಮೃತ ಎಂದು ಸುಮ್ಮನೆ ಇದ್ದ. ಮದುವೆ ವಿಚಾರವಾಗಿ ಅವನ ಮಾವ ಬಂದಾಗ, ನನ್ನ ಹಲಕಟ ಮಾವ ಬಂದಿದ್ದ ಎಂದು ಹಲ್ಲು ಕಡಿಯುತ್ತಿದ್ದ.ಅದನ್ನು ತಿಳಿದು ಅವನ ಮಾವ ಅವಳ ಹಲ್ಲುಗಳನ್ನ ಸರಿ ಮಾಡಿಸಿದ್ದರು.

ಮದುವೆಯಲ್ಲಿ ಅವಳು ಪ್ರತಿ ಮಾತಿಗೂ ನಗುತ್ತಿದ್ದಳು. ಮದುವೆ ಆದ ಮೇಲೆ ತಿಳಿಯಿತು ಅವರ ಅಪ್ಪ ಅವಳಿಗೆ ಚಿಕ್ಕವಳಿದ್ದಾಗ ತುಂಬಾ ಚಾಕ್ಲೇಟ್ ತಂದು ಕೊಡುತ್ತಿದ್ದರು. ಅದಕ್ಕೆ ಹಲ್ಲುಗಳು ಬೇಗನೆ ಹುಳುಕು ಆಗಿ ಬಿದ್ದು, ದೊಡ್ಡವಾಗಿ ಬಂದಿದ್ದವು ಎಂದು.ಈಗ ಮಂಜನನ್ನು ದಿನವು ಹೊಗಳುತ್ತಾ ಇರುತ್ತಾನೆ. ಮತ್ತು "ಹೇ...ಚಿನ್ನದ ಬೊಂಬೆಯಲ್ಲಾ, ದಂತದ ಬೊಂಬೆಯಲ್ಲಾ...ಬುದ್ಧಿ ಇರುವ ಬೊಂಬೆಯೂ...ಕಾಲವು ಕುಣಿಸಿದಂತೆ.., ಅ ವಿಧಿ ಏಣಿಸಿದಂತೆ.., ಅಡುವ ಸಮಯದಗೊಂಬೆ ಮಾನವ.."ಅನ್ನುವ ಬದಲು ಅಡುವ ಸಮಯದ ಗೊಂಬೆ ಮಾವನ ಎಂದು ಹಾಡುತ್ತ ಅವಳ ಕೈಯಲ್ಲಿ ಆಡುವ ಸಮಯದ ಗೊಂಬೆ ಆಗಿದ್ದಾನೆ.

Thursday, June 21, 2012

ಕೋಟಿ ಕೊಟ್ಟರು ಸಿಗದ ಲಕ್ಷ್ಯ ....

ಏನು? ಎಂದು ಮಡದಿಗೆ ಕೇಳಿದೆ. ಅವಳು ಮತ್ತೆ ನನಗೆ ಏನು? ಎಂದು ಕೇಳಿದಳು. ಏನೋ ಅಂದ ಹಾಗೆ ಇತ್ತು ಎಂದೆ. ನಿಮ್ಮ ಪೂರ್ವಜರು ವಿಜಾಪುರದವರ ಎಂದು ಕೇಳಿದೆ ಎಂದಳು. ಏಕೆ? ಎಂದು ಕೇಳಿದೆ. ನಿಮಗೆ ಪ್ರತಿಧ್ವನಿ ಕೇಳುವವರೆಗೂ ಉತ್ತರಿಸುವುದಲ್ಲ ಎಂದು ಕುಹಕವಾಡಿದಳು. ನಿನ್ನೆ ಆಡಿದ ಮಾತು ಇವತ್ತು ಕೇಳಿಸಿದೆ ನಾನು ಸುಮ್ಮನೆ ಇದ್ದರು, ಕರೆದ ಹಾಗೆ ಆಯಿತು ಎಂದರೆ ಏನು ಹೇಳುವುದು ಎಂದಳು. ನಿನ್ನೆ ಅವಳು ಏನೋ ಹೇಳಲು ಬಂದಾಗ ನನ್ನ ಲಕ್ಷ್ಯ ಬೇರೆಲ್ಲೋ ಇತ್ತು. ಹೀಗಾಗಿ ಅವಳಿಗೆ ಉತ್ತರಸಲಿಲ್ಲ. ಹೀಗಾಗಿ ಮತ್ತೊಮ್ಮೆ ಏನು? ಎಂದು ಕೇಳಿದಾಗ ಏನು ಇಲ್ಲ ಎಂದು ಮುನಿಸಿಕೊಂಡಿದ್ದಳು.

ಒಮ್ಮೆ ಮೈಸೂರಿಗೆ ನಮ್ಮ ನಿರ್ದೇಶಕರು ಬ೦ದಿದ್ದರು. ಅವರು ಸ್ನಾನ ಮಾಡುತ್ತೇನೆ ಎ೦ದು ನನಗೆ ಹೇಳಿ ಹೋಗುತ್ತಿದ್ದಾಗ, ನಾನು ಏನೋ? ಯೋಚನೆ ಮಾಡುತ್ತ ಸ್ನಾನಕ್ಕೆ ಹೋಗು ಎಂದು ಹಾಗೆ ಅನ್ನಿಸಿ, ನಾನು ಸ್ನಾನಕ್ಕೆ ಹೊರಟುಹೋದೆ. ಪಾಪ ನಮ್ಮ ನಿರ್ದೇಶಕರು ನನ್ನ ಸ್ನಾನ ಮುಗಿಯುವರಗೆ ಟಾವೆಲ್ ಮೇಲೆ ಹಾಗೆ ನಿಂತಿದ್ದರು. ನಮ್ಮ ಆಫೀಸ್ ಡ್ರೈವರ್ ನಮ್ಮ ನಿರ್ದೇಶಕರ ಪರಿಸ್ತಿತಿ ನೋಡಿ ಒಳಗೊಳಗೇ ನಗುತ್ತಿದ್ದ.

ಒಮ್ಮೆ ಹಾಗೆ ನಾನು ನನ್ನ ಮಗನಿಗೆ ನಿದ್ದೆಯಿಂದ ಎದ್ದು ಬಂದ ಮೇಲೆ, ಏ ಪುಟ್ಟ ಬಾತ್ ರೂಂ ನಲ್ಲಿಯ ಫ್ಯಾನ್ ಬಂದ್ ಮಾಡು ಎಂದೆ. ನನ್ನ ಹೆಂಡತಿ ಮತ್ತು ಮಗ ಇಬ್ಬರು ನಗಲು ಶುರು ಮಾಡಿದರು. ನಿಮ್ಮಪ್ಪ ಲಕ್ಷ್ಯ ಅಷ್ಟೇ ಎಂದಳು. ಕೆಲವೊಮ್ಮೆ ಬೈಕ್ ಹೊಡೆಯುತ್ತ ಪ್ಯಾಂಟಿನಲ್ಲಿ ಬೈಕ್ ಕೀ ಎಲ್ಲಿ ಎಂದು ತಡಕಾಡಿದ್ದು ಇದೆ.

ಒಮ್ಮೆ ನಾನು ಚಿಕ್ಕವನಾಗಿದ್ದಾಗ ನನ್ನ ಅಮ್ಮ ಲಕ್ಷ್ಯ ಬೇರೆ ಎಲ್ಲೋ ಇಟ್ಟು, ನನಗೆ "ಊಟ ಆದಮೇಲೆ ಊಟ ಮಾಡು" ಎಂದು ಹೇಳಿದ್ದಾಗ ನಮ್ಮ ಮನೆಯಲ್ಲಿಯ ಎಲ್ಲರು ನಗೆ ಗಡಲಿನಲ್ಲಿ ತೇಲಿ ಹೋಗಿದ್ದೆವು. ನಾನು ಇಷ್ಟು ಲೇಖನ ಬೇರೆಯುವುದಕ್ಕೆ ಅವಳೇ ಕಾರಣ. ಅವಳು ಅವತ್ತು ನನ್ನನ್ನು ನಿರ್ಲಕ್ಷ್ಯ ಮಾಡಿದ್ದರೆ ನನಗೆ ಏನು? ಬರೆಯಲು ಸಾಧ್ಯವಾಗುತ್ತಿರಲಿಲ್ಲ.

ನಾನು ಒಮ್ಮೆ ಸುಬ್ಬನ ಮನೆಗೆ ಹೋಗಿದ್ದೆ. ಅಲ್ಲೇ ಕುಳಿತಿದ್ದ ಸುಬ್ಬನ ಅಮ್ಮ ನನ್ನನ್ನು ಎಲ್ಲಿ ನಿಮ್ಮ ಸಾಥಿ ಎಂದು ಮಂಜನನ್ನು ವಿಚಾರಿಸಿದರು. ನಾನು ಮಂಜ ಮೋರಿಗೆ ಹೋಗಿದ್ದಾನೆ ಎಂದೆ. ಇಲ್ಲಿ ಯಾವ ಮೋರಿ ಯಾವಾಗ ತೆರೆದಿರುತ್ತೆ ತಿಳಿಯೋಲ್ಲ.. ಪಾಪ ಮಂಜ ಏನಾಯಿತೋ ಏನು? ಎಂದು ಬೈಯಲು ಶುರು ಮಾಡಿದರು. ನಾನು ಅದು ಒಂದು ಅಂಗಡಿಯ ಹೆಸರು ಎಂದು ಹೇಳಿದ ಮೇಲೆ, ನಿಟ್ಟುಸಿರು ಬಿಟ್ಟು ,ಅದೇನು ಅಂತ ಹೆಸರು ಇಡುತ್ತರೋ ಏನೋ? ಎಂದು ಅಂದರು. ನಮ್ಮ ಸುಬ್ಬ ನಮ್ಮ ಅಮ್ಮನ ಲಕ್ಷ್ಯ ಅಷ್ಟೇ... ಅವಳು ಏನೋ ಯೋಚನೆ ಮಾಡುತ್ತಿರುತ್ತಾರೆ. ನಮ್ಮ ಮಾತಿನ ಬಗ್ಗೆ ಲಕ್ಷ್ಯ ಇರುವುದಿಲ್ಲ ಎಂದ. ಅದಕ್ಕೆ ಅವರ ಅಮ್ಮ ಮತ್ತ್ಯಾರ ಬಗ್ಗೆ ಯೋಚಿಸಲಿ ನಿನ್ನ ಬಗ್ಗೆನೇ ಎಂದರು. ನಮ್ಮ ಬಗ್ಗೆ ಯೋಚನೆ ಮಾಡುತ್ತ , ನಮ್ಮ ಮಾತಿಗೆ ಅಲಕ್ಷ್ಯ ಮಾಡುತ್ತಿ ಎಂದು ಸುಬ್ಬ ನಕ್ಕ.

ಒಮ್ಮೆ ಹಾಗೆ ಹೋಗುತ್ತಿದ್ದಾಗ ಮಂಜನನ್ನು ನೋಡಲಿಲ್ಲ. ನಮ್ಮ ಮಂಜ ನನ್ನನ್ನು ಲಕ್ಷ್ಯಾದಿಪತಿಗಳೇ ಎಂದು ತಡೆದು, ಲಕ್ಷ್ಯದ ಬಗ್ಗೆ ಭಾಷಣ ಶುರು ಮಾಡಿದ. ಮಂಜ ನನಗೆ ಈ ಲಕ್ಷ್ಯ ಎನ್ನುವುದು ತುಂಬಾ ಮುಖ್ಯವಾದುದು. ನಾನು ತುಂಬಾ ಸಾರಿ ನೋಡಿದ್ದೇನೆ ನಿನ್ನ ಲಕ್ಷ್ಯ ನಿನ್ನ ಬಳಿ ಇರುವುದಿಲ್ಲ ಎಂದು ಹೇಳಿದ. ನಾವು ಅರೋಗ್ಯವನ್ನು ಅಲಕ್ಷ್ಯ ಮಾಡಿದರೆ ಅಷ್ಟೇ. ಮಾತುಗಳು ಅಷ್ಟೇ ಲಕ್ಷ್ಯವಿಟ್ಟು ಮಾತನಾಡಬೇಕು. ನಿನ್ನ ಲೇಖನಗಳಿಗೆ ಎಂದು ಲಲಿತ ಪ್ರಬಂದ ಎಂದು ಹಾಕಬೇಡ. ಏಕೆಂದರೆ ಲಲಿತ ಎಂಬ ಹೆಸರಿನ ವ್ಯಕ್ತಿ ಬಂದು ಅದು ನನ್ನ ಪ್ರಬಂದ ಎಂದರೆ ಕಷ್ಟ. ಆಮೇಲೆ ನೀನು ಕೋರ್ಟಿಗೆ ಹೋದರು ಪ್ರಯೋಜನ ಇಲ್ಲ. ಏಕೆಂದರೆ ಮೊದಲೇ ಕೋಟಿ-ಕೋಟಿ ಕೇಸ್ ಗಳ ನಡುವೆ ನಿನ್ನ ಕೇಸ್ ನಿರ್ಲಕ್ಷ್ಯ ಆಗುತ್ತೆ ಎಂದು ವ್ಯಂಗ್ಯವಾಡಿದ. ಮತ್ತೆ ನಿನಗೆ ಗೊತ್ತ ಮಹಾಲಕ್ಷ್ಮಿ ಬಳಿ ಹೋಗಿ ಕೋತಿ ಹಾಗೆ ಕೋಟಿ ಕೇಳುವ ನಾವು ಲಕ್ ಮತ್ತು ಲಕ್ಷ್ಯ ಕೇಳುವುದು ಸೂಕ್ತ. ಯಾವತ್ತು ಚೆನ್ನಾಗಿರುವವರನ್ನು ಎಷ್ಟು ಲಕ್ಷಣವಾಗಿದ್ದಾರೆ ಎಂದು ಹೇಳುತ್ತಾರೆ. ಆದರೆ ಅದೇ ಚೆನ್ನಾಗಿ ಇರದವರನ್ನು ಕೋಟಿಯ ಉಪಮೆಯವಾದ ಕೋತಿ ಹಾಗೆ ಇದ್ದಾನೆ ಎಂದು ಹೇಳುವುದ ಉಂಟು. ಈ ಲಕ್ಷ್ಯ ಎನ್ನುವುದು ಕೋಟಿ ಕೊಟ್ಟರು ಸಿಗುವುದಿಲ್ಲ ತಿಳಿಯಿತಾ? ಎಂದು ಭಾಷಣ ಬಿಗಿದ.ಯಾವತ್ತು ಮನುಷ್ಯನ ಮನಸು ಮಗುವಾಗಿ ಇರಬೇಕು. ನಾವು ದೊಡ್ಡವರಾದಂತೆ ದಡ್ದರಾಗುತ್ತೇವೆ. ನಮ್ಮ ಲಕ್ಷ್ಯ ಲಕ್ಷ-ಕೋಟಿ ಕಡೆ ಹೊರಳಿ ನೆಮ್ಮದಿ ಹಾಳು ಮಾಡಿಕೊಳ್ಳುತ್ತೇವೆ. ಮತ್ತೆ ನಾವು ಎಂತಹ ಜನ ಎಂದರೆ ನಿದ್ದೆ ನಿದ್ದೆ ಎಂದು ಸಾಯುತ್ತೇವೆ, ಸಾವು ಬಂದರೆ ಓಡುತ್ತೇವೆ ಎಂದ.

ಅಷ್ಟರಲ್ಲಿ ಮಂಜನ ಮಡದಿ ಕೋಪದಿಂದ ಬಂದು ಮಂಜನ ಬಳಿ ಇದ್ದ ಚೀಲವನ್ನು ಕಸಿದುಕೊಂಡು ಹೊರಟು ಹೋದಳು. ಮಂಜ "ನಿನ್ನ ಜೊತೆ ಮಾತನಾಡುತ್ತ ನಾನು ಹಾಲು ತರುವುದನ್ನೇ ಮರೆತಿದ್ದೆ. ಮಗನಿಗೆ ಸ್ಕೂಲ್ ಗೆ ಲೇಟ್ ಆಗುತ್ತೆ " ಎಂದು ಹೇಳಿ ಮಡದಿಯನ್ನು ಹಿಂಬಾಲಿಸುತ್ತಾ ಹೊರಟು ಹೋದ.

Tuesday, November 22, 2011

ಬರಿಬೇಕು.. ಬರಿಬೇಕು ..

ಅದೆನೋ ಗೊತ್ತಿಲ್ಲ, ಏನೋ? ಒಂದು ಕಸಿವಿಸಿ, ಮನಸು ಬರಿದಾಯಿತೆ ಎಂದು. ನನಗು ಹಾಗೆ ಅನ್ನಿಸಿರಲಿಲ್ಲ, ಏಕೆಂದರೆ ಕೆಲಸದ ಒತ್ತಡದಿಂದ ಬರೆಯುವುದಕ್ಕೆ ವಿರಾಮ ಹಾಡಿದ್ದೆ. ತುಂಬಾ ದಿನಗಳಿಂದ ಏನು ಬರೆಯದೆ ಇದ್ದಿದ್ದರಿಂದ, 'ಬರ'ಹದಲ್ಲಿ 'ಬರ' ಇದೆ ಎಂದು ತಿಳಿದಿದ್ದೆ ಈ ಸಮಯದಲ್ಲಿ. ಈ ಕ್ಷಾಮಕ್ಕೆ ಪೂರ್ಣ ವಿರಾಮ ಹಾಡಿದರೆ ಕ್ಷೇಮ ಎಂದು, ಇವತ್ತು ಏನಾದರು? ಬರೆದೆ ತೀರಬೇಕು ಎಂದು ಯೋಚನೆ ಮಾಡುತ್ತಾ ಕುಳಿತಿದ್ದೆ.

ಕೆಲವರಿಗೆ ಕೆಲವೊಂದು ಹುಚ್ಚು ಖಂಡಿತ ಇರುತ್ತವೆ. ನಮ್ಮ ಮಂಜನಿಗೆ ಯಾವುದೇ ದೊಡ್ಡ ಸಮೆಸ್ಯೆಯಲ್ಲೂ ಹಾಸ್ಯ ಕಾಣುವ ಪ್ರವರ್ತಿ. ಒಮ್ಮೆ ನಾನು ಮಂಜ ನನ್ನ ಬೈಕ್ ನಲ್ಲಿ ಹೋಗುತ್ತಿರುವಾಗ, ಬೈಕ್ ಮುಂದಿನ ಒಂದು ಹುಡುಗಿಯ ಬೈಕ್ ಗೆ ತಾಗಿತು. ಅವಳು ಬಂದು ಜಗಳ ಶುರು ಮಾಡಿದಳು. ಅಷ್ಟರಲ್ಲಿ, ಮಂಜ ಏನೋ.. ಸ್ವಲ್ಪ ಪ್ರೆಸ್ ಆಯಿತು ಅಷ್ಟೇ ಎಂದ. ಏನ್ರೀ? ಹಾಗೆ ಅಂದರೆ ಎಂದಳು. ನೀವೇ ಬರೆದಿದ್ದೀರಿ ತಾನೇ ಪ್ರೆಸ್ ಎಂದು ನಿಮ್ಮ ಗಾಡಿ ಹಿಂದುಗಡೆ ಎಂದು ಹೇಳಿದ. ಅದನ್ನು ಕೇಳಿ ಅವಳಿಗೂ ನಗು ತಡಿಯಲು ಆಗಲಿಲ್ಲ, ಸುಮ್ಮನೆ ಹೊರಟು ಹೋದಳು. ಹೀಗೆ ಮತ್ತೊಮ್ಮೆ ಮಂಜನ ಮನೆಗೆ ಹೋಗಿದ್ದೆ. ನಾವು ಕಾಫಿ ಕುಡಿಯುತ್ತ ಇರುವಾಗ ಒಂದು ಜೇನು ಹುಳು ಬಂದಿತು. ಅದಕ್ಕೆ ಮಂಜ ಅಕ್ಕ-ಪಕ್ಕದ ಮನೆ ಬಿಟ್ಟು, ಇಲ್ಲೇ ಏಕೆ? ಬಂತು ಗೊತ್ತ ಎಂದು ನನಗೆ ಕೇಳಿದ. ನಾನು ಗೊತ್ತಿಲ್ಲ ಎಂದು ಹೇಳಿದೆ. ನನ್ನ ಸಿಹಿ ಮಡದಿಯ ಸಲುವಾಗಿ ಎಂದ. ಮಂಜನ ಮಡದಿ ಅವನನ್ನು ಸಿಟ್ಟಿನಿಂದ ನೋಡಿದಳು. ಏಕೆ? ತಂಗ್ಯಮ್ಮ ಹೊಗಳಿದರು ಕೂಡ ಸಿಟ್ಟು ಎಂದು ಕೇಳಿದೆ. ನಿನ್ನೆ ನನಗೆ ಸ್ವಲ್ಪ ಶುಗರ್ ಇದೆ ಎಂದು ಡಾಕ್ಟರ ಹೇಳಿದರು ಅದಕ್ಕೆ ಈ ಮಾತು ಎಂದಳು. ನನಗೆ ತುಂಬಾ ನಗು ಬಂತು. ಒಮ್ಮೆ ಮಂಜನ ಜೊತೆ ಹೋಟೆಲಿಗೆ ಹೋಗಿದ್ದೆ. ಅಲ್ಲಿ ಒಬ್ಬ ಹುಡುಗಿ ತುಂಬಾ ಕಷ್ಟ ಪಟ್ಟು ಫೋರ್ಕ್ ನಿಂದ ದೋಸೆ ತಿನ್ನುತ್ತಿದ್ದಳು. ಅದನ್ನು ನೋಡಿ ಮಂಜ ನಗುತ್ತ ಇವಳು ಫೋರ್ಕಿನಿಂದ ಕಾಫಿ ಕುಡಿದರೆ ಹೇಗಿರುತ್ತೆ ಎಂದು ನನಗೆ ಕೇಳಿದ. ಹೀಗೆ ನನ್ನ ಮಗನಿಗೆ ಕಾರ್ಟೂನ್ ಧ್ಯಾನ... ನನಗೆ ಬರೆಯುವ ಹುಚ್ಚು.

ಹೀಗೆ ಒಮ್ಮೆ ಮಡದಿಗೆ ಬರೆದರೆ ಬೀಚಿ ಅವರ ಹಾಗೆ ಬರೀಬೇಕು ಕಣೇ ಎಂದು ಹೇಳಿದೆ. ಅದಕ್ಕೆ ಮಡದಿ ನೀವು ಏನಾದರು ಗೀಚಿ, ಆದರೆ ಓದು ಓದು ಎಂದು ನನ್ನ ತಲೆ ಮಾತ್ರ ತಿನ್ನಬೇಡಿ ಎಂದು ನನ್ನನ್ನು ತಲೆಯ ಹೇನಿಗೆ ಹೋಲಿಸುವ ಹಾಗೆ ಹೇಳಿದಳು.

ಅಷ್ಟರಲ್ಲಿ ಮಡದಿ ಕೂಗಿ "ಕಸಬರಿಗೆ ತಂದು ಕೊಡಿ" ಎಂದು ಕೂಗಿದಳು. ಕಸಬರಿಗೆ ತೆಗೆದುಕೊಂಡು ಹೋಗಿ ಅವಳ ಕೈಗೆ ಕೊಟ್ಟೆ. ಕೂಡಲೇ ಕಸಬರಿಗೆ ಕೆಳಗೆ ಒಗೆದು,ಕೋಪದಿಂದ ಕಸಬರಿಗೆ ಹೀಗೆ ಕೈಗೆ ಕೊಡುವುದಾ ಎಂದು ಬೈದಳು. ಮತ್ತೆ ಇನ್ನು ಹೇಗೆ ಕೊಡಬೇಕು ತಲೆ ಮೇಲೆ ಇಡಬೇಕಾ ಅಥವಾ ಕಾಲಿಗೆ ಎಂದೆ. ಹೀಗೆ ಕೈಗೆ ಕೊಟ್ಟರೆ ಜಗಳವಾಗುತ್ತೆ ಎಂದು ಕೋಪಮಾಡಿಕೊಂಡು ಜಗಳ ಶುರುಮಾಡಿದಳು. ಅದು ಯಾರು ಅವಳಿಗೆ ಹೀಗೆ ಭವಿಷ್ಯವಾಣಿ ಹೇಳಿದರೋ ನಾ ಕಾಣೆ ಜಗಳ ಆಗುತ್ತೆ ಎಂದು. ಅವರ ಏಳನೇ ಅರಿವು ಸಾಧಿಸಿರುವ ಭವಿಷ್ಯವಾಣಿಗೆ ಸಲಾಂ ಹೊಡೆದೆ(ನಿಜವಾಗಿಯೂ ಜಗಳ ಶುರು ಮಾಡಿದ್ದರಿಂದ). ಇನ್ನೊಮ್ಮೆ ಕಸ'ಬರಿ'ಗೆ ಉಸಾ'ಬರಿ'ಗೆ ಹೋಗುವುದು ಬೇಡ ಎಂದು ನಿರ್ಧರಿಸಿದೆ. ಆದರೂ ಎರಡಲ್ಲೂ ಬರಿ ಎಂಬ ಆಜ್ಞೆ ಮಾತ್ರ ಇತ್ತು.

ಕಸಗುಡಿಸಿದ ಮೇಲೆ ಬಂದು, ಏನು? ಅಷ್ಟು ಆಳವಾಗಿ ಯೋಚಿಸುತ್ತ ಇದ್ದೀರಾ ಎಂದಳು. ಏನಾದರು ಬರೀಬೇಕು ಕಣೇ ಎಂದೆ. ನೀವೇನು ಬರೆಯುವುದು, ಈಗಾಗಲೇ ಎಲ್ಲ ಖ್ಯಾತ ಸಾಹಿತಿಗಳು ಎಲ್ಲವನ್ನು ಬರೆದು ಮುಗಿಸಿದ್ದಾರೆ. ನೀವು ಅದನ್ನೇ ನಿಮ್ಮ ಧಾಟಿಯಲ್ಲಿ ಬರೆಯಬಹುದು ಅಷ್ಟೇ. ಅಥವಾ ಅವರು ಬಿಟ್ಟಿರುವ ಅಲ್ಪ ಸಲ್ಪ ಸಾಹಿತ್ಯ ಮಾತ್ರ ಬರೆಯಲು ಸಾಧ್ಯ ನೀವು ಖಾಲಿದಾಸರು ಎಂದು ಹಿಯಾಳಿಸಿದಳು.

"ಕಾಳಿದಾಸ ಕಾವ್ಯ ನಮ್ಮಪ್ಪನ್ನ ಕೇಳ್ರಿ ...ಖಾಲಿ ದೋಸೆಗಿಂತ ಒಳ್ಳೆ ರುಚಿ ಇಲ್ಲರಿ" ಎಂದು ಹಾಗೆ ಹಾಡುತ್ತ ಕುಳಿತ್ತಿದ್ದಾಗ, ಇದೊಂದು ಗೊತ್ತು ನಿಮಗೆ ಹೋಗಿ ಬೇಗನೆ ನೀರು ಕಾಯಿಸಿ ಎಂದು ಕಳುಹಿಸಿದಳು. ಬೇಜಾರಿನಿಂದ "ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ...." ಎಂದು ಹಾಡುತ್ತ, ನೀರು ಕಾಯಿಸಲು ಹೋದೆ. ಹಾಗೆ ಆಳವಾಗಿ ಯೋಚಿಸುತ್ತ ಕಟ್ಟಿಗೆ ಹಾಕುತ್ತ ಕುಳಿತಿರುವಾಗ ನನ್ನ ಕೈ ಒಳಗಡೆ ಹಾಕಿಬಿಟ್ಟಿದ್ದೆ. ನನ್ನ ಕೈಗೆ ಬರೆ ಬಿದ್ದಿತ್ತು. ಜೋರಾಗಿ ಕಿರುಚಲು ಮಡದಿ ಬಂದು, ಈಗ ಬರೆ ಸಿಕ್ಕಿತಲ್ಲ, ಅದಕ್ಕೆ ಹೇಳಿದ್ದು ನಿಮಗೆ ಬರಿಬೇಕು.. ಬರಿಬೇಕು .. ಎಂದು ಹೇಳಬೇಡಿ ಎಂದು, ಮೇಲೆ ಇರುವ ಅಶ್ವಿನಿ ದೇವತೆಗಳು ಅಸ್ತು ಅಸ್ತು ಎಂದು ಬಿಟ್ಟಿದ್ದಾರೆ ಎಂದು ನಗುತ್ತ, ಇನ್ನೇನು ಬನ್ನಿ ಸಾಕು ಎಂದು ಹೇಳಿ ಕೈಗೆ ಬರ್ನೋಲ್ ಹಚ್ಚಿ ಮಲಗಲು ಹೇಳಿದಳು.

ಮರುದಿನ ಮಂಜ ಮತ್ತು ಅವನ ಮಡದಿ ಮನೆಗೆ ಬಂದಿದ್ದರು.ಮಂಜ ನನ್ನ ಕೈ ನೋಡಿ ಏನು? ಆಯಿತು ಎಂದ. ಅದಕ್ಕೆ ನನ್ನ ಮಡದಿ ನಿಮ್ಮ ಗೆಳೆಯನಿಗೆ ಬರೆ ಬೇಕಾಗಿತ್ತಂತೆ, ಅದಕ್ಕೆ ನಾನು ಕೊಟ್ಟೆ ಎಂದು ತಮಾಷೆ ಮಾಡಿದಳು. ಆಮೇಲೆ ಎಲ್ಲವನ್ನು ವಿಸ್ತಾರವಾಗಿ ಹೇಳಿ, "ಬರೆದಿದ್ದೆಲ್ಲಾ ಸಾಹಿತ್ಯ ಅಲ್ಲ, ಕೊರೆದಿದೆಲ್ಲ ವೇದಾಂತ ಅಲ್ಲ" ಎಂದು ಅಂದಳು. ಇದು ನಮ್ಮದೇ ಮುಖ ಸ್ತುತಿ ಎನ್ನಿಸಿ, ನಾನು ಮತ್ತು ಮಂಜ ಮುಖ.. ಮುಖ.. ನೋಡಿಕೊಂಡೆವು. ನನ್ನ ಮತ್ತು ಮಂಜನ ಮಡದಿ ನಗುತ್ತ ಅಡುಗೆ ಮನೆಗೆ ಹೋದರು.

Wednesday, August 24, 2011

ತರ್ಲೆ ಮಂಜನ ಫ್ರೆಂಡ್ಶಿಪ್ ಪುರಾಣ....

ಮಂಜನ ಮನೆಗೆ ಹೋಗಿದ್ದೆ. ನಾನು ಫ್ರೆಂಡ್ಶಿಪ್ ಡೇ ವಿಶ್ ಮಾಡಲು, ನಾನು ವಿಶ್ ಮಾಡಬೇಕು ಎಂದು ಅನ್ನುಕೊಳ್ಳುವಷ್ಟರಲ್ಲಿ, ಸುಬ್ಬ ಬಂದವನೇ "ಹ್ಯಾಪಿ ಫ್ರೆಂಡ್ಶಿಪ್ ಡೇ" ಎಂದು ನನಗೆ ಮತ್ತು ಮಂಜನಿಗೆ ಕೈ ಕುಲುಕಿದ. ಮಂಜ ಸಿಟ್ಟಿನಿಂದ ಏನೋ? ಇದು ಫ್ರೆಂಡ್ಶಿಪ್ ಡೇ ಅಂತೆ. ಗೆಳೆತನಕ್ಕೆ ಕೂಡ ಒಂದು ದಿನ ಬೇಕಾ?, ಹಾಗಾದ್ರೆ ಗೆಳೆತನ ಅನ್ನುವುದು ಒಂದೇ ದಿನಕ್ಕೆ ಸೀಮಿತನಾ?. ಮೊದಲು, ನಾವೆಲ್ಲ ಗೆಳೆಯರು ದಿನವು ಸೇರುತ್ತಿದ್ದೆವು. ಗೆಳೆಯರ ಒಂದು ದೊಡ್ಡ ಅಡ್ಡ ಇರುತಿತ್ತು. ಆದರೆ ಈಗ ಅವರ ಅಡ್ರೆಸ್ ನೆನಪು ಆಗುವುದು ವರ್ಷದಲ್ಲಿ ಒಂದು ದಿನ ಮಾತ್ರ. ಫ್ರೆಂಡ್ಶಿಪ್ ಎನ್ನುವ ಶಿಪ್ ಮುಣುಗೋದು ಗ್ಯಾರಂಟೀ. ನೋಡುತ್ತಾ ಇರು ಮುಂದೊಂದು ದಿನ ಆಫೀಸ್ ನಿಂದ ಹಸಿದು ಬಂದ ಗಂಡನಿಗೆ ತಿಂಡಿ ಕೊಡದೆ ಇದ್ದರೂ, ಹಸ್ಬಂಡ್ ಡೇ ಎಂದು ಕೂಡ ಬರುತ್ತೆ. ಗಂಡನ ದುಡ್ಡಿನಿಂದ ಗುಂಡಿನ ಪಾರ್ಟಿ ಬೇರೆ ಇರುತ್ತೆ ಎಂದ. ಅಷ್ಟರಲ್ಲಿ ಮಂಜನ ಮಡದಿ ಒಳಗಿನಿಂದ ಬಂದು ಮೂವರಿಗೂ ತಿಂಡಿ ಕೊಟ್ಟು, ಮಂಜನಿಗೆ ಮಾತ್ರ ಟೇಬಲ್ ಮೇಲೆ ಕುಕ್ಕಿ ಹೋದಳು. ಸಧ್ಯ ನಾನು ವಿಶ್ ಮಾಡದೇ ಬಚಾವ್ ಎಂದು ಕೊಂಡೆ.

ಮತ್ತೆ ತಿಂಡಿ ತಿನ್ನುತ್ತ, ಮೊದಲು ನಿನ್ನಂತಹ ಉಡಾಳ ವಿದ್ಯಾರ್ಥಿಗಳು ಶಿಕ್ಷಕರ ದಿನಾಚರಣೆಯನ್ನು, ಸಿಕ್ಕ ಸಿಕ್ಕವರ ದಿನಾಚರಣೆ ಎಂದು ಎಲ್ಲರಿಗು ಹೊಡೆಯುತ್ತ ಹೋಗುತ್ತಿದ್ದೀರಿ ಎಂದ. ನನಗೆ ನಗು ತಡಿಯಲು ಆಗಲೇ ಇಲ್ಲ, ಏಕೆಂದರೆ, ಹಾಗೆ ಮೊದಲು ಮಾಡಿದ್ದು ಮಂಜನೆ. ನಮ್ಮ ಸಂಸ್ಕೃತಿಯಲ್ಲಿ ಪ್ರತಿಯೊಂದು ದಿನಕ್ಕೂ ಒಂದು ಹಿನ್ನಲೆ ಇರುತ್ತೆ. ಆದರೆ ಇವುಗಳಿಗೆ ಯಾವ ಹಿನ್ನಲೆ ಎಂದು ತಿಳಿಯದೆ ಇದ್ದರೂ, ಅದನ್ನು ಆಚರಿಸುವ ಮಹಾ ಪಂಡಿತರು ಜ್ಯಾಸ್ತಿ ಎಂದ. ಮತ್ತೆ ಅಷ್ಟರಲ್ಲಿ ಮಂಜನ ಮಡದಿ ಬಂದು ನೀರು ಟೇಬಲ್ ಮೇಲೆ ಕುಕ್ಕಿ ಹೋದಳು. ಅವಳ ಚಲನ-ವಲನ ನೋಡಿ, ಮೊದಲೇ ಮಂಜನಿಗೆ ಏನೋ ಪಾಠ ಆಗಿದೆ ಎಂದು ಅನ್ನಿಸಿತು. ಏನು? ತಂಗ್ಯಮ್ಮನಿಗೆ ತುಂಬಾ ಕೋಪ ಬಂದಿರೋ ಹಾಗಿದೆ ಎಂದು ಮಂಜನಿಗೆ ಕೇಳಿದೆ. ಏನು? ಇಲ್ಲ ನಿನ್ನೆ ರಾತ್ರಿ ಇಂದ ಹೀಗೆ ಸಿಟ್ಟು ಮಾಡಿಕೊಂಡಿದ್ದಾಳೆ ಎಂದ. ನೀನೆ ಏನೋ? ಕಿಟಲೆ ಮಾಡಿರಬೇಕು ಎಂದೆ. ನಾನೇನು ಮಾಡಿದ್ದೇನೆ ಅವಳಿಗೆ ಬೇಕಾಗಿದ್ದು ಎಲ್ಲವನ್ನು ಕೊಡಿಸಿದ್ದೇನೆ ಎಂದ. ಅವಳು ಪಿಜ್ಜಾ ತಿನ್ನುತ್ತೇನೆ ಎಂದಳು. ಅದನ್ನು ಸಹಿತ ಕೊಡಿಸಿದ್ದೇನೆ. ನೋಡು ನಾವು ಹವಾಗುಣಕ್ಕೆ ಅನುಗುಣವಾಗಿ ನಮ್ಮ ಆಹಾರ ಪದ್ದತಿಯನ್ನು ಅನುಸರಿಸುತ್ತೇವೆ. ಹವಾಗುಣ ಬದಲಾದಂತೆ ಅಲ್ಲಿಯ ಆಹಾರ ಪದ್ದತಿಯನ್ನು ನಾವು ಅನುಸರಿಸ ಬೇಕಾಗುತ್ತೆ. ಹೇಗೆಂದರೆ, ಉತ್ತರ ಕರ್ನಾಟಕದ ಜನ ಅಲ್ಲಿಯ ಹವಾಗುಣಕ್ಕೆ ಅನುಗುಣವಾಗಿ ಜೋಳದ ರೊಟ್ಟಿ, ಇಲ್ಲಿಯ ಜನ ರಾಗಿ ಮುದ್ದೆ ಹೀಗೆ...ಇಲ್ಲದೆ ಇದ್ದರೆ ನಮ್ಮ ಹಾವ-ಭಾವ ಬದಲಾಗುವುದು. ಅದರೂ ಕೂಡ ನಾನು ಏನೂ ಮಾತನಾಡದೆ ಪಿಜ್ಜಾ ಕೊಡಿಸಿದ್ದೇನೆ ಮತ್ತೇಕೆ ಸಿಟ್ಟು ನನಗೆ ಗೊತ್ತಿಲ್ಲ ಎಂದ.

ಅಷ್ಟರಲ್ಲಿ ಮಂಜನ ಮಡದಿ ಸಾವಿತ್ರಿ ಒಳಗಡೆಯಿಂದ ಬಂದು ನಾನು ಎಷ್ಟು ದೇವರನ್ನು ಬೇಡಿಕೊಳ್ಳ ಬೇಕೋ ತಿಳಿಯದಾಗಿದೆ ನೋಡಿ, ಎಂದು ನನಗೆ ಹೇಳಿದಳು. ಅದಕ್ಕೆ ಮಂಜ ನಾನು ಹೇಳುತ್ತೇನೆ. ಒಬ್ಬ ದೇವರಿಗೆ ಹರಕೆ ಹೊತ್ತರೆ ಖಂಡಿತ ನೆರವೆರುತ್ತೆ ಎಂದ. ಯಾರು ಆ ದೇವರು ಎಂದು ಬಾಯಿ ಬಿಟ್ಟು ಕೇಳಿದೆ. ಮತ್ತ್ಯಾರು ಪತಿ ದೇವ್ರು ಎಂದು ಹೇಳು ನಿಮ್ಮ ತಂಗ್ಯಮ್ಮನಿಗೆ ಎಂದು ಜೋರಾಗಿ ನಗ ಹತ್ತಿದ. ಈ ನಗುವುದೊಂದು ಗೊತ್ತು ನಿಮಗೆ. ನಿನ್ನೆ ಒಂದು ಹುಡುಗಿ ನೋಡಿ ನಗುತ್ತಿದ್ದರು ಎಂದಳು. ಅಷ್ಟಕ್ಕೇ ಮಂಜ ಲೇ... ನಾನೇನು ಹುಡುಗರನ್ನು ನಗಬೇಕಿತ್ತಾ?, ಹಾಗೆ ಮಾಡಿದರೆ ಜನ ತಪ್ಪು ತಿಲಿಯಲ್ಲವೇ ಎಂದು ಹೇಳಿದ. ಆಯಿತು ಅವಳು ನಕ್ಕಳು, ನಾನು ನಕ್ಕೆ ಅಷ್ಟೇ ತಾನೇ. ಮತ್ತೇಕೆ ಈಗ ಅದೆಲ್ಲ ತಪ್ಪಾಯಿತು ಎಂದ. ಅಷ್ಟಕ್ಕೇ ಅವರ ಸಂಸಾರ ಸಮರ ಮುಗಿಯಿತು.

ಮಂಜನ್ ಮಡದಿ ಕಾಫಿ ತಂದು ಕೊಟ್ಟಳು. ಅಷ್ಟರಲ್ಲಿ ಮಂಜನ ಮೊಬೈಲ್ ನಲ್ಲಿ ಒಂದು sms ಬಂತು. ಅದನ್ನು ಮಂಜನ ಮಡದಿ ತೆಗೆದು ನೋಡಿದಳು. ಯಾರು? ರೀ.. ಅದು ರಾಜಿ ಎಂದು ಮತ್ತೆ ಕೋಪಮಾಡಿಕೊಂಡು ಬಿಟ್ಟಳು. ಅದು... ಅದು... ಎಂದು ತಡವರಿಸುತ್ತಾ...ರಾಜೇಂದ್ರ ಎಂದು ನನ್ನ ಗೆಳೆಯ ಎಂದ. ಯಾವತ್ತು ಅವನ ಬಗ್ಗೆ ಹೇಳೇ ಇಲ್ಲ. ಮತ್ತೆ ರಾಜಿ ಎಂದು ಏಕೆ? ಬರೆದಿದ್ದೀರಾ ಎಂದಳು. ಅದು ಸ್ಪೆಲ್ಲಿಂಗ್ ಮಿಸ್ಟೇಕ್ ಆಯಿತು ಎಂದ. ನಾನು ಮನಸಿನಲ್ಲಿಯೇ ಮಿಸ್ ಟೆಕ್ ಎಂದು ಅಂದೆ. ಏಕೆಂದರೆ ರಾಜಿ ಎಂಬುದು ಹುಡುಗಿ ಎಂದು ನನಗೆ ಹೇಳಿದ್ದ. ಕಡೆಗೆ ಅವಳಿಂದ ಫೋನ್ ತೆಗೆದುಕೊಂಡು ಮೆಸೇಜ್ ನೋಡಿದ. ಅದರಲ್ಲಿ ಹ್ಯಾಪಿ ಫ್ರೆಂಡ್ಶಿಪ್ ಡೇ ಎಂದು ಇತ್ತು. ಅದಕ್ಕೆ ಸುಮ್ಮನೆ ಸೇಮ ಟು ಯು ಎಂದು ಯಾವುದೇ ಶೇಮ್ ಇಲ್ಲದೆ ಬರೆದು ಕಳುಹಿಸಬೇಕು ಅನ್ನುವಷ್ಟರಲ್ಲಿ, ಮೊಬೈಲ್ ನಲ್ಲಿನ ಕರೆನ್ಸಿ ಖಾಲಿ ಆಗಿದೆ ಎಂದು ತಿಳಿಯಿತು. ಮಂಜ ಏನೇ ಇದು ನನ್ನ ಮೊಬೈಲ್ ಕರೆನ್ಸಿ ಎಲ್ಲ ಖಾಲಿ ಆಗಿದೆ ಎಂದ. ಮಂಜನ ಮಡದಿ ನಾನೇ ಎಲ್ಲರಿಗು ಫ್ರೆಂಡ್ ಶಿಪ್ ಡೇ ವಿಶ್ ಮಾಡಲು ಫೋನ್ ಮಾಡಿದ್ದೆ ಎಂದಳು. ಕಡೆಗೆ ನನ್ನ ಮೊಬೈಲ್ ತೆಗೆದುಕೊಂಡು ಕೆಳಗಡೆ ತನ್ನ ಹೆಸರು ಬರೆದು ಮೆಸೇಜ್ ಕಳುಹಿಸಿದ.

ಮಂಜನಿಗೆ ಮತ್ತೆ ನಮಗೆ ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟಲು ಬಂದಳು. ಮಂಜ ಕೋಪದಿಂದ ಏನಿದು? ರಾಖಿಯ ಹಾಗೆ ಇದನ್ನು ಗಂಡನಿಗೆ ಕಟ್ಟುವುದಾ? ಎಂದು ಮತ್ತೆ ತನ್ನ ಪುರಾಣ ಶುರು ಮಾಡಿದ. ನನಗೆ ಕಟ್ಟಿ ಎಂದು ಹೇಳಿ ಕಟ್ಟಿಸಿಕೊಂಡು, ನನಗೆ ಸ್ವಲ್ಪ ಕೆಲಸ ಇದೆ ಎಂದು ಹೇಳಿ ಅಲ್ಲಿಂದ ಸಾವಕಾಶವಾಗಿ ಕಾಲು ಕಿತ್ತೆ.

Friday, August 5, 2011

ಭೀಮನ ಅಮಾವಾಸ್ಯೆ!!!!

ಭೀಮನ ಅಮಾವಾಸ್ಯೆ ಹಿಂದಿನ ದಿನ ಪೂಜೆ ಸಾಮಗ್ರಿ ತರಲು ಮಡದಿ ಹೇಳಿದ್ದಳು. ಮಂಜನ ಜೊತೆ ಮಾರ್ಕೆಟಿಗೆ ಹೋಗಿದ್ದೆ. ಮಂಜ ಸ್ಕೂಟರ್ ನಲ್ಲಿ ಹೋಗುವ ಇಬ್ಬರು ಹುಡುಗರನ್ನು ನೋಡಿ "ದೋ ಚಕ್ಕಾ ಚಕ್ಕಾ ಸಾಥ್ ಸಾಥ್" ಎಂದು ಹೇಳಿದ. ನನಗೆ ಗಾಬರಿ ಅವನಿಗೆ ಹೇಗೆ ತಿಳಿಯಿತು ಮತ್ತು ಹೀಗೆ ಏಕೆ? ಹೇಳಿದ ಎಂದು. ನಾನು ಕೇಳಿದೆ. ಅಷ್ಟು ನಿಖರವಾಗಿ ಹೇಗೆ ಹೇಳುತ್ತಿ ಎಂದೆ. ಅದಕ್ಕೆ ಮಂಜ ನೋಡು ಅಲ್ಲಿ ಅವರ ಗಾಡಿ ನಂಬರ್ ಎಂದು ತೋರಿಸಿದ. ಅದು ೨೬೭೭ ಇತ್ತು. ಇವನು ಅದನ್ನು ಹಿಂದಿಯಲ್ಲಿ ಹೇಳಿ ನನಗೆ ಗಲಿಬಿಲಿಗೊಳಸಿದ್ದ. ಮುಂದೆ ಹೋಗುವಷ್ಟರಲ್ಲಿ ಒಂದು ಅಂಗಡಿ ಕಾಣಿಸಿತು. ಅದರ ಹೆಸರು ಬೈ ಅಂಡ್ ಸೇವ್ ಎಂದು ಕಂಗ್ಲಿಷ್ನಲ್ಲಿ ಬರೆದಿತ್ತು. ಅದನ್ನು ನೋಡಿ ನಾನು ಇಲ್ಲೇ ಸಾಮಾನು ತೆಗೆದುಕೊಂಡು ಹೋಗೋಣ ಎಂದೆ. ಅದಕ್ಕೆ ಮಂಜ ಇಲ್ಲಿ ಬೈ ಮಾಡಿದರೆ ನಿನಗೆ ಭಯ ಆಗುವುದು ಖಂಡಿತ. ಮತ್ತೆ ನೀನೆ ಬೈಯುವುದು ಕೂಡ. ಸೇವ್ ಎಂಬ ಸೇವೆ ಮಾಲಿಕನಿಗೆ ಮಾತ್ರ. ನಮಗೆ ಏನಿದ್ದರು ಶೇವ್. ನೀನು ಇಲ್ಲಿ ತೆಗೆದುಕೊಂಡು ಹೋಗಿ ಅಪ್ಪಿ-ತಪ್ಪಿ ಬಿಲ್ ಮನೆಯಲ್ಲಿ ತೋರಿಸಿದೆ ಎಂದರೆ, ನಿನಗೆ ಭೀಮನ ಅಮಾವಾಸ್ಯೆ ಪೂಜೆ ಇವತ್ತೇ ಎಂದ. ಏನದು? ಭೀಮನ ಅಮಾವಾಸ್ಯೆ ಪೂಜೆ ಎಂದು ಕೇಳಿದೆ. ಏಕೆಂದರೆ? ಪ್ರತಿ ಬಾರಿ ನನ್ನ ಮಡದಿ ಆಶಾ(ಡ) ಮನೆಗೆ ಬಂದ ಮೇಲೆ ತವರಿಗೆ ಹೋಗುತ್ತಿದ್ದಳು. ಭೀಮನ ಅಮಾವಾಸ್ಯೆ ಪೂರ್ತಿ ವಿವರ ಹೇಳಿದ್ದ. ಸಾಮಾನು ಬೇರೆ ಅಂಗಡಿಯಲ್ಲಿ ತೆಗೆದುಕೊಂಡು ಮನೆಗೆ ಬಂದೆವು.

ಮರುದಿನ ಕಂಪ್ಯೂಟರ್ ಮುಂದೆ ಕುಳಿತಿದ್ದೆ. ಅಷ್ಟರಲ್ಲಿ ಬಂದ ಮಡದಿ ಕರಿಯರು ಮತ್ತು ಬಿಳಿಯರು ಎಂಬ ಭೇದ-ಭಾವವಿಲ್ಲದೆ ಸಹ ಜೀವನ ನಡೆಸುತ್ತಿರುವ ಒಂದೇ ಒಂದೇ ಸ್ಥಳ ಎಂದರೆ ಯಾವುದು? ಎಂದು ಪ್ರಶ್ನೆ ಕೇಳಿದಳು. ಮೊದಲೇ ಪ್ರಶ್ನೆ ಎಂದರೆ ಬೆಚ್ಚಿ ಬೀಳುವ ನಾನು ತಡಬಡಿಸಿ ಗೂಗಲ್ ನಲ್ಲಿ ಹುಡುಕಲಾರ೦ಬಿಸಿದೆ. ಅದರಲ್ಲಿ ಏನು? ಹುಡುಕುತ್ತೀರಾ ನಿಮ್ಮ ತಲೆ ಎಂದು ಕಿಟಲೆ ಮಾತನಾಡಿ ಹೊರಟುಹೋದಳು. ಅವಳ ಹಿಂದೇನೆ ನಾನು ಹೋಗಿ, ಏನು? ಎಂದು ಪೀಡಿಸಹತ್ತಿದೆ. ನಿಮ್ಮ ತಲೆ ಎಂದು ಆಗಲೇ ಹೇಳಿದೆನಲ್ಲ ಎಂದಳು. ಆಗ ಅವಳು ಹೇಳಿದ ಒಳ ಅರ್ಥ ತಿಳಿಯಿತು. ತಲೆಯಲ್ಲಿ ಸಮಾನ ಅಂಕಿ ಅಂಶದಲ್ಲಿ ಕರಿ-ಬಿಳಿ ಕೂದಲುಗಳು ಇದ್ದವು.

ಹೊರಗಡೆ ಬಂದು ಟಿ.ವಿ ನೋಡುತ್ತಾ ಕುಳಿತೆ. ಏನು? ಟಿ.ವಿ ನೋಡುತ್ತಾ ಕುಳಿತರೆ ಆಯಿತಾ?. ಸ್ವಲ್ಪ ತರಕಾರಿ ಹೆಚ್ಚಿ ಕೊಡಿ ಎಂದು ತಿವಿದಳು. ಇವತ್ತು ಭೀಮನ ಅಮಾವಾಸ್ಯೆ ಕಣೆ ಎಂದು, ಭೀಮನ ಹಾಗೆ ಒದರಿ ಹೇಳಿದೆ. ಓ ಹಾಗಾದರೆ ನೀವೇ ಅಡುಗೆ ಮಾಡುತ್ತೀರಾ?. ಭೀಮ ಪಾಕ ನಿಜವಾಗಿಯೂ ತುಂಬಾ ಚೆನ್ನಾಗಿ ಇರುತ್ತೆ ಎಂದಳು. ಅಷ್ಟರಲ್ಲಿ ನನ್ನ ಸುಪುತ್ರ ಭೀಮ ಶಬ್ದ ಕೇಳಿ "ಅಪ್ಪ ಛೋಟಾ ಭೀಮ ಕಾರ್ಟೂನ್ ಹಚ್ಚಿ ಕೊಡು ಎಂದು" ಹೇಳಿದ.ಟಿ.ವಿ ಚಾನೆಲ್ ಚೇಂಜ್ ಮಾಡಿ ಮಗನಿಗೆ ಹಚ್ಚಿ ಕೊಟ್ಟು ತರಕಾರಿ ಹೆಚ್ಚಲು ಅನುವಾದೆ. ನಿನ್ನೆ ಸಂಜೆ ಮಂಜನ ಜೊತೆ ಹೋಗುತ್ತಿದ್ದಾಗ ಭೀಮನ ಅಮಾವಾಸ್ಯೆ ಭಾಷಣ ನೆನಪಾಗಿ, ಅದನ್ನು ಮಡದಿಗೆ ಹೇಳಿದೆ. ಗಂಡ ಎಂದರೆ ದೇವರು ಇದ್ದ ಹಾಗೆ ಗೊತ್ತಾ?. ಇವತ್ತು ಗಂಡನ ಪೂಜೆ ಮಾಡುತ್ತಾರೆ, ನೀನು ನೋಡಿದರೆ ತರಕಾರಿ ಹೆಚ್ಚಲು ಹೇಳಿದ್ದೀಯಾ ಎಂದೆ. ಆಯಿತು ಬಿಡಿ ಇನ್ನು ಮೇಲೆ ಪತಿ ದೇವರಿಗೆ ನೈವೇದ್ಯ ಕೂಡ ಹಬ್ಬ ಹರಿದಿನಗಳಲ್ಲಿ ಮಾತ್ರ ಎಂಬ ಉತ್ತರ ಹರಿದು ಬಂತು. ಇನ್ನು ಮತ್ತೇನಾದರೂ ಮಾತನಾಡಿದರೆ ನನ್ನ ಊಟಕ್ಕೆ ಸಂಚಕಾರ ಬಂದೀತು ಎಂದು ಸುಮ್ಮನೆ ತರಕಾರಿ ಹೆಚ್ಚಿ ಕೊಟ್ಟೆ.

ಸ್ನಾನ ಮುಗಿಸಿ ಪೂಜೆಗೆ ಕುಳಿತಿದ್ದೆ. ಹೂ ಮಾರುವವಳು ಬಂದಳು. ಎಷ್ಟು ಬೇಕು? ಹೂ ಎಂದು ನನ್ನ ಮಡದಿಗೆ ಕೇಳಿದಳು. ಅದಕ್ಕೆ ಮಡದಿ ೫ ಸಾವಿರ ಸಾಕು ಎಂದಳು. ಇವತ್ತು "ಗಂಡನ ಪೂಜೆ ಇದೆ ಅಮ್ಮ ೧೦ ಸಾವಿರ ರುಪಾಯಿ" ಹೂ ತೆಗೆದುಕೊಳ್ಳಿ ಎಂದು ಅಂದಳು. ಅವರಿಬ್ಬರ ಸಂಭಾಷಣೆ ಕೇಳಿ ನನಗೆ ಗಾಬರಿ ಆಯಿತು. ಏನೇ ಆದರೂ ದುಡ್ಡು ನನ್ನದೇ ಅಲ್ಲವೇ?. ನನ್ನ ಪೂಜೆ ಮಾಡದಿದ್ದರೂ ಪರವಾಗಿಲ್ಲ ಅನ್ನಿಸಿತು. ಅವಳು ಹೂ ತೆಗೆದುಕೊಂಡು ಬಂದ ಮೇಲೆ, ನಾನು ಕೇಳಿದೆ ಏನದು ಅಷ್ಟೊಂದು ಹೂ ಎಂದು ಕೇಳಿದೆ. ಅದಕ್ಕೆ ಹೂ ಮಾರುವವಳು ೫ ಕ್ಕೆ ೫ ಸಾವಿರ, ೧೦ ಕ್ಕೆ ೧೦ ಸಾವಿರ ಎಂದು ಅನ್ನುತ್ತಾಳೆ ಎಂದು ಹೇಳಿದಳು. ಹೂ ಮಾರುವವಳ ಹಾಸ್ಯ ಪ್ರಜ್ಞೆ ಮತ್ತು ಅವಳು ತನ್ನ ಮನಸಿಗೆ ತಾನೇ ಸಮಾಧಾನ ಮಾಡುವ ರೀತಿ ಕೇಳಿ ನಿಜವಾಗಿಯೂ ಅಚ್ಚರಿ ಅನಿಸಿತು. ಸಾವಿರ- ಲಕ್ಷ ಘಳಿಸುವ ಮತ್ತು ಲೂಟಿ ಮಾಡುವ ತುಂಬಾ ಜನರಲ್ಲಿ ಇರದ ಸಂತೋಷ ಅವಳಲ್ಲಿ ಮತ್ತು ಅವಳ ಮಾತಿನಲ್ಲಿ ಇತ್ತು.

ಪೂಜೆ ಮುಗಿಸಿ ಎಫ್.ಎಂ ಹಚ್ಚಿದೆ. "ಹೂವು ಚೆಲುವೆಲ್ಲಾ ನಂದೆಂದಿತು...ಹೆಣ್ಣು ಹೂವ ಮುಡಿದು ಚೆಲುವೆ ತಾನೆಂದಳು" ಎಂಬ ಸುಮಧುರವಾದ ಹಾಡು ಬರುತಿತ್ತು. ಹಾಡು ಇನ್ನು ಮುಗಿದಿರಲಿಲ್ಲ ಅಷ್ಟರಲ್ಲಿ ಹೆಂಡತಿ ಒಳಗಡೆ ಕಂಪ್ಯೂಟರ್ ಉರಿಯುತ್ತಿದೆ, ಹೊರಗಡೆ ಟಿ.ವಿ ಮತ್ತು ಎಫ್.ಎಂ ಎಂದು ಚೀರಲು ಶುರುಮಾಡಿದಳು. ಎದ್ದು ನೀರು ನನ್ನ ಹೊಟ್ಟೆಗೆ ಹಾಕಿ ಕೋಪ ಕಡಿಮೆ ಮಾಡಿಕೊಂಡು ಹೋಗಿ ಕಂಪ್ಯೂಟರ್ ಆರಿಸಿ ಬಂದೆ. ಅಷ್ಟರಲ್ಲಿ ಹಾಡು ಮುಗಿದಿತ್ತು. ಈಗ ನೀವು "ಹಣ್ಣೆಲೆ ಚಿಗುರಿದಾಗ" ಎಂಬ ಚಿತ್ರದ ಹಾಡನ್ನು ಕೇಳುತ್ತಿದ್ದೀರಿ ಎಂದು ಪ್ರಸಾರಕ ಮಹಾಶಯರು ಹೇಳಿದರೂ, ನಂಗೆ ಮಾತ್ರ "ಹೆಣ್ಣೇಲೇ ಚೀರಿದಾಗ" ಎಂದು ಅನ್ನಿಸಹತಿತ್ತು.ಆದರೂ ಈ ಹಣ್ಣೆಲೆ ಚಿಗುರುವುದು ಯಾವಾಗ ಎಂದು ಕೂಡ ಅನ್ನಿಸಿತು. ಏಕೆಂದರೆ ನನ್ನ ತಲೆಯಲ್ಲಿನ ಎಲ್ಲ ಕೂದಲು ಹಣ್ಣಾಗಿ ಉದುರುತ್ತಾ ಇವೆ. ಆದರೆ ಒಮ್ಮೆಯೂ ಕೂಡ ಚಿಗುರಲೇ ಇಲ್ಲ ಎಂದು ಅನ್ನಿಸಿತು. ಹೊರಗಡೆ ಬಂದು ಲೇ... ಈಗ ತಾನೇ ಎಫ್.ಎಂ ನಲ್ಲಿ ಬರುತ್ತಿದ್ದ ಹಾಡು ಯಾವ ಚಿತ್ರದ್ದು ಗೊತ್ತ ಎಂದೆ. ಅದಕ್ಕೆ ಅವಳು ನಾನು ಕೇಳಿಸಿಕೊಳ್ಳಲಿಲ್ಲ ನೀವೇ ಹೇಳಿ ಯಾವುದು ಎಂದಳು. ನಾನು "ಹೆಣ್ಣೇ ಚೀರಿದಾಗ" ಎಂದೆ. ಜೋರಾಗಿ ನಗುತ್ತಾ ಬನ್ನಿ ನಿಮ್ಮ ಪೂಜೆ ಮಾಡುತ್ತೇನೆ ಎಂದು ಅಡುಗೆ ಮನೆಯಿಂದ ಆಯುಧ ಸಮೇತವಾಗಿ ಹೊರಗಡೆ ಬಂದಳು.ಅಷ್ಟರಲ್ಲಿ ಎಫ್.ಎಂ ನಲ್ಲಿ ಮುಂದಿನ ಚಿತ್ರಗೀತೆ "ಚಂಡಿ ಚಾಮುಂಡಿ" ಚಿತ್ರದ್ದು ಎಂದಾಗ ನಗು ಮಾತ್ರ ತಡಿಯಲು ಆಗಲೇ ಇಲ್ಲ. ಕಡೆಗೆ ಸೋಪಿನಿಂದ ಕೈ ತೊಳೆದುಕೊಂಡು ಬಂದು, ನನಗೂ ಸೋಪಿನಿಂದ ಕಾಲು ತೊಳೆಯಲು ಹೇಳಿದಳು. ತೊಳೆದುಕೊಂಡು ಬಂದ ಮೇಲೆ ನನ್ನ ಪಾದ ಪೂಜೆ ನೆರವೇರಿತು.

ಈ ಭೀಮನ ಹೊಟ್ಟೆಗೆ ಕೂಡ ಚೆನ್ನಾಗಿ ನೈವೇದ್ಯ ಆಗಿತ್ತು. ನಿದ್ದೆ ಜೋರಾಗಿ ಬಂದಿದ್ದರಿಂದ ಮಲಗಿಕೊಂಡೆ. ಅಷ್ಟರಲ್ಲಿ ಪರ್... ಪರ್ ..ಎಂಬ ಶಬ್ದ ಯಾರೋ ಬಟ್ಟೆ ಹರಿಯುತ್ತಿದ್ದಾರೆ ಎಂದು ಅನ್ನಿಸಿತು. ಯಾರು ಎಂದು ಎಲ್ಲ ಕಡೆ ನೋಡಿದೆ. ಯಾರು ಇರಲಿಲ್ಲ. ಮಡದಿ, ಮಗ ಕೂಡ ಗಾಡ ನಿದ್ರೆಯಲ್ಲಿ ಇದ್ದರು. ಯಾರಾದರು ಕಳ್ಳರು ಬಂದಿರ ಬಹುದಾ? ಎಂದು ಅನುಮಾನ ಬಂತು. ಬಂದರು ಅವರು ಬಟ್ಟೆ ಹರಿಯುವುದು ಏಕೆ ? ಎಂಬ ಪ್ರಶ್ನೆ ಉದ್ಭವಿಸಿತು. ಹೆದರುತ್ತಾ... ಹೆದರುತ್ತಾ.. ಶಬ್ದ ಹುಡುಕಿಕೊಂಡು ಹೋದೆ. ನನ್ನ ಮಗನ ಸೈಕಲ್ ಹಿಂದಿನ ಡಬ್ಬದ ಒಳಗೆ ನನ್ನ ಮೊಬೈಲ್ ಶಬ್ದ ಮಾಡುತಿತ್ತು. ಅದನ್ನು ನನ್ನ ಮಗ ತೆಗೆದುಕೊಂಡು ಆಟವಾಡಿ ಸೆಟ್ಟಿಂಗ್ ವೈಬ್ರೇಟಿ೦ಗ ಆಗಿ ಚೇಂಜ್ ಮಾಡಿದ್ದ. ಕಡೆಗೆ ಫೋನ್ ಎತ್ತಿ ಮಾತನಾಡಿ, ಅದನ್ನು ಸರಿ ಮಾಡಿ ಮತ್ತೆ ನಿದ್ದೆಗೆ ಜಾರಿದೆ.

Thursday, February 10, 2011

ತರಲೆ ಮಂಜನ ತತ್ವಜ್ಞಾನ ....

ಮೊದ ಮೊದಲು ತುಂಬಾ ಓದುತ್ತಿದ್ದೆ. ಆಮೇಲೆ ಏನಾದರೂ ಬರೆಯಬೇಕು ಎಂಬದು ಮನಸ್ಸಿನಲ್ಲಿ ಹೊಯ್ದಾಡಹತ್ತಿತ್ತು. ಆಮೇಲೆ ಏನು? ಬರೆಯಬೇಕು, ಏನು? ಬರೆದರೆ ಎಲ್ಲರೂ ಸ್ವೀಕರಿಸುತ್ತಾರೆ ಎಂದು ಯೋಚಿಸಹತ್ತಿದೆ. ತತ್ವಜ್ಞಾನದ ಬಗ್ಗೆ ಎಂದು ನಿಶ್ಚಯಿಸಿ ಆಗಿತ್ತು. ಮಂಜನಿಗೆ ಒಮ್ಮೆ ಕೇಳಿ ನೋಡಿದರೆ ಹೇಗೆ ಎಂದು ಯೋಚಿಸಿ ಮಂಜನಿಗೆ ಕೇಳಿದೆ. ಮಂಜ ಈ ತತ್ವಜ್ಞಾನ ಎಂಬುದು ಎಲ್ಲರೂ ಕೊಡುವ ಜ್ಞಾನ, ಬೇಕಾದರೆ ಎಲ್ಲರೂ ತಮ್ಮ.. ತಮ್ಮ.. ಶೈಲಿ ಮಾತ್ರ ಬದಲಿಸಿ ಅರುಹುತ್ತಾರೆ ಅಷ್ಟೇ ಎಂದ. ಒಬ್ಬ ಎಳೆನೀರು ಮಾರುವ ಮನುಷ್ಯ ಕೂಡ ಹೇಳುತ್ತಾನೆ ಅದನ್ನ ಎಂದ. ಅದು ಹೇಗೆ? ಎಂದು ಕೇಳಿದೆ. ಬಾ ತೋರಿಸುತ್ತೇನೆ ಎಂದ.

ಒಬ್ಬ ಎಳೆನೀರು ಮಾರುವವನ ಬಳಿ ಹೋದೆವು. ಮಂಜ ಇದನ್ನು ಕೊಡಿ ಎಂದು ಒಂದು ಎಳೆನೀರು ಕಾಯಿ ತೋರಿಸಿದ. ನಿಮಗೆ ನೀರಾ, ಗಂಜಿನಾ ಹೇಳಿ ನಾನು ಕೊಡುತ್ತೇನೆ ಎಂದ. ಗಂಜಿ ಎಂದ ಮಂಜ. ಮತ್ತೆ ಬಿಡಿ ನಾನು ಕೊಡುತ್ತೇನೆ ಎಂದ ನೀರು ಮಾರುವವ. ಬೇಡ ಇದೆ ಕೊಡಿ ಎಂದ ಮಂಜ. ಎಳೆನೀರು ಮಾರುವವ ನೋಡಿ... ಸ್ವಾಮಿ ಮೇಲೆ ಇರುವ ಸೊಬಗು ನೋಡಿ ತೆಗೆದು ಕೊಂಡರೆ ಆಗಲ್ಲ, ಒಳಗೆ ಚೆನ್ನಾಗಿ ಇದ್ದರೆ ಸಾಕು ಎಂದು ತನ್ನ ಎದೆ ಮುಟ್ಟಿಕೊಂಡು ಹೇಳಿದ. ಆಗ ಮಂಜ ಹೇಳಿದ ಮಾತು ನಿಜ ಅನ್ನಿಸಿತು. ಹೀಗೆ ... ಕಣೋ ಎಲ್ಲರೂ ತಮ್ಮ.. ತಮ್ಮ.. ಜ್ಞಾನವನ್ನು ಭೋಧಿಸುತ್ತಾರೆ ಅಷ್ಟೇ... ಪಂಚರ್ ತಿದ್ದುವ ಮನುಷ್ಯನಿಂದ ಹಿಡಿದು ಕಾರ್ ಮಾರುವ ಮನುಷ್ಯನವರೆಗೆ ಎಂದ. ನೀನು ಬರೆಯಬೇಕು ಎಂದರೆ ಹಾಸ್ಯ ಆರಿಸಿಕೋ, ಇದರಿಂದ ಕೆಲ ಜನರಲ್ಲಿ ಮಂದಹಾಸ ಮೂಡಿದರೆ ಸಾಕು. ನಿನ್ನ ಬರಹ ಸಾರ್ಥಕವಾಗುತ್ತೆ. ತತ್ವಜ್ಞಾನ ಕೊಡೋಕೆ ತುಂಬಾ ಜನ ಇದ್ದಾರೆ. ಸ್ವಾರ್ಥವಿಲ್ಲದೇ ಯಾವುದೇ ತತ್ವಜ್ಞಾನ ಕೂಡ ಇರುವುದಕ್ಕೆ ಸಾಧ್ಯವೇ ಇಲ್ಲ. ಮತ್ತೆ ಕೆಲವರು ತಾವು ಒಳ್ಳೆಯವರು ಎಂದು ತೋರಿಸುವುದಕ್ಕೆ ಇಂತಹ ತತ್ವಜ್ಞಾನ ಪ್ರದರ್ಶಿಸುತ್ತಾರೆ. ಈ ಫಿಲಾಸಫೀ ಯಾವತ್ತೂ ಫಿಲ್ ಆಗದ ವಸ್ತು.

ಮತ್ತೆ ನನ್ನ ಪಕ್ಕದ ಮನೆಯಲ್ಲಿ ಇರುವ ಒಬ್ಬ ಹಿರಿಯರು ತತ್ವ ಜ್ಞಾನ ಹೇಳುತ್ತಿದ್ದರು. ಮತ್ತು ಪ್ರತಿ ಬಾರಿ ತಮ್ಮ ಅಕ್ಷರಗಳ ಬಗ್ಗೆ ವರ್ಣನೆ ಕೂಡ ಮಾಡುತ್ತಿದ್ದರು. ನಮಗೂ ಅಕ್ಷರ ಗುಂಡಾಗಿ ಬರೆಯಿರಿ ಎಂದು ಹೇಳಿ ರಾತ್ರಿ ಗುಂಡು ಹಾಕಿ ಕುಳಿತಿರುತ್ತಿದ್ದರು. ಉಪದೇಶ,ವೇದಾಂತ, ತತ್ವಜ್ಞಾನ ಎಲ್ಲರೂ ಪರಿಪಾಲಿಸಿದರೆ ಎಲ್ಲರೂ ದೊಡ್ಡವರಾಗಿಯೇ ಇರುತ್ತಾರೆ ಅಲ್ಲವೇ, ಚಿಕ್ಕ ಮನುಜರು ಕಡಿಮೆ ಆಗಿಬಿಡುತ್ತಾರೆ. ಆಮೇಲೆ ಎಲ್ಲರಿಗೂ ಮ್ಯಾನೇಜರ್ ಲೆವೆಲ್ ನಲ್ಲೇ ಇರುತ್ತಾರೆ. ಆದರೆ ಕೆಳಗೆ ಕೆಲಸ ಮಾಡುವವರು ಯಾರು? ಎಂದು ಪ್ರಶ್ನೆ ಹಾಕಿದ.

ಒಂದು ಕತೆ ಹೇಳುತ್ತೇನೆ ಕೇಳು. ಆಚಾರ್ಯ ಹೇಳುವುದಕ್ಕೆ ಮತ್ತು ಬದ್ನೆಕಾಯಿ ತಿನ್ನುವುದಕ್ಕೆ ಇದು ಸರಿಯಾಗಿ ಹೊಂದುತ್ತದೆ ಎಂದ. ಒಮ್ಮೆ ಒಬ್ಬ ಸಂಪ್ರದಾಯಸ್ತರ ಮನೆಯಲ್ಲಿ ಹಿರಿಯರು ತೀರಿಕೊಂಡಿದ್ದರು. ಅವರ ಪಿಂಡ ಇಟ್ಟು ಕಾಯುತ್ತಾ ನಿಂತಿದ್ದರು. ಯಾವುದೇ ಕಾಗೆ ಬಂದು ಮುಟ್ಟಲಿಲ್ಲ. ತುಂಬಾ ಹೊತ್ತು ಕಾದರೂ ಆಗಲೂ ಯಾವುದೇ ಕಾಗೆ ಮೂಸಲ್ಲಿಲ್ಲ. ಇನ್ನೂ ಕಾದರೆ ಆಗುವುದಿಲ್ಲ, ನನಗೆ ಶುಗರ್ ಬೇರೆ ಇದೆ ಎಂದು, ಅವರ ಮನೆಯಲ್ಲಿ ಇರುವ ಒಬ್ಬ ಹೊಟೇಲಿನಿಂದ ಚಿಕನ್ ತಂದು ಪಿಂಡದ ಪಕ್ಕ ಎಸೆದ. ಅಷ್ಟೇ... ಕಾಗೆಗಳ ದಂಡೆ ಬಂದು, ಎಲ್ಲವನ್ನು ತಿಂದು ಹೋಗಿತ್ತು. ಪಾಪ ತಮ್ಮ ಹೊಟ್ಟೆ ಸಲುವಾಗಿ ಸತ್ತವರ ಆಸೆ ಅವರಿಗೆ ಅಷ್ಟಕ್ಕೇ ಅಷ್ಟೇ ಎಂದ.

ನೋಡು ನಾವೆಲ್ಲರೂ ತೂತು ಮಡಿಕೆ ಇದ್ದ ಹಾಗೆ ಎಂದ. ನನಗೆ ಅರ್ಥವಾಗಲಿಲ್ಲ. ಹಾಗೆ ಅಂದರೆ ಎಂದೆ. ಮತ್ತೆ ಅದರ ಕತೆ ಶುರು ಮಾಡಿದ. ನೋಡು ಒಬ್ಬ ಮನುಷ್ಯನ ಹತ್ತಿರ ಎರಡು ಮಡಿಕೆಗಳು ಇದ್ದವು. ಒಂದು ಮಡಿಕೆ ಚೆನ್ನಾಗಿ ಇತ್ತು. ಇನ್ನೊಂದು ಸ್ವಲ್ಪ ತೂತು ಇತ್ತು. ದಿನಾಲೂ ಎರಡನ್ನೂ ತೆಗೆದುಕೊಂಡು ಹೋಗಿ ನೀರು ತುಂಬುತ್ತಿದ್ದ. ಅದನ್ನು ನೀರು ತುಂಬುವ ಸಮಯದಲ್ಲಿ ತೂತು ಇರುವ ಮಡಿಕೆ ಅರ್ಧ ಅಗಿರುತಿತ್ತು. ಅದನ್ನು ನೋಡಿದ ಅದನ್ನು ನೋಡಿದ ಅವನ ಮಡದಿ ಇದನ್ನು ಒಗೆದು ಬಿಡಬಾರದೇ ಎಂಬ ಸಲಹೆ ಇಟ್ಟಳು. ಅದಕ್ಕೆ ಅವನು ಅವನ ಹೆಂಡತಿಯನ್ನು ಕರೆದುಕೊಂಡು ಹೋಗಿ, ತನ್ನ ಬಾವಿಯಿಂದ ಮನೆಯವರೆಗೂ ಇರುವ ಹೂವಿನ ಕುಂಡಗಳನ್ನು ತೋರಿಸಿ, ಇವೆಲ್ಲವೂ ಈ ತೂತುಮಡಿಕೆಯ ಉಪಕಾರದಿಂದ ಬೆಳೆದ ಹೂವಿನ ಗಿಡಗಳು ಮತ್ತು ದಿನಾಲೂ ಇವುಗಳನ್ನು ಕಿತ್ತು ದೇವರಿಗೆ ಮತ್ತು ನಿನಗೆ ಕೊಡುತ್ತೇನೆ. ಅದರ ಸೋರುವಿಕೆಯ ನೀರು ಈ ಗಿಡಗಳಿಗೆ ಆಹಾರವಾಗುತ್ತೆ. ಮತ್ತು ನನ್ನ ಕೆಲಸ ಕೂಡ ತಪ್ಪುತ್ತೆ. ಈಗ ಹೇಳು ಇದನ್ನು ನಾನು ಬಿಸಾಡಲೆ ಎಂದು ಕೇಳಿದ. ಆಗ ಹೆಂಡತಿ ತನ್ನ ತಪ್ಪು ಅರಿವಾಗಿ ಬೇಡ.. ಬೇಡ... ಎಂದಳು. ಹೀಗೆ, ಎಲ್ಲರಲ್ಲಿಯೂ ಕೆಲ ದೋಷಗಳು ಸಹಜವಾಗಿಯೇ ಇರುತ್ತವೆ. ಅವುಗಳನ್ನು ತಿದ್ದುವುದು ಅಥವಾ ಕಡೆಗಣಿಸುವುದು ಬಿಟ್ಟು, ಅವುಗಳನ್ನು ಹಾಗೆಯೇ ಸ್ವೀಕರಿಸಿ, ಅವುಗಳ ಉಪಯೋಗ ಪಡೆದುಕೊಳ್ಳಬೇಕು....ಇಷ್ಟೆಲ್ಲಾ ಹೇಳಿದ್ದೇನೆ, ನೀನು ಬೇಕಾದರೆ ತತ್ವಜ್ಞಾನಿ ಆಗು ಎಂದು ಹೀಯಾಳಿಸಿದ.

ಮತ್ತೆ ನೀನು ಈಗ ಏನು? ಮಾಡಿದೆ ಎಂದು ಕೇಳಿದೆ. ಲೇ ಗುರುವಿಗೆ ತಿರುಮಂತ್ರನಾ ಎಂದು ದಬಾಯಿಸಿದ. ನಾನು ನೀಡಿದ್ದು ಬರೀ ಸಲಹೆ ಮಾತ್ರ. ಉಪದೇಶ ಅಥವಾ ತತ್ವಜ್ಞಾನ ಅಲ್ಲ ಎಂದ. ನಾನು ಏನು? ಬರೆಯಬೇಕು ಎಂದು ತಲೆಯಲ್ಲಿ ಬರೆ ಎಳೆದ ಹಾಗೆ ಹೇಳಿದ್ದ. ಅದರ ಕಲೆ(ಎರಡು ಅರ್ಥದಲ್ಲಿ ಸ್ವೀಕರಿಸಿ) ಈಗಲೂ ಇದೆ ಎಂದರೆ ಅತಿಶಯೋಕ್ತಿ ಆಗಲಾರದು.

ಅವನು ಹೇಳಿದ ಹಾಗೇನೆ ಮಾಡಿದೆ. ಮೊದಮೊದಲು ಲೇಖನ ಬರೆದ ಮೇಲೆ, ಅವನಿಗೆ ಫೋನ್ ಮಾಡಿ ಹೇಳುತ್ತಿದ್ದೆ. ಈ ಪ್ಯಾರಾದಲ್ಲಿ ಇರುವ ಪಂಚ್ ನೋಡು ಎಂದು ಹೇಳಿ ತಲೆ ತಿನ್ನುತ್ತಿದ್ದೆ. ಈಗ ನನ್ನ ಫೋನ್ ಬಂದರೆ ಎತ್ತುವುದೇ ಇಲ್ಲ ಆಸಾಮಿ. ಕೆಲವೊಮ್ಮೆ ಬ್ಯೂಸಿಯಾಗಿ ಇದ್ದೇನೆ, ಆಮೇಲೆ ಕಾಲ್ ಮಾಡುತ್ತೇನೆ ಎಂದು ಹೇಳಿ ಕಾಲಿಗೆ ಬುದ್ದಿ ಹೇಳುತ್ತಾನೆ.

-----------------
ಮಂಜನ ಹನಿ

ಮಂಜ ಬಾಡಿಗೆಗೆಎಂದು ವಿಜಯನಗರದಲ್ಲಿ ಇದ್ದ. ಒಮ್ಮೆ ಅವರ ಮನೆ ಮಾಲೀಕರು ಬಂದರು.
ಮಾಲೀಕರು - ರೀ ಮಂಜುನಾಥ, ನೀವು ಬಂದು ಒಂದು ವರ್ಷ ಆಯಿತು ಅಲ್ಲವಾ?
ಮಂಜ - ಹೌದು ಸರ್...
ಮಾಲೀಕರು - ನೋಡಿ ಈ ತಿಂಗಳಿಂದ ಎರಡು ನೂರು ಬಾಡಿಗೆ ಎಕ್ಸ್‌ಟ್ರಾ ಕೊಡಿ.
ಮಂಜ - ಸರ್, ನೋಡಿ ನಾನು ಒಬ್ಬನೇ ಇರೋದು ದಯ ತೋರಿ ಎಂದು ಗೋಳಾಡಿದ.
ಮಾಲೀಕರು - ಪಾಪ ಹೌದಲ್ಲವಾ, ನೀನು ಒಬ್ಬನೇ ಇದ್ದೀಯ ಅಂತ ನನಗೆ ಗೊತ್ತು. ಆಯಿತು, ನನ್ನ ಹೆಂಡ್ತೀನ ಕೇಳಿ ನೋಡ್ತೀನಿ, ಅವಳು ಒಪ್ಪಿದರೆ, ವಿಚಾರ ಮಾಡೋಣ.
ಮಂಜ ಸುಸ್ತೋ ಸುಸ್ತು ....

Tuesday, January 11, 2011

ಬುರುಡೆ ಪುರಾಣ ....


ಮೊನ್ನೆ ತುಂಬಾ ಕೆಲಸವಿದ್ದ ಕಾರಣ, ಆಫೀಸ್ ನಿಂದ ಸ್ವಲ್ಪ ತಡವಾಗಿ ಹೋದೆ. ಮಡದಿ, ಮಗ ಇಬ್ಬರು ನಿದ್ದೆಯಲ್ಲಿ ಇದ್ದರು. ತೊಂದರೆ ಏಕೆ? ಮಾಡಬೇಕು ಎಂದು ಅವರನ್ನು ಎಬ್ಬಿಸದೇ, ನಾನೇ ಊಟ ಮಾಡಿ, ಬೆಡ್‌ರೂಮ್ ಗೆ ಹೋಗದೇ, ಹಾಲ್ ನಲ್ಲಿ ನಿದ್ದೆಗೆ ಜಾರಿದೆ. ಹಾಸಿಗೆ ಮೇಲೆ ಒರಗಿದ ಕೂಡಲೇ, ನಿದ್ರಾ ದೇವಿಗೆ ಶರಣಾಗಿ ಬಿಟ್ಟೆ. ಮಧ್ಯ ರಾತ್ರಿ ಯಾರೋ... ನನ್ನನ್ನು ಎಬ್ಬಿಸಿದ ಹಾಗೆ ಆಯಿತು. ಆ ಕಡೆ ಒರಗಿ ಮಲಗಿಕೊಂಡೆ. ಮತ್ತೆ ಬಡಿದು ಎಬ್ಬಿಸಿದ ಹಾಗೆ ಆಯಿತು. ಕಣ್ಣು ಬಿಟ್ಟೆ, ಚಾಕು ಹಿಡಿದು ಯಾರೋ.. ನಿಂತ ಹಾಗೆ ಅನ್ನಿಸಿತು. ನನ್ನ ಉಸಿರೇ ನಿಂತ ಹಾಗೆ ಆಗಿತ್ತು. ಪಕ್ಕದಲ್ಲಿ ಬೇರೆ ಮಡದಿ ಇಲ್ಲಾ, ಇದ್ದಿದ್ದರೆ ಸ್ವಲ್ಪ ಧೈರ್ಯ ಬರಬಹುದಿತ್ತು. ಜೋರಾಗಿ ಕಿರುಚೋಣ ಎಂದುಕೊಂಡರೂ, ಭಯದಿಂದ ಮತ್ತೆಲ್ಲಿ ಚಾಕುವಿನಿಂದ ಚುಚ್ಚಿ ಬಿಟ್ಟರೆ ಕಷ್ಟ ಎಂದು, ತೆರೆದ ಬಾಯಿಯನ್ನು ಹಾಗೆ ಬಿಟ್ಟು ಹೌಹಾರಿ ಸುಮ್ಮನಾದೆ. ಮತ್ತೆ ಅವರಿಗೆ ಏನು ಬೇಕು? ಎಂದು ಕೇಳಬೇಕು ಅನ್ನುವಷ್ಟರಲ್ಲಿ ಲೈಟ್ ಹತ್ತಿತ್ತು. ನೋಡುತ್ತೇನೆ.. ನನ್ನ ಮಡದಿ ಚಾಕುವಿನೊಂದಿಗೆ. ಹೆದರಿ, ಲೇ.. ಏನೋ ಸ್ವಲ್ಪ ಕೆಲಸ ಇತ್ತು ಎಂದು ತಡವಾಗಿ ಬಂದೆ ಅಷ್ಟೇ ಎಂದೆ. ರೀ... ಅದು ಅಲ್ಲ ಎಂದಳು. ಮತ್ತಿನ್ನೇನು?. ತರಕಾರಿ ಹೆಚ್ಚಬೇಕು ತಾನೇ ನಾಳೆ ಬೆಳಿಗ್ಗೆ ಹೆಚ್ಚುತ್ತೇನೆ, ಈಗ ಮಲಗಿಕೊಳ್ಳಲು ಬಿಡು ಎಂದೆ. ರೀ ಸುಮ್ಮನೇ ಈ ಚಾಕು ತೆಗೆದು ಕೊಳ್ಳಿ ಎಂದು ಚಾಕು ಕೈಯಲ್ಲಿ ಇಟ್ಟಳು.



ಆಗ ಹಳೆಯ ಕಾಲದ ವಸ್ತುಗಳೆ ಚೆನ್ನ ಎಂದನಿಸಿತು. ಮೊದಲು ತರಕಾರಿ ಹೆಚ್ಚಲು ಇಳಿಗೆ ಉಪಯೋಗಿಸುತ್ತಿದ್ದರು. ಏನೋ? ಹೆಚ್ಚಲು ಕಷ್ಟ ಆಗಬಹುದು ಎಂದು ಹೆಣ್ಣು ಮಕ್ಕಳು ತಾವೇ ಹೆಚ್ಚಿಕೊಳ್ಳುತ್ತಿದ್ದರು. ಆದರೆ ಈಗ ಚಾಕು, ಹೆಚ್ಚಲು ನಾವೇ ಬೇಕು. ಮತ್ತೆ ಮೊದಲು ರುಬ್ಬು ಗುಂಡಿನಿಂದ ಹಿಟ್ಟು ರುಬ್ಬ ಬೇಕಿತ್ತು. ಆದರೆ ಈಗ ಗಂಡನಿಂದ ಹಿಟ್ಟು ಗ್ರೈಂಡರ್ ನಲ್ಲಿ ಹಾಕಿಸಿ ರುಬ್ಬಿಸುತ್ತಾರೆ. ರುಬ್ಬದಿದ್ದರೆ ಅವರೇ ರುಬ್ಬುತ್ತಾರೆ ನಮ್ಮನ್ನು. ಬರಿ ಸ್ವಲ್ಪ ಮಾತ್ರ ವ್ಯತ್ಯಾಸ ರುಬ್ಬು ಗುಂಡು, ರುಬ್ಬು ಗಂಡ ಅರ್ಥವಾಯಿತು ತಾನೇ?....:-))).



ಚಾಕು ಹಿಡಿದು ಅಡುಗೆ ಮನೆಗೆ ಹೊರಟೆ. ರೀ... ಅಲ್ಲಿ ಅಲ್ಲ ಬನ್ನಿ ಇಲ್ಲಿ ಎಂದು ಬೆಡ್ ರೂಮಿಗೆ ಕರೆದುಕೊಂಡು ಹೋದಳು. ನೋಡುತ್ತೇನೆ ಬೆಡ್ ರೂಮಿನಲ್ಲಿ ತುಂಬಾ ಅಲಂಕರಿಸಿದ್ದಳು. ಮತ್ತೆ "ಹ್ಯಾಪೀ ಬರ್ತ್ ಡೇ ಟು ಯೂ" ಎಂದು ಮಗ, ಮಡದಿ ಇಬ್ಬರು ಚಪ್ಪಾಳೆ ತಟ್ಟಿದರು. ಮತ್ತೆ ಎದುರಿಗೆ ದೊಡ್ಡದಾದ ಕೇಕ್ ಬೇರೆ ಇತ್ತು. ಕ್ಯಾಂಡಲ್ ಆರಿಸಿ, ಕೇಕ್ ಕಟ್ ಮಾಡಿ ಆಯಿತು. ತುಂಬಾ ಖುಷಿ ಆಯಿತು.



ತುಂಬಾ ಖುಶಿಯಿಂದ, ಮರುದಿನ ಮಂಜನಿಗೆ ನಿನ್ನೆ ರಾತ್ರಿ ನಡೆದ ನನ್ನ ಬರ್ತ್‌ಡೇ ಪುರಾಣನ್ನೇಲ್ಲಾ ಕಕ್ಕಿಬಿಟ್ಟೆ. ನೀನು ಎಷ್ಟು ಘಂಟೆಗೆ ಹುಟ್ಟಿದ್ದು ಎಂದು ಕೇಳಿದ. ನಾನು ಆರು ಎಂದೆ. ಮಂಜ ಅದಕ್ಕೆ ಇದೇನು ಸಂಸ್ಕೃತಿನೋ ರಾತ್ರಿ ದೆವ್ವ ಏಳುವ ಸಮಯದಲ್ಲಿ ಬರ್ತ್‌ಡೇ ಮಾಡಿಕೊಂಡನಂತೆ ಎಂದು ಕಿಚಾಯಿಸಿದ. ಮತ್ತೆ ನಮ್ಮ ಸಂಸ್ಕೃತಿಯಲ್ಲಿ ದೀಪ ಬೆಳಗಿ ಆಚರಿಸಿದರೆ, ನೀನು ನೋಡಿದರೆ ದೀಪ ಆರಿಸಿ ಆಚರಿಸಿಕೊಂಡೆ ಎಂದ. ಹುಟ್ಟಿದ ದಿವಸ ಚಾಕು ಕೊಡೋ ನಾವು ಎಂತಹ ಭೂಪರು ಇರಬೇಕು ಎಂದ. ನಮ್ಮ ಸಂಸ್ಕೃತಿ ನಾವೇ ಕಾಪಾಡದಿದ್ದರೆ ಇನ್ನೂ ಯಾರು ಕಾಪಡಬೇಕು ಎಂದ. ಕೆಟ್ಟಿದ್ದು ಸುಧಾರಿಸಬಹುದು, ಆದರೆ ಒಳ್ಳೆಯದೇ ಕೆಟ್ಟರೆ ಏನು? ಮಾಡಬೇಕು ಎಂದ. ಅವನು ಹೇಳುತ್ತಿದ್ದರೆ ನಾನು ಏನು? ಹೇಳಬೇಕು ಎಂದು ಯೋಚಿಸದೇ ಅವನನ್ನು ನೋಡುತ್ತಾ ಕುಳಿತಿದ್ದೆ. ಪಶ್ಚ್ಯಾತ್ಯರು ನಮ್ಮ ಯೋಗ, ಆಯುರ್ವೇದ ಎಲ್ಲವನ್ನು ಅನುಸರಿಸುತ್ತಿದ್ದಾರೆ. ಆದರೆ ನಾವು ಅವರ ಸಂಸ್ಕೃತಿ ಅನುಸರಿಸಿ ಕೆಡುತ್ತಿದ್ದೇವೆ ಎಂದ. ಆಧುನಿಕತೆ ಎಂದು ನಮ್ಮ ಹಳೆಯ ಆಚರಣೆಗಳಿಗೆ ಮಣ್ಣೆರಚುತ್ತಿದ್ದೇವೆ ಎಂದ. ಈಗಿನದು ಆಧುನಿಕತೆ, ಆದರೆ ಆಗಿನದು "ಅದು+ನೀತಿ+ಕಥೆ" ಎಂದ.



ಮತ್ತೆ ನಿನಗೆ ಗೊತ್ತಾ, ಕೆಲ ಹಳೆಯ ಕಾಲದ ಜನಗಳಿಗೆ ತಮ್ಮ ಹುಟ್ಟು ಹಬ್ಬ ಎಂದು ಸಹಿತ ಗೊತ್ತಿಲ್ಲ. ಏಕೆ? ನಮ್ಮಷ್ಟಕ್ಕೆ ನಾವೇ ಇಷ್ಟು ಮುದುಕ ಅದೇವು ಎಂದು ಆಚರಣೆ ಮಾಡಿಕೊಳ್ಳಬೇಕು ನನಗೆ ಅರ್ಥ ಆಗುತ್ತಿಲ್ಲ. ಮತ್ತೆ ತಲೆಯಲ್ಲಿ ಇನ್ನಷ್ಟು ವಿಚಾರಗಳು. 34 ಆಯಿತು ಇನ್ನೂ ಮನೆ ತೆಗೆದುಕೊಂಡಿಲ್ಲ, ಕಾರು ಹೀಗೆಲ್ಲ ಎಂದ. ಹಳೆಯ ಕಾಲದ ಜನ ಪ್ರತಿ ವಾರ 'ಗೋ ಮೂತ್ರ' ತೆಗೆದು ಕೊಳ್ಳೂತ್ತಿದ್ದರು, ಆದರೆ ಈಗಿನ ಜನ 'ಗೋ' ಅಂಡ್ ಗೇಟ್ ಸಮ್ 'ಮಾತ್ರೆ' ಎಂದು ಹೇಳುತ್ತಾರೆ ಎಂದ. ಮೊದಲಿನ ಕಾಲದಲ್ಲಿ ಹೆಣ್ಣು ಮಕ್ಕಳು ವಾಂತಿ ಮಾಡಿಕೊಂಡರೆ ಖುಷಿಯಾಗಿ ಊರಿಗೆ ಸಿಹಿ ಹಂಚುತ್ತಿದ್ದರು. ಆದರೆ, ಈಗ ರಾತ್ರಿ ಪಾರ್ಟೀ ಮಾಡಿ ಬಂದಿರಬೇಕು ಎಂದು ಅರ್ಥೈಸಿಕೊಳ್ಳುತ್ತಾರೆ ಎಂದ. ಮನೆಯಲ್ಲಿ ಮಾಡಿದ ಶೆವಿಗೆ ಬಾತ್ ತಿನ್ನುವುದಿಲ್ಲ ಹೊರಗೆ ಹೋಗಿ ಚೈನೀಸ್ ನೂಡಲ್ಸ್ ತಿನ್ನುತ್ತಾರೆ. ಮನೆಯಲ್ಲಿ ಹೊಳಿಗೆಗೆ ಹಾಲು ಹಾಕುವಾಗ ಸ್ವಲ್ಪ ಕೆನೆ ಜ್ಯಾಸ್ತಿ ಬಿದ್ದರೆ, ಆಕಾಶವೇ ಕಳಚಿ ಬಿದ್ದ ಹಾಗೆ ಆಡುವ ಜನ, ಪೀಜಾ, ಬರ್ಗರ್ ನಲ್ಲಿ ಇರುವ ಕ್ರೀಮ್ ತಿಂದು ತುಂಬಾ ಚೆನ್ನಾಗಿದೆ ಎಂದು ಹೋಗಳುತ್ತಾರೆ. ಮೊದಲಿನ ಜನ ಒಳ್ಳೆಯದಾಗಲಿ ಎಂದು ಹಾರೈಸುತ್ತಾರೆ. ಆದರೆ ಈಗಿನ ಜನ ಹೌ ಓಲ್ಡ್ ಆರ್ ಯು ಎಂದು ಕೇಳುತ್ತಾರೆ. ಮತ್ತೆ ಇನ್ನೂ ಸ್ವಲ್ಪ ಅಲ್ಲೇ ಇದ್ದರೆ, ಇನ್ನೂ ತಲೆ ತಿನ್ನುತ್ತಾನೆ ಎಂದು ಬೇಗನೆ ಜಾಗ ಖಾಲಿ ಮಾಡಿದೆ.ಆಮೇಲೆ ತಿಳಿಯಿತು ಮಂಜ ತನ್ನ ಮಡದಿಯೊಂದಿಗೆ ಜಗಳ ಮಾಡಿಕೊಂಡು ಬಂದು ನನ್ನ ತಲೆ ತಿಂದಿದ್ದ ಎಂದು.



ಅವನಿಗೆ ನನ್ನ ಬರ್ತ್‌ಡೇ ಪುರಾಣ ಹೇಳೋಕೆ ಹೋಗಿ, ನನ್ನ ಬುರುಡೆಯಲ್ಲಿ ಹುಳ ಬಿಟ್ಟುಕೊಂಡು ಬಂದಿದ್ದೆ. ಅದಕ್ಕೆ ಇದನ್ನು ಬುರುಡೆ ಪುರಾಣ ಎಂದು ಅಂದಿದ್ದು....

Friday, December 10, 2010

ಚಪ್ಪಲ್ ಚನ್ನಿಗರಾಯ ....

ನಮ್ಮ ಕಾಲೇಜ್ ನಲ್ಲಿ ಅಂಜನ್ ಎಂಬ ಹುಡುಗ ಇದ್ದ. ಸಕ್ಕತ್ ಜಿಪುಣ. ಒಂದು ಪೈಸೆ ಕೂಡ ಬಿಚ್ಚುತ್ತಿರಲಿಲ್ಲ. ಹುಡುಗಿಯರು ಎಂದರೆ ಅತ್ಯಂತ ಆಪ್ಯತೆ. ಅವರ ಜೊತೆ ಕೂಡ ಒಂದು ಪೈಸೆ ಬಿಚ್ಚುತ್ತಿರಲಿಲ್ಲ. ಹುಡುಗಿಯರ ಹತ್ತಿರಾನೇ ದುಡ್ಡು ವಸೂಲಿ ಮಾಡುತ್ತಿದ್ದ. ಕ್ಯಾಂಟೀನ್ ಗೆ ಬಂದರು ದುಡ್ಡು ಕೊಟ್ಟು ಖರೀದಿಸದೇ, ನಾನು ಸ್ವಲ್ಪ ರುಚಿ ನೋಡುತ್ತೇನೆ ಎಂದು ಹೇಳಿ ಎಲ್ಲರ ಪ್ಲೇಟ್ ಗೆ ಕೈ ಹಾಕಿ ತಿನ್ನುತ್ತಿದ್ದ. ಕೆಲ ಹುಡುಗರು ಅವನು ಬರುತ್ತಾನೆ ಎಂದರೆ ಗಬ.. ಗಬ.. ಎಂದು ಬೇಗನೆ ತಿಂದು ಜಾಗ ಖಾಲಿ ಮಾಡುತ್ತಿದ್ದರು. ಹುಡುಗಿಯರನ್ನು ಪರಿಚಯ ಇಲ್ಲದೇ ಇದ್ದರು ಅವರನ್ನು ಹೋಗಿ ಮಾತನಾಡಿಸುತ್ತಿದ್ದ. ಒಂದು ಹುಡುಗಿ ಅಂಜನಾ ಎಂದು ಇತ್ತು. ಅವಳ ಹೆಸರಿಗೂ ತನ್ನ ಹೆಸರು ತುಂಬಾ ಮ್ಯಾಚ್ ಆಗುತ್ತೆ ಎಂದು ಅವಳ ಹಿಂದೆ ಬಿದ್ದಿದ್ದ. ಆಗ ಮಂಜ ಮುಂದೆ ಮದುವೆ ಆದರೆ, ಲೇ ಇಬ್ಬರ ಹೆಸರು ಒಂದೇ ತರಹ ಇದ್ದರೆ ಮನೆಯಲ್ಲಿ ಕರೆಯುವದು ಕಷ್ಟ ಕಣೋ, ಅದಕ್ಕೆ ಅವಳ ಹೆಸರು ಅಮೃತಾ ಎಂದು ಮದುವೆ ಆದ ಮೇಲೆ ಬದಲಿಸು ಎಂದು ಹೇಳಿದ. ಅವಳು ಅವನಿಗೆ ತುಂಬಾ ಇಷ್ಟ ಪಡುತ್ತಿದ್ದಳು. ನಾವು ಒಳಗೊಳಗೆ ಅಮೃತಾ + ಅಂಜನ್ = ಅಮೃತಾಂಜನ್ ಎಂದು ಅವನನ್ನು ಆಡಿಕೊಂಡು ಅವನ ಹಿಂದೆ ನಗುತ್ತಿದ್ದೆವು.

ಕಡೆಗೆ ಒಂದು ದಿನ ಮಂಜ, ಲೇ ... ಅವಳನ್ನು ಮದುವೆ ಆದರೆ ನಿನಗೆ ಕಷ್ಟ ಕಣೋ ಏಕೆಂದರೆ? ಅವಳು ತುಂಬಾ ದುಡ್ಡು ಖರ್ಚು ಮಾಡುತ್ತಾಳೆ. ಈಗಿನ ಕಾಲದಲ್ಲಿ ಅರೇಂಜ್ ಮ್ಯಾರೇಜ್ ಆದರೆ ಕಷ್ಟ, ಅದು ಬೇರೆ ನೀನು ಲವ್ ಮ್ಯಾರೇಜ್ ಆಗುತ್ತಾ ಇದ್ದೀಯಾ ಮುಂದೆ ತುಂಬಾ ಕಷ್ಟ ಆಗುತ್ತೆ ಎಂದು ಹೇಳಿದಾಗ, ಅವಳು ಮಾತನಾಡಿಸಿದರು ಅವಳಿಗೆ ಯಾವದೆ ಸೊಪ್ಪು ಹಾಕಲಿಲ್ಲ. ಕಡೆಗೆ ಅವಳನ್ನು ಬಿಟ್ಟು ಬಿಟ್ಟ.

ನಾನು,ಮಂಜ ಮತ್ತು ಸುಬ್ಬ ಬೆಂಗಳೂರಿಗೆ ಬಂದು ಠಿಕಾಣಿ ಹೂಡಿದ್ದೆವು. ಆಗ ಒಂದು ದಿವಸ ನನಗೆ ಫೋನ್ ಮಾಡಿದ್ದ. ಏನಪ್ಪಾ? ಏನು ಮಾಡುತ್ತಾ ಇದ್ದೀರ ತ್ರಿಮೂರ್ತಿಗಳು ಎಂದು ಕೇಳಿದ. ನಾನು ಬೆಂಗಳೂರಿಗೆ ಬರುತ್ತಾ ಇದ್ದೇನೆ. ನಿಮ್ಮ ರೂಮಿನಲ್ಲಿ ಇರುವುದಕ್ಕೆ ಅವಕಾಶ ಕೊಡು ಎಂದು ಕೇಳಿದ.ಲೇ.. ನಾನೇ ಮಂಜನ ರೂಮಿಗೆ ಬಂದಿದ್ದೇನೆ. ನೀನು ಮಂಜನಿಗೆ ಕೇಳು ಎಂದು ಹೇಳಿದೆ. ಕಡೆಗೆ ಅವರಿಬ್ಬರ ನಡುವೆ ಏನೋ ಒಪ್ಪಂದ ಆಯಿತು ಎಂದು ಅನಿಸುತ್ತದೆ. ಮರುದಿನ ಅಂಜನ್ ನಮ್ಮ ರೂಮಿನಲ್ಲಿ ಠಿಕಾಣಿ ಹೂಡಿದ್ದ.

ಏನೋ ಸುಧಾರಿಸಿರಬಹುದು ಎಂದು ನಾವೆಲ್ಲರೂ ಎಣಿಸಿದ್ದೆವು. ಆದರೆ ತಿಂಡಿ, ಊಟ ಆದಮೇಲೆ ದುಡ್ಡು ಕೊಡದೇ ಫೋನ್ ಬಂದಿದೆ ಅಥವಾ ಫೋನ್ ಮಾಡುವುದಿದೆ ಎಂದೆಲ್ಲ ನೆಪ ಹೇಳಿ, ನಮ್ಮದೇ ದುಡ್ಡಿನಲ್ಲಿ ತನ್ನ ಬೇಳೆ ಬೇಯಿಸಿಕೊಳ್ಳುತ್ತಿದ್ದ. ತ್ರಿಮೂರ್ತಿಗಳಾದ ನಮಗೆ ಮೂರು ನಾಮ ಇಟ್ಟಿದ್ದ. ಮಂಜ ಮತ್ತು ನಾವೆಲ್ಲರೂ ಎಷ್ಟು ಯೋಚನೆ ಮಾಡಿ, ರೂಮಿನಿಂದ ಹೊರ ಹಾಕ ಬೇಕೆಂದರು ಆಗಲಿಲ್ಲ. ಬಸ್ಸಿನಲ್ಲೂ ಸಹ ಅವನ ಚಪಲತೆ ಪ್ರದರ್ಶಿಸುತ್ತಿದ್ದ. ಅವನು ತುಂಬಿದ ಬಸ್ಸಿಗೆ ಮಾತ್ರ ಹತ್ತುತಿದ್ದ. ಒಂದು ದಿನ ಖಾಲಿ ಬಸ್ ಹತ್ತಿದ್ದ. ಮುಂದೆ ನಿಂತ ಹುಡುಗಿ ಅವನಿಗೆ ತನ್ನ ಚಪ್ಪಲಿಯಿಂದ ಬಾರಿಸುತ್ತಿದ್ದಳು. ಅದನ್ನು ನೋಡಿದ ಮಂಜ, ಅವನಿಗೆ ಹೀಗೆಲ್ಲ ಮಾಡುವ ಹಾಗಿದ್ದರೆ ನೀನು ಬೇರೆ ಕಡೆಗೆ ಹೋಗು ಎಂದು ತಾಕೀತ್ ಮಾಡಿದ್ದ. ತಪ್ಪು ಆಯಿತು.. ಕ್ಷಮಿಸು.. ಎಂದು ಹೇಳಿ ಮುಂದಿನ ಬಾರಿ ಹಾಗೆ ಮಾಡುವುದಿಲ್ಲ ಎಂದು ಹೇಳಿದ. ಕಡೆಗೆ ಒಪ್ಪಿ ಇಟ್ಟು ಕೊಂಡೆವು. ಕೆಲ ದಿನ ಸುಧಾರಿಸಿದ ಹಾಗೆ ನಟಿಸಿ ಮತ್ತೆ ನಾಯಿ ಬಾಲ ಡೊಂಕು ಅನ್ನುವ ಹಾಗೆ ಮತ್ತೆ ತನ್ನ ವರಸೆ ಶುರು ಹಚ್ಚಿಕೊಂಡ.

ಮನೆಯವರಿಗೂ ಇವನ ಬಗ್ಗೆ ಅಸಡ್ಡೆ ಇತ್ತು. ಅವರ ಅಪ್ಪ ಅವನಿಗೆ ಮದುವೆ ಆದರೆ ಸುಧಾರಿಸುತ್ತಾನೆ ಎಂದು. ಹೆಣ್ಣು ನೋಡಲು ಶುರು ಮಾಡಿದರು. ಪ್ರತಿ ವಾರ ಹೆಣ್ಣು ನೋಡಲು ಸ್ವೀಟ್ ಬಾಕ್ಸ್ ತೆಗೆದು ಕೊಂಡು ಹೋಗುತ್ತಿದ್ದ. ಅದು ಬರಿ 200 ಗ್ರ್ಯಾಮ್ಸ್ ಮಾತ್ರ. ಪ್ರತಿ ಬಾರಿ ಸಂಬಂದ ರಿಜೆಕ್ಟ್ ಆಗುತ್ತಿತ್ತು. ಅವನಿಗೂ ತಲೆ ಕೆಟ್ಟು ಹೋಗಿತ್ತು. ಒಂದು ದಿನ ಬೆಂಗಳೂರಿನಲ್ಲೇ, ಒಂದು ಹೆಣ್ಣು ನೋಡಲು ಸ್ವೀಟ್ ಬಾಕ್ಸ್ ತೆಗೆದುಕೊಂಡು ಶಾಸ್ತ್ರಕ್ಕೆ ಹೋಗಿದ್ದ. ಆಗ ಹೆಣ್ಣು ನೋಡಿ ಚೆನ್ನಾಗಿಲ್ಲ ಎಂದು ಸ್ವೀಟ್ ಬಾಕ್ಸ್ ಕೊಡದೇ ವಾಪಸ ತಂದಿದ್ದ. ಅದನ್ನು ರೂಮಿಗೆ ತಂದು ನಮಗೆ ಕೊಡಲು ಓಪನ್ ಮಾಡಿದ. ನೋಡಿದರೆ ಅದರಲ್ಲಿ ಸ್ವೀಟ್ ಇರದೆ ಕೆಟ್ಟ ವಾಸನೆಯ ಹಳಸಿದ ಮ್ಯಾಗಿ ಇತ್ತು. ಅವನಿಗೆ ಸ್ವೀಟ್ ಅಂಗಡಿಯವನ ಮೇಲೆ ತುಂಬಾ ಕೋಪ ಬಂತು. ಲೇsss.. ಅದಕ್ಕೆ ಕಣೋ ಹೆಣ್ಣು ಮೊದಲು ಒಪ್ಪಿಗೆ ಸೂಚಿಸಿ, ಆಮೇಲೆ ರಿಜೆಕ್ಟ್ ಮಾಡುತ್ತಾ ಇರುವದು ಎಂದು ಹೇಳಿ, ಅದನ್ನು ತೆಗೆದು ಕೊಂಡು ಸ್ವೀಟ್ ಅಂಗಡಿಗೆ ಜಗಳಕ್ಕೆ ಹೋದ. ಮಂಜ ಮುಸಿ.. ಮುಸಿ.. ನಗುತ್ತಿದ್ದ. ಅವನೆ ಸ್ವೀಟ್ ತಿಂದು, ಹೀಗೆ ಮಾಡಿದ್ದಾನೆ ಎಂದು ನಮಗೆ ಖಾತ್ರಿ ಆಯಿತು. ಸ್ವೀಟ್ ಅಂಗಡಿ ಹೋಗಿ ಬಾಕ್ಸ್ ತೆಗೆದೊಡನೆ ಕೆಟ್ಟ ವಾಸನೆ ಬರುತಿತ್ತು. ಅದನ್ನು ನೋಡಿ ಕೆಲ ಗಿರಾಕಿಗಳು ಸಹಿತ ಏನು ತೆಗೆದು ಕೊಳ್ಳದೇ ಹೋಗಿ ಬಿಟ್ಟರು. ನೀವು ನನಗೆ ಮೋಸ ಮಾಡಿದ್ದೀರ ಎಂದು ಹೇಳಿ, ಸ್ವೀಟ್ ತರುತ್ತಾನೆ ಎಂದು ನಾವು ಎಣಿಸಿದರೆ, ಅವರ ಕಡೆ 500 ರೂಪಾಯಿಗಳನ್ನು ಕಿತ್ತುಕೊಂಡು ಬಂದಿದ್ದ.

ಮುಂದೆ ಮತ್ತೊಂದು ಹೆಣ್ಣು ನೋಡುವದಕ್ಕೆ ಹೋಗುವುದಿತ್ತು. ಈ ಹುಡುಗಿ ಕೂಡ ಬೆಂಗಳೂರಿನಲ್ಲೇ ಇದ್ದಳು. ಅವಳನ್ನು ನೋಡಲು ನನ್ನನ್ನು ಕರೆದು ಕೊಂಡು ಹೋದ. ನಾನು ಯಾವುದಾದರೂ ಹೋಟೆಲ್ ಹೋಗಿ ಮಾತನಾಡೋಣ ಎಂದು ಹೇಳಿದೆ. ಅಲ್ಲಿ ಯಾವುದೆ ಚಿಕ್ಕ ಹೋಟೆಲ್ ಕಾಣಲಿಲ್ಲ, ಕಡೆಗೆ ದೊಡ್ಡ ಮನಸು ಮಾಡಿ ಬರಿಸ್ಟಾಗೆ ಕರೆದು ಕೊಂಡು ಹೋದ. ನಾನು,ಅವನು ಮತ್ತೆ ಹುಡುಗಿ, ಹುಡುಗಿಯ ಗೆಳತಿ ಎಲ್ಲರೂ ಹೋದೆವು. ಅಲ್ಲಿ ಬರಿ ಕಾಫೀ ಆರ್ಡರ್ ಮಾಡುತ್ತಲಿದ್ದ. ನಾನು ಏನಾದರೂ ತಿನ್ನಲು ಎಂದು ನಾನೇ ಹುಡುಗಿಯರಿಗೆ ಕೇಳಿದೆ. ಅವರು ಏನು ತಿಂದು ಬಂದಿರಲಿಲ್ಲ ಎಂದು ಕಾಣುತ್ತೆ, ಅವರು ತಿಂಡಿ ಆರ್ಡರ್ ಮಾಡಿದರು. ಅವರ ಜೊತೆ ನನಗು ತಿಂಡಿ ಲಭಿಸಿತ್ತು. ಅಷ್ಟರಲ್ಲೇ ನಮ್ಮ ಮಂಜ ಸುಬ್ಬನನ್ನು ಕರೆದುಕೊಂಡು ಬಂದು ಬಿಟ್ಟ. ಬಂದವನೇ ತಾನೇ ಅವರ ಪರಿಚಯ ಮಾಡಿಕೊಂಡು. ಅಂಜನ್ ನಮ್ಮ ತುಂಬಾ ಆಪ್ತ ಗೆಳೆಯ ಎಂದೆಲ್ಲ ಹೇಳಿ ಸಿಕ್ಕಾಪಟ್ಟೆ ತಿಂದು ಎದ್ದು ಹೋಗಿ ಬಿಟ್ಟ. ಅಂಜನ್ ಏನು ಮಾಡಲಾರದೇ 2300 ಬಿಲ್ಲು ಕೊಟ್ಟು ಬಂದಿದ್ದ. ಅವನ ಮುಖ ಇಂಗು ತಿಂದ ಮಂಗನ ಹಾಗೆ ಆಗಿತ್ತು. ಆ ಹುಡುಗಿಯೂ ಅವನಿಗೆ ರಿಜೆಕ್ಟ್ ಮಾಡಿದ್ದಳು. ಕೆಲ ದಿನಗಳ ಬಳಿಕ ಮಂಜನ ತರಲೆಗಳು ಅರ್ಥ ಆಗಿ ತಾನೇ ಜಾಗ ಖಾಲಿ ಮಾಡಿದ.

ಅವನಿಗೆ ನಾವೆಲ್ಲರೂ ಚಪ್ಪಲ್ ಚೆನ್ನಿಗರಾಯ ಎಂದೆ ಸಂಭೋಧಿಸುತ್ತಿದ್ದೆವು. ಈಗ ಅವನಿಗೆ ಚಪ್ಪರ ಹಾಕುವ ಸಂದರ್ಭ ಒದಗಿ ಬಂದಿದೆ. ಏನು? ಮಾಡುತ್ತಾನೋ ನೋಡಬೇಕು.

Friday, December 3, 2010

ನೀನು ಸಾಯಿತಿ ಅಂತೆ .........?

ಮಡದಿ ಊರಿಗೆ ಹೋಗಿದ್ದರಿಂದ ಮನೆಯ ಎಲ್ಲಾ ಕೆಲಸಗಳು ನನ್ನ ಹೆಗಲ ಮೇಲೆ ಬಿದ್ದಿದ್ದವು. ಬಟ್ಟೆ ಒಗೆಯುವದು, ಪಾತ್ರೆ ತಿಕ್ಕುವದು ....ಎಲ್ಲವೂ. ಮನೋಜನ ಮಡದಿನೂ ಊರಿಗೆ ಹೋಗಿದ್ದರಿಂದ, ಇಬ್ಬರು ಇಲ್ಲೇ ಅಡಿಗೆ ಮಾಡಿ ಊಟ ಮಾಡಿದರೆ ಆಗುತ್ತೆ ಬಾ ಎಂದು ಅವನಿಗೆ ಹೇಳಿದೆ. ಆಯಿತು, ಎಂದು ನಮ್ಮ ಮನೆಯಲ್ಲೇ ಠಿಕಾಣಿ ಹೂಡಿದ. ಏನೋ ನನ್ನ ಕೆಲಸಗಳಲ್ಲಿ ಸಹಾಯ ಮಾಡುತ್ತಾನೆ ಎಂದು, ನಾನು ಅಂದುಕೊಂಡರೆ ಮನೋಜ ರಾತ್ರಿ ತೀರ್ಥಯಾತ್ರೆಗೆ ಹೋಗಿ ಬಂದು ಊಟ ಮಾಡಿ ಮಲಗಿ ಬಿಡುತ್ತಿದ್ದ. ಅವನ ಕರೆದ ಕರ್ಮಕ್ಕೆ ನನ್ನ ಕೆಲಸ ಇನ್ನೂ ಜ್ಯಾಸ್ತಿ ಆಗಿತ್ತು.

ಮರು ದಿನ ಏಕೋ ಬಲ ಕೈ ಸ್ವಲ್ಪ ಕೆರೆತ ಶುರು ಆಯಿತು. ನಾನು ಕೈ ಕೆರೆಯುತ್ತಾ ಇದ್ದಾಗ, ನಮ್ಮ ಜ್ಯೋತಿಷ್ಯ ಪ್ರವೀಣ ಮನೋಜ ಏನೋ ಕೈ ಕೆರೆತ ಚಾನ್ಸ್ ಅಂದ. ತುಂಬಾ ಕೆರೆತ ಆಗಿ ನಾನು ಒದ್ದಾಡುತ್ತಾ ಇದ್ದರೆ, ನೀನು ಚಾನ್ಸ್ ಅನ್ನುತ್ತೀಯ ಎಂದೆ. ಲೇ.. ಬಲ ಕೈ ಕೆರೆತ ಆದ್ರೆ ದುಡ್ಡು ಬರುತ್ತೆ ಕಣೋ ಅಂದ. ಒಳಗೊಳಗೆ ಸಂತೋಷದಿಂದ ಕುಣಿದಾಡಿದೆ. ಅವನ ಮುಂದೆ, ಹಾಗೆ ರೈಲು ಬಿಡುತ್ತೀಯಾ ಎಂದು ದಬಾಯಿಸಿದೆ. ಏ ನಿನಗೇನೂ ಗೊತ್ತು ಬಲ ಕೈ ಕೆರೆತ ಆದರೆ ದುಡ್ಡು ಖಂಡಿತ ಬರುತ್ತೆ ಅಂದ. ಮತ್ತೆ ಎಡ ಕೈ ಕೆರೆತ ಆದರೆ ದುಡ್ಡು ಖರ್ಚಾಗುತ್ತೆ ಅಂದ. ಎಡ ಕಣ್ಣು ಅದುರಿದರೆ ಅಶುಭ, ಬಲ ಕಣ್ಣು ಅದುರಿದರೆ ಶುಭ ಎಂದು ಹೇಳಿದ. ಲೇ... ಸುಮ್ಮನೇ ಹೇಳ ಬೇಡ ನಾನು ಕಾಲೇಜ್ ನಲ್ಲಿ ಇದ್ದಾಗ, ಒಂದು ಹುಡುಗಿ ನೋಡಿ ಬಲ ಕಣ್ಣು ಅದುರಿಸಿದ್ದೆ. ಆದರೆ ಅವಳು ನನ್ನ ಹಲ್ಲು ಉದಿರುಸುತ್ತೇನೆ ಎಂದು ಬೆದರಿಕೆ ಹಾಕಿದಳು . ಆಮೇಲಿಂದ ಯಾವತ್ತೂ ಕಣ್ಣು ಅದುರಲೆ ಇಲ್ಲ, ಎರಡು ಹಲ್ಲುಗಳು ತಾನಾಗಿಯೇ ಉದುರಿದವು ಎಂದು ಹೇಳಿದೆ. ಮನೋಜ ತುಂಬಾ ಜೋರಾಗಿ ನಕ್ಕೂ... ಅದು ತಾನಾಗಿಯೇ ಅದುರ ಬೇಕು ಕಣೋ ಎಂದು ಅಪಹಾಸ್ಯ ಮಾಡಿದ.

ಕಡೆಗೆ ನಾನು ಆಫೀಸ್ ಹೋದೆ. ಆದರೂ ಇನ್ನೂ ಕೈ ಕೆರೆತ ಇದ್ದೇ ಇತ್ತು. ಆಫೀಸ್ ಹೋದೊಡನೆ, ಬಾಸ್ ಕರೆದು ರೀ... ನಿಮ್ಮ ಅಪ್ರೇಸಲ್ ಈ ತಿಂಗಳು ಇದೆ ಅಲ್ವೇ ಎಂದರು. ಹೌದು.. ಹೌದು.. ಎಂದು ಖುಶಿಯಿಂದ ಕೈ ಕೆರೆಯುತ್ತಾ ಹೇಳಿದೆ. ಆಯಿತು ಹೋಗಿ ಎಂದು ಹೇಳಿ ಕಳುಹಿಸಿದರು. ನನಗೆ ಸಕತ್ ಖುಷಿ, ಲೇ ಹೊಡೆದೆ ಕಣೋ ಚಾನ್ಸ್ ಎಂದು ಅಂದು ಕೊಂಡು, ಮನೋಜಗೆ ಫೋನ್ ಮಾಡಿ ಹೇಳಿದೆ. ನಾನು ಹೇಳಿರಲಿಲ್ಲವಾ? ಎಂದ. ಆದರೆ ಕೈ ಕೆರೆತ ನಿಲ್ಲಲೇ ಇಲ್ಲ.

ಮರು ದಿನ ಕೈ ತುಂಬಾ ಬಾತು ಕೆಂಪಗೆ ಆಗಿತ್ತು. ಲೇ.. ಏನೋ ಇದು ಇಷ್ಟೊಂದು ಕೆರೆತ ಎಂದು ಮನೋಜಗೆ ಕೇಳಿದೆ. ಇದೇನೋ ಪ್ರಾಬ್ಲಮ್ ಕಣೋ, ಕೂಡಲೇ ಡಾಕ್ಟರ್ ಕಾಣು ಎಂದು ಹೇಳಿದ. ಡಾಕ್ಟರ್ ಬಳಿ ಹೋದೆ. ಡಾಕ್ಟರ್ ಎಲ್ಲ ಪರೀಕ್ಷಿಸಿ. ಏನ್ರೀ ಇದು ಇಷ್ಟೊಂದು ಆಗೋವರೆಗೂ ಸುಮ್ಮನೇ ಕತ್ತೆ ಕಾಯುತ್ತಾ ಇದ್ದೀರಾ? ಎಂದು ಬೈದರು. ಸರ್ ಅದು .. ಅದು ... ಎಂದು ತಡವರಿಸಿದೆ. ಅವರು ನನಗೆ ಒಂದು ಆಯಂಟ್‌ಮೆಂಟ್ ಹಚ್ಚಿ, ಕೆಲ ಮಾತ್ರೆ ಬರೆದು ಕೊಟ್ಟರು. ಅಷ್ಟರಲ್ಲಿ ನನ್ನ ಮೊಬೈಲ್ ಗೆ ಒಂದು ಕರೆ ಬಂತು. ನಾನು ರಾಜೇಶ್ ಕಣೋ... ಎಂದು ಆ ಕಡೆಯಿಂದ ಧ್ವನಿ ಬಂತು. ನಾನು ಯಾರು? .... ರಾಜೇಶ್. ಓಕೆ ಹೇಳಿ ಏನು ಆಗಬೇಕು ಎಂದೆ. ನಾನು ಕಣೋ ನಿನ್ನ ಕ್ಲಾಸ್ ಮೇಟ್ ಅಂದ. ಇನ್ನೂ ಅವನ ಮುಖ ಚಹರೆ ಸ್ಮೃತಿಗೆ ಬರದಿದ್ದರೂ... ಓss.. ರಾಜೇಶ್ ಹೇಳು ಚೆನ್ನಾಗಿದ್ದೀಯ? ಎಂದು ಕೇಳಿದೆ. ಓss.. ನಾನು ಚೆನ್ನಾಗಿ ಇದ್ದೇನೆ ಎಂದ. ನೀನು ಸಾಯಿತಿ ಅಂತೆ ಎಂದು ಕೇಳಿದ. ನನಗೆ ತಡೆಯಲಾರದಷ್ಟು ಕೋಪ ಬಂದಿತು. ನಿನಗೆ ಯಾರು? ಹೇಳಿದರು ಎಂದು ಕೇಳಿದೆ. ನನಗೆ ಗೊತ್ತು, ನೀನು ಪಾರ್ಟೀ ಯಾವಾಗ ಕೊಡಿಸುತ್ತೀಯ ಎಂದು ಕೇಳಿದ. ನನಗೆ ಎಣ್ಣೆ ಪಾರ್ಟೀನೇ ಬೇಕು ಎಂದ. ಏನು ಸಾಯಿತಿ ಎಂದರೆ ಸುಮ್ಮನೇನಾ? ಎಂದ. ನನಗೆ ಸಕ್ಕತ್ ಕೋಪ ಬಂದಿತ್ತು. ಆದರೂ ತಡೆದುಕೊಂಡು ಮನಸಿನಲ್ಲೇ ಸಾಯುವ ಮೊದಲೇ ತಿಥಿ ಊಟ ಕೇಳೋ, ನಿನಗೆ ಹತ್ತಿಗೆ ಹೊಡೆಯುವ ಎಣ್ಣೇನೇ ಕೂಡಿಸುತ್ತೇನೆ ಮಗನೆ ಬಾ ಎಂದು ಬೈದುಕೊಂಡೆ. ನಿಮಗೆ ಯಾರು ಬೇಕಿತ್ತು ಎಂದು ಅನುಮಾನದಿಂದ ಕೇಳಿದೆ. ಲೇ ಗೋಪಾಲ್ ...ನೀನೆ ಕಣೋ ಕತ್ತೆ ಕಾಯುವನೆ ಎಂದ. ಕೋಪ ಇನ್ನಷ್ಟು ಉಕ್ಕಿ ಬಂತು ದನ ಕಾಯುವವನಿಗೆ ಕತ್ತೆ ಕಾಯುವವ ಎಂದರೆ ಬರದೇ ಇರುತ್ತೆ. ಇದೇನಾದರೂ ಮಂಜನ ಕಿತಾಪತಿ ಇರಲು ಬಹುದು ಎಂದು ಅನ್ನಿಸಿದ್ದು ನಿಜ. ಯಾರಾದರೂ ನಾನು ಆಸ್ಪತ್ರೆಗೆ ಬಂದಿದ್ದು ನೋಡಿದರಾ?. ಮಂಜ ಹೊರಗಡೆ ಇರಬಹುದಾ?. ನೋರೆಂಟು ಯೋಚನೆ ತಲೆಯೊಳಗೆ...ಅದು ನಾನು ಸಾಯುವ ವಿಷಯ ಗೊತ್ತಾಗಿದೆ ಎಂದರೆ ಇವನು ಯಮಧರ್ಮರಾಯನೆ? .... ಮತ್ತೆ ರಾಜೇಶ್ ಎಂದ. ಎಲ್ಲರಿಗೂ ಹೇಳಲು ಸುಲಭವಾಗಲಿ ಎಂದು ಹೆಸರು ಬದಲಿಸಿದನೆ? ತಿಳಿಯಲಿಲ್ಲ.

ಕೂಡಲೇ, ಹೊರಗಡೆ ಓಡಿದೆ. ಡಾಕ್ಟರ್ ಓಡುತ್ತಿರುವ ನನ್ನ ನೋಡಿ.. ಏsss.. ಕಲ್ಲಪ್ಪ, ಹಿಡಿ ಅವನನ್ನ ಎಂದು ತಮ್ಮ ಕಾಂಪೌಂಡರ್ ಗೆ ಕೂಗಿದರು. ಆದರೂ ತಪ್ಪಿಸಿಕೊಂಡು ಹೊರಗಡೆ ಹೋಗಿ, ಎಲ್ಲ ಕಡೆ ಕಣ್ಣು ಆಡಿಸಿದೆ. ಯಾರು ಪರಿಚಯದವರು ಕಾಣಲಿಲ್ಲ. ಮತ್ತೆ ಕಾಂಪೌಂಡರ್ ನನ್ನ ಕುತ್ತಿಗೆ ಪಟ್ಟಿ ಹಿಡಿದು ಎಳೆದು ಕೊಂಡು ಡಾಕ್ಟರ್ ಬಳಿ ಬಂದು ನಿಲ್ಲಿಸಿದ. ನಾನು ಮೊಬೈಲ್ ನಲ್ಲಿ ಇದ್ದ ಮನುಷ್ಯನಿಗೆ ನಾನು ಆಮೇಲೆ ಕಾಲ್ ಮಾಡುತ್ತೇನೆ ಎಂದು ಹೇಳಿದೆ. ನನಗೆ ಫೋನ್ ಮಾಡಿದ ವ್ಯಕ್ತಿ ಡಾಕ್ಟರ್ ಪರಿಚಯದವನೆ ಎಂದು ಯೋಚನೆ ಕೂಡ ಬಂತು. ಸರ್, ನಿಮಗೆ ರಾಜೇಶ್ ಗೊತ್ತಾ ಎಂದು ಕೇಳಿದೆ. ರೀ ಯಾರಿದ್ದರೆ ನನಗೆ ಏನ್ರೀ... ಅವನೇನು ನನಗೆ, ಮೊದಲು ಫೀಸ್ ಕೊಟ್ಟು ಮಾತಾಡಿ ಎಂದು ದಬಾಯಿಸಿದರು. ನನಗೆ ಆ ಕರೆಯ ಗದ್ದಲದಲ್ಲಿ ಮರೆತೇ ಹೋಗಿತ್ತು. ಸಾರಿ... ಸರ್ ಎಂದು ಹೇಳಿ ಫೀಸ್ ಕೊಟ್ಟು ಹೊರಗಡೆ ಬಂದೆ.

ಹೊರಗಡೆ ಬಂದೊಡನೆ ಮತ್ತೆ ಅದೇ ಮೊಬೈಲ್ ಗೆ ಫೋನ್ ಮಾಡಿದೆ. ಯಾರು? ನೀವು ಎಂದು ಕೇಳಿದೆ. ನಾನು ರಾಜೇಶ ಎಂದ. ಯಾವ ರಾಜೇಶ್ ಎಂದು ದಬಾಯಿಸಿದೆ. ಲೇss.. ನಾನು ಡಬ್ಬಾ-ಡುಬ್ಬೀ ಆಡುವಾಗ ನಿನಗೆ ಚೆಂಡಿನಿಂದ ಕೆನ್ನೆಗೆ ಬಾರಿಸಿದ್ದೆನಲ್ಲಾ ಎಂದ. ಕಡೆಗೆ ನೆನಪಿಗೆ ಬಂತು. ಅಗಲೆ ಏನೋ ಹೇಳುತ್ತಿದ್ದೆ ಅಲ್ಲ ಎಂದೆ. ಅದೇ ಕಣೋ, ನೀನು ದೊಡ್ಡ ಸಾಯಿತಿ ಅಂತೆ. ಕಥೆ, ಕವನ ಮತ್ತೆ ಆಸ್ಯ ಲೇಖನ ಬರೆಯುತ್ತೀಯಾ ಎಂದು ಕೇಳಿದ. ಆಗ ಅರ್ಥ ಆಗಿತ್ತು ಅವನು ಹೇಳಿದ್ದು ಸಾಹಿತಿ ಎಂದು. ನಾನೇನು ದೊಡ್ಡ ಸಾಹಿತಿ ಅಲ್ಲ ಮಹಾರಾಯ... ಬ್ಲಾಗ್ ಬರಹಗಳನ್ನು ಮಾತ್ರ ಬರೆಯುತ್ತೇನೆ ಎಂದು ಹೇಳಿದೆ. ಪೂರ್ತಿ ನೆನಪಿಗೆ ಬಂತು ಪಾಪ, ಅವನಿಗೆ ಹ ಕಾರ ಮಾತನಾಡಲು ಬರುವದಿಲ್ಲ. ಹ ಅಂದರೆ ಅ ಅನ್ನುತ್ತಾನೆ, ಹಾ ಎಂದರೆ ಆ .... ಹೀಗೆ. ಚಿಕ್ಕ ವಯಸಿನ್ನಲ್ಲಿ ನೋಡಿದ್ದು, ನಾವು ಅವನಿಗೆ ಹಂದಿ ಎಂದು ಕಾಡುತ್ತಿದ್ದೆವು. ಅವನು ಅದಕ್ಕೆ ನೀನೆ ಅಂದಿ ಅನ್ನುತ್ತಿದ್ದ ಪಾಪ. ಹೌದು ನಾನೇ ಅಂದಿದ್ದು, ನೀನೆ ಹಂದಿ ಎಂದೆಲ್ಲ ಕಾಡುತ್ತಿದ್ದೆವು. ಮತ್ತೆ ಎಲ್ಲಾ ಕ್ಷೇಮ ಸಮಾಚಾರ ವಿಚಾರಿಸಿ ಮನೆಗೆ ಬರುವಂತೆ ಹೇಳಿ ಫೋನ್ ಇಟ್ಟೆ.

ಮರುದಿನ ಮುಂಜಾನೆ ಬಾಸ್ ಮತ್ತೆ ಕರೆದು, ರೀ ನಿಮ್ಮದು ಮುಂದಿನ ತಿಂಗಳು ಅಪ್ರೇಸಲ್ ಅಲ್ಲವಾ, ಮತ್ತೆ ನನಗೆ ಹೇಳಿದ್ದು ಇದೆ ತಿಂಗಳು ಎಂದು ಕೇಳಿದರು. ನಾನು ನಿರಾಸೆಯ ಅಲೆಯಲ್ಲಿ ತೇಲುತ್ತ ಬಂದು ಕುಳಿತು, ಮಡದಿ ಫೋನ್ ಮಾಡಿ, ಆದ ವಿಚಾರನೆಲ್ಲ ಹೇಳಿದಾಗ ಅವಳಿಗೂ ಕೂಡ ನಗು ತಡೆಯಲು ಆಗಲಿಲ್ಲ.

Wednesday, November 17, 2010

ತರ್ಲೆ ಮಂ(ಗ)ಜನ ತಮಾಷೆಗಳು ...

ನಾವೆಲ್ಲರೂ ಮಂಜನ ಮನೆಗೆ ಊಟಕ್ಕೆ ಹೋಗಿದ್ದೆವು. ಮಂಜನ ಮನೆಗೆ ಮಂಜನ ತಂಗಿ ಶಾಂತಲಾ ತನ್ನ ಮಕ್ಕಳು ಸಂಕೇತ ಮತ್ತು ಶರತ ಜೊತೆ ಬಂದಿದ್ದಳು.

ಮಂಜ ನಿನಗೆ ಏನೇನು? ಬರುತ್ತೆ, ಶಾಲೆಯಲ್ಲಿ ನಿಮ್ಮ ಟೀಚರ್ ಏನೇನು ಹೇಳಿದ್ದಾರೆ ಎಂದು ಅಳಿಯ ಸಂಕೇತನಿಗೆ ಕೇಳಿದ.
ಅದಕ್ಕೆ ಸಂಕೇತ ಅವರಿಗೆ ಟೀಚರ್ ಅನ್ನಬಾರದು ಅವರು ಮಿಸ್ ಎಂದ.
ಮಿಸ್ ಅಂದರೆ ಇನ್ನೂ ಮದುವೆ ಆಗಿಲ್ಲವಾ? ಎಂದ.
ಪಾಪ ಆರು ವರ್ಷದ ಸಂಕೇತನಿಗೆ ಏನು? ತಿಳಿಯಬೇಕು. ಅವರ ಅಮ್ಮ ಶಾಂತಾ ಮದುವೆ ಆಗಿದೆ ಕಣೋ ಎಂದಳು. ನಿನಗೆ ಎರಡನೆ ಮದುವೆ ಮಾಡಿಕೊಳ್ಳುವ ಆಸೆ ಏನೋ? ನೋಡಿ ಅತ್ತಿಗೆ ಎಂದು ಅವನ ಹೆಂಡತಿಗೆ ಹೇಳಿದಳು.
ಆಯಿತು ಏನೇನು ಹೇಳಿದ್ದಾರೆ ಸಂಕೇತ ನಿಮ್ಮ ಮದುವೆಯಾದ ಮಿಸ್ ಎಂದು ಮಂಜ ಕೇಳಿದ.
ಬಾ ಬಾ ಬ್ಲ್ಯಾಕ್ ಶೀಪ ಹಾವಿ ಎನಿ ಹುಲ್ಲ ಎಂದ ತೊದಲುತ್ತಾ ಹೇಳಿತು.
ಎಲ್ಲಾ ಅರ್ಥ ಆಯಿತು. ಆದರೆ, ಕೆಲವು ಬಿಟ್ಟು ಎಂದ ಮಂಜ. ಬಾ.. ಬಾ.. ಎಂದು ಏನನ್ನು ಕರೆದೆ . ಹಾವಿಗಾ? ಮತ್ತೆ ಅದಕ್ಕೆನು ಗೊತ್ತು ಹುಲ್ಲ ಇದೆಯೋ ಇಲ್ಲವೋ ಎಂದು ತಮಾಷೆಗೆ ಕೇಳಿದ.
ಈಗ ಮಂಜನ ತಂಗಿ ಶಾಂತಲಾ ಕೋಪ ತಾರಕಕ್ಕೆ ಏರಿತ್ತು. ಸುಮ್ಮನೇ ಯಾಕೆ ಕಾಡುತ್ತೀ ಮಗೂನಾ ಎಂದಳು. ಸಂಕೇತನ ಅಜ್ಜಿ, ಮಂಜನ ಹೆಂಡತಿ ಸೇರಿ ಮಂಗಳಾರತಿ ಮಾಡಿದರು. ಅಮ್ಮ, ನೀನು ಕೋಪ ಮಾಡಿಕೊಳ್ಳ ಬೇಡ ನಿನಗೆ ಮೊದಲೇ ಬ್ರೆಡ್ ಸ್ಪೆಶಲ್ ಎಂದ. ಹಾಗಂದರೆ ಎಂದು ನಾನು ಕೇಳಿದೆ, ಅದಕ್ಕೆ ಮಂಜ ಅಮ್ಮ ಬ್ಲಡ್ ಪ್ರೆಶರ್ ಗೆ ಬ್ರೆಡ್ ಪ್ರೆಶರ್ ಅನ್ನುತ್ತಾರೆ ಎಂದ. ನಾನು ಅದನ್ನು ಬ್ರೆಡ್ ಸ್ಪೆಶಲ್ ಮಾಡಿರುವೆ ಎಂದ. ಆಯಿತು ಬಿಡಪ್ಪ ನೀನು ಜಾಣ ಎಂದು ಮಂಜನ ಅಮ್ಮ ಕೋಪ ಮಾಡಿಕೊಂಡರು. ಅಷ್ಟರಲ್ಲಿ ಮಂಜನ ಮಡದಿ ಕೆಂಗಣ್ಣಿನಿಂದ ಮಂಜನನ್ನು ನೋಡಿದಳು. ಹೆಂಡತಿಗೆ ಹೆದರಿದರು ಕಾಡುವುದನ್ನು ಮಾತ್ರ ಬಿಡಲಿಲ್ಲ. ನಾವು ಹೋಗಲಿ ಬಿಡಪ್ಪ ಸುಮ್ಮನೇ ಎಂದರು ಕೇಳಬೇಕಲ್ಲ ಆಸಾಮಿ.
ಏ ಸುಮ್ಮನಿರು ನೀನು, ನಾನು ಕೇಳುತ್ತಾ ಇರೋದು ನನ್ನ ಅಳಿಯನಿಗೆ ಎಂದ. ಪುಟ್ಟ ನಿನಗೆ ಚ್ಯಾಕ್ಲೇಟ್ ಕೊಡಸುತ್ತೇನೆ ಎಂದ.
ಮತ್ತೆ ಶುರು ಹಚ್ಚಿಕೊಂಡ ಮತ್ತೆ ಏನೇನು ಹೇಳಿದ್ದಾರೆ ಎಂದ.
ಜೋನಿ ಜೋನಿ ಎಸ್ ಪಾಪ.. ಈಟಿಂಗ್ ಶುಗರ್ ನೋ ಪಾಪ.. ಟೆಲ್ಲಿಂಗ್ ಲೈ ನೋ ಪಾಪ.. ಓಪನ್ ಯುವರ್ ಮೌತ್ ಹಾ ಹಾ ಹಾ ಎಂದ.
ಸುಳ್ಳು ಹೇಳುವ ಕಲೆ ಎಷ್ಟು ಚಂದ ಹೇಳಿಕೊಟ್ಟಿದ್ದಾರೆ ಕಣೋ ಎಂದು ತಲೆ ಚಚ್ಚಿಕೊಂಡ.
ಮತ್ತೆ ಸಂಕೇತ ರೇನ್ ರೇನ್ ಗೋ ಅವೇ ಲಿಟ್ಲ್ ಜಾನೀ ವಾಂಟ್ಸ್ ಟು ಪ್ಲೇ ಎಂದು ಹೇಳಿದ.
ಲೇ ಇದನ್ನು ಯಾರಾದರೂ ಬರಗಾಲ ಪ್ರದೇಶದ ರೈತರು ಕೇಳಿದರೆ ನಿನಗೆ ನಿಮ್ಮ ಮಿಸ್ಗೆ ಸೇರಿ ಒದಿತಾರೆ.

ಮತ್ತೆ ಮಂಜ ಒಂದಿಷ್ಟು ಕನ್ನಡದ ರೈಮ್ಸ್ ಆನೆ ಬಂತೊಂದಾನೆ, ನಾಯಿಮರಿ ನಾಯಿಮರಿ, ಒಂದು ಎರಡು ಬಾಳೆಲೆ ಹರಡು, ಇರುವೆ-ಇರುವೆ ಎಲ್ಲಿರುವೆಗಳಾದ ಎಲ್ಲವುಗಳನ್ನೂ ಸಂಕೇತಗೆ ಹೇಳಿದ. ಅದೆಲ್ಲವೂ ಕೇಳಿದ ಮೇಲೆ ಸಂಕೇತ ಮಂಜನಿಗೆ, ಮಾಮಾ ನಿನಗೆ ಯಾರು ಹೇಳಿದರು ಇವನೆಲ್ಲಾ ಎಂದು ಕೇಳಿದ. ಅದಕ್ಕೆ ಮಂಜ ನನ್ನ ಮಿಸ್ ಎಂದು ತನ್ನ ಮಡದಿಯನ್ನು ತೋರಿಸಿದ. ಅವಳು ಎಮ್ಮೆ(M.A) ಗೊತ್ತಾ ಎಂದ. ಯಾರಿಗೂ ತಿಳಿಯಲಿಲ್ಲ ಸಧ್ಯ.

ಮತ್ತೆ ಅವನಿಗೆ ತಪ್ಪು ತಪ್ಪಾಗಿ ಏ ಫಾರ್ ಅವರೆಕಾಯಿ , ಬೀ ಫಾರ್ ಬದಾನೆ ಕಾಯಿ, ಸೀ ಫಾರ್ ಚವಳಿಕಾಯಿ ಎಂದೆಲ್ಲ ಹೇಳುತ್ತಿದ್ದರೆ, ಎಲ್ಲರೂ ನಗುತ್ತಿದ್ದರು. ಅವನ ತಂಗಿ ತುಂಬಾ ಕೋಪ ಮಾಡಿಕೊಂಡಿದ್ದಳು. ನಾಳೆ ಪರೀಕ್ಷೆಯಲ್ಲಿ ಇದನ್ನೇ ಹೇಳುತ್ತಾನೆ ಎಂದು.ಎಲ್ಲರೂ ಊಟ ಮುಗಿಸಿದೆವು. ಊಟ ಮುಗಿದ ಮೇಲೆ ಸೀರಿಯಲ್ ಗಳ ಬಗ್ಗೆ ಚರ್ಚೆ ಶುರು ಆಯಿತು. ನಾನು ಕೌನ್ ಬನೇಗಾ ಕರೋಡ ಪತಿಯಲ್ಲಿ ಕೋಟಿ ಸೋತ ಮನುಷ್ಯನ ಬಗ್ಗೆ ಅನುಕಂಪದ ಮಾತು ಆಡಿದೆ. ಅದಕ್ಕೆ ನಮ್ಮ ಮಂಜ ಸರಿಯಾಗಿ ಮಾಡಿದ್ದಾನೆ ಗಣಪತಿ ಅವನಿಗೆ ಎಂದ. ಪಾಪ ಪ್ರತಿ ವರ್ಷ ಗಣಪತಿ ಇಟ್ಟು, ಕಡೆ ದಿನ ಅವನ ಮುಂದೆ ಡ್ಯಾನ್ಸ್ ಮಾಡುತ್ತಾ ಹೋಗಿ ನೀರಿನಲ್ಲಿ ಮುಳುಗಿಸುತ್ತಾನೆ, ಈಗ ಡ್ಯಾನ್ಸ್ ಮಾಡಿ ಮುಳುಗಿಸುವುದು ಗಣಪತಿಯ ಸರದಿ ಎಂದ. ಎಲ್ಲರೂ ಜೋರಾಗಿ ನಕ್ಕೆವು.

ಮಂಜನ ಹೆಂಡತಿ ನೋಡಿ ನಿಮ್ಮ ಗೆಳೆಯ ಗೋಪಾಲ್ ತಮ್ಮ ಹೆಂಡತಿಯ ಬಗ್ಗೆ ಬ್ಲಾಗ್ ನಲ್ಲಿ ಏನೇನೋ ಪ್ರೀತಿಯಿಂದ ಬರೀತಾ ಇರುತ್ತಾರೆ ಎಂದಳು. ನೀವು ಇದ್ದೀರಾ? ಯಾವುದಕ್ಕೂ ಉಪಯೋಗ ಇಲ್ಲ ಎಂದಳು. ಲೇ ನಾನು ಏನು? ಎಂದು ತಿಳಿದಿದ್ದೀಯಾ ನಾನು ಒಂದು ಸೀರಿಯಲ್ ತೇಗೆಯಬೇಕು ಎಂದು ಇದ್ದೇನೆ. ಸೀರಿಯಲ್ ಪೂರ್ತಿ ನಮ್ಮಿಬ್ಬರ ಬಗ್ಗೆ ಇರುತ್ತೆ ಗೊತ್ತಾ ಎಂದ. ಅದರ ಹೆಸರು ಏನು? ಗೊತ್ತಾ "ಸಂಸಾರಿ ಕ್ರೈಮ್ ಸ್ಟೋರಿ" ಎಂದ. ಅದಕ್ಕೆ ನಾವೆಲ್ಲರೂ ನಕ್ಕೆವು. ಥೇಟ ವಿಲನ್ ತರಹ ನಗುತ್ತೀರಿ ಎಂದಳು ಮಂಜನ ಮಡದಿ ಸಾವಿತ್ರಿ. ಅದಕ್ಕೆ ಮಂಜ ಕೋಪದ ಮುಖದಿಂದ ಇದ್ದ ಅವಳಿಗೆ "ಹಂಗ್ಯಾಕೆ ಮಾಡಿ ಮಾರಿ, ಕಾಮನಕಟ್ಟಿ ದಾರಿ" ಎಂದ. ಮಂಜನ ಮಡದಿ ತುಂಬಾ ಕೋಪ ಮಾಡಿಕೊಂಡು, ನೀವು ಇನ್ನೂ ಸ್ವಲ್ಪ ದಿವಸ ಹೀಗೆ ಆಡುತ್ತಿದ್ದರೆ, ನಾನು ನಿಜವಾಗಿಯೂ ಮನೆ ದಾರಿ ಹಿಡಿಯುತ್ತೇನೆ ಎಂದಾಗ ಮಂಜ ಸುಮ್ಮನಾಗಿದ್ದ. ಸಂಜೆಯವರೆಗೆ ಮಂಜನ ಮನೆಯಲ್ಲಿ ಇದ್ದು ಕಾಫೀ ಮುಗಿಸಿ ಮನೆಗೆ ಬಂದೆವು.

Saturday, October 30, 2010

ಗುಣವಂತನ ಗರುಡ ರೇಖೆ....

ಕವಿತೆ ಬಗ್ಗೆ ಯೋಚನೆ ಮಾಡುತ್ತಾ ಆಫೀಸ್ ನಿಂದ ಮನೆಗೆ ಹೊರಟಿದ್ದೆ. ಮಗನಿಗೆ ಇಷ್ಟ ಎಂದು ಗೋವಿನ್ ಜೊಳ ಕ್ಷಮಿಸಿ ಅಮೇರಿಕನ್ ಕಾರ್ನ್ ತೆಗೆದುಕೊಂಡು ಹೋದೆ. ಮೊನ್ನೆ ಒಂದು ಮಾಲ್ ನಲ್ಲಿ ಯೂರೋಪಿನ ಸವತೆಕಾಯಿ ಎಂದು ನಮ್ಮ ಧಾರವಾಡದಲ್ಲಿ ಸಿಗುವ ಸವತೆಕಾಯಿ ಇಟ್ಟಿದ್ದರು. 35 ರೂಪಾಯಿ ಒಂದು ಕೆ.ಜಿ ಅದೇ ಧಾರವಾಡದಲ್ಲಿ 8 ರೂಪಾಯಿಗಳು ಮಾತ್ರ.

ಮನೆ ಬಂದರು ಕವಿತೆಯ ಬಗ್ಗೆ ಯೋಚನೆ ಇನ್ನೂ ಮುಗಿದಿರಲಿಲ್ಲ. ರೀ ನಿಮ್ಮ ಗೆಳೆಯ ಮಾರುತಿ ಯಾವಾಗ ಧಾರವಾಡಕ್ಕೆ ಹೋಗುತ್ತಾನೆ ಎಂದು ಕೇಳಿದಳು. ನಾನು ವಿಜಯನಗರ ಇಲ್ಲ ರಾಗಿ ಗುಡ್ಡಕ್ಕೆ ಹೋಗೋಣ ಎಂದೆ. ಅವಳು ಕೇಳಿದ ಪ್ರಶ್ನೆಗೆ ನಾನು ಹೇಳುತ್ತಿರುವುದಕ್ಕೆ ಒಂದು ಸಂಭಂಧವೇ ಇರಲಿಲ್ಲ. ನನ್ನ ಹೆಂಡತಿಗೆ ರೇಗಿ ಹೋಗಿತ್ತು. ನಾನು ಕವಿತಾ ಬಗ್ಗೆ ಯೋಚನೆ ಮಾಡುತ್ತಿದ್ದೆ ಎಂದೆ. ಯಾರು ಆ ಕವಿತಾ ಎಂದು ಮತ್ತಷ್ಟು ರೇಗಿದಳು. ಕವನ ಎಂದರೆ ಮತ್ತೆ ತಪ್ಪು ಆದೀತು ಎಂದು ಕವಿತೆ ಎಂದು ಹೇಳಿದೆ. ನಿಮ್ಮ ಲಕ್ಷ್ಯ ಎಲ್ಲಿ? ಇರಬೇಕು. ರಾಣಿ ಹಾಗೆಲ್ಲಾ ಏನು ಇಲ್ಲ. ನೀನು ಯೋಚನೆ ಮಾಡುತ್ತಿರುವದು ಲಕ್ಷದ ಬಗ್ಗೆ ಆದರೆ, ನೀನು ನನಗೆ ಕೋಟಿಗೆ ಸಮ. ಅದಕ್ಕೆಂದೆ ನಿನ್ನೆ ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರುಪಾಯಿ!! ಎಂಬ ಲೇಖನ ಬರೆದಿದ್ದೇನೆ ಎಂದು ಪುಸಲಾಯಿಸಿದೆ. ಆದರೂ ನಿಮ್ಮದು ಬರೀ ಕವಿತೆ-ಲೇಖನ ಅತಿ ಆಯಿತು ಎಂದು ಹೀಯಾಳಿಸಿದಳು. ಅದು ಬೇರೆ ನಿಮಗೆ ನನ್ನ ಹೀಯಾಳಿಸಿ ಬರೆಯದೇ ಇದ್ದರೆ ತಿಂದ ಅನ್ನ ಹೇಗೆ ಅರಗಬೇಕು (ಕರಗಬೇಕು) ಎಂದಳು.

ಕೆಲ ಸಮಯದ ನಂತರ ಪುಸಲಾಯಿಸಿದ್ದರಿಂದ ಹೇಳಿ ಮತ್ತೆ ಏನೇನು? ಬರೆದಿದ್ದೀರ ಎಂದಳು. ನಳ ಪಾಕ್ .... ಮತ್ತು ಸ್ಪೆಶಲ್ ತಿಂಡಿ.... ಎಂಬ ಲೇಖನ ಕೂಡ ಬರೆದಿದ್ದೇನೆ ಎಂದೆ. ಮತ್ತೇನು? ಬಕಾಸುರನಿಗೆ ಅದೇ ಧ್ಯಾನ ಎಂದು ಮತ್ತೆ ಹೀಯಾಳಿಸಿದಳು. ನಾನು ನನ್ನ ಬಗ್ಗೆ ತುಂಬಾ ಕೊಚ್ಚಿಕೊಂಡು ತುಂಬಾ ಮಾತನಾಡಿಕೊಂಡೆ. ನನ್ನ ಒಂದು ಲೇಖನ ದಟ್ಸ್ ಕನ್ನಡದಲ್ಲಿ ಪಬ್ಲಿಶ್ ಆಗಿದೆ ಎಂದು. "ಓ ಗುಣವಂತ ಓ ಗುಣವಂತ ನಿನ್ನ ಗುಣಗಾನ ಮಾಡಲು ಪದಗಳೇ ಸಿಗುತ್ತಿಲ್ಲ" ಎಂದು ಹಾಡುತ್ತಾ ಅಡುಗೆ ಮನೆಗೆ ಹೋದಳು. ನಾನು ಹಾಡುತ್ತೇನೆ, ಆದರೆ ನನ್ನದು ಕಾಕ ಕಂಠ. ಆದರೆ ನನ್ನ ಮಡದಿಯದು ಕೋಗಿಲೆ ಕಂಠ. ನಾನು ಅವಳನ್ನು ಹಿಂಬಾಲಿಸಿ ಪದಗಳನ್ನು ಬೇಕಾದರೆ ನಾನು ಹೇಳುತ್ತೇನೆ. ನೀನು ಹೋಗಳುವುದನ್ನು ಮಾಡು ಎಂದೆ. ಮೊದಲು ಹೋಗಿ ಕೈ ಕಾಲು ತೊಳೆದು ಆಮೇಲೆ ಒಳಗಡೆ ಬನ್ನಿ ಎಂದು ಹೋಗಳಿ ಕಳುಹಿಸಿದಳು. ಅದೇಕೋ ಗೊತ್ತಿಲ್ಲ ಅರಳಿದ ಹೂವು ಮತ್ತು ಕೆರಳಿದ ಹೆಣ್ಣು ನೋಡೇಕೆ ತುಂಬಾ ಚೆನ್ನ.

ಕೈ ಕಾಲು ತೊಳೆದು ಬಂದು ಟೀ ಶರ್ಟ್ ಹಾಕಿಕೊಳ್ಳುತಿದ್ದೆ. ಕಾಫೀ ತೆಗೆದುಕೊಂಡು ಬಂದ ನನ್ನ ಮಡದಿ ಜೋರಾಗಿ ನಗುತ್ತಾ ಟೀ ಶರ್ಟ್ ಉಲ್ಟಾ ಹಾಕಿ ಕೊಳ್ಲುತ್ತ ಇದ್ದೀರ ಎಂದು ಅಂದಳು. ಕಾಫೀ ಕಪ್ ಕೊಟ್ಟು ಮತ್ತೆ ಏನು ಬರೆದಿದ್ದೀರಾ ರಾಯರು ಎಂದು ಕೇಳಿದಳು. ಸಿಹಿಮೊಗ್ಗೆ ಬಗ್ಗೆ ಬರೆದಿದ್ದೇನೆ ಎಂದೆ. ಹಾಗೆ ಅಂದರೆ ಎಂದು ನನ್ನ ಮುಖ ನೋಡಿದಳು. ಅದು ಸಿಹಿ ಮೊಗದ ಹುಡುಗಿಯ ಬಗ್ಗೆ ಎಂದು ಸುಮ್ಮನೇ ರೀಲು ಬಿಟ್ಟೆ. ಮತ್ತೆ ಕೋಪಿಸಿಕೊಂಡಳು. ಅದು ಶಿವಮೊಗ್ಗ ಬಗ್ಗೆ ಬರೆದ ಅನುಭವ ಕಥನ ಎಂದು ಹೇಳಿದೆ.

ಅಷ್ಟರಲ್ಲಿ ಪಕ್ಕದ ಮನೆ ಶಾಂತಮ್ಮ ಬಂದು ನಿಮ್ಮ ಯಜಮಾನರು ಇದ್ದಾರಾ ಎಂದು ಕೇಳಿಕೊಂಡು ಬಂದರು. ನಾನು ಇವರು ಏಕೆ ನನ್ನ ಕೇಳಿಕೊಂಡು ಬಂದಿದ್ದಾರೆ ಎಂದು ಆಶ್ಚರ್ಯ. ನಮ್ಮ ಮನೆಗೆ ಹಾವು ಬಂದಿದೆ ಪ್ಲೀಸ್ ಹಿಡಿ ಬನ್ನಿ ಎಂದರು. ಕೈ ನಡುಗಿ ಅರ್ಧ ಕಾಫೀ ಕೆಳಕ್ಕೆ ಉರಳಿತ್ತು. ನಿಮಗೆ ಯಾರು ಹೇಳಿದರು ನಾನು ಹಾವು ಹಿಡಿಯುತ್ತೇನೆ ಎಂದು ಕೇಳಿದೆ. ನಾನೇನು ಹಾವಡಿಗನ ಎಂದು ಕೇಳಿದೆ. ನಿಮ್ಮ ಕೈ ಮೇಲೆ ಗರುಡ ರೇಖೆ ಇದೆ ಎಂದು ನಿಮ್ಮ ಮಡದಿ ಹೇಳಿದ್ದಾರೆ ಪ್ಲೀಸ್ ಬನ್ನಿ ನಮ್ಮನ್ನು ಕಾಪಾಡಿ ಎಂದರು.ನನಗೆ ತುಂಬಾ ಕೋಪ ಬಂದಿತ್ತು. ನಾನು ನನ್ನ ಮಡದಿಯ ಮುಖ ನೋಡಿದೆ. ನಡೀರಿ ಹೋಗೋಣ ಪಾಪ ಎಂದಳು. ಏನೇ ಇದು ನೀನು ಎಂದೆ. ಅವಳನ್ನು ಒಳಗಡೆ ಕರೆದು ನಾನು ಯಾವತ್ತಾದರೂ ನಿನಗೆ ನನ್ನ ಕೈ ಮೇಲೆ ಗರುಡ ರೇಖೆ ಇದೆ ಎಂದು ಹೇಳಿದ್ದೇನಾ? ಎಂದು ಕೇಳಿದೆ.ಇಲ್ಲ ಎಂದಳು. ಮತ್ತೆ ಏಕೆ? ಹೇಳಿದೆ ಎಂದೆ. ಮಂಜಣ್ಣ ಮದುವೆಗೆ ಮುಂಚೆ ನನಗೆ ಹೇಳಿದ್ದರು ನಿಮ್ಮ ಕೈ ಮೇಲೆ ಗರುಡ ರೇಖೆ ಇದೆ ಎಂದು ಅಂದಳು. ಮಂಜ ನಿನಗೆ ಸುಳ್ಳು ಹೇಳಿದ್ದಾನೆ. ಹಿರಿಯರೇ ಹೇಳಿಲ್ಲವೇ, ಸಾವಿರ ಸುಳ್ಳು ಹೇಳಿ ಮದುವೆ ಮಾಡಿ ಎಂದು ಅಂದೆ. ಹಾಗಾದರೆ ಮತ್ತೆ ಇನ್ನೂ ಏನು ಸುಳ್ಳು ಹೇಳಿದ್ದೀರಾ? ಎಂದಳು. ಹೊರಗಡೆ ಶಾಂತಮ್ಮ ಒದರುತ್ತ ಇದ್ದರು. ನೋಡಿ ನೀವು ಒಂದು ಕೋಲು ತೆಗೆದುಕೊಂಡು ಹೋಗಿ ಓಡಿಸಲು ಪ್ರಯತ್ನಿಸಿ ಎಂದಳು. ಈಗ ಇಲ್ಲ ಎಂದರೆ ನಮ್ಮ ಮರ್ಯಾದೆನೇ ಹೋಗೋದು ಎಂದಳು. ಹೆಚ್ಚು ಕಡಿಮೆ ಆದರೆ ಜೀವಾ ಹೋಗುತ್ತೆ, ಆಮೇಲೆ ಮರ್ಯಾದೆ ಇಟ್ಟು ಕೊಂಡು ಒಗ್ಗರಣೆ ಹಾಕುತ್ತೀಯಾ? ಎಂದೆ. ನಾನು ನಿಮ್ಮ ಜೊತೆ ಇರುತ್ತೇನೆ ಬನ್ನಿ ಎಂದಳು. ನಡಿ ನೋಡೋಣ ಎಂದು "ಹೆಂಡತಿಯೊಬ್ಬಳು ಹತ್ತಿರವಿದ್ದರೆ ನಾನು ಒಬ್ಬ ಸಿಪಾಯಿ" ಎಂದು ಹರಳೆಣ್ಣೆ ಕುಡಿದ ಹಾಗೆ ಮುಖ ಮಾಡಿ ಹೊರಟು ನಿಂತೆ.

ಶಾಂತಮ್ಮ ಮನೆ ಕಡೆಗೆ ಹೊರಟು ನಿಂತೆವು. ನಾನು ಚಿಕ್ಕದು ಇದೇನಾ ದೊಡ್ಡದು ಇದೇನಾ ಎಂದು ಕೇಳಿದೆ. ದೊಡ್ಡದು ಎಂದರು. ಯಾವ ಕಲರ್ ಇದೆ ಎಂದು ಕೇಳಿದೆ. ಅದು ನಾಗರ ಹಾವು ಎಂದು ಕಾಣುತ್ತೆ ಕಂದು ಎಂದರು. ಈಗ ಮತ್ತಷ್ಟು ನಡುಕ ಶುರು ಆಯಿತು. ಯಾವಾಗ ಬಂತು ಎಂದು ಕೇಳಿದೆ. ಬಂದು ಅರ್ಧ ಘಂಟೆ ಆಗಿದೆ ಎಂದರು. ನೀವು ಓಡಿಸಲು ಪ್ರಯತ್ನಿಸಲಿಲ್ಲವೇ ಎಂದು ಕೇಳಿದೆ. ನಾನು ಪ್ರಯತ್ನ ಪಟ್ಟೇ ಆದರೆ ಏನು ಪ್ರಯೋಜನ ಆಗಲಿಲ್ಲ ಎಂದರು.

ಶಾಂತಮ್ಮನ ಮನೆ ಪ್ರವೇಶಿಸಿ ಆಗಿತ್ತು. ಮನೆಯಲ್ಲಿ ಫ್ಯಾನ್ ಜೋರಾಗಿ ತಿರುಗುತ್ತಾ ಇತ್ತು. ಕಪಾಟಿನಲ್ಲಿ ಇದೆ ಎಂದು ಹೇಳಿದರು. ಕೈಯಲ್ಲಿ ಕೋಲು ಹಿಡಿದು ನಡುಗುತ್ತಾ ಹೊರಟೆ. ತಟ್ ಎಂದು ಹಿಂದಿನಿಂದ ಬೆಕ್ಕು ಮೇಲಿಂದ ಜಿಗಿದು ಕಾಲಿನ ಒಳಗಿಂದ ನುಸುಳಿ ಹೋಯಿತು. ಒಂದು ಕ್ಷಣ ಎದೆ ಬಡಿತ ನಿಂತು ಹೋಗಿತ್ತು. ಮತ್ತೆ ಮುಂದೆ ಹೋದೆ. ಕೋಲಿನಿಂದ ಕಟ್ ಕಟ್ ಶಬ್ದ ಮಾಡಿದೆ. ಹಾವು ಅಲುಗಾಡಲಿಲ್ಲ. ಇನ್ನೂ ಸ್ವಲ್ಪ ಮುಂದೆ ಹೋಗಿ ಎಂದರು ಶಾಂತಮ್ಮ. ನನ್ನ ಕೊಲೆ ಮಾಡೋಕೆ ನೋಡುತ್ತಿದ್ದೀರ ಎಂದು ಮನಸಿನಲ್ಲೇ ಅಂದುಕೊಂಡೆ. ಏನೇ ಮಾಡಿದರು ಮುಂದೆ ಹೋಗಲು ಆಗಲಿಲ್ಲ.

ಅಷ್ಟರಲ್ಲಿ ಶಂತಮ್ಮ ಅವರ ಮೊಮ್ಮಗ ಕ್ರಿಕೆಟ್ ಆಡಿ ಮನೆಗೆ ಬಂದ. ಅಜ್ಜಿ ತಡೆದು ನಿಲ್ಲಿಸಿದರು. ಮನೇಲಿ ಹಾವು ಕಣೋ ನಿಲ್ಲು ಎಂದರು. ನಾನು ಕೋಲು ಹಿಡಿದು ಸಾವಕಾಶವಾಗಿ ಅದರ ಹತ್ತಿರ ಹೋಗಿದ್ದೆ. ಅದನ್ನು ನೋಡಿದ ಆ ಹುಡುಗ ಓಡಿ ಬಂದವನೇ ಆ ಹಾವನ್ನು ತೆಗೆದುಕೊಂಡು ಓಡಿ ಹೋಗಿ ಬಿಟ್ಟ. ನನಗಂತು ಎದೆ ಝಲ್ ಎಂದಿತ್ತು. ಅಜ್ಜಿ ಚಿರುತ್ತ ಇತ್ತು. ಪ್ಲೀಸ್ ನೋಡಿ ನನ್ನ ಮೊಮ್ಮಗನನ್ನು ಕಾಪಾಡಿ ಎಂದು ಗೋಗರೆದರು. ನಾನು ಬಚಾವಾದೆ ಎಂದು ಖುಷಿಪಟ್ಟರು. ಆ ಅಜ್ಜಿಯ ಅಳು ನೋಡಲು ಆಗಲಿಲ್ಲ.

ಕಡೆಗೆ ಆ ಹುಡುಗನನ್ನು ಬೆನ್ನು ಅಟ್ಟಿ ಕೊಂಡು ಹೋದೆ. ತುಂಬಾ ಚೂಟಿ ಹುಡುಗ ನಾನು ಬೆನ್ನು ಹತ್ತಿದಷ್ಟು ಜೋರಾಗಿ ಓಡ ಹತ್ತಿದ. ಕಡೆಗೂ ಸಿಕ್ಕಿ ಬಿಟ್ಟ. ಎಸೆ ಅದನ್ನು ಎಂದು ಹೇಳಿದೆ. ಇಲ್ಲ ನನಗೆ ಬೇಕು ಅಂದ. ಎಸೆ ಇಲ್ಲ ಎಂದರೆ ಹೊಡೆಯುತ್ತೇನೆ ಎಂದೆ. ನಾನು ದುಡ್ಡು ಕೊಟ್ಟು ತಂದಿದ್ದು ನಾನು ಎಸೆಯೋಲ್ಲ ಎಂದ. ನಾನು ಏನು ಮಾಡಬೇಕು ಎಂದು ತೋಚದಾಗದೆ ಜೋರಾಗಿ ನಗಹತ್ತಿದೆ. ಕಡೆಗೆ ಆ ಹುಡುಗನನ್ನು ಕೇಳಿದಾಗ ಅದು ರಬ್ಬರ್ ಹಾವು ಜಾತ್ರೆ ಇಂದ ತಂದಿದ್ದು ಎಂದು ಹೇಳಿದ.

ನಾನು ಮತ್ತು ನನ್ನ ಮಡದಿ ಜೋರಾಗಿ ನಗುತ್ತಾ ಇದ್ದೆವು. ಅಜ್ಜಿ ಮೊಮ್ಮಗನಿಗೆ ಬೈಯುತ್ತಾ ಇದ್ದಳು. ಹೇಳಬಾರದ ಮೊದಲೇ ಇದನ್ನು ಎಂದು. ನಾನು ನನ್ನ ಮಡದಿಗೆ ಇನ್ನೊಮ್ಮೆ ಹೀಗೆಲ್ಲ ನನ್ನ ಬಗ್ಗೆ ಜಂಭ ಕೊಚ್ಚಿ ಯಾರ ಮುಂದೆಯೂ ಹೇಳಬೇಡ ಎಂದು ತಾಕೀತ ಮಾಡಿ ಮನೆಗೆ ಬಂದೆವು. ನನ್ನ ಮಡದಿ ಮಾತ್ರ ನಗುವುದನ್ನು ನಿಲ್ಲಿಸಿರಲೇ ಇಲ್ಲ.

Monday, October 11, 2010

ಸೀರೆಯಲ್ಲಿರುವ ನೀರೆ ....

ನನ್ನ ಮಡದಿ ತುಂಬಾ ಸಂತೋಷದಿಂದ ಇದ್ದಳು. ತವರು ಮನೆಗೆ ಹೋಗುವ ಸಂಭ್ರಮ. ಅವಳು ಇಷ್ಟು ಸಂತೋಷದಿಂದ ಇರುವದನ್ನು ನಾನು ನೋಡಿದ್ದು ಎರಡು ವಾರದ ಹಿಂದೆ ಹೊಸ ಸೀರೆ ಕೊಡಿಸಿದ್ದಾಗ.ಕಾಫೀ ಕುಡಿಯುತ್ತಾ ತುಂಬಾ ಸೀರಿಯಸ್ ಆಗಿ ಪೇಪರ್ ನೋಡುತ್ತಿದ್ದಳು. ಎರಡು ದಿನಗಳ ಹಿಂದೆ ಅಷ್ಟೇ ಮಹಾ ಸಂಗ್ರಾಮ ನಡೆದಿತ್ತು. ನೀನು ತವರು ಮನೆಗೆ ಹೋಗಬೇಡ ಎಂದು ಹೇಳಿದರು ಕೇಳಿರಲಿಲ್ಲ. ಸುಮ್ಮನೇ ಅವಳ ಮೇಲೆ ನನಗೆ ಎಷ್ಟು ಪ್ರೀತಿ ಎಂದು ತೋರಿಸಲು ಈ ಪೂರ್ವನಿಯೋಜಿತ ಸಂಗ್ರಾಮಕ್ಕೆ ನಾಂದಿ ಹಾಡಿದ್ದೇ. ನನಗೂ ಒಳಗೊಳಗೆ ಖುಷಿ, ಒಬ್ಬನೇ ಸಕ್ಕತ್ ಮಜಾ ಮಾಡಬಹುದು ಎಂದು. ಹೆಂಡತಿ ತವರು ಮನೆಗೆ ಹೋಗುತ್ತಾಳೆ ಎಂದರೆ ಯಾರಿಗೆ ತಾನೇ ಖುಷಿ ಇಲ್ಲ ನೀವೇ ಹೇಳಿ. ಇದೆಲ್ಲವೂ ನಮ್ಮ ಮಂಜ ಹೇಳಿ ಕೊಟ್ಟ ಟ್ರಿಕ್ಸ್.ಅದನ್ನು ನನ್ಮಗ ಮಂಜ ಟಿಪ್ಸ್(ಎಣ್ಣೆ ಪಾರ್ಟೀ) ಕೊಟ್ಟ ಮೇಲೆ ಟ್ರಿಕ್ಸ್ ಹೇಳಿಕೊಟ್ಟಿದ್ದ. ಮಂಜ ತನ್ನ ಮಡದಿಗೆ, ಗೊತ್ತು ಆಗಬಾರದು ಎಂದು ಕೆಮ್ಮಿನ ಔಷಧ ಬಾಟಲಿಯಲ್ಲಿ ಬ್ಲ್ಯಾಕ್ ಲೇಬಲ್ ಇಟ್ಟು ಕೊಂಡಿದ್ದಾನೆ. ಸುಮ್ಮನೆ ಕೆಮ್ಮಿದ ಹಾಗೆ ಮಾಡಿ ಅದನ್ನು ದಿನ ಸ್ವಾಹಾ ಮಾಡುತ್ತಾನೆ.

ನಾನು ರಾಜ್ಯದ ರಾಜಕೀಯ ವರ್ತಮಾನ ನೋಡುತ್ತಿರಬಹುದು ಎಂದು ಸುಮ್ಮನಿದ್ದೆ. ರೀsss ಬನ್ನಿ ಇಲ್ಲಿ ಎಂದು ಉಲಿದಳು. ನೋಡಿ ಇದು ಏನು ಸಕ್ಕತ್ತಾಗಿದೆ, ಎಂದು ಸೀರೆ ಜಾಹೀರಾತು ತೋರಿಸಿದಳು. ಆಹಾss ಎಂದು ಬಾಯಿ ತೆಗೆದು, ತುಂಬಾ ಸಕ್ಕತ ಆಗಿದ್ದಾಳೆ ಕಣೆ ಎಂದೆ.ರೀ ನಾನು ಹೇಳಿದ್ದು ಸೀರೆ ಬಗ್ಗೆ ಎಂದಳು. ಓsss ನಾನೆಲ್ಲೋ ಸೀರೆಯಲ್ಲಿರುವ ನೀರೆ ಬಗ್ಗೆ ಎಂದುಕೊಂಡೆ ಎಂದೆ. ಸದಾಶಿವನಿಗೆ ಅದೇ ಧ್ಯಾನ ಎಂದು ಅಂದಳು. ನೀವು ನೋಡಿ ತಂದಿದ್ದೀರ ಸೀರೆ, ಈ ತರಹ ಸೀರೆ ಕೊಡಿಸಬೇಕು ಎಂದಳು. ನಾನೇನೋ ತೆಗೆದುಕೊಂಡು ಬರುತ್ತೇನೆ ಕೊಡಲು ಅವಳು ತಯ್ಯಾರ ಇರಬೇಕಲ್ಲ ಎಂದೆ. ಇದೊಂದು ಕಮ್ಮಿ ಆಗಿತ್ತು ನಿಮಗೆ ಎಂದಳು. ರೀ ನಾನೊಂದು ಬ್ಲೌಸ್ ಹೊಲಸಿದ್ದೇನೆ. ಅದಕ್ಕೆ ಮ್ಯಾಚಿಂಗ್ ಒಂದು ಸೀರೆ ಕೊಡಿಸಿ ಎಂದಳು. ಲೇss ನಮ್ಮ ಕಂಪನೀ ಸಂಬಳ ಜೊತೆ ಬೋನಸ್ ಪ್ರತಿ ತಿಂಗಳು ಕೊಟ್ಟರೆ ಗ್ಯಾರಂಟೀ ಕೊಡಿಸುತ್ತೇನೆ ಎಂದೆ. ತುಂಬಾ ಕೋಪ ಮಾಡಿಕೊಂಡು ಬಿಟ್ಟಳು.

ಅದೇನೋ ಗೊತ್ತಿಲ್ಲ, ನನ್ನ ಹೆಂಡತಿ ಮಾತ್ರ ಪ್ರತಿಬಾರಿ ಗಾಂಧಿ ಬಜಾರ್ ಹೋದಾಗ ಸೀರೆ ಅಂಗಡಿಗಳಿಗೆ ಲಗ್ಗೆ ಇಡುತ್ತಾಳೆ. ಆ ಸೀರೆ ಅಂಗಡಿ ಮಾಲೀಕ ಎಷ್ಟು ಪರಿಚಯ ಆಗಿಬಿಟ್ಟಿದ್ದಾನೆ ಎಂದರೆ ದುಡ್ಡು ಇಲ್ಲ ಎಂದರು "ಸರ್ ನಿಮ್ಮ ಉದ್ರೀ ಕಾರ್ಡ್(Credit Card) ಇದೆ ಅಲ್ಲ ಸಾರ್" ಎಂದು ಬಾಯಿತೆಗೆದು ಜೋರಾಗಿ ನಕ್ಕೂ ಸೀರೆ ಕೊಡುತ್ತಾನೆ.

ಮಗ ಟಿವಿ ನೋಡುತ್ತಾ ಕುಳಿತಿದ್ದ. ನನ್ನ ಮಡದಿ ಊರಗೆ ಹೋಗವ ಸಲುವಾಗಿ ಪ್ಯಾಕಿಂಗ್ ನಡೆಸಿದ್ದಳು. ನಾನು ಏನೇ ಇದು ಹೋಗುವದು ನಾಲ್ಕು ದಿವಸಕ್ಕೆ, ಇಷ್ಟೊಂದು ಸೀರೆ ತೆಗೆದುಕೊಂಡು ಹೊರಟಿದ್ದೀಯ? ಎಂದೆ, ರೀ, ಇವು ನಮ್ಮ ಮನೇಲಿ ತೋರಿಸೋಕೆ ಎಂದು ತೆಗೆದುಕೊಂಡು ಹೊರಟಿದ್ದೇನೆ ಎಂದಳು. ನಾನೆಲ್ಲೋ ಒಂದು ಘಂಟೆಗೆ ಒಂದು ಎಂಬ ಲೆಕ್ಕದಲ್ಲಿ ತೆಗೆದುಕೊಂಡು ಹೊರಟಿರುವೆ ಎಂದು ತಿಳಿದುಕೊಂಡಿದ್ದೆ ಎಂದೆ.

ಅಷ್ಟರಲ್ಲಿ ನಮ್ಮ ಮೂರು ವರ್ಷದ ಸುಪುತ್ರ ಎದ್ದು ಬಂದು ಅಪ್ಪ ರಮೇಶ್ - ಸುರೇಶ್ (ಫೈವ್ ಸ್ಟಾರ್) ಜಾಹೀರಾತು ಮಾಡೋಣ ಬಾ ಎಂದ. ನಾನು ರಮೇಶ್ ಎಂದರೆ, ಅವನು ಸುರೇಶ್ ಅನ್ನುತ್ತಾನೆ. ನಾನು ರಮೇಶ್ ಎಂದೆ, ಅವ ತೊದಲಿ ತುರೇಶ್ ಎಂದು ಅಪ್ಪಿಕೊಂಡ. ನನ್ನ ಮಡದಿ ಗಹ ಗಹಿಸಿ ನಗುತ್ತಾ, ತುರೇಶ್ ಅಲ್ಲ ಕಣೋ ಅದು ಸುರೇಶ್ ಎಂದಳು. ಅವಳು ಸುರೇಶ್ ಎಂದರೂ, ನನಗೆ ಅದೇಕೋ "ಸೀರೆ ತಾ" ಅಂದ ಹಾಗೆ ಕೇಳಿಸೋದು.

ಹೋಗುವ ಸಮಯದಲ್ಲಿ "ಬೇರೆ ಬಾಡಿಗೆ ಮನೆ ನೋಡಿ" ಎಂದು ಹೇಳಿದಳು. ಈಗ ಇರುವ ಮನೆಗೆ ಏನು? ಆಗಿದೆಯೇ ಎಂದೆ. ಬಾತ್‌ರೂಮ್ ಮತ್ತು ಟಾಯ್ಲೆಟ್ ಒಂದೇ ಕಡೆ ಇದೆ ಅಲ್ಲ ಎಂದಳು. ಅದಕ್ಕೆನೀಗ ಎಂದೆ. ಎರಡು ಒಂದ ಕಡೆ ಇದ್ದರೆ ತೊಂದರೆ ಆಗುವದಿಲ್ಲವ ಎಂದಳು. ಮತ್ತೆ ವಾಸ್ತು ಚೆನ್ನಾಗಿ ಇದೆಯಲ್ಲ ಎಂದೆ. ವಾಸ್ತು ಇದೆ, ಎಂದು ಮನೆಯಲ್ಲಿ ಇದ್ದರೆ ಮನೆ ಹವಾಮಾನ ಕೆಡುತ್ತೆ ಎಂದಳು. ಇಬ್ಬರು ನಕ್ಕೆವು. ನಮ್ಮಿಬ್ಬರನ್ನೂ ನೋಡಿ ನಮ್ಮ ಮಗ ಕೂಡ ಮುಗುಳ್ನಗೆ ಬೀರಿದ. ಅದೇ ನಮ್ಮ ಊರಲ್ಲಿ ನೋಡಿ ಎಲ್ಲ ಸೆಪರೇಟ್ ..ಸೆಪರೇಟ್.. ಆಗಿ ಇರುತ್ತೆ ಎಂದಳು. ನಿಮ್ಮ ಊರ ಏನು? ದೊಡ್ಡ ಸಿಂಗಪೂರ?, ನಿಮ್ಮ ಊರಲ್ಲಿ ಒಂದು ಹೇರಿಗೆ ಆಸ್ಪತ್ರೆ ಕೂಡ ಇಲ್ಲ ಎಂದೆ. ಯಾಕೆ? ಬೇಕು ಆಸ್ಪತ್ರೆ ನಮ್ಮ ಊರಲ್ಲಿ ರೋಡೇss ಸರಿ ಇಲ್ಲ. ಆಸ್ಪತ್ರೆಗೆ ಹೋಗುತ್ತಾ.. ಹೋಗುತ್ತಾ ..ಎಲ್ಲ ಮುಗಿದೆ ಹೋಗಿರುತ್ತೆ ಎಂದು ಗಹ ಗಹಿಸಿ ನಕ್ಕಳು.

ಅವರನ್ನು ಬಸ್ ಹತ್ತಿಸಿ, ಮನೆಗೆ ಬರುವ ದಾರಿಯಲ್ಲಿ ಬಜ್ಜಿ, ಬೋಂಡ ತಿಂದು, ಚಿಪ್ಸ್ ಪ್ಯಾಕೆಟ್ ತೆಗೆದುಕೊಂಡು ಬಂದೆ. ಅವಳು ಇದ್ದರೆ, ಬರಿ ಎಣ್ಣೆ ಪದಾರ್ಥ ತಿನ್ನುತ್ತೀರ ಎಂದು ಬೈದಿರೋಳು. ಮನೆಗೆ ಬಂದೊಡನೆ ಅದೇಕೋ ಮನಸೆಲ್ಲ ಭಾರವಾದ ಹಾಗೆ ಅನ್ನಿಸಿತು. ಮನೆಯಲ್ಲಿ ಮಗನ ಚೀರಾಟ, ತುಂಟಾಟ, ಅವಳ ನಗು,ಮಾತು, ಜಗಳ, ಬೇಸರ ಮತ್ತು ಅಡುಗೆ ಮನೆಯಲ್ಲಿ ಪಾತ್ರೆಗಳ ಶಬ್ದ, ಘಮ ಘಮಿಸುವ ಅಡುಗೆ ವಾಸನೆ ಎಲ್ಲವೂ ಮಾಯವಾಗಿತ್ತು. ಎಲ್ಲವನ್ನು ಯೋಚಿಸುತ್ತಾ ಒಬ್ಬನೇ ಫ್ರಿಡ್ಜ್ ನಲ್ಲಿ ಇರುವ ಊಟ ಮುಗಿಸಿ ನಿದ್ದೆಗೆ ಜಾರಿದೆ.

ಎದ್ದೊಡನೆ ಲೇ ಕಾಫೀ ಎಂದೆ. ಎಲ್ಲಿ ಬರಬೇಕು ಕಾಫೀ... ಅವಳೇ ಇಲ್ಲ. ಮತ್ತೆ ಫೋನ್ ರಿಂಗ್ ಆಯಿತು. ರೀ ಮನೆಗೆ ಬಂದು ಮುಟ್ಟಿದ್ದೇನೆ ಎಂದಳು. ಮೊನ್ನೆ ಮಾಡಿದ ಕಾಫೀ ಫ್ರಿಡ್ಜ್ ನಲ್ಲಿ ಇಟ್ಟಿದ್ದೇನೆ ಬಿಸಿ ಮಾಡಿ ಕುಡಿಯಿರಿ ಎಂದು ಕುಹಕ ಮಾತಿನೊಂದಿಗೆ ಫೋನ್ ಕಟ್ ಮಾಡಿದಳು. ನಾನೇ ಅಡುಗೆ ಮನೆ ಎಂಬ ಗುಹೆಗೆ ಈ ಬಾರಿ ಬಲಗಾಲಿಟ್ಟು (ಎಡಗಾಲಿಟ್ಟು ಪ್ರವೇಶಿಸಿದಾಗ ಆದ ಪ್ರತಾಪ ನಿಮಗೆ ಗೊತ್ತೇ ಇದೆ.ನಳ ಪಾಕ್ .... :)) ಹೋಗಿ ಕಾಫೀ... ಕ್ಷಮಿಸಿ ಚಹಾ ಮಾಡಿಕೊಂಡು ಬಂದು ಹೀರಿದೆ.

Wednesday, September 29, 2010

ನಳ ಪಾಕ್ ....

ನಮ್ಮ ಕಂಪನೀಯಲ್ಲಿ ಒಬ್ಬ ಹೊಸ ಹುಡುಗ ಸೇರ್ಪಡೆ ಆಗಿದ್ದ. ವಿಚಿತ್ರ ಪ್ರಾಣಿ ಕ್ಷಮಿಸಿ ಮನುಷ್ಯ. ಮತ್ತೆ ಕೇಳಿಸಿಕೊಂಡರೆ ಕಷ್ಟ. ಒಂದು ದಿನ ನನ್ನ ಗೆಳೆಯ, ಅವನಿಗೆ ನಿನ್ನ ಶರ್ಟ್ ಚೆನ್ನಾಗಿದೆ ಎಂದು ಹೇಳಿದ. ಅಷ್ಟಕ್ಕೇ ನೀನು ನಿನ್ನ ವ್ಯವಹಾರ ನೋಡಿಕೊ ಎಂದು ಹೇಳಿದ್ದ. ಕೆಲ ದಿನಗಳ ನಂತರ ಅವನ ಮದುವೆ ಆಯಿತು. ಮೊನ್ನೆ ಒಂದು ದಿನ ನಾನು ಹಾಗೆ ಸಹಜವಾಗಿ ಮನೆಯವರನ್ನೂ ಕರೆದುಕೊಂಡು ಬಂದಿದ್ದೀರ? ಎಂಬ ಉದ್ಧಟ ಪ್ರಶ್ನೆ ಕೇಳಿಬಿಟ್ಟೆ. ಏನಕ್ಕೆ, ಏತಕ್ಕೆ ಕೇಳುತ್ತಾ ಇದ್ದೀರ ಎಂದು ನನಗೆ ಕೇಳಿದ. ನನಗೆ ಘಾಬರಿ. ಏನು? ನಾನು ಕೇಳಬಾರದ ಪ್ರಶ್ನೆ ಕೇಳಿಬಿಟ್ಟೇನಾ?. ನಾನು ಮುಂದೆ ಮಾತಾಡಲೇ ಇಲ್ಲ. ದಾರಿಯಲ್ಲಿ ಹೋಗುವ ಮಾರಿ ಕರೆದುಕೊಂಡು ಬಂದು ಮನೆಯಲ್ಲಿ ಕೂರಿಸಿದ ಹಾಗೆ ಆಗಿತ್ತು. ನನಗೆ ನನ್ನ ಹೆಂಡತಿನೇ ಸಂಭಾಳಿಸಲೂ ಆಗುವದಿಲ್ಲ ಇನ್ನೂ....ಕಷ್ಟ ಕಷ್ಟ. ಇನ್ನೂ ಮುಂದೆ ಅವನನ್ನು ಮಾತನಾಡಿಸಬಾರದು ಎಂದು ತೀರ್ಮಾನಕ್ಕೆ ಬಂದು ಬಿಟ್ಟೆ.

ಕೆಲಸ ಮುಗಿಸಿ ಮನೆಗೆ ಬಂದು ಕೈ ಕಾಲು ತೊಳೆಯಲು ಟವಲ್ ತೆಗೆದುಕೊಂಡೆ. ಅಮ್ಮsss. ನೋಡು ಅಲ್ಲಿ, ಅಪ್ಪ ನಿನ್ನ ಟವಲ್ ತೆಗೆದುಕೊಂಡಿದ್ದಾರೆ ಎಂದ ನನ್ನ ಸುಪುತ್ರ. ಅಷ್ಟಕ್ಕೇ ನನ್ನ ಮಡದಿ ರೀ ನಿಮಗೆ ನನ್ನದೇ ಟವಲ್ ಬೇಕಾ?, ಬೇರೆ ಬೇಕಾದಷ್ಟು ಮನೆಯಲ್ಲಿ ಇವೆ ತೆಗೆದುಕೊಳ್ಳಬಾರದ? ಎಂದು ಉದ್ಗಾರವೆತ್ತಿದಳು. ಲೇ ನಾನು ಸಾಫ್ಟ್‌ವೇರ್ ಇಂಜಿನಿಯರ್ ಕಣೇ, ಒಳ್ಳೇ ಬಿ.ಬಿ.ಎಂ.ಪಿ ಚರಂಡಿ ಸ್ವಚ್ಛ ಮಾಡುವ ನೌಕರನ ಹಾಗೆ ವರ್ತಿಸುತ್ತೀಯಲ್ಲೇ ಎಂದೆ. ಗಂಡನನ್ನ ಎಷ್ಟು ಗೋಳು ಹೊಯ್ದುಕೊಳ್ಳುತ್ತೀಯ ಎಂದೆ. ಗಂಡ ಎಂದರೆ ಏನು ಎಂದು ತಿಳಿದಿದ್ದೀಯ. ಪತಿಯೇ ಪರರ ದೈವ ಗೊತ್ತಾ? ಎಂದೆ. ಅವಳಿಗೆ ಅರ್ಥ ಆಗಲಿಲ್ಲ :). ಬಡ ಜೀವ ಬದುಕಿತು ಮತ್ತೆ.

ನನ್ನ ಬಗ್ಗೆ ಬ್ಲಾಗ್ ನಲ್ಲಿ ಏನೇನೋ ಬರೆದಿದ್ದೀರ ಎಂದಳು. ಯಾರು ಹೇಳಿದರು ಎಂದು ಕೇಳಿದೆ. ಮಂಜಣ್ಣ ಮನೆಗೆ ಬಂದಿದ್ದರು ಎಂದಳು. ಲೇ ಮಂಜ ಎಂದು ಮನಸಿನಲ್ಲೇ ಬೈದು ಹಲ್ಲು ಕಡಿದೆ. ಬರೀ ತೆಗಳಿದ್ದು ಅಷ್ಟೇ ಅಲ್ಲ ಕಣೇ, ನಿನ್ನನ್ನು ಹೋಗಳಿದ್ದು ಇದೆ ಎಂದು ಪೆಕರನಂತೆ ಹೇಳಿ ಬಿಟ್ಟೆ. ಏನು ನನ್ನ ತೆಗಳಿ ಲೇಖನ ಬರೀತೀರಾ? ಎಂದಳು. ಪಾಪ ಅವಳಿಗೆ ಈ ವಿಷಯ ಗೊತ್ತೇ ಇರಲಿಲ್ಲ. ಇಲ್ಲ ಕಣೇ ನನ್ನ ರಾಣಿ ಹಾಗೆ ಎಲ್ಲ ಮಾಡುತ್ತೆನಾ ಎಂದೆ. ನಿಮ್ಮದು ಗೊತ್ತಿಲ್ಲವ "ಇಲಿ ಬಂತು ಎಂದರೆ ಹುಲಿ ಬಂತು" ಎನ್ನುವ ಹಾಗೆ ನನ್ನ ಬಗ್ಗೆ ಬರೆದಿರುತ್ತೀರ ಎಂದು, ತುಂಬಾ ಕೋಪ ಮಾಡಿಕೊಂಡುಬಿಟ್ಟಳು.

ಪಕ್ಕದ ಮನೆ ಪೂಜ ಏನಾದರೂ ತಿಂಡಿ ಮಾಡಿದ್ದಾಳ ನೋಡು ಎಂದು ಹಾಗೆ ತಮಾಷೆಗೆ ಹೇಳಿದೆ. ಏನು ಉತ್ತರ ಬರಲಿಲ್ಲ. ಏನು ತಿಂಡಿ ಎಂದೆ. ಏನೋ ಪಕ್ಕದ ಮನೆ ಪೂಜ ಮೇಲೆ ಪ್ರೀತಿ ಉಕ್ಕಿ ಹರೀತಾ ಇತ್ತು ಎಂದಳು. ನದಿ ನೀರು ಎಷ್ಟೇ ರಭಸವಾಗಿ ಹರಿದರು ಕೊನೆಗೆ ಸೇರುವದು ಸಾಗರ ತಾನೇ?. ನೀನು ಒಂದು ತರಹ ಸಾಗರ ಇದ್ದ ಹಾಗೆ ಗೊತ್ತಾ ಎಂದು ಮಸ್ಕ ಹೊಡೆದೆ. ಅಂದ್ರೆ ನಾನು ಉಪ್ಪು ನೀರು, ನೀವು ಸಿಹಿ ನೀರಾ.....? ಎಂದು ಮತ್ತಷ್ಟು ಕೋಪಿಸಿಕೊಂಡಳು.

ಕಡೆಗೆ ನಾನೇ ಏನಾದರೂ ತಿಂಡಿ ಮಾಡುತ್ತೇನೆ ಎಂದು ಅಡಿಗೆ ಮನೆ ಎಂಬ ಗುಹೆಯೊಳಗೆ ಎಡಗಾಲಿಟ್ಟೆ. ಲೇ ಅವಲಕ್ಕಿ ಎಲ್ಲೇ? ಎಂದು ಕೂಗಿ ಕೇಳಿದೆ, ಏನು ಉತ್ತರ ಬರಲಿಲ್ಲ. ಕಡೆಗೆ ನಾನೇ ಹುಡುಕಲು ಶುರು ಮಾಡಿದೆ. ಅದೇನೋ ನಮ್ಮ ಗಂಗಾವತಿ ಬೀಚಿ ಎಂದೆ ಪ್ರಸಿದ್ದಿಯಾದ ಶ್ರೀ ಪ್ರಾಣೇಶ್ ಹೇಳುತ್ತಾರಲ್ಲ "ಡಬ್ಬಿ ಮ್ಯಾಲೆ ಡಬ್ಬಿ... ಡಬ್ಬಿ ಮ್ಯಾಲೆ ಡಬ್ಬಿ" ಎಂದು, ಹಾಗೆ "ಡಬ್ಬಿ ಒಳಗೆ ಡಬ್ಬಿ...ಡಬ್ಬಿ ಒಳಗೆ ಡಬ್ಬಿ" ಹಾಗೆ ಇತ್ತು. ಇದನ್ನು ನೋಡಿದರೆ ನಮ್ಮ ಪ್ರಾಣೇಶ್ ಅವರು ಕೂಡ ಬ್ಯಾಲೆನ್ಸ್ ತಪ್ಪಿ ಬೀಳಬೇಕು ಅಷ್ಟು ಡಬ್ಬಿ ತೆಗೆದ ಮೇಲೆ ಚಿಕ್ಕ ಅವಲಕ್ಕಿ ಪ್ಯಾಕೆಟ್ ಸಿಕ್ಕಿತು. ಅದನ್ನು ನೋಡಿದರೆ ಅಭಿಮನ್ಯು ಚಕ್ರವ್ಯೂಹ ಇದ್ದ ಹಾಗೆ ಇತ್ತು.

ಚಿಕ್ಕವಾನಿದ್ದಾಗ ಕೂಡ ಹೀಗೆ ನಳ ಪಾಕ್ ಮಾಡುತ್ತಿದ್ದೆ. ಆಗ ಅಮ್ಮ ಎಷ್ಟು ಎಣ್ಣೆ ಹಾಕುತ್ತಿ ಎಂದು ಬೈಯುತ್ತಿದ್ದಳು.

ನಾನು "ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರುಪಾಯಿ!" ಎಂದು ಹಾಡುತ್ತಾ, ಎಲ್ಲ ಸಾಮಾನುಗಳನ್ನು ಹುಡುಕುತ್ತಾ ಇದ್ದೆ. ನಿಜ ಅಲ್ವಾ ಹೊರಗಡೆ ಹೋದರೆ ಮಾಲ್, ಶಾಪಿಂಗ್ ಎಂದು ಎಲ್ಲ ದುಡ್ಡುನ್ನು ಖರ್ಚು ಮಾಡಿಬಿಡುತ್ತಾರೆ. ನಾನು ಹುಡುಕಿದಷ್ಟು ಯಾರಾದರೂ ಹುಡುಕಿದ್ದರೆ, ಕೊಲಂಬಸ್ ಹುಡುಕಿದ ಹಾಗೆ ಬೇರೆ ಒಂದು ದೇಶವನ್ನು ಹುಡುಕಬಹುದಿತ್ತು. ನಿಜ ಕಣ್ರೀ ಅದೇನೋ ಹೇಳುತ್ತಾರಲ್ಲ ಗಂಡಸರ ಜುಟ್ಟು ಜನಿವಾರ ಎಲ್ಲ ಹೆಂಗಸರ ಕೈಯಲ್ಲಿ ಎಂದು, ಅದು ನಿಜ ಅನ್ನಿಸಿತು. ಕಡೆಗೂ ಏನು ಸಿಗದೆ ಅವಲಕ್ಕಿಗೆ ಮೊಸರು ಹಾಕಿಕೊಂಡು ತಿಂದೆ. ಏನು ಸಾಹೇಬ್ರ ಪಾಕ ಹೇಗಿದೆ ನೋಡುವಾ? ಎಂದು ಬಂದು ನನ್ನನ್ನು ಹೀಯಾಳಿಸಿದಳು. ನೀನು ಮಾಡಿದ ಅವಲಕ್ಕಿ ತುಂಬಾ ಚೆನ್ನಾಗಿದೆ. ಸಕತ್.. ಮಸ್ತ..ಎಂದು ಇದೆ ಚಾನ್ಸ್ ಎಂದು ಅವಳನ್ನು ಮತ್ತಷ್ಟು ಮಸ್ಕ ಹೊಡೆದೆ. ಅದಕ್ಕೆ ಅವಳು ಅವಲಕ್ಕಿ ಅಂಗಡಿ ಇಂದ ತಂದಿದ್ದು ಅದಕ್ಕೆ ವಗ್ಗರಣೆ ಮತ್ತು ಏನು ಹಾಕಿರಲಿಲ್ಲ. ಅದು ನಾನು ಮಾಡಿದ ತಿಂಡಿನಾ? ಎಂದು ನಗುತ್ತಾ ಹುಬ್ಬು ಹಾರಿಸಿದಳು. ನಾನು ಒಂದು ಮುಗುಳ್ನಗೆ ಬೀರಿದೆ. ಸೂರ್ಯನ ಕಾಂತಿಗೆ ಸೂರ್ಯನೇ ಸಾಟಿ ಹೋಲಿಸಲಾರಿಲ್ಲ..,ನಿನ್ನೀ ಅಂದಕೆ ನೀನೇ ಸಾಟಿ ಬೇರೇ ಯಾರಿಲ್ಲ..ನಿನ್ನ ಹೋಲುವರಾರಿಲ್ಲ.. ಎಂದು ಹಾಡುತ್ತಾ ಅಡುಗೆ ಮನೆಯಿಂದ ಹೊರಗಡೆ ಬಂದೆ.

ಸಧ್ಯ ನನ್ನ ಪ್ರತಾಪ ಇಷ್ಟಕ್ಕೆ ಮುಗೀತು. ಇಲ್ಲ ಅಂದ್ರೆ ಒಂದು ದಿನ ನಳ - ಭೀಮ ಪಾಕ್ ದ ಹಾಗೆ ಗೋಪಾಲ್ ಪಾಕ್ ಕೂಡ ಇರುತಿತ್ತು (ಧಾರವಾಡದಲ್ಲಿ ಸಿಗುವ ಮೈಸೂರ್ ರಾಕ್ ಕ್ಷಮಿಸಿ ಮೈಸೂರ್ ಪಾಕ್ ಹಾಗೆ). ಅಡುಗೆ ಮನೆ ವ್ಯವಹಾರ ಎಲ್ಲ ಹೆಂಡತಿಗೆ ಸೈ ಎಂದು ಅನ್ನಿಸಿತು. ಭೀಮ ಮತ್ತು ನಳರನ್ನು ಬಿಟ್ಟು. ಭೀಮನಿಗೆ ಆವಾಗ, ಈವಾಗ ನನ್ನ ಹಾಗೆ ಬಾಯೀ ಆಡಿಸಲು ಏನಾದರೂ ಬೇಕು ಎಂದು ಅಡುಗೆ ಮನೆ ವ್ಯವಹಾರದಲ್ಲಿ ಕೈ ಹಾಕಿರಬಹುದು. ನಾನು ಕೂಡ ಆವಾಗ, ಈವಾಗ ಬಾಯೀ ಆಡಿಸುತ್ತಾನೆ ಇರುತ್ತೇನೆ. ಆದರೆ, ಎಲ್ಲವೂ ನನ್ನ ಮಡದಿಯ ಮಹಿಮೆ ಇಂದ ಮಾತ್ರ....:).

Thursday, September 2, 2010

ನನಗೆ ಮದಿರೆ ಬೇಡ ಸ್ವಾಮಿ....

ಶ್ಯಾಮ್ ಮೊದಲು ತುಂಬಾ ಹುಂಬನಂತೆ ವರ್ತಿಸುತ್ತಿದ್ದ. ಮದುವೆ ಆದ ಮೇಲೆ ತುಂಬಾ ಸುಧಾರಿಸಿದ್ದಾನೆ. ಒಂದು ದಿನ ಶ್ಯಾಮ್ ಹೆಂಡತಿ ಊರಲ್ಲಿ ಇರಲಿಲ್ಲ. ಹೀಗಾಗಿ ನನಗೆ ಮತ್ತು ಮಂಜನಿಗೆ ವಿಶೇಷ ಆಹ್ವಾನ ಇತ್ತು. ಇಬ್ಬರು ಸೇರಿ ಬಾಡಿಗೆ ೯೦ ಎಣ್ಣೆ ಹಾಕಿಸಿ ಹೊರಟೆವು. ನಮ್ಮ ಬಾಡಿಗೆ ಅಲ್ಲ... ಅದು ಬೈಕ್ ಬಾಡಿಗೆ....:). ನಮ್ಮ ಬಾಡಿಗೆ ಶ್ಯಾಮ್ ಮನೇಲಿ ವಿಶೇಷ ವ್ಯವಸ್ಥೆ ಇತ್ತು. ಮೊದಲನೆ ಬಾರಿ ಶ್ಯಾಮ್ ತನ್ನ ಹೆಂಡತಿನ ಬೇರೆ ಊರಿಗೆ ಮದುವೆಗೆ ಕಳುಹಿಸಿದ್ದ. ಅವಳಷ್ಟೇ ಅವನು ಅವಳನ್ನು ತುಂಬಾ ಪ್ರೀತಿಸುತ್ತಿದ್ದ. ಅವಳ ಜೊತೆ ಇದ್ದಾಗ ಎಂದು ಕುಡಿದಿಲ್ಲ. ಅದಕ್ಕೆ ಕಾರಣ ಅವಳ ಮೇಲಿನ ಪ್ರೀತಿಯಿಂದ.

ಶ್ಯಾಮ್ ಮನೆಗೆ ಬಂದೆವು. ಶ್ಯಾಮ ತುಂಬಾ ಚೆನ್ನಾಗಿ ವ್ಯವಸ್ಥೆ ಮಾಡಿದ್ದ. ಕೆಲ ಹನಿ ಹೊಟ್ಟೆಗೆ ಇಳಿದ ಮೇಲೆ, ನಮ್ಮ ಮಂಜಿನ ಹನಿಗಳು (ಮಂಜನ ಮಾತುಗಳು) ಶುರು ಆದವು. ಮಂಜ ಎಡಬಿಡದೆ ಮಾತನಾಡುತ್ತಿದ್ದ.ಮಂಜನ ಸರದಿ ಮುಗಿದ ಮೇಲೆ,ಶ್ಯಾಮ್ ತನ್ನ ಹೆಣ್ಣು ನೋಡುವ ಶಾಸ್ತ್ರದ ಬಗ್ಗೆ ಹೇಳಹತ್ತಿದ.

ಮೊದಲು ನಾನು ನೋಡ ಹೋಗಿದ್ದು ರಾಜೇಶ್ವರಿ ಎನ್ನುವ ದಾವಣಗೆರೆ ಹುಡಿಗಿನ. ಅವಳು ತುಂಬಾ ಸುಂದರವಾಗಿದ್ದಳು ಎಂದ. ನಿಜವಾಗಿಯೂ ಕನಸಿನ ರಾಣಿ ಎಂದ. ಯಾರ ಕನಸಿನ ನಿನ್ನದಾ ಅಥವಾ? ಬೇರೆಯವರ ಕನಸಿನ ರಾಣಿನ? ಎಂದ ಮಂಜ. ಮತ್ತೆ ಏಕೆ? ಮದುವೆ ಆಗಲಿಲ್ಲ ಎಂದು ಕೇಳಿದ. ನನ್ನ ಅಪ್ಪ ಅವಳಿಗೆ ಹಾಡು ಹೇಳಲು ಹೇಳಿದರು ಅವಳು ತುಂಬಾ ಚೆನ್ನಾಗಿ ಹಾಡಿದಳು. ಅವಳ ಸರದಿ ಆದ ಮೇಲೆ ನಾನು ಒಂದು ಹಾಡು ಹೇಳುತ್ತೇನೆ ಎಂದು ಹಾಡು ಹೇಳಿದೆ ಅಷ್ಟೇ. ಅವಳು ನನ್ನನ್ನು ವರಿಸಲಿಲ್ಲ ಎಂದ.
ಮಂದೆ ಶಾಂಭವಿ ಎನ್ನುವ ಬೆಳಗಾವಿ ಹುಡುಗಿ ನೋಡಿದೆ. ಅವಳು ತುಂಬಾ ಚೆನ್ನಾಗಿ ಇದ್ದಳು ಎಂದ. ಅವಳು ಎಲ್ಲರಿಗೂ ನಮಸ್ಕಾರ ಮಾಡುತ್ತಾ, ನನಗು ಬಂದು ನಮಸ್ಕಾರ ಮಾಡುತ್ತಿದ್ದಾಗ, ನಾನು ನನಗೆ ಏಕೆ? ಎಂದು ಜಿಗಿದು ಸೋಫಾ ಮೇಲೆ ಕುಳಿತೆ ಅಷ್ಟೇ. ಅವಳು ನನ್ನನ್ನು ಒಪ್ಪಲಿಲ್ಲ ಎಂದ.

ಮುಂದೆ ಭಾರತಿ ನಮ್ಮ ಊರಿನ ಹುಡುಗಿನ ನೋಡಿದೆ. ಅವಳು ಸ್ವಲ್ಪ ಕಪ್ಪು ಆದರೆ ಮುಖದಲ್ಲಿ ಕಳೆ ಇತ್ತು. ಅವಳ ಜೊತೆ ಮಾತನಾಡುವಾಗ ನಾನು ಡೈರೆಕ್ಟ್ ಆಗಿ ಐ ಲೈಕ್ ಯೂ. ನಿನ್ನ ಇಚ್ಛೆ ಏನು ಎಂದು ಕೇಳಿದ್ದಕ್ಕಾಗಿ ಒಪ್ಪಲಿಲ್ಲ ಎಂದ. ಹೀಗೆ ತುಂಬಾ ಹೆಣ್ಣುಗಳನ್ನು ನೋಡಿದ್ದೆ. ಅನಂತರ ಮದುವೆ ಯೋಚನೇಲಿ ಕೂದಲೆಲ್ಲ ಉದಿರಿದವು. ಈಗೀಗ ಬರೋ ಹುಡಿಗಿರು ನನ್ನನ್ನು ಯಾರು ಒಪ್ಪಿರಲಿಲ್ಲ. ಆಮೇಲೆ ಮದುವೆ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದೆ. ಆದರೆ ನೀವು ನನಗೆ ತುಂಬಾ ಒಳ್ಳೆಯ ಹೆಂಡತಿ ಕರುಣಿಸಿದ್ದೀರ ಎಂದು ಮಂಜನ ಕಾಲಿಗೆ ಬಿದ್ದ. ಮಂಜ ಏಳಿ.. ಏಳಿ.. ಶ್ಯಾಮ್ ಎಂದ. ಆದರೆ ಶ್ಯಾಮ್ ಅಲ್ಲಿಯೇ ಮಲಗಿ ಬಿಟ್ಟಿದ್ದ. ಶ್ಯಾಮ್ ನ ಎತ್ತಿ ಸೋಫಾ ಮೇಲೆ ಮಲಗಿಸಿದೆವು. ಅಷ್ಟರಲ್ಲಿ ಟ್ರಿನ್.. ಟ್ರಿನ್.. ಎಂದು ಬಾಗಿಲ ಬೆಲ್ ಶಬ್ದ. ಹೋಗಿ ಮಂಜ ಬಾಗಿಲು ತೆಗೆದ. ಅಣ್ಣssss ನೀನು ಎಂದು ಬಂದಳು ಶ್ಯಾಮ್ ಹೆಂಡತಿ. ನಾನು ಮತ್ತು ಮಂಜ ಏನು ತೋಚದಾಗಿದ್ದೆವು. ಎದಿರು ಎಲ್ಲ ಬಾಟಲಿಗಳು ಇದ್ದವು. ನಾನು ಮನೇಲಿ ಇಲ್ಲ ಎಂದು ಇದೆಲ್ಲಾ ನಡೆಸಿದ್ದೀರ ಎಂದಳು. ನಾನು ವೈನಿಗೆ ಹೇಳುತ್ತೇನೆ ಎಂದಳು. ಆಗ ಮಂಜ ನನಗೆ ವೈನ್ ಇಷ್ಟ ಇಲ್ಲ. ಅದು ಬೇರೆ ನನಗೆ ಕಾಕ್-ಟೇಲ್ ಆಗಿ ಬರಲ್ಲ ಎಂದ. ನಾನು ಹೇಳಿದ್ದು ಸಾವಿತ್ರಿ ವೈನಿ ಬಗ್ಗೆ ಎಂದಳು. ಓsss... ಆ ಹೆಸರಲ್ಲೂ ವೈನ್ ಇದೆಯಾ? ಎಂದ ಮಂಜ. ಲೇ ಅವರು ಹೇಳುತ್ತಿರುವದು ನಿನ್ನ ಹೆಂಡತಿ ಬಗ್ಗೆ ಹೆಂಡದ ಬಗ್ಗೆ ಅಲ್ಲ ಎಂದೆ. ಶ್ಯಾಮ್ ಮಡದಿ ಇದನ್ನು ಹೇಳಿದ್ದೆ ತಡ. ಮಂಜ ಹಾಗೆ ಮಾತ್ರ ಮಾಡಬೇಡಮ್ಮ ಎಂದು ಪರಿ ಪರಿಯಾಗಿ ಅವಳಿಗೆ ಬೇಡಿಕೊಂಡ. ಇವತ್ತು ಒಂದು ರಾತ್ರಿ ಇಲ್ಲಿ ಇರಲು ಬಿಡು ಎಂದ.ಅಷ್ಟರಲ್ಲಿ ಮಂಜನ ಫೋನ್ ರಿಂಗ್ ಆಯಿತು. ಮೀಟಿಂಗ್ ನಲ್ಲಿ ಇದ್ದೇನೆ ನಾಳೆ ಮುಂಜಾನೆ ಫೋನ್ ಮಾಡುತ್ತೇನೆ ಎಂದ. ಮಂಜ ತನ್ನ ಹೆಂಡತಿಗೆ ನೈಟ್ ಶಿಫ್ಟ್ ಎಂದು ಸುಳ್ಳು ಹೇಳಿ ಬಂದಿದ್ದ.

ಶ್ಯಾಮ್ ಮಡದಿ ಶ್ಯಾಮ್ ನನ್ನು ಮಗುವಿನ ಹಾಗೆ ಎತ್ತಿಕೊಂಡು ಹೋಗಿ ಬೆಡ್ ರೂಮ್ ನಲ್ಲಿ ಮಲಗಿಸಿದಳು. ನಾನು ಮತ್ತು ಮಂಜ ಎಲ್ಲೇ ಹಾಲ್ ನಲ್ಲಿ ಮಲಗಿದೆವು. ಮರು ದಿವಸ ಶ್ಯಾಮ್ ಮಡದಿ ಚಹಾ ಮಾಡಿದ್ದಳು. ಚಹಾ ಕೂಡ ವಿಸ್ಕೀ ವಾಸನೆ ಬರುತಿತ್ತು. ನಮ್ಮ ನಶೆ ಇಳಿದಿಲ್ಲ ಎಂದು ತಿಳಿದು ಸುಮ್ಮನೇ ಕುಡಿಯುತ್ತಿದ್ದೆವು. ಆದರೆ ಶ್ಯಾಮ್ ಮಡದಿ ಒಯಿಕ.. ಒಯಿಕ ...ಎಂದು ವಾಂತಿ ಮಾಡಿದ್ದಳು. ಏಕೆಂದರೆ ಬಾಟಲ್ ತೆಗೆಯುವಾಗ ಸ್ವಲ್ಪು ಒಡೆದಿತ್ತು. ಅದನ್ನು ಚಹಾ ಸೋಸುವದರಿಂದ ಸೋಸಿ ಶ್ಯಾಮ್ ಅದನ್ನು ತೊಳೆಯದೇ ಹಾಗೆ ಇಟ್ಟಿದ್ದ.

ಇದಾದ ಮೇಲೆ ಮೊದಲ ಬಾರಿ ಶ್ಯಾಮ್ ಮನೇಲಿ ದೊಡ್ಡ ಜಗಳವೇ ಆಗಿತ್ತು. ಮೊದಲು ಶ್ಯಾಮ್ "ನನಗೆ ಮದುವೆ ಬೇಡ ಸ್ವಾಮಿ" ಎಂದು ಹಾಡುತ್ತಿದ್ದ. ಆದರೆ ಈಗ "ನನಗೆ ಮದಿರೆ ಬೇಡ ಸ್ವಾಮಿ" ಎಂದು ಹೇಳುತ್ತಾನೆ.