Tuesday, July 31, 2012

ಭಾಷಣ ಕಾರ್ಯಕ್ರಮ....

ಮೊನ್ನೆ ನಾನು ಮಂಜ ಸಂಜೆ ಪಾರ್ಕಿನಲ್ಲಿ ವಾಕಿಂಗ್ ಹೊರಟಿದ್ದೆವು. ಯಾರೋ ಒಬ್ಬರು ಹಿಂದಿನಿಂದ ಕರೆದ ಹಾಗೆ ಅನ್ನಿಸಿತು. ತಿರುಗಿ ನೋಡಿದೆವು, ನಮ್ಮ ಹಳೆ ಸ್ನೇಹಿತ ವಿಶಾಲ. ಹೆಸರು ವಿಶಾಲ ಮಾತ್ರ, ಅವನು ಹೇಗೆ ಇದ್ದ ಎಂದರೆ, ಅವನು ನಮಗೆ "ನಮ್ಮ ಮನೆಗೆ  ಬಂದ್ರೆ,  ಏನು ತರುತ್ತೀರಾ?, ನಿಮ್ಮ  ಮನೆಗೆ ಬಂದ್ರೆ,  ಏನು ಕೊಡುತ್ತೀರ?" ಎಂದು ಕೇಳುತ್ತಿದ್ದ. ಒಂದು ನಯಾ ಪೈಸೇನು ಬಿಚ್ಚುತ್ತಿರಲಿಲ್ಲ. ಬಂದವನೇ ಕಾಫಿಗೆ ಆಹ್ವಾನಿಸಿದ. ನಾವು ಬೇಡ ಎಂದರು ಕೇಳದೆ ಕರೆದುಕೊಂಡು ಹೋದ. ತಾನೇ ದುಡ್ಡು ಕೊಟ್ಟು ಕಾಫಿ ಕುಡಿಸಿದ.  ಜ್ಯಾಸ್ತಿ ಮಾತನ್ನು ಆಡದ ಮನುಷ್ಯ, ಒಂದೇ ಸಮನೇ ಅರಳು ಹುರಿದ ಹಾಗೆ ಮಾತನಾಡುತ್ತಿದ್ದ. ನನ್ನನ್ನು ಮತ್ತು ಮಂಜನನ್ನು ಭಾನುವಾರ ಭಾಷಣ ಕಾರ್ಯಕ್ರಮಕ್ಕೆ ಆಹ್ವಾನಿಸಿದ.

ನಾವಿಬ್ಬರು ಭಾನುವಾರ ಭಾಷಣ ಕಾರ್ಯಕ್ರಮಕ್ಕೆ ಹೋದೆವು, ಕಾರ್ಯಕ್ರಮ ತುಂಬಾ ಚೆನ್ನಾಗಿತ್ತು.  ಕಡೆಗೆ ವಿಶಾಲ ತನ್ನ ವಿಶಾಲವಾದ ಹೃದಯವಂತಿಕೆ ಪ್ರದರ್ಶಿಸಿ, ನನ್ನನ್ನು ದಂಗುಗೊಳಿಸಿದ್ದ.  ಅದೇನೆಂದರೆ ಮುಂದಿನ ವಾರದ ಭಾಷಣ ಗೋಪಾಲ್ ಅವರದ್ದು, ವಿಷಯ ಅವರೇ ಹೇಳುತ್ತಾರೆ ಎಂದ. ನಾನು ವಿಧಿ ಇಲ್ಲದೆ ಸ್ಟೇಜ್ಗೆ ಹೋಗಿ ಹಾಸ್ಯದ ಬಗ್ಗೆ ಭಾಷಣ ಎಂದು ಹೇಳಿ ಬಂದೆ. ಮಂಜ ಸಧ್ಯ ಬಚಾವ್ ಆಗಿದ್ದ. ನಾನು ಎಂದಿಗೂ ಭಾಷಣವನ್ನು ಮಾಡಿದವನಲ್ಲ, ಮನೆಯಲ್ಲಿ ಮಾಡಿದರೂ ಮಡದಿ, ಮಗ ಕಿವಿಯಲ್ಲಿ ಹಾಕಿಕೊಳ್ಳುತ್ತಿರಲಿಲ್ಲ.  ಕಡೆಗೆ ಅಂತರ್ಜಾಲ ಮತ್ತು ಮಂಜನ ಸಹಾಯದಿಂದ ಒಂದಿಷ್ಟು ಜೋಕ್ ಮತ್ತು ಬ್ಲಾಗ್ ನಿಂದ ವಿಷಯಗಳನ್ನು, ಮತ್ತೆ ನಮ್ಮ ಗಂಗಾವತಿ ಬೀಚಿ ಎಂದೆ ಖ್ಯಾತ ರಾದ ಶ್ರೀ ಪ್ರಾಣೇಶ ಅವರ ಸಿ.ಡಿ ಖರೀದಿಸಿ, ಅದರಲ್ಲಿನ ವಿಷಯಗಳನ್ನು ಸೇರಿಸಿ ಭಾಷಣವನ್ನು ತಯಾರಿ ಮಾಡಿದೆ. ಅದನ್ನು ಮಡದಿಯ ಮುಂದೆ ಹೇಳಿದೆ. ಮಡದಿ ಎಲ್ಲಾ ಚೆನ್ನಾಗಿದೆ. ಆದರೆ, ಮೊದಲು ನೀವು ನಗುವುದನ್ನು ನಿಲ್ಲಿಸಿ, ಆಮೇಲೆ ಹೇಳಿ ಎಂದಳು. ಮಾಡುತ್ತಿರುವುದು ಹಾಸ್ಯದ ಬಗ್ಗೆ ಭಾಷಣ ಕಣೇ ಎಂದೆ. ಆದರೂ  ನೀವು ನಗುವುದನ್ನು ನಿಲ್ಲಿಸಿ ಹೇಳಿ ಎಂದಳು. ಅವಳ ಆಜ್ಞೆಯಂತೆ ಮತ್ತೊಮ್ಮೆ, ಅವಳ ಮುಂದೆ ಹೇಳಿದೆ. ಮಗ ಮಾತ್ರ ನನ್ನನ್ನು ಪಿಕಿ-ಪಿಕಿ ಎಂದು ಕಣ್ಣು ಬಿಟ್ಟು ನೋಡುತ್ತಿದ್ದ. ಮೊದ-ಮೊದಲು ನಗುತ್ತಿದ್ದ ನನ್ನ ಮಡದಿ, ಆಮೇಲೆ ನಗುವುದನ್ನೇ ನಿಲ್ಲಿಸಿ ಬಿಟ್ಟಳು. ಏಕೆ? ನಗು ಬರುತ್ತಿಲ್ಲವಾ? ಎಂದೆ. ಹಾಗೇನಿಲ್ಲ, ನೀವು ನನಗೆ ತುಂಬಾ ಸರತಿ ಹೇಳಿದ್ದರಿಂದ ನಗು ಬರುತ್ತಿಲ್ಲ. ಚೆನ್ನಾಗಿದೆ ನೀವು ಚೆನ್ನಾಗಿ ತಯಾರಿ ಮಾಡಿದ್ದೀರಾ ಹೇಳಿ ಎಂದಳು.

ಮರು ದಿನ ಭಾಷಣ ಇದ್ದರಿಂದ ನಿದ್ದೆ ಚೆನ್ನಾಗಿ ಬರಲಿಲ್ಲ. ಹಾಗು-ಹೀಗು ನಿದ್ದೆ ಮುಗಿಸಿ ಬೇಗನೆ ಎದ್ದು ಮತ್ತೊಮ್ಮೆ ಎಲ್ಲವನ್ನು ಕಂಠ ಪಾಠ ಮಾಡಿ ಮುಗಿಸಿದೆ. ನನ್ನ ಮಗನಿಗೆ ಆಶ್ಚರ್ಯ ನಾನು ಎಂದು ಓದಿದವನಲ್ಲ. ಆದರೂ, ಇಷ್ಟೊಂದು ಓದುತ್ತಿರುವುದು ಸೋಜಿಗವೇ ಅನ್ನಿಸಿತು. ನನ್ನ ಮಡದಿ ತನಗೆ ಅಷ್ಟೇ ಅಲ್ಲದೆ, ನನಗು ಕೂಡ ಪಾಠ ಹೇಳಿ ಕೊಡುತ್ತಾಳೆ ಎಂದು ಅರ್ಥೈಸಿ ಕೊಂಡು ಬಿಟ್ಟಿದ್ದ. ಅಮ್ಮ-ಮಗ ಇಬ್ಬರು ನನಗೆ ಆಲ್ ದಿ ಬೆಸ್ಟ್ ಎಂದು ಹೇಳಿ ಕಳುಹಿಸಿದರು. ನಾನು ಮಂಜನ ಮನೆಗೆ ಹೋದೆ. ಮಂಜ ತನ್ನ ತರ್ಲೆ ಬುದ್ಧಿ ತೋರಿಸಿ ಪರಾರಿ ಆಗಿದ್ದ. ಕಡೆಗೆ ವಿಧಿ ಇಲ್ಲದೆ ಒಬ್ಬನೇ ಹೋದೆ.

ನಮ್ಮ ವಿಶಾಲ ಪ್ರತಿ ಬಾರಿ ನಿಮಗೆ ಕ್ರಾಂತಿಕಾರಿಗಳ ಭಾಷಣ ಇರುತಿತ್ತು. ಆದರೆ ಈ ಸಾರಿ ನಿಮಗೆ ಒಂದು ವಿಭಿನ್ನವಾದ ಹಾಸ್ಯ ಭಾಷಣ ಇದೆ ಎಂದು ಹೇಳಿ, ನನ್ನನ್ನು ಸ್ಟೇಜ್ ಗೆ ಆಹ್ವಾನಿಸಿದ. ನಾನು ನಡುಗುತ್ತ ಮೈಕ್ ಹಿಡಿದು ನನ್ನ ಭಾಷಣವನ್ನು ಧಾರವಾಡ ಭಾಷೆಯಲ್ಲಿ ಶುರು ಮಾಡಿದೆ. ವಿಶಾಲ ಹಿಂದೆ ಹೋಗಿ ಕುಳಿತುಕೊಂಡ. ತುಂಬಾ ಹೊತ್ತು ಭಾಷಣ ಮಾಡಿದರೂ, ಯಾರೊಬ್ಬರ ಮುಖದಲ್ಲೂ ಮಂದಹಾಸ ಬಿರಲಿಲ್ಲ.  ಆದರೂ ಧಾರವಾಡದಿಂದ ಬಂದ ಇಬ್ಬರು ಮಾತ್ರ ನನ್ನ ಭಾಷಣ ಕೇಳಿ ನಗುತ್ತಿದ್ದಿದ್ದು, ನನಗೆ ಮಾತ್ರ ತುಂಬಾ ಖುಷಿ ಅನ್ನಿಸಿತು. ನಮ್ಮ ವಿಶಾಲ ಮಾತ್ರ ತನ್ನ ವಿಶಾಲ ಹೃದಯ ಪ್ರದರ್ಶಿಸಿದ್ದ, ಹಿಂದೆ ಕುಳಿತು ನಿದ್ದೆ ಹೋಗಿದ್ದ. ನಾನೇನು ಜೋಗುಳ ಹಾಡುತ್ತ ಇದ್ದೇನಾ?, ಎಂದು ಅನ್ನಿಸಿತು. ನನಗೆ ಕೋಪ ಬಂದರು ತೋರಿಸಿದೆ ಸುಮ್ಮನೆ ಭಾಷಣ ಮಾಡಿ ಮುಗಿಸಿದೆ. ಯಾರೋ ಒಬ್ಬರು ಭಾಷಣ ಮುಗಿದ ಮೇಲೆ ವಿಶಾಲನನ್ನು ಎಬ್ಬಿಸಿದರು. ಕಡೆಗೆ ಎದ್ದು ನಮ್ಮ ವಿಶಾಲ ನನಗೆ ಒಂದು ಪ್ರಮಾಣ ಪತ್ರ ಕೊಟ್ಟ. ಅದನ್ನು ತೆಗೆದುಕೊಂಡು ಮನೆ ಹಾದಿ ಹಿಡಿದೆ.

ಮನೆಯಲ್ಲಿ ನಮ್ಮ ಮಂಜ ಹಾಜರ ಆಗಿದ್ದ. ಅವನಿಗೆ ಕೋಪದಿಂದ ಎಲ್ಲಿ ಹಾಳಾಗಿ ಹೋಗಿದ್ಯೋ ಎಂದು ಬೈದೆ. ನಾನು ಬಂದಿದ್ದರೇ ಮುಂದಿನ ಭಾಷಣ ಮಂಜನದು ಎಂದು ವಿಶ್ಯ ಹೇಳಿ ಬಿಡುತ್ತಿದ್ದ ಎಂದ. ನನಗೆ ಹಾಗೆ ಕರೆದರೆ ಆಗುವುದಿಲ್ಲ ಅರಿಶಿಣ-ಕುಂಕುಮ ಕೊಟ್ಟು ಕರಿಬೇಕು ಗೊತ್ತ ಎಂದ. ಎಷ್ಟೊಂದು ಬುರುಡೆ ಬಿಚ್ಚುತ್ತಿ, ನೀನು ಭಾಷಣ ಮಾಡಬೇಕಪ್ಪ ಎಂದೆ. ನೋಡು ಅವು ಮನದಾಳದ ಮಾತುಗಳು ತನ್ನ ತಾನೇ ಬರಬೇಕು, ಕಂಠ ಪಾಠ ಮಾಡಿ ಒಪ್ಪಿಸಲು ನನಗೆ ಬರುವುದಿಲ್ಲ ಎಂದ. ಹೇಗಿತ್ತು ಭಾಷಣ ಎಂದ, ನಾನು ತುಂಬಾ ಚನ್ನಾಗಿತ್ತು ಎಂದೆ. ಸುಮ್ಮನೆ ಹೇಳಬೇಡ ನಿನ್ನ ಮುಖ ನೋಡಿದರೆ ಗೊತ್ತಾಗುತ್ತೆ ಎಂದು ಗೇಲಿ ಮಾಡಿದ.

ಮರುದಿನ ಪಾರ್ಕಿನಲ್ಲಿ ನಾನು ಮಂಜ ಹೋಗುತ್ತಿದ್ದಾಗ, ವಿಶಾಲ ತನ್ನ ಅದೇ ಗುಂಪಿನ ಜೊತೆ ಜೋರಾಗಿ "ಹಾ.. ಹಾ... " ಎಂದು ನಗುತ್ತಿದ್ದರು . ನೋಡು ನೀನು ಭಾಷಣ ಮಾಡಿದರೂ ನಗದ ಜನ  ಹೇಗೆ ನಗುತ್ತಿದ್ದಾರೆ ಎಂದು ಗೇಲಿ ಮಾಡಿದ. ಒಮ್ಮೆ ಗಾಂಧಿ ಬಜಾರಿನಲ್ಲಿ ನಾನು ಮತ್ತು ಮಂಜ ಹೋದಾಗ ಮತ್ತೆ ವಿಶಾಲ ಭೇಟಿಯಾದ, ಕೈಯಲ್ಲಿ  ಸಿ.ಡಿ ಗಳು ಇದ್ದವು, ಯಾವ ಸಿ.ಡಿ ಎಂದು ಕೇಳಿದೆ. ನೋಡು ತುಂಬಾ ಚೆನ್ನಾಗಿವೆ. ಶ್ರೀ ಪ್ರಾಣೇಶ ಅವರ ಹಾಸ್ಯ ಸಿ.ಡಿ ಗಳು ಎಂದು ತೋರಿಸಿದ. ಧಾರವಾಡ ಭಾಷೆಯಲ್ಲಿ ತುಂಬಾ ಚೆನ್ನಾಗಿ ಹಾಸ್ಯ ಸಿಂಚನ ಹರಿಸುತ್ತಾರೆ ಎಂದು ನನಗೆ ಒಂದು ದೊಡ್ಡ ಭಾಷಣ ಬಿಗಿದ. ಮಂಜ ಮಾತ್ರ ನನ್ನ ಮುಖ ನೋಡಿ ನಕ್ಕಿದ್ದೆ ನಕ್ಕಿದ್ದು.

Monday, July 23, 2012

ಕಮಲೇ ಕಮಲೋತ್ಪತ್ತಿಃ....

ಮೊನ್ನೆ ನನ್ನ ಹಳೆಯ ಮಿತ್ರ ಪ್ರಶಾಂತ ಗಾಂಧೀ-ಬಜಾರಿನಲ್ಲಿ ಭೇಟಿಯಾದ, ಅವನನ್ನು ನಾವೆಲ್ಲರೂ ಪ್ರಳಯಾಂತಕ ಅಥವಾ ಪ್ರಣಯಾoತಕ ಎಂದು ಸಂಭೋದಿಸುತ್ತಿದ್ದೆವು. ನಮ್ಮ ಮಂಜ ಕೂಡ ಅವನಿಗೆ ಹೆದರುತ್ತಿದ್ದ.ಎಲ್ಲ ಕ್ಷೇಮ ಸಮಾಚಾರ ಅದ ಮೇಲೆ, ನಾನು ಬ್ಲಾಗ್,ಕಥೆ ಕವನ ಬರೆಯುತ್ತ ಇರುತ್ತೇನೆ ಎಂದಾಗ, ನನ್ನ ಗೆಳೆಯ ಪ್ರಶಾಂತ ಅಪಾದಮಸ್ತಕ ವಿಚಿತ್ರವಾಗಿ ನೋಡಿ, ನಗಲಾರಂಬಿಸಿದ. ಏಕೆ? ಎಂದು ಕೇಳಿದೆ. ನಿನಗೆ ಬರಹಗಾರರಿಗೆ ಇರಬೇಕಾದ ಆಭೂಷಣವೆ ಇಲ್ಲ ಎಂದ. ಏನಪ್ಪಾ? ಇರಬೇಕು ಎಂದು ಕೇಳಿದಾಗ, ನಿನಗೆ ಮೊದಲು ಒಂದು ಕನ್ನಡಕ ಇರಬೇಕು. ಅದು ಇಲ್ಲದಿದ್ದರೆ ಯಾರು ನೀನು ಒಬ್ಬ ಬರಹಗಾರ ಎಂದು ನಂಬುವುದಿಲ್ಲ ಎಂದ. ಕನ್ನಡಕದಲ್ಲಿ ಕನ್ನಡ ಅಡಕವಾಗಿದೆ ಗೊತ್ತ? ಎಂದು ಹಿಯಾಳಿಸಿದ. ಕಣ್ಣ ಸನ್ನೆಗಳನ್ನೇ ಅರ್ಥ ಮಾಡಿಕೊಳ್ಳೋ ಈ ಕಣ್ಣಿಗೆ, ಇಷ್ಟೊಂದು ಜೋರಾಗಿ ಹೇಳಿದರೆ ತಿಳಿಯದೆ ಇದ್ದೀತೆ?. ಒಂದೇ ಸಮನೆ ನಖರಾ ಮಾಡಹತ್ತಿದವು.

ಸಂಜೆ ಮನೆಗೆ ಹೋಗಿ, ಮಡದಿಗೆ ವಿಷಯ ತಿಳಿಸಿದೆ. ನೋಡೇ ನಾನು ಗಣೇಶನ ಮಂತ್ರ "ವಂದೇ ದೃಷ್ಟಿ ಗಣೇಶಂ ದೃಷ್ಟಿ ದೋಷಕಂ ನಾಶಕಂ ಸಮಸ್ತ ಸಿದ್ಧಿ ನಾಯಕಂ ನಮೋ ನಮೋ ವಿನಾಯಕ" ಎಂದು ಗಣೇಶನಿಗೆ ದಿನವು ಪ್ರಾರ್ಥನೆ ಮಾಡುತ್ತೇನೆ ಆದರೂ ಈ ದೃಷ್ಟಿ ದೋಷ ಏಕೆ? ಬಂತು ಎಂದೆ. ರೀ ನಿಮ್ಮದೊಂದು ಕಥೆ ಆಯಿತು. ಇನ್ನೊಬ್ಬರ ದೃಷ್ಟಿ ನಿಮ್ಮ ಮೇಲೆ ಬೀಳದಿರಲಿ ಎಂಬುದಕ್ಕಾಗಿ ಇರುವ ಮಂತ್ರ ಅದು. ನಿಮಗೆ ದೃಷ್ಟಿ ದೋಷ ಬರದಿರಲಿ ಎಂದು ಅಲ್ಲ ಎಂದಳು. ನೀವು ಹೇಳುವುದಾದರೆ ಸಂಸ್ಕಾರ ಇರುವವರು ಎಂದರೆ Some ಕಾರಗಳು ಇರುವವರು ಅಥವಾ ಸಾವುಕಾರರು ಎನ್ನುವ ಹಾಗಿತ್ತು ನಿಮ್ಮ ಧಾಟಿ ಎಂದಳು. ಲೇ ನಾನು ಅದನ್ನೇ ಹೇಳಿದ್ದು, ನನಗೆ ಸಂಸ್ಕೃತ ಅರ್ಥ ಆಗುತ್ತೆ,ಅವನ ದೃಷ್ಟಿ ನನ್ನ ಕಣ್ಣು ಮೇಲೆ ಬಿದ್ದು ನನಗೆ ಕಣ್ಣು ನೋವು ಶುರು ಆಗಿದ್ದು ತಾನೇ? ಎಂದೆ. ಅದು ಸರಿ ಎನ್ನಿ ಎಂದಳು. ಬನ್ನಿ ಡಾಕ್ಟರ ಬಳಿ ಹೋಗೋಣ ಎಂದು ಹೇಳಿದಳು.

ತುಂಬಾ ಸುತ್ತಾಡಿದರು ಒಂದು ಕಣ್ಣಿನ ವೈಧ್ಯರು ಸಿಗಲಿಲ್ಲ, ಎಲ್ಲಿ ನೋಡಿದರು ಬರಿ ದಂತ ವೈಧ್ಯರು. ೩೨ ಇರುವ ದಂತಗಳಿಗೆ ಸಿಗುವ ಆಧ್ಯತೆ ಬರಿ ಎರಡು ಇರುವ ನಮ್ಮ ಕಣ್ಣುಗಳಿಗೆ ಹೇಗೆ ತಾನೇ ಸಿಕ್ಕಿತು?. ಕಡೆಗೆ ಒಂದು ಮೆಡಿಕಲ್ ಅಂಗಡಿಯವರಿಗೆ ಒಬ್ಬ ಡಾಕ್ಟರ ವಿಳಾಸ ಕೇಳಿ ವೈಧ್ಯರ ಬಳಿ ಹೋದೆವು.

ಡಾಕ್ಟರರು ಒಬ್ಬ ಮನುಷ್ಯನ ಜೊತೆ ಜಗಳ ಮಾಡುತ್ತಿದ್ದರು. ನಾನು ಬೇಡ ಎಂದು ಹೊರಗೆ ಹೋಗುತ್ತಿದ್ದಾಗ, ಅಲ್ಲೇ ಇದ್ದ ರಿಸೆಪ್ಶನಿಷ್ಟ್ ತನ್ನ ನಿಷ್ಠೆ ಮೆರೆದು ಕರೆದು ಕೂಡಿಸಿದಳು. ವಿಧಿ ಇಲ್ಲದೆ ಕುಳಿತೆ. ನನ್ನ ಸರದಿ ಬಂದಾಗ ಒಳಗಡೆ ಹೋದೆ. ಡಾಕ್ಟರ ಜಗಳ ಮುಗಿಸಿ ಶಾಂತವಾಗಿದ್ದರು. ಆದರೂ ನಾನೇ ಕೆಣಕಿ ಕೇಳಿದೆ ಏನು? ಆಯಿತು ಎಂದು. ಡಾಕ್ಟರ ನಿಮ್ಮ ಕಣ್ಣಲ್ಲಿ ಹೊಳಪು ಇದೆ ಎಂದೆ. ಅದಕ್ಕೆ ನನ್ನ ಜೊತೆ ಜಗಳ ಮಾಡುತ್ತಿದ್ದರು ಎಂದರು. ನಾನು ಅದಕ್ಕೆ ಏನು? ತಪ್ಪು ಎಂದೆ. ಅವರು ತಪ್ಪು ತಿಳಿದು ನನ್ನನ್ನು ಏನು? ನಾಯಿ, ಬೆಕ್ಕಿಗೆ ಹೊಲಿಸುತ್ತಿ ಎಂದು ತಿಳಿದು ಜಗಳ ಮಾಡಲು ಶುರು ಮಾಡಿದ್ದರು. ನಾನು ಮತ್ತೆ ಸುಧಾರಿಸಿ ನಿಮ್ಮ ಕಣ್ಣಲ್ಲಿ ಕಾಂತಿ ಇದೆ ಎಂದೆ. ಇನ್ನಷ್ಟು ಕೋಪ ಮಾಡಿಕೊಂಡು ಬಿಟ್ಟರು. ಎಲ್ಲರು ಹೀಗೆ ಹೇಳಿ.. ಹೇಳಿ.. ಅವರಿಗೆ ಯಾವ ಹುಡುಗಿಯ ಕಾಂತನಾಗಿ (ಮದುವೆನೇ) ಮಾಡಲಿಲ್ಲವಂತೆ. ಅದಕ್ಕೆ ಇನ್ನು ಸ್ವಲ್ಪ ಕಂಠ ಬಿರುಯುವ ಹಾಗೆ ಒದರಿದರು ಎಂದು ತಮ್ಮ ಅಳಲನ್ನು ತೋಡಿಕೊಂಡರು. ಪಾಪ ಡಾಕ್ಟರರನ್ನು ನೋಡಿ ಪ್ರಶಂಸೆ ಮಾಡಿ ಬೈಸಿಕೊಂಡದ್ದು ನೋಡಿ ನಗು ಬಂತು ಆದರೂ, ನಾನೇ ಸಮಾಧಾನಿಸಿದೆ.

ಡಾಕ್ಟರ ಎಲ್ಲ ಪರೀಕ್ಷಿಸಿ ನಿಮಗೆ ಕನ್ನಡಕ ಬಂದಿದೆ ಎಂದು ಹೇಳಿದರು. ವಿಧಿ ಇಲ್ಲದೆ ಕನ್ನಡಕ ಆರ್ಡರ್ ಮಾಡಿ ಬಂದೆ. ಮರುದಿನ ಕನ್ನಡಕ ತೆಗೆದುಕೊಳ್ಳಲು ಹೋದಾಗ, ಅಲ್ಲೇ ಗೋಡೆ ಮೇಲೆ ಹಾಕಿರುವ ಐಶ್ವರ್ಯ ರೈ ಫೋಟೋ ನೋಡುತ್ತಾ ಕುಳಿತಾಗ, ನನ್ನ ಮಡದಿ ಏನ್ರೀ ಏನು ನೋಡುತ್ತ ಇದ್ದೀರಾ? ಎಂದಳು, ನಾನು ನೇತ್ರ ದಾನದ ಜಾಹಿರಾತು ನೋಡುತ್ತಾ ಇದ್ದೇನೆ ಎಂದೆ. ನಿಮ್ಮದು ಗೊತ್ತಿಲ್ಲವಾ ಸುಮ್ಮನೆ ಬನ್ನಿ ಎಂದಳು. ನೀವು ನೇತ್ರ ದಾನ ಮಾಡಿದರೆ, ಅದರ ಜೊತೆ ಕನ್ನಡಕ ಕೂಡ ಕೊಡಬೇಕು ಗೊತ್ತ ಎಂದಳು.ಆಮೇಲೆ ಬಿಲ್ಲು ನೋಡಿ, ಬರೀ ಎರಡುನುರಾ ಎಪ್ಪತ್ತು ಎಂದು ಖುಷಿಯಾಗಿ ಕೊಡಲು ಹೋದಾಗ, ನೀವು ಕನ್ನಡಕ ಧರಿಸಿ ನೋಡಿ, ಆಮೇಲೆ ಬಿಲ್ಲು ಕೊಡಿ ಎಂದು ಡಾಕ್ಟರ ಹೇಳಿದರು. ಕನ್ನಡಕ ಧರಿಸಿ ಬಿಲ್ಲು 2700 ನೋಡಿ ದಿಕ್ಕೇ ತೋಚದಾಗಿತ್ತು. ಗಾಂಧೀಜಿಯ ಚಿತ್ರವಿರುವ ನೋಟುಗಳು ನನ್ನ ನೋಡಿ ನಕ್ಕ ಹಾಗೆ ಅನ್ನಿಸಿತು, ವಿಧಿ ಇಲ್ಲದೆ ದುಡ್ಡು ಕೊಟ್ಟು ಕನ್ನಡಕ ತೆಗೆದುಕೊಂಡು ಬಂದೆ.

ಮರುದಿನ ತಿಂಡಿ ತಿನ್ನುವಾಗ, ಊಟ ಮಾಡುವಾಗ ಮತ್ತು ಕಾಫಿ ಕುಡಿಯುವಾಗ ನನಗೆ ಕನ್ನಡಕ ಅಡ್ಡ ಬಂದ ಹಾಗೆ ಅನ್ನಿಸುತಿತ್ತು.

ನಾನು ಕನ್ನಡಕ ಹಾಕಿ ಕೊಂಡು ಮಂಜನ ಮನೆಗೆ ಹೋದಾಗ ಮಂಜ ಏನಪ್ಪಾ? ಚಾಳೀಸು, ಹಾಗಾದರೆ ಚಾಲೀಸ್ ವರ್ಷ ಆಯ್ತಾ ಎಂದು ಹಿಯಾಳಿಸಿದ. ಹಾಗಾದರೆ ನಿನ್ನ ವಯಸ್ಸು ಐವತ್ತು ತುಂಬಾ ಬೇಗನೆ ಆಗಿ ಬಿಟ್ಟಿತ್ತು ಎಂದೆ. ಏಕೆಂದರೆ? ಮಂಜ ತನ್ನ ಕನ್ನಡಕ ಹಾಕಿಕೊಳ್ಳಲು ಶುರು ಮಾಡಿದ್ದು ಹತ್ತು ವರ್ಷದ ಹಿಂದೆ. ಮಂಜ ತನ್ನ ಮಡದಿಗೆ ಐದು ನೂರರ ನೋಟು ಖೋಟ ಹೌದೋ ಅಲ್ಲವೋ ಎಂದು ಹೇಗೆ ತಿಳಿಯುವುದು ಗೊತ್ತ? ಎಂದು ಕೇಳಿದ. ಅದಕ್ಕೆ ಅವನ ಮಡದಿ ಹೇಗೆ? ಎಂದು ಕೇಳಿದಳು. ಅದಕ್ಕೆ ಅವಳ ಬಳಿ ಇದ್ದ ಒಂದೇ ನೋಟನ್ನು ತೆಗೆದುಕೊಂಡು ಅದನ್ನು ಜೋರಾಗಿ ಝಾಡಿಸಿ, ನೋಡು ಕೆಳಗಡೆ ಏನಾದರು ಬಿತ್ತಾ? ಎಂದ. ಅವಳು ಮತ್ತು ನಾನು ಕೆಳಗಡೆ ನೋಡುತ್ತಿದ್ದರೆ, ನಗುತ್ತ ನೋಡು ಗಾಂಧೀಜಿ ಕನ್ನಡಕ ಕೆಳಗೆ ಬಿಳಲಿಲ್ಲ, ಇದು ನಿಜವಾದ ನೋಟು ಎನ್ನುತ್ತಾ, ಸುಮ್ಮನೆ ಅದನ್ನು ತನ್ನ ಜೋಬಿನೊಳಗೆ ಇಳಿಸಿದ. ಮಂಜನ ಮಡದಿ ನಗುತ್ತ ಒಳಗಡೆ ಕಾಫಿ ಮಾಡಿಕೊಂಡು ಬರಲು ಹೋದಳು. ಆಮೇಲೆ ಮಂಜ ಒಂದು ಗುಟ್ಟು, ನನ್ನ ಕನ್ನಡಕಕ್ಕೆ ನಂಬರ್ ಇಲ್ಲ, ಹಾಗೆ ಸುಮ್ಮನೆ ಹಾಕಿ ಕೊಳ್ಳುತ್ತೇನೆ. ಇದರಿಂದ ಒಂದು ಫಾಯಿದೆ ಇದೆ ಗೊತ್ತ?. ಇದನ್ನು ಹಾಕಿಕೊಂಡಾಗ ನೀನು ಏನು? ಬೇಕಾದರೂ ನೋಡಿದರು ನೋಡುವವರಿಗೆ ತಿಳಿಯುವುದಿಲ್ಲ.ಮತ್ತೆ ಕೆಲವರು ಸುಳ್ಳು ಹೇಳುತ್ತಿದ್ದಾರೆ ಎಂದು ಅರಿಯಲು ಅವರ ಕಣ್ಣುಗಳೇ ಸಾಕ್ಷಿ. ಅದ್ದರಿಂದ ಕಣ್ಣುಗಳು ನಮ್ಮ ಎಷ್ಟೋ ಭಾವನೆಯನ್ನು ಮುಚ್ಚಿಡಲು ತುಂಬಾ ಸಹಾಯಕಾರಿ. "ಕಮಲೇ ಕಮಲೋತ್ಪತ್ತಿಃ" ಎಂದು ನೀನು ಕೇಳಿಲ್ಲವೇ ಹೆಚ್ಚು ಜನ ತಮ್ಮ ಭಾವನೆಗಳನ್ನು ಹಿಡಿದಿರಲು ಸಾಧ್ಯವಾಗದೆ "ಕಮಲೇ ಕಲಹೋತ್ಪತ್ತಿಃ " ಆಗಿ ಕಲಹಕ್ಕೆ ನಾಂದಿ ಹಾಡುತ್ತಾರೆ. ಅದರ ಬದಲು ಕನ್ನಡಕ ಧರಿಸುವುದರಿಂದ ಇದನ್ನು ತಡೆಯಬಹುದು. ಈ ಕನ್ನಡಕದಿಂದ ಕಲಹ ಹೇಗೆ ಆಗುತ್ತೆ ಎಂದು ಹೇಳುತ್ತೇನೆ ಕೇಳು, ಒಮ್ಮೆ ನನ್ನ ಅತ್ತೆ ಕನ್ನಡಕದ ನಂಬರ್ ಬದಲಾಗಿದ್ದರೂ, ಅದನ್ನು ಬದಲಿಸಿರಲಿಲ್ಲ. ಏಕೆಂದರೆ ಅವರ ಕನ್ನಡಕ ಅವರ ಪ್ರೀತಿಯ ಅಪ್ಪ ಕೊಡಿಸಿದ್ದು ಎಂದು. ಒಮ್ಮೆ ಹೀಗೆ ಸಂಪಿಗೆ ಹೂವು ಏನು? ರೇಟ್ ಎಂದು ಒಬ್ಬರನ್ನು ಕೇಳಿದರು, ಪಾಪ ಅವರು ಅದನ್ನು ತಮ್ಮ ಮನೆಗೆಂದು ತೆಗೆದುಕೊಂಡು ಹೊರಟಿದ್ದರು. ಇದು ಕೊಡುವುದಕ್ಕೆ ಅಲ್ಲ ಎಂದರು ಕೇಳದೆ, ಎಷ್ಟು ಸೊಕ್ಕು ನಿನಗೆ ಎಂದು ಜಗಳ ಶುರು ಮಾಡಿದ್ದರು. ಪಾಪ ಅವರು ಸ್ವಲ್ಪ ಹೂವು ಕೊಟ್ಟು ಕಳುಹಿಸಿದರು, ನಮ್ಮ ಅತ್ತೆಗೆ ಎಂದು ನಗಹತ್ತಿದ. ಕಾಮಾಲೆ ಕಣ್ಣಿಗೆ ಜಗತ್ತೇ ಹಳದಿ ಅಂತೆ.ಇದೆಲ್ಲವೂ ಮಾಡಿದ್ದೂ ಇವರ ಅಮ್ಮನೇ ಎಂದಾಗ ನನಗೂ ನಗು ತಡಿಯಲು ಆಗಲಿಲ್ಲ. ನಿಮ್ಮ ಗೆಳೆಯನ ಮನುಸ್ಸು ಹೀಗೆ, ಎಲ್ಲರನ್ನು ತಮ್ಮಂತೆ ಅಳೆಯುತ್ತಾರೆ ಎಂದು ಎನ್ನುತ್ತಾ ಮಂಜನ ಮಡದಿ ಬಂದು ಕಾಫಿ ಕೊಟ್ಟರು. ಕಡೆಗೆ ಕಾಫಿ ಕುಡಿದು ಮುಗಿಸಿ ಮನೆ ದಾರಿ ಹಿಡಿದೆ.

Wednesday, July 4, 2012

ದಂತದ ಗೊಂಬೆ....

ಮಂಜ ಮತ್ತು ಸುಧೀರ್ ಇಬ್ಬರ ಮನೆ ಅಕ್ಕ-ಪಕ್ಕ ಇತ್ತು. ಇಬ್ಬರು ಒಂದೇ ಸಮಯದಲ್ಲಿ ಮದುವೆಗೆಂದು ಹೆಣ್ಣು ಹುಡುಕುತ್ತಿದ್ದರು. ಒಂದು ದಿವಸ ಮಂಜ ಒಂದು ಹೆಣ್ಣು ನೋಡುವ ಶಾಸ್ತ್ರ ಇತ್ತು.ಸಂಜೆ ಸುಧೀರ್ ನ ಅಮ್ಮ ಹೆಣ್ಣು ಹೆಂಗಿತ್ತು ಎಂದು ಮಂಜನನ್ನು ವಿಚಾರಿಸಿದರು. ಅದಕ್ಕೆ ಮಂಜ ಹುಡುಗಿ ದಂತದ ಗೊಂಬೆ ಹಾಗೆ ಇದ್ದಳು, ಸೌಂದರ್ಯ ದೇವತೆ ಆದರೆ, ನನಗೆ ಅವಳ ಖರ್ಚನ್ನು ತೂಗಿಸಲು ಆಗುವುದಿಲ್ಲ ಎಂದ. ಹಾಗೇನಾದರು ಮದುವೆ ಆದರೆ, ಒಂದು ಬ್ಯಾಂಕ್ ಲೂಟಿ ಮಾಡಬೇಕು ಅಷ್ಟೇ ಅಂದ. ಅಲ್ಲೇ ಇದ್ದ ಸುಧೀರ್ ಸುಮ್ಮನಿರದೆ ಹಾಗಾದರೆ, ನನಗೆ ಅವಳನ್ನು ತೋರಿಸು ಎಂದ. ಏಕೆಂದರೆ, ಸುಧೀರ್ ನಿಗೆ ತಲೆ ಇಲ್ಲದಿದ್ದರೂ ತಲೆತಲಾಂತರದಿಂದ ಬಂದ ಅಸ್ತಿಗೇನು ಕಡಿಮೆ ಇರಲಿಲ್ಲ. ಅದನ್ನು ಕೇಳಿದ ಅವರ ಅಮ್ಮ ಇದೇನೋ? ಕಪಿ ಚೇಷ್ಟೆ ಎಂದು ಬೈದರು. ಬೈದರೂ ಬೆಂಬಿಡದ ಬೇತಾಳದಂತೆ ಕಾಡಿ ಅವರ ಮನೆ ವಿಳಾಸ ಮತ್ತು ಕುಂಡಲಿ ಕೇಳಿ ಪಡೆದ. ಹೆಣ್ಣು ಗಂಡಿನ ಮನೆಯಲ್ಲೇ ನೋಡುವ ಶಾಸ್ತ್ರ ಇದ್ದರು, ಅವರಿಗೆ ಕರೆ ಮಾಡಿ ನಾವೇ ಹೆಣ್ಣು ನೋಡಲು ಬರುತ್ತೇವೆ ಎಂದು ಶಾಸ್ತ್ರಕ್ಕೆ ಶಸ್ತ್ರ ಚಿಕಿತ್ಸೆ ಮಾಡಿ, ಅವರ ಅಮ್ಮ ಬೇಡವೆಂದರೂ ಕೇಳದೆ ಹೇಳಿದ. ಅವರ ಮನೆಯವರು ಬರುವವರನ್ನು ಬೇಡವೆನ್ನಲು ಆಗದೆ ಬನ್ನಿ ಎಂದರು. ಸುಧೀರ್ ನ ಖುಷಿಗೆ ಪಾರವೇ ಇರಲಿಲ್ಲ. ಎಲ್ಲರಿಗೂ ಬೇಡ ಬೇಡ ಎಂದರು ಕೇಳದೆ ಪಾರ್ಟಿ ಕೊಡಿಸಿದ್ದ. ಎಲ್ಲರು ನನ್ನ ಸುಲವಾಗಿ ದೇವರಲ್ಲಿ ಪ್ರಾರ್ಥಿಸಿ ಎಂದು ಕುಡಿದ ಅಮಲಿನಲ್ಲಿ ವಿನಂತಿಸಿದ್ದ. ಮಂಜ ಸುಧೀರನಿಗೆ ಹಣ್ಣು ತೆಗೆದು ಕೊಂಡು ಹೋಗು ಎಂದು ಹೇಳಿದ್ದ.

 ಮರುದಿನ ಎಲ್ಲರೂ ಮಂಜನ ಸಮೇತವಾಗಿ ಹೆಣ್ಣಿನ ಮನೆಗೆ ಹೆಣ್ಣು ನೋಡಲು ಹೋಗಿದ್ದಾಗಿತ್ತು. ನಾವು ಹೋಗಿರುವಷ್ಟು ಜನರನ್ನು ನೋಡಿ ಹೆಣ್ಣಿನ ಮನೆಯವರು ಗಾಬರಿ ಆಗಿದ್ದರು. ನಾವು ನಿಶ್ಚಿತಾರ್ಥ ಮುಗಿಸಿಕೊಂಡೆ ಹೋಗುತ್ತೇವೆ ಎಂದು ತಿಳಿದುಕೊಂಡಿದ್ದರು. ಸುಧೀರ ಹೆಣ್ಣು ನೋಡಿ ನಾಚಿ ನೀರಾಗಿದ್ದ. ಹೆಣ್ಣು ನಿಜವಾಗಿಯು ದಂತದ ಗೊಂಬೆ ಹಾಗೆಯೇ ಇದ್ದಳು. ಅವಳ ಸಿಂಗಾರ ಕೂಡ ಅಷ್ಟೇ ಭರ್ಜರಿ ಆಗಿತ್ತು. ಸುಧೀರ ಮರು ಮಾತಿಲ್ಲದೆ ಒಪ್ಪಿ ಬಿಟ್ಟ. ಮದುವೆ ನಿಶ್ಚಿತಾರ್ಥ ಕೂಡ ನಿರ್ಧರಿಸಿದರು. ಆದರೆ ಹೆಣ್ಣಿನ ತಂದೆ ನಿಮ್ಮ ಬಳಗ ತುಂಬಾ ದೊಡ್ಡದು ಎಂದು ಕಾಣುತ್ತೆ ಎಂದರು. ಹಾಗೇನಿಲ್ಲ ಮಾವಾ ಇವರೆಲ್ಲಾ ನನ್ನ ಗೆಳೆಯರು ಎಂದು ಹೇಳಿ ಸುಮ್ಮನಾಗಿಸಿದ್ದ.

 ಒಂದು ದಿನ ಸುಧೀರ ಅವಳನ್ನು ಭೇಟಿಯಾಗಲು ಹೋಗುತ್ತಿದ್ದೇನೆ. ಏನು? ಮಾತನಾಡಬೇಕು ಹೇಳು ಎಂದು ಮಂಜನ ತಲೆ ತಿಂದಿದ್ದ. ಹೋಗಿ ಅವಳ ಹೆಸರು ಕೇಳಬೇಡ ಎಂದ. ಅದಕ್ಕೆ ಸುಧೀರ ನನಗೇನು ಅಷ್ಟು ತಲೆ ಇಲ್ಲವೇ ಅವಳ ಹೆಸರು ಪ್ರತಿಮಾ ಅದು ನನಗೆ ಗೊತ್ತು. ಮತ್ತೆ ಏನಾದರು ಹೇಳು ಎಂದು ಕೇಳಿದ್ದ. ಮಂಜ ಅವನಿಗೆ ಭೀತಿಯಿಂದ ವರ್ತಿಸಬೇಡ, ನಿನ್ನ ಹೆಸರು ಸುಧೀರ ನೆನಪಿರಲಿ ಎಂದು ತಾಕೀತ್ ಮಾಡಿದ್ದ. ಮತ್ತು ಒಂದು ಚಾಕಲೇಟ್ ತೆಗೆದುಕೊಂಡು ಹೋಗು ಎಂದು ಹೇಳಿದ್ದ. ಮರುದಿನ ಸುಧೀರನ ತುಟಿಗೆ ದೊಡ್ಡದಾದ ಗಾಯ ಆಗಿತ್ತು. ಏನೋ? ಇದು ಎಂದು ಕೇಳಿದರೂ ಯಾರಿಗೂ ಹೇಳಲಿಲ್ಲ.

ಮದುವೆ ನಿಶ್ಚಿತಾರ್ಥ ದಿವಸ ಮಂಜ ಸುಧೀರನಿಗೆ ಟೀ-ಶರ್ಟ್ ಹಾಕಿಕೋ ಎಂದು ಹೇಳಿದ್ದ. ಸುಧೀರ ಮಂಜನ ಮಾತಿನಂತೆ ಟೀ-ಶರ್ಟ್ ಹಾಕಿಕೊಂಡು ಮಣೆ ಮೇಲೆ ಕೂಡುತ್ತಿದ್ದಾಗ, ಎಲ್ಲರೂ ಸುಧೀರನನ್ನು ನೋಡಿ ನಗಲು ಶುರು ಮಾಡಿದರು. ಏಕೆಂದರೆ? ಸುಧೀರ್ ಬನಿಯನ್ನು ತೋಳು ಅವನ ಟೀ-ಶರ್ಟ್ ಕಿಂತ ದೊಡ್ಡದು ಇತ್ತು. ಅದನ್ನು ನೋಡಿ ಕೆಳ ಮಾರಿ ಮಾಡಿ ಕುಳಿತಿದ್ದ ಹೆಣ್ಣು ಕೂಡ ನೋಡಿ ನಕ್ಕಾಗ, ನಮಗೆ ಅವಳ ನಿಜವಾದ ದಂತ ದರ್ಶನ ಆದ ಮೇಲೆ, ದೂರ ದೂರ ಇರುವ ದೊಡ್ಡ ಚೂಪಾದ ದಂತಿ ಪಂಕ್ತಿಗಳು. ಸುಧೀರನಿಗೆ ಏನಾಗಿತ್ತು? ಎಂದು ಗೊತ್ತಾಗಿತ್ತು. ಆದರೆ ಇದರಲ್ಲಿ ಪಾಪ ಮಂಜನದು ಏನು? ತಪ್ಪು ಇರಲಿಲ್ಲ, ಏಕೆಂದರೆ ಅವನಿಗೆ ಆ ವಿಷಯ ತಿಳಿದಿದ್ದೆ ಅವಾಗ. ಸುಧೀರ್ ತಲೆ ಎತ್ತುವ ಧೈರ್ಯ ಮಾಡಲಿಲ್ಲ. ಕಡೆಗೆ ಮಂಜ ಅವನಿಗೆ ಟೀ-ಶರ್ಟ್ ಹೇಳಿದ್ದೆ ತಪ್ಪಾಯಿತು ಎಂದೆನಿಸಿ, ಅವನಿಗೆ ಶರ್ಟ್ ಹಾಕಿಕೊಂಡು ಬರಲು ಹೇಳಿದ. ಮತ್ತೆ ನಿಶ್ಚಿತಾರ್ಥ ಮುಗಿಸಿದರು. ಆಗ ಮದುಮಗಳ ತಂದೆ ನಾವು ನಮ್ಮ ಪುಟ್ಟಿಯನ್ನು ತುಂಬಾ ಪ್ರೀತಿಯಿಂದ ಬೆಳೆಸಿದ್ದೇವೆ. ಏನೂ ಕಡಿಮೆ ಮಾಡಿಲ್ಲ. ಚೆನ್ನಾಗಿ ನೋಡಿಕೋ ಎಂದು ಹೇಳಿದರು.

 ಮದುವೆ ಆಗುವವರೆಗೂ ನಾವು ಸುಧೀರನಿಗೆ "ಪ್ರತಿಮಾ ಚುಂಬನಂ ದಂತ ಭಗ್ನಂ" ಮತ್ತು ಅವನೇ ಅವಸರ ಮಾಡಿಕೊಂಡು ಅಪಘಾತ ಮಾಡಿಕೊಂಡ ಎಂದು ತುಂಬಾ ದಿವಸ ಅವನ ತುಟಿ ನೋಡಿ ಕಾಡಿದ್ದೆವು. ಆದರೂ ಏನು ಮಾಡಲು ಸಾಧ್ಯವಿರಲಿಲ್ಲ ಪಾಲಿಗೆ ಬಂದಿದ್ದು ಪಂಚಾಮೃತ ಎಂದು ಸುಮ್ಮನೆ ಇದ್ದ. ಮದುವೆ ವಿಚಾರವಾಗಿ ಅವನ ಮಾವ ಬಂದಾಗ, ನನ್ನ ಹಲಕಟ ಮಾವ ಬಂದಿದ್ದ ಎಂದು ಹಲ್ಲು ಕಡಿಯುತ್ತಿದ್ದ.ಅದನ್ನು ತಿಳಿದು ಅವನ ಮಾವ ಅವಳ ಹಲ್ಲುಗಳನ್ನ ಸರಿ ಮಾಡಿಸಿದ್ದರು.

ಮದುವೆಯಲ್ಲಿ ಅವಳು ಪ್ರತಿ ಮಾತಿಗೂ ನಗುತ್ತಿದ್ದಳು. ಮದುವೆ ಆದ ಮೇಲೆ ತಿಳಿಯಿತು ಅವರ ಅಪ್ಪ ಅವಳಿಗೆ ಚಿಕ್ಕವಳಿದ್ದಾಗ ತುಂಬಾ ಚಾಕ್ಲೇಟ್ ತಂದು ಕೊಡುತ್ತಿದ್ದರು. ಅದಕ್ಕೆ ಹಲ್ಲುಗಳು ಬೇಗನೆ ಹುಳುಕು ಆಗಿ ಬಿದ್ದು, ದೊಡ್ಡವಾಗಿ ಬಂದಿದ್ದವು ಎಂದು.ಈಗ ಮಂಜನನ್ನು ದಿನವು ಹೊಗಳುತ್ತಾ ಇರುತ್ತಾನೆ. ಮತ್ತು "ಹೇ...ಚಿನ್ನದ ಬೊಂಬೆಯಲ್ಲಾ, ದಂತದ ಬೊಂಬೆಯಲ್ಲಾ...ಬುದ್ಧಿ ಇರುವ ಬೊಂಬೆಯೂ...ಕಾಲವು ಕುಣಿಸಿದಂತೆ.., ಅ ವಿಧಿ ಏಣಿಸಿದಂತೆ.., ಅಡುವ ಸಮಯದಗೊಂಬೆ ಮಾನವ.."ಅನ್ನುವ ಬದಲು ಅಡುವ ಸಮಯದ ಗೊಂಬೆ ಮಾವನ ಎಂದು ಹಾಡುತ್ತ ಅವಳ ಕೈಯಲ್ಲಿ ಆಡುವ ಸಮಯದ ಗೊಂಬೆ ಆಗಿದ್ದಾನೆ.

Thursday, June 21, 2012

ಕೋಟಿ ಕೊಟ್ಟರು ಸಿಗದ ಲಕ್ಷ್ಯ ....

ಏನು? ಎಂದು ಮಡದಿಗೆ ಕೇಳಿದೆ. ಅವಳು ಮತ್ತೆ ನನಗೆ ಏನು? ಎಂದು ಕೇಳಿದಳು. ಏನೋ ಅಂದ ಹಾಗೆ ಇತ್ತು ಎಂದೆ. ನಿಮ್ಮ ಪೂರ್ವಜರು ವಿಜಾಪುರದವರ ಎಂದು ಕೇಳಿದೆ ಎಂದಳು. ಏಕೆ? ಎಂದು ಕೇಳಿದೆ. ನಿಮಗೆ ಪ್ರತಿಧ್ವನಿ ಕೇಳುವವರೆಗೂ ಉತ್ತರಿಸುವುದಲ್ಲ ಎಂದು ಕುಹಕವಾಡಿದಳು. ನಿನ್ನೆ ಆಡಿದ ಮಾತು ಇವತ್ತು ಕೇಳಿಸಿದೆ ನಾನು ಸುಮ್ಮನೆ ಇದ್ದರು, ಕರೆದ ಹಾಗೆ ಆಯಿತು ಎಂದರೆ ಏನು ಹೇಳುವುದು ಎಂದಳು. ನಿನ್ನೆ ಅವಳು ಏನೋ ಹೇಳಲು ಬಂದಾಗ ನನ್ನ ಲಕ್ಷ್ಯ ಬೇರೆಲ್ಲೋ ಇತ್ತು. ಹೀಗಾಗಿ ಅವಳಿಗೆ ಉತ್ತರಸಲಿಲ್ಲ. ಹೀಗಾಗಿ ಮತ್ತೊಮ್ಮೆ ಏನು? ಎಂದು ಕೇಳಿದಾಗ ಏನು ಇಲ್ಲ ಎಂದು ಮುನಿಸಿಕೊಂಡಿದ್ದಳು.

ಒಮ್ಮೆ ಮೈಸೂರಿಗೆ ನಮ್ಮ ನಿರ್ದೇಶಕರು ಬ೦ದಿದ್ದರು. ಅವರು ಸ್ನಾನ ಮಾಡುತ್ತೇನೆ ಎ೦ದು ನನಗೆ ಹೇಳಿ ಹೋಗುತ್ತಿದ್ದಾಗ, ನಾನು ಏನೋ? ಯೋಚನೆ ಮಾಡುತ್ತ ಸ್ನಾನಕ್ಕೆ ಹೋಗು ಎಂದು ಹಾಗೆ ಅನ್ನಿಸಿ, ನಾನು ಸ್ನಾನಕ್ಕೆ ಹೊರಟುಹೋದೆ. ಪಾಪ ನಮ್ಮ ನಿರ್ದೇಶಕರು ನನ್ನ ಸ್ನಾನ ಮುಗಿಯುವರಗೆ ಟಾವೆಲ್ ಮೇಲೆ ಹಾಗೆ ನಿಂತಿದ್ದರು. ನಮ್ಮ ಆಫೀಸ್ ಡ್ರೈವರ್ ನಮ್ಮ ನಿರ್ದೇಶಕರ ಪರಿಸ್ತಿತಿ ನೋಡಿ ಒಳಗೊಳಗೇ ನಗುತ್ತಿದ್ದ.

ಒಮ್ಮೆ ಹಾಗೆ ನಾನು ನನ್ನ ಮಗನಿಗೆ ನಿದ್ದೆಯಿಂದ ಎದ್ದು ಬಂದ ಮೇಲೆ, ಏ ಪುಟ್ಟ ಬಾತ್ ರೂಂ ನಲ್ಲಿಯ ಫ್ಯಾನ್ ಬಂದ್ ಮಾಡು ಎಂದೆ. ನನ್ನ ಹೆಂಡತಿ ಮತ್ತು ಮಗ ಇಬ್ಬರು ನಗಲು ಶುರು ಮಾಡಿದರು. ನಿಮ್ಮಪ್ಪ ಲಕ್ಷ್ಯ ಅಷ್ಟೇ ಎಂದಳು. ಕೆಲವೊಮ್ಮೆ ಬೈಕ್ ಹೊಡೆಯುತ್ತ ಪ್ಯಾಂಟಿನಲ್ಲಿ ಬೈಕ್ ಕೀ ಎಲ್ಲಿ ಎಂದು ತಡಕಾಡಿದ್ದು ಇದೆ.

ಒಮ್ಮೆ ನಾನು ಚಿಕ್ಕವನಾಗಿದ್ದಾಗ ನನ್ನ ಅಮ್ಮ ಲಕ್ಷ್ಯ ಬೇರೆ ಎಲ್ಲೋ ಇಟ್ಟು, ನನಗೆ "ಊಟ ಆದಮೇಲೆ ಊಟ ಮಾಡು" ಎಂದು ಹೇಳಿದ್ದಾಗ ನಮ್ಮ ಮನೆಯಲ್ಲಿಯ ಎಲ್ಲರು ನಗೆ ಗಡಲಿನಲ್ಲಿ ತೇಲಿ ಹೋಗಿದ್ದೆವು. ನಾನು ಇಷ್ಟು ಲೇಖನ ಬೇರೆಯುವುದಕ್ಕೆ ಅವಳೇ ಕಾರಣ. ಅವಳು ಅವತ್ತು ನನ್ನನ್ನು ನಿರ್ಲಕ್ಷ್ಯ ಮಾಡಿದ್ದರೆ ನನಗೆ ಏನು? ಬರೆಯಲು ಸಾಧ್ಯವಾಗುತ್ತಿರಲಿಲ್ಲ.

ನಾನು ಒಮ್ಮೆ ಸುಬ್ಬನ ಮನೆಗೆ ಹೋಗಿದ್ದೆ. ಅಲ್ಲೇ ಕುಳಿತಿದ್ದ ಸುಬ್ಬನ ಅಮ್ಮ ನನ್ನನ್ನು ಎಲ್ಲಿ ನಿಮ್ಮ ಸಾಥಿ ಎಂದು ಮಂಜನನ್ನು ವಿಚಾರಿಸಿದರು. ನಾನು ಮಂಜ ಮೋರಿಗೆ ಹೋಗಿದ್ದಾನೆ ಎಂದೆ. ಇಲ್ಲಿ ಯಾವ ಮೋರಿ ಯಾವಾಗ ತೆರೆದಿರುತ್ತೆ ತಿಳಿಯೋಲ್ಲ.. ಪಾಪ ಮಂಜ ಏನಾಯಿತೋ ಏನು? ಎಂದು ಬೈಯಲು ಶುರು ಮಾಡಿದರು. ನಾನು ಅದು ಒಂದು ಅಂಗಡಿಯ ಹೆಸರು ಎಂದು ಹೇಳಿದ ಮೇಲೆ, ನಿಟ್ಟುಸಿರು ಬಿಟ್ಟು ,ಅದೇನು ಅಂತ ಹೆಸರು ಇಡುತ್ತರೋ ಏನೋ? ಎಂದು ಅಂದರು. ನಮ್ಮ ಸುಬ್ಬ ನಮ್ಮ ಅಮ್ಮನ ಲಕ್ಷ್ಯ ಅಷ್ಟೇ... ಅವಳು ಏನೋ ಯೋಚನೆ ಮಾಡುತ್ತಿರುತ್ತಾರೆ. ನಮ್ಮ ಮಾತಿನ ಬಗ್ಗೆ ಲಕ್ಷ್ಯ ಇರುವುದಿಲ್ಲ ಎಂದ. ಅದಕ್ಕೆ ಅವರ ಅಮ್ಮ ಮತ್ತ್ಯಾರ ಬಗ್ಗೆ ಯೋಚಿಸಲಿ ನಿನ್ನ ಬಗ್ಗೆನೇ ಎಂದರು. ನಮ್ಮ ಬಗ್ಗೆ ಯೋಚನೆ ಮಾಡುತ್ತ , ನಮ್ಮ ಮಾತಿಗೆ ಅಲಕ್ಷ್ಯ ಮಾಡುತ್ತಿ ಎಂದು ಸುಬ್ಬ ನಕ್ಕ.

ಒಮ್ಮೆ ಹಾಗೆ ಹೋಗುತ್ತಿದ್ದಾಗ ಮಂಜನನ್ನು ನೋಡಲಿಲ್ಲ. ನಮ್ಮ ಮಂಜ ನನ್ನನ್ನು ಲಕ್ಷ್ಯಾದಿಪತಿಗಳೇ ಎಂದು ತಡೆದು, ಲಕ್ಷ್ಯದ ಬಗ್ಗೆ ಭಾಷಣ ಶುರು ಮಾಡಿದ. ಮಂಜ ನನಗೆ ಈ ಲಕ್ಷ್ಯ ಎನ್ನುವುದು ತುಂಬಾ ಮುಖ್ಯವಾದುದು. ನಾನು ತುಂಬಾ ಸಾರಿ ನೋಡಿದ್ದೇನೆ ನಿನ್ನ ಲಕ್ಷ್ಯ ನಿನ್ನ ಬಳಿ ಇರುವುದಿಲ್ಲ ಎಂದು ಹೇಳಿದ. ನಾವು ಅರೋಗ್ಯವನ್ನು ಅಲಕ್ಷ್ಯ ಮಾಡಿದರೆ ಅಷ್ಟೇ. ಮಾತುಗಳು ಅಷ್ಟೇ ಲಕ್ಷ್ಯವಿಟ್ಟು ಮಾತನಾಡಬೇಕು. ನಿನ್ನ ಲೇಖನಗಳಿಗೆ ಎಂದು ಲಲಿತ ಪ್ರಬಂದ ಎಂದು ಹಾಕಬೇಡ. ಏಕೆಂದರೆ ಲಲಿತ ಎಂಬ ಹೆಸರಿನ ವ್ಯಕ್ತಿ ಬಂದು ಅದು ನನ್ನ ಪ್ರಬಂದ ಎಂದರೆ ಕಷ್ಟ. ಆಮೇಲೆ ನೀನು ಕೋರ್ಟಿಗೆ ಹೋದರು ಪ್ರಯೋಜನ ಇಲ್ಲ. ಏಕೆಂದರೆ ಮೊದಲೇ ಕೋಟಿ-ಕೋಟಿ ಕೇಸ್ ಗಳ ನಡುವೆ ನಿನ್ನ ಕೇಸ್ ನಿರ್ಲಕ್ಷ್ಯ ಆಗುತ್ತೆ ಎಂದು ವ್ಯಂಗ್ಯವಾಡಿದ. ಮತ್ತೆ ನಿನಗೆ ಗೊತ್ತ ಮಹಾಲಕ್ಷ್ಮಿ ಬಳಿ ಹೋಗಿ ಕೋತಿ ಹಾಗೆ ಕೋಟಿ ಕೇಳುವ ನಾವು ಲಕ್ ಮತ್ತು ಲಕ್ಷ್ಯ ಕೇಳುವುದು ಸೂಕ್ತ. ಯಾವತ್ತು ಚೆನ್ನಾಗಿರುವವರನ್ನು ಎಷ್ಟು ಲಕ್ಷಣವಾಗಿದ್ದಾರೆ ಎಂದು ಹೇಳುತ್ತಾರೆ. ಆದರೆ ಅದೇ ಚೆನ್ನಾಗಿ ಇರದವರನ್ನು ಕೋಟಿಯ ಉಪಮೆಯವಾದ ಕೋತಿ ಹಾಗೆ ಇದ್ದಾನೆ ಎಂದು ಹೇಳುವುದ ಉಂಟು. ಈ ಲಕ್ಷ್ಯ ಎನ್ನುವುದು ಕೋಟಿ ಕೊಟ್ಟರು ಸಿಗುವುದಿಲ್ಲ ತಿಳಿಯಿತಾ? ಎಂದು ಭಾಷಣ ಬಿಗಿದ.ಯಾವತ್ತು ಮನುಷ್ಯನ ಮನಸು ಮಗುವಾಗಿ ಇರಬೇಕು. ನಾವು ದೊಡ್ಡವರಾದಂತೆ ದಡ್ದರಾಗುತ್ತೇವೆ. ನಮ್ಮ ಲಕ್ಷ್ಯ ಲಕ್ಷ-ಕೋಟಿ ಕಡೆ ಹೊರಳಿ ನೆಮ್ಮದಿ ಹಾಳು ಮಾಡಿಕೊಳ್ಳುತ್ತೇವೆ. ಮತ್ತೆ ನಾವು ಎಂತಹ ಜನ ಎಂದರೆ ನಿದ್ದೆ ನಿದ್ದೆ ಎಂದು ಸಾಯುತ್ತೇವೆ, ಸಾವು ಬಂದರೆ ಓಡುತ್ತೇವೆ ಎಂದ.

ಅಷ್ಟರಲ್ಲಿ ಮಂಜನ ಮಡದಿ ಕೋಪದಿಂದ ಬಂದು ಮಂಜನ ಬಳಿ ಇದ್ದ ಚೀಲವನ್ನು ಕಸಿದುಕೊಂಡು ಹೊರಟು ಹೋದಳು. ಮಂಜ "ನಿನ್ನ ಜೊತೆ ಮಾತನಾಡುತ್ತ ನಾನು ಹಾಲು ತರುವುದನ್ನೇ ಮರೆತಿದ್ದೆ. ಮಗನಿಗೆ ಸ್ಕೂಲ್ ಗೆ ಲೇಟ್ ಆಗುತ್ತೆ " ಎಂದು ಹೇಳಿ ಮಡದಿಯನ್ನು ಹಿಂಬಾಲಿಸುತ್ತಾ ಹೊರಟು ಹೋದ.

Tuesday, November 22, 2011

ಬರಿಬೇಕು.. ಬರಿಬೇಕು ..

ಅದೆನೋ ಗೊತ್ತಿಲ್ಲ, ಏನೋ? ಒಂದು ಕಸಿವಿಸಿ, ಮನಸು ಬರಿದಾಯಿತೆ ಎಂದು. ನನಗು ಹಾಗೆ ಅನ್ನಿಸಿರಲಿಲ್ಲ, ಏಕೆಂದರೆ ಕೆಲಸದ ಒತ್ತಡದಿಂದ ಬರೆಯುವುದಕ್ಕೆ ವಿರಾಮ ಹಾಡಿದ್ದೆ. ತುಂಬಾ ದಿನಗಳಿಂದ ಏನು ಬರೆಯದೆ ಇದ್ದಿದ್ದರಿಂದ, 'ಬರ'ಹದಲ್ಲಿ 'ಬರ' ಇದೆ ಎಂದು ತಿಳಿದಿದ್ದೆ ಈ ಸಮಯದಲ್ಲಿ. ಈ ಕ್ಷಾಮಕ್ಕೆ ಪೂರ್ಣ ವಿರಾಮ ಹಾಡಿದರೆ ಕ್ಷೇಮ ಎಂದು, ಇವತ್ತು ಏನಾದರು? ಬರೆದೆ ತೀರಬೇಕು ಎಂದು ಯೋಚನೆ ಮಾಡುತ್ತಾ ಕುಳಿತಿದ್ದೆ.

ಕೆಲವರಿಗೆ ಕೆಲವೊಂದು ಹುಚ್ಚು ಖಂಡಿತ ಇರುತ್ತವೆ. ನಮ್ಮ ಮಂಜನಿಗೆ ಯಾವುದೇ ದೊಡ್ಡ ಸಮೆಸ್ಯೆಯಲ್ಲೂ ಹಾಸ್ಯ ಕಾಣುವ ಪ್ರವರ್ತಿ. ಒಮ್ಮೆ ನಾನು ಮಂಜ ನನ್ನ ಬೈಕ್ ನಲ್ಲಿ ಹೋಗುತ್ತಿರುವಾಗ, ಬೈಕ್ ಮುಂದಿನ ಒಂದು ಹುಡುಗಿಯ ಬೈಕ್ ಗೆ ತಾಗಿತು. ಅವಳು ಬಂದು ಜಗಳ ಶುರು ಮಾಡಿದಳು. ಅಷ್ಟರಲ್ಲಿ, ಮಂಜ ಏನೋ.. ಸ್ವಲ್ಪ ಪ್ರೆಸ್ ಆಯಿತು ಅಷ್ಟೇ ಎಂದ. ಏನ್ರೀ? ಹಾಗೆ ಅಂದರೆ ಎಂದಳು. ನೀವೇ ಬರೆದಿದ್ದೀರಿ ತಾನೇ ಪ್ರೆಸ್ ಎಂದು ನಿಮ್ಮ ಗಾಡಿ ಹಿಂದುಗಡೆ ಎಂದು ಹೇಳಿದ. ಅದನ್ನು ಕೇಳಿ ಅವಳಿಗೂ ನಗು ತಡಿಯಲು ಆಗಲಿಲ್ಲ, ಸುಮ್ಮನೆ ಹೊರಟು ಹೋದಳು. ಹೀಗೆ ಮತ್ತೊಮ್ಮೆ ಮಂಜನ ಮನೆಗೆ ಹೋಗಿದ್ದೆ. ನಾವು ಕಾಫಿ ಕುಡಿಯುತ್ತ ಇರುವಾಗ ಒಂದು ಜೇನು ಹುಳು ಬಂದಿತು. ಅದಕ್ಕೆ ಮಂಜ ಅಕ್ಕ-ಪಕ್ಕದ ಮನೆ ಬಿಟ್ಟು, ಇಲ್ಲೇ ಏಕೆ? ಬಂತು ಗೊತ್ತ ಎಂದು ನನಗೆ ಕೇಳಿದ. ನಾನು ಗೊತ್ತಿಲ್ಲ ಎಂದು ಹೇಳಿದೆ. ನನ್ನ ಸಿಹಿ ಮಡದಿಯ ಸಲುವಾಗಿ ಎಂದ. ಮಂಜನ ಮಡದಿ ಅವನನ್ನು ಸಿಟ್ಟಿನಿಂದ ನೋಡಿದಳು. ಏಕೆ? ತಂಗ್ಯಮ್ಮ ಹೊಗಳಿದರು ಕೂಡ ಸಿಟ್ಟು ಎಂದು ಕೇಳಿದೆ. ನಿನ್ನೆ ನನಗೆ ಸ್ವಲ್ಪ ಶುಗರ್ ಇದೆ ಎಂದು ಡಾಕ್ಟರ ಹೇಳಿದರು ಅದಕ್ಕೆ ಈ ಮಾತು ಎಂದಳು. ನನಗೆ ತುಂಬಾ ನಗು ಬಂತು. ಒಮ್ಮೆ ಮಂಜನ ಜೊತೆ ಹೋಟೆಲಿಗೆ ಹೋಗಿದ್ದೆ. ಅಲ್ಲಿ ಒಬ್ಬ ಹುಡುಗಿ ತುಂಬಾ ಕಷ್ಟ ಪಟ್ಟು ಫೋರ್ಕ್ ನಿಂದ ದೋಸೆ ತಿನ್ನುತ್ತಿದ್ದಳು. ಅದನ್ನು ನೋಡಿ ಮಂಜ ನಗುತ್ತ ಇವಳು ಫೋರ್ಕಿನಿಂದ ಕಾಫಿ ಕುಡಿದರೆ ಹೇಗಿರುತ್ತೆ ಎಂದು ನನಗೆ ಕೇಳಿದ. ಹೀಗೆ ನನ್ನ ಮಗನಿಗೆ ಕಾರ್ಟೂನ್ ಧ್ಯಾನ... ನನಗೆ ಬರೆಯುವ ಹುಚ್ಚು.

ಹೀಗೆ ಒಮ್ಮೆ ಮಡದಿಗೆ ಬರೆದರೆ ಬೀಚಿ ಅವರ ಹಾಗೆ ಬರೀಬೇಕು ಕಣೇ ಎಂದು ಹೇಳಿದೆ. ಅದಕ್ಕೆ ಮಡದಿ ನೀವು ಏನಾದರು ಗೀಚಿ, ಆದರೆ ಓದು ಓದು ಎಂದು ನನ್ನ ತಲೆ ಮಾತ್ರ ತಿನ್ನಬೇಡಿ ಎಂದು ನನ್ನನ್ನು ತಲೆಯ ಹೇನಿಗೆ ಹೋಲಿಸುವ ಹಾಗೆ ಹೇಳಿದಳು.

ಅಷ್ಟರಲ್ಲಿ ಮಡದಿ ಕೂಗಿ "ಕಸಬರಿಗೆ ತಂದು ಕೊಡಿ" ಎಂದು ಕೂಗಿದಳು. ಕಸಬರಿಗೆ ತೆಗೆದುಕೊಂಡು ಹೋಗಿ ಅವಳ ಕೈಗೆ ಕೊಟ್ಟೆ. ಕೂಡಲೇ ಕಸಬರಿಗೆ ಕೆಳಗೆ ಒಗೆದು,ಕೋಪದಿಂದ ಕಸಬರಿಗೆ ಹೀಗೆ ಕೈಗೆ ಕೊಡುವುದಾ ಎಂದು ಬೈದಳು. ಮತ್ತೆ ಇನ್ನು ಹೇಗೆ ಕೊಡಬೇಕು ತಲೆ ಮೇಲೆ ಇಡಬೇಕಾ ಅಥವಾ ಕಾಲಿಗೆ ಎಂದೆ. ಹೀಗೆ ಕೈಗೆ ಕೊಟ್ಟರೆ ಜಗಳವಾಗುತ್ತೆ ಎಂದು ಕೋಪಮಾಡಿಕೊಂಡು ಜಗಳ ಶುರುಮಾಡಿದಳು. ಅದು ಯಾರು ಅವಳಿಗೆ ಹೀಗೆ ಭವಿಷ್ಯವಾಣಿ ಹೇಳಿದರೋ ನಾ ಕಾಣೆ ಜಗಳ ಆಗುತ್ತೆ ಎಂದು. ಅವರ ಏಳನೇ ಅರಿವು ಸಾಧಿಸಿರುವ ಭವಿಷ್ಯವಾಣಿಗೆ ಸಲಾಂ ಹೊಡೆದೆ(ನಿಜವಾಗಿಯೂ ಜಗಳ ಶುರು ಮಾಡಿದ್ದರಿಂದ). ಇನ್ನೊಮ್ಮೆ ಕಸ'ಬರಿ'ಗೆ ಉಸಾ'ಬರಿ'ಗೆ ಹೋಗುವುದು ಬೇಡ ಎಂದು ನಿರ್ಧರಿಸಿದೆ. ಆದರೂ ಎರಡಲ್ಲೂ ಬರಿ ಎಂಬ ಆಜ್ಞೆ ಮಾತ್ರ ಇತ್ತು.

ಕಸಗುಡಿಸಿದ ಮೇಲೆ ಬಂದು, ಏನು? ಅಷ್ಟು ಆಳವಾಗಿ ಯೋಚಿಸುತ್ತ ಇದ್ದೀರಾ ಎಂದಳು. ಏನಾದರು ಬರೀಬೇಕು ಕಣೇ ಎಂದೆ. ನೀವೇನು ಬರೆಯುವುದು, ಈಗಾಗಲೇ ಎಲ್ಲ ಖ್ಯಾತ ಸಾಹಿತಿಗಳು ಎಲ್ಲವನ್ನು ಬರೆದು ಮುಗಿಸಿದ್ದಾರೆ. ನೀವು ಅದನ್ನೇ ನಿಮ್ಮ ಧಾಟಿಯಲ್ಲಿ ಬರೆಯಬಹುದು ಅಷ್ಟೇ. ಅಥವಾ ಅವರು ಬಿಟ್ಟಿರುವ ಅಲ್ಪ ಸಲ್ಪ ಸಾಹಿತ್ಯ ಮಾತ್ರ ಬರೆಯಲು ಸಾಧ್ಯ ನೀವು ಖಾಲಿದಾಸರು ಎಂದು ಹಿಯಾಳಿಸಿದಳು.

"ಕಾಳಿದಾಸ ಕಾವ್ಯ ನಮ್ಮಪ್ಪನ್ನ ಕೇಳ್ರಿ ...ಖಾಲಿ ದೋಸೆಗಿಂತ ಒಳ್ಳೆ ರುಚಿ ಇಲ್ಲರಿ" ಎಂದು ಹಾಗೆ ಹಾಡುತ್ತ ಕುಳಿತ್ತಿದ್ದಾಗ, ಇದೊಂದು ಗೊತ್ತು ನಿಮಗೆ ಹೋಗಿ ಬೇಗನೆ ನೀರು ಕಾಯಿಸಿ ಎಂದು ಕಳುಹಿಸಿದಳು. ಬೇಜಾರಿನಿಂದ "ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ...." ಎಂದು ಹಾಡುತ್ತ, ನೀರು ಕಾಯಿಸಲು ಹೋದೆ. ಹಾಗೆ ಆಳವಾಗಿ ಯೋಚಿಸುತ್ತ ಕಟ್ಟಿಗೆ ಹಾಕುತ್ತ ಕುಳಿತಿರುವಾಗ ನನ್ನ ಕೈ ಒಳಗಡೆ ಹಾಕಿಬಿಟ್ಟಿದ್ದೆ. ನನ್ನ ಕೈಗೆ ಬರೆ ಬಿದ್ದಿತ್ತು. ಜೋರಾಗಿ ಕಿರುಚಲು ಮಡದಿ ಬಂದು, ಈಗ ಬರೆ ಸಿಕ್ಕಿತಲ್ಲ, ಅದಕ್ಕೆ ಹೇಳಿದ್ದು ನಿಮಗೆ ಬರಿಬೇಕು.. ಬರಿಬೇಕು .. ಎಂದು ಹೇಳಬೇಡಿ ಎಂದು, ಮೇಲೆ ಇರುವ ಅಶ್ವಿನಿ ದೇವತೆಗಳು ಅಸ್ತು ಅಸ್ತು ಎಂದು ಬಿಟ್ಟಿದ್ದಾರೆ ಎಂದು ನಗುತ್ತ, ಇನ್ನೇನು ಬನ್ನಿ ಸಾಕು ಎಂದು ಹೇಳಿ ಕೈಗೆ ಬರ್ನೋಲ್ ಹಚ್ಚಿ ಮಲಗಲು ಹೇಳಿದಳು.

ಮರುದಿನ ಮಂಜ ಮತ್ತು ಅವನ ಮಡದಿ ಮನೆಗೆ ಬಂದಿದ್ದರು.ಮಂಜ ನನ್ನ ಕೈ ನೋಡಿ ಏನು? ಆಯಿತು ಎಂದ. ಅದಕ್ಕೆ ನನ್ನ ಮಡದಿ ನಿಮ್ಮ ಗೆಳೆಯನಿಗೆ ಬರೆ ಬೇಕಾಗಿತ್ತಂತೆ, ಅದಕ್ಕೆ ನಾನು ಕೊಟ್ಟೆ ಎಂದು ತಮಾಷೆ ಮಾಡಿದಳು. ಆಮೇಲೆ ಎಲ್ಲವನ್ನು ವಿಸ್ತಾರವಾಗಿ ಹೇಳಿ, "ಬರೆದಿದ್ದೆಲ್ಲಾ ಸಾಹಿತ್ಯ ಅಲ್ಲ, ಕೊರೆದಿದೆಲ್ಲ ವೇದಾಂತ ಅಲ್ಲ" ಎಂದು ಅಂದಳು. ಇದು ನಮ್ಮದೇ ಮುಖ ಸ್ತುತಿ ಎನ್ನಿಸಿ, ನಾನು ಮತ್ತು ಮಂಜ ಮುಖ.. ಮುಖ.. ನೋಡಿಕೊಂಡೆವು. ನನ್ನ ಮತ್ತು ಮಂಜನ ಮಡದಿ ನಗುತ್ತ ಅಡುಗೆ ಮನೆಗೆ ಹೋದರು.

Saturday, August 27, 2011

ಅತಿಥಿ ದೇವೋಭವ ....

ಏನ್ರೀ? ಇದು ನಿಮ್ಮ ಸಾಮಾನುಗಳನ್ನು ಹೀಗೆ ಇಟ್ಟುಕೊಂಡರೆ ಮನೆಯಲ್ಲಿ ಹುಳ - ಹುಪ್ಪಡಿ ಬರುತ್ತವೆ ಎಂದು ಬೈದಳು ಮಡದಿ. ಅದಕ್ಕೆ ನಾನು ಅವು ಏನು? ಗೆಸ್ಟಾ?, ಬಂದರೆ ಬರಲಿ ಬಿಡು ನಿನಗೇನೂ ಕಷ್ಟ ಎಂದೆ. ಗೆಸ್ಟ್ ಬರುವವರಿದ್ದರೆ ಮಾತ್ರ ಮನೆ ಸ್ವಚ್ಚವಾಗಿ ಇಡಬೇಕಾ?, ಆಯಿತು ಬಿಡಿ ಹಾಗೆ ಬಿದ್ದಿರಲಿ ನನಗೇನೂ, ಎಷ್ಟೇ ಆದರೂ ಅವು ನಿಮ್ಮ ಸಂಬಂಧಿಕರು(ಗೆಸ್ಟ್) ಅಲ್ಲವೇ ಎಂದಳು. ಅಷ್ಟರಲ್ಲಿ ನನ್ನ ಪುಸ್ತಕದ ಒಳಗಿಂದ ಒಂದು ಜಿರಲೆ ತನ್ನ ಮೀಸೆ ತೋರಿಸುತ್ತ ಹೊರಗಡೆ ಬಂತು. ಪಾಪ ಅದಕ್ಕೂ ಕೇಳಿಸಿರಬೇಕು. ನಿಮಗಿಂತ ಇದೆ ವಾಸಿ ನೀವು ಪುಸ್ತಕ ತಂದು ಒಟ್ಟುತ್ತಿರಿ..ಅದನ್ನು ಓದಲು ಪಾಪ ನಿಮ್ಮ ಸಂಬಂಧಿ ಕಷ್ಟ ಪಡುತ್ತೇ ಎಂದು ವ್ಯಂಗದ ಮಾತು ಆಡಿ ಹೊರಟು ಹೋದಳು. ರಕ್ತ ಸಂಬಂಧಿ ಖಂಡಿತಾ ಅಲ್ಲ ನನ್ನ ರಕ್ತ ಕೆಂಪು ಅದರ ರಕ್ತ ಬಿಳಿ. ಬಿಳಿ ರಕ್ತ ಕಣಗಳು ಮನುಷ್ಯನಲ್ಲಿ ಇರುತ್ತವೆ ಎಂದು ಓದಿದ ನೆನಪು. ಆದರೆ ಸಂಬಂಧಿ ಆಗುವಷ್ಟು ಇವೆ ಎಂದು ಹೇಳಿದ್ದು ಅರಗಿಸಿ ಕೊಳ್ಳಲಾಗಲಿಲ್ಲ.

ಅದು ನಿರ್ಭಯದಿಂದ ನನ್ನ ಪುಸ್ತಕಗಳ ಮೇಲೆ ನಡೆದಾಡುತ್ತಿರುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದೆನಿಸಿ ಅದನ್ನು ಹೊಡೆಯಲು ಪೊರಕೆ ತೆಗೆದುಕೊಂಡು ಬರುವಷ್ಟರಲ್ಲಿ ಮಾಯವಾಗಿತ್ತು. ಕಡೆಗೆ ಎಲ್ಲ ಪುಸ್ತಕಗಳನ್ನು ಹೊಂದಿಸಿ ಇಟ್ಟೆ. ಮರೆಯಲ್ಲಿ ಇದ್ದ ಜಿರಲೆ ಮತ್ತೆ ಹೊರಬಂತು. ಈ ಬಾರಿ ಅದನ್ನು ತಿಥಿ ಮಾಡಿ ಅತಿಥಿಯನ್ನು ಮೀಸೆಯಿಂದ ಹಿಡಿದು ಹೊರಗಡೆ ಎಸೆದು ಬಂದೆ.

ಯಾವುದೇ ದೇವರು ಜಿರಳೆಯನ್ನು ವಾಹನ ಮಾಡಿಕೊಳ್ಳದೆ ಇದ್ದದ್ದಕ್ಕೆ, ನಾನು ಎಲ್ಲಾ ದೇವರಿಗೆ ತುಂಬಾ ಧನ್ಯವಾದ ಹೇಳಲೇಬೇಕು. ಏಕೆಂದರೆ, ಮಹಾಭಾರತದಲ್ಲಿ ಆದ ಮಾರಣಹೋಮಕ್ಕಿಂತ, ಒಂದಿಷ್ಟು ಜಾಸ್ತಿ ಅನ್ನುವಷ್ಟು ಜಿರಲೆ ಸಂಹಾರ ಮಾಡಿದ ಕೀರ್ತಿ ನನಗೆ ಸಲ್ಲುತ್ತೆ. ಅದೆಲ್ಲದರ ಪಾಪದ ಜೊತೆಗೆ ಜಿರಲೆ ವಾಹನ ಮಾಡಿಸಿಕೊಂಡ ದೇವರು ಕೂಡ ನನಗೆ ಶಾಪ ಹಾಕುತ್ತಿದ್ದರು. ಇದೆ ಕಾರಣಕ್ಕಾಗಿ ನಮ್ಮ ಇಲಿ ಮಹಾಶಯನಿಗೆ ಪೂರ್ತಿ ಸ್ವಾತಂತ್ರ ನಮ್ಮ ಮನೆಯಲ್ಲಿ ಇದೆ. ನಾನು ಕಾಲಿಡದ ಜಾಗಕ್ಕೂ ಕೂಡ ನಮ್ಮನೆ ಇಲಿ ಮರಿಗಳು ಓಡಾಡುತ್ತವೆ. ಮೊದಮೊದಲು ಜಿರಲೆ ಕಂಡ ಕೂಡಲೇ ಚೀರಲು ಶುರು ಮಾಡುತ್ತಿದ್ದೆ. ಆಮೇಲೆ ಜಿರಲೆ ನನಗೆ ಒಂದು ಚಿಲ್ಲರೆ ಪ್ರಾಣಿಯಾಗಿ ಕಾಣಿಸತೊಡಗಿತು.


ನಾನು ಕಲಿತ ಕೆಲ ವಿಧ್ಯೆ ಪ್ರದರ್ಶಿಸಬೇಕು ಎಂದು ಮಡದಿಯ ಬಳಿ ಬಂದು ಜಿರಲೆಗೆ ಮೀಸೆ ಹೇಗೆ ಉಪಯೋಗಕ್ಕೆ ಬರುತ್ತೆ ಹೇಳು ಎಂದು ಕೇಳಿದೆ. ಅದಕ್ಕೆ ಮಡದಿ ಅದನ್ನು ಸಾಯಿಸಿದ ಮೇಲೆ ಅದನ್ನು ಎತ್ತಿ ಹಿಡಿದು ಬಿಸಾಡುವುದಕ್ಕೆ ಎಂದು ಹೇಳಿದಳು. ಅದಲ್ಲಾ ಕಣೇ ಏಕೆ? ಇರುತ್ತೆ ಹೇಳು ಎಂದೆ. ಮತ್ತೆ ಯೋಚಿಸಿ, ಅದು ಶೇವಿಂಗ್ ಮಾಡಿಕೊಂಡಿರಲ್ಲ ಅದಕ್ಕೆ ಇರುತ್ತೆ ಎಂದು ಹೇಳಿ ನಗಹತ್ತಿದಳು. ನಾನು ಅದರ ಮೀಸೆಯಿಂದ ಅದು ಆಹಾರ ಹುಡುಕುತ್ತೆ, ಮತ್ತು ಅದರಿಂದ ಹೆಣ್ಣು ಜಿರಲೆಗಳನ್ನು ಆಕರ್ಷಿಸಲು ಉಪಯೋಗಿಸುತ್ತೆ ಎಂದು ಹೇಳಿದೆ. ಓ ಹಾಗಾ.. ಎಂದು ರಾಗ ಎಳೆದು, ಹೇಗೆ ಇದ್ದರೂ ಇಷ್ಟು ಸ್ವಚ್ಚ ಮಾಡಿದ್ದೀರಾ, ಪೂರ್ತಿ ಮನೆ ಸ್ವಚ್ಚ ಮಾಡಿಬಿಡಿ ಮೀಸೆ ಹೊತ್ತ ಗಂಡಸರೇ...ನಾನು ಅಡುಗೆ ಮಾಡುತ್ತೇನೆ ಎಂದಳು ಮಡದಿ. ಪೂರ್ತಿ ಮನೆ ಸ್ವಚ್ಚ ಮಾಡುವ ಸಮಯದಲ್ಲಿ ಮತ್ತಷ್ಟು ಮಾರಣಹೋಮ ನಡೆಯಿತು. ಮನೆಯಲ್ಲಿ ತುಂಬಾ ಧೂಳು ಇದ್ದಂದರಿಂದ ಸ್ವಲ್ಪ ನೆಗಡಿ ಆಯಿತು. ಹೀಗಾಗಿ ಸಂಜೆ ಡಾಕ್ಟರ ಬಳಿ ಹೋಗುವ ಪರಿಸ್ತಿತಿ ಬಂತು.


ಡಾಕ್ಟರ ಎಲ್ಲ ಪರೀಕ್ಷಿಸಿ ಒಂದಿಷ್ಟು ಮಾತ್ರೆ ಕೊಟ್ಟರು. ತೆಗೆದುಕೊಂಡು ಮನೆಗೆ ಬಂದೆ. ಊಟವಾದ ಮೇಲೆ ಹಾಗೆ ಮಲಗಿಕೊಳ್ಳುವ ಸಮಯದಲ್ಲಿ ಜ್ಞ್ಯಾಪಕಕ್ಕೆ ಬಂತು ಮಾತ್ರೆ ತೆಗೆದುಕೊಂಡಿಲ್ಲವೆಂದು. ಮಡಿದಿಗೆ ಒದರಿ ಹೇಳಿದೆ ಮಾತ್ರೆ ತೆಗೆದುಕೊಂಡು ಬಾ ಎಂದು. ಅವಳು ಮಾತ್ರೆ ತೆಗೆದುಕೊಳ್ಳುವಷ್ಟರಲ್ಲಿ ಕರೆಂಟ್ ಹೋಯಿತು. ಅವಳು ತೆಗೆದುಕೊಂಡು ಬಂದು ಕೊಟ್ಟಳು. ಅದನ್ನು ಹಿಡಿದುಕೊಂಡು ಕುಳಿತಿದ್ದೆ. ಅವಳು ನೀರು ತರಲು ಹೋದಳು. ನೀರು ತಂದು ಕೊಟ್ಟಳು. ಅಷ್ಟರಲ್ಲಿ ಮತ್ತೆ ಕರೆಂಟ್ ಬಂತು. ಅವಳು ನನ್ನನು ನೋಡಿ ಜೋರಾಗಿ ನಗಹತ್ತಿದಳು. ನಾನು ನನ್ನ ಕೈಯಲ್ಲಿ ಇದ್ದದ್ದು ನೋಡಿ ನನಗೆ ಗಾಬರಿ, ಏಕೆಂದರೆ? ಅದು ಡಾಕ್ಟರ ಕೊಟ್ಟ ಮಾತ್ರೆ ಇರಲಿಲ್ಲ. ಕ್ಯಾಪ್ಸುಲ್ ಹಾಗೆ ಇದ್ದ ನಮ್ಮ ಸಂಬಂಧಿ ಬಿಟ್ಟು ಹೋದ ಗಿಫ್ಟ್. ಅದೇ ... ಅದರ ಕ್ಯಾಪ್ಸುಲ್ ಗಾತ್ರದ ಜಿರಳೆ ಮೊಟ್ಟೆ. ಸಧ್ಯ ಸ್ವಲ್ಪದರಲ್ಲೇ ಬಚಾವ ಅದನ್ನು ಬಿಸಾಡಿ ಮಾತ್ರೆ ತೆಗೆದುಕೊಂಡು, ನನ್ನ ಪ್ರೀತಿಯ ಶ್ರೀ ರಾಮನನ್ನು ನೆನೆದು ನಿದ್ದೆಗೆ ಜಾರಿದೆ.

Wednesday, August 24, 2011

ತರ್ಲೆ ಮಂಜನ ಫ್ರೆಂಡ್ಶಿಪ್ ಪುರಾಣ....

ಮಂಜನ ಮನೆಗೆ ಹೋಗಿದ್ದೆ. ನಾನು ಫ್ರೆಂಡ್ಶಿಪ್ ಡೇ ವಿಶ್ ಮಾಡಲು, ನಾನು ವಿಶ್ ಮಾಡಬೇಕು ಎಂದು ಅನ್ನುಕೊಳ್ಳುವಷ್ಟರಲ್ಲಿ, ಸುಬ್ಬ ಬಂದವನೇ "ಹ್ಯಾಪಿ ಫ್ರೆಂಡ್ಶಿಪ್ ಡೇ" ಎಂದು ನನಗೆ ಮತ್ತು ಮಂಜನಿಗೆ ಕೈ ಕುಲುಕಿದ. ಮಂಜ ಸಿಟ್ಟಿನಿಂದ ಏನೋ? ಇದು ಫ್ರೆಂಡ್ಶಿಪ್ ಡೇ ಅಂತೆ. ಗೆಳೆತನಕ್ಕೆ ಕೂಡ ಒಂದು ದಿನ ಬೇಕಾ?, ಹಾಗಾದ್ರೆ ಗೆಳೆತನ ಅನ್ನುವುದು ಒಂದೇ ದಿನಕ್ಕೆ ಸೀಮಿತನಾ?. ಮೊದಲು, ನಾವೆಲ್ಲ ಗೆಳೆಯರು ದಿನವು ಸೇರುತ್ತಿದ್ದೆವು. ಗೆಳೆಯರ ಒಂದು ದೊಡ್ಡ ಅಡ್ಡ ಇರುತಿತ್ತು. ಆದರೆ ಈಗ ಅವರ ಅಡ್ರೆಸ್ ನೆನಪು ಆಗುವುದು ವರ್ಷದಲ್ಲಿ ಒಂದು ದಿನ ಮಾತ್ರ. ಫ್ರೆಂಡ್ಶಿಪ್ ಎನ್ನುವ ಶಿಪ್ ಮುಣುಗೋದು ಗ್ಯಾರಂಟೀ. ನೋಡುತ್ತಾ ಇರು ಮುಂದೊಂದು ದಿನ ಆಫೀಸ್ ನಿಂದ ಹಸಿದು ಬಂದ ಗಂಡನಿಗೆ ತಿಂಡಿ ಕೊಡದೆ ಇದ್ದರೂ, ಹಸ್ಬಂಡ್ ಡೇ ಎಂದು ಕೂಡ ಬರುತ್ತೆ. ಗಂಡನ ದುಡ್ಡಿನಿಂದ ಗುಂಡಿನ ಪಾರ್ಟಿ ಬೇರೆ ಇರುತ್ತೆ ಎಂದ. ಅಷ್ಟರಲ್ಲಿ ಮಂಜನ ಮಡದಿ ಒಳಗಿನಿಂದ ಬಂದು ಮೂವರಿಗೂ ತಿಂಡಿ ಕೊಟ್ಟು, ಮಂಜನಿಗೆ ಮಾತ್ರ ಟೇಬಲ್ ಮೇಲೆ ಕುಕ್ಕಿ ಹೋದಳು. ಸಧ್ಯ ನಾನು ವಿಶ್ ಮಾಡದೇ ಬಚಾವ್ ಎಂದು ಕೊಂಡೆ.

ಮತ್ತೆ ತಿಂಡಿ ತಿನ್ನುತ್ತ, ಮೊದಲು ನಿನ್ನಂತಹ ಉಡಾಳ ವಿದ್ಯಾರ್ಥಿಗಳು ಶಿಕ್ಷಕರ ದಿನಾಚರಣೆಯನ್ನು, ಸಿಕ್ಕ ಸಿಕ್ಕವರ ದಿನಾಚರಣೆ ಎಂದು ಎಲ್ಲರಿಗು ಹೊಡೆಯುತ್ತ ಹೋಗುತ್ತಿದ್ದೀರಿ ಎಂದ. ನನಗೆ ನಗು ತಡಿಯಲು ಆಗಲೇ ಇಲ್ಲ, ಏಕೆಂದರೆ, ಹಾಗೆ ಮೊದಲು ಮಾಡಿದ್ದು ಮಂಜನೆ. ನಮ್ಮ ಸಂಸ್ಕೃತಿಯಲ್ಲಿ ಪ್ರತಿಯೊಂದು ದಿನಕ್ಕೂ ಒಂದು ಹಿನ್ನಲೆ ಇರುತ್ತೆ. ಆದರೆ ಇವುಗಳಿಗೆ ಯಾವ ಹಿನ್ನಲೆ ಎಂದು ತಿಳಿಯದೆ ಇದ್ದರೂ, ಅದನ್ನು ಆಚರಿಸುವ ಮಹಾ ಪಂಡಿತರು ಜ್ಯಾಸ್ತಿ ಎಂದ. ಮತ್ತೆ ಅಷ್ಟರಲ್ಲಿ ಮಂಜನ ಮಡದಿ ಬಂದು ನೀರು ಟೇಬಲ್ ಮೇಲೆ ಕುಕ್ಕಿ ಹೋದಳು. ಅವಳ ಚಲನ-ವಲನ ನೋಡಿ, ಮೊದಲೇ ಮಂಜನಿಗೆ ಏನೋ ಪಾಠ ಆಗಿದೆ ಎಂದು ಅನ್ನಿಸಿತು. ಏನು? ತಂಗ್ಯಮ್ಮನಿಗೆ ತುಂಬಾ ಕೋಪ ಬಂದಿರೋ ಹಾಗಿದೆ ಎಂದು ಮಂಜನಿಗೆ ಕೇಳಿದೆ. ಏನು? ಇಲ್ಲ ನಿನ್ನೆ ರಾತ್ರಿ ಇಂದ ಹೀಗೆ ಸಿಟ್ಟು ಮಾಡಿಕೊಂಡಿದ್ದಾಳೆ ಎಂದ. ನೀನೆ ಏನೋ? ಕಿಟಲೆ ಮಾಡಿರಬೇಕು ಎಂದೆ. ನಾನೇನು ಮಾಡಿದ್ದೇನೆ ಅವಳಿಗೆ ಬೇಕಾಗಿದ್ದು ಎಲ್ಲವನ್ನು ಕೊಡಿಸಿದ್ದೇನೆ ಎಂದ. ಅವಳು ಪಿಜ್ಜಾ ತಿನ್ನುತ್ತೇನೆ ಎಂದಳು. ಅದನ್ನು ಸಹಿತ ಕೊಡಿಸಿದ್ದೇನೆ. ನೋಡು ನಾವು ಹವಾಗುಣಕ್ಕೆ ಅನುಗುಣವಾಗಿ ನಮ್ಮ ಆಹಾರ ಪದ್ದತಿಯನ್ನು ಅನುಸರಿಸುತ್ತೇವೆ. ಹವಾಗುಣ ಬದಲಾದಂತೆ ಅಲ್ಲಿಯ ಆಹಾರ ಪದ್ದತಿಯನ್ನು ನಾವು ಅನುಸರಿಸ ಬೇಕಾಗುತ್ತೆ. ಹೇಗೆಂದರೆ, ಉತ್ತರ ಕರ್ನಾಟಕದ ಜನ ಅಲ್ಲಿಯ ಹವಾಗುಣಕ್ಕೆ ಅನುಗುಣವಾಗಿ ಜೋಳದ ರೊಟ್ಟಿ, ಇಲ್ಲಿಯ ಜನ ರಾಗಿ ಮುದ್ದೆ ಹೀಗೆ...ಇಲ್ಲದೆ ಇದ್ದರೆ ನಮ್ಮ ಹಾವ-ಭಾವ ಬದಲಾಗುವುದು. ಅದರೂ ಕೂಡ ನಾನು ಏನೂ ಮಾತನಾಡದೆ ಪಿಜ್ಜಾ ಕೊಡಿಸಿದ್ದೇನೆ ಮತ್ತೇಕೆ ಸಿಟ್ಟು ನನಗೆ ಗೊತ್ತಿಲ್ಲ ಎಂದ.

ಅಷ್ಟರಲ್ಲಿ ಮಂಜನ ಮಡದಿ ಸಾವಿತ್ರಿ ಒಳಗಡೆಯಿಂದ ಬಂದು ನಾನು ಎಷ್ಟು ದೇವರನ್ನು ಬೇಡಿಕೊಳ್ಳ ಬೇಕೋ ತಿಳಿಯದಾಗಿದೆ ನೋಡಿ, ಎಂದು ನನಗೆ ಹೇಳಿದಳು. ಅದಕ್ಕೆ ಮಂಜ ನಾನು ಹೇಳುತ್ತೇನೆ. ಒಬ್ಬ ದೇವರಿಗೆ ಹರಕೆ ಹೊತ್ತರೆ ಖಂಡಿತ ನೆರವೆರುತ್ತೆ ಎಂದ. ಯಾರು ಆ ದೇವರು ಎಂದು ಬಾಯಿ ಬಿಟ್ಟು ಕೇಳಿದೆ. ಮತ್ತ್ಯಾರು ಪತಿ ದೇವ್ರು ಎಂದು ಹೇಳು ನಿಮ್ಮ ತಂಗ್ಯಮ್ಮನಿಗೆ ಎಂದು ಜೋರಾಗಿ ನಗ ಹತ್ತಿದ. ಈ ನಗುವುದೊಂದು ಗೊತ್ತು ನಿಮಗೆ. ನಿನ್ನೆ ಒಂದು ಹುಡುಗಿ ನೋಡಿ ನಗುತ್ತಿದ್ದರು ಎಂದಳು. ಅಷ್ಟಕ್ಕೇ ಮಂಜ ಲೇ... ನಾನೇನು ಹುಡುಗರನ್ನು ನಗಬೇಕಿತ್ತಾ?, ಹಾಗೆ ಮಾಡಿದರೆ ಜನ ತಪ್ಪು ತಿಲಿಯಲ್ಲವೇ ಎಂದು ಹೇಳಿದ. ಆಯಿತು ಅವಳು ನಕ್ಕಳು, ನಾನು ನಕ್ಕೆ ಅಷ್ಟೇ ತಾನೇ. ಮತ್ತೇಕೆ ಈಗ ಅದೆಲ್ಲ ತಪ್ಪಾಯಿತು ಎಂದ. ಅಷ್ಟಕ್ಕೇ ಅವರ ಸಂಸಾರ ಸಮರ ಮುಗಿಯಿತು.

ಮಂಜನ್ ಮಡದಿ ಕಾಫಿ ತಂದು ಕೊಟ್ಟಳು. ಅಷ್ಟರಲ್ಲಿ ಮಂಜನ ಮೊಬೈಲ್ ನಲ್ಲಿ ಒಂದು sms ಬಂತು. ಅದನ್ನು ಮಂಜನ ಮಡದಿ ತೆಗೆದು ನೋಡಿದಳು. ಯಾರು? ರೀ.. ಅದು ರಾಜಿ ಎಂದು ಮತ್ತೆ ಕೋಪಮಾಡಿಕೊಂಡು ಬಿಟ್ಟಳು. ಅದು... ಅದು... ಎಂದು ತಡವರಿಸುತ್ತಾ...ರಾಜೇಂದ್ರ ಎಂದು ನನ್ನ ಗೆಳೆಯ ಎಂದ. ಯಾವತ್ತು ಅವನ ಬಗ್ಗೆ ಹೇಳೇ ಇಲ್ಲ. ಮತ್ತೆ ರಾಜಿ ಎಂದು ಏಕೆ? ಬರೆದಿದ್ದೀರಾ ಎಂದಳು. ಅದು ಸ್ಪೆಲ್ಲಿಂಗ್ ಮಿಸ್ಟೇಕ್ ಆಯಿತು ಎಂದ. ನಾನು ಮನಸಿನಲ್ಲಿಯೇ ಮಿಸ್ ಟೆಕ್ ಎಂದು ಅಂದೆ. ಏಕೆಂದರೆ ರಾಜಿ ಎಂಬುದು ಹುಡುಗಿ ಎಂದು ನನಗೆ ಹೇಳಿದ್ದ. ಕಡೆಗೆ ಅವಳಿಂದ ಫೋನ್ ತೆಗೆದುಕೊಂಡು ಮೆಸೇಜ್ ನೋಡಿದ. ಅದರಲ್ಲಿ ಹ್ಯಾಪಿ ಫ್ರೆಂಡ್ಶಿಪ್ ಡೇ ಎಂದು ಇತ್ತು. ಅದಕ್ಕೆ ಸುಮ್ಮನೆ ಸೇಮ ಟು ಯು ಎಂದು ಯಾವುದೇ ಶೇಮ್ ಇಲ್ಲದೆ ಬರೆದು ಕಳುಹಿಸಬೇಕು ಅನ್ನುವಷ್ಟರಲ್ಲಿ, ಮೊಬೈಲ್ ನಲ್ಲಿನ ಕರೆನ್ಸಿ ಖಾಲಿ ಆಗಿದೆ ಎಂದು ತಿಳಿಯಿತು. ಮಂಜ ಏನೇ ಇದು ನನ್ನ ಮೊಬೈಲ್ ಕರೆನ್ಸಿ ಎಲ್ಲ ಖಾಲಿ ಆಗಿದೆ ಎಂದ. ಮಂಜನ ಮಡದಿ ನಾನೇ ಎಲ್ಲರಿಗು ಫ್ರೆಂಡ್ ಶಿಪ್ ಡೇ ವಿಶ್ ಮಾಡಲು ಫೋನ್ ಮಾಡಿದ್ದೆ ಎಂದಳು. ಕಡೆಗೆ ನನ್ನ ಮೊಬೈಲ್ ತೆಗೆದುಕೊಂಡು ಕೆಳಗಡೆ ತನ್ನ ಹೆಸರು ಬರೆದು ಮೆಸೇಜ್ ಕಳುಹಿಸಿದ.

ಮಂಜನಿಗೆ ಮತ್ತೆ ನಮಗೆ ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟಲು ಬಂದಳು. ಮಂಜ ಕೋಪದಿಂದ ಏನಿದು? ರಾಖಿಯ ಹಾಗೆ ಇದನ್ನು ಗಂಡನಿಗೆ ಕಟ್ಟುವುದಾ? ಎಂದು ಮತ್ತೆ ತನ್ನ ಪುರಾಣ ಶುರು ಮಾಡಿದ. ನನಗೆ ಕಟ್ಟಿ ಎಂದು ಹೇಳಿ ಕಟ್ಟಿಸಿಕೊಂಡು, ನನಗೆ ಸ್ವಲ್ಪ ಕೆಲಸ ಇದೆ ಎಂದು ಹೇಳಿ ಅಲ್ಲಿಂದ ಸಾವಕಾಶವಾಗಿ ಕಾಲು ಕಿತ್ತೆ.

Friday, August 5, 2011

ಭೀಮನ ಅಮಾವಾಸ್ಯೆ!!!!

ಭೀಮನ ಅಮಾವಾಸ್ಯೆ ಹಿಂದಿನ ದಿನ ಪೂಜೆ ಸಾಮಗ್ರಿ ತರಲು ಮಡದಿ ಹೇಳಿದ್ದಳು. ಮಂಜನ ಜೊತೆ ಮಾರ್ಕೆಟಿಗೆ ಹೋಗಿದ್ದೆ. ಮಂಜ ಸ್ಕೂಟರ್ ನಲ್ಲಿ ಹೋಗುವ ಇಬ್ಬರು ಹುಡುಗರನ್ನು ನೋಡಿ "ದೋ ಚಕ್ಕಾ ಚಕ್ಕಾ ಸಾಥ್ ಸಾಥ್" ಎಂದು ಹೇಳಿದ. ನನಗೆ ಗಾಬರಿ ಅವನಿಗೆ ಹೇಗೆ ತಿಳಿಯಿತು ಮತ್ತು ಹೀಗೆ ಏಕೆ? ಹೇಳಿದ ಎಂದು. ನಾನು ಕೇಳಿದೆ. ಅಷ್ಟು ನಿಖರವಾಗಿ ಹೇಗೆ ಹೇಳುತ್ತಿ ಎಂದೆ. ಅದಕ್ಕೆ ಮಂಜ ನೋಡು ಅಲ್ಲಿ ಅವರ ಗಾಡಿ ನಂಬರ್ ಎಂದು ತೋರಿಸಿದ. ಅದು ೨೬೭೭ ಇತ್ತು. ಇವನು ಅದನ್ನು ಹಿಂದಿಯಲ್ಲಿ ಹೇಳಿ ನನಗೆ ಗಲಿಬಿಲಿಗೊಳಸಿದ್ದ. ಮುಂದೆ ಹೋಗುವಷ್ಟರಲ್ಲಿ ಒಂದು ಅಂಗಡಿ ಕಾಣಿಸಿತು. ಅದರ ಹೆಸರು ಬೈ ಅಂಡ್ ಸೇವ್ ಎಂದು ಕಂಗ್ಲಿಷ್ನಲ್ಲಿ ಬರೆದಿತ್ತು. ಅದನ್ನು ನೋಡಿ ನಾನು ಇಲ್ಲೇ ಸಾಮಾನು ತೆಗೆದುಕೊಂಡು ಹೋಗೋಣ ಎಂದೆ. ಅದಕ್ಕೆ ಮಂಜ ಇಲ್ಲಿ ಬೈ ಮಾಡಿದರೆ ನಿನಗೆ ಭಯ ಆಗುವುದು ಖಂಡಿತ. ಮತ್ತೆ ನೀನೆ ಬೈಯುವುದು ಕೂಡ. ಸೇವ್ ಎಂಬ ಸೇವೆ ಮಾಲಿಕನಿಗೆ ಮಾತ್ರ. ನಮಗೆ ಏನಿದ್ದರು ಶೇವ್. ನೀನು ಇಲ್ಲಿ ತೆಗೆದುಕೊಂಡು ಹೋಗಿ ಅಪ್ಪಿ-ತಪ್ಪಿ ಬಿಲ್ ಮನೆಯಲ್ಲಿ ತೋರಿಸಿದೆ ಎಂದರೆ, ನಿನಗೆ ಭೀಮನ ಅಮಾವಾಸ್ಯೆ ಪೂಜೆ ಇವತ್ತೇ ಎಂದ. ಏನದು? ಭೀಮನ ಅಮಾವಾಸ್ಯೆ ಪೂಜೆ ಎಂದು ಕೇಳಿದೆ. ಏಕೆಂದರೆ? ಪ್ರತಿ ಬಾರಿ ನನ್ನ ಮಡದಿ ಆಶಾ(ಡ) ಮನೆಗೆ ಬಂದ ಮೇಲೆ ತವರಿಗೆ ಹೋಗುತ್ತಿದ್ದಳು. ಭೀಮನ ಅಮಾವಾಸ್ಯೆ ಪೂರ್ತಿ ವಿವರ ಹೇಳಿದ್ದ. ಸಾಮಾನು ಬೇರೆ ಅಂಗಡಿಯಲ್ಲಿ ತೆಗೆದುಕೊಂಡು ಮನೆಗೆ ಬಂದೆವು.

ಮರುದಿನ ಕಂಪ್ಯೂಟರ್ ಮುಂದೆ ಕುಳಿತಿದ್ದೆ. ಅಷ್ಟರಲ್ಲಿ ಬಂದ ಮಡದಿ ಕರಿಯರು ಮತ್ತು ಬಿಳಿಯರು ಎಂಬ ಭೇದ-ಭಾವವಿಲ್ಲದೆ ಸಹ ಜೀವನ ನಡೆಸುತ್ತಿರುವ ಒಂದೇ ಒಂದೇ ಸ್ಥಳ ಎಂದರೆ ಯಾವುದು? ಎಂದು ಪ್ರಶ್ನೆ ಕೇಳಿದಳು. ಮೊದಲೇ ಪ್ರಶ್ನೆ ಎಂದರೆ ಬೆಚ್ಚಿ ಬೀಳುವ ನಾನು ತಡಬಡಿಸಿ ಗೂಗಲ್ ನಲ್ಲಿ ಹುಡುಕಲಾರ೦ಬಿಸಿದೆ. ಅದರಲ್ಲಿ ಏನು? ಹುಡುಕುತ್ತೀರಾ ನಿಮ್ಮ ತಲೆ ಎಂದು ಕಿಟಲೆ ಮಾತನಾಡಿ ಹೊರಟುಹೋದಳು. ಅವಳ ಹಿಂದೇನೆ ನಾನು ಹೋಗಿ, ಏನು? ಎಂದು ಪೀಡಿಸಹತ್ತಿದೆ. ನಿಮ್ಮ ತಲೆ ಎಂದು ಆಗಲೇ ಹೇಳಿದೆನಲ್ಲ ಎಂದಳು. ಆಗ ಅವಳು ಹೇಳಿದ ಒಳ ಅರ್ಥ ತಿಳಿಯಿತು. ತಲೆಯಲ್ಲಿ ಸಮಾನ ಅಂಕಿ ಅಂಶದಲ್ಲಿ ಕರಿ-ಬಿಳಿ ಕೂದಲುಗಳು ಇದ್ದವು.

ಹೊರಗಡೆ ಬಂದು ಟಿ.ವಿ ನೋಡುತ್ತಾ ಕುಳಿತೆ. ಏನು? ಟಿ.ವಿ ನೋಡುತ್ತಾ ಕುಳಿತರೆ ಆಯಿತಾ?. ಸ್ವಲ್ಪ ತರಕಾರಿ ಹೆಚ್ಚಿ ಕೊಡಿ ಎಂದು ತಿವಿದಳು. ಇವತ್ತು ಭೀಮನ ಅಮಾವಾಸ್ಯೆ ಕಣೆ ಎಂದು, ಭೀಮನ ಹಾಗೆ ಒದರಿ ಹೇಳಿದೆ. ಓ ಹಾಗಾದರೆ ನೀವೇ ಅಡುಗೆ ಮಾಡುತ್ತೀರಾ?. ಭೀಮ ಪಾಕ ನಿಜವಾಗಿಯೂ ತುಂಬಾ ಚೆನ್ನಾಗಿ ಇರುತ್ತೆ ಎಂದಳು. ಅಷ್ಟರಲ್ಲಿ ನನ್ನ ಸುಪುತ್ರ ಭೀಮ ಶಬ್ದ ಕೇಳಿ "ಅಪ್ಪ ಛೋಟಾ ಭೀಮ ಕಾರ್ಟೂನ್ ಹಚ್ಚಿ ಕೊಡು ಎಂದು" ಹೇಳಿದ.ಟಿ.ವಿ ಚಾನೆಲ್ ಚೇಂಜ್ ಮಾಡಿ ಮಗನಿಗೆ ಹಚ್ಚಿ ಕೊಟ್ಟು ತರಕಾರಿ ಹೆಚ್ಚಲು ಅನುವಾದೆ. ನಿನ್ನೆ ಸಂಜೆ ಮಂಜನ ಜೊತೆ ಹೋಗುತ್ತಿದ್ದಾಗ ಭೀಮನ ಅಮಾವಾಸ್ಯೆ ಭಾಷಣ ನೆನಪಾಗಿ, ಅದನ್ನು ಮಡದಿಗೆ ಹೇಳಿದೆ. ಗಂಡ ಎಂದರೆ ದೇವರು ಇದ್ದ ಹಾಗೆ ಗೊತ್ತಾ?. ಇವತ್ತು ಗಂಡನ ಪೂಜೆ ಮಾಡುತ್ತಾರೆ, ನೀನು ನೋಡಿದರೆ ತರಕಾರಿ ಹೆಚ್ಚಲು ಹೇಳಿದ್ದೀಯಾ ಎಂದೆ. ಆಯಿತು ಬಿಡಿ ಇನ್ನು ಮೇಲೆ ಪತಿ ದೇವರಿಗೆ ನೈವೇದ್ಯ ಕೂಡ ಹಬ್ಬ ಹರಿದಿನಗಳಲ್ಲಿ ಮಾತ್ರ ಎಂಬ ಉತ್ತರ ಹರಿದು ಬಂತು. ಇನ್ನು ಮತ್ತೇನಾದರೂ ಮಾತನಾಡಿದರೆ ನನ್ನ ಊಟಕ್ಕೆ ಸಂಚಕಾರ ಬಂದೀತು ಎಂದು ಸುಮ್ಮನೆ ತರಕಾರಿ ಹೆಚ್ಚಿ ಕೊಟ್ಟೆ.

ಸ್ನಾನ ಮುಗಿಸಿ ಪೂಜೆಗೆ ಕುಳಿತಿದ್ದೆ. ಹೂ ಮಾರುವವಳು ಬಂದಳು. ಎಷ್ಟು ಬೇಕು? ಹೂ ಎಂದು ನನ್ನ ಮಡದಿಗೆ ಕೇಳಿದಳು. ಅದಕ್ಕೆ ಮಡದಿ ೫ ಸಾವಿರ ಸಾಕು ಎಂದಳು. ಇವತ್ತು "ಗಂಡನ ಪೂಜೆ ಇದೆ ಅಮ್ಮ ೧೦ ಸಾವಿರ ರುಪಾಯಿ" ಹೂ ತೆಗೆದುಕೊಳ್ಳಿ ಎಂದು ಅಂದಳು. ಅವರಿಬ್ಬರ ಸಂಭಾಷಣೆ ಕೇಳಿ ನನಗೆ ಗಾಬರಿ ಆಯಿತು. ಏನೇ ಆದರೂ ದುಡ್ಡು ನನ್ನದೇ ಅಲ್ಲವೇ?. ನನ್ನ ಪೂಜೆ ಮಾಡದಿದ್ದರೂ ಪರವಾಗಿಲ್ಲ ಅನ್ನಿಸಿತು. ಅವಳು ಹೂ ತೆಗೆದುಕೊಂಡು ಬಂದ ಮೇಲೆ, ನಾನು ಕೇಳಿದೆ ಏನದು ಅಷ್ಟೊಂದು ಹೂ ಎಂದು ಕೇಳಿದೆ. ಅದಕ್ಕೆ ಹೂ ಮಾರುವವಳು ೫ ಕ್ಕೆ ೫ ಸಾವಿರ, ೧೦ ಕ್ಕೆ ೧೦ ಸಾವಿರ ಎಂದು ಅನ್ನುತ್ತಾಳೆ ಎಂದು ಹೇಳಿದಳು. ಹೂ ಮಾರುವವಳ ಹಾಸ್ಯ ಪ್ರಜ್ಞೆ ಮತ್ತು ಅವಳು ತನ್ನ ಮನಸಿಗೆ ತಾನೇ ಸಮಾಧಾನ ಮಾಡುವ ರೀತಿ ಕೇಳಿ ನಿಜವಾಗಿಯೂ ಅಚ್ಚರಿ ಅನಿಸಿತು. ಸಾವಿರ- ಲಕ್ಷ ಘಳಿಸುವ ಮತ್ತು ಲೂಟಿ ಮಾಡುವ ತುಂಬಾ ಜನರಲ್ಲಿ ಇರದ ಸಂತೋಷ ಅವಳಲ್ಲಿ ಮತ್ತು ಅವಳ ಮಾತಿನಲ್ಲಿ ಇತ್ತು.

ಪೂಜೆ ಮುಗಿಸಿ ಎಫ್.ಎಂ ಹಚ್ಚಿದೆ. "ಹೂವು ಚೆಲುವೆಲ್ಲಾ ನಂದೆಂದಿತು...ಹೆಣ್ಣು ಹೂವ ಮುಡಿದು ಚೆಲುವೆ ತಾನೆಂದಳು" ಎಂಬ ಸುಮಧುರವಾದ ಹಾಡು ಬರುತಿತ್ತು. ಹಾಡು ಇನ್ನು ಮುಗಿದಿರಲಿಲ್ಲ ಅಷ್ಟರಲ್ಲಿ ಹೆಂಡತಿ ಒಳಗಡೆ ಕಂಪ್ಯೂಟರ್ ಉರಿಯುತ್ತಿದೆ, ಹೊರಗಡೆ ಟಿ.ವಿ ಮತ್ತು ಎಫ್.ಎಂ ಎಂದು ಚೀರಲು ಶುರುಮಾಡಿದಳು. ಎದ್ದು ನೀರು ನನ್ನ ಹೊಟ್ಟೆಗೆ ಹಾಕಿ ಕೋಪ ಕಡಿಮೆ ಮಾಡಿಕೊಂಡು ಹೋಗಿ ಕಂಪ್ಯೂಟರ್ ಆರಿಸಿ ಬಂದೆ. ಅಷ್ಟರಲ್ಲಿ ಹಾಡು ಮುಗಿದಿತ್ತು. ಈಗ ನೀವು "ಹಣ್ಣೆಲೆ ಚಿಗುರಿದಾಗ" ಎಂಬ ಚಿತ್ರದ ಹಾಡನ್ನು ಕೇಳುತ್ತಿದ್ದೀರಿ ಎಂದು ಪ್ರಸಾರಕ ಮಹಾಶಯರು ಹೇಳಿದರೂ, ನಂಗೆ ಮಾತ್ರ "ಹೆಣ್ಣೇಲೇ ಚೀರಿದಾಗ" ಎಂದು ಅನ್ನಿಸಹತಿತ್ತು.ಆದರೂ ಈ ಹಣ್ಣೆಲೆ ಚಿಗುರುವುದು ಯಾವಾಗ ಎಂದು ಕೂಡ ಅನ್ನಿಸಿತು. ಏಕೆಂದರೆ ನನ್ನ ತಲೆಯಲ್ಲಿನ ಎಲ್ಲ ಕೂದಲು ಹಣ್ಣಾಗಿ ಉದುರುತ್ತಾ ಇವೆ. ಆದರೆ ಒಮ್ಮೆಯೂ ಕೂಡ ಚಿಗುರಲೇ ಇಲ್ಲ ಎಂದು ಅನ್ನಿಸಿತು. ಹೊರಗಡೆ ಬಂದು ಲೇ... ಈಗ ತಾನೇ ಎಫ್.ಎಂ ನಲ್ಲಿ ಬರುತ್ತಿದ್ದ ಹಾಡು ಯಾವ ಚಿತ್ರದ್ದು ಗೊತ್ತ ಎಂದೆ. ಅದಕ್ಕೆ ಅವಳು ನಾನು ಕೇಳಿಸಿಕೊಳ್ಳಲಿಲ್ಲ ನೀವೇ ಹೇಳಿ ಯಾವುದು ಎಂದಳು. ನಾನು "ಹೆಣ್ಣೇ ಚೀರಿದಾಗ" ಎಂದೆ. ಜೋರಾಗಿ ನಗುತ್ತಾ ಬನ್ನಿ ನಿಮ್ಮ ಪೂಜೆ ಮಾಡುತ್ತೇನೆ ಎಂದು ಅಡುಗೆ ಮನೆಯಿಂದ ಆಯುಧ ಸಮೇತವಾಗಿ ಹೊರಗಡೆ ಬಂದಳು.ಅಷ್ಟರಲ್ಲಿ ಎಫ್.ಎಂ ನಲ್ಲಿ ಮುಂದಿನ ಚಿತ್ರಗೀತೆ "ಚಂಡಿ ಚಾಮುಂಡಿ" ಚಿತ್ರದ್ದು ಎಂದಾಗ ನಗು ಮಾತ್ರ ತಡಿಯಲು ಆಗಲೇ ಇಲ್ಲ. ಕಡೆಗೆ ಸೋಪಿನಿಂದ ಕೈ ತೊಳೆದುಕೊಂಡು ಬಂದು, ನನಗೂ ಸೋಪಿನಿಂದ ಕಾಲು ತೊಳೆಯಲು ಹೇಳಿದಳು. ತೊಳೆದುಕೊಂಡು ಬಂದ ಮೇಲೆ ನನ್ನ ಪಾದ ಪೂಜೆ ನೆರವೇರಿತು.

ಈ ಭೀಮನ ಹೊಟ್ಟೆಗೆ ಕೂಡ ಚೆನ್ನಾಗಿ ನೈವೇದ್ಯ ಆಗಿತ್ತು. ನಿದ್ದೆ ಜೋರಾಗಿ ಬಂದಿದ್ದರಿಂದ ಮಲಗಿಕೊಂಡೆ. ಅಷ್ಟರಲ್ಲಿ ಪರ್... ಪರ್ ..ಎಂಬ ಶಬ್ದ ಯಾರೋ ಬಟ್ಟೆ ಹರಿಯುತ್ತಿದ್ದಾರೆ ಎಂದು ಅನ್ನಿಸಿತು. ಯಾರು ಎಂದು ಎಲ್ಲ ಕಡೆ ನೋಡಿದೆ. ಯಾರು ಇರಲಿಲ್ಲ. ಮಡದಿ, ಮಗ ಕೂಡ ಗಾಡ ನಿದ್ರೆಯಲ್ಲಿ ಇದ್ದರು. ಯಾರಾದರು ಕಳ್ಳರು ಬಂದಿರ ಬಹುದಾ? ಎಂದು ಅನುಮಾನ ಬಂತು. ಬಂದರು ಅವರು ಬಟ್ಟೆ ಹರಿಯುವುದು ಏಕೆ ? ಎಂಬ ಪ್ರಶ್ನೆ ಉದ್ಭವಿಸಿತು. ಹೆದರುತ್ತಾ... ಹೆದರುತ್ತಾ.. ಶಬ್ದ ಹುಡುಕಿಕೊಂಡು ಹೋದೆ. ನನ್ನ ಮಗನ ಸೈಕಲ್ ಹಿಂದಿನ ಡಬ್ಬದ ಒಳಗೆ ನನ್ನ ಮೊಬೈಲ್ ಶಬ್ದ ಮಾಡುತಿತ್ತು. ಅದನ್ನು ನನ್ನ ಮಗ ತೆಗೆದುಕೊಂಡು ಆಟವಾಡಿ ಸೆಟ್ಟಿಂಗ್ ವೈಬ್ರೇಟಿ೦ಗ ಆಗಿ ಚೇಂಜ್ ಮಾಡಿದ್ದ. ಕಡೆಗೆ ಫೋನ್ ಎತ್ತಿ ಮಾತನಾಡಿ, ಅದನ್ನು ಸರಿ ಮಾಡಿ ಮತ್ತೆ ನಿದ್ದೆಗೆ ಜಾರಿದೆ.

Tuesday, July 12, 2011

ಎಲ್ಲಾರೂ ಮಾಡುವುದು ಹೊಟ್ಟೆಗಾಗಿ!!!!

ಎಲ್ಲಾರೂ ಮಾಡುವುದು ಹೊಟ್ಟೆಗಾಗಿ ಮತ್ತು ಗೇಣು ಬಟ್ಟೆಗಾಗಿ ನಿಜ. ಅದೇ ಹೊಟ್ಟೆ ಸ್ವಲ್ಪ ನೋಯುತ್ತ ಇತ್ತು. ನಾನು ಎಷ್ಟೇ ಜೋಕ್ ಮಾಡಿದರು ನಗಲಾರದ ಮಡದಿ, ಮಗ ಇಬ್ಬರೂ, ನಾನೇನು ನೈಟ್ರಸ ಆಕ್ಸೈಡ್ (ಲಾಫಿಂಗ್ ಗ್ಯಾಸ್) ಬಿಟ್ಟ ಹಾಗೆ ಜೋರಾಗಿ ನಗುತ್ತಿದ್ದರು. ಯಾವತ್ತೂ ಗುಡ್.. ಗುಡ್ ..ಎನ್ನುವ ಹೊಟ್ಟೆ ಬ್ಯಾಡ್ ಆಗಿ ಸೌಂಡ್ ಮಾಡಿತ್ತು. ಈ ಗ್ಯಾಸ್ ಎನ್ನುವುದು ಸಾಮಾನ್ಯವಾಗಿ ತುಂಬಾ ಜನರಲ್ಲಿ ಇರುವ ಒಂದು ಕೆಟ್ಟ ರೋಗ. ಇದು ಏತಕ್ಕೆ ಬರುತ್ತೆ ಎಂಬುದು ಮಾತ್ರ ಯಕ್ಷ(ಲಕ್ಷ) ಪ್ರಶ್ನೆ. ಅದಕ್ಕೆ ಎಂದು ಅಂತರ್ಜಾಲ ತಡಕಾಡಿದ್ದು ಆಯಿತು. ಆನುವಂಶಿಕ ಎಂದು ಅನ್ನಿಸಿದ್ದೂ ಉಂಟು. ಅದಕ್ಕೆ ಉದಾಹರಣೆ ಎಂದರೆ, ನಾನು ಚಿಕ್ಕವನಿದ್ದಾಗ, ನಮ್ಮ ಚಿಕ್ಕಪ್ಪ ಬಜಾಜ್ ಸ್ಕೂಟರ್ ಹಾಗೆ ಸ್ವಲ್ಪ ಬಾಗಿದರು ಕೂಡ.. ನಾವು ಎದ್ದೋ, ಬಿದ್ದೋ ಎಂದು ಓಡಿ ಹೋಗಿ ನಗುತ್ತಿದ್ದೆವು. ಈಗ ಅದು ನನಗೆ ಬಳುವಳಿಯಾಗಿ ಬಂದಿದೆ. ಅದಕ್ಕೆ ನಮ್ಮ ಅಕ್ಕ ನನಗೆ ಗೋಪಾಲ್ ಗ್ಯಾಸ್ ದುರಂತ ಎಂದು.. ಭೋಪಾಲ್ ಗ್ಯಾಸ್ ದುರಂತಕ್ಕೆ ಹೋಲಿಸಿ ಆಡುವುದು ಉಂಟು.

ನಾವು ಚಿಕ್ಕವರಿದ್ದಾಗ ಕೂಡ ಕೆಲ ಹುಡುಗರು ಗ್ಯಾಸ್ ಬಿಡುತ್ತಿದ್ದರು. ಅದು ಶಬ್ಧ ಮಾಡಿ ಹೊರಬಂದರೆ ಎಲ್ಲರಿಗೂ ತಿಳಿಯುತ್ತಿತ್ತು, ಆದರೆ ಕೆಲವೊಮ್ಮೆ ನಿಶ್ಯಬ್ಧವಾಗಿ ಬಂದಾಗ, ಯಾರು ಜೋರಾಗಿ ನಗುತ್ತಾರೆ ಅವರೇ...ಅದರ ಕಾರಣ ಕರ್ತರೆಂದು ನಿರ್ಧಾರಕ್ಕೆ ಬಂದು ಬಿಡುತ್ತಿದ್ದೆವು. ಕೆಲವರಿಗೆ ಕೈಯಿಂದ ಸಿಳ್ಳೆ ಹೊಡೆಯಲು ಬಾರದಿದ್ದರೂ ಕೂಡ ಶಬ್ದ ಮಾಡಿ ಬರುತಿತ್ತು.

ಲೇ ಹೊಟ್ಟೆ ನೋವು ಕಣೇ ಎಂದು ಮಡದಿಗೆ ಹೇಳಿದೆ. ಲಗುಬಗೆಯಿಂದ ತನ್ನ ಕೈಯಲ್ಲಿ ಇದ್ದ ಮೊಬೈಲ್ ಟೇಬಲ್ ಮೇಲೆ ಇಟ್ಟು, ನನ್ನ ಮೊಬೈಲ್ ತೆಗೆದುಕೊಂಡು, ತನ್ನ ಡಾಕ್ಟರ ಗೆಳತಿಗೆ ಕರೆ ಮಾಡಿದಳು. ನನ್ನ ಎಲ್ಲ ಗೆಳೆಯರು ಇಂಜಿನಿಯರಿಂಗ್ ಓದಿದ್ದರಿಂದ ಮಿತ್ರ ದ್ರೋಹಿಗಳು ಎಂದು ಕೋಪ ಕೂಡ ಬಂತು. ಮಿತ್ರರು ಎಂದರೆ ಇವರು, ಒಬ್ಬರಿಗೆ.. ಒಬ್ಬರು.. ಸಹಾಯ ಮಾಡುವವರು ಎಂದು ಅನ್ನಿಸಿತು. ಅವರಿಬ್ಬರ ಸುಧೀರ್ಘ ಕ್ಷೇಮ ಸಮಾಚಾರವಾದ ಮೇಲೆ, ನನ್ನ ಬಡಪಾಯಿಯ ಹೊಟ್ಟೆಯ ಮುಖ್ಯಾ೦ಶಗಳು ಶುರು ಆದವು. ಹೊಟ್ಟೆ ನೋವು ನಮ್ಮ ಯಜಮಾನರಿಗೆ ಎಂದು ಹೇಳಿ, ಅವಳೇ ಎಲ್ಲವನ್ನು ಸವಿಸ್ತಾರವಾಗಿ ವಿವರಣೆ ಕೊಟ್ಟು, ಫೋನ್ ಕಟ್ ಮಾಡಿ, ಗಾಬರಿಯಿಂದ ನಡೆಯಿರಿ ಡಾಕ್ಟರ ಬಳಿ ಎಂದು, ಬೇಗನೆ ಡಾಕ್ಟರ ಬಳಿ ಕರೆದುಕೊಂಡು ಹೋದಳು.

ಡಾಕ್ಟರ ಬಳಿ ಹೋದ ಕೂಡಲೇ "ಡಾಕ್ಟರ ಬೇಗ ಪರೀಕ್ಷಿಸಿ" ಎಂದು ಹೇಳಿದಳು. ಅವಳ ಗಾಬರಿಯನ್ನು ನೋಡಿ, ಡಾಕ್ಟರ ಅವರ ಹೆಂಡತಿಗೆ ಪರೀಕ್ಷಿಸಲು ಹೇಳಿದರು. ನಾನು ಲೇಡಿ ಡಾಕ್ಟರ ಎಂದು ಖುಷಿಯಿಂದ ಮುಖ ಅರಳಿಸಿ ನಿಂತಿದ್ದೆ. ಬಂದವರೇ ನನ್ನ ಹೆಂಡತಿಯನ್ನು ಪರೀಕ್ಷಿಸಲು ಶುರು ಮಾಡಿದರು. ಹೆಂಡತಿ ನನಗೆ ಅಲ್ಲ, ನನ್ನ ಮನೆಯವರಿಗೆ ಎಂದಳು. ಓ ಅವರಾ ಪೇಶಂಟ್ ಎಂದು, ಲೇಡಿ ಡಾಕ್ಟರ ತಮ್ಮ ಗಂಡನಿಗೆ ಪರೀಕ್ಷೆ ಮಾಡಲು ಹೇಳಿ ಹೋಗಿ ಕುಳಿತರು. "ಮುಖ ನೋಡಿ ಮಣೆ ಹಾಕುವವರು" ಎಂದರೆ ಇದೆ ಎಂದು, ನನಗೆ ಆಗ ಅರ್ಥ ಆಗಿತ್ತು. ಡಾಕ್ಟರ ಪರೀಕ್ಷಿಸಲು ಶುರು ಮಾಡಿದರು. ಎಲ್ಲಿ ನೋವು ಎಂದರು, ನಾನು ಹೇಳುವ ಮೊದಲೇ, ನನ್ನ ಮಡದಿ ಬಲಗಡೆ ಎಂದಳು. ನಾನು ಇಲ್ಲಾ ಸರ್ ಎಡಗಡೆ ಎಂದೆ. ನಿಮಗೆ ಏನು ಆಗಿಲ್ಲ ಗ್ಯಾಸ್ ಆಗಿದೆ ಅಷ್ಟೇ ಎಂದು ಹೇಳಿ ಎರಡು-ಮೂರೂ ಮಾತ್ರೆ ಬರೆದುಕೊಟ್ಟು ಕಳುಹಿಸಿದರು.

ಹೊರ ಬಂದ ಮೇಲೆ, ಹೆಂಡತಿ ಜೋರಾಗಿ ನಗಲು ಶುರು ಮಾಡಿದಳು. ಏಕೆಂದು ಕೇಳಿದೆ. ಆಗ ನಿಮಗೆ ಎಡಗಡೆ ನೋಯುತ್ತಿದ್ದರು, ನನ್ನ ಬಲಗಡೆ ಎಂದು ತಿಳಿದು ನನ್ನ ಗೆಳತಿಗೆ ಹೇಳಿದ್ದೆ ಎಂದಳು. ಅದಕ್ಕೇನೀಗ ಎಂದೆ. ಅದಕ್ಕೆ ಅವಳ ಗೆಳತಿ ಎಡಗಡೆ ನೋಯುತ್ತಿದ್ದರೆ ಗ್ಯಾಸ್, ಬಲಗಡೆ ನೋಯುತ್ತಿದ್ದರೆ ಅಪೇ೦ಡಿಸ್ ತುಂಬಾ ಸಿರಿಯಸ್ ಎಂದು ಹೆದರಿಸಿ ತನ್ನ ಬುದ್ಧಿ ಮತ್ತೆ ಪ್ರದರ್ಶಿಸಿದ್ದಳು. ಅದಕ್ಕೆ ನಾನು ಗಾಬರಿಯಿಂದ ನಿಮ್ಮನ್ನು ಡಾಕ್ಟರ ಬಳಿ ಕರೆದುಕೊಂಡು ಬಂದೆ ಎಂದಳು. ಹೊಟ್ಟೆ ನೋವು ಎಂದು ಹೆರೆಗೆ ಆಸ್ಪತ್ರೆಗೆ ಹಾಕಲಿಲ್ಲವಲ್ಲ ಅದು ನನ್ನ ಪುಣ್ಯ ಎಂದು ನಗುತ್ತ ಮನೆಗೆ ಬಂದೆವು.

ಮರುದಿನ ಆಫೀಸ್ ಹೋಗುವ ಸಮಯದಲ್ಲಿ ಶೂ ಲೇಸ್ ನ್ನು ಲೇಸ್.. ಲೇಸ್.. ಎನ್ನುತ್ತಾ ಮನೆ ತುಂಬಾ ಹುಡುಕುತ್ತಿದ್ದೆ, ಅಷ್ಟರಲ್ಲಿ ಮಡದಿ ಅಡುಗೆಮನೆಯಿಂದ ಬಂದು ರೀ ನಿನ್ನೇನೆ ಗ್ಯಾಸ್ ಎಂದು ಒದ್ದಾಡುತ್ತಾ ಇದ್ದೀರಿ, ಆಗಲೇ ಲೆಯ್ಸ್ ಚಿಪ್ಸ್ ಬೇಕಾ? ಎಂದಳು. ನಾನು ಲೆಯ್ಸ್ ಚಿಪ್ಸ್ ಅಲ್ಲ ಲೇಸ್ ಎಂದು ಹೇಳಿದೆ. ಅವಳೇ ಹುಡುಕಿ ಕೊಟ್ಟಳು.