ಇಲ್ಲಿ ಬರೆದಿರುವ ಆರ್ಟಿಕಲ್ ಗಳಲ್ಲಿ ಕೆಲವು ಸತ್ಯ ಘಟನೆಗಳು ಮತ್ತೆ ಕೆಲವು ಕಲ್ಪನೆಗಳು....ಇದರಿಂದ ನಿಮ್ಮ ಮುಖದಲ್ಲಿ ಮುಗುಳ್ನಗೆ ತರಿಸಿದಲ್ಲಿ ಅದೇ ನಮಗೆ ಹಾಲು ಸಕ್ಕರೆ....
Tuesday, March 22, 2011
ಬಾಡಿಗೆ ಮನೆ ....
ಮತ್ತೆ ಏನು? ರಾಯರು ತುಂಬಾ ದಿವಸದ ಮೇಲೆ ಇಲ್ಲಿಗೆ ಪ್ರಯಾಣ ಬೇಳಿಸಿದ್ದೀರಿ ಎಂದ. ಬಾಡಿಗೆ ಮನೆ ನೋಡಿ ಕೊಂಡು ಬರೋಣ ಬರುತ್ತೀಯಾ? ಎಂದು ಕೇಳಿದೆ. ನೀನು ಇದ್ದರೆ ಸ್ವಲ್ಪ ಧೈರ್ಯ ಇರುತ್ತೆ. ಮತ್ತು ಚೌಕಾಸಿ ಮಾಡಲು ನೀನೆ ಸರಿ ಎಂದೆ. ನಾನು ಬರಲ್ಲ, ನೀನು ಬೇಕಾದರೆ ಹೋಗು ಎಂದ. ಕಡೆಗೆ ಒಬ್ಬನೇ ಮನೆ ಹುಡುಕಲು ಹೊರಟೆ. ಗಾಡಿ ಮೇಲೆ ತಲೆ ಅತ್ತ.. ಇತ್ತ.. ಮಾಡುತ್ತಾ ಹೋಗುವ ನನ್ನನ್ನು ನೋಡಿ ತುಂಬಾ ಜನ ವಿಚಿತ್ರವಾಗಿ ನೋಡಿ ನಕ್ಕಿದ್ದು ಆಯಿತು. ಹಲ್ಲು ಇದ್ದಾಗ ಕಡ್ಲೆ ಇರಲ್ಲ , ಕಡ್ಲೆ ಇದ್ದಾಗ ಹಲ್ಲು ಇರಲ್ಲ ಎಂಬ ಗಾದೆ ಹಾಗೆ ನನ್ನ ಅವಸ್ಥೆ ಆಗಿತ್ತು. ಒಂದು ಮನೆ ಕೂಡ ಸಿಗಲೇ ಇಲ್ಲ. ಕಡೆಗೆ ನನಗೆ ನೋ ಪಾರ್ಕಿಂಗ್ ಎಂಬ ಬೋರ್ಡ್ ಕೂಡ ಮನೆ ಬಾಡಿಗೆ ಎಂಬ ಹಾಗೆ ಕಾಣಿಸುತಿತ್ತು.
ಕಡೆಗೆ ಒಂದು ಮನೆ ಮುಂದೆ ಬಾಡಿಗೆಗೆ ಎಂಬ ಬೋರ್ಡ್ ನೇತು ಹಾಕಿದ್ದರು. ನಾನು ಒಳಗಡೆ ಹೋದೆ, ನನ್ನ ಮೇಲಿಂದ ಕೆಳಗಡೆವರೆಗೂ ಅನಾಮತ್ತಾಗಿ ನೋಡಿ ನಾವು ನಾನ್-ವೇಜ್ ನವರಿಗೆ ಕೊಡುವುದಿಲ್ಲ ಎಂದರು. ನಾನು ವೇಜ್ ಎಂದೆ. ನಾನು ಅದನ್ನೇ ಹೇಳಿದ್ದು ಕಣ್ರೀ ಎಂದರು. ಕಡೆಗೆ ಕಷ್ಟ ಪಟ್ಟು ತಿಳಿಸಿದ ಮೇಲೆ ಮನೆ ತೋರಿಸಿದರು. ಮನೆ ಅಷ್ಟು ಇಷ್ಟವಾಗಲಿಲ್ಲ. ಹೀಗಾಗಿ ಸುಮ್ಮನೇ ಮತ್ತೆ ಮುಂದೆ ಹೊರಟೆ.
ಮತ್ತೊಂದು ಬಾಡಿಗೆ ಮನೆ ಕಾಣಿಸಿತು. ಬೆಲ್ ಮಾಡಿ, ನಾನು ಅವರು ಕೇಳುವ ಮೊದಲೇ ನಾನು ಸಸ್ಯಾಹಾರಿ ಎಂದೆ. ಅವರು ಅವಾಕ್ಕಾಗಿ ನೋಡಿದರು. ಕಡೆಗೆ ಸುಧಾರಿಸಿಕೊಂಡು ಮನೆ ಬಾಡಿಗೆ ಎಂದೆ. ಓsss ಅದಾ ಎಂದು ಮನೆ ತೋರಿಸಿದರು. ಮನೆಯಲ್ಲಿ ಇರುವ ವಸ್ತು ಎಲ್ಲೆಲ್ಲಿ ಇಡಬೇಕು ಎಂದು ನಾನು ಯೋಚಿಸುತ್ತಿದ್ದರೆ, ಅವರು ಮಾತ್ರ ವಾಸ್ತು ಬಗ್ಗೆ ಪುರಾಣ ಶುರು ಮಾಡಿದ್ದರು. ಇದು ವಾಯು ಮೂಲೆ , ಅಗ್ನಿ ಮೂಲೆ ಎಂದೆಲ್ಲ ಹೇಳಿ ತಲೆ ತಿಂದಿದ್ದರು. ಇಲ್ಲಿ ಮೊದಲು ಒಬ್ಬ ಹುಡುಗ ಇರುತ್ತಿದ್ದ. ಬಂದ ಎರಡೇ ತಿಂಗಳಲ್ಲಿ ಮದುವೆ ಆಯಿತು ಎಂದರು. ಮತ್ತೆ ಎರಡು ವರ್ಷ ಇಲ್ಲೇ ಇದ್ದರು ಮತ್ತು ಒಂದು ಮಗು ಕೂಡ ಆಯಿತು ಎಂದರು. ನನಗೆ ಮೊದಲೇ ಮದುವೆ,ಮಗು ಎರಡು ಆಗಿದೆ ಎಂದು ಹೇಳೋಣ ಎಂದುಕೊಂಡೆ. ಆದರೂ ಸುಮ್ಮನೇ ಮನೆ ನೋಡಿ ಮನೆಯವರನ್ನೂ ಕರೆದುಕೊಂಡು ಬಂದು ತೋರಿಸಿ, ಆಮೇಲೆ ಹೇಳುತ್ತೇನೆ ಎಂದು ಕಾಲುಕಿತ್ತೆ.
ಮತ್ತೆ ಎಷ್ಟು ತಿರುಗಿದರು ಮನೆ ಸಿಕ್ಕಲಿಲ್ಲ. ಕಡೆಗೆ ಮನೆಗೆ ಬಂದೆ. ಅಷ್ಟರಲ್ಲಿ ಮಡದಿ ನಾನು ಒಂದು ಮನೆ ನೋಡಿದ್ದೇನೆ ಎಂದಳು. ಆಯಿತು ಅದನ್ನು ನೋಡಿಯೇ ಬಿಡೋಣ ಎಂದು ಹೋದೆವು. ಬಾಡಿಗೆ ಏನೋ ಕಡಿಮೆ ಇತ್ತು...ಆದರೆ ಮನೆ ಮಾತ್ರ ಉದ್ದವಾಗಿ ಪಟ್ಟಿಯ ಹಾಗೆ ಇತ್ತು. ಯಾವುದು ಬೆಡ್ರೂಮ್ ಯಾವುದು ಹಾಲ್ ಎಂದು ಪತ್ತೆ ಹಚ್ಚುವುದೇ ಒಂದು ಸಮಸ್ಯೆಯಾಗಿತ್ತು. ಅವರ ಎದುರಿಗೆ ಏನು ಹೇಳದೇ ಆಮೇಲೆ ಬರುತ್ತೇವೆ ಎಂದು ಹೇಳಿ ಹೊರಗಡೆ ಬಂದೆವು. ನನ್ನ ಮಡದಿಗೆ ಅದು ಇಷ್ಟವಾಗಿತ್ತು. ನಾನು ಮನೆ ಸರಿ ಇಲ್ಲ ಎಂದೆ. ನಿನ್ನ ಚಾಯ್ಸ್ ಸರಿ ಇಲ್ಲ ಕಣೇ ಎಂದೆ. ಅದು ನಿಜ ಕಣ್ರೀ ಈಗೀಗ ಅರ್ಥ ಆಗುತ್ತಾ ಇದೆ ಎಂದು ನನ್ನ ಮುಖ ನೋಡಿ ಅಂದಳು.
ಸಂಜೆ ಅಂತರ್ಜಾಲದಲ್ಲಿ ಒಂದೆರಡು ಬಾಡಿಗೆ ಮನೆ ಹುಡುಕಿದೆ. ಒಬ್ಬರಿಗೆ ಫೋನ್ ಮಾಡಿ ನಿಮ್ಮ ಮನೆ ಟುಲೆಟ್ ಇದೆ ಅಲ್ಲ ಎಂದೆ. ಅಲ್ಲಿಂದ ಯೂ ಆರ್ ಟೂ ಲೇಟ್ ಎಂದು ಉತ್ತರ ಬಂತು. ಮತ್ತೆ ಒಂದೆರಡು ಜನರಿಗೆ ಕರೆ ಮಾಡಿ ಅವರ ವಿಳಾಸ ತಿಳಿದು ನಾಳೆಗೆ ಹೋಗೋಣ ಎಂದು ನಿರ್ಧರಿಸಿ ಆಗಿತ್ತು.
ಮರುದಿನ ವಿಳಾಸ ಹಿಡಿದು ಹೊರಟೆ. ಒಂದು ಮನೆಯಲ್ಲಿ ಅಜ್ಜಿ ಮಾತ್ರ ಇದ್ದರು. ನನ್ನನ್ನು ಹೊರಗಡೆ ಇಂದ ಮಾತ್ರ ಮಾತನಾಡಿಸಿ ಕಳುಹಿಸಿದರು. ಮತ್ತೊಂದು ಮನೆಯಲ್ಲಿ ಅವರಿಗೆ ಬಾಡಿಗೆ ಸ್ವಲ್ಪ ಕಡಿಮೆ ಮಾಡಿ ಎಂದು ಕೇಳಿದೆ. ಅದಕ್ಕೆ ನಮ್ಮ ಮೋಟರ್ ಕೆಟ್ಟರೆ ನೀವು ದುಡ್ಡು ಕೊಡಬೇಕು ಎಂಬ ಉದ್ದಟ್ ವಾಗಿ ಹೇಳಿದರು. ಇವರ ಸಹವಾಸ ಸಾಕು ಎಂದು ಮತ್ತೊಂದು ಮನೆಗೆ ಹೋದೆ. ಮನೆ ತುಂಬಾ ಚೆನ್ನಾಗಿ ಇತ್ತು. ಸಂಜೆಗೆ ಹೋಗಿ ಮನೆ ಮಡದಿಗೂ ತೋರಿಸಿದೆ. ಅವಳಿಗೂ ಸರಿ ಅನ್ನಿಸಿತು. ಕಡೆಗೆ ಅದನ್ನೇ ಒಪ್ಪಿಗೆ ಸೂಚಿಸಿದೆವು. ಅವರು ನನ್ನ ಮಗನ ಜೊತೆ ತಮಾಷೆ ಮಾಡುತ್ತಾ, ಅವನಿಗೆ ಎ ಬಿ ಸಿ ಡಿ ಎಲ್ಲ ಕೇಳಿದರು. ಕೂದಲಿನ ಬಣ್ಣ ಏನು? ಎಂದು ಇಂಗ್ಲೀಶ್ ನಲ್ಲಿ ಕೇಳಿದರು. ಆಗ ಮಗ ನನ್ನ ಕೂದಲಿನ ಬಣ್ಣ ಕರಿ, ನಿಮ್ಮದು ಬಿಳಿ ಎಂದು ಬಿಟ್ಟ. ಸಧ್ಯ ಅವರು ಬೇಜಾರ್ ಮಾಡಿಕೊಳ್ಳಲಿಲ್ಲ. ಮನೆ ಬಾಡಿಗೆ ಎಲ್ಲವನ್ನು ಮಾತನಾಡಿ ಮನೆಗೆ ಬಂದೆವು.
ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕುವುದು ಎಷ್ಟು ಕಷ್ಟ ಎಂದು ಅನ್ನಿಸಿತು. ಮೊದಲನೆ ಮನೆ ಹುಡುಕಿ ಕೊಟ್ಟಿದ್ದು ನನ್ನ ಗೆಳೆಯ. ಮರುದಿನ ಬಾಡಿಗೆ ಮನೆ ಹುಡುಕಲು ಪಟ್ಟ ಕಷ್ಟದಿಂದ ಬಾಡಿ ಬೆಂಡಾಗಿ ಹೋಗಿತ್ತು.
Friday, March 11, 2011
ಟ್ರೈನಿನ ಲೋಚಗುಡುವಿಕೆ ....
ನಾನು ಒಳ್ಳೆಯ ವಿಚಾರ ಮಾಡುವಾಗ ಒಮ್ಮೆಯೂ ಲೋಚಗೂಡದ ಹಲ್ಲಿ, ನಾನು ಕೆಟ್ಟ ವಿಚಾರ ಮಾಡುವಾಗ ಮಾತ್ರ ಖಂಡಿತ ಲೋಚಗುಡುತ್ತದೆ. ಅದನ್ನು ನಾನು ತುಂಬಾ ಕೆಟ್ಟ ಕಣ್ಣಿನಿಂದ ನೋಡಿ, ಮತ್ತೆ ನಾನೇ ಲೋಚಗೂಡಲು ಶುರು ಮಾಡುತ್ತೇನೆ. ನನ್ನ ಲೋಚಗುಡುವಿಕೆಯಿಂದ ನನಗೆ ಯಾವುದೇ ಫಾಯಿದೆ ಆಗಿದೆಯೋ ಖಂಡಿತ ಗೊತ್ತಿಲ್ಲ. ಹೆಂಡತಿ ಮಾತ್ರ ಕೃಷ್ಣ ಕೃಷ್ಣ .. ಎಂದು ಎರಡು ಬಾರಿ ಶ್ರೀ ಕೃಷ್ಣ ಪರಮಾತ್ಮನನ್ನು ಎರಡು ಬಾರಿ ನೆನಸುತ್ತಾಳೆ. ಅಷ್ಟು ಚೆನ್ನಾಗಿ ಮಿಮಿಕ್ರಿ ಮಾಡುತ್ತೇನೆ. ಅದು ಹಲ್ಲಿಯದು ಮಾತ್ರ.
ನಾನು ಲೇಟಾಗಿ ಆಫೀಸ್ ನಿಂದ ಬಂದಿದ್ದೆ. ಲೇಟ್ ಆಗುವುದಕ್ಕೂ ಒಂದು ಕಾರಣ ಇತ್ತು. ಆಫೀಸ್ ನಲ್ಲಿ ಟ್ರೇನಿಂಗ್ ಇತ್ತು. ಮಡದಿ ಕರೆ ಮಾಡಿ ಕೂಡ ಹೇಳಿರಲಿಲ್ಲ. ಹೀಗಾಗಿ ಮಡದಿ ಕೋಪ ಮಾಡಿಕೊಂಡಿರಬಹುದೆಂದು ಭಯದಿಂದ ಬಂದಿದ್ದೆ. ಟ್ರೈನಿಂಗ್ ತೆಗೆದುಕೊಳ್ಳುವರು ಒಬ್ಬ ಫ್ರೆಂಚ್ ಮನುಷ್ಯ ಇಂಗ್ಲೀಷ್ ಉಚ್ಚಾರಣೆ ಚೆನ್ನಾಗಿ ಬರುತ್ತಿರಲಿಲ್ಲ. ತುಂಬಾ ಕಷ್ಟ ಪಟ್ಟು ಪ್ರಯಾಸದಿಂದ ಅರ್ಥ ಮಾಡಿಕೊಳ್ಳಬೇಕಿತ್ತು. ಅವರು ಟು ಎಂದರೆ ಥೂ ಎಂದು ಉಗಿದ ಹಾಗೆ ಅನ್ನಿಸೋದು. ಇನ್ನೂ 11g Suite ಎಂದರೆ 11g ಸ್ವೀಟ್ ಎಂದ ಹಾಗೆ ಅನ್ನಿಸುತಿತ್ತು. Parallel- ಬ್ಯಾರಲ್ , ಕನ್ಫರ್ಮೇಶನ್ - ಕಾಫೀ ಮಶೀನ್, ಕಾಲಮ್ - ಕೂಲಮ್ ಮತ್ತು ಜೆ ವಿ ಎಂ - ಜಿ ವಿ ಎಂ. ತುಂಬಾ ಕಷ್ಟ ಪಟ್ಟು ಅರ್ಥ ಮಾಡಿಕೊಂಡಿದ್ದೆ.
ಮನೆಯೊಳಗೆ ಹೋದೆ ತುಂಬಾ ಲೇಟ್ ಆಯಿತ ಎಂದು ಕೇಳಿದೆ. ಏನು ಇಲ್ಲವಲ್ಲ ಎಂದಳು. ನನಗೆ ಆಶ್ಚರ್ಯ. ನಾನು ಮತ್ತೆ ವಿಷಯ ಕೆಣಕಿದರೆ ನನಗೆ ಕಷ್ಟ ಎಂದು ಕೈ ಕಾಲು ತೊಳೆದುಕೊಂಡು ಬಂದು, ಊಟಕ್ಕೆ ಹಾಜರ್ ಆದೆ.ಊಟ ಮಾಡುತ್ತಾ ಕುಳಿತಾಗ, ಮಡದಿ ಏನ್ರೀ ಟ್ರೈನಿಂಗ್ ಹೇಗೆ ಆಯಿತು ಎಂದು ಕೇಳಿದಳು. ನನಗೆ ಆಶ್ಚರ್ಯ ಅವಳಿಗೆ ಹೇಗೆ ತಿಳಿಯಿತು ಎಂದು. ನಾನು ಚೆನ್ನಾಗೆ ಇತ್ತು. ಸ್ವಲ್ಪ ಇಂಗ್ಲೀಶ್ ಉಚ್ಚಾರಣೆ ಅರ್ಥ ಮಾಡಿಕೊಳ್ಳುವುದರಲ್ಲಿ ಮಾತ್ರ ತೊಂದರೆ ಅನ್ನಿಸಿತು ಎಂದು ಹೇಳಿದೆ. ಮತ್ತೆ ನಾನು ಅರ್ಥ ಮಾಡಿಕೊಂಡ ಫ್ರೆಂಚ್ ಮತ್ತು ಇಂಗ್ಲೀಶ್ ಪದಗಳನ್ನು ಹೇಳಿದೆ. ಜೋರಾಗಿ ನಕ್ಕೂ ನಿಮಗೆ ತಿನ್ನುವುದು ಬಿಟ್ಟು ಬೇರೆ ಏನು ನೆನಪು ಆಗಲಿಲ್ಲವೇ ಎಂದು ಹೀಯಾಳಿಸಿದಳು. ಆದರೂ ಅನುಮಾನ ಹಾಗೆ ಇತ್ತು. ನಾನೇ ಯಾವಾಗಲಾದರೂ ಹೇಳಿದ್ದೇನಾ ಟ್ರೈನಿಂಗ್ ವಿಷಯ ಎಂದು ನೆನಪು ಮಾಡಿಕೊಂಡೆ. ಯೋಚಿಸಿದಷ್ಟು ತಲೆ ಬಿಸಿಯಾಗ ತೊಡಗಿತು. ಕಡೆಗೆ ತಾಳ್ಮೆ ಮೀರಿ ಕೇಳಿಯೇ ಬಿಟ್ಟೆ. ನಿನಗೆ ಹೇಗೆ ಗೊತ್ತು, ನನಗೆ ಟ್ರೈನಿಂಗ್ ಇದೆ ಎಂದು ಎಂದು ಕೇಳಿದೆ. ಅದು ಟಾಪ್ ಸೀಕ್ರೆಟ್ ಎಂದು ಅಡುಗೆ ಮನೆಗೆ ಮೊಸರು ತರಲು ಹೊರಟು ಹೋದಳು.
ನಾನು ಮತ್ತೆ ಮತ್ತೆ ಕೇಳಿದ ಮೇಲೆ, ನಿನ್ನೆ ರಾತ್ರಿ ನಿದ್ದೆಯಲ್ಲಿ ಏನೇನೋ ಲೋಚಗುಡುತ್ತಾ ಇದ್ದೀರಿ ಎಂದಳು. ನಾನು ಏನು? ಎಂದು ಕೇಳಿದೆ. ನಾಳೆ ಟ್ರೈನಿಂಗ ಇದೆ ಎಂದು. ಮತ್ತೆ ಲೇಟ್ ಆಗಿ ಬರುತ್ತೇನೆ ಎಂದು ಬೇರೆ ಹೇಳುತ್ತಿದ್ದೀರಿ ಎಂದಳು. ಆಗ ಅರ್ಥ ಆಯಿತು ನನಗೆ ಇವತ್ತಿನ ಅಷ್ಟೋತ್ತರ ಹೇಗೆ ತಪ್ಪಿತು ಎಂದು. ಒಂದೊಂದು ಸಾರಿ ನೀವು ತುಂಬಾ ಲೋಚಗುಡುತ್ತೀರಿ ಅಥವಾ ನಿಮ್ಮ ಗೊರಕೆ ಟ್ರೈನಿನ ಶಬ್ದದ ಹಾಗೆ ಬರುತ್ತೆ ಎಂದಳು. ಇವತ್ತಿನಿಂದ ಹಾಲ್ ನಲ್ಲಿ ಮಲಗಿಕೊಳ್ಳಿ ನಮಗೆ ತುಂಬಾ ಡಿಸ್ಟರ್ಬ್ ಆಗುತ್ತೆ. ನಿನ್ನೆ ಹೀಗೆ ಲೋಚಗುಡುತ್ತಾ ಇದ್ದಾಗ ಮಗ ಬೇರೆ ಎದ್ಡಿದ್ದ ಎಂದು ಬೈದಳು.
ಹೊರಗಡೆ ಹಾಲ್ ಗೆ ಬಂದೆ. ಅಷ್ಟರಲ್ಲಿ ಮಡದಿ ನಾಳೆ ಲೇಟ್ ಆಗುತ್ತಾ? ಎಂದು ಕೇಳಿದಳು. ಇಲ್ಲ ಎಂದೆ. ನಾಳೆ ಆಫೀಸ್ ನಿಂದ ಬರುತ್ತ ತರಕಾರಿ ತೆಗೆದುಕೊಂಡು ಬನ್ನಿ ಎಂದಳು. ನಾನು ಎಷ್ಟು ತಡಕಾಡಿದರು 300 ರೂಪಾಯಿ ಕೆಳಗೆ ಆಗುವುದೇ ಇಲ್ಲ ತರಕಾರಿಗೆ. ಅದಕ್ಕೆ ತರಕಾರಿ ತಂದ ಮೇಲೆ ತಕರಾರು ಇದ್ದೇ ಇರುತ್ತೆ. ಅಷ್ಟರಲ್ಲಿ ಮೊಬೈಲ್ ಜಾಹೀರಾತು ಕಾಣಿಸಿತು ಟಿ ವಿ ಯಲ್ಲಿ. ಈ ಚೈನೀಸ್ ಗಳು ಏನೆಲ್ಲಾ ಕಂಡುಹಿಡಿದಿದ್ದಾರೆ. ಮೊಬೈಲ್, ಟಿ ವಿ ಎಲ್ಲ ಎಲೆಕ್ಟ್ರಾನಿಕ್ ಐಟಮ್ ಗಳನ್ನು, ಹಾಗೆ ತರಕಾರಿ ಕಂಡು ಹಿಡಿದು ಪುಣ್ಯ ಕಟ್ಟಿಕೊಳ್ಳಬಾರದೇ ಎಂದು ಅನ್ನಿಸಿತು.ಚೈನೀಸ್ ತರಕಾರಿ ಬಜಾರ್ ಎಲ್ಲ ಕಡೆ. ಆಗ ಈರುಳ್ಳಿ, ಟೊಮ್ಯಾಟೋ , ಬೀನ್ಸ್ ಎಲ್ಲದಕ್ಕೂ ಒಂದೇ ರೇಟ್ 5 ರೂಪಾಯಿ ಕೆ ಜಿ ಎಂದು ಯೋಚನೆ ಬಂತು. ಆಗ ತರಕಾರಿ ಖರ್ಚು 100 ರೂಪಾಯಿ ದಾಟೊಲ್ಲ ಎಂದು ಯೋಚಿಸಿ ಹಾಗೆ ಒಂದು ಮಂದಹಾಸ ಬೀರಿದೆ.
ಅಷ್ಟರಲ್ಲಿ ಮಡದಿ ಬಂದು ಏಕೆ? ರಾಯರು ಒಬ್ಬರೇ ನಗುತ್ತಾ ಇದ್ದೀರ. ಟ್ರೈನಿಂಗ್ ಕೊಟ್ಟವರು ಗಂಡಸ ಅಥವಾ ಹುಡುಗೀನಾ? ಎಂದು ಕೇಳಿದಳು. ಗಂಡಸೆ ಕಣೇ ಎಂದು ತಡಬಡಿಸಿ ಹೇಳಿದೆ. ಇನ್ನೂ ಸುಮ್ಮನೇ ನಿದ್ದೆ ಮಾಡಿ ಎಂದು ಲೈಟ್ ಆಫ್ ಮಾಡಿ ಹೋದಳು .ಗೋಡೆ ಮೇಲಿರುವ ಹಲ್ಲಿ ಲೋಚಗುಡಿತು. ನಾನು ಲೋಚಗುಡುತ್ತಾ ಕೃಷ್ಣ.. ಕೃಷ್ಣ.. ಎಂದು ಶ್ರೀ ಕೃಷ್ಣ ಪರಮಾತ್ಮನನ್ನು ನೆನೆದು ನಿದ್ದೆಗೆ ಜಾರಿದೆ.
Thursday, February 24, 2011
ತರ್ಲೆ ಮಂಜನ ರಥಸಪ್ತಮಿ....
ನಾನು ಮಂಜನ ಮನೆಗೆ ಹೊರಟಿದ್ದೆ. ಮನೆ ಸಮೀಪಿಸುತ್ತಿದ್ದಂತೆ, ನನಗೆ ಅವರ ಮನೆಗೆ ಹೋಗುತ್ತಿದ್ದೇನೆ ಎಂಬ ಭಾವನೆ ಬರಲಿಲ್ಲ. ಏಕೆಂದರೆ, ಯಾವಾಗಲು ಕೇಳಿಸುವ ನಮ್ಮ ವಟ ಸಾವಿತ್ರಿಯ ಅಥವಾ ನಮ್ಮ ಮಂಜನ ಧ್ವನಿ ಕೇಳಿಸಲಿಲ್ಲ. ಸಾವಿತ್ರಿಗೆ ಮೊದಲೇ ಒಂದು ಬಾಯಿ ಇದ್ದರೂ, ಮದುವೆ ಆದಮೇಲೆ ಇನ್ನೊಂದು ಬಾಯಿ ಸೇರಿ ಸಾವಿತ್ರಿಬಾಯಿ ಆದ ಮೇಲೆ ಇನ್ನೂ ಬಾಯಿ ಜೋರಾಗಿತ್ತು. ಮಂಜ ಮನೆಯಲ್ಲಿ ಇಲ್ಲದಿರಬಹುದಾ ಎಂದು ಕೂಡ ಅನ್ನಿಸಿತು. ವಾಪಸ್ ಹೋಗುವ ಸಮಯದಲ್ಲಿ, ಮಂಜನ ಪಕ್ಕದ ಮನೆಯಲ್ಲಿ ಇರುವ ಸಂತೋಷ ಭೇಟಿಯಾದರು. ಮಂಜನ ಬಗ್ಗೆ ಕೇಳಿದಾಗ ಮಂಜ ಮನೆಯಲ್ಲಿ ಇರುವನೆಂದು ತಿಳಿಯಿತು.
ಮಂಜನ ಮನೆಗೆ ಹೋದೆ. ಮಂಜ ಪೇಪರ್ ಓದುತ್ತಾ ಕುಳಿತಿದ್ದ. ಸಾವಿತ್ರಿ ಇಷ್ಟು ಶಾಂತವಾಗಿದ್ದು ತುಂಬಾ ಖುಷಿ ತಂದಿತು. ಆದರೆ ಏನೋ ನಡೆದಿದೆ ಎನ್ನುವುದು ಮಾತ್ರ ಖಾತ್ರಿ ಅನ್ನಿಸಿತು. ಏನು? ತಂಗ್ಯಮ್ಮಾ ಹೇಗಿದ್ದೀಯ ಎಂದು ಕೇಳಿದೆ. ಇವರನ್ನು ಕಟ್ಟಿಕೊಂಡ ಮೇಲೆ ರಾಮ.... ರಾಮ.... ಎಂದು ಆರಾಮ್ ಆಗಿ ಇರಲಾರದೇ ಆಗುತ್ತೆ? ಎಂದು ಉತ್ತರ ಬಂದಿತು. ಮಂಜನಿಗೆ ಕೇಳಿದೆ ಏನು? ಸಮಾಚಾರ ಎಂದು. ಏನೋ ಗೊತ್ತಿಲ್ಲಪ್ಪಾ? ಮುಂಜಾನೆಯಿಂದ ಏಳು ಬಾರಿ ಇವತ್ತು ರಥಸಪ್ತಮಿ ಕಣ್ರೀ ಎಂದು ಹೇಳಿದ್ದಾಳೆ ಎಂದ. ಕೋಪ ಏತಕ್ಕೆ ಎಂದು ಗೊತ್ತಿಲ್ಲ ಎಂದ. ಮತ್ತೆ ಸ್ವೀಟ್ ಏನು? ಮಾಡಬೇಕು ಎಂದು ಕೇಳಿದಳು. ನಾನು ಏನಾದ್ರೂ ಮಾಡು ಎಂದೆ. ಅದಕ್ಕೆ ಕೋಪದಿಂದ ಏನು? ಬೇಕು ಅದನ್ನು ಹೇಳಿ ಅಂದಳು. ಮತ್ತೆ ನಾನು ಏನಾದ್ರೂ ಮಾಡು, ಹೇಗಿದ್ದರು ನೀನು ತಾನೇ ತಿನ್ನುವವಳು ಎಂದೆ. ಅದಕ್ಕೆ ಇರಬೇಕು ಇಷ್ಟು ಕೋಪ ಅಂದ.
ಸಾವಿತ್ರಿ ಕಾಫೀ ತೆಗೆದುಕೊಂಡು ಬಂದು ನನಗೆ ಮಾತ್ರ ಕೊಟ್ಟಳು. ಮಂಜ ಆಗ ಕಾಫೀ ನನಗೆ ಎಂದ. ಅವಳು ನಿಮಗೆ ಇಲ್ಲ ತುಂಬಾ ಕೂಡಿಬೇಡಿ ಆರೋಗ್ಯ ಹಾಳಾಗುತ್ತೆ ಎಂದು ಕೋಪದಿಂದಲೇ ನುಡಿದಳು. ಆಗ ಮಂಜ ಕಾಫೀಗೆ ಹಾರ್ಟ್ ಅಟ್ಯಾಕ್ ಆಗಲ್ಲ ಗೊತ್ತಾ ಎಂದ. ಕಾಫೀಗೆ ಜೀವ ಇದ್ದರೆ ತಾನೇ ಹಾರ್ಟ್ ಅಟ್ಯಾಕ್ ಆಗೋದು ಎಂದಳು. ನಾನು ನನ್ನ ಬಗ್ಗೆ ಹೇಳಿದ್ದು ಎಂದ ಮಂಜ. ಕಡೆಗೆ ಮಂಜನಿಗೂ ಒಂದು ಕಾಫೀ ಲಭಿಸಿತು. ಮಂಜ ಈ ಪೇಪರ್ ನವರು ದುಬಾರಿ ಎನ್ನುವ ಒಂದು ಕಾಲಮ್ ಪರ್ಮನೆಂಟ ಮಾಡಿದ್ದಾರೆ ಅನ್ನಿಸುತ್ತೆ ಎಂದ. ಮೊನ್ನೆ ಈರುಳ್ಳಿ, ನಿನ್ನೆ ಪೆಟ್ರೋಲ್ ಇವತ್ತು ಹಾಲು ನಾಳೆ ಹಾಳು ಮೂಳು ಹೀಗೆ.. ಎಂದ.
ಅಷ್ಟರಲ್ಲಿ ಮಂಜನ ಮಡದಿ ಸಾವಿತ್ರಿ ಒಳಗಡೆಯಿಂದ ಬಂದು, ನಿಮ್ಮ ಗೆಳಯನಿಗೆ ಊರ ವಿಚಾರ ಎಲ್ಲಾ ಗೊತ್ತಾಗುತ್ತೆ. ಆದರೆ ಮನೆಯವರು ಎಂದರೆ ಅಷ್ಟಕ್ಕೇ ಅಷ್ಟೇ ಎಂದಳು. ಮೊನ್ನೆನೇ ಹೇಳಿದ್ದೆ ರಥಸಪ್ತಮಿ ದಿವಸ ಒಂದು ಸೀರೆ ಕೊಡಿಸಿ ಎಂದು ತನ್ನ ಅಳಲನ್ನು ತೋಡಿಕೊಂಡಳು. ನೋಡಿ ಇವತ್ತು ಹೊಸ ಸೀರೆ ಉಟ್ಟುಕೊಂಡರೆ ವರ್ಷದಲ್ಲಿ ಏಳು ಹೊಸ ಸೀರೆ ಬರುತ್ತವೆ ಎಂದಳು. ನೀನು ಕೊಡಿಸಿದ್ದೀಯ ತಾನೇ, ನಿನ್ನ ಮಡದಿಗೆ ಎಂದು ನನಗೆ ಕೇಳಿದಳು. ನಂಗೆ ದಿಕ್ಕೇ ತೋಚದಾಗಿತ್ತು. ಸಧ್ಯ ಪಕ್ಕದಲ್ಲಿ ಹೆಂಡತಿ ಇರಲಿಲ್ಲ. ಅದೇನೋ ಅಂತಾರಲ್ಲ ದಾರಿಯಲ್ಲಿ ಹೋಗುವ ಮಾರಿ ತಂದು ಮನೆಯಲ್ಲಿ ಇಟ್ಟುಕೊಂಡರು ಅನ್ನುವ ಹಾಗೆ ಆಗಿತ್ತು. ಆಗ ಮಂಜ ಹಾಗಾದರೆ ಇವತ್ತು ನಾನು ದುಡ್ಡು ಖರ್ಚು ಮಾಡಿದರೆ ನನ್ನ ಜೇಬು ವರ್ಷದಲ್ಲಿ ಏಳು ಬಾರಿ ಕತ್ತರಿ ಎಂದ. ನೀನು ಹೇಳುವ ಹಾಗೆ ಇದ್ದರೆ ಇವತ್ತು ಮದುವೆ ಅದವರು ಬೇಜಾನ್ ಜನ ಇದ್ದಾರೆ. ಅವರಿಗೆ ವರ್ಷದಲ್ಲಿ ಏಳು ಬಾರಿ ಮತ್ತೆ ಮದುವೆ ಆಗುತ್ತಾ ಸುಮ್ಮನೇ ಏನೇನೋ ಹೇಳಬೇಡ ಎಂದು ದಬಾಯಿಸಿದ. ಆಮೇಲೆ, ಗೊತ್ತಾ ನೀನು ಹೀಗೆ ಜಗಳಮಾಡಿಕೊಂಡು ಮುನಿಸಿಕೊಂಡು ಕುಳಿತಿದ್ದರೆ, ವರ್ಷದಲ್ಲಿ ಇನ್ನೂ ಏಳು ಪಟ್ಟು ಜ್ಯಾಸ್ತಿ ಜಗಳ ಆಗುತ್ತೆ ಎಂದು ತನ್ನ ಅಪಾರ ಜ್ಞಾನ ಪ್ರದರ್ಶಿಸಿದ.
ಅದು ಬೇರೆ ನಮ್ಮ ಎಂಗೇಜ್ಮೆಂಟ್ ಇವತ್ತೇ ಆಗಿತ್ತು ತಾನೇ...ಹಾಗೆ ನೋಡಿದರೆ ಅದೇ ವರ್ಷದಲ್ಲಿ ನನಗೆ ಏಳು ಬಾರಿ ಆಗಬೇಕಿತ್ತು. ಇನ್ನುವರೆಗೆ ಮತ್ತೊಂದು ಕೂಡ ಆಗಿಲ್ಲ ಎಂದು ನಗುತ್ತಾ ಹೇಳಿದ. ಅದಕ್ಕೆ ಸಪ್ತಪದಿ ತುಳಿದಿರಲ್ಲ ನನ್ನ ಜೊತೆ ಅಂದಳು ಸಾವಿತ್ರಿ. ಅವರಿಬ್ಬರ ಜಗಳಕ್ಕೆ ಸಾಕ್ಷಿ ಎನ್ನುವಂತೆ ನಾನು ಕುಳಿತಿದ್ದೆ. ನಿನ್ನನ್ನು ಮದುವೆ ಮಾಡಿಕೊಳ್ಳಬೇಕಾದರೆ ನಾನು ಪಟ್ಟ ಕಷ್ಟ ಎಷ್ಟು ಗೊತ್ತಾ ಎಂದ. ನಾನು ನನ್ನ ಅಪ್ಪನಿಗೆ, ನನ್ನ ಕೆಲಸ ಮಾಡುವ ಟೀಮ್ ನಲ್ಲಿ ಎಲ್ಲರ ಮದುವೆ ಆಗಿದೆ ಎಂದು ಹೇಳಿದೆ. ಹೌದಾ... ಹಾಗಾದರೆ ನೀನು ನಿನ್ನ ಟೀಮ್ ಚೇಂಜ್ ಮಾಡಿ ಬಿಡು. ಅವರ ನಡುವೆ ಇದ್ದು ಕೆಟ್ಟು ಹೋಗಿ ಬಿಡುತ್ತಿಯ, ನನ್ನ ನೋಡಿದ ಮೇಲೆ ನಿನಗೆ ಅರ್ಥ ಆಗಿರಬೇಕಲ್ಲ ಎಂದರು. ನಾನು ಬೆಪ್ಪನ ಹಾಗೆ ಸುಮ್ಮನೇ ಇರದೆ, ನನ್ನ ಅಪ್ಪನ ಒಪ್ಪಿಸಿ, ನಿನ್ನ ಮದುವೆ ಆದೆ ಅಂದ. ಅಷ್ಟರಲ್ಲಿ ನಗುತ್ತಾ, ತನ್ನ ಬ್ಯಾಗ್ ತೆಗೆದು ಒಂದು ಹೊಸ ಸೀರೆ ಸಾವಿತ್ರಿಗೆ ಕೊಟ್ಟ.
ಅವರಿಬ್ಬರ ಮಾತುಗಳು ಜೋರು ಇದ್ದರೂ, ಮನಸು ಮಾತ್ರ ತಿಳಿ ನೀರು....
Thursday, February 10, 2011
ತರಲೆ ಮಂಜನ ತತ್ವಜ್ಞಾನ ....
ಒಬ್ಬ ಎಳೆನೀರು ಮಾರುವವನ ಬಳಿ ಹೋದೆವು. ಮಂಜ ಇದನ್ನು ಕೊಡಿ ಎಂದು ಒಂದು ಎಳೆನೀರು ಕಾಯಿ ತೋರಿಸಿದ. ನಿಮಗೆ ನೀರಾ, ಗಂಜಿನಾ ಹೇಳಿ ನಾನು ಕೊಡುತ್ತೇನೆ ಎಂದ. ಗಂಜಿ ಎಂದ ಮಂಜ. ಮತ್ತೆ ಬಿಡಿ ನಾನು ಕೊಡುತ್ತೇನೆ ಎಂದ ನೀರು ಮಾರುವವ. ಬೇಡ ಇದೆ ಕೊಡಿ ಎಂದ ಮಂಜ. ಎಳೆನೀರು ಮಾರುವವ ನೋಡಿ... ಸ್ವಾಮಿ ಮೇಲೆ ಇರುವ ಸೊಬಗು ನೋಡಿ ತೆಗೆದು ಕೊಂಡರೆ ಆಗಲ್ಲ, ಒಳಗೆ ಚೆನ್ನಾಗಿ ಇದ್ದರೆ ಸಾಕು ಎಂದು ತನ್ನ ಎದೆ ಮುಟ್ಟಿಕೊಂಡು ಹೇಳಿದ. ಆಗ ಮಂಜ ಹೇಳಿದ ಮಾತು ನಿಜ ಅನ್ನಿಸಿತು. ಹೀಗೆ ... ಕಣೋ ಎಲ್ಲರೂ ತಮ್ಮ.. ತಮ್ಮ.. ಜ್ಞಾನವನ್ನು ಭೋಧಿಸುತ್ತಾರೆ ಅಷ್ಟೇ... ಪಂಚರ್ ತಿದ್ದುವ ಮನುಷ್ಯನಿಂದ ಹಿಡಿದು ಕಾರ್ ಮಾರುವ ಮನುಷ್ಯನವರೆಗೆ ಎಂದ. ನೀನು ಬರೆಯಬೇಕು ಎಂದರೆ ಹಾಸ್ಯ ಆರಿಸಿಕೋ, ಇದರಿಂದ ಕೆಲ ಜನರಲ್ಲಿ ಮಂದಹಾಸ ಮೂಡಿದರೆ ಸಾಕು. ನಿನ್ನ ಬರಹ ಸಾರ್ಥಕವಾಗುತ್ತೆ. ತತ್ವಜ್ಞಾನ ಕೊಡೋಕೆ ತುಂಬಾ ಜನ ಇದ್ದಾರೆ. ಸ್ವಾರ್ಥವಿಲ್ಲದೇ ಯಾವುದೇ ತತ್ವಜ್ಞಾನ ಕೂಡ ಇರುವುದಕ್ಕೆ ಸಾಧ್ಯವೇ ಇಲ್ಲ. ಮತ್ತೆ ಕೆಲವರು ತಾವು ಒಳ್ಳೆಯವರು ಎಂದು ತೋರಿಸುವುದಕ್ಕೆ ಇಂತಹ ತತ್ವಜ್ಞಾನ ಪ್ರದರ್ಶಿಸುತ್ತಾರೆ. ಈ ಫಿಲಾಸಫೀ ಯಾವತ್ತೂ ಫಿಲ್ ಆಗದ ವಸ್ತು.
ಮತ್ತೆ ನನ್ನ ಪಕ್ಕದ ಮನೆಯಲ್ಲಿ ಇರುವ ಒಬ್ಬ ಹಿರಿಯರು ತತ್ವ ಜ್ಞಾನ ಹೇಳುತ್ತಿದ್ದರು. ಮತ್ತು ಪ್ರತಿ ಬಾರಿ ತಮ್ಮ ಅಕ್ಷರಗಳ ಬಗ್ಗೆ ವರ್ಣನೆ ಕೂಡ ಮಾಡುತ್ತಿದ್ದರು. ನಮಗೂ ಅಕ್ಷರ ಗುಂಡಾಗಿ ಬರೆಯಿರಿ ಎಂದು ಹೇಳಿ ರಾತ್ರಿ ಗುಂಡು ಹಾಕಿ ಕುಳಿತಿರುತ್ತಿದ್ದರು. ಉಪದೇಶ,ವೇದಾಂತ, ತತ್ವಜ್ಞಾನ ಎಲ್ಲರೂ ಪರಿಪಾಲಿಸಿದರೆ ಎಲ್ಲರೂ ದೊಡ್ಡವರಾಗಿಯೇ ಇರುತ್ತಾರೆ ಅಲ್ಲವೇ, ಚಿಕ್ಕ ಮನುಜರು ಕಡಿಮೆ ಆಗಿಬಿಡುತ್ತಾರೆ. ಆಮೇಲೆ ಎಲ್ಲರಿಗೂ ಮ್ಯಾನೇಜರ್ ಲೆವೆಲ್ ನಲ್ಲೇ ಇರುತ್ತಾರೆ. ಆದರೆ ಕೆಳಗೆ ಕೆಲಸ ಮಾಡುವವರು ಯಾರು? ಎಂದು ಪ್ರಶ್ನೆ ಹಾಕಿದ.
ಒಂದು ಕತೆ ಹೇಳುತ್ತೇನೆ ಕೇಳು. ಆಚಾರ್ಯ ಹೇಳುವುದಕ್ಕೆ ಮತ್ತು ಬದ್ನೆಕಾಯಿ ತಿನ್ನುವುದಕ್ಕೆ ಇದು ಸರಿಯಾಗಿ ಹೊಂದುತ್ತದೆ ಎಂದ. ಒಮ್ಮೆ ಒಬ್ಬ ಸಂಪ್ರದಾಯಸ್ತರ ಮನೆಯಲ್ಲಿ ಹಿರಿಯರು ತೀರಿಕೊಂಡಿದ್ದರು. ಅವರ ಪಿಂಡ ಇಟ್ಟು ಕಾಯುತ್ತಾ ನಿಂತಿದ್ದರು. ಯಾವುದೇ ಕಾಗೆ ಬಂದು ಮುಟ್ಟಲಿಲ್ಲ. ತುಂಬಾ ಹೊತ್ತು ಕಾದರೂ ಆಗಲೂ ಯಾವುದೇ ಕಾಗೆ ಮೂಸಲ್ಲಿಲ್ಲ. ಇನ್ನೂ ಕಾದರೆ ಆಗುವುದಿಲ್ಲ, ನನಗೆ ಶುಗರ್ ಬೇರೆ ಇದೆ ಎಂದು, ಅವರ ಮನೆಯಲ್ಲಿ ಇರುವ ಒಬ್ಬ ಹೊಟೇಲಿನಿಂದ ಚಿಕನ್ ತಂದು ಪಿಂಡದ ಪಕ್ಕ ಎಸೆದ. ಅಷ್ಟೇ... ಕಾಗೆಗಳ ದಂಡೆ ಬಂದು, ಎಲ್ಲವನ್ನು ತಿಂದು ಹೋಗಿತ್ತು. ಪಾಪ ತಮ್ಮ ಹೊಟ್ಟೆ ಸಲುವಾಗಿ ಸತ್ತವರ ಆಸೆ ಅವರಿಗೆ ಅಷ್ಟಕ್ಕೇ ಅಷ್ಟೇ ಎಂದ.
ನೋಡು ನಾವೆಲ್ಲರೂ ತೂತು ಮಡಿಕೆ ಇದ್ದ ಹಾಗೆ ಎಂದ. ನನಗೆ ಅರ್ಥವಾಗಲಿಲ್ಲ. ಹಾಗೆ ಅಂದರೆ ಎಂದೆ. ಮತ್ತೆ ಅದರ ಕತೆ ಶುರು ಮಾಡಿದ. ನೋಡು ಒಬ್ಬ ಮನುಷ್ಯನ ಹತ್ತಿರ ಎರಡು ಮಡಿಕೆಗಳು ಇದ್ದವು. ಒಂದು ಮಡಿಕೆ ಚೆನ್ನಾಗಿ ಇತ್ತು. ಇನ್ನೊಂದು ಸ್ವಲ್ಪ ತೂತು ಇತ್ತು. ದಿನಾಲೂ ಎರಡನ್ನೂ ತೆಗೆದುಕೊಂಡು ಹೋಗಿ ನೀರು ತುಂಬುತ್ತಿದ್ದ. ಅದನ್ನು ನೀರು ತುಂಬುವ ಸಮಯದಲ್ಲಿ ತೂತು ಇರುವ ಮಡಿಕೆ ಅರ್ಧ ಅಗಿರುತಿತ್ತು. ಅದನ್ನು ನೋಡಿದ ಅದನ್ನು ನೋಡಿದ ಅವನ ಮಡದಿ ಇದನ್ನು ಒಗೆದು ಬಿಡಬಾರದೇ ಎಂಬ ಸಲಹೆ ಇಟ್ಟಳು. ಅದಕ್ಕೆ ಅವನು ಅವನ ಹೆಂಡತಿಯನ್ನು ಕರೆದುಕೊಂಡು ಹೋಗಿ, ತನ್ನ ಬಾವಿಯಿಂದ ಮನೆಯವರೆಗೂ ಇರುವ ಹೂವಿನ ಕುಂಡಗಳನ್ನು ತೋರಿಸಿ, ಇವೆಲ್ಲವೂ ಈ ತೂತುಮಡಿಕೆಯ ಉಪಕಾರದಿಂದ ಬೆಳೆದ ಹೂವಿನ ಗಿಡಗಳು ಮತ್ತು ದಿನಾಲೂ ಇವುಗಳನ್ನು ಕಿತ್ತು ದೇವರಿಗೆ ಮತ್ತು ನಿನಗೆ ಕೊಡುತ್ತೇನೆ. ಅದರ ಸೋರುವಿಕೆಯ ನೀರು ಈ ಗಿಡಗಳಿಗೆ ಆಹಾರವಾಗುತ್ತೆ. ಮತ್ತು ನನ್ನ ಕೆಲಸ ಕೂಡ ತಪ್ಪುತ್ತೆ. ಈಗ ಹೇಳು ಇದನ್ನು ನಾನು ಬಿಸಾಡಲೆ ಎಂದು ಕೇಳಿದ. ಆಗ ಹೆಂಡತಿ ತನ್ನ ತಪ್ಪು ಅರಿವಾಗಿ ಬೇಡ.. ಬೇಡ... ಎಂದಳು. ಹೀಗೆ, ಎಲ್ಲರಲ್ಲಿಯೂ ಕೆಲ ದೋಷಗಳು ಸಹಜವಾಗಿಯೇ ಇರುತ್ತವೆ. ಅವುಗಳನ್ನು ತಿದ್ದುವುದು ಅಥವಾ ಕಡೆಗಣಿಸುವುದು ಬಿಟ್ಟು, ಅವುಗಳನ್ನು ಹಾಗೆಯೇ ಸ್ವೀಕರಿಸಿ, ಅವುಗಳ ಉಪಯೋಗ ಪಡೆದುಕೊಳ್ಳಬೇಕು....ಇಷ್ಟೆಲ್ಲಾ ಹೇಳಿದ್ದೇನೆ, ನೀನು ಬೇಕಾದರೆ ತತ್ವಜ್ಞಾನಿ ಆಗು ಎಂದು ಹೀಯಾಳಿಸಿದ.
ಮತ್ತೆ ನೀನು ಈಗ ಏನು? ಮಾಡಿದೆ ಎಂದು ಕೇಳಿದೆ. ಲೇ ಗುರುವಿಗೆ ತಿರುಮಂತ್ರನಾ ಎಂದು ದಬಾಯಿಸಿದ. ನಾನು ನೀಡಿದ್ದು ಬರೀ ಸಲಹೆ ಮಾತ್ರ. ಉಪದೇಶ ಅಥವಾ ತತ್ವಜ್ಞಾನ ಅಲ್ಲ ಎಂದ. ನಾನು ಏನು? ಬರೆಯಬೇಕು ಎಂದು ತಲೆಯಲ್ಲಿ ಬರೆ ಎಳೆದ ಹಾಗೆ ಹೇಳಿದ್ದ. ಅದರ ಕಲೆ(ಎರಡು ಅರ್ಥದಲ್ಲಿ ಸ್ವೀಕರಿಸಿ) ಈಗಲೂ ಇದೆ ಎಂದರೆ ಅತಿಶಯೋಕ್ತಿ ಆಗಲಾರದು.
ಅವನು ಹೇಳಿದ ಹಾಗೇನೆ ಮಾಡಿದೆ. ಮೊದಮೊದಲು ಲೇಖನ ಬರೆದ ಮೇಲೆ, ಅವನಿಗೆ ಫೋನ್ ಮಾಡಿ ಹೇಳುತ್ತಿದ್ದೆ. ಈ ಪ್ಯಾರಾದಲ್ಲಿ ಇರುವ ಪಂಚ್ ನೋಡು ಎಂದು ಹೇಳಿ ತಲೆ ತಿನ್ನುತ್ತಿದ್ದೆ. ಈಗ ನನ್ನ ಫೋನ್ ಬಂದರೆ ಎತ್ತುವುದೇ ಇಲ್ಲ ಆಸಾಮಿ. ಕೆಲವೊಮ್ಮೆ ಬ್ಯೂಸಿಯಾಗಿ ಇದ್ದೇನೆ, ಆಮೇಲೆ ಕಾಲ್ ಮಾಡುತ್ತೇನೆ ಎಂದು ಹೇಳಿ ಕಾಲಿಗೆ ಬುದ್ದಿ ಹೇಳುತ್ತಾನೆ.
-----------------
ಮಂಜನ ಹನಿ
ಮಂಜ ಬಾಡಿಗೆಗೆಎಂದು ವಿಜಯನಗರದಲ್ಲಿ ಇದ್ದ. ಒಮ್ಮೆ ಅವರ ಮನೆ ಮಾಲೀಕರು ಬಂದರು.
ಮಾಲೀಕರು - ರೀ ಮಂಜುನಾಥ, ನೀವು ಬಂದು ಒಂದು ವರ್ಷ ಆಯಿತು ಅಲ್ಲವಾ?
ಮಂಜ - ಹೌದು ಸರ್...
ಮಾಲೀಕರು - ನೋಡಿ ಈ ತಿಂಗಳಿಂದ ಎರಡು ನೂರು ಬಾಡಿಗೆ ಎಕ್ಸ್ಟ್ರಾ ಕೊಡಿ.
ಮಂಜ - ಸರ್, ನೋಡಿ ನಾನು ಒಬ್ಬನೇ ಇರೋದು ದಯ ತೋರಿ ಎಂದು ಗೋಳಾಡಿದ.
ಮಾಲೀಕರು - ಪಾಪ ಹೌದಲ್ಲವಾ, ನೀನು ಒಬ್ಬನೇ ಇದ್ದೀಯ ಅಂತ ನನಗೆ ಗೊತ್ತು. ಆಯಿತು, ನನ್ನ ಹೆಂಡ್ತೀನ ಕೇಳಿ ನೋಡ್ತೀನಿ, ಅವಳು ಒಪ್ಪಿದರೆ, ವಿಚಾರ ಮಾಡೋಣ.
ಮಂಜ ಸುಸ್ತೋ ಸುಸ್ತು ....
ಗಂಡಾಂತರ....
ತುಂಬಾ ಮನೆಗಳಲ್ಲಿ ನಿಜವಾದ ಗಂಡಾಂತರ ಆಗುವುದು ಗಂಡಾಂತರವಾದ ಮೇಲೇನೆ. ಗಂಡ ಅಂತರ ಧ್ಯಾನ ಅಥವಾ ಅಂತರ ಪಿಶಾಚಿ ಆದ ಮೇಲೆ ಎಂದು ತಪ್ಪು ತಿಳಿಯಬೇಡಿ ಮತ್ತೆ ಗಂಡ ಆಫೀಸ್ ಹೋದ ಮೇಲೆ ಎಂಬ ಅರ್ಥದಲ್ಲಿ ಹೇಳಿದ್ದು. ಗಂಡ ಆಫೀಸ್ ಹೋದ ಮೇಲೆ ನಡುಯುವ ಟಿ ವಿ ಎಂಬ ಮೂರ್ಖರ ಪೆಟ್ಟಿಗೆಯಲ್ಲಿ ಬರುವ ಧಾರಾವಾಹಿ ಎಂಬ ಗಂಡಾಂತರಗಳ ಬಗ್ಗೆ ಹೇಳಿದ್ದು. ಧಾರಾವಾಹಿ ಎನ್ನುವುದಕ್ಕೆ ಬಹುಶಃ ಕಣ್ಣೀರ 'ಧಾರಾ' ಆ'ವಾಹ'ಯಾಮಿ ಇರಬಹುದೇನೋ....ನೀವು ಕೇಳಬಹುದು ಇದು ಲಿಂಗ ಹೇಗೆ ಬದಲಿಸಿತು ಎಂದು, ಈಗಿನ ಕಾಲದಲ್ಲಿ ಎಲ್ಲವೂ ಸಾಧ್ಯ. ಸಾಕಷ್ಟು ನಿದರ್ಶನಗಳು ಕೂಡ ಇವೆ....ದಿನ ಪತ್ರಿಕೆ,ಟಿ ವಿ ಯಲ್ಲಿ ನೋಡಿರಲೂಬಹುದು....ಆದರೂ ಹೆಚ್ಚು ಹೆಣ್ಣು ಮಕ್ಕಳೇ ನೋಡುವುದರಿಂದ ಇದನ್ನು ಧಾರಾವಾಹಿ ಎಂದು, ಅವರ ಸಹಾನುಭೂತಿಗೆ ಹೆಸರು ಬಂದಿರಲಿಕ್ಕೆ ಕೂಡ ಸಾಧ್ಯ ಉಂಟು.
ಬಹುಶಃ ಗಂಡಸರನ್ನು ಕಣ್ಣೀರ ಧಾರೆ ಹರಿಸಲಿಕ್ಕೆ ಬರುವುದಿಲ್ಲ ಎಂದು ಕಾಣುತ್ತೆ ಈ ಧಾರಾವಾಹಿಗಳಿಗೆ, ಅದಕ್ಕೆ ಅದನ್ನು ಹೆಣ್ಣುಮಕ್ಕಳಿಗೆ ಬಿಟ್ಟಿದ್ದು ಇರಲೂಬಹುದು(ಗಂಡಸರ ಕಣ್ಣೀರ ಧಾರೆ ಹರಿಸಲಿಕ್ಕೆ). ಅಲ್ಲಿ ಬರುವ ಧಾರಾವಾಹಿಗಳಲ್ಲಿನ ಸೀರೆ , ಒಡವೆ ನೋಡಿ ಹೆಣ್ಣು ಮಕ್ಕಳು ತುಂಬಾ ಆಕರ್ಷಿತರಾಗಿರುತ್ತಾರೆ. ಆಮೇಲೆ ಅಂತರ ಪಿಶಾಚಿ ಆದ ಗಂಡ ಬಂದ ಮೇಲೆ ಶಿಫಾರಸ್ಸು ಹೋಗಿರುತ್ತೆ. ಸಿಗದೆ ಹೋದರೆ ಇದ್ದೇ ಇದೆ.. 'ಧಾರಾ'ಳವಾಗಿ ಕಣ್ಣೀರ 'ಧಾರಾ' ಹರಿಸಲು ಮತ್ತು ಹೇಗಾದರೂ ಮಾಡಿ ಅದನ್ನು ಪಡೆಯಲು.
ಒಂದು ದಿನ ಊಟಕ್ಕೆ ಕುಳಿತ ಸಮಯದಲ್ಲಿ ನನ್ನ ಮಡದಿ ಧಾರಾವಾಹಿ ನೋಡುತ್ತಾ, ರೀ ಸ್ವಲ್ಪ ಒಳಗಡೆ ಹೋಗಿ ಒಂದು ಸೌಟು ತೆಗೆದುಕೊಂಡು ಬನ್ನಿ ಎಂದಳು. ದಿನವೂ ಆಫೀಸ್ ಹೋಗುವ ಸಮಯದಲ್ಲಿ ನನ್ನ ಸೂಟ್ ನ್ನು ಇಡುವುದನ್ನು ಮರೆತರು ಪರ್ವಾಗಿಲ್ಲ ಕಣೇ, ಈ ಸೌಟು ಮಾತ್ರ ನನಗೆ ತರಲು ಹೇಳಬೇಡ ಅಂದೆ. ಅದಕ್ಕೆ ಒಂದು ಕಾರಣವೂ ಇದೆ. ಒಮ್ಮೆ ಸೌಟು ತರಲು ಹೇಳಿದ್ದಳು, ಅದು ಏತಕ್ಕೆ ಎಂದು ತಿಳಿಯದೇ ನಾನು ಜಾರಲಿ(ಝಾರಿ) ಸೌಟು ತಂದೆ. ಇದರಲ್ಲಿ ಸಾರು ಹೇಗೆ ಬಡಿಸಲಿ ಎಂದು ಉಗಿದಿದ್ದಳು. ಮತ್ತೊಮ್ಮೆ ಹೀಗೆ ಅನ್ನದ ಸೌಟು ಬದಲು ಸಾರಿನ ಸೌಟು ತಂದಾಗ ಕೂಡ.
ಹೀಗೆ ಒಮ್ಮೆ ಧಾರಾವಾಹಿ ನಡುವೆ ಮೊಬೈಲ್ ಜಾಹೀರಾತು ಬರುತಿತ್ತು. ಲೇ ನಾನು ಹೊಸ ವೈಫೈ ಇದ್ದ ಮೊಬೈಲ್ ತೆಗೆದುಕೊಳ್ಳಬೇಕು ಎಂದೆ. ಹಾ... ಏನಂದಿರಿ ಎಂದು ಗದರಿಸಿದಳು. ಏಕೆಂದರೆ ಸ್ವಲ್ಪ ಇಂಗ್ಲೀಶ್ ಅವಳಿಗೂ ಗೊತ್ತು. ಕೆಲವೊಂದು ಸಾರಿ ಸೇಡು ತೀರಿಸಿಕೊಳ್ಳಬೇಕಾದಾಗ ದೊಡ್ಡ ದೊಡ್ಡ ಇಂಗ್ಲೀಷ್ ಪದ ಉಪಯೋಗಿಸಿ ಬೈದಿರುತ್ತೇನೆ. ಆಗ ಅವಳಿಗೆ ಅರ್ಥ ಆಗಿರುವುದಿಲ್ಲ. ಆದರೆ ಈಗ ಸಿಕ್ಕಿ ಹಾಕಿಕೊಂಡಿದ್ದೆ. ನಾನು ವೈಫೈ ಬಗ್ಗೆ ಒಂದು ದೊಡ್ಡ ಪಾಠ ಮಾಡಬೇಕಾಗಿಬಂತು. ಅಷ್ಟರಲ್ಲಿ ಧಾರಾವಾಹಿ ಶುರು ಆಯಿತು, ಇಲ್ಲದೆ ಇದ್ದರೆ ಕಣ್ಣೀರ ಧಾರಾ ನನಗೆ ಬರುತಿತ್ತು.
ಅವಳ ಧಾರಾವಾಹಿ ಮುಗಿದ ಮೇಲೆ ನಾನು ಮ್ಯಾಚ್ ಸ್ಕೋರ್ ನೋಡಬೇಕು ಎಂದು ಕುಳಿತಿದ್ದೆ. ನೀವಿಬ್ಬರೂ ಹೋಗಿ ಮಲಗಿಕೊಳ್ಳಿ ಎಂದು ನನಗೆ ಮತ್ತು ಸುಪುತ್ರನಿಗೆ ಆಜ್ಞೆ ಮಾಡಿದಳು. ಸುಪುತ್ರ ಹೋಗಲು ಒಪ್ಪಲಿಲ್ಲ. ಶಾಲೆ ರಜೆ ಇದ್ದಾಗ ಬೇಗ ಏಳುತ್ತಿ. ಶಾಲೆ ಇದ್ದಾಗೆ ಲೇಟ್ ಆಗಿ ಏಳುತ್ತಿ. ನೀನು ನಿನ್ನ ಅಪ್ಪನ ಹಾಗೆ ಉಲ್ಟಾ. ನಾಳೆ ಶಾಲೆ ಇದೆ ಹೋಗು ಎಂದು ಬೈದಳು. ನಾವಿಬ್ಬರು ಬೆಡ್ ರೂಮಿಗೆ ಹೋಗುವಾಗ ಮಗ ಎಡವಿ ಬಿದ್ದ. ಬಿದ್ದು ಅಮ್ಮ ನೋಡು ಅಪ್ಪ ನನ್ನ ಕೈ ಹಿಡಿದುಕೊಂಡು ಹೋಗುವುದಿಲ್ಲ ಎಂದು ನನ್ನ ಮಡದಿಗೆ ಅರುಹಿದ. ನಿಮ್ಮ ಅಪ್ಪ ಇಷ್ಟು ವರ್ಷ ಆದರೂ ನಾಚಿಕೆ ಇಂದ ನನ್ನ ಕೈನೇ ಹಿಡಿಯಲ್ಲ ಇನ್ನೂ ನಿನ್ನ ಕೈ ಎಂದು ಕುಹಕವಾಡಿದಳು. ಮತ್ತೆ ಮಗನಿಗೆ ನಿನಗೆ ನೋಡಿಕೊಂಡು ಹೋಗಲು ಬರುವುದಿಲ್ಲ ಎಂದು ಮಗನಿಗೆ ಬೈದಳು. ಈಗ ಸುಪುತ್ರ ಅಪ್ಪ ನೋಡು ಅಮ್ಮ ಬೈಯುತ್ತಾಳೆ ಎಂದ. ನನಗೆ ಅಷ್ಟೇ ಸಾಕಾಗಿತ್ತು. ನನಗೆ ಬೈಯುತ್ತಾಳೆ, ಇನ್ನೂ ನೀನು ಎಲ್ಲಿಯ ಲೆಕ್ಕ ಎಂದು ಹೇಳಿ ಮುಯ್ಯಿಗೆ ಮುಯ್ಯಿ ತೀರಿಸಿಕೊಂಡು ಮಂದಹಾಸ ಬೀರಿ ಹೋಗಿ ಮಲಗಿಕೊಂಡಿದ್ದೆ.
ಮತ್ತೆ ಒಂದು ದಿನ ಕ್ಯಾಬೇಜ ಹೆಚ್ಚುತ್ತಾ ಟಿ ವಿ ನೋಡುತ್ತಲಿದ್ದಳು. ಲೇ ನೋಡಿಕೊಂಡು ಹೆಚ್ಚು ಹುಳ ಇರುತ್ತವೆ ಎಂದೆ. ನನಗೇನೂ ಕಣ್ಣು ಕಾಣುವದಿಲ್ಲವಾ, ನಾನೇನು ಮುದುಕಿ ಎಂದು ಕೊಂಡಿರಾ, ತೆಗೆದುಕೊಳ್ಳಿ ನೀವೇ ಹೆಚ್ಚಿ ಕೊಡಿ ಎಂದು ನನಗೆ ಕೊಟ್ಟಳು.
ಮತ್ತೆ ಯಾವತ್ತಾದರೂ ಟಿ ವಿ ನೋಡಲು ಬಿಡದೆ ಇದ್ದರೆ ನನಗೆ ಗಂಡಾಂತರ ತಪ್ಪಿದ್ದಲ್ಲ. ಕಣ್ಣೀರ ಧಾರೆ ಶುರು....ಬೇಕಾದರೆ ಚುಮು ಚುಮು ಚಳಿಯಲ್ಲಿ ಕೂಡ ತಣ್ಣೀರ ಸ್ನಾನ ಮಾಡಬಹುದು. ಆದರೆ ಈ ಕಣ್ಣೀರ ಧಾರೆ ಸಹಿಸಲು ಅಸಾಧ್ಯ. ಮತ್ತೆ ಧಾರಾವಾಹಿ ನೋಡುವ ಸಮಯದಲ್ಲಿ ಕರೆಂಟ್ ಏನಾದರೂ ಹೋದರೆ ಕೆ ಪಿ ಟಿ ಸಿ ಎಲ್ (ಕೆ ಈ ಬಿ) ಅವರಿಗೆ ಗಂಡಾಂತರ ತಪ್ಪಿದ್ದಲ್ಲ. ಸಧ್ಯ ನಾನು ತಂದ ಟಿ ವಿ ಇನ್ನೂ ಸರಿಯಾಗಿ ಕೆಲಸ ಮಾಡುತ್ತಿದೆ. ಇಲ್ಲದೇ ಹೋದರೆ ಎಂತಹ ಟಿ ವಿ ತಂದಿದ್ದೀರಾ ಎಂದು ತಿವಿದಾಳು ನನ್ನ ಬೀವಿ....
Wednesday, February 9, 2011
ಕನ್ನಡ ಸಾಹಿತ್ಯ ಸಮ್ಮೇಳನ ....
ಕೆಲ ಹೊತ್ತು ಆದ ಮೇಲೆ ಪುಸ್ತಕ ಮಳಿಗೆಗೆ ಹೊರಟೆ, ತುಂಬಾ ಜನಜಂಗುಳಿ. ಜನರ ಪುಸ್ತಕ ಪ್ರೀತಿ ನೋಡಿ ತುಂಬಾ ಆನಂದವಾಯಿತು. ನನ್ನನ್ನು ಹಿಂದಿನವರೇ ದೂಡಿಕೊಂಡು ಹೋಗುತ್ತಿದ್ದರು, ಅಷ್ಟು ಜನ ಸೇರಿದ್ದರು. ಹಿಂದಿನಿಂದ ಒಬ್ಬ ಮನುಷ್ಯ ಹೊಟ್ಟೆ ಇಂದ ನನ್ನನ್ನು ನೂಕುತ್ತಾ ಹೊರಟಿದ್ದ. ಅವನು ನೂಕಿದ್ದು ನೋಡಿ ಕೋಪ ಬಂದರು, ಅವನ ಹೊಟ್ಟೆ ನೋಡಿ ನನಗೆ ಸಂತೋಷವಾಯಿತು, ಏಕೆಂದರೆ ನನ್ನ ಹೊಟ್ಟೆ, ಅವನ ಹೊಟ್ಟೆ ಮುಂದೆ ಏನು? ಅಲ್ಲ ಅಷ್ಟು ದೊಡ್ಡದಾಗಿತ್ತು.
ಮೊದಲು ಸಪ್ನ ಬುಕ್ ಸ್ಟಾಲ್ ಹೊಕ್ಕು, ಅಲ್ಲಿ ಇರುವ ಶ್ರೀನಿವಾಸ ವೈಧ್ಯರ "ತಲೆಗೊಂದು ತರತರ" ಪುಸ್ತಕ ತೆಗೆದುಕೊಂಡೆ. ಅಲ್ಲಿರುವ ಸನ್ನಿವೇಶ ಕೂಡ ಹಾಗೆ ಇತ್ತು, ತಲೆಗೊಂದು ತರತರ ಮಾತನಾಡುತ್ತಾ ಇದ್ದರು. ಮತ್ತೆ ಇನ್ನೊಂದು ಶ್ರೀ ವೈಧ್ಯರ ಪುಸ್ತಕ ಕಾಣಿಸಿತು. "ರುಚಿಗೆ ಹುಳಿಯೊಗರು" ಅದನ್ನು ತೆಗೆದುಕೊಂಡೆ. ಆಮೇಲೆ ಮುಂದಿನ ಮಳಿಗೆಗೆ ಹೋದೆ, ಅಲ್ಲಿ ಕಾಣಿಸಿದ್ದು, "ಅಂಗಿ ಬರಹ" ಲೇಖಕರು ನಮ್ಮೆಲ್ಲರ ಅಚ್ಚುಮೆಚ್ಚಿನ ಹಾಸ್ಯ ಧಾರಾವಾಹಿಗಳಾದ ಸಿಲ್ಲಿ-ಲಲ್ಲಿ ಮತ್ತು ಪಾ.ಪ. ಪಾಂಡು ಬರೆದಂತ ಶ್ರೀ ಎಂ ಎಸ್ ನರಸಿಂಹಮೂರ್ತಿ ಅವರದ್ದು.
ಅಲ್ಲಿಂದ ಮತ್ತೊಂದು ಮಳಿಗೆಯಲ್ಲಿ ಬೀChi ಅವರ ಒಂದು ಪುಸ್ತಕ ತೆಗೆದುಕೊಂಡೆ. ಅವರು ನನಗೆ ಮೂವತ್ತು ರೂಪಾಯಿ ಚಿಲ್ಲರೆ ಕೊಡಬೇಕಾಗಿತ್ತು. ಐದೈದು ರೂಪಾಯಿಗಳನ್ನು ಕೊಟ್ಟರು. ಕೈಯಲ್ಲಿ ಇದ್ದ ಬೀChi ಅವರ ಪುಸ್ತಕ ಪ್ರಭಾವವೋ ತಿಳಿಯದು , ಇಷ್ಟೊಂದು ದುಡ್ಡು ಕೊಟ್ಟರೆ, ನಾನು ಒಂದು ಬ್ಯಾಗ್ ತರುತ್ತಿದ್ದೆ ಎಂದೆ. ಪಕ್ಕದಲ್ಲಿದ್ದ ಹುಡುಗಿ ಕಿಸಕ್ಕನೆ (ಇಂಗ್ಲೀಶ್ ಅಲ್ಲ) ನಕ್ಕಳು.
ಮತ್ತೆ ಮುಂದಿನ ಮಳಿಗೆಯಲ್ಲಿ ದೇವರ ಪುಸ್ತಕ ನೋಡಿ, ಭಕ್ತಿ ಪರವಶನಾಗಿ ಅಲ್ಲಿಗೆ ಕೈ ಮುಗಿಯುತ್ತಾ ಹೋದೆ. ನನ್ನ ಮುಂದೆ ಇರುವ ಮನುಷ್ಯ ಕೂಡ ನನಗೆ ಕೈ ಮುಗಿದ. ಆದರೆ ಅವನು ಯಾರೆಂದು? ನನಗೆ ತಿಳಿಯಲಿಲ್ಲ. ಏನೋ... ತೆಗೆದುಕೊಳ್ಳಬೇಕು ಅನ್ನುವಷ್ಟರಲ್ಲಿ ಒಬ್ಬ ಮನುಷ್ಯ , ಮೈಯಲ್ಲಿ ದೇವರು ಬಂದವನ ಹಾಗೆ ಮಾಡುತ್ತಾ, ಬಂದು ನನ್ನ ನೂಕಿ ಒಂದು ಪುಸ್ತಕ ತೆಗೆದುಕೊಂಡ. ನಾನು ಮತ್ತೆ ಅವನಿಂದ ದೂರ ಸರಿದೆ. ಮತ್ತೆ ಒಬ್ಬ ಹೆಣ್ಣು ಮಗಳು ಕೂಡ ನನ್ನನ್ನು ಸರಿಸಿ, ಎಕ್ಸ್ಕ್ಯೂಸ್ ಮೀ ಎಂದು ಒಂದು ಪುಸ್ತಕ ಕೈಗೆತ್ತಿಕೊಂಡಳು. ನಾನು ದೂರದಿಂದ ದೇವರಿಗೆ ನಮಸ್ಕರಿಸಿ, ಮುಂದಿನ ಮಳಿಗೆಗೆ ಹೊರಟೆ.
ಮುಂದಿನ ಮಳಿಗೆಯಲ್ಲಿ ಮತ್ತೊಂದು ವೈ ಎನ್ ಗುಂಡೂರಾವ್ ಅವರ ಪುಸ್ತಕ ತೆಗೆದುಕೊಂಡೆ. ಅವರಿಗೆ ಅದೇ ಮೂವತ್ತು ರೂಪಾಯಿಗಳನ್ನು ಕೊಟ್ಟಿದ್ದು ನೋಡಿ ಚಿಲ್ಲರೆ ಬಂದಿದ್ದು ನೋಡಿ ತುಂಬಾ ಖುಷಿಯಾಗಿ, ದೇವರು ಬಂದ ಹಾಗೆ ಬಂದಿರಿ ಎಂದರು. ದೇವರಿಗೆ ಮಹಾಪ್ರಸಾದವಾಗಿ ಏನಾದರೂ? ಹೆಚ್ಚು-ಕಡಿಮೆ ಮಾಡುವಿರೋ ಎಂದೆ. ಈಗಾಗಲೇ ಕಡಿಮೆ ಮಾಡಿ ಕೊಟ್ಟು ಆಗಿದೆ. ಬೇಕಾದರೆ ಹೆಚ್ಚು ಮಾಡುವೆ ಎಂದರು. ಸುಮ್ಮನೇ ಹೊರಟು ಬಂದೆ.
ಒಬ್ಬ ನಿಮ್ಮ ಹೆಸರು ಹೇಳಿ, ಒಂದು ಉಂಗುರ ಕೊಡುತ್ತೇನೆ ಎಂದ. ನಿಮ್ಮ ಎಲ್ಲ ಕೆಲಸ ನೆರವೇರುತ್ತೆ ಎಂದ. ಕೆಲಸಗಳು ನೆರವೇರೋ ಸಮಯ ಮುಗಿದು ಹೋಗಿದೆ ಮಹಾರಾಯ ಎಂದು ಹೇಳಿದರು ಕೇಳಲಿಲ್ಲ. ಸರಿ, ನಿನ್ನ ಉಂಗುರ ಹಾಕಿಕೊಂಡರೆ ನನ್ನ ತಲೆಯಲ್ಲಿ ಕೂದಲು ಮತ್ತೆ ಹುಟ್ಟೂತ್ತೋ ಎಂದು ಕೇಳಿದೆ. ಪಾಪ ... ಜಾರುಬಂಡೆ ಹಾಗಿರುವ ತನ್ನ ತಲೆ ಕೆರೆದುಕೊಂಡ, ನನಗೆ ಅರ್ಥವಾಗಿ ಹೊರಗಡೆ ನಡೆದೆ.
ಒಂದೇ ಬಿಲ್ಲನ್ನು ಇಟ್ಟುಕೊಂಡು ಉಳಿದ ಬಿಲ್ಲನ್ನು ಹೊರಗಡೆ ಹೋಗಿ ಚೆಲ್ಲಿಬಿಟ್ಟೆ. ಹೆಂಡತಿ ಕೇಳಿದರೆ ಎರಡು ಪುಸ್ತಕ ತೆಗೆದುಕೊಂಡರೆ ಉಳಿದ ನಾಲ್ಕು ಪುಸ್ತಕ ಉಚಿತ ಎಂದು ಹೇಳಲು. ಈ ಧೂಳಿನ ಮುಖದಲ್ಲಿ ಮನೆಗೆ ಹೋದರೆ, ಮಡದಿ ಕಂಡುಹಿಡಿಯುವುದು ಕಷ್ಟ ಎಂದು ಮುಖ ತೊಳೆದು,ಮುಂದಿನ ಬಾರಿ ಸಂಪದದ ಒಂದು ಮಳಿಗೆ ಕೂಡ ಇರಲೆಂದು ಆಶಿಸುತ್ತಾ ಮನೆ ದಾರಿ ಹಿಡಿದೆ.
Saturday, February 5, 2011
ಹೆಚ್ಚು ಪೂರ್ವಕ್ಷರ....
ಕಸದೊಳಗೆ ಕಸವಾಗಿ ಹೋಹನಲೆ ನೀನು? ||
ಮುಸುಕಲೀ ಧರೆಯ ಮರೆವೆನ್ನನ್; ಎನ್ನುತ ಬೇಡು |
ಮಿಸುಕದಿರು ಮಣ್ಣಿನಲಿ - ಮಂಕುತಿಮ್ಮ ||
ಮತ್ತು
ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ
ಚಿನ್ನದಾತುರಕಿಂತ ಹೆಣ್ಣುಗಂಡೊಲವು
ಮನ್ನಣೆಯ ದಾಹವಂ ಎಲ್ಲದಕೂ ತೀಕ್ಷ್ಣತಮ
ತಿನ್ನುವುದದಾತ್ಮವನೆ -ಮಂಕುತಿಮ್ಮ||
ಎಂದು ಮಂಕುತಿಮ್ಮನ ಕಗ್ಗ ಹೇಳಿ ನನ್ನನ್ನು ಹೀಯಾಳಿಸಿದ.
ಹೆಸರು ಹೆಸರೆಂಬುದೇಂ? ಕಸುರು ಬೀಸುವ ಗಾಳಿ |
Thursday, February 3, 2011
ಮನ ಮೆಚ್ಚಿದ ಹುಡುಗಿಗೆ ಮೆಚ್ಚಿಸುವ ಪರಿ ....
ಮದುವೆ ಆದ ಹೊಸದರಲ್ಲಿ ಒಬ್ಬರನ್ನೊಬ್ಬರು(ತಮ್ಮ.. ತಮ್ಮ.. ಹೆಂಡತಿ-ಗಂಡನನ್ನು ಮತ್ತೆ ಗಂಡ-ಹೆಂಡತಿಯನ್ನ) ಮೆಚ್ಚಿಸುವ ಕಾರ್ಯಕ್ರಮದಲ್ಲಿ ತೊಡಗಿರುತ್ತಾರೆ, ಆಮೇಲೆ ಹರಿತವಾದ ಮಚ್ಚಿನ ಹಾಗೆ ಇರುವ ಮಾತಿನ ಕಾರ್ಯಕ್ರಮ ತಾನಾಗೇ ಶುರು ಆಗುತ್ತೆ. ನಾನು ಅದು ಮಾಡಿದೆ, ಇದು ಮಾಡಿದೆ ಎಂದು ಹೇಳುವ ಗಂಡನ ಪ್ರತಾಪಗಳು ಮಡದಿಗೆ ಅರಿವಾಗಿರುತ್ತೆ. ಮಡದಿಗೆ ಮೊದಲು ಬಂದ ಮೇಲೆ ಗಂಡನನ್ನು ಅರಿಯುವ ಸಮಯದಲ್ಲಿ ಉದ್ಭವಿಸುವ ಎಲ್ಲಾ ಪ್ರಶ್ನೆಗಳಿಗೆ ಕೆಲವೇ ದಿನಗಳಲ್ಲಿ ಪೂರ್ತಿಯಾಗಿ ಉತ್ತರಗಳನ್ನು ತಮ್ಮ, ತಮ್ಮ ಉತ್ತರ ಕುಮಾರರಿಂದ(ಗಂಡಂದಿರಿಂದ) ಪಡೆದಿರುತ್ತಾರೆ. ಹೀಗೆ ಮೆಚ್ಚಿಸುವ ಮತ್ತು ಹೋಗಳಿಕೆಯ ಕಾರ್ಯಕ್ರಮಕ್ಕೆ ನಾಂದಿ ಹಾಡಿ ಆಗಿರುತ್ತೆ.
ನಾನು ಮದುವೆ ಆದ ಹೊಸದರಲ್ಲಿ ಮಡದಿಯನ್ನು ಮೆಚ್ಚಿಸುವ ಸಂಪ್ರದಾಯಕ್ಕೆ ಬದ್ದನಾಗಿದ್ದೆ, ಅನ್ನುವುದಕ್ಕಿಂತ ಮೆಚ್ಚಿಸುವ ಭರದಲ್ಲಿ ಬುದ್ದನಾಗಿದ್ದೆ ಎಂದರೆ ಸೂಕ್ತ. ಮಡದಿ ಮೊದಮೊದಲು ಏನೇ ಕೆಲಸ ಹೇಳಿದರು ಪ್ರಾಮಾಣಿಕತೆ ಇಂದ ಮಾಡಿ ಮುಗಿಸುತ್ತಿದ್ದೆ. ಆದರೆ ಈಗ 'ಪ್ರಾಮಾಣಿಕ'ವಾಗಿ 'ಕತೆ' ಹೇಳಿ ಕೆಲಸದಿಂದ ಜಾರಿಕೊಳ್ಳುತ್ತೇನೆ. ಅದಕ್ಕೆ ಸಾಕ್ಷಿ ನಾನು ಬರೆದಿರುವ ಇಷ್ಟೊಂದು ಕತೆಗಳೇ...
ಒಮ್ಮೆ ಹೀಗೆ ಮದುವೆ ಆದ ಹೊಸದರಲ್ಲಿ ನಿನ್ನ ಕೈ ಉಪ್ಪಿಟ್ಟು ಸಕ್ಕತ್ ಆಗಿ ಇರುತ್ತೆ ಎಂದು ಹೇಳಿದ್ದೆ. ನಿಮಗೆ ಆಶ್ಚರ್ಯವಾಗಬಹುದು ಉಪ್ಪಿಟ್ಟು ಎಂದರೆ ಹರಿಹಾಯುವ ಸಕ್ಕತ್ ಜನರ ನಡುವೆ, ಇವನು ಯಾರಪ್ಪ? ಪರಲೋಕ ಪ್ರತಾಪಿ ಉಪಿಟ್ಟನ್ನು ಇಷ್ಟ ಪಡುವವನು ಎಂದು ಅಂದುಕೊಳ್ಳಬಹುದು. ಹೊಗಳಿಸಿಕೊಂಡ ಹೆಂಡತಿ ಏನೋ ಹಿರಿ ಹಿರಿ ಹಿಗ್ಗಿದಳು, ಆದರೆ ಅದರ ಫಲವನ್ನು ಈಗಲೂ ಅನುಭವಿಸುತ್ತಿದ್ದೇನೆ. ವಾರದಲ್ಲಿ ಮೂರು ದಿನ ಉಪ್ಪಿಟ್ಟು, ನನ್ನ ಉಪಸಂಹಾರಕ್ಕೆ.. ಕ್ಷಮಿಸಿ ಉಪಹಾರಕ್ಕೆ. ಮೊದಮೊದಲು ನನಗೆ ತಿಂಡಿ ಏನು? ಇವತ್ತು ಎಂದು ಕೇಳುತ್ತಿದ್ದ ನನ್ನ ಗೆಳೆಯರು ನನ್ನ ಕಪ್ಪಿಟ್ಟಿದ್ದ ಮುಖ ನೋಡಿಯೇ ತಿಳಿದುಕೊಂಡು ಬಿಡುತ್ತಾರೆ.
ಮತ್ತೊಮ್ಮೆ ಹೀಗೆ ನಾನು ಹೆಸರು ಹಿಟ್ಟಿನ ಉಂಡೆ ದೇಹಕ್ಕೆ ತುಂಬಾ ಒಳ್ಳೆಯದು ಎಂದು ಪುರಾಣ ಊದಿದೆ. ಮರುದಿನವೇ ನನ್ನನ್ನು ಮೆಚ್ಚಿಸಲು ಮಡದಿ ಮಾಡಿದಳು ಹೆಸರು ಹಿಟ್ಟಿನ ಉಂಡೆ, ಸಧ್ಯ ನಾನು ನನ್ನ ಹೆಸರು ಮರೆಯಲಿಲ್ಲ. ಏನೋ ಲೇಖನದಲ್ಲಿ ಬಂದಿದ್ದ ಒಂದೆರಡು ವಿಷಯ ಹೇಳಿ ನನ್ನ ಬುದ್ದಿವಂತಿಕೆ ಪ್ರದರ್ಶಿಸೋಣ ಎಂದು ಮಾಡಿಕೊಂಡಂತಹ ಅವಾಂತರ(ನನ್ನದೇ, ಕಾಶೀನಾಥನ ಸಿನಿಮಾ ಅಲ್ಲ). ಮುಂದೆ ಅಲ್ಲಿ.. ಇಲ್ಲಿ.. ಓದಿದ ವಿಷಯಗಳನ್ನ ನನ್ನ ಹೆಂಡತಿಯ ಮುಂದೆ ಊದಲಿಲ್ಲ.
ಒಮ್ಮೆ ಹೆಂಡತಿಯನ್ನು ಮೆಚ್ಚಿಸಲು ಎರಡು ಕೆ ಜಿ ಹಸಿ ಮೆಣಿಸಿನಕಾಯಿ ತಂದಿದ್ದೆ. ಏನು? ಹೆಂಡತಿಯನ್ನು ಮೆಚ್ಚಿಸಲು ಹಸಿಮೆಣಿಸಿನಕಾಯಿ ಎಂದು ಅನ್ನಬಹುದು. ಹಾ.. ಸ್ವಾಮಿ ... ಏಕೆಂದರೆ ನನಗೆ ಎರಡೆರಡು ದಿವಸಕ್ಕೆ, ನನ್ನ ಮಡಿದಿ ಒಂದು ರೂಪಾಯಿ ಹಸಿಮೆಣಿಸಿನಕಾಯಿ ತರಲು ಹೇಳುತ್ತಿದ್ದಳು. ಇದನ್ನು ನೋಡಿದ ನನ್ನ ಮಂಜ ಕೊಟ್ಟ ತರಲೆ ಐಡಿಯಾ. ಒಮ್ಮೆಲೇ ಎರಡು ಕೆ ಜಿ ತೆಗೆದುಕೊಡು ತುಂಬಾ ಖುಷಿಯಾಗುತ್ತಾಳೆ ಎಂದು ಹೇಳಿದ. ಹಾಗೆ ಮಾಡಿದೆ, ನಮ್ಮ ಮದುವೆಗೆ ಕೂಡ ಇಷ್ಟು ಮೆಣಸಿನಕಾಯಿ ತಂದಿರಲಿಲ್ಲ ಎಂದು ಹೇಳಿ ಉಗಿದಳು, ಇಷ್ಟು ತಂದರೆ ಒಣಗಿ ಹೋಗುತ್ತವೆ ಎಂದು, ಮರುದಿನ ಅವುಗಳನ್ನು ಉಪ್ಪು ಹಚ್ಚಿದ ಮೆಣಸಿನಕಾಯಿ ಮಾಡಲು ಮತ್ತಷ್ಟು ಸಾಮಾನು ತರಿಸಿ ನನಗೂ ಸಹಾಯ ಮಾಡಲು ಹೇಳಿದಳು .
ಒಮ್ಮೆ ಚಲನ ಚಿತ್ರದಲ್ಲಿ ಹೀರೊ ತನ್ನ ಮಡದಿಯನ್ನು ಮೆಚ್ಚಿಸುವ ಸಲುವಾಗಿ ಮೈಸೂರು ಪಾಕ ಮತ್ತು ಮಲ್ಲಿಗೆ ಹೂವು ತಂದು ಕೊಡುತ್ತಿದ್ದಿದ್ದನ್ನು ನೋಡಿ, ನಾನು ಹಾಗೆ "ನಾ ಮೆಚ್ಚಿದ ಹುಡುಗಿಗೆ ಕಾಣಿಕೆ ತಂದಿರುವೆ" ಎಂದು ಹಾಡುತ್ತಾ, ಮೈಸೂರು ರಾಕ್ ಕ್ಷಮಿಸಿ... ಪಾಕ ಮತ್ತು ಮಲ್ಲಿಗೆ ಹೂವು ತೆಗೆದುಕೊಂಡು ಹೋಗಿದ್ದೆ(ನನ್ನ ಮಡದಿಗೆ). ಅದಕ್ಕೆ ಧಾರವಾಡದಲ್ಲಿ ಇದ್ದು ಕೊಂಡು ಪೇಡಾ ಬಿಟ್ಟು ಈ ಕಲ್ಲಿನ ಹಾಗೆ ಇರುವ ಮೈಸೂರು ರಾಕ್ ತಂದಿದ್ದೀರ ಎಂದು ಉಗಿದಿದ್ದಳು.
ಹೊ'ಗಳಿಕೆ'ಯಲ್ಲಿ ಗಳಿಕೆ ಇದೆ ಎಂದು ಖ್ಯಾತ ಹಾಸ್ಯ ಬರಹಗಾರರಾದ ಶ್ರೀ ಡುಂಡಿರಾಜ ಹೇಳಿದ್ದಾರೆ. ಮತ್ತು ತೆ'ಗಳಿಕೆ'ಯಲ್ಲಿ ಕೂಡ ಎಂದು ಹೇಳಿದ್ದಾರೆ. ನನಗೆ ಮಾತ್ರ ಎರಡು ಸೇರಿ ಹೊತೆ ಗಳಿಕೆ ....
Tuesday, February 1, 2011
ಅವಸರವೇ ಅಪಘಾತ ....
----------------------------------------------------------------------------------
ಮಗನಿಗೆ ಬೈಯುತ್ತಾ, ಲೇ ಜೋರಾಗಿ ಹೇಳೋ ಸ್ತೋತ್ರಗಳನ್ನ, ನಾಳೆ ಸ್ಪರ್ಧೆ ಇದೆ ಎಂದು ಹೇಳುತ್ತ ಇದ್ದಳು. ನಾನು ಅವನಿಗೆ ಏನು? ಹೇಳಿಕೊಡುತ್ತಿದ್ದಾಳೆ ಬೈಯುವುದನ್ನೋ ಅಥವಾ ಸ್ತೋತ್ರಗಳನ್ನೋ ಎಂದು ಅಚ್ಚರಿ ಆದರೂ ಕೇಳಲಿಲ್ಲ. ಮತ್ತೆ ಮಗನ ಜೊತೆಯಲ್ಲಿ ಆಟವಾಡುತ್ತಾ ಇದ್ದೆ. ಅದಕ್ಕೆ ಇಷ್ಟು ವಯಸ್ಸಾದರೂ ಚಿಕ್ಕ ಮಕ್ಕಳ ಹಾಗೆ ಮಾಡುತ್ತೀರಿ ತಿಳಿಯೋದಿಲ್ಲವೇ ಎಂದಳು. ಲೇ ಮಕ್ಕಳ ಜೊತೆ ನಾವು ಮಕ್ಕಳ ಹಾಗೆ ಇರಬೇಕು ಗೊತ್ತಾ. ಇಲ್ಲ ಅಂದರೆ ಅವರು ನಾವು ಬೇರೆ ಮತ್ತು ತಾವು ಬೇರೆ ಎಂದು ಅಂದುಕೊಂಡುಬಿಡುತ್ತಾರೆ. ಮಕ್ಕಳ ಮನಸ್ಸು ಆಗ ಮಾತ್ರ ಅರ್ಥವಾಗುವದು, ದೊಡ್ಡತನ ದೇಹಕ್ಕೆ ಮಾತ್ರ ಬರಬೇಕೆ ಹೊರತು ಮನಸಿಗಲ್ಲ ಎಂದು ಹೇಳಿದೆ. ಆಯಿತು ಇಷ್ಟೊತ್ತು ಲೇಟ್ ಆಗಿದೆ ಎಂದು ನನ್ನ ಜೊತೆ ಜಗಳ ಮಾಡಿದಿರಿ ಸುಮ್ಮನೇ ಹೊರಡಿ ಇನ್ನು ಸಾಕು ಎಂದಳು.
ಹೋಗುವ ಸಮಯದಲ್ಲಿ ಸಂಜೆ ಸ್ವಲ್ಪ ದುಡ್ಡು ತೆಗೆದುಕೊಂಡು ಬನ್ನಿ, ದಿನಸಿ ತರಬೇಕು ಎಂದು ಹೇಳಿದಳು. ನಾನು ಲಗುಬಗೆಯಿಂದ ನನ್ನ ಡೆಬಿಟ್ ಕಾರ್ಡ್ ಇಟ್ಟುಕೊಂಡು ಆಫೀಸ್ ಹೊರಟೆ. ಅಷ್ಟರಲ್ಲಿ ಎದುರಿಗೆ ನಮ್ಮ ಹಳೆಯ ಆಫೀಸ್ ನಲ್ಲಿ ಕೆಲಸ ಮಾಡುವ ಗೆಳೆಯ ಶ್ರೀನಿವಾಸ್ ಭೇಟಿ ಆದ. ನಾವಿಬ್ಬರು ಒಂದು ಡಿಪಾರ್ಟ್ಮೆಂಟ್ EDP ಎಂದರೆ Electronic Data Processing ಎಂದು ತಪ್ಪಾಗಿ ತಿಳಿಯಬೇಡಿ ಮತ್ತೆ Eat Drink Play , ನಾವು ಆ ಆಫೀಸ್ ನಲ್ಲಿ ಅದನ್ನೇ ಮಾಡುತ್ತಿದ್ದೆವು, ಏಕೆಂದರೆ ಎಲ್ಲಾ ಡಿಪಾರ್ಟ್ಮೆಂಟ್ ಗಳು ಕಂಪ್ಯೂಟರೈಸ್ ಆಗಿತ್ತು. ನಮಗೆ ತಿಂಗಳಲ್ಲಿ ಒಮ್ಮೆ ಅಥವಾ ಎರಡು ದಿನ ಮಾತ್ರ ಕೆಲಸ ಇರುತಿತ್ತು. ಹೀಗಾಗಿ ನಮ್ಮ ಡಿಪಾರ್ಟ್ಮೆಂಟನ್ನು ಭೋಜನಕ್ಕೆ ಕರೆಯದೇ ಮರು ನಾಮಕರಣ ಮಾಡಿದ್ದರು. ಎಲ್ಲಾ ಕ್ಷೇಮ ಸಮಾಚಾರ ಆದ ಮೇಲೆ ಕಾಫೀ ಕುಡಿದು, ಆಫೀಸ್ ಹೊದೆ.
ಸಧ್ಯ ಹೋದ ಕೂಡಲೇ ನೆನಪಿಗೆ ಬಂತು ಬಾಸ್ ರಜೆ ಎಂದು. ಬೈಗಳು ತಪ್ಪಿದವು ಎಂದು ನಿಟ್ಟುಸಿರು ಬಿಟ್ಟೆ. ನಾನು ಸುಮ್ಮನೇ ಮುಂಜಾನೆ ಹಾರಡಿದೆ ಎಂದು ಅನ್ನಿಸಿತು. ಬುದ್ದಿ ಅವಸರದಲ್ಲಿ ಏನೆಲ್ಲಾ ಮರೆಯುತ್ತೆ. ಮತ್ತೆ ಮಡದಿಗೆ ಕರೆ ಮಾಡಿ ತಿಂಡಿ ಬಗ್ಗೆ ಎಲ್ಲಾ ವಿಚಾರಿಸಿ, ಕೆಲಸ ಶುರು ಮಾಡಬೇಕು ಅನ್ನುವ ಸಮಯಕ್ಕೆ ಗೆಳೆಯ ನರೇಂದ್ರ ತಿಂಡಿಗೆ ಕರೆದ. ಮತ್ತೆ ತಿಂಡಿ ತಿಂದು ಬಂದು ಕೆಲಸ ಶುರು ಮಾಡಿದೆ.
ಅವಸರದಲ್ಲಿ ಸಂಜೆ ಬರುತ್ತ ದುಡ್ಡು ತೆಗೆಯೋಕೆ ಮರೆತುಬಿಟ್ಟೆ, ಮನೆ ಸಮೀಪ ಬಂದವನು ಮತ್ತೆ ಗಾಡಿ ವಾಪಸ್ ಎ ಟಿ ಎಂ ಕಡೆಗೆ ತಿರುಗಿಸಿಕೊಂಡು ಹೋದೆ. ಹೋದವನೆ ಅವಸರದಲ್ಲಿ ಕಾರ್ಡ್ ಹಾಕಿದೆ. ಕಾರ್ಡ್ ಒಳಗಡೆ ಹೋಯಿತು. ಆದರೆ ಇನ್ವಾಲಿಡ್ ಕಾರ್ಡ್ ಎಂದು ತೋರಿಸುತಿತ್ತು. ಮತ್ತೊಮ್ಮೆ ಹಾಕಿ ಪ್ರಯತ್ನಿಸಿದೆ. ಮತ್ತೆ ಅದೇ ಸಂದೇಶ. ಈಗ ಹಾಗೆ ದುಡ್ಡು ತೆಗೆದುಕೊಳ್ಳದೇ ಹೋದರೆ, ಮಡದಿ ನನ್ನ ಕಥೆನೇ ಮುಗಿಸುತ್ತಾಳೆ ಎಂದು. ಹೊರಗಡೆ ಬಂದು ಅವಳಿಗೆ ಕರೆ ಮಾಡಿ ಎಷ್ಟು ಬೇಕು ದುಡ್ಡು ಎಂದು ಫೋನ್ ಮಾಡಿದೆ. ಅವಳು 1000 ಎಂದು ಹೇಳಿದಳು. ನಾನು ಕೆಲ ನಿಮಿಷದ ನಂತರ ಮತ್ತೆ ಕರೆ ಮಾಡಿ ಕಾರ್ಡ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಹೇಳಿದೆ. ಆಯಿತು, ಸುಮ್ಮನೇ ಬನ್ನಿ ಎಂದಳು. ಕಡೆಗೆ ಹಾಗೆ ಮನೆಗೆ ಹೋದೆ.
ಮನೆಗೆ ಹೋದೊಡನೆ ನನ್ನ ಕಾರ್ಡ್ ತೆಗೆದುಕೊಂಡು ಹೋಗಿ ದುಡ್ಡು ತೆಗೆಸಿಕೊಂಡು ಬನ್ನಿ ಎಂದಳು. ಕಾರ್ಡ್ ತೆಗೆದುಕೊಳ್ಳಲು ಹೋದೆ. ನನಗೆ ಆಶ್ಚರ್ಯ ನನ್ನ ಕಾರ್ಡ್ ಅಲ್ಲೇ ಇತ್ತು. ಮತ್ತೆ ನಾನು ಯಾವ ಕಾರ್ಡ್ ತೆಗೆದುಕೊಂಡು ಹೋದೆ ಎಂದು ಪರ್ಸ್ ತೆಗೆದು ನೋಡುತ್ತೇನೆ. ಪರ್ಸ್ ನಲ್ಲಿ ಇದ್ದಿದ್ದು ಪಾನ್ ಕಾರ್ಡ್, ಅದನ್ನೇ ಹಾಕಿ ಎರಡು ಬಾರಿ ನೋಡಿದ್ದೆ. ಜೋರಾಗಿ ನಗು ಬಂತು ನಕ್ಕರೆ ನನ್ನದೇ ಮರ್ಯಾದೆ ಹೋಗುತ್ತೆ ಎಂದು ಸುಮ್ಮನಾದೆ. ಕಡೆಗೆ ಅವಳ ಕಾರ್ಡ್ ಜೊತೆ ನನ್ನ ಕಾರ್ಡ್ ತೆಗೆದುಕೊಂಡು ಹೋದೆ. ದುಡ್ಡು ತೆಗೆಸಿಕೊಂಡು ಬಂದು, ಆ ಎ ಟಿ ಎಂ ಸರಿ ಇಲ್ಲ ಕಣೇ ಎಂದು ನಗುತ್ತಾ ಹೇಳಿ, ನನ್ನ ಕಾರ್ಡ್ ಸರಿಯಾಗಿ ಕೆಲಸ ಮಾಡುತ್ತಾ ಇದೆ ಎಂದು ಹೇಳಿ ದುಡ್ಡು ಕೊಟ್ಟೆ.
ಮರುದಿನ ನನ್ನ ಮಗನಿಗೆ ಸ್ತೋತ್ರ ಪಠಣ ಮತ್ತು ಸ್ವತಂತ್ರ ಹೋರಾಟಗಾರರ ವೇಷ ಭೂಷಣ ಸ್ಫರ್ಧೆಯಲ್ಲಿ ಬಹುಮಾನ ದೊರೆತಿತ್ತು. ನನ್ನ ಮಡದಿಗೆ ಭೇಷ್ ಹೇಳಿದೆ. ನೀವು ಸ್ವಲ್ಪ ಸುಧಾರಿಸಿ ನಿಮ್ಮ ಮಗನ ಹಾಗೆ ಬೇಗನೆ ಏಳುವುದು, ಸ್ತೋತ್ರ, ಮಂತ್ರ ಪಠಣ ಮಾಡಿ, ನಿಮ್ಮ ಅವಸರ ನನಗೆ ತಡೆಯೋಕೆ ಆಗಲ್ಲ, ನಮಗೂ ಹಿಂಸೆ ಕೊಡುತ್ತೀರಿ ಎಂದಳು. ನನಗು ಹಾಗೆ ಅನ್ನಿಸಿತು ಅವಸರವೇ ಅಪಘಾತ ಎಂದು.
