Thursday, January 27, 2011

ಒಲವೆ ಜೀವನ ಸಾಕ್ಷಾತ್ ಖಾರ ....

ಪುಟ್ಟ ನೋಡು, ನಿಮ್ಮ ಅಪ್ಪನ ಯುದ್ಧ ಮುಗಿಯಿತಾ? ಎಂದು ಮಗನಿಗೆ ಕೇಳಿದಳು. ಎರಡು ದಿನದಿಂದ ನನ್ನ ಮತ್ತು ನನ್ನ ಮಡದಿಯ ಮಧ್ಯೆ ಸಂಸಾರ ಸಮರ ನಡೆದೇ ಇತ್ತು. ಈಗ ಯುದ್ಧ ಮುಗಿಯಿತಾ? ಎಂದು ಕೇಳಿದ್ದು ನನ್ನ ಸ್ನಾನಕ್ಕೆ. ಸ್ನಾನಕ್ಕೆ ಅನ್ನುವದಕ್ಕಿಂತ ದಾಡಿ ಮಾಡಿಕೊಳ್ಳುವುದಕ್ಕೆ. ರಕ್ತವಿಲ್ಲದೇ ನನ್ನ ಮುಖ ಕೂದಲುಗಳನ್ನು ಬಲಿ ಕೊಡುವುದು ನನಗೆ ಅಸಾಧ್ಯದ ಸಂಗತಿ. ಒಂದು ಸಲ ಹೀಗೆ ರಕ್ತ ನೋಡಿ ನನ್ನ ಮಡದಿ, ಇಷ್ಟು ರಕ್ತದಿಂದ ನಾಲ್ಕು ಜನ ರಕ್ತದ ಅವಶ್ಯಕತೆ ಇರುವವರನ್ನು ಬದುಕಿಸಬಹುದಿತ್ತು ಎಂದಿದ್ದಳು. ಸಕಾಲದಲ್ಲಿ ಮಳೆ ಬರದೇ ಎಷ್ಟೋ ಸಸ್ಯ, ಜೀವ ಜಂತುಗಳು ಬಳಲಿ ಬಲಿಯಾಗುತ್ತವೆ, ಆದರೆ ಈ ದಾಡಿ, ಮೀಸೆಗಳಿಗೆ ಅದರ ಪರಿವೆ ಇಲ್ಲದೇ ಸೊಂಪಾಗಿ ಬೆಳೆಯುತ್ತವೆ. ಒಣಗಿರುವ ಪೈರು ಸಹಿತ ಮತ್ತೆ ಚಿಗುರೊಡೆಯುವದು ನಮ್ಮ ಮುಖದಲ್ಲಿ ಮಾತ್ರ. ಅದರಲ್ಲೂ ಅರ್ಧ ಒಣಗಿರುವ(ಬಿಳಿ) ಮತ್ತು ಅರ್ಧ ಕರಿ ಇದ್ದರೆ ಅದರ ಕಷ್ಟ ಹೇಳಲು ಅಸಾಧ್ಯ. ನನ್ನ ಮುಖದಲ್ಲಿ ಕೂಡ ಇದೆ ತೆರನಾದ ಸಮಸ್ಯೆ ಮೀಸೆಗಳನ್ನು ಕತ್ತರಿಸಿ ಕೊಳ್ಳುವುದು. ಏಕೆಂದರೆ ಅರ್ಧ ಬಿಳಿ ಮತ್ತು ಅರ್ಧ ಕರಿ. ಬಿಳಿ ಮೀಸಿಗಳನ್ನು ತೆಗೆಯುವ ಸಮಯದಲ್ಲಿ ಕರಿ ಮೀಸೆಗಳನ್ನು ಅನ್ಯಾಯವಾಗಿ ಬಲಿ ತೆಗೆದುಕೊಂಡಿರುತ್ತೇನೆ. ಬಿಳಿ ಮೀಸೆ ಹುಡುಕಿ ತೆಗೆಯುವುದೇ ಒಂದು ದೊಡ್ಡ ಸಾಹಸ, ಅದಕ್ಕೆ ನನಗೆ ತುಂಬಾ ಸಮಯ ಬೇಕಾಗುತ್ತೆ.

ಜಿರಳೆಗಳಲ್ಲಿ ಒಂದು ವಿಶೇಷವಾದ ಸಂಗತಿ ಇದೆ. ಅದು ತನ್ನ ಹೆಣ್ಣು ಜಿರಳೆಗಳನ್ನು ಆಕರ್ಷಿಸಲು ತನ್ನ ಮೀಸೆಯನ್ನು ಬಳಸುತ್ತೆ. ಮತ್ತು ಆಹಾರ ಹುಡುಕಲು ಕೂಡ ಅದು ನೇರವಾಗುತ್ತೆ. ನಾನು ಕೂಡ ಅದರ ಹಾಗೆನೆ, ಎರಡನೆ ಸಂಗತಿ ಬಿಟ್ಟು, ನನ್ನ ಮಡದಿಯನ್ನು ಆಕರ್ಷಿಸಲು ಉಪಯೋಗಿಸುತ್ತೇನೆ, ಅನ್ನುವದಕ್ಕಿಂತ ನಾನು ನಿನಗಿಂತ ಸ್ವಲ್ಪನಾದರೂ ಮೇಲೂ ಎಂದು ತೋರಿಸುವುದಕ್ಕೆ ಎಂದು ಹೇಳಬಹುದು. ಅದು ಬರಿ ತೋರಿಕೆಗೆ ಮಾತ್ರ ....

ಅವಳ ಸಮರಕ್ಕೂ ಕಾರಣವಿದೆ. ಮೊನ್ನೆ ಇವತ್ತಿನಿಂದ ಒಂದು ತಿಂಗಳಿಗೆ ಏನು? ವಿಶೇಷ ಇದೆ ಹೇಳಿ ಎಂದಳು. ನನಗೆ ಏನೆಂದು ಹೊಳಿಲೆ ಇಲ್ಲ. ಹೀಗೆ, ಅನಿರೀಕ್ಷಿತವಾಗಿ ಪರೀಕ್ಷೆಗೆ ಒಡ್ಡುವ ನನ್ನ ಮಡದಿ ನನ್ನನ್ನು ಪೇಚಿಗೆ ಸಿಕ್ಕಿಸಿರುತ್ತಾಳೆ. ಆಮೇಲೆ ಹೇಳದೇ ಇದ್ದರೆ ಮುನಿಸಿಕೊಂಡು ಬಿಡುತ್ತಾಳೆ. ಕಡೆಗೆ ಟಿ ವಿ ಯಲ್ಲಿ ಬರುವ ಜಾಹೀರಾತು ನೋಡಿ, ಒಂದು ತಿಂಗಳಿಗೆ ಕ್ರಿಕೆಟ್ ವರ್ಲ್ಡ್ ಕಪ್ ಇದೆ ಎಂದೆ. ಇದೊಂದು ಗೊತ್ತು ನಿಮಗೆ ಎಂದು ಕೋಪ ಮಾಡಿಕೊಂಡು ಹೋದಳು. ತುಂಬಾ ಪ್ರಯತ್ನ ಪಟ್ಟರು ಕೋಪ ಇಳಿಯಲೇ ಇಲ್ಲ. ಮತ್ತೆ ಊಟಕ್ಕೆ ಕುಳಿತ ಸಮಯದಲ್ಲಿ ಸಿಕ್ಕಾಪಟ್ಟೆ ತಿಂದು, ಅವಳನ್ನು ನಗಿಸಲು, ಈಗ ಹಸಿವೆ ಆಯಿತು ನೋಡು ಎಂದೆ. ದೇವರ ಗುಡಿಯಲ್ಲಿ ತೀರ್ಥ ಪ್ರೋಕ್ಷಣೆ ಮಾಡಿದ ಹಾಗೆ ಅವಳ ಬಾಯಲ್ಲಿ ಇರುವ ನೀರೆಲ್ಲಾ ಎದುರಿಗೆ ಕುಳಿತ ನನ್ನ ಮೇಲೆ. ಆದರೆ ಕೋಪ ಮಾತ್ರ ಇಳೀಲೆ ಇಲ್ಲ.

ಒಮ್ಮೆ ಅಮ್ಮ ಕರೆಯುತ್ತಾ ಇದ್ದಾಳೆ ಎಂದು ಮಗ ಹೇಳಿದ. ನಾನು ಒಳಗೆ ಹೋಗಿ ಕೇಳಿದೆ. ಅವಳು ಪೂರಿ ಹಾಗೆ ಮುಖ ಉಬ್ಬಿಸಿ, ಪೂರೀನೆ ಕರೆಯುತ್ತಾ ಇದ್ದಳು. ಉತ್ತರ ಮಾತ್ರ ಬರಲಿಲ್ಲ. ಮತ್ತೆ ಕೆಲ ಸಮಯದ ನಂತರ ಮಗ ಬಂದು ನಾನು, ನೀನು 'ಬು' ಹೋಗೋಣ. ಅಮ್ಮ ಬೇಡ ಅಂದ. ಅದಕ್ಕೆ ನಾನು ಪಾಪ ಅಮ್ಮನು ಬರಲಿ ಬಿಡು ಎಂದೆ. ನಿಮ್ಮ ಪಾಪ ಮತ್ತು ಸೀಮೆಎಣ್ಣೆ ಮಾಪ ಎರಡು ನಿಮ್ಮ ಬಳೀನೆ ಇಟ್ಟುಕೊಳ್ಳಿ ಎಂದು ಹೇಳಿದಳು.

ಸಂಜೆ ಟಿ ವಿ ಯಲ್ಲಿ ಬರುವ ಲಗೇ ರಹೊ ಮುನ್ನ ಭಾಯಿ ಚಲನ ಚಿತ್ರ ನೋಡುತ್ತಾ ಇದ್ದೇ. ಪ್ರತಿ ಬಾರಿ ಇದೆ ಸಿನೆಮಾ ನೋಡುತ್ತೀರಿ ಬೇರೆ ಹಚ್ಚಿ ಎಂದಳು. ಲೇ ಇದು ತುಂಬಾ ಸೈಂಟಿಫಿಕ್ ಮೂವೀ ಕಣೆ ಅದರಲ್ಲಿರುವ ನೀತಿ ಪಾಠ ನೋಡಿ ಕಾಲಿಬೇಕು ಎಂದೆ. ಅದೆಲ್ಲ ಗೊತ್ತಿಲ್ಲ ಅದು ಸಿನಿಮಾ ಅಷ್ಟೇ. ನೀವು ಹೇಳೋ ಹಾಗೆ ಆಗಿದ್ದರೆ ಅಡ್ವರ್ಟೈಸ್ಮೆಂಟ್ ನಲ್ಲಿ ಕ್ರೀಮ್ ,ಪೌಡರ್ ಹಚ್ಛ್ಕೊಂಡರೆ ನೌಕರಿ ಸಿಗುವುದು ಎಲ್ಲಾ ಆಗುತ್ತೆ ಅದೆಲ್ಲ ಖರೆ ಆಗುತ್ತಾ, ಸುಮ್ಮನೇ ಚೇಂಜ್ ಮಾಡಿ ಎಂದು ರಿಮೋಟ್ ಕಸಿದುಕೊಂಡು ಚೇಂಜ್ ಮಾಡಿದಳು.

ಮಗನಿಗೆ ಅಭ್ಯಾಸ ಮಾಡಿಸುವಾಗ ಪೆನ್ಸಿಲ್ ನೋಡಿ ಇದು ನಿಮ್ಮ ಅಪ್ಪನ ಹಾಗೆ ಮಂಡ ಇದೆ ನೋಡು ಎಂದು ಹೇಳಿ ನಗುತ್ತಲಿದ್ದಳು. ಮತ್ತೆ ತರಕಾರಿ ಹೆಚ್ಚುವಾಗ ಕೂಡ... ಇಳಿಗೆಗೆ.

ರಾತ್ರಿ ಊಟವಾದ ಮಲಗುವ ಸಮಯದಲ್ಲಿ ನಾನು ರೇಡಿಯೋ ಕೇಳುತ್ತಾ ನಿದ್ದೆ ಮಾಡುತ್ತಾ ಇದ್ದೇ. ಅದನ್ನು ನೋಡಿ ರೀ ಆ ರೇಡಿಯೋ ಆಫ್ ಮಾಡಿ ಎಂದಳು. ನೋಡು ರಿದಂ ಇದ್ದರೆ ಬೇಗನೆ ನಿದ್ದೆ ಬರುತ್ತೆ ಎಂದೆ.ಮಕ್ಕಳಿಗೆ ಮಲಗಿಸುವಾಗ ಕೂಡ ಒಂದೇ ರಿದಂನಲ್ಲಿ ಬಡಿದರೆ ಹೇಗೆ ನಿದ್ದೆ ಬರುತ್ತೆ ಹಾಗೆ ಎಂದೆ. ಬೇಕಾದರೆ ನೀನು ಟ್ರೈ ಮಾಡು ಎಂದೆ. ಅದೆಲ್ಲ ಬೇಡ ನಿಮ್ಮ ಗೊಡ್ಡು ಫೀಲಾಸಫೀ. ನೀವೇನೂ ಸ್ವಾಮಿಗಳಲ್ಲ. ನನಗೆ ಮಾತ್ರ ನಿದ್ದೆ ಬರಲ್ಲ ಆಫ್ ಮಾಡಿ ಅದನ್ನು ಎಂದು ಉಗಿದಳು.

ಅಷ್ಟರಲ್ಲಿ ಮಂಜನ ಫೋನ್ ಬಂತು, ಲೇ ಹ್ಯಾಪೀ ಅನಿವರ್ಸರಿ ಎಂದ. ನಾನು ಇವತ್ತ? ಎಂದು ಯೋಚಿಸಿದೆ. ಅದು ಮುಂದಿನ ತಿಂಗಳು ಎಂದು ನೆನಪು ಆಯಿತು. ಕ್ಯಾಲಂಡರ್ ನೋಡಿದೆ. ಮತ್ತೆ ಬೆಳಿಗ್ಗೆ ಮಡದಿ ಕೇಳಿದ್ದು ಅದೇ ಇರಬೇಕು ಎಂದು ಹೊಳಿತು. ತುಂಬಾ ಖುಶಿಯಿಂದ "ಒಲವೆ ಜೀವನ ಸಾಕ್ಷಾತ್ ಖಾರ" ಎಂದು ತಮಾಷೆಯಾಗಿ ಹಾಡುತ್ತಾ ಬಂದು. ಲೇ ಇವತ್ತಿನಿಂದ ಮುಂದಿನ ತಿಂಗಳು , ನಮ್ಮ ೬ ನೇ ವರ್ಷದ ವಿವಾಹ ವಾರ್ಷಿಕೋತ್ಸವ ಎಂದು ಹೇಳೋಕೆ ಹೋದೆ,ಆದರೆ ಆಗಲೇ ನಿದ್ದೆಗೆ ಜಾರಿದ್ದಳು....

Tuesday, January 18, 2011

ವೇದಾಂತಿ ದಂತಕತೆ....

ಮುಂಜಾನೆ ಎದ್ದು ಬೇಗನೆ ದೇವರ ಸ್ತೋತ್ರ ಹೇಳುತ್ತ ಇದ್ದೆ. ನನ್ನ ಗೆಳೆಯ ವಿಲಾಸ್ ಬಂದ. ಬಂದವನೇ, ಎಲ್ಲಾ ಕ್ಷೇಮ ಸಮಾಚಾರವಾದ ಮೇಲೆ, ತನ್ನ ಮದುವೆ ಕಾರ್ಡ್ ಕೊಟ್ಟ. ನಮಗೂ ತುಂಬಾ ಖುಷಿ ಆಯಿತು. ಇಲ್ಲೇ, ತಿಂಡಿ ತಿಂದು ಹೋಗು ಎಂದು ಹೇಳಿದೆ. ಆಯಿತು ಎಂದ. ಮಡದಿ ತಿಂಡಿ ತಂದು ಕೊಟ್ಟಳು. ತಿಂಡಿ ತಿನ್ನುವ ಸಮಯದಲ್ಲಿ ಒಂದು ಹರಳು ನನ್ನ ಬಾಯಿಗೆ ಬಂತು. ನಾನು ಪಕ್ಕಕ್ಕೆ ಇಟ್ಟು, ತಿಂಡಿ ತಿಂದು ಮುಗಿಸಿದೆ. ಆಮೇಲೆ ಕಾಫೀ ಕುಡಿಯುತ್ತಾ ಇರುವಾಗ, ಮತ್ತೆ ಮಾತನಾಡುತ್ತಾ ನಿನಗೆ ಯಾರಾದರೂ ದಂತ ವೈಧ್ಯರು ಗೊತ್ತಾ ಎಂದು ಕೇಳಿದ. ನನಗೆ ಘಾಬರಿ, ನನಗೆ ಹರಳು ಬಂದರು, ನಾನೇ ಸುಮ್ಮನಿರುವಾಗ ಇವನದು ಜಾಸ್ತಿ ಆಯಿತು ಅನ್ನಿಸಿತು. ನಾನು ಸುಮ್ಮನೇ ನಕ್ಕು ಸುಮ್ಮನಾದೆ. ಮತ್ತೊಮ್ಮೆ ಕೇಳಿದ ಆಸಾಮಿ... ಆದರೂ ಸುಧಾರಿಸಿಕೊಂಡು, ಹಾ... ಗೊತ್ತು ನನ್ನ ಒಬ್ಬ ಹಳೆಯ ಗೆಳೆಯ ರಾಜೀವ ಇದ್ದಾನೆ ಎಂದೆ. ಅವನಿಗೆ ಹೇಳು ನಾನು ಬರುತ್ತಿದ್ದೇನೆ ಅಂತ ಎಂದ. ಏಕೆ? ಹಲ್ಲಿಗೆ ಏನು ಆಯಿತು ಎಂದೆ. ಅದು ಮದುವೆ ಮುಂಚೆ ಹಲ್ಲು ಚೆನ್ನಾಗಿ ತೋರಿಸಿಕೊಂಡು ಬರಬೇಕು ಎಂದಿದ್ದೇನೆ ಎಂದಾಗ ನನ್ನ ಮನಸ್ಸು ನಿರಾಳವಾಯಿತು.

ಮದುವೆ ಫಿಕ್ಸ್ ಆಯಿತು, ಅಂದರೆ ಸಾಕು ಅನೇಕ ಜನರು ದಂತ ವೈದ್ಯರ ಬಳಿ ಹೋಗಿ, ತಮ್ಮ ದಂತಕತೆಗಳನ್ನು ಹೇಳಿ, ದಂತ ಚಿಕಿತ್ಸೆ ಮಾಡಿಸಿಕೊಂಡು ಬರುತ್ತಾರೆ. "ಪ್ರಥಮ್ ಚುಂಬನಮ್ ದಂತ ಭಗ್ನಮ್" ಆಗಬಾರದು ನೋಡಿ ಅದಕ್ಕೆ..ಆಮೇಲೆ ಬೇಕಾದರೆ ಭಗ್ನಗೊಳಿಸುವುದು ಅವರವರ ಇಚ್ಛೆ. ಗಂಡ ಹೆಂಡತಿಯದೋ ಅಥವಾ ಹೆಂಡತಿ ಗಂಡನದೋ.... ಚಿಕ್ಕವನಿದ್ದಾಗ ಅಪ್ಪ ನಾನು ಕೀಟಲೆ ಮಾಡಿದಾಗ "ಲೇ ನಿನ್ನ ಹಲ್ಲು ಉದುರಿಸುತ್ತೇನೆ ಎಂದಿದ್ದು" ನೆನಪು ಆಯಿತು.

ಅವನಿಗೆ ರಾಜೀವನ ವಿಸಿಟಿಂಗ್ ಕಾರ್ಡ್ ಕೊಟ್ಟೆ. ಕಾರ್ಡ್ ನೋಡಿ,ಮುಖ ಹರಳೆಣ್ಣೆ ಕುಡಿದವನ ಹಾಗೆ ಮಾಡಿದ. ಏಕೆ? ಏನು ಆಯಿತು ಎಂದೆ. ಅದು... ಅದು... ಕ್ಲಿನಿಕ್ ಹೆಸರು ಅಂದ. ಅದಾ.. ಅವನು ಗಣೇಶನ ಭಕ್ತ, ಅದಕ್ಕೆ ಏಕದಂತ ಕ್ಲಿನಿಕ್ ಎಂದು ಇಟ್ಟಿದ್ದಾನೆ ಅಷ್ಟೇ ಎಂದಾಗ, ನಿರಾತಂಕವಾಗಿ ನಿಟ್ಟುಸಿರು ಬಿಟ್ಟ. ಅವನ ಸಿಲ್ವರ್ ತಲೆ ನೋಡಿ, ಇದನ್ನು ಸರಿ ಮಾಡಿಸಿಕೊ ಎಂದು ತಮಾಷೆ ಮಾಡಿದೆ. ನಾನು ಬ್ಯೂಟೀ ಪಾರ್ಲರ್ ಗೆ ಹೋಗುತ್ತೇನೆ ಎಂದ. ಅದಕ್ಕೆ ನನ್ನ ಮಡದಿ ನಿಮ್ಮನಾಟಿ ವೈಧ್ಯರ ಅಡ್ರೆಸ್ ಕೊಡಿ ಪಾಪ... ಎಂದು ನಗಹತ್ತಿದಳು. ಅವನಿಗೆ ಅರ್ಥವಾಗಲಿಲ್ಲ, ಯಾರದೂ ನಾಟಿ ವೈಧ್ಯರು ಎಂದ. ನನ್ನ ಕಥೆಯನ್ನು ತುಂಬಾ ರಸವತ್ತಾಗಿ ಹೇಳಿದಳು. ಸಕ್ಕತ್ ನಗುತ್ತಾ, ಬೇಡ.. ಬೇಡ... ನನಗೆ ಬ್ಯೂಟೀ ಪಾರ್ಲರ್ ಗೆ ಹೋಗುತ್ತೇನೆ, ನನ್ನ ನೋಡಿ, ಆಮೇಲೆ 10 ವರ್ಷ ಚಿಕ್ಕವನ ಹಾಗೆ ಮಾಡಿ ಕಳಿಸುತ್ತಾರೆ ಎಂದ. ಅದಕ್ಕೆ ನಾನು ಕೋಪದಿಂದ ನಿನ್ನ ಮೇಲೆ ಪೋಲೀಸ್ ಕಂಪ್ಲೇಂಟ್ ಕೊಟ್ಟು ಬಿಡುತ್ತೇನೆ, ಬಾಲ್ಯ ವಿವಾಹ ಮಾಡಿಕೊಳ್ಳುತ್ತಿದ್ದಾನೆ ಎಂದು ಎಂದೆ.

ನಾವಿಬ್ಬರು ಮದುವೆ ಸಿದ್ಧತೆ ಬಗ್ಗೆ ಮಾತನಾಡುತ್ತಾ ಇದ್ದಾಗ, ನನ್ನ ಸುಪುತ್ರ ಬಂದು, ಅಪ್ಪ ನೋಡಿ.. ಅಮ್ಮ ನನ್ನ ಮಾತು ಕೇಳುತ್ತಾ ಇಲ್ಲ ಎಂದ. ಅದಕ್ಕೆ ನಾನು, ಮದುವೆ ಆಗಿ ಆರು ವರ್ಷ ಆಗೋಕೆ ಬಂತು ನನ್ನ ಮಾತೆ ಕೇಳಲ್ಲ, ಇನ್ನೂ ನಿನ್ನ ಮಾತು ಅವಳಿಗೆ ಎಲ್ಲಿಯ ಲೆಕ್ಕ ಎಂದು ನಗುತ್ತಾ ಅಂದೆ. ಅದಕ್ಕೆ... ಅವನು ನಕ್ಕು ಅಪ್ಪನಿಗೆ ಹೇಳಿದ್ದೇನೆ ಎಂದು ಹೇಳುತ್ತ ಅಡುಗೆ ಮನೆಗೆ ಹೋದ. ಹೇಳು ಏನು? ಮಾಡುತ್ತಾರೆ ನೋಡುತ್ತೇನೆ ಎಂದಳು ಮಡದಿ.

ಕೆಲ ಸಮಯದ ನಂತರ ಪಕ್ಕದ ಮನೆ ಪೂಜ ಬಂದು "ಆಂಟೀ ಸ್ವಲ್ಪ ಮೊಸರು ಇದ್ದರೆ ಕೊಡಿ" ಎಂದಳು. ಮೊಸರು ಕೊಟ್ಟು ಕಳುಹಿಸಿದಳು. ನನ್ನ ಮಗ ಅವರ ಅಮ್ಮನಿಗೆ ಆಂಟೀ ... ಆಂಟೀ ಎಂದು ಸಂಭೋದಿಸುತ್ತಾ ಮೋಜು ಮಾಡುತ್ತಾ ಆಡುತ್ತಿದ್ದ. ಮದುವೆ ಆದ ಮೇಲೆ ಸಿಗುವಂತ ಮೊದಲನೆ ಪ್ರಮೋಶನ್ ಏನು ಗೊತ್ತಾ? ಎಂದು ವಿಲಾಸ್ ನಿಗೆ ಕೇಳಿದೆ. ಏನು? ಎಂದ. ನೀನು ಪಕ್ಕದ ಮನೆ ಜನರಿಗೆ ಅಂಕಲ್ ಆಗುತ್ತಿ ಮತ್ತೆ ನಿನ್ನ ಮಡದಿ ಆಂಟೀ...ವಯಸ್ಸು ಎಷ್ಟೇ ಇದ್ದರು. ಮದುವೆ ಮೊದಲು ನೀನು ಹೀರೊ ಇರುತ್ತಿ... ಎಂಗೇಜ್ಮೆಂಟ್ ಆದ ಮೇಲೆ ಸೂಪರ್ ಹೀರೊ ತರಹ ಆಡುತ್ತೀ.. ಆಮೇಲೆ ಗೊತ್ತಾಗೋದು ನೀನು ಆಂಟೀ ಅಥವಾ (Anti) ಹೀರೊ ಎಂದು. ಅದಕ್ಕೆ ಒಟ್ಟಿನಲ್ಲಿ ಹೀರೊ ಇರುತ್ತೇನೆ ತಾನೇ? ಅಂದ. ಲೇ.... ನಿನಗೆ ಹೀರೊದ ನಿಜವಾದ ಅರ್ಥ ಗೊತ್ತಾ? ಎಂದೆ. ಇಲ್ಲ ಅಂದ. ಹೀ(ಅವನು) ಇಂಗ್ಲೀಶ್ ಶಬ್ದ. ರೊ(ಅಳು) ಹಿಂದಿ ಶಬ್ದ ಎಂದೆ. ಜೋರಾಗಿ ನಗಹತ್ತಿದ. ಅಷ್ಟರಲ್ಲಿ ನನ್ನ ಮಡದಿ ನೀವು ಇವರ ಮಾತು ಕೇಳುತ್ತಾ ಇದ್ದರೆ ಮುಗೀತು ಕತೆ. ಗಿಡದಲ್ಲಿ ಇರುವ ಮಂಗ ಕೂಡ ಕೈ ಬಿಡುತ್ತೆ ಎಂದಳು. ವೇದಾಂತಿಗಳೇ ನಿಮ್ಮ ದಂತಕತೆಗಳು ಸಾಕು, ಅವರಿಗೂ ಇನ್ನೂ ತುಂಬಾ ಮದುವೆ ಕಾರ್ಡ್ ಕೊಡಬೇಕು ಎಂದು ಕಾಣುತ್ತೆ ಬಿಡಿ ಅವರನ್ನ ಎಂದಳು.

ಮತ್ತೆ ನಕ್ಕು, ಎಲ್ಲರಿಗೂ ಬೈ ಹೇಳಿ ಮದುವೆಗೆ ಬರಲೇಬೇಕು ಎಂದು ಹೇಳಿ ಹೊರಟು ಹೋದ.

ಆಮೇಲೆ ಮಡದಿ ರೀ... ಸ್ವಲ್ಪ ಟೊಮ್ಯಾಟೋ ಫ್ರಿಡ್ಜ್ ನಲ್ಲಿ ಇದೆ ಕೊಡಿ ಎಂದಳು. ನಾನು ಫ್ರಿಡ್ಜ್ ತೆಗೆದೆ ಅಲ್ಲಿ ತುಂಬಾ ಸಾಮಾನುಗಳನ್ನು ಇಟ್ಟಿದ್ದಳು. ಅದನ್ನು ನೋಡಿ ಏನೇ ಇದು ಇಷ್ಟೊಂದು ಸಾಮಾನು ಇಟ್ಟೀದ್ದೀಯ....?. ನನ್ನನ್ನು ಇದರಲ್ಲಿ ತುರುಕಲಿಲ್ಲವಲ್ಲ ಎಂದು ತಮಾಷೆ ಮಾಡಿದೆ. ರೀ, ನಾನು ಕೆಟ್ಟಿರೊ ಸಾಮಾನು ಇಡುವದಿಲ್ಲ ಎಂದು ನಗುತ್ತಾ ನುಡಿದಳು....

Wednesday, January 12, 2011

ಸ್ವಚ್ಛತಾ ಕಾರ್ಯಕ್ರಮ ....

*****************************************************
ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು...
*****************************************************


ರೀ, ಮನೆಯಲ್ಲಾ ತುಂಬಾ ಗಲೀಜ್ ಆಗಿದೆ, ಒಂದು ದಿವಸನಾದರೂ ಕ್ಲೀನ್ ಮಾಡಿದ್ದೀರ? ಎಂದಳು ನನ್ನ ಮಡದಿ. ನೀನೇನು ಮಡಿಲೆ ಇದ್ದೀಯಾ? ನೀನೆ ಮಾಡಬಹುದಲ್ಲ ಎಂದು ಹೇಳಿ ಉಗಿಸಿಕೊಂಡೆ. ನನ್ನನ್ನ ಏನು? ಎಂದು ತಿಳಿದಿದ್ದೀಯಾ?. ನನಗೆ ತುಂಬಾ ಕೆಲಸಗಳಿರುತ್ತವೆ. ಬ್ಲಾಗ್ ನೋಡಬೇಕು, ಅದಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಉತ್ತರಿಸಬೇಕು, ಮತ್ತೆ ಓದಬೇಕು ಎಂದು ಹೇಳಿದೆ. ಓದುವ ಸಮಯದಲ್ಲಿ... ಚೆನ್ನಾಗಿ ಊದಿದಿರಿ ಎಂದು ಕಾಣುತ್ತೆ, ಅದಕ್ಕೆ ಈಗ ಓದುತ್ತಾ ಇದ್ದೀರ ಎಂದಳು. ಏನೋ? ಒಂದೆರಡು ಬ್ಲಾಗ್ ಬರೆದ ಮಾತ್ರಕ್ಕೆ, ನಿಮ್ಮಷ್ಟಕ್ಕೆ ನೀವೇ ದೊಡ್ಡ ಸಾಹಿತಿ ಎಂದು ತಿಳಿದುಕೊಳ್ಳಬೇಡಿ. ನಿಮಗೇನೂ ಕೊಂಬು ಬಂದ ಹಾಗೆ ಆಡುತ್ತಿರುವಿರಿ ಎಂದಳು. ಏನು? ನನಗೆ ಕೊಂಬು ಇಲ್ಲವೇ?, ನನ್ನ ಹೆಸರು ಏನು? ಎಂದೆ. ಮತ್ತೇನು ದನ ಕಾಯುವವನು ಎಂದಳು. ಲೇ ಅವು ಆಕಳುಗಳು ಎಂದೆ. ಅವುಗಳಿಗೆ ಕೊಂಬು ಇದೆ. ನನಗೆ ಇಲ್ಲವೇ ಬೇಕಾದರೆ "ಗೋಪಾಲ್" ಎಂಬ ಹೆಸರಿನಲ್ಲಿ "ಲ್" ಕ್ಕೆ ಕೊಂಬು ಇದೆ ಅಲ್ಲ, ಒಂದೇ ಇರಬಹುದು, ಆದರೂ ಇದೆ ತಾನೇ ಎಂದೆ. ಆಯಿತು, ಮಹಾರಾಯರೆ ನೀವು ಮಹಾನ್ ಕೊಂಬು ಪಂಡಿತರು ...ಕ್ಷಮಿಸಿ ಕೊಬ್ಬು ಪಂಡಿತರು. ನಿಮಗೆ ಸರಿಸಾಟಿ ಯಾರು ಇಲ್ಲ ಆಯಿತಾ ಎಂದಳು. ಸಧ್ಯ, ನಿಮ್ಮ ಕಂಪ್ಯೂಟರ್ ನಾದರೂ ಒರೆಸುವ ಕೆಲಸ ಮಾಡುವುದಿಲ್ಲ ಎಂದಳು. ಬರಿ ಅದನ್ನು ಕುಟ್ಟುವುದು ಮಾತ್ರ ಬಿಡುವುದಿಲ್ಲ. ಸ್ವಲ್ಪ ಮೆಣಸಿನಕಾಯಿ ಕುಟ್ಟಿದ್ದರೆ, ಇಷ್ಟೊತ್ತಿಗೆ ಖಾರದ ಪುಡಿನಾದರೂ ಆಗುತಿತ್ತು ಎಂದು ಉಗಿದಳು. ಆಯಿತು... ಮಹಾರಾಯತಿ ಈ ಶನಿವಾರ ಮಾಡುತ್ತೇನೆ ಎಂದು ಅಭಯವನ್ನಿತ್ತೆ. ಅಷ್ಟಕ್ಕೇ ಬಿಡಬೇಕಲ್ಲ ಆಗತಾನೆ ಹೊಸದಾಗಿ ತಂದ ಕ್ಯಾಲಂಡರ್ ಮೇಲೆ ಒಂದು ವೃತ್ತ ಬಿಡಿಸಿ, ಈ ವಾರ ಸ್ವಚ್ಛತಾ ಕಾರ್ಯಕ್ರಮ ಎಂದು ಗುರುತು ಮಾಡಿ ಬಿಟ್ಟಳು. ಇನ್ನೂ ತಪ್ಪಿಸಿಕೊಳ್ಳುವುದು ಅಸಾಧ್ಯದ ಸಂಗತಿ ಆಗಿತ್ತು.


ಹಳೆಯ ಕಂಪನಿಯಲ್ಲಿ ಬರೀ ರವಿವಾರ ಮಾತ್ರ ರಜೆ ಇರುತಿತ್ತು. ಹೀಗಾಗಿ ನನಗೆ ಸ್ವಲ್ಪ ರಿಯಾಯಿತಿ ದೊರೆಯುತ್ತಿತ್ತು. ಆದರೆ ಈಗ ಯಾವುದೇ "ರಿಯಾಯಿತಿ" ಇಲ್ಲ, "ರೀ ಆಯಿತ" ಎಂಬ ಶಬ್ದ ಮಾತ್ರ ಕೇಳಿಸುತ್ತೆ. ಒಂದೇ ದಿನದಲ್ಲಿ ಎಲ್ಲ ಸ್ವಚ್ಛತಾ ಮುಗಿಯುತ್ತಾ, ನನ್ನ ಕೈಯಲ್ಲಿ ಎಂದು ಯೋಚನೆ ಬೇರೆ ಇತ್ತು.


ಕಡೆಗೆ ಶನಿವಾರ ಬಂದೆ ಬಿಟ್ಟಿತ್ತು. ಆರು ಘಂಟೆಗೆ ಎದ್ದೊಡನೆ ಸ್ವಚ್ಚತಾ ಕಾರ್ಯಕ್ರಮ ಶುರು ಮಾಡಿಕೊಂಡಿದ್ದೆ. ರೀ ಮೊದಲು ಕಾಫೀ ಕುಡಿ ಬನ್ನಿ, ಆಮೇಲೆ ಮಾಡುವಿರಂತೆ ಎಂದಳು. ಕಾಫೀ ಕುಡಿದು ಮತ್ತೆ ಕೆಲಸ ಶುರು ಮಾಡಿದೆ.ಪೊರಕೆ ತೆಗೆದುಕೊಂಡು ಕಾಟ್ ಕೆಳಗೆ ಗುಡಿಸಿದೆ. ಒಂದು ಹಲ್ಲಿ ನನ್ನ ಮೇಲೆ ಬಂದ ಹಾಗೆ ಆಗಿತ್ತು. ನೋಡುತ್ತೇನೆ ಅದು ನನ್ನ ಮಗನ ರಬ್ಬರ್ ಹಲ್ಲಿ. ಮಡದಿ, ಮಗ ಇಬ್ಬರು ಜೋರಾಗಿ ನಗ ಹತ್ತಿದರು. ಕಡೆಗೆ ನಾನು ನಕ್ಕು, ಕಾಟ್ ಎತ್ತಿ ಆಮೇಲೆ ಸ್ವಚ್ಛ ಮಾಡಿದರೆ ಆಗುತ್ತೆ ಎಂದು ಎತ್ತಲು ಅನುವಾದೆ. ಸ್ವಲ್ಪ ಕೂಡ ಮಿಸುಗಾಡಲಿಲ್ಲ , ನನ್ನ ಮೀಸೆ ಮಾತ್ರ ಎರಡು ಬಾರಿ ಅಲುಗಾಡಿತು. ಇನ್ನೊಮ್ಮೆ "ಐಸಾ" ಎಂದು ಎತ್ತಲು ಅನುವಾದೆ. ದಪ್ ಎಂದು ಈ ದಪ್ಪದಾದ ದೇಹ ಕೆಳಗಡೆ ಬಿದ್ದಿತ್ತು. ಕಡೆಗೆ ನನ್ನನ್ನು ಎಬ್ಬಿಸಿ, ನಿಮ್ಮ ಅಪ್ಪನ ಕೈಯಲ್ಲಿ ಏನು? ಆಗುವುದಿಲ್ಲ ಎಂದು ಅಣಕಿಸಿದಳು. ಬರೀ ದೊಡ್ಡ ದೇಹ, ಒಳಗಡೆ ಏನು? ಇಲ್ಲ ಎಂದಳು. ಅವನಿಗೆ ಅರ್ಥವಾಗದಿದ್ದರೂ, ಅವಳು ನಕ್ಕೊಡನೆ ಅವನು ನಗುತ್ತಿದ್ದ. ಏನು? ಏನೆಂದು ತಿಳಿದಿದ್ದೀಯ ನನ್ನ. ನನ್ನ ಕಂಡರೆ ತುಂಬಾ ಜನರು ಹೆದುರುತ್ತಾರೆ ಗೊತ್ತಾ ಎಂದೆ. ಹೌದಾ?, ಜನರು ಜಿರಳೆ ನೋಡಿ ಕೂಡ ಹೆದರುತ್ತಾರೆ ಗೊತ್ತಾ ಎಂದಳು.


ಕಡೆಗೆ ನೀನು ಬಾ ಹೆಲ್ಪ್ ಮಾಡು ಎಂದೆ. ಅವಳು ಬಂದಳು. ಇಬ್ಬರು ಸೇರಿ ಎತ್ತಿದರು ಕಾಟ್ ಮೇಲೆ ಏಳಲೇ ಇಲ್ಲ. ಈಗ ನಾನು ನಗುತ್ತಾ ಈಗ ಏನು ಹೇಳುತ್ತಿ ಎಂದೆ. ಅಡುಗೆ ಮನೆಯಲ್ಲಿನ ಹಾಲು ಉಕ್ಕುವ ಶಬ್ದ ಕೇಳಿ ಒಳಗಡೆ ಹೋಗಿ ಬಂದಳು. ನಾನು ಇನ್ನೂ ಎತ್ತಲು ಪ್ರಯತ್ನ ಮಾಡುತ್ತಲೇ ಇದ್ದೆ. ಬಂದವಳೇ ರೀ ಎಂದು ನಗುತ್ತಾ ಅಲ್ಲಿ ನೋಡಿ ಗೋಡೆಗೆ ಅದು ಸಿಕ್ಕಿ ಹಾಕಿ ಕೊಂಡಿದೆ ಎಂದು ನಗಲು ಶುರು ಮಾಡಿದಳು. ನಾನು ಆಮೇಲೆ ಸ್ವಲ್ಪ ಸರಿಸಿ ತುಂಬಾ ಆರಾಮವಾಗಿ ಎತ್ತಿ ಇಟ್ಟೆ. ಮನೆಯ ಎಲ್ಲ ಸ್ವಚ್ಚತಾ ಕಾರ್ಯಕ್ರಮ ಮುಗಿಸಿ, ಮಡದಿ ಮಾಡಿದ ಬಿಸಿ ಬೇಳೆ ಬಾತ್ ತಿಂದು ಸಂಜೆವರೆಗೆ ನಿದ್ದೆ ಮುಗಿಸಿ ಎದ್ದೆ.


ಎದ್ದೊಡನೆ ಕೈ ಕಾಲು ಮಾತನಾಡುತ್ತಾ ಇದ್ದವು. ಹೀಗಾಗಿ ಸ್ವಲ್ಪ ಒದರುತ್ತ ಇದ್ದೆ. ಅದನ್ನು ನೋಡಿ ವರ..ವರ.. ಎಂದು ಒದರಬೇಡಿ ಎಂದಳು. ಅದಕ್ಕೆ ವರ ವರ ಎಂದು ನಾನೇಕೆ ಒದರಲಿ ಬೇಕಾದರೆ ಕನ್ಯಾ.. ಕನ್ಯಾ ಎಂದು ಕಿರುಚುತ್ತೇನೆ ಎಂದು ಹೇಳಿ ಮತ್ತೊಮ್ಮೆ ಮಂಗಳಾರತಿ ಮಾಡಿಸಿಕೊಂಡಿದ್ದೆ. ಕಾಫೀ ಕೊಡುತ್ತಾ ರೀ.. ಮುಂದಿನ ವಾರ ಅಡುಗೆ ಮನೆ ಸ್ವಚ್ಛ್ ಮಾಡೋಣ ಎಂದಳು. ನಾನು ನನ್ನ ಮಗನ ಚಿಣ್ಣರ ಹಾಡು "ವಾರಕೆ ಏಳೆ ಏಳು ದಿನ, ಆಟಕೆ ಸಾಲದು ರಜದ ದಿನ" ವನ್ನು ಬದಲಿಸಿ "ವಾರಕೆ ಶನಿವಾರ ಒಂದು ದಿನ , ಸ್ವಚ್ಛತೆಗೆ ಸಾಲದು ಈ ಒಂದು ದಿನ" ಎಂದು ಹಾಡುತ್ತಾ ಕಾಫೀ ಹಿರಿ ಮುಗಿಸಿದ್ದೆ.


ಮತ್ತೆ ಲೇಖನದ ವಿಷಯ ನೆನೆಪು ಆಗಿ ಬರೆಯುತ್ತಾ ಕುಳಿತೆ. ನಾನು ಲೇಖನವನ್ನು ಒಂದು ಪೇಜ್ ನಾದರೂ ಬರೆಯುತ್ತೇನೆ. ಇವತ್ತು ಎಷ್ಟು ಬರೆದರು ಒಂದು ಪೇಜ್ ಆದ ಹಾಗೆ ಅನ್ನಿಸಲೇ ಇಲ್ಲ. ಏಕೋ ಅನುಮಾನವಾಗಿ ಹಳೆಯ ಲೇಖನ ತೆಗೆದೆ, ಅದು ಕೂಡ ಚಿಕ್ಕದಾಗಿ ಇತ್ತು. ಒಂದೆರಡು ಲೇಖನ ಓದಿದೆ ಪೂರ್ತಿ ವಿಷ್ಯ ಇತ್ತು. ಅಷ್ಟರಲ್ಲಿ ಮಡದಿ ನಿನ್ನೆ ಇಂದ ಸ್ವಲ್ಪ ಚಿಕ್ಕದಾಗಿ ಬರುತ್ತಿದೆ ನೋಡಿ ಏನಾಗಿದೆ? ಮಾನಿಟರ್ ಎಂದಳು. ಆಮೇಲೆ ತಿಳಿಯಿತು ಅವಳು ಅದರ ಸೆಟ್ಟಿಂಗ್ ಚೇಂಜ್ ಮಾಡಿದ್ದಾಳೆ ಎಂದು. ಅದನ್ನು ಸರಿ ಮಾಡಿದ ಮೇಲೆ, ದೊಡ್ಡದಾಗಿ ಕಂಡ, ನನ್ನ ಲೇಖನದ ಮೇಲೆ ಎಲ್ಲಿಲ್ಲದ ಪ್ರೀತಿ ಉಕ್ಕಿ ಬಂತು.


ಸಂಜೆ ಮಗನಿಗೆ ಪಾರ್ಕಿಗೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದೀರಿ, ಮತ್ತೆ ಕುಟ್ಟಲು ಶುರು ಮಾಡಿದ್ದೀರ ಎಂದಳು. ಪಾರ್ಕಿಗೆ ಹೊರಟೆವು. ಕೆಳಗಡೆ ಓನರ್ "ಏನ್ರೀ ಗೋಪಾಲ್ ಚೆನ್ನಾಗಿದ್ದೀರಾ, ಬೆಳಿಗ್ಗೆ ಬೂಕಂಪ ಆಗಿತ್ತು, ಆದರೆ ಯಾವ ಚ್ಯಾನೆಲ್ ನಲ್ಲಿ ತೋರಿಸಲೇ ಇಲ್ಲ ನೋಡಿ ಎಂದು ಮುಖ ಕಿವುಚಿದರು". ನನ್ನ ಮಡದಿ ನನ್ನ ಮುಖ ನೋಡಿ ಮುಸಿ ಮುಸಿ ನಗುತ್ತಿದ್ದಳು. ಅವಳನ್ನು ನೋಡಿ ನನ್ನ ಮಗ ಕೂಡ. ಪಾರ್ಕಿಗೆ ಹೋಗಿ ಸಂಜೆ ಬರುವ ವೇಳೆಯಲ್ಲಿ ಎಸ್.ಎಲ್.ವಿ ಗೆ ತೆರಳಿ ಒಂದಿಷ್ಟು ಬಿಳಿ ಗುಳಿಗೆ (ಇಡ್ಲಿ) ನುಂಗಿ ಮನೆಗೆ ಬಂದು ಕ೦ಟ ಪೂರ್ತಿ ಊಟ ಮುಗಿಸಿ, ಈ ಶನಿವಾರಗಳು ವಾರಕೆ ಎರಡು ಬಂದರೆ ಹೇಗೆ ಎಂದು ಯೋಚಿಸುತ್ತಾ, ನಿದ್ದೆಗೆ ಜಾರಿದೆ.


ಮುಂದಿನ ಶನಿವಾರ ಏನೇನು ಕಾದಿದೆಯೋ ಗೊತ್ತಿಲ್ಲ... ಮತ್ತೆ ಬರುತ್ತೇನೆ ಆ(ಈ) ಶನಿವಾರದ ಪೂರ್ತಿ ವಿವರದೊಂದಿಗೆ....ಆ(ಈ) ಎಂದು ಬರೆದಿದ್ದೇನೆ, ಎಂದು ನನ್ನ ಮಡದಿಗೆ ಮಾತ್ರ ಹೇಳಬೇಡಿ... ಅವಳು, ಇವನಿಗೆ ಆ..ಆ..ಇ ...ಈ ಕೂಡ ಬರುವುದಿಲ್ಲ ಎಂದು ತಿಳಿದುಕೊಂಡಾಳು...:-)).

Tuesday, January 11, 2011

ಬುರುಡೆ ಪುರಾಣ ....


ಮೊನ್ನೆ ತುಂಬಾ ಕೆಲಸವಿದ್ದ ಕಾರಣ, ಆಫೀಸ್ ನಿಂದ ಸ್ವಲ್ಪ ತಡವಾಗಿ ಹೋದೆ. ಮಡದಿ, ಮಗ ಇಬ್ಬರು ನಿದ್ದೆಯಲ್ಲಿ ಇದ್ದರು. ತೊಂದರೆ ಏಕೆ? ಮಾಡಬೇಕು ಎಂದು ಅವರನ್ನು ಎಬ್ಬಿಸದೇ, ನಾನೇ ಊಟ ಮಾಡಿ, ಬೆಡ್‌ರೂಮ್ ಗೆ ಹೋಗದೇ, ಹಾಲ್ ನಲ್ಲಿ ನಿದ್ದೆಗೆ ಜಾರಿದೆ. ಹಾಸಿಗೆ ಮೇಲೆ ಒರಗಿದ ಕೂಡಲೇ, ನಿದ್ರಾ ದೇವಿಗೆ ಶರಣಾಗಿ ಬಿಟ್ಟೆ. ಮಧ್ಯ ರಾತ್ರಿ ಯಾರೋ... ನನ್ನನ್ನು ಎಬ್ಬಿಸಿದ ಹಾಗೆ ಆಯಿತು. ಆ ಕಡೆ ಒರಗಿ ಮಲಗಿಕೊಂಡೆ. ಮತ್ತೆ ಬಡಿದು ಎಬ್ಬಿಸಿದ ಹಾಗೆ ಆಯಿತು. ಕಣ್ಣು ಬಿಟ್ಟೆ, ಚಾಕು ಹಿಡಿದು ಯಾರೋ.. ನಿಂತ ಹಾಗೆ ಅನ್ನಿಸಿತು. ನನ್ನ ಉಸಿರೇ ನಿಂತ ಹಾಗೆ ಆಗಿತ್ತು. ಪಕ್ಕದಲ್ಲಿ ಬೇರೆ ಮಡದಿ ಇಲ್ಲಾ, ಇದ್ದಿದ್ದರೆ ಸ್ವಲ್ಪ ಧೈರ್ಯ ಬರಬಹುದಿತ್ತು. ಜೋರಾಗಿ ಕಿರುಚೋಣ ಎಂದುಕೊಂಡರೂ, ಭಯದಿಂದ ಮತ್ತೆಲ್ಲಿ ಚಾಕುವಿನಿಂದ ಚುಚ್ಚಿ ಬಿಟ್ಟರೆ ಕಷ್ಟ ಎಂದು, ತೆರೆದ ಬಾಯಿಯನ್ನು ಹಾಗೆ ಬಿಟ್ಟು ಹೌಹಾರಿ ಸುಮ್ಮನಾದೆ. ಮತ್ತೆ ಅವರಿಗೆ ಏನು ಬೇಕು? ಎಂದು ಕೇಳಬೇಕು ಅನ್ನುವಷ್ಟರಲ್ಲಿ ಲೈಟ್ ಹತ್ತಿತ್ತು. ನೋಡುತ್ತೇನೆ.. ನನ್ನ ಮಡದಿ ಚಾಕುವಿನೊಂದಿಗೆ. ಹೆದರಿ, ಲೇ.. ಏನೋ ಸ್ವಲ್ಪ ಕೆಲಸ ಇತ್ತು ಎಂದು ತಡವಾಗಿ ಬಂದೆ ಅಷ್ಟೇ ಎಂದೆ. ರೀ... ಅದು ಅಲ್ಲ ಎಂದಳು. ಮತ್ತಿನ್ನೇನು?. ತರಕಾರಿ ಹೆಚ್ಚಬೇಕು ತಾನೇ ನಾಳೆ ಬೆಳಿಗ್ಗೆ ಹೆಚ್ಚುತ್ತೇನೆ, ಈಗ ಮಲಗಿಕೊಳ್ಳಲು ಬಿಡು ಎಂದೆ. ರೀ ಸುಮ್ಮನೇ ಈ ಚಾಕು ತೆಗೆದು ಕೊಳ್ಳಿ ಎಂದು ಚಾಕು ಕೈಯಲ್ಲಿ ಇಟ್ಟಳು.



ಆಗ ಹಳೆಯ ಕಾಲದ ವಸ್ತುಗಳೆ ಚೆನ್ನ ಎಂದನಿಸಿತು. ಮೊದಲು ತರಕಾರಿ ಹೆಚ್ಚಲು ಇಳಿಗೆ ಉಪಯೋಗಿಸುತ್ತಿದ್ದರು. ಏನೋ? ಹೆಚ್ಚಲು ಕಷ್ಟ ಆಗಬಹುದು ಎಂದು ಹೆಣ್ಣು ಮಕ್ಕಳು ತಾವೇ ಹೆಚ್ಚಿಕೊಳ್ಳುತ್ತಿದ್ದರು. ಆದರೆ ಈಗ ಚಾಕು, ಹೆಚ್ಚಲು ನಾವೇ ಬೇಕು. ಮತ್ತೆ ಮೊದಲು ರುಬ್ಬು ಗುಂಡಿನಿಂದ ಹಿಟ್ಟು ರುಬ್ಬ ಬೇಕಿತ್ತು. ಆದರೆ ಈಗ ಗಂಡನಿಂದ ಹಿಟ್ಟು ಗ್ರೈಂಡರ್ ನಲ್ಲಿ ಹಾಕಿಸಿ ರುಬ್ಬಿಸುತ್ತಾರೆ. ರುಬ್ಬದಿದ್ದರೆ ಅವರೇ ರುಬ್ಬುತ್ತಾರೆ ನಮ್ಮನ್ನು. ಬರಿ ಸ್ವಲ್ಪ ಮಾತ್ರ ವ್ಯತ್ಯಾಸ ರುಬ್ಬು ಗುಂಡು, ರುಬ್ಬು ಗಂಡ ಅರ್ಥವಾಯಿತು ತಾನೇ?....:-))).



ಚಾಕು ಹಿಡಿದು ಅಡುಗೆ ಮನೆಗೆ ಹೊರಟೆ. ರೀ... ಅಲ್ಲಿ ಅಲ್ಲ ಬನ್ನಿ ಇಲ್ಲಿ ಎಂದು ಬೆಡ್ ರೂಮಿಗೆ ಕರೆದುಕೊಂಡು ಹೋದಳು. ನೋಡುತ್ತೇನೆ ಬೆಡ್ ರೂಮಿನಲ್ಲಿ ತುಂಬಾ ಅಲಂಕರಿಸಿದ್ದಳು. ಮತ್ತೆ "ಹ್ಯಾಪೀ ಬರ್ತ್ ಡೇ ಟು ಯೂ" ಎಂದು ಮಗ, ಮಡದಿ ಇಬ್ಬರು ಚಪ್ಪಾಳೆ ತಟ್ಟಿದರು. ಮತ್ತೆ ಎದುರಿಗೆ ದೊಡ್ಡದಾದ ಕೇಕ್ ಬೇರೆ ಇತ್ತು. ಕ್ಯಾಂಡಲ್ ಆರಿಸಿ, ಕೇಕ್ ಕಟ್ ಮಾಡಿ ಆಯಿತು. ತುಂಬಾ ಖುಷಿ ಆಯಿತು.



ತುಂಬಾ ಖುಶಿಯಿಂದ, ಮರುದಿನ ಮಂಜನಿಗೆ ನಿನ್ನೆ ರಾತ್ರಿ ನಡೆದ ನನ್ನ ಬರ್ತ್‌ಡೇ ಪುರಾಣನ್ನೇಲ್ಲಾ ಕಕ್ಕಿಬಿಟ್ಟೆ. ನೀನು ಎಷ್ಟು ಘಂಟೆಗೆ ಹುಟ್ಟಿದ್ದು ಎಂದು ಕೇಳಿದ. ನಾನು ಆರು ಎಂದೆ. ಮಂಜ ಅದಕ್ಕೆ ಇದೇನು ಸಂಸ್ಕೃತಿನೋ ರಾತ್ರಿ ದೆವ್ವ ಏಳುವ ಸಮಯದಲ್ಲಿ ಬರ್ತ್‌ಡೇ ಮಾಡಿಕೊಂಡನಂತೆ ಎಂದು ಕಿಚಾಯಿಸಿದ. ಮತ್ತೆ ನಮ್ಮ ಸಂಸ್ಕೃತಿಯಲ್ಲಿ ದೀಪ ಬೆಳಗಿ ಆಚರಿಸಿದರೆ, ನೀನು ನೋಡಿದರೆ ದೀಪ ಆರಿಸಿ ಆಚರಿಸಿಕೊಂಡೆ ಎಂದ. ಹುಟ್ಟಿದ ದಿವಸ ಚಾಕು ಕೊಡೋ ನಾವು ಎಂತಹ ಭೂಪರು ಇರಬೇಕು ಎಂದ. ನಮ್ಮ ಸಂಸ್ಕೃತಿ ನಾವೇ ಕಾಪಾಡದಿದ್ದರೆ ಇನ್ನೂ ಯಾರು ಕಾಪಡಬೇಕು ಎಂದ. ಕೆಟ್ಟಿದ್ದು ಸುಧಾರಿಸಬಹುದು, ಆದರೆ ಒಳ್ಳೆಯದೇ ಕೆಟ್ಟರೆ ಏನು? ಮಾಡಬೇಕು ಎಂದ. ಅವನು ಹೇಳುತ್ತಿದ್ದರೆ ನಾನು ಏನು? ಹೇಳಬೇಕು ಎಂದು ಯೋಚಿಸದೇ ಅವನನ್ನು ನೋಡುತ್ತಾ ಕುಳಿತಿದ್ದೆ. ಪಶ್ಚ್ಯಾತ್ಯರು ನಮ್ಮ ಯೋಗ, ಆಯುರ್ವೇದ ಎಲ್ಲವನ್ನು ಅನುಸರಿಸುತ್ತಿದ್ದಾರೆ. ಆದರೆ ನಾವು ಅವರ ಸಂಸ್ಕೃತಿ ಅನುಸರಿಸಿ ಕೆಡುತ್ತಿದ್ದೇವೆ ಎಂದ. ಆಧುನಿಕತೆ ಎಂದು ನಮ್ಮ ಹಳೆಯ ಆಚರಣೆಗಳಿಗೆ ಮಣ್ಣೆರಚುತ್ತಿದ್ದೇವೆ ಎಂದ. ಈಗಿನದು ಆಧುನಿಕತೆ, ಆದರೆ ಆಗಿನದು "ಅದು+ನೀತಿ+ಕಥೆ" ಎಂದ.



ಮತ್ತೆ ನಿನಗೆ ಗೊತ್ತಾ, ಕೆಲ ಹಳೆಯ ಕಾಲದ ಜನಗಳಿಗೆ ತಮ್ಮ ಹುಟ್ಟು ಹಬ್ಬ ಎಂದು ಸಹಿತ ಗೊತ್ತಿಲ್ಲ. ಏಕೆ? ನಮ್ಮಷ್ಟಕ್ಕೆ ನಾವೇ ಇಷ್ಟು ಮುದುಕ ಅದೇವು ಎಂದು ಆಚರಣೆ ಮಾಡಿಕೊಳ್ಳಬೇಕು ನನಗೆ ಅರ್ಥ ಆಗುತ್ತಿಲ್ಲ. ಮತ್ತೆ ತಲೆಯಲ್ಲಿ ಇನ್ನಷ್ಟು ವಿಚಾರಗಳು. 34 ಆಯಿತು ಇನ್ನೂ ಮನೆ ತೆಗೆದುಕೊಂಡಿಲ್ಲ, ಕಾರು ಹೀಗೆಲ್ಲ ಎಂದ. ಹಳೆಯ ಕಾಲದ ಜನ ಪ್ರತಿ ವಾರ 'ಗೋ ಮೂತ್ರ' ತೆಗೆದು ಕೊಳ್ಳೂತ್ತಿದ್ದರು, ಆದರೆ ಈಗಿನ ಜನ 'ಗೋ' ಅಂಡ್ ಗೇಟ್ ಸಮ್ 'ಮಾತ್ರೆ' ಎಂದು ಹೇಳುತ್ತಾರೆ ಎಂದ. ಮೊದಲಿನ ಕಾಲದಲ್ಲಿ ಹೆಣ್ಣು ಮಕ್ಕಳು ವಾಂತಿ ಮಾಡಿಕೊಂಡರೆ ಖುಷಿಯಾಗಿ ಊರಿಗೆ ಸಿಹಿ ಹಂಚುತ್ತಿದ್ದರು. ಆದರೆ, ಈಗ ರಾತ್ರಿ ಪಾರ್ಟೀ ಮಾಡಿ ಬಂದಿರಬೇಕು ಎಂದು ಅರ್ಥೈಸಿಕೊಳ್ಳುತ್ತಾರೆ ಎಂದ. ಮನೆಯಲ್ಲಿ ಮಾಡಿದ ಶೆವಿಗೆ ಬಾತ್ ತಿನ್ನುವುದಿಲ್ಲ ಹೊರಗೆ ಹೋಗಿ ಚೈನೀಸ್ ನೂಡಲ್ಸ್ ತಿನ್ನುತ್ತಾರೆ. ಮನೆಯಲ್ಲಿ ಹೊಳಿಗೆಗೆ ಹಾಲು ಹಾಕುವಾಗ ಸ್ವಲ್ಪ ಕೆನೆ ಜ್ಯಾಸ್ತಿ ಬಿದ್ದರೆ, ಆಕಾಶವೇ ಕಳಚಿ ಬಿದ್ದ ಹಾಗೆ ಆಡುವ ಜನ, ಪೀಜಾ, ಬರ್ಗರ್ ನಲ್ಲಿ ಇರುವ ಕ್ರೀಮ್ ತಿಂದು ತುಂಬಾ ಚೆನ್ನಾಗಿದೆ ಎಂದು ಹೋಗಳುತ್ತಾರೆ. ಮೊದಲಿನ ಜನ ಒಳ್ಳೆಯದಾಗಲಿ ಎಂದು ಹಾರೈಸುತ್ತಾರೆ. ಆದರೆ ಈಗಿನ ಜನ ಹೌ ಓಲ್ಡ್ ಆರ್ ಯು ಎಂದು ಕೇಳುತ್ತಾರೆ. ಮತ್ತೆ ಇನ್ನೂ ಸ್ವಲ್ಪ ಅಲ್ಲೇ ಇದ್ದರೆ, ಇನ್ನೂ ತಲೆ ತಿನ್ನುತ್ತಾನೆ ಎಂದು ಬೇಗನೆ ಜಾಗ ಖಾಲಿ ಮಾಡಿದೆ.ಆಮೇಲೆ ತಿಳಿಯಿತು ಮಂಜ ತನ್ನ ಮಡದಿಯೊಂದಿಗೆ ಜಗಳ ಮಾಡಿಕೊಂಡು ಬಂದು ನನ್ನ ತಲೆ ತಿಂದಿದ್ದ ಎಂದು.



ಅವನಿಗೆ ನನ್ನ ಬರ್ತ್‌ಡೇ ಪುರಾಣ ಹೇಳೋಕೆ ಹೋಗಿ, ನನ್ನ ಬುರುಡೆಯಲ್ಲಿ ಹುಳ ಬಿಟ್ಟುಕೊಂಡು ಬಂದಿದ್ದೆ. ಅದಕ್ಕೆ ಇದನ್ನು ಬುರುಡೆ ಪುರಾಣ ಎಂದು ಅಂದಿದ್ದು....

Wednesday, January 5, 2011

ಹೊಟ್ಟೆ ಕೆರೆಯ ಮೇಲಿನ ಕಟ್ಟೆ....

ನನ್ನ ಅಕ್ಕನ ಮಗಳ ಮದುವೆಗೆ ಎಂದು ಧಾರವಾಡಕ್ಕೆ ಹೋಗಿದ್ದೆ. ಅಲ್ಲಿ ಕೆಲ ಚಿಕ್ಕವರು ದೊಡ್ಡವರಿಗೆ ನಮಸ್ಕಾರ ಮಾಡುವ ದೃಶ್ಯ ನನಗೆ ಕಾಣಿಸಿತು. ನಾನು ಹೋದೊಡನೆಯೆ, ನನಗೆ ಅಮ್ಮ, ಇವರು ನನ್ನ ಮಾವನ ಮಗ ಎಂದು ಪರಿಚಯ ಮಾಡಿಕೊಟ್ಟರು. ಈಗ ನಾನು ಅವ್ರಿಗೆ ನಮಸ್ಕಾರ ಮಾಡಬೇಕೋ ಅಥವಾ ಅವರು ನನಗೆ ನಮಸ್ಕಾರ ಮಾಡಬೇಕೋ ಎಂಬುದು ಸೋಜಿಗದ ಸಂಗತಿ. ಕಡೆಗೆ ಅವರೇ ನನಗೆ ನಮಸ್ಕಾರ ಮಾಡಲು ಬಂದರು. ಅದಕ್ಕೆ ನನ್ನ ಅಮ್ಮ ಲೇ ಅವನು ದೊಡ್ಡವನು ಕಣೋ ನೀನೆ ನಮಸ್ಕಾರ ಮಾಡು ಎಂದು ಫರ್ಮಾನು ಹೊರಡಿಸಿದರು. ನಾನು ಮನಸಿನಲ್ಲಿ ಇದೊಳ್ಳೇ ಸಂಪ್ರದಾಯ ಎಂದು ಬಗ್ಗಿ ನಮಸ್ಕರಿಸಿದೆ.

ಆಮೇಲೆ ನಾನು ಅಮ್ಮನಿಗೆ, ನಾನು ಯಾರಿಗೂ ನಮಸ್ಕಾರ ಮಾಡುವುದಿಲ್ಲ... ನನಗೆ ಯಾರು ಮಾಡುವುದು ಬೇಡ ಎಂದು ಹೇಳಿದೆ. ಅದು ಹೇಗೆ? ಆಗುತ್ತೆ ನೀನು ನಮಸ್ಕಾರ ಮಾಡಲೇ ಬೇಕು ಎಂದರು. ನಮಸ್ಕಾರ ಮಾಡಿ ಮಾಡಿ ಸಾಕಾಗಿತ್ತು. ಹೊಟ್ಟೆ ತಾಳ ಅನ್ನುವುದಕ್ಕಿಂತ ತಮಟೆ ಬಾರಿಸುತಿತ್ತು. ಕೆಲವೊಮ್ಮೆ ಹಸಿವು ಆದಾಗ ನಾದಮಯವಾಗಿ ಹಾಡುವುದು ಕೂಡ, ಸಧ್ಯ ಆಕಾಶವಾಣಿಯವರಿಗೆ ಗೊತ್ತಿಲ್ಲ. ಚಿಕ್ಕವನಿಗಿದ್ದಾಗ ಲೌಡ್ ಸ್ಪೀಕರ್ ಏನಾದರೂ ನುಂಗಿದ್ದೆ ಅಂತ ಕಾಣುತ್ತೆ. ಅಕ್ಕ ಪಕ್ಕದವರಿಗೂ ನನ್ನ ಹೊಟ್ಟೆ ಹಾಡಿದ್ದು ತಿಳಿಯುತ್ತೆ. ಎಲ್ಲರಿಗಿಂತ ಬೇಗನೆ ತಿಂಡಿಗೆ ಹೋಗಿ ನಿಂತೆ. 20 ಬಿಳಿ ಗುಳಿಗೆ (ಇಡ್ಲಿ) , ಎರಡು ಕೇಸರಿ ಬಾತ ತಿಂದೆ. ಹೊಟ್ಟೆ ತುಂಬಿದ ಹಾಗೆ ಅನ್ನಿಸಲೇ ಇಲ್ಲ. ಹೊಟ್ಟೆ ತುಂಬಾ ಜಾಗ ಇರುವದರಿಂದ ಇಡ್ಲಿ, ಕೇಸರಿ ಬಾತ್ ಅಲ್ಲಿ.. ಇಲ್ಲಿ.. ಜೋಗಿಂಗ್ ಮಾಡುತ್ತಿರಬಹುದೋ ಏನೋ. ಮತ್ತೆ ಹೋಗಿ ಇಡ್ಲಿ ಎಂದೆ. ಅಲ್ಲಿ ಇಡ್ಲಿ ಹಾಕುವ ಮನುಷ್ಯ ಖಾಲಿ ಪಾತ್ರೆ ನೋಡಿ, ಎಲ್ಲ ಇಡ್ಲಿ ನಾನೇ ಖಾಲಿ ಮಾಡಿದ್ದೇನೋ ಎಂಬ ರೀತಿಯಲ್ಲಿ, ನನ್ನನ್ನು ದುರುಗುಟ್ಟಿ ನೋಡಿದ. ಮತ್ತೆ ಹತ್ತು ಇಡ್ಲಿ ತಂದು ಹಾಕಿದ. ಅದರಲ್ಲಿ ಒಂದು ಇಡ್ಲಿ ಮುರಿದಿತ್ತು. ಅದನ್ನು ನೋಡಿ ನನಗೆ ತುಂಬಾ ಕೋಪ ಬಂದು. ಇದೇನು ಸರ್ ಇಡ್ಲಿ ಯಾರೋ ತಿಂದಿರೋ ಹಾಗಿದೆ ಎಂದು ತಮಾಷೆ ಮಾಡಿದೆ. ಓ... ಅದಾ ತೆಗೆಯುವ ಸಮಯದಲ್ಲಿ ಮುರಿದಿದೆ ಎಂದು ನಗುತ್ತಾ ನಿಂತ. ನಾನು ಮತ್ತೊಂದು ಇಡ್ಲಿ ಹಾಕುತ್ತಾನೆ ಎಂದು ಎಣಿಸಿದರೆ ಹಾಕಲೆ ಇಲ್ಲ. ಮತ್ತೆ ಎರಡು ಲೋಟ ಕಾಫೀ ಕುಡಿದು ಜಾಗ ಖಾಲಿ ಮಾಡಿದೆ.

ಬೇಗನೆ ಆರಕ್ಷತೆ, ಊಟ ಮುಗಿಸಿ ಟ್ರೈನ್ ಹತ್ತಿದೆ. ಟ್ರೈನ್ ಹೆಸರು ಜನಶತಾಬ್ದಿ ಅನ್ನುವುದಕ್ಕಿಂತಲೂ ಜನಾಹಿತಾಬ್ದಿ.. ಟ್ರೈನ್ ನಲ್ಲಿ ಐದೈದು ನಿಮಿಷಕ್ಕೆ ತಿಂಡಿ ಕಾಫೀ ಬರೋದು. ಆದರೂ ಈ ಬಾರಿ ಏನೂ? ತಿನ್ನಬಾರದು ಎಂದು ತೀರ್ಮಾನಿಸಿ ಬಂದಿದ್ದೆ. ಆದರೂ ಎಲ್ಲಾ ಸಪ್ಲೈಯರ್ ನನ್ನ ಹೊಟ್ಟೆ ನೋಡಿ, ಸರ್.. ಇಡ್ಲಿ ಬೇಕಾ?, ದೋಸೆ ಬೇಕಾ? ಎಂದು ಕೇಳುತ್ತಾ ಹೋಗುತ್ತಿದ್ದರು. ಬೇಡ.. ಬೇಡ.. ಎಂದು ಹೇಳಿ ಸಾಕಾಗಿ ಮತ್ತೆ ಹೊಟ್ಟೆ ತಾಳಮಯವಾಗಿ ನಾದ ಲಹರಿ ಶುರು ಮಾಡಿತ್ತು. ಪಕ್ಕದ ಸೀಟ್ ನಲ್ಲಿ ಇರುವ ಮನುಷ್ಯ ಎದ್ದು ಪಿಳಿ.. ಪಿಳಿ.. ಎಂದು ಅತ್ತ.. ಇತ್ತ.. ನೋಡಿ, ಮತ್ತೆ ಸುಮ್ಮನೇ ನಿದ್ದೆಗೆ ಜಾರಿದ. ಹೀಗೆ ಒಮ್ಮೆ ಪಕ್ಕದ ಮನೆಯ ಆಂಟಿ, ನನ್ನ ಹೊಟ್ಟೆ ಸಂಗೀತ ಕೇಳಿ, ನಲ್ಲಿಯಲ್ಲಿ ನೀರು ಬಂದಿದೆ ಎಂದು, ಕೊಡ ತೆಗೆದುಕೊಂಡು ಹೋಗಿ ನಿರಾಸೆಯಲ್ಲಿ ತೇಲುತ್ತ ಬಂದಿದ್ದರು ಪಾಪ...

ಅಷ್ಟರಲ್ಲಿ ಹರಿಹರ ಸ್ಟೇಶನ್ ಬಂತು ನನ್ನ ಪಕ್ಕದ ಸೀಟ್ ಗೆ ಒಂದು ಸುಂದರ ಹುಡುಗಿ ಬಂದು ಕುಳಿತಳು. ನಾನು ಸುಮ್ಮನೇ ನಿದ್ದೆ ಮಾಡಿದರೆ ಆಗುತ್ತೆ ಎಂದು ನಿದ್ದೆ ಮಾಡಹತ್ತಿದ್ದೆ. ಸ್ವಲ್ಪ ಸಮಯದ ನಂತರ ನನ್ನ ಭುಜ, ಹೊಟ್ಟೆ ಸ್ಪರ್ಶಿಸಿದ ಹಾಗೆ ಅನ್ನಿಸಿತು. ಆಹಾ.. ಹುಡುಗಿ ಎಂದು ಸುಮ್ಮನೇ ಕಣ್ಣು ಮುಚ್ಚಿ ಮಲಗಿಕೊಂಡಿದ್ದೆ. ಮತ್ತೆ ಅದೇ ಮಿಸುಗಾಟ... ಕಡೆಗೆ ಕಣ್ಣು ತೆಗೆದೆ. ನನ್ನದೇ ತದ್ರೂಪ ಎಂದನಿಸಿ ಬಿಟ್ಟಿತು. ಆಮೇಲೆ ತಿಳಿಯಿತು ಅವರು ಆ ಹುಡುಗಿಯ ಅಪ್ಪ. ಅವರಿಬ್ಬರೂ ಸೀಟ್ ಚೇಂಜ್ ಮಾಡಿದ್ದಾರೆ ಎಂದು.

ಕಡೆಗೆ ಇನ್ನೂ ಈ ಸಂಗೀತ ಕೇಳಲು ಆಗುವುದಿಲ್ಲ ಎಂದು ಯೋಚಿಸಿ, ದೋಸೆ ತೆಗೆದುಕೊಂಡೆ. ಸಪ್ಲೈಯರ್ ದೋಸೆನಾ ಸ್ನ್ಯಾಕ್ ಟ್ರೇ ಬದಲು ಹೊಟ್ಟೆ ಮೇಲೆ ಇಟ್ಟು ದುಡ್ಡು ತೆಗೆದುಕೊಂಡು ಹೋದ. ಮತ್ತೆ ಇಡ್ಲಿ, ವೆಜಿಟೆಬಲ್ ಪಲಾವ್, ವೇಜ್ ಕಟ್ಲೇಟ್ ...ಕಾಫೀ,ಟೀ,ಟೊಮ್ಯಾಟೋ ಸೂಪ್ ಎಲ್ಲವೂ ಸ್ವಾಹ ಮಾಡಿದ್ದೆ. ಕಡೆಗೆ ಸಪ್ಲೈಯರ್ ನನ್ನನ್ನು ಕೇಳದೇ ಒಂದು ಪ್ಲೇಟ್ ಇಟ್ಟು ಹೋಗಿಬಿಡುತ್ತಿದ್ದ. ಇನ್ನೂ ಸ್ವಲ್ಪ ಅಲ್ಲೇ ಇದ್ದರೆ, ಬಾಯಲ್ಲಿ ತುರುಕಿ, ಕಿಸಿಯಿಂದ ದುಡ್ಡು ತೆಗೆದುಕೊಂಡು ಹೋಗುವ ಆಸಾಮಿ...

ಮತ್ತೆ ಹಲವು ಬಾರಿ ನನ್ನ ಮಡದಿಗೆ ಊಟದ ಸಮಯದಲ್ಲಿ, ನಾನು ಸಂಜೆಗೆ ತಿಂಡಿ ಏನೇ? ಎಂದು ಕೇಳಿದ್ದು ಇದೆ. ಅದಕ್ಕೆ ನನ್ನ ಮಡದಿ ಮುಸುರಿ ಕೈ ಎಂದು ಯೋಚಿಸದೇ ಹಣಿ.. ಹಣಿ.. ಗಟ್ಟಿಸಿ ಕೊಳ್ಳುತ್ತಾಳೆ. ಇದಕ್ಕೆ ಇರಬೇಕು ನನ್ನ ಮಡದಿ ನಿಮ್ಮ "ಹೊಟ್ಟೆ ಕೆರೆಯ ಮೇಲಿನ ಕಟ್ಟೆ" ಎಂದು ಅನ್ನುತ್ತಿದಿದ್ದು. ಮತ್ತೆ ಅಮ್ಮ ನೀನು "ಕಸಾ ತಿನ್ನುವವನು, ನಿನಗೆ ತುಸಾ ಏನು ಈಡು" ಎಂದು ಹೇಳುತ್ತಾರೆ.

ಮತ್ತೆ ಬೆಂಗಳೂರು ಸ್ಟೇಶನ್ ಬಂತು. ಮನೆಗೆ ಹೋದವನೆ ಬಹಿರ್ದೇಸೆಗೆ ಹೋಗಬೇಕು ಎಂದು ಅಂದುಕೊಂಡಾಗ, ಮಗ ಟು.. ಟು.. ಎಂದ, ನಾನು ಆಯಿತು ಎಂದು, ಅವನ ಚಡ್ಡಿ ಕಳೆಯುತ್ತಿದ್ದೆ. ಅಷ್ಟರಲ್ಲಿ ನನ್ನ ಮಡದಿ ರೀ ಅವನು ನಿಮ್ಮ ಜೊತೆ ಚಾಳಿ ಬಿಟ್ಟಿದ್ದಾನೆ ಎಂದು ಹೇಳುತ್ತಿದ್ದಾನೆ ಎಂದಳು. ಕಡೆಗೆ ಸರಾಗವಾಗಿ ನನ್ನ ಕೆಲಸ ಮಾಡಿ ಬಂದು ಮತ್ತೆ ಊಟಕ್ಕೆ ಹಾಜಾರ್ ಆದೆ.

ಅದೇನೋ ಗೊತ್ತಿಲ್ಲ, ದೇವರು ನನಗೆ ಸಾಕಷ್ಟು ತಿನ್ನ'ಲಿ' ಎಂಬ 'ವರ' ಕೊಟ್ಟು ಈ "ಲಿವರ್" ಕರುಣಿಸಿದ್ದಾನೋ ಗೊತ್ತಿಲ್ಲ... ಇನ್ನೂ ಡೌಟ್ ಪಡುವ ಅವಶ್ಯಕತೆ ಇಲ್ಲ. ಇಷ್ಟೊತ್ತು ನಿಮ್ಮ ತಲೆ ತಿಂದಿದ್ದೇನೆ...ಆದರೂ ಹೊಟ್ಟೆಯಲ್ಲಿ ಸ್ವಲ್ಪ ತಾಳ ಹಾಕುತ್ತಿದ್ದೆ, ಮತ್ತೇನಾದರೂ ಸಿಗುತ್ತಾ ಎಂದು ಫ್ರಿಡ್ಜ್ ತೆಗೆದೆ....

Wednesday, December 29, 2010

ಸೀರೀಯಸ್‌ನೆಸ್ ....

ತುಂಬಾ ಸೀರೀಯಸ್ ಆಗಿ ಕುಳಿತು ಒಂದು ಹಾಸ್ಯ ಲೇಖನ ಬರೆಯುತ್ತಿದ್ದೆ. ನನ್ನ ಮಡದಿ "ಏನ್ರೀ ನಿಮಗೆ ಸೀರೀಯಸ್‌ನೆಸ್ ಇಲ್ಲವೇ.. ಇಲ್ಲ.." ಮನೆಗೆ ಅತಿಥಿಗಳು ಬಂದಿದ್ದಾರೆ. ನೀವು ನೋಡಿದರೆ ಆ ಪೆನ್ನು,ಪುಸ್ತಕ ಹಿಡಿದು ಕುಳಿತು ಬಿಟ್ಟಿದ್ದೀರಾ? ಎಂದಳು. ಇದನ್ನು ಮೊದಲನೆ ಬಾರಿ ಹೇಳಿದ್ದರೆ ಸ್ವಲ್ಪ ಸೀರೀಯಸ್ ಆಗಿ ತೆಗೆದುಕೊಳ್ಳಬಹುದಿತ್ತು. ಆದರೆ ಇದು ಎಷ್ಟನೆ ಬಾರಿ ಎಂಬುದು ನನಗೆ ತಿಳಿದಿಲ್ಲ...ಅದಕ್ಕೆ ಅಂತ ಒಂದು ಕಂಪ್ಯೂಟರ್ ನೇಮಿಸಿದರು ಲೆಕ್ಕ ಸಿಗುವುದಿಲ್ಲ. ಮೊದ ಮೊದಲು ಅಪ್ಪ ಕೂಡ ಇದನ್ನೇ ಹೇಳುತ್ತಿದ್ದರು. "ಲೇ ಕತ್ತೆ ಅಷ್ಟು ವಯಸ್ಸು ಆಯಿತು, ಯಾವಾಗೆ ಬರುತ್ತೋ ಸೀರೀಯಸ್‌ನೆಸ್" ಅಂತ. ಅದೇನೋ ಗೊತ್ತಿಲ್ಲ ಇಂತಹ ಅಪವಾದಕ್ಕೆ ನಾನು ಗುರಿಯಾಗುತ್ತೇನೋ ಅಥವಾ ಅಪವಾದ ನನ್ನನ್ನು ಗುರಿ ಮಾಡಿ ಕೆಲಸ ಮಾಡುತ್ತೋ ಇದುವರೆಗೂ ಅರಿಯದ ಸಂಗತಿಯಾಗಿದೆ.

ಆದರೂ ಹೆಂಡತಿ ಹೇಳಿದ್ದು ನನಗೆ ಸರಿ ಬರಲಿಲ್ಲ. ಏಕೆ? ಎಂದರೆ ಸೀರೆ + ಎಸ್(Yes) + ನೆಕ್ಸ್ಟ್(Next ಏನು? ಬೇಕು ಹೇಳು) {ಸೀರೀಯಸ್‌ನೆಸ್} ಎಷ್ಟು ಬಾರಿ ತೋರಿಸಿಲ್ಲ. ಇದು ಅನ್ಯಾಯ ಅಲ್ಲವೇ...?. .ಈ ಸೀರೀಯಸ್‌ನೆಸ್ ಎಲ್ಲಿಯಾದರೂ ಕೆ.ಜಿ ಅಥವಾ ಲೀಟರ್ ಲೆಕ್ಕದಲ್ಲಿ ಕೊಳ್ಳಲು ಸಿಗುತ್ತಾ ಎಂದು ಅಂತರ್ಜಾಲ ಪೂರ್ತಿ ತಡಕಾಡಿದೆ. ಅದನ್ನು ಮಾರುವವರಿಗೆ ಸ್ವಲ್ಪ ಕೂಡ ಸೀರೀಯಸ್‌ನೆಸ್ ಬೇಡವೇ, ಅದರ ಜಾಹೀರಾತು ಹಾಕಬೇಕು ಎಂದು. ಕಡೆಗೆ ಸಿಗಲೇ ಇಲ್ಲ...:-(.

ನಾನು ಅರಿತ ಪ್ರಕಾರ ಸೀರೀಯಸ್‌ನೆಸ್ ಕಂಡಿದ್ದು ಬರಿ ಪೇಶೆಂಟ್ ಗಳಲ್ಲಿ ಮಾತ್ರ, ಅದು ಡಾಕ್ಟರ್ ಗೆ ಕೂಡ ಇರುತ್ತೆ, ಏಕೆಂದರೆ? ಅಂತವರನ್ನು ಅವರು ಗುಣ ಪಡಿಸುತ್ತಾರಲ್ಲ ಅದಕ್ಕೆ.

ನನಗೆ ಚಿಕ್ಕಂದಿನಿಂದಲೂ ಎಲ್ಲ ವಿಷಯಗಳನ್ನು ತುಂಬಾ ಹಗುರವಾಗಿ ತೆಗೆದುಕೊಳ್ಳುವ ಸ್ವಭಾವ. ಅದೇ "ಹುಟ್ಟಿದ ಗುಣ, ಸುಟ್ಟರೂ ಹೋಗುವುದಿಲ್ಲ" ಅನ್ನುತ್ತಾರೆ ಹಾಗೆ. ಅದು ಇನ್ನೂ ಹಾಗೆ ಇದೆ. ನನ್ನ ಸದಾ ನಗು ಮುಖ ಇರುವದರಿಂದ, ನನ್ನ ಒಬ್ಬ ಗೆಳೆಯ ಅದಕ್ಕೆ ನನ್ನನ್ನು ಹಸ್ಮುಖ ಎಂದು ಹೇಳುತ್ತಿದ್ದ ( ಗೋಪಾಲ್ ನಾಮಧೇಯಕ್ಕೆ ಅನುಗುಣವಾಗಿ ಹಸುವಿನ ಹಾಗೆ ಇರುವ ಮುಖ ಎಂದು ಭಾವಿಸಿರಲಿಲ್ಲ ಎಂದು ಅಂದುಕೊಂಡಿದ್ದೇನೆ). ನನ್ನ ಮದುವೆ ಸಮಯದಲ್ಲಿ, ಅದೇ ಗೆಳೆಯ ಈಗಾದರೂ ಸಲ್ಪ ಗಂಭೀರವಾಗಿ ಇರುವದನ್ನು ಕಲಿ ಎಂದು ತಿಳುವಳಿಕೆ ಅನುಗ್ರಹಿಸಿದ. ಅದು ಹೇಗೆಂದು ನನಗೆ ಅರ್ಥ ಆಗಲಿಲ್ಲ. ಮುಖ ಗಂಟಿಕ್ಕಿ ಮದುವೆ ಮಾಡಿಕೊಳ್ಳುವುದೇ ಎಂದು ಯೋಚಿಸಿದೆ.

"ಅಳುವ ಗಂಡನ್ನು ನಂಬಬಾರದು ಮತ್ತೆ ನಗುವ ಹೆಣ್ಣನ್ನು " ಎಂಬ ಗಾದೆ ಇದೆ. ನನ್ನ ನಗುವಿಗೆ ಒಬ್ಬ ಹುಡುಗಿ ಸಾತ್ ನೀಡಿದ್ದಳು. ಇವನಿಗೆ ಯಾವ ಸುಂದರಿ ಸಾತ್ ನೀಡಿದಳು,ಎಲ್ಲೋ ಪ್ರಾಣಿಸಂಗ್ರಹಾಲಯದಲ್ಲಿ ಇರಬಹುದು ಎಂದು ಅಂದುಕೊಂಡಿರ...ಸತ್ಯವಾಗಿ ಒಳ್ಳೇ ಸರಳ ಸಹಜ ಸುಂದರಿ.. ನಮ್ಮ ಮಂದಹಾಸ ಮಧುರವಾಗಿ ಬಹಳ ದಿನ ನಡೆದಿತ್ತು. ಅದೇನೋ ದೊಡ್ಡವರು ಅನ್ವೇಷಿಸಿದ ಗಾದೆಗೆ ವಿರುದ್ಧವಾಗಿ ನಡೆದರೆ ದೊಡ್ಡವರು ಬಿಡುತ್ತಾರೆಯೇ...ತಮ್ಮ ಗಾದೆ ಸತ್ಯವಾಗಿರಿಸಿ, ನನ್ನನ್ನು ಆ ಹುಡುಗಿಯ ತ'ಗಾದೆ'ಗೆ ಬರದಂತೆ ನೋಡಿಕೊಂಡರು.

ನನ್ನ ಒಬ್ಬ ಗೆಳೆಯನಿಗೆ ಎಲ್ಲರಿಗಿಂತ ಮೊದಲೇ ಮದುವೆ ಮಾಡಲು ನಿಶ್ಚಯಿಸಿದ್ದರು. ಮದುವೆ ಸಮಯದಲ್ಲಿ, ಅವರ ಅಪ್ಪ ನನಗೆ, ನೋಡು ಈಗ ನನ್ನ ಮಗ ದಾರಿಗೆ ಬರುತ್ತಾನೆ. ಮೊದಲೇ ಉಡಾಳ್.. ಈಗ ಸ್ವಲ್ಪ ಸೀರೀಯಸ್‌ನೆಸ್ ಬರುತ್ತೆ ಎಂದರು. ಮದುವೆ ಆದ ಮೇಲೆ ಸೀರೀಯಸ್‌ನೆಸ್ ಬಂತೋ ಇಲ್ಲವೋ ಗೊತ್ತಿಲ್ಲ, ಆದರೆ ಒಂದೇ ವರ್ಷದಲ್ಲಿ ಅವನಿಗೆ ಅವಳಿ-ಜವಳಿ ಎರಡು ಮಕ್ಕಳು ಮಾತ್ರ ಬಂದವು.

ಒಮ್ಮೆ ಮೈಸೂರಿನಲ್ಲಿ ಇರುವಾಗ, ಅಲ್ಲಿ ಕೆಲಸ ಮಾಡುವ ಒಬ್ಬ ಅಕೌಂಟೆಂಟ್ ಬಂದು ಏನ್ರೀ? ಮಿಲ್ಕ್ ಬಿಲ್ಲು ತಪ್ಪಾಗಿ ಬಂದಿದೆ ಎಂದರು. ನಾನು ನಗುತ್ತಾ ಅಷ್ಟೇನಾ? ಎಂದೆ. ಅಷ್ಟಕ್ಕೇ ಅಪಾರ್ಥ ಮಾಡಿಕೊಂಡು ಹೋಗಿ ಮ್ಯಾನೇಜರ್ ಗೆ ಗೋಪಾಲ್ ಅವರಿಗೆ ಸ್ವಲ್ಪ ಕೂಡ ಸೀರೀಯಸ್‌ನೆಸ್ ಇಲ್ಲ ಎಂದು ಕಂಪ್ಲೇಂಟ್ ಮಾಡಿದ್ದರು. ಆಮೇಲೆ ಮ್ಯಾನೇಜರ್ ನನ್ನ ಮೇಲೆ ತಮ್ಮ ಅಧರದಿಂದ ಮಳೆ ಸುರಿಸಿ ಕಳುಹಿಸಿದ್ದರು.

ನಾನು ಹುಬ್ಬಳ್ಳಿಯಲ್ಲಿ ಕೆಲಸ ಮಾಡುವ ಸಮಯದಲ್ಲಿ ಅಲ್ಲಿಯ ಮ್ಯಾನೇಜರ್ ನನಗೆ ಒಂದು ಕೆಲಸ ಮಾಡಲು ಹೇಳಿದರು ಮತ್ತು ಅದಕ್ಕೆ ಎಷ್ಟು ದಿವಸ ಬೇಕು ಎಂದು ಕೇಳಿದರು. ನಾನು ನಗುತ್ತಾ ಎರಡು ದಿವಸ ಎಂದೆ. ಅದಕ್ಕೆ ಆ ಮನುಷ್ಯ ಅದು ಕಡಿಮೆ ಆಯಿತು ಎಂದು ತಿಳಿದನೋ ಅಥವಾ ಜ್ಯಾಸ್ತಿಯೋ ತಿಳಿಯಲಿಲ್ಲ. ಮತ್ತೆ ಎರಡು ದಿವಸ ಎಂದು ಕೇಳಿದರು. ಅದಕ್ಕೆ ನಾನು ಒಂದು ಎಂದೆ. ಮತ್ತೆ ಅವರು ಒಂದು ದಿವಸ ಎಂದು ಕೇಳಿದರು. ನಾನು ಅರ್ಧ ದಿವಸ ಎಂದೆ. ಏಕೆಂದರೆ ನಾನು ನನ್ನ ಮೇಲಿನ ನಂಬಿಕೆಗಿಂತ ನನ್ನ ಪ್ರೀತಿಯ ಶ್ರೀ ರಾಮನ ಮೇಲೆ ಇರುವ ಅಪಾರ ನಂಬಿಕೆಯಿಂದ(ನೆಡೆಸುವವನು ಅವನು ತಾನೇ).... ಮತ್ತೆ ಅರ್ಧ ದಿವಸ ಎಂದರು. ಈಗಲೇ ಮಾಡಿ ಕೊಡುತ್ತೇನೆ ಎಂದೆ. ಅದೇನೋ ಗೊತ್ತಿಲ್ಲ ನನ್ನ ಜೊತೆ ಜಗಳವಾಡಿ ಹೊರಟು ಹೋದರು. ಮತ್ತೆ ಅದನ್ನು ಎರಡು ದಿನಗಳಲ್ಲಿ ಪೂರ್ತಿ ಗೊಳಿಸಿ ಅವರಿಗೆ ಹೇಳಿದ್ದೆ.

ಹಾಗೆಂದು ನನಗೆ ಸೀರೀಯಸ್‌ನೆಸ್ ಇಲ್ಲವೇ ಇಲ್ಲ ಎಂದು ಅಲ್ಲ...ನನಗೆ ತಿಂದಿದ್ದು ಅಜೀರ್ಣ ಆಗಿ ದಾರಿತಪ್ಪಿದಾಗ ಮಾತ್ರ ಸ್ವಲ್ಪ ಸೀರೀಯಸ್‌ನೆಸ್ ತಾನಾಗೇ ಬರುತ್ತೆ.

Tuesday, December 28, 2010

ಪುಟ್ಟಿ ಗಂಡ ಹೊಟ್ಟೆ ತುಂಬಾ ಉಂಡ....

ನನ್ನ ಪೋಸ್ಟ್ ಪೇಡ್ ಮೊಬೈಲ್ ಬಿಲ್ಲು ನೋಡಿ, ಏನೇ? ಇದು ಎಂದು ಕೇಳಿದೆ. ಅದಕ್ಕೆ.. ನನ್ನ ಮಡದಿ ಅದು ಮೊಬೈಲ್ ಬಿಲ್ಲು ಎಂದಳು. ನಾನೆಲ್ಲಿ ಹೇಳಿದೆ ಕಾಮನಬಿಲ್ಲು ಅಂತ ಎಂದೆ. ಕಾಮನ ಬಿಲ್ಲು ಅಲ್ಲಾರಿ ಅದು ಕಾಮಣ್ಣನ ಬಿಲ್ಲು ಇರಬಹುದು ಎಂದು ಹೀಯಾಳಿಸಿದಳು. ಓ ಅಂದ ಹಾಗೆ ಇವತ್ತು ಆಫೀಸ್ ನಿಂದ ಬರುವ ಸಮಯದಲ್ಲಿ ಕಾಮನಬಿಲ್ಲು ಸಿ ಡಿ ತೆಗೆದುಕೊಂಡು ಬನ್ನಿ, ನನಗೆ ಆ ಸಿನೆಮಾ ಅಂದರೆ ತುಂಬಾ ಇಷ್ಟ ಎಂದು ಮಾತು ಮರೆಸಲು ನೋಡಿದಳು. ನೀನು ಹೀಗೆ ಫೋನ್ ಯೂಸ್ ಮಾಡ್ತಾ ಇದ್ದರೆ, ನಾನು ಬಿಲ್ಲು ಹಿಡ್ಕೊಂಡು ಕಾಡಿಗೆ ಹೋಗಬೇಕಾಗುತ್ತೆ ಎಂದೆ. ನಾನೊಬ್ಬನೇ ಅಲ್ಲ ನಿನ್ನನ್ನು ಕರೆದುಕೊಂಡು ಹೋಗುತ್ತೇನೆ. ಶ್ರೀ ರಾಮನ ಜೊತೆ ಸೀತಾ ಮಾತೆ ಹೋಗಲಿಲ್ಲವೆ ಹಾಗೆ ಎಂದೆ. ಓ.. ನಾನು ಬರಲ್ಲಪ್ಪಾ ಬೇಕಾದರೆ ನೀವು ಹೋಗಿ ಬನ್ನಿ. ಬರುತ್ತಾ ಸ್ವಲ್ಪ ಸೀಬೆ ಹಣ್ಣು, ಕಾಯಿ ಪಲ್ಯ, ಟೊಮೇಟೊ, ಈರುಳ್ಳಿ ಇದ್ದರೆ ತೆಗೆದುಕೊಂಡು ಬನ್ನಿ ಎಂದಳು. ದುಡ್ಡು ಏನು? ಮೇಲಿಂದ ಉದುರುತ್ತಾ ಎಂದು ಕೇಳಿದೆ. ಕಾಡಿನಲ್ಲಿ ಹಾಗೆ ಬೆಳೆದಿರುತ್ತೆ ಕಿತ್ತು ಕೊಂಡು ಬನ್ನಿ ಎಂದಳು. ಲೇ.. ನಾನು ಮೊಬೈಲ್ ಬಿಲ್ಲು ಕಟ್ಟೋಕೆ ಕೇಳಿದ್ದು ದುಡ್ಡು ಎಂದೆ. ಕಾಡಿನಲ್ಲಿ ನೆಟ್‌ವರ್ಕ್ ಇರೋದು, ಅಷ್ಟಕ್ಕೇ.. ಅಷ್ಟೇ...ಮತ್ತೆ ಏಕೆ? ಬೇಕು ನಿಮಗೆ ಮೊಬೈಲ್ ಎಂದು ಹೇಳಿದಳು. ಅಷ್ಟರಲ್ಲಿ ಹಾಲು ಉಕ್ಕುತ್ತಾ ಇದೆ ಎಂದು ಹೇಳಿ, ಗಡಬಡಿಸಿ ಅಡುಗೆ ಮನೆಗೆ ಹೊರಟು ಹೋದಳು.

ಮತ್ತೆ ಕೆಲ ಸಮಯದ ನಂತರ ಕಾಫೀ ಕಪ್ ಜೊತೆ ಹಾಜರ ಆಗಿ, ನೋಡಿ ನಿಮ್ಮಿಂದ ಎಷ್ಟೊಂದು ಹಾಲು ಉಕ್ಕೀತು ಎಂದು ಬೈದಳು. ಹಾಲು ಉಕ್ಕಿದರೆ ಯಾರಾದರೂ ಸಂಭಂಧಿಗಳು ಮನೆಗೆ ಬರುತ್ತಾರೆ ರೀ.. ಎಂದಳು. ನಿನ್ನ ಕಡೆ ದುಡ್ಡು ಇದ್ದರೆ ಕೊಡು, ನನಗೆ ಮೊಬೈಲ್ ಬಿಲ್ಲು ಕಟ್ಟಬೇಕು ಎಂದೆ. ನನ್ನ ಹತ್ತಿರ ದುಡ್ಡು ಇಲ್ಲ, ನೀವೇ ಏನಾದರೂ ಮಾಡಿ ಎಂದಳು. ಮತ್ತೆ ಇನ್ನೊಮ್ಮೆ ನನ್ನ ಕೇಳದೇ, ನನ್ನ ಮೊಬೈಲ್ ಮುಟ್ಟಬೇಡ ಎಂದೆ. ನೀವು ವರ್ಷಕ್ಕೆ ಒಂದೇ ಸಾರಿ ತವರುಮನೆಗೆ ಕಳುಹಿಸಿದರೆ ನಾನೇನು ಮಾಡಬೇಕು. ಅದಕ್ಕೆ ದಿವಸ ಫೋನ್ ಮಾಡಿ ಮಾತಾಡುತ್ತೇನೆ ಎಂದಳು.ಮತ್ತಿನ್ನೇನು ತಿಂಗಳಿಗೆ ಒಂದು ಬಾರಿ ಹೋಗಬೇಕೆಂದಿರುವೆ ಏನು? ಎಂದೆ. ಈ ಬಿಲ್ ದುಡ್ಡಿನಲ್ಲಿ ನಾವು ಮೂರು ಬಾರಿ ನಿಮ್ಮ ಊರಿಗೆ ಹೋಗಿ ಬರಬಹುದಿತ್ತು ಎಂದೆ. ಈ ಬಾರಿ ಹೋಗಬೇಕಾದರೆ ನೀವು ಬನ್ನಿ ಎಂದಳು. ಲೇ..ss ಅದೊಂದು ಬಿಟ್ಟು ಬೇರೆ ಏನು ಬೇಕಾದರೂ ಕೇಳು ಎಂದೆ. ನೀವು ಏಕೆ ಬರಲ್ಲ, ಅದು ಹೇಳಿ ಎಂದಳು. ನಿನ್ನನ್ನ ಎಲ್ಲರೂ ಪುಟ್ಟಿ... ಪುಟ್ಟಿ.. ಎಂದು ಕರೆದರೆ ನನಗೆ ಕೆಟ್ಟ ಕೋಪ ಬರುತ್ತೆ ಎಂದೆ. ಅದಕ್ಕೇನೀಗ, ನನಗೆ ಪ್ರೀತಿಯಿಂದ ಹಾಗೆ ಕರೆಯುತ್ತಾರೆ ಅಷ್ಟೇ ಎಂದಳು. ಲೇ.. ಅದು ಅಲ್ಲ ನಿಮ್ಮ ಕಾಕ ನನಗೆ "ಪುಟ್ಟಿ ಗಂಡ ಹೊಟ್ಟೆ ತುಂಬಾ ಉಂಡ" ಎಂದು, ನನ್ನ ಹೊಟ್ಟೆ ನೋಡಿ ನಗುತ್ತಾ ನಿಂತರೆ ನನಗೆ ಕೋಪ ಬರುವದಿಲ್ಲವೇ ಎಂದೆ. ಓss.. ಅವರಾ.. ಅವರು ತುಂಬಾ ತಮಾಷೆಯ ಮನುಷ್ಯ, ವಾಮನ ಕಾಕ ದೂರದ ಸಂಭಂಧಿ. ಮತ್ತೆ ತಲೆ ನೋಡಿ ಮಕ್ಕಳಿಗೆ, ಇಲ್ಲೊಂದು ಜಾರು ಬಂಡೆ ಇದೆ ನೋಡಿ ಎಂದು ಹೇಳಿದರೆ ಎಂದು ಕೇಳಿದೆ. ನೀವು ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಬೇಡಿ ಎಂದಳು.

ತಮಾಷೆ ಮಾಡೋಕೆ ಒಂದು ಮಿತಿ ಬೇಡ ಏನೇ? ಮತ್ತೆ ನನ್ನ ಲ್ಯಾಪ್‌ಟಾಪ್ ನೋಡಿ, ಎಲ್ಲರ ಮುಂದೆ ಅಳಿಯಂದಿರು ಯಾವತ್ತೂ ಚಿಕ್ಕ ಟಿ ವಿ ಹಿಡಿದುಕೊಂಡು ಎಲ್ಲ ಕಡೆ ಹೋಗುತ್ತಾರೆ ಎಂದು ಎಲ್ಲರಿಗೂ ಹೇಳಿದರೆ. ಮತ್ತೆ ನಾನು ಅಷ್ಟೇ ಮೊದಲು ರೇಡಿಯೋ ತೆಗೆದುಕೊಂಡು ಹೋಗುತ್ತಿದ್ದೆ ಎಂದೆಲ್ಲ ಹೇಳುವರು. ನಾನು ಪಾಪ ಅವರಿಗೆ ಏನೋ ಗೊತ್ತಿಲ್ಲ ಎಂದು ತಿಳಿಸಲು ಹೋದರೆ, ಎಲ್ಲರ ಎದಿರೂ ಇವೆಲ್ಲವೂ ಅಳಿಯಂದಿರ ಪೈಲ್ಸ್ (piles) ಎಂದು ತೋರಿಸಿ ನಕ್ಕರೆ ಕೋಪ ಬರುವದಿಲ್ಲವೇ ಎಂದೆ. ಮತ್ತೆ ನಿಮ್ಮ ಇಯರ್ ಫೋನ್ ಕೊಡಿ ಸ್ವಲ್ಪ ಮಾತಡಬೇಕು ಎಂದರೆ ಏನು ಹೇಳುವುದು ಎಂದೆ.

ಅಷ್ಟರಲ್ಲಿ ನಮ್ಮ ಮನೆಯಲ್ಲಿ ಮಾತ್ರ ಗುಡುಗು ಮಿಂಚಿನ ಮಳೆ ಶುರು ಆಯಿತು. ನನಗೆ ಯಾರಾದರೂ ಚಿರಾಪುಂಜಿ ಎಲ್ಲಿ? ಇದೆ ಎಂದು ಕೇಳಿದರೆ. ನಾನು ಹೇಳುವದು ಬೆಂಗಳೂರಿನ ಶ್ರೀನಿವಾಸನಗರದಲ್ಲಿ ಎಂದು. ಒಂದು ಮಳೆ ಇರುತ್ತೆ ಇಲ್ಲ ಚಿರಾಪುಂಜಿ ...ಚೀರಾಟದ ಪುಂಜಿ ಆಗಿರುತ್ತೆ.

ಅಷ್ಟರಲ್ಲಿ ಕಾಲಿಂಗ್ ಬೆಲ್ ಶಬ್ದ ಬಂತು. ಬಾಗಿಲು ತೆಗೆದೆ ಎದುರಿಗೆ ವಾಮನ ಮೂರ್ತಿ ನನ್ನ ಮಡದಿಯ ಕಾಕ ಎದುರಿಗೆ ಉದ್ಭವವಾಗಿದ್ದರು. ನಾನು ಏನು ಹೇಳಬೇಕೋ ತಿಳಿಯದಾಗಿತ್ತು. ಇಲ್ಲಿ ಬಾರೆ ಯಾರೋ.. ಅನ್ನುವ ಬದಲು ಯಾರು ಬಂದಿದ್ದಾರೆ ಎಂದು ಸುಧಾರಿಸಿ ಹೆಂಡತಿಗೆ ಉಲಿದೆ. ಅಳುವುದನ್ನು ನಿಲ್ಲಿಸಿ, ಓ... ಕಾಕ ಎಂದು ಬಂದು ನಮಸ್ಕರಿಸಿದಳು. ನೀವು ನಮಸ್ಕಾರ ಮಾಡಿ ಎಂದು ನನಗೆ ಹೇಳಿದಳು. ಅಷ್ಟರಲ್ಲಿ ಅವಳ ಕಾಕ ತನ್ನ ಕಾಗೆ ಬಾಯಿಂದ ಹೋಗಲಿ ಬಿಡು ಪುಟ್ಟಿ ಪಾಪ ಅಳಿಯಂದಿರ ಹೊಟ್ಟೆ ಅವರನ್ನು ಬಗ್ಗೋಕೆ ಬಿಡಲ್ಲ ಎಂದರು.

ಇನ್ನೂ ಏನೇನು ಕಾದಿದೆಯೋ ಆ ಭಗವಂತನೇ ಬಲ್ಲ....

***************************************************************************************************************
ಎಲ್ಲರಿಗೂ ಹೊಸ ವರ್ಷದ ಪ್ರತಿ ಕ್ಷಣ ಸುಖ... ಶಾಂತಿ(ಹುಡುಗಿಯ ಹೆಸರು ಅಲ್ಲ...).... ನೆಮ್ಮದಿ ತರಲಿ. ಎಲ್ಲರ ಮುಖದಲ್ಲಿ ಮಂದಹಾಸ ಮೂಡಲಿ ಎಂದು ಆಶಿಸುತ್ತಾ..
ನಿಮ್ಮೆಲ್ಲರ ಪ್ರೀತಿಯ ಗೋಪಾಲ್ . ಮಾ. ಕುಲಕರ್ಣಿ.... ನನ್ನ ಹೆಂಡತಿ (ಹೆಂಡ ಶಬ್ದ ಕೇಳಿದರೆ ಉರಿದು ಬೀಳುತ್ತಾಳೆ) ಕ್ಷಮಿಸಿ ... ಮಡದಿ ತಪ್ಪಾಗಿ ತಿಳಿಯಬಾರದು ಎಂದು,
ಮತ್ತೊಮ್ಮೆ ಪ್ರೀತಿಯ(ಹುಡುಗಿಯ ಹೆಸರು ಅಲ್ಲ...) ಗೋಪಾಲ್ . ಮಾ. ಕುಲಕರ್ಣಿ :-):-)...
****************************************************************************************************************

Saturday, December 25, 2010

ನೋಡಿ ಕಲಿತಿರುವ ನೀತಿ ಪಾಠ....

ನಮ್ಮ ಊರಿಂದ ನನ್ನ ಮಡದಿಯ ದೂರದ ಸಂಭಂಧಿ ಬಂದಿದ್ದ. ಹೆಸರು ಸುರೇಶ. ಅವನು ನಾನು ತುಂಬಾ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಿದ್ದೆವು. ಕಡೆಗೆ ಒಂದು ದಿನ ಅಂಕಲ್ ಮದುವೆ ಮಾಡಿಕೊಳ್ಳಬೇಕೆ ಅಥವ ಬೇಡವೇ. ನಾನು ತುಂಬಾ ಜನರಿಗೆ ಇದರ ಬಗ್ಗೆ ಕೇಳಿದ್ದೇನೆ. ನನಗೆ ಇದುವರೆಗೆ ಕೂಡ ಉತ್ತರ ಸಿಕ್ಕಿಲ್ಲ, ನೀವಾದರೂ ಹೇಳಿ ಎಂದು ಪೀಡಿಸುತ್ತಿದ್ದ. ಅವನಿಗೆ ಏನು ಉತ್ತರ ಹುಡುಕಬೇಕೆಂದು ತಡಕಾಡಿ ಸುಮ್ಮನಾಗಿದ್ದೆ. ಮತ್ತೆ ಮರುದಿನ ನನ್ನ ಆಫೀಸ್ ರಜೆ ಇತ್ತು. ನಾನು ಅವನಿಗೆ ನಿನ್ನೆ ಒಂದು ಪ್ರಶ್ನೆ ಕೇಳಿದ್ದೇಯಲ್ಲಾ?. ಇವತ್ತು ಅದರ ಉತ್ತರ ಹೇಳುತ್ತೇನೆ. ನಮ್ಮಿಬ್ಬರನ್ನೂ ಗಮನಿಸು, ಆಮೇಲೆ ನಿನಗೆ ತಿಳಿಯುತ್ತೆ ಮದುವೆ ಬೇಕಾ ಅಥವಾ ಬೇಡವಾ ಎಂದು ಅವನಿಗೆ ಹೇಳಿದೆ.

ಮಡದಿಗೆ ಕಾಫೀ ಕೊಡು ಎಂದು ಹೇಳಿದೆ. ಪೇಪರ್ ಓದುತ್ತಾ ಕುಳಿತಿದ್ದ ನಾನು ಏನೇ? ಈರುಳ್ಳಿ ಬೆಲೆ ಗಗನಕ್ಕೆ ಏರಿದೆ ಅಲ್ಲೇ... ಎಂದೆ. ಭೂಮಿ ಕೆಳಗಡೆ ಬೆಳೆಯುವ ವಸ್ತುವಿಗೆ ಇಷ್ಟು ದುಬಾರಿ ಆದರೆ... ಇನ್ನೂ ಭೂಮಿ ಮೇಲೆ ಬೆಳೆಯುವ ಪದಾರ್ಥಗಳ ಗತಿ ಏನು ಎಂದೆ. ಖರ್ಚು ನೀಗಿಸುವ ಮೊದಲೇ ನಾನು ಭೂಮಿಯ ಒಳಗಡೆ ಹೋಗಿ ಕುಳಿತುಕೊಳ್ಳಬೇಕಾಗುತ್ತೆ ಎಂದೆ. ಯಾವುದೋ ವಿಷಯಕ್ಕೆ ಕೋಪ ಮಾಡಿಕೊಂಡಿದ್ದ ನನ್ನ ಮಡದಿ. ಹಾಗೆ ಆಗಬೇಕು ನಿಮಗೆ, ಇಷ್ಟು ದಿವಸ ನಮ್ಮನ್ನು ಅಳಿಸುತ್ತಿದ್ದಿರಿ, ಈಗ ನಿಮ್ಮ ಬಾರಿ ಎಂದಳು. ಈ ತಿಂಗಳಿಂದ ನಿನಗೆ ಐದು ನೂರು ಎಕ್ಸ್‌ಟ್ರಾ ಪಾಕೆಟ್ ಮನಿ ಕೊಡಬೇಕು ಎಂದು ಕೊಂಡಿದ್ದೆ. ಆದರೆ ಈಗ ನನ್ನ ಪರ್ಸ್ ಮಾರಿ ಈರುಳ್ಳಿ ತೆಗೆದುಕೊಳ್ಳುವ ಪರಿಸ್ತಿತಿ ಎಂದು ಹೇಳಿದೆ. ಹಾ... ಏನು?.. ಏನಂದ್ರಿ?.. ಎಂದು ಬಾಯಿ ತೆಗೆದು ಹೊರಗಡೆ ಬಂದು, ಹೌದು ನೋಡಿ ತುಂಬಾ ಕಷ್ಟ... ಕಷ್ಟ.. ಎಂದು ನನ್ನ ಕಷ್ಟಕ್ಕೆ ಸಾತ್ ನೀಡಿಡಳು.

ಅದಕ್ಕೆ ಇದನ್ನು ಸ್ವರ್ಣ ಗಡ್ಡೆ ಅನ್ನುವದು ಎಂದು ಹೇಳಿದಳು. ಸ್ವರ್ಣದ ಸ್ಪರ್ಧೆಗೆ ನಿಂತಿದೆ ಎಂದು ಕಾಣುತ್ತೆ ಎಂದಳು. ಇದು ಒಳ್ಳೇ ಕತೆ ಆಯಿತು, ಹುಲಿಗೂ ಬೆಕ್ಕಿಗೂ ಸ್ಪರ್ಧೆ ಹಾಗೆ ಎಂದು ಹಣಿ ... ಹಣಿ.. ಗಟ್ಟಿಸಿದೆ. ಮತ್ತೆ ಇದರ ಹೆಸರೇ ಸೂಚಿಸುವ ಹಾಗೆ ಇದನ್ನು ಕೇವಲ ಉಳ್ಳವರು ಮಾತ್ರ ಕೊಳ್ಳಬಹುದು. ಅದಕ್ಕೆ ಇದನ್ನು ಉತ್ತರ ಕರ್ನಾಟಕದ ಜನ ಉಳ್ಳಗಡ್ಡೆ ಎಂದು ಹೇಳುತ್ತಾರೆ ಎಂಬ ತನ್ನ ಅಪಾರ ಬುದ್ಧಿ ಮತ್ತೆ ಪ್ರದರ್ಶಿಸಿದಳು. ಮತ್ತೆ ಗೊತ್ತಾ? ಇದನ್ನು ಕೆಲ ಜನ ಕೃಷ್ಣ ಗಡ್ಡೆ ಎಂದು ಕೂಡ ಕರೆಯುತ್ತಾರೆ. ನಾನು ಕೃಷ್ಣ ಗಡ್ದೆ ಎಂದೆ. ಹಾ... ಹೌದು.. ರೀ... ಇದರ ಒಳಗಡೆ ಇರುವ ಚಕ್ರ ನೋಡಿದರೆ ಥೇಠ್ ಅಭಿಮನ್ಯು ಚಕ್ರವ್ಯೂಹ ಇದ್ದ ಹಾಗೆ ಇದೆ ಇಲ್ಲವ ಅದಕ್ಕೆ. ಚಕ್ರವ್ಯೂಹ ಭೇಧಿಸುವ ವಿದ್ಯೆ ಶ್ರೀ ಕೃಷ್ಣನಿಗೆ ಚೆನ್ನಾಗಿ ಗೊತ್ತಿತ್ತು ಅದಕ್ಕೆ. ನಾನು ಹಾಗದೆರೆ ನಾವು ಈಗ ಒಳಗೆ ಸಿಕ್ಕಿ ಕೊಂಡು ಒದ್ದಾಡುವ ಸ್ತಿತಿ ಎಂದೆ. ಮತ್ತೆ ಅದನ್ನು ಹೆಚ್ಚಿದ ಮೇಲೆ ನಿಮಗೆ ಅದು ಚಕ್ರ.. ಚಕ್ರ.. ಆಗಿರುವದರಿಂದ ಸುದರ್ಶನ ಚಕ್ರಕ್ಕೆ ಹೋಲಿಸಿ ಕೃಷ್ಣ ಗಡ್ಡೆ ಅನ್ನುವರು ಎಂದು ತನ್ನ ಬುದ್ಧಿ ಮತ್ತೆಗೆ ಸ್ವಲ್ಪ ಒಗರಣೆ ಹಾಕಿದಳು. ಇಷ್ಟೆಲ್ಲಾ ಕತೆ ಹೇಳಿ ಮುಗಿದ ಮೇಲೆ ಮಡದಿ ಅಡುಗೆ ಮನೆಗೆ ಹೊರಟು ಹೋದಳು.

ಆಗ ಸುರೇಶನಿಗೆ ನೋಡಪ್ಪ ಮದುವೆ ಆದರೆ ಇಷ್ಟೆಲ್ಲಾ ಕೇಳಬೇಕುಗುತ್ತೆ. ಇದಕ್ಕೆ ನೀನು ರೆಡೀ ಇದ್ದರೆ ಅದು ನಿನ್ನ ಕರ್ಮ ಎಂದೆ. ಮತ್ತೆ ಕೌನ್ ಬನೇಗ ಕರೋಡ್ ಪತಿಯಲ್ಲಿ ಕೂಡ ನಾಲ್ಕು ಲೈಫ್ ಲೈನ್ ಇರುತ್ತೆ ಆದರೆ ಇಲ್ಲಿ ಇರುವದು ಒಂದೇ ಲೈಫ್... ಅದುವೇ ನಿನ್ನ ವೈಫ್... , ಆಮೇಲೆ ನಿನ್ನ ಲೈನ್ ಚೇಂಜ್ ಆಗಿ ಹೋಗಿರುತ್ತೆ ಎಂದು ಹೇಳಿದೆ. ಮತ್ತೆ ಅವನಿಗೆ ನಾನು ನನ್ನ ಗೆಳೆಯನ ಬಗ್ಗೆ ಬರೆದಿರುವ ಜಡೆ ಇದ್ದ ಹುಡುಗಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು... ಓದು ಎಂದು ಕೊಟ್ಟೆ. ನೋಡಿ ನೀನು ಕಲಿತಿರುವ ನೀತಿ ಪಾಠ ಏನು? ಎಂದು ಕೇಳಿದೆ. ಹುಡುಗ ಅಷ್ಟೇ ತಾನೇ ಅಂಕಲ್, ಚಿಂತೆ ಮಾಡಬೇಡಿ, ನನಗೂ ಅಡುಗೆ ಮಾಡಲು ಬರುತ್ತೆ ಮತ್ತು ಏನೋ ಹುಡುಗಿಯರು ಹೇಳುವ ಪುರಾಣವನ್ನು ಒಂದು ಕೀವಿಲಿ ಕೇಳಿ ಎನ್ನೊಂದರಲ್ಲಿ ಬಿಟ್ಟಾರಾಯಿತು ಎಂದ. .

ಅಷ್ಟರಲ್ಲಿ ಮಡದಿ ಕಾಫೀ ತೆಗೆದುಕೊಂಡು ಬಂದಳು. ಇಬ್ಬರು ಕಾಫೀ ಹಿರಿ ಮುಗಿಸುವಷ್ಟರಲ್ಲೇ, ನನ್ನ ಮಡದಿ ಗೋಪಾಲ್ ರಾಯರೆ ಸ್ವಲ್ಪ ಕೃಷ್ಣ ಗಡ್ಡೆ ಹೆಚ್ಚಿ ಕೊಡಿ ಎಂದು ಹೇಳಿದಳು. ಪಾಪ ಸುರೇಶ ನನ್ನ ಪಿಕಿ ಪಿಕಿ ಕಣ್ಣು ಬಿಟ್ಟು ನೋಡುತ್ತಿದ್ದ.

ಅಂಕಲ್ ನಾನು ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದೇನೆ. ಅವಳನ್ನೇ ಮದುವೆ ಕೂಡ ಆಗಿದ್ದೇನೆ. ಆದರೆ ಜಾತಿ ಮಾತ್ರ ಬೇರೆ..ಬೇರೆ... ಇದನ್ನು ಅಪ್ಪನಿಗೆ ಹೇಳಿದರೆ ಬಾಸುಂಡೆ ಬರುವ ಹಾಗೆ ಹೊಡೆಯುತ್ತಾರೆ. ನೀವೇ ಏನಾದರೂ ಮಾಡಿ ಅಪ್ಪನಿಗೆ ಹೇಳಿ ಒಪ್ಪಿಸಬೇಕು ಎಂದು ಹೇಳಿದ. ನನಗೆ ದಿಕ್ಕೇ ತೋಚದಾಗಿತ್ತು. ನಮ್ಮ ಮನೆಗೆ ಇರಲು ಎಂದು ಬಂದು, ಮದುವೆ ಕೂಡ ಆಗಿದ್ದಾನೆ. ಕಡೆಗೆ ಇವನ ಅಪ್ಪ ಒಪ್ಪದಿದ್ದರೆ ಇಲ್ಲೇ ಠಿಕಾಣಿ ಎಂದು ಯೋಚಿಸಿದೆ. ಕಡೆಗೆ ಅವರ ಅಪ್ಪನಿಗೆ ಕರೆ ಮಾಡಿ ತಿಳಿಸಿದೆ, ಒಪ್ಪಿದ ಆಸಾಮಿ, ಸಧ್ಯ ನಾನು ಬಚಾವ್....

Thursday, December 23, 2010

ಸಮ್ಮಿಶ್ರ ಸಂಸಾರ ....

ನಮ್ಮ ಸಮ್ಮಿಶ್ರ ಸಂಸಾರ(ಸರಕಾರ) ಸುಗಮವಾಗಿ ನಡೆದು ಕೊಂಡು ಹೋಗಬೇಕಾದರೆ ಬೇಕೇ.. ಬೇಕು.. ಸರ (ಅದು ಬಂಗಾರದ್ದು ಮಾತ್ರ) ಮತ್ತು ಕಾರ(ಸಧ್ಯ ಇನ್ನೂ ಕೇಳಿಲ್ಲ.)... ಒಂದು ದಿನ ಏನೋ? ಇರಲಿ ಎಂದು ಪ್ಲ್ಯಾಟಿನಮ್ ಸರ ತೆಗೆದುಕೊಂಡು ಬಂದಿದ್ದೆ. ಅವಳಿಗೆ ಸಕ್ಕತ್ ಕೋಪ ಬಂದು ಬಿಟ್ಟಿತ್ತು. ಏನ್ರೀ..? ನನಗೆ ಅಲ್ಯೂಮಿನಿಯಮ್ ಸರ ತಂದು ಕೊಟ್ಟಿದ್ದೀರ?. ಎಲ್ಲಾ ಗಂಡಸರು ಇಷ್ಟೇ... ಮದುವೆ ಆಗುವ ಮುಂಚೆ ಚಿನ್ನ... ರನ್ನ... ಎಂದೆಲ್ಲ ಹೋಗಳುವದು. ಆಮೇಲೆ ಮಡದಿ ಎಂದರೆ ಅಷ್ಟಕ್ಕೇ ಅಷ್ಟೇ ಎಂದು ಸರ ಬಿಸಾಡಿದಳು. ಸರಸರನೇ ಹೋಗಿ ಅದನ್ನು ಎಕ್ಸ್‌ಚೇಂಜ್ ಮಾಡಿ ಚಿನ್ನದ ಸರ ತಂದೆ.

ನಮ್ಮ ಸಮ್ಮಿಶ್ರ ಸರಕಾರಕ್ಕೆ ನಾಂದಿ ಹಾಡಿದ ಆ ಜೋತಿಷ್ಯ ಪಂಡಿತ ಯಾವ ಕವಡೆ ಕಾಸಿಗೋಸ್ಕರ ಕವಡೆ ಉರಿಳಿಸಿ ನಮ್ಮ ಜನ್ಮ ಕುಂಡಲಿಗಳನ್ನು ಸೇರಿಸಿದನೋ ನಾನು ಕಾಣೆ. ಪ್ರತಿ ವಿಷಯದಲ್ಲೂ ನಮ್ಮಿಬ್ಬರಲ್ಲಿ ಬಿನ್ನ ಅಭಿಪ್ರಾಯ ಖಂಡಿತ ಇರುತ್ತೆ. ಮತ್ತೆ ಇಷ್ಟೆಕ್ಕೆಲ್ಲಾ ಆಗ ತಾನೇ ಜೋತಿಷ್ಯ ಕಲೆಯುತ್ತಿದ್ದ ಮನೋಜ, ಮೂವತ್ತನೆ ವಯಸ್ಸಿನ ಒಳಗೆ ನಿನ್ನ ಮದುವೆ ಆಗದಿದ್ದರೆ, ಈ ಜನ್ಮದಲ್ಲಿ ಮದುವೆ ಆಗಲ್ಲ ಕಣೋ ಎಂದು ತನ್ನ ಕಲಿತ ವಿದ್ಯೆಯ ಪ್ರಯೋಗ ನನ್ನ ಮೇಲೆ ಮಾಡಿದ್ದು ಕೂಡ ಪರಿಣಾಮವಾಗಿ ಈ ಸರಕಾರ ಅಸ್ತಿತ್ವಕ್ಕೆ ಬಂತು.

ಒಂದು ದಿನ ಸೀರೆ ಅಂಗಡಿಗೆ ಹೋಗಿದ್ದೆವು. ರಾತ್ರಿ ಒಂಬತ್ತು ಆದರೂ ನಮ್ಮ ಸೀರೆ ಸೆಲೆಕ್ಶನ್ ಮುಗಿದಿರಲಿಲ್ಲ.ಅವಳಿಗೆ ನೀಲಿ ಬಣ್ಣ ಇಷ್ಟವಾದರೆ ನನಗೆ ಕೆಂಪು... ಕಡೆಗೆ ಸರ್ ಈಗ ಅಂಗಡಿ ಬಂದ್ ಮಾಡುವ ಸಮಯ ನಾಳೆ ಬನ್ನಿ ಎಂದ ಅಂಗಡಿಯವ. ನಾನು ನಾಳೆ ಬಂದರೆ ಆಗುತ್ತೆ ಎಂದು ಹೇಳಿದೆ. ಅದಕ್ಕೆ ಅವಳು ನೀವೇ ಒಂದು ಸೀರೆ ಸೆಲೆಕ್ಟ್ ಮಾಡಿ ಎಂದಳು. ಕಡೆಗೆ ನಾನು ಕೆಂಪು ಬಣ್ಣದ ಸೀರೆ ಸೆಲೆಕ್ಟ್ ಮಾಡಿದೆ. ಅವಳು ಬೇಡ ಅನ್ನುವ ಮೊದಲೇ ಅಂಗಡಿಯವ ಅದನ್ನು ತೆಗೆದು ಕೊಂಡು ಬಿಲ್ ಮಾಡಿಬಿಟ್ಟ. ಹೆಂಡತಿಯ ಮುಖಕ್ಕೂ ಆ ಸೀರೆಯ ಬಣ್ಣಕ್ಕೂ ಏನು ವ್ಯತ್ಯಾಸವೇ ಇರಲಿಲ್ಲ, ಅಷ್ಟು ಕೋಪ ಮಾಡಿಕೊಂಡು ಬಿಟ್ಟಿದ್ದಳು.

ಮನೆ ಬರುವವರೆಗೂ ಮೌನ ಗೌರಿಯ ಹಾಗೆ ಸುಮ್ಮನೇ ಕುಳಿತಿದ್ದು ನೋಡಿ ನನಗೆ ಆಶ್ಚರ್ಯ ಆಗಿತ್ತು. ಮನೆಗೆ ಬಂದವಳೇ ಅಡುಗೆ ಮನೆಗೆ ಹೊರಟು ಹೋದಳು. ಊಟಕ್ಕೆ ಕುಳಿತಾಗ ತಿಳಿಯಿತು ಅವಳು ತನ್ನ ಎಲ್ಲ ಬಿ ಪಿ ಸಾರಿನ ಮೇಲೆ ಪ್ರದರ್ಶನ ಮಾಡಿದ್ದಾಳೆ ಎಂದು. ಸಕ್ಕತ್ ಉಪ್ಪು ಸಾರು. ನಾನು ಲೇ.. ನೀನು ಇಷ್ಟು ಉಪ್ಪು ಹಾಕಿದರೆ ನನಗೆ ಬಿ ಪಿ ಬಂದರೆ ನಿನಗೆ ಕಷ್ಟ ಎಂದು ಹೇಳಿದೆ. ನಾನು ಬಿ ಪಿ ಹೆಚ್ಚಾಗಿ ಮತ್ತೆ ಗಂಡ ಹೊಡೆದರೆ ಪ್ರಸಾದ ಎಂದು ಸುಮ್ಮನೇ ಒಂದು ರೈಲು ಬಿಟ್ಟೆ. ಆದರೂ ಮೌನ ವ್ರತ ಮುರಿಯಲಿಲ್ಲ. "ಮೌನಂ ಸಮ್ಮತಿ ಲಕ್ಷಣಂ" ಎಂದು ಒಂದು ಹಾಗೆ ಸಣ್ಣದಾಗಿ ಹೊಡೆದೆ. ಆದರೂ ಏನು ಪ್ರಯೋಜನ ಆಗಲಿಲ್ಲ. ಮೊನ್ನೆ ಸ್ವೀಟ್ ತಂದಿದ್ದೆಯಲ್ಲ ಅದು ಚೆನ್ನಾಗಿತ್ತು ಕಣೇ ಎಂದೆ. ಆ ಸ್ವೀಟ್ ಅಂಗಡಿ ಎಲ್ಲಿ ಇದೆ ಎಂದು ಕೇಳಿದೆ. ಏನು ಉತ್ತರ ಬರಲಿಲ್ಲ.

ಮೂರು ದಿನ ಮೌನ ವ್ರತ. ನನ್ನ ಹತ್ತಿರ ದುಡ್ಡು ಇರಲಿಲ್ಲ ಹೀಗಾಗಿ ಕಡೆಗೆ ಸೀರೆ ಕೊಡಿಸಬೇಕು ಎಂದು ಯಾರಿಗಾದರೂ ಸಾಲ ಕೇಳಬೇಕು ಎಂದು ಸುಬ್ಬನ ಮನೆಗೆ ಹೋದೆ. ಸುಬ್ಬನಿಗೆ ಐದು ಸಾವಿರ ಸಾಲ ಕೊಡು ಎಂದು ಕೇಳಿದೆ. ಕೇಳಿದ ಕೂಡಲೇ ಪೆನ್ನು ತೆಗೆದುಕೊಂಡ. ನಾನು ಖುಶಿಯಿಂದ ಚೆಕ್ ಕೊಡಬಹುದು ಎಂದು ಅಂದುಕೊಂಡರೆ, ಒಂದು ಪೇಪರ್ ತೆಗೆದುಕೊಂಡು ಅದರಲ್ಲಿ ತನ್ನ ತಿಂಗಳ ಖರ್ಚಿನ ಬಗ್ಗೆ ವಿವರಣೆ ಕೊಟ್ಟು, ಅರ್ಧ್ ಘಂಟೆ ತಲೆ ತಿಂದು, ಕಾಫೀ ಕೂಡಿಸಿ ಕಳುಹಿಸಿದ. ನನಗೆ ಈಗ ೨೦ ಸಾವಿರ ಬೇಕು. ನೀನು ೩೦ ಸಾವಿರ ಕೊಡು ನಾನು ನಿನಗೆ 5 ಸಾವಿರ ಕೊಡುತ್ತೇನೆ ಅಂದ. ನಾನು "ಉದುವದನ್ನು ಕೊಟ್ಟು ಬಾರಿಸುವದು ತೆಗೆದುಕೊಂಡ ಹಾಗಾಯಿತು" ಎಂದು ಏನು ಹಾನಿಯಾಗದ ಹಾಗೆ ಹಣಿ ಹಣಿ ಗಟ್ಟಿಸಿದೆ. ಮಂಜನ ಹತ್ತಿರ ಕೇಳಿದರೆ ಎಂದು ಯೋಚಿಸಿ ಅವನ ಮನೆಗೆ ಹೊರಟೆ. ನನ್ನ ಬೆನ್ನಿಗೆ ಬೇತಾಳದ ಹಾಗೆ ನನ್ನ ಹಿಂದೆ ಬಂದ. ನಾನು ಕೇಳುವ ಮೊದಲೇ ನನಗೆ 20 ಸಾವಿರ ಬೇಕು ಅಂದ. ಸಾರಿ... ಸಾರಿ ....30 ಸಾವಿರ ಎಂದು ನನ್ನ ಮುಖ ನೋಡಿ ನಗುತ್ತಾ ಹೇಳಿದ. ಮಂಜ ನನ್ನ ಹತ್ತಿರ ಇರುವದು ಬರೀ 8 ಸಾವಿರ ಅದರಲ್ಲಿ ಬೇಕಾದರೆ 6 ಸಾವಿರ ಕೊಡಬಲ್ಲೆ ಎಂದ. ಅದಕ್ಕೆ ತಕ್ಷಣ ನಾನು ನನಗೆ ಅವಶ್ಯಕತೆ ಇದೆ ಕೊಡು ಎಂದು ಕೇಳಿದೆ. ಇಲ್ಲದೇ ಹೋಗಿದ್ದರೆ ಅದನ್ನು ಸುಬ್ಬ ಇಸಿದುಕೊಂಡು ಬಿಡುತ್ತಿದ್ದ. ಕಡೆಗೆ ಮಂಜನ ಕಡೆ ಸಾಲ ಇಸಿದುಕೊಂಡು ಬಂದೆ. ಅವಳು ಮಾತು ಕೇಳದೇ 3 ದಿವಸ ಆಗಿದ್ದರಿಂದ, ಪಕ್ಕದ ಮನೆಯವರು ರೇಡಿಯೋ/ ಟಿ ವಿ ಹಚ್ಚಿದರು ಕೂಡ ಹೆಂಡತಿ ಕೂಗಿದ ಹಾಗೆ ಅನ್ನಿಸೋದು. ಕೆಲ ಬಾರಿ ಏನು? ಎಂದು ಕೇಳಿ ಬೆಪ್ಪನ ಹಾಗೆ ನಿರುತ್ತರನಾಗಿ ಕುಳಿತುಬಿಟ್ಟಿದ್ದೆ.

ಮರುದಿನ ನಾನು ಅದೇ ಸೀರೆ ಅಂಗಡಿಗೆ ಹೋಗಿ ಅವಳು ಮೆಚ್ಚಿದ ನೀಲಿ ಬಣ್ಣದ ಸೀರೆ ತೆಗೆದುಕೊಂಡು ಬಂದೆ. ಮತ್ತು ಬರುವ ದಾರಿಯಲ್ಲಿ ನನ್ನ ಮಡದಿಗೆ ಕೇಳಿದ ಸ್ವೀಟ್ ಅಂಗಡಿಯ ಬಾಕ್ಸ್ ಹಿಡಿದು ಕೊಂಡು, ಒಂದು ಹುಡುಗಿ ಹೊರಟಿತ್ತು. ನಾನು ಅವಳನ್ನು ನೋಡಿ ಅವಳ ಹಿಂದೆ ಹೋದೆ. ಅವಳು ಮತ್ತೆ ಇನ್ನಷ್ಟು ಜೋರಾಗಿ ಹೊರಟಳು. ನನಗೆ ಘಾಬರಿ. ಆದರೂ ಸ್ವೀಟ್ ಚೆನ್ನಾಗಿ ಇತ್ತು ಎಂದು ಅವಳ ಮುಂದೆ ಹೋಗಿ ಗಾಡಿ ನಿಲ್ಲಿಸಿದೆ. ಅಷ್ಟರಲ್ಲಿ ಅವಳ ಅಪ್ಪ ಬಂದು ಬಿಟ್ಟ. ನನಗೆ ಇನ್ನೂ ಘಾಬರಿ ಇವಳನ್ನು ಬೆನ್ನು ಹತ್ತಿದ್ದಕ್ಕೆ, ಎಲ್ಲಿ ಎರಡು ಕೊಡುತ್ತಾನೆ ಎಂದು. ರೀ...ನಾವೊಬ್ಬರೇ ಅಷ್ಟೇ ಅಲ್ಲಾರಿ ಅಲ್ಲಿ ಕಸ ಹಾಕೋದು. ಎಲ್ಲರೂ ಹಾಕುತ್ತಾರೆ. ದುಡ್ಡು ನಮ್ಮ ಕಡೆ ಮಾತ್ರ ವಸೂಲಿ ಮಾಡಿದರೆ ಹೇಗೆ ಎಂದರು. ನಾನು ಪೆಕರನ ಹಾಗೆ ತಲೆ ಕೆರೆದು ಕೊಳ್ಳುತ್ತಿದೆ. ಮತ್ತೆ ನನ್ನಷ್ಟಕ್ಕೆ ನಾನೇ ನೋಡಿಕೊಂಡೆ. ಆಗ ಅರ್ಥ ಆಯಿತು. ನಾನು ಚ್ಯಾಕಲೇಟ್ ಕಲರ್ ಜ್ಯಾಕೆಟ್ ಹಾಕಿದ್ದು ನೋಡಿ ಬಿ ಬಿ ಎಂ ಪಿ ನೌಕರ ಎಂದು ಕೊಂಡಿದ್ದರು ಎಂದು. ಆಮೇಲೆ ಸರ್ ಬಿ ಬಿ ಎಂ ಪಿ ನೌಕರ ಅಲ್ಲ. ನೀವು ತೆಗೆದು ಕೊಂಡಿರುವ ಸ್ವೀಟ್ ಅಂಗಡಿ ಎಲ್ಲಿ ಇದೆ ಎಂದು ಆ ಪ್ಯಾಕೆಟ್ ತೋರಿಸಿ ಕೇಳಿದೆ. ಆಗ ಅವರು ಅಂಗಡಿ ತೋರಿಸಿದರು. ಆಮೇಲೆ ಅವರು ಆ ಸ್ವೀಟ್ ಬಾಕ್ಸ್ ಕಸ ಚೆಲ್ಲಿ ಹೊರಟು ಹೋದರು.

ಮನೆಗೆ ಬಂದು ನೀಲಿ ಸೀರೆ ಮತ್ತು ಸ್ವೀಟ್ ಬಾಕ್ಸ್ ಕೈಗೆ ಇಟ್ಟಾಗ ಮೌನ ವೃತ ಮುರಿದಿದ್ದಳು. ನಡೆದ ಸ್ವೀಟ್ ಅಂಗಡಿ ವಿಳಾಸದ ವಿಷಯ ಕೇಳಿ ಸಕ್ಕತ್ ನಕ್ಕೂ ಇವತ್ತು ಉಪ್ಪೆ ಇಲ್ಲದ ಸಾರು ಮಾಡಿ... ಸಾರಿ.. ಎಂದು ಉಲಿದಳು. ಹಾಗೆಂದು ನಮ್ಮಿಬ್ಬರಲ್ಲಿ ಯಾವುದೇ ಸಾಮ್ಯತೆ ಇಲ್ಲ ಎಂದು ತಿಳಿಯಬೇಡಿ, ಇಬ್ಬರಿಗೂ ಮಿಸ್ಸಳ್, ಮಿಸ್ಸಳ್ ಭಾಜಿ ಇಷ್ಟ. ಮತ್ತು ಮಿಶ್ರ ಮಾಧುರ್ಯ ರೇಡಿಯೋ ಕಾರ್ಯಕ್ರಮ ಕೂಡ.