Tuesday, November 23, 2010

ಡಾಕು ಮಂಗಲ್ ಸಿಂಗ್....

ಮುಂಜಾನೆ ಬೇಗ ಎದ್ದು, ನಾನು ಬರೆದಿರುವ ಲೇಖನದ ಹಿಟ್ಸ್ ನೋಡುತ್ತಾ ಕುಳಿತಿದ್ದೆ. ಇನ್ನೂ ಸವಿ ನಿದ್ದೆಯಲ್ಲೇ ಇದ್ದ, ನನ್ನ ಮಡದಿ ಏನ್ರೀ, ಏನು ಮಾಡುತ್ತಾ ಇದ್ದೀರ ಎಂದಳು. ಹಿಟ್ ನೋಡುತ್ತಾ ಇದ್ದೀನಿ ಕಣೇ ಎಂದೆ. ಏಕೆ? ಎಂದು ಬೆಚ್ಚಿ ಎದ್ದು ಬಿಟ್ಟಳು. ಎಲ್ಲಿದೆ ಜಿರಳೆ? ಎಂದಳು. ಅವಳಿಗಿಂತ ಜ್ಯಾಸ್ತಿ ಘಾಬರಿ ಆಗಿದ್ದು ನಾನು. ನಾನು ಕುರ್ಚಿಯಿಂದ ಟ್ಯಾಂಗ್ ಎಂದು ಜಿಗಿದೆ. ಕುರ್ಚಿ ಲಡಕ್ಕ್ ಎಂದು ಮುರಿದು, ಅದರ ಜೊತೆ ನಾನು ಬಿದ್ದೆ. ನಾನು ಅವಳಿಗೆ ಕೇಳಿದೆ ಎಲ್ಲಿದೆ ಜಿರಳೆ ಎಂದು. ನೀವು ತಾನೇ ಹಿಟ್ ಹುಡುಕುತ್ತಾ ಇರೋದು ಎಂದಳು. ನಾನು ತಲೆ ಜಜ್ಜಿಕೊಂಡು, ನಾನು ನೋಡುತ್ತಾ ಇರೋದು ನನ್ನ ಲೇಖನದ ಹಿಟ್ಸ್ ಗಳನ್ನ ಎಂದಾಗ, ಓ ಕರ್ಮ ನಿಮಗೆ ಒಂದು ಕೆಲಸ ಇಲ್ಲ ಎಂದರೆ, ಎಲ್ಲರೂ ಹಾಗೇನಾ? ಎಂದು ಬೈದು, ಮುಖ ತೊಳೆದುಕೊಂಡು ಬಂದು ಟೀ ಮಾಡಲು ಅನುವಾದಳು.

ನನಗು ಟೀ ಕೊಟ್ಟು, ತಾನು ಟೀ ತೆಗೆದುಕೊಂಡು ಹೊರಗೆ ಬಂದು ಪೇಪರ್ ಓದುತ್ತಾ ಕುಳಿತಳು. ನಾನು ಮತ್ತೆ ಕಂಪ್ಯೂಟರ್ ಪರದೆ ಮುಂದೆ ಟೀ ಹೀರುತ್ತ ಕುಳಿತೆ. ರೀ, ನೀವು ವಕ್ರತು೦ಡೋಕ್ತಿ ಓದಿದಿರಾ? ಎಂದು ಕೇಳಿದಳು. ನಾನು ದಿನಾಲೂ ಓದುತ್ತೇನೆ, ವಕ್ರತುಂಡ ಮತ್ತು ಶುಕ್ಲಾಂಬರ ಎರಡು ಓದುತ್ತೇನೆ. ಗಣೇಶನ ದಯೆ ಇಲ್ಲದೇ ಏನು ಸಾಧ್ಯ ಇಲ್ಲ ಎಂದು ಹೇಳಿದೆ. ರೀ, ನಾನು ಹೇಳಿದ್ದು ವಿಜಯ ಕರ್ನಾಟಕ ಪೇಪರ್ ನಲ್ಲಿ ಬಂದ ವಕ್ರತು೦ಡೋಕ್ತಿ. ಹಾ... ಹೇಳು ಏನು ಬರೆದಿದ್ದಾರೆ ಎಂದು ಕೇಳಿದೆ. "ಮನೆ ಕೆಲಸ ಮಾಡುವ ಗಂಡ ಎಂದಿಗೂ ಹೆಂಡತಿಯ ಅವಕೃಪೆಗೆ ಗುರಿಯಾಗಲಾರ" ನೀವು ನೋಡಿ ಬರೀ ಆ ಕಂಪ್ಯೂಟರ್ ಮುಂದೆ ಕುಳಿತು ಹಿಟ್ಸ್ ನೋಡುತ್ತಾ ಇದ್ದೀರಾ. ಮನೆಯಲ್ಲಿ ಗೋಧಿ ಹಿಟ್ಟು ಖಾಲಿಯಾಗಿ ಎರಡು ದಿನ ಆಯಿತು. ಒಮ್ಮೆಯಾದರು ಕೇಳಿದ್ದೀರಾ? ಎಂದು ಕೇಳಿದಳು. ಮತ್ತೆ ಇನ್ನೂ ಇದರ ಮುಂದೆ ಕುಳಿತರೆ ನನಗೆ ಹಿಟ್ಸ್ ಗ್ಯಾರಂಟೀ ಎಂದು ಯೋಚಿಸಿ ಆಫ್ ಮಾಡಿ ಹೊರಗೆ ಹೋಗಿ ಎರಡು ಕೆ ಜಿ ಗೋಧಿ ಹಿಟ್ಟು ತಂದು ಕೊಟ್ಟೆ.

ಮತ್ತೆ ಸುಮ್ಮನೇ ಇರಲಾರದೇ, ಟಿ ವಿ ಹಚ್ಚಿದೆ. ಟಿ ವಿ ಯಲ್ಲಿ ಬರುವ ಹಾಡಿಗೆ ಡ್ಯಾನ್ಸ್ ಮಾಡುತ್ತಾ ಇದ್ದೆ. ನಾಚಿಕೆ ಆಗುವದಿಲ್ಲವಾ? ಪಕ್ಕದ ಮನೆ ಅಜ್ಜಿ ವಾಕಿಂಗ್ ಮಾಡುತ್ತಾ ಇದ್ದಾರೆ ಕಿಟಕಿ ಇಂದ ಕಾಣುತ್ತೆ ಎಂದಳು. ಅವರಿಗೆ ನಾನೆಲ್ಲಿ ಕರೆದೆ ನನ್ನ ಜೊತೆ ಡ್ಯಾನ್ಸ್ ಮಾಡೋಕೆ ಎಂದು ತಮಾಷೆ ಮಾಡಿದೆ.ತಲೆ ಜಜ್ಜಿಕೊಂಡು ಇದು ಒಂದು ಬಾಕಿ ಇತ್ತು ಎಂದು ಹೇಳಿ ಹೊರಟು ಹೋದಳು.

ನನಗೆ ಮತ್ತೆ ಟೀ ಕುಡಿಯಬೇಕು ಎಂದು ಅನ್ನಿಸಿದಾಗ, ಲೇ ಸ್ವಲ್ಪ ಟೀ ಇದ್ದರೆ ಕೊಡೆ ಅಡಿಗೆ ಮನೆಗೆ ಹೋಗಿ ಕೇಳಿದೆ. ಬರಿ ಕೆಟ್ಟ.. ಕೆಟ್ಟ.. ಚಟಗಳು ನಿಮಗೆ ಎಂದು ಬೈದಳು. ಮನುಷ್ಯನಿಗೆ ಚಟ ಇರಬೇಕು, ಇಲ್ಲ ಹಟ ಇರಬೇಕು. ಏನು ಇಲ್ಲಾ ಅಂದರೆ ಮುಂದೆ ಬರುವದಿಲ್ಲ. ನನ್ನ ಗೆಳೆಯ ಮಾಧವ ಏನು? ಹೇಳುತ್ತಾನೆ ಗೊತ್ತಾ, "ಚಟವೇ ಚಟುವಟಿಕೆಗಳ ಮೂಲ, ಚಟ ಇಲ್ಲದವನು ಚಟ್ಟಕ್ಕೆ ಸಮಾನ" ಎಂದು ಹೇಳಿದೆ. ನಿಮ್ಮ ಚಟ ಗೊತ್ತಿಲ್ಲವಾ?. ಒಂದು ಟೀ, ಮತ್ತೊಂದು ಆ ಕಂಪ್ಯೂಟರ್ ಎಂದಳು. ಆಡಿಕೊ... ಆಡಿಕೊ... ನಾನು ಮಾಡುತ್ತಾ ಇರೋದು ಪುಣ್ಯದ ಕೆಲಸ. ಒಬ್ಬರನ್ನು ಅಳಿಸೋದು ಸುಲಭ, ನಗಿಸುವದು ತುಂಬಾ ಕಷ್ಟ. ಬೇಕಾದರೆ ನಿನ್ನ ಈಗಲೇ ಅಳಿಸುತ್ತೇನೆ ಎಂದು ಒಂದು ತಲೆಗೆ ಹೊಡೆದೆ. ಕಿಟಾರನೇ ಚೀರಿ ... ಎಷ್ಟೇ ಆದರೂ ಡಾಕು, ಕಲ್ಲೂರ ಕಾಳ ಕ್ಷಮಿಸಿ ... ಕಲ್ಲೂರ ಕುಲ್ಕರ್ಣಿ ತಾನೇ? ಎಂದಳು. ಲೇ ನಮ್ಮ ಊರು ದ್ಯಾವನೂರು ಕಣೆ ಎಂದೆ.ತಡಿರಿ ಅತ್ತೆಗೆ ಕೇಳುತ್ತೇನೆ ಎಂದು ಫೋನ್ ಮಾಡಿದಳು. ಫೋನ್ ಇಟ್ಟು ಜೋರಾಗಿ ನಗ ಹತ್ತಿದಳು. ನಿಮ್ಮದು ದೇವನೂರು, ಸಧ್ಯ ದೆವ್ವನೂರು ಮಾಡಲಿಲ್ಲ ಎಂದು ಈ ದೇವನೂರು ಕುಲಕರ್ಣಿನ ಹೀಯಾಳಿಸಿದಳು.

ಕಡೆಗೆ ಟೀ ಕೊಟ್ಟು ಬೇಗ ಸ್ನಾನ ಮಾಡಿ ಆಫೀಸ್ ಲೇಟ್ ಆಗುತ್ತೆ ಎಂದಾಗ, ನಿನ್ನೆ ತಾನೇ ಬಾಸ್ ಹತ್ತಿರ ಸಹಸ್ರ ನಾಮಾವಳಿಗಳ ಸರಣಿ ನೆನಪು ಆಯಿತು. ಬೇಗನೆ ಟೀ ಕುಡಿದು ಸ್ನಾನಕ್ಕೆ ಹೋದೆ. ದಾಡಿ ಮಾಡಿ ಕೊಳ್ಳದಿದ್ದರೆ, ಬಾಸ್ ಬೇರೆ ಮಾಡಿಕೊಳ್ಳಲು ನಿನಗೇನೂ ಧಾಡಿ ಎಂದು ಬೈಯುತ್ತಾನೆ. ಟೈಮ್ ಬೇರೆ ತುಂಬಾ ಆಗಿತ್ತು. ಕಡೆಗೆ ನಿನ್ನೆ ನೋಡಿದ, ರಜನೀಕಾಂತ್ ಶಿವಾಜಿ ಸಿನೆಮಾ ನೆನಪು ಆಗಿ, ಇದ್ದ ಎರಡು ಸಲಿಕೆ ತೆಗೆದುಕೊಂಡು ಬೇಗ.. ಬೇಗ.. ಕೆರೆದು ಕೊಳ್ಳಲು ಅನುವಾದೆ. ಅಷ್ಟರಲ್ಲೇ ಎಡಗಡೆ ಚರ್ಮ ಕಿತ್ತು ರಕ್ತ ಬರಲು ಶುರು ಆಗಿತ್ತು. ಮುಂದೆ ಸಾವಕಾಶವಾಗಿ ಮಾಡುತ್ತಾ ಇದ್ದಾಗ, ಮತ್ತೊಂದು ಅನಾಹುತ ಆಯಿತು. ಮೀಸೆ ಕಟ್ ಆಗಿತ್ತು. ಮೀಸೆ ಪೂರ್ತಿ ತೆಗೆದು ಬಿಟ್ಟೆ. ಮೀಸೆ ಇದ್ದ ಮತ್ತು ಕೆತ್ತಿದ ಜಾಗ ಮುಚ್ಚಿ ಕೊಂಡು ಬಂದೆ. ಏನು? ಆಯಿತು ಕೈ ತೆಗೆಯಿರಿ ಎಂದಳು. ಕೈ ತೆಗೆದ ಮೇಲೆ ಜೋರಾಗಿ ನಗಹತ್ತಿದಳು. ಕಡೆಗೆ ಪೂಜೆ ಮಾಡಿ ಆಫೀಸ್ ಹೋಗಲು ಅನುವಾದಾಗ, ನನ್ನ ಮಡದಿ ನನ್ನ ಮುಖ ನೋಡಿ "ಡಾಕು ಮಂಗಲ್ ಸಿಂಗ್" ಹಾಗೆ ಕಾಣಿಸುತ್ತಾ ಇದ್ದೀರ ಎಂದು ಕುಹಕವಾಡಿದಳು. ಆದರೆ ಮೀಸೆ ಇರಬೇಕಿತ್ತು. ನಾನು ಕನ್ನಡಿ ಮುಂದೆ ಹೋಗಿ ನಿಂತೆ. ಈಗಲೇ ಚೆನ್ನಾಗಿ ಕಾಣಿಸುತ್ತಾ ಇದ್ದೇನೆ. ಸ್ವಲ್ಪ ಯಂಗ್ ಅನ್ನಿಸುತ್ತೇನೆ ಅಲ್ಲವಾ? ಎಂದೆ. ನಾನು ಅದಕ್ಕೆ ಮೀಸೆ ಇರಬೇಕಿತ್ತು ಎಂದಿದ್ದು ಎಂದಳು. ಮಡದಿ ಡಾಕು ಎಂದಿದ್ದು ಪರ್ವಾಗಿಲ್ಲ, ಎಷ್ಟೇ ಆದರೂ ನಾನು ಗೋಪಾಲ್ ಅಲ್ಲವೇ, ಪರಮಾತ್ಮ ಗೋಪಾಲ ಕೃಷ್ಣ ಜೈಲಿನಲ್ಲೇ ಜನ್ಮವೆತ್ತಿರಬಹುದು. ನಾನು ಜೈಲಿಗೆ ಹೋಗಿ ಬಂದಿರುವೆ ಎಂದು ಬಾಸ್ ಗೆ ಹೆದರಿಸಬಹುದು ಎಂದು ಯೋಚಿಸಿ, ಇನ್ನೂ ಸ್ವಲ್ಪ ಲೇಟ್ ಆಗಿ ಆಫೀಸ್ ಹೊರಟು ನಿಂತೆ.

ಆಫೀಸ್ ಹೋಗುತ್ತಾ ಬೈಕ್ ನಲ್ಲಿ ಏನಾದರೂ ಬರಿ ಬೇಕು ಎಂದು ಯೋಚಿಸುತ್ತಾ ಇದ್ದಾಗ, ನಿನ್ನೆ ಮಡದಿ ಹೇಳಿದ ಕಿಕ್ಕಿಂಗ್ ಕಾಲಂ ಎಂದು ಬರೆಯಿರಿ, ಎಂದು ಹೇಳಿದ್ದು ನೆನಪಾಯಿತು. ಸರಿ ಅನ್ನಿಸಿತು ಕಿಕ್ಕಿಂಗ್ ಕಾಲಂ ಎಂದರೆ ಕಿಕ್ಕಿಂಗ್ + ಕಾಲು + ಅಮ್ಮsss...... ಅಲ್ಲವೇ?.

Friday, November 19, 2010

ಜಡೆ ಇದ್ದ ಹುಡುಗಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು....

ನನ್ನ ಒಬ್ಬ ಗೆಳೆಯ ನರೇಂದ್ರ ಶಯನಾವಸ್ಥೆಯಲ್ಲಿ ಇದ್ದ. ಹೋಗಿ ಎಬ್ಬಿಸಿದೆ. ಆಸಾಮಿ ತುಂಬಾ ಕೋಪ ಮಾಡಿಕೊಂಡು ಬಿಟ್ಟಿದ್ದ. ಶಯನಾವಸ್ಥೆಯಿಂದ ಸೀದಾ ಶ್ವಾನಾವಸ್ಥೆಗೆ ತಿರುಗಿದ್ದ. ಸಧ್ಯ ಬೊಗಳಿದ, ಎಬ್ಬಿಸಿದ್ದಕ್ಕೆ ಕಚ್ಚಲಿಲ್ಲ. ಅವನ ಬಾಯಲ್ಲಿ ಬಂದ ಧಾರವಾಡ ಭಾಷೆ ನುಡಿ ಮುತ್ತುಗಳು, ನನ್ನ ಕರ್ಣಕ್ಕೆ ಕುಂಡಲಗಳ ಹಾಗೆ ಅಲಂಕರಿಸಿದ್ದವು. ನಾನು ಅವನನ್ನು ಇದು ಕಂಪ್ಯೂಟರ್ ಪರದೆ, ಸೊಳ್ಳೆ ಪರದೆ ಎಂದು ಕೊಂಡಿರುವೆ ಏನು? ಎಂದು ತಮಾಷೆ ಮಾಡಿದೆ. ವಯಸ್ಸು ಮೀರಿದ ಮೇಲೆ ನಿದ್ದೆ ಕಡಿಮೆ ಆಗುತ್ತೆ ಅಂತ ಹೇಳುತ್ತಾರೆ. ನೀನು ನೋಡಿದರೆ ವಯಸ್ಸು ಮೀರಿದ ಮೇಲೆ ಕೂಡ ಸಕತ್ ನಿದ್ದೆ ಹೊಡಿತ ಇದ್ದೀಯಾ? ಎಂದೆ. ಯಾರು ಹೇಳಿದ್ದು ವಯಸ್ಸು ಮೀರಿದೆ ಎಂದು. ನನ್ನದು ಇನ್ನೂ ಕನಸು ಕಾಣೋ ವಯಸ್ಸು ಕಣೋ ಅಂದ. ಇಷ್ಟೆಲ್ಲಾ ಆಗಿದ್ದು ಸರಕಾರದ ನೀತಿ ನಿಯಮದಿಂದನೆ ಎಂದ. ಏನಪ್ಪಾ ಅದು ಸರಕಾರದ ನೀತಿ ನಿಯಮ ಎಂದೆ. ಗಂಡಿಗೆ 21 ವರ್ಷ , ಹೆಣ್ಣಿಗೆ 18 ವರ್ಷ ಮದುವೆಗೆ ಎಂದು ಫಿಕ್ಸ್ ಮಾಡಿದ್ದು. ನಾವು 21 ವರ್ಷ ಆಗುವವರೆಗೆ ಮದುವೆಗೆ ಕಾಯಬೇಕು, ಆಮೇಲೆ 18 ವರ್ಷ ಆದ ಹುಡುಗೀನೆ ಹುಡುಕಬೇಕು ಮತ್ತು ಮದುವೆ ಆಗಬೇಕು. ಇದು ತಪ್ಪು ಅಲ್ಲವಾ? ಎಂದ. ಮನಸಿನಲ್ಲೇ... ಬಾಲ್ಯವಿವಾಹ ಬೇಕಾ? ಮಗನೆ ಎಂದು ಬೈದು, ನಾನು ಹೌದು.. ಹೌದು.. ಎಂದು ತಲೆ ಆಡಿಸಿದೆ. ಅದು ಬೇರೆ ಅಪ್ಪ, ಅಮ್ಮ ಕುಂಡಲಿ, ಜಾತಿ, ಒಳಜಾತಿ ಮತ್ತು ಮನೆತನ ಎಂದೆಲ್ಲಾ ನೋಡಿ, ಆಮೇಲೆ ಅವರು ಹಸಿರು ನಿಶಾನೆ ತೋರಿಸಿದ ಮೇಲೆ ನಾನು ನೋಡಿ ಒಪ್ಪಿಗೆ ಸೂಚಿಸಬೇಕು ಇದೆಲ್ಲಾ ಆಗುವದರೊಳಗೆ ನನ್ನ ತಲೆ ಕೂದಲು ಬೆಳ್ಳಗೆ ಆಗಿರುತ್ತವೆ. ಸಮ್ಮಿಶ್ರ ಸರಕಾರಕ್ಕೆ ಅವಕಾಶವೇ ಇಲ್ಲ ಎಂದ. ಅದು ಬೇರೆ ಈಗೀಗ ಹುಡುಗಿಯರ ಡಿಮ್ಯಾಂಡ್ ತುಂಬಾ ಜ್ಯಾಸ್ತಿ, ಸಂಬಳ, ಮನೆ, ಹೊಲ, ಮನೆತನ ಎಂದು ತುಂಬಾ ಕೇಳುತ್ತಾರೆ ಗೋಪಿ ಎಂದು ರಾಗವೇಳೆದ. ಈ ತುಳಸಿ ಲಗ್ನಕ್ಕೆ ನನಗೆ 34 ಸಂವತ್ಸರಗಳು ತುಂಬುತ್ತವೆ, ಅದರಲ್ಲಿ ನೀನೆ ಅದೃಷ್ಟವಂತ ಕಣೋ ಎಂದು ಹೇಳಿದ. ಈಗೀಗ ಹುಡುಗಿಯರ ಜನ ಸಂಖ್ಯೆ ಬೇರೆ ಕಡಿಮೆ ಎಂದು ಹೇಳುತ್ತಾರೆ. ಇನ್ನೂ ಸ್ವಲ್ಪ ದಿವಸ ತಡೆದರೆ ವಧು ದಕ್ಷಿಣೆ ಕೊಟ್ಟು ಮದುವೆ ಮಾಡಿಕೊಳ್ಳುವ ಪರಿಸ್ತಿತಿ ಬರುತ್ತೆ ಎಂದು ಗೋಳಾಡಿದ. ಅದಕ್ಕೆ ಇನ್ನೂ ಮದುವೆ ಆಗಿಲ್ಲ. ಮದುವೆ ಮುಂಚೆ ಕಾಣೋ ಕನಸನ್ನೆ ಕಾಣುತ್ತಾ ಇದ್ದೇನೆ ಎಂದ.

ನಾನು ಸ್ವಲ್ಪ ಯೋಚನೆ ಮಾಡುತ್ತಾ ನಿಂತೆ. ನಿಜ ಅನ್ನಿಸಿತು ಮದುವೆ ಎಂದರೆ ಎಷ್ಟು ಕಷ್ಟ ಎಂದು. ಇದೆಲ್ಲಾ ಯೊಚಿಸಿರಲೇ ಇಲ್ಲ. ನೋಡಿದ ಮೊದಲನೆ ಹುಡುಗೀನೆ ಪಾಸ್ ಮಾಡಿದ್ದೆ. ಸಧ್ಯ ಪುಣ್ಯಕ್ಕೆ ಅವಳ ಕುಂಡಲಿ,ನನ್ನ ಕುಂಡಲಿ ಹೊಂದಿತ್ತು. ಇಲ್ಲದೇ ಹೋಗಿದ್ದರೆ?. ಇವನು ಹೇಳಿದ ರಾಮಾಯಣ, ನಾನು ಮಹಾಭಾರತ ಸ್ಟೈಲ್ ನಲ್ಲಿ ಹೇಳಬೇಕಿತ್ತು ಏಕೆಂದ್ರೆ, ನಾನು ಮಂಗ್ಯಾನ ಲಿಂಕ್ ಕ್ಷಮಿಸಿ.... ಅದೇನೋ ಮಂಗಲಿಕ, ಮಂಗಳ ದೋಸೆ... ಅಲ್ಲಲ್ಲ....ಮಂಗಳ ದೋಷದವನು ಎಂದು, ಮನೋಜ ನನ್ನ ಕುಂಡಲಿ ಪರೀಕ್ಷಿಸಿ ಮೊನ್ನೆ ಹೇಳಿದ್ದ. ಹಾಗೆ ಮಂಗಳ ದೋಷ ಇರುವ ಹುಡುಗರು ಮಂಗಳ ದೋಷ ಇರುವ ಹುಡುಗಿಯರನ್ನೇ ಮದುವೆ ಆಗಬೇಕು ಎಂಬ ನಿಯಮ ಇದೆ ಅಂತೆ. ಅವಳಿಗೂ ಮಂಗಳ ದೋಷ ಇತ್ತು. ಹೀಗಾಗಿ ಮದುವೆ ನೆರವೇರಿತು. ಅವಳನ್ನು ಧಿಕ್ಕರಿಸಿದ್ದರೆ, ನನಗೆ ಕೂಡ ಈ ನರೇಂದ್ರನ ಗತಿನೇ ಬರುತಿತ್ತು... ರಾಮ... ರಾಮ.... ಶ್ರೀ ರಾಮನನ್ನು ನೆನಸಿದ್ದು ಏಕೆ? ಎಂದು ತಿಳಿಯಿತು ತಾನೇ... (ನಾನು ಏನಿದ್ದರೂ ನನ್ನ ದೋಷದ ಮೊದಲೆರಡು ಅಕ್ಷರದ ರೂಪ ತಾನೇ?). ಇಷ್ಟೆಲ್ಲಾ ಯೋಚಿಸಿ ಮಡದಿಯ ಕಾಲ್ ನೆನಪು ಆಗಿ ಕ್ಷಮಿಸಿ.... ಮಿಸ್ ಕಾಲ್ ನೆನಪು ಆಗಿ ಹೋಗಿ ಅವಳಿಗೆ ಕರೆ ಮಾಡಿದೆ. ಏನ್ರೀ ಇಷ್ಟೊತ್ತು ಎಂದು ಗದರಿಸಿದಳು. ಏನಿಲ್ಲಾ ಕಣೇ, ನಿನ್ನ ಬಗ್ಗೆನೇ ಡೀಪ್ ಆಗಿ ಯೋಚನೆ ಮಾಡುತ್ತಾ ಇದ್ದೆ ಎಂದು ಹೇಳಿದೆ. ಓ .. ನಿಮ್ಮದು ಗೊತ್ತಿಲ್ಲವಾ?...ಎಂಬ ವ್ಯಂಗ್ಯ ಮಾತಿನೊಂದಿಗೆ, ಸಂಜೆ ಬರುತ್ತಾ ಸೇಬು ಹಣ್ಣು ತೆಗೆದುಕೊಂಡು ಬನ್ನಿ ಇವತ್ತು ಏಕಾದಶಿ ಎಂದು ಹೇಳಿದಳು. ಆಯಿತು ಕಣೇ ಎಂದು ಹೇಳಿ ಫೋನ್ ಕಟ್ ಮಾಡಿ ಮತ್ತೆ ನರೇಂದ್ರನ ಕಡೆಗೆ ಬಂದೆ.

ಮತ್ತು ಬಿಡದೆ ತನ್ನ ವರಸೆ ಶುರು ಹಚ್ಚಿಕೊಂಡ. ಮೊನ್ನೆ ಒಂದು ಹುಡುಗಿ ನೋಡುವುದಕ್ಕೆ ಹೋಗಿದ್ದೆ. ಆ ಹುಡುಗಿ ಕೆಲಸದಲ್ಲಿ ಇತ್ತು. ಮತ್ತೆ ತುಂಬಾ ಚೆನ್ನಾಗಿ ಇದ್ದಳು. ಆದರೆ ನನ್ನ ಕರ್ಮಕ್ಕೆ ಅವಳ ಸಂಬಳ ನನ್ನ ಸಂಬಳಕ್ಕಿಂತ ಸ್ವಲ್ಪ ಜ್ಯಾಸ್ತಿ ಇತ್ತು ಎಂದ. ಅದ್ದಕ್ಕೆ ಏನು? ಈಗ ಸುಮ್ಮನೇ ಒಪ್ಪಿಕೊಳ್ಳಬಾರದ? ಎಂದೆ. ಅವಳು ನನಗಿಂತ ಜ್ಯಾಸ್ತಿ ಬೇರೆ ಕಲೇತಿದ್ದಾಳೆ ಎಂದ.

ಇನ್ನೂ ಕೆಲ ಹುಡುಗಿಯರದು ಮಹಿಳಾ ಮೀಸಲಾತಿ ಎಂದ. ಹಾಗೆಂದರೆ ಎಂದು ಬಾಯೀ ತೆಗೆದೆ. ಲೇ ಅಷ್ಟು ಗೊತ್ತಿಲ್ಲವಾ ಲವ್ ಮ್ಯಾರೇಜ್ ಕಣೋ ಎಂದ. ನೀನು ಲವ್ ಮಾಡೋಕೆ ಪ್ರಯತ್ನ ಪಡಬೇಕಾಗಿತ್ತು ಎಂದೆ. ಅದನ್ನೇನೂ ಕೇಳುತ್ತಿ ಲವ್.. ಲವ್... ಅಂತ ಹೇಳಿ ಪೂರ್ತಿ ಕಾಲೇಜ್ ತುಂಬಾ ಲಬೊ...ಲಬೊ... ಎಂದು ಬಾಯೀ ಬಡಿದುಕೊಂಡಿದ್ದೆ, ನನ್ನ ಕರ್ಮಕ್ಕೆ ಒಂದು ಹುಡುಗೀನು ಮುಸುನೋಡಲಿಲ್ಲ ಎಂದು ಬೇಜಾರಿನಲ್ಲಿ ಹೇಳಿದ. ಗೋಪಿ ಬಾಯೀ ಮುಚ್ಚಿಕೊ ಸೊಳ್ಳೆ ಬಾಯಲ್ಲಿ ಹೋದರೆ ಕಷ್ಟ ಎಂದ.

ನಿನ್ನ ಕತೆ ಕೇಳಿ, ನಮ್ಮ ಫೇಮಸ್ ಡೈರೆಕ್ಟರ್ ಶ್ರೀ ಕಾಶೀನಾಥ ಅವರ ಹಾಡು ನೆನಪಿಗೆ ಬರುತ್ತೆ. ಆದರೆ ಕವಿತೆ ಸಾಲು ಉಲ್ಟಾ ಅಷ್ಟೇ ಎಂದೆ. ಅದು "ಜಡೆ ಇದ್ದ ಹುಡುಗಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು ಮತ್ತು ಮೀಸೆ ಹೊತ್ತ ಗಂಡಸಿಗೆ ರಿಮ್ಯಾಂಡಪ್ಪೋ ರಿಮ್ಯಾಂಡು" ಎಂದೆ. ಹೌದು, ಅನ್ನು.. ಕಣೋ ಅನ್ನು... ಎಲ್ಲರೂ ಆಡಿಕೊಳ್ಳುವವರೇ ನನಗೆ ಎಂದು ಗೋಳಾಡಿದ. ಮತ್ತೆ ಯಾರು? ಆಡಿಕೊಳ್ಳುತ್ತಾರೆ ಎಂದು ಕೇಳಿದೆ. ಮತ್ತೆ ಆ ಪಂಚಾಮೃತ ಮನ್ಯಾ ನರೇಂದ್ರ ಎಂದು ಹೆಸರು ಇಟ್ಟುಕೊಂಡ ಕರ್ಮಕ್ಕೆ.. ನನಗೆ ಶ್ರೀ ವಿವೇಕಾನಂದ ಸ್ವಾಮಿಗಳಿಗೆ ಹೋಲಿಸುತ್ತಾನೆ, ಮಗ ದೇವೇಂದ್ರನಿಗೆ ಹೋಲಿಸೋಕೆ ಏನು? ಕಷ್ಟ ಎಂದ.

ಇಷ್ಟೆಲ್ಲಾ ಕೊರೆದ ಮೇಲೆಯೂ ಕೂಡ ಏನೋ? ಕನಸಿನ ಬಗ್ಗೆ ಹೇಳುತ್ತಾ ಇದ್ದೆ ಎಂದು ಕೇಳಿದೆ. ಕತ್ರಿನ ಕೈಫ್ ಮದುವೆ ಆಗುವ ತರಹ ಕನಸು ಕಾಣುತ್ತಿದ್ದೆ ಎಂದ. ಅವಳ ಮದುವೆಯಲ್ಲಿ ನೀನೇನೋ ಮಾಡುತ್ತಾ ಇದ್ದೆ ಎಂದು ಕೀಟಲೇ ಮಾತು ಆಡಿದೆ. ಊಟ ಬಡಿಸುತ್ತಾ ಇದ್ದೆ ಎಂದು ಕೋಪದಿಂದ ಉಲಿದ. ಕನಸಿನಲ್ಲೇ ನಾನು ಕೂಡ ಇದ್ದೇನಾ ಎಂದು ಕೇಳಿದೆ. ಹಾ ಇದ್ದೆ.... ನೀನೇ ಅಡಿಗೆ ಭಟ್ಟ, ಮತ್ತೆ ....ನನ್ನ ಮಗನೆ ಎಂದು ಉಸುರಿದ. ಆಯಿತು ಹೇಳಪ್ಪ ಎಂದೆ. ಕತ್ರಿನ ಕೈಫ್ ಜೊತೆ ನನ್ನ ಮದುವೆ ಆಗುವ ಹಾಗೇ ಕನಸು ಬಿತ್ತು ಕಣೋ, ಎಂದು ಮುಖ,ಕಣ್ಣು ಎರಡು ಅರಳಿಸಿ ಹೇಳಿದ. ಅದು ಹೇಗೆ? ಆಗುತ್ತೆ ಎಂದು ನಾನು ಕೇಳಿದೆ. ಯಾಕಪ್ಪಾ ಆಗೋಲ್ಲ ಅವಳೇನೂ ನಿನ್ನ ವೈಫಾ? ಎಂದು ದಬಾಯಿಸಿದ. ಹೆಂಡತಿ ಪಕ್ಕದಲ್ಲಿ ಇಲ್ಲದಿದ್ದರೂ.... ಸವಕಾಶ ಕಣೋ ಎಂದು ಹೇಳಿದೆ. ಅಷ್ಟರಲ್ಲೇ ಹೆಂಡತಿಯ ಮಿಸ್ ಕಾಲ್ ಮಿಂಚಿ ಮಾಯೆ ಆಯಿತು. ಈ ಹೆಂಡತಿಯರು ಮಿಸ್ಸಸ್ ಆದರೂ, ಮಿಸ್ ಕಾಲ್ ಕೊಡುವುದನ್ನು ಬಿಡುವುದಿಲ್ಲ ನೋಡು ಎಂದು ಹೇಳಿದೆ. ನಿನಗೂ ಇದೆ ಗತಿ ಕಣೋ, ಕಾಲು ಗ್ಯಾರಂಟೀ ಎಂದೆ. ಲೇ... ಸುಮ್ಮನಿರು ಇದು ಮಧ್ಯಾಹ್ನ ಬಿದ್ದ ಕನಸು ನನಸು ಆಗಬಹುದು ಎಂದ. ಸಧ್ಯ ಇದನ್ನು ಬೇರೆ ಯಾರಿಗೂ ಹೇಳಬೇಡ ಇಲ್ಲಿ ತುಂಬಾ ಜನ ಬ್ರಹ್ಮಚಾರಿಗಳು ಇದ್ದಾರೆ, ಮತ್ತೆ ಸಲ್ಲು ಮಿಯಾಗೆ ಏನಾದರೂ ತಿಳಿದರೆ ಖಲಾಸ್.... ಕತ್ರಿನ ಕೈಫ್ ಬದಲಿ, ಅವನ ಕೈಯಲ್ಲಿ ಕತ್ತರಿ ಮತ್ತು ನೈಫ್ ಇರುತ್ತೆ ಎಂದೆ. ಏ ಸುಮ್ಮನೇ ಇರಪ್ಪ ನಿನ್ನದೊಂದು ಎಂದು ಮುಖ ತಿರುಚಿದ. ಮತ್ತೆ ಐಶ್ವರ್ಯ, ಗಿಶ್ವರ್ಯ ಕನಸಿನಲ್ಲಿ ಬರುವುದಿಲ್ಲವಾ? ಎಂದು ಕೇಳಿದೆ. ಮದುವೆಗೆ ಮುಂಚೆ ಬರುತ್ತಿದ್ದಳು. ನಾನು ಮದುವೆ ಆದವರ ಸುದ್ದಿಗೆ ಹೋಗಲ್ಲ ಎಂದು ಹೇಳಿದ. ಲೇ ಕೆಲಸದ ಸಮಯದಲ್ಲಿ ಕೆಲಸ ಮಾಡುವದು ಬಿಟ್ಟು ಕನಸು ಕಾಣುತ್ತಾ ಇದ್ದೀಯಲ್ಲಲೇ ಎಂದು ದಬಾಯಿಸಿದೆ.

ಲೇ ನಾನು ಮಲಗಿಕೊಳ್ಳಬೇಕು, ಸುಮ್ಮನೇ ಹೋಗು ಎಂದು ಬೈದ. ಬಾಸ್ ಬಂದರೆ ಏನು? ಮಾಡುತ್ತೀ ಎಂದು ಕೇಳಿದೆ. ಎದುರಿಗೆ ಇರುವ ಕೆಲಸದ ಪಪೇರ್ ತೋರಿಸಿ, ಕೆಲಸದ ಬಗ್ಗೆ ತುಂಬಾ ಆಳವಾಗಿ ಯೋಚಿಸುತ್ತಿದ್ದೆ ಎಂದು ಹೇಳುತ್ತೇನೆ ಎಂದು ಹೇಳಿ ಕಳುಹಿಸಿದ.

ಇಷ್ಟೆಲ್ಲಾ ಆದರೂ ನನಗೆ ಒಂದು ಹನಿ ಕಣ್ಣೀರು ಕೂಡ ಬರಲಿಲ್ಲ, ಏಕೆಂದರೆ ಅನಾಮತ್ತಾಗಿ 3 ಘಂಟೆ ನೀರು ಕುಡಿಯಲು ಬಿಡದೆ ನೀರಿಳಿಸಿದ್ದ. ಅವನೇನೋ ನಿದ್ದೆಗೆ ಹೋದ, ಇವತ್ತು ರಾತ್ರಿ ನನಗೆ ನಿದ್ದೆ ಬರೋದು ಡೌಟ್. ನನಗು ಒಬ್ಬ ಗಂಡು ಮಗ ಇದ್ದಾನೆ ಸ್ವಾಮಿ...... ಮನೆಗೆ ಹೋಗುತ್ತಾ ಸೇಬು ಹಣ್ಣು ತೆಗೆದುಕೊಂಡು ಮನೆಗೆ ಹೋದೆ. ಹೆಂಡತಿ ಅಂದರೆ ಸಾಮಾನ್ಯನಾ... ಭಯ, ಭಕ್ತಿ ಇರಬೇಕು ತಾನೇ?.

ನನ್ನ ರುಕ್ಮಿಣಿ( ರೊಕ್ಕಾ + Money) ಮತ್ತು ಸತ್ಯ ಭಾಮೆ ....

ಸದಾ ಟ್ರ್ಯಾಫಿಕ್ ಫುಲ್ಲ್ ಇರೋ ನನ್ನ ಬಾಯಿಗೆ ರೆಡ್ ಸಿಗ್ನಲ್ ಹಾಕಿದ್ದಳು ನನ್ನ ಹೆಂಡತಿ. ಸಿಗ್ನಲ್ ಇಲ್ಲದೇ ಸರಾಸ್‌ಗಾಟವಾಗಿ ತಿಂಡಿ-ತಿನಿಸುಗಳು ಹೋಗುವ ನನ್ನ ಬಾಯಿಗೆ ಬೀಗ ಬಿದ್ದಿತ್ತು. ಏನೇ? ಇವತ್ತು ಉಪವಾಸ ಎಂದೆ. ದೇವರಿಗೆ ಪೂಜೆ ಆದ ಮೇಲೆನೇ ತಿಂಡಿ , ಊಟ ಎಲ್ಲಾ ಎಂದಳು. ಐದು ವರ್ಷದಲ್ಲಿ ಇರಲಾರದ ನೀತಿ ನಿಯಮ ಏನೇ ಇದು ಕರ್ಮ ಎಂದೆ. ನೀವು ಈ ನೀತಿ ನಿಯಮ ಮಾಡಲಾರದಕ್ಕೆ ನಿಮಗೆ ಹೀಗೆ ಆರೋಗ್ಯ ಸರಿ ಇರುವದಿಲ್ಲ ಎಂದಳು. ನಾನು ಏನು ತಿನ್ನದೇ ಇದ್ದರೆ ಆರೋಗ್ಯದ ಗತಿ ಏನು ಎಂದೆ. ಎಲ್ಲಾ ನಿಮ್ಮ ಆರೋಗ್ಯದ ದೃಷ್ಟಿಯಿಂದನೆ ಮಾಡುತ್ತಾ ಇರುವದು ಎಂದು ದಬಾಯಿಸಿದಳು. ಇವತ್ತು ಬೇರೆ ಶನಿವಾರ ಹೇಗಾದರೂ ಮಾಡಿ ಆಫೀಸ್ ಗೆ ಹೋಗಿಬಿಟ್ಟರೆ ಸಾಕು ತಾನೇ ಎಲ್ಲ ಸಿಗುತ್ತೆ ಎಂದು ಯೋಚಿಸಿ, ಇವತ್ತು ಸ್ವಲ್ಪ ಕೆಲಸ ಇದೆ ಆಫೀಸ್ ಹೋಗಬೇಕು ಎಂದೆ. ಸುಮ್ಮನೇ ರೈಲು ಬಿಡಬೇಡಿ ಎಂದಳು. ಹಳೆಯ ಒಂದು ಮಿಂಚಂಚೆ ತಾರೀಖು ಬದಲಿಸಿ ಅವಳಿಗೆ ತೋರಿಸಿದೆ. ಆಯಿತು ಹೋಗಿ ಬನ್ನಿ, ಆದರೆ ಆಫೀಸ್ ನಲ್ಲಿ ಏನು ತಿನ್ನ ಬೇಡಿ ಎಂದಳು. ಆಯಿತು ಎಂದು ಖುಶಿಯಿಂದ ನನ್ನ ಗಾಡಿ ಸ್ಟಾರ್ಟ್ ಮಾಡಿ ಆಫೀಸ್ ಹೋದೆ.

ಆಫೀಸ್ ತಲುಪಿ ನೋಡುತ್ತೇನೆ. ತುಂಬಾ ಜನ ಬಂದಿದ್ದರು. ನಾನು ಮೊದಲ ಬಾರಿ ಶನಿವಾರ ಆಫೀಸ್ ಬಂದಿದ್ದು ನೋಡಿ, ನಟರಾಜ್ ನನ್ನ ಬಳಿ ಬಂದು ಏನ ಸರ್ ಇವತ್ತು ಎಂದ. ಅಜಿತ್ ನಗುತ್ತಾ ಎಲ್ಲಾ ಸಂಸಾರಿಗಳ ಹಣೆ ಬರಹ ಇಷ್ಟೇ ಎಂದ. ಹಾಗೇನೂ ಇಲ್ಲ ಎಂದೆ. ಎಲ್ಲರೂ ತಿಂಡಿಗೆ ಹೊರಟರು. ನಾನು ಹೋಗಬೇಕು ಅನ್ನಿಸಿದರೂ, ಪಾಪ ನನ್ನ ಮಡದಿ, ನನ್ನ ಸಲುವಾಗಿ ಇಷ್ಟು ಕಷ್ಟ ಪಡುತ್ತಿದ್ದಾಳೆ ಎಂದು ಅನ್ನಿಸಿ ನಾನು ಹೋಗಲಿಲ್ಲ. ಎಲ್ಲರೂ ತಿಂಡಿ ಮುಗಿಸಿ ಬಂದರು. ಅಷ್ಟರಲ್ಲಿ ನನ್ನ ಕರ್ಮಕ್ಕೆ ಒಂದು ತುಂಬಾ ಅರ್ಜೆಂಟ್ ಕೆಲಸ ನನ್ನ ಮಿಂಚಂಚೆ ಯಲ್ಲಿ ಬಂದಿತ್ತು.

ಅದನ್ನೇ ಯೋಚನೆ ಮಾಡುತ್ತಾ ಕುಳಿತಿದ್ದೆ. ನಟರಾಜ ಬಂದು ತನ್ನ ಮೊಬೈಲ್ ಚಾರ್ಜರ್ ಮರೆತು ಬಂದಿದ್ದೇನೆ, ನಿಮ್ಮ ಚಾರ್ಜರ್ ಉಪಯೋಗಿಸುತ್ತೇನೆ ಎಂದು ಅವಸರದಲ್ಲಿ ಬಂದು ಅದರಲ್ಲಿ ಸಿಕ್ಕಿಸಿದ. ಅದು ಅದರಲ್ಲಿ ಹೋಗಲಿಲ್ಲ ಎಂದು ಅದನ್ನು ಉಲ್ಟಾ ಮಾಡಿ ಹಾಕಿದ. ಅವನ ಮೊಬೈಲ್ ಚಾರ್ಜ್ ಮಾಡುವ ಸಲುವಾಗಿ ಗುದ್ದಾಡಿದ, ಏನು ಪ್ರಯೋಜನ ಆಗಲಿಲ್ಲ. ನಾನು ಸ್ವಲ್ಪ ಕೆಲಸದ ಒತ್ತಡದಲ್ಲಿ ಇದ್ದಿದ್ದರಿಂದ ಅವನನ್ನು ಗಮನಿಸಲಿಲ್ಲ. ಅಷ್ಟರಲ್ಲಿ ಅಜಿತ ಬಂದು ಏನಪ್ಪಾ? ನಟರಾಜ ನಿಮ್ಮ ಹುಡುಗಿ ಕರೆ ಬರಲಿಲ್ಲವಾ ಎಂದ. ನಟರಾಜ ಗುದ್ದಾಡಿ ಇದು ನನ್ನ ಮೊಬೈಲ್ ಗೆ ಬರಲ್ಲಾ ಎಂದು ನನ್ನ ಚಾರ್ಜ್ ಗೆ ಮೊಬೈಲ್ ಸಿಕ್ಕಿಸಿದ. ಅಜಿತ್ ಹಾಗಲಕಾಯಿ ಚಿಪ್ಸ್ ತೆಗೆದು ಕೊಂಡು ಬಂದಿದ್ದ. ನಮಗೂ ಸ್ವಲ್ಪ ಕೊಟ್ಟ. ಅದು ತುಂಬಾ ಚೆನ್ನಾಗಿ ಇತ್ತು, ಸ್ವಲ್ಪ ಕೂಡ ಕಹಿ ಇರಲಿಲ್ಲ. ಅದನ್ನು ತಿನ್ನುತ್ತಾ ಕೆಲಸ ಮುಗಿದ ಮೇಲೆ ಅಜಿತನಿಗೆ ಅದನ್ನು ಮಾಡುವ ವಿಧಾನ ಕಳುಹಿಸು ಎಂದು ಹೇಳಿದೆ. ಅಷ್ಟರಲ್ಲಿ ನನಗೆ ಆಫೀಸ್ ಫೋನ್ ಗೆ ಒಂದು ಕರೆ ಬಂದಿತ್ತು. "ಎಲ್ರಿ ಹಾಳಾಗಿ ಹೋಗಿದ್ರೀ" ಎಂದು ನನ್ನ ಮಡದಿ ಕಿರುಚಿತ್ತ ಇದ್ದಳು. ಮೊಬೈಲ್ ಯಾಕೆ? ಸ್ವಿಚ್ ಆಫ್ ಮಾಡಿದ್ದೀರ ಎಂದು ಆಫ್ ಮೂಡಿನಲ್ಲಿ ಬೈದಳು. ನಾನು ಇಲ್ವಲ್ಲಾ ಎಂದು ನನ್ನ ಮೊಬೈಲ್ ನೋಡಿದೆ ನಿಜವಾಗಿಯೂ ಆಫ್ ಆಗಿತ್ತು. ಓ ಹೌದು ಕಣೇ ಆಫ್ ಆಗಿದೆ ಸಾರೀ ಎಂದೆ. ಮತ್ತೆ ಯಾರದು ಫೋನ್ ಎತ್ತಿದ ಹುಡುಗಿ ಎಂದು ದಬಾಯಿಸಿದಳು. ಕಡೆಗೆ ಅವಳು ನಮ್ಮ ಆಫೀಸ್ ರಿಸೆಪ್ಶನಿಸ್ಟ್ ಎಂದು ತಿಳಿಹೇಳಿದೆ.ಆದರೂ, ನನಗೇನೋ ಡೌಟು ಎಂದು ಕೋಪಿಸಿಕೊಂಡು ಫೋನ್ ಕಟ್ ಮಾಡಿದಳು.

ಅಷ್ಟರಲ್ಲಿ ಓಡಿ ಬಂದ ನಟರಾಜ, ಏನ್ರೀ ಸರ್ ನನ್ನ ಮೊಬೈಲ್ ಹಾಳು ಮಾಡಿಬಿಟ್ಟಿರಲ್ಲಾ ಸರ್ ಎಂದ. ಎಂತಹ ಚಲೋ ನನ್ನ ಹುಡುಗಿ ಕರೆ ಮಾಡುತ್ತಾ ಇತ್ತು. ಅದು ಐದು ವರ್ಷದ ಫೋನ್ ಎಂದ. ನನಗೆ ಆಶ್ಚರ್ಯ ನಾನೇನು ಮಾಡಿದೆ ಎಂದೆ. ನಿಮ್ಮ ಚಾರ್ಜರ ದೆಸೆಯಿಂದ ಅಂದ. ನಾನು ನನ್ನ ಮೊಬೈಲ್ ಆನ್ ಮಾಡಿದೆ, ಆದರೆ ಚಾರ್ಜಾರ್ ಕೆಟ್ಟು ಹೋಗಿತ್ತು. ಮತ್ತೆ ಅರ್ಧ ಘಂಟೆಯಲ್ಲಿ ಹೋಗಿ ಹೊಸ ಮೊಬೈಲ್ ಕೊಂಡು ಬಂದಿದ್ದ. ನನ್ನ ಮೊಬೈಲ್ ಚಾರ್ಜ್ ಇಟ್ಟರೆ ಸಾಕು ಮೊಬೈಲ್ ಆಫ್ ಆಗುತಿತ್ತು.

ಕಡೆಗೆ ಎಲ್ಲ ಕೆಲಸ ಮುಗಿಸಿ, ಮನೆ ದಾರಿ ಹಿಡಿದೆ. ಬರುವ ದಾರಿಯಲ್ಲಿ ಹಾಗಲಕಾಯಿ ತೆಗೆದು ಕೊಂಡು ಹೋದೆ. ನನ್ನ ಮಡದಿ ತುಂಬಾ ಕೋಪ ಮಾಡಿ ಕೊಂಡಿದ್ದಳು. ನಾನು ಹೋಗುತ್ತಲೇ "ಸತ್ಯ ಭಾಮೆ... ಸತ್ಯ ಭಾಮೆ... ಕೋಪವೆನೇ ನನ್ನಲಿ" ಎಂದು ಹಾಡುತ್ತಾ ಮನೆ ಒಳಗಡೆ ಕಾಲು ಇಟ್ಟೆ. ತುಂಬಾ ಕೋಪಗೊಂಡಿದ್ದಳು. ತುಂಬಾ ಹಸಿವೆ ಕಣೇ ಏನು ತಿಂದಿಲ್ಲಾ ಎಂದು ಹೇಳಿದಾಗ, ಇದ್ದ ಕೋಪವೇಲ್ಲಾ ಮರೆತು ಮತ್ತೆ ಶಾಂತ ರೀತಿಯಲ್ಲಿ ಊಟಕ್ಕೆ ಹಾಕಿದಳು. ಊಟ ಆದ ಮೇಲೆ ಸಾವಕಾಶವಾಗಿ, ನನ್ನ ಹತ್ತಿರ ಬಂದು ನಿಜ ಹೇಳಿ ಮೊಬೈಲ್ ಯಾಕೆ ಆಫ್ ಮಾಡಿದ್ದು. ನಿಜವಾಗಿಯೂ ಆಫೀಸ್ ನಲ್ಲಿ ಕೆಲಸ ಇತ್ತಾ ಅಥವಾ...? ಎಂದಳು. ನಾನು ನಡೆದ ವಿಚಾರನೆಲ್ಲಾ ಹೇಳಿ, ನಾನು ನಾಮ ಮಾತ್ರಕ್ಕೆ ಗೋಪಾಲ ಕಣೇ, ಏನೋ ಬೇಕಾದರೆ ಸ್ವಲ್ಪ ದನ ಕಾಯಬಹುದು ಎಂದೆ. ಅವಳು ಜೋರಾಗಿ ನಕ್ಕೂ ಸುಮ್ಮನಾದಳು.

ಸಂಜೆ, ಲೇ.. ಹಾಗಲಕಾಯಿ ಚಿಪ್ಸ್ ಮಾಡೇ ಎಂದು ಅದರ ಮಾಡುವ ವಿಧಾನದ ಪ್ರಿಂಟ್ ಅವಳಿಗೆ ಕೊಟ್ಟೆ. ಇದನ್ನು ಏಕೆ ತಂದಿರಿ ನಾನು ತಿನ್ನುವದಿಲ್ಲ ಎಂದಳು. ಏಕೆ? ಎಂದು ಕೇಳಿದಾಗ, ಚೊಚ್ಚಲ ಗಂಡು ಮಗ ಇದ್ದರೆ ತಿನ್ನ ಬಾರದು ಎಂದು ಹೇಳಿದಳು. ಆಯಿತು ನಮ್ಮಿಬ್ಬರಿಗೆ ಮಾಡು ಎಂದೆ. ಅದೆಲ್ಲ ಆಗೋಲ್ಲ ನೀವೇ ಮಾಡಿಕೊಳ್ಳಿ. ಅದನ್ನು ಚೊಚ್ಚಲ ಗಂಡು ಮಗನ ತಾಯಿ ಕತ್ತರಿಸಬಾರದು ಕೂಡ ಎಂದಳು. ಕಡೆಗೆ ನಾನೇ ಮಾಡಿದೆ. ಆಗ ಕರೆಂಟ್ ಹೋಯಿತು, ನಾನು ಅವಳ ಹಿಂದೆ ಬಂದು ನಿಂತೆ. ಅವಳು ಹೆದರಿ ಬಿಟ್ಟಳು. ಏನೇ ಏನು? ಆಯಿತು ಎಂದೆ. ನೀವೇ ಹೇಳಿದ್ದೀರಲ್ಲ ಪತಿಯೇ ಪರರ ದೈವ ಎಂದು. ನನಗೆ ದೆವ್ವ ತಾನೇ ಎಂದು ಹಿಯಾಳಿಸಿದಳು.

ಅಷ್ಟರಲ್ಲಿ ಪಕ್ಕದ ಮನೆ ಪ್ರಿಯ ಬಂದ ಸದ್ದು ಕೇಳಿಸಿತು. ನಾನು ಬೇಕು ಅಂತಲೇ " ಸತ್ಯಭಾಮ ಬಾರಮ್ಮ ನೀಡು ಒಂದು ಉಮ್ಮಾ .." ಎಂದು ಹಾಡುತ್ತಾ ಇದ್ದೆ. ಯಾಕೆ ರಾಯರು ಮಧ್ಯಾಹ್ನ ಏನೇನೋ ಹೇಳಿ ಮತ್ತೆ ನಿಮ್ಮ ವರಸೆ ಶುರು ಹಚ್ಚಿಕೊಂಡಿದ್ದೀರಾ ಎಂದಳು. ನಿನಗೆ ಹಾಡಿದ್ದು ಕಣೇ, ನೀನೆ ನನ್ನ ರುಕ್ಮಿಣಿ( ರೊಕ್ಕಾ + Money), ಮತ್ತು ಸತ್ಯ ಭಾಮೆ ಎಂದು ಪುಸಲಾಯಿಸಿದೆ. ಮಗನ ಹೋಮ್ ವರ್ಕ್ ಮಾಡಿಸಿ ಎಂದು ಹೇಳಿದಳು. ಗುಡ್ ಮ್ಯಾನರ್ಸ್ ಚಾರ್ಟ್ ಅಂಟಿಸುವದು ಇತ್ತು. ಅದನ್ನು ನೋಡಿ, ನಿಮ್ಮ ಅಪ್ಪನಿಗೆ ಯಾವಾಗ? ಗುಡ್ ಮ್ಯಾನರ್ಸ್ ಬರುತ್ತೋ ನಾಕಾಣೆ ಎಂದು ಹೇಳಿ ಅಡಿಗೆ ಮನೆಗೆ ಹೊರಟು ಹೋದಳು.

Wednesday, November 17, 2010

ತರ್ಲೆ ಮಂ(ಗ)ಜನ ತಮಾಷೆಗಳು ...

ನಾವೆಲ್ಲರೂ ಮಂಜನ ಮನೆಗೆ ಊಟಕ್ಕೆ ಹೋಗಿದ್ದೆವು. ಮಂಜನ ಮನೆಗೆ ಮಂಜನ ತಂಗಿ ಶಾಂತಲಾ ತನ್ನ ಮಕ್ಕಳು ಸಂಕೇತ ಮತ್ತು ಶರತ ಜೊತೆ ಬಂದಿದ್ದಳು.

ಮಂಜ ನಿನಗೆ ಏನೇನು? ಬರುತ್ತೆ, ಶಾಲೆಯಲ್ಲಿ ನಿಮ್ಮ ಟೀಚರ್ ಏನೇನು ಹೇಳಿದ್ದಾರೆ ಎಂದು ಅಳಿಯ ಸಂಕೇತನಿಗೆ ಕೇಳಿದ.
ಅದಕ್ಕೆ ಸಂಕೇತ ಅವರಿಗೆ ಟೀಚರ್ ಅನ್ನಬಾರದು ಅವರು ಮಿಸ್ ಎಂದ.
ಮಿಸ್ ಅಂದರೆ ಇನ್ನೂ ಮದುವೆ ಆಗಿಲ್ಲವಾ? ಎಂದ.
ಪಾಪ ಆರು ವರ್ಷದ ಸಂಕೇತನಿಗೆ ಏನು? ತಿಳಿಯಬೇಕು. ಅವರ ಅಮ್ಮ ಶಾಂತಾ ಮದುವೆ ಆಗಿದೆ ಕಣೋ ಎಂದಳು. ನಿನಗೆ ಎರಡನೆ ಮದುವೆ ಮಾಡಿಕೊಳ್ಳುವ ಆಸೆ ಏನೋ? ನೋಡಿ ಅತ್ತಿಗೆ ಎಂದು ಅವನ ಹೆಂಡತಿಗೆ ಹೇಳಿದಳು.
ಆಯಿತು ಏನೇನು ಹೇಳಿದ್ದಾರೆ ಸಂಕೇತ ನಿಮ್ಮ ಮದುವೆಯಾದ ಮಿಸ್ ಎಂದು ಮಂಜ ಕೇಳಿದ.
ಬಾ ಬಾ ಬ್ಲ್ಯಾಕ್ ಶೀಪ ಹಾವಿ ಎನಿ ಹುಲ್ಲ ಎಂದ ತೊದಲುತ್ತಾ ಹೇಳಿತು.
ಎಲ್ಲಾ ಅರ್ಥ ಆಯಿತು. ಆದರೆ, ಕೆಲವು ಬಿಟ್ಟು ಎಂದ ಮಂಜ. ಬಾ.. ಬಾ.. ಎಂದು ಏನನ್ನು ಕರೆದೆ . ಹಾವಿಗಾ? ಮತ್ತೆ ಅದಕ್ಕೆನು ಗೊತ್ತು ಹುಲ್ಲ ಇದೆಯೋ ಇಲ್ಲವೋ ಎಂದು ತಮಾಷೆಗೆ ಕೇಳಿದ.
ಈಗ ಮಂಜನ ತಂಗಿ ಶಾಂತಲಾ ಕೋಪ ತಾರಕಕ್ಕೆ ಏರಿತ್ತು. ಸುಮ್ಮನೇ ಯಾಕೆ ಕಾಡುತ್ತೀ ಮಗೂನಾ ಎಂದಳು. ಸಂಕೇತನ ಅಜ್ಜಿ, ಮಂಜನ ಹೆಂಡತಿ ಸೇರಿ ಮಂಗಳಾರತಿ ಮಾಡಿದರು. ಅಮ್ಮ, ನೀನು ಕೋಪ ಮಾಡಿಕೊಳ್ಳ ಬೇಡ ನಿನಗೆ ಮೊದಲೇ ಬ್ರೆಡ್ ಸ್ಪೆಶಲ್ ಎಂದ. ಹಾಗಂದರೆ ಎಂದು ನಾನು ಕೇಳಿದೆ, ಅದಕ್ಕೆ ಮಂಜ ಅಮ್ಮ ಬ್ಲಡ್ ಪ್ರೆಶರ್ ಗೆ ಬ್ರೆಡ್ ಪ್ರೆಶರ್ ಅನ್ನುತ್ತಾರೆ ಎಂದ. ನಾನು ಅದನ್ನು ಬ್ರೆಡ್ ಸ್ಪೆಶಲ್ ಮಾಡಿರುವೆ ಎಂದ. ಆಯಿತು ಬಿಡಪ್ಪ ನೀನು ಜಾಣ ಎಂದು ಮಂಜನ ಅಮ್ಮ ಕೋಪ ಮಾಡಿಕೊಂಡರು. ಅಷ್ಟರಲ್ಲಿ ಮಂಜನ ಮಡದಿ ಕೆಂಗಣ್ಣಿನಿಂದ ಮಂಜನನ್ನು ನೋಡಿದಳು. ಹೆಂಡತಿಗೆ ಹೆದರಿದರು ಕಾಡುವುದನ್ನು ಮಾತ್ರ ಬಿಡಲಿಲ್ಲ. ನಾವು ಹೋಗಲಿ ಬಿಡಪ್ಪ ಸುಮ್ಮನೇ ಎಂದರು ಕೇಳಬೇಕಲ್ಲ ಆಸಾಮಿ.
ಏ ಸುಮ್ಮನಿರು ನೀನು, ನಾನು ಕೇಳುತ್ತಾ ಇರೋದು ನನ್ನ ಅಳಿಯನಿಗೆ ಎಂದ. ಪುಟ್ಟ ನಿನಗೆ ಚ್ಯಾಕ್ಲೇಟ್ ಕೊಡಸುತ್ತೇನೆ ಎಂದ.
ಮತ್ತೆ ಶುರು ಹಚ್ಚಿಕೊಂಡ ಮತ್ತೆ ಏನೇನು ಹೇಳಿದ್ದಾರೆ ಎಂದ.
ಜೋನಿ ಜೋನಿ ಎಸ್ ಪಾಪ.. ಈಟಿಂಗ್ ಶುಗರ್ ನೋ ಪಾಪ.. ಟೆಲ್ಲಿಂಗ್ ಲೈ ನೋ ಪಾಪ.. ಓಪನ್ ಯುವರ್ ಮೌತ್ ಹಾ ಹಾ ಹಾ ಎಂದ.
ಸುಳ್ಳು ಹೇಳುವ ಕಲೆ ಎಷ್ಟು ಚಂದ ಹೇಳಿಕೊಟ್ಟಿದ್ದಾರೆ ಕಣೋ ಎಂದು ತಲೆ ಚಚ್ಚಿಕೊಂಡ.
ಮತ್ತೆ ಸಂಕೇತ ರೇನ್ ರೇನ್ ಗೋ ಅವೇ ಲಿಟ್ಲ್ ಜಾನೀ ವಾಂಟ್ಸ್ ಟು ಪ್ಲೇ ಎಂದು ಹೇಳಿದ.
ಲೇ ಇದನ್ನು ಯಾರಾದರೂ ಬರಗಾಲ ಪ್ರದೇಶದ ರೈತರು ಕೇಳಿದರೆ ನಿನಗೆ ನಿಮ್ಮ ಮಿಸ್ಗೆ ಸೇರಿ ಒದಿತಾರೆ.

ಮತ್ತೆ ಮಂಜ ಒಂದಿಷ್ಟು ಕನ್ನಡದ ರೈಮ್ಸ್ ಆನೆ ಬಂತೊಂದಾನೆ, ನಾಯಿಮರಿ ನಾಯಿಮರಿ, ಒಂದು ಎರಡು ಬಾಳೆಲೆ ಹರಡು, ಇರುವೆ-ಇರುವೆ ಎಲ್ಲಿರುವೆಗಳಾದ ಎಲ್ಲವುಗಳನ್ನೂ ಸಂಕೇತಗೆ ಹೇಳಿದ. ಅದೆಲ್ಲವೂ ಕೇಳಿದ ಮೇಲೆ ಸಂಕೇತ ಮಂಜನಿಗೆ, ಮಾಮಾ ನಿನಗೆ ಯಾರು ಹೇಳಿದರು ಇವನೆಲ್ಲಾ ಎಂದು ಕೇಳಿದ. ಅದಕ್ಕೆ ಮಂಜ ನನ್ನ ಮಿಸ್ ಎಂದು ತನ್ನ ಮಡದಿಯನ್ನು ತೋರಿಸಿದ. ಅವಳು ಎಮ್ಮೆ(M.A) ಗೊತ್ತಾ ಎಂದ. ಯಾರಿಗೂ ತಿಳಿಯಲಿಲ್ಲ ಸಧ್ಯ.

ಮತ್ತೆ ಅವನಿಗೆ ತಪ್ಪು ತಪ್ಪಾಗಿ ಏ ಫಾರ್ ಅವರೆಕಾಯಿ , ಬೀ ಫಾರ್ ಬದಾನೆ ಕಾಯಿ, ಸೀ ಫಾರ್ ಚವಳಿಕಾಯಿ ಎಂದೆಲ್ಲ ಹೇಳುತ್ತಿದ್ದರೆ, ಎಲ್ಲರೂ ನಗುತ್ತಿದ್ದರು. ಅವನ ತಂಗಿ ತುಂಬಾ ಕೋಪ ಮಾಡಿಕೊಂಡಿದ್ದಳು. ನಾಳೆ ಪರೀಕ್ಷೆಯಲ್ಲಿ ಇದನ್ನೇ ಹೇಳುತ್ತಾನೆ ಎಂದು.ಎಲ್ಲರೂ ಊಟ ಮುಗಿಸಿದೆವು. ಊಟ ಮುಗಿದ ಮೇಲೆ ಸೀರಿಯಲ್ ಗಳ ಬಗ್ಗೆ ಚರ್ಚೆ ಶುರು ಆಯಿತು. ನಾನು ಕೌನ್ ಬನೇಗಾ ಕರೋಡ ಪತಿಯಲ್ಲಿ ಕೋಟಿ ಸೋತ ಮನುಷ್ಯನ ಬಗ್ಗೆ ಅನುಕಂಪದ ಮಾತು ಆಡಿದೆ. ಅದಕ್ಕೆ ನಮ್ಮ ಮಂಜ ಸರಿಯಾಗಿ ಮಾಡಿದ್ದಾನೆ ಗಣಪತಿ ಅವನಿಗೆ ಎಂದ. ಪಾಪ ಪ್ರತಿ ವರ್ಷ ಗಣಪತಿ ಇಟ್ಟು, ಕಡೆ ದಿನ ಅವನ ಮುಂದೆ ಡ್ಯಾನ್ಸ್ ಮಾಡುತ್ತಾ ಹೋಗಿ ನೀರಿನಲ್ಲಿ ಮುಳುಗಿಸುತ್ತಾನೆ, ಈಗ ಡ್ಯಾನ್ಸ್ ಮಾಡಿ ಮುಳುಗಿಸುವುದು ಗಣಪತಿಯ ಸರದಿ ಎಂದ. ಎಲ್ಲರೂ ಜೋರಾಗಿ ನಕ್ಕೆವು.

ಮಂಜನ ಹೆಂಡತಿ ನೋಡಿ ನಿಮ್ಮ ಗೆಳೆಯ ಗೋಪಾಲ್ ತಮ್ಮ ಹೆಂಡತಿಯ ಬಗ್ಗೆ ಬ್ಲಾಗ್ ನಲ್ಲಿ ಏನೇನೋ ಪ್ರೀತಿಯಿಂದ ಬರೀತಾ ಇರುತ್ತಾರೆ ಎಂದಳು. ನೀವು ಇದ್ದೀರಾ? ಯಾವುದಕ್ಕೂ ಉಪಯೋಗ ಇಲ್ಲ ಎಂದಳು. ಲೇ ನಾನು ಏನು? ಎಂದು ತಿಳಿದಿದ್ದೀಯಾ ನಾನು ಒಂದು ಸೀರಿಯಲ್ ತೇಗೆಯಬೇಕು ಎಂದು ಇದ್ದೇನೆ. ಸೀರಿಯಲ್ ಪೂರ್ತಿ ನಮ್ಮಿಬ್ಬರ ಬಗ್ಗೆ ಇರುತ್ತೆ ಗೊತ್ತಾ ಎಂದ. ಅದರ ಹೆಸರು ಏನು? ಗೊತ್ತಾ "ಸಂಸಾರಿ ಕ್ರೈಮ್ ಸ್ಟೋರಿ" ಎಂದ. ಅದಕ್ಕೆ ನಾವೆಲ್ಲರೂ ನಕ್ಕೆವು. ಥೇಟ ವಿಲನ್ ತರಹ ನಗುತ್ತೀರಿ ಎಂದಳು ಮಂಜನ ಮಡದಿ ಸಾವಿತ್ರಿ. ಅದಕ್ಕೆ ಮಂಜ ಕೋಪದ ಮುಖದಿಂದ ಇದ್ದ ಅವಳಿಗೆ "ಹಂಗ್ಯಾಕೆ ಮಾಡಿ ಮಾರಿ, ಕಾಮನಕಟ್ಟಿ ದಾರಿ" ಎಂದ. ಮಂಜನ ಮಡದಿ ತುಂಬಾ ಕೋಪ ಮಾಡಿಕೊಂಡು, ನೀವು ಇನ್ನೂ ಸ್ವಲ್ಪ ದಿವಸ ಹೀಗೆ ಆಡುತ್ತಿದ್ದರೆ, ನಾನು ನಿಜವಾಗಿಯೂ ಮನೆ ದಾರಿ ಹಿಡಿಯುತ್ತೇನೆ ಎಂದಾಗ ಮಂಜ ಸುಮ್ಮನಾಗಿದ್ದ. ಸಂಜೆಯವರೆಗೆ ಮಂಜನ ಮನೆಯಲ್ಲಿ ಇದ್ದು ಕಾಫೀ ಮುಗಿಸಿ ಮನೆಗೆ ಬಂದೆವು.

ಕಲ್ಲಪ್ಪನ ಮಗ ಡಾಕುಟರ್ ....

ಕಲ್ಲಪ್ಪ ತನ್ನ ಮಗನನ್ನು ಕಷ್ಟ ಪಟ್ಟು ಓದಿಸಿ, ವಿದ್ಯಾವಂತನನ್ನಾಗಿ ಮಾಡಿದ್ದ. ಮಗ ಎಂ ಬಿ ಬಿ ಎಸ್ ಮಾಡಿ ಬೆಂಗಳೂರು ಸೇರಿದ್ದ. ತನಗೆ ಒಪ್ಪತ್ತು ಗಂಜಿ ಇದ್ದರು ಮಗನಿಗೆ ಸರಿಯಾಗಿ ದುಡ್ಡು ಕಳುಹಿಸುತ್ತಿದ್ದ. ಅವನ ಒಂದೇ ಆಸೆ ತಮ್ಮ ಕಷ್ಟಗಳಿಗೆ ಮಗ ನೆರವಿಗೆ ಬರುತ್ತಾನೆ ಎಂದು. ಅವನಿಗೆ ಡಾಕ್ಟರ್ ಎಂದು ಅನ್ನಲು ಬರದಿದ್ದರೂ ಊರ ತುಂಬಾ ನನ್ನ ಮಗ ಡಾಕುಟರ್ ಎಂದು ಹೇಳೋಕೆ ಎಮ್ಮೆ ಅನ್ನಿಸುತ್ತದೆ ಎಂದು ಎಲ್ಲರಲ್ಲಿಯೂ ಕೊಚ್ಚಿಕೊಳ್ಳುತ್ತಿದ್ದ. ಮೊದಮೊದಲು ಸ್ವಲ್ಪು ದುಡ್ಡು ಕಳುಹಿಸುತ್ತಿದ್ದ ಮಗ, ಅನಂತರ ಕಡಿಮೆ ಮಾಡುತ್ತಾ ಬಂದ. ಮತ್ತೆ ಕೆಲವೊಂದು ತಿಂಗಳು ಕಳಿಸುತ್ತಲೇ ಇರಲಿಲ್ಲ. ಫೋನ್ ಮಾಡಿದರೆ ನಾನು ಆಮೇಲೆ ಮಾಡುತ್ತೇನೆ ಎಂದು ಹೇಳಿ ತಪ್ಪಿಸಿಕೊಳ್ಳುತ್ತಿದ್ದ. ಕಲ್ಲಪ್ಪ ಇನ್ನೂ ಕಲ್ಲಿನ ಹಾಗೆ ಕುಳಿತರೆ ಏನು ನಡೆಯುವದಿಲ್ಲ ಎಂದು ಮಗನನ್ನು ನೋಡಲು ತಾನೇ ಬೆಂಗಳೂರಿಗೆ ಹೊರಟು ನಿಂತ. ಅವನಿಗೆ ಇಷ್ಟ ಎಂದು ಒಂದು ನಾಟಿ ಕೋಳಿ ತೆಗೆದುಕೊಂಡು ಹೊರಟ. ಬಸ್ ನಲ್ಲಿ ಎಲ್ಲರೂ ಅವನಿಗೆ ಛೀಮಾರಿ ಹಾಕಿದರು, ಕೋಳಿ ತೆಗೆದುಕೊಂಡು ಬಂದಿದ್ದಕ್ಕೆ. ಆದರೂ ಅದರ ಬಾಯಿಗೆ ಒಂದು ಅರಿವೆ ಕಟ್ಟಿ ಅದನ್ನು ಇಟ್ಟ.

ಮರುದಿನ ಬೆಂಗಳೂರು ಬಂದು ತಲುಪಿದ್ದ. ಮಗನಿಗೆ ಹೇಳದೇ ಬಂದಿದ್ದ. ಇಳಿದೊಡನೆ ಮಗನಿಗೆ ಫೋನ್ ಮಾಡಿದ, "ನೀವು ಕರೆ ಮಾಡುತ್ತಿದ್ದ ಚಂದಾದರರು ಸ್ವಿಚ್ ಆಫ್ ಮಾಡಿದ್ದಾರೆ" ಎಂಬ ಸಂದೇಶ ಹೊರ ಬರುತಿತ್ತು. ಏ ನನ್ನ ಮಗನಿಗೆ ಫೋನ್ ಕೊಡಮ್ಮಿ ಎಂದು ಕಿರುಚುತ್ತಿದ್ದ ಕಲ್ಲಪ್ಪ. ನೆರೆದವರೆಲ್ಲರೂ ಇವನನ್ನೇ ನೋಡುತ್ತಿದ್ದರು ಅದರ ಅರಿವು ಅವನಿಗೆ ಇರಲಿಲ್ಲ. ಕೊನೆಗೆ ಒಬ್ಬ ಹುಡುಗನಿಗೆ ಅವನ ವಿಳಾಸ ತೋರಿಸಿದ, ಆ ಹುಡುಗನ ಸಹಾಯದಿಂದ ಬಸ್ ಹತ್ತಿ ಹೊರಟ. ಅವನು ಕುಳಿತಿದ್ದು ಮುಂದಿನ ಸೀಟ್ ನಲ್ಲಿ, ಪ್ರತಿ ಸ್ಟಾಪ್ ಗೆ ಬಸ್ ಚಾಲಕನಿಗೆ ಕೇಳುತ್ತಾ ಇದ್ದ. ಅಷ್ಟರಲ್ಲಿ ಒಬ್ಬ ಹುಡುಗಿ ಬಂದು ಏಳಿ... ಎದ್ದೇಳಿ.. .ಎಂದಳು. ಏಕಮ್ಮ ಇದು ನನ್ನ ಸೀಟ್ ಎಂದ. ಏ .. ಏಳಿ ಲೇಡಿಸ್ ಸೀಟ್ ಎಂದಳು. ಏನೂ ಅರಿಯದ ಅವ ಹಾಗೆ ಎಂದರೆ ಅಂದ. ಹೆಂಗಸರ ಸೀಟ್ ಎಂದಳು. ಅವನ ಊರಿನಲ್ಲಿ ಈ ರೀತಿ ಎಂದು ಆಗಿರಲಿಲ್ಲ. ವಯೋ ವೃದ್ಧರ ಸೀಟ್ ಇದ್ದರು, ಅದರ ಬಗ್ಗೆ ಅವನಿಗೆ ಅರಿವು ಇರಲಿಲ್ಲ ಮತ್ತು ಓದಲು ಬರುತ್ತಿರಲಿಲ್ಲ. ಅದರಲ್ಲಿ ಕೆಲ ಹುಡುಗರು ಕುಳಿತಿದ್ದರು. ಕಡೆಗೆ ಬಸ್ ಸ್ಟಾಪ್ ಬಂತು. ಇಳಿದುಕೊಂಡು ಮಗನ ಪತ್ತೆ ಬಗ್ಗೆ ಎಲ್ಲರಲ್ಲಿಯೂ ಕೇಳುತ್ತಾ ಹೊರಟ. ಕೈಯಲ್ಲಿ ಚಿಕ್ಕ ಚೀಲ ಮತ್ತು ಕೋಳಿ ಇವನನ್ನು ನೋಡಿ ಕೆಲವರು ಅವನನ್ನು ಬಿಕ್ಷುಕ ಎಂದು ತಿಳಿದಿದ್ದು ಇದೆ.

ಕಡೆಗೂ ಮನೆ ಸಿಕ್ಕಿ ಬಿಟ್ಟಿತು. ಮನೆ ಒಳಗೆ ಹೆಜ್ಜೆ ಇಟ್ಟ ಕಲ್ಲಪ್ಪ , ಕೂಡಲೇ ಒಂದು ಹುಡುಗಿ ಹೂ ಆರ್ ಯೂ ಎಂದಳು. ಹೌಹಾರಿ ಬಿಟ್ಟ ಕಲ್ಲಪ್ಪ. ಪಿಕಿ ಪಿಕಿ ಎಂದು ಅವಳನ್ನೇ ನೋಡುತ್ತಾ ನಿಂತು ಬಿಟ್ಟ. ಮತ್ತೆ ಕೇಳಿದಳು ಹೂ ಆರ್ ಯೂ ಎಂದು. ನನ್ನ ಮಗ .... ಎಂದ. ವಾಟ್ ಎಂದಳು. ಸುರೇಶ ಎಂದು ಕೇಳಿದ, ಅದನ್ನು ಕೇಳಿದ ಆ ಹುಡುಗಿ ಒಳಗೆ ಹೋಗಿ ಮಲಗಿದ್ದ ಸುರೇಶ್ ನನ್ನು ಕರೆ ತಂದಳು. ಐ ಟೋಲ್ಡ್ ಯೂ ನಾಟ್ ಟೂ ವೇಕ್ ಮಿ ಎನ್ನುತ್ತಾ ಬರ್ಮುಡಾ ಏರಿಸುತ್ತಾ ಹೊರಗಡೆ ಬಂದ. ಅಪ್ಪ ನೀನು ಯಾವಾಗ ಬಂದೆ ಅಂದ. ಆ ಹುಡುಗಿಗೆ ಹಿ ಈಸ್ ಮೈ ಫಾದರ್ ಕಲಪ್ಪ ಎಂದ. ಓ ಯುವರ್ ಫಾದರ್ ಓಕೇ... ಓಕೇ...ಐ ಥಾಟ್ ಸಮ್ ಪೇಶೆಂಟ್ ಎಂದಳು. ಕಳ್ಳ ಅಪ್ಪ ವೇರಿ ಗುಡ್ ನೇಮ್ ಎಂದಳು. ಅವರಿಬ್ಬರು ಹಿಂದಿ, ಇಂಗ್ಲೀಶ್ ನಲ್ಲಿ ಏನೇನೋ ಮಾತನಾಡುತ್ತಾ ಇದ್ದರು. ಕಲ್ಲಪ್ಪನಿಗೆ ಏನು ಅರ್ಥವಾಗದೆ ಸುಮ್ಮನೇ ನಿಂತು ಬಿಟ್ಟ. ಅವನಿಗೆ ಇವನ ಮೇಲೆ ಅನುಮಾನ ಮದುವೆ ಮಾಡಿಕೊಂಡಿದ್ದಾನೆ ಎಂದು. ಮಗಾ.. ಮದುವೆ ಮಾಡಿಕೊಂಡಿದ್ದೀಯಾ? ಎಂದು ಕೇಳಿದ. ಹಾಗೇನೂ ಇಲ್ಲ ಎಂದ. ಮತ್ತೆ ಇವಳು?.... ಅದು... ಅದು.. ಎಂದು ತಡವರಿಸಿದ. ಏಕೆಂದರೆ ಅಪ್ಪನಿಗೆ ಹೇಗೆ ತಿಳಿಯಬೇಕು ಲಿವಿಂಗ್ ಟುಗೆದರ್ ಎಂದರೆ. ಸುಮ್ಮನೇ ಜೊತೆಗೆ ಇದ್ದೇವೆ ಎಂದ. ಅಪ್ಪನಿಗೆ ಕೋಪ ನೆತ್ತಿಗೆ ಏರಿತು, ಮಗ ತಪ್ಪು ದಾರಿ ಹಿಡಿದಿದ್ದಾನೆ ಎಂದು. ನಾಚಿಕೆ ಆಗೋಲ್ಲ ಎಂದೆಲ್ಲ ಬೈಯಲು ಶುರು ಮಾಡಿದ. ನಾಚಿಕೆ ಯಾಕೆ? ಇದೆಲ್ಲ ಕಾಮನ್ ಅಂದ. ಅವನಿಗೆ ತಿಳಿಯಲಿಲ್ಲ. ಅಂದರೆ ಏನೋ ಕಾಮಣ್ಣ ಎಂದು ಬೈದ. ಅಷ್ಟರಲ್ಲಿ ಒಳಗಡೆ ಇಂದ ಬಂದ ಆ ಹುಡುಗಿ ವಾಟ್ ಈಸ್ ದಿಸ್ ಸ್ಮೆಲ್ ಎಂದಳು. ಕಲ್ಲಪ್ಪ ತಂದ ನಾಟಿ ಕೋಳಿ ಅವನು ಕಟ್ಟಿದ್ದ ಬಿಗಿ ಅರಿವೇಗೆ ಸತ್ತು ಹೋಗಿ ನಾರುತಿತ್ತು. ಕಡೆಗೆ ಅದನ್ನು ಎಸೆದು ಸ್ನಾನ ಮಾಡಿ ಬಾ, ಎಲ್ಲ ಹೇಳುತ್ತೇನೆ ಎಂದ.

ಸ್ನಾನ ಮಾಡಿದ ಮೇಲೆ ಕೂಡ ಅದೇ ಪ್ರಶ್ನೆ ಯಾರು ಅವಳು ಎಂದು. ಮದುವೆ ಮಾಡಿಕೊ ಮಗ ಎಂದ. ಸುಮ್ಮನೇ ಜೊತೆಗೆ ಇದ್ದರೆ ಬೇರೆಯರು ತಪ್ಪು ತಿಳಿಯುತ್ತಾರೆ ಮಗ ಎಂದ. ಅದೆಲ್ಲ ಏನು ಇಲ್ಲ ನಮ್ಮಲ್ಲಿ ಹೊಂದಾಣಿಕೆ ಆದರೆ ಮಾತ್ರ ಮದುವೆ ಆಗುತ್ತೇವೆ ಎಂದ. ಇನ್ನೂ ಒಂದು ವರ್ಷ ಕಾಯಿರಿ ಎಂದ. ಆಮೇಲೆ ಬೇಡ ಎಂದರೆ ಅವಳು ಅವಳ ಪಾಡಿಗೆ , ನಾನು ನನ್ನ ಪಾಡಿಗೆ ಎಂದ. ಹಾಗೆಲ್ಲಾ ಮಾಡಬೇಡ ಮಗ ಅದು ಒಂದು ಹೆಣ್ಣು ಮಗಳ ಭವಿಷ್ಯದ ಪ್ರಶ್ನೆ . ಮುಂದೆ ಅವಳನ್ನ ಯಾರು ತಾನೇ ಮದುವೆ ಆಗುತ್ತಾರೆ ಎಂದ. ಹುಡುಗಿ ತುಂಬಾ ಚೆನ್ನಾಗಿ ಇದ್ದಾಳೆ, ಆದರೆ ಮೂಗಿನ ನತ್ತು (ಮೂಗನತ್ತು) ಮಾತ್ರ ಬಾಯಿಗೆ ಹಾಕಿಕೊಂಡಿದ್ದಾಳೆ. ಟ್ಯಾಟ್ಯೂ ನೋಡಿ ಕರಿ ಗೊರಂಟೆ ಚೆನ್ನಾಗಿ ಕಾಣಲ್ಲ ಅವಳಿಗೆ ಎಂದು ಹೇಳು ಮದುವೆ ಮಾಡಿಕೊ ಎಂದು ಹೇಳಿದ. ಅವಳಿಗೆ ಸೀರೆನೇ ಉಟ್ಟು ಕೊಳ್ಳೋಕೆ ಹೇಳು. ಚಡ್ಡಿ ಹಾಕಿಕೊಂಡು ಮನೇಲಿ ಇದ್ರೆ ಏನು ಚೆನ್ನ ನೀನೆ ಹೇಳು ಎಂದ. ಕಲ್ಲಪ್ಪನ ಮಾತಿಗೆ ಸುಮ್ಮನೇ ತಲೆ ಅಲ್ಲಾಡಿಸಿ ಊಟಕ್ಕೆ ಹೊರಗಡೆ ಹೋದರು. ಹೊಟೆಲ್ ಊಟದಿಂದ ಕಲ್ಲಪ್ಪನ ಹೊಟ್ಟೆ ಕೆಟ್ಟು ಹೋಗಿತ್ತು. ಮನೆಗೆ ಬಂದು ಹುಡುಗಿ ಸಿಗರೇಟ್ ಸೇದುತ್ತಾ ಇತ್ತು. ಹನೀ... ವೆನ್ ದಿಸ್ ಫೆಲೊ ಈಸ್ ಗೋಯೀಂಗ್ ಎಂದು ಕೇಳಿತು. ಸುರೇಶ್ ಟೂಮಾರೊ ಎಂದು ಹೇಳಿದ.

ಮರುದಿನ ಬೆಳಿಗ್ಗೆ ಅಪ್ಪನಿಗೆ ಸ್ವಲ್ಪ ದುಡ್ಡು ಕೊಟ್ಟು, ಇನ್ನೂ ಮುಂದೆ ಪ್ರತಿ ತಿಂಗಳು ಸ್ವಲ್ಪ ದುಡ್ಡು ಕಳುಹಿಸುತ್ತೇನೆ ಯೋಚನೆ ಮಾಡಬೇಡ ಎಂದು ಹೇಳಿ ಟ್ರೈನ್ ಹತ್ತಿಸಿದ. ಕಲ್ಲಪ್ಪ ಮಾತ್ರ ಮಗನೆ ಯೋಚನೆಯಲ್ಲೇ ಮುಳುಗಿ ಹೋಗಿದ್ದ. ಅಷ್ಟರಲ್ಲಿ ರಾಮಸಂದ್ರ ಬಂದಿತ್ತು. ನಿಜವಾಗಿಯೂ ಕಲ್ಲಪ್ಪನಿಗೆ ಮಗ ಡಾಕು ತರಹ ಎಂದು ಅನ್ನಿಸಿದ್ದ.

Wednesday, November 10, 2010

ಹೆಂಡತಿ ಹೆಸರು ಬಸವ್ವ ....

ನೋಡುತ್ತಿದ್ದ ಟಿ ವಿ ಬಂದು ಮಾಡಿದ ನನ್ನ ಬಿ ವಿ. ನಾಳೆ ದೀಪಾವಳಿ, ಬೆಳಗ್ಗೆ ಬೇಗ ಏಳಬೇಕು ಎಂದು ಆಜ್ಞೆ ಹೊರಡಿಸಿದಳು. ಬೆಳಗ್ಗೆ ಬೇಗ ಎದ್ದು ನಾನೇ ಟೀ ಮಾಡಲು ಅನುವಾದೆ. ದೇವರ ಮುಂದೆ ಇಟ್ಟ ಸಕ್ಕರೆ ಟೀ ಮಾಡುವ ಪಾತ್ರೆಗೆ ಸುರಿದೆ. ಅಷ್ಟರಲ್ಲಿ ನನ್ನ ಮಡದಿ ರೀ ಅದರಲ್ಲಿ ಇರುವೆ ಇತ್ತು ಹಾಗೆ ಹಾಕಿದಿರಾ? ಎಂದಳು. ಇರಲಿ ಬಿಡೆ ಕಣ್ಣು ಸ್ವಚ್ಛ ಆಗುತ್ತೆ ಎಂದೆ. ಓss.. ಹಾಗಾ, ಟೀ ಕುಡಿದ ಮೇಲೆ, ಇರುವೆ ಕಣ್ಣು ಸ್ವಚ್ಛ ಆಗುತ್ತಾ?. ಅದಕ್ಕೆ ಇರಬೇಕು ನಾನು ಅದನ್ನು ಓಡಿಸಿದರು, ಅಲ್ಲೇ ಸಕ್ಕರೆ ಸವಿಯುತ್ತಾ ಇತ್ತು. ಲೇ ನಾನು ಹೇಳಿದ್ದು ನಮ್ಮ ಕಣ್ಣು ಸ್ವಚ್ಛ ಆಗುತ್ತೆ ಅಂತ ಎಂದೆ. ಅದು ಸರಿ ಅನ್ನಿ, ನಿಮ್ಮ ಕಣ್ಣು ಸ್ವಚ್ಛ ಆಗಬೇಕು. ನೀವು ಇರುವೆ ಹಾಕಿಕೊಂಡು ಟೀ ಮಾಡಿಕೊಳ್ಳಿ. ನಾನು ಬೇರೆ ಟೀ ಮಾಡಿಕೊಳ್ಳುತ್ತೇನೆ ಎಂದಳು. ಲೇ ನಾನು ಕೂಡ ಪ್ಯೂರ್ ವೆಜ್ ಎಂದೆ. ಪ್ಯೂರ್ ಮತ್ತು ಇಮ್‌ಪ್ಯೂರ್ ವೆಜ್ ಕೂಡ ಇರುತ್ತಾ? ಎಂದು ಕಿಚಾಯಿಸಿದಳು. ಕ್ರೀಮಿ ಕಿಟ ತಿನ್ನೋ ಕೋಳಿ ಮತ್ತು ಬರಿ ಸಸ್ಯ ತಿಂದು ಇರುವ ಕೋಳಿ ವ್ಯತ್ಯಾಸ ಇಲ್ಲವಾ? ಎಂದೆ. ರೀ ಏನು? ಇದು ಹಬ್ಬದ ದಿವಸ ಎಂದು ಕೋಪಮಾಡಿಕೊಂಡಳು. ಮತ್ತೆ ಇರುವೆ ಚೆಲ್ಲಿ ಬೇರೆ ಟೀ ಮಾಡಿದೆ.

ಟೀ ಕುಡಿಯುತ್ತಾ ಇದೇನು? ಸಕ್ಕರೆ ಪಾಕದ ಹಾಗೆ ಇದೆ, ಹಬ್ಬದ ಉಂಡೆಗೆ ಬೇಕಾಗುತ್ತೆ ಹಾಗೆ ಇಡಿ ಎಂದು ಕಿಚಾಯಿಸಿದಳು. ಲೇ ಎಷ್ಟು ಚೆನ್ನಾಗಿದೆ ಸುಮ್ಮನೇ ಏನೇನೋ ಹೇಳಬೇಡ, ನನಗೆ ಇನ್ನೂ ಸಕ್ಕರೆ ಕಾಯಿಲೆ ಬಂದಿಲ್ಲ ಎಂದೆ. ಸಮಾಧಾನಿಸಿ, ಇನ್ನೂ ಸ್ವಲ್ಪ ದಿವಸ ಮಾತ್ರ ಎಂಬ ಉತ್ತರ ಬಂತು. ಹಾಗಾದರೆ ಇನ್ನೂ ಮುಂದೆ ನೀವೇ ಟೀ ಮಾಡಿ, ಆದರೆ ಸ್ವಲ್ಪ ಕಡಿಮೆ ಸಕ್ಕರೆ ಹಾಕಿ ಎಂದಳು. ಹಬ್ಬಕ್ಕೆ ಏನು? ಅಡಿಗೆ ಮಾಡಲಿ ಎಂಬ ಅರ್ಜಿ ಗುಜರಾಯಿಸಿದಳು. ಏನಾದರೂ ಮಾಡು ಎಂದೆ. ಅವಳು ಪ್ರತಿ ಬಾರಿ ಕೇಳಿದಾಗಲು ನನ್ನ ಉತ್ತರ ಇದೆ ಇರುತ್ತೆ ಎಂದು ಗೊತ್ತಿದ್ದರು, ಅವಳು ಕೇಳುವುದನ್ನು ಬಿಟ್ಟಿಲ್ಲ. ನಿಮ್ಮದು ಬರೀ ಇದೆ ಆಯಿತು ಎಂದು ಗೋಧಿ ಕುಟ್ಟಿದ ಪಾಯಸ ಮಾಡುತ್ತೇನೆ ಎಂದು ಹೇಳಿ ಅಡಿಗಿಮನೆಗೆ ಹೊರಟು ಹೋದಳು. ಅವಳನ್ನು ಹಿಂಬಾಲಿಸಿ, ಲೇ ಪಾಯಸ ಬೇಡ ಕಣೆ ಎಂದೆ. ಅದು ನಿಮಗೆ ಅಲ್ಲ ಅದು, ದೇವರಿಗೆ ಸುಮ್ಮನಿರಿ ಎಂದಾಗ ಸಮಾಧಾನವಾಯಿತು. ಮತ್ತೆ ವಡೆ ಎಂದೆ. ಒದೆ ಮತ್ತು ಕಡಬು ಎರಡು ಇದೆ.ನಗುತ್ತಾ ಈಗಲೇ ಬೇಕಾ? ಎಂದಳು. ನಿರಾಸೆಯ ಅಲೆಯಲ್ಲಿ ತೇಲುತ್ತ ಹೊರಗಡೆ ಬಂದು ಕುಳಿತೆ.

ಮುಂಜಾನೆಯ ಆರತಿ, ಸ್ನಾನ , ಪೂಜೆ ಮತ್ತು ಮಂಗಳಾರತಿ ಆದ ಮೇಲೆ ಊಟಕ್ಕೆ ಕುಳಿತಾಗಲೇ ನನಗೆ ಗೊತ್ತಾಗಿದ್ದು, ಆ ಪಾಯಸ ನನಗೆ ಮಾಡಿದ್ದಾಳೆ ಎಂದು. ಮತ್ತೆ ಮುಂಜಾನೆ ದೇವರಿಗೆ ಎಂದೆ. ನೀವು ನನಗೆ ಪತಿ ದೇವರು ತಾನೇ ಎಂದು ಗಹ ಗಹಸಿ ನಗಹತ್ತಿದಳು. ನಾನು ರಾತ್ರಿ ಹೊಟೆಲ್ ಗೆ ಊಟಕ್ಕೆ ಹೋಗುವುದಾದರೆ ಮಾತ್ರ ತಿನ್ನುತ್ತೇನೆ ಎಂದೆ. ಆಯಿತು ಎಂದು ಹೇಳಿದ ಮೇಲೆ ಊಟ ಮಾಡಿದೆ.

ರಾತ್ರಿ ಊಟಕ್ಕೆ ಹೊರಗಡೆ ಹೋಗಿದ್ದೆವು. ಆ ಹೊಟೇಲಿನಲ್ಲಿ ಸರ್ವ್ ಮಾಡಲು ಸಹ ಹುಡುಗಿಯರು ಇದ್ದರು ಅದನ್ನು ನೋಡಿ ನನ್ನ ಮಡದಿ ಇದಕ್ಕೆ ನೀವು ಹೊರಗಡೆ ಊಟಕ್ಕೆ ಹೋಗೋಣ ಎಂದಿದ್ದಾ ಎಂದಳು. ನಾನು ಒಂದು ಸರ್ವ್ ಮಾಡುವ ಹುಡುಗಿಯ ಕಡೆ ಹೋಗಿ ವಾಶ್ ರೂಮ್ ಎಲ್ಲಿದೆ ಎಂದು ಕೇಳಲು ಹೋದೆ. ಅಷ್ಟರಲ್ಲಿ ಅವಳು ಒಬ್ಬ ಆಸಾಮಿಗೆ ಕಪಾಳಕ್ಕೆ ಬಿಟ್ಟು, ತಾನೇ ಅಳುತ್ತಾ ನಿಂತಿದ್ದಳು. ಇದೆಲ್ಲವೂ ಅರೆ ಕ್ಷಣದಲ್ಲಿ ನಡೆದು ಹೋಗಿತ್ತು. ನನಗೆ ಏನು ತೋಚದಾಗಿತ್ತು. ನಾನೇ ಅಲ್ಲೇ ಇದ್ದಿದ್ದರಿಂದ ನನ್ನ ಹೆಂಡತಿಗೆ ನನ್ನ ಮೇಲೇನೆ ಅನುಮಾನ. ಎಲ್ಲರೂ ನಮ್ಮ ಮುಂದೆ ಜಮಾಯಿಸಿದ್ದರು. ಆದರೆ ಯಾರು,ಯಾರಿಗೆ ಹೊಡೆದರೂ ಎಂದು ಸಹ ತಿಳಿದಿರಲಿಲ್ಲ. ಕೆಲ ಜನ ನಾನೇ ಹೊಡಿಸಿ ಕೊಂಡವನು ಎಂದು ತಿಳಿದಿದ್ದರು. ಕಡೆಗೆ ನಾನೇ ಆ ಹುಡುಗಿಗೆ ಏನು ಆಯಿತಮ್ಮಾ? ಎಂದು ಕೇಳಿದೆ. ನಾನು ಅವನಿಗೆ ಏನು? ಮಾಡಿದೆ ಎಂದು ಕೇಳಿದೆ. ನಾನು... ನಾನು.... ಏನು?. ಎಂದ. ಕನ್ನಡ ಬರುವುದಿಲ್ಲ ಎಂದು ಸನ್ನೆ ಮಾಡಿ ಹೇಳಿದ. ಆಗ ಆ ಹುಡುಗಿ ಅಳುತ್ತಾ ಇದ್ದವಳು ಜೋರಾಗಿ ನಗುತ್ತಾ ಹೊರಟು ಹೋದಳು. ಆಗ ನಾನು ಅವನಿಗೆ ಹಿಂದಿಯಲ್ಲಿ ಏನು? ಕೇಳಿದೆ ಎಂದು. ಅವನು ಮೈ ಮೈ "ನಮಕ್ ಪೂಚಾ" ಎಂದ. ಕನ್ನಡದಲ್ಲಿ ಹೇಳು ಎಂದಾಗ "ಉಪ್ಪಾ ಬೇಕು" ಎಂದ ನೆರೆದವರೆಲ್ಲ ಜೋರಾಗಿ ನಗಹತ್ತಿದರು.

ನನಗೆ ಅವನ ಮುಖ ಎಲ್ಲಿಯೋ ನೋಡಿದ ಹಾಗೆ ಅನ್ನಿಸಿತು. ಹೀಗಾಗಿ ಅವನ ಹಿಂದೆ ಹೋದೆ. ನಿಮ್ಮನ್ನ ಎಲ್ಲಿಯೋ ನೋಡಿದ್ದೇನೆ ಎಂದು ಇಂಗ್ಲೀಶ್ ನಲ್ಲಿ ಕೇಳಿದೆ. ಮತ್ತೆ ಕೆಲ ಸಮಯ ಯೋಚಿಸಿದ ಮೇಲೆ ತಿಳಿಯಿತು ಅವನು ವಿಲಾಸ್ ಎಂದು. ವಿಲಾಸನಿಗೆ ವಿಳಾಸ ತಿಳಿಸಿದ ಮೇಲೆ ಅವನು ಬೇರೆ ಊರಿಗೆ ಹೊರಟು ಹೋಗಿದ್ದ. ಯಾಕೋ? ಮಗನೆ ನಿನಗೆ ಕನ್ನಡ ಬರಲ್ಲವಾ? ಎಂದೆ. ಬರುತ್ತೆ, ಕಣೋ ಆದರೆ ನಮ್ಮ ಕಡೆ ಉಪ್ಪಿಗೆ ಉಪ್ಪಾ ಎಂದೆ ಹೇಳುತ್ತಾರೆ ಅದಕ್ಕೆ ಎಂದೆ ಅಂದ. ಬೇರೆ ಯಾರು ಅದಕ್ಕೆ ಕ್ಯಾತೆ ತೆಗೆದಿರಲಿಲ್ಲ ಎಂದ. ಈ ಹುಡುಗಿ ಬಹುಶಃ ಧಾರವಾಡದವಳು ಇರಬೇಕು ಎಂದೆ. ಮತ್ತೆ ಅವನನ್ನು ಮನೆಗೆ ಆಹ್ವಾನಿಸಿದೆವು. ಚಿಕ್ಕವಾನಿದ್ದಾಗ ವಿಲಾಸ್ ನಮಗೆ ಹೊಡೆದು ಓಡಿ ಹೋಗಿ ಮಾಳಿಗೆ ಮೇಲೆ ನಿಂತು, "ಎಷ್ಟು ಹೊಡೀತಿ ಹೊಡಿ, ಹೊಲಕ್ಕ ಹೋಗೋಣ ನಡಿ, ಬೆಕ್ಕು ಬಂತು ಉಶ್ಶಾ, ನಿನ್ನ ಹೆಂಡತಿ ಹೆಸರ ಬಸವ್ವ" ಎಂದು ಅಣಕಿಸುತ್ತಿದ್ದ. ನಾವೆಲ್ಲರೂ ಊಟ ಆದ ಮೇಲೆ ಕ್ಷೇಮ ಸಮಾಚಾರ ವಿಚಾರಿಸಿದೆವು. ಮತ್ತೆ ಅವನು ಮದುವೆ ಇನ್ನೂ ಆಗಿಲ್ಲ ಎಂದಾಗ, ನಾನು ಆ ಹೋಟೆಲ್ ಹುಡುಗಿ ಹೆಸರು ಬಸವ್ವ ನಾನು ಮಾತನಾಡಾಲೆ ಎಂದೆ. ಎಲ್ಲರೂ ನಕ್ಕೆವು ಮತ್ತೆ ವಿಲಾಸ್ ತನ್ನ ಮನೆ ವಿಳಾಸ ತಿಳಿಸಿ ಮನೆ ಹಾದಿ ಹಿಡಿದ.

Wednesday, November 3, 2010

ಆಕಾಶ ಬುಟ್ಟಿ...ಜೋಕುಮಾರನ ಹೊಟ್ಟೆ

ಆಕಾಶ ಬುಟ್ಟಿ... ಅಪ್ಪನ ಹೊಟ್ಟೆ ..ಎಂದು ಮಡದಿ,ಮಗ ಆಡಿಕೊಳ್ಳುತ್ತಾ ಇದ್ದರು. ನನಗು ಹಾಗೆ ಅನ್ನಿಸಿತು. ಕೋಪದಿಂದ ಈ ಹೊಟ್ಟೆ ಕತ್ತರಿಸಿ ಒಗೆದು ಬಿಡಬೇಕು ಎಂದು. ಎಷ್ಟೇ ಆದರೂ ನನ್ನ ಹೊಟ್ಟೆ ತಾನೇ?. ದಿನಾಲೂ ಬೇಗ ಎದ್ದು ವಾಕಿಂಗ್ ಹೋಗಬೇಕು ಎಂದು ಯೋಚಿಸುತ್ತಿದ್ದೆ. ಆದರೆ ಸೂರ್ಯನಿಗಿಂತ ಬೇಗ ಎದ್ದರೆ, ಸೂರ್ಯನ ಕರ್ತವ್ಯ ನಿಷ್ಟೆ ನಾನು ಹಾಳು ಮಾಡಿದ ಪಾಪ ನನಗೆ ಯಾಕೆ ಎಂದು ಸುಮ್ಮನಿದ್ದೆ. ದಿನಾಲೂ ಸೂರ್ಯ ಎದ್ದಮೇಲೆಯಾದರೂ ಏಳಬೇಕು ಎಂದು. ಆದರೆ ನನ್ನ ಕರ್ಮಕ್ಕೆ ಆ ಜ್ಯೋತಿಷಿ ಮನೋಜ ಬೆಳಗಿನ ಜಾವದ ಕನಸು ನನಸು ಆಗುತ್ತೆ ಕಣೋ ಎಂದು ಹೇಳಿದ್ದ. ದಿನಾಲೂ ಬೆಳಗಿನ ಜಾವದಲ್ಲಿ ಯಾವುದಾದರೂ ಒಳ್ಳೆಯ ಸುಂದರಿಯ ಕನಸು, ಇಲ್ಲ ಫಾರಿನ್ ನಲ್ಲಿ ಇದ್ದ ಹಾಗೆ ಕನಸು ಹೀಗೆ ಮಜ.. ಮಜ.. ಕನಸುಗಳು. ಎದ್ದರೆ, ಕನಸು ಹಾಳಾಗುತ್ತೆ ಎಂಬ ಭಯ.

ನನ್ನ ಹೆಂಡತಿಗೆ ಹೇಳಿದೆ, ನಾಳೆ ಸಂಡೆ. ನಾನು ವಾಕಿಂಗ್ ಹೋಗಬೇಕು ಬೇಗ ಎಬ್ಬಿಸು ಎಂದು. ಮನೆಯಲ್ಲಿ ಇರುವ ಎಲ್ಲಾ ಘಡಿಯಾರಗಳಿಗೂ ಅಲಾರಾಂ ಇಡಲು ಅನುವಾದೆ. ಮಡದಿ ನನಗೆ ಬೈದು ನಾನು ಎಬ್ಬಿಸುತ್ತೇನೆ, ಆದರೆ ಅಲಾರಾಂ ಇಡಬೇಡಿ ನನಗು ಒಂದು ದಿವಸ ರೆಸ್ಟ್ ಬೇಡವೇ ಎಂದಳು. ತುಂಬಾ ಪ್ರಯತ್ನ ಪಟ್ಟು ಬೇಗ 6.50 ಕ್ಕೆ ಎದ್ದೆ. ಎದ್ದು ವಾಕಿಂಗ್ ಹೊರಡುವಾಗ, ಒಂದು ಕಪ್ಪು ಬೆಕ್ಕು ಅಡ್ಡ ವಾಕಿಂಗ್ ಮಾಡಿ ಹೋಯಿತು. ಬೆಕ್ಕು ಅಡ್ಡ ಬಂದರೆ ಕೆಲಸ ಕೆಡುತ್ತೆ ಎಂದು ಮತ್ತೆ ಹತ್ತು ನಿಮಿಷ ಬಿಟ್ಟು ಹೋದೆ. ಎದುರಿಗೆ ಟೀ ಅಂಗಡಿ ಕಾಣಿಸಿತು. ಟೀ ಕುಡಿದು ಮತ್ತೆ ಒಂದು ಘಂಟೆ ವಾಕಿಂಗ್ ಮಾಡಿದೆ. ನನ್ನಷ್ಟಕ್ಕೆ ನಾನೇ ವಾಹ್ "ಕಿಂಗ್" ಅಂದುಕೊಂಡು ಹೊಟ್ಟೆ ಕಡಿಮೆ ಆಗಿದೆಯಾ ಎಂದು ಹೊಟ್ಟೆ ನೋಡುತ್ತಾ ಬರುವ ಸಮಯದಲ್ಲಿ, ಎದುರಿಗೆ ಒಂದು ಆಕಳು ಕರುಗೆ ಡಿಕ್ಕಿ ಹೊಡೆದಿದ್ದೆ. ಸರ್ ಸಾವಕಾಶ ಎಂಬ ಶಬ್ದ ಕೇಳಿಸಿತು. ಅದೇ ಎದಿರು ಮನೆ ಪ್ರಸನ್ನ. ಕ್ಷೇಮ ಸಮಾಚಾರ ಆದ ಮೇಲೆ ತಾವು ಪ್ರತಿ ಸಂಡೆ ಕ್ರಿಕೆಟ್ ಆಡಲು ಹೋಗುತ್ತೇವೆ ಎಂದು ಹೇಳಿದರು. ಸರ್ ನಾನು ಬರುತ್ತೇನೆ ಎಂದು ಹೇಳಿದೆ. ಅವಶ್ಯವಾಗಿ ಬನ್ನಿ ಎಂಬ ಅಭಯವನ್ನಿತ್ತರು. ನಾನು ತುಂಬಾ ಖುಷಿಯಾದೆ.

ಮುಂದಿನ ಸಂಡೆ ನನ್ನ ಬೆಳಗಿನ ಜಾವದ ಕನಸು ಭಗ್ನ ಆದರೂ ಪರವಾಗಿಲ್ಲ ಎಂದು ಬೇಗನೆ ೬ ಘಂಟೆಗೆ ಎದ್ದೆ. ಬೇಗನೆ ಎದ್ದು ನಾನೇ ಟೀ ಮಾಡಿ ಕುಡಿದು ಎಲ್ಲರಿಗಿಂತ ಬೇಗನೆ ಮೈದಾನದಲ್ಲಿ ಇದ್ದೆ. ತುಂಬಾ ಜನ ಕ್ರಿಕೆಟ್ ಆಡುತ್ತಾ ಇದ್ದರು. ಆದರೆ ಪ್ರಸನ್ನ ಇನ್ನೂ ಪ್ರತ್ಯಕ್ಷವಾಗಿರಲಿಲ್ಲ. ಕೆಲ ಸಮಯ ಕಾದರೆ ಆಗುತ್ತೆ ಎಂದು ಕೆಲ ಸಮಯ ಅಲ್ಲೇ ತಿರುಗಾಡುತ್ತಾ ಇದ್ದೆ. ಒಂದು ಚೆಂಡು ನನ್ನ ಹತ್ತಿರ ಬರುತಿತ್ತು. ಅದನ್ನು ನಾನು ಹಿಡಿದು ಎತ್ತಿ ಕೊಡಬೇಕು ಎನ್ನುವ ಅಷ್ಟರಲ್ಲೇ ಫೀಲ್ಡಿಂಗ್ ನಿಂತ ಒಬ್ಬ ಹುಡುಗ ಅದನ್ನು ಎತ್ತಿ ಎಸೆದ. ಅದು ಬೇರೆಯವರು ಆಡುವ ಮ್ಯಾಚ್ ಚೆಂಡು ಆಗಿತ್ತು. ನನಗೆ ತುಂಬಾ ಕೋಪ ಬಂದಿತ್ತು. ಕೆಲ ಸಮಯದ ನಂತರ ಆ ಹುಡುಗ ತಾನು ಆಡುವ ಮ್ಯಾಚ್ ಚೆಂಡು ಫೀಲ್ಡಿಂಗ್ನಲ್ಲಿ ಬಿಟ್ಟಾಗ ಖುಷಿಯಾಗಿತ್ತು.

7 ಘಂಟೆ ಆದರೂ ಪ್ರಸನ್ನ ಬರಲೇ ಇಲ್ಲ. ನಾನು ಮತ್ತೆ ವಿವೇಕಾನಂದ ಗಾರ್ಡನ್ ಗೆ ವಾಕಿಂಗ್ ಮಾಡಲು ಹೋದೆ.ಎಲ್ಲರೂ ಓಡುತ್ತಾ ಇರುವದನ್ನು ನೋಡಿ ನಾನು ತುಂಬಾ ಜೋಷ್ ನಿಂದ ಓಡಿದೆ. ಎಲ್ಲರನ್ನೂ ಹಿಂದೆ ಹಾಕಿದೆ ಆದರೆ ಇನ್ನೂ ಅರ್ಧ ರೌಂಡ್ ಸುತ್ತಿರಲಿಲ್ಲ, ದಣಿವು ಶುರು ಆಯಿತು. ಎಲ್ಲರೂ ನನ್ನ ಹಿಂದಿಕ್ಕಿ ಹೊರಟು ಹೋಗಿದ್ದರು. ಓಡುತ್ತಿರುವಾಗ ನನ್ನ ಹೊಟ್ಟೆ ತಕ.. ತಕ.. ಎಂದು ಕುಣಿಯುತ್ತಾ ಇತ್ತು. ಮತ್ತೆ ಕೆಲ ಜನರು ವ್ಯಾಯಾಮ ಮಾಡುತ್ತಾ ಇದ್ದರು. ಅದನ್ನು ನೋಡಿ ನಾನು ಒಂದು ಮರದ ಕೆಳಗೆ ನಿಂತು ವ್ಯಾಯಾಮ ಮಾಡಲು ಅನುವಾದೆ. ಅಷ್ಟರಲ್ಲಿ ಪಕ್ಕದಲ್ಲಿ ಮಲಗಿದ್ದೆ ನಾಯಿ ಎದ್ದು, ನನ್ನ ನೋಡುತ್ತಾ ನಿಂತು ಬಿಟ್ಟಿತು. ನಾನು ಬಹುಶಃ ವಿಚಿತ್ರವಾಗಿ ವ್ಯಾಯಾಮ ಮಾಡುತ್ತಾ ಇದ್ದೇನೆ ಎಂದು ತಿಳಿಯಿತೋ ಹೇಗೆ ಎಂದು, ಬೇರೆ ವ್ಯಾಯಾಮ ಮಾಡಲು ಅನುವಾದೆ.ಅಷ್ಟರಲ್ಲಿ ನಾಯಿ ಜೋರಾಗಿ ನನ್ನ ನೋಡಿ ಬೊಗಳಲು ಶುರು ಮಾಡಿತು. ಏಕೆಂದರೆ ನಾನು ಕಾಲಿನಿಂದ ಒದ್ದ ಕಲ್ಲು ಅದಕ್ಕೆ ನಾಟಿತ್ತು. ಕಡೆಗೆ ಈ ಸಹವಾಸ ಸಾಕು ಎಂದು ಕೆಲ ಸಮಯ ವಾಕಿಂಗ್ ಮಾಡಿದೆ. ವಾಕಿಂಗ್ ಮಾಡಿ ಕೆಲ ಸಮಯ ಒಂದು ಬೆಂಚ್ ಮೇಲೆ ಕುಳಿತೆ. ಅಲ್ಲಿ ನಡೆಯುವ ಸಂಭಾಷಣೆ ಕೇಳಿ ಮನೆಗೆ ಬಂದೆ.

ಮನೆಗೆ ಬಂದು ಕೂಡಲೇ ಮಡದಿ ನೀವು ಹೋದ ಮೇಲೆ ಪ್ರಸನ್ನ ಫೋನ್ ಮಾಡಿದ್ದರು ಎಂದಳು. ಅವರು ಇವತ್ತು ಕ್ರಿಕೆಟ್ ಆಡಲು ಬರುವದಿಲ್ಲ ಎಂದು ಹೇಳಿದರು ಎಂದಳು. ಇವತ್ತು ಮನೆ ಸಾಮಾನು ತರಬೇಕು ಎಂದಳು ಮಡದಿ. ನಾನು ಆಯಿತು ಎಂದು ಸ್ನಾನಕ್ಕೆ ಹೋದೆ. ವಾಕಿಂಗ್ ಮಾಡಿ ಕೈ ಕಾಲು ಎಲ್ಲವೂ ಸಡಿಲವಾಗಿದ್ದವು. ಬಚ್ಚಲು ಮನೆಯಿಂದ ದಾಡಿ ಮಾಡಿಕೊಳ್ಳಲೋ ಬೇಡವೋ ಎಂದು ಕೇಳಿದೆ. ಏಕೆಂದರೆ? ನಾನು ಪ್ರತಿ ಹಬ್ಬ ಹರಿದಿನ ದಾಡಿ ಮಾಡಿಕೊಳ್ಳಬೇಡಿ ಎಂಬ ಆಜ್ಞೆ ಹೊರಡಿಸಿದ್ದಾಳೆ ನನ್ನ ಮಡದಿ. ಗಾಡಿ ಮೇಲೆ ಹೋಗೋಣ ಎಂದಳು. ನಾನು ನಕ್ಕೂ ... ಲೇ ದಾಡಿ ಎಂದೆ.ನಾನು ಬೇಡ ಅನ್ನಬಹುದು ಎಂದುಕೊಂಡರೆ, ಮಾಡಿಕೊಳ್ಳಿ ಎಂದಳು. ನಾನು ನಾಳೆ ಮಾಡಿಕೊಳ್ಳುತ್ತೇನೆ ಬಿಡೆ ಎಂದೆ. ನೋಡ್ರೀ ನನ್ನ ಜೊತೆ ಬರಬೇಕಾದರೆ, ಹೀಗೆ ಜೋಕುಮಾರ ತರಹ ಬರಬೇಡಿ ಎಂದಳು. ಕಡೆಗೆ ದಾಡಿ ಮಾಡಿಕೊಂಡು ಸ್ನಾನ ಮಾಡಿ ಬಂದೆ. ಮನೆ ಸಾಮಾನು ತೆಗೆದುಕೊಂಡು ಬರುವಾಗೇ ನೋಡಿ ಈಗ ಚೆನ್ನಾಗಿ ರಾಜ್‍ಕುಮಾರ್ ತರಹ ಕಾಣಿಸುತ್ತೀರಿ ಎಂದಳು.

ಮರುದಿನ ಕೈ,ಕಾಲು ಎಲ್ಲವೂ ಮಾತನಾಡುತ್ತಾ ಇದ್ದವು. ಆಗ ಅನ್ನಿಸಿತು ಆರೋಗ್ಯ ಎಂದರೆ ಆ + ರೋಗ(ನಿದ್ರೆ) + ಯೋಗ್ಯ ಎಂದು. "ಎಲ್ಲರೂ ಮಾಡುವದು ಹೊಟ್ಟೆಗಾಗಿ ಮತ್ತು ಗೇಣು ಬಟ್ಟೆಗಾಗಿ" ನಿಜ. ನಾನು ಮಾಡುತ್ತಾ ಇರುವದು ಹೊಟ್ಟೆಗಾಗಿಯೇ, ಆದರೆ ಗೇಣು ಬಟ್ಟೆ ನನ್ನ ಹಿಮಾಲಯ ಪರ್ವತ (ಹೊಟ್ಟೆ) ಮುಚ್ಛೊಕ್ಕೆ ಸಾಲಲ್ಲ :).

*****************************************************************

ಎಲ್ಲರಿಗೂ ದೀಪಾಳಿ ಹಬ್ಬದ ಶುಭಾಶಯಗಳು.

********************************************************