Friday, August 27, 2010

ಮನೇಲಿ ಇಲಿ.... ಬೀದಿಲಿ ಬೀದಿ-ಇಲಿ(ಹೆಗ್ಗಣ) ....

ಏನೋ ಬರೀತಾ ಕುಳಿತಿದ್ದೆ. ನನ್ನವಳು ರೀ ಬೀChiಗೆ ಅಂದಳು. ನನಗೆ ಅಂತಹ ದೊಡ್ಡ ಹಾಸ್ಯ ಸಾಹಿತಿಗೆ ಹೋಲಿಸುತ್ತಿದ್ದಾಳೆ ಎಂದು ತುಂಬಾ ಖುಷಿಯಿಂದ ನನ್ನಷ್ಟಕ್ಕೆ ನಾನೇ ಭೇಷ್.. ಭೇಷ್... ಎಂದು ಹೇಳಿಕೊಳ್ಳುತ್ತ. ನಾನು ಅಷ್ಟು ದೊಡ್ಡ ಎಂದು ಬಾಯಿ ತೆಗೆಯುವ ಮೊದಲೇ ಅಡುಗೆ ಮನೆಯಿಂದ ಬಂದ ನನ್ನ ಮಡದಿ ರೀ ಈ ಬಾರಿ ಉಡುಪಿಗೆ ಹೋದಾಗ ಬೀಚ್ ಗೆ ಹೋಗೋಣ ಎಂದಳು. ನಾನು ಮುಂದೆ ಹೇಳುವದನ್ನು ನಿಲ್ಲಿಸದಿದ್ದರೆ ನಾನೇ ಅಪಹಾಸ್ಯ ಆಗಿಬಿಡುತ್ತಿದ್ದೆ. ಆಯಿತು ಎಂದು ಹೇಳಿ ಮತ್ತೆ ಬರೆಯುತ್ತಾ ಕುಳಿತೆ. ಏನೋ ಬರೀತಾ ಇದ್ದ ಹಾಗಿದೆ ರಾಯರು ಎಂದಳು. ನಾನು ಬರೆಯುತ್ತಿರುವ ಲೇಖನದ ಬಗ್ಗೆ ಸ್ವಲ್ಪ ವಿವರವಾಗಿ ಹೇಳಲು ಅನುವಾದೆ. ಅಷ್ಟರಲ್ಲಿ ಅವಳ ಮೊಬೈಲ್ ರಿಂಗ್ ಆಯಿತು. ನಾನು ಕಾಯುತ್ತಾ ಕುಳಿತೆ ಬರೋಬ್ಬರಿ ಅರ್ಧ ಘಂಟೆ ಮಾತನಾಡಿದ್ದಳು. ಮತ್ತೆ ಅಡುಗೆ ಮನೆಗೆ ಹೊರಟು ಹೋದಳು.

ಸ್ವಲ್ಪ ಸಮಯದ ನಂತರ ಬಂದು ಏನೋ ಹೇಳುತ್ತ ಇದ್ದ ಹಾಗೆ ಇತ್ತು ಎಂದಳು. ನಾನು ಲೇಖನದ ಬಗ್ಗೆ ಸಂಕ್ಷಿಪ್ತವಾಗಿ ಹೇಳಿದೆ. ಈ ಬಾರಿ ನನ್ನ ಎಲ್ಲ ಬ್ಲಾಗ್ ಲೇಖನಗಳನ್ನು ಸೇರಿಸಿ ಪುಸ್ತಕ ಲೋಕಾರ್ಪಣೆ ಮಾಡಬೇಕು ಎಂದು ಮಾಡಿದ್ದೇನೆ ಎಂದೆ. ರೀ ಅಂದ ಹಾಗೆ ನೆನಪು ಆಯಿತು. ನನಗೆ ೧೨೦ ರೂಪಾಯಿ ರೊಕ್ಕಾರ್ಪಣೆ ಮಾಡಿ ಎಂದಳು. ಏಕೆ? ದುಡ್ಡು ಎಂದೆ. ಮಗನ ಪುಸ್ತಕಕ್ಕೆ ಎಂದು ೧೨೦ ರೂಪಾಯಿ ತೆಗೆದುಕೊಂಡಳು. ಅದೆಲ್ಲ ಏನು ಬೇಡ ನನ್ನನ್ನು ಅಪಹಾಸ್ಯ ಮಾಡಿ ಬರೆದ ಲೇಖನಗಳನ್ನು ಪುಸ್ತಕ ರೂಪದಲ್ಲಿ ತರುತ್ತೀರಾ? ಎಂದಳು. ನಿನ್ನನ್ನ ಹೋಗಳಿದ್ದು ಇದೆ ಅಲ್ಲ ಎಂದೆ. ನಾನು ಎಲ್ಲಿ ನಿಮ್ಮನ್ನ ಬೈದು ಬಿಡುತ್ತೇನೆ ಎಂದು ಕೆಲ ಲೇಖನಗಳಲ್ಲಿ ಹೋಗಳಿದ್ದೀರಾ ಅಷ್ಟೇ ಎಂದು ಅಡುಗೆ ಮನೆಗೆ ಹೊರಟೆ ಹೋದಳು.ನನ್ನ ಹೆಂಡತಿಗೆ ನಾನು ಅರ್ಥನೇ ಆಗಿಲ್ಲ ಎಂದು ಕೊರುಗುತ್ತಾ ಕುಳಿತೆ. ಬರೆಯುವದನ್ನು ಪಕ್ಕಕ್ಕೆ ಇಟ್ಟು ಇದು ನನ್ನ ಒಬ್ಬನ ಸಮಸ್ಯೆಯಾ ಅಥವಾ ಎಲ್ಲರದು ಇದೇನಾ ಎಂದು ಪರೀಕ್ಷಿಸ ಬೇಕು ಎಂದು ಮಂಜನ ಮನೆಗೆ ಹೋದೆ.

ಮಂಜ ಕಾಫೀ ಕುಡಿಯುತ್ತಾ ಕುಳಿತಿದ್ದ. ನನಗು ಕೂಡ ಒಂದು ಕಾಫೀ ಕೊಟ್ಟಳು ಮಂಜನ ಮಡದಿ. ನಾನು ಕಾಫೀ ಕುಡಿಯುತ್ತಾ ಹೆಂಡತಿಯರಿಗೆ ನಾವು ಅರ್ಥವೇ ಆಗೋದಿಲ್ಲವ? ಎಂದು ಕೇಳಿದೆ. ಯಾರ ಹೆಂಡತಿಗೆ ನೀನು ಅರ್ಥ ಆಗ್ಬೇಕೋ ಎಂದ ಮಂಜ. ಕೋಪದಿಂದ, ಲೇssss ನಾನು ನನ್ನ ಹೆಂಡತಿ ಬಗ್ಗೆ ಎಂದೆ. ನಾವು ಹೊರಗೆ ಹುಲಿ ಹಾಗೆ ಇರುತ್ತೇವೆ. ಮನೆಗೆ ನಮ್ಮನ್ನು ನಮ್ಮ ಹೆಂಡತಿಯರು ನಮ್ಮನ್ನು ಇಲಿಯ ಹಾಗೆ ನೋಡುತ್ತಾರಲ್ಲ ಕಣೋ ಎಂದೆ. ಅದು ನಿನ್ನ ಕೇಸ್ ಇರಬಹುದು ಆದರೆ ನಾನು ಮನೆಯಲ್ಲೂ ಹುಲಿನೆ ಎಂದ. ಅಷ್ಟರಲ್ಲಿ ಅವನ ಹೆಂಡತಿ ಕಾಫೀ ಕಪ್ ತೆಗೆದುಕೊಂಡು ಹೋಗಲು ಬಂದಳು. ಆದರೆ ತ್ರಿಶುಲಧಾರಿ (ಲಟ್ಟಣಿಗೆ) ದುರ್ಗಾ ದೇವಿ ಅದರ ಪಕ್ಕದಲ್ಲಿ ಇರುತ್ತಾಳೆ ಎಂದ. ಗಹ ಗಹಿಸಿ ನಗ ಹತ್ತಿದೆ. ಮೊದಲು ಏನು ಹೇಳಿದ ಎಂದು ಗೊತ್ತು ಇಲ್ಲದರಿಂದ ನಾವಿಬ್ಬರು ಬಚಾವ್ ಅದೇವು. ಇಲ್ಲಿದಿದ್ದರೆ ನಮ್ಮ ವಟ ..ವಟ... ಸಾವಿತ್ರಿ ನಮ್ಮನ್ನು ಬಿಡುತಿರಲಿಲ್ಲ. ನಾವು ನಗುವುದನ್ನು ನೋಡಿ ಏನು ವಿಷಯ ಎಂದು ಸಾವಿತ್ರಿ ಕೇಳಿದಳು. ನಾವು ಏನು ಇಲ್ಲ ಎಂದೆವು. ಆದರೂ ಅವಳು ಬಿಡದೆ ನನ್ನನ್ನು ನೋಡಿ ನೀವು ನಗುತ್ತಿರುವದು ಹೇಳಿ ಎಂದು ಪಿಡಿಸಹತ್ತಿದಳು. ನಾವು ಏನು ತೋಚದಾದೇವು ಅಷ್ಟರಲ್ಲಿ ಸುಬ್ಬನ ಫೋನ್ ಬಂತು. ಮಾತನಾಡುತ್ತಾ ಸುಬ್ಬ ಕರೆದಿದ್ದಾನೆ ಎಂದು ಅಲ್ಲಿಂದ ಜಾಗ ಖಾಲಿಮಾಡಿದೆವು. ಮಂಜ ಕೆಲವೊಮ್ಮೆ ನಮ್ಮ ಮೇಲೆ ಸವಾರಿಯೂ ಮಾಡುತ್ತಾರೆ ಎಂದ.

ಸುಬ್ಬನ ಮನೆಗೆ ಹೋದೆವು ಅಲ್ಲಿ ಅವನ ಹೆಂಡತಿ ಅವನು ಕಟ್ಟಿಸಿ ಕೊಂಡಿದ್ದ ರಾಖಿ ಧಾರವನ್ನು ಗಟ್ಟಿಯಾಗಿ ಕಟ್ಟುತಿದ್ದಳು. ಇದನ್ನು ನೋಡಿ ಮಂಜ ಇದೆ ನೋಡು ಸುಬ್ಬನ ಸೀಕ್ರೆಟ್ ಎಂದು ಹೇಳಿದ. ಮಂಜ ಮತ್ತೆ ನಾನು ನೋಡಿ ಗಹ ಗಹಿಸಿ ನಗುತ್ತಿದ್ದನ್ನು ನೋಡಿ ಸುಬ್ಬನಿಗೆ ತುಂಬಾ ಕೋಪ ಬಂದಿತ್ತು. ಏನು ಎಂದು ಕೇಳಿದ ಸುಬ್ಬ. ಏನೋ ಹೆಂಡತಿ ಹತ್ತಿರ ರಾಖಿ ಕಟ್ಟಿಸಿಕೊಳ್ಳುತ್ತಿದ್ದೀಯ ಎಂದ ಮಂಜ. ಲೇ ಅದು ಧಾರ ಸಡಿಲಾಗಿತ್ತು ಅಷ್ಟೇ ಎಂದ ಸುಬ್ಬ. ಅಷ್ಟರಲ್ಲಿ ನಮ್ಮನ್ನು ಹುಡುಕಿಕೊಂಡು ನನ್ನ ಮತ್ತು ಮಂಜನ ಮಡದಿ ಬಂದರು. ಏನು ವಿಶೇಷ ಎಂದು ಕೇಳಿದಳು ನನ್ನ ಮಡದಿ. ಏನು ಇಲ್ಲ ಎಂದ ಸುಬ್ಬ. ಅಷ್ಟೇ ಇಬ್ಬರನ್ನು ದುರುಗುಟ್ಟಿ ನೋಡಿದರು. ನಾವು ಸಾವಕಾಶವಾಗಿ ಆ ಮೂವರು ಮಾತನಾಡುವಾಗ ಜಾಗ ಖಾಲಿ ಮಾಡಿದೆವು. ಇಲ್ಲದಿದ್ದರೆ ನಿಮಗೆ ಗೊತ್ತಲ್ಲ.:).

ಮಂಜ ನನಗೆ ಮತ್ತು ಸುಬ್ಬನಿಗೆ ಹೇಳಿದ ಮನೇಲಿ ಇಲಿ ಆದರೆ ಬಿದೀಲಿ ಹುಲಿ ಎಂದು ತಿಳಿದು ಕೊಂಡಿದ್ದೇವೆ ಅಷ್ಟೇ ಆದರೆ ನಿಜವಾದ ಸಂಗತಿ ನಾವು ಕೂಡ ಬೀದಿಲಿ ಬೀದಿ ಇಲಿ(ಹೆಗ್ಗಣ) ... ಕಣೋ ಎಂದ. ಸುಬ್ಬ ನಾನು ರಸ್ತೆ ಎಂದು ಯೋಚಿಸದೇ ಹೊಟ್ಟೆ ಹುಣ್ಣು ಆಗುವಷ್ಟು ನಕ್ಕಿದ್ದೆವು.

Friday, August 13, 2010

ಎಂಗೇಜ್ಮೆಂಟ್ (ಯಂಗ್ ಏಜ್ ಮೆಂಟ್)

ಟಿವಿ ಇದ್ದರೆ ನಿಮಗೆ ನನ್ನ ಮಾತೆ ಕಿವಿಗೆ ಬೀಳುವದಿಲ್ಲ ಎಂದು ಬೈದು ಕೊಳ್ಳುತ್ತಿದ್ದಳು. ನಾನು ನೋಡುತ್ತಿದ್ದ ಸಿನಿಮಾದಲ್ಲಿ ಹೀರೊ ಇಬ್ಬರು ಹೆಂಡತಿಯರನ್ನು ಮದುವೆ ಆಗಿದ್ದ. ನನಗೆ ಒಂದೇ ಸಂಭಾಳಿಸಲು ಆಗುತ್ತಿಲ್ಲ. ಇವನು ಎರಡೆರಡು ಸಂಭಾಳಿಸುತ್ತಾನಲ್ಲ ಭೇಷ್... ಭೇಷ್ .. ಎಂದೆ. ಸಿನಿಮಾಕ್ಕೂ ಮತ್ತೆ ನಿಜ ಜೀವನಕ್ಕೂ ತುಂಬಾ ವ್ಯತ್ಯಾಸ. ರೀssss.. ಪ್ರಕಾಶ್ ಮಾಮಾ ಫೋನ್ ಮಾಡಿದ್ದರು, ತುಂಬಾ ಖುಷಿಯಲ್ಲಿ ಇದ್ದರು ಎಂದಳು ಮಡದಿ. ಅದು ಹೇಗೆ ಹೇಳುತ್ತಿ ಅವರೇನು ನಿನಗೆ ಕಾಣಿಸುತ್ತರಾ? ಫೋನ್ ನಲ್ಲಿ ಎಂದೆ. ಅವರ ಮಾತು ಕೇಳಿ ರೀ .. ಎಂದಳು. ನಿಮ್ಮನ್ನು ಕೇಳಿದರು ಎಂದಳು. ರೀ ಒಂದು ಸಂತೋಷದ ವಿಚಾರ ಮಾಮಾನ ಎಂಗೇಜ್ಮೆಂಟ್ ಅಂತೆ. ನಾನು ತುಂಬಾ ಖುಶಿಯಿಂದ ಹೌದಾ? ಎಂದೆ. ಪಾಪ ತುಂಬಾ ಕಷ್ಟ ಪಟ್ಟು ೬ ಜನ ಅಕ್ಕ - ತಂಗಿಯರ ಮದುವೆ ಮಾಡಿದ್ದಾರೆ. ಕಡೆಗೂ ಅವರ ಮದುವೆ ಫಿಕ್ಸ್ ಆಗಿದ್ದು ಕೇಳಿ ತುಂಬಾ ಖುಷಿ ಆಯಿತು ಎಂದೆ.

ಪ್ರಕಾಶ್ ಮಾಮಾ ನನಗಿಂತ ೨೫ ವರ್ಷ ದೊಡ್ಡವರು. ನೋಡಿಕೊಳ್ಳಲು ಯಾರು ಇರಲಿಲ್ಲ. ತಂದೆ - ತಾಯಿ ತೀರಿ ೪ ವರ್ಷ ಆಗಿತ್ತು. ತುಂಬಾ ಕಷ್ಟ ಜೀವಿ. ತನ್ನ ಎಲ್ಲಾ ಆಸೆ ಆಕಾಂಕ್ಷೆ ತೊರೆದು ಮನೆಗಾಗಿ ದುಡಿದವರು. ಅಪ್ಪ - ಅಮ್ಮ ಏನು ಆಸ್ತಿ ಮಾಡಿರಲಿಲ್ಲ. ಅವರು ಮಾಡಿರುವ ಏಕೈಕ ಆಸ್ತಿ ಎಂದರೆ ೨ ಅಕ್ಕಂದಿರು, ೪ ತಂಗಿಯರು. ಈಗೀಗ ಸ್ವಲ್ಪ ಕಣ್ಣು ಮತ್ತೆ ಕಿವಿ ಮಂದಾಗಿತ್ತು. ಈಗ ಎಂಗೇಜ್ಮೆಂಟ್ ಮಾಡುವದಾದರೂ ನಾವೇ ಮಾಡಬೇಕು.ನಾನು ಎಂಗೇಜ್ಮೆಂಟ್ ಹೋಗುವದರ ಸಲುವಾಗಿ ಟಿಕೆಟ್ ಬುಕ್ ಮಾಡಿದೆ. ಎಲ್ಲ ಕೆಲಸಗಳನ್ನು ನಾನು ಮತ್ತು ನನ್ನ ಮಡದಿ ಮಾಡಲು ಆಗುವದಿಲ್ಲ ಎಂದು, ನನ್ನ ಗೆಳೆಯರಾದ ಸುಬ್ಬ, ಮಂಜ ಮತ್ತು ಮನೋಜನನ್ನು ಕರೆದುಕೊಂಡು ಹೋದೆ.

ಎಂಗೇಜ್ಮೆಂಟ್ ದಿವಸ ಬಂದೆ ಬಿಟ್ಟಿತು. ಹಣ್ಣುಗಳನ್ನು ತಂದಿರಲಿಲ್ಲ ಹೀಗಾಗಿ ಹಣ್ಣುಗಳನ್ನು ತರಲು ಮಂಜನಿಗೆ ಹೇಳಿದೆ. ಮತ್ತೆ ನಾವು ಕುಳಿತುಕೊಂಡೆವು. ಆಗ ರಾಮಾಚಾರ್ಯರು ನೀವು ನಡುವೆ ಕುಳಿತುಕೊಳ್ಳಿ ಎಂದರು. ರೀ .. ಸುಮ್ಮನಿರಿ ಇದು ನಮ್ಮ ಮಾಮಾನ ಎಂಗೇಜ್ಮೆಂಟ್ ಎಂದು ತೋರಿಸಿದಾಗ ಸುಮ್ಮನಾದರು. ಮತ್ತೆ ಮಂತ್ರ ಎಲ್ಲವನ್ನು ಮುಗಿಸಿದರು. ಹಣ್ಣು ಕೊಡುವ ಶಾಸ್ತ್ರ ಮುಗಿಸಿ ಎಂದರು ಶಾಸ್ತ್ರಿಗಳು. ಹಣ್ಣುಗಳನ್ನು ನಾವು ಕೊಡಬೇಕಾಗಿತ್ತು. ಅಷ್ಟರಲ್ಲಿ ಮಂಜ ಬಂದ. ಹಣ್ಣು ತಂದಿದ್ದ ಆದರೆ ಅವನು ತಂದಿದ್ದು 2 ಖಾರಬೂಜ ,2 ಹಲಸಿನ ಹಣ್ಣು, ಮತ್ತೆ 2 ಕಲ್ಲಂಗಡಿ ಹಣ್ಣು. ಅದನ್ನು ನೋಡಿ ನನಗೆ ತುಂಬಾ ಕೋಪ ಬಂದಿತ್ತು. ಇದೇನೋ ಹಣ್ಣು ತೆಗೆದುಕೊಂಡು ಬಾ ಎಂದರೆ ಎಂದು ಗದರಿಸಿದ್ದೆ. ಕಡೆಗೆ ಅದನ್ನೇ ತೆಗೆದುಕೊಂಡು ಒಂದು ದೊಡ್ಡ ಪಾತ್ರೆಯಲ್ಲಿ ಇಟ್ಟು ನನ್ನ ಕೈಗೆ ಕೊಟ್ಟರು. ಆ ಭಾರದಿಂದ ಧಪ್ ಎಂದು ನೆಲಕ್ಕೆ ಉರುಳಿದೆ. ಮತ್ತೆ ಸುಬ್ಬ ಮತ್ತೆ ಮಂಜ ಸೇರಿ ನನ್ನನ್ನು ಎತ್ತಿದರು. ಒಂದು ಕಲ್ಲಂಗಡಿ ಹಣ್ಣು ಎರಡು ಹೋಳು ಆಗಿತ್ತು. ಅದನ್ನೇ ಎಲ್ಲರಿಗೂ ಜೂಸ್ ಮಾಡಲು ಕಳುಹಿಸಿದೆವು. ಹಾಗೂ ಹೀಗೂ ಮತ್ತೆ ನಾವೆಲ್ಲರೂ ಕೂಡಿ ಅದನ್ನು ನಮ್ಮ ಬೀಗರ ಕೈಗೆ ಕೊಟ್ಟೆವು. ಪಾಪ ಒಬ್ಬರೇ ಹೇಗೆ ಅದನ್ನು ಹಿಡಿಯಲು ಆಗುತ್ತೆ. ನನ್ನ ಅರ್ಧ ಕೂಡ ಇರಲಿಲ್ಲ ನಮ್ಮ ಬೀಗರು. ಅವರು ನನ್ನ ತಲೆಗೆ ಡಿಕ್ಕಿ ಹೊಡೆದು ಬಿಟ್ಟರು. ನನ್ನ ತಲೆಗೆ ಒಂದು ಗುಮ್ಮಟಿ ಆಗಿತ್ತು.

ಕಡೆಗೆ ಎಲ್ಲ ಶಾಸ್ತ್ರ ಮುಗಿದ ಮೇಲೆ ಉಟಕ್ಕೆ ಕುಳಿತಿದ್ದೆವು. ನಮ್ಮ ಮಾಮಾ ಕಣ್ಣು ಕಾಣಲಾರದೇ ಉಂಡಿ ತನ್ನ ಮಡದಿಗೆ ತಿನ್ನಿಸುವ ಬದಲು ನನಗೆ ತಿನ್ನಿಸಲು ಶುರು ಮಾಡಿದ್ದ. ನಾನು ಮತ್ತೆ ಅದನ್ನು ಅವನ ಹೆಂಡತಿಗೆ ತಿನ್ನಿಸಲು ಹೇಳಿದೆ. ಮತ್ತೆ ತಿನ್ನಿಸಿದ. ಆದರೆ ಅವನ ಮಡದಿ ನನ್ನ ಹೆಂಡತಿಯ ಎಲೆ ಮೇಲೆ ಇರುವ ಉಂಡಿ ತೆಗೆದು ಮಾಮಾನಿಗೆ ತಿನ್ನಿಸುತ್ತಿದ್ದಳು. ಎಲ್ಲರೂ ಇವರನ್ನು ನೋಡಿ ನಗುತ್ತಿದ್ದರು.

ಎಲ್ಲವೂ ಸುಸೂತ್ರವಾಗಿ ನೆರವೇರಿತ್ತು. ನಾನು ನನ್ನ ಮಡದಿಗೆ ಹೇಳಿದೆ ಸುಮ್ಮನೇ ಇದೆಲ್ಲವೂ ಬೇಕಿತ್ತಾ. ರಿಜಿಸ್ಟರ್ ಆಫೀಸ್ ನಲ್ಲಿ ಮದುವೆನೇ ಮಾಡಬಹುದಿತ್ತು ಎಂದೆ. ಆಗ ಏನೋ ಮಾವ ಆಸೆ ಪಟ್ಟರು. ಅವರಿಗೆ ಎಲ್ಲವೂ ಶಾಸ್ತ್ರೋಕ್ತವಾಗಿ ಆಗಬೇಕು. ಅದಕ್ಕೆ ಏನು ಈಗ ಎಂದಳು. ಅಲ್ಲ ಕಣೆ ..ಇದು ಒಂದು ತರಹ ಓಲ್ಡ್ ಏಜ್ ಮೆಂಟ್ ಅನ್ನಬಹುದು..ಎಂದಾಗ ನನ್ನ ಮಡದಿಗೂ ನಗು ತಡಿಯಲು ಆಗಲಿಲ್ಲ.